Old/New Testament
ಸೌಲನ ಕುಟುಂಬಕ್ಕೆ ದಾವೀದನು ತೋರಿದ ಅನುಕಂಪ
9 ದಾವೀದನು, “ಸೌಲನ ಕುಟುಂಬದಲ್ಲಿ ಇನ್ನೂ ಯಾರಾದರೂ ಉಳಿದಿರುವರೇ? ಯೋನಾತಾನನಿಗೋಸ್ಕರ ನಾನು ಆ ವ್ಯಕ್ತಿಗೆ ದಯೆ ತೋರಿಸಬೇಕಾಗಿದೆ” ಎಂದು ಕೇಳಿದನು.
2 ಸೌಲನ ಮನೆಯಲ್ಲಿ ಸೇವಕನಾಗಿದ್ದ ಚೀಬ ಎಂಬವನೊಬ್ಬನಿದ್ದನು. ದಾವೀದನ ಸೇವಕರು ಚೀಬನನ್ನು ದಾವೀದನ ಬಳಿಗೆ ಕರೆತಂದರು. ರಾಜನಾದ ದಾವೀದನು ಅವನಿಗೆ, “ನೀನು ಚೀಬನೇ?” ಎಂದು ಕೇಳಿದನು.
ಚೀಬನು, “ಹೌದು, ನಿನ್ನ ಸೇವಕನಾದ ಚೀಬನು ನಾನೇ” ಎಂದನು.
3 ರಾಜನಾದ ದಾವೀದನು, “ಸೌಲನ ಕುಟುಂಬದಲ್ಲಿ ಯಾವ ವ್ಯಕ್ತಿಯಾದರೂ ಉಳಿದಿರುವನೇ? ನಾನು ಆ ವ್ಯಕ್ತಿಗೆ ದೇವರ ಕರುಣೆಯನ್ನು ತೋರಿಸಬೇಕಾಗಿದೆ” ಎಂದು ಹೇಳಿದನು.
ಚೀಬನು ರಾಜನಾದ ದಾವೀದನಿಗೆ, “ಯೋನಾತಾನನ ಮಗನೊಬ್ಬನು ಇನ್ನೂ ಇದ್ದಾನೆ. ಅವನ ಎರಡೂ ಕಾಲುಗಳು ಕುಂಟಾಗಿವೆ” ಎಂದನು.
4 ರಾಜನಾದ ದಾವೀದನು ಚೀಬನಿಗೆ, “ಅವನು ಎಲ್ಲಿದ್ದಾನೆ?” ಎಂದು ಕೇಳಿದನು.
ಚೀಬನು ರಾಜನಿಗೆ, “ಅವನು ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿದ್ದಾನೆ” ಎಂದನು.
5 ಆಗ ರಾಜನಾದ ದಾವೀದನು ಲೋದೆಬಾರಿನಲ್ಲಿ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಯೋನಾತಾನನ ಮಗನನ್ನು ಕರೆತರಲು ಸೇವಕರನ್ನು ಕಳುಹಿಸಿದನು. 6 ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು.
ದಾವೀದನು, “ಮೆಫೀಬೋಶೆತನೇ” ಎಂದನು.
ಮೆಫೀಬೋಶೆತನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ” ಎಂದನು.
7 ದಾವೀದನು ಮೆಫೀಬೋಶೆತನಿಗೆ, “ಹೆದರಬೇಡ, ನಾನು ನಿನಗೆ ದಯತೋರಿಸುವೆ. ನಿನ್ನ ತಂದೆಯಾದ ಯೋನಾತಾನನ ಸಲುವಾಗಿ ನಾನು ಇದನ್ನು ಮಾಡುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಾನು ಹಿಂದಕ್ಕೆ ಕೊಡುತ್ತೇನೆ. ನೀನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು” ಎಂದು ಹೇಳಿದನು.
8 ಮೆಫೀಬೋಶೆತನು ದಾವೀದನಿಗೆ ಮತ್ತೆ ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನಿನ್ನ ಸೇವಕನಾದ ನನಗೆ ಬಹಳ ದಯಾಪರನಾಗಿರುವೆ, ನಾನು ಸತ್ತ ನಾಯಿಗಿಂತ ಉತ್ತಮನೇನಲ್ಲ!” ಎಂದು ಹೇಳಿದನು.
9 ಆಗ ರಾಜನಾದ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಒಡೆಯನಾದ ಸೌಲನ ಕುಟುಂಬಕ್ಕೆ ಸೇರಿದ ಎಲ್ಲವನ್ನೂ ಅವನ ಮೊಮ್ಮಗನಿಗೆ ಕೊಟ್ಟಿದ್ದೇನೆ. 10 ನೀನು ಮೆಫೀಬೋಶೆತನಿಗಾಗಿ ಭೂಮಿಯಲ್ಲಿ ವ್ಯವಸಾಯ ಮಾಡು. ನಿನ್ನ ಮಕ್ಕಳೂ ನಿನ್ನ ಸೇವಕರೂ ಮೆಫೀಬೋಶೆತನಿಗಾಗಿ ಇದನ್ನು ಮಾಡಲಿ. ನೀನು ಬೆಳೆಗಳನ್ನು ಕೊಯ್ದು ಸುಗ್ಗಿಮಾಡು. ಆಗ ನಿನ್ನ ಒಡೆಯನ ಮೊಮ್ಮಗನಿಗೆ ಬೇಕಾದಷ್ಟು ಆಹಾರವಿರುತ್ತದೆ. ಆದರೆ ನಿನ್ನ ಒಡೆಯನ ಮೊಮ್ಮಗನಾದ ಮೆಫೀಬೋಶೆತನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟ ಮಾಡಬೇಕು” ಎಂದನು.
ಚೀಬನಿಗೆ ಹದಿನೈದು ಮಂದಿ ಗಂಡುಮಕ್ಕಳೂ, ಇಪ್ಪತ್ತು ಮಂದಿ ಸೇವಕರೂ ಇದ್ದರೂ. 11 ಚೀಬನು ರಾಜನಾದ ದಾವೀದನಿಗೆ, “ನಾನು ನಿನ್ನ ಸೇವಕ. ರಾಜನಾದ ಒಡೆಯನು ನನಗೆ ಆಜ್ಞಾಪಿಸಿದ್ದೆಲ್ಲವನ್ನೂ ನಾನು ಮಾಡುತ್ತೇನೆ” ಎಂದನು.
ಆದ್ದರಿಂದ ಮೆಫೀಬೋಶೆತನು, ರಾಜನ ಗಂಡುಮಕ್ಕಳಲ್ಲಿ ಒಬ್ಬನಂತೆ, ದಾವೀದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದನು. 12 ಮೆಫೀಬೋಶೆತನಿಗೆ ಮೀಕನೆಂಬ ಚಿಕ್ಕ ಮಗನಿದ್ದನು. ಚೀಬನ ಕುಟುಂಬದ ಜನರೆಲ್ಲರೂ ಮೆಫೀಬೋಶೆತನ ಸೇವಕರಾದರು. 13 ಮೆಫೀಬೋಶೆತನ ಎರಡೂ ಕಾಲುಗಳು ಕುಂಟಾಗಿದ್ದವು. ಮೆಫೀಬೋಶೆತನು ಜೆರುಸಲೇಮಿನಲ್ಲಿ ನೆಲೆಸಿದ್ದನು. ಅವನು ಪ್ರತಿದಿನವೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.
ದಾವೀದನ ಜನರಿಗೆ ಹಾನೂನನು ಅವಮಾನ ಮಾಡಿದ್ದು
10 ತರುವಾಯ, ಅಮ್ಮೋನಿಯರ ರಾಜನಾದ ನಾಹಾಷನು ಸತ್ತನು. ಅವನ ನಂತರ ಅವನ ಮಗನಾದ ಹಾನೂನನು ರಾಜನಾದನು. 2 ದಾವೀದನು, “ನಾಹಾಷನು ನನಗೆ ದಯೆತೋರಿಸಿದ್ದನು. ಆದ್ದರಿಂದ ಅವನ ಮಗನಿಗೆ ನಾನು ದಯೆತೋರಿಸುವೆನು” ಎಂದು ಹೇಳಿದನು. ಆದ್ದರಿಂದ ತಂದೆಯ ಸಾವಿನಿಂದ ಶೋಕತಪ್ತನಾಗಿರುವ ಹಾನೂನನನ್ನು ಸಂತೈಸಲು ದಾವೀದನು ತನ್ನ ಅಧಿಕಾರಿಗಳನ್ನು ಕಳುಹಿಸಿದನು.
ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಹೋದರು. 3 ಆದರೆ ಅಮ್ಮೋನಿಯರ ನಾಯಕರು ತಮ್ಮ ಪ್ರಭುವಾದ ಹಾನೂನನಿಗೆ, “ನಿನ್ನನ್ನು ಸಂತೈಸಲು ಕೆಲವು ಜನರನ್ನು ಕಳುಹಿಸುವುದರ ಮೂಲಕ ದಾವೀದನು ನಿನ್ನ ತಂದೆಯನ್ನು ಗೌರವಿಸಲು ಪ್ರಯತ್ನಿಸುತ್ತಿರುವನೆಂದು ನೀನು ಭಾವಿಸಿರುತ್ತಿಯಲ್ಲವೇ? ಇಲ್ಲ! ನಿನ್ನ ನಗರದ ಸಂಗತಿಗಳನ್ನು ರಹಸ್ಯವಾಗಿ ಕಂಡುಕೊಳ್ಳಲು ಮತ್ತು ತಿಳಿದುಕೊಳ್ಳಲು ದಾವೀದನು ಈ ಜನರನ್ನು ಕಳುಹಿಸಿದ್ದಾನೆ. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡಲು ಯೋಜನೆ ಮಾಡುತ್ತಿದ್ದಾರೆ” ಎಂದು ಹೇಳಿದರು.
4 ಆದ್ದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ ಅವರ ಗಡ್ಡದ ಅರ್ಧಭಾಗವನ್ನು ಬೋಳಿಸಿದನು. ಅವರ ನಡುವಿನ ಕೆಳಭಾಗವು ಕಾಣುವಂತೆ ಅವರ ಬಟ್ಟೆಗಳನ್ನು ಮಧ್ಯಭಾಗದಲ್ಲಿ ಕತ್ತರಿಸಿದನು, ನಂತರ ಅವರನ್ನು ಕಳುಹಿಸಿದನು.
5 ಅವರು ದಾವೀದನಿಗೆ ಈ ಸುದ್ದಿಯನ್ನು ತಿಳಿಸಿದರು. ಆಗ ದಾವೀದನು ತನ್ನ ಬಳಿಗೆ ಬರಲು ಬಹಳ ನಾಚಿಕೆಯಿಂದಿದ್ದ ಅಧಿಕಾರಗಳ ಬಳಿಗೆ ಸಂದೇಶಕರನ್ನು ಕಳುಹಿಸಿ, “ನಿಮ್ಮ ಗಡ್ಡಗಳು ಮತ್ತೆ ಬೆಳೆಯುವವರೆಗೆ ಜೆರಿಕೊವಿನಲ್ಲಿ ಇರಿ. ಅನಂತರ ಜೆರುಸಲೇಮಿಗೆ ಬನ್ನಿ” ಎಂದು ತಿಳಿಸಿದನು.
ಅಮ್ಮೋನಿಯರ ವಿರುದ್ಧ ಯುದ್ಧ
6 ಅಮ್ಮೋನಿಯರು ತಾವು ದಾವೀದನಿಗೆ ಶತ್ರುಗಳಾಗಿರುವುದಾಗಿ ತಿಳಿದುಕೊಂಡರು. ಆದ್ದರಿಂದ ಅಮ್ಮೋನಿಯರು ಹಣಕೊಟ್ಟು ಬೇತ್ರೆಹೋಬ್ ಮತ್ತು ಚೋಬಾಗಳಿಂದ ಅರಾಮ್ಯರ ಇಪ್ಪತ್ತುಸಾವಿರ ಮಂದಿ ಭೂದಳವನ್ನು ಬರಮಾಡಿಕೊಂಡರು. ಅಮ್ಮೋನಿಯರು ಮಾಕಾದ ರಾಜನನ್ನು ಮತ್ತು ಅವನ ಒಂದು ಸಾವಿರ ಸೈನಿಕರನ್ನು ಹಾಗೂ ಟೋಬ್ನಿಂದ ಹನ್ನೆರಡು ಸಾವಿರ ಮಂದಿ ಸೈನಿಕರನ್ನು ಬರಮಾಡಿಕೊಂಡರು.
7 ಇದು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಯೋವಾಬನನ್ನು ಎಲ್ಲಾ ಶೂರ ಸೈನಿಕರೊಂದಿಗೆ ಕಳುಹಿಸಿದನು. 8 ಅಮ್ಮೋನಿಯರು ಹೊರಗೆ ಬಂದು ಯುದ್ಧಕ್ಕೆ ಸಿದ್ಧರಾದರು. ಅವರು ನಗರದ ಬಾಗಿಲಿನಲ್ಲಿ ನಿಂತರು. ಚೋಬಾ ಮತ್ತು ರೆಹೋಬ್ಗಳ ಅರಾಮ್ಯರು, ಟೋಬ್ ಮತ್ತು ಮಾಕಾದ ಜನರು ಯುದ್ಧರಂಗದಲ್ಲಿ ಅಮ್ಮೋನಿಯರ ಜೊತೆಯಲ್ಲಿ ಒಟ್ಟಾಗಿ ನಿಲ್ಲಲಿಲ್ಲ.
9 ಅಮ್ಮೋನಿಯರು ತಮ್ಮ ವಿರುದ್ಧವಾಗಿ ಹಿಂದೆ ಮತ್ತು ಮುಂದೆ ನಿಂತಿರುವುದನ್ನು ನೋಡಿದ ಯೋವಾಬನು ಇಸ್ರೇಲರಲ್ಲಿ ಶ್ರೇಷ್ಠರಾದವರನ್ನು ಆರಿಸಿಕೊಂಡು ಅರಾಮ್ಯರ ವಿರುದ್ಧ ಯುದ್ಧಮಾಡಲು ಅವರನ್ನು ಸಾಲಾಗಿ ನಿಲ್ಲಿಸಿದನು. 10 ಬಳಿಕ ಯೋವಾಬನು ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು ಅಮ್ಮೋನಿಯರ ವಿರುದ್ಧ ಹೋರಾಡಲು ಕಳುಹಿಸಿದನು. 11 ಯೋವಾಬನು ಅಬೀಷೈಗೆ, “ಅರಾಮ್ಯರು ನನಗಿಂತ ಬಲಶಾಲಿಗಳೆಂದು ಕಂಡುಬಂದರೆ ನೀನು ನನಗೆ ಸಹಾಯಮಾಡು. ಅಮ್ಮೋನಿಯರು ನಿನಗೆ ಬಲಶಾಲಿಗಳೆಂದು ಕಂಡು ಬಂದರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ. 12 ನೀನು ಶಕ್ತನಾಗಿರು. ನಮ್ಮ ಜನರಿಗಾಗಿ ಮತ್ತು ನಮ್ಮ ದೇವರ ನಗರಗಳಿಗಾಗಿ ಧೈರ್ಯದಿಂದ ಹೋರಾಡೋಣ. ಯೆಹೋವನು ತನಗೆ ಸರಿಯೆನಿಸುವುದನ್ನು ಮಾಡಲಿ” ಎಂದು ಹೇಳಿದನು.
13 ನಂತರ ಯೋವಾಬನು ಮತ್ತು ಅವನ ಜನರು ಅರಾಮ್ಯರ ಮೇಲೆ ಆಕ್ರಮಣ ಮಾಡಿದರು. ಯೋವಾಬ ಮತ್ತು ಅವನ ಜನರನ್ನು ಬಿಟ್ಟು ಅರಾಮ್ಯರು ಓಡಿಹೋದರು. 14 ಅರಾಮ್ಯರು ಓಡಿಹೋಗುತ್ತಿರುವುದನ್ನು ನೋಡಿದ ಅಮ್ಮೋನಿಯರು ಅಬೀಷೈಯನ್ನು ಬಿಟ್ಟು ಓಡಿಹೋದರು. ಅವರು ತಮ್ಮ ನಗರಕ್ಕೆ ಹಿಂದಿರುಗಿದರು.
ಯೋವಾಬನು ಯುದ್ಧರಂಗದಿಂದ ಹಿಂದಿರುಗಿ ಜೆರುಸಲೇಮಿಗೆ ಬಂದನು.
ಅರಾಮ್ಯರು ಮತ್ತೆ ಯುದ್ಧ ಮಾಡಲು ತೀರ್ಮಾನಿಸಿದರು
15 ಇಸ್ರೇಲರು ತಮ್ಮನ್ನು ಸೋಲಿಸಿದರೆಂಬುದನ್ನು ಅರಾಮ್ಯರು ತಿಳಿದುಕೊಂಡರು. ಆದ್ದರಿಂದ ಅವರೆಲ್ಲರೂ ಒಟ್ಟಾಗಿ ಸೇರಿ ಒಂದು ದೊಡ್ಡ ಸೈನ್ಯವನ್ನು ಕಟ್ಟಿದರು. 16 ಯೂಫ್ರೇಟೀಸ್ ನದಿಯ ಮತ್ತೊಂದು ತೀರದಲ್ಲಿ ವಾಸಿಸುತ್ತಿದ್ದ ಅರಾಮ್ಯರನ್ನು ಕರೆತರಲು ಹದದೆಜೆರನು ಸಂದೇಶಕರನ್ನು ಕಳುಹಿಸಿದನು. ಈ ಅರಾಮ್ಯರು ಹೇಲಾಮಿಗೆ ಬಂದರು. ಹದದೆಜೆರನ ಸೇನಾಪತಿಯಾದ ಶೋಬಕನು ಅವರ ನಾಯಕನಾದನು.
17 ಈ ವಿಷಯವು ದಾವೀದನಿಗೆ ತಿಳಿಯಿತು. ಆದ್ದರಿಂದ ಅವನು ಇಸ್ರೇಲರೆಲ್ಲರನ್ನೂ ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಹೇಲಾಮಿಗೆ ಹೋದನು.
ಅಲ್ಲಿ ಅರಾಮ್ಯರು ಯುದ್ಧಕ್ಕೆ ಸಿದ್ಧರಾಗಿ ಆಕ್ರಮಣ ಮಾಡಿದರು. 18 ಆದರೆ ದಾವೀದನು ಅರಾಮ್ಯರನ್ನು ಸೋಲಿಸಿದನು. ಅರಾಮ್ಯರು ಇಸ್ರೇಲರನ್ನು ಬಿಟ್ಟು ಓಡಿಹೋದರು. ದಾವೀದನು ಅರಾಮ್ಯರ ಏಳು ನೂರು ಮಂದಿ ರಥದ ಸಾರಥಿಯರನ್ನೂ ನಲವತ್ತು ಸಾವಿರ ಮಂದಿ ರಾಹುತರನ್ನೂ ಕೊಂದುಹಾಕಿದನು. ಅರಾಮ್ಯರ ಸೇನಾಪತಿಯಾದ ಶೋಬಕನನ್ನು ಸಹ ದಾವೀದನು ಕೊಂದುಹಾಕಿದನು.
19 ಹದದೆಜೆರನ ಸೇವೆಯಲ್ಲಿದ್ದ ರಾಜರಿಗೆ ಇಸ್ರೇಲರು ತಮ್ಮನ್ನು ಸೋಲಿಸಿದುದು ತಿಳಿದುಬಂತು. ಆದುದರಿಂದ ಅವರು ಇಸ್ರೇಲರೊಂದಿಗೆ ಶಾಂತಿಸಂಧಾನ ಮಾಡಿಕೊಂಡು ಅವರ ಸೇವಕರಾದರು. ಅಂದಿನಿಂದ ಅಮ್ಮೋನಿಯರಿಗೆ ಮತ್ತೆ ಸಹಾಯಮಾಡಲು ಅರಾಮ್ಯರು ಭಯಗೊಂಡರು.
ದಾವೀದನು ಬತ್ಷೆಬೆಳೊಂದಿಗೆ ಪಾಪ ಮಾಡಿದ್ದು
11 ವಸಂತಕಾಲದಲ್ಲಿ, ಎಲ್ಲಾ ರಾಜರೂ ಯುದ್ಧಕ್ಕೆ ಹೊರಡುವ ಸಮಯ ಬಂದಾಗ, ದಾವೀದನು ಯೋವಾಬನನ್ನೂ ಅವನ ಸೇವಕರನ್ನೂ ಮತ್ತು ಇಸ್ರೇಲರೆಲ್ಲರನ್ನೂ ಅಮ್ಮೋನಿಯರೊಂದಿಗೆ ಯುದ್ಧಮಾಡಲು ಕಳುಹಿಸಿದನು. ಯೋವಾಬನ ಸೈನ್ಯವು ರಬ್ಬಕ್ಕೆ ಮುತ್ತಿಗೆ ಹಾಕಿತು.
ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. 2 ಅವನು ಸಾಯಂಕಾಲ ತನ್ನ ಹಾಸಿಗೆಯಿಂದ ಮೇಲೆದ್ದು ಅರಮನೆಯ ಮಾಳಿಗೆಯ ಮೇಲಕ್ಕೆ ಹೋಗಿ ತಿರುಗಾಡುತ್ತಿದ್ದನು. ದಾವೀದನು ಮಾಳಿಗೆಯ ಮೇಲಿರುವಾಗ, ಒಬ್ಬ ಹೆಂಗಸು ಸ್ನಾನ ಮಾಡುತ್ತಿರುವುದನ್ನು ನೋಡಿದನು. ಅವಳು ಅತ್ಯಂತ ಸುಂದರಳಾಗಿದ್ದಳು. 3 ದಾವೀದನು ತನ್ನ ಸೇವಕರನ್ನು ಕರೆದು ಅವಳು ಯಾರೆಂದು ಕೇಳಿದನು. ಒಬ್ಬ ಸೇವಕನು, “ಅವಳು ಎಲೀಯಾಮನ ಮಗಳಾದ ಬತ್ಷೆಬೆಳು. ಹಿತ್ತಿಯನಾದ ಊರೀಯನ ಹೆಂಡತಿ” ಎಂದು ಉತ್ತರಿಸಿದನು.
4 ದಾವೀದನು ತನಗಾಗಿ ಬತ್ಷೆಬೆಳನ್ನು ಕರೆತರಲು ಸಂದೇಶಕರನ್ನು ಕಳುಹಿಸಿದನು. ಅವಳು ದಾವೀದನ ಬಳಿಗೆ ಬಂದಾಗ ಅವನು ಅವಳೊಡನೆ ಲೈಂಗಿಕ ಸಂಬಂಧವನ್ನು ಹೊಂದಿದನು. ತನ್ನ ಮಾಸಿಕ ಮುಟ್ಟು ನಿಂತಮೇಲೆ ತನ್ನನ್ನು ಶುದ್ಧಪಡಿಸಿಕೊಳ್ಳಲು ಆಕೆ ಸ್ನಾನಮಾಡಿಕೊಂಡ ಮೇಲೆ ಇದು ಸಂಭವಿಸಿತು.[a] 5 ಬಳಿಕ ಬತ್ಷೆಬೆ ಗರ್ಭಿಣಿಯಾದಳು. ಅವಳು ದಾವೀದನಿಗೆ, “ನಾನು ಗರ್ಭಿಣಿಯಾಗಿದ್ದೇನೆ” ಎಂದು ಹೇಳಿ ಕಳುಹಿಸಿದಳು.
ದಾವೀದನು ತನ್ನ ಪಾಪವನ್ನು ಮುಚ್ಚಿಡಲು ಪ್ರಯತ್ನಿಸುವನು
6 ದಾವೀದನು ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂಬ ಸಂದೇಶವನ್ನು ಕಳುಹಿಸಿದನು.
ಯೋವಾಬನು ಊರೀಯನನ್ನು ದಾವೀದನ ಬಳಿಗೆ ಕಳುಹಿಸಿದನು. 7 ಊರೀಯನು ದಾವೀದನ ಬಳಿಗೆ ಬಂದನು. ದಾವೀದನು ಊರೀಯನ ಜೊತೆಯಲ್ಲಿ ಮಾತನಾಡಿ, ಯೋವಾಬನು ಹೇಗಿದ್ದಾನೆ? ಸೈನಿಕರು ಹೇಗಿದ್ದಾರೆ? ಯುದ್ಧವು ಹೇಗೆ ನಡೆಯುತ್ತಿದೆ? ಎಂದು ಕೇಳಿದನು. 8 ನಂತರ ದಾವೀದನು ಊರೀಯನಿಗೆ, “ಮನೆಗೆ ಹೋಗಿ ವಿಶ್ರಾಂತಿಯನ್ನು ಪಡೆ” ಎಂದನು.
ಊರೀಯನು ರಾಜನ ಮನೆಯನ್ನು ಬಿಟ್ಟುಹೋದನು. ಊರೀಯನಿಗೆ ರಾಜನು ಕೊಡುಗೆಗಳನ್ನು ಸಹ ಕಳುಹಿಸಿದನು. 9 ಆದರೆ ಊರೀಯನು ಮನೆಗೆ ಹೋಗದೆ ಅರಮನೆಯ ಹೊರಬಾಗಿಲಿನಲ್ಲಿ ರಾಜನ ಸೇವಕರೊಂದಿಗೆ ಮಲಗಿದನು. 10 ಸೇವಕರು ದಾವೀದನಿಗೆ, “ಊರಿಯನು ಮನೆಗೆ ಹೋಗಲೇ ಇಲ್ಲ” ಎಂದು ಹೇಳಿದರು.
ಆಗ ದಾವೀದನು, “ನೀನು ದೀರ್ಘ ಪ್ರಯಾಣದಿಂದ ಬಂದಿರುವೆ. ನೀನು ಏಕೆ ಮನೆಗೆ ಹೋಗಲಿಲ್ಲ?” ಎಂದು ಊರೀಯನನ್ನು ಕೇಳಿದನು.
11 ಊರೀಯನು ದಾವೀದನಿಗೆ, “ಪವಿತ್ರ ಪೆಟ್ಟಿಗೆಯೂ ಇಸ್ರೇಲಿನ ಮತ್ತು ಯೆಹೂದದ ಸೈನಿಕರೂ ಗುಡಾರಗಳಲ್ಲಿ ನೆಲೆಸಿದ್ದಾರೆ. ನನ್ನ ಒಡೆಯನಾದ ಯೋವಾಬನು ಮತ್ತು ನನ್ನ ರಾಜನ ಸೇವಕರು ಹೊಲದಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಆದ್ದರಿಂದ ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕೂ ಪತ್ನಿಯ ಜೊತೆಯಲ್ಲಿ ಮಲಗುವುದಕ್ಕೂ ನಾನು ಮನೆಗೆ ಹೋಗುವುದು ಸರಿಯಲ್ಲ. ನಿನ್ನಾಣೆ, ನಿನ್ನ ಜೀವದಾಣೆ, ನಾನು ಇಂಥದನ್ನು ಮಾಡುವುದೇ ಇಲ್ಲ.” ಎಂದು ಹೇಳಿದನು.
12 ದಾವೀದನು ಊರೀಯನಿಗೆ, “ಈ ದಿನ ಇಲ್ಲಿಯೇ ಇರು. ನಾಳೆ ನಿನ್ನನ್ನು ಯುದ್ಧಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದನು.
ಊರೀಯನು ಅಂದು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅಂದರೆ ಮಾರನೆಯ ದಿನದ ಬೆಳಗಿನವರೆಗೆ ಅಲ್ಲೇ ಇದ್ದನು. 13 ಆಗ ದಾವೀದನು ತನ್ನನ್ನು ಬಂದು ಕಾಣುವಂತೆ ಊರೀಯನಿಗೆ ಹೇಳಿ ಕಳುಹಿಸಿದನು; ಊರೀಯನು ದಾವೀದನೊಂದಿಗೆ ಕುಡಿದು ಊಟ ಮಾಡಿದನು. ದಾವೀದನು ಊರೀಯನನ್ನು ಮತ್ತನನ್ನಾಗಿ ಮಾಡಿದನು. ಆದರೂ ಊರೀಯನು ಮನೆಗೆ ಹೋಗಲಿಲ್ಲ. ಅಂದು ಸಂಜೆ ರಾಜನ ಮನೆಯ ಹೊರಬಾಗಿಲಿನಲ್ಲಿ ಸೇವಕರೊಂದಿಗೆ ಮಲಗಲು ಹೋದನು.
ಊರೀಯನನ್ನು ಕೊಲ್ಲಲು ದಾವೀದನ ಉಪಾಯ
14 ಮಾರನೆಯ ದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದನು. ದಾವೀದನು ಆ ಪತ್ರವನ್ನು ಊರೀಯನ ಕೈಯಿಂದ ಕಳುಹಿಸಿಕೊಟ್ಟನು. 15 ದಾವೀದನು ಆ ಪತ್ರದಲ್ಲಿ, “ಯುದ್ಧವು ಹೆಚ್ಚು ಭೀಕರವಾಗಿ ನಡೆಯುವ ಕಡೆ ಊರೀಯನನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸು. ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡಿ. ಅವನು ಯುದ್ಧದಲ್ಲಿ ಕೊಲ್ಲಲ್ಪಡಲಿ” ಎಂದು ಬರೆದಿದ್ದನು.
16 ಅಮ್ಮೋನಿಯರಲ್ಲಿ ಅತ್ಯಂತ ಧೈರ್ಯಶಾಲಿಗಳು ಆ ನಗರದಲ್ಲಿ ಎಲ್ಲಿರುವರೆಂಬುದನ್ನು ಯೋವಾಬನು ಗುರುತಿಸಿದನು. ಆ ಸ್ಥಳಕ್ಕೆ ಕಳುಹಿಸಲು ಊರೀಯನನ್ನು ಆರಿಸಿಕೊಂಡನು. 17 ಯೋವಾಬನ ವಿರುದ್ಧ ಹೋರಾಡಲು ಆ ನಗರದ[b] ಜನರು ಹೊರಗೆ ಬಂದು ದಾವೀದನ ಕೆಲವು ಜನರನ್ನು ಕೊಂದರು. ಹಿತ್ತಿಯನಾದ ಊರೀಯನೂ ಅವರಲ್ಲೊಬ್ಬನಾಗಿದ್ದನು.
18 ಅನಂತರ ಯೋವಾಬನು ತನ್ನ ಸಂದೇಶಕರಲ್ಲಿ ಒಬ್ಬನನ್ನು ಕರೆದು, “ಯುದ್ಧದಲ್ಲಿ ಸಂಭವಿಸಿದ ಎಲ್ಲಾ ವಿವರಗಳನ್ನು ದಾವೀದನಿಗೆ ತಿಳಿಸು. 19 ನೀನು ಹೇಳಿ ಮುಗಿಸಿದ ಮೇಲೆ 20 ರಾಜನು ತಳಮಳಗೊಂಡು, ‘ಯೋವಾಬನ ಸೈನ್ಯವು ಯುದ್ಧಮಾಡುವುದಕ್ಕಾಗಿ ನಗರದ ಹತ್ತಿರಕ್ಕೆ ಏಕೆ ಹೋಯಿತು? ನಗರದ ಗೋಡೆಗಳ ಮೇಲಿರುವ ಜನರು, ಕೆಳಗಿರುವ ಜನರ ಮೇಲೆ ಬಾಣಗಳನ್ನು ಪ್ರಯೋಗಿಸಬಲ್ಲರೆಂಬುದು ಅವನಿಗೆ ಖಂಡಿತವಾಗಿಯೂ ತಿಳಿದಿದೆ. 21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಯಾರು ಕೊಂದರೆಂಬುದು ನಿಮಗೆ ಗೊತ್ತಿಲ್ಲವೇ? ಅಬೀಮೆಲೆಕನ ಮೇಲೆ ಬೀಸುವ ಕಲ್ಲನ್ನು ನಗರದ ಗೋಡೆಯ ಮೇಲಿನಿಂದ ಎಸೆದವಳು ತೇಬೇಚಿನ ಒಬ್ಬ ಹೆಂಗಸಲ್ಲವೇ? ನೀವು ಗೋಡೆಯ ಹತ್ತಿರಕ್ಕೆ ಏಕೆ ಹೋದಿರಿ?’ ಎಂದು ಹೇಳಬಹುದು. ಆಗ ನೀನು, ‘ಹಿತ್ತಿಯನಾದ ನಿನ್ನ ಸೇವಕ ಊರೀಯನು ಸಹ ಸತ್ತುಹೋದನು’ ಎಂದು ಉತ್ತರಿಸಬೇಕು” ಎಂದು ಹೇಳಿ ಕಳುಹಿಸಿದನು.
22 ಯೋವಾಬನು ತಿಳಿಸಲು ಹೇಳಿದ್ದನ್ನೆಲ್ಲವನ್ನೂ ಸಂದೇಶಕನು ದಾವೀದನಿಗೆ ತಿಳಿಸಿದನು. 23 ಸಂದೇಶಕನು ದಾವೀದನಿಗೆ, “ಅಮ್ಮೋನಿಯರು ಮೈದಾನದಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಿದರು. ಆದರೆ ನಾವು ಅವರೊಡನೆ ಹೋರಾಡಿ ನಗರದ ಬಾಗಿಲಿನವರೆಗೂ ಅಟ್ಟಿಸಿಕೊಂಡು ಹೋದೆವು. 24 ನಗರದ ಗೋಡೆಯ ಮೇಲಿದ್ದ ಜನರು ನಿಮ್ಮ ಸೈನಿಕರ ಮೇಲೆ ಬಾಣಗಳನ್ನು ಎಸೆದರು. ನಿಮ್ಮ ಸೈನಿಕರಲ್ಲಿ ಕೆಲವರನ್ನು ಕೊಂದರು. ಹಿತ್ತಿಯನಾದ ನಿನ್ನ ಸೈನಿಕ ಊರೀಯನೂ ಸಹ ಸತ್ತುಹೋದನು” ಎಂದು ಹೇಳಿದನು.
25 ದಾವೀದನು ಸಂದೇಶಕನಿಗೆ, “ನೀನು ಹೋಗಿ ಯೋವಾಬನಿಗೆ: ‘ಇದರಿಂದ ನೀನು ತಳಮಳಗೊಳ್ಳಬೇಡ. ಒಂದೇ ಖಡ್ಗವು ಈ ಹೊತ್ತು ಒಬ್ಬನನ್ನು ಕೊಂದರೆ, ಇನ್ನೊಂದು ದಿನ ಇನ್ನೊಬ್ಬನನ್ನು ಕೊಲ್ಲುವುದು. ರಬ್ಬ ನಗರದ ಮೇಲೆ ಧೈರ್ಯವಾಗಿ ಆಕ್ರಮಣಮಾಡು. ಆಗ ನೀನು ನಗರವನ್ನು ಗೆಲ್ಲುವೆ!’ ಈ ಮಾತುಗಳಿಂದ ಯೋವಾಬನನ್ನು ಹುರಿದುಂಬಿಸು” ಎಂಬುದಾಗಿ ಹೇಳಿದನು.
ದಾವೀದನು ಬತ್ಷೆಬೆಳನ್ನು ಮದುವೆಯಾದನು
26 ತನ್ನ ಗಂಡನಾದ ಊರೀಯನು ಸತ್ತನೆಂಬ ಸುದ್ದಿಯು ಬತ್ಷೆಬೆಳಿಗೆ ತಿಳಿಯಿತು. ಆಗ ಅವಳು ತನ್ನ ಗಂಡನಿಗಾಗಿ ಗೋಳಾಡಿದಳು. 27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.
ಮನೆ ಬಿಟ್ಟುಹೋದ ಮಗನು
11 ಬಳಿಕ ಯೇಸು ಹೀಗೆಂದನು: “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. 12 ಕಿರಿಯ ಮಗನು ತಂದೆಗೆ, ‘ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಡು’ ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಆಸ್ತಿಯನ್ನು ಹಂಚಿಕೊಟ್ಟನು.
13 “ಆಗ ಕಿರಿಮಗನು ತನಗೆ ದೊರೆತ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿದನು. ಅಲ್ಲಿ ಅವನು ಪಟಿಂಗನಾಗಿ ಬದುಕಿ ತನ್ನ ಹಣವನ್ನೆಲ್ಲಾ ಹಾಳುಮಾಡಿಕೊಂಡನು. 14 ಸ್ವಲ್ಪಕಾಲದ ನಂತರ, ಆ ದೇಶದಲ್ಲಿ ಕ್ಷಾಮ ಉಂಟಾಯಿತು. ಆ ದೇಶದ ಯಾವ ಭಾಗದಲ್ಲಿಯೂ ಸಾಕಷ್ಟು ಆಹಾರವಿರಲಿಲ್ಲ. ಅವನು ಬಹಳ ಹಸಿವೆಗೊಂಡಿದ್ದನು. ಅವನಿಗೆ ಹಣದ ಅಗತ್ಯತೆಯಿತ್ತು. 15 ಆದ್ದರಿಂದ ಅವನು ಆ ದೇಶದ ನಿವಾಸಿಯೊಬ್ಬನ ಬಳಿ ಕೂಲಿಕೆಲಸಕ್ಕೆ ಸೇರಿಕೊಂಡನು. ಆ ಮನುಷ್ಯನು ಹಂದಿ ಮೇಯಿಸುವುದ್ಕಕಾಗಿ ಅವನನ್ನು ಹೊಲಕ್ಕೆ ಕಳುಹಿಸಿದನು. 16 ಆಗ ಅವನು ಬಹಳ ಹಸಿವೆಗೊಂಡಿದ್ದನು. ಆದ್ದರಿಂದ ಹಂದಿಗಳು ತಿನ್ನುತ್ತಿದ್ದ ಕಾಯಿಗಳನ್ನೇ ತಿನ್ನಲು ಹಂಬಲಿಸಿದನು. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ.
17 “ಆಗ ಅವನಿಗೆ ತಾನು ಮಾಡಿದ ಬುದ್ಧಿಹೀನ ಕಾರ್ಯದ ಅರಿವಾಯಿತು. ಅವನು ತನ್ನೊಳಗೆ, ‘ನನ್ನ ತಂದೆಯ ಬಳಿಯಲ್ಲಿರುವ ಸೇವಕರಿಗೆ ಬೇಕಾದಷ್ಟು ಆಹಾರವಿದೆ. ನಾನಾದರೋ ಇಲ್ಲಿ ಊಟವಿಲ್ಲದೆ ಸಾಯುತ್ತಿದ್ದೇನೆ. 18 ನಾನು ಇಲ್ಲಿಂದ ನನ್ನ ತಂದೆಯ ಬಳಿಗೆ ಹೊರಟುಹೋಗುತ್ತೇನೆ. ನಾನು ನನ್ನ ತಂದೆಗೆ, ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ. 19 ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನೀನು ನನ್ನನ್ನು ನಿನ್ನ ಸೇವಕರಲ್ಲಿ ಒಬ್ಬನನ್ನಾಗಿ ಸೇರಿಸಿಕೊ ಎಂದು ಹೇಳುವೆನು’ ಅಂದುಕೊಂಡನು. 20 ಅಂತೆಯೇ ಅವನು ಹೊರಟು ತನ್ನ ತಂದೆಯ ಬಳಿಗೆ ಹೋದನು.
ಕಿರಿಮಗನು ಹಿಂತಿರುಗಿದನು
“ಮಗನು ಇನ್ನೂ ಬಹುದೂರದಲ್ಲಿ ಬರುತ್ತಿರುವಾಗಲೇ ತಂದೆಯು ಅವನನ್ನು ಗುರುತಿಸಿ ಕನಿಕರದಿಂದ ಅವನ ಬಳಿಗೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. 21 ಮಗನು ತನ್ನ ತಂದೆಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪಮಾಡಿದ್ದೇನೆ. ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
22 “ಆದರೆ ತಂದೆಯು ತನ್ನ ಸೇವಕರಿಗೆ, ‘ತ್ವರೆಮಾಡಿರಿ! ಉತ್ತಮವಾದ ಉಡುಪುಗಳನ್ನು ತಂದು ಇವನಿಗೆ ತೊಡಿಸಿರಿ. ಇವನ ಬೆರಳಿಗೆ ಉಂಗುರವನ್ನು ಹಾಕಿರಿ. ಪಾದಗಳಿಗೆ ಒಳ್ಳೆಯ ಪಾದರಕ್ಷೆಗಳನ್ನು ತೊಡಿಸಿರಿ. 23 ಕೊಬ್ಬಿದ ಕರುವನ್ನು ಕೊಯ್ದು ಉಲ್ಲಾಸಪಡೋಣ. 24 ನನ್ನ ಮಗನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತನಾಗಿ ಬಂದಿದ್ದಾನೆ! ಇವನು ತಪ್ಪಿಹೋಗಿದ್ದನು. ಈಗಲಾದರೋ ಮತ್ತೆ ಸಿಕ್ಕಿದ್ದಾನೆ!’ ಎಂದು ಹೇಳಿದನು. ಆದ್ದರಿಂದ ಅವರು ಉಲ್ಲಾಸಪಡುವುದಕ್ಕೆ ತೊಡಗಿದರು.
ಹಿರಿಮಗನು ಬಂದನು
25 “ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಗೆ ಬರುತ್ತಿದ್ದಾಗ ವಾದ್ಯಗೋಷ್ಠಿಯ ಮತ್ತು ನೃತ್ಯದ ಶಬ್ದವನ್ನು ಕೇಳಿದನು. 26 ಆದ್ದರಿಂದ ಅವನು ತನ್ನ ಸೇವಕರಲ್ಲಿ ಒಬ್ಬನನ್ನು ಕರೆದು, ‘ಇದೇನು?’ ಎಂದು ವಿಚಾರಿಸಿದನು. 27 ಆ ಸೇವಕನು, ‘ನಿನ್ನ ತಮ್ಮ ಮರಳಿ ಬಂದಿದ್ದಾನೆ. ನಿನ್ನ ತಂದೆಯು ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ. ನಿನ್ನ ತಮ್ಮನು ಮನೆಗೆ ಸುರಕ್ಷಿತವಾಗಿ ಬಂದದ್ದಕ್ಕಾಗಿ ನಿನ್ನ ತಂದೆಯು ಸಂತೋಷಗೊಂಡಿದ್ದಾನೆ!’ ಎಂದು ಹೇಳಿದನು.
28 “ಆಗ ಹಿರಿಯ ಮಗನು ಕೋಪಗೊಂಡು ಔತಣಕೂಟಕ್ಕೆ ಹೋಗಲಿಲ್ಲ. ಆಗ ಅವನ ತಂದೆ ಹೊರಗೆ ಬಂದು ಅವನನ್ನು ಒಳಗೆ ಕರೆದನು. 29 ಹಿರಿಮಗನು ತಂದೆಗೆ, ‘ನಾನು ಗುಲಾಮನಂತೆ ನಿನಗೆ ಅನೇಕ ವರ್ಷಗಳವರೆಗೆ ಸೇವೆಮಾಡಿದೆನು! ನಾನು ಯಾವಾಗಲೂ ನಿನ್ನ ಅಪ್ಪಣೆಗಳಿಗೆ ವಿಧೇಯನಾದೆನು. ಆದರೆ ನೀನು ನನಗೋಸ್ಕರ ಎಂದೂ ಒಂದು ಆಡನ್ನಾಗಲಿ ಕೊಯ್ಯಲಿಲ್ಲ. ನನಗಾಗಿ ಮತ್ತು ನನ್ನ ಸ್ನೇಹಿತರಿಗಾಗಿ ನೀನೆಂದೂ ಒಂದು ಔತಣಕೂಟವನ್ನು ಏರ್ಪಡಿಸಲಿಲ್ಲ. 30 ಆದರೆ ನಿನ್ನ ಕಿರಿಯ ಮಗನು ನಿನ್ನ ಎಲ್ಲ ಹಣವನ್ನು ಸೂಳೆಯರಿಗೆ ಖರ್ಚುಮಾಡಿ ಮನೆಗೆ ಹಿಂತಿರುಗಿ ಬಂದಾಗ ನೀನು ಅವನಿಗಾಗಿ ಕೊಬ್ಬಿದ ಕರುವನ್ನು ಕೊಯ್ಸಿದ್ದಿ!’ ಅಂದನು.
31 “ಆದರೆ ತಂದೆಯು ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನೊಂದಿಗೆ ಇರುತ್ತೀ. ನನಗಿರುವುದೆಲ್ಲಾ ನಿನ್ನದೇ. 32 ನಾವು ಸಂತೋಷಪಡಬೇಕು. ಉಲ್ಲಾಸಪಡಬೇಕು, ಏಕೆಂದರೆ ನಿನ್ನ ತಮ್ಮನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತವಾಗಿ ಬಂದಿದ್ದಾನೆ. ಅವನು ಕಳೆದುಹೋಗಿದ್ದನು, ಈಗಲಾದರೋ ಮತ್ತೆ ಸಿಕ್ಕಿದ್ದಾನೆ’ ಅಂದನು.”
Kannada Holy Bible: Easy-to-Read Version. All rights reserved. © 1997 Bible League International