Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 16-18

16 ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ತಂದು ಅದಕ್ಕಾಗಿ ದಾವೀದನು ನಿರ್ಮಿಸಿದ್ದ ಗುಡಾರದೊಳಗೆ ಇಟ್ಟರು. ಅನಂತರ ಸರ್ವಾಂಗಹೋಮ ಮತ್ತು ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸಿದರು. ದಾವೀದನು ಯಜ್ಞಗಳನ್ನು ಸಮರ್ಪಿಸಿದ ಬಳಿಕ ಯೆಹೋವನ ಹೆಸರಿನಲ್ಲಿ ಇಸ್ರೇಲರನ್ನು ಆಶೀರ್ವದಿಸಿದನು. ಅನಂತರ ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಇಸ್ರೇಲಿನ ಗಂಡಸಿಗೆ ಮತ್ತು ಹೆಂಗಸಿಗೆ ಒಂದು ರೊಟ್ಟಿಯನ್ನೂ ಸ್ವಲ್ಪ ಖರ್ಜೂರವನ್ನೂ ಒಣದ್ರಾಕ್ಷಿಯನ್ನೂ ಕೊಟ್ಟನು.

ದಾವೀದನು ಕೆಲವು ಮಂದಿ ಯಾಜಕರನ್ನು ಒಡಂಬಡಿಕೆಯ ಪೆಟ್ಟಿಗೆಯ ಸೇವೆಮಾಡುವುದಕ್ಕಾಗಿ ನೇಮಿಸಿದನು. ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರ ಸಲ್ಲಿಸುವುದು ಮತ್ತು ಆತನನ್ನು ಕೊಂಡಾಡುವುದೇ ಇವರ ಕೆಲಸವಾಗಿತ್ತು. ಮೊದಲನೇ ಗುಂಪಿನ ಗಾಯಕರಿಗೆ ಆಸಾಫನು ಮುಖಂಡನಾಗಿದ್ದನು. ಆಸಾಫನ ಗುಂಪಿನವರು ತಾಳ ಬಾರಿಸಿದರು. ಜೆಕರ್ಯನು ಎರಡನೇ ಗುಂಪಿನ ನಾಯಕನು. ಬೇರೆ ಲೇವಿಯರು ಯಾರೆಂದರೆ: ಉಜ್ಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರು ಲೈರ್ ಮತ್ತು ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಬೆನಾಯನೂ ಯೆಹಜೀಯೇಲನೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಬಳಿಯಲ್ಲಿ ತುತ್ತೂರಿಗಳನ್ನು ಯಾವಾಗಲೂ ಊದುವ ಯಾಜಕರಾಗಿದ್ದರು. ಈ ವ್ಯವಸ್ಥೆಯನ್ನು ದಾವೀದನು ಪ್ರಥಮ ಬಾರಿಗೆ ಆಸಾಫನಿಗೂ ಅವನ ಸೋದರರಿಗೂ ಯೆಹೋವನ ಸ್ತೋತ್ರವನ್ನು ಹಾಡುವ ಕೆಲಸಕ್ಕಾಗಿ ನೇಮಿಸಿದನು.

ದಾವೀದನ ಕೃತಜ್ಞತಾಸ್ತುತಿ

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ,
    ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
ಯೆಹೋವನಿಗೆ ಗಾನ ಮಾಡಿರಿ, ಆತನಿಗೆ ಸ್ತುತಿಗೀತೆ ಹಾಡಿರಿ.
    ಆತನ ಅದ್ಭುತಕಾರ್ಯಗಳನ್ನು ಧ್ಯಾನಿಸಿರಿ.
10 ಯೆಹೋವನ ಪರಿಶುದ್ಧನಾಮದಲ್ಲಿ ಹಿಗ್ಗಿರಿ;
    ಆತನ ದರ್ಶನಕ್ಕಾಗಿ ಬರುವವರೇ, ಸಂತೋಷಪಡಿರಿ.
11 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ;
    ಯಾವಾಗಲೂ ಆತನ ದರ್ಶನವನ್ನು ಅಪೇಕ್ಷಿಸಿರಿ.
12 ಆತನ ಸೇವಕನಾದ ಇಸ್ರೇಲನ ಸಂತತಿಯವರೇ,
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರೇ,
13 ಆತನ ಅದ್ಭುತಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ
    ನ್ಯಾಯನಿರ್ಣಯಗಳನ್ನೂ ಜ್ಞಾಪಿಸಿಕೊಳ್ಳಿರಿ.
14 ಯೆಹೋವನೇ ನಮ್ಮ ದೇವರು.
    ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
15 ಯೆಹೋವನ ಒಡಂಬಡಿಕೆಯನ್ನು ಸದಾಕಾಲ ನೆನಪಿನಲ್ಲಿಡಿರಿ.
    ಆತನು ಆ ಆಜ್ಞೆಗಳನ್ನು ಸಾವಿರ ತಲೆಮಾರುಗಳಿಗೆ ಕೊಟ್ಟನು.
16 ಯೆಹೋವನು ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿರಿ.
    ಆತನು ಇಸಾಕನಿಗೆ ಮಾಡಿದ ವಾಗ್ದಾನವನ್ನು ಜ್ಞಾಪಕಕ್ಕೆ ತನ್ನಿರಿ.
17 ಯೆಹೋವನು ಯಾಕೋಬನಿಗೆ ಕಟ್ಟಳೆಗಳನ್ನು ಅನುಗ್ರಹಿಸಿದನು.
    ಅದು ಇಸ್ರೇಲರೊಂದಿಗಿನ ನಿರಂತರವಾದ ಒಡಂಬಡಿಕೆ.
18 ಯೆಹೋವನು ಇಸ್ರೇಲರಿಗೆ, “ನಾನು ನಿಮಗೆ ಕಾನಾನ್ ದೇಶವನ್ನು ಕೊಡುವೆನು.
    ಆ ವಾಗ್ದತ್ತ ದೇಶವು ನಿಮ್ಮದಾಗುವುದು” ಎಂದು ಹೇಳಿದನು.

19 ಆತನು, “ನಿಮಗೆ ಈ ದೇಶವನ್ನು ಕೊಡುವೆನು;
    ಅದು ನಿಮ್ಮ ಸಂತತಿಯವರಿಗೆ ಸ್ವಾಸ್ತ್ಯವಾಗಿರುವುದು” ಎಂದು ಹೇಳಿದನು.
20 ಅವರು ಒಂದು ದೇಶದಿಂದ ಇನ್ನೊಂದಕ್ಕೂ
    ಒಂದು ರಾಜ್ಯದಿಂದ ಇನ್ನೊಂದಕ್ಕೂ ಹೋದರು.
21 ಆದರೆ ಅವರಿಗೆ ಕೇಡುಮಾಡಲು ಯೆಹೋವನು ಯಾರಿಗೂ ಅವಕಾಶಕೊಡಲಿಲ್ಲ.
    ಅವರನ್ನು ಬಾಧಿಸದಂತೆ ಆತನು ಅರಸರುಗಳಿಗೆ ಎಚ್ಚರಿಕೆ ಕೊಟ್ಟನು.
22 ಯೆಹೋವನು ಆ ರಾಜರಿಗೆ, “ನಾನು ಆರಿಸಿಕೊಂಡ ಜನಾಂಗಕ್ಕೆ ಉಪದ್ರವ ಕೊಡಬೇಡಿ;
    ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” ಎಂದು ಹೇಳಿದನು.
23 ಭೂನಿವಾಸಿಗಳೇ, ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ;
    ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ.
24 ಯೆಹೋವನ ಮಹಿಮೆಯನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
    ಸರ್ವಜನರಲ್ಲಿ ಆತನ ಅದ್ಭುತಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.
25 ಯೆಹೋವನು ದೊಡ್ಡವನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
    ಎಲ್ಲಾ ದೇವರುಗಳಲ್ಲಿ ಯೆಹೋವನೇ ಭಯಂಕರನು.
26 ಯಾಕೆಂದರೆ ಜನಾಂಗಗಳಲ್ಲಿರುವ ಬೇರೆ ದೇವರುಗಳೆಲ್ಲಾ ಜಡಮೂರ್ತಿಗಳೇ.
    ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
27 ಆತನ ಸಾನ್ನಿಧ್ಯದಲ್ಲಿ ಮಾನಮಹಿಮೆಗಳೂ
    ಆತನ ಪವಿತ್ರಾಲಯದಲ್ಲಿ ಬಲವೂ ಸಂತೋಷವೂ ಇವೆ.
28 ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ
    ಎಂದು ಹೇಳಿ ಆತನನ್ನು ಘನಪಡಿಸಿರಿ.
29 ಯೆಹೋವನ ಮಹಿಮೆಯನ್ನು ಕೊಂಡಾಡಿರಿ; ಆತನ ಹೆಸರಿಗೆ ಘನತೆಯನ್ನು ಸಲ್ಲಿಸಿರಿ.
    ನಿಮ್ಮ ಕಾಣಿಕೆಗಳನ್ನು ಆತನ ಬಳಿಗೆ ತನ್ನಿರಿ;
    ಆತನ ಪರಿಶುದ್ಧ ನಾಮವನ್ನು ಆರಾಧಿಸಿರಿ.
30 ಯೆಹೋವನ ಮುಂದೆ ಭೂಲೋಕವೆಲ್ಲಾ ಭಯದಿಂದ ನಡುಗುವುದು!
    ಆದರೆ ಆತನು ಅದನ್ನು ಬಲವಾದ ಅಸ್ತಿವಾರಗಳಲ್ಲಿ ನಿರ್ಮಿಸಿದ್ದರಿಂದ ಅದು ಕದಲದು.
31 ಭೂಮ್ಯಾಕಾಶಗಳು ಹರ್ಷಿಸಲಿ! “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ”
    ಎಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
32 ಸಮುದ್ರವೂ ಅದರೊಳಗಿರುವದೆಲ್ಲವೂ ಆರ್ಭಟಿಸಲಿ,
    ಹೊಲಗದ್ದೆಗಳು ತಮ್ಮ ಹರ್ಷವನ್ನು ವ್ಯಕ್ತಪಡಿಸಲಿ.
33 ಯೆಹೋವನ ಸನ್ನಿಧಿಯಲ್ಲಿ ಅಡವಿಯ ಮರಗಳು ಸಂತೋಷದಿಂದ ಗಾನಮಾಡಲಿ.
    ಯಾಕೆಂದರೆ ಆತನು ಬರುತ್ತಿದ್ದಾನೆ. ಲೋಕಕ್ಕೆ ನ್ಯಾಯತೀರಿಸಲು ಬರುತ್ತಿದ್ದಾನೆ.
34 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನು ಒಳ್ಳೆಯವನು. ಆತನ ಪ್ರೀತಿಯು ಸದಾಕಾಲಕ್ಕೂ ಇರುವದು.
35 “ರಕ್ಷಕನಾದ ಯೆಹೋವನೇ,
    ನಮ್ಮನ್ನು ರಕ್ಷಿಸು;
ನಮ್ಮನ್ನು ಒಂದುಗೂಡಿಸು;
    ಅನ್ಯಜನಾಂಗಗಳಿಂದ ನಮ್ಮನ್ನು ರಕ್ಷಿಸು.
ಆಗ ನಾವು ನಿನ್ನ ಪರಿಶುದ್ಧ ನಾಮವನ್ನು ಕೀರ್ತಿಸುವೆವು.
    ನಮ್ಮ ಹಾಡುಗಳಿಂದ ನಿನ್ನನ್ನು ಘನಪಡಿಸುವೆವು” ಎಂದು ಆತನಿಗೆ ಹೇಳಿರಿ.
36 ಇಸ್ರೇಲರ ದೇವರಾದ ಯೆಹೋವನು ಸದಾಕಾಲವೂ ಘನಹೊಂದಲಿ;
    ನಿರಂತರವೂ ಕೊಂಡಾಡಲ್ಪಡಲಿ!

ಇಸ್ರೇಲರೆಲ್ಲರೂ ಯೆಹೋವನನ್ನು ಸ್ತುತಿಸಿ “ಆಮೆನ್” ಅಂದರು.

37 ಆಗ ದಾವೀದನು ಆಸಾಫನನ್ನೂ ಅವನ ಸಹೋದರರನ್ನೂ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಪ್ರತಿನಿತ್ಯ ಸೇವೆಮಾಡಲು ಅಲ್ಲಿರಿಸಿದನು. 38 ಅವರೊಂದಿಗೆ ಸೇವೆಮಾಡಲು ಓಬೇದೆದೋಮನನ್ನೂ ಇತರ ಅರವತ್ತೆಂಟು ಮಂದಿ ಲೇವಿಯರನ್ನೂ ಅಲ್ಲಿರಿಸಿದನು. ಓಬೇದೆದೋಮ್ ಮತ್ತು ಹೋಸ ಎಂಬವರು ಕಾವಲುಗಾರರಾಗಿದ್ದರು. ಓಬೇದೆದೋಮನು ಯೆದುತೂನನ ಮಗನಾಗಿದ್ದನು.

39 ಗಿಬ್ಯೋನಿನ ಉನ್ನತಸ್ಥಳದಲ್ಲಿದ್ದ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ದಾವೀದನು ಚಾದೋಕನನ್ನು ಮತ್ತು ಇತರ ಯಾಜಕರನ್ನು ನೇಮಿಸಿದನು. 40 ಪ್ರತಿ ಮುಂಜಾನೆ ಮತ್ತು ಸಂಧ್ಯಾಕಾಲಗಳಲ್ಲಿ ಚಾದೋಕನು ಮತ್ತು ಇತರ ಯಾಜಕರು ಸರ್ವಾಂಗಹೋಮವನ್ನು ಯಜ್ಞವೇದಿಕೆಯ ಮೇಲೆ ಸಮರ್ಪಿಸುತ್ತಿದ್ದರು. ಇಸ್ರೇಲರಿಗೆ ಕೊಡಲ್ಪಟ್ಟಿದ್ದ ಕಟ್ಟಳೆಗಳಿಗನುಸಾರವಾಗಿ ಅವರು ಮಾಡಿದರು. 41-42 ಹೇಮಾನ್ ಮತ್ತು ಯೆದುತೂನ್ ಅವರೊಂದಿಗಿದ್ದು ತುತ್ತೂರಿಯನ್ನೂದುತ್ತಾ ತಾಳ ಬಾರಿಸುತ್ತಾ ಇತರ ವಾದ್ಯಗಳನ್ನು ನುಡಿಸುತ್ತಾ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿದರು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿದ್ದರು.

43 ಆ ಕಾರ್ಯವು ಮುಗಿದ ಬಳಿಕ ಎಲ್ಲಾ ಇಸ್ರೇಲರು ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸಲು ತನ್ನ ಮನೆಗೆ ಹೋದನು.

ದಾವೀದನಿಗೆ ದೇವರ ವಾಗ್ದಾನ

17 ದಾವೀದನು ತನ್ನ ಮನೆಗೆ ಹಿಂತಿರುಗಿದ ಬಳಿಕ ಪ್ರವಾದಿಯಾದ ನಾತಾನನಿಗೆ, “ನಾನು ದೇವದಾರು ಮರಗಳಿಂದ ಮಾಡಿದ ಮನೆಯಲ್ಲಿ ವಾಸಮಾಡುತ್ತಿರುವಾಗ ದೇವರ ಒಡಂಬಡಿಕೆಯ ಪೆಟ್ಟಿಗೆಯು ಗುಡಾರದೊಳಗೆ ಇಡಲ್ಪಟ್ಟಿದೆ. ದೇವರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿರುವೆ” ಎಂದನು.

ಅದಕ್ಕೆ ನಾತಾನನು, “ನಿನ್ನ ಮನಸ್ಸಿಗೆ ಬಂದಂತೆ ಮಾಡು. ದೇವರು ನಿನ್ನೊಂದಿಗಿದ್ದಾನೆ” ಎಂದನು.

ಆದರೆ ಆ ರಾತ್ರಿ ದೇವರ ಮಾತು ನಾತಾನನಿಗೆ ಬಂತು. ದೇವರು ಅವನಿಗೆ,

“ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ನನಗೋಸ್ಕರ ಆಲಯವನ್ನು ಕಟ್ಟುವವನು ನೀನಲ್ಲ. 5-6 ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿದಂದಿನಿಂದ ಈ ದಿವಸದ ತನಕ ನಾನು ಮನೆಯಲ್ಲಿ ವಾಸವಾಗಿರಲಿಲ್ಲ. ನಾನು ಗುಡಾರದಲ್ಲಿಯೇ ಇದ್ದುಕೊಂಡು ಸಂಚರಿಸುತ್ತಿದ್ದೆನು. ಇಸ್ರೇಲರ ನಾಯಕರಾಗುವದಕ್ಕೆ ನಾನು ಕೆಲವರನ್ನು ಆರಿಸಿಕೊಂಡಿದ್ದೇನೆ. ಆ ನಾಯಕರು ನನ್ನ ಜನರಿಗೆ ಕುರುಬರಂತಿದ್ದಾರೆ. ಅವರೊಂದಿಗೆ ನಾನು ಬೇರೆಬೇರೆ ಸ್ಥಳಗಳಿಗೆ ಸಂಚರಿಸುತ್ತಿದ್ದಾಗ ನಾನೆಂದೂ ನನಗೊಂದು ಆಲಯವನ್ನು ದೇವದಾರು ಮರದಿಂದ ಕಟ್ಟಲು ಕೇಳಿಕೊಂಡಿರಲಿಲ್ಲ.’

“ನನ್ನ ಸೇವಕನಾದ ದಾವೀದನಿಗೆ ಹೇಳು: ಸರ್ವಶಕ್ತನಾದ ದೇವರು ಹೀಗೆನ್ನುತ್ತಾನೆ: ‘ಕುರಿಗಳನ್ನು ಮೇಯಿಸುತ್ತಿದ್ದ ನಿನ್ನನ್ನು ನಾನು ಆರಿಸಿಕೊಂಡೆನು; ನನ್ನ ಜನರಾದ ಇಸ್ರೇಲರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನು. ನೀನು ಹೋದಲ್ಲೆಲ್ಲಾ ನಿನ್ನೊಂದಿಗೆ ನಾನಿದ್ದೆನು; ನಿನ್ನ ಮುಂದೆ ಹೋಗಿ ನಿನ್ನ ವೈರಿಗಳನ್ನು ಸಾಯಿಸಿದೆನು. ಈಗ ನಾನು ನಿನ್ನನ್ನು ಲೋಕದಲ್ಲಿ ಎಲ್ಲರಿಗಿಂತಲೂ ಪ್ರಸಿದ್ಧಿ ಹೊಂದುವಂತೆ ಮಾಡುವೆನು. ನಾನು ಈ ದೇಶವನ್ನು ನನ್ನ ಜನರಾದ ಇಸ್ರೇಲರಿಗೆ ಕೊಡುವೆನು; ಅವರು ಮರಗಳನ್ನು ನೆಟ್ಟು ಅದರ ನೆರಳಡಿಯಲ್ಲಿ ಸಮಾಧಾನದಿಂದ ವಾಸಿಸುವರು; ಅವರನ್ನು ಯಾರೂ ಬಾಧಿಸರು. ದುಷ್ಟರು ಮುಂಚಿನಂತೆ ಅವರಿಗೆ ಕೇಡುಮಾಡರು. 10 ಅವರನ್ನು ಸಂರಕ್ಷಿಸಲು ನಾನು ನಾಯಕರನ್ನು ಎಬ್ಬಿಸುವೆನು; ನಾನು ನಿನ್ನ ವೈರಿಗಳನ್ನೆಲ್ಲಾ ಸೋಲಿಸಿಬಿಡುವೆನು.

“‘ನಿನ್ನ ಮನೆತನವನ್ನು ನಾನು ಕಟ್ಟುವೆನು. 11 ನೀನು ಸತ್ತು ನಿನ್ನ ಪೂರ್ವಿಕರ ಬಳಿ ಸೇರಿದಾಗ ನಾನು ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಮಾಡುವೆನು. ನಾನು ಅವನ ರಾಜ್ಯವನ್ನು ಸ್ಥಿರಪಡಿಸುವೆನು. 12 ನಿನ್ನ ಮಗನು ನನಗೆ ಆಲಯವನ್ನು ಕಟ್ಟುವನು. ನಿನ್ನ ಮಗನ ವಂಶವು ಸದಾಕಾಲಕ್ಕೂ ಇಸ್ರೇಲ್ ಜನಾಂಗವನ್ನು ಆಳುವದು. 13 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಸೌಲನು ರಾಜನಾಗಿದ್ದನು. ಆದರೆ ನಾನು ಅವನನ್ನು ತೆಗೆದುಹಾಕಿದೆನು. ಆದರೆ ನನ್ನ ಕೃಪೆ ನಿನ್ನ ಮಗನಿಂದ ತೊಲಗಿಹೋಗುವದಿಲ್ಲ. 14 ನನ್ನ ಮನೆಗೂ ನನ್ನ ರಾಜ್ಯಕ್ಕೂ ಅವನನ್ನು ನಿತ್ಯದ ರಾಜನನ್ನಾಗಿ ಮಾಡುವೆನು; ಅವನ ಆಳ್ವಿಕೆಯು ನಿರಂತರವಾಗಿರುವುದು.’”

15 ನಾತಾನನು ದಾವೀದನಿಗೆ ತನಗೆ ದೊರೆತ ದರ್ಶನವನ್ನು ಮತ್ತು ದೇವರು ತನಗೆ ತಿಳಿಸಿದ ಎಲ್ಲಾ ಮಾತುಗಳನ್ನು ತಿಳಿಸಿದನು.

ದಾವೀದನ ಪ್ರಾರ್ಥನೆ

16 ಆಗ ದಾವೀದನು ಪವಿತ್ರಗುಡಾರಕ್ಕೆ ಹೋಗಿ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು,

“ದೇವರಾದ ಯೆಹೋವನೇ, ನೀನು ನನ್ನನ್ನೂ ನನ್ನ ಕುಟುಂಬವನ್ನೂ ಎಷ್ಟೋ ಆಶೀರ್ವದಿಸಿರುವೆ. ನೀನು ಯಾಕೆ ಹೀಗೆ ಮಾಡಿದಿಯೊ ನನಗೆ ತಿಳಿಯುತ್ತಿಲ್ಲ. 17 ನನ್ನ ವಂಶದವರ ವಿಷಯದಲ್ಲಿಯೂ ನೀನು ವಾಗ್ದಾನ ಮಾಡಿರುವೆ. ದೇವರೇ, ಯೆಹೋವನೇ, ನೀನು ನನ್ನನ್ನು ಒಬ್ಬ ಮಹಾವ್ಯಕ್ತಿಯೋ ಎಂಬಂತೆ ಪರಿಗಣಿಸಿರುವೆ. 18 ನೀನು ನನಗೆಷ್ಟೋ ಸಹಾಯ ಮಾಡಿರುವೆ. ನಾನು ಕೇವಲ ನಿನ್ನ ಸೇವಕನಷ್ಟೇ. 19 ಯೆಹೋವನೇ, ನಿನ್ನ ಚಿತ್ತಕ್ಕನುಸಾರವಾಗಿ ಇಂಥ ಮಹತ್ಕಾರ್ಯವನ್ನು ನೀನು ನನಗೋಸ್ಕರ ಮಾಡಿರುವೆ. 20 ಯೆಹೋವನೇ, ನಿನಗೆ ಸಮಾನರು ಬೇರೆ ಯಾರೂ ಇಲ್ಲ. ನಿನ್ನ ಹೊರತು ಬೇರೆ ದೇವರಿಲ್ಲ. ಇಂಥ ಮಹತ್ಕಾರ್ಯ ಮಾಡುವ ದೇವರ ಬಗ್ಗೆ ನಾವು ಕೇಳಿಯೇ ಇಲ್ಲ. 21 ಇಸ್ರೇಲಿಗೆ ಸಮಾನವಾದ ಜನಾಂಗ ಭೂಲೋಕದಲ್ಲಿ ಎಲ್ಲಿದೆ? ನೀನು ಇಂಥ ಅದ್ಭುತಕಾರ್ಯಗಳನ್ನು ಮಾಡಿರುವುದು ಇಸ್ರೇಲ್ ಜನಾಂಗಕ್ಕಾಗಿಯೇ. ನೀನು ನಮ್ಮನ್ನು ಈಜಿಪ್ಟಿನಿಂದ ಹೊರತಂದು ಸ್ವತಂತ್ರರನ್ನಾಗಿ ಮಾಡಿದೆ. ಹೀಗೆ ನೀನು ನಿನ್ನ ಹೆಸರನ್ನು ಪ್ರಖ್ಯಾತಿಮಾಡಿದೆ. ನೀನು ನಿನ್ನ ಜನರ ಮುಂದೆ ಹೋಗುತ್ತಾ, ಅನ್ಯಜನರು ತಮ್ಮ ದೇಶವನ್ನು ಬಿಟ್ಟುಹೋಗುವಂತೆ ಮಾಡಿದೆ. 22 ಇಸ್ರೇಲರನ್ನು ಸದಾಕಾಲಕ್ಕೂ ನಿನ್ನ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನೇ ಅವರಿಗೆ ದೇವರಾದೆ!

23 “ಯೆಹೋವನೇ, ಈಗ ನೀನು ನನಗೂ ನನ್ನ ಸಂತತಿಗೂ ಈ ವಾಗ್ದಾನವನ್ನು ಮಾಡಿರುವೆ. ಆ ವಾಗ್ದಾನವನ್ನು ಶಾಶ್ವತಗೊಳಿಸು; ಅದು ಸದಾಕಾಲಕ್ಕೂ ಸ್ಥಿರವಾಗಿರಲಿ. 24 ನಿನ್ನ ವಾಗ್ದಾನವನ್ನು ನೆರವೇರಿಸು. ಆಗ ಜನರು, ‘ಸರ್ವಶಕ್ತನಾದ ಯೆಹೋವನು ಇಸ್ರೇಲರ ದೇವರೂ ರಕ್ಷಕನೂ ಆಗಿದ್ದಾನೆ’ ಎಂದು ಹೇಳುವರು. ನಾನು ನಿನ್ನ ಸೇವಕನಾಗಿದ್ದೇನೆ. ನನ್ನ ಕುಟುಂಬವು ಬಲಿಷ್ಠವಾಗಿದ್ದು ನಿನ್ನ ಸೇವೆಯನ್ನು ಮುಂದುವರಿಸುವಂತೆ ಕೃಪೆಯನ್ನು ಅನುಗ್ರಹಿಸು.

25 “ನನ್ನ ದೇವರೇ, ನಿನ್ನ ಸೇವಕನಾದ ನನ್ನೊಂದಿಗೆ ನೀನು ಮಾತನಾಡಿದೆ. ನೀನು ನನ್ನ ಕುಟುಂಬವನ್ನು ಸ್ಥಿರವಾಗಿ ಕಟ್ಟುವೆನೆಂದು ವಾಗ್ದಾನ ಮಾಡಿದೆ. ಆದ್ದರಿಂದ ನಾನು ಧೈರ್ಯದಿಂದ ನಿನ್ನ ಸಂಗಡ ಮಾತನಾಡುತ್ತಿದ್ದೇನೆ; ನಿನ್ನ ವಾಗ್ದಾನವನ್ನು ನೆರವೇರಿಸು ಎಂದು ಕೇಳಿಕೊಳ್ಳುತ್ತಿದ್ದೇನೆ. 26 ಯೆಹೋವನೇ, ನೀನೇ ದೇವರು. ಸ್ವತಃ ನೀನಾಗಿಯೇ ನನಗೆ ಇಂಥಾ ಒಳ್ಳೆಯ ವಾಗ್ದಾನಗಳನ್ನು ಮಾಡಿರುವೆ. 27 ನನ್ನ ಸಂತತಿಯವರನ್ನು ಆಶೀರ್ವದಿಸಿ ನಿನ್ನ ಕರುಣೆಯನ್ನು ತೋರಿಸಿದೆ. ನನ್ನ ಸಂತತಿಯವರು ಸದಾಕಾಲ ನಿನ್ನ ಸೇವೆಮಾಡುತ್ತಾರೆಂದು ನೀನು ವಾಗ್ದಾನ ಮಾಡಿರುವೆ. ಯೆಹೋವನೇ, ನೀನಾಗಿಯೇ ನನ್ನ ಸಂತತಿಯವರನ್ನು ಆಶೀರ್ವದಿಸಿದ್ದರಿಂದ ನನ್ನ ಸಂತತಿಯವರು ಸದಾಕಾಲಕ್ಕೂ ಆಶೀರ್ವಾದ ಹೊಂದಿಕೊಳ್ಳುವರು!” ಎಂದು ಪ್ರಾರ್ಥಿಸಿದನು.

ಅನ್ಯಜನಾಂಗಗಳ ಮೇಲೆ ದಾವೀದನ ಜಯ

18 ಅನಂತರ ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋದನು. ಅವರನ್ನು ಸೋಲಿಸಿ ಗತ್ ಪಟ್ಟಣ ಮತ್ತು ಅದರ ಸುತ್ತಮುತ್ತಲಿದ್ದ ಊರುಗಳನ್ನು ವಶಪಡಿಸಿಕೊಂಡನು.

ಅನಂತರ ದಾವೀದನು ಮೋವಾಬ್ಯರ ಸಂಗಡ ಯುದ್ಧಮಾಡಿ ಸೋಲಿಸಿದನು. ಅವರು ದಾವೀದನ ಸೇವಕರಾಗಿ ಕಪ್ಪ ಕೊಡಬೇಕಾಯಿತು.

ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯದೊಡನೆ ಕಾದಾಡಿ ಅವರನ್ನು ಹಮಾತಿನ ತನಕ ಹಿಂದಟ್ಟಿದನು. ಹದದೆಜರನು ತನ್ನ ರಾಜ್ಯವನ್ನು ಯೂಫ್ರೇಟೀಸ್ ನದಿಯ ತನಕ ವಿಸ್ತರಿಸಲು ಪ್ರಯತ್ನಿಸುತ್ತಿದ್ದನು. ಹದದೆಜರನಿಂದ ದಾವೀದನು ಒಂದು ಸಾವಿರ ರಥಗಳನ್ನೂ ಏಳು ಸಾವಿರ ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು ಹದದೆಜರನ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ಆ ಕುದುರೆಗಳು ರಥಗಳನ್ನು ಎಳೆಯದಂತೆ ಮಾಡಿದನು. ಆದರೆ ನೂರು ರಥಗಳನ್ನು ಎಳೆಯಲು ಬೇಕಾಗುವಷ್ಟು ಕುದುರೆಗಳನ್ನು ಉಳಿಸಿದನು.

ಹದದೆಜರನಿಗೆ ದಮಸ್ಕದಲ್ಲಿರುವ ಅರಾಮ್ಯರು ಸಹಾಯಕ್ಕೆ ಬಂದರು. ಆದರೆ ದಾವೀದನು ಅರಾಮ್ಯರ ಸೈನ್ಯವನ್ನು ಸೋಲಿಸಿ ಅವರ ಇಪ್ಪತ್ತೆರಡು ಸಾವಿರ ಮಂದಿ ಸೈನಿಕರನ್ನು ಕೊಂದನು. ನಂತರ ಅರಾಮ್ಯರ ದಮಸ್ಕದಲ್ಲಿ ತನ್ನ ಕೋಟೆಯನ್ನು ಸ್ಥಾಪಿಸಿದನು. ಅರಾಮ್ಯರು ದಾವೀದನ ಸೇವಕರಾಗಿ ಅವನಿಗೆ ಕಪ್ಪಕಾಣಿಕೆಯನ್ನು ತಂದೊಪ್ಪಿಸುತ್ತಿದ್ದರು. ಹೀಗೆ ದಾವೀದನು ಹೋದ ಕಡೆಯಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.

ಹದದೆಜರನ ಸೇನಾಧಿಪತಿಗಳು ಉಪಯೋಗಿಸುತ್ತಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು ಜೆರುಸಲೇಮಿಗೆ ತಂದನು. ಅಲ್ಲದೆ ಟಿಭತ್ ಮತ್ತು ಕೂನ್ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡನು. ಇವುಗಳಿಂದ ಸೊಲೊಮೋನನು ತಾಮ್ರದ ತೊಟ್ಟಿ, ತಾಮ್ರದ ಕಂಬ ಮತ್ತು ದೇವಾಲಯದ ಬೇರೆ ಸಾಮಾಗ್ರಿಗಳನ್ನು ಮಾಡಿಸಿದನು.

ದಾವೀದನು ಹದದೆಜರನನ್ನು ಸದೆಬಡಿದನೆಂದು ತಿಳಿದ ಹಮಾತಿನ ಅರಸನಾದ ತೋವನು 10 ತನ್ನ ಮಗನಾದ ಹದೋರಾಮನನ್ನು ದಾವೀದನ ಬಳಿಗೆ ಸಮಾಧಾನಕ್ಕಾಗಿಯೂ ಆಶೀರ್ವದಿಸುವುದಕ್ಕಾಗಿಯೂ ಕಳುಹಿಸಿದನು; ಯಾಕೆಂದರೆ ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದನು. ಹದದೆಜರನು ತೋವನೊಂದಿಗೆ ಯುದ್ಧ ಮಾಡಿದ್ದನು. ಹದೋರಾಮನು ಬೆಳ್ಳಿಬಂಗಾರಗಳ ಮತ್ತು ತಾಮ್ರಗಳ ವಸ್ತುಗಳನ್ನು ದಾವೀದನಿಗೆ ಕೊಟ್ಟನು. 11 ದಾವೀದ ರಾಜನು ಅವುಗಳನ್ನು ಶುದ್ಧೀಕರಿಸಿ ಯೆಹೋವನಿಗೆ ಪ್ರತಿಷ್ಠಿಸಿದನು. ಅದೇ ರೀತಿಯಾಗಿ ಎದೋಮ್ಯರಿಂದ, ಮೋವಾಬ್ಯರಿಂದ, ಫಿಲಿಷ್ಟಿಯರಿಂದ, ಅಮಾಲೇಕ್ಯರಿಂದ ಮತ್ತು ಅಮ್ಮೋನಿಯರಿಂದ ತೆಗೆದುಕೊಂಡಿದ್ದ ಬೆಳ್ಳಿಬಂಗಾರದ ವಸ್ತುಗಳನ್ನು ಶುದ್ಧಿಮಾಡಿ ದೇವರಿಗೆ ಪ್ರತಿಷ್ಠಿಸಿದನು.

12 ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಒಮ್ಮೆ ಹದಿನೆಂಟು ಸಾವಿರ ಮಂದಿ ಎದೋಮ್ಯರನ್ನು ಕೊಂದುಹಾಕಿದನು. 13 ಅಬ್ಷೈಯು ಎದೋಮಿನಲ್ಲಿ ಕೋಟೆಯನ್ನು ಕಟ್ಟಿ ಎದೋಮ್ಯರೆಲ್ಲರನ್ನು ದಾವೀದನ ಸೇವಕರನ್ನಾಗಿ ಮಾಡಿದನು. ದಾವೀದನು ಹೋದಕಡೆಗಳಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.

ದಾವೀದನ ಮುಖ್ಯಾಧಿಕಾರಿಗಳು

14 ಇಸ್ರೇಲರೆಲ್ಲರಿಗೆ ಅರಸನಾಗಿದ್ದ ದಾವೀದನು ಪಕ್ಷಪಾತವಿಲ್ಲದೆ ನ್ಯಾಯತೀರಿಸುತ್ತಿದ್ದನು. 15 ಚೆರೂಯಳ ಮಗನಾದ ಯೋವಾಬನು ಅವನ ಪ್ರಧಾನ ಸೇನಾಪತಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಲೇಖಕನಾಗಿದ್ದು ದಾವೀದನ ಚರಿತ್ರೆಯನ್ನು ಬರೆದಿಟ್ಟನು. 16 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಬೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಲೇಖಕನಾಗಿದ್ದನು. 17 ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳಿಗೆ ಬೆನಾಯನು ಅಧಿಕಾರಿಯಾಗಿದ್ದನು. ಬೆನಾಯನು ಯೆಹೋಯಾದನ ಮಗ. ದಾವೀದನ ಗಂಡುಮಕ್ಕಳು ಮುಖ್ಯ ಸ್ಥಾನಗಳಲ್ಲಿದ್ದು ದಾವೀದನ ಸೇವೆಮಾಡುತ್ತಿದ್ದರು.

ಯೋಹಾನ 7:28-53

28 ಯೇಸುವು ದೇವಾಲಯದಲ್ಲಿ ಇನ್ನೂ ಉಪದೇಶಿಸುತ್ತಾ, “ಹೌದು, ನಿಮಗೆ ನನ್ನ ಬಗ್ಗೆ ಗೊತ್ತಿದೆ, ನಾನು ಎಲ್ಲಿಂದ ಬಂದೆನೆಂಬುದೂ ನಿಮಗೆ ತಿಳಿದಿದೆ. ಆದರೆ ನಾನು ಬಂದಿರುವುದು ನನ್ನ ಸ್ವಂತ ಅಧಿಕಾರದಿಂದಲ್ಲ. ಸತ್ಯಸ್ವರೂಪನು ನನ್ನನ್ನು ಕಳುಹಿಸಿದ್ದಾನೆ. ನಿಮಗೆ ಆತನು ಗೊತ್ತಿಲ್ಲ. 29 ಆದರೆ ನಾನು ಆತನನ್ನು ಬಲ್ಲೆನು. ನಾನು ಆತನಿಂದಲೇ ಬಂದೆನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

30 ಇದನ್ನು ಕೇಳಿ ಜನರು ಆತನನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸುವಿನ ಮೇಲೆ ಕೈಹಾಕಲು ಯಾರಿಗೂ ಸಾಧ್ಯವಿರಲಿಲ್ಲ, ಏಕೆಂದರೆ ಯೇಸುವನ್ನು ಕೊಲ್ಲಲು ಇನ್ನೂ ಸರಿಯಾದ ಸಮಯ ಬಂದಿರಲಿಲ್ಲ. 31 ಆದರೆ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅವರು, “ಕ್ರಿಸ್ತನು ಬರುತ್ತಾನೆಂದು ನಾವು ಎದುರು ನೋಡುತ್ತಿದ್ದೇವೆ. ಕ್ರಿಸ್ತನು ಬಂದಾಗ, ಈ ಮನುಷ್ಯನು (ಯೇಸು) ಮಾಡಿರುವುದಕ್ಕಿಂತಲೂ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೇ? ಇಲ್ಲ! ಆದ್ದರಿಂದ ಈತನೇ ಕ್ರಿಸ್ತನಿರಬೇಕು” ಎಂದರು.

ಯೇಸುವನ್ನು ಬಂಧಿಸಲು ಯೆಹೂದ್ಯರ ಪ್ರಯತ್ನ

32 ಯೇಸುವಿನ ಬಗ್ಗೆ ಜನರು ಹೇಳುತ್ತಿದ್ದ ಈ ಸಂಗತಿಗಳನ್ನು ಫರಿಸಾಯರು ಕೇಳಿದರು. ಆದ್ದರಿಂದ ಮಹಾಯಾಜಕರು ಮತ್ತು ಫರಿಸಾಯರು ಯೇಸುವನ್ನು ಬಂಧಿಸುವುದಕ್ಕಾಗಿ ದೇವಾಲಯದ ಸಿಪಾಯಿಗಳಲ್ಲಿ ಕೆಲವರನ್ನು ಕಳುಹಿಸಿದರು. 33 ಆಗ ಯೇಸು, “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿರುತ್ತೇನೆ. ಬಳಿಕ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತೇನೆ. 34 ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.

35 ಯೆಹೂದ್ಯರು, “ಇವನನ್ನು ನಾವು ಕಂಡುಕೊಳ್ಳಲಾಗದಂತೆ ಇವನು ಎಲ್ಲಿಗೆ ಹೋಗುವನು? ನಮ್ಮವರು ವಾಸವಾಗಿರುವ ಗ್ರೀಕ್ ಜನರ ಪಟ್ಟಣಗಳಿಗೆ ಹೋಗಿ ಗ್ರೀಕರಿಗೆ ಉಪದೇಶಿಸುವನೇ? 36 ಇವನು (ಯೇಸು), ‘ನೀವು ನನ್ನನ್ನು ಹುಡುಕುವಿರಿ, ಆದರೆ ನೀವು ನನ್ನನ್ನು ಕಂಡುಕೊಳ್ಳುವುದಿಲ್ಲ’ ಎನ್ನುತ್ತಾನೆ. ಅಲ್ಲದೆ ಇವನು, ‘ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎನ್ನುತ್ತಾನೆ. ಇದರರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಪವಿತ್ರಾತ್ಮನ ಬಗ್ಗೆ ಉಪದೇಶ

37 ಹಬ್ಬದ ಕೊನೆಯ ದಿನ ಬಂದಿತು. ಅದು ಅತ್ಯಂತ ಮುಖ್ಯವಾದ ದಿನವಾಗಿತ್ತು. ಅಂದು ಯೇಸು ನಿಂತುಕೊಂಡು, “ಯಾವನಿಗಾದರೂ ಬಾಯಾರಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನಲ್ಲಿ ನಂಬಿಕೆ ಇಡುವವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುತ್ತವೆ. ಪವಿತ್ರ ಗ್ರಂಥವು ತಿಳಿಸುವುದು ಇದನ್ನೇ” ಎಂದು ಗಟ್ಟಿಯಾಗಿ ಹೇಳಿದನು. 39 ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮನನ್ನು ಕುರಿತು ಹೇಳಿದನು. ಆತನು ಇನ್ನೂ ತನ್ನ ಮಹಿಮೆಯನ್ನು ಹೊಂದಿಲ್ಲದಿದ್ದ ಕಾರಣ ಪವಿತ್ರಾತ್ಮನು ಇನ್ನೂ ಬಂದಿರಲಿಲ್ಲ.

ಯೇಸುವಿನ ಬಗ್ಗೆ ಜನರ ವಾದವಿವಾದ

40 ಈ ಸಂಗತಿಗಳನ್ನು ಕೇಳಿದ ಜನರಲ್ಲಿ ಕೆಲವರು, “ಈ ಮನುಷ್ಯನು ನಿಜವಾಗಿಯೂ ಪ್ರವಾದಿ” ಎಂದರು.

41 “ಆತನೇ ಕ್ರಿಸ್ತನು” ಎಂದು ಇನ್ನು ಕೆಲವರು ಹೇಳಿದರು.

ಮತ್ತೆ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದಿಲ್ಲ. 42 ಕ್ರಿಸ್ತನು ದಾವೀದನ ಕುಟುಂಬದವನೆಂತಲೂ ದಾವೀದನು ವಾಸಿಸಿದ ಬೆತ್ಲೆಹೇಮ್ ಊರಿನಿಂದ ಆತನು ಬರುತ್ತಾನೆಂತಲೂ ಪವಿತ್ರ ಗ್ರಂಥವು ತಿಳಿಸುತ್ತದೆ” ಎಂದರು. 43 ಹೀಗೆ ಯೇಸುವಿನ ಕುರಿತು ಜನರಲ್ಲಿ ಭೇದ ಉಂಟಾಯಿತು. 44 ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಬಂಧಿಸಲು ಯಾರೂ ಪ್ರಯತ್ನಿಸಲಿಲ್ಲ.

ಯೆಹೂದ್ಯನಾಯಕರ ಅಪನಂಬಿಕೆ

45 ದೇವಾಲಯದ ಸಿಪಾಯಿಗಳು ಹಿಂತಿರುಗಿದಾಗ, ಮಹಾಯಾಜಕರು ಮತ್ತು ಫರಿಸಾಯರು ಅವರಿಗೆ, “ನೀವು ಅವನನ್ನು ಏಕೆ ಹಿಡಿದುಕೊಂಡು ಬರಲಿಲ್ಲ?” ಎಂದು ಕೇಳಿದರು.

46 ದೇವಾಲಯದ ಸಿಪಾಯಿಗಳು, “ಈತನಂತೆ ಆಶ್ಚರ್ಯಕರವಾದ ಸಂಗತಿಗಳನ್ನು ಬೇರೆ ಯಾರೂ ಹೇಳಿಲ್ಲ” ಎಂದು ಉತ್ತರಕೊಟ್ಟರು.

47 ಫರಿಸಾಯರು, “ಹಾಗಾದರೆ, ಯೇಸು ನಿಮ್ಮನ್ನು ಸಹ ಮರುಳುಗೊಳಿಸುತ್ತಿದ್ದಾನೆ! 48 ನಾಯಕರಲ್ಲಿ ಯಾರಾದರೂ ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದಾರೋ? ಇಲ್ಲ! ಫರಿಸಾಯರಾದ ನಮ್ಮಲ್ಲಿ ಯಾರಾದರೂ ಆತನನ್ನು ನಂಬಿದ್ದಾರೋ? ಇಲ್ಲ! 49 ಆದರೆ ಹೊರಗಿನ ಜನರಿಗೆ ಧರ್ಮಶಾಸ್ತ್ರದ ಬಗ್ಗೆ ಏನೂ ಗೊತ್ತಿಲ್ಲ. ಅವರು ದೇವರ ಶಾಪಕ್ಕೆ ಒಳಗಾಗಿದ್ದಾರೆ!” ಎಂದು ಉತ್ತರಕೊಟ್ಟರು.

50 ಆದರೆ ಆ ಗುಂಪಿನಲ್ಲಿ ನಿಕೊದೇಮನು ಇದ್ದನು. ಮೊದಲೊಮ್ಮೆ ಯೇಸುವನ್ನು ನೋಡಲು ಹೋಗಿದ್ದವನು ಇವನೇ. 51 ನಿಕೊದೇಮನು, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ ತೀರ್ಪು ನೀಡಲು ನಮ್ಮ ಧರ್ಮಶಾಸ್ತ್ರವು ಸಮ್ಮತಿಸುವುದಿಲ್ಲ. ಆತನು ಮಾಡಿರುವುದನ್ನು ನಾವು ತಿಳಿದುಕೊಳ್ಳುವವರೆಗೆ ಆತನಿಗೆ ತೀರ್ಪು ಮಾಡಲಾಗದು” ಎಂದು ಹೇಳಿದನು.

52 ಯೆಹೂದ್ಯನಾಯಕರು, “ನೀನೂ ಗಲಿಲಾಯದವನೋ? ಪವಿತ್ರ ಗ್ರಂಥವನ್ನು ಅಧ್ಯಯನಮಾಡು. ಗಲಿಲಾಯದಿಂದ ಯಾವ ಪ್ರವಾದಿಯೂ ಬರುವುದಿಲ್ಲವೆಂಬುದು ಆಗ ನಿನಗೆ ತಿಳಿಯುತ್ತದೆ” ಎಂದು ಉತ್ತರಕೊಟ್ಟರು. 53 ಬಳಿಕ ಅವರೆಲ್ಲರೂ ತಮ್ಮತಮ್ಮ ಮನೆಗಳಿಗೆ ಹೊರಟುಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International