Old/New Testament
ಯೆಹೂದದಲ್ಲಿ ಅಜರ್ಯನ ಆಳ್ವಿಕೆ
15 ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ರಾಜನಾದನು. 2 ಅಜರ್ಯನು ಆಳಲಾರಂಭಿಸಿದಾಗ ಅವನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಜೆರುಸಲೇಮಿನ ಯೆಕೊಲ್ಯ ಎಂಬ ಹೆಸರಿನವಳು ಅಜರ್ಯನ ತಾಯಿ. 3 ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಗೆ ಯೋಗ್ಯವಾದ ಕಾರ್ಯಗಳನ್ನು ಮಾಡಿದನು. ಅಜರ್ಯನು ತನ್ನ ತಂದೆಯಾದ ಅಮಚ್ಯನು ಮಾಡಿದ ಕಾರ್ಯಗಳನ್ನೇ ಅನುಸರಿಸಿದನು. 4 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು.
5 ರಾಜನಾದ ಅಜರ್ಯನು ಕುಷ್ಠರೋಗ ಪೀಡಿತನಾಗುವಂತೆ ಯೆಹೋವನು ಮಾಡಿದನು. ಅವನು ಸಾಯುವವರೆಗೂ ಕುಷ್ಠರೋಗಿಯಾಗಿಯೇ ಇದ್ದನು. ಅಜರ್ಯನು ಪ್ರತ್ಯೇಕವಾದ ಮನೆಯಲ್ಲಿ ವಾಸಿಸುತ್ತಿದ್ದನು. ರಾಜನ ಮಗನಾದ ಯೋತಾಮನು ರಾಜನ ಅರಮನೆಯನ್ನು ನೋಡಿಕೊಳ್ಳುತ್ತಿದ್ದನು ಮತ್ತು ಜನರನ್ನು ಪಾಲಿಸುತ್ತಿದ್ದನು.
6 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಜರ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ. 7 ಅಜರ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ, ದಾವೀದ ನಗರದಲ್ಲಿ ಸಮಾಧಿಮಾಡಲಾಯಿತು. ಅಜರ್ಯನ ನಂತರ ಅವನ ಮಗನಾದ ಯೋತಾಮನು ಹೊಸ ರಾಜನಾದನು.
ಜೆಕರ್ಯನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು
8 ಯಾರೊಬ್ಬಾಮನ ಮಗನಾದ ಜೆಕರ್ಯನು ಇಸ್ರೇಲಿನ ಸಮಾರ್ಯದಲ್ಲಿ ಆರು ತಿಂಗಳ ಕಾಲ ಆಳಿದನು. ಅದು ಯೆಹೂದದ ರಾಜನಾಗಿದ್ದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷವಾಗಿತ್ತು. 9 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಜೆಕರ್ಯನು ಮಾಡಿದನು. ಅವನ ಪೂರ್ವಿಕರು ಮಾಡಿದಂತೆಯೇ ಅವನೂ ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಕೃತ್ಯಗಳನ್ನು ಅವನು ನಿಲ್ಲಿಸಲಿಲ್ಲ.
10 ಯಾಬೇಷನ ಮಗನಾದ ಶಲ್ಲೂಮನು ಜೆಕರ್ಯನ ವಿರುದ್ಧವಾಗಿ ಸಂಚುಗಳನ್ನು ಮಾಡಿದನು. ಶಲ್ಲೂಮನು ಜೆಕರ್ಯನನ್ನು ಜನರ ಮುಂದೆ ಕೊಂದುಹಾಕಿ ಹೊಸ ರಾಜನಾದನು. 11 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಜೆಕರ್ಯನು ಮಾಡಿದ ಇತರ ಕಾರ್ಯಗಳನ್ನೆಲ್ಲ ಬರೆಯಲಾಗಿದೆ. 12 ಹೀಗೆ ಯೆಹೋವನ ವಾಕ್ಯವು ನೆರವೇರಿತು. ಯೇಹುವಿನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೆ ಇಸ್ರೇಲಿನ ರಾಜರಾಗಿರುತ್ತಾರೆ ಎಂದು ಯೆಹೋವನು ಅವನಿಗೆ ಮೊದಲೇ ತಿಳಿಸಿದ್ದನು.
ಶಲ್ಲೂಮನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು
13 ಯೆಹೂದದ ರಾಜನಾದ ಉಜ್ಜೀಯನ ಮೂವತ್ತೊಂಭತ್ತನೆಯ ವರ್ಷದ ಆಳ್ವಿಕೆಯಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರೇಲಿನ ರಾಜನಾದನು. ಶಲ್ಲೂಮನು ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.
14 ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದನು. ಮೆನಹೇಮನು ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದುಹಾಕಿದನು. ನಂತರ ಮೆನಹೇಮನು ಅವನ ನಂತರ ಹೊಸ ರಾಜನಾದನು.
15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಶಲ್ಲೂಮನು ಮಾಡಿದ ಕಾರ್ಯಗಳನ್ನೂ ಜೆಕರ್ಯನ ವಿರುದ್ಧವಾಗಿ ಅವನು ಯೋಜಿಸಿದ ಉಪಾಯಗಳನ್ನೂ ಬರೆಯಲಾಗಿದೆ.
ಇಸ್ರೇಲಿನಲ್ಲಿ ಮೆನಹೇಮನ ಆಳ್ವಿಕೆ
16 ಶಲ್ಲೂಮನು ಸತ್ತನಂತರ, ಮೆನಹೇಮನು ತಿಪ್ಸಹುವನ್ನು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸೋಲಿಸಿದನು. ಜನರು ನಗರದ ಬಾಗಿಲನ್ನು ಅವನಿಗೆ ತೆರೆಯಲು ನಿರಾಕರಿಸಿದರು. ಆದ್ದರಿಂದ ಮೆನಹೇಮನು ಅವರನ್ನು ಸೋಲಿಸಿ ಆ ನಗರದಲ್ಲಿದ್ದ ಗರ್ಭಿಣಿ ಸ್ತ್ರೀಯರ ಹೊಟ್ಟೆಗಳನ್ನು ಸೀಳಿಸಿದನು.
17 ಅಜರ್ಯನು ಯೆಹೂದದ ರಾಜನಾಗಿದ್ದ ಮೂವತ್ತೊಂಭತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರೇಲಿನ ರಾಜನಾದನು. ಮೆನಹೇಮನು ಸಮಾರ್ಯದಲ್ಲಿ ಹತ್ತು ವರ್ಷಗಳ ಕಾಲ ಆಳಿದನು. 18 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮೆನಹೇಮನು ಮಾಡಿದನು. ಇಸ್ರೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮೆನಹೇಮನು ಮುಂದುವರಿಸಿದನು.
19 ಅಶ್ಶೂರ್ ದೇಶದ ರಾಜನಾದ ಪೂಲನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಮೆನಹೇಮನು ಪೂಲನಿಗೆ ಮೂವತ್ನಾಲ್ಕು ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. ಪೂಲನು ಮೆನಹೇಮನಿಗೆ ಬೆಂಬಲವನ್ನು ನೀಡಲು ಮತ್ತು ಮೆನಹೇಮನ ರಾಜ್ಯವನ್ನು ಬಲಪಡಿಸಲು ಹೀಗೆ ಮಾಡಿದನು: 20 ಶ್ರೀಮಂತರು ಮತ್ತು ಅಧಿಕಾರವುಳ್ಳ ಜನರು ತೆರಿಗೆಯನ್ನು ನೀಡುವಂತೆ ಮಾಡಿ, ಮೆನಹೇಮನು ಈ ಹಣವನ್ನು ಸಂಗ್ರಹಿಸಿದನು. ಮೆನಹೇಮನು ಪ್ರತಿಯೊಬ್ಬ ಮನುಷ್ಯನಿಗೂ ಆರುನೂರು ಗ್ರಾಂ ಬೆಳ್ಳಿಯ ತೆರಿಗೆಯನ್ನು ವಿಧಿಸಿದನು. ನಂತರ ಮೆನಹೇಮನು ಅಶ್ಶೂರದ ರಾಜನಿಗೆ ಹಣವನ್ನು ಕೊಟ್ಟನು. ಆದ್ದರಿಂದ ಅಶ್ಶೂರದ ರಾಜನು ಬಿಟ್ಟುಹೋದನು; ಅವನು ಇಸ್ರೇಲಿನಲ್ಲೇ ನೆಲೆಸಲಿಲ್ಲ.
21 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮೆನಹೇಮನು ಮಾಡಿದ ಉಳಿದ ಮಹಾಕಾರ್ಯಗಳನ್ನು ಬರೆಯಲಾಗಿದೆ. 22 ಮೆನಹೇಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮೆನಹೇಮನ ನಂತರ ಅವನ ಮಗನಾದ ಪೆಕಹ್ಯನು ಹೊಸ ರಾಜನಾದನು.
ಇಸ್ರೇಲನ್ನು ಪೆಕಹ್ಯನು ಆಳಿದನು
23 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಪೆಕಹ್ಯನು ಎರಡು ವರ್ಷ ಆಳಿದನು. 24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಪೆಕಹ್ಯನು ಮಾಡಿದನು. ಇಸ್ರೇಲರನ್ನು ಪಾಪಕೃತ್ಯಗಳಿಗೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನೇ ಪೆಕಹ್ಯನು ಮುಂದುವರಿಸಿದನು.
25 ಪೆಕಹ್ಯನ ಸೇನೆಗೆ ರೆಮಲ್ಯನ ಮಗನಾದ ಪೆಕಹನು ಸೇನಾಧಿಪತಿಯಾಗಿದ್ದನು. ಅವನು ಪೆಕಹ್ಯನನ್ನು ಕೊಂದುಹಾಕಿದನು. ಅವನು ಸಮಾರ್ಯದಲ್ಲಿರುವ ರಾಜನ ಅರಮನೆಯಲ್ಲಿ ಪೆಕಹ್ಯನು ಅರ್ಗೋಬ್ ಮತ್ತು ಅರ್ಯೇ ಎಂಬವರನ್ನು ಸಹ ಕೊಂದುಹಾಕಿದನು. ಪೆಕಹ್ಯನನ್ನು ಪೆಕಹನು ಕೊಂದುಹಾಕಿದಾಗ ಅವನ ಸಂಗಡ ಗಿಲ್ಯಾದಿನ ಐವತ್ತು ಜನರಿದ್ದರು. ಪೆಕಹ್ಯನ ನಂತರ ಪೆಕಹನು ಹೊಸ ರಾಜನಾದನು.
26 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ.
ಇಸ್ರೇಲನ್ನು ಪೆಕಹನು ಆಳುವನು
27 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಪೆಕಹನು ಇಪ್ಪತ್ತು ವರ್ಷ ಆಳಿದನು. 28 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ಪೆಕಹನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಪೆಕಹನು ಮುಂದುವರಿಸಿದನು.
29 ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನೆಂಬವನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಪೆಕಹನು ಇಸ್ರೇಲಿನ ರಾಜನಾಗಿದ್ದ ಸಂದರ್ಭದಲ್ಲಿ ಇದು ಸಂಭವಿಸಿತು. ತಿಗ್ಲತ್ಪಿಲೆಸರನು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಪ್ರಾಂತ್ಯಗಳನ್ನೆಲ್ಲ ಸ್ವಾಧೀನಪಡಿಸಿಕೊಂಡನು. ತಿಗ್ಲತ್ಪಿಲೆಸರನು ಈ ಸ್ಥಳಗಳಲ್ಲಿದ್ದ ಜನರನ್ನು ಸೆರೆಯಾಳುಗಳನ್ನಾಗಿಸಿ ಅಶ್ಶೂರಿಗೆ ಕೊಂಡೊಯ್ದನು.
30 ಏಲನ ಮಗನಾದ ಹೋಶೇಯನು ರೆಮಲ್ಯನ ಮಗನಾದ ಪೆಕಹನ ವಿರುದ್ಧ ಸಂಚುಗಳನ್ನು ಮಾಡಿ ಪೆಕಹನನ್ನು ಕೊಂದುಹಾಕಿದನು. ಪೆಕಹನ ನಂತರ ಹೋಶೇಯನು ಹೊಸ ರಾಜನಾದನು. ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಹೀಗಾಯಿತು.
31 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.
ಯೆಹೂದವನ್ನು ಯೋತಾಮನು ಆಳುವನು
32 ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾದ ಎರಡನೆಯ ವರ್ಷದಲ್ಲಿ ಹೀಗಾಯಿತು. 33 ಯೋತಾಮನು ರಾಜನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಯೋತಾಮನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಯೋತಾಮನ ತಾಯಿಯು ಚಾದೋಕನ ಮಗಳಾದ ಯೆರೂಷಾ ಎಂಬ ಹೆಸರಿನವಳು. 34 ಯೋತಾಮನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಮಾಡಿದನು. 35 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು. ಯೋತಾಮನು ಯೆಹೋವನ ಆಲಯಕ್ಕೆ ಮೇಲ್ಬಾಗಿಲನ್ನು ನಿರ್ಮಿಸಿದನು. 36 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋತಾಮನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.
37 ಆ ಕಾಲದಲ್ಲಿ, ಅರಾಮ್ಯರ ರಾಜನಾದ ರೆಚೀನನನ್ನು ಮತ್ತು ರೆಮಲ್ಯನ ಮಗನಾದ ಪೆಕಹನನ್ನು ಯೆಹೂದದ ವಿರುದ್ಧ ಹೋರಾಡಲು ಯೆಹೋವನು ಕಳುಹಿಸಲಾರಂಭಿಸಿದನು.
38 ಯೋತಾಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು. ಯೋತಾಮನನ್ನು ಅವನ ಪೂರ್ವಿಕನಾದ ದಾವೀದನ ನಗರದಲ್ಲಿ ಸಮಾಧಿಮಾಡಿದರು. ಯೋತಾಮನ ನಂತರ ಅವನ ಮಗನಾದ ಅಹಾಜನು ಹೊಸ ರಾಜನಾದನು.
ಅಹಾಜನು ಯೆಹೂದದ ರಾಜನಾದನು
16 ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾಗಿದ್ದ ಹದಿನೇಳನೆಯ ವರ್ಷದಲ್ಲಿ ಯೋತಾಮನ ಮಗನಾದ ಅಹಾಜನು ಯೆಹೂದದ ರಾಜನಾದನು. 2 ಅಹಾಜನು ರಾಜನಾದಾಗ ಅವನಿಗೆ ಇಪ್ಪತ್ತು ವರ್ಷ ವಯಸ್ಸಾಗಿತ್ತು. ಅಹಾಜನು ಜೆರುಸಲೇಮನ್ನು ಹದಿನಾರು ವರ್ಷ ಆಳಿದನು. ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದಾಗಿದ್ದ ಕಾರ್ಯಗಳನ್ನು ಅಹಾಜನು ಮಾಡಲಿಲ್ಲ. ಅವನ ಪೂರ್ವಿಕನಾದ ದಾವೀದನು ದೇವರಿಗೆ ವಿಧೇಯನಾಗಿದ್ದನು; ಆದರೆ ಅಹಾಜನು ವಿಧೇಯನಾಗಲಿಲ್ಲ. 3 ಅಹಾಜನು ಇಸ್ರೇಲಿನ ರಾಜರುಗಳಂತೆ ಜೀವಿಸಿದನು. ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಆಹುತಿಕೊಟ್ಟನು. ಇಸ್ರೇಲರು ದೇಶಕ್ಕೆ ಬಂದ ಕಾಲದಲ್ಲಿ ಯೆಹೋವನು ಬಲಾತ್ಕಾರದಿಂದ ಓಡಿಸಿದ ಜನಾಂಗಗಳ ಅಸಹ್ಯ ಪಾಪಗಳನ್ನು ಅವನು ಅನುಸರಿಸಿದನು. 4 ಅಹಾಜನು ಉನ್ನತಸ್ಥಳಗಳಲ್ಲಿ ಮತ್ತು ಬೆಟ್ಟಗಳ ಮೇಲೆ ಮತ್ತು ಹಸಿರು ಮರಗಳ ಕೆಳಗೆ ಯಜ್ಞಗಳನ್ನು ಅರ್ಪಿಸಿದನು ಮತ್ತು ಧೂಪವನ್ನು ಸುಟ್ಟನು.
5 ಅರಾಮ್ಯರ ರಾಜನಾದ ರೆಚೀನನು ಮತ್ತು ರೆಮಲ್ಯನ ಮಗನೂ ಇಸ್ರೇಲಿನ ರಾಜನೂ ಆದ ಪೆಕಹನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಬಂದರು. ರೆಚೀನ ಮತ್ತು ಪೆಕಹ ಅಹಾಜನಿಗೆ ಮುತ್ತಿಗೆ ಹಾಕಿದರು. ಆದರೆ ಅವನನ್ನು ಸೋಲಿಸಲಾಗಲಿಲ್ಲ. 6 ಆ ಸಮಯಲ್ಲಿ ಅರಾಮ್ಯರ ರಾಜನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ಯಕ್ಕೆ ಸೇರಿಸಿಕೊಂಡನು. ರೆಚೀನನು ಏಲತ್ ಪಟ್ಟಣದಲ್ಲಿ ವಾಸಿಸುತ್ತಿದ್ದ ಯೆಹೂದ್ಯರನ್ನೆಲ್ಲಾ ಓಡಿಸಿದನು. ಅರಾಮ್ಯರು ಬಂದು ಏಲತ್ ಪಟ್ಟಣದಲ್ಲಿ ನೆಲೆಸಿದರು; ಅವರು ಇಂದಿನವರೆಗೂ ಅಲ್ಲಿಯೇ ವಾಸಿಸುತ್ತಿದ್ದಾರೆ.
7 ಅಹಾಜನು ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಆ ಸಂದೇಶವೇನೆಂದರೆ: “ನಾನು ನಿನ್ನ ಸೇವಕ. ನಾನು ನಿನಗೆ ಮಗನಂತಿದ್ದೇನೆ. ನೀನು ಬಂದು, ಅರಾಮ್ಯರ ರಾಜನಿಂದ ಮತ್ತು ಇಸ್ರೇಲಿನ ರಾಜನಿಂದ ನನ್ನನ್ನು ರಕ್ಷಿಸು. ಅವರು ನನ್ನ ವಿರುದ್ಧ ಯುದ್ಧಕ್ಕೆ ಬಂದಿದ್ದಾರೆ.” 8 ಅಹಾಜನು ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯಲ್ಲಿದ್ದ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಅಶ್ಶೂರದ ರಾಜನಿಗೆ ಕಾಣಿಕೆಯಾಗಿ ಕಳುಹಿಸಿದನು. 9 ಅಶ್ಶೂರದ ರಾಜನು ಅಹಾಜನ ಮಾತುಗಳನ್ನು ಕೇಳಿ ದಮಸ್ಕದ ವಿರುದ್ಧ ಯುದ್ಧಕ್ಕೆ ಹೊರಟು ಆ ನಗರಕ್ಕೆ ಮುತ್ತಿಗೆಹಾಕಿ, ದಮಸ್ಕದ ಜನರನ್ನು ಸೆರೆಹಿಡಿದುಕೊಂಡು ಕೀರ್ಗೆ ಒಯ್ದನು. ಅವನು ರೆಚೀನನನ್ನು ಕೊಂದುಹಾಕಿದನು.
10 ರಾಜನಾದ ಅಹಾಜನು ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನನ್ನು ಭೇಟಿಮಾಡಲು ದಮಸ್ಕಕ್ಕೆ ಹೋದನು. ಅಹಾಜನು ದಮಸ್ಕದಲ್ಲಿದ್ದ ಯಜ್ಞವೇದಿಕೆಯನ್ನು ನೋಡಿದನು. ರಾಜನಾದ ಅಹಾಜನು ಯಜ್ಞವೇದಿಕೆಯ ವಿನ್ಯಾಸವನ್ನು ಮತ್ತು ಮಾದರಿಯನ್ನು ಯಾಜಕನಾದ ಊರೀಯನಿಗೆ ಕಳುಹಿಸಿದನು. 11 ಆಗ ಯಾಜಕನಾದ ಊರೀಯನು, ದಮಸ್ಕದಿಂದ ರಾಜನಾದ ಅಹಾಜನು ತನಗೆ ಕಳುಹಿಸಿದ ಯಜ್ಞವೇದಿಕೆಯ ಮಾದರಿಯಲ್ಲೇ ಮತ್ತೊಂದು ಯಜ್ಞವೇದಿಕೆಯೊಂದನ್ನು ನಿರ್ಮಿಸಿದನು. ಹೀಗೆ ರಾಜನಾದ ಅಹಾಜನು ದಮಸ್ಕದಿಂದ ಹಿಂತಿರುಗುವುದಕ್ಕೆ ಮೊದಲೇ ಊರೀಯನು ಯಜ್ಞವೇದಿಕೆಯೊಂದನ್ನು ನಿರ್ಮಿಸಿದ್ದನು.
12 ರಾಜನು ದಮಸ್ಕದಿಂದ ಹಿಂದಿರುಗಿಬಂದು ಯಜ್ಞವೇದಿಕೆಯನ್ನು ನೋಡಿದನು. ಅವನು ಯಜ್ಞಗಳನ್ನು ಅದರ ಮೇಲೆ ಅರ್ಪಿಸಿದನು. 13 ಅಹಾಜನು ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯನೈವೇದ್ಯವನ್ನು ಅರ್ಪಿಸಿದನು; ಪಾನನೈವೇದ್ಯವನ್ನು ಸುರಿಸಿದನು; ಸಮಾಧಾನಯಜ್ಞಕ್ಕಾಗಿ ವಧಿಸಿದ ಪಶುಗಳ ರಕ್ತವನ್ನು ಯಜ್ಞವೇದಿಕೆಯ ಮೇಲೆ ಚಿಮಿಕಿಸಿದನು.
14 ಅಹಾಜನು ದೇವಾಲಯದ ಎದುರಿನಲ್ಲಿ ಯೆಹೋವನ ಸನ್ನಿಧಿಯಲ್ಲಿದ್ದ ತಾಮ್ರದ ಯಜ್ಞವೇದಿಕೆಯನ್ನು ತೆಗೆಸಿದನು. ಈ ತಾಮ್ರದ ಯಜ್ಞವೇದಿಕೆಯು ಅಹಾಜನ ಯಜ್ಞವೇದಿಕೆ ಮತ್ತು ದೇವಾಲಯದ ನಡುವೆ ಇದ್ದಿತು. ಅಹಾಜನು ತಾಮ್ರದ ಯಜ್ಞವೇದಿಕೆಯನ್ನು ತನ್ನ ಸ್ವಂತ ಯಜ್ಞವೇದಿಕೆಯ ಉತ್ತರದಿಕ್ಕಿನಲ್ಲಿಡಿಸಿದನು. 15 ಅಹಾಜನು ಯಾಜಕನಾದ ಊರೀಯನಿಗೆ, “ಈ ದೇಶದ ಜನರೆಲ್ಲರೂ ಪ್ರಾತಃಕಾಲದಲ್ಲಿ ಸರ್ವಾಂಗಹೋಮವನ್ನೂ ಸಾಯಂಕಾಲದಲ್ಲಿ ಧಾನ್ಯನೈವೇದ್ಯವನ್ನೂ ಮತ್ತು ಪಾನದ್ರವ್ಯಗಳನ್ನೂ ಸಮರ್ಪಿಸಲು ಮಹಾವೇದಿಕೆಯನ್ನು ಬಳಸಬೇಕು; ಸರ್ವಾಂಗಹೋಮಕ್ಕಾಗಿ ಮತ್ತು ಸಮಾಧಾನಯಜ್ಞಕ್ಕಾಗಿ ವಧಿಸುವ ಪಶುಗಳ ರಕ್ತವನ್ನು ಈ ಮಹಾವೇದಿಕೆಯ ಮೇಲೆ ಚಿಮುಕಿಸಿ. ಆದರೆ ನಾನು ದೇವರಿಂದ ದೈವೋತ್ತರಗಳನ್ನು ಕೇಳಲು ತಾಮ್ರವೇದಿಕೆಯನ್ನು ಉಪಯೋಗಿಸುತ್ತೇನೆ” ಎಂದು ಹೇಳಿದನು. 16 ರಾಜನಾದ ಅಹಾಜನು ಆಜ್ಞಾಪಿಸಿದಂತೆಯೇ ಯಾಜಕನಾದ ಊರೀಯನು ಮಾಡಿದನು.
17 ನಂತರ ರಾಜನಾದ ಅಹಾಜನು ಪೀಠಗಳ ಪಟ್ಟಿಗಳನ್ನು ಕತ್ತರಿಸಿದನು. ಅವುಗಳ ಮೇಲಿದ್ದ ಗಂಗಾಳಗಳನ್ನು ತೆಗೆದಿಟ್ಟನು; ಸಮುದ್ರವೆಂಬ ತೊಟ್ಟಿಯನ್ನು ತಾಮ್ರದ ಹೋರಿಗಳಿಂದ ಕೆಳಗಿಳಿಸಿ ಕಲ್ಲುಕಟ್ಟೆಯ ಮೇಲಿಟ್ಟನು. 18 ಅಹಾಜನು ಸಬ್ಬತ್ ದಿನಕ್ಕಾಗಿ ಕಟ್ಟಿದ ಮಂಟಪವನ್ನು ಬದಲಾಯಿಸಿದನು. ಕೆಲಸಗಾರರು ಆಲಯದ ಒಳಗೆ ಇದನ್ನು ನಿರ್ಮಿಸಿದ್ದರು. ಅಹಾಜನು ರಾಜನಿಗಾಗಿ ಇದ್ದ ಹೊರಭಾಗದ ಬಾಗಿಲನ್ನು ಬದಲಾಯಿಸಿದನು. ಅಹಾಜನು ದೇವಾಲಯದಿಂದ ಇವುಗಳನ್ನೆಲ್ಲಾ ಅಶ್ಶೂರದ ರಾಜನ[a] ದೆಸೆಯಿಂದ ಬದಲಾಯಿಸಿದನು.
19 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಹಾಜನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ. 20 ಅಹಾಜನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ದಾವೀದನಗರದಲ್ಲಿ ಸಮಾಧಿಮಾಡಿದರು. ಅಹಾಜನ ಮಗನಾದ ಹಿಜ್ಕೀಯನು ಅವನ ನಂತರ ಹೊಸ ರಾಜನಾದನು.
ಯೇಸು ಮತ್ತು ನಿಕೊದೇಮ
3 ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು. 2 ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.
3 ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.
4 ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.
5 ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು. 6 ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು. 7 ‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ. 8 ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.
9 ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.
10 ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ? 11 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ. 12 ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ! 13 ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.
14 “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15 ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.
16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18 ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International