Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 47-49

ಬಾಬಿಲೋನಿಗೆ ದೇವರ ಸಂದೇಶ

47 “ಕನ್ನಿಕೆಯೇ, ಬಾಬಿಲೋನಿನ ಕುಮಾರಿಯೇ
    ಕೆಳಕ್ಕಿಳಿದು ಧೂಳಿನ ಮೇಲೆ ಕುಳಿತಿಕೊ.
ಕಸ್ದೀಯರ ಕುಮಾರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೊ!
    ಈಗ ನೀನು ಯಜಮಾನಿಯಲ್ಲ.
ನೀನು ಕೋಮಲವಾದ ತರುಣಿ ಎಂದು ಜನರು ನಿನ್ನ ಬಗ್ಗೆ ಹೇಳುವದಿಲ್ಲ.
ಈಗ ನೀನು ದಾಸಿಯಾಗಿ ಕೆಲಸ ಮಾಡಬೇಕು.
    ನಿನ್ನ ಮನೋಹರವಾದ ಉಡುಪನ್ನು ತೆಗೆದುಹಾಕು.
ಬೀಸುವ ಕಲ್ಲನ್ನು ತೆಗೆದುಕೊಂಡು
    ಧಾನ್ಯವನ್ನು ಬೀಸು.
ಜನರು ನಿನ್ನ ತೊಡೆಗಳನ್ನು ನೋಡುವ ತನಕ
    ನಿನ್ನ ಉಡುಪನ್ನು ಎತ್ತಿ ಹೊಳೆಯನ್ನು ದಾಟು.
    ನಿನ್ನ ದೇಶವನ್ನು ಬಿಟ್ಟುಹೋಗು.
ಪುರುಷರು ನಿನ್ನ ಶರೀರವನ್ನು ನೋಡಿ
    ನಿನ್ನೊಂದಿಗೆ ಸಂಭೋಗಿಸುವರು.
ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನೀನು ಶಿಕ್ಷಿಸಲ್ಪಡುವೆ.
    ಯಾರೂ ನಿನಗೆ ಸಹಾಯಮಾಡಲು ಬರುವದಿಲ್ಲ.

“‘ದೇವರು ನಮ್ಮನ್ನು ರಕ್ಷಿಸುವನು.
    ಆತನ ಹೆಸರು ಸರ್ವಶಕ್ತನಾದ ಯೆಹೋವನು; ಇಸ್ರೇಲರ ಪರಿಶುದ್ಧನೆಂಬುದೇ ಆತನ ಹೆಸರು’
ಎಂದು ನನ್ನ ಜನರು ಹೇಳುವರು.”

“ಆದ್ದರಿಂದ ಬಾಬಿಲೋನೇ, ಅಲ್ಲಿ ಸುಮ್ಮನೆ ಕುಳಿತಿರು.
ಕಸ್ದೀಯರ ಕುಮಾರಿಯೇ ಕತ್ತಲೆಯೊಳಗೆ ಹೋಗಿ ಇರು,
    ಯಾಕೆಂದರೆ ನೀನು ‘ಜನಾಂಗಗಳ ರಾಣಿ’ ಎಂದು ಇನ್ನು ಮುಂದೆ ಕರೆಯಲ್ಪಡುವದಿಲ್ಲ.

“ನನ್ನ ಜನರ ಮೇಲೆ ನಾನು ಸಿಟ್ಟಿಗೆದ್ದಿದ್ದೆನು.
    ಅವರು ನನಗೆ ಸೇರಿದವರಾಗಿದ್ದಾರೆ.
    ಆದರೆ ನಾನು ಅವರ ಮೇಲೆ ಸಿಟ್ಟಾದೆನು.
ಆದ್ದರಿಂದ ನಾನು ಅವರನ್ನು ತಳ್ಳಿಬಿಟ್ಟೆನು.
    ಅವರನ್ನು ನಿನಗೆ ಕೊಟ್ಟೆನು;
ನೀನು ಅವರನ್ನು ಶಿಕ್ಷಿಸಿದೆ.
    ಅವರ ಮೇಲೆ ಕರುಣೆ ತೋರಿಸಲಿಲ್ಲ.
ವೃದ್ಧರೂ ಕಷ್ಟದ ಕೆಲಸ ಮಾಡುವಂತೆ ಮಾಡಿದೆ.
‘ನಾನು ನಿತ್ಯಕಾಲಕ್ಕೂ ವಾಸಿಸುತ್ತೇನೆ.
    ನಾನು ಯಾವಾಗಲೂ ರಾಣಿಯಾಗಿಯೇ ಇರುವೆನು’ ಎಂದು ನೀನು ಹೇಳುವೆ.
ಅವರಿಗೆ ನೀನು ಮಾಡಿದ ದುಷ್ಟಕ್ರಿಯೆಗಳನ್ನು ನೀನು ಗಮನಿಸಲೇ ಇಲ್ಲ.
    ಅದರ ಪರಿಣಾಮವನ್ನು ನೀನು ಆಲೋಚಿಸಲೇ ಇಲ್ಲ.
ಆದ್ದರಿಂದ ‘ಕೋಮಲ ಸ್ತ್ರೀಯೇ,’ ನನ್ನ ಮಾತನ್ನು ಕೇಳು.
ಸುರಕ್ಷಿತಳಾಗಿರುವೆ ಎಂದು ನೆನಸಿಕೊಂಡು ಹೀಗೆ ನಿನ್ನೊಳಗೆ,
    ‘ನಾನೇ ಮಹಾವ್ಯಕ್ತಿ. ನನ್ನಂಥ ಮಹಾವ್ಯಕ್ತಿ ಯಾರೂ ಇಲ್ಲ.
    ನಾನೆಂದಿಗೂ ವಿಧವೆಯಾಗುವದಿಲ್ಲ. ಯಾವಾಗಲೂ ನನಗೆ ಮಕ್ಕಳಿರುವರು’ ಎಂದುಕೊಳ್ಳುವೆ.
ಒಂದೇ ದಿನದೊಳಗೆ, ಒಂದೇ ಕ್ಷಣದಲ್ಲಿ ನಿನಗೆ ಎರಡು ಸಂಗತಿಗಳು ಸಂಭವಿಸುತ್ತವೆ.
    ನೀನು ನಿನ್ನ ಮಕ್ಕಳನ್ನು ಕಳೆದುಕೊಳ್ಳುವೆ, ಆ ಬಳಿಕ ನೀನು ನಿನ್ನ ಗಂಡನನ್ನು ಕಳಕೊಳ್ಳುವೆ.
    ಹೌದು, ಈ ವಿಷಯಗಳು ನಿನಗೆ ಖಂಡಿತವಾಗಿ ಸಂಭವಿಸುವವು. ನಿನ್ನಲ್ಲಿರುವ ಎಲ್ಲಾ ಮಾಟಮಂತ್ರಗಳು ನಿನ್ನನ್ನು ಕಾಪಾಡಲಾರವು.
10 ನೀನು ದುಷ್ಕೃತ್ಯಗಳನ್ನು ಮಾಡುತ್ತಿರುವೆ, ಆದರೂ ನೀನು ಸುರಕ್ಷಿತಳಾಗಿದ್ದೇನೆ ಎಂದುಕೊಂಡಿರುವೆ.
    ‘ನಾನು ಮಾಡಿದ ದುಷ್ಕೃತ್ಯಗಳನ್ನು ಯಾರೂ ನೋಡುವದಿಲ್ಲ’ ಎಂದು ನೀನು ಭಾವಿಸಿಕೊಂಡಿರುವೆ.
    ನಿನ್ನ ಜ್ಞಾನ, ನಿನ್ನ ತಿಳುವಳಿಕೆ ನಿನ್ನನ್ನು ಕಾಪಾಡುತ್ತವೆ ಎಂದು ತಿಳಿದುಕೊಂಡಿರುವೆ.
‘ನಾನೇ ಮಹಾವ್ಯಕ್ತಿ, ನನ್ನಂಥ ಮಹಾವ್ಯಕ್ತಿ ಬೇರೆ ಯಾರೂ ಇಲ್ಲ’ ಎಂದು ನೀನು ಅಂದುಕೊಳ್ಳುವೆ.

11 “ಆದರೆ ವಿಪತ್ತು ನಿನಗೆ ಪ್ರಾಪ್ತವಾಗುವದು.
    ಅವು ಯಾವಾಗ ಸಂಭವಿಸುತ್ತದೋ ನಿನಗೆ ತಿಳಿಯದು.
    ಆದರೆ ವಿಪತ್ತು ಸಂಭವಿಸುವದು.
    ನೀನು ಏನೇ ಮಾಡಿದರೂ ಆ ವಿಪತ್ತನ್ನು ತಡೆಯಲಾಗದು.
12 ಮಾಟಮಂತ್ರಗಳನ್ನು ಕಲಿತುಕೊಳ್ಳುವುದರಲ್ಲೇ
    ನಿನ್ನ ಜೀವಮಾನವನ್ನು ಕಳೆದಿರುವೆ.
ಸರಿ, ತಂತ್ರಮಂತ್ರಗಳನ್ನು ಮಾಡಲು ಪ್ರಾರಂಭಿಸು.
    ಒಂದುವೇಳೆ ಅವು ನಿನಗೆ ಸಹಾಯ ಮಾಡಬಹುದು.
    ಒಂದುವೇಳೆ ಕೆಲವರನ್ನು ನೀನು ಭಯಪಡಿಸಬಹುದು.
13 ನಿನಗೆ ಅನೇಕಾನೇಕ ಸಲಹೆಗಾರರಿದ್ದಾರೆ.
    ಅವರು ನಿನಗೆ ಕೊಡುವ ಸಲಹೆಗಳಿಂದ ನೀನು ಬೇಸರಗೊಂಡಿರುವಿಯಾ?
ಹಾಗಾದರೆ ನಿನ್ನಲ್ಲಿರುವ ಖಗೋಳಶಾಸ್ತ್ರಜ್ಞರನ್ನು ಕರೆಯಿಸು.
    ತಿಂಗಳು ಯಾವಾಗ ಪ್ರಾರಂಭವಾಗುತ್ತದೆಯೆಂದು ಅವರು ಹೇಳಬಲ್ಲರು.
    ನಿನ್ನ ಸಂಕಟಗಳು ಯಾವಾಗ ಪ್ರಾಪ್ತವಾಗುತ್ತವೆಯೆಂದು ಅವರು ನಿನಗೆ ತಿಳಿಸಬಲ್ಲರು.
14 ಆದರೆ ಆ ಮನುಷ್ಯರಿಗೆ ತಮ್ಮನ್ನೇ ರಕ್ಷಿಸಲು ಅಸಾಧ್ಯವಾಗುವದು.
    ಅವರು ಹುಲ್ಲಿನಂತೆ ಸುಟ್ಟುಹೋಗುವರು.
    ರೊಟ್ಟಿಸುಡಲು ಕೆಂಡಗಳು ಕಾಣಿಸದಂತೆಯೂ ಚಳಿ ಕಾಯಿಸಿಕೊಳ್ಳಲು ಬೆಂಕಿ ಇರದಂತೆಯೂ ಅವರು ಕ್ಷಣಕಾಲದಲ್ಲಿ ಸುಟ್ಟುಹೋಗುವರು.
15 ನೀನು ಕಷ್ಟಪಟ್ಟು ಗಳಿಸಿದ ಸಂಪತ್ತಿಗೆಲ್ಲಾ ಹಾಗೆಯೇ ಆಗುವದು.
    ನಿನ್ನ ಜೀವಮಾನ ಕಾಲವೆಲ್ಲಾ ವ್ಯವಹಾರ ನಡಿಸಿದ್ದ ಜನರೆಲ್ಲಾ ನಿನ್ನನ್ನು ತೊರೆದುಬಿಡುವರು.
ಪ್ರತಿಯೊಬ್ಬನು ತನ್ನ ಸ್ವಂತದಾರಿ ಹಿಡಿಯುವನು.
    ಆಗ ನಿನ್ನನ್ನು ರಕ್ಷಿಸಲು ಯಾರೂ ಇರುವದಿಲ್ಲ.”

ಯೆಹೋವನು ಪ್ರಪಂಚವನ್ನು ಆಳುತ್ತಾನೆ

48 ಯೆಹೋವನು ಹೇಳುವುದೇನೆಂದರೆ, “ಯಾಕೋಬನ ಮನೆತನದವರೇ, ನನ್ನ ಮಾತುಗಳನ್ನು ಕೇಳಿರಿ.
ಜನರು ನಿಮ್ಮನ್ನು ಇಸ್ರೇಲ್ ಎಂದು ಕರೆಯುತ್ತಾರೆ.
    ನೀವು ಯೆಹೂದದ ಕುಟುಂಬದವರು.
ನೀವು ಯೆಹೋವನ ಹೆಸರಿನಲ್ಲಿ ಒಡಂಬಡಿಕೆ ಮಾಡಿಕೊಳ್ಳುವಿರಿ. ನೀವು ಯೆಹೋವನ ನಾಮವನ್ನು ಸ್ತುತಿಸುವಿರಿ, ಆದರೆ ನೀವು ಇವುಗಳನ್ನು ಮಾಡುವಾಗ
    ನಂಬಿಗಸ್ತರಾಗಿರುವದಿಲ್ಲ; ಯಥಾರ್ಥರಾಗಿರುವುದಿಲ್ಲ.

“ಹೌದು, ಅವರು ಪರಿಶುದ್ಧ ಪಟ್ಟಣದ ನಿವಾಸಿಗಳಾಗಿದ್ದಾರೆ.
    ಅವರು ಇಸ್ರೇಲಿನ ದೇವರನ್ನು ಅವಲಂಬಿಸಿಕೊಂಡಿದ್ದಾರೆ.
ಸರ್ವಶಕ್ತನಾದ ಯೆಹೋವನು ಎಂಬುದೇ ಆತನ ಹೆಸರು.

“ಸಂಭವಿಸಲಿಕ್ಕಿರುವ ಸಂಗತಿಗಳ ಬಗ್ಗೆ
    ಬಹುಕಾಲದ ಹಿಂದೆಯೇ ನಿಮಗೆ ತಿಳಿಸಿದ್ದೆನು.
    ಫಕ್ಕನೇ ಅವು ನೆರವೇರುವಂತೆ ಮಾಡಿದೆನು.
ನೀವು ಹಠಮಾರಿಗಳಾಗಿದ್ದು ನಾನು ಹೇಳಿದ್ದನ್ನು ನಂಬದೆ ಹೋದದ್ದರಿಂದ ನಾನು ಹಾಗೆ ಮಾಡಿದೆನು.
    ನೀವು ಕಬ್ಬಿಣದಂತೆ ಬಗ್ಗದ ಹಠಮಾರಿಗಳಾಗಿದ್ದೀರಿ.
    ಹಿತ್ತಾಳೆಯಂತೆ ಗಟ್ಟಿಯಾಗಿದ್ದೀರಿ.
ಸಂಭವಿಸಲಿರುವ ಸಂಗತಿಗಳನ್ನು ಬಹುಕಾಲದ ಮೊದಲೇ ನಿಮಗೆ ತಿಳಿಸಿದ್ದೆನು.
    ಅವು ಸಂಭವಿಸುವದಕ್ಕಿಂತ ಎಷ್ಟೋ ಕಾಲದ ಮೊದಲೇ ತಿಳಿಸಿದೆನು.
ನೀವು, ‘ಇವುಗಳನ್ನು ಮಾಡಿದ್ದು ನಮ್ಮ ವಿಗ್ರಹಗಳೇ,
    ನಮ್ಮ ಮರ ಮತ್ತು ಲೋಹದ ದೇವರುಗಳೇ ಅವುಗಳನ್ನು ಮಾಡಿದ್ದು ಎಂದು ನೀವು ಹೇಳದಂತೆ ಮಾಡಿದೆನು.’”

ಇಸ್ರೇಲರನ್ನು ಶುದ್ಧೀಕರಿಸಲು ದೇವರು ಅವರನ್ನು ಶಿಕ್ಷಿಸುತ್ತಾನೆ

“ನಡೆದದ್ದನ್ನು ನೀವು ಕಣ್ಣಾರೆ ನೋಡಿದಿರಿ; ಕಿವಿಯಾರೆ ಕೇಳಿದಿರಿ.
    ಆದ್ದರಿಂದ ನೀವು ಇತರರಿಗೆ ಸುದ್ದಿಯನ್ನು ತಿಳಿಸಬೇಕು.
ನೀವು ಈವರೆಗೆ ತಿಳಿಯದಿರುವ
    ಗುಪ್ತವಿಷಯಗಳನ್ನು ಈಗ ನಿಮಗೆ ತಿಳಿಸುವೆನು.
ಇವು ಬಹಳ ಕಾಲದ ಹಿಂದೆ ನಡೆದ ವಿಷಯಗಳಲ್ಲ.
    ಇವು ಈಗ ಸಂಭವಿಸುವ ವಿಷಯಗಳು.
ಈ ದಿವಸಕ್ಕೆ ಮೊದಲು ನೀವು ಇದನ್ನು ಕೇಳಲಿಲ್ಲ.
    ಆದ್ದರಿಂದ ‘ನಮಗೆ ಇದೆಲ್ಲಾ ಗೊತ್ತಿದೆ’ ಎಂದು ನೀವು ಹೇಳಲಾಗದು.
ಆದರೆ ನಾನು ಇವುಗಳನ್ನು ತಿಳಿಸಿದ ಮೇಲೂ ನೀವು ನನ್ನ ಮಾತನ್ನು ಕೇಳದೆಹೋದಿರಿ.
    ನೀವು ನನ್ನಿಂದ ಏನೂ ಕಲಿಯಲಿಲ್ಲ.
    ನಾನು ಏನು ಹೇಳಿದರೂ ನೀವು ಕೇಳಲಿಲ್ಲ.
ಪ್ರಾರಂಭದಿಂದಲೇ ನೀವು ನನಗೆ ವಿರುದ್ಧವಾಗುವಿರಿ ಎಂದು ನಾನು ತಿಳಿದಿದ್ದೆನು.
    ನೀವು ಹುಟ್ಟಿದಾಗಿನಿಂದಲೇ ನನಗೆ ವಿರುದ್ಧವಾಗಿ ದಂಗೆ ಎದ್ದಿರುವಿರಿ.

“ಆದರೆ ನಾನು ತಾಳ್ಮೆಯಿಂದಿರುವೆನು.
    ನಾನು ಇದನ್ನು ನನ್ನ ಹೆಸರಿನ ನಿಮಿತ್ತ ಮಾಡುವೆನು.
ನಾನು ನಿಮ್ಮ ಮೇಲೆ ಕೋಪಗೊಂಡು ನಾನು ನಾಶಮಾಡದೆ ಇದ್ದುದಕ್ಕಾಗಿ ಜನರು ನನ್ನನ್ನು ಸ್ತುತಿಸುವರು.
    ನನ್ನ ತಾಳ್ಮೆಗಾಗಿ ನೀವು ನನ್ನನ್ನು ಕೊಂಡಾಡುವಿರಿ.

10 “ಇಗೋ, ನಾನು ನಿಮ್ಮನ್ನು ಶುದ್ಧೀಕರಿಸುತ್ತೇನೆ.
    ಜನರು ಬೆಳ್ಳಿಯನ್ನು ಬೆಂಕಿಯಿಂದ ಶುದ್ಧೀಕರಿಸುತ್ತಾರೆ.
    ಆದರೆ ನಾನು ನಿಮ್ಮನ್ನು ಸಂಕಟಗಳಿಂದ ಶುದ್ಧೀಕರಿಸುವೆನು.
11 ನಾನು ಇದನ್ನು ನನಗಾಗಿ ಮಾಡುವೆನು.
    ನಾನು ನಿಮ್ಮನ್ನು ಪ್ರಾಮುಖ್ಯವಾದ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ.
    ನನ್ನ ಮಹಿಮೆಯನ್ನು ಮತ್ತು ನನಗೆ ಸಲ್ಲತಕ್ಕ ಸ್ತುತಿಯನ್ನು ತೆಗೆದುಕೊಳ್ಳಲು ನಾನು ಸುಳ್ಳುದೇವರುಗಳಿಗೆ ಅವಕಾಶ ಕೊಡುವುದಿಲ್ಲ.

12 “ಯಾಕೋಬೇ, ನನಗೆ ಕಿವಿಗೊಡು.
ಇಸ್ರೇಲೇ, ನೀವು ನನ್ನ ಜನರಾಗುವದಕ್ಕಾಗಿ ನಿಮ್ಮನ್ನು ನಾನು ಕರೆದೆನು.
    ಆದ್ದರಿಂದ ನನ್ನ ಮಾತುಗಳನ್ನು ಕೇಳಿರಿ.
ನಾನೇ ಆದಿಯೂ
    ಅಂತ್ಯವೂ ಆಗಿದ್ದೇನೆ.
13 ಭೂಮಿಯನ್ನು ನನ್ನ ಕೈಗಳಿಂದಲೇ ನಿರ್ಮಿಸಿದೆನು.
    ನನ್ನ ಬಲಗೈ ಆಕಾಶವನ್ನು ಉಂಟುಮಾಡಿತು.
ನಾನು ಅವುಗಳನ್ನು ಕರೆದಾಗ
    ಅವು ನನ್ನ ಬಳಿಗೆ ಬರುವವು.

14 “ನೀವೆಲ್ಲರೂ ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿರಿ.
    ಸುಳ್ಳುದೇವರುಗಳಲ್ಲಿ ಯಾರಾದರೂ ಈ ವಿಷಯಗಳು ಸಂಭವಿಸುತ್ತವೆಯೆಂದು ಹೇಳಿರುವರೇ? ಇಲ್ಲ!”
ಯೆಹೋವನು ಆರಿಸಿದ ಮನುಷ್ಯನು ಬಾಬಿಲೋನಿಗೂ
    ಕಸ್ದೀಯರಿಗೂ ತನ್ನ ಇಷ್ಟಬಂದ ಹಾಗೆ ಮಾಡುವನು.

15 “ನಾನು ಅವನನ್ನು ಕರೆಯುವುದಾಗಿ ಹೇಳಿದ್ದೇನೆ.
    ನಾನು ಅವನನ್ನು ಕರೆದುತರುವೆನು;
    ಅವನಿಗೆ ಜಯವನ್ನು ಅನುಗ್ರಹಿಸುವೆನು.
16 ನನ್ನ ಬಳಿಗೆ ಬಂದು ನನ್ನ ಮಾತು ಕೇಳಿರಿ!
ಬಾಬಿಲೋನ್ ಒಂದು ದೇಶವಾಗಿ ಪರಿಣಮಿಸುವಾಗ ನಾನು ಅಲ್ಲಿದ್ದೆನು.
ಆದಿಯಿಂದಲೇ ನಾನು ಸ್ವಷ್ಟವಾಗಿ ಹೇಳಿದ್ದೇನೆ.
    ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೇನೆ.”

ಯೆಶಾಯನು ಹೇಳಿದ್ದೇನೆಂದರೆ: “ಈಗ ನನ್ನ ಒಡೆಯನಾದ ಯೆಹೋವನೂ ಆತನ ಆತ್ಮನೂ ಈ ವಿಷಯಗಳನ್ನು ತಿಳಿಸಲು ನನ್ನನ್ನು ಕಳುಹಿಸಿದ್ದಾನೆ. 17 ರಕ್ಷಕನೂ ಇಸ್ರೇಲರ ಪರಿಶುದ್ಧನೂ ಆಗಿರುವ ಯೆಹೋವನು ಹೇಳುವುದೇನೆಂದರೆ,

“ನಾನೇ ನಿಮ್ಮ ದೇವರಾದ ಯೆಹೋವನು.
    ಯಾವದು ಒಳ್ಳೆಯದೋ, ಪ್ರಯೋಜನಕರವೋ ಅದನ್ನು ಮಾಡಲು ನಿಮಗೆ ಕಲಿಸುತ್ತೇನೆ.
    ನೀವು ಹೋಗಲೇಬೇಕಾದ ದಾರಿಯಲ್ಲಿ ನಿಮ್ಮನ್ನು ನಡಿಸುವೆನು.
18 ನೀವು ನನಗೆ ವಿಧೇಯರಾಗಿದ್ದರೆ,
    ತುಂಬಿಹರಿಯುವ ಹೊಳೆಯಂತೆ
    ಸಮಾಧಾನವು ನಿಮಗೆ ದೊರಕುತ್ತಿತ್ತು.
ಸಮುದ್ರದ ತೆರೆಯಂತೆ ಮೇಲಿಂದ ಮೇಲೆ
    ನಿಮಗೆ ಒಳ್ಳೆಯವುಗಳು ಬರುತ್ತಿದ್ದವು.
19 ನೀವು ನನಗೆ ವಿಧೇಯರಾಗಿದ್ದರೆ,
    ನಿಮ್ಮ ಸಂತಾನವು ಅಭಿವೃದ್ಧಿಯಾಗುತ್ತಿತ್ತು.
    ಅವರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿರುತ್ತಿದ್ದರು.
ನೀವು ನನಗೆ ವಿಧೇಯರಾಗಿದ್ದರೆ, ನೀವು ನಾಶವಾಗಿರುತ್ತಿರಲಿಲ್ಲ
    ಮತ್ತು ನನ್ನೆದುರಿನಿಂದ ನಿಮ್ಮ ಹೆಸರು ತೆಗೆದುಹಾಕಲ್ಪಡುತ್ತಿರಲಿಲ್ಲ.”

20 ನನ್ನ ಜನರೇ, ಬಾಬಿಲೋನನ್ನು ತೊರೆಯಿರಿ.
    ನನ್ನ ಜನರೇ, ಕಸ್ದೀಯರಿಂದ ಓಡಿಹೋಗಿರಿ.
ಈ ವರ್ತಮಾನವನ್ನು ಜನರಿಗೆ ಹರ್ಷಿಸುತ್ತಾ ತಿಳಿಸಿರಿ.
    ಲೋಕದ ಕಟ್ಟಕಡೆಯ ಸ್ಥಳದಲ್ಲೂ ಈ ವರ್ತಮಾನವನ್ನು ಪ್ರಕಟಿಸಿರಿ.
“ಯಾಕೋಬನನ್ನು ಯೆಹೋವನು ರಕ್ಷಿಸಿದನೆಂದು” ಜನರಿಗೆಲ್ಲಾ ತಿಳಿಸಿರಿ.
21 ಯೆಹೋವನು ತನ್ನ ಜನರನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದನು.
    ಜನರು ಬಾಯಾರಲಿಲ್ಲ;
ಯಾಕೆಂದರೆ ಆತನು ಬಂಡೆಯಿಂದ ನೀರು ಹರಿಯುಂತೆ ಮಾಡಿದನು.
    ಆತನು ಬಂಡೆಯನ್ನು ಇಬ್ಭಾಗ ಮಾಡಿದಾಗ ನೀರು ಅದರೊಳಗಿಂದ ಹರಿಯಿತು.

22 ಆದರೆ ಯೆಹೋವನು ಹೇಳುವುದೇನೆಂದರೆ,
    “ದುಷ್ಟರಿಗೆ ಸಮಾಧಾನವೇ ಸಿಗದು.”

ದೇವರು ತನ್ನ ವಿಶೇಷ ಸೇವಕನನ್ನು ಕರೆಯುತ್ತಾನೆ

49 ದೂರದೇಶದಲ್ಲಿರುವ ಜನರೇ, ನನ್ನ ಮಾತುಗಳಿಗೆ ಕಿವಿಗೊಡಿರಿ;
    ಭೂಮಿಯ ಮೇಲೆ ವಾಸಿಸುವ ಜನರೇ, ನನ್ನ ಮಾತುಗಳನ್ನು ಕೇಳಿರಿ.
ನಾನು ಹುಟ್ಟುವ ಮೊದಲೇ ಯೆಹೋವನು ನನ್ನನ್ನು ತನ್ನ ಸೇವೆಗಾಗಿ ಕರೆದನು.
    ನಾನು ತಾಯಿಯ ಗರ್ಭದಲ್ಲಿರುವಾಗಲೇ ಯೆಹೋವನು ನನ್ನ ಹೆಸರೆತ್ತಿ ಕರೆದನು.
ತನ್ನ ಪರವಾಗಿ ಮಾತನಾಡಲು ಯೆಹೋವನು ನನ್ನನ್ನು ಉಪಯೋಗಿಸುತ್ತಾನೆ.
ಹದವಾದ ಕತ್ತಿಯಂತೆ ನನ್ನನ್ನು ಉಪಯೋಗಿಸುತ್ತಾನೆ.
    ಅದೇ ಸಮಯದಲ್ಲಿ ನನ್ನನ್ನು ತನ್ನ ಕೈಯೊಳಗೆ ಸುರಕ್ಷಿತವಾಗಿ ಇರಿಸುತ್ತಾನೆ.
ಯೆಹೋವನು ನನ್ನನ್ನು ಬಾಣದಂತೆ ಉಪಯೋಗಿಸುತ್ತಾನೆ,
    ಅದೇ ಸಮಯದಲ್ಲಿ ಬತ್ತಳಿಕೆಯಲ್ಲಿ ನನ್ನನ್ನು ಅಡಗಿಸಿಡುತ್ತಾನೆ.

ಯೆಹೋವನು ಹೀಗೆಂದನು: “ಇಸ್ರೇಲೇ, ನೀನೇ ನನ್ನ ಸೇವಕನು.
    ನಾನು ನಿನಗೆ ಆಶ್ಚರ್ಯವಾದ ಕಾರ್ಯಗಳನ್ನು ಮಾಡುವೆನು.”

ಆಗ ನಾನು “ನಾನು ಕಷ್ಟಪಟ್ಟು ಮಾಡಿದ ಕಾರ್ಯಗಳೆಲ್ಲವೂ ನಿಷ್ಪ್ರಯೋಜನವಾದವು.
    ನಾನು ನನ್ನನ್ನೇ ಸವೆಯಿಸಿದೆನು.
    ಆದರೆ ಪ್ರಯೋಜನವಾದದ್ದನ್ನು ನಾನು ಮಾಡಲಿಲ್ಲ.
ನಾನು ನನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದರೂ ಏನೂ ಮಾಡಲಾಗಲಿಲ್ಲ.
ಆದ್ದರಿಂದ ನನಗೆ ಮಾಡಬೇಕಾದುದನ್ನು ಯೆಹೋವನೇ ತೀರ್ಮಾನಿಸಲಿ.
    ನನಗೆ ದೊರಕಬೇಕಾದ ಬಹುಮಾನವನ್ನು ದೇವರೇ ತೀರ್ಮಾನಿಸಲಿ” ಎಂದು ಹೇಳಿದೆನು.
ನಾನು ಯೆಹೋವನ ಸೇವಕನಾಗಿರಬೇಕೆಂದು
    ಆತನು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿಯೇ ರೂಪಿಸಿದನು.
ಇಸ್ರೇಲರನ್ನೂ ಯಾಕೋಬನನ್ನೂ ಆತನ ಬಳಿಗೆ ಮತ್ತೆ ಕರೆದುಕೊಂಡು ಬರಲು
    ಆತನು ನನ್ನನ್ನು ರೂಪಿಸಿದನು.
ಯೆಹೋವನು ನನ್ನನ್ನು ಸನ್ಮಾನಿಸುವನು.
    ನಾನು ಆತನಿಂದ ಬಲವನ್ನು ಹೊಂದುವೆನು.

ಯೆಹೋವನು ನನಗೆ ಹೇಳಿದ್ದೇನೆಂದರೆ:
    “ನನ್ನ ಸೇವಕನಾದ ಯಾಕೋಬನ ಕುಲಗಳನ್ನು ಮೇಲೆತ್ತಿ
    ಇಸ್ರೇಲಿನ ಅಳಿದುಳಿದವರನ್ನು ಪುನಃಸ್ಥಾಪಿಸುವೆ.
ಆದರೆ ನಿನಗೆ ಇನ್ನೊಂದು ಕೆಲಸವಿದೆ. ಅದು ಇದಕ್ಕಿಂತಲೂ ಮಹತ್ತಾದದ್ದು.
    ನಾನು ನಿನ್ನನ್ನು ಎಲ್ಲಾ ಜನಾಂಗಗಳಿಗೆ ಬೆಳಕನ್ನಾಗಿ ಮಾಡುವೆನು.
    ಲೋಕದ ಎಲ್ಲಾ ಜನರನ್ನು ರಕ್ಷಿಸಲು ನೀನು ನನ್ನ ಮಾರ್ಗವಾಗುವೆ.”

ಇಸ್ರೇಲಿನ ಪರಿಶುದ್ಧನೂ ವಿಮೋಚಕನೂ ಆದ ಯೆಹೋವನು ಇಸ್ರೇಲನ್ನು ಬಿಡಿಸುವನು.
    ಆತನು ಹೇಳುವುದೇನೆಂದರೆ, “ನನ್ನ ಸೇವಕನು ದೀನನಾಗಿದ್ದಾನೆ. ಆತನು ಅರಸರನ್ನು ಸೇವಿಸುವನು.
    ಆದರೆ ಜನರು ಆತನನ್ನು ದ್ವೇಷಿಸುವರು.
ಆದರೆ ರಾಜರುಗಳು ಅವನನ್ನು ನೋಡಿ ಎದ್ದುನಿಂತು ಗೌರವಿಸುವರು.
    ಶ್ರೇಷ್ಠ ನಾಯಕರು ಆತನ ಮುಂದೆ ಅಡ್ಡಬೀಳುವರು.”

ಇದು ಇಸ್ರೇಲರ ಪರಿಶುದ್ಧನಾದ ಯೆಹೋವನ ಚಿತ್ತಕ್ಕನುಸಾರವಾಗಿದೆ. ಆತನು ಭರವಸೆಗೆ ಯೋಗ್ಯನಾಗಿದ್ದಾನೆ. ಆತನೇ ನಿನ್ನನ್ನು ಆರಿಸಿಕೊಂಡನು.

ರಕ್ಷಣೆಯ ದಿನ

ಯೆಹೋವನು ಹೇಳುವುದೇನೆಂದರೆ,
“ನನ್ನ ದಯೆಯನ್ನು ತೋರಿಸಲು ಒಂದು ವಿಶೇಷ ಸಮಯವಿದೆ.
    ಆಗ ನಾನು ನಿನ್ನ ಪ್ರಾರ್ಥನೆಗೆ ಉತ್ತರ ಕೊಡುವೆನು.
ನಿನ್ನನ್ನು ರಕ್ಷಿಸಲು ಒಂದು ವಿಶೇಷ ಸಮಯವಿದೆ.
    ಆಗ ನಾನು ನಿನಗೆ ಸಹಾಯ ಮಾಡುವೆನು,
    ನಿನ್ನನ್ನು ಕಾಪಾಡುವೆನು.
    ಜನರೊಂದಿಗೆ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ ಎಂಬುದಕ್ಕೆ ನೀನೇ ಸಾಕ್ಷಿಯಾಗಿರುವೆ.
ದೇಶವು ಈಗ ನಾಶವಾಗಿದೆ,
    ಆದರೆ ಈ ಭೂಮಿಯು ಯಾರದಾಗಿತ್ತೋ ಅವರಿಗೆ ನೀನದನ್ನು ಹಿಂದಕ್ಕೆ ಕೊಡುವೆ.
ಸೆರೆಮನೆಯಲ್ಲಿರುವವರಿಗೆ ನೀವು,
    ‘ಸೆರೆಮನೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಅಂಧಕಾರದಲ್ಲಿರುವವರಿಗೆ,
    ‘ಕತ್ತಲೆಯಿಂದ ಹೊರಗೆ ಬನ್ನಿರಿ’ ಎಂದು ಹೇಳುವಿರಿ.
ಪ್ರಯಾಣದಲ್ಲಿರುವವರು ತಿನ್ನುತ್ತಾ ಹೋಗುವರು.
    ಬೋಳುಬೆಟ್ಟಗಳಲ್ಲೂ ನಿಮಗೆ ಆಹಾರ ದೊರೆಯುವದು.
10 ಜನರಿಗೆ ಹಸಿವೆಯಾಗದು, ಬಾಯಾರಿಕೆಯಾಗದು.
    ಸೂರ್ಯನ ಉರಿ ಬಿಸಿಲಾಗಲಿ ಗಾಳಿಯಾಗಲಿ ಅವರಿಗೆ ಹಾನಿಮಾಡದು.
ಯಾಕೆಂದರೆ ದೇವರು ತಾನೇ ಅವರನ್ನು ಸಂತೈಸುವನು,
    ಅವರನ್ನು ಬುಗ್ಗೆಗಳ ಬಳಿಗೆ ನಡಿಸುವನು.
11 ನಾನು ನನ್ನ ಜನರಿಗೊಂದು ಮಾರ್ಗ ಸಿದ್ಧಮಾಡುವೆನು.
    ಬೆಟ್ಟವು ನೆಲದ ಮಟ್ಟಕ್ಕೆ ಇಳಿಯುವುದು;
    ತಗ್ಗು ಏರಿಸಲ್ಪಡುವದು.

12 “ಇಗೋ, ದೂರದೇಶಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
    ಉತ್ತರ, ಪಶ್ಚಿಮ ದಿಕ್ಕುಗಳಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.
    ಈಜಿಪ್ಟಿನ ಅಸ್ವಾನಿನಿಂದ ಜನರು ನನ್ನ ಬಳಿಗೆ ಬರುತ್ತಿದ್ದಾರೆ.”

13 ಭೂಮ್ಯಾಕಾಶಗಳೇ, ಸಂತೋಷಪಡಿರಿ!
    ಪರ್ವತಗಳೇ, ಹರ್ಷಧ್ವನಿ ಮಾಡಿರಿ!
ಯಾಕೆಂದರೆ ಯೆಹೋವನು ತನ್ನ ಜನರನ್ನು ಸಂತೈಸುತ್ತಾನೆ.
    ಆತನು ಬಡವರಿಗೆ ಕರುಣೆ ತೋರಿಸುತ್ತಾನೆ.

14 ಆದರೆ ಈಗ ಚೀಯೋನ್ ಹೇಳುವುದೇನೆಂದರೆ, “ಯೆಹೋವನು ನನ್ನನ್ನು ಬಿಟ್ಟುಹೋಗಿದ್ದಾನೆ.
    ನನ್ನ ಒಡೆಯನು ನನ್ನನ್ನು ತೊರೆದಿದ್ದಾನೆ.”

15 ಆದರೆ ನಾನು ಹೇಳುವುದೇನೆಂದರೆ,
“ಒಬ್ಬ ತಾಯಿಯು ತನ್ನ ಮಗುವನ್ನು ಮರೆತಾಳೇ?
    ತಾನು ಹೆತ್ತ ಶಿಶುವನ್ನು ತಾಯಿಯು ಮರೆತುಬಿಡುವಳೇ? ಇಲ್ಲ.
ಒಂದುವೇಳೆ ತಾಯಿ ತನ್ನ ಮಕ್ಕಳನ್ನು ಮರೆತಾಳು,
    ಆದರೆ ಯೆಹೋವನಾದ ನಾನು ನಿಮ್ಮನ್ನು ಮರೆಯುವದಿಲ್ಲ.
16 ನೋಡಿ, ನಿಮ್ಮ ಹೆಸರುಗಳನ್ನು ನಾನು ನನ್ನ ಅಂಗೈಗಳಲ್ಲಿ ಕೆತ್ತಿರುತ್ತೇನೆ.
    ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇನೆ.
17 ನಿನ್ನ ಮಕ್ಕಳು ನಿನ್ನ ಬಳಿಗೆ ಹಿಂದಿರುಗಿ ಬರುವರು.
    ಜನರು ನಿಮ್ಮನ್ನು ಸೋಲಿಸಿದರೂ ಅವರು ನಿಮ್ಮನ್ನು ನಿಮ್ಮಷ್ಟಕ್ಕೆ ಬಿಡುವರು.”
18 ಮೇಲಕ್ಕೆ ನೋಡು! ನಿನ್ನ ಸುತ್ತಲೂ ನೋಡು!
    ನಿನ್ನ ಮಕ್ಕಳೆಲ್ಲಾ ಒಟ್ಟಾಗಿ ಸೇರಿ ನಿನ್ನ ಬಳಿಗೆ ಬರುತ್ತಿದ್ದಾರೆ.
ಯೆಹೋವನು ಹೇಳುವುದೇನೆಂದರೆ,
“ನನ್ನ ಜೀವದಾಣೆ,
    ನಿನ್ನ ಮಕ್ಕಳು ನೀನು ಕೊರಳಲ್ಲಿ ಧರಿಸುವ ಹಾರದಂತಿರುವರು.
    ಮದುಮಗಳು ಧರಿಸುವ ಕಂಠಹಾರದಂತೆ ನಿನ್ನ ಮಕ್ಕಳಿರುವರು.

19 “ಈಗ ನೀನು ಸೋತವಳೂ ನಾಶವಾದವಳೂ ಆಗಿರುವಿ.
    ನಿನ್ನ ಭೂಮಿಯು ನಿಷ್ಪ್ರಯೋಜಕವಾಗಿದೆ.
ಆದರೆ ಸ್ವಲ್ಪ ಸಮಯದ ನಂತರ ನಿನ್ನ ದೇಶವು ಜನರಿಂದ ತುಂಬುವದು.
    ನಿನ್ನನ್ನು ನಾಶಮಾಡಿದವರು ಬಹುದೂರ ಹೋಗುವರು.
20 ಕಳೆದುಹೋದ ನಿನ್ನ ಮಕ್ಕಳಿಗಾಗಿ ನೀನು ವ್ಯಸನವಾಗಿದ್ದಿ.
    ಆದರೆ ಆ ಮಕ್ಕಳು, ‘ಈ ದೇಶವು ನಮಗೆ ಸಾಲುವದಿಲ್ಲ.
    ಇದಕ್ಕಿಂತ ದೊಡ್ಡ ದೇಶ ನಮಗೆ ಕೊಡು’ ಎಂದು ಕೇಳುವರು.
21 ಆಗ ನೀನು ನಿನ್ನ ಮನಸ್ಸಿನೊಳಗೆ, ‘ಈ ಮಕ್ಕಳನ್ನೆಲ್ಲಾ ನನಗೆ ಯಾರು ಕೊಟ್ಟರು?
    ಇದು ಸಂತಸದ ಸಂಗತಿ! ನಾನು ಒಬ್ಬಂಟಿಗಳಾಗಿ ದುಃಖಿಸುತ್ತಿದ್ದೆನು.
ನಾನು ಸೋಲಲ್ಪಟ್ಟವಳಾಗಿ ನನ್ನ ಜನರಿಂದ ದೂರವಿದ್ದೆನು.
    ಹೀಗಿರುವಾಗ ಈ ಮಕ್ಕಳನ್ನೆಲ್ಲಾ ಯಾರು ಕೊಟ್ಟರು?
ನಾನು ಒಬ್ಬಂಟಿಗಳಾಗಿ ಇದ್ದೆನಲ್ಲಾ!
    ಇಷ್ಟೆಲ್ಲಾ ಮಕ್ಕಳನ್ನು ನನಗೆ ಕೊಟ್ಟವರು ಯಾರು?’” ಎಂದು ಅಂದುಕೊಳ್ಳುವಿ.

22 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ,
“ನಾನು ಜನಾಂಗಗಳಿಗೆ ಕೈಬೀಸಿ ಸನ್ನೆ ಮಾಡುವೆನು.
    ಎಲ್ಲಾ ಜನರು ನೋಡುವಂತೆ ನಾನು ನನ್ನ ಧ್ವಜವನ್ನು ಎತ್ತುವೆನು.
ಆಗ ಅವರು ನಿನ್ನ ಮಕ್ಕಳನ್ನು ನಿನಗೆ ತಂದೊಪ್ಪಿಸುವರು.
    ಅವರು ನಿನ್ನ ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ತರುವರು.
    ತಮ್ಮ ಕೈಗಳಲ್ಲಿ ಅವರನ್ನು ಎತ್ತಿಕೊಂಡು ಬರುವರು.
23 ನಿನ್ನ ಮಕ್ಕಳಿಗೆ ಅರಸರು ಉಪಾಧ್ಯಾಯರಾಗಿರುವರು.
    ರಾಜಪುತ್ರಿಯರು ನಿನ್ನ ಮಕ್ಕಳನ್ನು ನೋಡಿಕೊಳ್ಳುವರು.
ಆ ಅರಸರೂ ರಾಜಪುತ್ರಿಯರೂ ನಿನಗೆ ಅಡ್ಡಬೀಳುವರು.
    ನಿನ್ನ ಕಾಲಿನ ಧೂಳಿಗೆ ಮುತ್ತು ಕೊಡುವರು.
ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವಿ.
    ನನ್ನ ಮೇಲೆ ಭರವಸವಿಡುವವನು ಆಶಾಭಂಗಪಡನು ಎಂದು ಆಗ ನೀನು ತಿಳಿದುಕೊಳ್ಳುವಿ.”

24 ಯುದ್ಧವೀರನು ಯುದ್ಧದಲ್ಲಿ ಕೊಳ್ಳೆಹೊಡೆದದ್ದನ್ನು
    ನೀನು ಅವನಿಂದ ಕಿತ್ತುಕೊಳ್ಳಲಾರೆ.
ಬಲಿಷ್ಠ ಸೈನಿಕನು ಯುದ್ಧ ಕೈದಿಯನ್ನು ಕಾವಲು ಕಾಯುವಾಗ
    ಆ ಕೈದಿಯು ತಪ್ಪಿಸಿಕೊಳ್ಳಲಾರನು.
25 ಆದರೆ ಯೆಹೋವನು ಹೇಳುವುದೇನೆಂದರೆ,
“ಕೈದಿಗಳು ತಪ್ಪಿಸಿಕೊಳ್ಳುವರು.
    ಬಲಿಷ್ಠ ಸೈನಿಕನಿಂದ ಯಾರೋ ಒಬ್ಬನು ಕೈದಿಯನ್ನು ಬಿಡಿಸಿಕೊಳ್ಳುವನು. ಇದು ಹೇಗೆ ಸಾಧ್ಯ?
ಹೇಗೆಂದರೆ, ನಾನೇ ನಿನ್ನ ಬದಲಾಗಿ ಯುದ್ಧ ಮಾಡುವೆನು;
    ನಿನ್ನ ಮಕ್ಕಳನ್ನು ರಕ್ಷಿಸುವೆನು.
26 ನಿನ್ನನ್ನು ಹಿಂಸಿಸುವವರು
    ತಮ್ಮ ದೇಹದ ಮಾಂಸವನ್ನೇ ತಿನ್ನುವಂತೆ ಮಾಡುವೆನು;
    ದ್ರಾಕ್ಷಾರಸವನ್ನು ಕುಡಿಯುವಂತೆ ತಮ್ಮ ಸ್ವಂತ ರಕ್ತವನ್ನೇ ಕುಡಿಸಿ ಅಮಲೇರಿಸುವೆನು;
ಆಗ ಯೆಹೋವನೇ ನಿನ್ನನ್ನು ರಕ್ಷಿಸಿದನೆಂದು ಜನರೆಲ್ಲರೂ ತಿಳಿದುಕೊಳ್ಳುವರು.
    ಯಾಕೋಬ್ಯರ ಸರ್ವಶಕ್ತನಾದ ದೇವರು ನಿಮ್ಮನ್ನು ರಕ್ಷಿಸಿದನೆಂದು ಎಲ್ಲರೂ ತಿಳಿಯುವರು.”

1 ಥೆಸಲೋನಿಕದವರಿಗೆ 4

ದೇವರನ್ನು ಹರ್ಷಗೊಳಿಸುವ ಜೀವನ

ಸಹೋದರ ಸಹೋದರಿಯರೇ, ಈಗ ನಿಮಗೆ ಇತರ ಕೆಲವು ವಿಚಾರಗಳನ್ನು ತಿಳಿಸುತ್ತೇನೆ. ದೇವರನ್ನು ಮೆಚ್ಚಿಸಲು ಹೇಗೆ ಜೀವಿಸಬೇಕೆಂದು ನಿಮಗೆ ಕಲಿಸಿದ್ದೇವೆ. ನೀವು ಅದೇ ರೀತಿಯಲ್ಲಿ ಜೀವಿಸುತ್ತಿರುವಿರಿ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸಮರ್ಪಕವಾಗಿ ಜೀವಿಸಬೇಕೆಂದು ನಾವು ನಿಮ್ಮನ್ನು ಕ್ರಿಸ್ತನಲ್ಲಿ ಕೇಳಿಕೊಳ್ಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. ನೀವು ಯಾವ ಕಾರ್ಯಗಳನ್ನು ಮಾಡಬೇಕೆಂದು ನಾವು ನಿಮಗೆ ಹೇಳಿದೆವೋ ಅವುಗಳೆಲ್ಲಾ ನಿಮಗೆ ತಿಳಿದೇ ಇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ಆ ಸಂಗತಿಗಳನ್ನು ನಿಮಗೆ ಹೇಳಿದೆವು. ನೀವು ಪವಿತ್ರರಾಗಿರಬೇಕೆಂಬುದು ದೇವರ ಚಿತ್ತವಾಗಿದೆ. ಆದುದರಿಂದ ನೀವು ಲೈಂಗಿಕ ಪಾಪಗಳಿಂದ ದೂರವಿರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ದೇವರ ಅಪೇಕ್ಷೆ. ನಿಮ್ಮ ದೇಹವನ್ನು ಪವಿತ್ರವಾದ ಮಾರ್ಗದಲ್ಲಿ ಬಳಸಿದರೆ, ದೇವರಿಗೆ ಗೌರವವನ್ನು ನೀಡಿದಂತಾಗುವುದು.[a] ನಿಮ್ಮ ದೇಹವನ್ನು ಲೈಂಗಿಕ ಪಾಪಗಳಿಗಾಗಿ ಬಳಸಬೇಡಿ. ದೇವರನ್ನು ತಿಳಿಯದ ಜನರು ತಮ್ಮ ದೇಹಗಳನ್ನು ಅದಕ್ಕೆ ಬಳಸುತ್ತಾರೆ. ಈ ವಿಷಯದಲ್ಲಿ ನಿಮ್ಮಲ್ಲಿ ಯಾರೂ ಕ್ರಿಸ್ತನಲ್ಲಿ ಸಹೋದರನಾದವನನ್ನು ವಂಚಿಸಿ ಕೇಡುಮಾಡಬಾರದು. ನಾವು ಈಗಾಗಲೇ ನಿಮಗೆ ಹೇಳಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಇವೆಲ್ಲವುಗಳ ವಿಷಯದಲ್ಲಿ ದೇವರು ದಂಡಿಸುತ್ತಾನೆ. ದೇವರು ನಮ್ಮನ್ನು ಪರಿಶುದ್ಧರಾಗಿ ಜೀವಿಸುವುದಕ್ಕೆ ಕರೆದಿದ್ದಾನೆ. ನಾವು ಪಾಪದಲ್ಲಿ ಜೀವಿಸಲು ಆತನು ಇಷ್ಟಪಡುವುದಿಲ್ಲ. ಆದುದರಿಂದ ಈ ಉಪದೇಶವನ್ನು ಅನುಸರಿಸದವನು ಅವಿಧೇಯನಾಗಿರುವುದು ದೇವರಿಗೇ ಹೊರತು ಮಾನವನಿಗಲ್ಲ. ನಮಗೆ ತನ್ನ ಪವಿತ್ರಾತ್ಮನನ್ನು ನೀಡಿದಾತನು ದೇವರೇ.

ಕ್ರಿಸ್ತನಲ್ಲಿ ಸಹೋದರ ಸಹೋದರಿಯರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಾವು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಬೇಕೆಂಬುದನ್ನು ಈಗಾಗಲೇ ದೇವರು ನಿಮಗೆ ಕಲಿಸಿದ್ದಾನೆ. 10 ಮಕೆದೋನಿಯದಲ್ಲಿರುವ ಸಹೋದರ ಸಹೋದರಿಯರನ್ನೆಲ್ಲ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ. ಅವರನ್ನು ಇನ್ನೂ ಹೆಚ್ಚೆಚ್ಚಾಗಿ ನೀವು ಪ್ರೀತಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

11 ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. 12 ನೀವು ಹೀಗೆ ಮಾಡಿದರೆ, ವಿಶ್ವಾಸಿಗಳಲ್ಲದವರು ನಿಮ್ಮ ಜೀವತದ ರೀತಿಯನ್ನು ಕಂಡು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೆ ನಿಮ್ಮ ಅಗತ್ಯತೆಗಳ ಪೂರೈಕೆಗಾಗಿ ನೀವು ಬೇರೆಯವರನ್ನು ಅವಲಂಬಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.

ಪ್ರಭುವಿನ ಬರುವಿಕೆ

13 ಸಹೋದರ ಸಹೋದರಿಯರೇ, ಸತ್ತುಹೋದ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬುದು ನಮ್ಮ ಅಪೇಕ್ಷೆ. ನಿರೀಕ್ಷೆಯಿಲ್ಲದ ಜನರಂತೆ ನೀವು ದುಃಖದಿಂದಿರುವುದು ನಮಗೆ ಇಷ್ಟವಿಲ್ಲ. 14 ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.

15 ಈಗ ನಾವು ನಿಮಗೆ ಹೇಳುತ್ತಿರುವುದು ಪ್ರಭುವಿನ ಸ್ವಂತ ಸಂದೇಶವನ್ನೇ. ಪ್ರಭುವು ಮತ್ತೆ ಬಂದಾಗ ಈಗ ಜೀವಿಸುತ್ತಿರುವ ನಾವು ಇನ್ನೂ ಜೀವದಿಂದ ಇದ್ದರೆ ನಾವು ಪ್ರಭುವಿನ ಜೊತೆಯಲ್ಲಿರುತ್ತೇವೆ. ಆದರೂ ಸತ್ತುಹೋದ ಇತರರಿಗಿಂತಲೂ ನಾವು ಮುಂದಿನವರಾಗುವುದಿಲ್ಲ. 16 ಪ್ರಭುವು ತಾನೇ ಪರಲೋಕದಿಂದ ಇಳಿದುಬರುವನು. ಆಗ ಪ್ರಧಾನ ದೇವದೂತನು ದೇವರ ತುತೂರಿ ಧ್ವನಿಯೊಡನೆ ಆಜ್ಞಾಘೋಷ ಮಾಡುವನು. ಕೂಡಲೇ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. 17 ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International