Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜ್ಞಾನೋಕ್ತಿಗಳು 25-26

ಸೊಲೊಮೋನನಿಂದ ಮತ್ತಷ್ಟು ಜ್ಞಾನೋಕ್ತಿಗಳು

25 ಇವು ಸಹ ಸೊಲೊಮೋನನು ಹೇಳಿದ ಜ್ಞಾನೋಕ್ತಿಗಳು. ಈ ನುಡಿಗಳನ್ನು ಯೆಹೂದದ ರಾಜನಾಗಿದ್ದ ಹಿಜ್ಕೀಯನ ಸೇವಕರು ನಕಲು ಮಾಡಿದರು:

ವಿಷಯಗಳನ್ನು ರಹಸ್ಯಗೊಳಿಸಿದ್ದರಿಂದ ದೇವರಿಗೆ ಸನ್ಮಾನ; ವಿಷಯಗಳನ್ನು ಕಂಡುಹಿಡಿಯುವುದರಿಂದ ರಾಜನಿಗೆ ಸನ್ಮಾನ.

ಆಕಾಶದ ಎತ್ತರವನ್ನಾಗಲಿ ಭೂಮಿಯ ಆಳವನ್ನಾಗಲಿ ಅಳೆಯಲು ಯಾರಿಗೆ ಸಾಧ್ಯ? ಅಂತೆಯೇ ರಾಜರುಗಳ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು.

ನೀನು ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿ ಶುದ್ಧಗೊಳಿಸಿದರೆ, ಅಕ್ಕಸಾಲಿಗನು ಅದರಿಂದ ಸುಂದರವಾದ ವಸ್ತುಗಳನ್ನು ಮಾಡಬಲ್ಲನು. ಅಂತೆಯೇ, ರಾಜನಿಂದ ಕೆಟ್ಟ ಆಲೋಚನೆಗಾರರನ್ನು ತೆಗೆದುಹಾಕಿದರೆ, ಒಳ್ಳೆಯತನವು ಅವನ ಆಡಳಿತವನ್ನು ಭದ್ರಗೊಳಿಸುತ್ತದೆ.

ರಾಜನ ಮುಂದೆ ಜಂಬಕೊಚ್ಚಿಕೊಳ್ಳಬೇಡ. ಪ್ರಮುಖರ ಸ್ಥಳದಲ್ಲಿ ನಿಂತುಕೊಳ್ಳಬೇಡ. ಗಣ್ಯರ ಮುಂದೆ ಅವಮಾನಿತನಾಗುವುದಕ್ಕಿಂತ, “ಮೇಲಕ್ಕೆ ಬಾ” ಎಂದು ಹೇಳಿಸಿಕೊಳ್ಳುವುದೇ ಉತ್ತಮ.

ನೀನು ಕಂಡ ಯಾವುದನ್ನಾದರೂ ನ್ಯಾಯಾಧೀಶನಿಗೆ ತಿಳಿಸಲು ಆತುರಪಡಬೇಡ. ನೀನು ತಪ್ಪಿತಸ್ಥನೆಂದು ಬೇರೊಬ್ಬನು ಹೇಳಿದರೆ, ನಿನಗೆ ಅವಮಾನವಾಗುವುದು.

ನೀನು ನಿನ್ನ ನೆರೆಯವನೊಂದಿಗೆ ವಾಗ್ವಾದ ಮಾಡಿದ್ದರೆ, ಗುಟ್ಟಾದ ವಿಷಯಗಳನ್ನು ಬೇರೊಬ್ಬನಿಗೆ ಪ್ರಕಟಿಸಬೇಡ. 10 ಇಲ್ಲವಾದರೆ ಅದನ್ನು ಕೇಳಿದವರೆಲ್ಲರೂ ನಿನ್ನನ್ನು ಖಂಡಿಸುವರು; ಆ ಕೆಟ್ಟ ಹೆಸರು ನಿನ್ನನ್ನೆಂದಿಗೂ ಬಿಟ್ಟುಹೋಗದು.

11 ನೀನು ಸರಿಸಮಯದಲ್ಲಿ ಒಳ್ಳೆಯದನ್ನು ಹೇಳಿದರೆ, ಅದು ಬೆಳ್ಳಿಯ ತಟ್ಟೆಯಲ್ಲಿರುವ ಚಿನ್ನದ ಸೇಬಿನಂತಿರುವುದು. 12 ಜ್ಞಾನಿಯು ನಿನಗೆ ಕೊಡುವ ಎಚ್ಚರಿಕೆಯು ಚಿನ್ನದ ಉಂಗುರಗಳಿಗಿಂತಲೂ ಬಂಗಾರದ ಆಭರಣಗಳಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ.

13 ನಂಬಿಗಸ್ತನಾದ ಸಂದೇಶಕನಿಂದ ಯಜಮಾನನಿಗೆ ಉಲ್ಲಾಸ. ಅವನು ಸುಗ್ಗೀಕಾಲದ ಬಿಸಿಲಿನ ದಿನಗಳಲ್ಲಿರುವ ತಣ್ಣನೆಯ ಹಿಮದಂತಿರುವನು.

14 ದಾನ ಮಾಡುವುದಾಗಿ ಹೇಳಿಯೂ ಮಾಡದವರು ಮಳೆಯನ್ನು ತಾರದ ಮೋಡಗಳಂತೆಯೂ ಗಾಳಿಯಂತೆಯೂ ಇರುವರು.

15 ತಾಳ್ಮೆಯು ಅಧಿಪತಿಯನ್ನು ಸಹ ಮನವೊಪ್ಪಿಸುವುದು. ನಯವಾದ ಮಾತಿಗೆ ಬಹುಬಲ.

16 ಜೇನುತುಪ್ಪ ಒಳ್ಳೆಯದು. ಆದರೆ ಅತಿಯಾಗಿ ತಿನ್ನಬೇಡ. ಇಲ್ಲವಾದರೆ, ಕಾಯಿಲೆಬೀಳುವೆ. 17 ಅಂತೆಯೇ, ನಿನ್ನ ನೆರೆಯವನ ಮನೆಗೆ ಪದೇಪದೇ ಹೋಗಬೇಡ. ನೀನು ಹೋದರೆ, ಅವನು ನಿನ್ನ ಮೇಲೆ ಬೇಸರಗೊಳ್ಳುವನು.

18 ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಅಪಾಯಕಾರಿ. ಅವನು ದೊಣ್ಣೆಯಂತೆಯೂ ಕತ್ತಿಯಂತೆಯೂ ಚೂಪಾದ ಬಾಣದಂತೆಯೂ ಇದ್ದಾನೆ. 19 ಕಷ್ಟಕಾಲಗಳಲ್ಲಿ ಅಪನಂಬಿಗಸ್ತನನ್ನು ಆಶ್ರಯಿಸಿಕೊಳ್ಳುವುದು ಮುರುಕು ಹಲ್ಲಿನಿಂದ ತಿನ್ನುವಂತೆಯೂ ಕುಂಟುಕಾಲಿನಿಂದ ನಡೆಯುವಂತೆಯೂ ಇದೆ.

20 ವ್ಯಸನದಿಂದಿರುವವನಿಗೆ ಸಂತಸದ ಗೀತೆಗಳನ್ನು ಹಾಡಿದರೆ ಚಳಿಯಲ್ಲಿರುವವನ ಬಟ್ಟೆಯನ್ನು ತೆಗೆದುಹಾಕಿದಂತೆಯೂ ಗಾಯದ ಮೇಲೆ ಹುಳಿರಸವನ್ನು ಸುರಿದಂತೆಯೂ ಇರುವುದು.

21 ನಿನ್ನ ವೈರಿ ಹಸಿವೆಗೊಂಡಿದ್ದರೆ, ಅವನಿಗೆ ಊಟಕೊಡು. ನಿನ್ನ ವೈರಿ ಬಾಯಾರಿದ್ದರೆ, ಅವನಿಗೆ ನೀರು ಕೊಡು. 22 ಆಗ, ಉರಿಯುವ ಕೆಂಡಗಳನ್ನು ಅವನ ತಲೆಯ ಮೇಲೆ ಇಟ್ಟಂತಾಗುವುದು. ಯೋಹೋವನು ನಿನಗೆ ಅದರ ಪ್ರತಿಫಲವನ್ನು ಕೊಡುವನು.

23 ಉತ್ತರದಿಕ್ಕಿನಿಂದ ಬೀಸುವ ಗಾಳಿ ಮಳೆಯನ್ನು ತರುವುದು. ಅಂತೆಯೇ ಚಾಡಿಮಾತು ಕೋಪಕ್ಕೆ ಕಾರಣ.

24 ವಾದಿಸುವ ಹೆಂಡತಿಯೊಡನೆ ಮನೆಯಲ್ಲಿ ಇರುವುದಕ್ಕಿಂತ ಮೇಲ್ಛಾವಣಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಮೇಲು.

25 ಬಹುದೂರದ ಒಳ್ಳೆಯ ಸುದ್ದಿಯು ಬಾಯಾರಿದವನಿಗೆ ಕೊಟ್ಟ ತಣ್ಣನೆ ನೀರಿನಂತಿರುವುದು.

26 ದುಷ್ಟನು ಒಳ್ಳೆಯವನಿಗೆ ಆಪತ್ತನ್ನು ಬರಮಾಡಿದರೆ, ಅದು ಚಿಲುಮೆಗೆ ಮಣ್ಣುಹಾಕಿದಂತೆಯೂ ಒರತೆಯನ್ನು ಹೊಲಸು ಮಾಡಿದಂತೆಯೂ ಇದೆ.

27 ಜೇನುತುಪ್ಪವನ್ನು ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಅಂತೆಯೇ, ನಿನಗೋಸ್ಕರ ಅತಿಯಾಗಿ ಸನ್ಮಾನವನ್ನು ಬಯಸಬೇಡ.

28 ತನ್ನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾರದವನು ಕೋಟೆ ಬಿದ್ದುಹೋದ ಪಟ್ಟಣದಂತಿರುವನು.

ಮೂಢರ ಬಗ್ಗೆ ಜ್ಞಾನದ ನುಡಿಗಳು

26 ಮೂಢನನ್ನು ಗೌರವಿಸುವುದು ಸರಿಯಲ್ಲ. ಅದು ಬೇಸಿಗೆಕಾಲದಲ್ಲಿ ಬೀಳುವ ಹಿಮದಂತೆಯೂ ಸುಗ್ಗೀಕಾಲದಲ್ಲಿ ಬೀಳುವ ಮಳೆಯಂತೆಯೂ ಇದೆ.

ಅಯೋಗ್ಯವಾದ ಶಾಪ ನಿರಪರಾಧಿಗೆ ತಟ್ಟುವುದಿಲ್ಲ. ಆ ಶಾಪದ ಮಾತುಗಳು ಹಾರಿಹೋಗಿ ಎಂದೂ ಕೆಳಗಿಳಿಯದ ಪಕ್ಷಿಗಳಂತಿವೆ.

ಕುದುರೆಗೆ ಚಬುಕಬೇಕು. ಹೇಸರಕತ್ತೆಗೆ ಕಡಿವಾಣಬೇಕು. ಮೂಢನಿಗೆ ಹೊಡೆತಬೇಕು.

ಮೂಢನಿಗೆ ಅವನ ಮೂರ್ಖತನದ ಮಟ್ಟದಲ್ಲಿ ಉತ್ತರ ಕೊಡಬೇಡ; ಇಲ್ಲವಾದರೆ ನೀನೂ ಅವನಂತಾಗುವೆ.

ಮೂಢನಿಗೆ ಅವನ ಮೂಢತನದ ಮಟ್ಟದಲ್ಲಿ ಉತ್ತರಿಸು; ಇಲ್ಲವಾದರೆ ಅವನು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಳ್ಳುವನು.

ನಿನ್ನ ಸಂದೇಶವನ್ನು ಮೂಢನ ಮೂಲಕ ಎಂದಿಗೂ ಕಳುಹಿಸಿಕೊಡಬೇಡ. ಅದು ನಿನ್ನ ಸ್ವಂತ ಕಾಲನ್ನೇ ಕತ್ತರಿಸಿಕೊಂಡಂತಿರುವುದು; ನೀನೇ ಕೇಡಿಗಾಗಿ ಕೇಳಿಕೊಂಡಂತಾಗುವುದು.

ಮೂಢನು ಜ್ಞಾನದ ಮಾತನ್ನು ಹೇಳಲು ಮಾಡುವ ಪ್ರಯತ್ನವು ಕುಂಟನು ನಡೆಯಲು ಮಾಡುವ ಪ್ರಯತ್ನದಂತಿದೆ.

ಮೂಢನಿಗೆ ತೋರುವ ಗೌರವ, ಕವಣೆಯಲ್ಲಿರುವ ಕಲ್ಲಿನಷ್ಟೇ ಕೆಟ್ಟದ್ದು.

ಮೂಢನು ಜ್ಞಾನೋಕ್ತಿಯನ್ನು ಬಳಸಲು ಮಾಡುವ ಪ್ರಯತ್ನವು ಕುಡುಕನೊಬ್ಬನು ಮುಳ್ಳುಕೊಂಬೆಯೊಂದನ್ನು ತನ್ನ ಕೈಯಲ್ಲಿ ಝಳಪಿಸುವಂತಿರುವುದು.

10 ಮೂಢನನ್ನಾಗಲಿ ಕುಡುಕನನ್ನಾಗಲಿ ಕೂಲಿಗೆ ನೇಮಿಸಿಕೊಳ್ಳುವವನು ಹಾದುಹೋಗುವವರಿಗೆಲ್ಲ ಗಾಯ ಮಾಡುವ ಬಿಲ್ಲುಗಾರನಂತಿರುವನು.

11 ನಾಯಿ ತಾನು ಕಕ್ಕಿದ್ದನ್ನೇ ನೆಕ್ಕಲು ಹಿಂತಿರುಗುವಂತೆ ಮೂಢನು ತನ್ನ ಮೂಢತನವನ್ನು ಪದೇಪದೇ ಮಾಡುವನು.

12 ಅಜ್ಞಾನಿಯು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಂಡರೆ ಅವನು ಮೂಢನಿಗಿಂತಲೂ ಕೀಳಾದವನು.

13 “ನಾನು ನನ್ನ ಮನೆಯಿಂದ ಹೊರಗೆ ಹೋಗಲಾರೆ. ಬೀದಿಯಲ್ಲಿ ಸಿಂಹವಿದೆ” ಎನ್ನುತ್ತಾನೆ ಸೋಮಾರಿ.

14 ಬಾಗಿಲು ತಿರುಗುಣಿಯ ಮೇಲೆ ಸುತ್ತುವಂತೆ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುವನು.

15 ಸೋಮಾರಿಯು ತಟ್ಟೆಯಲ್ಲಿರುವ ಊಟವನ್ನು ತಿನ್ನುವುದಕ್ಕೂ ಬಹು ಆಯಾಸಪಡುವನು.

16 ತಮ್ಮ ಆಲೋಚನೆಗಳಿಗೆ ಒಳ್ಳೆಯ ಕಾರಣಗಳನ್ನು ಕೊಡುವ ಏಳು ಜನರಿಗಿಂತಲೂ ತಾನು ಜ್ಞಾನಿಯೆಂದು ಸೋಮಾರಿಯು ಭಾವಿಸುವನು.

17 ಬೇರೆಯವರ ವಾಗ್ವಾದದಲ್ಲಿ ಮಧ್ಯೆ ಪ್ರವೇಶಿಸಲು ಮಾಡುವ ಪ್ರಯತ್ನ ಹಾದಿಯಲ್ಲಿ ಹೋಗುತ್ತಿರುವ ನಾಯಿಯ ಕಿವಿಗಳನ್ನು ಹಿಡಿದುಕೊಳ್ಳುವಷ್ಟೇ ಅಪಾಯಕರ.

18-19 ಮತ್ತೊಬ್ಬನನ್ನು ಮೋಸಗೊಳಿಸಿ ತಾನು ಕೇವಲ ತಮಾಷೆಮಾಡಿದ್ದಾಗಿ ಹೇಳುವವನು ಉರಿಯುವ ಬಾಣಗಳನ್ನು ಆಕಾಶದ ಕಡೆಗೆ ಎಸೆದು ಬೇರೊಬ್ಬನನ್ನು ಆಕಸ್ಮಿಕವಾಗಿ ಕೊಲ್ಲುವ ಹುಚ್ಚನಂತಿರುವನು.

20 ಸೌದೆ ಇಲ್ಲದಿದ್ದರೆ ಬೆಂಕಿಯು ಆರಿಹೋಗುವುದು. ಅಂತೆಯೇ ಹುರುಳಿಲ್ಲದ ವಾಗ್ವಾದ ನಿಂತುಹೋಗುವುದು.

21 ಕೆಂಡದಿಂದ ಕಲ್ಲಿದ್ದಲು ಉರಿಯುತ್ತದೆ; ಸೌದೆಯಿಂದ ಬೆಂಕಿ ಉರಿಯುತ್ತದೆ; ಅಂತೆಯೇ ಜಗಳಗಂಟರು ವಾಗ್ವಾದವನ್ನು ಮುಂದುವರಿಸುವರು.

22 ಹರಟೆಮಾತು ಜನರಿಗೆ ಪ್ರಿಯ. ಅವರಿಗೆ ಅದು ಒಳ್ಳೆಯ ಆಹಾರವನ್ನು ತಿಂದಂತಿರುವುದು.

23 ಕೆಟ್ಟ ಆಲೋಚನೆಯನ್ನು ಅಡಗಿಸಿಡುವ ಕನಿಕರದ ಮಾತುಗಳು ಕಡಿಮೆ ಬೆಲೆಯ ಮಡಿಕೆಯ ಮೇಲಿನ ಬೆಳ್ಳಿಯ ಲೇಪನದಂತಿವೆ. 24 ಕೆಡುಕನು ತಾನು ಹೇಳುವ ಸಂಗತಿಗಳ ಮೂಲಕ ತನ್ನನ್ನು ಒಳ್ಳೆಯವನನ್ನಾಗಿ ತೋರಿಸಿಕೊಳ್ಳುವನು. ಆದರೆ ಅವನು ತನ್ನ ಕೆಟ್ಟ ಆಲೋಚನೆಗಳನ್ನು ತನ್ನ ಹೃದಯದಲ್ಲಿ ಅಡಗಿಸಿಕೊಳ್ಳುವನು. 25 ಅವನು ಹೇಳುವ ಸಂಗತಿಗಳು ಒಳ್ಳೆಯದಾಗಿ ಕಂಡರೂ ಅವನನ್ನು ನಂಬಬೇಡಿ. ಅವನ ಹೃದಯವು ಕೆಟ್ಟ ಆಲೋಚನೆಗಳಿಂದ ತುಂಬಿದೆ. 26 ದ್ವೇಷವು ತನ್ನನ್ನು ಮೋಸದಿಂದ ಮರೆಮಾಡಿಕೊಳ್ಳುತ್ತದೆ. ಆದರೆ ಅವನು ಕೀಳಾದವನು; ಕೊನೆಯಲ್ಲಿ, ಅವನ ಕೆಟ್ಟಕಾರ್ಯಗಳನ್ನು ಜನರೆಲ್ಲರೂ ನೋಡುವರು.

27 ಮತ್ತೊಬ್ಬನಿಗೆ ಬಲೆಹಾಕುವವನು ತನಗೇ ಬಲೆಹಾಕಿಕೊಳ್ಳುವನು. ಮತ್ತೊಬ್ಬನ ಮೇಲೆ ಬಂಡೆ ಉರುಳಿಸಲು ಪ್ರಯತ್ನಿಸುವವನು ಅದರಿಂದಲೇ ಜಜ್ಜಲ್ಪಡುವನು.

28 ಸುಳ್ಳುಗಾರನು ತಾನು ಕೇಡುಮಾಡಲಿರುವ ಜನರನ್ನು ದ್ವೇಷಿಸುವನು. ಕಪಟದ ಸಂಗತಿಗಳನ್ನು ಹೇಳುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.

2 ಕೊರಿಂಥದವರಿಗೆ 9

ಕ್ರೈಸ್ತರಿಗೆ ಸಹಾಯ ಮಾಡಿರಿ

ದೇವಜನರಿಗೋಸ್ಕರವಾದ ಈ ಸಹಾಯದ ಬಗ್ಗೆ ನಾನು ನಿಮಗೆ ಬರೆಯುವುದು ನಿಜವಾಗಿಯೂ ಅಗತ್ಯವಿಲ್ಲ. ಸಹಾಯ ಮಾಡಬೇಕೆಂಬ ಬಯಕೆಯು ನಿಮಗಿದೆಯೆಂದು ನನಗೆ ಗೊತ್ತಿದೆ. ಮಕೆದೋನಿಯದಲ್ಲಿ ಜನರಿಗೆ ನಿಮ್ಮ ಈ ವಿಷಯದಲ್ಲಿ ಹೆಮ್ಮೆಯಿಂದ ಹೇಳುತ್ತಲೇ ಇದ್ದೇನೆ. ಅಖಾಯದಲ್ಲಿರುವ ನೀವು ಕಳೆದ ವರ್ಷದಿಂದಲೂ ಕೊಡಲು ಸಿದ್ಧರಾಗಿದ್ದೀರೆಂದು ಅವರಿಗೆ ಹೇಳಿದೆನು. ನಿಮ್ಮಲ್ಲಿರುವ ಕೊಡಬೇಕೆಂಬ ಬಯಕೆಯು ಇಲ್ಲಿರುವ ಅನೇಕ ಜನರಲ್ಲಿ ಕೊಡಬೇಕೆಂಬ ಬಯಕೆಯನ್ನು ಉಂಟುಮಾಡಿದೆ. ನಾನು ಸಹೋದರರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ. ನಿಮ್ಮ ಬಗ್ಗೆ ಈ ವಿಷಯದಲ್ಲಿ ಹೊಗಳಿದ್ದು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನಾನು ಹೇಳಿಕೊಂಡಂತೆ ನೀವು ಸಿದ್ಧರಾಗಿರಬೇಕೆಂದು ಆಶಿಸುತ್ತೇನೆ. ಒಂದುವೇಳೆ ಮಕೆದೋನಿಯದ ಜನರಲ್ಲಿ ಯಾರಾದರೂ ನನ್ನೊಂದಿಗೆ ಬಂದಾಗ ನೀವು ಸಿದ್ಧರಾಗಿಲ್ಲದಿದ್ದರೆ ನಾವು ನಾಚಿಕೆಗೆ ಗುರಿಯಾಗುತ್ತೇವೆ. ನಿಮ್ಮ ವಿಷಯದಲ್ಲಿ ನಾವು ಬಹಳ ಭರವಸೆ ಇಟ್ಟಿದ್ದರಿಂದ ನಾವು ನಾಚಿಕೆಗೆ ಗುರಿಯಾಗುವೆವು (ಮತ್ತು ನೀವೂ ಸಹ ನಾಚಿಕೆಗೆ ಗುರಿಯಾಗುವಿರಿ.) ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.

ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಸ್ವಲ್ಪ ಬಿತ್ತುವವನು ಕೇವಲ ಸ್ವಲ್ಪವನ್ನೇ ಕೊಯ್ಯುವನು, ಆದರೆ ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಎಷ್ಟನ್ನು ನಿರ್ಧರಿಸಿಕೊಂಡಿದ್ದಾನೋ ಅಷ್ಟನ್ನೇ ಕೊಡಬೇಕು. ಯಾವನೂ ದುಃಖದಿಂದ ಕೊಡಬಾರದು. ಅಲ್ಲದೆ ಯಾವನೂ ಒತ್ತಾಯದ ದೆಸೆಯಿಂದ ಕೊಡಬಾರದು. ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ. ಮತ್ತು ನಿಮಗೆ ಅಗತ್ಯವಾದದ್ದಕ್ಕಿಂತಲೂ ಹೆಚ್ಚು ಆಶೀರ್ವಾದಗಳನ್ನು ದೇವರು ಕೊಡಬಲ್ಲನು. ಆಗ ನಿಮ್ಮಲ್ಲಿ ನಿಮಗೆ ಅಗತ್ಯವಾದ ಪ್ರತಿಯೊಂದೂ ಯಾವಾಗಲೂ ಇರುವುದು. ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಕೊಡಲು ನಿಮ್ಮಲ್ಲಿ ಸಾಕಷ್ಟು ಇರುವುದು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:

“ಆತನು ಬಡವರಿಗೆ ಉದಾರವಾಗಿ ಕೊಡುವನು;
    ಆತನ ಕರುಣೆಯು ಶಾಶ್ವತವಾಗಿರುವುದು.”(A)

10 ಬಿತ್ತುವವನಿಗೆ ಬೀಜವನ್ನು ಕೊಡುವವನು ದೇವರೇ. ಆತನು ಆಹಾರಕ್ಕಾಗಿ ರೊಟ್ಟಿಯನ್ನು ಕೊಡುವನು. ಅಂತೆಯೇ, ದೇವರು ಆತ್ಮಿಕ ಬೀಜವನ್ನು ಕೊಡುವನು ಮತ್ತು ನಿಮ್ಮ ಬೀಜವನ್ನು ಬೆಳೆಯಮಾಡುವನು. ನಿಮ್ಮ ಒಳ್ಳೆಯ ಕ್ರಿಯೆಯಿಂದ ಆತನು ಮಹಾ ಸುಗ್ಗಿಯನ್ನು ಉಂಟುಮಾಡುವನು. 11 ಯಾವಾಗಲೂ ಉದಾರವಾಗಿ ಕೊಡಬೇಕೆಂದು ದೇವರು ನಿಮ್ಮನ್ನು ಪ್ರತಿಯೊಂದು ವಿಷಯದಲ್ಲಿಯೂ ಶ್ರೀಮಂತರನ್ನಾಗಿ ಮಾಡುವನು. ನಮ್ಮ ಮೂಲಕವಾಗಿ ನೀವು ಕೊಡುವ ಸಹಾಯಧನದ ನಿಮಿತ್ತ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.

12 ನೀವು ಮಾಡುವ ಈ ಸೇವಾಕಾರ್ಯದಿಂದ ಕೊರತೆಯಲ್ಲಿರುವ ದೇವಜನರಿಗೆ ಸಹಾಯವಾಗುವುದು. ಅಷ್ಟು ಮಾತ್ರವೇ ಅಲ್ಲ, ಇದರಿಂದಾಗಿ ದೇವರಿಗೆ ಹೆಚ್ಚುಹೆಚ್ಚಾಗಿ ಕೃತಜ್ಞತಾಸ್ತುತಿ ಉಂಟಾಗುವುದು. 13 ನೀವು ಮಾಡುವ ಈ ಸೇವಾಕಾರ್ಯವು ನಿಮ್ಮ ನಂಬಿಕೆಗೆ ಸಾಕ್ಷಿಯಾಗಿದೆ. ಇದರ ನಿಮಿತ್ತವಾಗಿ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಕ್ರಿಸ್ತನ ಸುವಾರ್ತೆಯನ್ನು ಅನುಸರಿಸುವುದರಿಂದ ಅವರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಹೇಳುವ ಸುವಾರ್ತೆಯನ್ನು ನೀವು ನಂಬಿದ್ದೀರಿ. ತಮ್ಮೊಂದಿಗೆ ಮತ್ತು ಎಲ್ಲರೊಂದಿಗೆ ನೀವು ಉದಾರವಾಗಿ ಹಂಚಿಕೊಂಡಿದ್ದರಿಂದ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. 14 ಇದಲ್ಲದೆ ಆ ಜನರು ಪ್ರಾರ್ಥಿಸುವಾಗ ತಾವು ನಿಮ್ಮೊಂದಿಗೆ ಇರಬೇಕಾಗಿತ್ತೆಂದು ಆಶಿಸುವರು. ದೇವರ ಅತಿಶಯವಾದ ಕೃಪೆಯು ನಿಮ್ಮಲ್ಲಿರುವುದೇ ಅದಕ್ಕೆ ಕಾರಣ. 15 ವರ್ಣಿಸಲಸಾಧ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರವಾಗಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International