Old/New Testament
ಇಸ್ರೇಲರು ಸ್ವದೇಶಕ್ಕೆ ಹಿಂದಿರುಗುವರು
14 ಮುಂದಿನ ದಿವಸಗಳಲ್ಲಿ ಯೆಹೋವನು ಯಾಕೋಬನ ಮೇಲೆ ಮತ್ತೆ ಪ್ರೀತಿತೋರುವನು. ಯೆಹೋವನು ಮತ್ತೆ ಇಸ್ರೇಲರನ್ನು ಆರಿಸುವನು. ಆ ಸಮಯದಲ್ಲಿ ಅವರ ದೇಶವನ್ನು ಅವರಿಗೆ ಹಿಂತಿರುಗಿಸುವನು. ಆಗ ಯೆಹೂದ್ಯರಲ್ಲದವರು ಯೆಹೂದ್ಯರೊಂದಿಗೆ ಸೇರಿಕೊಳ್ಳುವರು. ಅವರೆಲ್ಲರೂ ಒಂದೇ ವಂಶದವರಾಗುವರು. ಅದು ಯಾಕೋಬನ ವಂಶ. 2 ಆ ಜನಾಂಗಗಳವರು ಇಸ್ರೇಲರನ್ನು ಇಸ್ರೇಲ್ ದೇಶಕ್ಕೆ ನಡಿಸುವರು. ಆ ಪರಜನಾಂಗಗಳ ಗಂಡಸರು ಹೆಂಗಸರು ಇಸ್ರೇಲರ ಗುಲಾಮರಾಗಿರುವರು. ಹಿಂದಿನ ದಿವಸಗಳಲ್ಲಿ ಆ ಜನರು ಇಸ್ರೇಲರನ್ನು ಬಲವಂತದಿಂದ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ಈಗ ಇಸ್ರೇಲರು ಆ ಜನಾಂಗಗಳನ್ನು ಸೋಲಿಸಿ ಅವರನ್ನು ಆಳುವರು. 3 ಯೆಹೋವನು ನಿಮ್ಮ ಪ್ರಯಾಸವನ್ನು ನಿವಾರಿಸಿ ನಿಮ್ಮನ್ನು ಆದರಿಸುವನು. ಹಿಂದಿನ ದಿವಸಗಳಲ್ಲಿ ನೀವು ಗುಲಾಮರಾಗಿರುವಾಗ ಜನರು ನಿಮ್ಮನ್ನು ಬಹಳವಾಗಿ ಹಿಂಸಿಸಿದರು; ಬಲವಂತದಿಂದ ಕಷ್ಟಕರವಾದ ಕೆಲಸವನ್ನು ನಿಮ್ಮಿಂದ ಮಾಡಿಸಿದರು. ಆದರೆ ಯೆಹೋವನು ಆ ಸಂಕಟಗಳಿಂದ ನಿಮ್ಮನ್ನು ಪಾರುಮಾಡುವನು.
ಬಾಬಿಲೋನಿನ ಅರಸನ ಕುರಿತು ಹಾಡು
4 ಆ ಸಮಯದಲ್ಲಿ ಬಾಬಿಲೋನಿನ ಅರಸನ ಬಗ್ಗೆ ನೀವು ಹೀಗೆ ಹಾಡುವಿರಿ:
ಅರಸನು ನಮ್ಮನ್ನಾಳುವಾಗ ಬಹಳ ಕ್ರೂರವಾಗಿದ್ದನು.
ಆದರೆ ಈಗ ಅವನ ಆಳ್ವಿಕೆಯು ಅಂತ್ಯವಾಯಿತು.
5 ಯೆಹೋವನು ದುಷ್ಟರ ಕೋಲನ್ನೂ ಅರಸನ ರಾಜದಂಡವನ್ನೂ ಮುರಿದುಹಾಕಿದನು.
ಅವನ ಅಧಿಕಾರವನ್ನು ತೆಗೆದುಹಾಕಿದನು.
6 ಬಾಬಿಲೋನಿನ ಅರಸನು ತನ್ನ ದುಷ್ಟತನದಲ್ಲಿ ಜನರನ್ನು ಹೊಡೆಯಿಸಿದನು.
ಹೊಡೆಯುವದನ್ನು ಅವನು ನಿಲ್ಲಿಸಲೇ ಇಲ್ಲ.
ಆ ದುಷ್ಟ ಅರಸನು ಜನರನ್ನು ಸಿಟ್ಟಿನಿಂದಲೇ ಆಳಿದನು.
ಜನರನ್ನು ಹಿಂಸೆಪಡಿಸುವದನ್ನು ಅವನು ನಿಲ್ಲಿಸಲಿಲ್ಲ.
7 ಆದರೆ ಈಗ ಇಡೀ ರಾಜ್ಯದಲ್ಲಿ ವಿಶ್ರಾಂತಿ ಇದೆ.
ರಾಜ್ಯವು ಸಮಾಧಾನದಿಂದಿದೆ.
ಜನರು ಸಂತೋಷದಿಂದ ಇದನ್ನು ಆಚರಿಸುತ್ತಾರೆ.
8 ನೀನು ದುಷ್ಟ ಅರಸನಾಗಿದ್ದೆ,
ಈಗ ನಿನಗೆ ಅಂತ್ಯವು ಬಂತು.
ತುರಾಯಿ ಮರಗಳೂ
ಲೆಬನೋನಿನ ದೇವದಾರು ವೃಕ್ಷಗಳೂ ಹರ್ಷಗೊಂಡಿವೆ.
ಆ ಮರಗಳು ಹೀಗೆ ಹೇಳುತ್ತಿವೆ: ಅರಸನು ನಮ್ಮನ್ನು ಕಡಿದುರುಳಿಸಿದನು.
ಈಗ ಅರಸನೇ ಉರುಳಿಬಿದ್ದಿದ್ದಾನೆ.
ಅವನು ಮತ್ತೆಂದಿಗೂ ಏಳುವುದಿಲ್ಲ.
9 ನೀನು ಬರುವದರಿಂದ ಮರಣದ ಸ್ಥಳವಾಗಿರುವ ನರಕವು ಉತ್ಸಾಹಗೊಂಡಿದೆ.
ನಿನ್ನನ್ನು ಎದುರುಗೊಳ್ಳುವದಕ್ಕಾಗಿ ಪಾತಾಳವು ಲೋಕದ ಎಲ್ಲಾ ಅಧಿಪತಿಗಳ ಆತ್ಮಗಳನ್ನು ಎಬ್ಬಿಸಿದೆ.
ಅರಸರು ತಮ್ಮ ಸಿಂಹಾಸನದಲ್ಲಿ ನಿಂತುಕೊಳ್ಳುವಂತೆ ಪಾತಾಳವು ಮಾಡುತ್ತಿದೆ.
ಅವರು ನಿನ್ನ ಬರುವಿಕೆಯನ್ನು ಕಾಯುತ್ತಿದ್ದಾರೆ.
10 “ಈಗ ನೀನು ನಮ್ಮಂತೆಯೇ ಸತ್ತ ಶರೀರವಾಗಿರುವೆ.
ಈಗ ನೀನು ನಮ್ಮಂತೆಯೇ ಆಗಿರುವೆ”
ಎಂದು ಅವರು ನಿನ್ನನ್ನು ಗೇಲಿ ಮಾಡುವರು.
11 ನಿನ್ನ ಜಂಬವು ಪಾತಾಳಕ್ಕೆ ಕಳುಹಿಸಲಾಗಿದೆ.
ನಿನ್ನ ಹಾರ್ಪ್ವಾದ್ಯದ ಸ್ವರವು ನಿನ್ನ ಅಹಂಕಾರದ ಆತ್ಮವನ್ನು ಸಾರಿಹೇಳುತ್ತವೆ.
ಹುಳಗಳು ನಿನ್ನ ಶರೀರವನ್ನು ತಿಂದುಬಿಡುವವು.
ಹಾಸಿಗೆಯೋ ಎಂಬಂತೆ ನೀನು ಅವುಗಳ ಮೇಲೆ ಮಲಗಿಕೊಳ್ಳುವೆ.
ಹುಳಗಳು ನಿನ್ನ ಶರೀರವನ್ನು ಕಂಬಳಿಯಂತೆ ಮುಚ್ಚಿಕೊಳ್ಳುವವು.
12 ನೀನು ಉದಯ ನಕ್ಷತ್ರದಂತೆ ಇರುವೆ.
ಆದರೆ ನೀನು ಆಕಾಶದಿಂದ ಕೆಳಗೆ ಬಿದ್ದಿರುವೆ.
ಹಿಂದಿನ ಕಾಲದಲ್ಲಿ ಲೋಕದ ಎಲ್ಲಾ ರಾಜ್ಯಗಳು ನಿನಗೆ ಅಡ್ಡಬಿದ್ದವು.
ಆದರೆ ಈಗ ನೀನು ಉರುಳಿಸಲ್ಪಟ್ಟಿರುವೆ.
13 ನೀನು ಯಾವಾಗಲೂ ನಿನ್ನೊಳಗೆ,
“ನಾನು ಉನ್ನತವಾದ ಆಕಾಶಕ್ಕೆ ಹೋಗುವೆನು.
ನಾನು ದೇವರ ನಕ್ಷತ್ರಗಳಿಗಿಂತ ಮೇಲೆ ನನ್ನ ಸಿಂಹಾಸನವನ್ನು ಸ್ಥಾಪಿಸುವೆನು.
ನಾನು ಜಾಫೋನ್ ಎಂಬ ಪವಿತ್ರ ಪರ್ವತದಲ್ಲಿ ಕುಳಿತುಕೊಳ್ಳುವೆನು.
ಆ ಪರ್ವತದಲ್ಲಿ ನಾನು ದೇವರುಗಳನ್ನು ಸಂಧಿಸುವೆನು.
14 ನಾನು ಉನ್ನತ ಮೇಘಮಂಡಲದ ಮೇಲೆ ಏರಿ
ಮಹೋನ್ನತನಿಗೆ ಸರಿಸಮಾನನಾಗುತ್ತೇನೆ” ಎಂದುಕೊಳ್ಳುತ್ತಿದ್ದೆ.
15 ಆದರೆ ಅದು ಸಂಭವಿಸಲಿಲ್ಲ.
ನೀನು ಆಕಾಶಕ್ಕೆ ದೇವರೊಂದಿಗೆ ಹೋಗಲಿಲ್ಲ.
ನೀನು ಆಳವಾದ ಗುಂಡಿಗೆ ದಬ್ಬಲ್ಪಟ್ಟೆ.
ಮರಣಸ್ಥಳವಾಗಿರುವ ಪಾತಾಳಕ್ಕೆ ನೀನು ದಬ್ಬಲ್ಪಟ್ಟೆ.
16 ನಿನ್ನನ್ನು ನೋಡುವ ಜನರು ನಿನ್ನ ಬಗ್ಗೆ ಯೋಚಿಸುವರು.
ನೀನು ಕೇವಲ ಸತ್ತ ಹೆಣವೆಂದು ತಿಳಿದು,
“ಭೂಮಿಯ ಮೇಲಿನ ರಾಜ್ಯಗಳಲ್ಲಿ ಮಹಾಭೀತಿಯನ್ನುಂಟು ಮಾಡಿದವನು ಇವನೋ?
17 ನಗರಗಳನ್ನು ನಾಶಮಾಡಿ ಭೂಮಿಯನ್ನು ಬೆಂಗಾಡನ್ನಾಗಿ ಮಾಡಿದವನು ಇವನೋ?
ಯುದ್ಧದಲ್ಲಿ ಜನರನ್ನು ಸೆರೆಹಿಡಿದು ಅವರನ್ನು ಮನೆಗಳಿಗೆ ಬಿಡದೆ ಇದ್ದವನು ಇವನೋ?” ಎಂದು ಕೇಳುವರು.
18 ಭೂಲೋಕದ ಪ್ರತಿಯೊಬ್ಬ ಅರಸನು ವೈಭವದೊಂದಿಗೆ ಕಾಲವಾದನು.
ಪ್ರತಿಯೊಬ್ಬ ಅರಸನಿಗೆ ಸ್ವಂತ ಸಮಾಧಿ ಇರುವದು.
19 ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ.
ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ.
ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ.
ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು.
ಈಗ ನೀನು ಸಾಧಾರಣ ಹೆಣದಂತೆ ಇರುವೆ.
ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ.
20 ಬೇರೆ ಅನೇಕ ಅರಸರು ಸತ್ತುಹೋದರು.
ಅವರೆಲ್ಲರಿಗೂ ಸ್ವಂತ ಸಮಾಧಿ ಇದೆ.
ಆದರೆ ನೀನು ಅವರೊಂದಿಗೆ ಸೇರಲಾರೆ.
ಯಾಕೆಂದರೆ ನಿನ್ನ ರಾಜ್ಯವನ್ನು ನೀನೇ ನಾಶಮಾಡಿರುವೆ.
ನೀನು ನಿನ್ನ ಜನರನ್ನೇ ಸಾಯಿಸಿರುವೆ.
ಆದರೆ ನೀನು ನಾಶಮಾಡಿದಂತೆ ನಾಶಮಾಡಲು ನಿನ್ನ ಮಕ್ಕಳಿಗೆ ಅವಕಾಶಕೊಡಲಾಗದು.
21 ಅವನ ಮಕ್ಕಳನ್ನು ಕೊಲ್ಲಲು ಸಿದ್ಧಗೊಳ್ಳಿರಿ.
ಅವರ ತಂದೆಯ ದುಷ್ಟತನಕ್ಕಾಗಿ ಅವರನ್ನು ಕೊಲ್ಲಿರಿ.
ಅವನ ಮಕ್ಕಳು ದೇಶವನ್ನು ಇನ್ನೆಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳಲಾರರು.
ಅವರು ಪ್ರಪಂಚವನ್ನು ಇನ್ನೆಂದಿಗೂ ತಮ್ಮ ಪಟ್ಟಣಗಳಿಂದ ತುಂಬಿಸಲಾರರು.
22 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದ್ದುನಿಂತು ಅವರಿಗೆ ವಿರುದ್ಧವಾಗಿ ಹೋರಾಡುವೆನು. ನಾನು ಹೆಸರುವಾಸಿಯಾದ ಬಾಬಿಲೋನ್ ನಗರವನ್ನು ನಾಶಮಾಡುವೆನು. ಬಾಬಿಲೋನಿನ ಎಲ್ಲಾ ಜನರನ್ನು ನಾಶಮಾಡುವೆನು. ಅವರ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ನಾಶಮಾಡುವೆನು” ಯೆಹೋವನೇ ಈ ಮಾತುಗಳನ್ನು ನುಡಿದಿದ್ದಾನೆ.
23 ಯೆಹೋವನು ಹೇಳುವುದೇನೆಂದರೆ: “ನಾನು ಬಾಬಿಲೋನನ್ನು ಪ್ರಾಣಿಗಳ ವಾಸಸ್ಥಳವನ್ನಾಗಿ ಬದಲಾಯಿಸುವೆನು. ಆ ಸ್ಥಳವು ಜವುಗು ನೆಲವಾಗಿರುವುದು. ‘ನಾಶನವೆಂಬ ಪೊರಕೆಯಿಂದ’ ಅದನ್ನು ಗುಡಿಸುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
ದೇವರು ಅಶ್ಶೂರವನ್ನು ಶಿಕ್ಷಿಸುವನು
24 ಸರ್ವಶಕ್ತನಾದ ಯೆಹೋವನು ಒಂದು ವಾಗ್ದಾನವನ್ನು ಮಾಡಿದ್ದಾನೆ. ಆತನು ಹೇಳುವುದೇನೆಂದರೆ: “ನಾನು ಯೋಚಿಸಿದಂತೆಯೇ ಇವೆಲ್ಲವೂ ನೆರವೇರುವುದು ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ. 25 ನನ್ನ ದೇಶದಲ್ಲಿ ಅಶ್ಶೂರದ ರಾಜನನ್ನು ನಾಶಮಾಡುವೆನು. ನನ್ನ ಪರ್ವತಗಳ ಮೇಲೆ ಆ ರಾಜನ ಮೇಲೆ ತುಳಿದುಕೊಂಡು ನಡೆದಾಡುವೆನು. ಆ ರಾಜನು ನನ್ನ ಜನರನ್ನು ಗುಲಾಮರನ್ನಾಗಿ ಮಾಡಿದನು. ಅವರ ಹೆಗಲಿನ ಮೇಲೆ ನೊಗವನ್ನಿಟ್ಟನು. ಆ ನೊಗವು ಯೆಹೂದದ ಹೆಗಲಿನಿಂದ ತೆಗೆಯಲ್ಪಡುವದು. 26 ಹೀಗೆ ಮಾಡಲು ನಾನೇ ಆಲೋಚಿಸಿದ್ದೇನೆ. ನನ್ನ ಯೋಜನೆಯಂತೆಯೇ ಘಟನೆಗಳು ಸಂಭವಿಸುತ್ತವೆ. ನನ್ನ ಭುಜಬಲದಿಂದ ಜನಾಂಗಗಳನ್ನು ಶಿಕ್ಷಿಸುವೆನು.”
27 ಸರ್ವಶಕ್ತನಾದ ಯೆಹೋವನ ಈ ಸಂಕಲ್ಪವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಜನರನ್ನು ದಂಡಿಸಲು ಆತನು ಕೈಮೇಲೆತ್ತಿದಾಗ ಯಾರೂ ಆತನನ್ನು ತಡೆಯಲಾರರು.
ಫಿಲಿಷ್ಟಿಯ ಕುರಿತು ದೈವಸಂದೇಶ
28 ಅರಸನಾದ ಆಹಾಜನು ಸತ್ತ ವರ್ಷದಲ್ಲಿ ಈ ದುಃಖದ ಸಂದೇಶವು ಕೊಡಲ್ಪಟ್ಟಿತು:
29 ಫಿಲಿಷ್ಟಿಯ ದೇಶವೇ, ನಿನ್ನನ್ನು ಹೊಡೆದ ಅರಸನು ಸತ್ತದ್ದಕ್ಕಾಗಿ ನೀನು ಸಂತೋಷಗೊಂಡಿರುವೆ. ಆದರೆ ನೀನು ಸಂತೋಷಗೊಳ್ಳಬಾರದು. ಅವನ ರಾಜ್ಯಭಾರವು ಅಂತ್ಯವಾಯಿತು ಎಂಬುದು ಸತ್ಯ. ಆದರೆ ಅರಸನ ಮಗನು ರಾಜ್ಯವಾಳುವನು. ಒಂದು ಹಾವು ಇನ್ನೊಂದು ಭಯಂಕರ ಹಾವನ್ನು ಹೆರುವಂತೆ ಅದು ಇರುವದು. ಈ ಹೊಸ ಅರಸನು ನಿಮಗೆ ವೇಗವಾದ ಮತ್ತು ಅಪಾಯಕರವಾದ ಹಾವಾಗುವನು. 30 ಆದರೆ ನನ್ನ ಬಡಜನರು ಸುರಕ್ಷಿತವಾಗಿ ಊಟಮಾಡುವರು. ಅವರ ಮಕ್ಕಳೂ ಸುರಕ್ಷಿತವಾಗಿರುವರು. ನನ್ನ ಬಡಜನರು ಹಾಯಾಗಿ ಮಲಗಿ ಸುರಕ್ಷಿತರಾಗಿರುವರು. ಆದರೆ ನಿಮ್ಮ ಸಂತಾನದವರು ಹಸಿವೆಯಿಂದ ಸಾಯುವಂತೆ ಮಾಡುವೆನು. ನಿಮ್ಮ ದೇಶದಲ್ಲಿ ಉಳಿದಿರುವ ಜನರೆಲ್ಲರೂ ಸಾಯುವರು.
31 ಮಹಾದ್ವಾರಗಳ ಬಳಿಯಲ್ಲಿರುವ ಜನರೇ, ಗೋಳಾಡಿರಿ!
ಪಟ್ಟಣದೊಳಗಿರುವ ಜನರೇ, ಕೂಗಾಡಿರಿ!
ಫಿಲಿಷ್ಟಿಯದಲ್ಲಿರುವವರೆಲ್ಲರೂ ಭಯಪಡುವರು.
ನಿಮ್ಮ ಧೈರ್ಯವು ಮೇಣದಂತೆ ಕರಗಿಹೋಗುವದು.
ಇಗೋ, ಉತ್ತರದಿಕ್ಕಿನಲ್ಲಿ ಧೂಳು ಏಳುತ್ತಿದೆ.
ಅಶ್ಶೂರದ ಸೈನ್ಯವು ಬರುತ್ತಿದೆ.
ಅವರೆಲ್ಲರೂ ಬಲಶಾಲಿಗಳಾದ ವೀರರು.
32 ಆ ಸೈನ್ಯದವರು ತಮ್ಮ ದೇಶಕ್ಕೆ ಸಂದೇಶವಾಹಕರನ್ನು ಕಳುಹಿಸುತ್ತಾರೆ.
ಆ ಸಂದೇಶವು ಏನಿರಬಹುದು?
“ಫಿಲಿಷ್ಟಿಯರು ಸೋತುಹೋದರು.
ಆದರೆ ಯೆಹೋವನು ಚೀಯೋನನ್ನು ಬಲಪಡಿಸಿದ್ದಾನೆ.
ಆತನ ಬಡಜನರು ರಕ್ಷಣೆಗಾಗಿ ಅಲ್ಲಿಗೆ ಹೋಗಿದ್ದಾರೆ” ಎಂಬುದೇ ಆ ಸಂದೇಶ.
ಮೋವಾಬಿನ ಕುರಿತು ದೈವಸಂದೇಶ
15 ಇದು ಮೋವಾಬನ್ನು ಕುರಿತ ದುಃಖಕರವಾದ ಸಂದೇಶ:
ಒಂದು ರಾತ್ರಿ ಮೋವಾಬಿನ ಆರ್ ಪಟ್ಟಣದಿಂದ ಸಂಪತ್ತನ್ನು ಸೈನ್ಯವು ಸೂರೆ ಮಾಡಿತು.
ಆ ರಾತ್ರಿ ನಗರವು ನಾಶಮಾಡಲ್ಪಟ್ಟಿತು.
ಒಂದು ರಾತ್ರಿ ಸೈನ್ಯವು ಮೋವಾಬಿನ ಕೀರ್ ಪಟ್ಟಣದಿಂದ ಸಂಪತ್ತನ್ನು ಸೂರೆ ಮಾಡಿತು.
ಆ ರಾತ್ರಿ ಪಟ್ಟಣವು ಕೆಡವಲ್ಪಟ್ಟಿತು.
2 ಅರಸನ ಪರಿವಾರದವರು ಮತ್ತು ದೀಬೋನಿನ ಜನರು ಪೂಜಾಸ್ಥಳಕ್ಕೆ ದುಃಖಿಸಲು ಹೋಗುತ್ತಿದ್ದಾರೆ.
ಮೋವಾಬಿನ ಜನರು ನೆಬೋ ಮತ್ತು ಮೇದೆಬದವರಿಗಾಗಿ ರೋಧಿಸುತ್ತಾರೆ.
ಜನರು ತಮ್ಮ ಗಡ್ಡಗಳನ್ನೂ ತಲೆಗಳನ್ನೂ ಬೋಳಿಸಿ ತಮ್ಮ ದುಃಖವನ್ನು ಪ್ರದರ್ಶಿಸುತ್ತಾರೆ.
3 ಮೋವಾಬಿನ ಎಲ್ಲಾ ಕಡೆಗಳಲ್ಲೂ ಮನೆಯ ಚಾವಣಿಯ ಮೇಲೂ ಬೀದಿಗಳಲ್ಲೂ
ಜನರು ಗೋಣಿತಟ್ಟುಗಳನ್ನು ಧರಿಸಿಕೊಂಡು ರೋಧಿಸುತ್ತಾರೆ.
4 ಹೆಷ್ಬೋನ್ ಮತ್ತು ಎಲೆಯಾಲೆಯಲ್ಲಿರುವ ಜನರು ಗಟ್ಟಿಯಾಗಿ ಅಳುತ್ತಿದ್ದಾರೆ.
ದೂರದಲ್ಲಿರುವ ಯಹಜ್ ಪಟ್ಟಣದವರಿಗೆ ಅವರ ರೋಧನವು ಕೇಳಿಸುತ್ತದೆ.
ಸೈನಿಕರೂ ಭಯಗೊಂಡಿದ್ದಾರೆ.
ಹೆದರಿಕೆಯಿಂದ ನಡುಗುತ್ತಿದ್ದಾರೆ.
5 ಮೋವಾಬಿನ ಬಗ್ಗೆ ನನ್ನ ಹೃದಯವು ಮರುಗುತ್ತಿದೆ.
ಜನರು ಸುರಕ್ಷತೆಗಾಗಿ ಅತ್ತಿತ್ತ ಓಡಾಡುತ್ತಿದ್ದಾರೆ.
ಅವರು ಬಹುದೂರವಿರುವ ಚೋಯರಿಗೆ ಓಡುತ್ತಿದ್ದಾರೆ.
ಎಗ್ಲತ್ ಶೆಲಿಶೀಯಕ್ಕೂ ಓಡುತ್ತಾರೆ.
ಪರ್ವತಮಾರ್ಗವಾಗಿ ಲೂಹೀಥ್ ಗೆ
ಹೋಗುತ್ತಿರುವಾಗ ಜನರು ಅಳುತ್ತಾ ಹೋಗುತ್ತಾರೆ.
ಹೊರೊನಯಿಮಿಗೆ ಹೋಗುವ ಮಾರ್ಗದಲ್ಲಿ
ಜನರು ಜೋರಾಗಿ ಅಳುತ್ತಾ ಹೋಗುತ್ತಿದ್ದಾರೆ.
6 ಆದರೆ ನಿಮ್ರೀಮ್ ಹಳ್ಳವು ಒಣಗಿಹೋಗಿ ಮರುಭೂಮಿಗೆ ಸಮಾನವಾಗಿದೆ.
ಹಸಿಹುಲ್ಲುಗಳೆಲ್ಲಾ ಬಾಡಿವೆ;
ಸಸಿಗಳೆಲ್ಲಾ ಸತ್ತಿವೆ;
ಎಲ್ಲಿಯೂ ಹಸಿರು ಕಾಣಿಸುವದಿಲ್ಲ.
7 ಆದಕಾರಣ ಜನರು ತಮ್ಮ ವಸ್ತುಗಳನ್ನು ಒಟ್ಟಾಗಿ ಸೇರಿಸಿ ಮೋವಾಬನ್ನು ಬಿಟ್ಟುಹೋಗುತ್ತಿದ್ದಾರೆ.
ಅವರು ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪೊಪ್ಲಾರ್ ಹೊಳೆಯ ಬದಿಯಲ್ಲಿ ಗಡಿದಾಟುವರು.
8 ಮೋವಾಬ್ ದೇಶದಲ್ಲೆಲ್ಲಾ ಅಳುವ ಸದ್ದು ಕೇಳಿಸುತ್ತದೆ.
ದೂರದಲ್ಲಿರುವ ಎಗ್ಲಯಿಮಿನಲ್ಲೂ ಜನರು ಅಳುತ್ತಿದ್ದಾರೆ.
ಬೆಯೇರ್ ಏಲೀಮ್ ಪಟ್ಟಣದಲ್ಲೂ ಜನರು ರೋಧಿಸುತ್ತಾರೆ.
9 ದೀಮೋನಿನ ನೀರು ರಕ್ತಮಯವಾಗಿದೆ.
ಮತ್ತು ಯೆಹೋವನಾದ ನಾನು ದೀಮೋನಿಗೆ ಇನ್ನೂ ಕೇಡುಗಳನ್ನು ಬರಮಾಡುವೆನು.
ಮೋವಾಬಿನಲ್ಲಿ ವಾಸಿಸುವ ಕೆಲವೇ ಜನರು ಶತ್ರುಗಳಿಂದ ಪಾರಾಗಿದ್ದಾರೆ.
ಆದರೆ ಅವರನ್ನು ಸಾಯಿಸಲು ನಾನು ಸಿಂಹಗಳನ್ನು ಕಳುಹಿಸುವೆನು.
16 ನೀವು ದೇಶದ ಅಧಿಪತಿಗೆ ಕಾಣಿಕೆಗಳನ್ನು ಕಳುಹಿಸಬೇಕು. ನೀವು ಸೇಲದ ಕುರಿಮರಿಯನ್ನು ಮರುಭೂಮಿಯ ಮೂಲಕ ಚೀಯೋನ್ ಕುಮಾರ್ತೆಯ ಪರ್ವತಕ್ಕೆ ಕಳುಹಿಸಿಕೊಡಬೇಕು.
2 ಮೋವಾಬಿನ ಸ್ತ್ರೀಯರು ಅರ್ನೋನ್ ಹೊಳೆಯನ್ನು ದಾಟಲು ಪ್ರಯತ್ನಿಸುವರು.
ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಹಾಯಕ್ಕಾಗಿ ಓಡುವರು.
ಗೂಡಿನಿಂದ ಕೆಳಗೆ ಬಿದ್ದ ಪಕ್ಷಿಮರಿಗಳಂತೆ ಅವರಿರುವರು.
3 ಅವರು, “ನಮಗೆ ಸಹಾಯ ಮಾಡಿರಿ!
ನಾವು ಮಾಡಬೇಕಾದದ್ದನ್ನು ತಿಳಿಸಿರಿ!
ವೈರಿಗಳಿಂದ ನಮ್ಮನ್ನು ರಕ್ಷಿಸಿರಿ.
ನಮ್ಮನ್ನು ನಡುಮಧ್ಯಾಹ್ನದ ಸೂರ್ಯನ ಶಾಖದಿಂದ ನೆರಳು ಕಾಪಾಡುವಂತೆ ನಮ್ಮನ್ನು ಕಾಪಾಡಿರಿ.
ನಾವು ನಮ್ಮ ಶತ್ರುಗಳಿಂದ ಓಡಿಹೋಗುತ್ತಿದ್ದೇವೆ.
ನಮ್ಮನ್ನು ಅಡಗಿಸಿಡಿರಿ,
ವೈರಿಗಳ ಕೈಗೆ ನಮ್ಮನ್ನು ಕೊಡಬೇಡಿರಿ.
4 ತಮ್ಮ ಮನೆಯನ್ನು ಬಿಟ್ಟುಹೋಗುವಂತೆ ಮೋವಾಬಿನ ಆ ಜನರನ್ನು ಬಲವಂತ ಮಾಡಲಾಯಿತು.
ಆದ್ದರಿಂದ ಅವರು ನಿಮ್ಮ ದೇಶದಲ್ಲಿ ವಾಸಿಸಲಿ.
ಶತ್ರುಗಳ ಕೈಗೆ ಸಿಗದಂತೆ ಅವರನ್ನು ಅಡಗಿಸಿಡಿರಿ” ಎಂದು ಹೇಳುವರು.
ದರೋಡೆಯು ನಿಂತುಹೋಗುವದು.
ಶತ್ರುಗಳು ಸೋಲಿಸಲ್ಪಡುವರು.
ಇತರರಿಗೆ ಕೇಡುಮಾಡುವವರು ದೇಶವನ್ನು ಬಿಟ್ಟುಹೋಗುವರು.
5 ಆಗ ಹೊಸ ಅರಸನು ಬರುವನು.
ಆತನು ನ್ಯಾಯವಾದವುಗಳನ್ನು ಮತ್ತು ಒಳ್ಳೆಯವುಗಳನ್ನು ಮಾಡುವನು.
ಆತನು ದಾವೀದನ ವಂಶದವನಾಗಿದ್ದಾನೆ.
ಆತನು ಪ್ರಾಮಾಣಿಕನೂ ಪ್ರೀತಿದಯೆಗಳಿಂದ ತುಂಬಿದವನೂ ಆಗಿರುವನು.
ಆತನ ನ್ಯಾಯತೀರ್ಪು ನ್ಯಾಯಕ್ಕನುಸಾರವಾಗಿರುವದು.
6 ಮೋವಾಬಿನ ಜನರು ತುಂಬ ಹೆಚ್ಚಳಪಡುವವರೂ
ಜಂಬದವರೂ ಎಂದು ನಾವು ಕೇಳಿದ್ದೇವೆ.
ಇವರು ಹಿಂಸಕರಾಗಿದ್ದಾರೆ; ಬಡಾಯಿ ಕೊಚ್ಚುವವರಾಗಿದ್ದಾರೆ,
ಅವರ ಬಡಾಯಿ ಕೇವಲ ಮಾತುಗಳಷ್ಟೇ.
7 ಆ ಜಂಬದ ಪರಿಣಾಮವಾಗಿ ಇಡೀ ಮೋವಾಬ್ ಪ್ರದೇಶ ಸಂಕಟಕ್ಕೊಳಗಾಗುವದು.
ಮೋವಾಬಿನ ಜನರೆಲ್ಲಾ ಅಳುವರು.
ಜನರು ತಮಗೆ ಹಿಂದೆ ಇದ್ದದ್ದೆಲ್ಲಾ ಬೇಕು ಎನ್ನುತ್ತಾ ದುಃಖಿಸುವರು.
ಕೀರ್ ಹರೆಷೆಥಿನಲ್ಲಿ ತಯಾರಿಸಿದ ಅಂಜೂರದ ತಿಂಡಿ ಪದಾರ್ಥಗಳು ತಮಗೆ ಬೇಕು ಅನ್ನುವರು.
8 ಹೆಷ್ಬೋನಿನ ತೋಟಗಳು ಮತ್ತು ಸಿಬ್ಮದ ದ್ರಾಕ್ಷಾಲತೆಗಳು
ದ್ರಾಕ್ಷಿಯನ್ನು ಫಲಿಸಲಾರದ ಕಾರಣ ಜನರು ವ್ಯಸನದಿಂದಿರುವರು.
ಶತ್ರುಸೈನ್ಯವು ಯೆಜ್ಜೇರಿನಿಂದ ಮರುಭೂಮಿಯವರೆಗೂ ಮತ್ತು ಸಮುದ್ರದವರೆಗೂ ಆವರಿಸಿಕೊಂಡಿರುವರು.
9 ದ್ರಾಕ್ಷಾಫಲವು ನಾಶವಾಗಿರುವದಕ್ಕಾಗಿ
ನಾನು ಯೆಜ್ಜೇರ್ ಮತ್ತು ಸಿಬ್ಮದವರೊಂದಿಗೆ ಅಳುವೆನು.
ಸುಗ್ಗಿ ಇಲ್ಲದಿರುವದಕ್ಕಾಗಿ
ನಾನು ಹೆಷ್ಬೋನ್ ಮತ್ತು ಎಲೆಯಾಲೆಯ ಜನರೊಂದಿಗೆ ಅಳುವೆನು.
ಬೇಸಿಗೆ ಕಾಲದ ಹಣ್ಣುಗಳಿರದು;
ಹರ್ಷಧ್ವನಿಯೂ ಇರದು.
10 ಕರ್ಮೆಲ್ ಬೆಟ್ಟದಲ್ಲಿ ಗಾಯನವಾಗಲಿ ಹರ್ಷಧ್ವನಿಯಾಗಲಿ ಇರದು.
ಸುಗ್ಗಿಕಾಲದ ಎಲ್ಲಾ ಸಂತಸಗಳನ್ನು ನಾನು ನಿಲ್ಲಿಸುವೆನು.
ದ್ರಾಕ್ಷಿಯ ಹಣ್ಣುಗಳು ರಸ ತೆಗೆಯಲು ಪಕ್ವವಾಗಿವೆ.
ಆದರೆ ಅವುಗಳೆಲ್ಲ ವ್ಯರ್ಥವಾಗುತ್ತವೆ.
11 ನಾನು ಮೋವಾಬಿಗಾಗಿ ತುಂಬಾ ದುಃಖದಲ್ಲಿದ್ದೇನೆ.
ನಾನು ಕೀರ್ಹೆರೆಸಿಗಾಗಿಯೂ ತುಂಬಾ ದುಃಖದಲ್ಲಿದ್ದೇನೆ.
ಈ ನಗರಗಳಿಗಾಗಿ ನಾನು ಬಹಳವಾಗಿ ದುಃಖದಲ್ಲಿದ್ದೇನೆ.
12 ಮೋವಾಬಿನ ಜನರು ತಮ್ಮ ಪೂಜಾಸ್ಥಳಗಳಿಗೆ ಹೋಗಿ ಆರಾಧನೆ ಮಾಡುವರು.
ಸಂಭವಿಸುವ ಸಂಗತಿಗಳನ್ನು ನೋಡಿದಾಗ
ಪ್ರಾರ್ಥಿಸಲೂ ಅವರಲ್ಲಿ ಉತ್ಸಾಹವಿರುವುದಿಲ್ಲ.
13 ಮೋವಾಬಿನ ವಿಷಯವಾಗಿ ಯೆಹೋವನು ಅನೇಕ ಸಾರಿ ಇವುಗಳನ್ನು ಮುಂತಿಳಿಸಿದ್ದಾನೆ. 14 ಈಗ ಯೆಹೋವನು ಹೇಳುವುದೇನೆಂದರೆ: “ಇನ್ನು ಮೂರು ವರ್ಷದೊಳಗೆ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಎಲ್ಲಾ ಜನರು ಮತ್ತು ಅವರು ಹೆಮ್ಮೆಪಡುವ ವಸ್ತುಗಳು ಹೋಗಿಬಿಡುತ್ತವೆ. ಕೇವಲ ಸ್ವಲ್ಪ ಮಂದಿ ಮಾತ್ರ ಉಳಿಯುವರು. ದೇಶದಲ್ಲಿ ಹೆಚ್ಚುಮಂದಿ ಉಳಿಯರು.”
5 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. 2 ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.
3 ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ. 4 ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು. 5 ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.
6 ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ. 7 ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ. 8 ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. 9 ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. 10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. 11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ. 12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ. 13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. 14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:
“ನಿದ್ರೆಮಾಡುವವನೇ, ಎಚ್ಚರವಾಗು!
ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”
15 ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ. 16 ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ.
Kannada Holy Bible: Easy-to-Read Version. All rights reserved. © 1997 Bible League International