Old/New Testament
ಪವಿತ್ರ ಕಾರ್ಯಕ್ಕಾಗಿ ದೇಶದ ವಿಭಜನೆ
45 “ನೀನು ಚೀಟುಹಾಕಿ ಇಸ್ರೇಲರ ಕುಲಗಳಿಗನುಸಾರವಾಗಿ ದೇಶವನ್ನು ವಿಂಗಡಿಸಬೇಕು. ಆ ಸಮಯದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿಡಬೇಕು. ಅದು ಯೆಹೋವನಿಗೋಸ್ಕರ ಮೀಸಲಾಗಿಡಲ್ಪಟ್ಟದ್ದು. ಆ ಪ್ರದೇಶವು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಹತ್ತು ಸಾವಿರ ಮೊಳ ಅಗಲವಿರುವದು.[a] ಈ ಎಲ್ಲಾ ಜಾಗವು ಪರಿಶುದ್ಧವಾದದ್ದು. 2 ಆ ಪ್ರದೇಶದ ಮಧ್ಯ ಭಾಗದಲ್ಲಿ ಐನೂರು ಮೊಳ ಚೌಕದ ಸ್ಥಳ ದೇವಾಲಯಕ್ಕೆ ಮೀಸಲಾಗಿದೆ. ಈ ಭಾಗದ ಪರಿಧಿಯ ಉದ್ದಕ್ಕೂ ಐವತ್ತು ಮೊಳ ಅಗಲದ ಜಾಗವಿರುವದು. 3-4 ಪವಿತ್ರವಾದ ಪ್ರದೇಶದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಸ್ಥಳವು ಯಾಜಕರಿಗೆ ಸೇರಬೇಕು. ಅವರು ಯೆಹೋವನ ಸನ್ನಿಧಿಗೆ ಹೋಗಿ ಆತನ ಪವಿತ್ರಾಲಯದಲ್ಲಿ ಆತನ ಸೇವೆ ಮಾಡುವುದರಿಂದ ಪವಿತ್ರ ಪ್ರದೇಶದ ಈ ಭಾಗವು ಅವರಿಗೋಸ್ಕರವಾಗಿಯೂ ಅವರ ಮನೆಗಳಿಗೋಸ್ಕರವಾಗಿಯೂ ಇರಬೇಕು. ಆಲಯಕ್ಕಾಗಿ ಮೀಸಲಾದ ಐನೂರು ಮೊಳ ಚೌಕವಾದ ಜಾಗವು ಈ ಪವಿತ್ರ ಪ್ರದೇಶದೊಳಗಿರಬೇಕು. ಆ ಸ್ಥಳವು ಮಹಾ ಪವಿತ್ರವಾದ ಸ್ಥಳ. ಯಾಕೆಂದರೆ ಅತ್ಯಂತ ಪವಿತ್ರವಾದ ಆಲಯವು ಅಲ್ಲಿರುತ್ತದೆ. 5 ಪವಿತ್ರ ಪ್ರದೇಶದ ಉಳಿದರ್ಧ ಭಾಗವು ಅಂದರೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಜಾಗವು ಲೇವಿಯರಿಗೆ ಮೀಸಲಾಗಿದೆ. ಅವರು ವಾಸಿಸುವ ಪಟ್ಟಣವು ಈ ಪ್ರದೇಶದಲ್ಲಿರುತ್ತದೆ.[b]
6 “ಪವಿತ್ರ ಪ್ರದೇಶ ಭಾಗದ ಪಕ್ಕದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಐದು ಸಾವಿರ ಮೊಳ ಅಗಲದ ಪ್ರದೇಶ ಭಾಗವು ಸಹ ಇರುತ್ತದೆ. ಇಸ್ರೇಲಿನ ಉಳಿದೆಲ್ಲ ಜನರಿಗೂ ಈ ಪ್ರದೇಶ ಭಾಗವು ಪಟ್ಟಣವಾಗಿರುತ್ತದೆ. 7 ಅಧಿಪತಿಗೆ ಪವಿತ್ರ ಪ್ರದೇಶ ಭಾಗದ ಎರಡು ಕಡೆಗಳಲ್ಲೂ ಭೂಭಾಗಗಳಿರುವುದು. ಅಂದರೆ ಪವಿತ್ರ ಪ್ರದೇಶಕ್ಕೆ ಪಶ್ಚಿಮದಲ್ಲಿರುವ ಪಶ್ಚಿಮ ಭಾಗ ಮತ್ತು ಇಸ್ರೇಲರ ಪಟ್ಟಣದ ಪೂರ್ವ ಭೂಭಾಗ. ಇದು ಪವಿತ್ರ ಪ್ರದೇಶದ ಪೂರ್ವಭಾಗದಲ್ಲಿದೆ. ಅಧಿಪತಿಯ ಪಶ್ಚಿಮ ಭಾಗವು ಪವಿತ್ರ ಪ್ರದೇಶ ಭಾಗದ ಪಶ್ಚಿಮದ ಅಂಚಿನಿಂದ ಮೆಡಿಟರೇನಿಯನ್ ಸಮುದ್ರದವರೆಗೂ ವಿಸ್ತರಿಸಿದೆ. ಅಧಿಪತಿಯ ಪೂರ್ವ ಪ್ರದೇಶ ಭಾಗವು ಪೂರ್ವದಿಕ್ಕಿನ ಪಟ್ಟಣದ ಅಂಚಿನಿಂದ ಪೂರ್ವದ ಗಡಿಯವರೆಗೂ ವಿಸ್ತರಿಸಿದೆ. 8 ಭೂಪ್ರದೇಶದ ಈ ಭಾಗವು ಅಧಿಪತಿಗೆ ಸೇರಿದೆ. ಹೀಗೆ, ಹಿಂದಿನ ಕಾಲದ ಅಧಿಪತಿಗಳು ಮಾಡಿದಂತೆ ಈ ಅಧಿಪತಿಯು ಜನರನ್ನು ಹಿಂಸಿಸಿ ಅವರ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ಉಳಿದ ಭೂಭಾಗವು ಇಸ್ರೇಲಿನ ಇತರ ಕುಲಗಳವರಿಗೆ ಯಾವಾಗಲೂ ಸೇರಿರುತ್ತದೆ.”
9 ಇದು ನನ್ನ ಒಡೆಯನಾದ ಯೆಹೋವನ ನುಡಿಗಳು: “ಇಸ್ರೇಲ್ ಜನರನ್ನು ಆಳುವವರೇ, ಅವರನ್ನು ಕಠಿಣವಾಗಿ ಆಳುವದನ್ನು ನಿಲ್ಲಿಸಿರಿ. ಅವರನ್ನು ಸುಲುಕೊಳ್ಳುವದನ್ನು ನಿಲ್ಲಿಸಿರಿ. ನ್ಯಾಯದಿಂದಿದ್ದು ಒಳ್ಳೆಯದನ್ನೆ ಮಾಡಿರಿ. ಅವರನ್ನು ಅವರ ಮನೆಗಳಿಂದ ಹೊರಡಿಸುವದನ್ನು ನಿಲ್ಲಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
10 “ಜನರನ್ನು ಮೋಸಪಡಿಸುವದನ್ನು ನಿಲ್ಲಿಸಿರಿ. ನ್ಯಾಯವಾದ ಅಳತೆಗಳನ್ನೂ ತ್ರಾಸುಗಳನ್ನೂ ಉಪಯೋಗಿಸಿರಿ. 11 ಏಫಾ ಮತ್ತು ಬತ್ ಇವೆರಡು ಒಂದೇ ಅಳತೆಯುಳ್ಳವುಗಳಾಗಿರಬೇಕು. ಬತ್ ಮತ್ತು ಏಫಾ ಇವೆರಡೂ ಹೋಮೆರಿನ ಹತ್ತನೇ ಒಂದು ಪಾಲು. ಆ ಅಳತೆಗಳು ಹೋಮೆರಿಗೆ ಹೊಂದಿಕೊಂಡಿರಬೇಕು. 12 ಒಂದು ಶೆಕೆಲ್ ಇಪ್ಪತ್ತು ಗೆರಾ ಇರಬೇಕು. ಒಂದು ಮಿನವು ಅರವತ್ತು ಶೆಕೆಲ್ನಷ್ಟು ಇರಬೇಕು. ಅದು ಇಪ್ಪತ್ತು ಶೆಕೆಲ್ ಮತ್ತು ಇಪ್ಪತ್ತೈದು ಶೆಕೆಲ್ ಮತ್ತು ಹದಿನೈದು ಶೆಕೆಲ್ಗಳಿಗೆ ಸಮಾನವಾಗಿರಬೇಕು.
13 “ನೀವು ಸಮರ್ಪಿಸಬೇಕಾದ ವಿಶೇಷ ಕಾಣಿಕೆಯಿದು:
ಒಂದು ಹೋಮೆರ್ ಗೋಧಿಗೆ 1/6 ಏಫಾ ಗೋಧಿ ಕೊಡಬೇಕು.
ಒಂದು ಹೋಮರ್ ಬಾರ್ಲಿಗೆ 1/6 ಏಫಾ ಬಾರ್ಲಿ ಕೊಡಬೇಕು;
14 ಒಂದು ಕೋರ್ ಆಲೀವ್ ಎಣ್ಣೆಗೆ 1/10 ಬತ್ ಆಲಿವ್ ಎಣ್ಣೆಯನ್ನು ಕೊಡಬೇಕು;
ಹತ್ತು ಬತ್ ಅಂದರೆ ಒಂದು ಹೋಮೆರ್, ಹತ್ತು ಬತ್ ಅಂದರೆ ಒಂದು ಕೋರ್ ಎಂಬುದನ್ನು ಜ್ಞಾಪಕದಲ್ಲಿಡಿರಿ.
15 ಇಸ್ರೇಲಿನ ನೀರಾವರಿಯ ಹುಲ್ಲುಗಾವಲಿನ ಇನ್ನೂರು ಕುರಿಗಳಲ್ಲಿ
ಒಂದು ಕುರಿಯನ್ನು ಕೊಡಬೇಕು.
“ಧಾನ್ಯನೈವೇದ್ಯಗಳಿಗೂ, ಸರ್ವಾಂಗಹೋಮಗಳಿಗೂ ಸಮಾಧಾನಯಜ್ಞಗಳಿಗೂ ಈ ಕಾಣಿಕೆಗಳನ್ನು ಕೊಡಬೇಕು. ಈ ಕಾಣಿಕೆಗಳು ಜನರನ್ನು ಶುದ್ಧಮಾಡುವವು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
16 “ಇಸ್ರೇಲಿನಲ್ಲಿರುವ ಪ್ರತಿಯೊಬ್ಬನು ಈ ಕಾಣಿಕೆಯನ್ನು ಇಸ್ರೇಲಿನ ಅಧಿಪತಿಗೆ ಕೊಡಬೇಕು. 17 ಆದರೆ ವಿಶೇಷವಾದ ಹಬ್ಬದ ಆಚರಣೆಗಳಿಗಾಗಿ ಅಧಿಪತಿಯು ಕಾಣಿಕೆಗಳನ್ನು ಕೊಡಲೇಬೇಕು. ಅಧಿಪತಿಯು ಪಾಪಪರಿಹಾರಕಯಜ್ಞಗಳನ್ನೂ ಧಾನ್ಯಾರ್ಪಣೆಗಳನ್ನೂ ಪಾನದ್ರವ್ಯಾರ್ಪಣೆಗಳನ್ನೂ ಕೊಡಬೇಕು. ಈ ಕಾಣಿಕೆಗಳನ್ನು ಪ್ರತಿಯೊಂದು ಹಬ್ಬದ ದಿನದಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸಬ್ಬತ್ ದಿನದಲ್ಲಿಯೂ ಇಸ್ರೇಲ್ ಜನಾಂಗದ ಎಲ್ಲಾ ವಿಶೇಷ ಹಬ್ಬಗಳಲ್ಲಿಯೂ ಅರ್ಪಿಸಬೇಕು. ಇಸ್ರೇಲ್ ಸಂತತಿಯ ಜನರನ್ನು ಶುದ್ಧೀಕರಿಸುವುದಕ್ಕಾಗಿ ಅಧಿಪತಿಯು ಈ ಕಾಣಿಕೆಗಳನ್ನು ಕೊಡಬೇಕು.”
18 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ: “ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಪೂರ್ಣಾಂಗವಾದ ಒಂದು ಎಳೇ ಹೋರಿಯನ್ನು ತೆಗೆದುಕೊಂಡು ಅದನ್ನು ಆಲಯದ ಶುದ್ಧೀಕರಣಕ್ಕಾಗಿ ಉಪಯೋಗಿಸಬೇಕು. 19 ಪಾಪಪರಿಹಾರಕಯಜ್ಞಕ್ಕೆ ಬಲಿಯರ್ಪಿಸಿದ್ದ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಅದನ್ನು ಆಲಯದ ಬಾಗಿಲಿನ ನಿಲುವು ಕಂಬಗಳಿಗೂ, ಯಜ್ಞವೇದಿಕೆಯ ಸಜ್ಜದ ನಾಲ್ಕು ಮೂಲೆಗಳಿಗೂ ಮತ್ತು ಒಳಗಿನ ಪ್ರಾಕಾರದ ಪ್ರವೇಶ ದ್ವಾರದ ಎರಡು ನಿಲುವು ಕಂಬಗಳಿಗೂ ಹಚ್ಚಬೇಕು. 20 ಯಾರಾದರೂ ಆಕಸ್ಮಿಕವಾಗಿ ಅಥವಾ ತಿಳಿಯದೆ ಪಾಪಮಾಡಿದ್ದಲ್ಲಿ, ಹೀಗೆಯೇ ತಿಂಗಳಿನ ಏಳನೇ ದಿವಸದಲ್ಲಿಯೂ ಮಾಡಬೇಕು. ಈ ರೀತಿಯಾಗಿ ಆಲಯವನ್ನು ಶುದ್ಧೀಕರಿಸುವಿರಿ.
ಪಸ್ಕಹಬ್ಬದ ಸಮಯದಲ್ಲಿ ಕಾಣಿಕೆ ಸಮರ್ಪಣೆ
21 “ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ನೀವು ಪಸ್ಕಹಬ್ಬ ಆಚರಿಸಬೇಕು. ಹುಳಿ ಇಲ್ಲದ ರೊಟ್ಟಿಯ ಹಬ್ಬವು ಈ ಸಮಯದಲ್ಲಿ ಪ್ರಾರಂಭವಾಗುವದು. ಆ ಹಬ್ಬವು ಏಳು ದಿವಸಗಳ ತನಕ ನಡೆಯುವದು. 22 ಆ ಸಮಯದಲ್ಲಿ ಪ್ರಜೆಯನ್ನಾಳುವ ರಾಜನು ತನಗೋಸ್ಕರವಾಗಿಯೂ ಇಸ್ರೇಲಿನ ಎಲ್ಲಾ ಜನರಿಗೋಸ್ಕರವಾಗಿಯೂ ಒಂದು ಹೋರಿಯನ್ನು ಬಲಿಯರ್ಪಿಸಬೇಕು. ಅದು ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಲ್ಪಡುವದು. 23 ಹಬ್ಬದ ಏಳು ದಿವಸಗಳಲ್ಲಿಯೂ ರಾಜನು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಬೇಕು. 24 ರಾಜನು ಧಾನ್ಯಸಮರ್ಪಣೆಗಾಗಿ ಒಂದು ಏಫಾ ಜವೆಗೋಧಿಯನ್ನು ಹೋರಿಯೊಂದಿಗೂ ಒಂದು ಏಫಾ ಜವೆಗೋಧಿಯನ್ನು ಟಗರಿನೊಂದಿಗೂ ಕೊಡಬೇಕು. ಅದರೊಂದಿಗೆ ರಾಜನು ಪ್ರತೀ ಒಂದು ಏಫಾ ಜವೆಗೋಧಿಯೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು. 25 ಪರ್ಣಶಾಲೆಗಳ ಹಬ್ಬದ ಏಳು ದಿವಸಗಳಲ್ಲೂ ರಾಜನು ಹಾಗೆಯೇ ಮಾಡಬೇಕು. ಈ ಹಬ್ಬವು ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪ್ರಾರಂಭವಾಗುವದು. ಈ ಕಾಣಿಕೆಯು ಸರ್ವಾಂಗಹೋಮ, ಪಾಪಪರಿಹಾರಕಯಜ್ಞ, ಧಾನ್ಯಸಮರ್ಪಣೆ ಮತ್ತು ಎಣ್ಣೆಯ ಸಮರ್ಪಣೆಗಳಿಗಾಗಿ ಅವೆ.”
ರಾಜನೂ ಹಬ್ಬಗಳೂ
46 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಳಗಿನ ಪ್ರಾಕಾರದ ಪೂರ್ವ ದಿಕ್ಕಿನ ದ್ವಾರವು ಆರು ಕೆಲಸದ ದಿವಸಗಳಲ್ಲಿ ಮುಚ್ಚಲ್ಪಡುವದು. ಅದು ಸಬ್ಬತ್ ದಿವಸಗಳಲ್ಲಿಯೂ ಅಮಾವಾಸ್ಯೆಯ ದಿವಸಗಳಲ್ಲಿಯೂ ತೆರೆಯಲ್ಪಡುವದು. 2 ಅಧಿಪತಿಯು ಆ ದ್ವಾರದ ಕೈಸಾಲೆಯೊಳಗೆ ಪ್ರವೇಶಿಸಿ ಅದರ ನಿಲುವು ಕಂಬದ ಬಳಿಯಲ್ಲಿ ನಿಲ್ಲುವನು. ಅಧಿಪತಿಯು ಕೊಡುವ ಸರ್ವಾಂಗಹೋಮವನ್ನು ಮತ್ತು ಸಮಾಧಾನಯಜ್ಞವನ್ನು ಆಗ ಯಾಜಕರು ಸಮರ್ಪಿಸುವರು. ಅಧಿಪತಿಯು ಆ ದ್ವಾರದ ಮುಂಭಾಗದಲ್ಲಿ ಆರಾಧಿಸುವನು. ಅನಂತರ ಅವನು ಹೊರಗೆ ಹೋಗುವನು. ಆ ದ್ವಾರದ ಕದಗಳು ಸಾಯಂಕಾಲದ ತನಕ ತೆರೆದೇ ಇರುವವು. 3 ಸಬ್ಬತ್ ಮತ್ತು ಅಮಾವಾಸ್ಯೆ ದಿವಸಗಳಲ್ಲಿ ಸಾಮಾನ್ಯ ಜನರೂ ಅದೇ ದ್ವಾರದ ಬಳಿ ಆರಾಧಿಸುವರು.
4 “ಸಬ್ಬತ್ ದಿವಸದಲ್ಲಿ ರಾಜನು ಯೆಹೋವನಿಗೆ ಸರ್ವಾಂಗಹೋಮವನ್ನು ಸಮರ್ಪಿಸುವನು. ಅವನು ಅದಕ್ಕಾಗಿ ನಿಷ್ಕಳಂಕವಾದ ಆರು ಕುರಿಗಳನ್ನೂ ನಿಷ್ಕಳಂಕವಾದ ಒಂದು ಟಗರನ್ನೂ ಕೊಡಬೇಕು. 5 ಟಗರಿನೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಗಾಗಿ ಕೊಡಬೇಕು. ಕುರಿಗಳೊಂದಿಗೆ ಧಾನ್ಯಸಮರ್ಪಣೆಗಾಗಿ ರಾಜನು ತನ್ನ ಇಷ್ಟಬಂದ ಹಾಗೆ ಕೊಡಬಹುದು. ಆದರೆ ಪ್ರತೀ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಬೇಕು.
6 “ಅಮಾವಾಸ್ಯೆ ದಿವಸ ಅವನು ಒಂದು ಎಳೇ ಪೂರ್ಣಾಂಗವಾದ ಹೋರಿಯನ್ನು ಸಮರ್ಪಿಸಬೇಕು. ಅದರ ಜೊತೆಗೆ ಆರು ಪೂರ್ಣಾಂಗವಾದ ಕುರಿಗಳನ್ನೂ ಒಂದು ಪೂರ್ಣಾಂಗವಾದ ಟಗರನ್ನೂ ಸಮರ್ಪಿಸಬೇಕು. 7 ರಾಜನು ಒಂದು ಏಫಾ ಧಾನ್ಯವನ್ನು ಹೋರಿಯೊಂದಿಗೂ ಇನ್ನೊಂದು ಏಫಾ ಧಾನ್ಯವನ್ನು ಟಗರಿನೊಂದಿಗೂ ಕೊಡಬೇಕು. ಆದರೆ ಅಧಿಪತಿಯು ಕುರಿಗಳೊಂದಿಗೆ ತನಗಿಷ್ಟವಾದಷ್ಟು ಧಾನ್ಯಸಮರ್ಪಣೆಯನ್ನು ಕೊಡಬಹುದು. ಆದರೆ ಅವನು ಪ್ರತೀ ಒಂದು ಏಫಾ ಧಾನ್ಯಕ್ಕೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಲೇಬೇಕು.
8 “ಅಧಿಪತಿಯು ಆಲಯದ ಸಂಕೀರ್ಣ ಪ್ರವೇಶಿಸುವಾಗ ಅವನು ಪೂರ್ವದಿಕ್ಕಿನ ದ್ವಾರದಿಂದ ಪ್ರವೇಶಿಸಬೇಕು. ಮತ್ತು ಅದರ ಮೂಲಕವೇ ಅವನು ಹೊರಗೆ ಹೋಗಬೇಕು.
9 “ಸಾಮಾನ್ಯ ಜನರು ವಿಶೇಷ ಹಬ್ಬದ ದಿವಸಗಳಲ್ಲಿ ಯೆಹೋವನನ್ನು ಸಂಧಿಸಲು ಬರುವಾಗ ಉತ್ತರ ದ್ವಾರದಿಂದ ಬರುವವರು ದಕ್ಷಿಣ ದ್ವಾರದ ಮೂಲಕ ಹೊರಗೆ ಹೋಗಬೇಕು. ದಕ್ಷಿಣದ ದ್ವಾರದಿಂದ ಒಳ ಪ್ರವೇಶಿಸುವವನು ಉತ್ತರ ದ್ವಾರದ ಮೂಲಕ ಹೊರಗೆ ಹೋಗಬೇಕು. ಯಾರೂ ಬಂದ ದಾರಿಯಿಂದ ಹಿಂದೆ ಹೋಗಬಾರದು. ಪ್ರತಿಯೊಬ್ಬನೂ ನೇರವಾಗಿ ಮುಂದಕ್ಕೆ ಹೋಗಬೇಕು. 10 ರಾಜನು ತನ್ನ ಜನರೊಂದಿಗೆ ಇರಬೇಕು. ಜನರು ಒಳಗೆ ಪ್ರವೇಶ ಮಾಡುವಾಗ ಅವನೂ ಅವರ ಜೊತೆಯಲ್ಲಿರಬೇಕು. ಅವರು ಹೊರಗೆ ಹೋಗುವಾಗಲೂ ಅವನು ಅವರ ಜೊತೆಯಲ್ಲಿರಬೇಕು.
11 “ಹಬ್ಬದ ದಿವಸಗಳಲ್ಲಿ ಮತ್ತು ಬೇರೆ ವಿಶೇಷ ದಿವಸಗಳಲ್ಲಿ ಪ್ರತಿ ಎಳೇ ಹೋರಿಯೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಯನ್ನು ಸಮರ್ಪಿಸಬೇಕು. ಮತ್ತು ಪ್ರತಿ ಒಂದು ಟಗರಿನೊಂದಿಗೆ ಒಂದು ಏಫಾ ಧಾನ್ಯವನ್ನು ಸಮರ್ಪಿಸಬೇಕು. ಕುರಿಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯವು ರಾಜನಿಗೆ ಇಷ್ಟದ ಪ್ರಕಾರ ಇರುವದು. ಅದರ ಜೊತೆಗೆ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು.
12 “ರಾಜನು ತನ್ನ ಇಚ್ಛೆಯ ಪ್ರಕಾರ ಯೆಹೋವನಿಗೆ ಸರ್ವಾಂಗಹೋಮ ಅಥವಾ ಸಮಾಧಾನಯಜ್ಞ ಅಥವಾ ಮನಃಪೂರ್ವಕವಾದ ಕಾಣಿಕೆಯನ್ನು ಸಮರ್ಪಿಸುವಾಗ ಅವನಿಗಾಗಿ ಪೂರ್ವದ ಬಾಗಿಲು ತೆಗೆಯಲ್ಪಡಬೇಕು. ಆದರೆ ಅವನು ಸಬ್ಬತ್ ದಿನದಂತೆ ತನ್ನ ಕಾಣಿಕೆಗಳನ್ನು ಸಮರ್ಪಿಸಿದ ನಂತರ ಅವನು ಹಿಂತಿರುಗಿದಾಗ ಪ್ರವೇಶ ದ್ವಾರವು ಮುಚ್ಚಲ್ಪಡಬೇಕು.
ದೈನಂದಿನ ಸಮರ್ಪಣೆ
13 “ನೀನು ಪ್ರತಿದಿನ ಮುಂಜಾನೆ ಒಂದು ವರ್ಷದ ಪೂರ್ಣಾಂಗವಾದ ಕುರಿಯನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. 14 ಪ್ರತಿ ಮುಂಜಾನೆ ನೀನು ಐದು ಸೇರು ಗೋಧಿಹಿಟ್ಟನ್ನೂ ಎರಡು ಸೇರು ಎಣ್ಣೆಯನ್ನೂ ಒಟ್ಟಾಗಿ ಬೆರೆಸಿ ಪ್ರತಿದಿನ ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸಬೇಕು. 15 ಹೀಗೆ ಅವರು ಶಾಶ್ವತವಾಗಿ ಕುರಿ, ಧಾನ್ಯ ಮತ್ತು ಎಣ್ಣೆಯನ್ನು ಪ್ರತೀ ಮುಂಜಾನೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು.”
ರಾಜನ ಸ್ವಾಸ್ತ್ಯದ ಬಗ್ಗೆ ಕಟ್ಟಳೆಗಳು
16 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ಒಬ್ಬ ರಾಜನು ತನ್ನ ಗಂಡುಮಕ್ಕಳಿಗೆ ತನ್ನ ಭೂಮಿಯ ಭಾಗವನ್ನು ಉಚಿತವಾಗಿ ಕೊಟ್ಟರೆ ಅದು ಅವನ ಗಂಡುಮಕ್ಕಳಿಗೆ ಸೇರುವದು. ಅದು ಅವರ ಆಸ್ತಿಯಾಗುವದು. 17 ಆದರೆ ಆ ರಾಜನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ದಾಸನಿಗೆ ಉಚಿತವಾಗಿ ಕೊಟ್ಟರೆ, ಆ ಭೂಮಿಯು ಬಿಡುಗಡೆ ಸಂವತ್ಸರದ ತನಕ ಮಾತ್ರವೇ ದಾಸನದ್ದಾಗಿರುವದು. ಅನಂತರ ಅದು ರಾಜನಿಗೆ ಹಿಂದೆ ಹೋಗುವದು. ರಾಜನ ಗಂಡುಮಕ್ಕಳು ಮಾತ್ರ ರಾಜನಿಂದ ಹೊಂದಿದ ಭೂಮಿಯನ್ನು ನಿತ್ಯಕಾಲಕ್ಕೂ ಅನುಭೋಗಿಸುವರು. 18 ರಾಜನು ತನ್ನ ಪ್ರಜೆಯ ಭೂಮಿಯನ್ನು ತನ್ನ ಉಪಯೋಗಕ್ಕೆಂದು ಬಲತ್ಕಾರದಿಂದ ಇಟ್ಟುಕೊಳ್ಳಬಾರದು ಅಥವಾ ತೆಗೆದುಕೊಳ್ಳಲೂಬಾರದು. ತನ್ನ ಸ್ವಂತ ಭೂಮಿಯಿಂದ ಪಾಲನ್ನು ತನ್ನ ಮಕ್ಕಳಿಗೆ ಕೊಡಬೇಕು. ಹೀಗೆ ನನ್ನ ಜನರು ತಮ್ಮ ಭೂಮಿಯನ್ನು ಕಳೆದುಕೊಳ್ಳುವದಿಲ್ಲ.”
ವಿಶೇಷ ಅಡಿಗೆಮನೆ
19 ಬಳಿಕ ಆ ಪುರುಷನು ನನ್ನನ್ನು ಮಹಾದ್ವಾರದ ಪಕ್ಕದಲ್ಲಿನ ಪ್ರವೇಶಮಾರ್ಗವಾಗಿ ಉತ್ತರದಲ್ಲಿರುವ ಯಾಜಕರ ಪವಿತ್ರ ಕೋಣೆಗಳಿಗೆ ಕರೆದುಕೊಂಡು ಹೋದನು. 20 ಅವನು ನನಗೆ ಹೇಳಿದ್ದೇನೆಂದರೆ, “ಈ ಸ್ಥಳದಲ್ಲಿ ಯಾಜಕರು ದೋಷಪರಿಹಾರಕ ಮತ್ತು ಪಾಪಪರಿಹಾರಕಯಜ್ಞದ ಮಾಂಸಗಳನ್ನು ಬೇಯಿಸುವರು. ಇದೇ ಸ್ಥಳದಲ್ಲಿ ಧಾನ್ಯಸಮರ್ಪಣೆಯ ಹಿಟ್ಟಿನಿಂದ ರೊಟ್ಟಿಯನ್ನು ಸುಡುವರು. ಇದನ್ನು ಇಲ್ಲಿಯೇ ಯಾಕೆ ಮಾಡುತ್ತಾರೆಂದರೆ ಅವರು ಹೊರಗಿನ ಪ್ರಾಕಾರದೊಳಗೆ ಆ ಪವಿತ್ರ ವಸ್ತುವನ್ನು ತರುವ ಅವಶ್ಯಕತೆ ಇರುವದಿಲ್ಲ. ಸಾರ್ವಜನಿಕರು ಕೂಡುವ ಸ್ಥಳದಲ್ಲಿ ಆ ಪವಿತ್ರ ವಸ್ತುವನ್ನು ತರಬಾರದು.”
21 ಆಮೇಲೆ ಅವನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ನಾಲ್ಕು ಮೂಲೆಗಳಿಗೆ ನನ್ನನ್ನು ಕರೆದುಕೊಂಡು ಹೋದನು. ವಿಶಾಲವಾದ ಪ್ರಾಕಾರದ ಪ್ರತೀ ಮೂಲೆಗಳಲ್ಲಿ ಇನ್ನೊಂದು ಚಿಕ್ಕ ಪ್ರಾಕಾರವಿರುವದನ್ನು ಕಂಡೆನು. 22 ಆ ನಾಲ್ಕು ಮೂಲೆಗಳಲ್ಲಿಯೂ ಗೋಡೆಗಳಿಂದ ಆವರಿಸಲ್ಪಟ್ಟಿದ್ದ ಒಂದು ಚಿಕ್ಕ ಪ್ರಾಕಾರವಿತ್ತು. ಈ ಪ್ರಾಕಾರದ ಉದ್ದ ನಲವತ್ತು ಮೊಳ ಮತ್ತು ಅಗಲ ಮೂವತ್ತು ಮೊಳ. ಈ ನಾಲ್ಕು ಚಿಕ್ಕ ಪ್ರಾಕಾರಗಳು ಒಂದೇ ಅಳತೆಯುಳ್ಳವುಗಳಾಗಿದ್ದವು. 23 ಇವುಗಳ ಸುತ್ತಲೂ ಇಟ್ಟಿಗೆಯ ಗೋಡೆ ಕಟ್ಟಲ್ಪಟ್ಟಿತ್ತು. ಈ ಗೋಡೆಯೊಳಗೆ ಅಡಿಗೆ ಮಾಡುವದಕ್ಕಾಗಿ ಸ್ಥಳವನ್ನು ಏರ್ಪಡಿಸಲಾಗಿತ್ತು. 24 ಅವನು ನನಗೆ ಹೇಳಿದ್ದೇನೆಂದರೆ, “ಆಲಯದ ಈ ಸ್ಥಳದಲ್ಲಿ ಸೇವೆಮಾಡುವ ಜನರು ಸಾಮಾನ್ಯ ಜನರ ಯಜ್ಞದ ಮಾಂಸವನ್ನು ಆ ಜನರಿಗಾಗಿ ಬೇಯಿಸುವರು.”
ಯೇಸು ನಮ್ಮ ಸಹಾಯಕ
2 ನನ್ನ ಪ್ರಿಯ ಮಕ್ಕಳೇ, ನೀವು ಪಾಪಗಳನ್ನು ಮಾಡದಿರಲೆಂದು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ ಯಾರಾದರೂ ಪಾಪವನ್ನು ಮಾಡಿದರೆ ನಮಗೆ ಸಹಾಯ ಮಾಡಲು ಯೇಸು ಕ್ರಿಸ್ತನಿದ್ದಾನೆ. ನೀತಿವಂತನಾಗಿರುವ ಆತನು ತಂದೆಯಾದ ದೇವರ ಬಳಿಯಲ್ಲಿದ್ದಾನೆ. 2 ನಮ್ಮ ಪಾಪಗಳ ನಿವಾರಣೆಗೂ ಎಲ್ಲಾ ಜನರ ಪಾಪಗಳ ನಿವಾರಣೆಗೂ ಯೇಸುವೇ ಮಾರ್ಗವಾಗಿದ್ದಾನೆ.
3 ದೇವರ ಆಜ್ಞೆಗಳಿಗೆ ನಾವು ವಿಧೇಯರಾಗಿದ್ದರೆ, ದೇವರ ಬಗ್ಗೆ ನಿಜವಾಗಿಯೂ ತಿಳಿದಿದ್ದೇವೆಂಬುದು ಖಚಿತವಾಗುತ್ತದೆ. 4 “ದೇವರನ್ನು ನಾನು ಬಲ್ಲೆನು” ಎಂದು ಹೇಳುವವನು ದೇವರ ಆಜ್ಞೆಗಳಿಗೆ ವಿಧೇಯನಾಗಿರದಿದ್ದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನಲ್ಲಿ ಸತ್ಯವಿಲ್ಲ. 5 ಆದರೆ ಯಾವನಾದರೂ ದೇವರ ವಾಕ್ಯಕ್ಕೆ ವಿಧೇಯನಾಗಿದ್ದರೆ, ದೇವರ ಮೇಲೆ ಅವನಿಗಿರುವ ಪ್ರೀತಿಯು ಪರಿಪೂರ್ಣವಾಗಿದೆ. ನಾವು ದೇವರನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಇದರಿಂದಲೇ ತಿಳಿದುಕೊಳ್ಳುತ್ತೇವೆ. 6 ದೇವರಲ್ಲಿ ನೆಲೆಗೊಂಡಿದ್ದೇನೆ ಎಂದು ಹೇಳುವವನು, ಯೇಸು ಜೀವಿಸಿದಂತೆಯೇ ಜೀವಿಸಬೇಕು.
ಇತರರನ್ನು ಪ್ರೀತಿಸಿ
7 ನನ್ನ ಪ್ರಿಯ ಸ್ನೇಹೀತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು. ನೀವು ಈಗಾಗಲೇ ಕೇಳಿರುವ ವಾಕ್ಯವೇ ಈ ಆಜ್ಞೆಯಾಗಿದೆ. 8 ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
9 “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನನ್ನು ದ್ವೇಷಿಸುತ್ತಿದ್ದರೆ, ಅವನಿನ್ನೂ ಅಂಧಕಾರದಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ. 11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಅಂಧಕಾರದಲ್ಲಿದ್ದಾನೆ. ಅವನು ಅಂಧಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಏಕೆಂದರೆ ಅಂಧಕಾರವು ಅವನನ್ನು ಕುರುಡನನ್ನಾಗಿ ಮಾಡಿದೆ.
12 ಪ್ರಿಯ ಮಕ್ಕಳೇ, ನಿಮ್ಮ ಪಾಪಗಳು ಕ್ರಿಸ್ತನ ಮೂಲಕ ಕ್ಷಮಿಸಲ್ಪಟ್ಟಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
13 ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
14 ಮಕ್ಕಳೇ, ನೀವು ತಂದೆಯನ್ನು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದ,
ದೇವರ ವಾಕ್ಯವು ನಿಮ್ಮಲ್ಲಿ ನೆಲಸಿರುವುದರಿಂದ
ಮತ್ತು ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
15 ಈ ಲೋಕವನ್ನಾಗಲಿ ಈ ಲೋಕದಲ್ಲಿರುವ ವಸ್ತುಗಳನ್ನಾಗಲಿ ನೀವು ಪ್ರೀತಿಸಬೇಡಿ. ಈ ಲೋಕವನ್ನು ಪ್ರೀತಿಸುವವನಿಗೆ ತಂದೆಯ (ದೇವರ) ಮೇಲೆ ಪ್ರೀತಿಯಿರುವುದಿಲ್ಲ. 16 ಈ ಲೋಕದಲ್ಲಿರುವ ಕೆಟ್ಟವುಗಳು ಇಂತಿವೆ: ನಮ್ಮ ಪಾಪಸ್ವಭಾವವನ್ನು ತಣಿಸಲು ಮಾಡಲಿಚ್ಛಿಸುವ ಕಾರ್ಯಗಳು, ನಾವು ನೋಡುವ ಪಾಪಪೂರಿತವಾದದ್ದನ್ನು ಪಡೆಯಲಿಚ್ಛಿಸುವುದು, ಮತ್ತು ನಮ್ಮಲ್ಲಿರುವ ವಸ್ತುಗಳಲ್ಲಿಯೇ ದುರಹಂಕಾರಪಡುವುದು. ಆದರೆ ಇವುಗಳಲ್ಲಿ ಯಾವುದೂ ತಂದೆಯಿಂದ ಬರುವುದಿಲ್ಲ. ಇವುಗಳೆಲ್ಲ ಈ ಲೋಕದಿಂದ ಬರುತ್ತವೆ. 17 ಈ ಲೋಕವು ಮತ್ತು ಜನರು ಬಯಸುವಂಥವುಗಳು ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತಕ್ಕನುಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು.
ಕ್ರಿಸ್ತನ ಶತ್ರುಗಳನ್ನು ಅನುಸರಿಸಬೇಡಿ
18 ನನ್ನ ಪ್ರಿಯ ಮಕ್ಕಳೇ, ಅಂತ್ಯವು ಸಮೀಪಿಸಿದೆ! ಕ್ರಿಸ್ತನ ಶತ್ರು ಬರುತ್ತಿದ್ದಾನೆಂಬುದನ್ನು ನೀವು ಕೇಳಿದ್ದೀರಿ. ಕ್ರಿಸ್ತನ ಅನೇಕ ಶತ್ರುಗಳು ಈಗಾಗಲೇ ಇಲ್ಲಿದ್ದಾರೆ. ಆದ್ದರಿಂದ ಅಂತ್ಯವು ಸಮೀಪಿಸಿದೆ ಎಂಬುದು ನಮಗೆ ತಿಳಿದಿದೆ. 19 ಕ್ರಿಸ್ತನ ಶತ್ರುಗಳು ನಮ್ಮ ಗುಂಪಿನಲ್ಲೇ ಇದ್ದರು. ಅವರು ನಮ್ಮನ್ನು ಬಿಟ್ಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ. ಅವರು ನಿಜವಾಗಿಯೂ ನಮ್ಮ ಸಭೆಗೆ ಸೇರಿದವರಾಗಿದ್ದರೆ ನಮ್ಮೊಂದಿಗೆ ಇರುತ್ತಿದ್ದರು. ಆದರೆ ಅವರು ಹೊರಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ ಎಂಬುದನ್ನು ಇದೇ ತೋರ್ಪಡಿಸುತ್ತದೆ.
20 ಪರಿಶುದ್ಧವಾಗಿರುವಾತನು (ದೇವರು ಅಥವಾ ಕ್ರಿಸ್ತನು) ಕೊಟ್ಟಿರುವ ವರವನ್ನು ನೀವು ಹೊಂದಿದ್ದೀರಿ. ಆದ್ದರಿಂದ ನೀವೆಲ್ಲರೂ ಸತ್ಯವನ್ನು ತಿಳಿದಿದ್ದೀರಿ. 21 ನಾನು ನಿಮಗೆ ಏಕೆ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳ್ಳೂ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.
22 ಆದ್ದರಿಂದ ಸುಳ್ಳು ಹೇಳುವವನು ಯಾರು? ಯೇಸುವನ್ನು ಕ್ರಿಸ್ತನಲ್ಲವೆಂದು ಹೇಳುವವನೇ ಸುಳ್ಳುಗಾರ. ಅವನು ಕ್ರಿಸ್ತನ ವೈರಿಯಾಗಿದ್ದಾನೆ. ಅವನು ತಂದೆಯನ್ನಾಗಲಿ (ದೇವರು), ಆತನ ಮಗನನ್ನಾಗಲಿ (ಕ್ರಿಸ್ತನು) ನಂಬುವುದಿಲ್ಲ. 23 ಮಗನನ್ನು ನಂಬದೆ ಇರುವವನು ತಂದೆಯನ್ನು ಹೊಂದಿಲ್ಲ. ಆದರೆ ಮಗನನ್ನು ಸ್ವೀಕರಿಸಿಕೊಳ್ಳುವವನು ತಂದೆಯನ್ನು ಸಹ ಹೊಂದಿದ್ದಾನೆ.
24 ನೀವು ಆರಂಭದಿಂದಲೂ ಕೇಳಿರುವ ಬೋಧನೆಯನ್ನೇ ಅನುಸರಿಸಿರಿ. ಆ ಬೋಧನೆಯನ್ನು ಅನುಸರಿಸುವವರಾಗಿದ್ದರೆ ನೀವು ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿದ್ದೀರಿ. 25 ಕ್ರಿಸ್ತನು ನಮಗೆ ಕೊಡುವುದಾಗಿ ಮಾಡಿದ್ದ ವಾಗ್ದಾನವೇ ಈ ನಿತ್ಯಜೀವ.
26 ನಿಮ್ಮನ್ನು ತಪ್ಪುಮಾರ್ಗಕ್ಕೆ ಸೆಳೆಯುವ ಜನರನ್ನು ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. 27 ಕ್ರಿಸ್ತನು ನಿಮಗೆ ವಿಶೇಷವಾದ ವರವನ್ನು ದಯಪಾಲಿಸಿರುವನು. ಅದು ನಿಮ್ಮಲ್ಲಿ ಇನ್ನೂ ಇದೆ. ಆದ್ದರಿಂದ ನಿಮಗೆ ಯಾವ ಉಪದೇಶಕರ ಅಗತ್ಯವೂ ಇಲ್ಲ. ಆತನು ನಿಮಗೆ ಕೊಟ್ಟಿರುವ ವರವು ನಿಮಗೆ ಎಲ್ಲವನ್ನೂ ಉಪದೇಶಿಸುತ್ತದೆ. ಅದು ನಿಜವಾದುದು, ಸುಳ್ಳಲ್ಲ. ಆದ್ದರಿಂದ ಅದರ ಉಪದೇಶಕ್ಕನುಸಾರವಾಗಿ ನೀವು ಆತನಲ್ಲಿ ನೆಲೆಗೊಂಡಿರಿ.
28 ಹೌದು, ನನ್ನ ಪ್ರಿಯ ಮಕ್ಕಳೇ, ಆತನಲ್ಲಿಯೇ ನೆಲೆಗೊಂಡಿರೋಣ. ನಾವು ಹೀಗೆ ಮಾಡಿದರೆ, ಕ್ರಿಸ್ತನು ಮರಳಿ ಬರುವ ದಿನದಂದು ನಾವು ಭಯಪಡಬೇಕಾಗಿಲ್ಲ; ಅಡಗಿಕೊಳ್ಳುವ ಅಗತ್ಯವಿರುವುದಿಲ್ಲ; ನಾಚಿಕೆಪಡುವ ಅಗತ್ಯವೂ ಇರುವುದಿಲ್ಲ. 29 ಕ್ರಿಸ್ತನು ನೀತಿವಂತನೆಂಬುದು ನಿಮಗೆ ತಿಳಿದಿದೆ. ಆದ್ದರಿಂದ ಯೋಗ್ಯವಾದುದನ್ನು ಮಾಡುವ ಜನರೆಲ್ಲರೂ ದೇವರ ಮಕ್ಕಳೆಂಬುದು ನಿಮಗೆ ತಿಳಿದಿದೆ.
Kannada Holy Bible: Easy-to-Read Version. All rights reserved. © 1997 Bible League International