Old/New Testament
ನೆಹೆಮೀಯನ ಪ್ರಾರ್ಥನೆ
1 ಇವು ನೆಹೆಮೀಯನ ಮಾತುಗಳು; ನೆಹೆಮೀಯನು ಹಕಲ್ಯನ ಮಗ. ಕಿಸ್ಲೇವ್ ತಿಂಗಳಿನಲ್ಲಿ ರಾಜಧಾನಿಯಾದ ಶೂಷನ್ನಲ್ಲಿ ನಾನು ಇದ್ದೆನು. ಅದು ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷವಾಗಿತ್ತು. 2 ನಾನು ಶೂಷನ್ನಲ್ಲಿದ್ದಾಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀ ಮತ್ತು ಇನ್ನಿತರರು ಯೆಹೂದ ಪ್ರಾಂತ್ಯದಿಂದ ಬಂದಿದ್ದರು. ನಾನು ಅಲ್ಲಿರುವ ಯೆಹೂದ್ಯರ ಯೋಗಕ್ಷೇಮದ ಬಗ್ಗೆ ವಿಚಾರಿಸಿದೆನು. ಈ ಯೆಹೂದ್ಯರು ಸೆರೆವಾಸದಿಂದ ತಪ್ಪಿಸಿಕೊಂಡು ಇನ್ನೂ ಯೆಹೂದದಲ್ಲಿ ವಾಸವಾಗಿದ್ದರು. ಜೆರುಸಲೇಮ್ ನಗರದ ವಿಷಯವಾಗಿಯೂ ವಿಚಾರಿಸಿದೆನು.
3 ಆಗ ಹನಾನೀ ಮತ್ತು ಅವನ ಜೊತೆಗಾರರು, “ನೆಹೆಮೀಯನೇ, ಸೆರೆಯಿಂದ ತಪ್ಪಿಸಿಕೊಂಡು ಯೆಹೂದ ಪ್ರಾಂತ್ಯಕ್ಕೆ ಹೋಗಿರುವವರು ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅವರು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಅವಮಾನಕ್ಕೀಡಾಗಿದ್ದಾರೆ. ಯಾಕೆಂದರೆ ಜೆರುಸಲೇಮಿನ ಪೌಳಿಗೋಡೆಗಳು ಕೆಡವಲ್ಪಟ್ಟಿವೆ; ಅದರ ಬಾಗಿಲುಗಳೆಲ್ಲಾ ಸುಟ್ಟುಹೋಗಿವೆ” ಎಂದು ಹೇಳಿದರು.
4 ಜೆರುಸಲೇಮಿನ ಪೌಳಿಗೋಡೆಯ ಮತ್ತು ಅಲ್ಲಿಯ ಜನರ ವಿಚಾರವಾಗಿ ಕೇಳಿದಾಗ ನಾನು ತುಂಬಾ ಗಲಿಬಿಲಿಗೊಂಡೆನು; ನಾನು ಅಲ್ಲಿಯೇ ನೆಲದ ಮೇಲೆ ಕುಳಿತು ಅತ್ತೆನು; ದುಃಖಕ್ರಾಂತನಾದೆನು; ಅಲ್ಲದೆ ಅನೇಕ ದಿವಸಗಳವರೆಗೆ ಉಪವಾಸಮಾಡಿ ಪರಲೋಕದ ದೇವರಿಗೆ ಪ್ರಾರ್ಥಿಸಿದೆನು. 5 ನಂತರ ನಾನು ಈ ಪ್ರಾರ್ಥನೆ ಮಾಡಿದೆನು:
“ಪರಲೋಕದ ದೇವರಾದ ಯೆಹೋವನೇ, ನೀನು ಮಹಾ ದೇವರೂ ಪರಾಕ್ರಮವುಳ್ಳ ದೇವರೂ ಆಗಿರುವಿ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳಿಗೆ ವಿಧೇಯರಾಗುವವರಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸುವವನಾಗಿರುವಿ.
6 “ಹಗಲಿರುಳು ನಿನ್ನಲ್ಲಿ ಪ್ರಾರ್ಥಿಸುವ ನಿನ್ನ ಸೇವಕನನ್ನು ಕಣ್ತೆರೆದು ನೋಡು; ಅವನ ಪ್ರಾರ್ಥನೆಗೆ ಕಿವಿಗೊಟ್ಟು ಆಲಿಸು. ನಿನ್ನ ಸೇವಕರಾದ ಇಸ್ರೇಲರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಇಸ್ರೇಲರಾದ ನಾವು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ನಾನು ನಿನಗೆ ಅರಿಕೆ ಮಾಡುತ್ತೇನೆ. ನಾನೂ ನನ್ನ ತಂದೆಯ ಮನೆಯವರೂ ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ನಿನಗೆ ಅರಿಕೆ ಮಾಡುತ್ತೇವೆ. 7 ಇಸ್ರೇಲರಾದ ನಾವು ನಿನಗೆ ಕೆಟ್ಟವರಾಗಿ ಜೀವಿಸಿದೆವು; ನೀನು ನಿನ್ನ ಸೇವಕನಾದ ಮೋಶೆಗೆ ಕೊಟ್ಟ ವಿಧಿನಿಯಮಗಳಿಗೆ ನಾವು ವಿಧೇಯರಾಗಲಿಲ್ಲ.
8 “ನಿನ್ನ ಸೇವಕನಾದ ಮೋಶೆಗೆ ನೀನು ಹೇಳಿದ್ದನ್ನು ನೆನಪುಮಾಡಿಕೊ, ನೀನು ಅವನಿಗೆ, ‘ಇಸ್ರೇಲ್ ಜನರಾದ ನೀವು ನಂಬಿಗಸ್ತರಾಗದಿದ್ದಲ್ಲಿ ನಿಮ್ಮನ್ನು ಅನ್ಯದೇಶಗಳಲ್ಲಿ ಚದರಿಸಿಬಿಡುವೆನು.’ 9 ಆದರೆ ನೀವು ಹಿಂತಿರುಗಿ ನನ್ನ ಬಳಿಗೆ ಬಂದು, ನನ್ನ ಕಟ್ಟಳೆಗಳಿಗೆ ವಿಧೇಯರಾದರೆ, ನಿಮ್ಮ ಜನರನ್ನು ಬಲವಂತವಾಗಿ ಭೂಲೋಕದ ಕಟ್ಟಕಡೆಯವರೆಗೆ ಕೊಂಡೊಯ್ದಿದ್ದರೂ ಅಲ್ಲಿಂದ ನನ್ನ ಹೆಸರನ್ನು ನೆಲೆಗೊಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸ್ಥಳಕ್ಕೆ ಕರೆದುಕೊಂಡು ಬರುವೆನು” ಎಂದು ಹೇಳಿರುವೆ.
10 “ಇಸ್ರೇಲ್ ಜನರು ನಿನ್ನ ಜನಾಂಗ; ಅವರು ನಿನ್ನ ಸೇವಕರಾಗಿದ್ದಾರೆ. ನೀನು ನಿನ್ನ ಮಹಾಶಕ್ತಿಯನ್ನು ಉಪಯೋಗಿಸಿ ಅವರನ್ನು ರಕ್ಷಿಸಿರುವೆ. 11 ಆದ್ದರಿಂದ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲೈಸು. ನಾನು ನಿನ್ನ ಸೇವಕ. ನಿನ್ನ ಹೆಸರನ್ನು ಗೌರವಿಸುವ ನಿನ್ನ ಸೇವಕರ ಪ್ರಾರ್ಥನೆಗೆ ಕಿವಿಗೊಡು. ನಾನು ಅರಸನ ಪಾನದಾಯಕನಾಗಿದ್ದೇನೆಂದು ನೀನು ತಿಳಿದಿರುವೆ. ಆದ್ದರಿಂದ ಈ ಹೊತ್ತು ನನಗೆ ಸಹಾಯ ಮಾಡು. ಅರಸನಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುವಾಗ ನನಗೆ ನೆರವು ನೀಡು; ನನಗೆ ಯಶಸ್ಸನ್ನು ದಯಪಾಲಿಸು; ರಾಜನಿಗೆ ನಾನು ಮೆಚ್ಚಿಕೆಯುಳ್ಳವನಾಗಿ ಕಂಡುಬರುವಂತೆ ಸಹಾಯಮಾಡು.”
ನೆಹೆಮೀಯನನ್ನು ಅರ್ತಷಸ್ತನು ಜೆರುಸಲೇಮಿಗೆ ಕಳುಹಿಸಿದ್ದು
2 ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದ ನಿಸ್ಸಾನ್ ತಿಂಗಳಲ್ಲಿ ರಾಜನಿಗೆ ದ್ರಾಕ್ಷಾರಸವನ್ನು ನಾನು ಕೊಟ್ಟೆನು. ನಾನೆಂದೂ ರಾಜನ ಮುಂದೆ ದುಃಖಿತನಾಗಿರಲಿಲ್ಲ. ಆದರೆ ಈ ಸಮಯದಲ್ಲಿ ನನ್ನ ಮುಖವು ಕಳೆಗುಂದಿದ್ದರಿಂದ, 2 “ನೀನು ಕ್ಷೇಮವೋ?” ಎಂದು ಅರಸನು ವಿಚಾರಿಸಿದನು, “ನೀನು ದುಃಖಿತನಾಗಿರುವುದೇಕೆ? ನಿನ್ನ ಹೃದಯವು ವೇದನೆಯಿಂದ ತುಂಬಿರುವ ಹಾಗಿದೆಯಲ್ಲ?”
ಅರಸನ ಈ ಪ್ರಶ್ನೆಗೆ ನಾನು ಭಯಪಟ್ಟೆನು. 3 ನಾನು ಭಯದಿಂದಲೇ, “ಅರಸನೇ ಚಿರಂಜೀವಿಯಾಗಿರು. ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳುದಿಬ್ಬವಾಗಿರುವುದರಿಂದ ನಾನು ದುಃಖಿತನಾಗಿದ್ದೇನೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ” ಅಂದೆನು.
4 ಆಗ ಅರಸನು, “ನಾನು ನಿನಗೆ ಏನುಮಾಡಬೇಕೆಂದು ಅಪೇಕ್ಷಿಸುವೆ?” ಎಂದು ಕೇಳಿದಾಗ ಅವನಿಗೆ ಉತ್ತರಿಸುವ ಮೊದಲು ನಾನು ಪರಲೋಕದ ದೇವರಿಗೆ ಪ್ರಾರ್ಥಿಸಿದೆನು.
5 ಅನಂತರ ಅರಸನಿಗೆ, “ನಾನು ನಿನಗೆ ಮೆಚ್ಚಿಕೆಯಾಗಿದ್ದಲ್ಲಿ ಮತ್ತು ನಿನಗೆ ಈ ವಿಷಯ ಸರಿಕಂಡಲ್ಲಿ ದಯಮಾಡಿ ಯೆಹೂದ ಪ್ರಾಂತ್ಯದಲ್ಲಿ ನನ್ನ ಪೂರ್ವಿಕರ ಸಮಾಧಿಗಳಿರುವ ಜೆರುಸಲೇಮಿಗೆ ನನ್ನನ್ನು ಕಳುಹಿಸು. ನಾನು ಅಲ್ಲಿಗೆ ಹೋಗಿ ಜೆರುಸಲೇಮನ್ನು ಮತ್ತೆ ಕಟ್ಟಬೇಕು” ಎಂದೆನು.
6 ರಾಣಿಯು ರಾಜನ ಪಕ್ಕದಲ್ಲಿ ಕುಳಿತಿದ್ದಳು. ರಾಜನೂ ರಾಣಿಯೂ, “ನಿನಗೆ ಹೋಗಿ ಬರಲು ಎಷ್ಟು ಸಮಯ ಬೇಕಾಗುವುದು? ನೀನು ಹಿಂದಕ್ಕೆ ಯಾವಾಗ ಬರುವಿ?” ಎಂದು ವಿಚಾರಿಸಿದರು.
ನನ್ನನ್ನು ಕಳುಹಿಸಲು ರಾಜನಿಗೆ ಸಂತೋಷವಿದ್ದುದರಿಂದ ನಾನೊಂದು ಸಮಯವನ್ನು ಸೂಚಿಸಿದೆನು. 7 ಆಮೇಲೆ “ರಾಜನೇ, ನನಗೆ ಸಹಾಯವನ್ನು ಮಾಡಲು ನೀನು ಇಚ್ಫಿಸುವುದಾದರೆ ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲರಿಗೆ ಪತ್ರಗಳನ್ನು ಬರೆದುಕೊಟ್ಟರೆ ನಾನು ಯೆಹೂದಕ್ಕೆ ಅವರ ಪ್ರಾಂತ್ಯಗಳ ಮೂಲಕವಾಗಿ ಸುರಕ್ಷಿತವಾಗಿ ಹೋಗಲು ಸಾಧ್ಯವಾಗುವುದು. 8 ಅಲ್ಲದೆ ಬಾಗಿಲುಗಳಿಗೆ, ಗೋಡೆಗಳಿಗೆ, ದೇವಾಲಯದ ಆವರಣದ ಗೋಡೆಗಳಿಗೆ ಮತ್ತು ನನ್ನ ಮನೆಗೆ ಮರದ ತೊಲೆಗಳು ಬೇಕಾಗಿವೆ. ಆದ್ದರಿಂದ ನಿಮ್ಮ ಅರಣ್ಯಗಳ ಮುಖ್ಯಾಧಿಕಾರಿಯಾದ ಆಸಾಫನಿಗೂ ಪತ್ರವನ್ನು ಕೊಡಬೇಕು” ಎಂದು ವಿನಂತಿಸಿದೆನು.
ಅರಸನು ಪತ್ರಗಳನ್ನು ಮತ್ತು ನಾನು ಕೇಳಿದ್ದೆಲ್ಲವನ್ನು ನನಗೆ ಕೊಟ್ಟನು. ದೇವರು ನನ್ನನ್ನು ಕರುಣಿಸಿರುವುದರಿಂದ ರಾಜನು ನನಗೆ ಹಾಗೆ ಮಾಡಿದನು.
9 ಯೂಫ್ರೇಟೀಸ್ ನದಿಯ ಪಶ್ಚಿಮದಲ್ಲಿರುವ ರಾಜ್ಯಪಾಲರಿಗೆ ಅರಸನು ಕೊಟ್ಟ ಪತ್ರವನ್ನು ಕೊಟ್ಟೆನು. ರಾಜನು ನನ್ನೊಂದಿಗೆ ಸಿಪಾಯಿಗಳನ್ನೂ ಸೈನ್ಯಾಧಿಪತಿಗಳನ್ನೂ ಅಶ್ವ ಸೈನಿಕರನ್ನೂ ಕಳುಹಿಸಿದ್ದನು. 10 ನಾನು ಏನು ಮಾಡುತ್ತಿದ್ದೇನೆಂದು ಸನ್ಬಲ್ಲಟ್ ಮತ್ತು ಟೋಬೀಯ ಎಂಬವರಿಬ್ಬರು ಕೇಳಿಸಿಕೊಂಡರು. ಇಸ್ರೇಲ್ ಜನರಿಗೆ ಸಹಾಯ ಮಾಡಲು ಬರುತ್ತಿದ್ದಾರೆಂಬ ವಿಷಯವು ಅವರನ್ನು ತಳಮಳಗೊಳಿಸಿತು ಮತ್ತು ಅವರಿಗೆ ಸಿಟ್ಟೂ ಬಂದಿತು. ಸನ್ಬಲ್ಲಟನು ಹೋರೋನಿನವನು ಮತ್ತು ಟೋಬೀಯನು ಅಮ್ಮೋನಿಯ ಅಧಿಕಾರಿಯಾಗಿದ್ದನು.
ನೆಹೆಮೀಯನಿಂದ ಜೆರುಸಲೇಮಿನ ಗೋಡೆಗಳ ಪರೀಕ್ಷೆ
11-12 ನಾನು ಜೆರುಸಲೇಮ್ ಸೇರಿದ ನಂತರ ಮೂರು ದಿವಸ ಅಲ್ಲಿಯೇ ಉಳಿದೆನು. ಜೆರುಸಲೇಮಿಗೋಸ್ಕರ ಮಾಡತಕ್ಕ ಕಾರ್ಯದ ಬಗ್ಗೆ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಸಿದ್ದಾನೆಂದು ನಾನು ಯಾರಿಗೂ ತಿಳಿಸದೆ ನನ್ನೊಂದಿಗಿದ್ದ ಕೆಲವು ಜನರೊಂದಿಗೆ ರಾತ್ರಿಯಲ್ಲಿ ಹೊರಟೆನು. ನಾನು ಸವಾರಿಮಾಡಿಕೊಂಡು ಬಂದಿದ್ದ ಕುದುರೆಯೊಂದಲ್ಲದೆ ಬೇರೆ ಯಾವ ಕುದುರೆಯೂ ಅಲ್ಲಿರಲಿಲ್ಲ. 13 ಕತ್ತಲೆಯಲ್ಲಿಯೇ ಕಣಿವೆಯ ಬಾಗಿಲಿನ ಮೂಲಕ ಹೊರಟು ಕೆಡವಲ್ಪಟ್ಟಿದ್ದ ಜೆರುಸಲೇಮಿನ ಗೋಡೆಗಳನ್ನು, ಸುಟ್ಟುಹೋಗಿರುವ ಅದರ ಬಾಗಿಲುಗಳನ್ನು ನೋಡುತ್ತಾ ಹೆಬ್ಬಾವು ಬಾವಿಯ ಬಳಿಗೂ ತಿಪ್ಪೆಬಾಗಿಲಿನ ಬಳಿಗೂ ಸವಾರಿಮಾಡಿಕೊಂಡು ಬಂದೆನು. 14 ಅಲ್ಲಿಂದ ಬುಗ್ಗೆಬಾಗಿಲಿಗೂ ಅರಸನ ಕೊಳಕ್ಕೂ ಬಂದೆನು. ಇಲ್ಲಿಂದ ಮುಂದಕ್ಕೆ ಹೋಗಲು ನನ್ನ ಕುದುರೆಗೆ ಸಾಧ್ಯಾವಾಗಲಿಲ್ಲ; 15 ಆದ್ದರಿಂದ ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಗಳನ್ನು ಪರೀಕ್ಷಿಸಿ ಕೊನೆಗೆ ಹಿಂದಿರುಗಿ ಕಣಿವೆ ಬಾಗಿಲ ಮೂಲಕ ಮನೆ ಸೇರಿದೆನು. 16 ಇಸ್ರೇಲಿನ ನಾಯಕರಿಗೂ ಅಧಿಕಾರಿಗಳಿಗೂ ನಾನು ಎಲ್ಲಿಗೆ ಹೋದೆನೆಂದು ತಿಳಿದಿರಲಿಲ್ಲ; ನಾನು ಏನು ಮಾಡುತ್ತಿದ್ದೇನೆಂದೂ ಅವರಿಗೆ ಗೊತ್ತಿರಲಿಲ್ಲ. ಯೆಹೂದ್ಯರಿಗಾಗಲಿ ಅಧಿಕಾರಿಗಳಿಗಾಗಲಿ ರಾಜನಿಂದ ನೇಮಕಗೊಂಡ ಕೆಲಸವರ್ಗದವರಿಗಾಗಲಿ ನಾನು ಇನ್ನೂ ಯಾವ ವಿಷಯವನ್ನೂ ಹೇಳಿರಲಿಲ್ಲ.
17 ಆಮೇಲೆ ನಾನು ಎಲ್ಲಾ ಜನರಿಗೆ, “ನಮ್ಮ ದುರವಸ್ಥೆಯನ್ನು ನೀವು ನೋಡುತ್ತಿದ್ದೀರಿ. ಜೆರುಸಲೇಮ್ ಒಂದು ಹಾಳು ದಿಬ್ಬವಾಗಿದೆ; ಅದರ ಬಾಗಿಲುಗಳು ಸುಟ್ಟು ಬೂದಿಯಾಗಿವೆ. ಬನ್ನಿರಿ, ನಾವು ಜೆರುಸಲೇಮಿನ ಪೌಳಿಗೋಡೆಗಳನ್ನು ತಿರುಗಿ ಕಟ್ಟೋಣ. ಆಗ ನಾವು ಇನ್ನೆಂದಿಗೂ ನಾಚಿಕೆಗೆ ಗುರಿಯಾಗುವುದಿಲ್ಲ” ಎಂದು ಹೇಳಿದೆನು.
18 ನಾನು ಅವರಿಗೆ ದೇವರು ನನಗೆ ಕರುಣೆಯನ್ನು ತೋರಿಸಿದ್ದನ್ನು ಮತ್ತು ರಾಜನು ಹೇಳಿದ ವಿಷಯಗಳನ್ನು ತಿಳಿಸಿದೆನು. ಆಗ ಅವರು, “ನಾವು ಈಗಲೇ ಕೆಲಸ ಪ್ರಾರಂಭಿಸೋಣ” ಎಂದು ಹೇಳಿದರು. ಹೀಗೆ ನಾವು ಈ ಒಳ್ಳೆಯ ಕಾರ್ಯವನ್ನು ಪ್ರಾರಂಭಿಸಿದೆವು. 19 ಆದರೆ ಹೋರೋಬಿನ ಸನ್ಬಲ್ಲಟನು, ಅಮ್ಮೋನಿಯ ಅಧಿಕಾರಿಯಾದ ಟೋಬೀಯ ಮತ್ತು ಅರಬಿಯವನಾದ ಗೆಷೆಮ್ ಇವರುಗಳು ನಾವು ಪೌಳಿ ಗೋಡೆಯನ್ನು ಕಟ್ಟುತ್ತೇವೆಂಬ ಸುದ್ಧಿಯನ್ನು ಕೇಳಿ ಅಸಹ್ಯವಾಗಿ ಗೇಲಿಮಾಡಿ, “ನೀವು ಮಾಡುತ್ತಿರುವುದೇನು? ರಾಜನಿಗೆ ವಿರುದ್ಧವಾಗಿ ದಂಗೆ ಏಳುತ್ತಿರುವಿರೋ?” ಎಂದು ಕೇಳಿದರು.
20 ನಾನು ಅವರಿಗೆ, “ಪರಲೋಕದ ದೇವರು ನಮ್ಮ ಕಾರ್ಯವನ್ನು ಸಫಲಪಡಿಸುವನು. ನಾವು ಆತನ ಸೇವಕರು ಮತ್ತು ನಾವು ಈ ಪಟ್ಟಣವನ್ನು ತಿರಿಗಿ ಕಟ್ಟುತ್ತೇವೆ. ನೀವು ನಮ್ಮ ಸಹಾಯಕ್ಕಾಗಿ ಬರುವುದು ಬೇಡ. ನಿಮ್ಮಲ್ಲಿ ಯಾರ ಕುಟುಂಬಗಳವರೂ ಈ ಜೆರುಸಲೇಮಿನಲ್ಲಿ ವಾಸಿಸಲಿಲ್ಲ ಮತ್ತು ಈ ಪ್ರಾಂತ್ಯದಲ್ಲಿ ನಿಮಗೆ ಸ್ವಂತ ಭೂಮಿಯೂ ಇಲ್ಲ. ಆದ್ದರಿಂದ ನಿಮಗೆ ಈ ಪ್ರಾಂತ್ಯದಲ್ಲಿ ಯಾವ ಹಕ್ಕೂ ಇಲ್ಲ” ಎಂದು ಹೇಳಿದೆನು.
ಪೌಳಿಗೋಡೆಯನ್ನು ಕಟ್ಟಿದವರು
3 ಎಲ್ಯಾಷೀಬನು ಮಹಾಯಾಜಕನಾಗಿದ್ದನು. ಅವನೂ ಮತ್ತು ಯಾಜಕರುಗಳಾಗಿದ್ದ ಅವನ ಸಹೋದರರೂ ಕುರಿ ಹೆಬ್ಬಾಗಿಲನ್ನು ಕಟ್ಟಿದರು. ನಂತರ ಪ್ರಾರ್ಥಿಸಿ ಯೆಹೋವನಿಗೆ ಅದನ್ನು ಪ್ರತಿಷ್ಠಿಸಿದರು. ಅವರು ಅದಕ್ಕೆ ಬಾಗಿಲುಗಳನ್ನು ಜೋಡಿಸಿದರು. ಆ ಯಾಜಕರು ನೂರುಗೋಪುರ ಮತ್ತು ಹನನೇಲ್ ಗೋಪುರದವರೆಗೂ ಜೆರುಸಲೇಮಿನ ಗೋಡೆಯನ್ನು ಕಟ್ಟಿದ್ದರು. ಅವರು ಪ್ರಾರ್ಥಿಸಿ ಯೆಹೋವನಿಗೆ ಪ್ರತಿಷ್ಠಿಸಿದರು.
2 ಯಾಜಕರು ಕಟ್ಟಿನಿಲ್ಲಿಸಿದ್ದ ಸ್ಥಳದಿಂದ ಜೆರಿಕೊದವರು ಗೋಡೆ ಕಟ್ಟಿದರು, ಜೆರಿಕೊದವರು ಕಟ್ಟಿ ನಿಲ್ಲಿಸಿದ್ದ ಸ್ಥಳದಿಂದ ಇಮ್ರಿಯ ಮಗನಾದ ಜಕ್ಕೂರನು ಗೋಡೆ ಕಟ್ಟಿದನು.
3 ಹಸ್ಸೆನಾಹನ ಗಂಡುಮಕ್ಕಳು ಮೀನುಬಾಗಿಲನ್ನು ಕಟ್ಟಿ ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದಗಳು, ಅಗುಳಿ, ತಿರುಗಣಿಗಳನ್ನಿಟ್ಟು ಭದ್ರಪಡಿಸಿದರು.
4 ಇವನ ನಂತರ ಊರೀಯನ ಮಗನಾದ ಮೆರೇಮೋತನು ಗೋಡೆಯನ್ನು ಕಟ್ಟಿದನು. (ಊರೀಯನು ಹಕ್ಕೋಚನ ಮಗ.)
ಇದರ ಮುಂದಿನ ಭಾಗವನ್ನು ಬೆರೆಕ್ಯನ ಮಗನಾದ ಮೆಷುಲ್ಲಾಮನು ಕಟ್ಟಿದನು. (ಬೆರೆಕ್ಯನು ಮೆಷೇಜಬೇಲನ ಮಗ.)
ಈ ಗೋಡೆಯ ನಂತರದ ಭಾಗವನ್ನು ಬಾನನ ಮಗನಾದ ಚಾದೋಕನು ಕಟ್ಟಿದನು.
5 ತೆಕೋವದವರು ಅಲ್ಲಿಂದಾಚೆಗೆ ಗೋಡೆ ಕಟ್ಟಿದರು. ಆದರೆ ಅವರ ನಾಯಕರು ತಮ್ಮ ರಾಜ್ಯಪಾಲನಾದ ನೆಹೆಮೀಯನಿಗಾಗಿ ಕೆಲಸಮಾಡಲು ಒಪ್ಪಲಿಲ್ಲ.
6 ಯೋಯಾದ ಮತ್ತು ಮೆಷುಲ್ಲಾಮ್ ಹಳೆಬಾಗಿಲನ್ನು ಜೋಡಿಸಿದರು. ಯೋಯಾದನು ಪಾಸೇಹನ ಮಗ; ಮೆಷುಲ್ಲಾಮನು ಬೆಸೋದ್ಯನ ಮಗ. ಅವರು ತೊಲೆಗಳನ್ನು ಇಟ್ಟರು; ಬಾಗಿಲುಗಳನ್ನು, ಕದಗಳನ್ನು, ಅಗುಳಿಗಳನ್ನು ಜೋಡಿಸಿದರು.
7 ಗಿಬ್ಯೋನ್ ಮತ್ತು ಮಿಚ್ಫದ ಜನರು ಅಲ್ಲಿಂದಾಚೆಗೆ ಗೋಡೆಯನ್ನು ಕಟ್ಟಿದರು. ಗಿಬ್ಯೋನಿನ ಮೆಲೆಟ್ಯ ಎಂಬವನು ಮತ್ತು ಮೇರೋನೋತಿನ ಯಾದೋನ್ ಎಂಬವನು ಈ ಕೆಲಸವನ್ನು ಮಾಡಿದರು. ಗಿಬ್ಯೋನ್ ಮತ್ತು ಮೇರೋನೋತ್ ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರುಗಳ ಆಡಳಿತಕ್ಕೆ ಒಳಪಟ್ಟಿತ್ತು.
8 ಹರ್ಹಯನ ಮಗನಾದ ಉಜ್ಜೀಯೇಲನು ಅಲ್ಲಿಂದಾಚೆಗೆ ಕಟ್ಟಿದನು. ಉಜ್ಜೀಯೇಲನು ಅಕ್ಕಸಾಲಿಗನಾಗಿದ್ದನು; ಹನನ್ಯನು ಸುಗಂಧದ್ರವ್ಯವನ್ನು ತಯಾರುಮಾಡುತ್ತಿದ್ದನು. ಇವರು, “ಅಗಲಗೋಡೆ”ಯವರೆಗೂ ಜೆರುಸಲೇಮ್ ಗೋಡೆಯನ್ನು ಕಟ್ಟಿದರು.
9 ಅರ್ಧ ಜೆರುಸಲೇಮಿನ ರಾಜ್ಯಪಾಲನಾಗಿದ್ದ ಹೂರನ ಮಗನಾದ ರೆಫಾಯನು ಮುಂದಿನ ಭಾಗವನ್ನು ಕಟ್ಟಿ ಮುಗಿಸಿದನು.
10 ಹರೂಮಫನ ಮಗನಾದ ಯೆದಾಯನು ಅಲ್ಲಿಂದಾಚೆಗೆ ಗೋಡೆ ಕಟ್ಟಿದನು. ಅದು ಅವನ ಮನೆಯ ನಂತರವೇ ಇತ್ತು. ಅಲ್ಲಿಂದಾಚೆಗೆ ಹಷಬ್ನೆಯನ ಮಗನಾದ ಹಟ್ಟೂಷನು ಕಟ್ಟಿದನು. 11 ಹಾರೀಮನ ಮಗನಾದ ಮಲ್ಕೀಯನು, ಪಹತ್ಮೋವಾಬನ ಮಗನಾದ ಹಷ್ಷೂಬನು ಅಲ್ಲಿಂದಾಚೆಗೆ ಕಟ್ಟಿದರು. ಅವರು ಒಲೆಬುರುಜನ್ನು ಸಹ ಕಟ್ಟಿದರು.
12 ಹಲ್ಲೊಹೇಷನ ಮಗನಾದ ಶಲ್ಲೂಮನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಅವನ ಹೆಣ್ಣುಮಕ್ಕಳು ಅವನಿಗೆ ಸಹಾಯ ಮಾಡಿದರು. ಶಲ್ಲೂಮನು ಜೆರುಸಲೇಮಿನ ಇನ್ನೊಂದು ಭಾಗದ ರಾಜ್ಯಪಾಲನಾಗಿದ್ದನು.
13 ಜಾನೋಹ ಪಟ್ಟಣದಲ್ಲಿ ವಾಸಿಸುವ ಹಾನೂನನೂ ಅವನ ಸಂಗಡಿಗರೂ ಕಣಿವೆ ಬಾಗಿಲನ್ನು ಕಟ್ಟಿ ಅದಕ್ಕೆ ಅಗುಳಿ, ತಿರುಗಣಿ, ಕದಗಳನ್ನಿಟ್ಟು ಭದ್ರಪಡಿಸಿದರು. ಅಲ್ಲದೆ ಒಂದು ಸಾವಿರ ಮೊಳದಷ್ಟು ಉದ್ದದ ಗೋಡೆಯನ್ನು ಕಟ್ಟಿ ತಿಪ್ಪೆಬಾಗಿಲಿನ ತನಕ ಮುಂದುವರಿದರು.
14 ರೇಕಾಬನ ಮಗನಾದ ಮಲ್ಕೀಯನು ತಿಪ್ಪೆಬಾಗಿಲನ್ನು ರಿಪೇರಿಮಾಡಿಸಿದನು. ಇವನು ಬೇತ್ ಹಕ್ಕೆರಿಮಿನ ರಾಜ್ಯಪಾಲನಾಗಿದ್ದನು. ಅವನು ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು.
15 ಮಿಚ್ಪ ಜಿಲ್ಲಾಧಿಕಾರಿಯಾದ ಶಲ್ಲೂನನು ಬುಗ್ಗೆಬಾಗಿಲನ್ನು ರಿಪೇರಿಮಾಡಿದನು. ಶಲ್ಲೂನನು ಕೊಲ್ಹೋಜಿಯನ ಮಗ. ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು. ನಂತರ ಗೋಡೆಯನ್ನು ರಾಜನ ತೋಟದ ಸಮೀಪದಲ್ಲಿದ್ದ ಸಿಲೋವಕೊಳದ ತನಕ ಮುಂದುವರಿಸಿ ದಾವೀದನಗರಕ್ಕೆ ಪ್ರವೇಶಿಸುವ ಮೆಟ್ಟಿಲುಗಳ ತನಕ ಗೋಡೆಯನ್ನು ಕಟ್ಟಿದನು.
16 ಅಜ್ಬೂಕನ ಮಗನಾದ ನೆಹೆಮೀಯನು ಗೋಡೆಯ ಮುಂದಿನ ಭಾಗವನ್ನು ಕಟ್ಟಿದನು. ಇವನು ಬೇತ್ಚೂರ್ ಜಿಲ್ಲೆಯ ಅರ್ಧಭಾಗಕ್ಕೆ ಅಧಿಕಾರಿಯಾಗಿದ್ದನು. ದಾವೀದನ ಸಮಾಧಿಯ ತನಕ ಗೋಡೆಯನ್ನು ಮುಂದುವರಿಸಿ ವೀರರ ಮನೆಗಳ ತನಕ ಕಟ್ಟಿದನು.
17 ಮುಂದಿನ ಭಾಗವನ್ನು ಲೇವಿಯರು ಕಟ್ಟಿದರು. ಅವರ ಮುಖ್ಯಸ್ತನು ಬಾನಿಯ ಮಗನಾದ ರೆಹೂಮನು. ಕೆಯೀಲ ಎಂಬ ಅರ್ಧ ಜಿಲ್ಲೆಗೆ ರಾಜ್ಯಪಾಲನಾಗಿದ್ದ ಹಷಬ್ಯನು ಇದರ ಮುಂದಿನ ಭಾಗದ ಗೋಡೆಯನ್ನು ಕಟ್ಟಿದನು. ಇವನು ತನ್ನ ಜಿಲ್ಲೆಯಲ್ಲಿ ಮಾತ್ರ ರಿಪೇರಿ ಮಾಡಿದನು.
18 ಅವರ ಸಹೋದರರು ಕೆಯೀಲದ ಇನ್ನೊಂದು ಅರ್ಧಜಿಲ್ಲೆಗೆ ರಾಜ್ಯಪಾಲನಾಗಿದ್ದ ಬಿನೈನ ನಾಯಕತ್ವದಲ್ಲಿ ಮುಂದಿನ ಭಾಗದ ಗೋಡೆಯನ್ನು ರಿಪೇರಿಮಾಡಿದರು. ಬಿನೈಹೇನಾದಾದನ ಮಗ.
19 ಮಿಚ್ಪದ ರಾಜ್ಯಪಾಲನಾದ ಏಜೆರನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಏಜೆರನು ಯೇಷೂವನ ಮಗ. ಇವನು ಆಯುಧ ಕೋಣೆಯಿಂದ ಹಿಡಿದು ಗೋಡೆಯ ಮೂಲೆಯ ತನಕ ರಿಪೇರಿಮಾಡಿದನು. 20 ಚಬ್ಬಾಯನ ಮಗನಾದ ಬಾರೂಕನು ಮುಂದಿನ ಭಾಗವನ್ನು ರಿಪೇರಿಮಾಡಿದನು. ಇವನು ಪ್ರಯಾಸಪಟ್ಟು ಮೂಲೆಯಿಂದ ಹಿಡಿದು ಪ್ರಧಾನ ಯಾಜಕನಾದ ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನ ತನಕ ಗೋಡೆಯನ್ನು ಕಟ್ಟಿದನು. 21 ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನಿಂದ ಆ ಮನೆಯ ಕೊನೆಯತನಕ ಗೋಡೆಯನ್ನು ಕಟ್ಟಿದನು. 22 ಆ ಪ್ರಾಂತ್ಯದಲ್ಲಿ ವಾಸಿಸಿದ್ದ ಯಾಜಕರು ಸೇರಿ ಮುಂದಿನ ಭಾಗವನ್ನು ಕಟ್ಟಿದರು.
23 ಬೆನ್ಯಾಮೀನ್ ಮತ್ತು ಹಷ್ಷೂಬ್ ತಮ್ಮ ತಮ್ಮ ಸ್ವಂತ ಮನೆಗಳ ಮುಂದಿದ್ದ ಭಾಗವನ್ನು ಕಟ್ಟಿದರು, ಹಾಗೆಯೇ ಮಾಸೇಯನ ಮಗನಾದ ಅಜರ್ಯನು ತನ್ನ ಮನೆ ಮುಂದಿದ್ದ ಗೋಡೆಯನ್ನು ಕಟ್ಟಿದನು.
24 ಹೇನಾದಾದನ ಮಗನಾದ ಬಿನ್ನೂಯ್ ಅಜರ್ಯನ ಮನೆಯಿಂದ ಹಿಡಿದು ಮೂಲೆಯ ತನಕ ಗೋಡೆಯನ್ನು ಕಟ್ಟಿದನು.
25 ಊಜೈಯ ಮಗನಾದ ಪಾಲಾಲನು ಮೂಲೆಯಿಂದ ಹಿಡಿದು ರಾಜನ ಮೇಲ್ಮನೆಯ ಬುರುಜಿನ ತನಕ ಮುಂದುವರಿಸಿದನು. ಇದು ರಾಜನ ಕಾವಲುಪಡೆಯ ಅಂಗಳದ ಸಮೀಪದಲ್ಲಿತ್ತು. ಪರೋಷನ ಮಗನಾದ ಪೆದಾಯನು ಅಲ್ಲಿಂದಾಚೆಗೆ ಅಂದರೆ ಪಾಲಾಲನು ಕೊನೆಗೊಳಿಸಿದಾಚಿನಿಂದ ಮುಂದುವರಿಸಿದನು.
26 ಓಫೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದ ಆಲಯದ ಸೇವಕರು ಮುಂದಿನ ಭಾಗವನ್ನು “ನೀರು” ಎಂಬ ಬಾಗಿಲಿನ ಪೂರ್ವದ ಕಡೆಯವರೆಗೂ ಅದರ ಬಳಿಯಿದ್ದ ಬುರುಜಿನವರೆಗೂ ರಿಪೇರಿ ಮಾಡಿದರು.
27 ತೆಕೋವದವರು ಉಳಿದ ಆ ಭಾಗವನ್ನು ಅಂದರೆ ದೊಡ್ಡ ಬುರುಜಿನಿಂದ ಹಿಡಿದು ಓಫೇಲ್ಗೋಡೆಯ ತನಕ ಮುಂದುವರಿಸಿದರು.
28 ಯಾಜಕರು ಕುದುರೆಬಾಗಿಲಿನ ಮೇಲಿನ ಭಾಗವನ್ನು ಕಟ್ಟಿದರು. ಪ್ರತಿಯೊಬ್ಬ ಯಾಜಕನು ತನ್ನ ಮನೆ ಮುಂದಿದ್ದ ಭಾಗವನ್ನು ರಿಪೇರಿಮಾಡಿದನು. 29 ಇಮೇರನ ಮಗನಾದ ಚಾದೋಕನು ತನ್ನ ಮನೆಯ ಮುಂದಿದ್ದ ಗೋಡೆಯ ಭಾಗವನ್ನು ರಿಪೇರಿ ಮಾಡಿದನು. ಪೂರ್ವ ಬಾಗಿಲಿನ ದ್ವಾರಪಾಲಕನಾಗಿರುವ ಶೆಕನ್ಯನ ಮಗನಾದ ಶೆಮಾಯನು ಮುಂದಿನ ಭಾಗವನ್ನು ರಿಪೇರಿ ಮಾಡಿದನು.
30 ಶೆಲೆಮ್ಯನ ಮಗನಾದ ಹನನ್ಯನೂ ಮತ್ತು ಚಾಲಾಫನ ಆರನೆಯ ಮಗನಾದ ಹಾನೂನನೂ ಉಳಿದ ಭಾಗವನ್ನು ಮುಗಿಸಿದರು.
ಬೆರೆಕ್ಯನ ಮಗನಾದ ಮೆಷುಲ್ಲಾಮ್ ತನ್ನ ಮನೆಯ ಮುಂದಿದ್ದ ಭಾಗವನ್ನು ಕಟ್ಟಿದನು. 31 ವರ್ತಕರ ಮತ್ತು ಆಲಯದ ಸೇವಕರ ಮನೆಗಳ ತನಕದ ಭಾಗವನ್ನು ಮಲ್ಕೀಯನು ರಿಪೇರಿ ಮಾಡಿದನು. ಇದು, “ತನಿಕೆ” ಎಂಬ ಬಾಗಿಲಿನ ಎದುರಿನಲ್ಲಿತ್ತು. ಮೂಲೆಗೋಡೆಯ ಮೇಲಿರುವ ಕೋಣಿಯ ತನಕದ ಭಾಗವನ್ನು ಅಕ್ಕಸಾಲಿಗನಾದ ಮಲ್ಕೀಯನು ರಿಪೇರಿ ಮಾಡಿದನು. 32 ಅಕ್ಕಸಾಲಿಗರು ಮತ್ತು ವರ್ತಕರು ಸೇರಿ ಗೋಡೆ ಮೇಲಿರುವ ಕೋಣಿಯಿಂದ ಹಿಡಿದು, “ಕುರಿ” ಎಂಬ ಬಾಗಿಲಿನ ತನಕದ ಗೋಡೆಯನ್ನು ಕಟ್ಟಿದರು.
ಪವಿತ್ರಾತ್ಮನ ಆಗಮನ
2 ಪಂಚಾಶತ್ತಮ ಹಬ್ಬದ[a] ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು. 2 ಆಗ, ಆಕಾಶದಿಂದ ಒಂದು ಶಬ್ದ ಇದ್ದಕ್ಕಿದ್ದಂತೆ ಬಂದಿತು. ಬಿರುಗಾಳಿ ಬೀಸುತ್ತಿದೆಯೋ ಎಂಬಂತಿತ್ತು ಆ ಶಬ್ದ. ಅವರು ಕುಳಿತುಕೊಂಡಿದ್ದ ಮನೆಯಲ್ಲೆಲ್ಲಾ ಆ ಶಬ್ದ ತುಂಬಿಕೊಂಡಿತು. 3 ಬೆಂಕಿಯ ಜ್ವಾಲೆಗಳಂತಿದ್ದ ಏನನ್ನೊ ಅವರು ಕಂಡರು. ಜ್ವಾಲೆಗಳು ವಿಂಗಡವಾಗಿ ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನೆಲೆಸಿದವು. 4 ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡತೊಡಗಿದರು. ಪವಿತ್ರಾತ್ಮನೇ ಅವರಿಗೆ ಆ ಶಕ್ತಿಯನ್ನು ಕೊಟ್ಟನು.
5 ಬಹು ಧಾರ್ಮಿಕರಾದ ಅನೇಕ ಯೆಹೂದ್ಯರು ಆ ಸಮಯದಲ್ಲಿ ಜೆರುಸಲೇಮಿನಲ್ಲಿದ್ದರು. ಇವರಲ್ಲಿ ಪ್ರಪಂಚದ ಪ್ರತಿಯೊಂದು ದೇಶದಿಂದ ಬಂದ ಜನರಿದ್ದರು. 6 ಈ ಶಬ್ದವನ್ನು ಕೇಳಿ ಈ ಜನರ ಒಂದು ದೊಡ್ಡ ಸಮೂಹವೇ ಅಲ್ಲಿಗೆ ಬಂದಿತು. ಅಪೊಸ್ತಲರು ಮಾತಾಡುತ್ತಿರುವುದು ಪ್ರತಿಯೊಬ್ಬರಿಗೂ ಅವರವರ ಸ್ವಂತ ಭಾಷೆಗಳಲ್ಲಿ ಕೇಳಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.
7 ಇದನ್ನು ನೋಡಿದ ಯೆಹೂದ್ಯರೆಲ್ಲರೂ ವಿಸ್ಮಯಗೊಂಡರು. ಹೀಗೆ ಮಾಡಲು ಅಪೊಸ್ತಲರಿಗೆ ಹೇಗೆ ಸಾಧ್ಯವಾಯಿತೆಂದು ಅವರಿಗೆ ಅರ್ಥವಾಗಲಿಲ್ಲ. ಅವರು, “ಮಾತಾಡುತ್ತಿರುವ ಈ ಜನರು (ಅಪೊಸ್ತಲರು) ಗಲಿಲಾಯದವರು![b] 8 ಆದರೆ ಇವರು ನಮ್ಮ ಸ್ವಂತ ಭಾಷೆಗಳಲ್ಲಿ ಮಾತಾಡುತ್ತಿರುವಂತೆ ಕೇಳಿಸುತ್ತಿದೆ. ಇದು ಹೇಗೆ ಸಾಧ್ಯ? ನಾವು ಬೇರೆಬೇರೆ ಸ್ಥಳಗಳವರು. 9 ನಮ್ಮಲ್ಲಿ ಪಾರ್ಥ್ಯರು, ಮೇದ್ಯರು, ಏಲಾಮಿನವರು, ಮೆಸೊಪೊಟೇಮದವರು, ಯೂದಾಯದವರು, ಕಪ್ಪದೋಕ್ಯಯದವರು, ಪೊಂತದವರು, ಏಷ್ಯಾದವರು,[c] 10 ಫ್ರಿಜಿಯದವರು, ಪಾಂಫಿಲಿಯದವರು, ಈಜಿಪ್ಟ್ನವರು ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರು, ರೋಮ್ನವರು, 11 ಕ್ರೇಟ್ನವರು ಮತ್ತು ಅರೇಬಿಯವರು ಇದ್ದಾರೆ. ನಮ್ಮಲ್ಲಿರುವ ಕೆಲವು ಜನರು ಹುಟ್ಟು ಯೆಹೂದ್ಯರು. ಉಳಿದವರು ಮತಾಂತರ ಹೊಂದಿದವರು. ನಾವು ಬೇರೆಬೇರೆ ದೇಶಗಳವರು. ಆದರೆ ಈ ಜನರು ಮಾತಾಡುತ್ತಿರುವುದು ನಮ್ಮ ಸ್ವಂತ ಭಾಷೆಗಳಲ್ಲಿ ನಮಗೆ ಕೇಳಿಸುತ್ತಿದೆ! ಅವರು ದೇವರ ಬಗ್ಗೆ ಹೇಳುತ್ತಿರುವ ಮಹಾಸಂಗತಿಗಳು ನಮಗೆಲ್ಲರಿಗೂ ಅರ್ಥವಾಗುತ್ತಿವೆ” ಎಂದು ಹೇಳಿದರು.
12 ಜನರೆಲ್ಲರೂ ವಿಸ್ಮಯಗೊಂಡರು ಮತ್ತು ಗಲಿಬಿಲಿಯಾದರು. ಅವರು, “ಏನು ನಡೆಯುತ್ತಿದೆ?” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 13 ಕೆಲವರು ಅಪೊಸ್ತಲರನ್ನು ನೋಡಿ ನಗುತ್ತಾ, “ಇವರು ಅತಿಯಾಗಿ ದ್ರಾಕ್ಷಾರಸ ಕುಡಿದು ಮತ್ತರಾಗಿದ್ದಾರೆ” ಎಂದು ಹಾಸ್ಯಮಾಡಿದರು.
ಪೇತ್ರನ ಪ್ರಸಂಗ
14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. 15 ನೀವು ಯೋಚಿಸಿಕೊಂಡಿರುವಂತೆ ಈ ಜನರು ಕುಡಿದು ಮತ್ತರಾದವರಲ್ಲ. ಈಗ ಮುಂಜಾನೆ ಒಂಭತ್ತು ಗಂಟೆಯಷ್ಟೆ! 16 ಆದರೆ ಈ ಹೊತ್ತು ಇಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಪ್ರವಾದಿಯಾದ ಯೋವೇಲನು ಹೀಗೆ ಬರೆದಿದ್ದಾನೆ:
17 ‘ದೇವರು ಹೀಗೆನ್ನುತ್ತಾನೆ:
ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಎಲ್ಲಾ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಮಕ್ಕಳು, ಹೆಣ್ಣುಮಕ್ಕಳು ಪ್ರವಾದಿಸುವರು.
ನಿಮ್ಮ ಯುವಜನರು ದರ್ಶನಗಳನ್ನು ಕಾಣುವರು.
ನಿಮ್ಮ ವಯೋವೃದ್ಧರು ವಿಶೇಷ ಕನಸುಗಳನ್ನು ಕಾಣುವರು.
18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು.
ಆಗ ಅವರು ಪ್ರವಾದಿಸುವರು.
19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು.
ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು.
ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.
20 ಸೂರ್ಯನು ಕತ್ತಲಾಗುವನು,
ಚಂದ್ರನು ರಕ್ತದಂತೆ ಕೆಂಪಾಗುವನು,
ಆಗ ಪ್ರಭುವಿನ ಗಂಭೀರವಾದ ಮಹಾದಿನವು ಬರುವುದು;
21 ಪ್ರಭುವಿನ ಹೆಸರನ್ನು ಹೇಳಿಕೊಳ್ಳುವವರಿಗೆಲ್ಲ ರಕ್ಷಣೆ ಆಗುವುದು.’(A)
Kannada Holy Bible: Easy-to-Read Version. All rights reserved. © 1997 Bible League International