Old/New Testament
ಯೋಬನು ತನ್ನ ಜನ್ಮದಿನವನ್ನು ಶಪಿಸುವನು
3 ಬಳಿಕ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ ಹೀಗೆಂದನು:
2 “ನಾನು ಹುಟ್ಟಿದ ದಿನವು ಹಾಳಾಗಲಿ,
3 ‘ಗಂಡು ಮಗುವು ಗರ್ಭಧರಿಸಿತು’ ಎಂದು ಹೇಳಿದ ಆ ರಾತ್ರಿಯು ನಾಶವಾಗಲಿ.
4 ಆ ದಿನವು ಕತ್ತಲೆಯಾಗಲಿ.
ಆ ದಿನದ ಬಗ್ಗೆ ಮೇಲಿನ ಲೋಕದ ದೇವರು ಯೋಚಿಸದಿರಲಿ.
ಆ ದಿನದ ಮೇಲೆ ಬೆಳಕು ಬೆಳಗದಿರಲಿ.
5 ಆ ದಿನವನ್ನು ಕತ್ತಲೆಯೂ ಮರಣದ ನೆರಳೂ ವಶಪಡಿಸಿಕೊಳ್ಳಲಿ.
ಆ ದಿನವನ್ನು ಮೋಡವು ಕವಿದುಕೊಳ್ಳಲಿ.
ನಾನು ಹುಟ್ಟಿದ ದಿನದ ಹಗಲನ್ನು ಗ್ರಹಣಗಳು ಭಯಪಡಿಸಲಿ.
6 ಕಾರ್ಗತ್ತಲೆಯು ಆ ರಾತ್ರಿಯನ್ನು ಆವರಿಸಿಕೊಳ್ಳಲಿ.
ಆ ರಾತ್ರಿಯು ವರ್ಷದ ದಿನಗಳಲ್ಲಿ ಒಂದು ದಿನವೆಂದು ಲೆಕ್ಕಿಸಲ್ಪಡದಿರಲಿ;
ಅದು ಯಾವ ತಿಂಗಳುಗಳಲ್ಲೂ ಸೇರಿಸಲ್ಪಡದಿರಲಿ.
7 ಆ ರಾತ್ರಿಯು ಬಂಜೆಯಾಗಲಿ;
ಅದರಲ್ಲಿ ಯಾವ ಉತ್ಸಾಹಧ್ವನಿಯೂ ಕೇಳದಿರಲಿ.
8 ಲಿವ್ಯಾತಾನನನ್ನು ಎಬ್ಬಿಸಬಲ್ಲ ಹಾಗೂ ದಿನಗಳನ್ನು ಶಪಿಸುವ ಮಾಂತ್ರಿಕರು
ನಾನು ಹುಟ್ಟಿದ ರಾತ್ರಿಯನ್ನು ಶಪಿಸಲಿ.
9 ಆ ದಿನದ ಮುಂಜಾನೆಯ ನಕ್ಷತ್ರಗಳು ಕತ್ತಲಾಗಲಿ.
ಅದು ಮುಂಜಾನೆಯ ಬೆಳಕಿಗಾಗಿ ಎದುರುನೋಡಿದರೂ ಹೊಂದದಿರಲಿ.
ಅದು ಸೂರ್ಯೋದಯದ ಕಿರಣಗಳನ್ನು ನೋಡದಿರಲಿ.
10 ಯಾಕೆಂದರೆ ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ
ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲ.
11 ನಾನು ಹುಟ್ಟಿದಾಗಲೇ ಯಾಕೆ ಸಾಯಲಿಲ್ಲ?
ತಾಯಿಯ ಗರ್ಭದಿಂದ ಬರುತ್ತಿರುವಾಗಲೇ ನಾನೇಕೆ ಸಾಯಲಿಲ್ಲ?
12 ತಾಯಿಯು ತನ್ನ ಮಡಿಲಲ್ಲಿ ನನ್ನನ್ನು ಹೊತ್ತುಕೊಂಡದ್ದೇಕೆ?
ಆಕೆಯ ಸ್ತನಗಳು ನನಗೆ ಹಾಲು ಕುಡಿಯಕೊಟ್ಟದ್ದೇಕೆ?
13 ನಾನು ಹುಟ್ಟಿದಾಗಲೇ ಸತ್ತುಹೋಗಿದ್ದರೆ,
ಸಮಾಧಾನದಿಂದ ನಿದ್ರೆಮಾಡುತ್ತಿದ್ದೆನು.
14 ಭೂರಾಜರೊಂದಿಗೂ ಮಂತ್ರಿಗಳೊಂದಿಗೂ ವಿಶ್ರಮಿಸಿಕೊಳ್ಳುತ್ತಿದ್ದೆನು.
ಅವರು ತಮಗಾಗಿ ಕಟ್ಟಿಸಿಕೊಂಡ ಪಟ್ಟಣಗಳು ಈಗ ಹಾಳುಬಿದ್ದಿವೆ.
15 ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿಕೊಂಡ
ಅಧಿಪತಿಗಳೊಡನೆ ನಾನು ವಿಶ್ರಮಿಸಿಕೊಳ್ಳುತ್ತಿದ್ದೆನು.
16 ನಾನು ಮಗುವಾಗಿ ಹುಟ್ಟುವಾಗಲೇ ಸತ್ತು ನೆಲದಲ್ಲಿ ಸಮಾಧಿಯಾಗಲಿಲ್ಲವೇಕೆ?
ಹಗಲಿನ ಬೆಳಕನ್ನು ಎಂದೂ ಕಂಡಿಲ್ಲದ ಮಗುವಿನಂತೆ ನಾನಿರಬೇಕಿತ್ತು.
17 ದುಷ್ಟರು ಸಮಾಧಿಯಲ್ಲಿರುವಾಗ ಕೇಡುಮಾಡುವುದನ್ನು ನಿಲ್ಲಿಸುವರು.
ಆಯಾಸಗೊಂಡಿರುವ ಜನರು ಸಮಾಧಿಯಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳುವರು.
18 ಸೆರೆಯಾಳುಗಳು ಸಹ ಸಮಾಧಿಯಲ್ಲಿ ಸುಖವಾಗಿರುವರು;
ಅವರ ಒಡೆಯನ ಧ್ವನಿಯು ಅವರಿಗೆ ಕೇಳಿಸುವುದಿಲ್ಲ.
19 ಸಮಾಧಿಯಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲ;
ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.
20 “ಬಹು ವ್ಯಥೆಯಿಂದ ಸಂಕಟಪಡುತ್ತಿರುವವನು ಯಾಕೆ ಜೀವಿಸಬೇಕು?
ಮನನೊಂದಿರುವವನಿಗೆ ಜೀವವನ್ನು ಕೊಡುವುದೇಕೆ?
21 ಅವನು ಸಾಯಲು ಬಯಸಿದರೂ ಸಾವು ಬರುವುದಿಲ್ಲ.
ಹೂಳಿಟ್ಟಿರುವ ಭಂಡಾರವನ್ನು ಹುಡುಕುವುದಕ್ಕಿಂತಲೂ ಹೆಚ್ಚಾಗಿ
ವ್ಯಥೆಯುಳ್ಳವನು ಸಾವನ್ನೇ ಹುಡುಕುವನು.
22 ಅವರು ಸಮಾಧಿಗೆ ಸೇರುವಾಗ ಬಹು ಸಂತೋಷಪಡುವರು;
ಆನಂದದಿಂದ ಕೂಗುವರು.
23 ದೇವರು ಯಾರ ಭವಿಷ್ಯವನ್ನು ರಹಸ್ಯವಾಗಿಡುತ್ತಾನೊ,
ಯಾರ ಸುತ್ತಲೂ ಗೋಡೆಯನ್ನು ಕಟ್ಟುತ್ತಾನೊ ಅವರಿಗೆ ಯಾಕೆ ಜೀವವನ್ನು
ಕೊಡುತ್ತಾನೆ?
24 ಊಟದ ಸಮಯದಲ್ಲಿ ನಿಟ್ಟುಸಿರೇ ನನ್ನ ಆಹಾರವಾಗಿದೆ.
ನನ್ನ ನರಾಳಾಟವು ಜಲಧಾರೆಯಂತಿದೆ.
25 ಆಪತ್ತು ಸಂಭವಿಸಬಹುದೆಂದು ನಾನು ಭಯಗೊಂಡಿದ್ದೆನು.
ನಾನು ಯಾವುದಕ್ಕೆ ಹೆದರಿಕೊಂಡಿದ್ದೆನೊ ಅದು ನನಗೆ ಸಂಭವಿಸಿದೆ!
26 ನನಗೆ ಸಮಾಧಾನವಿಲ್ಲ, ವಿಶ್ರಾಂತಿಯೂ ಇಲ್ಲ; ನನಗೆ ಉಪಶಮನವಿಲ್ಲ;
ನನಗಿರುವುದು ಕೇವಲ ಕಷ್ಟವೊಂದೇ!”
ಎಲೀಫಜನ ವಾದ
4 ಆಗ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಿಸಿದನು:
2 “ಒಬ್ಬನು ನಿನ್ನೊಂದಿಗೆ ಮಾತಾಡತೊಡಗಿದರೆ ನಿನಗೆ ಬೇಸರವಾಗುವುದೇ?
ಸುಮ್ಮನಿರಲು ನನಗಂತೂ ಸಾಧ್ಯವಿಲ್ಲ.
3 ಯೋಬನೇ, ನೀನು ಅನೇಕರಿಗೆ ಉಪದೇಶಿಸಿರುವೆ.
ನೀನು ಬಲಹೀನನ ಕೈಗಳಿಗೆ ಶಕ್ತಿಯನ್ನು ಕೊಟ್ಟಿರುವೆ;
4 ಎಡವಿಬಿದ್ದವರನ್ನು ನಿನ್ನ ಮಾತುಗಳಿಂದ ಉದ್ಧರಿಸಿರುವೆ;
ಬಲಹೀನವಾದ ಮೊಣಕಾಲುಗಳನ್ನು ಪ್ರೋತ್ಸಾಹದಿಂದ ಬಲಗೊಳಿಸಿರುವೆ.
5 ಈಗಲಾದರೋ ನಿನಗೆ ಕೇಡು ಬಂದಿದೆ;
ಆದ್ದರಿಂದ ನೀನು ನಿರಾಶನಾಗಿರುವೆ.
ಕೇಡು ನಿನಗೆ ಬಡಿದಿರುವುದರಿಂದ
ಭ್ರಮೆಗೊಂಡಿರುವೆ.
6 ನೀನು ದೇವರಲ್ಲಿ ಭಯಭಕ್ತಿಯಿಂದಿರುವುದರಿಂದ
ಆತನಲ್ಲಿ ಭರವಸವಿಡು.
ನೀನು ನೀತಿವಂತನಾಗಿರುವುದರಿಂದ
ಅದೇ ನಿನ್ನ ನಿರೀಕ್ಷೆಯಾಗಿರಲಿ.
7 ಯೋಬನೇ, ಆಲೋಚಿಸು: ಎಂದಾದರೂ ನಿರಪರಾಧಿಯು ನಾಶವಾಗಿರುವನೇ?
ಎಂದಾದರೂ ಯಥಾರ್ಥವಂತರು ನಾಶವಾಗಿರುವರೇ?
8 ನಾನು ನೋಡಿರುವಂತೆ, ಅಧರ್ಮವನ್ನು ಮತ್ತು ಕೇಡನ್ನು ಬಿತ್ತುವವರು
ಅದನ್ನೇ ಕೊಯ್ಯುವರು.
9 ದೇವರ ಉಸಿರು ಅವರನ್ನು ಕೊಲ್ಲುತ್ತದೆ;
ಆತನ ಕೋಪದ ಗಾಳಿಯು ಅವರನ್ನು ನಾಶಮಾಡುತ್ತದೆ.
10 ದುಷ್ಟರು ಸಿಂಹಗಳಂತೆ ಗರ್ಜಿಸುತ್ತಾ ಗುರುಗುಟ್ಟುವರು.
ಆದರೆ ದೇವರು ದುಷ್ಟರನ್ನು ಸುಮ್ಮನಿರಿಸಿ, ಅವರ ಹಲ್ಲುಗಳನ್ನು
ಮುರಿದುಹಾಕುವನು.
11 ದುಷ್ಟರು ಆಹಾರವಿಲ್ಲದ ಸಿಂಹಗಳಂತಿದ್ದು ಸಾಯುವರು;
ಅವರ ಮಕ್ಕಳು ಚದರಿಹೋಗಿ ಅಳಿದುಹೋಗುವರು.
12 “ಒಂದು ಸಂದೇಶವು ನನಗೆ ರಹಸ್ಯವಾಗಿ ತಿಳಿಸಲ್ಪಟ್ಟಿತು;
ನನ್ನ ಕಿವಿಗಳಿಗೆ ಅದು ಗುಸುಗುಸು ಸದ್ದಾಗಿ ಕೇಳಿಬಂತು.
13 ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ
ರಾತ್ರಿಯ ಕನಸುಗಳಿಂದ ಯೋಚನೆಯಲ್ಲಿರುವಾಗ
14 ನನಗೆ ಎಲುಬುಗಳೆಲ್ಲಾ ನಡುಗುವಷ್ಟು
ಭಯಂಕರವಾದ ಭಯ ಉಂಟಾಯಿತು.
15 ಯಾವುದೋ ಒಂದು ಉಸಿರು ನನ್ನ ಮುಖಕ್ಕೆ ಸುಳಿಯಲು
ಮೈಯೆಲ್ಲಾ ರೋಮಾಂಚನಗೊಂಡಿತು.
16 ಯಾವುದೋ ಒಂದು ಆತ್ಮ
ನನ್ನ ಕಣ್ಣೆದುರಿನಲ್ಲಿ ಬಂದು ನಿಂತುಕೊಂಡಿತು;
ಅದು ಏನೆಂಬುದು ನನಗೆ ಗೊತ್ತಾಗಲಿಲ್ಲ.
ಸೂಕ್ಷ್ಮ ಧ್ವನಿಯೊಂದು ನನಗೆ ಕೇಳಿಬಂತು.
17 ಅದೇನೆಂದರೆ: ‘ದೇವರಿಗಿಂತಲೂ ನೀತಿವಂತನಾದ ಮನುಷ್ಯನಿರುವನೇ?
ಮನುಷ್ಯನು ತನ್ನ ಸೃಷ್ಟಿಕರ್ತನಿಗಿಂತಲೂ ಶುದ್ಧನಾಗಿರುವನೇ?
18 ದೇವರು ತನ್ನ ಪರಲೋಕದ ಸೇವಕರುಗಳಲ್ಲಿಯೂ ಭರವಸವಿಡುವುದಿಲ್ಲ.
ದೇವರು ತನ್ನ ದೂತರುಗಳಲ್ಲಿಯೂ ತಪ್ಪನ್ನು ಕಂಡುಹಿಡಿಯುವನು.
19 ಹೀಗಿರಲು ದೇವರು ಮನುಷ್ಯರಲ್ಲಿ ಎಷ್ಟೋ ತಪ್ಪುಗಳನ್ನು ಕಂಡುಹಿಡಿಯುವನು;
ಮನುಷ್ಯರು ಮಣ್ಣಿನ ಮನೆಗಳಲ್ಲಿ[a] ವಾಸಿಸುತ್ತಾರೆ.
ಈ ಮಣ್ಣಿನ ಮನೆಗಳ ಅಸ್ತಿವಾರಗಳು ಧೂಳಿನಲ್ಲಿವೆ.
ಅವರು ಹುಳಕ್ಕಿಂತಲೂ ಸುಲಭವಾಗಿ ಸಾವಿಗೀಡಾಗುವರು!
20 ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳ ನಡುವೆ ಅವರು ನಜ್ಜುಗುಜ್ಜಾಗುವರು.
ಅವರು ಸತ್ತು ನಿತ್ಯ ನಾಶವಾಗುವುದನ್ನು ಯಾರೂ ಗಮನಿಸುವುದಿಲ್ಲ.
21 ಅವರ ಗುಡಾರಗಳ ಹಗ್ಗಗಳು ಬಿಚ್ಚಲ್ಪಡುವವು,
ಅವರು ಜ್ಞಾನವಿಲ್ಲದವರಾಗಿ ಸತ್ತುಹೋಗುವರು.’”
44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವು[a] ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.
48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:
49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’(A)”
51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”
ಸ್ತೆಫನನು ಕೊಲ್ಲಲ್ಪಟ್ಟನು
54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.
57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.
Kannada Holy Bible: Easy-to-Read Version. All rights reserved. © 1997 Bible League International