Old/New Testament
ಸೊಲೊಮೋನನು ಜ್ಞಾನವನ್ನು ಕೇಳಿಕೊಂಡದ್ದು
1 ದೇವರಾದ ಯೆಹೋವನು ದಾವೀದನ ಮಗನಾದ ಸೊಲೊಮೋನನೊಂದಿಗೆ ಇದ್ದುದರಿಂದ ಸೊಲೊಮೋನನು ಬಹು ಬಲಿಷ್ಠನಾದ ಅರಸನಾಗಿ ಪ್ರಖ್ಯಾತನಾದನು.
2-3 ಸೊಲೊಮೋನನು ಇಸ್ರೇಲರನ್ನೂ ಅಂದರೆ ನ್ಯಾಯಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಸೇನಾಧಿಪತಿಗಳನ್ನೂ ಕುಲಪ್ರಧಾನರನ್ನೂ ಕರೆಯಿಸಿ ಅವರೊಂದಿಗೆ ಗಿಬ್ಯೋನಿನ ಉನ್ನತಸ್ಥಳಕ್ಕೆ ಹೋದನು. ದೇವದರ್ಶನಗುಡಾರವು ಅಲ್ಲಿತ್ತು. ಅರಣ್ಯದಲ್ಲಿ ಇಸ್ರೇಲರು ಪ್ರಯಾಣಿಸುತ್ತಿದ್ದಾಗ ಯೆಹೋವನ ಸೇವಕನಾದ ಮೋಶೆಯು ಗುಡಾರವನ್ನು ಮಾಡಿಸಿದ್ದನು. 4 ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದನು ಕಿರ್ಯತ್ಯಾರೀಮಿನಿಂದ ಜೆರುಸಲೇಮಿಗೆ ತಂದು ಅಲ್ಲಿ ತಾನು ಅದಕ್ಕಾಗಿ ಏರ್ಪಡಿಸಿದ್ದ ಸ್ಥಳದಲ್ಲಿ ಪ್ರತಿಷ್ಠಿಸಿದನು; ಮತ್ತು ಅದಕ್ಕೆ ಗುಡಾರವನ್ನು ನಿರ್ಮಿಸಿದ್ದನು. 5 ಊರೀಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನು ಮಾಡಿದ ತಾಮ್ರದ ಯಜ್ಞವೇದಿಕೆಯು ಗಿಬ್ಯೋನಿನಲ್ಲಿದ್ದ ಪವಿತ್ರ ಗುಡಾರದ ಮುಂದೆ ಇಡಲ್ಪಟ್ಟಿತ್ತು. ಆದ್ದರಿಂದ ಸೊಲೊಮೋನನೂ ಇಸ್ರೇಲರೂ ಗಿಬ್ಯೋನಿಗೆ ಹೋದರು. 6 ದೇವದರ್ಶನ ಗುಡಾರದ ಮುಂಭಾಗದಲ್ಲಿದ್ದ ತಾಮ್ರದ ಯಜ್ಞವೇದಿಕೆಯ ಬಳಿಗೆ ಸೊಲೊಮೋನನು ಹೋಗಿ ಅದರ ಮೇಲೆ ಒಂದು ಸಾವಿರ ಸರ್ವಾಂಗಹೋಮಗಳನ್ನು ಸಮರ್ಪಿಸಿದನು.
7 ಆ ರಾತ್ರಿ ದೇವರು ಸೊಲೊಮೋನನಿಗೆ ದರ್ಶನ ನೀಡಿ, “ಸೊಲೊಮೋನನೇ, ನಿನ್ನ ಕೋರಿಕೆಯೇನು?” ಎಂದು ಕೇಳಿದನು.
8 ಆಗ ಸೊಲೊಮೋನನು ದೇವರಿಗೆ, “ನೀನು ನನ್ನ ತಂದೆಯಾದ ದಾವೀದನ ಮೇಲೆ ಮಹಾಕೃಪೆಯನ್ನು ತೋರಿ ಅವನ ಸ್ಥಾನದಲ್ಲಿ ಅರಸನಾಗುವದಕ್ಕೆ ನನ್ನನ್ನು ಆರಿಸಿಕೊಂಡಿರುವೆ. 9 ದೇವರಾದ ಯೆಹೋವನೇ ನೀನು ನನ್ನ ತಂದೆಯಾದ ದಾವೀದನಿಗೆ ಮಾಡಿರುವ ವಾಗ್ದಾನವನ್ನು ನೆರವೇರಿಸು. ಒಂದು ದೊಡ್ಡ ರಾಜ್ಯಕ್ಕೆ ನನ್ನನ್ನು ಅರಸನನ್ನಾಗಿ ನೇಮಿಸಿರುತ್ತೀ. ಅದರಲ್ಲಿ ಭೂಮಿಯ ಧೂಳಿನೋಪಾದಿಯಲ್ಲಿ ಜನರು ತುಂಬಿದ್ದಾರೆ. 10 ಈ ಜನರನ್ನು ಸರಿಯಾದ ರೀತಿಯಲ್ಲಿ ಆಳುವ ಹಾಗೆ ನನಗೆ ಜ್ಞಾನವನ್ನೂ ವಿವೇಕವನ್ನೂ ದಯಪಾಲಿಸು. ನಿನ್ನ ಸಹಾಯವಿಲ್ಲದೆ ಈ ನಿನ್ನ ಜನರನ್ನು ಆಳಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದನು.
11 ಆಗ ದೇವರು ಸೊಲೊಮೋನನಿಗೆ, “ನಿನ್ನ ಕೋರಿಕೆ ಒಳ್ಳೆಯದಾಗಿದೆ. ನೀನು ಐಶ್ವರ್ಯವನ್ನಾಗಲಿ ಗೌರವವನ್ನಾಗಲಿ ಬೆಳ್ಳಿಬಂಗಾರಗಳನ್ನಾಗಲಿ ಕೇಳಲಿಲ್ಲ. ನಿನ್ನ ವೈರಿಗಳನ್ನು ನಿರ್ಮೂಲ ಮಾಡುವಂತಾಗಲಿ ಅಥವಾ ನಿನಗೆ ದೀರ್ಘಾಯುಷ್ಯವನ್ನು ಕೊಡು ಎಂದಾಗಲಿ ನೀನು ಕೇಳಿಕೊಳ್ಳದೆ ರಾಜ್ಯವನ್ನು ನ್ಯಾಯವಾಗಿ ಆಳಲು ಬೇಕಾದ ಜ್ಞಾನವಿವೇಕಗಳನ್ನು ಕೇಳಿಕೊಂಡೆ. ನಾನು ಆರಿಸಿಕೊಂಡಿರುವ ಜನಾಂಗದ ಮೇಲೆ ಆಡಳಿತ ನಡಿಸುವಾಗ ಯೋಗ್ಯವಾದ ಸಲಹೆ ಕೊಡುವಂತೆ ಜ್ಞಾನವನ್ನು ಕೇಳಿರುತ್ತೀ. 12 ನಾನು ನಿನಗೆ ಜ್ಞಾನವಿವೇಕಗಳನ್ನು ಕೊಡುವೆನು. ಅದರ ಜೊತೆಯಲ್ಲಿ ನಿನಗೆ ಐಶ್ವರ್ಯವನ್ನೂ ಘನತೆಯನ್ನೂ ದಯಪಾಲಿಸುವೆನು. ನಿನಗಿಂತ ಮುಂಚೆ ಇದ್ದ ಯಾವ ಅರಸನಿಗೂ ಇಂಥಾ ಐಶ್ವರ್ಯಗಳಾಗಲಿ ಘನತೆಯಾಗಲಿ ಇರಲಿಲ್ಲ. ಮತ್ತು ಇನ್ನು ಮುಂದೆಯೂ ಯಾವ ರಾಜನಿಗೂ ಇಂಥಾ ಘನತೆ ಮತ್ತು ಐಶ್ವರ್ಯಗಳಿರುವುದಿಲ್ಲ” ಎಂದು ಹೇಳಿದನು.
13 ಸೊಲೊಮೋನನು ಗಿಬ್ಯೋನಿನಲ್ಲಿ ಆರಾಧನಾಸ್ಥಳಕ್ಕೆ ಹೋದನು. ಬಳಿಕ ಅವನು ದೇವದರ್ಶನ ಗುಡಾರದಿಂದ ಜೆರುಸಲೇಮಿಗೆ ಹಿಂದಿರುಗಿ ಇಸ್ರೇಲಿನ ಮೇಲೆ ರಾಜ್ಯಭಾರವನ್ನು ಮಾಡತೊಡಗಿದನು.
ಸೊಲೊಮೋನನು ಸೈನ್ಯವನ್ನೂ ತನ್ನ ಐಶ್ವರ್ಯವನ್ನೂ ಹೆಚ್ಚಿಸಿಕೊಂಡದ್ದು
14 ಸೊಲೊಮೋನನು ಕುದುರೆಗಳನ್ನೂ ರಥಗಳನ್ನೂ ಸಂಗ್ರಹಿಸಲು ಪ್ರಾರಂಭಿಸಿ ಒಂದು ಸಾವಿರದ ನಾನೂರು ರಥಗಳನ್ನೂ ಹನ್ನೆರಡು ಸಾವಿರ ರಾಹುತರನ್ನೂ ತನ್ನ ಸೈನ್ಯಕ್ಕೆ ಕೂಡಿಸಿಕೊಂಡನು. ಅವುಗಳನ್ನು ರಥಗಳನ್ನಿಡುವ ನಗರಗಳಲ್ಲಿ ಇರಿಸಿದನು. ಅದರಲ್ಲಿ ಕೆಲವನ್ನು ತನ್ನ ಅರಮನೆಯಿರುವ ಜೆರುಸಲೇಮಿನಲ್ಲಿ ಇರಿಸಿದನು. 15 ಜೆರುಸಲೇಮಿನಲ್ಲಿ ಸೊಲೊಮೋನನು ಅಪಾರವಾದ ಬೆಳ್ಳಿಬಂಗಾರಗಳನ್ನು ಶೇಖರಿಸಿಟ್ಟಿದನು. ಭೂಮಿಯ ಮೇಲೆ ಕಲ್ಲುಗಳು ಹೇಗಿರುತ್ತವೋ ಅದೇ ರೀತಿಯಲ್ಲಿ ಅವನಲ್ಲಿ ಬೆಳ್ಳಿಬಂಗಾರಗಳಿದ್ದವು. ದೇವದಾರು ಮರಗಳನ್ನೂ ಸೊಲೊಮೋನನು ಶೇಖರಿಸಿಟ್ಟನು. ಪಶ್ಚಿಮದ ಬೆಟ್ಟಪ್ರದೇಶಗಳಲ್ಲಿ ಜಾಲಿಮರಗಳು ಹೇರಳವಾಗಿರುವಂತೆ ದೇವದಾರುಮರಗಳೂ ಹೇರಳವಾಗಿದ್ದವು. 16 ಈಜಿಪ್ಟ್ ಮತ್ತು ಕ್ಯೂ ದೇಶಗಳಿಂದ ಸೊಲೊಮೋನನು ಕುದುರೆಗಳನ್ನು ತನ್ನ ವ್ಯಾಪಾರಸ್ಥರ ಮೂಲಕ ಖರೀದಿ ಮಾಡಿದನು. 17 ಸೊಲೊಮೋನನ ವ್ಯಾಪಾರಿಗಳು ಈಜಿಪ್ಟಿನಲ್ಲಿ ಒಂದೊಂದು ರಥಕ್ಕೆ ಏಳು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಒಂದೊಂದು ಕುದುರೆಗೆ ಎರಡು ಕಿಲೋಗ್ರಾಂ ತೂಕದ ಬೆಳ್ಳಿಯನ್ನೂ ಕೊಟ್ಟು ಖರೀದಿಸಿ ಅವುಗಳನ್ನು ಹಿತ್ತಿಯರ ಅರಸರಿಗೂ ಅರಾಮ್ಯರ ಅರಸರಿಗೂ ಮಾರಿದರು.
ದೇವಾಲಯವನ್ನು ಕಟ್ಟಲು ಸೊಲೊಮೋನನ ಸಿದ್ಧತೆ
2 ದೇವಾಲಯವನ್ನು ಕಟ್ಟಿ ದೇವರಿಗೆ ಘನತೆಯನ್ನು ಸಲ್ಲಿಸಲು ಸೊಲೊಮೋನನು ಯೋಜಿಸಿದನು. ಮಾತ್ರವಲ್ಲದೆ ತನಗೆ ವಾಸಿಸಲು ಒಂದು ಅರಮನೆಯನ್ನು ಕಟ್ಟಲೂ ಸಿದ್ಧತೆ ಮಾಡಿದನು. 2 ಅದಕ್ಕಾಗಿ ಎಪ್ಪತ್ತು ಸಾವಿರ ಮಂದಿ ಕೆಲಸಗಾರರನ್ನೂ ಬೆಟ್ಟದ ಮೇಲೆ ನಡಿಯುತ್ತಿರುವ ಕಲ್ಲಿನ ಕೆಲಸಕ್ಕಾಗಿ ಎಂಭತ್ತು ಸಾವಿರ ಮಂದಿ ಕಲ್ಲುಕುಟಿಕರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ನೇಮಿಸಿದನು.
3 ಸೊಲೊಮೋನನು ತನ್ನ ಸ್ನೇಹಿತನೂ ತೂರ್ ದೇಶದ ರಾಜನೂ ಆದ ಹೂರಾಮನಿಗೆ ಹೀಗೆ ಬರೆದು ಕಳುಹಿಸಿದನು:
“ನನ್ನ ತಂದೆಯಾದ ದಾವೀದನ ಅರಮನೆಗೆ ಬೇಕಾದ ದೇವದಾರುಮರಗಳನ್ನು ನೀನು ಒದಗಿಸಿದಂತೆಯೇ ನನಗೂ ನೀನು ಸಹಾಯ ಮಾಡಬೇಕು. 4 ನನ್ನ ದೇವರಾದ ಯೆಹೋವನ ನಾಮದ ಘನತೆಗಾಗಿ ನಾನು ಒಂದು ದೇವಾಲಯವನ್ನು ಕಟ್ಟಲಿರುವೆನು. ಆತನ ಸನ್ನಿಧಿಯಲ್ಲಿ ನಿತ್ಯವೂ ಧೂಪವನ್ನು ಹಾಕುವೆವು; ವಿಶೇಷ ಮೇಜಿನ ಮೇಲೆ ಪವಿತ್ರವಾದ ರೊಟ್ಟಿಗಳನ್ನಿಡುವೆವು. ಪ್ರತಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ, ಸಬ್ಬತ್ ದಿನಗಳಲ್ಲಿ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯೆಹೋವನು ಆಜ್ಞಾಪಿಸಿದ ಹಬ್ಬಗಳಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುವೆವು. ಇಸ್ರೇಲಿನ ಜನರು ನಿತ್ಯಕಾಲಕ್ಕೂ ಇವುಗಳನ್ನು ಅನುಸರಿಸಬೇಕೆಂದು ದೇವರು ನೇಮಿಸಿರುತ್ತಾನೆ.
5 “ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವನು. ಆದ್ದರಿಂದ ಆತನಿಗಾಗಿ ನಾನು ಮಹತ್ತಾದ ಆಲಯವನ್ನು ಕಟ್ಟುವೆನು. 6 ಯಾವನೂ ದೇವರಿಗೆ ಆಲಯವನ್ನು ಕಟ್ಟಲು ಸಾಧ್ಯವಿಲ್ಲ. ಯಾಕೆಂದರೆ, ಆಕಾಶವೂ ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲುವುದಿಲ್ಲ. ಆದ್ದರಿಂದ ನಾನು ಆತನಿಗೆ ಆಲಯವನ್ನು ಕಟ್ಟಲಾರೆ. ನಾನು ಆತನಿಗೆ ಆಲಯವನ್ನು ಕಟ್ಟುತ್ತಿರುವುದು ಧೂಪಹಾಕಿ ಆತನನ್ನು ಘನಪಡಿಸುವದಕ್ಕಾಗಿಯಷ್ಟೇ.
7 “ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಇವುಗಳ ಕೆಲಸಗಳಲ್ಲಿ ಪಳಗಿರುವ ಒಬ್ಬ ಕುಶಲಕರ್ಮಿಯನ್ನು ನೀನು ಕಳುಹಿಸಿಕೊಡಬೇಕು. ಅವನಿಗೆ ನೀಲಿ, ಕೆಂಪು, ನೇರಳೆ ವರ್ಣಗಳ ಬಟ್ಟೆಗಳನ್ನು ನೇಯುವುದೂ ಗೊತ್ತಿರಬೇಕು. ನನ್ನ ತಂದೆ ಆರಿಸಿಕೊಂಡಿರುವ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಜೆರುಸಲೇಮಿನಲ್ಲಿಯೂ ಯೆಹೂದದಲ್ಲಿಯೂ ಕೆಲಸ ಮಾಡಬೇಕು. 8 ಅಲ್ಲದೆ ನನಗೆ ಲೆಬನೋನಿನಿಂದ ದೇವದಾರು, ತುರಾಯಿ ಮತ್ತು ಸುಗಂಧಮರಗಳನ್ನು ಕಳುಹಿಸಿಕೊಡು. ನಿನ್ನ ಸೇವಕರು ಲೆಬನೋನಿನ ಮರಗಳನ್ನು ಕತ್ತರಿಸುವುದರಲ್ಲಿ ನಿಪುಣರೆಂಬುದು ನನಗೆ ಗೊತ್ತಿದೆ. ನಿನ್ನ ಅನುಭವಸ್ಥ ಸೇವಕರಿಗೆ ಸಹಾಯ ಮಾಡಲು ನನ್ನ ಸೇವಕರೂ ಬರುವರು. 9 ನಾನು ಕಟ್ಟುವ ಆಲಯವು ದೊಡ್ಡದಾಗಿಯೂ ಅಂದವಾಗಿಯೂ ಇರುವದರಿಂದ ನನಗೆ ಬಹಳ ಮರ ಬೇಕಾಗುತ್ತದೆ. 10 ನಿನ್ನ ಜನರು ಮರಗಳನ್ನು ಕಡಿದು ಸಾಗಿಸುವ ಕಾರ್ಯಕ್ಕೆ ನಾನು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಗೋಧಿಯನ್ನೂ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಜವೆಗೋಧಿಯನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ದ್ರಾಕ್ಷಾರಸವನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು.”
11 ಅದಕ್ಕೆ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ಹೀಗೆ ಉತ್ತರಿಸಿದನು:
“ಸೊಲೊಮೋನನೇ, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಆದ್ದರಿಂದಲೇ ನಿನ್ನನ್ನು ಅವರ ಅರಸನನ್ನಾಗಿ ಆರಿಸಿಕೊಂಡಿರುತ್ತಾನೆ. 12 ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ, ಆತನು ಭೂಪರಲೋಕಗಳನ್ನು ಉಂಟುಮಾಡಿದನು. ಅರಸನಾದ ದಾವೀದನಿಗೆ ಒಬ್ಬ ಜ್ಞಾನವುಳ್ಳ ಮಗನನ್ನು ಅನುಗ್ರಹಿಸಿದ್ದಾನೆ. ನಿನಗೆ ಜ್ಞಾನವೂ ತಿಳುವಳಿಕೆಯೂ ಇರುವದರಿಂದ ನೀನು ದೇವಾಲಯವನ್ನು ಕಟ್ಟುವೆ ಮತ್ತು ನಿನಗೂ ಒಂದು ಅರಮನೆಯನ್ನು ಕಟ್ಟುವೆ. 13 ನಾನು ಹೂರಾಮಾಬೀ ಎಂಬ ಹೆಸರಿನ ಅನುಭವಶಾಲಿಯಾದ ಕುಶಲಕರ್ಮಿಯನ್ನು ನಿನಗೋಸ್ಕರ ಕಳುಹಿಸುತ್ತೇನೆ. 14 ಅವನ ತಾಯಿಯು ದಾನ್ ಕುಟುಂಬದವಳು, ತಂದೆಯು ತೂರ್ ಪಟ್ಟಣದವನು. ಅವನು ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಮರ ಇವುಗಳ ಕೆಲಸಗಳಲ್ಲಿ ತುಂಬ ಚತುರನು. ಅಲ್ಲದೆ ನೀಲಿ, ಕೆಂಪು ಧೂಮ್ರವರ್ಣದ ಬಟ್ಟೆಗಳನ್ನು ಮತ್ತು ಬೆಲೆಬಾಳುವ ಲಿನಿನ್ ಬಟ್ಟೆಗಳನ್ನು ನೇಯುವುದರಲ್ಲಿ ನಿಪುಣನಾಗಿದ್ದಾನೆ. ನೀನು ಏನೇ ಹೇಳಿದರೂ ಅವನು ಮಾಡಿಕೊಡುವನು. ನಿನ್ನ ಮತ್ತು ದಾವೀದನ ಕುಶಲಕರ್ಮಿಗಳ ಜೊತೆಯಲ್ಲಿ ಅವನು ಕೆಲಸ ಮಾಡುವನು.
15 “ನೀನು ನನ್ನ ಸೇವಕರಿಗೆ ಆಹಾರವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೊಡುವ ಭರವಸೆ ನೀಡಿರುವೆ. ಆದ್ದರಿಂದ ದಯವಿಟ್ಟು ಇವುಗಳನ್ನು ಒದಗಿಸಿಕೊಡು. 16 ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ಅವುಗಳನ್ನು ಜೋಡಿಸಿ ತೆಪ್ಪಗಳನ್ನಾಗಿ ಮಾಡಿ ಸಮುದ್ರದಲ್ಲಿ ತೇಲಿಬಿಡುವೆವು. ಅವು ಯೊಪ್ಪಕ್ಕೆ ತಲುಪಿದಾಗ ನೀನು ಅವುಗಳನ್ನು ಶೇಖರಿಸಿ ಬೇಕಾದ ಕಡೆಗೆ ರವಾನಿಸು.”
17 ಆಮೇಲೆ ಸೊಲೊಮೋನನು ತನ್ನ ರಾಜ್ಯದಲ್ಲಿದ್ದ ಎಲ್ಲಾ ಪರದೇಶಸ್ಥರನ್ನು ಲೆಕ್ಕಿಸಿದನು. ಸೊಲೊಮೋನನ ತಂದೆಯಾದ ದಾವೀದನು ಮಾಡಿದ ಜನಗಣತಿಯ ನಂತರ ಈ ಜನಗಣತಿಯನ್ನು ಮಾಡಲಾಯಿತು. ಅವರಲ್ಲಿ ಒಂದು ಲಕ್ಷದ ಐವತ್ತ ಮೂರು ಸಾವಿರದ ಆರುನೂರು ಮಂದಿ ಪರದೇಶದವರಿದ್ದರು. 18 ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಸೊಲೊಮೋನನು ಹೊರೆಹೊರುವದಕ್ಕಾಗಿ ನೇಮಿಸಿದನು; ಎಂಭತ್ತುಸಾವಿರ ಮಂದಿಯನ್ನು ಬೆಟ್ಟಗಳಲ್ಲಿ ಕಲ್ಲಿನ ಕೆಲಸಮಾಡಲು ನೇಮಿಸಿದನು; ಮೂರು ಸಾವಿರದ ಆರುನೂರು ಮಂದಿಯನ್ನು ಕಾರ್ಮಿಕರ ಮೇಲ್ವಿಚಾರಣೆಗೋಸ್ಕರ ನೇಮಿಸಿದನು.
ಸೊಲೊಮೋನನು ದೇವಾಲಯವನ್ನು ಕಟ್ಟಿದನು
3 ಜೆರುಸಲೇಮಿನಲ್ಲಿರುವ ಮೋರೀಯಾ ಬೆಟ್ಟದ ಮೇಲೆ ಸೊಲೊಮೋನನು ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದನು. ಅದೇ ಸ್ಥಳದಲ್ಲಿ ಸೊಲೊಮೋನನ ತಂದೆಯಾದ ದಾವೀದನಿಗೆ ಯೆಹೋವನು ದರ್ಶನ ಕೊಟ್ಟಿದ್ದನು. ಅದು ಯೆಬೂಸಿಯನಾದ ಒರ್ನಾನನ ಕಣವಾಗಿತ್ತು. ಆಲಯವನ್ನು ಕಟ್ಟಲು ದಾವೀದನು ಆ ಸ್ಥಳವನ್ನು ತಯಾರು ಮಾಡಿದ್ದನು. 2 ಸೊಲೊಮೋನನು ತನ್ನ ರಾಜ್ಯಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ದೇವಾಲಯದ ಕೆಲಸವನ್ನು ಪ್ರಾರಂಭಿಸಿದನು.
3 ದೇವಾಲಯದ ಅಸ್ತಿವಾರದ ಉದ್ದಳತೆಯು ಹೀಗಿತ್ತು: ಉದ್ದ ಅರವತ್ತು ಮೊಳ, ಅಗಲ ಇಪ್ಪತ್ತು ಮೊಳ. ದೇವಾಲಯದ ಅಳತೆಗಾಗಿ ಸೊಲೊಮೋನನು ಹಳೆಯ ಮೊಳದ ಅಳತೆಯನ್ನು ಉಪಯೋಗಿಸಿದನು. 4 ದೇವಾಲಯದ ಮುಂದುಗಡೆಯಿದ್ದ ಮಂಟಪವು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಎತ್ತರವಿತ್ತು. ಮಂಟಪದ ಒಳಮೈಯನ್ನು ಸೊಲೊಮೋನನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. 5 ದೊಡ್ಡ ಕೋಣೆಯ ಗೋಡೆಗೆ ಸೊಲೊಮೋನನು ತುರಾಯಿ ಮರದ ಹಲಗೆಗಳಿಂದ ಹೊದಿಸಿ ಅದರ ಮೇಲೆ ಬಂಗಾರದ ತಗಡನ್ನು ಹೊದಿಸಿದನು. ಅದರಲ್ಲಿ ಖರ್ಜೂರ ಮರಗಳೂ ಸರಪಣಿಗಳೂ ಬಂಗಾರದಿಂದ ಮಾಡಲ್ಪಟ್ಟು ಜೋಡಿಸಲ್ಪಟ್ಟಿದ್ದವು. 6 ದೇವಾಲಯವನ್ನು ಬೆಲೆಯುಳ್ಳ ರತ್ನಗಳಿಂದ ಅಲಂಕರಿಸಿದನು. ಸೊಲೊಮೋನನು ಪರ್ವಯಿಮ್ ದೇಶದ ಬಂಗಾರವನ್ನು ಉಪಯೋಗಿಸಿದನು. 7 ದೇವಾಲಯದ ಗೋಡೆಯ ಒಳಭಾಗವನ್ನು ಸೊಲೊಮೋನನು ಬಂಗಾರದಿಂದ ಹೊದಿಸಿದನು ಮತ್ತು ಆಲಯದ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.
8 ಸೊಲೊಮೋನನು ಮಹಾಪವಿತ್ರ ಸ್ಥಳವನ್ನು ತಯಾರಿಸಿದನು. ಅದು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಅಗಲವಿತ್ತು. ದೇವಾಲಯದ ಅಗಲದಷ್ಟೇ ಅದು ಅಗಲವಿತ್ತು. ಅದರ ಗೋಡೆಗಳನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. ಆ ಬಂಗಾರವು ಇಪ್ಪತ್ತಮೂರು ಟನ್ ತೂಕವಿತ್ತು. 9 ಬಂಗಾರದ ಮೊಳೆಗಳ ತೂಕ ಅರ್ಧ ಕಿಲೋಗ್ರಾಂ. ಸೊಲೊಮೋನನು ಮೇಲುಪ್ಪರಿಗೆಯ ಕೋಣೆಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು. 10 ಸೊಲೊಮೋನನು ಮಹಾಪವಿತ್ರ ಸ್ಥಾನದೊಳಗೆ ಇಡುವದಕ್ಕಾಗಿ ಎರಡು ಕೆರೂಬಿಗಳನ್ನು ಮಾಡಿಸಿ ಅವುಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು. 11 ಕೆರೂಬಿಗಳ ಒಂದೊಂದು ರೆಕ್ಕೆಯು ಐದೈದು ಮೊಳ ಉದ್ದವಿದ್ದವು. ರೆಕ್ಕೆಗಳ ಒಟ್ಟು ಉದ್ದ ಇಪ್ಪತ್ತು ಮೊಳ. ಕೆರೂಬಿಯ ಒಂದು ರೆಕ್ಕೆಯು ಗೋಡೆಗೆ ತಾಗಿತ್ತು; ಅದರ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯನ್ನು ತಾಗಿತ್ತು. 12 ಅಂತೆಯೇ ಎರಡನೆಯ ಕೆರೂಬಿಯ ಇನ್ನೊಂದು ರೆಕ್ಕೆಯು ಮತ್ತೊಂದು ಗೋಡೆಗೆ ತಾಗಿತ್ತು. 13 ಹೀಗೆ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಸ್ಥಳವನ್ನು ಆವರಿಸಿಕೊಂಡಿದ್ದವು. ಅವು ಪವಿತ್ರಸ್ಥಳದ ಕಡೆಗೆ ಮುಖಮಾಡಿಕೊಂಡು ನಿಂತಿದ್ದವು.
14 ಸೊಲೊಮೋನನು ದೇವಾಲಯಕ್ಕೆ ನೀಲ, ಧೂಮ್ರ ಮತ್ತು ಕೆಂಪು ಬಟ್ಟೆ ಮತ್ತು ಬೆಲೆಬಾಳುವ ನಾರುಬಟ್ಟೆಗಳಿಂದ ಪರದೆಗಳನ್ನು ತಯಾರಿಸಿ ಅದರ ಮೇಲೆ ಕೆರೂಬಿಯರ ಚಿತ್ರವನ್ನು ಕಸೂತಿ ಮಾಡಿಸಿದನು.
15 ಸೊಲೊಮೋನನು ದೇವಾಲಯದ ಎದುರಿನಲ್ಲಿ ಮೂವತ್ತೈದು ಮೊಳ ಎತ್ತರದ ಎರಡು ಕಂಬಗಳನ್ನು ನಿಲ್ಲಿಸಿದನು. ಅದರ ಮೇಲಿನ ಭಾಗ ಐದು ಮೊಳ ಎತ್ತರವಿತ್ತು. 16 ಅವನು ಕೊರಳಿನ ಸರಗಳನ್ನು ಮಾಡಿಸಿ ಅವುಗಳನ್ನು ಕಂಬಗಳ ಮೇಲ್ಭಾಗದಲ್ಲಿ ಸಿಕ್ಕಿಸಿದನು. ಅವನು ನೂರು ದಾಳಿಂಬೆ ಹಣ್ಣುಗಳನ್ನು ಮಾಡಿಸಿ ತೂಗುಹಾಕಿದನು. 17 ಈ ಕಂಬಗಳನ್ನು ದೇವಾಲಯದ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ ಯಾಕೀನ್ ಎಂತಲೂ ಎಡಗಡೆಯ ಕಂಬಕ್ಕೆ ಬೋವಜ್ ಎಂತಲೂ ಹೆಸರಿಟ್ಟನು.
ಕುರುಬನು ಮತ್ತು ಅವನ ಕುರಿಗಳು
10 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಕುರಿಹಟ್ಟಿಯೊಳಗೆ ಪ್ರವೇಶಿಸುವಾಗ ಬಾಗಿಲಿನ ಮೂಲಕ ಪ್ರವೇಶಿಸಬೇಕು. ಮತ್ತೆಲ್ಲಿಂದಾದರೂ ಹತ್ತಿ ಬರುವವನು ಸುಲಿಗೆಗಾರನಾಗಿದ್ದಾನೆ; ಕುರಿಗಳನ್ನು ಕದ್ದುಕೊಳ್ಳಲು ಪ್ರಯತ್ನಿಸುವವನಾಗಿದ್ದಾನೆ. 2 ಆದರೆ ಕುರುಬನು ಬಾಗಿಲ ಮೂಲಕ ಪ್ರವೇಶಿಸುತ್ತಾನೆ. 3 ಕಾವಲುಗಾರನು ಕುರುಬನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಕುರುಬನು ತನ್ನ ಸ್ವಂತ ಕುರಿಗಳನ್ನು ಹೆಸರು ಹಿಡಿದು ಕರೆದು ಹೊರಗೆ ಬಿಡುತ್ತಾನೆ. 4 ಆ ಬಳಿಕ ಅವುಗಳ ಮುಂದೆ ಹೋಗುತ್ತಾ ಅವುಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಕುರಿಗಳು ಅವನನ್ನು ಹಿಂಬಾಲಿಸುತ್ತವೆ; ಏಕೆಂದರೆ ಅವು ಅವನ ಸ್ವರವನ್ನು ತಿಳಿದಿವೆ. 5 ಆದರೆ ಕುರಿಗಳು ತಮಗೆ ಗೊತ್ತಿಲ್ಲದ ವ್ಯಕ್ತಿಯನ್ನು ಎಂದಿಗೂ ಹಿಂಬಾಲಿಸುವುದಿಲ್ಲ. ಅವುಗಳು ಆ ವ್ಯಕ್ತಿಯ ಬಳಿಯಿಂದ ಓಡಿಹೋಗುತ್ತವೆ. ಏಕೆಂದರೆ ಅವುಗಳು ಅವನ ಸ್ವರವನ್ನು ತಿಳಿದಿಲ್ಲ” ಎಂದು ಹೇಳಿದನು.
6 ಯೇಸು ಹೇಳಿದ ಈ ಸಾಮ್ಯದ ಅರ್ಥವನ್ನು ಜನರು ಗ್ರಹಿಸಿಕೊಳ್ಳಲಿಲ್ಲ.
ಯೇಸು ಒಳ್ಳೆಯ ಕುರುಬ
7 ಆದ್ದರಿಂದ ಯೇಸು ಮತ್ತೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನೇ ಕುರಿಗಳಿಗೆ ಬಾಗಿಲಾಗಿದ್ದೇನೆ. 8 ನಾನು ಬರುವುದಕ್ಕಿಂತ ಮೊದಲು ಬಂದವರೆಲ್ಲರೂ ಕಳ್ಳರಾಗಿದ್ದರು ಮತ್ತು ಸುಲಿಗೆಗಾರರಾಗಿದ್ದರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9 ನಾನೇ ಬಾಗಿಲಾಗಿದ್ದೇನೆ. ನನ್ನ ಮೂಲಕವಾಗಿ ಪ್ರವೇಶಿಸುವವರು ರಕ್ಷಣೆ ಹೊಂದುವರು. ಅವರು ಒಳಗೆ ಬರಬಲ್ಲರು. ಹೊರಗೆ ಹೋಗಬಲ್ಲರು ಮತ್ತು ಹುಲ್ಲುಗಾವಲನ್ನು ಕಂಡುಕೊಳ್ಳುವರು. 10 ಕಳ್ಳನು ಕದಿಯುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ ಬರುತ್ತಾನೆ. ನಾನಾದರೋ ಸಮೃದ್ಧಿಕರವಾದ ಜೀವವನ್ನು ಕೊಡಲು ಬಂದೆನು.
11 “ನಾನೇ ಒಳ್ಳೆಯ ಕುರುಬ. ಒಳ್ಳೆಯ ಕುರುಬನು ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕುರಿಗಳನ್ನು ನೋಡಿಕೊಳ್ಳುವುದಕ್ಕಾಗಿ ನೇಮಿತನಾಗಿರುವ ಕೂಲಿಯಾಳು ಕುರುಬನಿಗಿಂತ ಭಿನ್ನವಾಗಿದ್ದಾನೆ. ಕೂಲಿಯಾಳು ಕುರಿಗಳ ಒಡೆಯನಲ್ಲ. ಆದ್ದರಿಂದ ಕೂಲಿಯಾಳು ತೋಳ ಬರುವುದನ್ನು ಕಾಣುವಾಗ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳ ಮೇಲೆ ಬಿದ್ದು ಅವುಗಳನ್ನು ಚದರಿಸಿಬಿಡುತ್ತದೆ. 13 ಆ ವ್ಯಕ್ತಿಯು ಓಡಿಹೋಗುತ್ತಾನೆ. ಏಕೆಂದರೆ ಅವನು ಕೇವಲ ಕೂಲಿಗಾರನಾಗಿದ್ದಾನೆ. ಅವನ ಕುರಿಗಳ ಬಗ್ಗೆ ನಿಜವಾಗಿಯೂ ಚಿಂತಿಸುವುದಿಲ್ಲ.
14-15 “ನಾನು ಕುರಿಗಳಿಗಾಗಿ (ಜನರಿಗಾಗಿ) ಚಿಂತಿಸುವ ಕುರುಬನಾಗಿದ್ದೇನೆ. ನನ್ನ ತಂದೆಯು ನನ್ನನ್ನು ತಿಳಿದಿರುವಂತೆ ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ಮತ್ತು ನಾನು ನನ್ನ ತಂದೆಯನ್ನು ತಿಳಿದಿರುವಂತೆ ನನ್ನ ಕುರಿಗಳು ನನ್ನನ್ನು ತಿಳಿದಿವೆ. ಈ ಕುರಿಗಳಿಗೋಸ್ಕರ ನನ್ನ ಜೀವವನ್ನೇ ಕೊಡುತ್ತೇನೆ. 16 ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಈ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು. 17 ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಏಕೆಂದರೆ ನಾನು ನನ್ನ ಪ್ರಾಣವನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕೊಡುತ್ತೇನೆ. 18 ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನೇ ಅದನ್ನು ಇಚ್ಛಾಪೂರ್ವಕವಾಗಿ ಕೊಡುತ್ತೇನೆ. ನನ್ನ ಪ್ರಾಣವನ್ನು ಕೊಡುವುದಕ್ಕೂ ಅದನ್ನು ಮತ್ತೆ ಪಡೆದುಕೊಳ್ಳುವುದಕ್ಕೂ ನನಗೆ ಹಕ್ಕಿದೆ. ಹೀಗೆ ಮಾಡಬೇಕೆಂದು ತಂದೆಯೇ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.
19 ಯೇಸು ಈ ಸಂಗತಿಗಳನ್ನು ಹೇಳಿದ್ದರಿಂದ ಯೆಹೂದ್ಯರಲ್ಲಿ ಮತ್ತೆ ಭೇದ ಉಂಟಾಯಿತು. 20 ಅವರಲ್ಲಿ ಅನೇಕರು, “ಅವನೊಳಗೆ ದೆವ್ವವು ಸೇರಿಕೊಂಡು ಅವನನ್ನು ಹುಚ್ಚನನ್ನಾಗಿ ಮಾಡಿದೆ. ಅವನಿಗೆ ಏಕೆ ಕಿವಿಗೊಡುತ್ತೀರಿ?” ಎಂದು ಹೇಳಿದರು.
21 ಆದರೆ ಇತರರು, “ದೆವ್ವದಿಂದ ಹುಚ್ಚು ಹಿಡಿದಿರುವ ಮನುಷ್ಯನು ಈ ರೀತಿಯ ಸಂಗತಿಗಳನ್ನು ಹೇಳುವುದಿಲ್ಲ. ಕುರುಡರ ಕಣ್ಣುಗಳನ್ನು ಗುಣಪಡಿಸಲು ದೆವ್ವಕ್ಕೆ ಸಾಧ್ಯವೇ? ಇಲ್ಲ!” ಎಂದು ಹೇಳಿದರು.
ಯೇಸುವಿನ ವಿರುದ್ಧ ಯೆಹೂದ್ಯರು
22 ಜೆರುಸಲೇಮಿನಲ್ಲಿ ಆಚರಿಸುವ ಪ್ರತಿಷ್ಠೆಯ ಹಬ್ಬವು ನಡೆಯುತ್ತಿತ್ತು. ಅದು ಚಳಿಗಾಲದಲ್ಲಿ ಆಚರಿಸುವ ಹಬ್ಬ. 23 ಯೇಸು ದೇವಾಲಯದೊಳಗೆ ಸೊಲೊಮೋನನ ಆಲಯದಲ್ಲಿದ್ದನು.
Kannada Holy Bible: Easy-to-Read Version. All rights reserved. © 1997 Bible League International