Old/New Testament
ಶತ್ರುಗಳು ಜೆರುಸಲೇಮ್ ನಗರವನ್ನು ಮುತ್ತಿದರು
6 ಬೆನ್ಯಾಮೀನನ ಕುಲದವರೇ, ನಿಮ್ಮ ಪ್ರಾಣ ರಕ್ಷಣೆಗಾಗಿ ಓಡಿಹೋಗಿರಿ;
ಜೆರುಸಲೇಮ್ ನಗರದಿಂದ ಓಡಿಹೋಗಿರಿ.
ತೆಕೋವ ನಗರದಲ್ಲಿ ಯುದ್ಧದ ತುತ್ತೂರಿಗಳನ್ನು ಊದಿರಿ;
ಬೇತ್ಹಕ್ಕೆರೆಮಿನಲ್ಲಿ ಎಚ್ಚರಿಕೆಯ ಧ್ವಜಗಳನ್ನು ಹಾರಿಸಿರಿ.
ಉತ್ತರದಿಕ್ಕಿನಿಂದ ವಿಪತ್ತು ಬರುತ್ತಿರುವುದರಿಂದ ಇವೆಲ್ಲವನ್ನು ಮಾಡಿರಿ.
ಭಯಂಕರವಾದ ವಿನಾಶವು ನಿಮಗೆ ಬರುತ್ತಿದೆ.
2 ಚೀಯೋನ್ ಕುಮಾರಿಯೇ,[a] ನೀನು ಬಹು ಸುಂದರವಾಗಿಯೂ ಮೃದುವಾಗಿಯೂ ಇರುವೆ.
3 ಕುರುಬರು ಜೆರುಸಲೇಮಿಗೆ ಬರುತ್ತಾರೆ.
ಮತ್ತು ಕುರಿಮಂದೆಗಳನ್ನು ತರುತ್ತಾರೆ.
ಅದರ ಸುತ್ತಲೂ ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಾರೆ.
ಪ್ರತಿಯೊಬ್ಬ ಕುರುಬನು ತನ್ನ ಕುರಿಹಿಂಡನ್ನು ನೋಡಿಕೊಳ್ಳುತ್ತಾನೆ.
4 “ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ.
ಏಳಿರಿ, ನಾವು ನಗರವನ್ನು ಮಧ್ಯಾಹ್ನದಲ್ಲಿಯೇ ಮುತ್ತೋಣ.
ಆದರೆ ಈಗಾಗಲೇ ಹೊತ್ತಾಗಿದೆ.
ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
5 ಏಳಿರಿ, ನಾವು ರಾತ್ರಿಯಲ್ಲಿ ನಗರದ ಮೇಲೆ ಧಾಳಿ ಮಾಡೋಣ.
ನಾವು ಜೆರುಸಲೇಮಿನ ಭದ್ರವಾದ ರಕ್ಷಣಾಸ್ಥಳಗಳನ್ನು ನಾಶಮಾಡೋಣ.”
6 ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು:
“ಜೆರುಸಲೇಮಿನ ಸುತ್ತಮುತ್ತಲಿನ ಮರಗಳನ್ನು ಕಡಿದುಹಾಕಿರಿ;
ಜೆರುಸಲೇಮಿನ ಎದುರಿಗೆ ಒಂದು ದಿಬ್ಬ ನಿರ್ಮಿಸಿರಿ.
ನಗರವನ್ನು ದಂಡಿಸಬೇಕು.
ನಗರದ ಒಳಗಡೆ ದಬ್ಬಾಳಿಕೆಯ ಹೊರತು ಮತ್ತೇನಿಲ್ಲ.
7 ಬಾವಿಯಲ್ಲಿ ಹೊಸ ನೀರು ಬರುವಂತೆ
ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ.
ಈ ಪಟ್ಟಣದಲ್ಲಿ ಬಲಾತ್ಕಾರ ಮತ್ತು ವಿನಾಶಗಳೇ ಕೇಳಿಬರುತ್ತವೆ.
ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.
8 ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನ್ನು ಕೇಳು.
ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ.
ನಾನು ನಿನ್ನ ಪ್ರದೇಶವನ್ನು ಒಂದು ಮರಳುಗಾಡಾಗಿ ಮಾಡುತ್ತೇನೆ.
ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”
9 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ದೇಶದಲ್ಲಿ ಅಳಿದುಳಿದ ಇಸ್ರೇಲಿಯರನ್ನು
ಒಟ್ಟಾಗಿ ಸೇರಿಸಿರಿ.
ದ್ರಾಕ್ಷಿತೋಟದಲ್ಲಿ ಕೊನೆಯ ದ್ರಾಕ್ಷಿಯನ್ನು ಕೀಳುವಂತೆ
ಅವರನ್ನು ಒಟ್ಟಾಗಿ ಸೇರಿಸಿ.
ಕೊಯ್ಲುಗಾರನು ಪ್ರತಿಯೊಂದು ಬಳ್ಳಿಯನ್ನು ನೋಡಿ ದ್ರಾಕ್ಷಿಕೀಳುವಂತೆ
ನೀವು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಒಟ್ಟಾಗಿ ಸೇರಿಸಿರಿ.”
10 ನಾನು ಯಾರೊಂದಿಗೆ ಮಾತನಾಡಲಿ?
ನಾನು ಯಾರಿಗೆ ಎಚ್ಚರಿಕೆಯ ನುಡಿಗಳನ್ನು ಹೇಳಲಿ?
ನನ್ನ ಮಾತನ್ನು ಯಾರು ಕೇಳುತ್ತಾರೆ?
ಇಸ್ರೇಲಿನ ಜನರು ತಮ್ಮ ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.
ಅವರು ನನ್ನ ಎಚ್ಚರಿಕೆಯ ನುಡಿಗಳನ್ನು ಕೇಳಲಾರರು.
ಜನರಿಗೆ ಯೆಹೋವನ ಉಪದೇಶ ರುಚಿಸುವದಿಲ್ಲ.
ಅವರು ಯೆಹೋವನ ನುಡಿಗಳನ್ನು ಕೇಳಬಯಸುವದಿಲ್ಲ.
11 ಯೆಹೋವನ ರೋಷವು ನನ್ನಲ್ಲಿ ತುಂಬಿತುಳುಕುತ್ತಿದೆ,
ತಡೆದುತಡೆದು ನನಗೆ ಸಾಕಾಗಿದೆ.
“ಬೀದಿಯಲ್ಲಾಡುವ ಮಕ್ಕಳ ಮೇಲೆ ಅದನ್ನು ಹೊಯ್ದುಬಿಡಬೇಕು.
ಒಂದೆಡೆ ಸೇರುವ ತರುಣರ ಮೇಲೆ ಅದನ್ನು ಹೊಯ್ದುಬಿಡಬೇಕು.
ಗಂಡಹೆಂಡತಿಯರಿಬ್ಬರನ್ನು ಅಪಹರಿಸಲಾಗುವುದು.
ಮುದುಕರನ್ನೂ ಮುಪ್ಪಿನ ಮುದುಕರನ್ನೂ ಅಪಹರಿಸಲಾಗುವುದು.
12 ಅವರ ಮನೆಗಳನ್ನು ಬೇರೆಯವರಿಗೆ ಕೊಡಲಾಗುವುದು.
ಅವರ ಹೊಲಗಳನ್ನೂ ಅವರ ಹೆಂಡಂದಿರನ್ನೂ ಬೇರೆಯವರಿಗೆ ಕೊಡಲಾಗುವುದು.
ನಾನು ನನ್ನ ಕೈ ಎತ್ತಿ ಯೆಹೂದದ ಜನರನ್ನು ದಂಡಿಸುವೆನು.”
ಇದು ಯೆಹೋವನ ಸಂದೇಶ.
13 “ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಲಾಭಕ್ಕಾಗಿ ಆಸೆಪಡುತ್ತಾರೆ.
ಪ್ರವಾದಿಗಳು ಮತ್ತು ಯಾಜಕರು ಸಹ ಮೋಸಗಾರರಾಗಿದ್ದಾರೆ.
14 ಪ್ರವಾದಿಗಳು ಮತ್ತು ಯಾಜಕರು
ನನ್ನ ಜನರಿಗಾದ ದೊಡ್ಡ ಗಾಯಗಳಿಗೆ ಚಿಕ್ಕಗಾಯಗಳಿಗೋ ಎಂಬಂತೆ ಚಿಕಿತ್ಸೆ ಮಾಡುತ್ತಾರೆ.
ವಾಸಿಯಾಗಿಲ್ಲದಿದ್ದರೂ ‘ವಾಸಿಯಾಗಿದೆ’ ಎನ್ನುತ್ತಾರೆ.
15 ಪ್ರವಾದಿಗಳು ಮತ್ತು ಯಾಜಕರು ತಾವು ಮಾಡುವ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ನಾಚಿಕೆಪಡುವದೇ ಇಲ್ಲ.
ತಮ್ಮ ಪಾಪಕಾರ್ಯಗಳಿಗಾಗಿ ಸಂಕೋಚಪಡುವುದು ಸಹ ಅವರಿಗೆ ಗೊತ್ತಿಲ್ಲ.
ಆದ್ದರಿಂದ ಬೇರೆಯವರಂತೆ ಅವರನ್ನೂ ಶಿಕ್ಷಿಸಲಾಗುವುದು.
ನಾನು ಅವರನ್ನು ಶಿಕ್ಷಿಸಿದಾಗ ಅವರನ್ನು ನೆಲಕ್ಕೆ ಎಸೆಯಲಾಗುವದು”
ಎಂದು ಯೆಹೋವನು ಅನ್ನುತ್ತಾನೆ.
16 ಯೆಹೋವನು ಹೀಗೆ ಹೇಳುತ್ತಾನೆ:
“ಎರಡು ರಸ್ತೆಗಳು ಕೂಡುವಲ್ಲಿ ನಿಂತು ನೋಡಿರಿ.
‘ಒಳ್ಳೆಯ ರಸ್ತೆ ಎಲ್ಲಿದೆ?’ ಎಂದು ಕೇಳಿರಿ.
ಆ ರಸ್ತೆಯನ್ನು ಹಿಡಿದು ನಡೆಯಿರಿ.
ಹಾಗೆ ಮಾಡಿದರೆ ನಿಮಗೆ ವಿಶ್ರಾಂತಿ ಸಿಕ್ಕುವದು.
ಆದರೆ ‘ನಾವು ಒಳ್ಳೆಯ ಹಾದಿಯ ಮೇಲೆ ನಡೆಯುವುದಿಲ್ಲ’ ಎಂದು ನೀವು ಹೇಳಿದ್ದೀರಿ.
17 ನಾನು ನಿಮ್ಮನ್ನು ನೋಡಿಕೊಳ್ಳುವುದಕ್ಕೆ ಕಾವಲುಗಾರರನ್ನು ನೇಮಿಸಿದೆ.
ನಾನು ಅವರಿಗೆ ‘ಯುದ್ಧದ ತುತ್ತೂರಿಯ ನಾದವನ್ನು ಕೇಳಿರಿ’ ಎಂದು ಹೇಳಿದೆ.
ಆದರೆ ಅವರು ‘ನಾವು ಕೇಳುವುದಿಲ್ಲ’ ಅಂದರು.
18 ಆದಕಾರಣ ಸರ್ವಜನಾಂಗಗಳೇ ಕೇಳಿರಿ,
ಜನಸಮೂಹಗಳೇ ಗಮನಿಸಿರಿ.
ಯೆಹೂದದ ಜನರಿಗೆ ನಾನು ಮಾಡುವುದನ್ನು ಕೇಳಿರಿ.
19 ಭೂಲೋಕದ ಜನರೇ, ಕೇಳಿರಿ,
ಆ ಜನರು ಮಾಡಿದ ಎಲ್ಲಾ ಕುಯುಕ್ತಿಗಳಿಗಾಗಿ ನಾನು ಯೆಹೂದ ಜನರಿಗೆ ವಿನಾಶವನ್ನು ತರುವೆನು.
ಅವರು ನನ್ನ ಸಂದೇಶಗಳಿಗೆ ಗಮನ ಕೊಡದೆ ಇದ್ದುದರಿಂದ,
ಅವರು ನನ್ನ ಧರ್ಮಶಾಸ್ತ್ರವನ್ನು ಅಸಡ್ಡೆ ಮಾಡಿದ್ದರಿಂದ ಇದೆಲ್ಲ ನಡೆಯುವುದು.”
20 ಯೆಹೋವನು ಹೇಳುವುದೇನೆಂದರೆ, “ನೀವು ನನ್ನ ಸಲುವಾಗಿ ಶೆಬ ದೇಶದಿಂದ ಧೂಪವನ್ನು ಏಕೆ ತರುವಿರಿ?
ನೀವು ದೂರದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವದರಿಂದ ಪ್ರಯೋಜನವೇನು?
ನಿಮ್ಮ ಹೋಮಗಳಿಂದ ನನಗೆ ಸಂತೋಷವಾಗುವದಿಲ್ಲ.
ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.”
21 “ನಾನು ಯೆಹೂದದ ಜನರೆದುರಿಗೆ ಸಮಸ್ಯೆಗಳನ್ನು ಒಡ್ಡುವೆನು.
ಅವುಗಳು ಜನರು ಎಡವಿಬೀಳುವ ಕಲ್ಲುಗಳಂತಾಗುವವು.
ತಂದೆಗಳೂ ಮಕ್ಕಳೂ ಅವುಗಳಿಂದ ಎಡವಿಬೀಳುವರು.
ಸ್ನೇಹಿತರು ಮತ್ತು ನೆರೆಹೊರೆಯವರು ಅವುಗಳಿಂದ ನಾಶವಾಗುವರು” ಅಂದನು.
22 ಯೆಹೋವನು ಹೇಳುವುದೇನೆಂದರೆ:
“ಉತ್ತರ ದಿಕ್ಕಿನಿಂದ ಒಂದು ಸೈನ್ಯವು ಬರಲಿದೆ.
ಭೂಮಿಯ ಬಹುದೂರದ ಸ್ಥಳಗಳಿಂದ ಒಂದು ಮಹಾಜನಾಂಗವು ಬರಲಿದೆ.
23 ಆ ಸೈನಿಕರು ಬಿಲ್ಲುಗಳನ್ನು ಮತ್ತು ಈಟಿಗಳನ್ನು ಹಿಡಿದುಕೊಂಡಿದ್ದಾರೆ.
ಅವರು ಕ್ರೂರಿಗಳಾಗಿದ್ದಾರೆ. ಅವರು ನಿಷ್ಕರುಣಿಗಳಾಗಿದ್ದಾರೆ.
ಅವರು ಬಲಶಾಲಿಗಳಾಗಿದ್ದಾರೆ.
ಅವರು ತಮ್ಮ ಕುದುರೆ ಹತ್ತಿ ಬರುವಾಗ ಸಮುದ್ರದ ಗರ್ಜನೆಯಂತೆ ಶಬ್ದ ಕೇಳಿಬರುತ್ತದೆ.
ಚೀಯೋನ್ ಕುಮಾರಿಯೇ, ಆ ಸೈನ್ಯವು ಯುದ್ಧಕ್ಕಾಗಿ ಬರುತ್ತಿದೆ.
ಆ ಸೈನ್ಯವು ನಿನ್ನ ಮೇಲೆ ಧಾಳಿಮಾಡಲು ಬರುತ್ತಿದೆ.”
24 ಆ ಸೈನ್ಯದ ಬಗ್ಗೆ ಸಮಾಚಾರವನ್ನು ನಾವು ಕೇಳಿದ್ದೇವೆ.
ಭಯದಿಂದ ನಾವು ಅಸಹಾಯಕರಾಗಿದ್ದೇವೆ.
ಕಷ್ಟಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ.
ಸ್ತ್ರೀಯರ ಪ್ರಸವವೇದನೆಯಂತಿರುವ ಯಾತನೆಯಿಂದ ನಾವು ಬಳಲುತ್ತಿದ್ದೇವೆ.
25 ಊರ ಹೊರಗೆ ಹೋಗಬೇಡಿರಿ.
ರಸ್ತೆಗಳ ಮೇಲೆ ಹೋಗಬೇಡಿರಿ.
ಏಕೆಂದರೆ ಶತ್ರುವಿನ ಕೈಯಲ್ಲಿ ಖಡ್ಗವಿದೆ.
ಎಲ್ಲಾ ಕಡೆಗೂ ಅಪಾಯವಿದೆ.
26 ಅಯ್ಯೋ ನನ್ನ ಜನರೇ,
ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಹೊರಳಾಡಿರಿ.
ಸತ್ತವರಿಗಾಗಿ ದೊಡ್ಡ ಧ್ವನಿಯಲ್ಲಿ ರೋದಿಸಿರಿ.
ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ಬೋರ ಪ್ರಲಾಪ ಮಾಡಿರಿ.
ವಿನಾಶಕನು ತಕ್ಷಣ ನಮ್ಮ ಮೇಲೆರಗುವನು.
27 “ಯೆರೆಮೀಯನೇ, ನಾನು ನಿನ್ನನ್ನು
ಒಬ್ಬ ಲೋಹ ಪರೀಕ್ಷಕನನ್ನಾಗಿ ನೇಮಿಸಿದ್ದೇನೆ.
ನೀನು ನನ್ನ ಜನರನ್ನು ಪರೀಕ್ಷಿಸು.
ಅವರ ವ್ಯವಹಾರವನ್ನು ಅವಲೋಕಿಸು.
28 ಅವರೆಲ್ಲರು ನನಗೆ ವಿರುದ್ಧವಾಗಿ ದಂಗೆ ಎದ್ದಿದ್ದಾರೆ;
ಅವರು ಬಹಳ ಹಟಮಾರಿಗಳಾಗಿದ್ದಾರೆ.
ಅವರು ಜನರ ಬಗ್ಗೆ ಅಪಪ್ರಚಾರ ಮಾಡುತ್ತಾ ತಿರುಗಾಡುತ್ತಾರೆ.
ಅವರು ಬಣ್ಣಗುಂದಿದ, ತುಕ್ಕುಹಿಡಿದ ಕಂಚಿನಂತೆಯೂ ಕಬ್ಬಿಣದಂತೆಯೂ ಇದ್ದಾರೆ.
29 ಅವರನ್ನು ತಿದ್ದುವದು ಬೆಳ್ಳಿಯನ್ನು ಪವಿತ್ರಗೊಳಿಸಲು ಪ್ರಯತ್ನ ಮಾಡಿದ ಅಕ್ಕಸಾಲಿಗನಂತಾಗುವುದು. ತಿದಿಗಳು[b] ಭರದಿಂದ ಬೀಸಲು ಬೆಂಕಿಯು ಧಗಧಗಿಸಿತು.
ಆದರೆ ಆ ಬೆಂಕಿಯಿಂದ ಕೇವಲ ಸೀಸವು ಹೊರಬಂದಿತು.
ಬೆಳ್ಳಿಯನ್ನು ಶುದ್ಧೀಕರಿಸಲು ಮಾಡಿದ ಪ್ರಯತ್ನ ಕೇವಲ ವ್ಯರ್ಥವಾಯಿತು.
ಅದರಂತೆಯೇ ನನ್ನ ಜನರಿಂದ ದುಷ್ಟತನವನ್ನು ತೆಗೆಯಲಾಗಲಿಲ್ಲ.
30 ನನ್ನ ಜನರನ್ನು ‘ತಿರಸ್ಕರಿಸಲಾದ ಬೆಳ್ಳಿ’
ಎಂದು ಕರೆಯಲಾಗುವದು.
ಏಕೆಂದರೆ ಯೆಹೋವನು ಅವರನ್ನು ಸ್ವಿಕರಿಸಲಿಲ್ಲ.”
ಯೆಹೋವನ ಆಲಯದಲ್ಲಿ ಯೆರೆಮೀಯನ ಧರ್ಮೋಪದೇಶ
7 ಯೆರೆಮೀಯನಿಗೆ ಯೆಹೋವನ ಸಂದೇಶ ಹೀಗಿತ್ತು: 2 “ಯೆರೆಮೀಯನೇ, ಯೆಹೋವನ ಆಲಯದ ಹೆಬ್ಬಾಗಿಲಿನ ಹತ್ತಿರ ನಿಂತುಕೊಂಡು ಈ ಸಂದೇಶವನ್ನು ಸಾರು:
“‘ಇದು ಯೆಹೋವನ ಸಂದೇಶ. ಯೆಹೂದದ ಜನರೆಲ್ಲರೇ, ಯೆಹೋವನನ್ನು ಆರಾಧಿಸಲು ಈ ದ್ವಾರದಿಂದ ಪ್ರವೇಶ ಮಾಡುವ ಜನರೇ, ಈ ಸಂದೇಶವನ್ನು ಕೇಳಿರಿ. 3 ಯೆಹೋವನು ಇಸ್ರೇಲರ ದೇವರು. ಸರ್ವಶಕ್ತನಾದ ದೇವರು ಹೀಗೆ ಹೇಳುತ್ತಾನೆ: ನಿಮ್ಮ ನಡತೆಯನ್ನು ಬದಲಾಯಿಸಿರಿ; ಒಳ್ಳೆಯದನ್ನು ಮಾಡಿರಿ. ಆಗ ನೀವು ಇಲ್ಲಿರಲು ಆಸ್ಪದ ಕೊಡುತ್ತೇನೆ. 4 ಕೆಲವರು ಹೇಳುವ ಸುಳ್ಳುಗಳನ್ನು ನಂಬಬೇಡಿರಿ. ಅವರು “ಇದು ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ” ಎಂದು ಹೇಳುತ್ತಾರೆ. 5 ನೀವು ನಿಮ್ಮ ನಡತೆಯನ್ನು ಬದಲಾಯಿಸಿ ಸತ್ಕಾರ್ಯಗಳನ್ನು ಮಾಡಿದರೆ ನಾನು ನಿಮಗೆ ಈ ಸ್ಥಳದಲ್ಲಿ ವಾಸಿಸಲು ಆಸ್ಪದಕೊಡುತ್ತೇನೆ. ನೀವು ಒಬ್ಬರಿಗೊಬ್ಬರು ನ್ಯಾಯವಾದ ರೀತಿಯಲ್ಲಿ ವ್ಯವಹರಿಸಬೇಕು. 6 ಅಪರಿಚಿತರೊಂದಿಗೂ ನೀವು ನ್ಯಾಯಬದ್ಧವಾಗಿ ವರ್ತಿಸಬೇಕು. ವಿಧವೆಯರಿಗೆ ಮತ್ತು ಅನಾಥರಿಗೆ ನೀವು ಒಳ್ಳೆಯದನ್ನು ಮಾಡಬೇಕು. ನಿರ್ದೋಷಿಗಳ ಕೊಲೆ ಮಾಡಬಾರದು; ಅನ್ಯ ದೇವರುಗಳನ್ನು ಸೇವಿಸಬಾರದು. ಏಕೆಂದರೆ ಅವುಗಳು ನಿಮ್ಮ ಜೀವನವನ್ನು ಹಾಳುಮಾಡುತ್ತವೆ. 7 ನೀವು ನನ್ನ ಆಜ್ಞೆಯನ್ನು ಪಾಲಿಸಿದರೆ ಇಲ್ಲಿರಲು ನಾನು ನಿಮಗೆ ಆಸ್ಪದ ಕೊಡುತ್ತೇನೆ. ನಾನು ಈ ಪ್ರದೇಶವನ್ನು ನಿಮ್ಮ ಪೂರ್ವಿಕರಿಗೆ ಶಾಶ್ವತವಾದ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ.
8 “‘ನೀವು ಸುಳ್ಳುಗಳನ್ನು ನಂಬುತ್ತಿದ್ದೀರಿ, ಆ ಸುಳ್ಳುಗಳು ಹುರುಳಿಲ್ಲದವುಗಳಾಗಿವೆ. 9 ನೀವು ಕದಿಯುವುದಿಲ್ಲವೇ? ಕೊಲೆಗಳನ್ನು ಮಾಡುವುದಿಲ್ಲವೇ? ನೀವು ವ್ಯಭಿಚಾರ ಮಾಡುವುದಿಲ್ಲವೇ? ನೀವು ಅನ್ಯರ ಮೇಲೆ ಸುಳ್ಳು ದೋಷಾರೋಪಣೆ ಮಾಡುವುದಿಲ್ಲವೇ? ನೀವು ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅನ್ಯದೇವರುಗಳ ಅನುಯಾಯಿಗಳಾಗಿಲ್ಲವೇ? 10 ನೀವು ಈ ಪಾಪಗಳನ್ನು ಮಾಡುತ್ತಿದ್ದರೂ ನನ್ನ ಹೆಸರಿನಿಂದ ಕರೆಯಲ್ಪಡುವ ಈ ಆಲಯದಲ್ಲಿ ನನ್ನ ಎದುರಿಗೆ ನಿಲ್ಲಬಹುದೆಂದು ಭಾವಿಸಿರುವಿರಾ? ನೀವು ನನ್ನ ಸಮ್ಮುಖದಲ್ಲಿ ನಿಂತುಕೊಂಡು, “ನಾವು ಸುರಕ್ಷಿತರಾಗಿದ್ದೇವೆ” ಎಂದು ಹೇಳಿಕೊಂಡು ನಿಮ್ಮ ದುಷ್ಕೃತ್ಯಗಳನ್ನು ಮುಂದುವರಿಸಬಹುದೆಂದು ಭಾವಿಸಿರುವಿರಾ? 11 ಈ ಪವಿತ್ರ ಆಲಯವನ್ನು ನನ್ನ ಹೆಸರಿನಿಂದ ಕರೆಯಲಾಗಿದೆ. ಈ ಆಲಯವು ನಿಮ್ಮ ದೃಷ್ಟಿಯಲ್ಲಿ ಕೇವಲ ಕಳ್ಳರು ಅಡಗುವ ಸ್ಥಳವಾಯಿತೇ? ನಾನು ನಿಮ್ಮ ವ್ಯವಹಾರವನ್ನೆಲ್ಲಾ ನೋಡುತ್ತಿದ್ದೇನೆ’” ಎಂಬುದು ಯೆಹೋವನಾದ ನನ್ನ ನುಡಿ.
12 “ಯೆಹೂದದ ಜನರಾದ ನೀವು ಈಗ ಶೀಲೋವಿಗೆ ಹೋಗಿರಿ. ನಾನು ಮೊದಲು ನನ್ನ ಹೆಸರಿಗಾಗಿ ಆಲಯವನ್ನು ಮಾಡಿದ ಸ್ಥಳಕ್ಕೆ ಹೋಗಿರಿ. ಇಸ್ರೇಲಿನ ಜನರು ಸಹ ದುಷ್ಕೃತ್ಯಗಳನ್ನು ಮಾಡಿದರು. ಅವರು ಮಾಡಿದ ದುಷ್ಕೃತ್ಯಗಳ ಕಾರಣ ನಾನು ಆ ಸ್ಥಳಕ್ಕೆ ಮಾಡಿರುವುದನ್ನು ಹೋಗಿ ನೋಡಿರಿ. 13 ಇಸ್ರೇಲಿನ ಜನರಾದ ನೀವು ಈ ದುಷ್ಕೃತ್ಯಗಳನ್ನು ಮಾಡುತ್ತಿದ್ದೀರಿ.” ಇದು ಯೆಹೋವನಾದ ನನ್ನ ಮಾತು: “ನಾನು ನಿಮಗೆ ಮತ್ತೆಮತ್ತೆ ಹೇಳಿದೆ, ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ನಾನು ನಿಮ್ಮನ್ನು ಕೂಗಿದೆ, ಆದರೆ ನೀವು ಉತ್ತರ ಕೊಡಲಿಲ್ಲ. 14 ಆದ್ದರಿಂದ ನನ್ನ ಹೆಸರನ್ನು ಹೊಂದಿರುವ ಆಲಯವನ್ನೂ ನೀವು ನಂಬಿರುವ ಆಲಯವನ್ನೂ ನಿಮ್ಮ ಪೂರ್ವಿಕರಿಗೆ ನಾನು ಕೊಟ್ಟಿರುವ ಸ್ಥಳವನ್ನೂ ನಾನು ಶೀಲೋವಿಗೆ ಮಾಡಿದಂತೆ ಮಾಡುವೆನು. 15 ನಾನು ನಿಮ್ಮ ಎಲ್ಲಾ ಸಹೋದರರನ್ನು ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನ್ನು ಎಸೆದುಬಿಟ್ಟ ಹಾಗೆ ನಿಮ್ಮನ್ನೂ ನನ್ನಿಂದ ದೂರ ಎಸೆದುಬಿಡುವೆನು.”
16 “ಯೆರೆಮೀಯನೇ, ನೀನು ಈ ಯೆಹೂದದ ಜನರಿಗಾಗಿ ಪ್ರಾರ್ಥಿಸಬೇಡ; ಇವರಿಗಾಗಿ ಮೊರೆಯಿಡಬೇಡ; ಇವರಿಗಾಗಿ ಬೇಡಿಕೊಳ್ಳಬೇಡ; ಇವರಿಗಾಗಿ ನೀನು ಮಾಡುವ ಪ್ರಾರ್ಥನೆಯನ್ನು ನಾನು ಕೇಳುವದಿಲ್ಲ. 17 ಆ ಜನರು ಯೆಹೂದದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಏನು ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತು. 18 ಯೆಹೂದದ ಜನರು ಹೀಗೆ ಮಾಡುತ್ತಿದ್ದಾರೆ; ಮಕ್ಕಳು ಸೌದೆಯನ್ನು ಆರಿಸುತ್ತಾರೆ. ತಂದೆಗಳು ಆ ಸೌಧೆಯಿಂದ ಬೆಂಕಿಯನ್ನು ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದಿ ಸ್ವರ್ಗದ ರಾಣಿಗಾಗಿ ಹೋಳಿಗೆಗಳನ್ನು ಮಾಡುತ್ತಾರೆ. ಈ ಯೆಹೂದದ ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ. ಅವರು ನನ್ನನ್ನು ರೇಗಿಸುವದಕ್ಕಾಗಿಯೇ ಹೀಗೆ ಮಾಡುತ್ತಾರೆ. 19 ನಿಜವಾಗಿ ಹೇಳುವುದಾದರೆ, ಯೆಹೂದದ ಜನರು ನನಗೆ ಕೇಡುಮಾಡುತ್ತಿಲ್ಲ, ಅವರು ತಮಗೇ ಕೇಡುಮಾಡಿಕೊಳ್ಳುತ್ತಿದ್ದಾರೆ. ಅವರು ತಮಗೆ ನಾಚಿಕೆಯಾಗುವಂತೆ ಮಾಡುತ್ತಿದ್ದಾರೆ” ಎಂದು ಯೆಹೋವನು ಹೇಳಿದನು.
20 ಯೆಹೋವನು ಹೀಗೆಂದನು: “ನಾನು ಈ ಸ್ಥಳಕ್ಕೆ ವಿರೋಧವಾಗಿ ನನ್ನ ಕೋಪವನ್ನು ತೋರಿಸುವೆನು. ನಾನು ಜನರನ್ನೂ ಪ್ರಾಣಿಗಳನ್ನೂ ದಂಡಿಸುವೆನು. ಕಾಡಿನ ಮರಗಳನ್ನೂ ಹೊಲದ ಬೆಳೆಗಳನ್ನೂ ದಂಡಿಸುವೆನು. ನನ್ನ ಕೋಪವು ಉರಿಯುವ ಬೆಂಕಿಯಂತಿರುವದು; ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.”
ಯೆಹೋವನು ಯಜ್ಞಗಳಿಗಿಂತ ಹೆಚ್ಚಾಗಿ ವಿಧೇಯತೆಯನ್ನು ಅಪೇಕ್ಷಿಸುವನು
21 ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ಹೋಗಿರಿ, ನಿಮ್ಮ ಮನಸ್ಸಿಗೆ ಬಂದಷ್ಟು ಸರ್ವಾಂಗಹೋಮಗಳನ್ನು ಮತ್ತು ಯಜ್ಞಗಳನ್ನು ಅರ್ಪಿಸಿರಿ. ಆ ಯಜ್ಞಗಳ ಮಾಂಸವನ್ನು ನೀವೇ ತಿನ್ನಿರಿ. 22 ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದೆ. ನಾನು ಅವರೊಂದಿಗೆ ಮಾತನಾಡಿದೆ. ಆದರೆ ನಾನು ಅವರಿಗೆ ಸರ್ವಾಂಗಹೋಮಗಳ ಬಗ್ಗೆಯಾಗಲಿ ಯಜ್ಞಗಳ ಬಗ್ಗೆಯಾಗಲಿ ಯಾವ ಆಜ್ಞೆಯನ್ನೂ ಕೊಟ್ಟಿಲ್ಲ. 23 ನಾನು ಅವರಿಗೆ, ‘ನನಗೆ ವಿಧೇಯರಾಗಿರಿ. ನಾನು ನಿಮಗೆ ದೇವರಾಗಿರುತ್ತೇನೆ, ನೀವು ನನ್ನ ಭಕ್ತರಾಗಿರುತ್ತೀರಿ. ನಾನು ಆಜ್ಞಾಪಿಸಿದ್ದನ್ನೆಲ್ಲವನ್ನು ಮಾಡಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು’ ಎಂದು ಮಾತ್ರ ಆಜ್ಞಾಪಿಸಿದ್ದೆ.
24 “ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರು. ಅವರು ಒಳ್ಳೆಯವರಾಗಲಿಲ್ಲ. ಅವರು ಇನ್ನೂ ಕೆಟ್ಟವರಾದರು. ಅವರು ಹಿಂದಕ್ಕೆ ಸರಿದರು, ಮುಂದಕ್ಕೆ ಬರಲಿಲ್ಲ. 25 ನಿಮ್ಮ ಪೂರ್ವಿಕರು ಈಜಿಪ್ಟನ್ನು ಬಿಟ್ಟ ದಿನದಿಂದ ಇಂದಿನವರೆಗೂ ನಾನು ನಿಮ್ಮಲ್ಲಿಗೆ ನನ್ನ ಸೇವಕರನ್ನು ಕಳುಹಿಸಿದ್ದೇನೆ. ನನ್ನ ಸೇವಕರು ಪ್ರವಾದಿಗಳಾಗಿದ್ದಾರೆ. ನಾನು ಅವರನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದೆ. 26 ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಅತಿ ಮೊಂಡರಾಗಿದ್ದು ಅವರ ತಂದೆಗಳಿಗಿಂತ ಹೆಚ್ಚಿನ ದುಷ್ಕೃತ್ಯಗಳನ್ನು ಮಾಡಿದರು.
27 “ಯೆರೆಮೀಯನೇ, ನೀನು ಈ ಸಂಗತಿಗಳನ್ನು ಯೆಹೂದದ ಜನರಿಗೆ ಹೇಳು. ಆದರೆ ಅವರು ನಿನ್ನ ಮಾತುಗಳನ್ನು ಕೇಳುವದಿಲ್ಲ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸದ ಜನಾಂಗವಿದು. ಈ ಜನರು ದೇವರ ಧರ್ಮೋಪದೇಶವನ್ನು ಕೇಳಲಿಲ್ಲ. ಈ ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ.
ಸಂಹಾರದ ತಗ್ಗು
29 “ಯೆರೆಮೀಯನೇ, ನಿನ್ನ ಕೂದಲನ್ನು ಕತ್ತರಿಸಿ[c] ಎಸೆದುಬಿಡು. ಬೋಳುಶಿಖರಕ್ಕೆ ಹೋಗಿ ರೋಧಿಸು. ಏಕೆಂದರೆ ಯೆಹೋವನು ಈ ತಲೆಮಾರಿನ ಜನರನ್ನು ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನ್ನು ದಂಡಿಸುವನು. 30 ನೀನು ಹಾಗೆ ಮಾಡಲೇಬೇಕು ಯಾಕೆಂದರೆ, ಯೆಹೂದದ ಜನರು ಮಾಡುವ ದುಷ್ಕೃತ್ಯಗಳನ್ನು ನಾನು ನೋಡಿದ್ದೇನೆ.” ಯೆಹೋವನು ಹೀಗೆನ್ನುತ್ತಾನೆ: “ಅವರು ತಮ್ಮ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಪಡೆದ ಆಲಯದಲ್ಲಿ ಅವರು ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅವರು ನನ್ನ ಆಲಯವನ್ನು ‘ಮಲಿನ’ಗೊಳಿಸಿದ್ದಾರೆ. 31 ಯೆಹೂದದ ಜನರು ಬೆನ್ಹಿನ್ನೊಮ್ ತಗ್ಗಿನಲ್ಲಿ ತೋಫೆತೆಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ಆ ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನ್ನು ಕೊಂದು ಯಜ್ಞದ ಆಹುತಿಯೆಂದು ಅವರನ್ನು ಸುಡುತ್ತಾರೆ. ನೀವು ಹೀಗೆ ಮಾಡಬೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನ್ನ ಮನಸ್ಸಿನಲ್ಲಿಯೂ ಬಂದಿಲ್ಲ. 32 ಹೀಗಿರಲು ನಾನು ಈ ಕಣಿವೆಯನ್ನು ತೋಫೆತ್ ಮತ್ತು ಬೆನ್ಹಿನ್ನೊಮೀನ ಕಣಿವೆ ಎಂದು ಕರೆಯದೆ ಇದನ್ನು ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನು ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನ್ನು ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನ್ನು ಹೂಳುವ ಕಾರಣ ಅದಕ್ಕೆ ಈ ಹೆಸರನ್ನು ಕೊಡಲಾಗುವುದು. 33 ಆಗ ಸತ್ತವರ ದೇಹಗಳು ಭೂಮಿಯ ಮೇಲೆ ಬಿದ್ದಿರುತ್ತವೆ; ಅವು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಆಹಾರವಾಗುತ್ತವೆ. ಆ ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಓಡಿಸುವದಕ್ಕೆ ಒಬ್ಬನಾದರೂ ಜೀವಂತವಾಗಿರುವುದಿಲ್ಲ. 34 ಜೆರುಸಲೇಮಿನ ಬೀದಿಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಸಂತೋಷ ಮತ್ತು ಸಂಭ್ರಮದ ಧ್ವನಿಯನ್ನೂ ವಧುವರರ ಸ್ವರವನ್ನೂ ಬರದಂತೆ ಮಾಡುತ್ತೇನೆ. ಈ ಪ್ರದೇಶವು ಬರಿದಾದ ಮರಳುಗಾಡಾಗುವದು.”
8 ಯೆಹೋವನು ಹೀಗೆನ್ನುತ್ತಾನೆ: “ಆಗ ಜನರು ಯೆಹೂದದ ರಾಜರ ಮತ್ತು ಪ್ರಮುಖ ಅಧಿಪತಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಯಾಜಕರ ಮತ್ತು ಪ್ರವಾದಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಜೆರುಸಲೇಮಿನ ಎಲ್ಲಾ ಜನರ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. 2 ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.
3 “ಯೆಹೂದದ ಜನರು ತಮ್ಮ ಮನೆಗಳನ್ನು ಮತ್ತು ಪ್ರದೇಶವನ್ನು ಬಿಡುವಂತೆ ಮಾಡುತ್ತೇನೆ. ಆ ಜನರನ್ನು ಪರದೇಶಕ್ಕೆ ಒಯ್ಯಲಾಗುವುದು. ಯುದ್ಧದಲ್ಲಿ ಮರಣ ಹೊಂದದೆ ಅಳಿದುಳಿದ ಕೆಲವು ಮಂದಿ ಯೆಹೂದಿಯರು ತಾವು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುವರು.” ಇದು ಯೆಹೋವನ ನುಡಿ.
ಪಾಪ ಮತ್ತು ಶಿಕ್ಷೆ
4 “ಯೆರೆಮೀಯನೇ, ಯೆಹೂದದ ಜನರಿಗೆ ಹೀಗೆ ಹೇಳು: ‘ಯೆಹೋವನು ಈ ಮಾತನ್ನು ಹೇಳುತ್ತಾನೆ.
“‘ಒಬ್ಬ ಮನುಷ್ಯನು ಕೆಳಗೆ ಬಿದ್ದರೆ
ಪುನಃ ಅವನು ಮೇಲಕ್ಕೆ ಏಳುತ್ತಾನೆ;
ಒಬ್ಬ ಮನುಷ್ಯನು ತಪ್ಪುದಾರಿ ಹಿಡಿದರೆ
ಅವನು ಹಿಂತಿರುಗಿ ಬರುತ್ತಾನೆಂಬುದು ನಿಮಗೆ ಗೊತ್ತು.
5 ಯೆಹೂದದ ಜನರು ತಪ್ಪುದಾರಿಯನ್ನು ಹಿಡಿದಿದ್ದಾರೆ.
ಆದರೆ ಜೆರುಸಲೇಮಿನ ಜನರು ಆ ತಪ್ಪು ದಾರಿಯ ಮೇಲೆ ನಡೆಯುವದನ್ನು ಏಕೆ ಮುಂದುವರಿಸಿದ್ದಾರೆ?
ತಮ್ಮ ಸುಳ್ಳುಗಳನ್ನೇ ಅವರು ನಂಬಿದ್ದಾರೆ,
ಅವರು ಹಿಂತಿರುಗಿ ಬರಲು ಸಿದ್ಧರಿಲ್ಲ.
6 ನಾನು ಎಚ್ಚರವಹಿಸಿ ಅವರು ಹೇಳುವದನ್ನು ಕೇಳಿದ್ದೇನೆ.
ಆದರೆ ಅವರು ಸರಿಯಾದುದನ್ನು ಹೇಳುವದಿಲ್ಲ.
ತಾವು ಮಾಡಿದ ಪಾಪಕ್ಕಾಗಿ ಅವರು ಪಶ್ಚಾತ್ತಾಪಪಡುವದಿಲ್ಲ.
ಅವರು ಮಾಡಿದ ದುಷ್ಕೃತ್ಯದ ಬಗ್ಗೆ ಅವರು ಯೋಚಿಸುವದಿಲ್ಲ.
ಜನರು ವಿಚಾರ ಮಾಡದೆ ಕೆಲಸಮಾಡುತ್ತಾರೆ.
ಅವರು ಯುದ್ಧದಲ್ಲಿ ಓಡುವ ಕುದುರೆಯಂತಿದ್ದಾರೆ.
7 ಆಕಾಶದಲ್ಲಿ ಹಾರಾಡುವ ಬಕಪಕ್ಷಿಗಳಿಗೂ ಸಹ
ಆಯಾ ಕೆಲಸ ಮಾಡುವ ಸರಿಯಾದ ಸಮಯ ಗೊತ್ತಿದೆ.
ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ
ಹೊಸ ಮನೆಗೆ ಹೋಗಬೇಕಾದ ಕಾಲವನ್ನು ಬಲ್ಲವು.
ಆದರೆ ನನ್ನ ಜನರಿಗೆ ತಮ್ಮ ಯೆಹೋವನು ಅವರಿಂದ ಏನನ್ನು ಬಯಸುತ್ತಾನೆ ಎಂಬುದು ಗೊತ್ತಿಲ್ಲ.
8 “‘“ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿ ಇದೆ.
ಆದ್ದರಿಂದ ನಾವು ಜ್ಞಾನಿಗಳು” ಎಂದು ನೀವು ಹೇಳುವಿರಿ.
ಆದರೆ ಅದು ನಿಜವಲ್ಲ.
ಏಕೆಂದರೆ ಲಿಪಿಗಾರರು ತಮ್ಮ ಲೇಖನಿಯಿಂದ ಸುಳ್ಳು ಬರೆದಿದ್ದಾರೆ.
9 ಆ “ಜ್ಞಾನಿಗಳು” ಯೆಹೋವನ ಉಪದೇಶವನ್ನು ಕೇಳಲು ಒಪ್ಪಲಿಲ್ಲ.
ಆದ್ದರಿಂದ ಅವರು ನಿಜವಾದ ಜ್ಞಾನಿಗಳಲ್ಲವೇ ಅಲ್ಲ.
ಆ “ಜ್ಞಾನಿಗಳು” ಸಿಕ್ಕಿಹಾಕಿಕೊಂಡಿದ್ದಾರೆ.
ಅವರು ಗಾಬರಿಪಟ್ಟಿದ್ದಾರೆ ಮತ್ತು ನಾಚಿಕೆಪಟ್ಟಿದ್ದಾರೆ.
ಅವರ ಜ್ಞಾನವು ಅಪ್ರಯೋಜಕವಾಗಿದೆ.
10 ಆದ್ದರಿಂದ ನಾನು ಅವರ ಹೆಂಡಂದಿರನ್ನು ಬೇರೆಯವರಿಗೆ ಕೊಡುತ್ತೇನೆ.
ನಾನು ಅವರ ಹೊಲಗಳನ್ನು ಬೇರೆಯವರಿಗೆ ಕೊಡುತ್ತೇನೆ.
ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
ಸಾಮಾನ್ಯರನ್ನು ಮೊದಲುಗೊಂಡು ಅತ್ಯಂತ ಮುಖ್ಯರಾದವರೆಲ್ಲರೂ ಹೀಗೇ ಇದ್ದಾರೆ.
ಪ್ರವಾದಿಗಳಿಂದ ಹಿಡಿದು ಯಾಜಕರವರೆಗೆ ಎಲ್ಲರೂ ಸುಳ್ಳು ಹೇಳುತ್ತಾರೆ.
11 ಪ್ರವಾದಿಗಳು ಮತ್ತು ಯಾಜಕರು ನಮ್ಮ ಜನರ ಆಳವಾದ ಗಾಯಗಳನ್ನು
ಕೇವಲ ಅಲ್ಪಗಾಯಗಳಂತೆ ಪರಿಗಣಿಸಿ ಚಿಕಿತ್ಸೆ ಕೊಡುತ್ತಿದ್ದಾರೆ.
“ಎಲ್ಲಾ ಚೆನ್ನಾಗಿದೆ, ಎಲ್ಲಾ ಚೆನ್ನಾಗಿದೆ” ಎಂದು ಅವರು ಹೇಳುತ್ತಾರೆ.
ಆದರೆ ಎಲ್ಲಾ ಚೆನ್ನಾಗಿಲ್ಲ.
12 ಅವರು ತಮ್ಮ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
ಆದರೆ ಅವರು ಸ್ವಲ್ಪವೂ ನಾಚಿಕೆಪಡುವುದಿಲ್ಲ.
ಅವರಿಗೆ ನಾಚಿಕೆ ಎಂಬುದೇ ತಿಳಿದಿಲ್ಲ.
ಆದ್ದರಿಂದ ಉಳಿದೆಲ್ಲರಂತೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
ನಾನು ಅವರನ್ನು ಶಿಕ್ಷಿಸುವಾಗ ಅವರು ಮುಗ್ಗರಿಸಿ ಬೀಳುವರು.’”
ಯೆಹೋವನ ನುಡಿಗಳಿವು.
13 “ನಾನು ಅವರ ಹಣ್ಣುಗಳನ್ನೂ ಬೆಳೆಗಳನ್ನೂ ಕಿತ್ತುಕೊಂಡು
ಅವರಿಗೆ ಸುಗ್ಗಿಯಾಗದಂತೆ ಮಾಡುತ್ತೇನೆ.” ಇದು ಯೆಹೋವನ ನುಡಿ.
ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗಳಿರುವದಿಲ್ಲ.
ಅಂಜೂರದ ಮರದಲ್ಲಿ ಒಂದಾದರೂ ಅಂಜೂರದ ಹಣ್ಣು ಇರುವದಿಲ್ಲ.
ಎಲೆಗಳು ಸಹ ಒಣಗಿ ಉದುರುವವು.
ನಾನು ಅವರಿಗೆ ಕೊಟ್ಟ ವಸ್ತುಗಳನ್ನು ಕಿತ್ತುಕೊಳ್ಳುವೆನು.
14 “ನಾವು ಇಲ್ಲಿ ಸುಮ್ಮನೆ ಕುಳಿತುಕೊಂಡಿರುವುದೇಕೆ?
ಬನ್ನಿ, ನಾವು ಭದ್ರವಾದ ಪಟ್ಟಣಗಳಿಗೆ ಓಡಿಹೋಗೋಣ.
ನಮ್ಮ ದೇವರಾದ ಯೆಹೋವನು ನಮ್ಮನ್ನು ಸಾಯುವಂತೆ ಮಾಡಿದರೆ ಅಲ್ಲಿಯೇ ಸತ್ತುಹೋಗೋಣ.
ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ.
ಆದ್ದರಿಂದ ಆತನು ನಮಗೆ ಕುಡಿಯಲು ವಿಷಮಿಶ್ರಿತ ನೀರನ್ನು ಕೊಟ್ಟಿದ್ದಾನೆ.
15 ನಾವು ಶಾಂತಿಯನ್ನು ನಿರೀಕ್ಷಿಸಿದ್ದೆವು.
ಆದರೆ ಒಳ್ಳೆಯದೇನೂ ಆಗಲಿಲ್ಲ.
ಅವನು ನಮ್ಮನ್ನು ಗುಣಪಡಿಸುವ ಸಮಯಕ್ಕಾಗಿ ಕಾದುಕೊಂಡಿದ್ದೆವು.
ಆದರೆ ಕೇವಲ ವಿನಾಶ ಮಾತ್ರ ಬಂದಿತು.
16 ದಾನ್ಕುಲದವರ ಪ್ರದೇಶದಿಂದ
ನಾವು ಶತ್ರುಗಳ ಕುದುರೆಗಳ ಕೆನೆತವನ್ನು ಕೇಳುತ್ತಿದ್ದೇವೆ.
ಅವುಗಳ ಪಾದಗಳ ಬಡಿತದಿಂದ ಭೂಮಿ ನಡುಗುತ್ತಿದೆ.
ಅವರು ನಮ್ಮ ಪ್ರದೇಶವನ್ನು
ಮತ್ತು ಅಲ್ಲಿದ್ದ ಎಲ್ಲವನ್ನು ಹಾಳುಮಾಡಲು ಬಂದಿದ್ದಾರೆ.
ಅವರು ನಗರವನ್ನು ಮತ್ತು ಅಲ್ಲಿದ್ದ ಎಲ್ಲಾ ಜನರನ್ನು
ಹಾಳುಮಾಡಲು ಬಂದಿದ್ದಾರೆ.
17 “ಯೆಹೂದದ ಜನರೇ, ನಿಮ್ಮನ್ನು ಕಚ್ಚುವದಕ್ಕಾಗಿ ವಿಷಪೂರಿತ ಹಾವುಗಳನ್ನು ಕಳಿಸುತ್ತಿದ್ದೇನೆ.
ಆ ಹಾವುಗಳನ್ನು ತಡೆಯಲಾಗದು.
ಅವುಗಳು ನಿಮ್ಮನ್ನು ಕಚ್ಚುವವು.”
ಇದು ಯೆಹೋವನ ನುಡಿ.
18 ದೇವರೇ, ನಾನು ದುಃಖಿತನಾಗಿದ್ದೇನೆ, ಭಯಭೀತನಾಗಿದ್ದೇನೆ.
19 ನನ್ನ ಜನರ ಮೊರೆಯನ್ನು ಆಲಿಸು.
ದೇಶದ ಎಲ್ಲೆಡೆಯಲ್ಲಿಯೂ ಅವರು ಸಹಾಯಕ್ಕಾಗಿ ಕೂಗುತ್ತಿದ್ದಾರೆ.
“ಈಗಲೂ ಯೆಹೋವನು ಚೀಯೋನಿನಲ್ಲಿದ್ದಾನೆಯೇ?
ಚೀಯೋನಿನ ರಾಜನು ಈಗಲೂ ಅಲ್ಲಿದ್ದಾನೆಯೇ?” ಎಂದು ಅವರು ಕೇಳುತ್ತಾರೆ.
ದೇವರು ಹೀಗೆನ್ನುತ್ತಾನೆ: “ಯೆಹೂದದ ಜನರು ತಮ್ಮ ವಿಗ್ರಹಗಳನ್ನು ಪೂಜಿಸಿ ನನ್ನ ಕೋಪವನ್ನು ಏಕೆ ಕೆರಳಿಸುತ್ತಾರೆ?
ಅವರು ನಿಷ್ಪ್ರಯೋಜಕವಾದ ಅನ್ಯದೇವರ ವಿಗ್ರಹಗಳನ್ನು ಪೂಜಿಸಿದರು.”
20 “ಸುಗ್ಗಿಯ ಕಾಲ ಮುಗಿಯಿತು,
ಬೇಸಿಗೆ ಕಾಲ ಹೋಯಿತು,
ಆದರೆ ನಮಗಿನ್ನೂ ರಕ್ಷಣೆ ಆಗಲಿಲ್ಲ” ಎಂದು ಜನರು ಅನ್ನುತ್ತಾರೆ.
21 ನನ್ನ ಜನರು ಗಾಯಗೊಂಡಿದ್ದಾರೆ. ಆದ್ದರಿಂದ ನಾನೂ ಗಾಯಗೊಂಡಿದ್ದೇನೆ.
ಈಗ ಗಾಯಗೊಂಡ ಜನರ ಬಗ್ಗೆ ಯೋಚಿಸುತ್ತ ನಾನು ದುಃಖದಿಂದ ಮೌನವಾಗಿದ್ದೇನೆ.
22 ಗಿಲ್ಯಾದಿನಲ್ಲಿ ಖಂಡಿತವಾಗಿಯೂ ಔಷಧವಿದೆ.
ಖಂಡಿತವಾಗಿಯೂ ಅಲ್ಲಿ ಒಬ್ಬ ವೈದ್ಯನಿದ್ದಾನೆ.
ಆದರೆ ನನ್ನ ಜನರ ಗಾಯಗಳು ಗುಣವಾಗಲಿಲ್ಲವೇಕೆ?
5 ವೃದ್ಧ ಪುರುಷರೊಂದಿಗೆ ಕೋಪದಿಂದ ಮಾತಾಡದೆ ಅವರನ್ನು ನಿನ್ನ ತಂದೆಯೆಂದು ಭಾವಿಸಿ ಅವರೊಂದಿಗೆ ಮಾತನಾಡು. ಯೌವನಸ್ಥರನ್ನು ಸಹೋದರರಂತೆಯೂ 2 ವೃದ್ಧ ಸ್ತ್ರೀಯರನ್ನು ತಾಯಿಗಳಂತೆಯೂ ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸು. ಯಾವಾಗಲೂ ಅವರೊಡನೆ ಒಳ್ಳೆಯ ರೀತಿಯಲ್ಲಿ ನಡೆದುಕೊ.
ವಿಧವೆಯರನ್ನು ಹೇಗೆ ಪೋಷಿಸಬೇಕೆಂಬ ನಿಯಮಗಳು
3 ದಿಕ್ಕಿಲ್ಲದ ವಿಧವೆಯರನ್ನು ಪರಿಪಾಲಿಸು. 4 ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ, ಅವರು ತಂದೆತಾಯಿಗಳಿಗೆ ಸಹಾಯ ಮಾಡುವುದರ ಮೂಲಕ ಸ್ವಂತ ಕುಟುಂಬಕ್ಕೆ ಗೌರವವನ್ನು ತೋರಬೇಕು. ಅವರು ಹೀಗೆ ಮಾಡಿದರೆ, ತಂದೆತಾಯಿಗಳಿಗೆ ಮತ್ತು ಅಜ್ಜಅಜ್ಜಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುವುದು. ಅದು ದೇವರಿಗೆ ಮೆಚ್ಚಿಕೆಯಾದದ್ದು. 5 ಒಬ್ಬ ವಿಧವೆಯು ನಿಜವಾಗಿಯೂ ಸಹಾಯಕರಿಲ್ಲದೆ ಒಬ್ಬಂಟಿಗಳಾಗಿದ್ದರೆ, ಆಗ ಆಕೆಯು ತನ್ನ ರಕ್ಷಣೆಗಾಗಿ ದೇವರ ಮೇಲೆ ಭರವಸೆ ಇಡುವಳು. ಆ ಸ್ತ್ರೀಯು ಹಗಲು ರಾತ್ರಿಯೆಲ್ಲ ಪ್ರಾರ್ಥಿಸುವಳು. ಅವಳು ದೇವರ ಸಹಾಯವನ್ನು ಬೇಡುವಳು. 6 ಆದರೆ ವಿಧವೆಯಾದವಳು ತನ್ನ ಇಚ್ಛೆಪೂರೈಕೆಗಾಗಿ ತನ್ನ ಜೀವಿತವನ್ನು ಬಳಸಿಕೊಳ್ಳುವುದಾದರೆ ಅವಳು ಬದುಕಿದ್ದರೂ ಸತ್ತಂತೆಯೇ. 7 ಜನರು ನಿಂದೆನೆಗೆ ಗುರಿಯಾಗದಂತೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸು. ಆಗ ಯಾರೂ ಅವರನ್ನು ನಿಂದಿಸಲು ಸಾಧ್ಯವಿಲ್ಲ. 8 ಯಾವನಾದರೂ ಸ್ವಂತ ಜನರನ್ನು ವಿಶೇಷವಾಗಿ ಸ್ವಂತ ಕುಟುಂಬದವರನ್ನು ಪರಿಪಾಲಿಸದೆ ಹೋದರೆ ಅವನು ಸತ್ಯಬೋಧನೆಯನ್ನು ತಿರಸ್ಕರಿಸುವವನಾಗಿದ್ದಾನೆ. ಅವನು ನಂಬದವನಿಗಿಂತ ತುಂಬಾ ಕೀಳಾದವನು.
9 ವಿಧವೆಯರ ಪಟ್ಟಿಗೆ ಸೇರಿಸಲ್ಪಟ್ಟ ವಿಧವೆಯರು ವಯಸ್ಸಿನಲ್ಲಿ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅವಳು ತನ್ನ ಗಂಡನಿಗೆ ನಂಬಿಗಸ್ತಳಾಗಿದ್ದವಳೆಂದೂ 10 ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದವಳೆಂದೂ ಹೆಸರನ್ನು ಪಡೆದಿರಬೇಕು. ಅಂದರೆ, ಅವಳು ತನ್ನ ಮಕ್ಕಳನ್ನು ಸಾಕಿಸಲಹಿದವಳೂ, ಅತಿಥಿಗಳನ್ನು ಸತ್ಕರಿಸಿದವಳೂ, ದೇವಜನರ ಪಾದಗಳನ್ನು ತೊಳೆದವಳೂ, ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಿದವಳೂ ಮತ್ತು ತನ್ನಿಂದಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದವಳೂ ಆಗಿರಬೇಕು.
11 ಆದರೆ ಪ್ರಾಯದ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬಾರದು. ಅವರು ಕ್ರಿಸ್ತನಿಗೆ ತಮ್ಮನ್ನು ಒಪ್ಪಿಸಿಕೊಂಡಿದ್ದರೂ ದೈಹಿಕ ಬಯಕೆಗಳ ಒತ್ತಡದಿಂದ ಪದೇಪದೇ ಆತನಿಗೆ ವಿಮುಖರಾಗುತ್ತಾರೆ. ನಂತರ ಅವರು ಮತ್ತೆ ಮದುವೆಯಾಗಲು ಆಸಕ್ತರಾಗುತ್ತಾರೆ. 12 ತಾವು ಕೊಟ್ಟ ವಾಗ್ದಾನವನ್ನು ಮೀರಿದವರೆಂಬ ತೀರ್ಪು ಅವರಿಗಾಗುತ್ತದೆ. 13 ಇದಲ್ಲದೆ, ಅವರು ಮನೆಮನೆಗೆ ಅಲೆಯುತ್ತಾ ತಮ್ಮ ಕಾಲವನ್ನು ಕಳೆಯಲಾರಂಭಿಸುತ್ತಾರೆ; ಹರಟೆ ಮಾತುಗಳನ್ನಾಡುತ್ತಾ ಇತರರ ಜೀವನದಲ್ಲಿ ತಲೆಹಾಕಿ ಕಾಲಹರಣ ಮಾಡುತ್ತಾರೆ; ಹೇಳಬಾರದ ಸಂಗತಿಗಳನ್ನೆಲ್ಲ ಹೇಳುತ್ತಾರೆ. 14 ಆದ್ದರಿಂದ ಅವರು ಮದುವೆ ಮಾಡಿಕೊಂಡು ಮಕ್ಕಳನ್ನು ಪಡೆಯಲಿ ಮತ್ತು ತಮ್ಮ ಮನೆಗಳನ್ನು ನೋಡಿಕೊಳ್ಳಲಿ. ಆಗ ಅವರನ್ನು ಟೀಕಿಸಲು ನಮ್ಮ ಶತ್ರುವಿಗೆ ಯಾವ ಕಾರಣವೂ ಇರುವುದಿಲ್ಲ. 15 ಆದರೆ ಈಗಾಗಲೇ ಕೆಲವರು ತಮ್ಮ ದಾರಿಯನ್ನು ಬದಲಾಯಿಸಿ ಸೈತಾನನನ್ನು ಹಿಂಬಾಲಿಸಿದ್ದಾರೆ.
16 ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆಯೇ ಅವರನ್ನು ಪರಿಪಾಲಿಸಲಿ. ಅವರನ್ನು ನೋಡಿಕೊಳ್ಳುವಂಥ ಜವಾಬ್ದಾರಿಯನ್ನು ಸಭೆಗೆ ಕೊಡಕೂಡದು. ಆಗ ದಿಕ್ಕಿಲ್ಲದ ವಿಧವೆಯರನ್ನು ನೋಡಿಕೊಳ್ಳಲು ಸಭೆಗೆ ಸಾಧ್ಯವಾಗುವುದು.
ಹಿರಿಯರ ಮತ್ತು ಇನ್ನಿತರ ವಿಷಯಗಳ ಕುರಿತು ಹೆಚ್ಚಿನ ಬೋಧನೆ
17 ಸಭೆಯನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಹಿರಿಯರು ಗೌರವಕ್ಕೂ ಸಂಬಳಕ್ಕೂ ಯೋಗ್ಯರಾಗಿದ್ದಾರೆ. ಪ್ರಸಂಗ ಮಾಡುವುದರಲ್ಲಿಯೂ ಉಪದೇಶಮಾಡುವುದರಲ್ಲಿಯೂ ನಿರತರಾಗಿರುವ ಹಿರಿಯರು ಉನ್ನತವಾದ ಗೌರವವನ್ನು ಪಡೆಯುತ್ತಾರೆ. 18 ಏಕೆಂದರೆ “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು”(A) ಎಂಬುದಾಗಿಯೂ “ದುಡಿಯುವ ಆಳಿಗೆ ತಕ್ಕ ಕೂಲಿ ದೊರೆಯಬೇಕು”(B) ಎಂಬುದಾಗಿಯೂ ಪವಿತ್ರ ಗ್ರಂಥವು ಹೇಳುತ್ತದೆ.
19 ಸಭೆಯ ಹಿರಿಯರನ್ನು ಕುರಿತು ಯಾವನಾದರೂ ದೂರು ಹೇಳಿದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳಿಲ್ಲದ ಹೊರತು ಅವನ ಮಾತುಗಳಿಗೆ ಕಿವಿಗೊಡಬೇಡ. 20 ಪಾಪ ಮಾಡುವ ಜನರನ್ನು ಸಭೆಯಲ್ಲಿ ಎಲ್ಲರ ಎದುರಿನಲ್ಲಿಯೇ ಗದರಿಸು. ಆಗ ಇತರರಿಗೂ ಎಚ್ಚರಿಕೆ ನೀಡಿದಂತಾಗುವುದು.
21 ನೀನು ಈ ಕಾರ್ಯಗಳನ್ನು ಮಾಡಬೇಕೆಂದು ದೇವರ, ಯೇಸು ಕ್ರಿಸ್ತನ ಮತ್ತು ಆರಿಸಲ್ಪಟ್ಟ ದೇವದೂತರ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುತ್ತೇನೆ. ಆದರೆ ಸತ್ಯವನ್ನು ತಿಳಿಯುವುದಕ್ಕಿಂತ ಮೊದಲೇ ಜನರಿಗೆ ತೀರ್ಪು ನೀಡಬೇಡ. ಯಾರಿಗೂ ಪಕ್ಷಪಾತ ತೋರಬೇಡ.
22 ನೀನು ನಿನ್ನ ಹಸ್ತಗಳನ್ನು ಯಾರ ಮೇಲಾದರೂ ಇಟ್ಟು ಅವನನ್ನು ಸಭಾಹಿರಿಯನನ್ನಾಗಿ ನೇಮಿಸುವುದಕ್ಕಿಂತ ಮೊದಲೇ ಗಮನವಿಟ್ಟು ಆಲೋಚನೆಮಾಡು. ಇತರ ಜನರ ಪಾಪಗಳಲ್ಲಿ ಪಾಲುಗಾರನಾಗದೆ ಶುದ್ಧನಾಗಿರು.
23 ತಿಮೊಥೆಯನೇ, ನೀನು ನೀರನ್ನು ಮಾತ್ರ ಕುಡಿಯದೆ ಸ್ವಲ್ಪ ದ್ರಾಕ್ಷಾರಸವನ್ನು ಸಹ ಕುಡಿಯಬೇಕು. ಇದರಿಂದ ನಿನ್ನ ಜೀರ್ಣಶಕ್ತಿಯು ಹೆಚ್ಚುವುದರಿಂದ ಪದೇಪದೇ ಅಸ್ವಸ್ಥನಾಗುವುದಿಲ್ಲ.
24 ಕೆಲವು ಜನರ ಪಾಪಗಳು ಎದ್ದುಕಾಣುತ್ತವೆ. ಅವರಿಗೆ ನ್ಯಾಯತೀರ್ಪಾಗುವುದೆಂಬುದನ್ನು ಅವರ ಪಾಪಗಳೇ ತೋರ್ಪಡಿಸುತ್ತವೆ. ಆದರೆ ಇತರ ಕೆಲವು ಜನರ ಪಾಪಗಳು ಸ್ವಲ್ಪಕಾಲದ ನಂತರ ತಿಳಿದುಬರುತ್ತವೆ. 25 ಹಾಗೆಯೇ, ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿವೆ. ಇನ್ನು ಕೆಲವರ ಒಳ್ಳೆಯ ಕಾರ್ಯಗಳು ಪ್ರಸಿದ್ಧವಾಗಿಲ್ಲದಿದ್ದರೂ ಅವು ಮರೆಯಾಗಿರಲು ಸಾಧ್ಯವಿಲ್ಲ.
Kannada Holy Bible: Easy-to-Read Version. All rights reserved. © 1997 Bible League International