Old/New Testament
ಸಂಕಟದ ಅರ್ಥ
3 ಯೆಹೋವನ ರೌದ್ರ ದಂಡದಿಂದ
ಸಂಕಟವನ್ನು ಅನುಭವಿಸಿರುವವನು ನಾನೇ!
2 ಯೆಹೋವನು ನನ್ನನ್ನು ಬೆಳಕೇ ಇಲ್ಲದ
ಕತ್ತಲೆಗೆ ನಡೆಸಿಕೊಂಡು ಬಂದನು.
3 ಯೆಹೋವನು ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದನು.
ಆತನು ಇಡೀ ದಿನವೆಲ್ಲಾ ಮತ್ತೆಮತ್ತೆ ಹಾಗೆಯೇ ಮಾಡಿದನು.
4 ಆತನು ನನ್ನ ಮಾಂಸವನ್ನು ಮತ್ತು ಚರ್ಮವನ್ನು ಕಂದಿಸಿದ್ದಾನೆ.
ಆತನು ನನ್ನ ಮೂಳೆಗಳನ್ನು ಮುರಿದುಹಾಕಿದನು.
5 ಆತನು ನನ್ನನ್ನು ಕಠೋರತೆಯಿಂದಲೂ
ಆಪತ್ತಿನಿಂದಲೂ ಸುತ್ತುವರಿದು ಮುತ್ತಿಗೆಹಾಕಿದ್ದಾನೆ.
6 ಬಹುಕಾಲದ ಹಿಂದೆಯೇ ಸತ್ತಿರುವವರಂತೆ
ನನ್ನನ್ನು ಕತ್ತಲೆಯಲ್ಲಿ ಕುಳ್ಳಿರಿಸಿದ್ದಾನೆ.
7 ಯೆಹೋವನು ನನ್ನನ್ನು ಬಂಧಿಸಿ ನಾನು ಹೊರಗೆ ಬರಲಾಗದಂತೆ ಮಾಡಿದನು.
ಆತನು ನನ್ನನ್ನು ಬಲವಾದ ಸರಪಣಿಗಳಿಂದ ಕಟ್ಟಿ ಹಾಕಿದನು.
8 ನಾನು ಸಹಾಯಕ್ಕಾಗಿ ಅರಚಿಕೊಳ್ಳುವಾಗಲೂ ಕೂಗಿಕೊಳ್ಳುವಾಗಲೂ
ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲ.
9 ಆತನು ನನ್ನ ದಾರಿಯನ್ನು ಕಲ್ಲುಗಳಿಂದ ಮುಚ್ಚಿದ್ದಾನೆ.
ಆತನು ನನ್ನ ಹಾದಿಯನ್ನು ಡೊಂಕುಗೊಳಿಸಿದ್ದಾನೆ.
10 ನನ್ನ ಪಾಲಿಗಂತೂ ಯೆಹೋವನು ಆಕ್ರಮಣಮಾಡಲು ಸಿದ್ಧವಾಗಿರುವ ಕರಡಿಯಂತೆಯೂ
ಅಡಗಿಕೊಂಡಿರುವ ಸಿಂಹದಂತೆಯೂ ಇದ್ದಾನೆ.
11 ಯೆಹೋವನು ನನ್ನನ್ನು ನನ್ನ ದಾರಿಯಿಂದ ಓಡಿಸಿದನು.
ಆತನು ನನ್ನನ್ನು ಚೂರುಚೂರು ಮಾಡಿದನು.
ಆತನು ನನ್ನನ್ನು ಅಸಹಾಯಕನನ್ನಾಗಿ ತೊರೆದುಬಿಟ್ಟಿದ್ದಾನೆ.
12 ಆತನು ತನ್ನ ಬಿಲ್ಲನ್ನು ಸಜ್ಜುಗೊಳಿಸಿದನು.
ಆತನು ತನ್ನ ಬಾಣಗಳಿಂದ ನನಗೆ ಗುರಿಯಿಟ್ಟನು.
13 ಆತನು ನನ್ನ ಹೊಟ್ಟೆಗೆ
ತನ್ನ ಬಾಣಗಳಿಂದ ಹೊಡೆದನು.
14 ನನ್ನ ಜನರಿಗೆಲ್ಲಾ ಹಾಸ್ಯಾಸ್ಪದವಾಗಿದ್ದೇನೆ.
ದಿನವೆಲ್ಲಾ ಅವರು ನನ್ನ ಬಗ್ಗೆ ಹಾಡುಗಳನ್ನು ಹಾಡುತ್ತಾ ಗೇಲಿ ಮಾಡುತ್ತಾರೆ.
15 ಯೆಹೋವನು ನನಗೆ ಕುಡಿಯಲು ಈ ವಿಷವನ್ನು (ಶಿಕ್ಷೆಯನ್ನು) ಕೊಟ್ಟನು.
ಕಹಿಯಾದ ಈ ಪಾನೀಯದಿಂದ ಆತನು ನನ್ನನ್ನು ತುಂಬಿಸಿದನು.
16 ಯೆಹೋವನು ನನಗೆ ನುರುಜುಗಲ್ಲನ್ನು ಮುಕ್ಕಿಸಿ ನನ್ನ ಹಲ್ಲುಗಳನ್ನು ಮುರಿದುಹಾಕಿದ್ದಾನೆ.
ಆತನು ನನ್ನನ್ನು ಧೂಳಿಗೆ ಹಾಕಿ ತುಳಿದಿದ್ದಾನೆ.
17 ಇನ್ನೆಂದಿಗೂ ಸಮಾಧಾನವೇ ಇರುವುದಿಲ್ಲವೆಂದುಕೊಂಡೆನು.
ನಾನು ಸಂತೋಷವನ್ನು ಮರೆತುಬಿಟ್ಟೆನು.
18 ನಾನು ನನ್ನೊಳಗೆ, “ಯೆಹೋವನು ನನಗೆ ಸಹಾಯ ಮಾಡುತ್ತಾನೆ
ಎಂಬ ನಿರೀಕ್ಷೆ ಇನ್ನೆಂದಿಗೂ ನನಗಿಲ್ಲ” ಎಂದು ಕೊಂಡೆನು.
19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.
25 ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
26 ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ
ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು.
27 ಯೌವನದಲ್ಲೇ ಸಂಕಟದ ನೊಗವನ್ನು
ಹೊರುವುದು ಮನುಷ್ಯನಿಗೆ ಒಳ್ಳೆಯದು.
28 ಯೆಹೋವನು ಈ ಸಂಕಟದ ನೊಗವನ್ನು
ಅವನ ಮೇಲೆ ಹಾಕುವಾಗ ಅವನು ಮೌನವಾಗಿ ಕುಳಿತುಕೊಂಡಿರಬೇಕು.
29 ಅವನು ದೀನತೆಯಿಂದ ತನ್ನ ಮುಖವನ್ನು ಧೂಳಿನಲ್ಲಿ ಹಾಕಬೇಕು.
ಆಗ ಅವನ ಜೀವಕ್ಕೆ ನಿರೀಕ್ಷೆ ಇದ್ದರೂ ಇರಬಹುದು.
30 ಆ ವ್ಯಕ್ತಿಯು ತನ್ನನ್ನು ಹೊಡೆಯುವವರಿಗೆ ತನ್ನ ಕೆನ್ನೆಯನ್ನು ಒಡ್ಡಬೇಕು.
ಅವನು ತನಗೆ ಜನರಿಂದಾಗುವ ಗೇಲಿಯನ್ನು ಸಹಿಸಿಕೊಳ್ಳಬೇಕು.
31 ಯೆಹೋವನು ಜನರನ್ನು ಶಾಶ್ವತವಾಗಿ ತೊರೆದುಬಿಡುವುದಿಲ್ಲ
ಎಂಬುದು ಆ ವ್ಯಕ್ತಿಯ ನೆನಪಿನಲ್ಲಿರಬೇಕು.
32 ಯೆಹೋವನು ಶಿಕ್ಷಿಸುವಾಗ ಕರುಣೆಯುಳ್ಳವನೂ ಆಗಿರುತ್ತಾನೆ.
ಆತನು ತನ್ನ ಮಹಾಪ್ರೀತಿ ಮತ್ತು ಕನಿಕರಗಳಿಂದಲೇ ಕರುಣೆಯುಳ್ಳವನಾಗಿರುತ್ತಾನೆ.
33 ತಾನು ಜನರನ್ನು ಶಿಕ್ಷಿಸಬೇಕೆಂಬುದು ಯೆಹೋವನ ಬಯಕೆಯೇನಲ್ಲ.
ತಾನು ಜನರನ್ನು ವ್ಯಸನಗೊಳಿಸಬೇಕೆಂಬುದು ಆತನಿಗೆ ಇಷ್ಟವಿಲ್ಲ.
34 ಈ ಸಂಗತಿಗಳನ್ನು ಇಷ್ಟಪಡುವುದಿಲ್ಲ.
ಯಾರೋ ಒಬ್ಬನು ಈ ಲೋಕದ ಕೈದಿಗಳನ್ನೆಲ್ಲಾ ತನ್ನ ಪಾದದ ಕೆಳಗೆ ಹಾಕಿ ತುಳಿಯುವುದನ್ನು ಆತನು ಇಷ್ಟಪಡುವುದಿಲ್ಲ.
35 ಒಬ್ಬನು ಮತ್ತೊಬ್ಬನಿಗೆ ಅನ್ಯಾಯ ಮಾಡುವುದನ್ನು ಆತನು ಇಷ್ಟಪಡುವುದಿಲ್ಲ.
ಆದರೆ ಕೆಲವರು ಆ ಕೆಟ್ಟಕಾರ್ಯಗಳನ್ನು ಮಹೋನ್ನತನಾದ ಯೆಹೋವನ ಎದುರಿನಲ್ಲಿಯೇ ಮಾಡುತ್ತಾರೆ.
36 ವ್ಯಾಜ್ಯದಲ್ಲಿ ದೊರೆಯಬೇಕಾದ ನ್ಯಾಯವನ್ನು ದೊರೆಯದಂತೆ ಮಾಡುವುದು ಯೆಹೋವನಿಗೆ ಇಷ್ಟವಿಲ್ಲ.
ಯೆಹೋವನು ಈ ಸಂಗತಿಗಳಲ್ಲಿ ಯಾವುದನ್ನೂ ಇಷ್ಟಪಡುವುದಿಲ್ಲ.
37 ಯಾರೇ ಆಗಲಿ ತಾವು ಮುಂತಿಳಿಸಿದ್ದನ್ನು
ಯೆಹೋವನು ಆಜ್ಞಾಪಿಸದ ಹೊರತು ಅದು ನೆರವೇರುವುದಿಲ್ಲ.
38 ಕೆಟ್ಟವುಗಳೂ ಸಂಭವಿಸುವಂತೆ
ಮಹೋನ್ನತನಾದ ಯೆಹೋವನು ಆಜ್ಞಾಪಿಸುತ್ತಾನೆ.
39 ಜೀವಂತವಾಗಿರುವ ಯಾವ ವ್ಯಕ್ತಿಯೇ ಆಗಲಿ ತನ್ನ ಪಾಪಗಳ ನಿಮಿತ್ತ
ಯೆಹೋವನ ಶಿಕ್ಷೆಗೆ ಗುರಿಯಾಗುವಾಗ ದೂರು ಹೇಳಕೂಡದು.
40 ನಾವು ಏನು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಿ ನೋಡೋಣ.
ಬಳಿಕ ಯೆಹೋವನಿಗೆ ಅಭಿಮುಖರಾಗೋಣ.
41 ಪರಲೋಕದ ದೇವರಿಗೆ ನಮ್ಮ ಹೃದಯಗಳನ್ನೂ
ಕೈಗಳನ್ನೂ ಎತ್ತಿಹಿಡಿಯೋಣ.
42 “ನಾವು ದಂಗೆ ಎದ್ದಿದ್ದೇವೆ ಮತ್ತು ಅವಿಧೇಯರಾಗಿದ್ದೇವೆ.
ಆದ್ದರಿಂದ ನೀನು ನಮ್ಮನ್ನು ಕ್ಷಮಿಸಿಲ್ಲ.
43 ನೀನು ನಮಗೆ ನಿನ್ನ ಕೋಪವನ್ನು ಹೊದಿಸಿ ನಮ್ಮನ್ನು ಓಡಿಸಿಬಿಟ್ಟೆ.
ನೀನು ನಮ್ಮನ್ನು ನಿಷ್ಕರುಣೆಯಿಂದ ಕೊಂದುಹಾಕಿದೆ!
44 ನೀನು ನಿನಗೆ ಮೋಡಗಳನ್ನು ಹೊದಿಸಿಕೊಂಡು
ನಮ್ಮ ಯಾವ ಪ್ರಾರ್ಥನೆಯೂ ನಿನ್ನ ಬಳಿಗೆ ಬಾರದಂತೆ ಮಾಡಿದೆ.
45 ನೀನು ನಮ್ಮನ್ನು ಇತರ ಜನಾಂಗಗಳಿಗೆ ಕಸದಂತೆಯೂ
ಹೊಲಸಿನಂತೆಯೂ ಮಾಡಿದೆ.
46 ನಮ್ಮ ಶತ್ರುಗಳೆಲ್ಲಾ
ನಮ್ಮೊಂದಿಗೆ ಕೋಪದಿಂದ ಮಾತಾಡುತ್ತಾರೆ.
47 ನಾವು ಭಯಗೊಂಡಿದ್ದೇವೆ.
ನಾವು ಗುಂಡಿಯೊಳಗೆ ಬಿದ್ದಿದ್ದೇವೆ.
ನಮಗೆ ಬಹಳವಾಗಿ ನೋವಾಗಿದೆ!
ನಾವು ಮುರಿದುಹೋದವರಾಗಿದ್ದೇವೆ!”
48 ನನ್ನ ಕಣ್ಣೀರು ತೊರೆಗಳಂತೆ ಹರಿಯುತ್ತಿದೆ!
ನನ್ನ ಜನರು ನಾಶವಾದ ಕಾರಣ ನಾನು ಗೋಳಾಡುತ್ತಿರುವೆ!
49 ನನ್ನ ಕಣ್ಣೀರು ಸತತವಾಗಿ ಹರಿಯುತ್ತಿದೆ!
ನಾನು ಗೋಳಾಡುತ್ತಲೇ ಇರುವೆನು!
50 ಯೆಹೋವನೇ, ಕೆಳಗಿರುವ ನಮ್ಮನ್ನು
ನೀನು ಬಗ್ಗಿ ನೋಡುವತನಕ ನಾನು ಗೋಳಾಡುತ್ತಲೇ ಇರುವೆನು!
ನೀನು ಪರಲೋಕದಿಂದ ನಮ್ಮನ್ನು ನೋಡುವತನಕ
ನಾನು ಗೋಳಾಡುತ್ತಲೇ ಇರುವೆನು.
51 ನನ್ನ ಪಟ್ಟಣದ ಯುವತಿಯರಿಗೆ ಸಂಭವಿಸಿದ್ದನ್ನು
ನಾನು ನೋಡುವಾಗಲೆಲ್ಲ ನನ್ನ ಕಣ್ಣುಗಳು ನನ್ನನ್ನು ದುಃಖಗೊಳಿಸುತ್ತವೆ.
52 ನಿಷ್ಕಾರಣವಾಗಿ ಜನರು ನನ್ನ ವೈರಿಗಳಾಗಿದ್ದು ನನ್ನನ್ನು ಪಕ್ಷಿಯಂತೆ ಬೇಟೆಯಾಡಿದರು.
53 ನನ್ನ ಪ್ರಾಣವನ್ನು ಒಂದು ಗುಂಡಿಯಲ್ಲಿ ಕೊನೆಗಾಣಿಸಲು ಅವರು ಪ್ರಯತ್ನಿಸಿದರು.
ಅವರು ನನಗೆ ಕಲ್ಲುಗಳನ್ನು ತೂರಿದರು.
54 ನೀರು ನನ್ನ ತಲೆಯ ಮೇಲೆ ಏರಿತು.
“ನಾನು ಸತ್ತುಹೋಗುತ್ತೇನೆ” ಎಂದುಕೊಂಡೆನು.
55 ಯೆಹೋವನೇ, ಗುಂಡಿಯ ತಳದಿಂದ
ನಾನು ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.
56 ನೀನು ನನ್ನ ಸ್ವರವನ್ನು ಕೇಳಿದೆ.
ನೀನು ನಿನ್ನ ಕಿವಿಗಳನ್ನು ಮುಚ್ಚಿಕೊಳ್ಳಲಿಲ್ಲ;
ನಿನ್ನನ್ನು ರಕ್ಷಿಸುವುದಿಲ್ಲ ಎಂದು ಹೇಳಲಿಲ್ಲ.
57 ನಾನು ನಿನ್ನನ್ನು ಕರೆದಾಗ, ನೀನು ಸಮೀಪಕ್ಕೆ ಬಂದು,
“ಭಯಪಡದಿರು” ಎಂದು ಹೇಳಿದೆ.
58 ಯೆಹೋವನೇ, ನೀನು ನನ್ನ ಪರವಾಗಿ ಹೋರಾಡಿದೆ.
ನನ್ನ ಪ್ರಾಣವನ್ನು ರಕ್ಷಿಸಿದೆ.
59 ಯೆಹೋವನೇ, ನನಗಾಗಿರುವ ಅನ್ಯಾಯವನ್ನು ನೀನು ನೋಡಿರುವೆ.
ವ್ಯಾಜ್ಯದಲ್ಲಿ ನನ್ನ ಪರವಾಗಿ ತೀರ್ಪು ನೀಡು.
60 ನನ್ನ ಶತ್ರುಗಳು ನನ್ನ ಮೇಲೆ ಹೇಗೆ ಸೇಡನ್ನು ತೀರಿಸಿಕೊಂಡಿದ್ದಾರೆ ನೋಡು.
ನನಗೆ ವಿರೋಧವಾಗಿ ಅವರು ಮಾಡಿದ ಎಲ್ಲಾ ಯೋಜನೆಗಳನ್ನು ನೋಡು.
61 ಯೆಹೋವನೇ, ಅವರು ನನಗಾಡುವ ಗೇಲಿ ಮಾತನ್ನು ಕೇಳು.
ಅವರು ನನ್ನ ವಿರುದ್ಧ ಮಾಡಿದ ಎಲ್ಲಾ ಯೋಜನೆಗಳನ್ನು ಕೇಳು.
62 ನನ್ನ ಶತ್ರುಗಳ ಮಾತುಗಳು ಮತ್ತು ಆಲೋಚನೆಗಳು
ಯಾವಾಗಲೂ ನನಗೆ ವಿರೋಧವಾಗಿವೆ.
63 ಯೆಹೋವನೇ, ನೋಡು!
ಅವರು ಕುಳಿತುಕೊಂಡಿರುವಾಗಲೂ ನಿಂತುಕೊಂಡಿರುವಾಗಲೂ ನನ್ನನ್ನು ಹೇಗೆ ಗೇಲಿ ಮಾಡುತ್ತಾರೆ!
64 ಯೆಹೋವನೇ, ನೀನು ಅವರಿಗೆ ಮುಯ್ಯಿತೀರಿಸು!
ಅವರು ಮಾಡಿರುವುದಕ್ಕೆ ತಕ್ಕಂತೆ ಅವರನ್ನು ದಂಡಿಸು!
65 ಅವರ ಹೃದಯವನ್ನು ಕಠಿಣಗೊಳಿಸು!
ಬಳಿಕ ಅವರನ್ನು ಶಪಿಸು!
66 ಕೋಪದಿಂದ ಅವರನ್ನು ಓಡಿಸಿಬಿಡು! ಅವರನ್ನು ನಾಶಮಾಡು!
ಯೆಹೋವನೇ, ಅವರನ್ನು ಈ ಭೂಲೋಕದಿಂದಲೇ ಅಳಿಸಿಹಾಕು!
ಜೆರುಸಲೇಮಿನ ಮೇಲೆ ಭಯಂಕರ ಆಕ್ರಮಣ
4 ನೋಡು, ಬಂಗಾರವು ಹೇಗೆ ಕಪ್ಪಾಗಿದೆ.
ನೋಡು, ಶುದ್ಧಬಂಗಾರವು ಹೇಗೆ ಬದಲಾಗಿದೆ.
ಅಮೂಲ್ಯವಾದ ಕಲ್ಲುಗಳು ಎಲ್ಲೆಲ್ಲಿಯೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅವು ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
2 ಚೀಯೋನಿನ ಜನರು ಬಂಗಾರದಂತೆ ಅಮೂಲ್ಯವಾಗಿದ್ದರು.
ಆದರೆ ಈಗ ವೈರಿಗಳು ಅವರನ್ನು ಕುಂಬಾರನಿಂದ ಮಾಡಲ್ಪಟ್ಟಿರುವ ಜೇಡಿಮಣ್ಣಿನ ಹಳೆಯ ಮಡಕೆಗಳೋ ಎಂಬಂತೆ ಪರಿಗಣಿಸಿದ್ದಾರೆ.
3 ಕಾಡುನಾಯಿಯು ಸಹ ತನ್ನ ಮರಿಗಳಿಗೆ ಹಾಲನ್ನು ಕುಡಿಸುತ್ತದೆ.
ನರಿಯು ಸಹ ತನ್ನ ಮರಿಗಳಿಗೆ ಮೊಲೆಗಳಿಂದ ಹಾಲನ್ನು ಕೊಡುತ್ತದೆ.
ಆದರೆ ನನ್ನ ಜನರಾದರೋ,
ಮರುಭೂಮಿಯಲ್ಲಿ ಜೀವಿಸುವ ಉಷ್ಟ್ರಪಕ್ಷಿಯಂತೆ ಕ್ರೂರಿಗಳಾಗಿದ್ದಾರೆ.
4 ಎಳೆಕೂಸಿನ ನಾಲಿಗೆಯು
ಬಾಯಾರಿಕೆಯಿಂದ ಅಂಗಳಿಗೆ ಅಂಟಿಕೊಳ್ಳುತ್ತದೆ.
ಎಳೆಯ ಮಕ್ಕಳು ರೊಟ್ಟಿಯನ್ನು ಕೇಳಿದರೆ
ಅವರಿಗೆ ಯಾರೂ ಏನೂ ಕೊಡುವುದಿಲ್ಲ.
5 ಒಂದು ಕಾಲದಲ್ಲಿ ಮೃಷ್ಟಾನ್ನವನ್ನು ತಿಂದ ಜನರು
ಈಗ ಬೀದಿಗಳಲ್ಲಿ ಸಾಯುತ್ತಿದ್ದಾರೆ.
ಸುಂದರವಾದ ಕೆಂಪು ಉಡುಪುಗಳನ್ನು ಧರಿಸಿಕೊಂಡು ಬೆಳೆದ ಜನರು
ಈಗ ಕಸದ ಗುಂಡಿಗಳಿಂದ ಆಹಾರವನ್ನು ಎತ್ತಿಕೊಳ್ಳುತ್ತಿದ್ದಾರೆ.
6 ನನ್ನ ಜನರ ಪಾಪವು ಬಹಳವಾಗಿತ್ತು.
ಅವರ ಪಾಪವು ಸೊದೋಮ್ ಪಟ್ಟಣದ ಪಾಪಕ್ಕಿಂತಲೂ ಹೆಚ್ಚಾಗಿತ್ತು.
ಸೊದೋಮ್ ಇದ್ದಕ್ಕಿದ್ದಂತೆ ನಾಶವಾಯಿತು.
ಅದು ನಾಶವಾದದ್ದು ಯಾವ ಮಾನವನಿಂದಲೂ ಅಲ್ಲ.
7 ಯೆಹೂದದ ಕೆಲವು ಜನರು
ದೇವರಿಗೆ ವಿಶೇಷವಾದ ರೀತಿಯಲ್ಲಿ ಸಮರ್ಪಿತರಾಗಿದ್ದರು.
ಅವರು ಬಹಳ ಶುದ್ಧರಾಗಿದ್ದರು.
ಅವರು ಹಿಮಕ್ಕಿಂತಲೂ ಹಾಲಿಗಿಂತಲೂ ಬಿಳುಪಾಗಿದ್ದರು.
ಅವರ ದೇಹಗಳು ಹವಳದಂತೆ ಕೆಂಪಾಗಿದ್ದವು.
ಅವರ ಗಡ್ಡಗಳು ಇಂದ್ರನೀಲಮಣಿಯಂತಿದ್ದವು.
8 ಆದರೆ ಈಗ ಅವರ ಮುಖಗಳು ಕಪ್ಪು ಹೊಗೆಗಿಂತಲೂ ಕಪ್ಪಾಗಿವೆ.
ಅವರನ್ನು ಬೀದಿಗಳಲ್ಲಿ ಯಾರೂ ಸಹ ಗುರುತಿಸುವುದಿಲ್ಲ.
ಅವರ ಚರ್ಮವು ಅವರ ಮೂಳೆಗಳ ಮೇಲೆ ಸುಕ್ಕುಗೊಂಡಿದೆ.
ಅವರ ಚರ್ಮವು ಮರದಂತಾಗಿದೆ.
9 ಬರಗಾಲದ ನಿಮಿತ್ತ ಸತ್ತವರಿಗಿಂತಲೂ
ಖಡ್ಗಗಳಿಂದ ಹತರಾದವರ ಸಾವೇ ಮೇಲಾಗಿತ್ತು.
ಹಸಿವೆಯಿಂದಿದ್ದ ಜನರು ನೋವಿನಿಂದ ನರಳಾಡಿದರು.
ಭೂಮಿಯಿಂದ ಆಹಾರವನ್ನು ಪಡೆಯಲಾಗದೆ ಅವರು ಸತ್ತುಹೋದರು.
10 ಆ ಸಮಯದಲ್ಲಿ, ಕನಿಕರವುಳ್ಳ ಸ್ತ್ರೀಯರು
ಸಹ ತಮ್ಮ ಮಕ್ಕಳನ್ನೇ ಬೇಯಿಸಿ ತಿಂದುಬಿಟ್ಟರು.
ಆ ಮಕ್ಕಳು ಅವರ ತಾಯಂದಿರಿಗೇ ಆಹಾರವಾದರು.
ನನ್ನ ಜನರು ನಾಶಗೊಂಡಾಗ ಇದು ಸಂಭವಿಸಿತು.
11 ಯೆಹೋವನು ತನ್ನ ಕೋಪವನ್ನೆಲ್ಲ ಉಪಯೋಗಿಸಿದನು;
ತನ್ನ ಕೋಪವನ್ನೆಲ್ಲಾ ಸುರಿದುಬಿಟ್ಟನು.
ಆತನು ಚೀಯೋನಿನಲ್ಲಿ ಬೆಂಕಿ ಹೊತ್ತಿಸಿದನು.
ಆ ಬೆಂಕಿಯು ಚೀಯೋನಿನ ಅಡಿಪಾಯಗಳವರೆಗೂ ದಹಿಸಿಬಿಟ್ಟಿತು.
12 ನಡೆದಿದ್ದ ಸಂಗತಿಯನ್ನು ನಂಬುವುದಕ್ಕೂ
ಭೂಲೋಕದ ರಾಜರಿಗೆ ಆಗಲಿಲ್ಲ.
ನಡೆದಿದ್ದ ಸಂಗತಿಯನ್ನು ನಂಬುವುದಕ್ಕೂ
ಲೋಕದ ಜನರಿಗೆ ಆಗಲಿಲ್ಲ.
ಜೆರುಸಲೇಮ್ ಪಟ್ಟಣದ ಬಾಗಿಲುಗಳ ಮೂಲಕ ವೈರಿಗಳು
ಬಂದರೆಂಬುದನ್ನು ಅವರಿಗೆ ನಂಬಲೂ ಆಗಲಿಲ್ಲ.
13 ಜೆರುಸಲೇಮಿನ ಪ್ರವಾದಿಗಳು ಪಾಪ ಮಾಡಿದ್ದರಿಂದಲೇ
ಇದು ಸಂಭವಿಸಿತು.
ಜೆರುಸಲೇಮಿನ ಯಾಜಕರು ದುಷ್ಕೃತ್ಯಗಳನ್ನು ಮಾಡಿದ್ದದರಿಂದಲೇ
ಇದು ಸಂಭವಿಸಿತು.
ಆ ಜನರು ಜೆರುಸಲೇಮ್ ಪಟ್ಟಣದಲ್ಲಿ
ಒಳ್ಳೆಯ ಜನರ ರಕ್ತವನ್ನು ಸುರಿಸಿದ್ದರು.
14 ಆದ್ದರಿಂದ ಆ ಪ್ರವಾದಿಗಳು ಮತ್ತು ಯಾಜಕರು
ಕುರುಡರಂತೆ ಬೀದಿಗಳಲ್ಲಿ ಅಲೆದಾಡಿದರು.
ಅವರು ರಕ್ತದಿಂದ ಹೊಲಸಾಗಿದ್ದರು.
ಅವರು ಹೊಲಸಾಗಿದ್ದದರಿಂದ ಅವರ ಬಟ್ಟೆಯನ್ನು ಮುಟ್ಟುವುದಕ್ಕೂ ಯಾರಿಗೂ ಸಾಧ್ಯವಿರಲಿಲ್ಲ.
15 “ತೊಲಗಿಹೋಗಿ! ತೊಲಗಿಹೋಗಿ!
ನಮ್ಮನ್ನು ಮುಟ್ಟಬೇಡಿ” ಎಂದು ಜನರು ಕೂಗಿಕೊಂಡರು.
ಆ ಜನರು ಅಲೆದಾಡುತ್ತಿದ್ದರು. ಅವರಿಗೆ ಸ್ಥಳವಿರಲಿಲ್ಲ.
ಬೇರೆ ಜನಾಂಗಗಳ ಜನರು,
“ಅವರು ನಮ್ಮೊಂದಿಗೆ ವಾಸಿಸುವುದು ನಮಗೆ ಬೇಕಿಲ್ಲ” ಎಂದು ಹೇಳಿದರು.
16 ಯೆಹೋವನು ತಾನೇ ಆ ಜನರನ್ನು ನಾಶಮಾಡಿದನು.
ಅವರ ಪರಿಪಾಲನೆ ಮಾಡುವುದನ್ನು ನಿಲ್ಲಿಸಿದನು.
ಆತನು ಯಾಜಕರನ್ನು ಗೌರವಿಸಲಿಲ್ಲ.
ಆತನು ಯೆಹೂದದ ಹಿರಿಯರೊಂದಿಗೆ ಕರುಣೆಯಿಂದಿರಲಿಲ್ಲ.
17 ಸಹಾಯಕ್ಕಾಗಿ ಎದುರುನೋಡುತ್ತಾ ನಮ್ಮ ಕಣ್ಣುಗಳು ಮೊಬ್ಬಾದವು.
ಆದರೆ ಯಾವ ಸಹಾಯವೂ ಬರಲಿಲ್ಲ.
ಯಾವ ಜನಾಂಗವಾದರೂ ಬಂದು ನಮ್ಮನ್ನು ರಕ್ಷಿಸುವುದೇನೋ ಎಂದು ಕೋವರದಲ್ಲಿ ನೋಡುತ್ತಲೇ ಇದ್ದೆವು,
ಆದರೆ ಯಾವ ಜನಾಂಗವೂ ಬರಲಿಲ್ಲ.
18 ನಮ್ಮ ವೈರಿಗಳು ನಮ್ಮನ್ನು ಸತತವಾಗಿ ಬೇಟೆಯಾಡುತ್ತಿದ್ದುದರಿಂದ
ನಾವು ಬೀದಿಗಳಿಗೆ ಹೋಗಲೂ ಸಾಧ್ಯವಾಗಲಿಲ್ಲ.
ನಮ್ಮ ಅಂತ್ಯವು ಸಮೀಪಿಸಿತು.
ನಮ್ಮ ಕಾಲವು ಮುಗಿಯಿತು; ನಮ್ಮ ಕೊನೆಯು ಬಂದಿತು!
19 ನಮ್ಮನ್ನು ಅಟ್ಟಿಸಿಕೊಂಡು ಬಂದ ಜನರು
ಆಕಾಶದಲ್ಲಿ ಹಾರುವ ಹದ್ದುಗಳಿಗಿಂತಲೂ ವೇಗಶಾಲಿಗಳಾಗಿದ್ದರು.
ಅವರು ನಮ್ಮನ್ನು ಬೆಟ್ಟಗಳಿಗೆ ಅಟ್ಟಿಸಿಕೊಂಡು ಬಂದರು.
ನಮ್ಮನ್ನು ಹಿಡಿಯುವುದಕ್ಕಾಗಿ ಮರುಭೂಮಿಯಲ್ಲಿ ಅವಿತುಕೊಂಡರು.
20 ನಮಗೆ ರಾಜನು ಬಹಳ ಮುಖ್ಯವಾಗಿದ್ದನು.
ಅವನು ನಮಗೆ ಉಸಿರಿನಷ್ಟೇ ಅಮೂಲ್ಯವಾಗಿದ್ದನು.
ಆದರೆ ಅವರು ರಾಜನನ್ನೇ ಸೆರೆಹಿಡಿದರು.
ಯೆಹೋವನೇ, ಆ ರಾಜನನ್ನು ಆರಿಸಿಕೊಂಡಿದ್ದನು.
“ನಾವು ಅವನ ನೆರಳಿನಲ್ಲಿ ಬದುಕುತ್ತೇವೆ.
ಅವನು ನಮ್ಮನ್ನು ಜನಾಂಗಗಳವರಿಂದ ಸಂರಕ್ಷಿಸುವನು”
ಎಂದು ನಾವು ರಾಜನ ಬಗ್ಗೆ ಹೇಳಿಕೊಂಡಿದ್ದೆವು.
21 ಎದೋಮಿನ ಜನರೇ, ಸಂತೋಷವಾಗಿರಿ.
ಊಚ್ ದೇಶದಲ್ಲಿ ವಾಸವಾಗಿರುವ ಜನರೇ, ಸಂತೋಷವಾಗಿರಿ.
ಆದರೆ ಜ್ಞಾಪಕದಲ್ಲಿಟ್ಟುಕೊಂಡಿರಿ, ಯೆಹೋವನ ಕೋಪದ ಪಾತ್ರೆಯು ನಿಮ್ಮ ಬಳಿಗೂ ಬರುವುದು.
ನೀವು ಆ ಪಾತ್ರೆಯಿಂದ ಕುಡಿಯುವಾಗ
ಮತ್ತೇರಿದವರಾಗಿ ನಿಮ್ಮನ್ನು ನೀವೇ ಬೆತ್ತಲು ಮಾಡಿಕೊಳ್ಳುವಿರಿ.
22 ಚೀಯೋನೇ, ನಿನಗಾಗಬೇಕಿದ್ದ ದಂಡನೆಯು ಸಂಪೂರ್ಣವಾಯಿತು.
ಮತ್ತೆ ನೀನು ಸೆರೆವಾಸಕ್ಕೆ ಹೋಗುವುದಿಲ್ಲ.
ಆದರೆ ಎದೋಮಿನ ಜನರೇ, ನಿಮ್ಮ ಪಾಪಗಳಿಗಾಗಿ ಯೆಹೋವನು ನಿಮ್ಮನ್ನು ದಂಡಿಸುವನು.
ಆತನು ನಿಮ್ಮ ಪಾಪಗಳನ್ನು ಬಹಿರಂಗಪಡಿಸುವನು.
ಯೆಹೋವನಿಗೆ ಪ್ರಾರ್ಥನೆ
5 ಯೆಹೋವನೇ, ನಮಗೆ ಸಂಭವಿಸಿದ್ದನ್ನು ಜ್ಞಾಪಿಸಿಕೊ.
ನಮಗಾಗಿರುವ ಅವಮಾನವನ್ನು ನೋಡು.
2 ನಮ್ಮ ದೇಶವು ಬೇರೆ ಜನಾಂಗಗಳವರ ಪಾಲಾಗಿದೆ.
ನಮ್ಮ ಮನೆಗಳು ಪರದೇಶಿಗಳಿಗೆ ಕೊಡಲ್ಪಟ್ಟಿವೆ.
3 ನಾವು ಅನಾಥರಾಗಿದ್ದೇವೆ. ನಮಗೆ ತಂದೆಯೇ ಇಲ್ಲ.
ನಮ್ಮ ತಾಯಂದಿರು ವಿಧವೆಗಳಂತಾಗಿದ್ದಾರೆ.
4 ನಾವು ಕುಡಿಯುವ ನೀರನ್ನೂ ನಾವು ಕೊಂಡುಕೊಳ್ಳಬೇಕಾಗಿದೆ.
ನಮ್ಮ ಸೌದೆಗೂ ಸಹ ನಾವು ಹಣ ಕೊಡಬೇಕಾಗಿದೆ.
5 ಮರಣದವರೆಗೂ ನಾವು ಹಿಂದಟ್ಟಲ್ಪಟ್ಟಿದ್ದೇವೆ.
ನಾವು ಬಳಲಿಹೋಗಿದ್ದೇವೆ; ನಾವು ವಿಶ್ರಾಂತಿಯನ್ನೇ ಪಡೆದಿಲ್ಲ.
6 ನಾವು ಈಜಿಪ್ಟಿನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡೆವು.
ಸಾಕಷ್ಟು ಆಹಾರಕ್ಕಾಗಿ ನಾವು ಅಸ್ಸೀರಿಯಾದೊಡನೆ ಒಪ್ಪಂದ ಮಾಡಿಕೊಂಡೆವು.
7 ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಪಾಪ ಮಾಡಿದರು.
ಈಗ ಅವರು ಸತ್ತುಹೋಗಿದ್ದಾರೆ.
ಆದರೆ ಅವರ ಪಾಪಗಳ ನಿಮಿತ್ತ ನಾವು ಈಗ ಸಂಕಟಪಡುತ್ತಿದ್ದೇವೆ.
8 ಗುಲಾಮರು ನಮ್ಮ ಅಧಿಪತಿಗಳಾಗಿದ್ದಾರೆ.
ನಮ್ಮನ್ನು ಯಾರೂ ಅವರಿಂದ ರಕ್ಷಿಸಲಾರರು.
9 ಆಹಾರಕ್ಕಾಗಿ ನಾವು ನಮ್ಮ ಪ್ರಾಣಗಳನ್ನೇ ಆಪತ್ತಿಗೆ ಗುರಿ ಮಾಡಿಕೊಳ್ಳುತ್ತೇವೆ.
ಊರ ಹೊರಗೆ ಖಡ್ಗಗಳನ್ನು ಹಿಡಿದುಕೊಂಡಿರುವ ಜನರಿದ್ದಾರೆ.
10 ನಮ್ಮ ಚರ್ಮವು ಒಲೆಯಂತೆ ಬಿಸಿಯಾಗಿದೆ.
ಹಸಿವೆಯಿಂದಾಗಿ ಜ್ವರವು ನಮ್ಮನ್ನು ಸುಡುತ್ತಿದೆ.
11 ಚೀಯೋನಿನ ಸ್ತ್ರೀಯರನ್ನು ವೈರಿಗಳು ಅತ್ಯಾಚಾರ ಮಾಡಿದ್ದಾರೆ.
ಯೆಹೂದದ ಪಟ್ಟಣಗಳಲ್ಲಿ ಅವರು ಕನ್ನಿಕೆಯರನ್ನು ಅತ್ಯಾಚಾರ ಮಾಡಿದ್ದಾರೆ.
12 ವೈರಿಗಳು ನಮ್ಮ ರಾಜಕುಮಾರರನ್ನು ಗಲ್ಲಿಗೇರಿಸಿದ್ದಾರೆ.
ಅವರು ನಮ್ಮ ಹಿರಿಯರಿಗೆ ಗೌರವ ಕೊಡಲಿಲ್ಲ.
13 ನಮ್ಮ ಯುವಕರನ್ನು ಬೀಸುವ ಕಲ್ಲುಗಳಿಂದ
ದವಸಧಾನ್ಯಗಳನ್ನು ಬೀಸುವವರನ್ನಾಗಿ ವೈರಿಗಳು ಮಾಡಿದರು.
ನಮ್ಮ ಯುವಕರು
ಶ್ರಮದ ಕೆಲಸದಿಂದ ಮುಗ್ಗರಿಸಿದ್ದಾರೆ.
14 ಪಟ್ಟಣದ ದ್ವಾರಗಳ ಬಳಿಯಿಂದ ಹಿರಿಯರು ಹೊರಟುಹೋಗಿದ್ದಾರೆ.
ಯುವಕರು ಸಂಗೀತ ನುಡಿಸುವುದನ್ನು ನಿಲ್ಲಿಸಿದ್ದಾರೆ.
15 ನಮ್ಮ ಹೃದಯಗಳಲ್ಲಿ ಆನಂದವೇ ಉಳಿದಿಲ್ಲ.
ನಮ್ಮ ನರ್ತನದ ಸ್ಥಾನವನ್ನು ಗೋಳಾಟವು ಆವರಿಸಿಕೊಂಡಿದೆ.
16 ನಮ್ಮ ತಲೆಯಿಂದ ಕಿರೀಟವು ಬಿದ್ದುಹೋಗಿದೆ.
ನಾವು ಪಾಪ ಮಾಡಿದ್ದರಿಂದಲೇ ನಮಗೆ ಕೇಡುಗಳಾಗಿವೆ.
17 ಇವುಗಳ ದೆಸೆಯಿಂದಾಗಿ ನಮ್ಮ ಹೃದಯಗಳು ಎಡಬಿಡದೆ ನೋಯುತ್ತಿವೆ.
ನಮ್ಮ ಕಣ್ಣುಗಳು ಸರಿಯಾಗಿ ಕಾಣದಂತಾಗಿವೆ.
18 ಚೀಯೋನ್ ಪರ್ವತವು ನಿರ್ಜನ ಪ್ರದೇಶವಾಗಿದೆ.
ಚೀಯೋನ್ ಪರ್ವತದ ಸುತ್ತಮುತ್ತಲೆಲ್ಲ ನರಿಗಳು ಓಡಾಡುತ್ತವೆ.
19 ಯೆಹೋವನೇ, ನೀನಾದರೋ ಶಾಶ್ವತವಾಗಿ ಆಳುವೆ.
ನಿನ್ನ ರಾಜಸಿಂಹಾಸನವು ಸದಾಕಾಲವಿರುವುದು.
20 ಯೆಹೋವನೇ, ನೀನು ನಮ್ಮನ್ನು ಶಾಶ್ವತವಾಗಿ ಮರೆತಿರುವುದೇಕೆ?
ನೀನು ನಮ್ಮನ್ನು ದೀರ್ಘಕಾಲದವರೆಗೆ ತೊರೆದುಬಿಟ್ಟಿರುವುದೇಕೆ?
21 ಯೆಹೋವನೇ, ನಮ್ಮನ್ನು ನಿನ್ನ ಬಳಿಗೆ ಮತ್ತೆ ಬರಮಾಡಿಕೋ.
ನಾವು ಸಂತೋಷದಿಂದ ನಿನ್ನ ಬಳಿಗೆ ಬರುತ್ತೇವೆ.
ನಮ್ಮ ಜೀವಿತಗಳನ್ನು ಮೊದಲಿನ ಸ್ಥಿತಿಗೆ ಬರಮಾಡು.
22 ನೀನು ನಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿರುವಿಯಾ?
ನೀನು ನಮ್ಮ ಮೇಲೆ ಬಹಳವಾಗಿ ಕೋಪಗೊಂಡಿರುವೆ.
ಸಮೀಪಕ್ಕೆ ಬನ್ನಿರಿ
19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.
ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ
24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[a] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.
ಕ್ರಿಸ್ತನಿಂದ ದೂರ ಸರಿಯದಿರಿ
26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(A) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.
ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ
32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.
35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:
“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(B)
39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International