Old/New Testament
ಜೆರುಸಲೇಮಿನ ಜನರು ಚದುರಿಹೋಗುವ ಸೂಚನೆ
5 1-2 “ನರಪುತ್ರನೇ, ಈ ಕಾರ್ಯಗಳನ್ನು ಮುತ್ತಿಗೆಯ ಕಾಲ ಮುಗಿಯಿತೆಂದು ಸೂಚಿಸುವ ಅವಧಿಯ ನಂತರ ಮಾಡಬೇಕು. ನೀನು ಕ್ಷೌರಕನ ಹರಿತವಾದ ಕ್ಷೌರಕತ್ತಿಯನ್ನು ತೆಗೆದುಕೊಳ್ಳಬೇಕು. ನಿನ್ನ ತಲೆಯ ಕೂದಲನ್ನೂ ಗಡ್ಡವನ್ನೂ ಬೋಳಿಸು. ಕೂದಲನ್ನು ತ್ರಾಸಿನಲ್ಲಿ ಹಾಕಿ ಅದನ್ನು ತೂಕ ಮಾಡು. ಆ ಕೂದಲುಗಳನ್ನು ಮೂರು ಪಾಲಾಗಿ ಮಾಡು. ಅದರ ಒಂದು ಪಾಲನ್ನು ನೀನು ಚಿತ್ರಿಸಿದ್ದ ಇಟ್ಟಿಗೆಯ ಮೇಲೆ ಹಾಕು. ಆ ನಗರದ ಮೇಲೆ ಕೂದಲನ್ನು ಸುಟ್ಟುಬಿಡು. ಇದು, ಜನರಲ್ಲಿ ಕೆಲವು ಮಂದಿ ನಗರದಲ್ಲಿ ಸಾಯುವರು ಎಂಬುದಕ್ಕೆ ಗುರುತಾಗಿದೆ. ನೀನು ಕೂದಲಲ್ಲಿ ಮೂರನೆ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ಪಟ್ಟಣದ ಹೊರಗೆ ಸುತ್ತಲೆಲ್ಲಾ ನಿನ್ನ ಕ್ಷೌರಕತ್ತಿಯಿಂದ ಕತ್ತರಿಸು. ಕೆಲವು ಜನರು ಪಟ್ಟಣದ ಹೊರಗೆ ಸಾಯುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಬಳಿಕ ನಿನ್ನ ಕೂದಲಿನ ಉಳಿದ ಮೂರನೆಯ ಒಂದು ಭಾಗವನ್ನು ಗಾಳಿಯಲ್ಲಿ ತೂರಿಬಿಡು. ಗಾಳಿಯು ಅದನ್ನು ಬಹುದೂರದವರೆಗೆ ಬಡಿದುಕೊಂಡು ಹೋಗಲಿ. ಇದೇ ರೀತಿಯಲ್ಲಿ ನಾನು ಖಡ್ಗವನ್ನು ಇರಿದು ಅವರನ್ನು ಬಹುದೂರದ ದೇಶಗಳಿಗೆ ಅಟ್ಟಿಸಿ ಬಿಡುವೆನು. 3 ಆದರೆ ನೀನು ಅದರಿಂದ ಕೆಲವು ಕೂದಲನ್ನು ತೆಗೆದು ನಿನ್ನ ಮೇಲಂಗಿಯ ಅಂಚಿನಲ್ಲಿ ಸುತ್ತಿಡು. ನಾನು ನನ್ನ ಜನರಲ್ಲಿ ಕೆಲವರನ್ನು ರಕ್ಷಿಸುವೆನು ಎಂಬುದಕ್ಕೆ ಇದು ಗುರುತಾಗಿದೆ. 4 ಬಳಿಕ ಕೂದಲಲ್ಲಿ ಸ್ವಲ್ಪವನ್ನು ಮತ್ತೆ ತೆಗೆದುಕೊಂಡು ಬೆಂಕಿಯಲ್ಲಿ ಹಾಕಿ ಸುಟ್ಟುಬಿಡು. ಅಲ್ಲಿಂದ ಬೆಂಕಿಯು ಹಬ್ಬಿ ಇಡೀ ಇಸ್ರೇಲ್ ಜನಾಂಗವನ್ನು ನಾಶಮಾಡುವುದು.”
5 ಆಮೇಲೆ ನನ್ನ ಒಡೆಯನಾದ ಯೆಹೋವನು ಹೀಗೆಂದನು: “ಆ ಇಟ್ಟಿಗೆಯು ಜೆರುಸಲೇಮಿನ ಚಿತ್ರ. ನಾನು ಜೆರುಸಲೇಮನ್ನು ಇತರ ಜನಾಂಗಗಳ ಮಧ್ಯದಲ್ಲಿ ನೆಲೆಗೊಳಿಸಿದ್ದೇನೆ. ಆಕೆಯ ಸುತ್ತಲೂ ಬೇರೆ ದೇಶಗಳಿವೆ. 6 ಜೆರುಸಲೇಮಿನ ನಿವಾಸಿಗಳು ನನ್ನ ಆಜ್ಞೆಗಳಿಗೆ ದಂಗೆ ಎದ್ದಿದ್ದಾರೆ. ಅವರು ಇತರ ಜನಾಂಗಗಳಿಗಿಂತ ಕೆಟ್ಟವರು. ಅವರು ತಮ್ಮ ಸುತ್ತಲಿರುವ ಬೇರೆ ದೇಶಗಳಿಗಿಂತ ಹೆಚ್ಚಾಗಿ ನನ್ನ ಕಟ್ಟಳೆಗಳನ್ನು ಉಲ್ಲಂಬಿಸಿದ್ದಾರೆ. ಅವರು ನನ್ನ ಆಜ್ಞೆಗಳನ್ನು ತಿರಸ್ಕರಿಸಿದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ.”
7 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ: “ನೀವು ಸುತ್ತಲಿರುವ ಜನಾಂಗಗಳಿಗಿಂತ ಹೆಚ್ಚು ಕೆಡುಕನ್ನು ಮಾಡಿದ್ದೀರಿ. ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ; ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ನಿಮ್ಮ ಸುತ್ತಲಿರುವ ಜನಾಂಗಗಳ ನಿಯಮಗಳನ್ನೂ ಅನುಸರಿಸಲಿಲ್ಲ.” 8 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಾನು ನಿಮಗೆ ವಿರೋಧವಾಗಿದ್ದೇನೆ. ಬೇರೆ ಜನರ ಕಣ್ಣೆದುರಿನಲ್ಲಿಯೇ ನಿಮ್ಮನ್ನು ದಂಡಿಸುವೆನು. 9 ನಿಮ್ಮ ಎಲ್ಲಾ ಅಸಹ್ಯಕೃತ್ಯಗಳ ದೆಸೆಯಿಂದ ನಾನು ಹಿಂದೆಂದೂ ಮಾಡಿಲ್ಲದ, ಮುಂದೆಂದೂ ಮಾಡದ ಸಂಗತಿಗಳನ್ನು ನಿಮಗೆ ಬರಮಾಡುವೆನು. 10 ಜೆರುಸಲೇಮಿನ ಜನರು ಹಸಿವೆ ತಾಳಲಾರದೆ ತಮ್ಮ ಸ್ವಂತ ಮಕ್ಕಳನ್ನು ಕಬಳಿಸುವರು ಮತ್ತು ಮಕ್ಕಳು ತಮ್ಮ ತಂದೆತಾಯಿಗಳನ್ನೇ ತಿನ್ನುವರು. ಬೇರೆಬೇರೆ ರೀತಿಯಲ್ಲಿ ನಾನು ನಿಮ್ಮನ್ನು ಶಿಕ್ಷಿಸುವೆನು. ಜೀವದಿಂದುಳಿದವರನ್ನು ನಾನು ಗಾಳಿಗೆ ತೂರಿಬಿಡುವೆನು.”
11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಜೆರುಸಲೇಮೇ, ನನ್ನ ಜೀವದಾಣೆ! ನಾನು ನಿನ್ನನ್ನು ಶಿಕ್ಷಿಸುವೆನು. ಯಾಕೆಂದರೆ ನೀನು ನನ್ನ ಪವಿತ್ರ ಸ್ಥಳಕ್ಕೆ ಮಹತ್ವವನ್ನು ಕೊಡಲಿಲ್ಲ. ಅಸಹ್ಯವಾದ ಮತ್ತು ಗಾಬರಿಗೊಳಿಸುವ ನಿನ್ನ ಎಲ್ಲಾ ಕಾರ್ಯಗಳಿಂದ ನೀನು ಅದನ್ನು ಅಶುದ್ಧಗೊಳಿಸಿರುವೆ. ನಾನು ನಿನಗೆ ಕನಿಕರತೋರಿಸದೆ ಶಿಕ್ಷಿಸುವೆನು. ನಿನ್ನ ಮೇಲೆ ನನಗೆ ದಯೆಯಿರದು. 12 ನಿನ್ನ ಜನರಲ್ಲಿ ಮೂರನೆ ಒಂದು ಭಾಗ ಪಟ್ಟಣದೊಳಗೆ ರೋಗದಿಂದಲೂ ಹಸಿವಿನಿಂದಲೂ ಸಾಯುವರು. ಮೂರರಲ್ಲಿ ಇನ್ನೊಂದು ಭಾಗ ಪಟ್ಟಣದ ಹೊರಗೆ ರಣರಂಗದಲ್ಲಿ ಸಾಯುವರು. ಅನಂತರ ನಾನು ನನ್ನ ಖಡ್ಗವನ್ನು ಇರಿದು ಉಳಿದವರನ್ನು ಬಹುದೂರದ ದೇಶಕ್ಕೆ ಅಟ್ಟಿಬಿಡುವೆನು. 13 ಆಗಲೇ ನನ್ನ ಕೋಪವು ಶಮನವಾಗುವುದು. ನಾನು ಅವರ ವಿರುದ್ಧವಾಗಿ ನನ್ನ ಕೋಪವನ್ನು ಬಳಸಿ ತೃಪ್ತನಾಗುವೆನು. ನನ್ನ ಕೋಪವನ್ನು ಸುರಿದಾಗ ಯೆಹೋವನಾದ ನಾನೇ ಅವರೊಂದಿಗೆ ಕೋಪದಿಂದ ಮಾತಾಡಿದೆನೆಂದು ಅವರಿಗೆ ಗೊತ್ತಾಗುವುದು.”
14 ದೇವರು ಹೇಳಿದ್ದೇನೆಂದರೆ, “ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆನು. ನೀನು ಕಲ್ಲುಗಳ ರಾಶಿಯಾಗಿ ಹೋಗುವಿ. ನಿನ್ನ ಸುತ್ತಲೂ ಇರುವ ಜನಾಂಗಗಳು ನಿನ್ನನ್ನು ಗೇಲಿ ಮಾಡುತ್ತವೆ. ನಿನ್ನನ್ನು ದಾಟಿಹೋಗುವ ಪ್ರತಿಯೊಬ್ಬನೂ ನಿನ್ನನ್ನು ಕಂಡು ಹಾಸ್ಯಮಾಡುವನು. 15 ನಿನ್ನ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನ್ನ ಮಹಾಕೋಪದಿಂದ ನಿನ್ನನ್ನು ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. 16 ಬರಗಾಲವೆಂಬ ಮರಣಕರವಾದ ಮತ್ತು ನಾಶಕರವಾದ ಬಾಣಗಳಿಂದ ನಾನು ನಿನ್ನನ್ನು ನಾಶಗೊಳಿಸುವದಕ್ಕಾಗಿಯೇ ಹೊಡೆಯುತ್ತೇನೆ. ನಾನು ನಿನ್ನ ದೇಶಕ್ಕೆ ಕ್ಷಾಮದ ಮೇಲೆ ಕ್ಷಾಮವನ್ನು ಬರಮಾಡುವೆನು ಮತ್ತು ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು. 17 ನಾನು ನಿನಗೆ ವಿರುದ್ಧವಾಗಿ ಬರಗಾಲಗಳನ್ನು ಮತ್ತು ಕ್ರೂರಪ್ರಾಣಿಗಳನ್ನು ಕಳುಹಿಸುವೆನು. ಅವು ನಿನ್ನ ಮಕ್ಕಳನ್ನು ಕೊಲ್ಲುತ್ತವೆ. ನಿನ್ನನ್ನು ಕೊಲ್ಲುವುದಕ್ಕಾಗಿ ರೋಗಗಳನ್ನು, ಹಿಂಸೆಯನ್ನು ಮತ್ತು ಯುದ್ಧಗಳನ್ನು ಕಳುಹಿಸುವೆನು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.”
ಇಸ್ರೇಲಿನ ವಿರುದ್ಧ ಪ್ರವಾದನೆ
6 ಮತ್ತೆ ಯೆಹೋವನ ಸಂದೇಶವು ನನಗೆ ಬಂದಿತು. 2 ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲಿನ ಪರ್ವತಗಳ ಕಡೆಗೆ ಮುಖ ಮಾಡು. ಅವುಗಳ ವಿರುದ್ಧವಾಗಿ ನನಗೋಸ್ಕರ ಮಾತನಾಡಿ ಹೀಗೆ ಹೇಳು: 3 ‘ಇಸ್ರೇಲಿನ ಪರ್ವತಗಳೇ, ನನ್ನ ಒಡೆಯನಾದ ಯೆಹೋವನ ಸಂದೇಶಕ್ಕೆ ಕಿವಿಗೊಡಿರಿ. ಬೆಟ್ಟಗಳಿಗೂ ಪರ್ವತಗಳಿಗೂ ಕೊರಕಲುಗಳಿಗೂ ಕಣಿವೆಗಳಿಗೂ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ನಾನು ವೈರಿಯನ್ನು ನಿಮ್ಮ ವಿರುದ್ಧ ಯುದ್ಧ ಮಾಡಲು ಕಳುಹಿಸುವೆನು. ನಿಮ್ಮ ಎಲ್ಲಾ ಉನ್ನತ ಸ್ಥಳಗಳನ್ನು ನಾಶಮಾಡುವೆನು. 4 ನಿಮ್ಮ ಯಜ್ಞವೇದಿಕೆಗಳು ನಾಶವಾಗುವವು. ನಿಮ್ಮ ಧೂಪವೇದಿಕೆಗಳು ಕೆಡವಲ್ಪಡುವವು. ನಿಮ್ಮ ಹೆಣಗಳನ್ನು ನಿಮ್ಮ ಹೊಲಸು ವಿಗ್ರಹಗಳ ಮುಂದೆ ಬಿಸಾಡುವೆನು. 5 ಇಸ್ರೇಲ್ ಜನರ ಸತ್ತ ಹೆಣಗಳನ್ನು ಅವರ ಹೊಲಸು ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಎಲುಬುಗಳನ್ನು ನಿಮ್ಮ ಯಜ್ಞವೇದಿಗಳ ಸುತ್ತಲೂ ಹರಡುವೆನು. 6 ನಿಮ್ಮ ಜನರು ವಾಸಮಾಡುವಲ್ಲೆಲ್ಲಾ ಕೆಟ್ಟಸಂಗತಿಗಳು ನಡೆಯುವವು; ಪಟ್ಟಣಗಳು ಕಲ್ಲಿನ ರಾಶಿಗಳಾಗುವವು; ಪೂಜಾಸ್ಥಳಗಳು ನಾಶಮಾಡಲ್ಪಡುವವು. ನಿಮ್ಮ ಯಜ್ಞವೇದಿಕೆಗಳು ಕೆಡವಲ್ಪಟ್ಟು ಹಾಳಾಗಿಹೋಗುವವು; ನಿಮ್ಮ ವಿಗ್ರಹಗಳು ಮುರಿಯಲ್ಪಟ್ಟು ನಾಶವಾಗುವವು. ಜನರು ಅವುಗಳನ್ನು ಇನ್ನು ಎಂದಿಗೂ ಪೂಜಿಸರು. ನಿಮ್ಮ ಧೂಪವೇದಿಕೆಗಳು ಕತ್ತರಿಸಲ್ಪಡುವವು. ನೀವು ಮಾಡಿಕೊಂಡ ವಿಗ್ರಹಗಳು ಅಳಿದುಹೋಗುವವು. 7 ಜನರು ನಿಮ್ಮ ಮಧ್ಯದಲ್ಲಿ ಕೊಲ್ಲಲ್ಪಟ್ಟು ಬೀಳುವರು. ಆಗ ನೀನು, ನಾನು ಯೆಹೋವನೆಂದು ತಿಳಿಯುವಿ.’”
8 ದೇವರು ಹೇಳಿದ್ದೇನೆಂದರೆ: “ಆದರೆ ನಾನು ನಿಮ್ಮ ಜನರಲ್ಲಿ ಕೆಲವರನ್ನು ಉಳಿದುಕೊಳ್ಳುವಂತೆ ಮಾಡುವೆನು. ನೀವು ಬೇರೆ ದೇಶಗಳಲ್ಲಿ ಚದರಿಹೋಗಿರುವಾಗ ಜನಾಂಗಗಳ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರು ಕೊಲ್ಲಲ್ಪಡುವುದಿಲ್ಲ. 9 ಆಗ ಉಳಿದವರು ಸೆರೆಹಿಡಿಯಲ್ಪಡುವರು. ಅವರು ಪರದೇಶಕ್ಕೆ ಒಯ್ಯಲ್ಪಟ್ಟು ಅಲ್ಲಿ ವಾಸಿಸುವರು. ಅಲ್ಲಿ ಅಳಿದುಳಿದ ಜನರು ನನ್ನನ್ನು ಜ್ಞಾಪಿಸಿಕೊಳ್ಳುವರು ಮತ್ತು ಅವರ ಅಪನಂಬಿಗಸ್ತಿಕೆಯ ಹೃದಯವನ್ನು ನಾನು ಜಜ್ಜಿದೆನು. ತಾವು ಮಾಡಿದ ಕೆಟ್ಟ ಕೆಲಸಗಳಿಗಾಗಿ ತಮ್ಮನ್ನು ತಾವೇ ದ್ವೇಷಿಸುವರು. ಹಿಂದಿನ ಕಾಲದಲ್ಲಿ ಅವರು ನನ್ನಿಂದ ದೂರವಾಗಿ ನನ್ನನ್ನು ತ್ಯಜಿಸಿದರು. ತಮ್ಮ ಹೊಲಸು ವಿಗ್ರಹಗಳ ಹಿಂದೆ ಹೋದರು. ಗಂಡನನ್ನು ಬಿಟ್ಟು ಬೇರೆ ಪುರುಷನ ಸಂಗಡ ಓಡುವ ಸ್ತ್ರೀಯಂತೆ ಅವರಿದ್ದರು. ಅವರು ಇನ್ನೂ ಅನೇಕ ಅಸಹ್ಯಕರವಾದ ಕಾರ್ಯಗಳನ್ನು ಮಾಡಿದರು. 10 ನಾನೇ ಯೆಹೋವನೆಂದು ಅವರಿಗೆ ತಿಳಿಯುವುದು. ಈ ಆಪತ್ತನ್ನು ಬರಮಾಡುವೆನು ಎಂದು ನಾನು ಹೇಳಿದ್ದಕ್ಕೆ ಸರಿಯಾದ ಕಾರಣವಿತ್ತೆಂದು ಅವರು ಗ್ರಹಿಸಿಕೊಳ್ಳುವರು.”
11 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: “ಚಪ್ಪಾಳೆ ತಟ್ಟು, ನಿನ್ನ ಕಾಲುಗಳನ್ನು ನೆಲಕ್ಕೆ ಒದ್ದು, ‘ಅಯ್ಯೋ, ಬೇಡ!’ ಎಂದು ಹೇಳು. ಯಾಕೆಂದರೆ ಇಸ್ರೇಲ್ ಜನರು ಎಲ್ಲಾ ಅಸಹ್ಯಕರವಾದ ಮತ್ತು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಅವರು ಯುದ್ಧದಿಂದಲೂ ಕ್ಷಾಮದಿಂದಲೂ ಭಯಂಕರವಾದ ಕಾಯಿಲೆಗಳಿಂದಲೂ ಸಾಯುವರು. 12 ದೂರದಲ್ಲಿರುವ ಜನರು ರೋಗಗಳಿಂದ ಸಾಯುವರು. ಹತ್ತಿರದಲ್ಲಿರುವವರು ಕತ್ತಿಯಿಂದ ಸಾಯುವರು. ತಪ್ಪಿಸಿಕೊಂಡವರೂ ಉಳಿಸಲ್ಪಟ್ಟವರೂ ಹಸಿವೆಯಿಂದ ಸಾಯುವರು. ಆಗಲೇ ನನ್ನ ಕೋಪವು ಶಮನವಾಗುವದು. 13 ಆಗಲೇ ನಾನು ಯೆಹೋವನೆಂದು ನೀವು ಅರಿಯುವಿರಿ. ಅವರ ದೇಶದಲ್ಲಿರುವವರ ಹೆಣಗಳು ಅವರ ಹೊಲಸು ವಿಗ್ರಹಗಳ ಸುತ್ತಲೂ ಯಜ್ಞವೇದಿಗಳ ಸುತ್ತಲೂ ಎತ್ತರವಾದ ಸ್ಥಳಗಳ ಮೇಲೆಯೂ ಬೆಟ್ಟಗಳಲ್ಲಿಯೂ ಮತ್ತು ಪ್ರತಿಯೊಂದು ಹಸಿರು ಮರದ ಕೆಳಗೂ ಬೀಳುವಾಗ ನಾನೇ ಯೆಹೋವನೆಂದು ಅವರು ತಿಳಿದುಕೊಳ್ಳುವರು. ಅವರು ಈ ಎಲ್ಲಾ ಸ್ಥಳಗಳಲ್ಲಿ ತಮ್ಮ ಎಲ್ಲಾ ಹೊಲಸು ವಿಗ್ರಹಗಳಿಗೆ ಪರಿಮಳಭರಿತವಾದ ಯಜ್ಞಗಳನ್ನು ಅರ್ಪಿಸಿದರು. 14 ನಾನು ಅವರ ಮೇಲೆ ನನ್ನ ಕೈಯೆತ್ತಿ ಅವರನ್ನು ದಂಡಿಸುವೆನು ಮತ್ತು ಮರುಭೂಮಿಯಿಂದ ದಿಬ್ಲದವರೆಗೆ ಅವರು ಯಾವುದೇ ದೇಶದಲ್ಲಿ ವಾಸವಾಗಿದ್ದರೂ ನಾಶಮಾಡುವೆನು. ಆಗ ನಾನೇ ಯೆಹೋವನೆಂಬುದು ಅವರಿಗೆ ತಿಳಿಯುವುದು.”
ಜೆರುಸಲೇಮಿಗೆ ಬರುವ ದುರ್ಗತಿ
7 ಯೆಹೋವನ ಸಂದೇಶವು ನನಗೆ ಬಂದಿತು. 2 ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನ್ನ ಒಡೆಯನಾದ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಇಸ್ರೇಲ್ ದೇಶಕ್ಕೆ ನೀಡು.
“ಅಂತ್ಯ,
ಅಂತ್ಯವು ಬರುವುದು.
ಇಡೀ ದೇಶವು ಹಾಳಾಗಿಹೋಗುವದು.
3 ನಿನ್ನ ಅಂತ್ಯವು ಈಗ ಬರುವುದು.
ನಿನ್ನ ಮೇಲೆ ನನಗೆ ಎಷ್ಟು ಕೋಪವಿದೆ ಎಂದು ನಾನು ತೋರಿಸುವೆನು.
ನಿನ್ನ ದುಷ್ಕೃತ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.
ನಿನ್ನ ಅಸಹ್ಯಕೃತ್ಯಗಳಿಗಾಗಿ ನಾನು ಪ್ರತೀಕಾರ ಮಾಡುವೆನು.
4 ನಿನಗೆ ನಾನು ಇನ್ನು ಕರುಣೆಯನ್ನು ತೋರಿಸೆನು.
ನಿನ್ನ ವಿಷಯದಲ್ಲಿ ನಾನು ದುಃಖಿಸುವದಿಲ್ಲ.
ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನಿನ್ನನ್ನು ಶಿಕ್ಷಿಸುವೆನು.
ನೀನು ಅಂಥಾ ಭಯಂಕರ ಕೃತ್ಯಗಳನ್ನು ಮಾಡಿದ್ದೀ.
ಈಗ ನಾನೇ ಯೆಹೋವನೆಂದು ನೀನು ತಿಳಿಯುವಿ.”
5 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಂದರ ಮೇಲೊಂದು ದುರ್ಘಟನೆಗಳು ನಡೆಯುವವು. 6 ಅಂತ್ಯವು ಬರುವುದು. ಅದು ಬೇಗನೆ ಬರುವದು. 7 ಇಸ್ರೇಲ್ ದೇಶದಲ್ಲಿ ವಾಸಿಸುವ ಜನರೇ, ನಿಮಗೆ ಆಪತ್ತು ಬರುವುದು, ಸಮಯವು ಬರುತ್ತಿದೆ. ದಿನವು ಸಮೀಪಿಸಿದೆ. ಬೆಟ್ಟಗಳ ಮೇಲೆ ಆನಂದ ಬೋಷಗಳ ಬದಲು ಯುದ್ಧದ ಕೂಗಾಟಗಳು ಇರುತ್ತವೆ. 8 ಇನ್ನು ಸ್ವಲ್ಪ ಸಮಯದಲ್ಲಿ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂದು ನಿಮಗೆ ತೋರಿಸುವೆನು. ನನ್ನ ಕೋಪವನ್ನೆಲ್ಲಾ ನಿಮಗೆ ತೋರಿಸುವೆನು. ನಿಮ್ಮ ದುಷ್ಕ್ರಿಯೆಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಅಸಹ್ಯಕೃತ್ಯಗಳಿಗಾಗಿ ನಾನು ಸೇಡನ್ನು ತೀರಿಸಿಕೊಳ್ಳುವೆನು. 9 ನಾನು ನಿಮಗೆ ಕರುಣೆ ತೋರಿಸೆನು. ನಿಮಗಾಗಿ ನಾನು ದುಃಖಿಸುವದಿಲ್ಲ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ಅಂಥಾ ಭಯಂಕರವಾದ ಕೃತ್ಯಗಳನ್ನು ನೀವು ಮಾಡಿದ್ದೀರಿ. ನಿಮ್ಮನ್ನು ದಂಡಿಸಿದಾತನು ಯೆಹೋವನಾದ ನಾನೇ ಎಂಬುದು ಆಗ ನಿಮಗೆ ತಿಳಿಯುವುದು.
10 “ಆ ಶಿಕ್ಷೆಯ ಸಮಯವು ಬಂದಿದೆ. ಆಪತ್ತು ಬರುತ್ತಿದೆ. ಹಿಂಸೆಯು ಅರಳಿದೆ. ದುರಹಂಕಾರವು ಮೊಗ್ಗು ಬಿಟ್ಟಿದೆ. 11 ದುಷ್ಟತನವನ್ನು ದಂಡಿಸಲು ಹಿಂಸೆಯು ಬೆಳೆದು ಕೋಲಾಗಿದೆ. ಜನರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿ ಒಬ್ಬರೂ ಉಳಿಯುವುದಿಲ್ಲ. ಅವರ ಐಶ್ವರ್ಯದಲ್ಲಿ ಏನೂ ಉಳಿಯುವದಿಲ್ಲ; ಪ್ರಮುಖರಾದವರಲ್ಲಿ ಯಾರೂ ಉಳಿಯುವುದಿಲ್ಲ.
12 “ಆ ಶಿಕ್ಷೆಯ ಸಮಯವು ಬಂತು. ಆ ದಿವಸವು ಇಲ್ಲಿಯೇ ಇದೆ. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಸಂತೋಷಪಡಕೂಡದು. ವಸ್ತುಗಳನ್ನು ಮಾರುವವರು ಮಾರುವದಕ್ಕೆ ದುಃಖಿಸಕೂಡದು. ಯಾಕೆಂದರೆ ಆ ಭಯಂಕರ ಶಿಕ್ಷೆಯು ಎಲ್ಲರಿಗೂ ಉಂಟಾಗುವುದು. 13 ತಮ್ಮ ಆಸ್ತಿಗಳನ್ನು ಮಾರಿದ ಜನರು ಅಲ್ಲಿಗೆ ತಿರುಗಿ ಹೋಗುವುದಿಲ್ಲ. ಒಬ್ಬನು ಜೀವಂತವಾಗಿ ತಪ್ಪಿಸಿಕೊಂಡರೂ ತನ್ನ ಆಸ್ತಿಗೆ ಹೋಗುವುದಿಲ್ಲ. ಯಾಕೆಂದರೆ ಈ ದರ್ಶನವು ಎಲ್ಲಾ ಜನಸಮೂಹಕ್ಕಾಗಿದೆ. ಇದು ಬದಲಾಗುವುದಿಲ್ಲ; ಅವರ ಪಾಪಗಳ ದೆಸೆಯಿಂದ ಅವರಲ್ಲಿ ಒಬ್ಬನಾದರೂ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವುದಿಲ್ಲ.
14 “ಅವರು ಜನರನ್ನು ಎಚ್ಚರಿಸುವುದಕ್ಕಾಗಿ ತುತ್ತೂರಿಯನ್ನು ಊದುವರು. ಜನರು ಯುದ್ಧಕ್ಕೆ ತಯಾರಾಗುವರು. ಆದರೆ ಅವರು ರಣರಂಗಕ್ಕೆ ಹೋಗುವುದಿಲ್ಲ. ಯಾಕೆಂದರೆ ಆ ಜನಸಮೂಹಕ್ಕೆ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂಬುದನ್ನು ತೋರಿಸುತ್ತೇನೆ. 15 ಖಡ್ಗಧಾರಿಯಾದ ವೈರಿಯು ಪಟ್ಟಣದ ಹೊರಗಿದ್ದಾನೆ. ರೋಗ ಮತ್ತು ಹಸಿವೆ ಪಟ್ಟಣದೊಳಗಿವೆ. ಒಬ್ಬನು ಹೊರಗೆ ಹೊಲದ ಬಳಿ ಹೋದರೆ ವೈರಿಸೈನಿಕನು ಅವನನ್ನು ಕೊಲ್ಲುವನು. ಪಟ್ಟಣದೊಳಗೇ ಉಳಿದರೆ ರೋಗ ಮತ್ತು ಹಸಿವೆಯು ಅವನನ್ನು ಕೊಲ್ಲುವವು.
16 “ಆದರೂ ಕೆಲವರು ತಪ್ಪಿಸಿಕೊಳ್ಳುವರು. ಅವರು ಬೆಟ್ಟಕ್ಕೆ ಓಡುವರು. ಆದರೆ ಅವರು ಸಂತೋಷಪಡುವುದಿಲ್ಲ. ತಮ್ಮ ಪಾಪಗಳಿಗಾಗಿ ಅವರು ದುಃಖಿತರಾಗುವರು. ಪಾರಿವಾಳಗಳಂತೆ ಮೂಲುಗುವರು, ಅಳುವರು. 17 ತಮ್ಮ ಕೈಗಳನ್ನು ಮೇಲಕ್ಕೆ ಎತ್ತುವಷ್ಟು ದುಃಖ ಮತ್ತು ಆಯಾಸ ಅವರಲ್ಲಿದೆ. ಅವರ ಕಾಲುಗಳು ನೀರಿನಂತಿರುತ್ತವೆ. 18 ಅವರು ಶೋಕಬಟ್ಟೆಗಳನ್ನು ಧರಿಸಿ ಭಯಗ್ರಸ್ತರಾಗುವರು. ಪ್ರತೀ ಮುಖದಲ್ಲಿ ನಾಚಿಕೆಯು ಕಾಣಿಸುವುದು. ತಮ್ಮ ದುಃಖವನ್ನು ಪ್ರದರ್ಶಿಸಲು ತಮ್ಮ ತಲೆಗಳನ್ನು ಬೋಳಿಸುವರು. 19 ಅವರು ತಮ್ಮ ಬೆಳ್ಳಿಯ ವಿಗ್ರಹಗಳನ್ನು ರಸ್ತೆಗೆ ಬಿಸಾಡುವರು, ಅವರು ಬಂಗಾರದ ವಿಗ್ರಹವನ್ನು ಅಶುದ್ಧ ವಸ್ತುವಿನಂತೆ ನೋಡುವರು. ಯೆಹೋವನು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರಗಳ ವಿಗ್ರಹಗಳು ಅವರನ್ನು ರಕ್ಷಿಸಲಾರವು. ಅವು ಅವರ ಹಸಿವನ್ನು ನೀಗಿಸಲಾರವು ಅಥವಾ ಅವರ ಹೊಟ್ಟೆಗಳನ್ನು ತುಂಬಿಸಲಾರವು. ಜನರು ಪಾಪದಲ್ಲಿ ಬೀಳುವಂತೆ ಅವು ಮಾಡಿದವು.
20 “ಆ ಜನರು ತಮ್ಮ ಬೆಳ್ಳಿಬಂಗಾರಗಳ ಆಭರಣಗಳನ್ನು ಅಲಂಕಾರದ ವಸ್ತುಗಳನ್ನಾಗಿ ಪರಿವರ್ತಿಸಿದರು. ಅವುಗಳಿಂದ ತಮ್ಮ ಕೊಳಕಾದ ಮತ್ತು ಅಸಹ್ಯಕರವಾದ ವಿಗ್ರಹಗಳನ್ನು ಮಾಡಿಕೊಂಡರು. ಆದ್ದರಿಂದ ಅವರ ಬೆಳ್ಳಿಬಂಗಾರಗಳನ್ನು ಅವರಿಗೆ ಕೊಳೆಯ ಬಟ್ಟೆಯನ್ನಾಗಿ ಮಾಡುವೆನು. 21 ಬೇರೆ ದೇಶದವರು ಅವರ ಐಶ್ವರ್ಯವನ್ನು ಲೂಟಿಮಾಡಿಕೊಂಡು ಹೋಗಲು ನಾನು ಅವಕಾಶಕೊಡುವೆನು. ಭೂಮಿಯ ಮೇಲಿರುವ ಅತ್ಯಂತ ದುಷ್ಟರಾದ ಜನರಿಗೆ ನಾನು ಅದನ್ನು ಕೊಳ್ಳೆಯನ್ನಾಗಿ ಕೊಡುವೆನು. ಅವರು ಅದನ್ನು ಹೊಲಸು ಮಾಡುವರು. 22 ನಾನು ಅವರ ಕಡೆಯಿಂದ ನನ್ನ ಮುಖವನ್ನು ತಿರುಗಿಸಿಕೊಳ್ಳುವೆನು. ಆ ಪರದೇಶಿಯರು ನನ್ನ ಅಮೂಲ್ಯವಾದ ಆಲಯವನ್ನು ಹೊಲಸು ಮಾಡುವರು. ದರೋಡೆಕೋರರು ಅದರೊಳಗೆ ನುಗ್ಗಿ ಅದಕ್ಕೆ ಅಪಮಾನ ಮಾಡುವರು.
23 “ಸೆರೆಯವರಿಗಾಗಿ ಸರಪಣಿಗಳನ್ನು ಮಾಡು. ದೇಶವು ಕೊಲೆಯ ಅಪರಾಧಗಳಿಂದ ತುಂಬಿದೆ. ಪಟ್ಟಣದಲ್ಲಿ ಹಿಂಸೆಯು ತುಂಬಿದೆ. 24 ಇಸ್ರೇಲ್ ಜನರ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅತೀ ದುಷ್ಟ ಜನಾಂಗಗಳನ್ನು ಬರಮಾಡುವೆನು. ನಾನು ಗರ್ವಿಷ್ಠರ ಸೊಕ್ಕನ್ನು ಮುರಿಯುವೆನು; ಅವರ ಆರಾಧನೆಯ ಸ್ಥಳಗಳು ಅಪರಿಶುದ್ಧಗೊಳ್ಳುವವು.
25 “ಜನರು ಭಯದಿಂದ ನಡುಗುವರು. ಅವರು ಶಾಂತಿಗಾಗಿ ಹುಡುಕುವರು, ಆದರೆ ಅವರಿಗೆ ಅದು ಸಿಗುವುದಿಲ್ಲ. 26 ಒಂದರ ಮೇಲೊಂದು ಆಪತ್ತು ಸಂಭವಿಸುವುದು. ಸುಳ್ಳುಸುದ್ದಿಗೊಂದು ಸುಳ್ಳುಸುದ್ದಿ ಸೇರಿಕೊಳ್ಳುವುದು. ಅವರು ಪ್ರವಾದಿಯಿಂದ ದರ್ಶನಕ್ಕಾಗಿ ಹುಡುಕುತ್ತಲೇ ಇರುವರು. ಆದರೆ ಯಾವ ದರ್ಶನಗಳೂ ಆಗುವದಿಲ್ಲ. ಜನರಿಗೆ ಉಪದೇಶಿಸಲು ಯಾಜಕರಲ್ಲಿ ಏನೂ ಇರುವುದಿಲ್ಲ. ಜನರಿಗೆ ಕೊಡಲು ಹಿರಿಯರಲ್ಲಿ ಯಾವ ಬುದ್ಧಿವಾದವೂ ಇರುವುದಿಲ್ಲ. 27 ಸತ್ತುಹೋದ ಜನರಿಗಾಗಿ ನಿಮ್ಮ ರಾಜನು ಗೋಳಾಡುವನು; ನಾಯಕನಿಗೆ ನಿರೀಕ್ಷೆಯು ಇಲ್ಲವಾಗುವುದು. ಸಾಮಾನ್ಯ ಜನರು ಭಯಗ್ರಸ್ತರಾಗುವರು. ಯಾಕೆಂದರೆ ನಾನು ಅವರ ನಡತೆಗೆ ತಕ್ಕಂತೆ ಅವರಿಗೆ ಮಾಡುವೆನು; ಅವರು ಬೇರೆಯವರಿಗೆ ನ್ಯಾಯ ತೀರಿಸಿದಂತೆ ನಾನು ಅವರಿಗೆ ನ್ಯಾಯತೀರಿಸುವೆನು. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”
ಯೇಸುವನ್ನೇ ಅನುಸರಿಸಿರಿ
12 ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು. 2 ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು. 3 ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.
ದೇವರು ತಂದೆಯಂತಿದ್ದಾನೆ
4 ನೀವು ಪಾಪದ ವಿರುದ್ಧ ಹೋರಾಡುತ್ತಿದ್ದರೂ ನಿಮ್ಮ ಹೋರಾಟಗಳು ನಿಮ್ಮನ್ನು ಸಾವಿನ ಸಮೀಪಕ್ಕೆ ಇನ್ನೂ ತಂದಿಲ್ಲ. 5 ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ:
“ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.
ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
6 ಪ್ರಭುವು ತಾನು ಪ್ರೀತಿಸುವವನನ್ನೇ ದಂಡಿಸುತ್ತಾನೆ;
ಯಾರನ್ನು ಮಗನೆಂದು ಒಪ್ಪಿಕೊಳ್ಳುವನೋ ಅವನನ್ನು ದಂಡಿಸುತ್ತಾನೆ.”(A)
7 ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. 8 ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. 9 ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.
ಯೋಗ್ಯ ಮಾರ್ಗದಲ್ಲಿ ಜೀವಿಸಿರಿ
12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.
14 ಎಲ್ಲಾ ಜನರೊಂದಿಗೆ ಸಮಾಧಾನದಿಂದಲೂ ಪರಿಶುದ್ಧರಾಗಿಯೂ ಜೀವಿಸಲು ಪ್ರಯತ್ನಿಸಿರಿ. ಯಾವನ ಜೀವಿತವು ಪರಿಶುದ್ಧವಾಗಿರುವುದಿಲ್ಲವೋ ಅವನೆಂದಿಗೂ ಪ್ರಭುವನ್ನು ನೋಡುವುದಿಲ್ಲ. 15 ನಿಮ್ಮಲ್ಲಿ ಯಾರೂ ದೇವರ ಕೃಪೆಯನ್ನು ಕಳೆದುಕೊಳ್ಳದಂತೆ ಎಚ್ಚರದಿಂದಿರಿ. ನಿಮ್ಮಲ್ಲಿ ಯಾವನೂ ಚಿಗುರಿ ಬೆಳೆಯುವ ವಿಷದ ಬೇರಿನಂತಾಗದಂತೆ ಎಚ್ಚರಿಕೆಯಿಂದಿರಿ. ಅಂಥವನಿಂದ ನಿಮ್ಮ ಇಡೀ ಗುಂಪೇ ಹಾಳಾಗುವುದು. 16 ನಿಮ್ಮಲ್ಲಿ ಯಾರೂ ಮಾಡದಂತೆ ಜಾಗ್ರತೆಯಿಂದಿರಿ; ಪ್ರಾಪಂಚಿಕನಾದ ಏಸಾವನಂತೆ ಆಗದಿರಲು ಎಚ್ಚರದಿಂದಿರಿ. ಹಿರಿಯ ಮಗನಾದ ಏಸಾವನು ತನ್ನ ತಂದೆಯ ಸಮಸ್ತಕ್ಕೂ ವಾರಸುದಾರನಾಗುತ್ತಿದ್ದನು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಎಲ್ಲವನ್ನೂ ಮಾರಿದನು. 17 ನಿಮಗೇ ತಿಳಿದಿರುವಂತೆ, ಆ ಬಳಿಕ ಅವನು ತನ್ನ ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಹಳವಾಗಿ ಗೋಳಾಡಿದನು. ಏಸಾವನು ತಾನು ಮಾಡಿದ್ದನ್ನು ಬದಲಾಯಿಸಲಾಗದ್ದರಿಂದ ತಂದೆಯ ಆಶೀರ್ವಾದವು ಅವನಿಗೆ ದೊರೆಯಲಿಲ್ಲ.
18 ನೀವು ಒಂದು ಹೊಸ ಸ್ಥಳಕ್ಕೆ ಬಂದಿರುವಿರಿ. ಅದು ಇಸ್ರೇಲಿನ ಜನರು ಬಂದ ಬೆಟ್ಟದ ಸ್ಥಳವಲ್ಲ. ಮುಟ್ಟುವುದಕ್ಕೆ ಸಾಧ್ಯವಾಗುವಂತಹ ಮತ್ತು ಬೆಂಕಿ ಹತ್ತಿಕೊಂಡಿರುವಂತಹ ಬೆಟ್ಟದ ಬಳಿಗೆ ನೀವು ಬಂದಿಲ್ಲ. ನೀವು ಕಗ್ಗತ್ತಲೆ, ದುಃಖ ಮತ್ತು ಬಿರಗಾಳಿಯ ಬಳಿಗೆ ಬಂದಿಲ್ಲ. 19 ನೀವು ತುತೂರಿಯ ಧ್ವನಿಯ ಬಳಿಗಾಗಲಿ ಅಥವಾ ನಿಮ್ಮೊಂದಿಗೆ ಮಾತನಾಡುವ ಸ್ವರದ ಬಳಿಗಾಗಲಿ ಬಂದಿಲ್ಲ. ಜನರು ಆ ಧ್ವನಿಯನ್ನು ಕೇಳಿದಾಗ, ಮತ್ತೊಂದು ಮಾತನ್ನು ತಮಗೆ ಹೇಳಬಾರದೆಂದು ಬೇಡಿಕೊಂಡರು. 20 “ಆ ಬೆಟ್ಟವನ್ನು ಮುಟ್ಟುವ ಏನನ್ನಾದರೂ ಸರಿ, ಅದು ಒಂದು ಪ್ರಾಣಿಯಾಗಿದ್ದರೂ ಅದನ್ನು ಕಲ್ಲೆಸೆದು ಕೊಂದುಹಾಕಿರಿ”(B) ಎಂಬ ಆಜ್ಞೆಯನ್ನು ಕೇಳಲು ಅವರು ಇಷ್ಟಪಡಲಿಲ್ಲ. 21 ಆ ಜನರು ಅಂದು ಕಂಡದ್ದು ಭಯಂಕರವಾಗಿದ್ದುದರಿಂದ ಮೋಶೆಯು, “ನಾನು ಭಯದಿಂದ ನಡುಗುತ್ತಿದ್ದೇನೆ”(C) ಎಂದು ಹೇಳಿದನು.
22 ಆದರೆ ನೀವು ಅಂಥ ಸ್ಥಳಕ್ಕೆ ಬಂದಿಲ್ಲ. ನೀವು ಬಂದಿರುವ ಹೊಸ ಸ್ಥಳ ಚೀಯೋನ್ ಬೆಟ್ಟ, ಜೀವಸ್ವರೂಪನಾದ ದೇವರು ವಾಸವಾಗಿರುವ ಪರಲೋಕದ ಜೆರುಸಲೇಮಿಗೂ ಸಹಸ್ರಾರು ದೇವದೂತರು ಸಂತೋಷದಿಂದ ಒಟ್ಟುಗೂಡಿರುವ ಸ್ಥಳಕ್ಕೂ ಬಂದಿರುವಿರಿ. 23 ದೇವರ ಚೊಚ್ಚಲು ಮಕ್ಕಳ ಸಭೆಗೆ ನೀವು ಬಂದಿರುವಿರಿ. ಅವರ ಹೆಸರುಗಳನ್ನು ಪರಲೋಕದಲ್ಲಿ ಬರೆಯಲಾಗಿದೆ. ನೀವು ಜನರಿಗೆಲ್ಲ ತೀರ್ಪು ನೀಡುವ ದೇವರ ಬಳಿಗೂ ಪರಿಪೂರ್ಣರನ್ನಾಗಿ ಮಾಡಲ್ಪಟ್ಟ ಒಳ್ಳೆಯ ಜನರ ಆತ್ಮಗಳ ಬಳಿಗೂ ಬಂದಿರುವಿರಿ. 24 ದೇವರಿಂದ ಹೊಸ ಒಡಂಬಡಿಕೆಯನ್ನು ತಂದಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮ ಸಂಗತಿಗಳನ್ನು ನಮಗೆ ತಿಳಿಸುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
25 ದೇವರು ಮಾತನಾಡುವಾಗ ಆಲಿಸದೆ ಇರಬೇಡಿ. ಆತನು ಇಸ್ರೇಲರಿಗೆ ಈ ಲೋಕದಲ್ಲಿ ಎಚ್ಚರಿಕೆ ನೀಡಿದಾಗ, ಅವರು ಆತನ ಮಾತನ್ನು ಕೇಳಲಿಲ್ಲ. ಆದರೆ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಈಗ ದೇವರು ಪರಲೋಕದಿಂದ ಮಾತಾಡುತ್ತಿದ್ದಾನೆ. ಆತನ ಮಾತನ್ನು ಆಲಿಸದ ಜನರು ಹೇಗೆ ತಪ್ಪಿಸಿಕೊಳ್ಳಲಾದೀತು? 26 ಆತನು ಮುಂಚೆ ಮಾತನಾಡಿದಾಗ, ಆತನ ಧ್ವನಿಯು ಭೂಮಿಯನ್ನು ನಡುಗಿಸಿತು. ಆದರೆ ಈಗ ಆತನು, “ಮತ್ತೊಂದು ಸಾರಿ ನಾನು ಭೂಮಿಯನ್ನು ನಡುಗಿಸುತ್ತೇನೆ, ಪರಲೋಕವನ್ನೂ ನಡುಗಿಸುತ್ತೇನೆ”(D) ಎಂದು ವಾಗ್ದಾನ ಮಾಡಿದ್ದಾನೆ. 27 “ಮತ್ತೊಂದು ಸಾರಿ” ಎಂಬ ಮಾತುಗಳು ಸೃಷ್ಟಿಗೊಂಡ ಎಲ್ಲವೂ ನಾಶವಾಗುತ್ತವೆ ಎಂಬುದನ್ನು ನಮಗೆ ಸ್ಪಷ್ಟಪಡಿಸುತ್ತವೆ. ಅವುಗಳನ್ನು ನಡುಗಿಸಲು ಸಾಧ್ಯ. ನಡುಗಿಸಲಾಗದಂಥವುಗಳು ಮಾತ್ರ ಸ್ಥಿರವಾಗಿರುತ್ತವೆ.
28 ಆದ್ದರಿಂದ, ನಡುಗಿಸಲಾಗದಿರುವ ರಾಜ್ಯವನ್ನು ನಾವು ಹೊಂದಿರುವುದರಿಂದ ದೇವರಿಗೆ ಕೃತಜ್ಞತೆಯಿಂದಿರಬೇಕು. ಆತನಿಗೆ ಮೆಚ್ಚಿಕೆಕರವಾದ ಆರಾಧನೆಯನ್ನು ಭಯಭಕ್ತಿಯಿಂದ ಮಾಡಬೇಕು. 29 ಏಕೆಂದರೆ ನಮ್ಮ “ದೇವರು ನಾಶಮಾಡುವ ಬೆಂಕಿಯಂತಿದ್ದಾನೆ.”(E)
Kannada Holy Bible: Easy-to-Read Version. All rights reserved. © 1997 Bible League International