Old/New Testament
ಯೆರೆಮೀಯನನ್ನು ಕಾರಾಗೃಹದಲ್ಲಿಡಲಾಯಿತು
37 ನೆಬೂಕದ್ನೆಚ್ಚರನು ಬಾಬಿಲೋನಿನ ರಾಜನಾಗಿದ್ದನು. ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನಾದ ಕೊನ್ಯನ ಸ್ಥಾನದಲ್ಲಿ ಚಿದ್ಕೀಯನನ್ನು ಯೆಹೂದದ ರಾಜನನ್ನಾಗಿ ನೇಮಿಸಿದ್ದನು. ಚಿದ್ಕೀಯನು ರಾಜನಾದ ಯೋಷೀಯನ ಮಗನಾಗಿದ್ದನು. 2 ಆದರೆ ಯೆಹೋವನು ಯೆರೆಮೀಯನಿಗೆ ಪ್ರವಾದನೆ ಮಾಡಲು ಹೇಳಿದ ಸಂದೇಶಗಳ ಕಡೆಗೆ ಗಮನ ಕೊಡಲಿಲ್ಲ. ಚಿದ್ಕೀಯನ ಸೇವಕರು ಮತ್ತು ಯೆಹೂದದ ಜನರು ಯೆಹೋವನ ಸಂದೇಶಗಳಿಗೆ ಯಾವ ಗಮನವನ್ನೂ ಕೊಡಲಿಲ್ಲ.
3 ರಾಜನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನು ಮತ್ತು ಮಾಸೇಯನ ಮಗನಾದ ಯಾಜಕ ಚೆಫನನನ್ನು ಒಂದು ಸಂದೇಶದೊಂದಿಗೆ ಯೆರೆಮೀಯನಲ್ಲಿಗೆ ಕಳುಹಿಸಿದನು. ಯೆರೆಮೀಯನಿಗೆ ಅವರು ತಂದ ಸಂದೇಶ ಹೀಗಿತ್ತು: “ಯೆರೆಮೀಯನೇ, ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು.”
4 (ಆ ಕಾಲದಲ್ಲಿ ಯೆರೆಮೀಯನನ್ನು ಇನ್ನೂ ಕಾರಾಗೃಹದಲ್ಲಿಟ್ಟಿರಲಿಲ್ಲ. ಅವನು ತನ್ನ ಮನಬಂದ ಕಡೆ ಹೋಗಲು ಸ್ವತಂತ್ರನಾಗಿದ್ದನು. 5 ಅದಲ್ಲದೆ ಆಗ ಫರೋಹನ ಸೈನ್ಯವು ಈಜಿಪ್ಟಿನಿಂದ ಯೆಹೂದದ ಕಡೆಗೆ ಹೊರಟಿತ್ತು. ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಬಾಬಿಲೋನ್ ಸೈನ್ಯವು ಜೆರುಸಲೇಮ್ ನಗರಕ್ಕೆ ಮುತ್ತಿಗೆ ಹಾಕಿತ್ತು. ಆಗ ಈಜಿಪ್ಟಿನ ಸೈನ್ಯವು ತಮ್ಮ ಕಡೆ ಬರುತ್ತಿದೆ ಎಂಬ ಸಮಾಚಾರವು ಬಂದಿತು. ಅದನ್ನು ಕೇಳಿ ಬಾಬಿಲೋನಿನ ಸೈನ್ಯವು ಈಜಿಪ್ಟಿನ ಸೈನ್ಯವನ್ನೆದುರಿಸಲು ಜೆರುಸಲೇಮನ್ನು ಬಿಟ್ಟುಹೋಗಿತ್ತು.)
6 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು: 7 “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಯೆಹೂಕಲನೇ ಮತ್ತು ಚೆಫನ್ಯನೇ, ಯೆಹೂದದ ರಾಜನಾದ ಚಿದ್ಕೀಯನು ನನಗೆ ಪ್ರಶ್ನೆಗಳನ್ನು ಕೇಳುವದಕ್ಕಾಗಿ ನಿಮ್ಮನ್ನು ನನ್ನಲ್ಲಿಗೆ ಕಳಿಸಿದ್ದಾನೆಂಬುದು ನನಗೆ ಗೊತ್ತು. ರಾಜನಾದ ಚಿದ್ಕೀಯನಿಗೆ ಹೀಗೆ ಹೇಳಿರಿ. ಬಾಬಿಲೋನಿನ ಸೈನ್ಯದ ವಿರುದ್ಧ ನಿಮಗೆ ಸಹಾಯ ಮಾಡಲು ಇಲ್ಲಿಗೆ ಬರುವದಕ್ಕಾಗಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಆದರೆ ಫರೋಹನ ಸೈನ್ಯವು ಈಜಿಪ್ಟಿಗೆ ಹಿಂದಿರುಗುವುದು. 8 ಬಳಿಕ ಬಾಬಿಲೋನಿನ ಸೈನ್ಯವು ಇಲ್ಲಿಗೆ ಬರುವುದು. ಅವರು ಜೆರುಸಲೇಮಿನ ಮೇಲೆ ಧಾಳಿ ಮಾಡುವರು. ಆಗ ಬಾಬಿಲೋನಿನ ಆ ಸೈನ್ಯವು ಜೆರುಸಲೇಮನ್ನು ವಶಪಡಿಸಿಕೊಂಡು ಅದನ್ನು ಸುಟ್ಟುಹಾಕುವುದು.’ 9 ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮ್ ನಿವಾಸಿಗಳೇ “ಬಾಬಿಲೋನ್ ಸೈನಿಕರು ಖಂಡಿತವಾಗಿಯೂ ನಮ್ಮನ್ನು ಬಿಟ್ಟುಹೋಗುವರು” ಎಂದು ನಿಮಗೆ ನೀವೇ ಹೇಳಿಕೊಂಡು ನಿಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳಬೇಡಿ, ಅವರು ನಿಮ್ಮನ್ನು ಬಿಟ್ಟುಹೋಗುವದಿಲ್ಲ. 10 ಜೆರುಸಲೇಮಿನ ಜನರೇ, ನಿಮ್ಮ ಮೇಲೆ ಧಾಳಿ ಮಾಡುವ ಬಾಬಿಲೋನಿನ ಎಲ್ಲಾ ಸೈನಿಕರನ್ನು ನೀವು ಸೋಲಿಸಿದರೂ ಅವರ ಗುಡಾರದಲ್ಲಿ ಕೆಲವು ಜನ ಗಾಯಗೊಂಡವರು ಉಳಿದಿರುತ್ತಾರೆ. ಆ ಗಾಯಾಳುಗಳೇ ತಮ್ಮ ಗುಡಾರದಿಂದ ಹೊರಬಂದು ಜೆರುಸಲೇಮನ್ನು ಸುಟ್ಟುಹಾಕುವರು.’”
11 ಈಜಿಪ್ಟ್ ದೇಶದ ಫರೋಹನ ಸೈನ್ಯದೊಂದಿಗೆ ಕಾದಾಡಲು ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋದ ಮೇಲೆ 12 ಯೆರೆಮೀಯನು ಜೆರುಸಲೇಮಿನಿಂದ ಬೆನ್ಯಾಮೀನ್ ಪ್ರದೇಶಕ್ಕೆ ಹೋಗ ಬಯಸಿದನು. ತನ್ನ ಮನೆತನಕ್ಕೆ ಸೇರಿದ ಆಸ್ತಿಯ ವಿಭಜನೆಗಾಗಿ ಅವನು ಹೋಗುತ್ತಿದ್ದನು. 13 ಆದರೆ ಯೆರೆಮೀಯನು ಜೆರುಸಲೇಮಿನ ಬೆನ್ಯಾಮೀನ್ ಹೆಬ್ಬಾಗಿಲಿನ ಹತ್ತಿರ ಹೋದಾಗ ಪಹರೆದಾರರ ಮುಖ್ಯಸ್ಥನು ಅವನನ್ನು ಹಿಡಿದುಕೊಂಡನು. ಆ ಮುಖ್ಯಸ್ಥನ ಹೆಸರು ಇರೀಯ. ಇರೀಯನು ಶೆಲೆಮ್ಯನ ಮಗನು; ಶೆಲೆಮ್ಯನು ಹನನ್ಯನ ಮಗನು. ಮುಖ್ಯಸ್ಥನಾದ ಇರೀಯನು ಯೆರೆಮೀಯನನ್ನು ಹಿಡಿದುಕೊಂಡು, “ಯೆರೆಮೀಯನೇ, ನೀನು ಬಾಬಿಲೋನಿನ ಕಡೆ ಸೇರಿಕೊಳ್ಳುವದಕ್ಕಾಗಿ ನಮ್ಮನ್ನು ಬಿಟ್ಟುಹೋಗುತ್ತಿರುವೆ” ಎಂದನು.
14 “ಅದು ನಿಜವಲ್ಲ, ಬಾಬಿಲೋನಿನವರ ಕಡೆ ಸೇರಿಕೊಳ್ಳಲು ನಾನು ಬಿಟ್ಟುಹೋಗುತ್ತಿಲ್ಲ” ಎಂದು ಯೆರೆಮೀಯನು ಇರೀಯನಿಗೆ ಹೇಳಿದನು. ಆದರೆ ಇರೀಯನು ಯೆರೆಮೀಯನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಇರೀಯನು ಯೆರೆಮೀಯನನ್ನು ಬಂಧಿಸಿ ಜೆರುಸಲೇಮಿನ ರಾಜಾಧಿಕಾರಿಗಳ ಬಳಿಗೆ ಕರೆದೊಯ್ದನು. 15 ಆ ಅಧಿಕಾರಿಗಳು ಯೆರೆಮೀಯನ ಮೇಲೆ ತುಂಬಾ ಕೋಪಗೊಂಡರು. ಯೆರೆಮೀಯನನ್ನು ಹೊಡೆಯಬೇಕೆಂದು ಅವರು ಆಜ್ಞೆಯಿತ್ತರು. ಆಮೇಲೆ ಅವರು ಯೆರೆಮೀಯನನ್ನು ಸೆರೆಮನೆಯಲ್ಲಿಟ್ಟರು. ಆ ಸೆರೆಮನೆಯು ಯೆಹೋನಾಥಾನನೆಂಬುವನ ಮನೆಯಲ್ಲಿತ್ತು. ಯೆಹೋನಾಥಾನನು ಯೆಹೂದದ ರಾಜನ ಲಿಫಿಗಾರನಾಗಿದ್ದನು. ಯೆಹೋನಾಥಾನನ ಮನೆಯನ್ನು ಸೆರೆಮನೆಯನ್ನಾಗಿ ಮಾಡಲಾಗಿತ್ತು. 16 ಅವರು ಯೆರೆಮೀಯನನ್ನು ಯೆಹೋನಾಥಾನನ ನೆಲಮನೆಯ ಒಂದು ಕೋಣೆಯಲ್ಲಿಟ್ಟರು. ಆ ಕೋಣೆಯು ನೆಲಮನೆಯ ಕೆಳಭಾಗದಲ್ಲಿತ್ತು. ಯೆರೆಮೀಯನು ಅಲ್ಲಿ ಬಹಳ ದಿವಸಗಳವರೆಗೆ ಇದ್ದನು.
17 ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ತನ್ನ ಅರಮನೆಗೆ ಕರೆತರಿಸಿದನು. ಚಿದ್ಕೀಯನು ಯೆರೆಮೀಯನೊಂದಿಗೆ ರಹಸ್ಯವಾಗಿ ಮಾತನಾಡಿ, “ಯೆಹೋವನಿಂದ ಏನಾದರೂ ಸಂದೇಶವಿದೆಯೊ?” ಎಂದು ಕೇಳಿದನು.
“ಹೌದು, ಯೆಹೋವನಿಂದ ಒಂದು ಸಂದೇಶವಿದೆ. ಚಿದ್ಕೀಯನೇ, ನಿನ್ನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು” ಎಂದು ಯೆರೆಮೀಯನು ಉತ್ತರಿಸಿದನು. 18 ಆಮೇಲೆ ಯೆರೆಮೀಯನು ರಾಜನಾದ ಚಿದ್ಕೀಯನನ್ನು ಹೀಗೆ ಕೇಳಿದನು, “ನಾನು ಏನು ತಪ್ಪು ಮಾಡಿದ್ದೇನೆ? ನಾನು ನಿನ್ನ ವಿರುದ್ಧ ಅಥವಾ ನಿನ್ನ ಅಧಿಕಾರಿಗಳ ವಿರುದ್ಧ ಅಥವಾ ಜೆರುಸಲೇಮಿನ ಜನರ ವಿರುದ್ಧ ಯಾವ ಅಪರಾಧವನ್ನು ಮಾಡಿದ್ದೇನೆ? ನೀನು ನನ್ನನ್ನು ಸೆರೆಮನೆಯಲ್ಲಿ ಏಕೆ ಹಾಕಿರುವೆ? 19 ರಾಜನಾದ ಚಿದ್ಕೀಯನೇ, ನಿನ್ನ ಪ್ರವಾದಿಗಳು ಈಗ ಎಲ್ಲಿದ್ದಾರೆ? ಆ ಪ್ರವಾದಿಗಳು ನಿನಗೆ ಸುಳ್ಳುಪ್ರವಾದನೆಯನ್ನು ಮಾಡಿದರು. ‘ಬಾಬಿಲೋನಿನ ರಾಜನು ನಿನ್ನ ಮೇಲಾಗಲಿ ಅಥವಾ ಈ ಯೆಹೂದ ಪ್ರದೇಶದ ಮೇಲಾಗಲಿ ಧಾಳಿ ಮಾಡುವದಿಲ್ಲ’ ಎಂದು ಅವರು ಹೇಳಿದ್ದರು. 20 ಆದರೆ ಯೆಹೂದದ ರಾಜನಾದ ಚಿದ್ಕೀಯನೇ, ದಯವಿಟ್ಟು ನಾನು ಹೇಳುವದನ್ನು ಕೇಳು. ನನ್ನ ಕೋರಿಕೆಯನ್ನು ದಯವಿಟ್ಟು ಕೇಳು. ನನ್ನನ್ನು ಲಿಪಿಕಾರನಾದ ಯೆಹೋನಾಥಾನನ ಮನೆಗೆ ತಿರುಗಿ ಕಳುಹಿಸಬೇಡ. ಇದೇ ನನ್ನ ಬೇಡಿಕೆ. ನೀನು ನನ್ನನ್ನು ಮತ್ತೆ ಅಲ್ಲಿಗೆ ಕಳುಹಿಸಿದರೆ ನಾನು ಅಲ್ಲಿ ಸತ್ತುಹೋಗುತ್ತೇನೆ” ಎಂದನು.
21 ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಡಬೇಕೆಂದು ಮತ್ತು ಅವನಿಗೆ ಪೇಟೆಯಿಂದ ರೊಟ್ಟಿಯನ್ನು ತಂದುಕೊಡಬೇಕೆಂದು ಆಜ್ಞೆ ಮಾಡಿದನು. ನಗರದಲ್ಲಿ ರೊಟ್ಟಿ ಇರುವವರೆಗೆ ಯೆರೆಮೀಯನಿಗೆ ರೊಟ್ಟಿಯನ್ನು ಕೊಡಲಾಯಿತು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಬಂಧಿಯಾಗಿದ್ದನು.
ಯೆರೆಮೀಯನನ್ನು ಒಂದು ಬಾವಿಯಲ್ಲಿ ಹಾಕಲಾಯಿತು.
38 ಯೆರೆಮೀಯನು ಪ್ರವಾದಿಸುತ್ತಿರುವುದನ್ನು ಕೆಲವು ಜನ ರಾಜಾಧಿಕಾರಿಗಳು ಕೇಳಿಸಿಕೊಂಡರು. ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರುಗಳು ಅವನ ಮಾತನ್ನೆಲ್ಲಾ ಕೇಳಿಸಿಕೊಂಡರು. ಯೆರೆಮೀಯನು ಎಲ್ಲಾ ಜನರಿಗೆ ಈ ಸಂದೇಶವನ್ನು ಹೇಳುತ್ತಿದ್ದನು. 2 “ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರು ಖಡ್ಗದಿಂದಾಗಲಿ ಕ್ಷಾಮದಿಂದಾಗಲಿ ಭಯಂಕರವಾದ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಆದರೆ ಬಾಬಿಲೋನಿನ ಸೈನಿಕರಿಗೆ ಶರಣಾಗುವ ಪ್ರತಿಯೊಬ್ಬರು ಬದುಕುವರು. ಅವರು ಜೀವಂತ ಉಳಿಯುವರು.’ 3 ಯೆಹೋವನು ಹೀಗೆನ್ನುತ್ತಾನೆ: ‘ಈ ಜೆರುಸಲೇಮ್ ನಗರವನ್ನು ಖಂಡಿತವಾಗಿಯೂ ಬಾಬಿಲೋನ್ ರಾಜನ ಸೈನಿಕರ ಕೈಗೆ ಒಪ್ಪಿಸಲಾಗುವುದು. ಅವನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು.’”
4 ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನ್ನು ಕೇಳಿದ ರಾಜಾಧಿಕಾರಿಗಳು ರಾಜನಾದ ಚಿದ್ಕೀಯನ ಬಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇನ್ನೂ ನಗರದಲ್ಲಿರುವ ಸೈನಿಕರನ್ನೂ ಎಲ್ಲರನ್ನೂ ತನ್ನ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಬೇಕೆಂದು ಅವನು ಬಯಸದೆ ಜೆರುಸಲೇಮಿನ ಜನರ ನಾಶನವನ್ನು ಬಯಸುತ್ತಾನೆ” ಎಂದು ಹೇಳಿದರು.
5 ಆಗ ರಾಜನಾದ ಚಿದ್ಕೀಯನು, “ಯೆರೆಮೀಯನು ನಿಮ್ಮ ಅಧಿನದಲ್ಲಿದ್ದಾನೆ. ನೀವು ಏನು ಬೇಕಾದರೂ ಮಾಡಿ” ಎಂದು ಆ ಅಧಿಕಾರಿಗಳಿಗೆ ಹೇಳಿದನು.
6 ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಹಿಡಿದು ಮಲ್ಕೀಯನ ಬಾವಿಯೊಳಗೆ ಹಾಕಿದರು. (ಮಲ್ಕೀಯನು ರಾಜವಂಶದವನಾಗಿದ್ದನು.) ಆ ಬಾವಿಯು ಕಾರಾಗೃಹದ ಅಂಗಳದಲ್ಲಿತ್ತು. ಆ ಅಧಿಕಾರಿಗಳು ಹಗ್ಗಗಳನ್ನು ಕಟ್ಟಿ ಯೆರೆಮೀಯನನ್ನು ಬಾವಿಯಲ್ಲಿ ಇಳಿಬಿಟ್ಟರು. ಆ ಬಾವಿಯಲ್ಲಿ ಸ್ವಲ್ಪವೂ ನೀರಿರಲಿಲ್ಲ. ಕೇವಲ ಕೇಸರಿತ್ತು. ಯೆರೆಮೀಯನು ಕೆಸರಿನಲ್ಲಿ ಮುಳುಗಿಹೋದನು.
7 ಆ ಅಧಿಕಾರಿಗಳು ಯೆರೆಮೀಯನನ್ನು ಬಾವಿಗೆ ಹಾಕಿದ ಸಂಗತಿಯು ಎಬೆದ್ಮೆಲೆಕನೆಂಬ ಮನುಷ್ಯನ ಕಿವಿಗೆ ಬಿತ್ತು. ಎಬೆದ್ಮೆಲೆಕನು ಇಥಿಯೋಪಿಯದವನಾಗಿದ್ದು ಅರಮನೆಯಲ್ಲಿ ಕಂಚುಕಿಯಾಗಿದ್ದನು. ರಾಜನಾದ ಚಿದ್ಕೀಯನು ಬೆನ್ಯಾಮೀನ್ ಊರ ಬಾಗಲಲ್ಲಿ ಕುಳಿತಿದ್ದನು. ಎಬೆದ್ಮೆಲೆಕನು ಅರಮನೆಯನ್ನು ಬಿಟ್ಟು ಬೆನ್ಯಾಮೀನ್ ಊರಹೆಬ್ಬಾಗಿಲಿನ ಹತ್ತಿರ ಕುಳಿತಿದ್ದ ರಾಜನಾದ ಚಿದ್ಕೀಯನ ಹತ್ತಿರ ಬಂದು ಹೀಗೆ ಹೇಳಿದನು: 8-9 “ನನ್ನ ಒಡೆಯನಾದ ರಾಜನೇ, ಆ ಅಧಿಕಾರಿಗಳು ದುಷ್ಟ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಪ್ರವಾದಿಯಾದ ಯೆರೆಮೀಯನೊಂದಿಗೆ ದುಷ್ಟತನದಿಂದ ವ್ಯವಹರಿಸಿದ್ದಾರೆ. ಅವರು ಅವನನ್ನು ಒಂದು ಬಾವಿಯಲ್ಲಿ ಎಸೆದಿದ್ದಾರೆ. ಅವನನ್ನು ಅಲ್ಲಿಯೇ ಸಾಯಲು ಬಿಟ್ಟಿದ್ದಾರೆ” ಎಂದು ಹೇಳಿದನು.
10 ಆಗ ರಾಜನಾದ ಚಿದ್ಕೀಯನು ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ, “ಅರಮನೆಯಿಂದ ಮೂರು ಜನರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು. ಯೆರೆಮೀಯನನ್ನು ಅವನು ಸಾಯುವ ಮುಂಚೆ ಬಾವಿಯಿಂದ ಮೇಲೆತ್ತು” ಎಂದು ಅಪ್ಪಣೆಕೊಟ್ಟನು.
11 ಎಬೆದ್ಮೆಲೆಕನು ಆ ಜನರನ್ನು ಕರೆದುಕೊಂಡು ಹೊರಟನು. ಅವನು ಮೊದಲು ಅರಮನೆಯ ಉಗ್ರಾಣದ ಕೆಳಗಿರುವ ಕೋಣೆಗೆ ಹೋದನು. ಆ ಕೋಣೆಯಿಂದ ಅವನು ಕೆಲವು ಹಳೆಯದಾದ ಮತ್ತು ಹರಿದುಹೋದ ಬಟ್ಟೆಗಳನ್ನು ತೆಗೆದುಕೊಂಡನು. ಆ ಚಿಂದಿಬಟ್ಟೆಗಳನ್ನು ಒಂದು ಹಗ್ಗಕ್ಕೆ ಕಟ್ಟಿ ಆಳವಾದ ಬಾವಿಯಲ್ಲಿ ಯೆರೆಮೀಯನಿಗೆ ತಲುಪುವಂತೆ ಇಳಿಬಿಟ್ಟನು. 12 ಆಗ ಇಥಿಯೋಪಿಯದವನಾದ ಎಬೆದ್ಮೆಲೆಕನು, “ಆ ಹರಿದುಹೋದ ಮತ್ತು ಹಳೆಯದಾದ ಬಟ್ಟೆಗಳನ್ನು ನಿನ್ನ ಕಂಕುಳಲ್ಲಿ ಇಟ್ಟುಕೋ. ನಾವು ನಿನ್ನನ್ನು ಮೇಲಕ್ಕೆಳೆಯುವಾಗ ನಿನ್ನ ಕಂಕುಳಿಗೆ ಹಗ್ಗಗಳಿಂದ ಗಾಯಗಳಾಗುವದಿಲ್ಲ” ಎಂದನು. ಯೆರೆಮೀಯನು ಎಬೆದ್ಮೆಲೆಕನು ಹೇಳಿದಂತೆ ಮಾಡಿದನು. 13 ಅವರು ಯೆರೆಮೀಯನನ್ನು ಹಗ್ಗದಿಂದ ಮೇಲಕ್ಕೆ ಎಳೆದು ಬಾವಿಯಿಂದ ಹೊರತೆಗೆದರು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಿಸಿದನು.
ಚಿದ್ಕೀಯನು ಯೆರೆಮೀಯನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು
14 ರಾಜನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಒಬ್ಬನ ಮೂಲಕ ಯೆಹೋವನ ಆಲಯದ ಮೂರನೇ ಪ್ರವೇಶದ್ವಾರಕ್ಕೆ ಕರೆಸಿದನು. ರಾಜನು ಅವನಿಗೆ, “ಯೆರೆಮೀಯನೇ, ನಾನು ನಿನಗೆ ಒಂದು ವಿಷಯವನ್ನು ಕೇಳಲಿದ್ದೇನೆ. ನನ್ನಿಂದ ಏನನ್ನೂ ಮುಚ್ಚಿಡಬೇಡ. ಎಲ್ಲವನ್ನು ಪ್ರಾಮಾಣಿಕವಾಗಿ ನನಗೆ ಹೇಳು” ಎಂದನು.
15 ಅದಕ್ಕೆ ಯೆರೆಮೀಯನು, “ನಾನು ಉತ್ತರಕೊಟ್ಟರೆ ನೀನು ಬಹುಶಃ ನನ್ನನ್ನು ಕೊಂದುಬಿಡುವೆ, ಸಲಹೆ ಕೊಟ್ಟರೆ ನೀನು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವದಿಲ್ಲ” ಎಂದು ಹೇಳಿದನು.
16 ಆದರೆ ರಾಜನಾದ ಚಿದ್ಕೀಯನು ಯೆರೆಮೀಯನಿಗೆ ರಹಸ್ಯವಾಗಿ, “ಯೆರೆಮೀಯನೇ, ನಮಗೆ ಉಸಿರನ್ನೂ ಜೀವವನ್ನೂ ದಯಪಾಲಿಸಿದ ಯೆಹೋವನ ಆಣೆಯಾಗಿ ಹೇಳುತ್ತೇನೆ, ನಾನು ನಿನ್ನನ್ನು ಕೊಲ್ಲುವುದಿಲ್ಲ. ಕೊಲ್ಲಬಯಸುವ ಅಧಿಕಾರಿಗಳ ಕೈಗೂ ನಿನ್ನನ್ನು ಕೊಡುವದಿಲ್ಲವೆಂದು ನಾನು ಮಾತು ಕೊಡುತ್ತೇನೆ” ಎಂದು ಹೇಳಿದನು.
17 ಆಗ ಯೆರೆಮೀಯನು ರಾಜನಾದ ಚಿದ್ಕೀಯನಿಗೆ ಹೀಗೆಂದನು: “ಇಸ್ರೇಲರ ದೇವರಾದ ಮತ್ತು ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಬಾಬಿಲೋನಿನ ರಾಜನ ಅಧಿಕಾರಿಗಳಿಗೆ ಶರಣಾಗತನಾದರೆ ನಿನ್ನ ಪ್ರಾಣವನ್ನು ಉಳಿಸಲಾಗುವುದು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲ್ಪಡುವುದಿಲ್ಲ. ನೀನೂ ಬದುಕುವೆ ಮತ್ತು ನಿನ್ನ ಕುಟುಂಬದವರೂ ಬದುಕುವರು. 18 ಆದರೆ ನೀನು ಬಾಬಿಲೋನಿನ ಅಧಿಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನ್ನು ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.’”
19 ಆಗ ಚಿದ್ಕೀಯನು, “ನಾನು ಈಗಾಗಲೇ ಬಾಬಿಲೋನಿನ ಸೈನ್ಯದ ಕಡೆಗೆ ಸೇರಿದ ಯೆಹೂದ್ಯರಿಗೆ ಹೆದರುತ್ತೇನೆ. ಆ ಸೈನಿಕರು ನನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸಿಕೊಡಬಹುದು ಮತ್ತು ಅವರು ನನಗೆ ಕೇಡುಮಾಡಬಹುದು; ನನ್ನನ್ನು ಹಿಂಸಿಸಬಹುದು ಎಂದು ಭಯವಾಗುತ್ತದೆ” ಎಂದು ಯೆರೆಮೀಯನಿಗೆ ಹೇಳಿದನು.
20 ಆದರೆ ಯೆರೆಮೀಯನು, “ರಾಜನಾದ ಚಿದ್ಕೀಯನೇ, ಆ ಸೈನಿಕರು ನಿನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸುವುದಿಲ್ಲ. ನಾನು ಹೇಳಿದಂತೆ ಮಾಡಿ ಯೆಹೋವನ ಆಜ್ಞಾಪಾಲನೆ ಮಾಡು. ಆಗ ನಿನಗೆಲ್ಲ ಒಳ್ಳೆಯದಾಗುವುದು ಮತ್ತು ನಿನ್ನ ಪ್ರಾಣ ಉಳಿಯುವುದು. 21 ನೀನು ಬಾಬಿಲೋನಿನ ಸೈನಿಕರಿಗೆ ಶರಣಾಗತನಾಗದಿದ್ದರೆ ಏನಾಗುವದೆಂಬುದನ್ನು ಯೆಹೋವನು ನನಗೆ ತೋರಿಸಿಕೊಟ್ಟಿದ್ದಾನೆ. ಯೆಹೋವನು ನನಗೆ ಹೀಗೆ ಹೇಳಿದ್ದಾನೆ: 22 ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನ್ನು ಬಾಬಿಲೋನಿನ ಸೈನ್ಯಾಧಿಕಾರಿಗಳ ಬಳಿಗೆ ತರಲಾಗುವುದು. ನಿನ್ನ ಸ್ತ್ರೀಯರು ಹಾಡನ್ನು ಹಾಡಿ ನಿನ್ನನ್ನು ತಮಾಷೆ ಮಾಡುವರು. ಆ ಸ್ತ್ರೀಯರು ಹೀಗೆ ಹೇಳುವರು:
‘ನಿನಗಿಂತಲೂ ಪ್ರಬಲರಾಗಿದ್ದ ನಿನ್ನ ಒಳ್ಳೆಯ ಸ್ನೇಹಿತರು
ನಿನ್ನನ್ನು ತಪ್ಪುದಾರಿಗೆ ಎಳೆದರು.
ಆ ಸ್ನೇಹಿತರನ್ನು ನೀನು ತುಂಬಾ ನಂಬಿಕೊಂಡಿದ್ದೆ.
ನಿನ್ನ ಪಾದಗಳು ಕೆಸರಿನಲ್ಲಿ ಹೂತಿವೆ.
ನಿನ್ನ ಸ್ನೇಹಿತರು ನಿನ್ನಿದ ದೂರವಾಗಿದ್ದಾರೆ.’
23 “ನಿನ್ನ ಎಲ್ಲಾ ಹೆಂಡತಿಯರನ್ನು ಮತ್ತು ಮಕ್ಕಳನ್ನು ಹೊರತರಲಾಗುವುದು. ಅವರನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ನೀನೂ ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರೆ. ಬಾಬಿಲೋನಿನ ರಾಜನು ನಿನ್ನನ್ನು ವಶಪಡಿಸಿಕೊಳ್ಳುವನು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲಾಗುವುದು” ಎಂದು ಉತ್ತರಿಸಿದನು.
24 ಆಗ ಚಿದ್ಕೀಯನು ಯೆರೆಮೀಯನಿಗೆ ಹೀಗೆ ಹೇಳಿದನು: “ನಾನು ನಿನ್ನ ಸಂಗಡ ಮಾತನಾಡುತ್ತಿದ್ದೆ ಎಂದು ಯಾರಿಗೂ ಹೇಳಬೇಡ. ಇಲ್ಲವಾದರೆ ನೀನು ಸಾಯುವೆ. 25 ನಾನು ನಿನ್ನೊಂದಿಗೆ ಮಾತನಾಡಿದ್ದನ್ನು ಆ ಅಧಿಕಾರಿಗಳು ಪತ್ತೆ ಹಚ್ಚಬಹುದು. ಅವರು ನಿನ್ನ ಹತ್ತಿರ ಬಂದು, ‘ಯೆರೆಮೀಯನೇ, ನೀನು ರಾಜನಾದ ಚಿದ್ಕೀಯನಿಗೆ ಏನು ಹೇಳಿದೆ? ಚಿದ್ಕೀಯನು ನಿನಗೆ ಏನು ಹೇಳಿದನು? ಪ್ರಾಮಾಣಿಕವಾಗಿ ಎಲ್ಲವನ್ನು ನಮಗೆ ಹೇಳು; ಇಲ್ಲವಾದರೆ ನಾವು ನಿನ್ನನ್ನು ಕೊಂದುಬಿಡುತ್ತೇವೆ’ ಎನ್ನಬಹುದು. 26 ಆಗ ನೀನು ಅವರಿಗೆ, ‘ಯೆಹೋನಾಥಾನನ ಮನೆಯ ನೆಲಮಾಳಿಗೆಯ ಕತ್ತಲು ಕೋಣೆಗೆ ನನ್ನನ್ನು ಮತ್ತೆ ಕಳುಹಿಸಬೇಡಿ, ಅಲ್ಲಿಗೆ ಹೋದರೆ ನಾನು ಸತ್ತುಹೋಗುವೆನೆಂದು ರಾಜನಿಗೆ ಪ್ರಾರ್ಥಿಸುತ್ತಿದ್ದೆ’” ಎಂದು ಹೇಳು.
27 ಆ ರಾಜ್ಯಾಧಿಕಾರಿಗಳು ಅವನನ್ನು ಪ್ರಶ್ನಿಸುವದಕ್ಕಾಗಿ ಯೆರೆಮೀಯನಲ್ಲಿಗೆ ಬಂದರು. ರಾಜನು ಆಜ್ಞಾಪಿಸಿದಂತೆ ಯೆರೆಮೀಯನು ಅವರಿಗೆ ಎಲ್ಲವನ್ನು ಹೇಳಿದನು. ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಬಿಟ್ಟುಹೋದರು. ಯೆರೆಮೀಯನ ಮತ್ತು ರಾಜನ ಸಂಭಾಷಣೆಯನ್ನು ಯಾರೂ ಕೇಳಿರಲಿಲ್ಲ.
28 ಜೆರುಸಲೇಮ್ ನಗರವು ಶತ್ರುಗಳ ವಶವಾಗುವವರೆಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಮಾಡಿಕೊಂಡಿದ್ದನು.
ಜೆರುಸಲೇಮಿನ ಪತನ
39 ಜೆರುಸಲೇಮನ್ನು ಹೀಗೆ ವಶಪಡಿಸಿಕೊಳ್ಳಲಾಯಿತು: ಚಿದ್ಕೀಯನು ಯೆಹೂದದ ರಾಜನಾಗಿ ಆಳುತ್ತಿದ್ದ ಒಂಭತ್ತನೇ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಇಡೀ ಸೈನ್ಯದೊಂದಿಗೆ ಜೆರುಸಲೇಮಿನ ಮೇಲೆ ಧಾಳಿ ಮಾಡಿದನು. ಅದನ್ನು ವಶಪಡಿಸಿಕೊಳ್ಳುವದಕ್ಕಾಗಿ ಅವನು ಆ ನಗರವನ್ನು ಮುತ್ತಿದನು. 2 ಚಿದ್ಕೀಯನ ಆಳ್ವಿಕೆಯ ಹನ್ನೊಂದನೆ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೇ ದಿನದಂದು ಜೆರುಸಲೇಮಿನ ಪೌಳಿಗೋಡೆಯನ್ನು ಒಡೆಯಲಾಯಿತು. 3 ಆಗ ಬಾಬಿಲೋನಿನ ಎಲ್ಲಾ ರಾಜ್ಯಾಧಿಕಾರಿಗಳು ಜೆರುಸಲೇಮ್ ನಗರವನ್ನು ಪ್ರವೇಶಿಸಿದರು. ಅವರು ಒಳಗೆ ಬಂದು ಮಧ್ಯ ದ್ವಾರದಲ್ಲಿ ಕುಳಿತುಕೊಂಡರು. ಅವರು ಯಾರೆಂದರೆ: ಸಮ್ಗರ್ ನೆಬೋದದ ಅಧಿಪತಿಯಾದ ನೇರ್ಗಲ್ ಸರೆಚರ್; ಇನ್ನೊಬ್ಬ ದೊಡ್ಡ ಅಧಿಕಾರಿಯಾದ ಸೆರ್ಸೆಕೀಮ್ ಮತ್ತು ಬೇರೆಬೇರೆ ದೊಡ್ಡ ಅಧಿಕಾರಿಗಳು ಕೂಡ ಅಲ್ಲಿದ್ದರು.
4 ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಆ ಅಧಿಕಾರಿಗಳನ್ನು ನೋಡಿದನು. ಅವನು ಮತ್ತು ಅವನ ಜೊತೆಗಿದ್ದ ಸೈನಿಕರು ಓಡಿಹೋದರು. ಅವರು ರಾತ್ರಿಯಲ್ಲಿ ಜೆರುಸಲೇಮ್ ನಗರವನ್ನು ಬಿಟ್ಟು ರಾಜನ ಉದ್ಯಾನದ ಮಾರ್ಗವಾಗಿ ಹೊರಗೆ ಹೋದರು. ಅವರು ಎರಡು ಗೋಡೆಗಳ ಮಧ್ಯದಲ್ಲಿದ್ದ ಬಾಗಿಲಿನಿಂದ ಹೊರಗೆ ಬಂದು ಮರುಭೂಮಿಯ ಕಡೆಗೆ ಹೊರಟರು. 5 ಆದರೆ ಬಾಬಿಲೋನಿನ ಸೈನಿಕರು ಚಿದ್ಕೀಯ ಮತ್ತು ಅವನ ಸೈನಿಕರನ್ನು ಬೆನ್ನಟ್ಟಿದರು. ಕಸ್ದೀಯರ ಸೈನಿಕರು ಜೆರಿಕೊವಿನ ಬಯಲಿನಲ್ಲಿ ಚಿದ್ಕೀಯನನ್ನು ಬಂಧಿಸಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಲ್ಲಿಗೆ ತೆಗೆದುಕೊಂಡು ಹೋದರು. ಆಗ ನೆಬೂಕದ್ನೆಚ್ಚರನು ಹಮಾತ್ ಸೀಮೆಯ “ರಿಬ್ಲ”ದಲ್ಲಿದ್ದನು. ಆ ಸ್ಥಳದಲ್ಲಿಯೇ ನೆಬೂಕದ್ನೆಚ್ಚರನು ಚಿದ್ಕೀಯನ ಬಗ್ಗೆ ತನ್ನ ನಿರ್ಣಯವನ್ನು ಪ್ರಕಟಿಸಿದನು. 6 ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣೆದುರಿನಲ್ಲಿಯೇ ಅವನ ಗಂಡುಮಕ್ಕಳನ್ನು ಕೊಲ್ಲಿಸಿದನು. ಚಿದ್ಕೀಯನು ನೋಡುತ್ತಿದ್ದಂತೆಯೇ ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ರಾಜಾಧಿಕಾರಿಗಳನ್ನು ಕೊಲ್ಲಿಸಿದನು. 7 ಅನಂತರ ನೆಬೂಕದ್ನೆಚ್ಚರನು ಚಿದ್ಕೀಯನ ಕಣ್ಣುಗಳನ್ನು ಕೀಳಿಸಿದನು. ಕಂಚಿನ ಸರಪಳಿಗಳಿಂದ ಬಿಗಿಸಿ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು.
8 ಬಾಬಿಲೋನಿನ ಸೈನಿಕರು ಅರಮನೆಗೂ ಮತ್ತು ಜೆರುಸಲೇಮಿನ ಉಳಿದ ನಿವಾಸಿಗಳ ಮನೆಗಳಿಗೂ ಬೆಂಕಿಯಿಟ್ಟರು. ಜೆರುಸಲೇಮಿನ ಗೋಡೆಗಳನ್ನು ಕೆಡವಿದರು. 9 ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನೆಂಬವನು ಜೆರುಸಲೇಮಿನಲ್ಲಿ ಉಳಿದ ಜನರನ್ನು ಹಿಡಿದು ಬಂಧಿಗಳನ್ನಾಗಿ ಮಾಡಿದ್ದನು. ಅವರನ್ನು ಅವನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಈ ಮೊದಲೆ ಅವನಿಗೆ ಶರಣಾಗತರಾದವರನ್ನೂ ಸಹ ನೆಬೂಜರದಾನನು ಬಂಧಿಗಳನ್ನಾಗಿ ಮಾಡಿದನು. ಅವನು ಜೆರುಸಲೇಮಿನ ಉಳಿದವರೆಲ್ಲರನ್ನು ಬಂಧಿಗಳನ್ನಾಗಿ ಮಾಡಿ ಬಾಬಿಲೋನಿಗೆ ತೆಗೆದುಕೊಂಡು ಹೋದನು. 10 ಆದರೆ ಬಾಬಿಲೋನ್ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಯೆಹೂದದ ಕೆಲ ಬಡಜನರನ್ನು ಅಲ್ಲಿಯೇ ಬಿಟ್ಟನು. ಆ ಜನಗಳಿಗೆ ಯಾವ ಆಸ್ತಿಪಾಸ್ತಿ ಇದ್ದಿರಲಿಲ್ಲ. ಆದ್ದರಿಂದ ಅಂದು ನೆಬೂಜರದಾನನು ಯೆಹೂದದ ಆ ಬಡಜನರಿಗೆ ದ್ರಾಕ್ಷಿತೋಟಗಳನ್ನು ಮತ್ತು ಹೊಲಗಳನ್ನು ಕೊಟ್ಟನು.
11 ನೆಬೂಕದ್ನೆಚ್ಚರನು ನೆಬೂಜರದಾನನಿಗೆ ಯೆರೆಮೀಯನ ಬಗ್ಗೆ ಕೆಲವು ಆಜ್ಞೆಗಳನ್ನು ಕೊಟ್ಟನು. ನೆಬೂಜರದಾನನು ನೆಬೂಕದ್ನೆಚ್ಚರನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಆ ಆಜ್ಞೆ ಹೀಗಿತ್ತು: 12 “ಯೆರೆಮೀಯನನ್ನು ಪತ್ತೆಹಚ್ಚಿ ಅವನ ಕ್ಷೇಮದ ಬಗ್ಗೆ ಎಚ್ಚರಿಕೆವಹಿಸಿರಿ, ಅವನಿಗೆ ನೋವಾಗದಂತೆ ನೋಡಿಕೊಳ್ಳಿ. ಅವನು ಕೇಳಿದ್ದನ್ನೆಲ್ಲ ಕೊಡಿ.”
13 ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನ್, ಬಾಬಿಲೋನಿನ ಸೈನ್ಯದ ಒಬ್ಬ ಮುಖ್ಯ ಅಧಿಕಾರಿಯಾದ ನೆಬೂಷಜ್ಜಾನ್, ದೊಡ್ಡ ಅಧಿಕಾರಿಯಾದ ನೇರ್ಗಲ್ ಸರೆಚರ್ ಮತ್ತು ಬಾಬಿಲೋನಿನ ಇನ್ನುಳಿದ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಹುಡುಕಲು ಜನರನ್ನು ಕಳುಹಿಸಿದರು. 14 ಅವರು ಯೆರೆಮೀಯನನ್ನು ಕಾರಾಗೃಹದ ಅಂಗಳದಿಂದ ಹೊರಗೆ ಕರೆದು ತಂದರು. ಬಾಬಿಲೋನಿನ ಆ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಗೆದಲ್ಯನ ವಶಕ್ಕೆ ಕೊಟ್ಟರು. ಗೆದಲ್ಯನು ಅಹೀಕಾಮನ ಮಗ ಮತ್ತು ಅಹೀಕಾಮನು ಶಾಫಾನನ ಮಗನಾಗಿದ್ದನು. ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಗೆದಲ್ಯನಿಗೆ ಆಜ್ಞಾಪಿಸಲಾಯಿತು. ಅದರಂತೆ ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಲಾಯಿತು; ಅವನು ತನ್ನ ಜನರೊಂದಿಗೆ ವಾಸಿಸತೊಡಗಿದನು.
ಎಬೆದ್ಮೆಲೆಕನಿಗೆ ಯೆಹೋವನಿಂದ ಒಂದು ಸಂದೇಶ
15 ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಬಂದಿಯಾಗಿದ್ದಾಗ ಯೆಹೋವನಿಂದ ಅವನಿಗೊಂದು ಸಂದೇಶ ಬಂದಿತು. ಆ ಸಂದೇಶ ಹೀಗಿತ್ತು: 16 “ಯೆರೆಮೀಯನೇ, ಹೋಗಿ ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ ಈ ಸಂದೇಶವನ್ನು ಕೊಡು: ‘ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ಜೆರುಸಲೇಮ್ ನಗರದ ಬಗ್ಗೆ ನಾನು ಕೊಟ್ಟ ಸಂದೇಶಗಳು ಬೇಗ ಕಾರ್ಯರೂಪಕ್ಕೆ ಬರುತ್ತವೆ. ನನ್ನ ಸಂದೇಶ ಕಾರ್ಯರೂಪಕ್ಕೆ ಬರುವುದು ಕೇಡುಗಳ ಮೂಲಕವೇ ಹೊರತು ಒಳ್ಳೆಯದರ ಮೂಲಕವಲ್ಲ. ಎಲ್ಲವೂ ನನ್ನ ಸಂದೇಶದಂತೆ ನಡೆಯುವುದನ್ನು ನೀನು ಕಣ್ಣಾರೆ ನೋಡುವೆ. 17 ಆದರೆ ಅಂದು ಎಬೆದ್ಮೆಲೆಕನೇ, ನಾನು ನಿನ್ನನ್ನು ರಕ್ಷಿಸುತ್ತೇನೆ.’ ಇದು ಯೆಹೋವನ ನುಡಿ. ‘ನೀನು ಊಹಿಸಿ ಭಯಪಟ್ಟಂತೆ ನಿನ್ನನ್ನು ಆ ಜನರ ಕೈಗೆ ಒಪ್ಪಿಸುವದಿಲ್ಲ. 18 ಎಬೆದ್ಮೆಲೆಕನೇ, ನಾನು ನಿನ್ನನ್ನು ರಕ್ಷಿಸುವೆನು. ನೀನು ಖಡ್ಗಕ್ಕೆ ಆಹುತಿಯಾಗುವದಿಲ್ಲ. ನೀನು ತಪ್ಪಿಸಿಕೊಂಡು ಬದುಕುವೆ. ನೀನು ನನ್ನಲ್ಲಿ ನಂಬಿಕೆ ಇಟ್ಟುಕೊಂಡಿದ್ದೇ ಇದಕ್ಕೆ ಕಾರಣ’” ಇದು ಯೆಹೋವನ ನುಡಿ.
ಯೇಸು ಮೋಶೆಗಿಂತ ಶ್ರೇಷ್ಠನು
3 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು. 2 ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು. 3 ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ. 4 ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು. 5 ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು. 6 ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.
ನಾವು ದೇವರನ್ನು ಅನುಸರಿಸಲೇಬೇಕು
7 ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
8 ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.
ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.
9 ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ
ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.
10 ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು.
‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ.
ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.
11 ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’
ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)
12 ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ. 13 ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ. 14 ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ. 15 ಪವಿತ್ರ ಗ್ರಂಥವು ಹೇಳುವುದೇನೆಂದರೆ:
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(B)
16 ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ? 17 ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು. 18 ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ? 19 ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International