Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಎಜ್ರ 9-10

ಯೆಹೂದ್ಯರಲ್ಲದ ಅನ್ಯರೊಂದಿಗೆ ಮದುವೆ

ಇವೆಲ್ಲಾ ಆದ ಬಳಿಕ ಇಸ್ರೇಲರ ಪ್ರಧಾನರು ನನ್ನ ಬಳಿಗೆ ಬಂದು, “ಎಜ್ರನೇ, ಇಸ್ರೇಲ್ ಜನರು ಸುತ್ತಲೂ ವಾಸಿಸುವ ಅನ್ಯಜನರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ಯಾಜಕರಾಗಲಿ ಲೇವಿಯರಾಗಲಿ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ದೇಶದಲ್ಲಿ ವಾಸವಾಗಿರುವ ಕಾನಾನ್ಯರ, ಹಿತ್ತಿಯರ, ಪೆರಿಜ್ಜೀಯರ, ಯೆಬೂಸಿಯರ, ಅಮ್ಮೋನಿಯರ, ಮೋವಾಬ್ಯರ, ಅಮೋರಿಯರ, ಈಜಿಪ್ಟಿನವರ ಕೆಟ್ಟ ಜೀವಿತವು ಇಸ್ರೇಲರ ಮೇಲೆ ಪ್ರಭಾವಬೀರಿದೆ. ಇಸ್ರೇಲ್ ಜನರು ತಮ್ಮ ಸುತ್ತಲು ವಾಸಿಸುವ ಜನರೊಂದಿಗೆ ಮದುವೆಯಾಗಿದ್ದಾರೆ. ಇಸ್ರೇಲ್ ಜನರು ದೇವರ ವಿಶೇಷ ಜನರಾಗಿದ್ದಾರೆ. ಆದರೆ ಈಗ ಅನ್ಯರೊಂದಿಗೆ ಬೆರೆತು ಹೋಗಿದ್ದಾರೆ. ಇಸ್ರೇಲರ ಪ್ರಧಾನರು, ಮುಖ್ಯಾಧಿಕಾರಿಗಳು ಈ ರೀತಿಯಾಗಿ ಮಾಡಿ ಜನರಿಗೆ ಕೆಟ್ಟ ಮಾದರಿಯಾಗಿ ಜೀವಿಸುತ್ತಿದ್ದಾರೆ” ಎಂದು ಹೇಳಿದರು. ಇದನ್ನು ಕೇಳಿದೊಡನೆ ನನ್ನ ಮನಸ್ಸಿನ ದುಃಖವನ್ನು ತೋರಿಸುವಂತೆ ನನ್ನ ಬಟ್ಟೆಯನ್ನು ಹರಿದು ಹಾಕಿದೆನು. ನನ್ನ ತಲೆಯ ಮತ್ತು ಗಡ್ಡದ ಕೂದಲನ್ನು ಕೆದರಿಕೊಂಡು ದಿಗ್ಭ್ರಮೆಗೊಂಡವನಾಗಿಯೂ ಬೇಸರಗೊಂಡವನಾಗಿಯೂ ಕುಳಿತುಕೊಂಡೆನು. ಇದನ್ನು ನೋಡಿ ದೇವರ ಕಟ್ಟಳೆಗಳನ್ನು ಗೌರವಿಸುವ ಪ್ರತಿಯೊಬ್ಬನು ಭಯಪಟ್ಟನು; ನಡುಗಿದನು. ಯಾಕೆಂದರೆ ಸೆರೆವಾಸದಿಂದ ಹಿಂದಿರುಗಿ ಬಂದ ಇಸ್ರೇಲರು ದೇವರಿಗೆ ನಂಬಿಗಸ್ತರಾಗಿರಲಿಲ್ಲ. ನಾನೂ ನನ್ನೊಂದಿಗಿದ್ದ ಜನರೂ ಸಾಯಂಕಾಲದ ಯಜ್ಞವನ್ನರ್ಪಿಸುವ ಸಮಯದ ತನಕ ಹಾಗೆಯೇ ಕುಳಿತಿದ್ದೆವು.

ಸಾಯಂಕಾಲದ ನೈವೇದ್ಯ ಸಮರ್ಪಣೆಯ ಸಮಯದಲ್ಲಿ ನಾನು ಕುಳಿತಲ್ಲಿಂದ ಎದ್ದೆನು. ನನ್ನ ಬಟ್ಟೆಗಳು ಹರಿದಿದ್ದವು. ನಾನು ಮೊಣಕಾಲೂರಿ ಕೈಗಳನ್ನು ದೇವರಾದ ಯೆಹೋವನ ಕಡೆಗೆ ಚಾಚಿ ಹೀಗೆ ಪ್ರಾರ್ಥಿಸಿದೆನು:

“ನನ್ನ ದೇವರೇ, ನಿನ್ನ ಕಡೆಗೆ ಮುಖವೆತ್ತಲು ನನಗೆ ನಾಚಿಕೆಯಾಗುತ್ತದೆ; ಯಾಕೆಂದರೆ ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿದೆ. ನಮ್ಮ ಅಪರಾಧಗಳ ರಾಶಿಯು ಪರಲೋಕದವರೆಗೂ ಏರಿಹೋಗಿದೆ. ನಮ್ಮ ಪೂರ್ವಿಕರ ಕಾಲದಿಂದ ಈ ತನಕ ನಾವು ಮಹಾಪರಾಧಗಳನ್ನು ಮಾಡಿದ್ದೇವೆ. ನಮ್ಮ ಪಾಪಗಳಿಗಾಗಿ ನಮಗೂ ನಮ್ಮ ರಾಜರುಗಳಿಗೂ ನಮ್ಮ ಯಾಜಕರುಗಳಿಗೂ ಶಿಕ್ಷೆಯಾಯಿತು. ಅನ್ಯದೇಶದ ರಾಜರುಗಳು ನಮ್ಮ ದೇಶವನ್ನು ಆಕ್ರಮಿಸಿ ನಮ್ಮ ಜನರನ್ನು ಸೆರೆಯಾಳುಗಳಾಗಿ ಒಯ್ದರು; ನಮ್ಮ ಐಶ್ವರ್ಯವನ್ನು ಸೂರೆಗೈದು ನಮ್ಮನ್ನು ನಾಚಿಕೆಗೆ ಒಳಪಡಿಸಿದರು. ಈಗಲೂ ಅದೇ ಅನುಭವ ನಮಗಾಗಿದೆ!

“ಈಗಲಾದರೋ ನೀನು ನಮ್ಮ ಮೇಲೆ ದಯೆ ತೋರಿಸಿರುವೆ. ಸೆರೆಯಲ್ಲಿದ್ದ ನಿನ್ನ ಜನರಲ್ಲಿ ಕೆಲವರು ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಪರಿಶುದ್ಧ ದೇಶದಲ್ಲಿ ವಾಸಿಸುವಂತೆ ಮಾಡಿರುವೆ; ಗುಲಾಮತನದಿಂದ ನಮ್ಮನ್ನು ಬಿಡುಗಡೆ ಮಾಡಿ ಹೊಸಜೀವ ಕೊಟ್ಟಿರುವೆ. ಹೌದು, ನಾವು ಗುಲಾಮರಾಗಿದ್ದೆವು. ಆದರೆ ಸದಾಕಾಲ ಗುಲಾಮರಾಗಲು ನೀನು ನಮ್ಮನ್ನು ಬಿಡಲಿಲ್ಲ. ನಮ್ಮ ಮೇಲೆ ನೀನು ದಯೆ ತೋರಿಸಿರುವೆ. ಪರ್ಶಿಯ ರಾಜರು ನಮಗೆ ಕರುಣೆತೋರುವಂತೆ ಮಾಡಿದೆ. ನಿನ್ನ ಆಲಯವು ಹಾಳಾಗಿತ್ತು. ನಿನ್ನ ಆ ಆಲಯವನ್ನು ಮತ್ತೆ ಹೊಸದಾಗಿ ಕಟ್ಟಲು ನೀನು ನಮಗೆ ಹೊಸ ಜೀವವನ್ನು ಕೊಟ್ಟಿರುವೆ. ದೇವರೇ, ಯೆಹೂದ ಮತ್ತು ಜೆರುಸಲೇಮ್‌ಗಳ ಸಂರಕ್ಷಣೆಗಾಗಿ ಗೋಡೆಯನ್ನು ಕಟ್ಟಲು ನೀನು ನಮಗೆ ಸಹಾಯಮಾಡಿದೆ.

10 “ದೇವರೇ, ಈಗ ನಾವು ನಿನಗೆ ಏನು ಹೇಳೋಣ? ನಾವು ನಿನಗೆ ವಿಧೇಯರಾಗುವುದನ್ನು ನಿಲ್ಲಿಸಿದ್ದೇವೆ. 11 ದೇವರೇ, ನೀನು ನಿನ್ನ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ಆ ಆಜ್ಞೆಗಳನ್ನು ಕೊಟ್ಟಿರುವೆ. ನೀನು ಹೀಗೆ ಹೇಳಿದೆ: ‘ನೀವು ವಾಸಿಸಲಿರುವ ಮತ್ತು ನಿಮ್ಮದನ್ನಾಗಿಸಿಕೊಳ್ಳುವ ನಾಡು ಪಾಳಾಗಿರುವ ನಾಡಾಗಿದೆ. ಅಲ್ಲಿಯ ಜನರು ಎಲ್ಲೆಲ್ಲಿಯೂ ಮಾಡಿರುವ ಕೆಟ್ಟಕೃತ್ಯಗಳಿಂದ ಅದು ಹಾಳಾಗಿದೆ; ಅವರು ತಮ್ಮ ಪಾಪಗಳಿಂದ ಆ ನಾಡನ್ನು ಹೊಲಸು ಮಾಡಿದ್ದಾರೆ. 12 ಆದ್ದರಿಂದ ಇಸ್ರೇಲ್ ಜನರೇ, ನಿಮ್ಮ ಮಕ್ಕಳು ಅವರ ಮಕ್ಕಳನ್ನು ಮದುವೆಯಾಗಲು ಬಿಡಬೇಡಿ. ಅವರ ಸಹವಾಸ ಮಾಡಬೇಡಿರಿ. ಅವರ ವಸ್ತುಗಳನ್ನು ಆಶಿಸಬೇಡಿರಿ. ನನ್ನ ಕಟ್ಟಳೆಗಳನ್ನು ಪಾಲಿಸಿರಿ; ಆಗ ನೀವು ಬಲಶಾಲಿಗಳಾಗಿ ಈ ದೇಶವನ್ನು ಅನುಭವಿಸುವಿರಿ. ಈ ದೇಶವನ್ನು ನೀನು ಇಟ್ಟುಕೊಂಡವರಾಗಿ ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವಿರಿ.’

13 “ನಮಗೆ ಒದಗಿದ ಕೆಡುಕು, ಸಂಕಟಗಳಿಗೆ ನಾವೇ ಕಾರಣರು. ನಾವು ಅನೀತಿ ಕೆಲಸಗಳನ್ನು ಮಾಡಿದ್ದೆವು. ಅದಕ್ಕೆ ಅನುಭವಿಸಬೇಕಾಗಿದ್ದ ಶಿಕ್ಷೆಯನ್ನು ನೀನು ನಮಗೆ ವಿಧಿಸಲಿಲ್ಲ. ನಾವು ಅತಿಘೋರವಾದ ಪಾಪಗಳನ್ನು ಮಾಡಿದ್ದಕ್ಕೆ ಅತ್ಯಂತ ಘೋರ ಶಿಕ್ಷೆಯು ನಮಗೆ ದೊರಕ ಬೇಕಿತ್ತು. ಆದರೂ ನೀನು ನಮ್ಮವರಲ್ಲಿ ಕೆಲವರನ್ನು ಸೆರೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ. 14 ನಿನ್ನ ಆಜ್ಞೆಗಳಿಗೆ ಅವಿಧೇಯರಾಗಬಾರದೆಂದು ಈಗ ನಮಗೆ ತಿಳಿಯುತ್ತದೆ. ಅನ್ಯಜನರನ್ನು ಮದುವೆ ಮಾಡಿಕೊಳ್ಳಬಾರದು. ಅವರು ಘೋರ ಪಾಪಿಗಳು. ನಾವು ಹೀಗೆಯೇ ಅವರೊಂದಿಗೆ ಮದುವೆಯಾದರೆ ನೀನು ನಮ್ಮನ್ನು ನಾಶಮಾಡುವೆ ಎಂದು ನಾವು ತಿಳಿದಿದ್ದೇವೆ. ಹೀಗಿರುವಲ್ಲಿ ಇಸ್ರೇಲ್ ಜನಾಂಗದಲ್ಲಿ ಯಾರೂ ಉಳಿಯಲಾರರು.

15 “ಇಸ್ರೇಲಿನ ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ನಮ್ಮ ಜನಾಂಗದ ಕೆಲವರನ್ನಾದರೂ ಉಳಿದುಕೊಳ್ಳುವಂತೆ ಮಾಡಿರುವೆ. ಹೌದು, ನಾವು ಪಾಪಿಗಳು. ನಮ್ಮ ಅಪರಾಧಗಳ ದೆಸೆಯಿಂದ ಯಾರೂ ನಿನ್ನ ಮುಂದೆ ನಿಲ್ಲಲು ಸಾಧ್ಯವಿಲ್ಲ.”

ಜನರು ಪಾಪವನ್ನು ಅರಿಕೆ ಮಾಡಿದ್ದು

10 ದೇವಾಲಯದೆದುರು ಎಜ್ರನು ರೋಧಿಸುತ್ತಾ, ದೇವರಿಗೆ ಅಡ್ಡಬಿದ್ದು ಪ್ರಾರ್ಥಿಸುತ್ತಾ ಪಾಪದರಿಕೆ ಮಾಡುತ್ತಾ ಇರುವಾಗ ಅವನ ಸುತ್ತಲೂ ಅನೇಕ ಮಂದಿ ಇಸ್ರೇಲರ ಗಂಡಸರು, ಹೆಂಗಸರು, ಮಕ್ಕಳು ಸೇರಿಬಂದರು. ಅವರೂ ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ಆಗ ಏಲಾಮನ ಸಂತತಿಯವನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ ಹೀಗೆಂದನು: “ನಾವು ದೇವರಿಗೆ ನಂಬಿಗಸ್ತರಾಗಿರಲಿಲ್ಲ. ನಾವು ಅನ್ಯಜನರೊಂದಿಗೆ ಮದುವೆಯಾಗಿದ್ದೇವೆ. ಹಾಗಿದ್ದರೂ ಇಸ್ರೇಲರಿಗೆ ಒಂದು ನಿರೀಕ್ಷೆ ಇದೆ. ಈಗ ನಾವು ದೇವರ ಮುಂದೆ ಅನ್ಯರಾದ ಹೆಂಡತಿಯರನ್ನೂ ಅವರ ಮಕ್ಕಳನ್ನೂ ತೊರೆದುಬಿಡುತ್ತೇವೆಂದು ಒಡಂಬಡಿಕೆ ಮಾಡೋಣ. ಹೀಗೆ ಮಾಡುವುದರಿಂದ ಎಜ್ರನ ಮತ್ತು ದೇವರ ಕಟ್ಟಳೆಗಳನ್ನು ಗೌರವಿಸುವವರ ಸಲಹೆಯನ್ನು ನಾವು ಅನುಸರಿಸುವವರಾಗಿರುತ್ತೇವೆ; ನಾವು ದೇವರ ಕಟ್ಟಳೆಗೆ ವಿಧೇಯರಾಗುತ್ತೇವೆ. ಎಜ್ರನೇ, ಎದ್ದೇಳು, ಇದು ನಿನ್ನ ಜವಾಬ್ದಾರಿಕೆ. ನಾವು ನಿನ್ನನ್ನು ಬೆಂಬಲಿಸುತ್ತೇವೆ; ಧೈರ್ಯದಿಂದ ಈ ಕೆಲಸವನ್ನು ಪ್ರಾರಂಭಿಸು.”

ಎಜ್ರನು ಎದ್ದುನಿಂತು ಮಹಾಯಾಜಕರೂ, ಲೇವಿಯರೂ ಮತ್ತು ಇಸ್ರೇಲಿನ ಜನರೂ ಅವನು ಹೇಳಿದ ಪ್ರಕಾರ ಮಾಡುತ್ತೇವೆ ಎಂಬ ಪ್ರತಿಜ್ಞೆಯನ್ನು ಅವರಿಂದ ತೆಗೆದುಕೊಂಡನು. ಎಜ್ರನು ಅಲ್ಲಿಂದೆದ್ದು ಎಲ್ಯಾಷೀಬನ ಮಗನಾದ ಯೆಹೋಹಾನನ ಕೋಣೆಗೆ ಹೋಗಿ ಅಲ್ಲಿ ಅನ್ನನೀರಿಲ್ಲದೆ ದುಃಖತಪ್ತನಾಗಿದ್ದನು. ಯಾಕೆಂದರೆ ಸೆರೆಯಿಂದ ಜೆರುಸಲೇಮಿಗೆ ಬಂದಿದ್ದ ಯೆಹೂದ್ಯರ ದ್ರೋಹದ[a] ಬಗ್ಗೆ ಅವನು ತುಂಬಾ ದುಃಖಿತನಾಗಿದ್ದನು. ಆಮೇಲೆ ಅವನು ಯೆಹೂದಪ್ರಾಂತ್ಯ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರಿಗೆ ಸಂದೇಶ ಕಳುಹಿಸಿದನು. ಅದರಲ್ಲಿ, ಸೆರೆಯಿಂದ ಹಿಂದಿರುಗಿದ್ದ ಯೆಹೂದ್ಯರೆಲ್ಲರೂ ಜೆರುಸಲೇಮಿನಲ್ಲಿ ಬಂದು ಸೇರಬೇಕು. ಮೂರು ದಿನಗಳೊಳಗೆ ಯಾರಾದರೂ ಬಾರದೆ ಹೋದಲ್ಲಿ ಅವರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವರು. ಈ ತೀರ್ಮಾನವನ್ನು ಪ್ರಮುಖರೂ ಅಧಿಕಾರಿಗಳೂ ಮಾಡಿದ್ದಾರೆ; ಆ ಮನುಷ್ಯನು ತಾನು ವಾಸಮಾಡುವ ಜನರ ಅನ್ಯೋನ್ಯತೆಯಿಂದ ತೆಗೆಯಲ್ಪಡುವನು.

ಮೂರು ದಿನಗಳೊಳಗೆ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳವರಿಂದ ಎಲ್ಲಾ ಗಂಡಸರು ಒಂಭತ್ತನೆಯ ತಿಂಗಳಿನ ಇಪ್ಪತ್ತನೆಯ ದಿವಸದಲ್ಲಿ ಜೆರುಸಲೇಮಿನ ದೇವಾಲಯದ ಅಂಗಳಕ್ಕೆ ಬಂದು ಸೇರಿದರು. ನಡೆಯಲಿಕ್ಕಿರುವ ಕೂಟದ ಉದ್ದೇಶದಿಂದಲೂ ಆ ದಿವಸ ಬಂದಿದ್ದ ಮಳೆಯ ದೆಸೆಯಿಂದಲೂ ನೆರೆದಿದ್ದ ಜನರು ನಡುಗುತ್ತಿದ್ದರು. 10 ಆಗ ಎಜ್ರನು ಎದ್ದುನಿಂತು ಜನರನ್ನುದ್ದೇಶಿಸಿ ಹೇಳಿದ್ದೇನೆಂದರೆ: “ನೀವು ದೇವರಿಗೆ ವಿಧೇಯರಾಗಿರಲಿಲ್ಲ. ಅನ್ಯಮತದ ಹೆಂಗಸರನ್ನು ನೀವು ಮದುವೆಯಾಗಿರುತ್ತೀರಿ. ಹೀಗೆ ಇಸ್ರೇಲಿನ ಪಾಪವು ಹೆಚ್ಚುವಂತೆ ನೀವು ಮಾಡಿದಿರಿ. 11 ಈಗ ನೀವು ಯೆಹೋವನಿಗೆ ವಿರೋಧವಾಗಿ ಪಾಪ ಮಾಡಿರುವುದಾಗಿ ಅರಿಕೆ ಮಾಡಬೇಕು. ಆತನೇ ನಮ್ಮ ಪೂರ್ವಿಕರ ದೇವರಾದ ಯೆಹೋವನು. ಆತನ ಆಜ್ಞೆಗಳಿಗೆ ನೀವು ವಿಧೇಯರಾಗಬೇಕು. ನಿಮ್ಮ ಅನ್ಯಜಾತಿಯ ಹೆಂಡತಿಯರಿಂದಲೂ ನಿಮ್ಮ ಸುತ್ತಲು ವಾಸಿಸುವ ಅನ್ಯ ಜನಾಂಗದವರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ.”

12 ಆಗ ಅಲ್ಲಿ ನೆರೆದುಬಂದವರೆಲ್ಲರೂ ಗಟ್ಟಿಯಾಗಿ ಎಜ್ರನಿಗೆ ಉತ್ತರಿಸುತ್ತಾ, “ಎಜ್ರನೇ, ನೀನು ಸರಿಯಾಗಿ ಹೇಳಿರುವೆ! ನೀನು ಹೇಳಿದಂತೆಯೇ ನಾವು ಮಾಡಬೇಕು. 13 ಆದರೆ ಇಲ್ಲಿ ಹೆಚ್ಚು ಜನರು ಸೇರಿಬಂದಿದ್ದಾರೆ. ಮಳೆ ಸುರಿಯುತ್ತಲಿದೆ. ನಾವು ಹೆಚ್ಚು ಸಮಯ ಮಳೆಯಲ್ಲಿರಲು ಸಾಧ್ಯವಿಲ್ಲ. ನಾವು ಬಹಳ ಘೋರವಾದ ಪಾಪಮಾಡಿರುವುದರಿಂದ ಈ ಸಮಸ್ಯೆಯು ಒಂದೆರಡು ದಿನಗಳಲ್ಲಿ ಮುಗಿಯುವಂಥದಲ್ಲ. 14 ಈ ಕೂಟದಲ್ಲಿ ನಮ್ಮ ಹಿರಿಯರು, ಪ್ರಧಾನರು ಒಂದು ತೀರ್ಮಾನಕ್ಕೆ ಬರಲಿ. ಆಮೇಲೆ ನಮ್ಮನಮ್ಮ ಊರಿನಲ್ಲಿ ಅನ್ಯಸ್ತ್ರೀಯರನ್ನು ಮದುವೆ ಆದವರು ತಮ್ಮ ಪ್ರಧಾನರೊಂದಿಗೆ ಒಂದು ನೇಮಿತ ಸಮಯದಲ್ಲಿ ಇಲ್ಲಿಗೆ ಬರಲಿ. ಆಗ ದೇವರು ನಮ್ಮ ಮೇಲಿರುವ ತನ್ನ ಕೋಪವನ್ನು ನಿವಾರಿಸುವನು” ಎಂದು ಹೇಳಿದರು.

15 ಕೆಲವೇ ಮಂದಿ ಈ ಯೋಜನೆಗೆ ಒಪ್ಪಲಿಲ್ಲ. ಅವರಲ್ಲಿ ಅಸಾಹೇಲನ ಮಗನಾದ ಯೋನಾತಾನನೂ, ತಿಕ್ವನ ಮಗನಾದ ಯೆಹ್ಜೆಯನೂ ಇದ್ದರು. ಮೆಷುಲ್ಲಾಮ್ ಮತ್ತು ಲೇವಿಯನಾದ ಶಬ್ಚೆತೈ ಸಹ ಈ ಯೋಜನೆಗೆ ವಿರುದ್ಧವಾಗಿದ್ದರು.

16 ಜೆರುಸಲೇಮಿಗೆ ಹಿಂತಿರುಗಿಬಂದ ಇಸ್ರೇಲರು ಈ ಯೋಜನೆಯನ್ನು ಒಪ್ಪಿದ ಬಳಿಕ ಎಜ್ರನು ಅವರವರ ವಂಶದ ನಾಯಕರನ್ನು ಆರಿಸಿದನು. ಒಂದೊಂದು ವಂಶಕ್ಕೆ ಒಬ್ಬೊಬ್ಬ ನಾಯಕನನ್ನು ಆರಿಸಿಕೊಂಡನು. ಪ್ರತಿಯೊಬ್ಬನು ಹೆಸರಿಗನುಸಾರವಾಗಿ ಆರಿಸಲ್ಪಟ್ಟನು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಆ ನಾಯಕರೆಲ್ಲಾ ಒಟ್ಟಾಗಿಸೇರಿ ಒಂದೊಂದೇ ಪ್ರಕರಣಗಳನ್ನು ವಿಚಾರಿಸಿದರು. 17 ಮೊದಲನೇ ತಿಂಗಳಿನ ಮೊದಲನೆಯ ದಿನದಲ್ಲಿ ಎಲ್ಲಾ ಅನ್ಯಸ್ತ್ರೀಯರನ್ನು ಮದುವೆಯಾದವರ ವಿಷಯವನ್ನು ಪರಿಶೀಲಿಸುವ ಕಾರ್ಯವನ್ನು ಮುಗಿಸಿದರು.

ಅನ್ಯಸ್ತ್ರೀಯರನ್ನು ಮದುವೆ ಆದವರ ಪಟ್ಟಿ

18 ಯಾಜಕ ಸಂತತಿಯವರಲ್ಲಿ ಅನ್ಯಸ್ತ್ರೀಯರನ್ನು ಮದುವೆಯಾದವರು:

ಯೋಚಾದಾಕನ ಮಗನಾದ ಯೇಷೂವ ಮತ್ತು ಅವನ ಸಹೋದರರಾದ ಮಾಸೇಯ, ಎಲೀಯೆಜರ್, ಯಾರೀಬ್ ಮತ್ತು ಗೆದಲ್ಯ. 19 ಇವರೆಲ್ಲಾ ತಮ್ಮ ಹೆಂಡತಿಯರನ್ನು ಬಿಟ್ಟುಬಿಡಬೇಕೆಂದು ತೀರ್ಮಾನಿಸಿದರು. ಇವರಲ್ಲಿ ಪ್ರತಿಯೊಬ್ಬರು ದೋಷಪರಿಹಾರಕ್ಕಾಗಿ ಹಿಂಡಿನ ಟಗರನ್ನು ಯಜ್ಞ ಮಾಡಿದರು.

20 ಇಮ್ಮೇರನ ಸಂತತಿಯವರಲ್ಲಿ ಹನಾನೀ, ಜೆಬದ.

21 ಹಾರೀಮನ ಸಂತತಿಯವರಲ್ಲಿ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್ ಮತ್ತು ಉಜ್ಜೀಯ.

22 ಪಷ್ಹೂರನ ಸಂತತಿಯವರಲ್ಲಿ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೇಲ್, ಯೋಜಾಬಾದ್ ಮತ್ತು ಎಲ್ಲಾಸ.

23 ಲೇವಿಯವರಲ್ಲಿ

ಯೋಜಾಬಾದ್, ಶಿಮ್ಮೀ, ಕೆಲೀಟ, ಪೆತಹ್ಯ, ಯೆಹೂದ ಮತ್ತು ಎಲೀಯೆಜೆರ್.

ಇವರೆಲ್ಲಾ ಅನ್ಯಸ್ತ್ರೀಯರನ್ನು ವಿವಾಹ ಮಾಡಿಕೊಂಡಿದ್ದರು.

24 ಗಾಯಕರಲ್ಲಿ ಎಲ್ಯಾಷೀಬ್ ಎಂಬವನು ಅನ್ಯಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ದ್ವಾರಪಾಲಕರಲ್ಲಿ ಶಲ್ಲೂಮ್, ಟೆಲೆಮ್ ಮತ್ತು ಊರೀ.

25 ಇಸ್ರೇಲ್ ಜನಾಂಗದವರಿಂದ

ಪರೋಷನ ಸಂತಾನದಲ್ಲಿ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್, ಎಲ್ಲಾಜಾರ್, ಮಲ್ಕೀಯ ಮತ್ತು ಬೆನಾಯ.

26 ಏಲಾಮನ ಸಂತತಿಯವರಲ್ಲಿ ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್ ಮತ್ತು ಏಲೀಯ.

27 ಜತ್ತೂವಿನ ಸಂತತಿಯವರಲ್ಲಿ ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ್ ಮತ್ತು ಅಜೀಚಾ.

28 ಬೇಬೈಯ ಸಂತತಿಯಿಂದ ಯೆಹೋಹಾನಾನ್, ಹನನ್ಯ, ಜಬ್ಬೈ ಮತ್ತು ಅತ್ಲೈ.

29 ಬಾನೀ ಸಂತತಿಯಿಂದ ಮೆಷುಲ್ಲಾಮ್, ಮಲ್ಲೂಕ್, ಆದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್.

30 ಪಹತ್ ಮೋವಾಬನ ಸಂತತಿಯಿಂದ ಆದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್ ಮತ್ತು ಮನಸ್ಸೆ.

31 ಹಾರೀಮ್‌ನ ಸಂತತಿಯಿಂದ ಎಲೀಯೆಜೆರ್, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್, 32 ಬೆನ್ಯಾಮೀನ್, ಮಲ್ಲೂಕ್ ಮತ್ತು ಶೆಮರ್ಯ.

33 ಹಾಷುಮನ ಸಂತತಿಯಿಂದ ಮತ್ತೆನೈ, ಮತ್ತತ್ತ, ಜಾಬಾದ್, ಎಲಿಫೆಲೆಟ್, ಯೆರೇಮೈ, ಮನಸ್ಸೆ ಮತ್ತು ಶಿಮ್ಮೀ.

34 ಬಾನೀಯ ಸಂತತಿಯಿಂದ ಮಾದೈ, ಅಮ್ರಾಮ್, ಊವೇಲ್, 35 ಬೆನಾಯ, ಬೇದೆಯ, ಕೆಲೂಹು, 36 ವನ್ಯಾಹ, ಮೆರೇಮೊತ್, ಎಲ್ಯಾಷೀಬ್, 37 ಮತ್ತನ್ಯ, ಮತ್ತನೈ ಮತ್ತು ಯಾಸೈ.

38 ಬಿನ್ನೂಯಿಯ ಸಂತತಿಯವರಿಂದ ಯಾರೆಂದರೆ: ಶಿಮ್ಮೀ, 39 ಶೆಲೆಮ್ಯ, ನಾತಾನ್, ಆದಾಯ, 40 ಮಕ್ನದೆಬೈ, ಶಾಷೈ, ಶಾರೈ, 41 ಅಜರೇಲ್, ಶೆಲೆಮ್ಯ, ಶೆಮರ್ಯ, 42 ಶಲ್ಲೂಮ್, ಅಮರ್ಯ ಮತ್ತು ಯೋಸೇಫ್.

43 ನೆಬೋನ ಸಂತತಿಯಿಂದ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್ ಮತ್ತು ಬೆನಾಯ.

44 ಇವರೆಲ್ಲಾ ಅನ್ಯಸ್ತ್ರೀಯರನ್ನು ಮದುವೆಯಾದವರು. ಕೆಲವರಿಗೆ ಆ ಸ್ತ್ರೀಯರಲ್ಲಿ ಮಕ್ಕಳೂ ಹುಟ್ಟಿದ್ದರು.

ಅಪೊಸ್ತಲರ ಕಾರ್ಯಗಳು 1

ಲೂಕನು ಬರೆದ ಎರಡನೆ ಪುಸ್ತಕ

ಪ್ರಿಯ ಥೆಯೊಫಿಲನೇ,

ಯೇಸು ಮಾಡಿದ ಕಾರ್ಯಗಳ ಬಗ್ಗೆ ಮತ್ತು ನೀಡಿದ ಬೋಧನೆಗಳ ಬಗ್ಗೆ ಪ್ರತಿಯೊಂದನ್ನು ನಾನು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದೆನು. ನಾನು ಯೇಸುವಿನ ಇಡೀ ಜೀವಮಾನದ ಬಗ್ಗೆ ಅಂದರೆ ಆತನು ಪರಲೋಕಕ್ಕೆ ಏರಿಹೋಗುವವರೆಗೆ ನಡೆದ ಸಂಗತಿಗಳನ್ನು ಬರೆದೆನು. ಯೇಸು ಪರಲೋಕಕ್ಕೆ ಎತ್ತಲ್ಪಡುವದಕ್ಕಿಂತ ಮೊದಲು, ತಾನು ಆರಿಸಿಕೊಂಡಿದ್ದ ಅಪೊಸ್ತಲರೊಂದಿಗೆ[a] ಮಾತಾಡಿದನು; ಅವರು ಮಾಡಬೇಕಾದದ್ದನ್ನು ಪವಿತ್ರಾತ್ಮನ[b] ಸಹಾಯದಿಂದ ಅವರಿಗೆ ತಿಳಿಸಿದನು. ಇದು ಆತನ ಮರಣಾನಂತರ ನಡೆದ ಸಂಗತಿ. ತಾನು ಜೀವಂತವಾಗಿರುವುದನ್ನು ಆತನು ಅಪೊಸ್ತಲರಿಗೆ ತೋರ್ಪಡಿಸಿದನು ಮತ್ತು ಶಕ್ತಿಯುತವಾದ ಅನೇಕ ಕಾರ್ಯಗಳನ್ನು ಮಾಡುವುದರ ಮೂಲಕ ಅದನ್ನು ನಿರೂಪಿಸಿದನು. ಯೇಸು ಜೀವಂತವಾಗಿ ಎದ್ದುಬಂದ ನಂತರದ ನಲವತ್ತು ದಿನಗಳ ಅವಧಿಯಲ್ಲಿ ಅಪೊಸ್ತಲರು ಆತನನ್ನು ಅನೇಕ ಸಲ ನೋಡಿದರು. ಯೇಸು ದೇವರ ರಾಜ್ಯದ ಕುರಿತು ಅಪೊಸ್ತಲರೊಂದಿಗೆ ಮಾತಾಡಿದನು. ಒಮ್ಮೆ, ಯೇಸು ಅವರೊಂದಿಗೆ ಊಟ ಮಾಡುತ್ತಿದ್ದಾಗ, ಜೆರುಸಲೇಮನ್ನು ಬಿಟ್ಟುಹೋಗಬಾರದೆಂದು ಅವರಿಗೆ ಹೇಳಿದನು. “ತಂದೆಯು ನಿಮಗೊಂದು ವಾಗ್ದಾನವನ್ನು ಮಾಡಿದ್ದಾನೆ. ನಾನು ಮೊದಲೇ ಅದರ ಬಗ್ಗೆ ನಿಮಗೆ ತಿಳಿಸಿದ್ದೇನೆ. ಈ ವಾಗ್ದಾನವನ್ನು ಸ್ವೀಕರಿಸಿಕೊಳ್ಳಲು ಜೆರುಸಲೇಮಿನಲ್ಲಿ ಕಾದುಕೊಂಡಿರಿ. ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನವಾಗುವುದು” ಎಂದು ಆತನು ಹೇಳಿದನು.

ಪರಲೋಕಾರೋಹಣ

ಅಪೊಸ್ತಲರು ಒಟ್ಟಾಗಿ ಸೇರಿದ್ದಾಗ, ಅವರು ಯೇಸುವಿಗೆ, “ಪ್ರಭುವೇ, ನೀನು ಯೆಹೂದ್ಯರಿಗೆ ಮತ್ತೆ ಅವರ ರಾಜ್ಯವನ್ನು ಕೊಡುವಂಥದ್ದು ಈ ಕಾಲದಲ್ಲೋ?” ಎಂದು ಕೇಳಿದರು.

ಯೇಸು ಅವರಿಗೆ, “ದಿನಗಳನ್ನು ಮತ್ತು ಕಾಲಗಳನ್ನು ನಿರ್ಧರಿಸುವ ಅಧಿಕಾರವಿರುವುದು ತಂದೆಯೊಬ್ಬನಿಗಷ್ಟೇ. ನೀವು ಅವುಗಳನ್ನು ತಿಳಿದುಕೊಳ್ಳಲಾಗುವುದಿಲ್ಲ. ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲಹೊಂದಿ ಜೆರುಸಲೇಮಿನಲ್ಲಿಯೂ ಇಡೀ ಜುದೇಯದಲ್ಲಿಯೂ ಸಮಾರ್ಯದಲ್ಲಿಯೂ ಮತ್ತು ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದನು.

ಯೇಸು ಈ ಸಂಗತಿಗಳನ್ನು ಅಪೊಸ್ತಲರಿಗೆ ಹೇಳಿದ ಮೇಲೆ ಅಪೊಸ್ತಲರು ನೋಡುತ್ತಿರುವಾಗಲೇ ಆಕಾಶಕ್ಕೆ ಎತ್ತಲ್ಪಟ್ಟನು. ಮೋಡವು ಆತನನ್ನು ಕವಿದುಕೊಂಡದ್ದರಿಂದ ಅವರು ಆತನನ್ನು ಕಾಣಲಾಗಲಿಲ್ಲ. 10 ಯೇಸು ಹೋಗುತ್ತಿರಲು ಅಪೊಸ್ತಲರು ಆಕಾಶವನ್ನೇ ನೋಡುತ್ತಾ ನಿಂತಿದ್ದರು. ಆಗ, ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ಪುರುಷರು (ದೇವದೂತರು) ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತುಕೊಂಡು, 11 “ಗಲಿಲಾಯದವರೇ, ಏಕೆ ಆಕಾಶವನ್ನೇ ನೋಡುತ್ತಾ ನಿಂತುಕೊಂಡಿದ್ದೀರಿ? ಯೇಸು ನಿಮ್ಮ ಕಣ್ಣೆದುರಿನಲ್ಲಿ ಪರಲೋಕಕ್ಕೆ ಹೇಗೆ ಏರಿ ಹೋದನೋ ಅದೇ ರೀತಿಯಲ್ಲಿ ಹಿಂತಿರುಗಿ ಬರುತ್ತಾನೆ” ಎಂದು ಹೇಳಿದರು.

ಹೊಸ ಅಪೊಸ್ತಲನೊಬ್ಬನ ಆಯ್ಕೆ

12 ಬಳಿಕ ಅಪೊಸ್ತಲರು ಆಲಿವ್ ಮರಗಳ ಗುಡ್ಡದಿಂದ ಜೆರುಸಲೇಮಿಗೆ ಹಿಂತಿರುಗಿಹೋದರು. (ಈ ಗುಡ್ಡಕ್ಕೂ ಜೆರುಸಲೇಮಿಗೂ ಸುಮಾರು ಅರ್ಧ ಮೈಲಿ ಅಂತರವಿದೆ.) 13 ಅಪೊಸ್ತಲರು ಪಟ್ಟಣವನ್ನು ಪ್ರವೇಶಿಸಿ ತಾವು ವಾಸವಾಗಿದ್ದಲ್ಲಿಗೆ ಹೋದರು. ಅದು ಮೇಲಂತಸ್ತಿನಲ್ಲಿತ್ತು. ಆ ಅಪೊಸ್ತಲರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಯಾಕೋಬ (ಅಲ್ಫಾಯನ ಮಗ), ದೇಶಾಭಿಮಾನಿಯಾದ ಸಿಮೋನ ಮತ್ತು ಯೂದ (ಯಾಕೋಬನ ಮಗ).

14 ಅಪೊಸ್ತಲರೆಲ್ಲರೂ ಒಟ್ಟಾಗಿ ಸೇರಿದ್ದರು. ಅವರು ಒಂದೇ ಉದ್ದೇಶದಿಂದ ಎಡಬಿಡದೆ ಪ್ರಾರ್ಥಿಸುತ್ತಿದ್ದರು. ಕೆಲವು ಸ್ತ್ರೀಯರೂ ಯೇಸುವಿನ ತಾಯಿ ಮರಿಯಳೂ ಆತನ ಸಹೋದರರೂ ಅಪೊಸ್ತಲರ ಸಂಗಡವಿದ್ದರು.

15 ಕೆಲವು ದಿನಗಳಾದ ಮೇಲೆ ವಿಶ್ವಾಸಿಗಳು ಸಭೆ ಸೇರಿದ್ದರು. (ಅಲ್ಲಿ ಸುಮಾರು ನೂರಿಪ್ಪತ್ತು ಮಂದಿ ಇದ್ದರು.) ಪೇತ್ರನು ಎದ್ದುನಿಂತುಕೊಂಡು ಹೀಗೆಂದನು: 16-17 “ಸಹೋದರರೇ, ಪವಿತ್ರಾತ್ಮನು ದಾವೀದನ ಮೂಲಕವಾಗಿ ಪವಿತ್ರ ಗ್ರಂಥದಲ್ಲಿ[c] ಮುಂತಿಳಿಸಿದ್ದ ಸಂಗತಿ ನೆರವೇರಬೇಕಿತ್ತು. ನಮ್ಮ ಸ್ವಂತ ಗುಂಪಿನವರಲ್ಲಿ ಒಬ್ಬನಾದ ಯೂದನ ಬಗ್ಗೆ ದಾವೀದನು ಹೇಳಿದ್ದಾನೆ. ಯೂದನು ನಮ್ಮೊಂದಿಗೆ ಸೇವೆ ಮಾಡಿದನು. ಯೇಸುವನ್ನು ಬಂಧಿಸುವವರಿಗೆ ಯೂದನು ಮಾರ್ಗದರ್ಶಕನಾಗುತ್ತಾನೆಂದು ಪವಿತ್ರಾತ್ಮನು ತಿಳಿಸಿದ್ದನು.”

18 (ಈ ಕಾರ್ಯ ಮಾಡುವುದಕ್ಕಾಗಿ ಯೂದನಿಗೆ ಹಣ ಕೊಡಲಾಗಿತ್ತು. ಆ ಹಣದಿಂದ ಒಂದು ಹೊಲವನ್ನು ಅವನಿಗಾಗಿ ಕೊಂಡುಕೊಳ್ಳಲಾಯಿತು. ಆದರೆ ಯೂದನು ತಲೆಕೆಳಗಾಗಿ ಬಿದ್ದಾಗ ಅವನ ಹೊಟ್ಟೆ ಒಡೆದುಹೋಯಿತು. ಅವನ ಕರುಳೆಲ್ಲಾ ಹೊರಗೆ ಬಂದವು. 19 ಇದರ ಬಗ್ಗೆ ಜೆರುಸಲೇಮಿನ ಜನರೆಲ್ಲರಿಗೂ ತಿಳಿಯಿತು. ಆದಕಾರಣವೇ ಅವರು ಆ ಹೊಲಕ್ಕೆ ಅಕೆಲ್ದಮಾ ಎಂದು ಹೆಸರಿಟ್ಟರು. ಅವರ ಭಾಷೆಯಲ್ಲಿ ಅಕೆಲ್ದಮಾ ಅಂದರೆ “ರಕ್ತದ ಹೊಲ” ಎಂದರ್ಥ.)

20 ‘ಅವನ ಮನೆ ಹಾಳಾಗಲಿ!
    ಅಲ್ಲಿ ಯಾರೂ ವಾಸಿಸದಂತಾಗಲಿ!’(A)

ಎಂದು ಕೀರ್ತನೆಗಳ ಪುಸ್ತಕದಲ್ಲಿ ಯೂದನ ಬಗ್ಗೆ ಬರೆದಿದೆ.

ಅಲ್ಲದೆ ‘ಬೇರೊಬ್ಬನು ಅವನ ಕೆಲಸವನ್ನು ಪಡೆದುಕೊಳ್ಳಲಿ’(B)

ಎಂದು ಸಹ ಬರೆದಿದೆ.

21-22 “ಆದ್ದರಿಂದ ಬೇರೊಬ್ಬನು ನಮ್ಮೊಂದಿಗೆ ಸೇರಿ, ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಯಾಗಿರಬೇಕು. ಪ್ರಭುವಾದ ಯೇಸು ನಮ್ಮಲ್ಲಿ ಹೋಗುತ್ತಾ ಬರುತ್ತಾ ಇದ್ದ ಕಾಲವೆಲ್ಲಾ ಅವನು ನಮ್ಮ ಗುಂಪಿನಲ್ಲಿದ್ದವರಲ್ಲಿ ಒಬ್ಬನಾಗಿರಬೇಕು. ಯೋಹಾನನು ದೀಕ್ಷಾಸ್ನಾನ ಕೊಡಲು ಆರಂಭ ಮಾಡಿದ ದಿನದ ಮೊದಲುಗೊಂಡು ಯೇಸುವು ನಮ್ಮ ಬಳಿಯಿಂದ ಪರಲೋಕಕ್ಕೆ ಎತ್ತಲ್ಪಟ್ಟ ದಿನದವರೆಗೂ ಅವನು ನಮ್ಮೊಂದಿಗಿದ್ದವನಾಗಿರಬೇಕು.”

23 ಅಪೊಸ್ತಲರು ಇಬ್ಬರನ್ನು ಸಭೆಯ ಮುಂದೆ ನಿಲ್ಲಿಸಿದರು. ಒಬ್ಬನು ಬಾರ್ಸಬನೆಂಬ ಯೋಸೇಫ. ಇವನನ್ನು ಯೂಸ್ತನೆಂದೂ ಕರೆಯುತ್ತಿದ್ದರು. ಮತ್ತೊಬ್ಬನು ಮತ್ತೀಯ. 24-25 ಅಪೊಸ್ತಲರು ಹೀಗೆ ಪ್ರಾರ್ಥಿಸಿದರು: “ಪ್ರಭುವೇ, ನೀನು ಎಲ್ಲಾ ಜನರ ಮನಸ್ಸುಗಳನ್ನು ತಿಳಿದಿರುವೆ. ಈ ಕೆಲಸವನ್ನು ಮಾಡುವುದಕ್ಕಾಗಿ ಈ ಇಬ್ಬರಲ್ಲಿ ನೀನು ಯಾರನ್ನು ಆರಿಸಿಕೊಂಡಿರುವೆ ಎಂಬುದನ್ನು ನಮಗೆ ತೋರಿಸು. ಯೂದನು ಈ ಕೆಲಸಕ್ಕೆ ವಿಮುಖನಾಗಿ ತಾನು ಸೇರಬೇಕಿದ್ದಲ್ಲಿಗೆ ಹೊರಟುಹೋದನು. ಪ್ರಭುವೇ, ಅವನ ಸ್ಥಳದಲ್ಲಿ ಅಪೊಸ್ತಲನಾಗಿ ಯಾರು ನೇಮಕಗೊಳ್ಳಬೇಕೆಂಬುದನ್ನು ನಮಗೆ ತೋರಿಸು!” 26 ಬಳಿಕ ಅಪೊಸ್ತಲರು ಅವರಿಬ್ಬರಲ್ಲಿ ಒಬ್ಬನನ್ನು ಆರಿಸಿಕೊಳ್ಳಲು ಚೀಟಿಹಾಕಿದರು. ಚೀಟಿ ಮತ್ತೀಯನಿಗೆ ಬಂದದ್ದರಿಂದ ಹನ್ನೊಂದು ಮಂದಿಯೊಂದಿಗೆ ಅವನೂ ಅಪೊಸ್ತಲನಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International