Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಎಸ್ತೇರಳು 9-10

ಯೆಹೂದ್ಯರಿಗೆ ಜಯ

ಹನ್ನೆರಡನೆಯ ತಿಂಗಳಾದ ಅದಾರ್ ಮಾಸದ ಹದಿಮೂರನೇ ದಿವಸದಲ್ಲಿ ಯೆಹೂದ್ಯರ ವೈರಿಗಳು ರಾಜಾಜ್ಞೆಗನುಸಾರವಾಗಿ ಯೆಹೂದ್ಯರನ್ನು ನಿರ್ನಾಮ ಮಾಡಬೇಕಾಗಿತ್ತು. ಅವರು ಆ ದಿವಸಕ್ಕಾಗಿ ಕಾಯುತ್ತಿರುವಾಗ ಪರಿಸ್ಥಿತಿಯು ಬದಲಾಯಿತು. ಯೆಹೂದ್ಯರು ಅವರ ಶತ್ರುಗಳಿಗಿಂತ ಬಲಾಢ್ಯರಾದರು. ರಾಜನಾದ ಅಹಷ್ವೇರೋಷನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಮ್ಮನ್ನು ಕೊಲ್ಲಲು ಬರುವ ವೈರಿಗಳನ್ನು ಎದುರಿಸಲು ಒಟ್ಟಾಗಿ ಸೇರಿದರು. ಇವರಿಗೆ ವಿರುದ್ಧವಾಗಿ ಬಿದ್ದು ಹೊಡೆದಾಡಲು ಯಾರಿಗೂ ಧೈರ್ಯಸಾಲಲಿಲ್ಲ. ಯೆಹೂದ್ಯರ ಮೇಲೆ ಜನರಿಗೆ ಭೀತಿ ಉಂಟಾಯಿತು. ಅಲ್ಲದೆ ಸಂಸ್ಥಾನಗಳಲ್ಲಿದ್ದ ಅಧಿಕಾರಿಗಳು, ರಾಜ್ಯಪಾಲರು, ಆಡಳಿತಾಧಿಕಾರಿಗಳು ಯೆಹೂದ್ಯರಿಗೆ ನೆರವಾದರು. ಯಾಕೆಂದರೆ ಅವರು ಮೊರ್ದೆಕೈಗೆ ಹೆದರುತ್ತಿದ್ದರು. ಮೊರ್ದೆಕೈ ಅರಮನೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದನು. ಸಂಸ್ಥಾನಗಳಲ್ಲಿರುವವರೆಲ್ಲರೂ ಅವನ ಪ್ರಖ್ಯಾತಿಯ ಬಗ್ಗೆ ಕೇಳಿದ್ದರು. ದಿನೇದಿನೇ ಮೊರ್ದೆಕೈ ಬಲಶಾಲಿಯಾಗುತ್ತಾ ಬಂದನು.

ತಮ್ಮ ಶತ್ರುಗಳನ್ನೆಲ್ಲಾ ಯೆಹೂದ್ಯರು ಸೋಲಿಸಿ ತಮ್ಮ ಖಡ್ಗಗಳಿಂದ ನಾಶಮಾಡಿದರು; ತಮ್ಮನ್ನು ದ್ವೇಷಿಸುತ್ತಿದ್ದವರನ್ನು ತಮಗಿಷ್ಟ ಬಂದಂತೆ ಮಾಡಿದರು. ರಾಜಧಾನಿಯಾದ ಶೂಷನ್‌ನಲ್ಲಿಯೇ ಯೆಹೂದ್ಯರು ಐನೂರು ಮಂದಿ ಶತ್ರುಗಳನ್ನು ಹತಿಸಿದರು. ಅವರು ಹತಿಸಿದವರಾರೆಂದರೆ: ಪರ್ಷಂದಾತ, ದಲ್ಫೋನ್, ಅಸ್ಪಾತ, ಪೋರಾತ, ಅದಲ್ಯ, ಅರೀದಾತ, ಪರ್ಮಷ್ಟ, ಅರೀಸೈ, ಅರಿದೈ ಮತ್ತು ವೈಜಾತ. 10 ಇವರು ಹಾಮಾನನ ಹತ್ತು ಗಂಡುಮಕ್ಕಳಾಗಿದ್ದರು. ಹಾಮಾನನು ಹಮ್ಮೆದಾತನ ಮಗನೂ ಯೆಹೂದ್ಯರ ಶತ್ರುವೂ ಆಗಿದ್ದನು. ಯೆಹೂದ್ಯರು ಅವರನ್ನು ಹತಿಸಿದ್ದು ಮಾತ್ರವೇ, ಹೊರತು ಅವರ ಸೊತ್ತುಗಳನ್ನು ಅಪಹರಿಸಲಿಲ್ಲ.

11 ಶೂಷನ್ ನಗರದಲ್ಲಿ ಆ ದಿವಸ ಎಷ್ಟು ಮಂದಿ ಸತ್ತರು ಎಂದು ಅರಸನು ಕೇಳಿ ತಿಳಿದುಕೊಂಡನು. 12 ಮತ್ತು ರಾಣಿಯಾದ ಎಸ್ತೇರಳಿಗೆ, “ಶೂಷನ್‌ನಲ್ಲಿ ಯೆಹೂದ್ಯರು ಹಾಮಾನನ ಹತ್ತು ಗಂಡುಮಕ್ಕಳೂ ಸೇರಿಸಿ ಐನೂರು ಮಂದಿಯನ್ನು ಕೊಂದಿದ್ದಾರೆ. ಇನ್ನು ಬೇರೆ ಸಂಸ್ಥಾನಗಳಲ್ಲಿ ನಿನಗೇನಾಗಬೇಕು? ನನಗೆ ಹೇಳು. ನಾನು ಹಾಗೆಯೇ ಮಾಡಿಸುತ್ತೇನೆ” ಎಂದು ಹೇಳಿದನು.

13 ಅದಕ್ಕೆ ಎಸ್ತೇರಳು, “ಅರಸನು ಇಷ್ಟಪಟ್ಟಲ್ಲಿ ನಾಳೆಯೂ ಶೂಷನ್‌ನಲ್ಲಿರುವ ಯೆಹೂದ್ಯರು ಹೀಗೆಯೇ ಮಾಡಲಿ ಮತ್ತು ಹಾಮಾನನ ಆ ಹತ್ತು ಮಂದಿ ಗಂಡುಮಕ್ಕಳನ್ನು ಗಲ್ಲುಕಂಬದಲ್ಲಿ ನೇತಾಡಿಸಲಿ” ಅಂದಳು.

14 ಅದೇ ರೀತಿ ಅರಸನು ಆಜ್ಞಾಪಿಸಿದನು. ರಾಜಾಜ್ಞೆಯು ಇನ್ನೊಂದು ದಿವಸ ಮುಂದುವರಿಯಿತು ಮತ್ತು ಹಾಮಾನನ ಹತ್ತು ಮಂದಿ ಗಂಡುಮಕ್ಕಳನ್ನು ಗಲ್ಲಿಗೆ ಹಾಕಿದರು. 15 ಶೂಷನ್ ನಗರದಲ್ಲಿದ್ದ ಯೆಹೂದ್ಯರು ಅದಾರ್ ಮಾಸದ ಹದಿನಾಲ್ಕನೆಯ ದಿನದಂದು ಒಟ್ಟಾಗಿ ಸೇರಿ ಆ ದಿವಸ ಮುನ್ನೂರು ಮಂದಿಯನ್ನು ಹತಿಸಿದರೆ ಹೊರತು, ಅವರ ಆಸ್ತಿಪಾಸ್ತಿಯನ್ನು ಮುಟ್ಟಲಿಲ್ಲ.

16 ಅದೇ ಸಮಯದಲ್ಲಿ ಇತರ ಸಂಸ್ಥಾನಗಳಲ್ಲಿದ್ದ ಯೆಹೂದ್ಯರು ತಾವು ಬಲಹೊಂದುವಂತೆ ಒಟ್ಟಾಗಿ ಸೇರಿ ಒಗ್ಗಟ್ಟಿನಲ್ಲಿದ್ದು ತಮ್ಮ ವೈರಿಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದರು. ಹೀಗೆ ಒಟ್ಟು ಎಪ್ಪತ್ತೈದು ಸಾವಿರ ಜನರು ಹತಿಸಲ್ಪಟ್ಟರು. ಆದರೆ ಅವರ ಆಸ್ತಿಯನ್ನು ಸೂರೆ ಮಾಡಲಿಲ್ಲ. 17 ಅದಾರ್ ಮಾಸದ ಹದಿಮೂರನೇ ದಿವಸದಲ್ಲಿ ಈ ಕಾರ್ಯವು ನಡೆಯಿತು. ಹದಿನಾಲ್ಕನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಆ ದಿವಸವನ್ನು ಯೆಹೂದ್ಯರು ತಮ್ಮ ಸಂತಸದ ದಿನವಾಗಿ ಆಚರಿಸಿದರು.

ಪೂರಿಮ್ ಹಬ್ಬ

18 ಅದಾರ್ ತಿಂಗಳಿನ ಹದಿಮೂರನೇ ಮತ್ತು ಹದಿನಾಲ್ಕನೇ ದಿವಸಗಳಲ್ಲಿ ಶೂಷನ್ ನಗರದ ಯೆಹೂದ್ಯರು ಒಟ್ಟಾಗಿ ಸೇರಿಬಂದಿದ್ದರಿಂದ ಹದಿನೈದನೆಯ ದಿವಸದಲ್ಲಿ ಅವರು ವಿಶ್ರಾಂತಿ ತೆಗೆದುಕೊಂಡರು. ಹದಿನೈದನೆಯ ದಿವಸವನ್ನು ಅವರು ಸಂತಸದ ಹಬ್ಬವನ್ನಾಗಿ ಮಾಡಿದರು. 19 ದೇಶದ ಎಲ್ಲಾ ಹಳ್ಳಿಗಳಲ್ಲಿದ್ದ ಯೆಹೂದ್ಯರು ಅದಾರ್ ತಿಂಗಳಿನ ಹದಿನಾಲ್ಕನೆಯ ದಿವಸವನ್ನು ಪೂರಿಮ್ ದಿವಸವನ್ನಾಗಿ ಆಚರಿಸಿದರು. ಹದಿನಾಲ್ಕನೆಯ ದಿವಸವು ಅವರಿಗೆ ಸಂತಸದ ಹಬ್ಬ. ಆ ದಿವಸ ಅವರು ಔತಣಮಾಡಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟು ಕಳುಹಿಸಿದರು.

20 ನಡೆದ ಸಂಗತಿಗಳನ್ನೆಲ್ಲಾ ಮೊರ್ದೆಕೈ ಬರೆದಿಟ್ಟು ಅಹಷ್ವೇರೋಷನ ಸಾಮ್ರಾಜ್ಯದಲ್ಲಿ ವಾಸಿಸಿದ್ದ ಎಲ್ಲಾ ಯೆಹೂದ್ಯರಿಗೆ, ದೂರ ಮತ್ತು ಹತ್ತಿರದಲ್ಲಿರುವ ಯೆಹೂದ್ಯರಿಗೂ ಪತ್ರ ಬರೆಯಿಸಿದನು. 21 ಅದರಲ್ಲಿ ಅವನು ಯೆಹೂದ್ಯರೆಲ್ಲರೂ ಪ್ರತೀ ವರ್ಷ ಅದಾರ್ ತಿಂಗಳಿನ ಹದಿನಾಲ್ಕನೇ ಮತ್ತು ಹದಿನೈದನೇ ದಿವಸಗಳನ್ನು ಪೂರಿಮ್ ದಿವಸಗಳನ್ನಾಗಿ ಆಚರಿಸಬೇಕು ಎಂಬದಾಗಿ ಆದೇಶ ನೀಡಿದನು. 22 ಯಾಕೆಂದರೆ ಆ ದಿವಸದಲ್ಲಿ ಯೆಹೂದ್ಯರು ತಮ್ಮ ಶತ್ರುಗಳನ್ನು ಸದೆಬಡಿದರು. ಆ ದಿವಸದಲ್ಲಿ ಅವರಿಗೆ ಶೋಕದ ಬದಲಾಗಿ ಸಂತಸವು ಒದಗಿಬಂತು. ಆ ದಿವಸದಲ್ಲಿ ಅವರ ರೋಧನವು ಹರ್ಷಧ್ವನಿಯಾಗಿ ಮಾರ್ಪಟ್ಟಿತು. ಮೊರ್ದೆಕೈಯು ಎಲ್ಲಾ ಯೆಹೂದ್ಯರಿಗೆ ಪತ್ರ ಬರೆಯಿಸಿದನು. ಆ ದಿವಸದಲ್ಲಿ ಹಬ್ಬವನ್ನು ಆಚರಿಸಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಡಬೇಕು ಎಂಬುದಾಗಿ ಬರೆಯಿಸಿದನು.

23 ಮೊರ್ದೆಕೈ ಪತ್ರದಲ್ಲಿ ಬರೆದದ್ದನ್ನು ಯೆಹೂದ್ಯರು ಒಪ್ಪಿಕೊಂಡು ಆ ವರ್ಷದಲ್ಲಿ ನಡೆದ ಉತ್ಸವವು ತಮ್ಮಲ್ಲಿ ವಾರ್ಷಿಕೋತ್ಸವವಾಗಬೇಕೆಂದು ನಿರ್ಧರಿಸಿದರು.

24 ಅಗಾನನ ವಂಶದವನಾದ ಹಮ್ಮೆದಾತನ ಮಗನಾದ ಹಾಮಾನನು ಸಮಸ್ತ ಯೆಹೂದ್ಯರ ಶತ್ರುವಾಗಿದ್ದನು. ಯೆಹೂದ್ಯರನ್ನೆಲ್ಲಾ ಸಂಹರಿಸಲು ಆತನು ಒಂದು ದುಷ್ಟ ಹಂಚಿಕೆಯನ್ನು ಹೂಡಿದನು; ಮತ್ತು ಆ ನಿರ್ಧಿಷ್ಟ ದಿನಕ್ಕಾಗಿ ಅವನು ಚೀಟು ಹಾಕಿದನು. ಆ ದಿವಸಗಳಲ್ಲಿ ಚೀಟು ಹಾಕುವುದಕ್ಕೆ “ಪೂರ್” ಎಂದು ಹೇಳುತ್ತಿದ್ದರು. ಹಾಗೆ ಆ ಹಬ್ಬವು “ಪೂರೀಮ್” ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. 25 ಹಾಮಾನನ ಕುತಂತ್ರವನ್ನು ಎಸ್ತೇರ್ ರಾಣಿಯು ರಾಜನ ಸಂಗಡ ಮಾತಾಡುವುದರ ಮೂಲಕ ನಿರರ್ಥಕಗೊಳಿಸಿ ಅವನಿಗೂ ಅವನ ಕುಟುಂಬಕ್ಕೂ ಮರಣವಾಗುವಂತೆ ಮಾಡಿದಳು. ಹಾಮಾನನೂ ಅವನ ಗಂಡುಮಕ್ಕಳೂ ಗಲ್ಲಿಗೇರಿಸಲ್ಪಟ್ಟರು.

26-27 ಚೀಟು ಹಾಕುವುದಕ್ಕೆ, “ಪೂರಿಮ್” ಎಂದು ಕರೆಯುತ್ತಿದ್ದುದರಿಂದ ಈ ಹಬ್ಬಕ್ಕೆ “ಪೂರಿಮ್” ಎಂದು ಹೆಸರಿಟ್ಟರು. ಮೊರ್ದೆಕೈ ಈ ಹಬ್ಬವನ್ನು ಆಚರಿಸಲು ಯೆಹೂದ್ಯರೆಲ್ಲರಿಗೆ ಪತ್ರದ ಮೂಲಕ ತಿಳಿಸಿದನು. ಅಂದಿನಿಂದ ಪ್ರತಿ ವರ್ಷ ಈ ಎರಡು ದಿನಗಳಲ್ಲಿ ಹಬ್ಬವನ್ನು ಆಚರಿಸುವ ಕ್ರಮವನ್ನು ಇಟ್ಟುಕೊಂಡರು. 28 ತಮ್ಮ ವೈರಿಗಳಿಗಾಗುವ ದಂಡನೆಯನ್ನು ಅವರು ಈ ಹಬ್ಬದ ಸಮಯದಲ್ಲಿ ಜ್ಞಾಪಕ ಮಾಡಿಕೊಳ್ಳುವರು. ಯೆಹೂದ್ಯರ ಎಲ್ಲಾ ಗೋತ್ರಗಳವರು ಮತ್ತು ಅವರ ಪ್ರಾಂತ್ಯಗಳಲ್ಲಿರುವವರು ಈ ದಿನಗಳನ್ನು ಪ್ರತಿ ವರ್ಷ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಈ ಹಬ್ಬವನ್ನು ಪ್ರತಿಯೊಂದು ಪ್ರಾಂತ್ಯಗಳಲ್ಲಿಯೂ ಪ್ರತಿಯೊಂದು ಊರುಗಳಲ್ಲಿಯೂ ನೆನಪುಮಾಡಿಕೊಳ್ಳುವರು. ಇಂದಿಗೂ ಯೆಹೂದ್ಯರು ಈ ದಿನಗಳನ್ನು ನೆನಪುಮಾಡಿಕೊಂಡು ಪೂರಿಮ್ ಹಬ್ಬವನ್ನು ಆಚರಿಸುತ್ತಾರೆ.

29 ಹಾಗೆ, ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಮತ್ತು ಯೆಹೂದಿಯಾದ ಮೊರ್ದೆಕೈಯು ಈ ಪೂರಿಮ್ ಹಬ್ಬದ ಬಗ್ಗೆ ಒಂದು ಅಧಿಕೃತ ಪತ್ರವನ್ನು ಬರೆಯಿಸಿದರು. ಜನರು ಅವರ ಎರಡನೆಯ ಪತ್ರವನ್ನು ಸತ್ಯವೆಂದು ನಂಬುವ ಹಾಗೆ ರಾಜಮುದ್ರೆಯೊಂದಿಗೆ ಕಳುಹಿಸಿದರು. 30 ಅರಸನ ನೂರಿಪ್ಪತ್ತೇಳು ಸಂಸ್ಥಾನಗಳಲ್ಲಿರುವ ಯೆಹೂದ್ಯರಿಗೆಲ್ಲಾ ಪತ್ರವನ್ನು ಕಳುಹಿಸಿದನು. ಅದರಲ್ಲಿ ಆ ಹಬ್ಬವು ಜನರ ಮಧ್ಯದಲ್ಲಿ ಸಮಾಧಾನ ಹುಟ್ಟಿಸಿ ಒಬ್ಬರಮೇಲೊಬ್ಬರ ಮೇಲೆ ನಂಬಿಕೆ ಬೆಳೆಸುವುದು ಎಂದು ಬರೆದಿದ್ದನು. 31 ಮತ್ತು ಪತ್ರದಲ್ಲಿ ಪೂರಿಮ್ ಹಬ್ಬವನ್ನು ಆಚರಿಸಲು ಪ್ರಾರಂಭಿಸಿರಿ ಎಂದೂ ಬರೆದಿದ್ದನು. ಈ ಹಬ್ಬವನ್ನು ಯಾವ ದಿನ ಆಚರಿಸಬೇಕು ಎಂಬುದನ್ನೂ ನಮೂದಿಸಿದನು. ಈ ಎರಡು ವಿಶ್ರಾಂತಿ ದಿನಗಳನ್ನು ತಮಗೂ ತಮ್ಮ ಸಂತಾನಗಳವರಿಗೂ ಖಾಯಂಗೊಳಿಸಲು ಯೆಹೂದಿಯಾದ ಮೊರ್ದೆಕೈಯೂ ರಾಣಿ ಎಸ್ತೇರಳೂ ಯೆಹೂದ್ಯರಿಗೆ ಒಂದು ಆಜ್ಞೆಯನ್ನು ಹೊರಡಿಸಿದರು. ತಮಗೆ ಸಂಬಂಧಿಸಿದ ಕೆಟ್ಟಸಂಗತಿಗಳನ್ನು ನೆನಪಿಗೆ ತಂದುಕೊಂಡು ಬೇರೆ ವಿಶ್ರಾಂತಿ ದಿನಗಳಲ್ಲಿ ಉಪವಾಸವಿದ್ದು ಗೋಳಾಡುವಂತೆ ಈ ಹಬ್ಬದ ದಿನಗಳಲ್ಲಿಯೂ ಅವರು ಮಾಡುವರು. 32 ಎಸ್ತೇರಳ ಈ ಆಜ್ಞೆಯು ಅಧಿಕೃತವಾಗಿದ್ದು ಪುಸ್ತಕದಲ್ಲಿ ಬರೆಯಲ್ಪಟ್ಟಿತು.

ಮೊರ್ದೆಕೈಯನ್ನು ಗೌರವಿಸಿದ್ದು

10 ಅಹಷ್ವೇರೋಷ್ ರಾಜನು ತನ್ನ ಪ್ರಜೆಗಳಿಂದ ತೆರಿಗೆಯನ್ನು ಎತ್ತಿದನು. ಅವನ ಸಾಮ್ರಾಜ್ಯದ ಪ್ರಜೆಗಳೆಲ್ಲರೂ ಹಾಗೂ ದೂರದ ಕರಾವಳಿಯ ನಗರವಾಸಿಗಳೂ, ತೆರಿಗೆಯನ್ನು ಕಟ್ಟಬೇಕಾಯಿತು. ಅಹಷ್ವೇರೋಷ್ ಅರಸನು ಮಾಡಿದ ಎಲ್ಲಾ ಮಹತ್ಕಾರ್ಯಗಳೂ ಕೃತ್ಯಗಳೂ ಮೇದ್ಯ, ಪರ್ಶಿಯ ಅರಸರ ರಾಜಕಾಲವೃತ್ತಾಂತ ಪುಸ್ತಕಗಳಲ್ಲಿ ಬರೆಯಲ್ಪಟ್ಟಿರುತ್ತವೆ; ಮೊರ್ದೆಕೈ ಮಾಡಿದ ವಿಷಯಗಳ ಬಗ್ಗೆಯೂ ಬರೆಯಲ್ಪಟ್ಟಿದೆ. ಮೊರ್ದೆಕೈಯನ್ನು ಅರಸನು ಬಹು ದೊಡ್ಡ ಪ್ರಭಾವಶಾಲಿ ವ್ಯಕ್ತಿಯನ್ನಾಗಿ ಮಾಡಿದನು. ಅರಸನ ನಂತರ ರಾಜ್ಯದಲ್ಲಿ ಯೆಹೂದಿಯಾದ ಮೊರ್ದೆಕೈಯೇ ಮುಖ್ಯ ವ್ಯಕ್ತಿಯಾಗಿದ್ದನು. ರಾಜ್ಯದಲ್ಲಿ ಅವನಿಗೆ ಎರಡನೇ ಸ್ಥಾನವಿತ್ತು. ಯೆಹೂದ್ಯರೊಳಗೆ ಅವನು ಪ್ರಮುಖ ವ್ಯಕ್ತಿಯಾಗಿದ್ದನು. ಯೆಹೂದ್ಯರೆಲ್ಲರೂ ಅವನನ್ನು ಬಹಳವಾಗಿ ಗೌರವಿಸುತ್ತಿದ್ದರು. ತನ್ನ ಜನರ ಒಳಿತಿಗಾಗಿ (ಜನರಿಗೋಸ್ಕರವಾಗಿ) ಮೊರ್ದೆಕೈ ಬಹಳವಾಗಿ ಪ್ರಯಾಸಪಟ್ಟಿದ್ದರಿಂದ ಜನರು ಅವನನ್ನು ಸನ್ಮಾನಿಸಿದರು; ಮೊರ್ದೆಕೈ ಯೆಹೂದ್ಯರೆಲ್ಲರಿಗೆ ಸಮಾಧಾನವನ್ನು ತಂದನು.

ಅಪೊಸ್ತಲರ ಕಾರ್ಯಗಳು 7:1-21

ಸ್ತೆಫನನ ಪ್ರಸಂಗ

ಪ್ರಧಾನಯಾಜಕನು ಸ್ತೆಫನನಿಗೆ, “ಈ ಸಂಗತಿಗಳು ನಿಜವೋ?” ಎಂದು ಕೇಳಿದನು. ಪ್ರತ್ಯುತ್ತರವಾಗಿ ಅವನು ಹೀಗೆಂದನು: “ನನ್ನ ಯೆಹೂದ್ಯತಂದೆಗಳೇ, ಸಹೋದರರೇ, ನನಗೆ ಕಿವಿಗೊಡಿರಿ. ನಮ್ಮ ಪಿತೃವಾದ ಅಬ್ರಹಾಮನಿಗೆ ನಮ್ಮ ಪ್ರಭಾವಸ್ವರೂಪನಾದ ದೇವರು ಕಾಣಸಿಕೊಂಡನು. ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪೊಟೇಮಿಯದಲ್ಲಿದ್ದನು. ದೇವರು ಅಬ್ರಹಾಮನಿಗೆ, ‘ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು’(A) ಎಂದು ಹೇಳಿದನು.

“ಆದ್ದರಿಂದ ಅಬ್ರಹಾಮನು ಖಾಲ್ದೆಯ[a] ದೇಶವನ್ನು ಬಿಟ್ಟು ಹಾರಾನಿನಲ್ಲಿ ವಾಸಿಸಲು ಹೋದನು. ಅಬ್ರಹಾಮನ ತಂದೆ ಸತ್ತಮೇಲೆ ದೇವರು ಅವನನ್ನು ಈಗ ನೀವು ವಾಸಿಸುತ್ತಿರುವ ಈ ಸ್ಥಳಕ್ಕೆ ಕಳುಹಿಸಿದನು. ಆದರೆ ದೇವರು ಅಬ್ರಹಾಮನಿಗೆ ಇಲ್ಲಿ ಯಾವ ಭೂಮಿಯನ್ನೂ ಕೊಡಲಿಲ್ಲ. ದೇವರು ಅವನಿಗೆ ಒಂದು ಅಡಿ ಸ್ಥಳವನ್ನೂ ಕೊಡಲಿಲ್ಲ. ಆದರೆ ಮುಂದಿನ ಕಾಲದಲ್ಲಿ ಈ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವುದಾಗಿ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದನು. (ಅಬ್ರಹಾಮನಿಗೆ ಮಕ್ಕಳೇ ಇಲ್ಲದಿದ್ದಾಗ ಇದಾಯಿತು.)

“ದೇವರು ಅವನಿಗೆ, ‘ನಿನ್ನ ಸಂತಾನದವರು ಬೇರೊಂದು ದೇಶದಲ್ಲಿ ವಾಸಿಸುವರು. ಅವರು ಪರದೇಶಿಗಳಾಗಿರುವರು. ಅಲ್ಲಿಯ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ನಾನೂರು ವರ್ಷಗಳವರೆಗೆ ಅವರಿಗೆ ಕೇಡುಗಳನ್ನು ಮಾಡುವರು. ಆದರೆ ಅವರನ್ನು ಗಲಾಮರನ್ನಾಗಿ ಮಾಡಿಕೊಂಡ ಜನಾಂಗವನ್ನು ನಾನು ದಂಡಿಸುವೆನು’(B) ಎಂದು ಹೇಳಿದನು. ಇದಲ್ಲದೆ ದೇವರು ಅವನಿಗೆ, ‘ಆ ಬಳಿಕ ನಿನ್ನ ಜನರು ಆ ದೇಶದಿಂದ ಹೊರಗೆ ಬಂದು ನನ್ನನ್ನು ಈ ಸ್ಥಳದಲ್ಲಿ ಆರಾಧಿಸುವರು’(C) ಎಂದು ಹೇಳಿದನು.

“ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಆ ಒಡಂಬಡಿಕೆಯ ಗುರುತೇ ಸುನ್ನತಿ. ಹೀಗಿರಲು ಅಬ್ರಹಾಮನು ಒಬ್ಬ ಮಗನನ್ನು ಪಡೆದಾಗ, ಆ ಮಗನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. ಅವನ ಮಗನ ಹೆಸರು ಇಸಾಕ. ಇಸಾಕನು ಸಹ ತನ್ನ ಮಗನಾದ ಯಾಕೋಬನಿಗೆ ಸುನ್ನತಿ ಮಾಡಿದನು. ಮತ್ತು ಯಾಕೋಬನು ತನ್ನ ಗಂಡುಮಕ್ಕಳಿಗೆಲ್ಲಾ ಸುನ್ನತಿ ಮಾಡಿದನು. ಈ ಗಂಡುಮಕ್ಕಳೇ ಮುಂದೆ ಹನ್ನೆರಡು ಮಂದಿ ಪಿತೃಗಳಾದರು.

“ಈ ಪಿತೃಗಳು ಯೋಸೇಫನ (ಅವರು ತಮ್ಮ) ಮೇಲೆ ಹೊಟ್ಟೆಕಿಚ್ಚುಪಟ್ಟರು. ಅವರು ಯೋಸೇಫನನ್ನು ಈಜಿಪ್ಟಿನ ಜನರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಯೋಸೇಫನೊಂದಿಗೆ ಇದ್ದನು. 10 ಯೋಸೇಫನಿಗೆ ಅಲ್ಲಿ ಅನೇಕ ತೊಂದರೆಗಳು ಬಂದವು. ಆದರೆ ದೇವರು ಆ ಎಲ್ಲಾ ತೊಂದರೆಗಳಿಂದ ಅವನನ್ನು ರಕ್ಷಿಸಿದನು. ಆಗ ಫರೋಹನು ಈಜಿಪ್ಟಿನ ರಾಜನಾಗಿದ್ದನು. ದೇವರು ಯೋಸೇಫನಿಗೆ ಕೊಟ್ಟ ಜ್ಞಾನದ ದೆಸೆಯಿಂದ ಫರೋಹನು ಯೋಸೇಫನನ್ನು ಇಷ್ಟಪಟ್ಟನು ಮತ್ತು ಗೌರವಿಸಿದನು. ಫರೋಹನು ಯೋಸೇಫನನ್ನು ಈಜಿಪ್ಟಿನ ರಾಜ್ಯಪಾಲನನ್ನಾಗಿಯೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರ ಮೇಲೆ ಅಧಿಪತಿಯನ್ನಾಗಿಯೂ ಮಾಡಿದನು. 11 ಆದರೆ ಈಜಿಪ್ಟಿನಲ್ಲಿ ಮತ್ತು ಕಾನಾನಿನಲ್ಲಿ ಬರಗಾಲ ಉಂಟಾಯಿತು. ಆಹಾರವಿಲ್ಲದೆ ನಮ್ಮ ಪಿತೃಗಳಿಗೆ ಬಹಳ ಕಷ್ಟವಾಯಿತು.

12 “ಆದರೆ ಈಜಿಪ್ಟಿನಲ್ಲಿ ಆಹಾರವನ್ನು ಸಂಗ್ರಹಿಸಲಾಗಿದೆ ಎಂಬ ಸುದ್ದಿಯನ್ನು ಯಾಕೋಬನು ಕೇಳಿ, ನಮ್ಮ ಪಿತೃಗಳನ್ನು ಅಲ್ಲಿಗೆ ಕಳುಹಿಸಿದನು. (ಇದು ಈಜಿಪ್ಟಿಗೆ ಅವರ ಮೊದಲ ಪ್ರಯಾಣ.) 13 ಬಳಿಕ ಅವರು ಅಲ್ಲಿಗೆ ಎರಡನೆಯ ಸಲ ಹೋದರು. ಈ ಸಲ, ತಾನು ಯಾರೆಂಬುದನ್ನು ಯೋಸೇಫನು ತನ್ನ ಸಹೋದರರಿಗೆ ತಿಳಿಸಿದನು ಮತ್ತು ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ತಿಳಿಯಿತು. 14 ಬಳಿಕ, ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಮತ್ತು ಸಂಬಂಧಿಕರನ್ನು (ಅವರೆಲ್ಲರು ಒಟ್ಟಿಗೆ ಎಪ್ಪತ್ತೈದು ಮಂದಿ) ಈಜಿಪ್ಟಿಗೆ ಆಹ್ವಾನಿಸಲು ಕೆಲವು ಜನರನ್ನು ಕಳುಹಿಸಿದನು. 15 ಆದ್ದರಿಂದ ಯಾಕೋಬನು ಈಜಿಪ್ಟಿಗೆ ಹೋದನು. ಯಾಕೋಬನು ಮತ್ತು ನಮ್ಮ ಪಿತೃಗಳು ತಾವು ಸಾಯುವವರೆಗೆ ಅಲ್ಲೇ ಇದ್ದರು. 16 ಬಳಿಕ ಅವರ ದೇಹಗಳನ್ನು ಶೇಕೆಮಿಗೆ ಸಾಗಿಸಲಾಯಿತು. ಅಲ್ಲಿಯ ಸಮಾಧಿಯೊಂದರಲ್ಲಿ ಅವರನ್ನು ಹೂಳಲಾಯಿತು. (ಅಬ್ರಹಾಮನು ಹಾಮೋರನ ಗಂಡುಮಕ್ಕಳಿಂದ ಕೊಂಡುಕೊಂಡದ್ದು ಈ ಸಮಾಧಿಯನ್ನೇ. ಅವನು ಅವರಿಗೆ ಬೆಳ್ಳಿಯನ್ನು ಕ್ರಯವಾಗಿ ಕೊಟ್ಟಿದ್ದನು.)

17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.

20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International