Revised Common Lectionary (Complementary)
15 ಯೆಹೋವನು ನೀತಿವಂತರನ್ನು ಕಾಪಾಡುವನು.
ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.
17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.
21 ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಆ ಹತ್ತು ಜನರಿಗೆ ಹೀಗೆ ಉತ್ತರಿಸಿದರು: 22 “ನಮ್ಮ ದೇವರು ಯೆಹೋವನೇ! ನಮ್ಮ ದೇವರು ಯೆಹೋವನೇ ಎಂದು ಇನ್ನೊಮ್ಮೆ ನಾವು ಹೇಳುತ್ತೇವೆ. ನಾವು ಇದನ್ನು ಏಕೆ ಮಾಡಿದೆವೆಂಬುದು ದೇವರಿಗೆ ತಿಳಿದಿದೆ. ನೀವೂ ಅದನ್ನು ತಿಳಿದುಕೊಂಡಿರಬೇಕೆಂಬುದು ನಮ್ಮ ಆಶೆ. ನಾವು ಮಾಡಿದ್ದನ್ನು ನೀವು ವಿವೇಚಿಸಿ ನೋಡಬಹುದು. ನಾವೇನಾದರೂ ತಪ್ಪುಮಾಡಿದ್ದೇವೆಂದು ಅನಿಸಿದ್ದಲ್ಲಿ ಆಗ ನೀವು ನಮ್ಮನ್ನು ಕೊಲ್ಲಬಹುದು. 23 ನಾವು ದೇವರ ಕಟ್ಟಳೆಗಳನ್ನು ಉಲ್ಲಂಘಿಸಿದ್ದರೆ ಯೆಹೋವನೇ ನಮ್ಮನ್ನು ಶಿಕ್ಷಿಸಲಿ ಎಂದು ಆತನಲ್ಲಿ ಕೇಳಿಕೊಳ್ಳುತ್ತೇವೆ. 24 ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯಸಮರ್ಪಣೆ ಇವುಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಿದ್ದೇವೆ ಎಂದು ನೀವು ತಿಳಿದಿರುವಿರೇನು? ಇಲ್ಲ! ನಾವು ಆ ಕಾರಣಕ್ಕಾಗಿ ಇದನ್ನು ಕಟ್ಟಲಿಲ್ಲ. ನಾವು ಈ ಯಜ್ಞವೇದಿಕೆಯನ್ನು ಕಟ್ಟಿರುವುದಕ್ಕೆ ಕಾರಣವೇನೆಂದರೆ ಮುಂದಿನ ಕಾಲದಲ್ಲಿ ನಿಮ್ಮ ಜನರು ನಮ್ಮನ್ನು ತಮ್ಮ ಜನಾಂಗದ ಒಂದು ಭಾಗವೆಂದು ಸ್ವೀಕರಿಸದೆ ಇಸ್ರೇಲಿನ ದೇವರಾದ ಯೆಹೋವನನ್ನು ಆರಾಧಿಸಲು ಅವಕಾಶಕೊಡದಿರಬಹುದು ಎಂಬ ಭಯ ನಮಗಿತ್ತು. 25 ದೇವರು ನಮಗೆ ಜೋರ್ಡನ್ ನದಿಯ ಮತ್ತೊಂದು ದಡದಲ್ಲಿ ಭೂಮಿಯನ್ನು ಕೊಟ್ಟಿದ್ದಾನೆ. ಅಂದರೆ ಜೋರ್ಡನ್ ನದಿಯು ನಮ್ಮನ್ನು ಬೇರ್ಪಡಿಸುತ್ತದೆ. ನಿಮ್ಮ ಮಕ್ಕಳು ದೊಡ್ಡವರಾಗಿ ನಿಮ್ಮ ಭೂಮಿಯನ್ನು ಆಳುವಾಗ, ನಾವು ನಿಮ್ಮ ಜನರೆಂಬುದನ್ನು ಮರೆತುಬಿಡಬಹುದು. ‘ರೂಬೇನ್ಯರು, ಗಾದ್ಯರು ಆದ ನೀವು ಇಸ್ರೇಲಿನ ಅಂಗವಾಗಿಲ್ಲ’ ಎಂದು ಹೇಳಿ ನಮ್ಮ ಮಕ್ಕಳು ಯೆಹೋವನನ್ನು ಆರಾಧಿಸದಂತೆ ನಿಮ್ಮ ಮಕ್ಕಳು ತಡೆಯಬಹುದು.
26 “ಅದಕ್ಕಾಗಿ ಈ ಯಜ್ಞವೇದಿಕೆಯನ್ನು ಕಟ್ಟಲು ನಾವು ನಿರ್ಧರಿಸಿದೆವು. ಆದರೆ ಅದನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸಲು ಕಟ್ಟಿಲ್ಲ. 27 ನೀವು ಆರಾಧಿಸುವ ದೇವರನ್ನೇ ನಾವೂ ಆರಾಧಿಸುತ್ತೇವೆಂಬುದನ್ನು ನಮ್ಮ ಜನರಿಗೆ ತೋರಿಸಿಕೊಡುವುದೇ ಈ ಯಜ್ಞವೇದಿಕೆಯ ನಿಜವಾದ ಉದ್ದೇಶವಾಗಿದೆ. ನಾವು ಯೆಹೋವನನ್ನು ಆರಾಧಿಸುತ್ತೇವೆ. ನಾವು ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯೆಹೋವನ ಸಾನ್ನಿಧ್ಯದಲ್ಲಿ ಸಮರ್ಪಿಸುತ್ತೇವೆ ಎಂಬುದಕ್ಕೆ ಈ ಯಜ್ಞವೇದಿಕೆಯು ನಿಮಗೂ ನಮಗೂ ಮತ್ತು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಕ್ಷಿಯಾಗಿರುತ್ತದೆ. ನಾವು ಸಹ ನಿಮ್ಮಂತೆಯೇ ಇಸ್ರೇಲಿನ ಜನರೆಂಬುದನ್ನು ದೊಡ್ಡವರಾದ ಮೇಲೆ ನಿಮ್ಮ ಮಕ್ಕಳಿಗೆ ತಿಳಿದಿರಲಿ ಎಂಬುದು ನಮ್ಮ ಇಚ್ಛೆ. 28 ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳಿಗೆ ‘ನೀವು ಇಸ್ರೇಲಿಗೆ ಸಂಬಂಧಪಟ್ಟವರಲ್ಲ’ ಎಂದು ಹೇಳಿದರೆ, ನಮ್ಮ ಮಕ್ಕಳು ‘ಇಲ್ಲಿ ನೋಡಿ! ಗತಿಸಿಹೋದ ನಮ್ಮ ಪೂರ್ವಿಕರು ಒಂದು ಯಜ್ಞವೇದಿಕೆಯನ್ನು ಕಟ್ಟಿದ್ದಾರೆ. ಆ ಯಜ್ಞವೇದಿಕೆಯು ಪವಿತ್ರ ಗುಡಾರದಲ್ಲಿರುವ ಯಜ್ಞವೇದಿಕೆಯಂತಿದೆ. ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸುವುದಿಲ್ಲ. ನಾವು ಇಸ್ರೇಲಿಗೆ ಸೇರಿದವರೆಂಬುದಕ್ಕೆ ಈ ಯಜ್ಞವೇದಿಕೆ ಸಾಕ್ಷಿಯಾಗಿದೆ’ ಎಂದು ಹೇಳುವರು.
29 “ಯೆಹೋವನಿಗೆ ವಿರೋಧಿಗಳಾಗಲು ನಮಗೆ ನಿಜವಾಗಿಯೂ ಇಷ್ಟವಿಲ್ಲ. ಆತನಿಗೆ ಅವಿಧೇಯರಾಗುವುದಕ್ಕೂ ಇಷ್ಟವಿಲ್ಲ. ನಿಜವಾದ ಯಜ್ಞವೇದಿಕೆಯು ಪವಿತ್ರಗುಡಾರದ ಎದುರಿಗೆ ಮಾತ್ರ ಇದೆ. ಆ ಯಜ್ಞವೇದಿಕೆಯು ನಮ್ಮ ದೇವರಾದ ಯೆಹೋವನದು ಎಂಬುದನ್ನು ನಾವು ಬಲ್ಲೆವು” ಎಂಬುದಾಗಿ ಉತ್ತರಕೊಟ್ಟರು.
30 ಯಾಜಕನಾದ ಫೀನೆಹಾಸನು ಮತ್ತು ಅವನ ಜೊತೆಯಲ್ಲಿ ಬಂದ ಕುಲಾಧಿಪತಿಗಳು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಮಾತುಗಳನ್ನು ಕೇಳಿದರು. ಇವರು ಹೇಳುತ್ತಿರುವುದು ಸತ್ಯ ಎಂದು ಅವರಿಗೆ ಮನದಟ್ಟಾಯಿತು. 31 ಆಗ ಯಾಜಕನಾದ ಫೀನೆಹಾಸನು ಈ ಕುಲಗಳವರಿಗೆ, “ಯೆಹೋವನು ನಮ್ಮೊಂದಿಗಿದ್ದಾನೆಂಬುದು ಮತ್ತು ನೀವು ಆತನಿಗೆ ವಿರೋಧಿಗಳಾಗಿಲ್ಲವೆಂಬುದು ಈಗ ನಮಗೆ ತಿಳಿಯಿತು. ಯೆಹೋವನು ಇಸ್ರೇಲರನ್ನು ಶಿಕ್ಷಿಸುವುದಿಲ್ಲವೆಂದು ನಮಗೆ ಸಂತೋಷವಾಗಿದೆ” ಎಂದು ಹೇಳಿದನು.
32 ಆಗ ಫೀನೆಹಾಸನು ಮತ್ತು ಕುಲಾಧಿಪತಿಗಳು ಆ ಸ್ಥಳದಿಂದ ತಮ್ಮ ಮನೆಗಳಿಗೆ ಹೋದರು. ಅವರು ರೂಬೇನ್ಯರನ್ನು ಮತ್ತು ಗಾದ್ಯರನ್ನು ಗಿಲ್ಯಾದ್ ಪ್ರದೇಶದಲ್ಲಿ ಬಿಟ್ಟು ಕಾನಾನಿಗೆ ಹಿಂತಿರುಗಿ ನಡೆದ ಸಂಗತಿಯನ್ನು ಇಸ್ರೇಲರಿಗೆ ತಿಳಿಸಿದರು. 33 ಆಗ ಇಸ್ರೇಲರಿಗೆ ಸಮಾಧಾನವಾಯಿತು. ಅವರು ಸಂತೋಷಪಟ್ಟು ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅವರು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆ ಕುಲದವರೊಡನೆ ಯುದ್ಧ ಮಾಡಬಾರದೆಂದೂ ಅವರು ವಾಸಮಾಡುತ್ತಿರುವ ಪ್ರದೇಶವನ್ನು ನಾಶಮಾಡಬಾರದೆಂದೂ ನಿರ್ಧರಿಸಿದರು.
34 ರೂಬೇನ್ಯರು ಮತ್ತು ಗಾದ್ಯರು, “ಯೆಹೋವನೇ ದೇವರು ಎಂಬುದಕ್ಕೆ ಈ ಯಜ್ಞವೇದಿಕೆಯೇ ಸಾಕ್ಷಿ” ಎಂದು ಅದಕ್ಕೆ “ಏದ್” ಎಂದು ಹೆಸರಿಟ್ಟರು.
ಎಡಬಿಡದೆ ಪ್ರಾರ್ಥಿಸಿ
(ಮತ್ತಾಯ 7:7-11)
5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. 7 ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. 8 ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. 9 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International