Old/New Testament
ರಚನೆಗಾರ: ದಾವೀದ.
40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
2 ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
3 ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
4 ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
5 ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
ಅವು ಅಸಂಖ್ಯಾತವಾಗಿವೆ.
6 ನಾನು ಗ್ರಹಿಸಿಕೊಂಡಿದ್ದೇನೆಂದರೆ,
ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
7 ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
8 ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
9 ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.
12 ದುಷ್ಟರು ನನ್ನನ್ನು ಸುತ್ತುಗಟ್ಟಿದ್ದಾರೆ
ಅವರು ಅಸಂಖ್ಯಾತರಾಗಿದ್ದಾರೆ.
ನನ್ನ ಪಾಪಗಳು ನನ್ನನ್ನು ಹಿಡಿದಿರುವುದರಿಂದ
ಅವುಗಳಿಂದ ತಪ್ಪಿಸಿಕೊಳ್ಳಲಾರೆ.
ನನ್ನ ತಲೆಯ ಕೂದಲುಗಳಿಗಿಂತಲೂ ನನ್ನ ಪಾಪಗಳು ಹೆಚ್ಚಾಗಿವೆ.
ನಾನು ಧೈರ್ಯವನ್ನು ಕಳೆದುಕೊಂಡಿರುವೆ.
13 ಯೆಹೋವನೇ, ನನ್ನನ್ನೇ ರಕ್ಷಿಸು!
ಬೇಗನೆ ಬಂದು ನನ್ನನ್ನು ಕಾಪಾಡು!
14 ಆ ದುಷ್ಟರು ನನ್ನನ್ನು ಕೊಲ್ಲಬೇಕೆಂದಿದ್ದಾರೆ.
ಯೆಹೋವನೇ, ಅವರಿಗೆ ನಾಚಿಕೆಯನ್ನೂ ನಿರಾಶೆಯನ್ನೂ ಬರಮಾಡು.
ನನಗೆ ಕೇಡುಮಾಡಬೇಕೆಂದಿರುವ ಅವರು
ನಾಚಿಕೆಯಿಂದ ಓಡಿಹೋಗಲಿ!
15 ನನ್ನನ್ನು ಗೇಲಿಮಾಡುವ ಆ ದುಷ್ಟರು
ತಮಗಾಗುವ ಅವಮಾನದಿಂದ ಗಾಬರಿಗೊಳ್ಳಲಿ!
16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.
17 ಒಡೆಯನೇ, ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನಗೆ ಸಹಾಯಮಾಡಿ ನನ್ನನ್ನು ರಕ್ಷಿಸು.
ನನ್ನ ದೇವರೇ, ತಡಮಾಡಬೇಡ.
ರಚನೆಗಾರ: ದಾವೀದ.
41 ಯಾವನು ಬಡಜನರನ್ನು[c] ಅಭಿವೃದ್ಧಿಪಡಿಸುವನೋ ಅವನೇ ಧನ್ಯನು.
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
2 ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು.
ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು.
ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
3 ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ
ಯೆಹೋವನು ಅವನಿಗೆ ಬಲವನ್ನು ಕೊಡುವನು.
ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!
4 ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು.
ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
5 ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ,
ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
6 ನನ್ನನ್ನು ನೋಡಲು ಬಂದವರು ಕಪಟದ ಮಾತನ್ನಾಡುವರು;
ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
7 ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು;
ನನಗೆ ಕೇಡುಮಾಡಲು ಆಲೋಚಿಸುವರು.
8 “ಅವನು ಯಾವುದೋ ತಪ್ಪು ಮಾಡಿರುವುದರಿಂದ
ಅವನಿಗೆ ಕಾಯಿಲೆ ಬಂದಿದೆ,
ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
9 ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು,
ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
10 ಯೆಹೋವನೇ, ದಯವಿಟ್ಟು ನನಗೆ ದಯೆತೋರು;
ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
11 ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ,
ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
12 ನಿರಪರಾಧಿಯಾದ ನನಗೆ ಸಹಾಯಮಾಡು.
ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.
13 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ!
ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು.
ಆಮೆನ್, ಆಮೆನ್!
ಎರಡನೆ ಭಾಗ
(ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.
42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
ನಾನು ಯಾವಾಗ ಆತನನ್ನು ಸಂಧಿಸುವೆನು?
3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.
4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
7 ಜಲಪಾತದ ಘೋಷದಂತೆಯೂ
ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
ದುಃಖವು ನನ್ನನ್ನು ಆವರಿಸಿಕೊಂಡಿದೆ.
8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
9 ನನ್ನ ಬಂಡೆಯಾದ ದೇವರಿಗೆ,
“ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
“ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.
11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
ರೋಮಿಗೆ ಪೌಲನ ನೌಕಾಯಾನ
27 ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾಯಿತು. ಪೌಲನಿಗೂ ಇತರ ಕೆಲವು ಕೈದಿಗಳಿಗೂ ಜೂಲಿಯಸ್ ಎಂಬ ಸೇನಾಧಿಕಾರಿಯು ಕಾವಲಾಗಿದ್ದನು. ಜೂಲಿಯಸನು ಚಕ್ರವರ್ತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದನು. 2 ನಾವು ಹಡಗನ್ನು ಹತ್ತಿ ಅಲ್ಲಿಂದ ಹೊರಟೆವು. ಆ ಹಡಗು ಅದ್ರಮಿತ್ತಿ ಪಟ್ಟಣದಿಂದ ಬಂದಿತ್ತು ಮತ್ತು ಏಷ್ಯಾದ ಬೇರೆಬೇರೆ ಸ್ಥಳಗಳಿಗೆ ಹೋಗಲು ಸಿದ್ಧವಾಗಿತ್ತು. ಅರಿಸ್ತಾರ್ಕನು ನಮ್ಮೊಂದಿಗೆ ಬಂದನು. ಅವನು ಮಕೆದೋನಿಯಕ್ಕೆ ಸೇರಿದ ಥೆಸಲೋನಿಕ ಪಟ್ಟಣದವನು.
3 ಮರುದಿನ ನಾವು ಸಿದೋನ್ ಪಟ್ಟಣಕ್ಕೆ ಬಂದೆವು. ಜೂಲಿಯಸನು ಪೌಲನ ಬಗ್ಗೆ ಕನಿಕರವುಳ್ಳವನಾಗಿದ್ದನು. ಸ್ನೇಹಿತರ ಬಳಿಗೆ ಹೋಗಿ ಅವರನ್ನು ಭೇಟಿಯಾಗಲು ಅವನು ಪೌಲನಿಗೆ ಸ್ವತಂತ್ರವನ್ನು ಕೊಟ್ಟನು. ಸ್ನೇಹಿತರು ಪೌಲನ ಅಗತ್ಯತೆಗಳನ್ನು ಪೂರೈಸಿದನು. 4 ನಾವು ಸಿದೋನ್ ಪಟ್ಟಣದಿಂದ ಹೊರಟೆವು. ಎದುರುಗಾಳಿ ಬೀಸುತ್ತಿದ್ದ ಕಾರಣ ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. 5 ಸಿಲಿಸಿಯಾಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ನಾವು ದಾಟಿದೆವು. ಬಳಿಕ ನಾವು ಲುಸಿಯ ಪ್ರಾಂತ್ಯದಲ್ಲಿರುವ “ಮುರ” ಎಂಬ ಊರಿಗೆ ಬಂದೆವು. 6 ಅಲೆಕ್ಸಾಂಡ್ರಿಯಾದಿಂದ ಬಂದ ಹಡಗೊಂದು “ಮುರ”ದಲ್ಲಿ ಇದ್ದುದ್ದನ್ನು ಸೇನಾಧಿಕಾರಿಯು ಕಂಡನು. ಈ ಹಡಗು ಇಟಲಿಗೆ ಹೋಗಲಿತ್ತು. ಆದ್ದರಿಂದ ಅವನು ನಮ್ಮನ್ನು ಆ ಹಡಗಿಗೆ ಹತ್ತಿಸಿದನು.
7 ನಾವು ಅನೇಕ ದಿನಗಳವರೆಗೆ ನಿಧಾನವಾಗಿ ನೌಕಾಯಾನ ಮಾಡಿದೆವು. ಎದುರುಗಾಳಿ ಬೀಸುತ್ತಿದ್ದುದರಿಂದ ನಾವು ಸ್ನೀಡ ಪಟ್ಟಣವನ್ನು ತಲುಪುವುದೇ ಕಷ್ಟವಾಯಿತು. ಆ ಮಾರ್ಗದಲ್ಲಿ ಇನ್ನೂ ಮುಂದೆ ಪ್ರಯಾಣ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಸಾಲ್ಮೊನೆಯ ಸಮೀಪದಲ್ಲಿದ್ದ ಕ್ರೇಟ್ ದ್ವೀಪದ ದಕ್ಷಿಣದ ಭಾಗದಲ್ಲಿ ನೌಕಾಯಾನ ಮಾಡಿದೆವು. 8 ನಾವು ಪ್ರಯಾಸದಿಂದ ಕರಾವಳಿಯಲ್ಲೇ ನೌಕಾಯಾನ ಮಾಡಿದೆವು. ಬಳಿಕ ನಾವು “ಸುರಕ್ಷಿತ ರೇವು” ಎಂಬ ಸ್ಥಳಕ್ಕೆ ಬಂದೆವು. ಲಸಾಯ ಪಟ್ಟಣವು ಅದರ ಸಮೀಪದಲ್ಲಿತ್ತು.
9 ಆದರೆ ನಾವು ಬಹಳ ಸಮಯವನ್ನು ಕಳೆದುಕೊಂಡಿದ್ದೆವು. ಈಗ ನೌಕಾಯಾನ ಮಾಡುವುದು ಅಪಾಯಕರವಾಗಿತ್ತು. ಯಾಕೆಂದರೆ ಯೆಹೂದ್ಯರ ಉಪವಾಸ ದಿನ[a] ಆಗಲೇ ಕಳೆದಿತ್ತು. 10 ಆದ್ದರಿಂದ ಪೌಲನು ಅವರಿಗೆ, “ಜನರೇ, ಈ ಪ್ರಯಾಣದಲ್ಲಿ ನಮಗೆ ಬಹಳ ತೊಂದರೆಯಿದೆ ಎಂದು ನನಗೆ ತೋರುತ್ತದೆ. ಹಡಗು ಮತ್ತು ಹಡಗಿನಲ್ಲಿರುವ ವಸ್ತುಗಳು ನಾಶವಾಗುತ್ತವೆ. ನಮ್ಮ ಪ್ರಾಣಗಳು ಸಹ ನಷ್ಟವಾಗಬಹುದು!” ಎಂದು ಎಚ್ಚರಿಸಿದನು. 11 ಆದರೆ ನೌಕೆಯ ನಾಯಕನು ಮತ್ತು ನೌಕೆಯ ಯಜಮಾನನು ಪೌಲನ ಮಾತನ್ನು ಒಪ್ಪಿಕೊಳ್ಳಲಿಲ್ಲ. ಆದುದರಿಂದ ಸೇನಾಧಿಕಾರಿಯು ಪೌಲನ ಮಾತಿಗೆ ಗಮನ ಕೊಡದೆ, ನೌಕೆಯ ನಾಯಕನು ಮತ್ತು ಯಜಮಾನನು ಹೇಳಿದ ಮಾತುಗಳನ್ನು ನಂಬಿದನು. 12 ಆ ರೇವು (ಸುರಕ್ಷಿತ ರೇವು) ಚಳಿಗಾಲದಲ್ಲಿ ಹಡಗು ನಿಲ್ಲುವುದಕ್ಕೆ ಒಳ್ಳೆಯ ಸ್ಥಳವಾಗಿರಲಿಲ್ಲ. ಆದ್ದರಿಂದ ಹಡಗು ಅಲ್ಲಿಂದ ಹೊರಡಲೇಬೇಕೆಂದು ಹೆಚ್ಚುಮಂದಿ ನಿರ್ಧರಿಸಿದರು. ನಾವು ಫೆನಿಕ್ಸ್ಗೆ ತಲುಪಬಹುದೆಂದು ಅವರ ನಿರೀಕ್ಷೆಯಾಗಿತ್ತು. ಚಳಿಗಾಲದಲ್ಲಿ ಹಡಗು ಅಲ್ಲಿ ತಂಗಬಹುದಾಗಿತ್ತು. ಫೆನಿಕ್ಸ್ ಕ್ರೇಟ್ ದ್ವೀಪದ ಒಂದು ಪಟ್ಟಣ. ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದ್ದ ಬಂದರನ್ನು ಅದು ಹೊಂದಿತ್ತು.
ಬಿರುಗಾಳಿ
13 ಬಳಿಕ ಒಳ್ಳೆಯ ಗಾಳಿಯು ದಕ್ಷಿಣದ ಕಡೆಯಿಂದ ಬೀಸತೊಡಗಿತು. ಹಡಗಿನಲ್ಲಿದ್ದ ಜನರು, “ನಮಗೆ ಬೇಕಾಗಿದ್ದು ಈ ಗಾಳಿಯೇ, ಈಗ ಅದು ನಮಗೆ ದೊರಕಿತು!” ಎಂದು ಭಾವಿಸಿಕೊಂಡರು. ಆದ್ದರಿಂದ ಅವರು ಹಡಗಿನ ಲಂಗರನ್ನು[b] ಮೇಲಕ್ಕೆ ಎಳೆದರು. ನಾವು ಕ್ರೇಟ್ ದ್ವೀಪದ ಕರಾವಳಿಯಲ್ಲೇ ನೌಕಾಯಾನ ಮಾಡಿದೆವು. 14 ಆದರೆ “ಈಶಾನ್ಯ ಮಾರುತ”[c] ಎಂಬ ಬಿರುಗಾಳಿಯು ದ್ವೀಪದಲ್ಲಿ ಬೀಸತೊಡಗಿ 15 ಹಡಗನ್ನು ಬಡಿದುಕೊಂಡು ಹೋಯಿತು. ಹಡಗು ಅದಕ್ಕೆ ಎದುರಾಗಿ ಚಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಗಾಳಿಯು ಬೀಸುವ ಕಡೆಗೆ ಹೋಗತೊಡಗಿದೆವು.
16 ನಾವು “ಕಾವ್ದ” ಎಂಬ ಚಿಕ್ಕ ದ್ವೀಪದ ಮರೆಯಲ್ಲಿ ಹಾದುಹೋದೆವು. ಆಗ ನಾವು ಹಡಗಿನಲ್ಲಿದ್ದ ಚಿಕ್ಕ ದೋಣಿಯನ್ನು ಒಳಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ಆದರೂ ಆ ಕೆಲಸ ಬಹಳ ಪ್ರಯಾಸಕರವಾಗಿತ್ತು. 17 ಬಳಿಕ ಹಡಗು ಒಡೆದುಹೋಗದಂತೆ ಹಡಗಿನ ಸುತ್ತಲೂ ಹಗ್ಗಗಳನ್ನು ಬಿಗಿದರು. ಅನಂತರ “ಸರ್ತಿಸ್” ಎಂಬ ಕಳ್ಳುಸುಬಿನಲ್ಲಿ ಹಡಗು ಎಲ್ಲಿ ಸಿಕ್ಕಿಕೊಳ್ಳುವುದೊ ಎಂದು ಅವರಿಗೆ ಭಯವಾಯಿತು. ಆದ್ದರಿಂದ ಅವರು ಹಾಯಿಯನ್ನು[d] ಇಳಿಸಿ ಹಡಗನ್ನು ಬಡಿದುಕೊಂಡು ಹೋಗಲು ಗಾಳಿಗೆ ಅವಕಾಶ ಮಾಡಿಕೊಟ್ಟರು.
18 ಮರುದಿನ, ಬಿರುಗಾಳಿ ರಭಸವಾಗಿ ಬೀಸುತ್ತಿದ್ದುದರಿಂದ ಜನರು ಹಡಗಿನಲ್ಲಿದ್ದ ಕೆಲವು ಸಾಮಾನುಗಳನ್ನು ಎಸೆದುಬಿಟ್ಟರು. 19 ಒಂದು ದಿನವಾದ ನಂತರ ಹಡಗಿನ ಉಪಕರಣಗಳನ್ನು ತಮ್ಮ ಕೈಯಾರೆ ಎಸೆದು ಬಿಟ್ಟರು. 20 ಅನೇಕ ದಿನಗಳವರೆಗೆ ನಾವು ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಬಿರುಗಾಳಿಯು ಭೀಕರವಾಗಿತ್ತು. ನಾವು ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆ ಕಳೆದುಹೋಯಿತು. ನಾವು ಸಾಯುತ್ತೇವೆ ಎಂದು ಭಾವಿಸಿಕೊಂಡೆವು.
21 ಆ ಜನರು ಬಹಳ ದಿನಗಳವರೆಗೆ ಊಟಮಾಡಲಿಲ್ಲ. ಆಗ ಒಂದು ದಿನ ಪೌಲನು ಎದ್ದುನಿಂತುಕೊಂಡು ಅವರಿಗೆ, “ಜನರೇ, ಕ್ರೇಟ್ ದ್ವೀಪದಿಂದ ಹೊರಡಬೇಡಿರಿ ಎಂದು ನಾನು ನಿಮಗೆ ಹೇಳಿದೆ. ನೀವು ನನ್ನ ಮಾತನ್ನು ಕೇಳಬೇಕಿತ್ತು. ಆಗ ನಿಮಗೆ ಇಷ್ಟು ಕಷ್ಟವಾಗಲಿ ನಷ್ಟವಾಗಲಿ ಆಗುತ್ತಿರಲಿಲ್ಲ. 22 ಈಗಲಾದರೋ ನೀವು ಸಂತೋಷದಿಂದ ಇರಬೇಕೆಂದು ನಾನು ನಿಮಗೆ ಹೇಳುತ್ತಿದ್ದೇನೆ. ನಿಮ್ಮಲ್ಲಿ ಒಬ್ಬರೂ ಸಾಯುವುದಿಲ್ಲ! ಆದರೆ ಹಡಗು ನಾಶವಾಗುವುದು. 23 ಕಳೆದ ರಾತ್ರಿ ದೇವರ ಬಳಿಯಿಂದ ದೂತನೊಬ್ಬನು ನನ್ನ ಬಳಿಗೆ ಬಂದಿದ್ದನು. ಆ ದೇವರನ್ನೇ ನಾನು ಆರಾಧಿಸುವುದು. ನಾನು ಆತನವನು. 24 ದೇವರ ದೂತನು, ‘ಪೌಲನೇ, ಭಯಪಡಬೇಡ! ನೀನು ಸೀಸರನ ಮುಂದೆ ನಿಂತುಕೊಳ್ಳಬೇಕು. ನಿನ್ನೊಂದಿಗೆ ನೌಕಾಯಾನ ಮಾಡತ್ತಿರುವ ಎಲ್ಲಾ ಜನರ ಪ್ರಾಣಗಳನ್ನು ಉಳಿಸುವುದಾಗಿ ದೇವರು ನಿನಗೆ ವಾಗ್ದಾನವನ್ನು ಮಾಡಿದ್ದಾನೆ’ ಎಂದು ಹೇಳಿದನು. 25 ಆದ್ದರಿಂದ ಜನರೇ, ಸಂತೋಷದಿಂದಿರಿ! ನಾನು ದೇವರಲ್ಲಿ ಭರವಸೆಯಿಟ್ಟಿದ್ದೇನೆ. ಆತನ ದೂತನು ಹೇಳಿದಂತೆ ಪ್ರತಿಯೊಂದೂ ನೆರವೇರುವುದು. 26 ಆದರೆ ನಾವು ಒಂದು ದ್ವೀಪದ ದಡವನ್ನು ತಲುಪಬೇಕಾಗಿದೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International