Old/New Testament
ಯಜ್ಞವೇದಿಕೆಯನ್ನು ತಿರುಗಿ ಕಟ್ಟಿದ್ದು
3 ತಮ್ಮತಮ್ಮ ಸ್ವಂತ ಊರುಗಳಲ್ಲಿ ಹೋಗಿ ನೆಲೆಸಿದ್ದ ಇಸ್ರೇಲರು ಏಳನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಒಂದೇ ಮನಸ್ಸಿನಿಂದ ಬಂದು ಸೇರಿದರು. 2 ಆಗ ಯೋಚಾದಾಕನ ಮಗನಾದ ಯೇಷೂವನೂ ಅವನೊಂದಿಗೆ ಇದ್ದ ಯಾಜಕರೂ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಅವನೊಂದಿಗಿದ್ದ ಜನರೊಂದಿಗೆ ಇಸ್ರೇಲ್ ದೇವರಿಗೆ ಯಜ್ಞವೇದಿಕೆಯನ್ನು ಕಟ್ಟಿದರು. ದೇವರ ಸೇವಕನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ದೇವರಿಗೆ ಯಜ್ಞವನ್ನು ಸಮರ್ಪಿಸಲು ಇವರು ವೇದಿಕೆಯನ್ನು ಕಟ್ಟಿದರು.
3 ತಮ್ಮ ಸುತ್ತಲು ವಾಸಿಸುವ ಅನ್ಯಜನರಿಗೆ ಅವರು ಭಯಪಟ್ಟರೂ ಹಳೆಯ ಅಸ್ತಿವಾರದ ಮೇಲೆ ವೇದಿಕೆಯನ್ನು ಕಟ್ಟಿದರು. ಅವರು ಹಾಗೆ ಮಾಡುವುದನ್ನು ನಿಲ್ಲಿಸಲಿಲ್ಲ. ಕಟ್ಟಿ ಮುಗಿಸಿದ ಬಳಿಕ ಬೆಳಿಗ್ಗೆ, ಸಾಯಂಕಾಲ ಹೋಮಯಜ್ಞಾದಿಗಳನ್ನು ಸಮರ್ಪಿಸಿದರು. 4 ಇದಲ್ಲದೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಹಬ್ಬದ ಪ್ರತಿ ದಿವಸಗಳಲ್ಲಿ ನೇಮಿತ ಸರ್ವಾಂಗಹೋಮಗಳನ್ನು ಅರ್ಪಿಸಿದರು. 5 ಇದಾದ ಬಳಿಕ ಅವರು ನಿತ್ಯ ಸರ್ವಾಂಗಹೋಮವನ್ನೂ ಅಮಾವಾಸ್ಯೆ ಮತ್ತು ಇತರ ಹಬ್ಬದ ದಿನಗಳಲ್ಲಿ ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಬೇಕಾದ ಯಜ್ಞಹೋಮಗಳನ್ನೂ ಸಮರ್ಪಿಸಿದರು. ಜನರು ತಾವು ಯೆಹೋವನಿಗೆ ಕೊಡಬೇಕೆಂದಿದ್ದ ಇತರ ಕಾಣಿಕೆಗಳನ್ನು ಸಹ ತಂದು ಕೊಡಲಾರಂಭಿಸಿದರು. 6 ದೇವಾಲಯವು ತಿರಿಗಿ ಕಟ್ಟಲ್ಪಡದಿದ್ದರೂ ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಇಸ್ರೇಲರು ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ಪ್ರಾರಂಭಿಸಿದರು.
ದೇವಾಲಯದ ಪುನರ್ನಿರ್ಮಾಣ
7 ಸೆರೆಯಿಂದ ಹಿಂತಿರುಗಿಬಂದ ಜನರು ಬಡಗಿಗಳಿಗೂ ಕಲ್ಲುಕುಟಿಗರಿಗೂ ಹಣ ಕೊಟ್ಟರು. ಲೆಬನೋನಿನಿಂದ ದೇವದಾರು ಮರಗಳನ್ನು ಸಾಗಿಸುವ ತೂರ್ಯರಿಗೆ ಮತ್ತು ಚೀದೋನ್ಯರಿಗೆ ಆಹಾರಪದಾರ್ಥಗಳನ್ನು, ಆಲಿವ್ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಸಂಬಳವಾಗಿ ಕೊಟ್ಟರು. ಸೊಲೊಮೋನನು ಮೊದಲನೆಯ ದೇವಾಲಯವನ್ನು ಕಟ್ಟುವಾಗ ಅದಕ್ಕೆ ಬೇಕಾದ ಮರಗಳನ್ನು ಸಮುದ್ರಮಾರ್ಗವಾಗಿ ತಂದಂತೆಯೇ ಇವರೂ ಜೆರುಸಲೇಮಿಗೆ ಸಮೀಪವಿರುವ ಯೊಪ್ಪಕ್ಕೆ ಸಮುದ್ರಮಾರ್ಗವಾಗಿ ತಂದರು. ಪರ್ಶಿಯಾದ ಅರಸನಾದ ಸೈರಸನ ಆಜ್ಞೆಗನುಸಾರವಾಗಿ ಇವೆಲ್ಲವೂ ಮಾಡಲ್ಪಟ್ಟವು.
8 ಜೆರುಸಲೇಮಿನ ದೇವಾಲಯಕ್ಕೆ ಬಂದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೋಚಾದಾಕನ ಮಗನಾದ ಯೇಷೂವನು ಕೆಲಸವನ್ನು ಪ್ರಾರಂಭಿಸಿದರು. ಅವರ ಸಹೋದರರು, ಯಾಜಕರು, ಲೇವಿಯರು ಮತ್ತು ಅವರೊಂದಿಗೆ ಸೆರೆಯಿಂದ ಬಂದವರೆಲ್ಲರೂ ಕೆಲಸ ಮಾಡಿದರು. ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಲೇವಿಯವರನ್ನು ಮೇಲ್ವಿಚಾರಕರನ್ನಾಗಿ ಅವರು ನೇಮಿಸಿದರು. 9 ದೇವಾಲಯವನ್ನು ಕಟ್ಟುವ ಕೆಲಸವನ್ನು ಮೇಲ್ವಿಚಾರಣೆ ಮಾಡಿದವರು ಕೆಳಕಂಡಂತಿರುವರು. ಯೇಷೂವನೂ ಅವನ ಮಕ್ಕಳೂ; ಕದ್ಮೀಯೇಲನು ಮತ್ತು ಅವನ ಮಕ್ಕಳು (ಇವರು ಯೆಹೂದ ಸಂತತಿಯವರು.); ಲೇವಿಯನಾದ ಹೇನಾದಾದನ ಗಂಡುಮಕ್ಕಳು ಮತ್ತು ಅವನ ಅಣ್ಣತಮ್ಮಂದಿರು. 10 ಕಟ್ಟುವವರು ದೇವಾಲಯದ ಅಸ್ತಿವಾರವನ್ನು ಕಟ್ಟಿ ಮುಗಿಸಿದಾಗ ಯಾಜಕರು ತಮ್ಮ ಯಾಜಕ ಬಟ್ಟೆಗಳನ್ನು ಧರಿಸಿ ತುತ್ತೂರಿಗಳನ್ನು ತೆಗೆದುಕೊಂಡರು; ಆಸಾಫನ ಮಕ್ಕಳು ತಾಳಗಳನ್ನು ತೆಗೆದುಕೊಂಡರು; ಅಲ್ಲದೆ ಇಸ್ರೇಲಿನ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡು ಯೆಹೋವನನ್ನು ಸ್ತುತಿಸಿದರು.
11 ಯೆಹೋವನು ಒಳ್ಳೆಯವನು; ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
ಆತನ ಕರುಣೆ ಮತ್ತು ನಿಜಪ್ರೀತಿ ಇಸ್ರೇಲರಿಗೆ ಶಾಶ್ವತವಾಗಿದೆ
ಎಂದು ಹಾಡಿದರು. ಆಗ ಉಳಿದವರು ಸಂತೋಷದಿಂದ ಆರ್ಭಟಿಸಿದರು; ದೇವಾಲಯದ ಅಸ್ತಿವಾರ ಹಾಕಿದ್ದಕ್ಕೆ ಯೆಹೋವನನ್ನು ಸ್ತುತಿಸಿದರು.
12 ಆದರೆ ಮೊದಲಿನ ದೇವಾಲಯವನ್ನೂ ಅದರ ವೈಭವವನ್ನೂ ನೋಡಿದ್ದ ಕುಲಪ್ರಧಾನರು, ಯಾಜಕರು ಮತ್ತು ಲೇವಿಯರು ಗಟ್ಟಿಯಾಗಿ ಅತ್ತರು. ಇತರರು ಗಟ್ಟಿಯಾಗಿ ಹರ್ಷಧ್ವನಿ ಮಾಡಿದರು. 13 ಅವರ ಉತ್ಸಾಹಧ್ವನಿಯಲ್ಲಿ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಎಂದು ತಿಳಿಯುತ್ತಿರಲಿಲ್ಲ. ಆದರೆ ಆ ಧ್ವನಿಯು ಬಹುದೂರದವರೆಗೂ ಕೇಳಿಸಿತು.
ದೇವಾಲಯ ಕಟ್ಟುವ ಕಾರ್ಯವನ್ನು ವಿರೋಧಿಸಿದ ವೈರಿಗಳು
4 1-2 ಆ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಬೇರೆ ಜನರು ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಜನರಿಗೆ ವಿರುದ್ಧವಾಗಿದ್ದರು. ಸೆರೆಯಿಂದ ಬಂದ ಜನರು ಇಸ್ರೇಲರ ದೇವರಾದ ಯೆಹೋವನ ದೇವಾಲಯವನ್ನು ಕಟ್ಟುತ್ತಿದ್ದಾರೆಂಬ ವರ್ತಮಾನವನ್ನು ವೈರಿಗಳು ಕೇಳಿ ಜೆರುಬ್ಬಾಬೆಲನ ಬಳಿಗೂ ಮತ್ತು ಕುಲಪ್ರಧಾನರ ಬಳಿಗೂ ಬಂದು, “ಕಟ್ಟುವ ಕಾರ್ಯದಲ್ಲಿ ನಿಮಗೆ ಸಹಾಯ ಮಾಡಲು ಬಂದಿದ್ದೇವೆ. ನಾವು ಸಹ ನಿಮ್ಮಂತೆಯೇ ದೇವರನ್ನು ಪ್ರಾರ್ಥಿಸುತ್ತೇವೆ. ಅಶ್ಶೂರದ ರಾಜನಾದ ಏಸರ್ಹದ್ದೋನನು ನಮ್ಮನ್ನು ಇಲ್ಲಿಗೆ ತಂದು ಬಿಟ್ಟಂದಿನಿಂದ ನಾವು ನಿಮ್ಮ ದೇವರನ್ನೇ ಆರಾಧಿಸುತ್ತೇವೆ” ಅಂದರು.
3 ಆದರೆ ಜೆರುಬ್ಬಾಬೆಲ್, ಯೇಷೂವ ಮತ್ತು ಗೋತ್ರಪ್ರಧಾನರು ಅವರಿಗೆ ಹೇಳಿದ್ದೇನೆಂದರೆ: “ನೀವು ನಮ್ಮ ದೇವರಿಗೆ ದೇವಾಲಯವನ್ನು ಕಟ್ಟಬಾರದು. ನಾವು ಮಾತ್ರವೇ ಕಟ್ಟಬಹುದು. ಯಾಕೆಂದರೆ ಆತನು ಇಸ್ರೇಲ್ ಜನರ ದೇವರು. ಪರ್ಶಿಯ ರಾಜನಾದ ಸೈರಸನು ಅದೇ ರೀತಿಯಾಗಿ ನಮಗೆ ಅಪ್ಪಣೆ ಮಾಡಿರುತ್ತಾನೆ.”
4 ಇದನ್ನು ಕೇಳಿ ಅವರಿಗೆ ಸಿಟ್ಟುಬಂತು. ಮತ್ತು ಯೆಹೂದ್ಯರಿಗೆ ಉಪದ್ರವ ಕೊಡಲು ಪ್ರಾರಂಭಿಸಿದರು. ದೇವಾಲಯ ಕಟ್ಟುವ ಕೆಲಸವನ್ನು ನಿಲ್ಲಿಸಲೂ ಕಟ್ಟುವವರನ್ನು ನಿರಾಶೆಪಡಿಸಲೂ ಪ್ರಯತ್ನಿಸಿದರು. 5 ಯೆಹೂದ ಜನರ ವಿರುದ್ಧವಾಗಿರಲು ಸರಕಾರದ ಅಧಿಕಾರಿಗಳಿಗೆ ಲಂಚಕೊಟ್ಟು ಪ್ರೋತ್ಸಾಹಿಸಿದರು. ಯೆಹೂದ್ಯರು ದೇವಾಲಯ ಕಟ್ಟುವ ಕಾರ್ಯವನ್ನು ನಿಲ್ಲಿಸಲು ಈ ಅಧಿಕಾರಿಗಳು ಪದೇಪದೇ ತೊಂದರೆಪಡಿಸಿದರು. ಪರ್ಶಿಯಾದ ಅರಸನಾದ ಸೈರಸನ ರಾಜ್ಯಭಾರದ ಆಳ್ವಿಕೆಯಲ್ಲಿಯೂ ಅವನ ನಂತರ ಪಟ್ಟಕ್ಕೆ ಬಂದ ದಾರ್ಯಾವೆಷನ ಆಳ್ವಿಕೆಯಲ್ಲಿಯೂ ಇದೇ ರೀತಿ ಮುಂದುವರಿಯಿತು.
6 ಆ ಶತ್ರುಗಳು ಪರ್ಶಿಯ ರಾಜನಿಗೆ ಪತ್ರವನ್ನು ಬರೆದು ದೇವಾಲಯವನ್ನು ಕಟ್ಟುವ ಕಾರ್ಯವನ್ನು ನಿಲ್ಲಿಸಬೇಕೆಂದು ಬೇಡಿಕೊಂಡರು. ಅಹಷ್ವೇರೋಷನು ಪರ್ಶಿಯ ದೇಶದ ಅರಸನಾದಾಗ ಅವನಿಗೆ ಪತ್ರ ಬರೆದರು.
ಜೆರುಸಲೇಮ್ ನಗರವನ್ನು ಕಟ್ಟುವ ಕಾರ್ಯಕ್ಕೆ ವಿರೋಧಿಸಿದ ಶತ್ರುಗಳು
7 ಅರ್ತಷಸ್ತನು ಪರ್ಶಿಯಾದ ರಾಜನಾದಾಗ ಬಿಷ್ಲಾಮ್, ಮಿತ್ರದಾತ್ ಮತ್ತು ಟಾಬೆಯೇಲ್ ಈ ಮೊದಲಾದವರು ಯೆಹೂದ್ಯರ ವಿರುದ್ಧವಾಗಿ ರಾಜನಿಗೆ ಆಪಾದನಾ ಪತ್ರವನ್ನು ಅರಮೇಯಿಕ್ ಭಾಷೆಯಲ್ಲಿಯೂ ಅದರ ಲಿಪಿಯಲ್ಲಿಯೂ ಬರೆದರು.
8 ಅದಕ್ಕೆ ದೇಶಾಧಿಪತಿಯಾದ ರೆಹೂಮ ಮತ್ತು ಕಾರ್ಯದರ್ಶಿಯಾದ ಶಿಂಷೈ ಜೆರುಸಲೇಮಿನ ನಿವಾಸಿಗಳ ವಿರುದ್ಧವಾಗಿ ರಾಜ ಅರ್ತಷಸ್ತನಿಗೆ ಈ ರೀತಿ ಬರೆದರು:
9 ದೇಶಾಧಿಪತಿಯಾದ ರೆಹೂಮ, ಕಾರ್ಯದರ್ಶಿಯಾದ ಶಿಂಷೈ ಇವರೂ ಇವರ ಜೊತೆಗಾರರಾದ ಟರ್ಪಲಾಯರು, ಪರ್ಶಿಯದವರು, ಯೆರೆಕ್ಯರು, ಬಾಬಿಲೋನಿನವರು, ಕೂಷನಿನ ಏಲಾಮ್ಯರು, 10 ಮತ್ತು ಮಹಾ ಬಲಿಷ್ಠನಾದ ಅಷೂರ್ ಬನಿಪಾಲನು ಕರೆತಂದು ಸಮಾರ್ಯ ಮತ್ತು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿ ಇರಿಸಿದ ಇತರ ಜನರು,
11 ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ವಾಸಿಸುವ ಸೇವಕರು ಅರ್ತಷಸ್ತ ರಾಜನಿಗೆ ಬರೆಯುವ ಪತ್ರ:
12 ಅರ್ತಷಸ್ತ ರಾಜರೇ, ನಿಮ್ಮ ಸನ್ನಿಧಾನದಲ್ಲಿ ನಾವು ತಿಳಿಸುವ ವಿಷಯವೇನೆಂದರೆ, ನೀವು ಕಳುಹಿಸಿರುವ ಯೆಹೂದ್ಯರು ಇಲ್ಲಿಗೆ ಬಂದಿದ್ದಾರೆ. ಅವರು ತಮ್ಮ ನಗರವಾದ ಜೆರುಸಲೇಮನ್ನು ತಿರುಗಿ ಕಟ್ಟುತ್ತಿದ್ದಾರೆ. ಜೆರುಸಲೇಮ್ ಕೆಟ್ಟ ನಗರವಾಗಿದೆ. ಅದರ ನಿವಾಸಿಗಳು ಯಾವಾಗಲೂ ಬೇರೆ ಅರಸುಗಳಿಗೆ ಎದುರು ಬೀಳುವವರಾಗಿದ್ದಾರೆ. ಈಗ ಆ ಯೆಹೂದ್ಯರು ಅಸ್ತಿವಾರವನ್ನು ಹಾಕಿ ಗೋಡೆಯನ್ನು ಕಟ್ಟುತ್ತಿದ್ದಾರೆ.
13 ಅದೇ ಸಮಯದಲ್ಲಿ ರಾಜರೇ, ನೀವು ತಿಳಿಯಬೇಕಾದ ವಿಷಯವೇನೆಂದರೆ, ಜೆರುಸಲೇಮ್ ಮತ್ತು ಅದರ ಪೌಳಿಗೋಡೆಗಳು ಕಟ್ಟಲ್ಪಟ್ಟಲ್ಲಿ ಅಲ್ಲಿಯ ಪ್ರಜೆಗಳು ತೆರಿಗೆ ಕೊಡುವುದನ್ನು ನಿಲ್ಲಿಸುವರು. ನಿನಗೆ ಕಪ್ಪಕಾಣಿಕೆ ಸಲ್ಲಿಸುವುದನ್ನೂ ಇತರ ತೆರಿಗೆಗಳನ್ನು ಕೊಡುವುದನ್ನೂ ನಿಲ್ಲಿಸುವರು. ಇದರಿಂದಾಗಿ ರಾಜರಿಗೆ ದೊಡ್ಡ ನಷ್ಟವಾಗಲಿದೆ.
14 ರಾಜನ ಮೇಲೆ ನಮಗೆ ಜವಾಬ್ದಾರಿ ಇದೆ. ಅಂಥಾ ಸಂಗತಿಗಳು ನಡೆಯಲು ನಾವು ಇಷ್ಟಪಡುವುದಿಲ್ಲ. ಆದ್ದರಿಂದಲೇ ರಾಜರಿಗೆ ಈ ಪತ್ರವನ್ನು ಕಳುಹಿಸುತ್ತಿದ್ದೇವೆ.
15 ರಾಜನಾದ ಅರ್ತಷಸ್ತನೇ, ನಿಮಗಿಂತ ಮೊದಲು ಆಳಿದ ರಾಜರ ಬಗ್ಗೆ ಬರೆದ ವೃತ್ತಾಂತವನ್ನು ಓದಿರಿ ಎಂದು ನಿಮ್ಮನ್ನು ವಿನಂತಿಸುತ್ತೇವೆ. ಜೆರುಸಲೇಮ್ ಯಾವಾಗಲೂ ಇತರ ರಾಜರುಗಳಿಗೆ ಎದುರುಬೀಳುವುದನ್ನು ನೀವು ಅದರಲ್ಲಿ ಕಂಡುಕೊಳ್ಳುವಿರಿ. ಬೇರೆ ರಾಜರನ್ನು ಮತ್ತು ದೇಶಗಳವರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದು ಮಾತ್ರವಲ್ಲ, ಪೂರ್ವಕಾಲದಿಂದಲೂ ಈ ನಗರದಿಂದ ಎಷ್ಟೋ ದಂಗೆಗಳು ಎದ್ದಿವೆ. ಆ ಕಾರಣಕ್ಕಾಗಿಯೇ ಜೆರುಸಲೇಮ್ ನಾಶಮಾಡಲ್ಪಟ್ಟಿತ್ತು.
16 ರಾಜನಾದ ಅರ್ತಷಸ್ತನೇ, ಈ ಪಟ್ಟಣ ಮತ್ತು ಅದರ ಪೌಳಿಗೋಡೆಗಳು ತಿರಿಗಿ ಕಟ್ಟಲ್ಪಟ್ಟರೆ ನೀವು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವಿರಿ.
17 ಈ ಪತ್ರಕ್ಕೆ ಅರಸನಾದ ಅರ್ತಷಸ್ತನು ಈ ರೀತಿಯಾಗಿ ಉತ್ತರಿಸಿದನು.
ದೇಶಾಧಿಪತಿಯಾದ ರೆಹೂಮನಿಗೂ ಕಾರ್ಯದರ್ಶಿಯಾದ ಶಿಂಷೈಗೂ ಮತ್ತು ಸಮಾರ್ಯದಲ್ಲೂ ಯೂಫ್ರೇಟೀಸ್ ಪಶ್ಚಿಮ ಪ್ರಾಂತ್ಯದಲ್ಲೂ ವಾಸಿಸುವ ಜನರಿಗೆ
ವಂದನೆಗಳು.
18 ನೀವು ಕಳುಹಿಸಿದ ಪತ್ರವನ್ನು ಭಾಷಾಂತರ ಮಾಡಿ ನನಗೆ ತಿಳಿಸಲಾಯಿತು. 19 ಹಿಂದಿನ ರಾಜರ ವೃತ್ತಾಂತ ಪುಸ್ತಕಗಳನ್ನು ಶೋಧಿಸಲು ನಾನು ಆಜ್ಞೆ ಕೊಟ್ಟೆನು. ಆ ವೃತ್ತಾಂತಗಳನ್ನು ಓದಿದಾಗ, ರಾಜರ ವಿರುದ್ಧವಾದ ದಂಗೆಯ ದೀರ್ಘ ಇತಿಹಾಸವನ್ನು ಜೆರುಸಲೇಮ್ ಹೊಂದಿರುವುದು ನಮಗೆ ತಿಳಿದು ಬಂತು. ಜೆರುಸಲೇಮಿನಲ್ಲಿ ದಂಗೆ ಮತ್ತು ಪ್ರತಿಭಟನೆ ಆಗಾಗ್ಗೆ ನಡೆದಿದ್ದವು. 20 ಬಲಿಷ್ಠರಾಜರು ಜೆರುಸಲೇಮನ್ನು ಮತ್ತು ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯವನ್ನೆಲ್ಲಾ ಆಳಿದರು. ಅವರಿಗೆ ಕಪ್ಪಕಾಣಿಕೆ, ಸುಂಕ, ತೆರಿಗೆಗಳನ್ನು ಸಲ್ಲಿಸಲಾಗುತ್ತಿತ್ತು.
21 ಈಗ ನೀವು ಜೆರುಸಲೇಮ್ನಲ್ಲಿ ನಡೆಯುವ ಕೆಲಸವನ್ನು ನಿಲ್ಲಿಸುವಂತೆ ಆಜ್ಞಾಪಿಸಬೇಕು. ನಾನು ತಿಳಿಸುವ ತನಕ ಅದು ತಿರಿಗಿ ಕಟ್ಟಲ್ಪಡಬಾರದು. 22 ಈ ವಿಷಯದಲ್ಲಿ ನೀವು ಅಜಾಗರೂಕರಾಗಬಾರದೆಂದು ನಿಮ್ಮನ್ನು ಎಚ್ಚರಿಸುತ್ತೇನೆ. ಜೆರುಸಲೇಮಿನ ಕಟ್ಟುವಿಕೆಯು ಮುಂದುವರಿಯಬಾರದು. ಮುಂದುವರಿದರೆ ನನಗೆ ಆ ಪ್ರಾಂತ್ಯದಿಂದ ದೊರಕಬೇಕಾದ ಹಣವು ದೊರಕುವುದಿಲ್ಲ.
23 ರಾಜನಾದ ಅರ್ತಷಸ್ತನು ಬರೆದ ಪತ್ರವನ್ನು ರೆಹೂಮನಿಗೂ ಕಾರ್ಯದರ್ಶಿ ಶಿಂಷೈಗೂ ಅವರೊಂದಿಗಿದ್ದ ಜನರ ಮುಂದೆ ಓದಲಾಯಿತು. ಆ ಕೂಡಲೇ ಅವರು ಬೇಗನೆ ಜೆರುಸಲೇಮಿನಲ್ಲಿದ್ದ ಯೆಹೂದ್ಯರ ಬಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಕೆಲಸವನ್ನು ಬಲವಂತದಿಂದ ನಿಲ್ಲಿಸಿದರು.
ದೇವಾಲಯ ಕಟ್ಟುವ ಕೆಲಸ ನಿಲ್ಲಿಸಲ್ಪಟ್ಟಿದ್ದು
24 ಜೆರುಸಲೇಮಿನಲ್ಲಿ ಯೆಹೋವನ ಆಲಯದ ಕಾರ್ಯವು ನಿಂತಿತು. ಪರ್ಶಿಯ ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ತನಕ ಕೆಲಸವು ಮುಂದುವರೆಯಲಿಲ್ಲ.
5 ಆ ಸಮಯಗಳಲ್ಲಿ ಪ್ರವಾದಿಗಳಾದ ಹಗ್ಗಾಯನೂ ಇದ್ದೋವಿನ ಮಗನಾದ ಜೆಕರ್ಯನೂ ದೇವರ ಹೆಸರಿನಲ್ಲಿ ಪ್ರವಾದಿಸುತ್ತಿದ್ದರು. ಯೆಹೂದ ಪ್ರಾಂತ್ಯದಲ್ಲಿದ್ದ ಮತ್ತು ಜೆರುಸಲೇಮಿನಲ್ಲಿದ್ದ ಯೆಹೂದ್ಯರನ್ನು ಅವರು ಪ್ರೋತ್ಸಾಹಿಸಿದರು. 2 ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೇಲ್ ಮತ್ತು ಯೋಚಾದಾಕನ ಮಗನಾದ ಯೇಷೂವನೂ ಜೆರುಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ಕಾರ್ಯವನ್ನು ಮತ್ತೆ ಪ್ರಾರಂಭಿಸಿದರು. ದೇವರ ಪ್ರವಾದಿಗಳೆಲ್ಲರೂ ಅವರೊಂದಿಗಿದ್ದು ಅವರನ್ನು ಪ್ರೋತ್ಸಾಹಪಡಿಸುತ್ತಿದ್ದರು. 3 ಆ ಸಮಯದಲ್ಲಿ ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದ ರಾಜ್ಯಪಾಲನಾಗಿದ್ದ ತತ್ತೆನೈ ಮತ್ತು ಶೆತರ್ಬೋಜೆನೈ ಮತ್ತು ಅವರ ಸಂಗಡಿಗರು ಜೆರುಬ್ಬಾಬೆಲ್, ಯೇಷೂವ ಮತ್ತು ಅವರ ಜೊತೆಗಾರರ ಬಳಿ ಬಂದು, “ನಿಮಗೆ ದೇವಾಲಯವನ್ನು ಮತ್ತೆ ಕಟ್ಟಲೂ ಅದನ್ನು ಹೊಸದಾಗಿ ಮಾಡಲೂ ಅಪ್ಪಣೆ ಕೊಟ್ಟವರು ಯಾರು? 4 ಈ ಕಾರ್ಯದಲ್ಲಿ ಕೆಲಸ ಮಾಡುವವರ ಹೆಸರುಗಳೇನು?” ಎಂದು ವಿಚಾರಿಸಿದರು.
5 ಆದರೆ ಯೆಹೂದ್ಯರ ನಾಯಕರ ಮೇಲೆ ದೇವರ ಕೃಪಾಕಟಾಕ್ಷವಿತ್ತು. ರಾಜನಾದ ದಾರ್ಯಾವೆಷನಿಗೆ ವರದಿ ತಲುಪಿ ಉತ್ತರವನ್ನು ಕಳುಹಿಸುವ ತನಕ ನಾಯಕರು ಕಟ್ಟಡದ ಕೆಲಸವನ್ನು ಮುಂದುವರಿಸುತ್ತಲೇ ಇದ್ದರು. 6 ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲ ತತ್ತೆನೈ, ಶೆತರ್ಬೋಜೆನೈ ಮತ್ತು ಪ್ರಮುಖರು ರಾಜನಾದ ದಾರ್ಯಾವೆಷನಿಗೆ ಪತ್ರ ಬರೆದರು. 7 ಪತ್ರದ ನಕಲು ಹೀಗಿದೆ:
ಅರಸನಾದ ದಾರ್ಯಾವೆಷನಿಗೆ
ವಂದನೆಗಳು.
8 ರಾಜನೇ, ನಾವು ಯೆಹೂದ ಪ್ರಾಂತ್ಯವನ್ನು ಸಂದರ್ಶಿಸಿದ್ದೇವೆಂದು ನಿಮಗೆ ತಿಳಿಸುತ್ತೇವೆ. ಅಲ್ಲಿ ಮಹೋನ್ನತ ದೇವರ ಆಲಯವನ್ನು ನೋಡಿದೆವು. ಯೆಹೂದ ಪ್ರಾಂತ್ಯದ ಜನರು ದೊಡ್ಡ ಕಲ್ಲುಗಳಿಂದ ದೇವಾಲಯವನ್ನು ಕಟ್ಟುತ್ತಿದ್ದಾರೆ. ದೊಡ್ಡದೊಡ್ಡ ಮರದ ತೊಲೆಗಳನ್ನು ಗೋಡೆಯ ಮೇಲೆ ಕುಳ್ಳಿರಿಸಿದ್ದಾರೆ. ಯೆಹೂದ ಪ್ರಾಂತ್ಯದ ಜನರು ಜಾಗರೂಕತೆಯಿಂದಲೂ ತುಂಬ ಪ್ರಯಾಸದಿಂದಲೂ ಕಾರ್ಯವನ್ನು ನಡಿಸುತ್ತಿದ್ದಾರೆ. ಬಹಳ ವೇಗವಾಗಿ ಕೆಲಸ ಮುಂದುವರಿಯುತ್ತಿರುವದರಿಂದ ದೇವಾಲಯವು ಬೇಗನೆ ಸಂಪೂರ್ಣವಾಗಬಹುದು.
9 “ದೇವಾಲಯವನ್ನು ಕಟ್ಟಲು ನಿಮಗೆ ಯಾರು ಅಪ್ಪಣೆಕೊಟ್ಟರು?” ಎಂದು ಅವರ ನಾಯಕರನ್ನು ಪ್ರಶ್ನಿಸಿದೆವು. 10 ಕೆಲಸಗಾರರ ಹೆಸರುಗಳನ್ನು ನಾವು ಕೇಳಿದೆವು. ಅವರ ನಾಯಕರುಗಳ ಹೆಸರುಗಳನ್ನೂ ಕೇಳಿದೆವು. ಆ ನಾಯಕರುಗಳು ಯಾರೆಂದು ನಿಮಗೆ ತಿಳಿಯುವಂತೆ ಅವರ ಹೆಸರುಗಳನ್ನು ನಿಮಗೆ ತಿಳಿಸಬೇಕೆಂದಿದ್ದೆವು.
11 ಅದಕ್ಕೆ ಅವರು ಈ ರೀತಿಯಾಗಿ ಉತ್ತರಕೊಟ್ಟರು:
“ಭೂಪರಲೋಕಗಳ ದೇವರ ಸೇವಕರಾದ ನಾವು ಬಹಳ ವರ್ಷಗಳ ಹಿಂದೆ ಇಸ್ರೇಲರ ರಾಜನು ಕಟ್ಟಿಸಿ ಮುಗಿಸಿದ ದೇವಾಲಯವನ್ನು ಮತ್ತೆ ಕಟ್ಟುತ್ತಿದ್ದೇವೆ. 12 ನಮ್ಮ ಪೂರ್ವಿಕರು ಪರಲೋಕದ ನಮ್ಮ ದೇವರನ್ನು ಸಿಟ್ಟಿಗೆಬ್ಬಿಸಿದರು. ಆಗ ಆತನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ನಮ್ಮ ಪೂರ್ವಿಕರನ್ನು ಕೊಟ್ಟುಬಿಟ್ಟನು. ನೆಬೂಕದ್ನೆಚ್ಚರನು ದೇವಾಲಯವನ್ನು ಹಾಳುಗೆಡವಿ ಜನರನ್ನು ಬಲವಂತದಿಂದ ಸೆರೆಯಾಗಿ ಬಾಬಿಲೋನಿಗೆ ಒಯ್ದನು. 13 ಅನಂತರ ಬಾಬಿಲೋನಿನ ಅರಸನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದೇವಾಲಯವನ್ನು ತಿರಿಗಿ ಕಟ್ಟಲು ವಿಶೇಷ ಅನುಮತಿಯನ್ನು ಕೊಟ್ಟನು. 14 ಹಿಂದಿನ ಕಾಲದಲ್ಲಿ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ತೆಗೆದುಕೊಂಡು ಬಂದು ಬಾಬಿಲೋನಿನಲ್ಲಿದ್ದ ತನ್ನ ವಿಗ್ರಹಾಲಯದಲ್ಲಿಟ್ಟಿದ್ದನು. ಆಲಯದಿಂದ ತೆಗೆದುಕೊಂಡು ಬಂದಿದ್ದ ಆ ಬೆಳ್ಳಿಬಂಗಾರದ ವಸ್ತುಗಳನ್ನು ಸೈರಸನು ಬಾಬಿಲೋನಿನ ತನ್ನ ವಿಗ್ರಹಾಲಯದಿಂದ ತೆಗೆದು ಶೆಷ್ಬಚ್ಚರನಿಗೆ (ಜೆರುಬ್ಬಾಬೆಲನಿಗೆ) ಕೊಟ್ಟು ಅವನನ್ನು ದೇಶಾಧಿಪತಿಯನ್ನಾಗಿ ನೇಮಿಸಿದನು.”
15 ಅರಸನಾದ ಸೈರಸನು ಶೆಷ್ಬಚ್ಚರನಿಗೆ (ಜೆರುಬ್ಬಾಬೆಲನಿಗೆ), “ಈ ಬೆಳ್ಳಿಬಂಗಾರಗಳ ವಸ್ತುಗಳನ್ನು ತೆಗೆದುಕೊಂಡು ಜೆರುಸಲೇಮಿನ ದೇವಾಲಯದಲ್ಲಿಡು. ಹಿಂದೆ ದೇವಾಲಯವು ಎಲ್ಲಿ ಇತ್ತೋ ಅದೇ ಸ್ಥಳದಲ್ಲಿ ಅದನ್ನು ಪುನಃ ಕಟ್ಟು.”
16 ಹೀಗೆ ಶೆಷ್ಬಚ್ಚರನು (ಜೆರುಬ್ಬಾಬೆಲ್), ಜೆರುಸಲೇಮಿನಲ್ಲಿ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನ ತನಕ ಕೆಲಸವು ಮುಂದುವರಿಯುತ್ತಲೇ ಇದೆ. ಆದರೆ ಅದು ಇನ್ನೂ ಸಂಪೂರ್ಣವಾಗಿಲ್ಲ.
17 ರಾಜರಾದ ತಾವು ಅಪೇಕ್ಷಿಸಿದರೆ ರಾಜವೃತ್ತಾಂತವನ್ನು ನೀವೇ ಪರಿಶೋಧಿಸಿ. ಜೆರುಸಲೇಮಿನಲ್ಲಿ ಮತ್ತೆ ದೇವಾಲಯವನ್ನು ಕಟ್ಟಲು ರಾಜ ಸೈರಸನು ಆಜ್ಞಾಪಿಸಿದ್ದು ನಿಜವೇ ಎಂಬುದನ್ನು ನೀವೇ ನೋಡಿರಿ. ಆಮೇಲೆ, ಅರಸನೇ, ಇದರ ವಿಚಾರವಾಗಿ ಏನು ತೀರ್ಮಾನ ಮಾಡಿದ್ದೀರೆಂದು ನಮಗೆ ಪತ್ರದ ಮೂಲಕ ತಿಳಿಸಿರಿ.
ಬರಿದಾದ ಸಮಾಧಿ
(ಮತ್ತಾಯ 28:1-10; ಮಾರ್ಕ 16:1-8; ಲೂಕ 24:1-12)
20 ಭಾನುವಾರದ ಮುಂಜಾನೆ ಮಗ್ದಲದ ಮರಿಯಳು ಯೇಸುವಿನ ದೇಹವಿದ್ದ ಸಮಾಧಿಯ ಬಳಿಗೆ ಬಂದಳು. ಆಗ ಇನ್ನೂ ಕತ್ತಲಿತ್ತು. ಸಮಾಧಿಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಕಲ್ಲು ಅಲ್ಲಿಂದ ತೆಗೆದುಹಾಕಲ್ಪಟ್ಟಿರುವುದನ್ನು ಕಂಡ ಮರಿಯಳು 2 ಸೀಮೋನ್ ಪೇತ್ರನ ಮತ್ತು (ಯೇಸು ಪ್ರೀತಿಸುತ್ತಿದ್ದ) ಮತ್ತೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಅವರು ಸಮಾಧಿಯೊಳಗಿಂದ ಪ್ರಭುವನ್ನು ತೆಗೆದುಕೊಂಡಿದ್ದಾರೆ, ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದು ಹೇಳಿದಳು.
3 ಆದ್ದರಿಂದ ಪೇತ್ರನು ಮತ್ತು ಮತ್ತೊಬ್ಬ ಶಿಷ್ಯನು ಸಮಾಧಿಯ ಬಳಿಗೆ ಹೊರಟರು. 4 ಅವರಿಬ್ಬರೂ ಓಡುತ್ತಾ ಹೋದರು. ಆದರೆ ಆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತಲೂ ವೇಗವಾಗಿ ಓಡುತ್ತಾ ಹೋಗಿ ಸಮಾಧಿಯನ್ನು ಮೊದಲು ತಲುಪಿದನು. 5 ಆ ಶಿಷ್ಯನು ಬಗ್ಗಿ ಒಳಗೆ ನೋಡಿದನು.
6 ನಾರುಬಟ್ಟೆಯ ತುಂಡುಗಳು ಅಲ್ಲಿ ಬಿದ್ದಿರುವುದನ್ನು ಅವನು ಕಂಡನು. 7 ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆಯನ್ನೂ ಅವನು ಕಂಡನು. ಆ ಬಟ್ಟೆಯು ಸುತ್ತಲ್ಪಟ್ಟು, ಇತರ ನಾರುಬಟ್ಟೆಗಳಿಂದ ಪ್ರತ್ಯೇಕವಾಗಿ ಬಿದ್ದಿತ್ತು. 8 ಬಳಿಕ ಆ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಆ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು. 9 (ಯೇಸು ಸತ್ತು ಜೀವಂತವಾಗಿ ಎದ್ದುಬರಬೇಕೆಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿರುವುದು ಈ ಶಿಷ್ಯರಿಗೆ ಇನ್ನೂ ಅರ್ಥವಾಗಿರಲಿಲ್ಲ.)
ಮಗ್ದಲದ ಮರಿಯಳಿಗೆ ಯೇಸುವಿನ ದರ್ಶನ
(ಮಾರ್ಕ 16:9-11)
10 ಬಳಿಕ ಶಿಷ್ಯರು ಹಿಂತಿರುಗಿ ಮನೆಗೆ ಹೋದರು. 11 ಆದರೆ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ, 12 ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಅವರಲ್ಲೊಬ್ಬನು ಯೇಸುವಿನ ತಲೆಯಿದ್ದ ಕಡೆಯಲ್ಲಿಯೂ ಮತ್ತೊಬ್ಬನು ಪಾದವಿದ್ದ ಕಡೆಯಲ್ಲಿಯೂ ಕುಳಿತುಕೊಂಡಿದ್ದನು.
13 ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು.
ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು. 14 ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.
15 ಯೇಸು ಆಕೆಯನ್ನು “ಅಮ್ಮಾ ಏಕೆ ಅಳುತ್ತಿರುವೆ? ನೀನು ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಿದನು.
ಇವನು ತೋಟವನ್ನು ನೋಡಿಕೊಳ್ಳುವವನಿರಬಹುದೆಂದು ಮರಿಯಳು ಯೋಚಿಸಿಕೊಂಡು ಅವನಿಗೆ, “ಅಯ್ಯಾ, ನೀನು ಯೇಸುವನ್ನು ತೆಗೆದುಕೊಂಡು ಹೋದೆಯಾ? ಆತನನ್ನು ಎಲ್ಲಿಟ್ಟಿರುವೆ, ನನಗೆ ಹೇಳು. ನಾನು ಹೋಗಿ ಆತನನ್ನು ತೆಗೆದು ಕೊಳ್ಳುತ್ತೇನೆ” ಎಂದು ಹೇಳಿದಳು.
16 ಯೇಸು ಆಕೆಗೆ, “ಮರಿಯಳೇ” ಎಂದನು.
ಮರಿಯಳು ಯೇಸುವಿನ ಕಡೆಗೆ ತಿರುಗಿ, ಯೆಹೂದ್ಯರ ಭಾಷೆಯಲ್ಲಿ “ರಬ್ಬೂನಿ” ಎಂದಳು. (ರಬ್ಬೂನಿ ಎಂದರೆ “ಗುರು”.)
17 ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ. ನಾನು ತಂದೆಯ ಬಳಿಗೆ ಇನ್ನೂ ಹಿಂತಿರುಗಿ ಹೋಗಿಲ್ಲ. ಆದರೆ ನೀನು ನನ್ನ ಸಹೋದರರ (ಶಿಷ್ಯರ) ಬಳಿಗೆ ಹೋಗಿ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತಿದ್ದೇನೆ’ ಎಂಬುದಾಗಿ ಹೇಳು” ಎಂದನು.
18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.
ಶಿಷ್ಯರಿಗೆ ಯೇಸುವಿನ ದರ್ಶನ
(ಮತ್ತಾಯ 28:16-20; ಮಾರ್ಕ 16:14-18; ಲೂಕ 24:36-49)
19 ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 20 ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.
21 ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು. 22 ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ. 23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.
ತೋಮನಿಗೆ ಯೇಸುವಿನ ದರ್ಶನ
24 ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು. 25 ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.
26 ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 27 ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.
28 ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.
29 ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.
ಯೋಹಾನನು ಈ ಪುಸ್ತಕವನ್ನು ಬರೆದ ಉದ್ದೇಶ
30 ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ. 31 ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.
Kannada Holy Bible: Easy-to-Read Version. All rights reserved. © 1997 Bible League International