Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಆಮೋಸ 7-9

ಮಿಡತೆಯ ವಿಷಯವಾದ ದರ್ಶನ

ಯೆಹೋವನು ನನಗೆ ಇದನ್ನು ತೋರಿಸಿದನು: ಎರಡನೇ ಬೆಳೆಯು ಬೆಳೆಯಲಾರಂಭಿಸಿದ ಕಾಲದಲ್ಲಿ ಆತನು ಮಿಡತೆಗಳನ್ನು ತಯಾರು ಮಾಡುತ್ತಿದ್ದನು. ಅರಸನು ಮೊದಲನೇ ಬೆಳೆಯನ್ನು ರಾಶಿಮಾಡಿಸಿಕೊಂಡು ಹೋದ ನಂತರದ ಬೆಳೆ ಇದು. ಮಿಡತೆಗಳು ದೇಶದ ಎಲ್ಲಾ ಹುಲ್ಲನ್ನು ತಿಂದುಬಿಟ್ಟವು. ಆ ಬಳಿಕ ನಾನು ಹೇಳಿದ್ದೇನೆಂದರೆ, “ನನ್ನ ಒಡೆಯನಾದ ಯೆಹೋವನೇ, ನಮ್ಮನ್ನು ಕ್ಷಮಿಸು. ಯಾಕೋಬನು ತೀರಾ ದುರ್ಬಲನಾಗಿರುವದರಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಅವನಿಗಾಗಿ ನಾನು ನಿನ್ನನ್ನು ಬೇಡುತ್ತೇನೆ.”

ಆಗ ಯೆಹೋವನು ತನ್ನ ನಿರ್ಧಾರವನ್ನು ಬದಲಿಸಿ ಹೀಗೆಂದನು, “ಅದು ನೆರವೇರುವುದಿಲ್ಲ.”

ಬೆಂಕಿಯ ವಿಷಯವಾದ ದರ್ಶನ

ನನ್ನ ಒಡೆಯನಾದ ಯೆಹೋವನು ಈ ವಿಷಯಗಳನ್ನು ನನಗೆ ತೋರಿಸಿದನು. ದೇವರಾದ ಯೆಹೋವನು ಬೆಂಕಿಯಿಂದ ನ್ಯಾಯತೀರಿಸುವುದಕ್ಕಾಗಿ ಕರೆಯುವುದನ್ನು ಕಂಡೆನು. ಆ ಬೆಂಕಿಯು ಮಹಾ ಸಾಗರವನ್ನು ನಾಶಮಾಡಿತು. ಭೂಮಿಯನ್ನು ತಿಂದುಬಿಡಲೂ ಪ್ರಾರಂಭಿಸಿತು. ಆಗ ನಾನು, “ದೇವರಾದ ಯೆಹೋವನೇ, ಸಾಕು, ನಿಲ್ಲಿಸು ಎಂದು ಬೇಡುತ್ತೇನೆ, ಯಾಕೋಬನು ಇದರಿಂದ ಉಳಿಯಲಿಕ್ಕಿಲ್ಲ. ಅವನು ಇನ್ನೂ ಚಿಕ್ಕವನು” ಅಂದೆನು.

ಆಗ ದೇವರಾದ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ, “ಇದು ಕೂಡಾ ನೆರವೇರದು” ಎಂದು ಹೇಳಿದನು.

ತೂಗು ಗುಂಡಿನ ದರ್ಶನ

ಯೆಹೋವನು ಈ ದರ್ಶನವನ್ನು ನನಗೆ ದಯಪಾಲಿಸಿದನು. ಕೈಯಲ್ಲಿ ತೂಗುಗುಂಡನ್ನು ಹಿಡಿದುಕೊಂಡು ಗೋಡೆಯ ಬದಿಯಲ್ಲಿ ನಿಂತಿದ್ದನು. ಆ ಗೋಡೆಯು ನೂಲಿನಿಂದ ಗುರುತು ಮಾಡಲ್ಪಟ್ಟಿತ್ತು. ಆಗ ಯೆಹೋವನು ನನಗೆ, “ಆಮೋಸನೇ, ಏನನ್ನು ನೋಡುತ್ತೀ?” ಎಂದು ಕೇಳಿದನು.

ಅದಕ್ಕೆ ನಾನು, “ನೂಲುಗುಂಡು” ಅಂದೆನು.

ಆಗ ನನ್ನ ಒಡೆಯನು, “ನೋಡು, ನನ್ನ ಜನರಾದ ಇಸ್ರೇಲರ ಮೇಲೆ ನೂಲುಗುಂಡನ್ನು ಹಾಕುವೆನು. ಅವರನ್ನು ನಾನು ಸುಮ್ಮನೆ ಬಿಟ್ಟುಬಿಡುವುದಿಲ್ಲ. ಅವರ ಪಾಪದ ಸ್ಥಳಗಳನ್ನು ನಾನು ತೆಗೆದುಬಿಡುವೆನು. ಇಸಾಕನ ವೇದಿಕೆಗಳೆಲ್ಲಾ ನಾಶವಾಗುವದು. ಇಸ್ರೇಲಿನ ಪವಿತ್ರ ಸ್ಥಳಗಳೆಲ್ಲಾ ಬಂಡೆಯ ರಾಶಿಯಾಗಿ ಮಾರ್ಪಡುವವು. ಯಾರೊಬ್ಬಾಮನ ಕುಟುಂಬದ ಮೇಲೆ ಆಕ್ರಮಣ ಮಾಡಿ ಅವರನ್ನು ಸಂಹರಿಸುವೆನು” ಎಂದು ಹೇಳಿದನು.

ಆಮೋಸನನ್ನು ಪ್ರವಾದಿಸದಂತೆ ಅಮಚ್ಯನು ಪ್ರಯತ್ನಿಸಿದ್ದು

10 ಬೇತೇಲಿನ ಯಾಜಕನಾದ ಅಮಚ್ಯನು ಇಸ್ರೇಲಿನ ಅರಸನಾದ ಯಾರೊಬ್ಬಾಮನಿಗೆ ಈ ಪತ್ರವನ್ನು ಕಳುಹಿಸಿದನು. “ನಿನಗೆ ವಿರುದ್ಧವಾಗಿ ಆಮೋಸನು ಯೋಜನೆಗಳನ್ನು ಮಾಡುತ್ತಿದ್ದಾನೆ. ಇಸ್ರೇಲಿನ ಜನರು ನಿನಗೆ ವಿರುದ್ಧವಾಗಿ ಯುದ್ಧಮಾಡುವಂತೆ ಪ್ರಯತ್ನಿಸುತ್ತಾನೆ. ಅವನು ಎಷ್ಟೆಲ್ಲಾ ಮಾತಾಡುತ್ತಾನೆಂದರೆ, ಈ ದೇಶವು ಅವನ ಮಾತುಗಳನ್ನು ತುಂಬಲು ಸಾಧ್ಯವಿಲ್ಲ. 11 ಅಮೋಸನು, ‘ಯಾರೊಬ್ಬಾಮನು ಕತ್ತಿಯಿಂದ ಸಂಹರಿಸಲ್ಪಡುವನು ಮತ್ತು ಇಸ್ರೇಲಿನ ಜನರು ಸೆರೆಹಿಡಿಯಲ್ಪಟ್ಟವರಾಗಿ ಪರದೇಶಕ್ಕೆ ಒಯ್ಯಲ್ಪಡುವರು’” ಎಂದು ಹೇಳಿದ್ದಾನೆ.

12 ಅಮಚ್ಯನು ಆಮೋಸನಿಗೆ ಹೇಳಿದ್ದೇನೆಂದರೆ, “ಭವಿಷ್ಯವಾದಿಯೇ, ನೀನು ಯೆಹೂದಕ್ಕೆ ಹೋಗಿ ಅಲ್ಲಿ ನಿನ್ನ ಹೊಟ್ಟೆ ತುಂಬಿಸಿಕೊ. ನಿನ್ನ ಪ್ರಸಂಗವನ್ನು ಅಲ್ಲಿಯೇ ಮಾಡು. 13 ಬೇತೇಲಿನಲ್ಲಿ ಇನ್ನು ನೀನು ಪ್ರವಾದಿಸುವದು ಬೇಡ. ಇದು ಯಾರೊಬ್ಬಾಮನ ಪವಿತ್ರಸ್ಥಳ. ಇದು ಇಸ್ರೇಲಿನ ದೇವಾಲಯ” ಎಂದು ಹೇಳಿದನು.

14 ಅದಕ್ಕೆ ಅಮೋಸನು ಅಮಚ್ಯನಿಗೆ, “ಪ್ರವಾದಿಸುವದು ನನ್ನ ಕೆಲಸವಲ್ಲ. ಅಲ್ಲದೆ ನಾನು ಪ್ರವಾದಿಗಳ ಕುಟುಂಬಕ್ಕೂ ಸೇರಿದವನಲ್ಲ. ನಾನು ದನ ಮೇಯಿಸುವವನೂ, ಅತ್ತಿ ಮರಗಳನ್ನು ಹತ್ತಿ ಹಣ್ಣು ಕೀಳುವವನೂ ಆಗಿದ್ದೇನೆ. 15 ನಾನು ಕುರಿಕಾಯುತ್ತಿರುವಾಗ ಯೆಹೋವನು ನನ್ನನ್ನು ಕುರಿಗಳ ಹಿಂದೆ ಹೋಗಬೇಡ ಎಂದು ಕರೆದನು. ಆತನು ನನಗೆ, ‘ನನ್ನ ಜನರಾದ ಇಸ್ರೇಲರ ಬಳಿಗೆ ಹೋಗಿ ಪ್ರವಾದಿಸು’ ಎಂದು ಹೇಳಿದನು. 16 ಆದ್ದರಿಂದ ಯೆಹೋವನ ಸಂದೇಶಕ್ಕೆ ಕಿವಿಗೊಡು. ಆದರೆ ನೀನು, ‘ಇಸ್ರೇಲರಿಗೆ ವಿರುದ್ಧವಾಗಿ ಪ್ರವಾದಿಸಬೇಡ. ಇಸಾಕನ ಕುಟುಂಬದ ವಿರುದ್ಧ ಪ್ರಸಂಗಿಸಬೇಡ’ ಎಂದು ಹೇಳುತ್ತಿ. 17 ಆದರೆ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಿನ್ನ ಹೆಂಡತಿಯು ಪಟ್ಟಣದೊಳಗೆ ವೇಶ್ಯೆಯಾಗುವಳು. ನಿನ್ನ ಗಂಡು, ಹೆಣ್ಣುಮಕ್ಕಳು ಕತ್ತಿಯಿಂದ ಸಾಯುವರು. ಅನ್ಯರು ನಿನ್ನ ದೇಶವನ್ನು ಕಿತ್ತುಕೊಂಡು ತಮ್ಮೊಳಗೆ ಹಂಚಿಕೊಳ್ಳುವರು. ಮತ್ತು ನೀನು ಪರದೇಶದಲ್ಲಿ ಸಾಯುವೆ. ಇಸ್ರೇಲಿನ ಜನರು ಖಂಡಿತವಾಗಿಯೂ ಸೆರೆಹಿಡಿಯಲ್ಪಟ್ಟು ತಮ್ಮ ದೇಶದಿಂದ ಒಯ್ಯಲ್ಪಡುವರು.’”

ಮಾಗಿದ ಹಣ್ಣಿನ ದರ್ಶನ

ಯೆಹೋವನು ನನಗೆ ಇದನ್ನು ತೋರಿಸಿದನು: ನಾನು ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳನ್ನು ಕಂಡೆನು. ಯೆಹೋವನು ನನಗೆ, “ಆಮೋಸನೇ, ನೀನು ಏನನ್ನು ನೋಡುತ್ತೀ?” ಎಂದು ಕೇಳಿದನು.

ಅದಕ್ಕೆ ನಾನು, “ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳು” ಎಂದು ಹೇಳಿದೆನು.

ಆಗ ಯೆಹೋವನು ನನಗೆ, “ನನ್ನ ಜನರಾದ ಇಸ್ರೇಲರಿಗೆ ಅಂತ್ಯಕಾಲವು ಬಂದಿದೆ. ಇನ್ನು ಮೇಲೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಆಲಯದಲ್ಲಿ ಹಾಡುವ ಹಾಡುಗಳು ಮರಣದ ಶೋಕಗೀತೆಗಳಾಗುವವು. ಇವು ಕರ್ತನಾದ ಯೆಹೋವನ ನುಡಿಗಳು. ಸತ್ತಹೆಣಗಳು ಎಲ್ಲೆಲ್ಲಿಯೂ ಬಿದ್ದುಕೊಂಡಿರುವವು. ಜನರು ಮೌನದಿಂದಿದ್ದು ಸತ್ತವರನ್ನು ಎತ್ತಿ ರಾಶಿಗೆ ಬಿಸಾಡುವರು.”

ಇಸ್ರೇಲಿನ ವರ್ತಕರಿಗೆ ಹಣ ಸಂಪಾದಿಸುವದೇ ಗುರಿ

ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ.
    ಈ ದೇಶದ ಬಡಜನರನ್ನು ನಾಶಮಾಡುತ್ತೀರಿ.
ವರ್ತಕರಾದ ನೀವು ಹೇಳುವುದೇನೆಂದರೆ,
    “ಅಮಾವಾಸ್ಯೆ ಯಾವಾಗ ಮುಗಿಯುವುದು?
    ಆಗ ನಾವು ಧಾನ್ಯವನ್ನು ಮಾರಾಟ ಮಾಡುವೆವು.
ಸಬ್ಬತ್ ಯಾವಾಗ ಮುಗಿಯುವುದು?
    ಆಗ ನಾವು ನಮ್ಮ ಗೋದಿಯನ್ನು ಮಾರಾಟ ಮಾಡಲು ತರುವೆವು.
ಅದರ ಬೆಲೆಯನ್ನು ಅಧಿಕಗೊಳಿಸಿ
    ಅಳತೆಯನ್ನು ಕಡಿಮೆ ಮಾಡುವೆವು.
ತ್ರಾಸನ್ನು ಕಡಿಮೆ ಮಾಡಿ
    ಜನರಿಗೆ ಮೋಸ ಮಾಡುವೆವು.
ಬಡಜನರಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗದಿರುವದರಿಂದ
    ಅವರನ್ನು ನಾವು ಗುಲಾಮರನ್ನಾಗಿ ತೆಗೆದುಕೊಳ್ಳೋಣ.
ಒಂದು ಜೊತೆ ಚಪ್ಪಲಿಯ ಕ್ರಯಕೊಟ್ಟು
    ಅವರನ್ನು ಖರೀದಿಸೋಣ.
ಮತ್ತು ನೆಲದಲ್ಲಿ ಬಿದ್ದ ಗೋದಿಯನ್ನು
    ಒಟ್ಟುಗೂಡಿಸಿ ಮಾರೋಣ.”

ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ.

“ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.
ಅದರ ಸಲುವಾಗಿ ಇಡೀ ದೇಶವು ಅಲುಗಾಡುವದು.
    ಸತ್ತವರಿಗಾಗಿ ದೇಶದ ಪ್ರತಿ ನಿವಾಸಿಯೂ ರೋಧಿಸುವನು.
ಈಜಿಪ್ಟಿನ ನೈಲ್ ನದಿಯ ರೀತಿಯಲ್ಲಿ ದೇಶವು ತಿರುಗುಮುರುಗಾಗುವುದು.”

ಯೆಹೋವನು ಹೀಗೆನ್ನುತ್ತಾನೆ,
“ಆ ದಿವಸಗಳಲ್ಲಿ ನಡುಮಧ್ಯಾಹ್ನದಲ್ಲಿಯೇ ಸೂರ್ಯನನ್ನು ಮುಳುಗುವಂತೆ ಮಾಡುವೆನು.
    ಶುಭ್ರವಾದ ಹಗಲಿನಲ್ಲಿ ಕತ್ತಲು ಉಂಟಾಗುವಂತೆ ಮಾಡುವೆನು.
10 ನಿಮ್ಮ ಸಂತಸದ ದಿವಸಗಳನ್ನು ಸತ್ತವರಿಗಾಗಿ ರೋದಿಸುವ ದಿವಸಗಳನ್ನಾಗಿ ಮಾಡುವೆನು.
    ನಿಮ್ಮ ಹಾಡುಗಳೆಲ್ಲಾ ಶೋಕಗೀತೆಯಾಗುವವು.
ಎಲ್ಲರೂ ಶೋಕಬಟ್ಟೆಯನ್ನು ಧರಿಸುವಂತೆ ಮಾಡುವೆನು.
    ಪ್ರತಿ ತಲೆಯನ್ನು ಬೋಳು ತಲೆಯನ್ನಾಗಿ ಮಾಡುವೆನು.
ಒಬ್ಬನೇ ಮಗನನ್ನು ಕಳೆದುಕೊಳ್ಳುವಾಗ ರೋದಿಸುವ ಹಾಗೆ
    ಗಟ್ಟಿಯಾಗಿ ರೋದಿಸುವಂತೆ ಮಾಡುತ್ತೇನೆ.
ಅದರ ಅಂತ್ಯ ಕಹಿಯಾಗಿರುವುದು.”

ದೇವರ ವಾಕ್ಯಕ್ಕಾಗಿ ಅತಿಯಾದ ಹಸಿವೆಯಿಂದ ಕೇಳುವ ದಿವಸಗಳು ಬರುವವು

11 ಯೆಹೋವನು ಹೇಳುವುದೇನೆಂದರೆ,

“ನಿಮ್ಮ ದೇಶದಲ್ಲಿ ಹಸಿವೆಯ
    ದಿವಸಗಳನ್ನು ಬರಮಾಡುವೆನು.
ಜನರು ರೊಟ್ಟಿಗಾಗಿ ಹಸಿಯುವುದಿಲ್ಲ.
    ನೀರಿಗಾಗಿ ಬಾಯಾರುವದಿಲ್ಲ.
    ಇಲ್ಲ! ಜನರು ಯೆಹೋವನ ವಾಕ್ಯಕ್ಕಾಗಿ ಹಸಿವೆಯುಳ್ಳವರಾಗುವರು.
12 ಮೃತ್ಯುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದ ತನಕ,
    ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು
ಯೆಹೋವನ ಸಂದೇಶಕ್ಕಾಗಿ ಹಾತೊರೆಯುತ್ತಾ ಅಲೆದಾಡುವರು.
    ಆದರೆ ಅವರು ಕಂಡುಕೊಳ್ಳುವುದಿಲ್ಲ.
13 ಆ ಸಮಯದಲ್ಲಿ ಸುಂದರವಾದ
    ತರುಣತರುಣಿಯರು ದಾಹದಿಂದ ಬಳಲುವರು.
14 ಆ ಜನರು ಸಮಾರ್ಯದ ಪಾಪದ[a] ಮೇಲೆ ಆಣೆಯಿಡುವರು,
    ‘ದಾನೇ, ನಿನ್ನ ದೇವರಾಣೆ ….’
    ‘ಬೇರ್ಷೆಬದ ದೇವರಾಣೆ ….’ ಎಂಬುದಾಗಿ ಹೇಳುವರು.
ಆದರೆ ಆ ಜನರು ಬಿದ್ದುಹೋಗುವರು.
    ಅಲ್ಲಿಂದ ತಿರುಗಿ ಏಳುವದೇ ಇಲ್ಲ.”

ವೇದಿಕೆ ಬದಿಯಲ್ಲಿ ನಿಂತ ಯೆಹೋವನ ದರ್ಶನ

ಯಜ್ಞವೇದಿಕೆಯ ಬಳಿಯಲ್ಲಿ ನನ್ನ ಒಡೆಯನು ನಿಂತಿರುವುದನ್ನು ಕಂಡೆನು. ಆತನು ಹೇಳಿದ್ದೇನೆಂದರೆ,

“ಸ್ತಂಭಗಳ ಮೇಲೆ ಹೊಡೆಯಿರಿ,
    ಆಗ ಕಟ್ಟಡವು ಹೊಸ್ತಿಲಿನ ತನಕ ಕಂಪಿಸುವದು.
ಸ್ತಂಭಗಳು ಜನರ ತಲೆಗಳ ಮೇಲೆ ಕುಸಿದುಬೀಳುವಂತೆ ಮಾಡಿರಿ.
    ಅದರಿಂದ ಸಾಯದೆ ಉಳಿಯುವವರನ್ನು ನಾನು ಖಡ್ಗದಿಂದ ಸಾಯಿಸುವೆನು.
ಅದರಿಂದ ತಪ್ಪಿಸಿಕೊಂಡು ಓಡಿಹೋಗಲು ಒಬ್ಬನು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.
    ಒಬ್ಬನಾದರೂ ತಪ್ಪಿಸಿಕೊಳ್ಳುವುದಿಲ್ಲ.
ಭೂಮಿಯನ್ನು ಅವರು ಅಗೆದು ಅದರೊಳಗೆ ಅವಿತುಕೊಂಡರೆ
    ಅದರೊಳಗಿಂದ ಅವರನ್ನು ಎಳೆದುಹಾಕುವೆನು.
ಆಕಾಶದೊಳಗೆ ಹಾರಿ ತಪ್ಪಸಿಕೊಂಡರೆ
    ಅಲ್ಲಿಂದಲೂ ನಾನು ಅವರನ್ನು ಎಳೆದುಹಾಕುವೆನು.
ಕರ್ಮೆಲ್ ಬೆಟ್ಟದ ತುದಿಯಲ್ಲಿ ಅವರು ಅಡಗಿಕೊಂಡರೆ
    ಅವರನ್ನು ಕಂಡುಹಿಡಿದು ಅಲ್ಲಿಂದ ತೆಗೆದುಬಿಡುವೆನು.
ಸಮುದ್ರ ತಳದಲ್ಲಿ ಅವರು ಅಡಗಿಕೊಂಡರೆ
    ಅವರನ್ನು ಕಚ್ಚುವಂತೆ ನಾನು ಸರ್ಪಕ್ಕೆ ಆಜ್ಞಾಪಿಸುವೆನು.
ಶತ್ರುಗಳು ಅವರನ್ನು ಸೆರೆಹಿಡಿದರೆ
    ನಾನು ಅವರನ್ನು ಕೊಂದುಹಾಕಲು
    ಕತ್ತಿಗೆ ಆಜ್ಞಾಪಿಸುವೆನು.
ಹೌದು ನಾನು ಅವರನ್ನು ಗಮನಿಸುತ್ತಾ ಕಾಯುವೆನು.
    ಅವರಿಗೆ ಒಳ್ಳೆಯದು ಮಾಡುವುದಕ್ಕಾಗಿ ಅಲ್ಲ.
    ಅವರಿಗೆ ಸಂಕಟ ಕೊಡುವುದಕ್ಕಾಗಿ ಅವರನ್ನು ಕಾಯುತ್ತೇನೆ.”

ಶಿಕ್ಷೆಯು ಜನರನ್ನು ನಾಶಮಾಡುವದು

ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಭೂಮಿಯನ್ನು ಸ್ಪರ್ಶಿಸುವನು.
    ಆಗ ಅದು ಕರಗಿಹೋಗುವುದು.
    ದೇಶದಲ್ಲಿ ವಾಸಿಸುವ ಜನರೆಲ್ಲಾ ಸತ್ತುಹೋದವರಿಗಾಗಿ ಗೋಳಾಡುವರು.
ಈಜಿಪ್ಟಿನ ನೈಲ್ ನದಿಯಂತೆ
    ದೇಶದಲ್ಲಿ ಏರಿಳಿತ ಉಂಟಾಗುವುದು.
ಯೆಹೋವನು ಆಕಾಶದ ಮೇಲೆ ತನಗಾಗಿ ಮೇಲುಪ್ಪರಿಗೆಗಳನ್ನು ಕಟ್ಟಿದನು.
    ಭೂಮಿಯ ಮೇಲೆ ಆಕಾಶವನ್ನು ಹರಡಿದನು.
ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ
    ಮಳೆಗೆರೆಯುವಂತೆ ಮಾಡುವನು.
    ಆತನ ಹೆಸರು ಯೆಹೋವ.

ಇಸ್ರೇಲಿನ ನಾಶನದ ವಾಗ್ದಾನ

ಯೆಹೋವನು ಹೀಗೆನ್ನುತ್ತಾನೆ:

“ಇಸ್ರೇಲೇ, ನೀನು ನನಗೆ ಇಥಿಯೋಪ್ಯದವರಂತಿರುವೆ.
    ಇಸ್ರೇಲನ್ನು ಈಜಿಪ್ಟ್ ದೇಶದಿಂದ ನಾನು ಹೊರತಂದೆನು.
    ಕಪ್ತೋರಿನಿಂದ ಫಿಲಿಷ್ಟಿಯರನ್ನು ಹೊರತಂದೆನು
    ಮತ್ತು ಕೀರ್‌ನಿಂದ ಅರಾಮ್ಯರನ್ನು ತಂದೆನು.”

ಪಾಪದಿಂದ ತುಂಬಿದ ಇಸ್ರೇಲ್ ದೇಶವನ್ನು ಯೆಹೋವನು ನೋಡುತ್ತಿದ್ದಾನೆ.
ಆತನು ಹೇಳಿದ್ದೇನೆಂದರೆ,
“ನಾನು ಇಸ್ರೇಲರನ್ನು ಈ ಭೂಮುಖದಿಂದ ಅಳಿಸಿಬಿಡುವೆನು.
    ಆದರೆ ಯಾಕೋಬನ ಸಂತತಿಯವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ.
ಇಸ್ರೇಲನ್ನು ನಾಶನ ಮಾಡುವದಕ್ಕಾಗಿ ಆಜ್ಞಾಪಿಸುವೆನು.
    ಇಸ್ರೇಲರನ್ನು ನಾನು ಪರದೇಶಗಳಲ್ಲಿ, ಚದರಿಸಿಬಿಡುವೆನು.
ಒಬ್ಬನು ಜಾಳಿಗೆಯಲ್ಲಿ ಹಿಟ್ಟನ್ನು ಜಾಳಿಸುವಂತೆ ಇರುವುದು.
ಒಳ್ಳೆಯ ಹಿಟ್ಟು ಜಾಳಿಗೆಯ ರಂಧ್ರದ ಮೂಲಕ ಕೆಳಗೆ ಬಿದ್ದರೆ,
    ಹಿಟ್ಟಿನ ಗಂಟುಗಳು ಜಾಳಿಗೆಯ ಮೇಲೆ ಸಿಕ್ಕಿಕೊಳ್ಳುವವು.
    ಯಾಕೋಬನ ಕುಟುಂಬಕ್ಕೆ ಇದೇ ರೀತಿಯಾಗುವುದು.

10 “ನನ್ನ ಜನರಲ್ಲಿ ಪಾಪಿಗಳು ಹೇಳುತ್ತಾರೆ:
    ‘ನಮಗೆ ಯಾವ ಕೇಡೂ ಸಂಭವಿಸುವುದಿಲ್ಲ.’
ಆದರೆ ಅವರೆಲ್ಲಾ ಕತ್ತಿಯಿಂದ ಸಾಯುವರು.”

ರಾಜ್ಯವು ತಿರುಗಿ ಸ್ಥಾಪಿಸಲ್ಪಡುವದೆಂದು ದೇವರ ವಾಗ್ದಾನ

11 “ದಾವೀದನ ಗುಡಾರವು ಕುಸಿದುಬಿದ್ದಿದೆ.
    ಆದರೆ ಆ ದಿವಸಗಳಲ್ಲಿ ತಿರುಗಿ ಅದನ್ನು ಮೇಲಕ್ಕೆತ್ತುವೆನು.
ಗೋಡೆಯಲ್ಲಿರುವ ರಂಧ್ರಗಳನ್ನು ನಾನು ಸರಿಪಡಿಸುವೆನು.
    ಬಿದ್ದುಹೋದ ಕಟ್ಟಡಗಳನ್ನು ತಿರುಗಿ ಕಟ್ಟುವೆನು.
    ಮುಂಚೆ ಹೇಗಿತ್ತೋ ಹಾಗೆಯೇ ಇರುವದು.
12 ಆಗ ಎದೋಮಿನಲ್ಲಿ ಉಳಿದವರು
    ಮತ್ತು ನನ್ನ ಹೆಸರಿನಿಂದ ಕರೆಯಲ್ಪಟ್ಟ ಜನರು ಸಹಾಯಕ್ಕಾಗಿ ಯೆಹೋವನನ್ನು ನೋಡುವರು.”
ಇದು ಯೆಹೋವನ ನುಡಿ.
    ಆತನು ಅವುಗಳನ್ನು ನೆರವೇರಿಸುವನು.
13 ಯೆಹೋವನು ಹೇಳುವುದೇನೆಂದರೆ, “ಒಂದು ಸಮಯವು ಬರುವುದು,
ಆಗ ಉಳುವವನು ಕೊಯ್ಯುವವನನ್ನೇ
    ಮೀರಿಸಿ ಮುಂದೆ ಹೋಗುವನು.
ದ್ರಾಕ್ಷಿನೆಡುವವನು ದ್ರಾಕ್ಷಿಯನ್ನು ಕೊಯ್ಯುವನನ್ನೇ
    ಮೀರಿಸಿ ಮುಂದೆ ಹೋಗುವನು.
ಬೆಟ್ಟಗಳಿಂದಲೂ ಪರ್ವತಗಳಿಂದಲೂ
    ಸಿಹಿ ದ್ರಾಕ್ಷಾರಸವು ಹರಿದುಬರುವುದು.
14 ಸೆರೆಯಿಂದ ಬಿಡಿಸಿ ನನ್ನ ಜನರಾದ ಇಸ್ರೇಲನ್ನು
    ಹಿಂದಕ್ಕೆ ಕರೆತರುವೆನು.
ಪಾಳುಬಿದ್ದ ಪಟ್ಟಣಗಳನ್ನು ತಿರುಗಿ ಕಟ್ಟಿ
    ಅದರಲ್ಲಿ ವಾಸಿಸುವರು.
ದ್ರಾಕ್ಷಿತೋಟವನ್ನು ಮಾಡಿ
    ಅದರಿಂದ ಸಿಗುವ ದ್ರಾಕ್ಷಾರಸವನ್ನು ಕುಡಿಯುವರು.
ತೋಟಗಳನ್ನು ಮಾಡಿ
    ಅದರ ಫಲಗಳನ್ನು ಭೋಗಿಸುವರು.
15 ನಾನು ನನ್ನ ಜನರನ್ನು ಅವರ ದೇಶದಲ್ಲಿ ಸ್ಥಾಪಿಸುವೆನು.
    ನಾನು ಕೊಟ್ಟಿರುವ ದೇಶದಿಂದ ಅವರು ಕೀಳಲ್ಪಡುವುದಿಲ್ಲ.”
ನಿಮ್ಮ ದೇವರಾದ ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.

ಪ್ರಕಟನೆ 8

ಏಳನೆಯ ಮುದ್ರೆ

ಕುರಿಮರಿಯಾದಾತನು ಏಳನೆಯ ಮುದ್ರೆಯನ್ನು ಒಡೆದನು. ಆಗ ಪರಲೋಕದಲ್ಲಿ ಅರ್ಧ ಗಂಟೆಯ ಕಾಲ ನಿಶ್ಯಬ್ದವಾಯಿತು. ದೇವರ ಎದುರಿನಲ್ಲಿ ಏಳು ದೇವದೂತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಯಿತು.

ಮತ್ತೊಬ್ಬ ದೇವದೂತನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದೂತನು ಧೂಪವಿದ್ದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಅರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವನ್ನು ಕೊಡಲಾಯಿತು. ಈ ದೇವದೂತನು ಸಿಂಹಾಸನದ ಎದುರಿನಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲೆ ಈ ಧೂಪವನ್ನು ಇಟ್ಟನು. ಧೂಪದ ಹೊಗೆಯು ದೇವದೂತನ ಕೈಯಿಂದ ದೇವಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು. ಆಗ ದೇವದೂತನು ಧೂಪವಿದ್ದ ಪಾತ್ರೆಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತುಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚು ಗುಡುಗುಗಳೂ ಮತ್ತಿತರ ಧ್ವನಿಗಳೂ ಭೂಕಂಪಗಳೂ ಉಂಟಾದವು.

ಏಳು ತುತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು

ನಂತರ ಆ ಏಳು ಮಂದಿ ದೇವದೂತರು ಏಳು ತುತೂರಿಗಳನ್ನು ಊದಲು ಸಿದ್ಧರಾದರು.

ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ರಕ್ತದಲ್ಲಿ ಕಲಸಿದ್ದ ಆಲಿಕಲ್ಲುಗಳ ಮತ್ತು ಬೆಂಕಿಯ ಮಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರನೆಯ ಒಂದು ಭಾಗ ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋದವು; ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋದವು.

ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು. ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾದವು.

10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಕೆಳಗೆ ಬಿತ್ತು. ಆ ನಕ್ಷತ್ರವು ನದಿಗಳಲ್ಲಿ ಮತ್ತು ನೀರಿನ ಬುಗ್ಗೆಗಳಲ್ಲಿ ಮೂರನೆಯ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರಕ್ಕೆ “ಕಹಿ ಮರ”[a] ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.

12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿ ಮೂರನೆಯ ಒಂದು ಭಾಗ, ಚಂದ್ರನಲ್ಲಿ ಮೂರನೆಯ ಒಂದು ಭಾಗ ಮತ್ತು ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗ ಬಡಿಯಲ್ಪಟ್ಟು ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.

13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International