Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಯೆಶಾಯ 22:8-14

ಆ ಸಮಯದಲ್ಲಿ ಯೆಹೂದದ ಜನರು ತಾವು ಕಾಡಿನ ಅರಮನೆಯಲ್ಲಿಟ್ಟಿದ್ದ ಆಯುಧಗಳನ್ನು ಉಪಯೋಗಿಸುವುದಕ್ಕೆ ಮನಸ್ಸು ಮಾಡುವರು. ಯೆಹೂದವನ್ನು ರಕ್ಷಿಸುವ ಗೋಡೆಗಳನ್ನು ಶತ್ರುಗಳು ಕೆಡವಿಹಾಕುವರು.

9-11 ದಾವೀದ ನಗರದ ಕೋಟೆಗೋಡೆಗಳಲ್ಲಿ ಬಿರುಕುಗಳು ಉಂಟಾಗುವವು. ಆ ಬಿರುಕುಗಳನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಅದರೊಳಗಿರುವ ಮನೆಗಳನ್ನು ಲೆಕ್ಕ ಮಾಡಬಹುದು. ಆ ಮನೆಗಳ ಕಲ್ಲುಗಳನ್ನು ತೆಗೆದು ಬಿರುಕು ಮುಚ್ಚಲಾಗುವದು. ಎರಡು ಸಾಲು ಕೋಟೆಗೋಡೆಗಳ ಮಧ್ಯದಲ್ಲಿ ಹಳೆಯ ಕಾಲುವೆಯ ಮೂಲಕ ನೀರನ್ನು ತರಿಸಿ ಆ ನೀರನ್ನು ಉಳಿತಾಯ ಮಾಡುವಿರಿ.

ಇವೆಲ್ಲವನ್ನು ನೀವು ನಿಮ್ಮನ್ನು ಸಂರಕ್ಷಿಸಿಕೊಳ್ಳುವದಕ್ಕೋಸ್ಕರ ಮಾಡುವಿರಿ. ಆದರೆ ಇವೆಲ್ಲವನ್ನು ನಿರ್ಮಿಸಿದ ದೇವರ ಮೇಲೆ ನೀವು ನಂಬಿಕೆ ಇಡುವದಿಲ್ಲ. ಇದನ್ನು ಬಹಳ ಕಾಲದ ಹಿಂದೆ ನಿರ್ಮಿಸಿದ ದೇವರನ್ನು ನೀವು ನೋಡುವದಿಲ್ಲ. 12 ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಜನರಿಗೆ, ಅವರ ಸತ್ತುಹೋದ ಸ್ನೇಹಿತರಿಗೋಸ್ಕರ ರೋಧಿಸಿ ದುಃಖಿಸಿರಿ ಎಂದು ಹೇಳುವನು. ಜನರು ತಮ್ಮ ತಲೆಗಳನ್ನು ಬೋಳಿಸಿ ಶೋಕವಸ್ತ್ರಗಳನ್ನು ಧರಿಸುವರು. 13 ಇಗೋ, ಈಗ ಜನರು ಸಂತೋಷಪಡುತ್ತಿದ್ದಾರೆ. ಅವರು ಹರ್ಷಿಸುತ್ತಾ:

“ದನಕುರಿಗಳನ್ನು ಕೊಯ್ಯಿರಿ, ನಾವು ಹಬ್ಬ ಆಚರಿಸೋಣ,
ಊಟಮಾಡಿ ದ್ರಾಕ್ಷಾರಸ ಕುಡಿಯೋಣ,
    ತಿಂದು, ಕುಡಿದು ಸಂತೋಷವಾಗಿರೋಣ. ಯಾಕೆಂದರೆ ನಾಳೆ ನಾವು ಸಾಯುವೆವು” ಎಂದು ಹೇಳುವರು.

14 ಸರ್ವಶಕ್ತನಾದ ಯೆಹೋವನು ನನಗೆ ತಿಳಿಸಿದ ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ನೀವು ಕೆಟ್ಟಕಾರ್ಯಗಳನ್ನು ನಡೆಸಿ ಅಪರಾಧಿಗಳಾಗಿರುವಿರಿ. ನಿಮ್ಮ ದುಷ್ಟತ್ವವು ಕ್ಷಮಿಸಲ್ಪಡುವ ಮುಂಚೆ ನೀವು ಸಾಯುವಿರಿ ಎಂದು ಖಂಡಿತವಾಗಿ ಹೇಳುತ್ತೇನೆ” ಇದು ನನ್ನ ಒಡೆಯನಾದ ಸರ್ವಶಕ್ತನ ನುಡಿಗಳು.

ಯಾಕೋಬನು 4:4-10

ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[a] ಎಂದು ಪವಿತ್ರ ಗ್ರಂಥವು ಹೇಳುತ್ತದೆ. ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(A)

ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ. ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ. ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ. 10 ಪ್ರಭುವಿನ ಎದುರಿನಲ್ಲಿ ದೀನರಾಗಿರಿ, ಆತನು ನಿಮ್ಮನ್ನು ಉನ್ನತ ಮಟ್ಟಕ್ಕೆ ತರುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International