Old/New Testament
ಜನರು ದೇವರ ಬಗ್ಗೆ ಜ್ಞಾನ ಹೊಂದುವರು
65 ಯೆಹೋವನು ಹೇಳುವುದೇನೆಂದರೆ, “ನನ್ನ ಆಲೋಚನೆಯನ್ನು ಕೇಳಲು ಬಾರದೆ ಹೋದ ಜನರಿಗೂ ನಾನು ಸಹಾಯ ಮಾಡಿದೆನು. ನನ್ನನ್ನು ಹುಡುಕದವರಿಗೂ ಸಿಕ್ಕಿದೆನು. ನನ್ನ ಹೆಸರನ್ನು ಧರಿಸದ ಜನಾಂಗದೊಡನೆ ನಾನು ಮಾತನಾಡಿದೆನು. ಅವರಿಗೆ, ‘ನಾನಿಲ್ಲಿದ್ದೇನೆ! ನಾನಿಲ್ಲಿದ್ದೇನೆ!’ ಅಂದೆನು.
2 “ನನಗೆ ವಿರುದ್ಧವಾಗಿ ಎದ್ದವರನ್ನು ಸ್ವೀಕರಿಸಲು ನಾನು ದಿನವೆಲ್ಲಾ ಸಿದ್ಧನಾಗಿ ನಿಂತೆನು. ಅವರು ನನ್ನ ಬಳಿಗೆ ಬರುತ್ತಾರೆಂದು ಕಾಯುತ್ತಾ ನಿಂತುಕೊಂಡೆನು. ಆದರೆ ಅವರು ಕೆಟ್ಟಜೀವಿತದಲ್ಲಿಯೇ ಮುಂದುವರಿದರು. ಅವರು ತಮಗೆ ಇಷ್ಟಬಂದ ಹಾಗೆ ನಡೆದರು. 3 ಅವರು ನನ್ನ ಮುಂದೆ ಯಾವಾಗಲೂ ಇದ್ದು ನನ್ನನ್ನು ರೋಷಗೊಳಿಸಿದರು. ಅವರು ತಮ್ಮ ವಿಶೇಷವಾದ ತೋಟಗಳಲ್ಲಿ ಧೂಪಹಾಕಿ ಬಲಿಯರ್ಪಿಸಿದರು. 4 ಅವರು ಸತ್ತವರಿಂದ ಸಂದೇಶ ಪಡೆಯಲು ಸಮಾಧಿಗಳ ನಡುವೆ ಕುಳಿತುಕೊಳ್ಳುವರು. ಅವರು ಹಂದಿ ಮಾಂಸವನ್ನು ತಿನ್ನುತ್ತಾರೆ. ಅವರು ತೆಗೆದುಕೊಳ್ಳುವ ಭಕ್ಷ್ಯಗಳು ಕೊಳೆತ ಮಾಂಸದಿಂದ ಮಲಿನವಾಗಿವೆ. 5 ಆದರೆ ಅವರು ಇತರರಿಗೆ, ‘ನನ್ನ ಬಳಿಗೆ ಬರಬೇಡ. ನೀನು ನಿನ್ನನ್ನು ಶುದ್ಧಮಾಡುವ ತನಕ ನನ್ನನ್ನು ಮುಟ್ಟದಿರು’ ಎಂದು ಹೇಳುವರು. ಅವರು ನನ್ನ ಕಣ್ಣಿನಲ್ಲಿ ಹೊಗೆಯಂತಿದ್ದಾರೆ; ಅವರ ಬೆಂಕಿಯು ಸದಾ ಉರಿಯುತ್ತಿರುವದು.”
ಇಸ್ರೇಲ್ ಶಿಕ್ಷಿಸಲ್ಪಡಲೇಬೇಕು
6 “ಇಗೋ! ನೀವು ಪಾವತಿ ಮಾಡಬೇಕಾದ ರಸೀದಿ ಇಲ್ಲಿದೆ. ನೀವು ಅಪರಾಧಿಗಳೆಂದು ಈ ರಸೀದಿ ತೋರಿಸುತ್ತದೆ. ಈ ಚೀಟಿಯಲ್ಲಿ ಬರೆದ ಮೊತ್ತವನ್ನು ಕೊಡದೆ ಸುಮ್ಮನಿರಲಾರೆ. ನಿಮ್ಮನ್ನು ಶಿಕ್ಷಿಸುವದರ ಮೂಲಕ ಈ ಮೊತ್ತವನ್ನು ಕೊಟ್ಟು ಬಿಡುವೆನು. 7 ನಿಮ್ಮ ಪಾಪಗಳೂ ನಿಮ್ಮ ಪಿತೃಗಳ ಪಾಪಗಳೂ ಒಂದೇಯಾಗಿವೆ. ಇದು ಯೆಹೋವನ ನುಡಿ. ನಿಮ್ಮ ಪೂರ್ವಿಕರು ಬೆಟ್ಟಗಳ ಮೇಲೆ ಧೂಪಸುಟ್ಟು ಪಾಪಮಾಡಿದರು. ಅವರು ಆ ಬೆಟ್ಟಗಳ ಮೇಲೆ ನನ್ನನ್ನು ಅವಮಾನಪಡಿಸಿದರು. ಆದರೆ ನಾನು ಅವರನ್ನು ಮೊದಲು ಶಿಕ್ಷಿಸಿದೆನು. ಅವರಿಗೆ ತಕ್ಕ ಶಿಕ್ಷೆಯನ್ನು ಕೊಟ್ಟೆನು.”
8 ಯೆಹೋವನು ಹೇಳುವುದೇನೆಂದರೆ: “ದ್ರಾಕ್ಷಿಹಣ್ಣಿನಲ್ಲಿ ಹೊಸ ರಸವು ಇರುವಾಗ ಜನರು ಅದನ್ನು ಹಿಂಡಿ ರಸವನ್ನು ತೆಗೆಯುವರು. ಯಾಕೆಂದರೆ ಆ ಹಣ್ಣನ್ನು ಮತ್ತೆ ಉಪಯೋಗಿಸಬೇಕೆಂಬ ಉದ್ದೇಶದಿಂದ ಅದನ್ನು ಸಂಪೂರ್ಣವಾಗಿ ಹಾಳು ಮಾಡುವದಿಲ್ಲ. ಅದೇ ರೀತಿ ನಾನು ನನ್ನ ಸೇವಕರಿಗೂ ಮಾಡುವೆನು. ಅವರನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ. 9 ನಾನು ಯಾಕೋಬನ ಜನರಲ್ಲಿ ಕೆಲವರನ್ನು ಉಳಿಸುವೆನು. ಯೆಹೂದದ ಕೆಲವರು ನನ್ನ ಪರ್ವತವನ್ನು ಪಡೆದುಕೊಳ್ಳುವರು. ನನ್ನ ಸೇವಕರು ಅಲ್ಲಿ ವಾಸಿಸುವರು. ಅಲ್ಲಿ ವಾಸಿಸಬೇಕಾದವರನ್ನು ನಾನೇ ಆರಿಸಿಕೊಳ್ಳುವೆನು. 10 ಆಗ ಶಾರೋನಿನ ಕಣಿವೆಯು ಕುರಿಗಳು ಮೇಯುವ ಮೈದಾನವಾಗುವದು. ಆಕೋರಿನ ಕಣಿವೆಯು ದನಗಳು ಮಲಗುವ ಸ್ಥಳವಾಗುವದು. ಇವೆಲ್ಲವೂ ನನ್ನ ಜನರಿಗಾಗುವದು. ಇವರು ನನಗಾಗಿ ಹುಡುಕುತ್ತಿರುವರು.
11 “ಆದರೆ ನೀವು ಯೆಹೋವನನ್ನು ತೊರೆದಿರುವದರಿಂದ ಶಿಕ್ಷಿಸಲ್ಪಡುವಿರಿ. ನೀವು ನನ್ನ ಪವಿತ್ರ ಪರ್ವತವನ್ನು ಮರೆತುಬಿಟ್ಟಿದ್ದೀರಿ. ನೀವು ‘ಅದೃಷ್ಟ’ ಎಂಬ ಸುಳ್ಳುದೇವರನ್ನು ಪೂಜಿಸಲಾರಂಭಿಸಿದ್ದೀರಿ. ನೀವು ‘ಗತಿ’ ಎಂಬ ಸುಳ್ಳುದೇವರನ್ನು ಅವಲಂಭಿಸಿಕೊಂಡಿದ್ದೀರಿ. 12 ಆದರೆ ನಿಮ್ಮ ಭವಿಷ್ಯವನ್ನು ನಾನು ತೀರ್ಮಾನಿಸುವೆನು. ನೀವು ಖಡ್ಗದಿಂದ ಸಾಯುವಿರಿ ಎಂದು ನಾನು ತೀರ್ಮಾನಿಸಿದ್ದೇನೆ. ನೀವೆಲ್ಲರೂ ಕೊಲ್ಲಲ್ಪಡುವಿರಿ. ಯಾಕೆಂದರೆ ನಾನು ನಿಮ್ಮನ್ನು ಕರೆದಾಗ ನೀವು ಉತ್ತರ ಕೊಡಲಿಲ್ಲ. ನಾನು ಮಾತನಾಡಿದಾಗ ನೀವು ಆಲಿಸಲಿಲ್ಲ. ನಾನು ಕೆಟ್ಟದ್ದೆಂದು ಹೇಳಿದವುಗಳನ್ನು ನೀವು ಮಾಡಿದಿರಿ; ನನಗೆ ಇಷ್ಟವಿಲ್ಲದ್ದನ್ನು ನೀವು ಮಾಡುತ್ತಿರುವಿರಿ.”
13 ನನ್ನ ಒಡೆಯನಾದ ಯೆಹೋವನು ಈ ವಿಷಯಗಳನ್ನು ಹೇಳಿದನು:
“ನನ್ನ ಸೇವಕರು ಊಟಮಾಡುವರು.
ಆದರೆ ದುಷ್ಟಜನರಾದ ನೀವು ಹಸಿದವರಾಗಿರುವಿರಿ.
ನನ್ನ ಸೇವಕರು ಕುಡಿಯುವರು.
ಆದರೆ ದುಷ್ಟಜನರಾದ ನೀವು ಬಾಯಾರಿದ್ದೀರಿ.
ನನ್ನ ಸೇವಕರು ಸಂತೋಷದಲ್ಲಿರುವರು.
ದುಷ್ಟಜನರಾದ ನೀವಾದರೋ ನಾಚಿಕೆಗೆ ಒಳಗಾಗುವಿರಿ.
14 ನನ್ನ ಸೇವಕರ ಹೃದಯಗಳಲ್ಲಿ ಒಳ್ಳೆಯತನವಿದೆ.
ಆದ್ದರಿಂದ ಅವರು ಸಂತೋಷವಾಗಿದ್ದಾರೆ.
ದುಷ್ಟಜನರಾದ ನೀವಾದರೋ ಹೃದಯದ ಬೇನೆಯಿಂದಾಗಿ ಅಳುವಿರಿ.
ನಿಮ್ಮ ಆತ್ಮವು ಕುಂದಿಹೋಗುವದು;
ನೀವು ದುಃಖಕ್ರಾಂತರಾಗುವಿರಿ.
15 ನಿಮ್ಮ ಹೆಸರುಗಳು ನನ್ನ ಸೇವಕರಿಗೆ ಶಾಪವಾಗಿ ಉಪಯೋಗಿಸಲ್ಪಡುತ್ತವೆ.”
ನನ್ನ ಒಡೆಯನಾದ ಯೆಹೋವನು ನಿಮ್ಮನ್ನು ಸಾಯಿಸುವನು.
ಆತನು ತನ್ನ ಸೇವಕರನ್ನು ಹೊಸ ಹೆಸರಿನಿಂದ ಕರೆಯುವನು.
16 “ಈಗ ಜನರು ಭೂಮಿಯಿಂದ ಆಶೀರ್ವಾದ ಕೇಳುತ್ತಾರೆ.
ಆದರೆ ಮುಂದಿನ ದಿನಗಳಲ್ಲಿ ಅವರು ನಂಬಿಗಸ್ತನಾದ ದೇವರಿಂದ ಆಶೀರ್ವಾದ ಕೇಳುವರು.
ಈಗ ಜನರು ವಾಗ್ದಾನ ಮಾಡುವಾಗ ಭೂಮಿಯ ಬಲದಲ್ಲಿ ಭರವಸವಿಡುವರು.
ಆದರೆ ಮುಂದಿನ ದಿನಗಳಲ್ಲಿ ನಂಬಿಗಸ್ತನಾದ ದೇವರ ಮೇಲೆ ಭರವಸವಿಡುವರು.
ಯಾಕೆಂದರೆ ಗತಿಸಿದ ಸಂಕಟಗಳೆಲ್ಲವೂ ಮರೆತುಹೋಗುತ್ತವೆ.
ಇವುಗಳು ನನ್ನ ಕಣ್ಣುಗಳಿಗೆ ಮರೆಯಾಗಿರುತ್ತವೆ.”
ಹೊಸ ಕಾಲ ಬರುತ್ತದೆ
17 “ನಾನು ಹೊಸ ಭೂಮ್ಯಾಕಾಶಗಳನ್ನು ಸೃಷ್ಟಿಸುವೆನು.
ಜನರು ಗತಿಸಿದ ದಿನಗಳನ್ನು ತಮ್ಮ ನೆನಪಿಗೆ ತರುವದಿಲ್ಲ.
ಅವರು ಈ ಸಂಗತಿಗಳಲ್ಲಿ ಯಾವುದನ್ನೂ ಜ್ಞಾಪಿಸಿಕೊಳ್ಳುವದಿಲ್ಲ.
18 ನನ್ನ ಜನರು ಸಂತೋಷದಲ್ಲಿರುವರು.
ಅವರು ನಿತ್ಯಕಾಲಕ್ಕೂ ಹರ್ಷಿಸುವರು.
ನಾನು ಜೆರುಸಲೇಮನ್ನು ಸಂತಸದಿಂದ ತುಂಬಿಸುವೆನು.
ಅವರನ್ನು ಸಂತೋಷದ ಜನರನ್ನಾಗಿ ಮಾಡುವೆನು.
19 “ಆಗ ನಾನು ಜೆರುಸಲೇಮಿನ ವಿಷಯದಲ್ಲಿ ಸಂತೋಷದಿಂದಿರುವೆನು.
ನನ್ನ ಜನರ ವಿಷಯದಲ್ಲಿಯೂ ಸಂತೋಷದಿಂದಿರುವೆನು.
ಆ ಪಟ್ಟಣದಲ್ಲಿ ಮತ್ತೆಂದಿಗೂ ರೋಧನವಿರದು, ದುಃಖವಿರದು.
20 ಆ ಪಟ್ಟಣದಲ್ಲಿ ಹುಟ್ಟಿದ ಶಿಶುಗಳೆಲ್ಲಾ ಜೀವಿಸುವವು.
ಯಾವ ಮಗುವೇ ಆಗಲಿ ಹುಟ್ಟಿದ ಕೂಡಲೇ ಸಾಯುವದಿಲ್ಲ.
ಆ ಪಟ್ಟಣದ ನಿವಾಸಿಗಳಲ್ಲಿ ಯಾರೂ ಕಡಿಮೆ ಆಯುಷ್ಯದಿಂದ ಸಾಯುವದಿಲ್ಲ.
ಪ್ರತಿಯೊಂದು ಮಗುವೂ ದೀರ್ಘಾಯುಷ್ಯವನ್ನು ಹೊಂದುವದು.
ಪ್ರತಿಯೊಬ್ಬ ಯುವಕನೂ ಬಹಳ ಕಾಲ ಜೀವಿಸುವನು.
ಆಗ ನೂರು ವರ್ಷ ಪ್ರಾಯದವನು ಸಹ ಯೌವನಸ್ಥನೆಂದು ಕರೆಯಲ್ಪಡುವನು.
ಒಬ್ಬನು ನೂರು ವರ್ಷವಾದರೂ ಬಾಳದಿದ್ದರೆ, ಜನರು ಅವನನ್ನು ಶಾಪ ಹೊಂದಿದವನೆಂದು ಹೇಳುವರು.
21 “ಆ ಪಟ್ಟಣದೊಳಗೆ ಒಬ್ಬನು ಮನೆಯನ್ನು ಕಟ್ಟಿದ್ದರೆ ಅದರಲ್ಲಿ ಅವನು ವಾಸಿಸುವನು.
ಒಬ್ಬನು ದ್ರಾಕ್ಷಿತೋಟವನ್ನು ನೆಟ್ಟರೆ ಅವನು ಅದರ ಫಲಗಳನ್ನು ತಿನ್ನುವನು.
22 ಇನ್ನು ಮುಂದೆ ಯಾರಾದರೂ ಮನೆಯನ್ನು ಕಟ್ಟಿದರೆ,
ಬೇರೆಯವರು ಅದನ್ನು ವಶಮಾಡಿಕೊಂಡು ಅದರಲ್ಲಿ ವಾಸಿಸುವದಿಲ್ಲ.
ಇನ್ನು ಮುಂದೆ ಯಾರಾದರೂ ದ್ರಾಕ್ಷಿತೋಟವನ್ನು ಮಾಡಿದರೆ
ಅದರ ಫಲವನ್ನು ಇತರರು ತಿನ್ನುವದಿಲ್ಲ.
ಮರಗಳು ಎಷ್ಟು ಕಾಲ ಬೆಳೆಯುತ್ತವೋ
ಅಷ್ಟುಕಾಲ ನನ್ನ ಜನರು ಜೀವಿಸುವರು.
ನಾನು ಆರಿಸಿಕೊಂಡ ಜನರು
ತಾವು ಮಾಡಿದ ಕಾರ್ಯಗಳಲ್ಲಿ ಆನಂದಿಸುವರು.
23 ಇನ್ನು ಮುಂದೆ ಜನರು ಬಿಟ್ಟೀಕೆಲಸ ಮಾಡುವದಿಲ್ಲ.
ಇನ್ನು ಮುಂದೆ ಮಕ್ಕಳನ್ನು ಹೆರುವಾಗ ಕೇಡಾಗುತ್ತದೆಯೆಂಬ ಭಯವಿರುವುದಿಲ್ಲ.
ನನ್ನ ಎಲ್ಲಾ ಜನರು ಮತ್ತು ಅವರ ಮಕ್ಕಳು ಯೆಹೋವನಿಂದ ಆಶೀರ್ವದಿಸಲ್ಪಡುವರು.
24 ಅವರು ಕೇಳುವ ಮೊದಲೇ ಅವರಿಗೆ ಏನುಬೇಕು ಎಂಬುದನ್ನು ಅರಿತುಕೊಳ್ಳುವೆನು.
ಅವರ ಪ್ರಾರ್ಥನೆ ಮುಗಿಯುವ ಮೊದಲೇ ಅವರಿಗೆ ಸಹಾಯ ಮಾಡುವೆನು.
25 ತೋಳಗಳೂ ಕುರಿಮರಿಗಳೂ ಒಟ್ಟಾಗಿ ಮೇಯುವವು.
ಸಿಂಹಗಳು ದನಕುರಿಗಳಂತೆ ಹುಲ್ಲನ್ನು ಮೇಯುತ್ತವೆ.
ವಿಷದ ಹಾವುಗಳು ಕೇವಲ ಮಣ್ಣನ್ನೇ ತಿನ್ನುತ್ತವೆ.
ನನ್ನ ಪವಿತ್ರಪರ್ವತದಲ್ಲಿ ಅವು ಯಾರಿಗೂ ಕೇಡುಮಾಡುವುದಿಲ್ಲ; ಯಾರಿಗೂ ಭಯ ಹುಟ್ಟಿಸುವುದಿಲ್ಲ.”
ಇವು ಯೆಹೋವನ ನುಡಿಗಳು.
ದೇವರು ಎಲ್ಲಾ ಜನಾಂಗಗಳಿಗೆ ತೀರ್ಪು ಕೊಡುವನು
66 ಯೆಹೋವನು ಹೇಳುವುದೇನೆಂದರೆ,
“ಆಕಾಶವೇ ನನ್ನ ಸಿಂಹಾಸನ,
ಭೂಮಿಯೇ ನನ್ನ ಪಾದಪೀಠ.
ಹೀಗಿರಲು, ನೀವು ನನಗೊಂದು ಮನೆಯನ್ನು ಕಟ್ಟಲು ಸಾಧ್ಯವೆಂದು ಯೋಚಿಸುವಿರಾ?
ವಿಶ್ರಮಿಸಿಕೊಳ್ಳಲು ನೀವು ಸ್ಥಳ ಮಾಡುವಿರಾ? ಇಲ್ಲ, ಸಾಧ್ಯವಿಲ್ಲ!
2 ನಾನೇ ಎಲ್ಲವನ್ನು ಉಂಟುಮಾಡಿದೆನು.
ನಾನು ಸೃಷ್ಟಿಸಿದ್ದರಿಂದ ಅವು ಅಸ್ತಿತ್ವದಲ್ಲಿವೆ.”
ಇವು ಯೆಹೋವನ ನುಡಿಗಳು.
“ಎಂಥ ಜನರನ್ನು ನಾನು ಪರಿಪಾಲಿಸುತ್ತೇನೆಂದು ಕೇಳುವಿರಾ?
ಬಡವರ ವಿಷಯದಲ್ಲಿ ನಾನು ಚಿಂತಿಸುತ್ತೇನೆ.
ದುಃಖಿಸುವ ಜನರಿಗಾಗಿ ನಾನು ಚಿಂತಿಸುತ್ತೇನೆ.
ನನ್ನ ಮಾತುಗಳಿಗೆ ವಿಧೇಯರಾಗುವವರಿಗಾಗಿ ನಾನು ಚಿಂತಿಸುತ್ತೇನೆ.
3 ಕೆಲವರು ಒಂದು ಕಡೆಯಲ್ಲಿ ಹೋರಿಯನ್ನು ಯಜ್ಞಮಾಡುವರು.
ಇನ್ನೊಂದು ಕಡೆಯಲ್ಲಿ ಜನರಿಗೆ ಹಿಂಸೆ ಕೊಡುವರು.
ಅವರು ಬಲಿಯರ್ಪಿಸಲು ಕುರಿಗಳನ್ನು ಕೊಯ್ಯುವರು,
ಅದೇ ಸಮಯದಲ್ಲಿ ನಾಯಿಗಳ ಕುತ್ತಿಗೆಗಳನ್ನು ಮುರಿಯುವರು.
ಅವರು ನನಗೆ ಹಂದಿಗಳ ರಕ್ತವನ್ನು ಅರ್ಪಿಸುವರು.
ನನಗೆ ಧೂಪವನ್ನು ಹಾಕಲು ಯಾವಾಗಲೂ ತಯಾರಿರುವರು.
ಅದೇ ಸಮಯದಲ್ಲಿ ಅಯೋಗ್ಯವಾದ ತಮ್ಮ ವಿಗ್ರಹಗಳನ್ನು ಪ್ರೀತಿಸುವರು.
ಅವರು ನನ್ನ ಮಾರ್ಗವನ್ನು ಅನುಸರಿಸದೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ.
ಅವರು ತಮ್ಮ ಭಯಂಕರವಾದ ವಿಗ್ರಹಗಳನ್ನು ಪೂಜಿಸುತ್ತಾರೆ.
4 ಆದ್ದರಿಂದ ನಾನು ಅವರ ಉಪಾಯಗಳನ್ನೇ ಬಳಸಿಕೊಳ್ಳಲು ನಿರ್ಧರಿಸಿದೆನು.
ಅವರು ಬಹು ಭಯಪಡುವ ವಸ್ತುಗಳಿಂದಲೇ ಅವರನ್ನು ಶಿಕ್ಷಿಸಲು ತೀರ್ಮಾನಿಸಿದೆನು.
ಎಕೆಂದರೆ ನಾನು ಅವರನ್ನು ಕರೆದರೂ
ಅವರು ಕಿವಿಗೊಡಲಿಲ್ಲ.
ನಾನು ಅವರೊಂದಿಗೆ ಮಾತಾಡಿದರೂ ಅವರು ಕೇಳಲಿಲ್ಲ.
ಆದ್ದರಿಂದ ನಾನು ಅವರಿಗೆ ಅದನ್ನೇ ಮಾಡುವೆನು.
ನಾನು ಯಾವದನ್ನು ಕೆಟ್ಟದೆಂದು ಪರಿಗಣಿಸಿದ್ದೆನೋ ಅದನ್ನೇ ಅವರು ಮಾಡಿದರು.
ನಾನು ಇಷ್ಟಪಡದ ಸಂಗತಿಗಳನ್ನು ಅವರು ಮಾಡಿದರು.”
5 ಯೆಹೋವನ ಆಜ್ಞೆಗಳನ್ನು ಪರಿಪಾಲಿಸುವ ನೀವು
ಆತನು ಹೇಳುವ ಸಂಗತಿಗಳನ್ನು ಕಿವಿಗೊಟ್ಟು ಕೇಳಬೇಕು.
ಆತನು ಹೇಳುವುದೇನೆಂದರೆ, “ನಿಮ್ಮ ಸಹೋದರರು ನಿಮ್ಮನ್ನು ದ್ವೇಷಿಸಿದರು.
ನೀವು ನನ್ನನ್ನು ಅನುಸರಿಸಿದ್ದರಿಂದ ನಿಮ್ಮ ಮೇಲೆರಗಿದರು.
‘ಯೆಹೋವನು ಸನ್ಮಾನ ಹೊಂದಿದ ಬಳಿಕ ನಿಮ್ಮ ಬಳಿಗೆ ಬರುತ್ತೇವೆ.
ಆಮೇಲೆ ನಿಮ್ಮ ಆನಂದವನ್ನು ಅನುಭವಿಸುತ್ತೇವೆ’ ಎಂದು ನಿಮ್ಮ ಸಹೋದರರು ಅಂದರು.
ಆ ದುಷ್ಟ ಜನರು ಶಿಕ್ಷಿಸಲ್ಪಡುವರು.”
ಶಿಕ್ಷೆ ಮತ್ತು ಹೊಸ ಜನಾಂಗ
6 ಆಲೈಸಿರಿ! ಪಟ್ಟಣದೊಳಗಿಂದ ಮತ್ತು ದೇವಾಲಯದೊಳಗಿಂದ ದೊಡ್ಡ ಶಬ್ದವು ಕೇಳಿಸುತ್ತದೆ. ಯೆಹೋವನು ತನ್ನ ವೈರಿಗಳನ್ನು ಶಿಕ್ಷಿಸುವುದೇ ಆ ಶಬ್ದ. ಅವರಿಗೆ ತಕ್ಕ ಶಿಕ್ಷೆಯನ್ನು ಯೆಹೋವನು ಕೊಡುತ್ತಿದ್ದಾನೆ.
7-8 “ಪ್ರಸವವೇದನೆಗಿಂತ ಮೊದಲು ಸ್ತ್ರೀಯು ಮಗುವನ್ನು ಹೆರುವದಿಲ್ಲ. ತಾನು ಹೆರುವ ಶಿಶುವನ್ನು ನೋಡುವ ಮೊದಲು ಸ್ತ್ರೀಯು ಪ್ರಸವವೇದನೆ ಅನುಭವಿಸಲೇಬೇಕು. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಹೊಸ ಭೂಮ್ಯಾಕಾಶಗಳು ಉಂಟಾಗುವದನ್ನು ಯಾರೂ ನೋಡುವದಿಲ್ಲ. ಒಂದೇ ದಿವಸದಲ್ಲಿ ಉಂಟಾದ ಜನಾಂಗದ ಬಗ್ಗೆ ಯಾರೂ ಕೇಳಲಿಲ್ಲ. ದೇಶವು ಪ್ರಸವವೇದನೆಯಂಥ ಬೇನೆಯನ್ನು ಅನುಭವಿಸಬೇಕು. ಆ ಬಳಿಕ ದೇಶವು ಹೊಸ ಜನಾಂಗವೆಂಬ ಮಕ್ಕಳನ್ನು ಹೆರುವುದು. 9 ಅದೇ ರೀತಿಯಲ್ಲಿ ಹೊಸದಾಗಿ ಹುಟ್ಟುವ ಕಾರಣದಿಂದಲೇ ನಾನು ಬೇನೆಯನ್ನು ನಿಮಗೆ ಕೊಡುವೆನು.”
ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೆ ಹೆರಿಗೆ ಬೇನೆಯನ್ನು ಕೊಡದೆಹೋದರೆ ನೀವು ಹೊಸ ಜನಾಂಗವಾಗಲಾರಿರಿ.” ಇದು ಯೆಹೋವನ ನುಡಿ.
10 ಜೆರುಸಲೇಮೇ, ಹರ್ಷಿಸು. ಜೆರುಸಲೇಮನ್ನು ಪ್ರೀತಿಸುವ ಜನರೇ, ಹರ್ಷಿಸಿರಿ.
ಜೆರುಸಲೇಮಿಗೆ ದುಃಖಕೊಡುವ ವಿಷಯಗಳು ಜರುಗಿದ್ದರಿಂದ ನೀವು ದುಃಖಪಡುತ್ತಿದ್ದೀರಿ.
ಆದರೆ ನೀವೀಗ ಸಂತೋಷಪಡಬೇಕು.
11 ಯಾಕೆಂದರೆ ಆಕೆಯ ಎದೆಯಿಂದ ದೊರಕುವ ಹಾಲಿನಂತೆ ನಿಮಗೆ ಕರುಣೆಯು ದೊರಕುವದು.
ಆ ಹಾಲು ನಿಮ್ಮನ್ನು ಪೂರ್ಣವಾಗಿ ತೃಪ್ತಿಗೊಳಿಸುವದು.
ನೀವು ಆ ಹಾಲನ್ನು ಕುಡಿದು ಜೆರುಸಲೇಮಿನ ವೈಭವದಲ್ಲಿ ಆನಂದಿಸುವಿರಿ.
12 ಯೆಹೋವನು ಹೇಳುವುದೇನೆಂದರೆ:
“ಇಗೋ, ನಾನು ನಿನಗೆ ಸಮಾಧಾನವನ್ನು ಕೊಡುತ್ತೇನೆ.
ಒಂದು ದೊಡ್ಡ ಹೊಳೆಯು ಹರಿಯುವಂತೆ ನಿನಗೆ ಸಮಾಧಾನವು ಹರಿದುಕೊಂಡು ಬರುವದು.
ಭೂಮಿಯ ಮೇಲಿರುವ ಎಲ್ಲಾ ದೇಶಗಳ ಐಶ್ವರ್ಯವು ನಿನ್ನ ಬಳಿಗೆ ಹರಿದುಬರುವದು.
ಅದು ಪ್ರವಾಹದಂತೆ ಹರಿದುಬರುವದು.
ನೀವು ಸಣ್ಣ ಮಕ್ಕಳಂತೆ ಆ ಹಾಲನ್ನು ಕುಡಿಯುವಿರಿ.
ನಾನು ನಿಮ್ಮನ್ನೆತ್ತಿ ಕೈಗಳಲ್ಲಿ ಅಪ್ಪಿಕೊಳ್ಳುವೆನು.
ನನ್ನ ತೊಡೆಯ ಮೇಲೆ ನಿಮ್ಮನ್ನು ಕುಳ್ಳಿರಿಸಿ ಆಟವಾಡಿಸುವೆನು.
13 ನಾನು ನಿಮ್ಮನ್ನು ಜೆರುಸಲೇಮಿನಲ್ಲಿ ಸಂತೈಸುವೆನು.
ತಾಯಿಯು ತನ್ನ ಮಗುವನ್ನು ಸಂತೈಸುವಂತೆ ನಾನು ನಿಮ್ಮನ್ನು ಸಂತೈಸುವೆನು.”
14 ನಿಮ್ಮನ್ನು ಹರ್ಷಗೊಳಿಸುವಂಥ ಸಂಗತಿಗಳನ್ನು ನೀವು ನೋಡುವಿರಿ.
ನೀವು ಸ್ವತಂತ್ರರಾಗಿದ್ದು ಹುಲ್ಲಿನಂತೆ ಹುಲುಸಾಗಿ ಬೆಳೆಯುವಿರಿ.
ಯೆಹೋವನ ಸೇವಕರು ಆತನ ಶಕ್ತಿಯನ್ನು ನೋಡುವರು.
ಆದರೆ ಯೆಹೋವನ ವೈರಿಗಳು ಆತನ ಕೋಪವನ್ನು ಕಾಣುವರು.
15 ಇಗೋ, ಯೆಹೋವನು ಬೆಂಕಿಯೊಂದಿಗೆ ಬರುತ್ತಿದ್ದಾನೆ.
ಯೆಹೋವನ ಸೈನ್ಯಗಳು ಧೂಳಿನ ಮೋಡಗಳೊಂದಿಗೆ ಬರುತ್ತಿವೆ.
ಯೆಹೋವನು ತನ್ನ ಕೋಪದಿಂದ ಆ ಜನರನ್ನು ಶಿಕ್ಷಿಸುವನು.
ಯೆಹೋವನು ಕೋಪದಲ್ಲಿರುವಾಗ ಬೆಂಕಿಯ ನಾಲಿಗೆಗಳಿಂದ ಅವರನ್ನು ಶಿಕ್ಷಿಸುತ್ತಾನೆ.
16 ಯೆಹೋವನು ಜನರಿಗೆ ನ್ಯಾಯತೀರ್ಪು ಮಾಡುವನು.
ಆ ಬಳಿಕ ಯೆಹೋವನು ಜನರನ್ನು ಬೆಂಕಿಯಿಂದಲೂ ಖಡ್ಗದಿಂದಲೂ ನಾಶಮಾಡುವನು.
ಯೆಹೋವನು ಅನೇಕಾನೇಕ ಜನರನ್ನು ನಾಶಮಾಡುವನು.
17 ಅವರು ತಮ್ಮ ವಿಶೇಷವಾದ ತೋಟದೊಳಗೆ ಪೂಜೆಮಾಡಲು ತಮ್ಮನ್ನು ಶುದ್ಧಮಾಡಿಕೊಳ್ಳುವಂತೆ ಸ್ನಾನಮಾಡುವರು. ತಮ್ಮ ವಿಶೇಷ ತೋಟದೊಳಗೆ ಹೋಗಲು ಒಬ್ಬರನ್ನೊಬ್ಬನು ಹಿಂಬಾಲಿಸುವರು. ಅಲ್ಲಿ ಅವರ ವಿಗ್ರಹಗಳನ್ನು ಪೂಜಿಸುವರು. ಆದರೆ ಯೆಹೋವನು ಅವರೆಲ್ಲರನ್ನು ನಾಶಮಾಡುವನು. “ಆ ಜನರು ಹಂದಿ, ಇಲಿ ಮತ್ತು ಇತರ ಅಶುದ್ಧ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಆದರೆ ಅವರೆಲ್ಲರೂ ಒಟ್ಟಾಗಿ ನಾಶವಾಗುವರು.” ಇದು ಯೆಹೋವನು ಹೇಳಿದ ಮಾತುಗಳು.
18 “ಆ ಜನರಲ್ಲಿ ಕೆಟ್ಟ ಯೋಜನೆಗಳು ಇದ್ದು ಕೆಟ್ಟದ್ದನ್ನೇ ಮಾಡುವವರಾಗಿದ್ದಾರೆ. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಲು ಬರುತ್ತಿದ್ದೇನೆ. ನಾನು ಎಲ್ಲಾ ಜನಾಂಗಗಳನ್ನೂ ಎಲ್ಲಾ ಜನರನ್ನೂ ಒಟ್ಟುಗೂಡಿಸುವೆನು. ಎಲ್ಲಾ ಜನರು ಒಟ್ಟುಗೂಡಿ ನನ್ನ ಸಾಮರ್ಥ್ಯವನ್ನು ನೋಡುವರು. 19 ಅವರಲ್ಲಿ ಕೆಲವರಿಗೆ ನಾನು ಗುರುತು ಹಾಕುವೆನು. ನಾನು ಅವರನ್ನು ರಕ್ಷಿಸುವೆನು. ರಕ್ಷಿಸಲ್ಪಟ್ಟ ಕೆಲವರನ್ನು ನಾನು ತಾರ್ಷೀಷ್, ಲಿಬ್ಯ, ಲೂದ್, ತೂಬಾಲ್, ಗ್ರೀಸ್ ಮತ್ತು ದೂರದೇಶಗಳಿಗೆ ಕಳುಹಿಸುವೆನು. ಅಲ್ಲಿಯ ಜನರು ನನ್ನ ಬೋಧನೆಯನ್ನು ಎಂದೂ ಕೇಳಿರಲಿಲ್ಲ. ಅವರು ನನ್ನ ಮಹಿಮೆಯನ್ನು ಎಂದೂ ಕಂಡಿರಲಿಲ್ಲ. ಆದ್ದರಿಂದ ರಕ್ಷಿಸಲ್ಪಟ್ಟ ಜನರು ನನ್ನ ಮಹಿಮೆಯನ್ನು ಅವರಿಗೆ ತಿಳಿಸುವರು. 20 ಅವರು ನಿಮ್ಮ ಸಹೋದರಸಹೋದರಿಯರನ್ನು ಎಲ್ಲಾ ಜನಾಂಗಗಳೊಳಗಿಂದ ಕರೆದುಕೊಂಡು ನನ್ನ ಪವಿತ್ರ ಪರ್ವತವಾದ ಜೆರುಸಲೇಮಿಗೆ ಬರುವರು. ನಿನ್ನ ಸಹೋದರಸಹೋದರಿಯರು ಕುದುರೆ, ಕತ್ತೆ, ಒಂಟೆ, ರಥ ಮತ್ತು ಗಾಡಿಗಳಲ್ಲಿ ಕುಳಿತುಕೊಂಡು ಬರುವರು. ಯೆಹೋವನ ಮಂದಿರದೊಳಗೆ ಶುದ್ಧವಾದ ತಟ್ಟೆಯ ಮೇಲೆ ಕಾಣಿಕೆಗಳನ್ನು ತರುವಂತೆಯೇ ನಿನ್ನ ಸಹೋದರಸಹೋದರಿಯರಾದ ಇಸ್ರೇಲರು ಬರುವರು. 21 ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸುವೆನು.” ಇವು ಯೆಹೋವನ ನುಡಿಗಳು.
ಹೊಸ ಭೂಮ್ಯಾಕಾಶಗಳು
22 “ನಾನು ಹೊಸ ಪ್ರಪಂಚವನ್ನು ಸೃಷ್ಟಿಸುವೆನು; ಹೊಸ ಆಕಾಶವೂ ಹೊಸ ಭೂಮಿಯೂ ಶಾಶ್ವತವಾಗಿರುವವು. ಹಾಗೆಯೇ ನಿಮ್ಮ ಹೆಸರುಗಳು ಯಾವಾಗಲೂ ನನ್ನೊಂದಿಗೆ ಇರುತ್ತವೆ; ನಿಮ್ಮ ಮಕ್ಕಳು ನನ್ನೊಂದಿಗೆ ಯಾವಾಗಲೂ ಇರುತ್ತಾರೆ. 23 ಪ್ರತಿಯೊಂದು ಆರಾಧನಾ ದಿನದಲ್ಲಿ ಪ್ರತಿಯೊಬ್ಬರೂ ಬಂದು ನನ್ನನ್ನು ಆರಾಧಿಸುವರು. ಪ್ರತಿಯೊಂದು ಸಬ್ಬತ್ ದಿನದಲ್ಲೂ ತಿಂಗಳ ಮೊದಲ ದಿನದಲ್ಲೂ ಅವರು ನನ್ನ ಬಳಿಗೆ ಬರುವರು.”
24 “ಅವರು ನನ್ನ ಪವಿತ್ರ ಪಟ್ಟಣದಲ್ಲಿ ವಾಸಿಸುವರು. ಅವರು ಪಟ್ಟಣದಿಂದ ಹೊರಗೆ ಹೋದರೆ ನನಗೆ ವಿರುದ್ಧವಾಗಿ ಪಾಪಮಾಡಿದವರ ಹೆಣಗಳನ್ನು ನೋಡುವರು. ಅವರ ಹೆಣಗಳೊಳಗೆ ಸಾಯದ ಹುಳಗಳಿರುವವು. ಬೆಂಕಿಯು ಆ ಹೆಣಗಳನ್ನು ಸುಟ್ಟುಬಿಡುವುದು. ಆ ಬೆಂಕಿಯು ಆರುವದೇ ಇಲ್ಲ. ಅವು ಜನರ ಮುಂದೆ ಅಸಹ್ಯವಾಗಿರುವವು.”
ಪ್ರಾರ್ಥನೆ ಮತ್ತು ಸಭಾಕೂಟಗಳ ಬಗ್ಗೆ ಕೆಲವು ಸಲಹೆಗಳು
2 ಮೊಟ್ಟ ಮೊದಲನೆಯದಾಗಿ ನಾನು ನಿಮಗೆ ಹೇಳುವುದೇನೆಂದರೆ, ಎಲ್ಲಾ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ, ವಿಜ್ಞಾಪಿಸಿರಿ, ಅವರ ಅಗತ್ಯಕ್ಕೆ ತಕ್ಕಂತೆ ಬಿನ್ನಹ ಮಾಡಿರಿ ಮತ್ತು ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ. 2 ನಮ್ಮಲ್ಲಿ ಶಾಂತಿ ಸಮಾಧಾನಗಳು ನೆಲಸಿ ನಾವು ದೇವರನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಆರಾಧಿಸಲು ಸಾಧ್ಯವಾಗುವಂತೆ ಅರಸರಿಗಾಗಿಯೂ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಿರಿ. 3 ಇದು ಒಳ್ಳೆಯದೂ ಮತ್ತು ನಮ್ಮ ರಕ್ಷಕನಾದ ದೇವರಿಗೆ ಮೆಚ್ಚಿಕೆಕರವೂ ಆಗಿದೆ.
4 ಎಲ್ಲಾ ಜನರು ರಕ್ಷಿಸಲ್ಪಡಬೇಕೆಂದು, ಸತ್ಯವನ್ನು ತಿಳಿದು ಕೊಳ್ಳಬೇಕೆಂದು ದೇವರು ಬಯಸುತ್ತಾನೆ. 5 ದೇವರು ಒಬ್ಬನೇ. ದೇವರಿಗೂ ಮನುಷ್ಯರಿಗೂ ಮಧ್ಯಸ್ತನು ಒಬ್ಬನೇ. ಮನುಷ್ಯನಾಗಿರುವ ಯೇಸುಕ್ರಿಸ್ತನೇ ಆತನು. 6 ಯೇಸುವು ಜನರೆಲ್ಲರ ಪಾಪಗಳಿಗೆ ತನ್ನನ್ನೇ ಉಚಿತವಾಗಿ ಒಪ್ಪಿಸಿಕೊಟ್ಟನು. ಜನರೆಲ್ಲರೂ ರಕ್ಷಣೆ ಹೊಂದಬೇಕೆಂಬ ದೇವರ ಅಪೇಕ್ಷೆಗೆ ಯೇಸುವು ತಕ್ಕಕಾಲದಲ್ಲಿ ಸಾಕ್ಷಿನೀಡಿದನು. 7 ಆದ ಕಾರಣವೇ ಸುವಾರ್ತೆಯನ್ನು ಸಾರುವುದಕ್ಕಾಗಿಯೂ ಅಪೊಸ್ತಲನಾಗುವುದಕ್ಕಾಗಿಯೂ ಯೆಹೂದ್ಯರಲ್ಲದ ಜನರಿಗೆ ಬೋಧಿಸುವುದಕ್ಕಾಗಿಯೂ ನನ್ನನ್ನು ಆರಿಸಿಕೊಳ್ಳಲಾಯಿತು. (ಇದು ಸತ್ಯ, ಖಂಡಿತವಾಗಿಯೂ ಸುಳ್ಳಲ್ಲ.) ಸತ್ಯವನ್ನು ತಿಳಿದುಕೊಳ್ಳಬೇಕೆಂತಲೂ ನಂಬಬೇಕೆಂತಲೂ ನಾನು ಅವರಿಗೆ ಬೋಧಿಸುತ್ತೇನೆ.
ಪುರುಷರಿಗೆ ಮತ್ತು ಸ್ತ್ರೀಯರಿಗೆ ವಿಶೇಷ ಸೂಚನೆಗಳು
8 ಎಲ್ಲಾ ಸ್ಥಳಗಳಲ್ಲಿ ಪುರುಷರು ಪ್ರಾರ್ಥನೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ತಮ್ಮ ಕೈಗಳನ್ನು ಮೇಲೆತ್ತಿ ಪ್ರಾರ್ಥಿಸುವ ಅವರು ಪರಿಶುದ್ಧರಾಗಿರಬೇಕು. ಅವರು ವಾಗ್ವಾದ ಮಾಡುವವರೂ ಕೋಪಗೊಳ್ಳುವವರೂ ಆಗಿರಬಾರದು.
9 ಸ್ತ್ರೀಯರು ತಮಗೆ ಯೋಗ್ಯವಾದ ಉಡುಪುಗಳನ್ನು ಧರಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರ ಉಡುಪುಗಳು ಅವರು ಮಾನಸ್ಥೆಯರು ಎಂಬುದನ್ನು ತೋರಿಸುವಂಥವುಗಳಾಗಿರಬೇಕು. ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ತಲೆಕೂದಲನ್ನು ಅಲಂಕಾರಿಕವಾಗಿ ಕಟ್ಟಿಕೊಳ್ಳಕೂಡದು; ಬಂಗಾರವನ್ನು ಮತ್ತು ಮುತ್ತುಗಳನ್ನು ತೊಟ್ಟುಕೊಳ್ಳಕೂಡದು ಮತ್ತು ಬೆಲೆಬಾಳುವ ಬಟ್ಟೆಗಳನ್ನು ಧರಿಸಿಕೊಳ್ಳಕೂಡದು. 10 ಆದರೆ ಅವರು ಯೋಗ್ಯಕಾರ್ಯಗಳನ್ನು ಮಾಡುವುದರ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು. ದೇವರನ್ನು ಆರಾಧಿಸುತ್ತೇವೆ ಎಂದು ಹೇಳುವ ಸ್ತ್ರೀಯರು ತಮ್ಮನ್ನು ಈ ರೀತಿಯಲ್ಲಿಯೇ ಅಲಂಕರಿಸಿಕೊಳ್ಳಬೇಕು.
11 ಸ್ತ್ರೀಯರು ಉಪದೇಶವನ್ನು ಕೇಳಬೇಕು ಮತ್ತು ವಿಧೇಯರಾಗಲು ಪೂರ್ಣಸಿದ್ಧರಾಗಿರಬೇಕು. 12 ಅವರು ಪುರುಷರಿಗೆ ಉಪದೇಶಿಸುವುದಕ್ಕಾಗಲಿ ಅವರ ಮೇಲೆ ಅಧಿಕಾರ ಚಲಾಯಿಸುವುದಕ್ಕಾಗಲಿ ನಾನು ಸಮ್ಮತಿಸುವುದಿಲ್ಲ. ಅವರು ಮೌನವಾಗಿರಬೇಕು. 13 ಏಕೆಂದರೆ ಮೊದಲು ನಿರ್ಮಿತನಾದವನು ಆದಾಮ. ಅನಂತರ ನಿರ್ಮಿತಳಾದದ್ದು ಹವ್ವಳು. 14 ಅಲ್ಲದೆ ಸೈತಾನನಿಂದ ವಂಚಿಸಲ್ಪಟ್ಟದ್ದು ಆದಾಮನಲ್ಲ. ಸ್ತ್ರೀಯು ವಂಚನೆಗೆ ಬಲಿಯಾಗಿ ಪಾಪಿಯಾದಳು.[a] 15 ಆದರೆ ಸ್ತ್ರೀಯರು ನಂಬಿಕೆಯಲ್ಲಿ, ಪ್ರೀತಿಯಲ್ಲಿ, ಪರಿಶುದ್ಧತೆಯಲ್ಲಿ ಮತ್ತು ಸರಿಯಾದ ನಡವಳಿಕೆಯಲ್ಲಿ ದೃಢವಾಗಿದ್ದರೆ ಮಕ್ಕಳನ್ನು ಹೆರುವಾಗ ರಕ್ಷಿಸಲ್ಪಡುವರು.
Kannada Holy Bible: Easy-to-Read Version. All rights reserved. © 1997 Bible League International