Old/New Testament
ಯೋನಾತಾನನಿಂದ ದಾವೀದನಿಗೆ ಸಹಾಯ
19 ಸೌಲನು ತನ್ನ ಮಗನಾದ ಯೋನಾತಾನನಿಗೂ ತನ್ನ ಅಧಿಕಾರಿಗಳಿಗೂ ದಾವೀದನನ್ನು ಕೊಂದು ಹಾಕಲು ತಿಳಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳ ಇಷ್ಟಪಡುತ್ತಿದ್ದನು. 2 ಯೋನಾತಾನನು ದಾವೀದನಿಗೆ, “ಎಚ್ಚರಿಕೆಯಿಂದಿರು! ಸೌಲನು ನಿನ್ನನ್ನು ಕೊಲ್ಲಲು ಅವಕಾಶವನ್ನು ಕಾಯುತ್ತಿದ್ದಾನೆ. ಬೆಳಿಗ್ಗೆ, ಹೊಲದೊಳಗೆ ಹೋಗಿ ಅಡಗಿಕೊ. 3 ನಾನು ನನ್ನ ತಂದೆಯೊಡನೆ ಹೊಲಕ್ಕೆ ಬರುತ್ತೇನೆ. ನೀನು ಅಡಗಿರುವ ಸ್ಥಳದ ಹತ್ತಿರ ನಾವು ನಿಲ್ಲುತ್ತೇವೆ. ನಾನು ನನ್ನ ತಂದೆಯೊಡನೆ ನಿನ್ನ ಬಗ್ಗೆ ಮಾತನಾಡುತ್ತೇನೆ. ನಂತರ ನಾನು ತಿಳಿದುಕೊಂಡದ್ದನ್ನು ನಿನಗೆ ಹೇಳುತ್ತೇನೆ” ಎಂದನು.
4 ಯೋನಾತಾನನು ತನ್ನ ತಂದೆಯಾದ ಸೌಲನೊಂದಿಗೆ ಮಾತನಾಡಿದನು. ಯೋನಾತಾನನು ದಾವೀದನ ಬಗ್ಗೆ ಒಳ್ಳೆಯ ಸಂಗತಿಗಳನ್ನು ತಿಳಿಸಿದನು. ಯೋನಾತಾನನು, “ನೀನು ರಾಜ. ದಾವೀದನು ನಿನ್ನ ಸೇವಕ. ದಾವೀದನು ನಿನಗೆ ಯಾವ ಕೇಡನ್ನೂ ಮಾಡಿಲ್ಲ. ಆದ್ದರಿಂದ ಅವನಿಗೆ ಯಾವ ಕೇಡನ್ನೂ ಮಾಡಬೇಡ. ದಾವೀದನು ನಿನಗೆ ಯಾವಾಗಲೂ ಒಳ್ಳೆಯವನಾಗಿಯೇ ಇದ್ದಾನೆ. 5 ದಾವೀದನು ಫಿಲಿಷ್ಟಿಯನಾದ ಗೊಲ್ಯಾತನನ್ನು ಕೊಂದಾಗ ತನ್ನ ಜೀವವನ್ನೇ ಪಣವಾಗಿಟ್ಟಿದ್ದನು. ಯೆಹೋವನು ಇಸ್ರೇಲರೆಲ್ಲರಿಗೂ ಬಹು ದೊಡ್ಡ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿದೆ ಮತ್ತು ಸಂತೋಷಗೊಂಡೆ. ದಾವೀದನಿಗೆ ಕೇಡುಮಾಡಲು ನೀನು ಏಕೆ ಬಯಸಿರುವೆ? ಅವನು ನಿರಪರಾಧಿ. ಅವನನ್ನು ಕೊಲ್ಲಲು ಯಾವ ಕಾರಣವೂ ಇಲ್ಲ!” ಎಂದು ಹೇಳಿದನು.
6 ಯೋನಾತಾನನು ಹೇಳಿದ್ದನ್ನೆಲ್ಲ ಸೌಲನು ಕೇಳಿ, “ಯೆಹೋವನಾಣೆ, ದಾವೀದನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣ ಮಾಡಿ ಹೇಳಿದನು.
7 ಆದ್ದರಿಂದ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಎಲ್ಲವನ್ನೂ ತಿಳಿಸಿದನು. ಬಳಿಕ ಯೋನಾತಾನನು ದಾವೀದನನ್ನು ಸೌಲನ ಹತ್ತಿರಕ್ಕೆ ಕರೆದುಕೊಂಡು ಬಂದನು. ದಾವೀದನು ಮೊದಲಿನಂತೆ ಸೌಲನ ಜೊತೆಗಿದ್ದನು.
ದಾವೀದನನ್ನು ಕೊಲ್ಲಲು ಸೌಲನ ಮರುಪ್ರಯತ್ನ
8 ಯುದ್ಧವು ಮತ್ತೆ ಬಂದಿತು. ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಿ ಅವರನ್ನು ಸೋಲಿಸಿ ಓಡಿಸಿಬಿಟ್ಟನು. 9 ಆದರೆ ಯೆಹೋವನಿಂದ ಬಂದ ದುರಾತ್ಮವು ಸೌಲನ ಮೈಮೇಲೆ ಬಂದಿತು. ಸೌಲನು ತನ್ನ ಮನೆಯಲ್ಲಿ ಕುಳಿತಿದ್ದನು. ಸೌಲನ ಈಟಿಯು ಅವನ ಕೈಯಲ್ಲಿಯೇ ಇದ್ದಿತು. 10 ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ಸೌಲನು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಸರಿದುಕೊಂಡಿದ್ದರಿಂದ ಈಟಿಯು ಗೋಡೆಗೆ ನಾಟಿಕೊಂಡಿತು. ದಾವೀದನು ಆ ದಿನ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.
11 ಸೌಲನು ದಾವೀದನ ಮನೆಗೆ ತನ್ನ ಜನರನ್ನು ಕಳುಹಿಸಿದನು. ಅವರು ದಾವೀದನ ಮನೆಯನ್ನು ಕಾಯ್ದರು. ಅವರು ರಾತ್ರಿಯೆಲ್ಲಾ ಅಲ್ಲಿಯೇ ಇದ್ದರು. ಅವರು ದಾವೀದನನ್ನು ಬೆಳಿಗ್ಗೆ ಕೊಲ್ಲಲು ಕಾಯುತ್ತಿದ್ದರು. ಆದರೆ ದಾವೀದನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯೇ ಓಡಿಹೋಗಿ, ನಿನ್ನ ಜೀವವನ್ನು ಕಾಪಾಡಿಕೋ. ಇಲ್ಲವಾದರೆ, ನಿನ್ನನ್ನು ಅವರು ಕೊಂದುಬಿಡುತ್ತಾರೆ” ಎಂದು ಎಚ್ಚರಿಸಿದಳು. 12 ನಂತರ ಮೀಕಲಳು ಕಿಟಿಕಿಯಿಂದ ದಾವೀದನನ್ನು ಹೊರಗೆ ಇಳಿಸಿದಳು. ದಾವೀದನು ತಪ್ಪಿಸಿಕೊಂಡು ಓಡಿಹೋದನು. 13 ಮೀಕಲಳು ಮನೆಯಲ್ಲಿದ್ದ ವಿಗ್ರಹವನ್ನು ಹಾಸಿಗೆಯ ಮೇಲೆ ಇಟ್ಟು ಅದಕ್ಕೆ ಬಟ್ಟೆಗಳನ್ನು ತೊಡಿಸಿ ಅದರ ತಲೆಗೆ ಹೋತದ ಕೂದಲನ್ನೂ ಅಂಟಿಸಿದಳು.
14 ಸೌಲನು ದಾವೀದನನ್ನು ಬಂಧಿಸಿ ಕರೆತರಲು ಸಂದೇಶಕರನ್ನು ಕಳುಹಿಸಿದನು. ಆದರೆ ಮೀಕಲಳು, “ದಾವೀದನಿಗೆ ಹುಷಾರಿಲ್ಲ” ಎಂದು ಹೇಳಿದಳು.
15 ಸಂದೇಶಕರು ಹೋಗಿ ಸೌಲನಿಗೆ ವಿಷಯ ತಿಳಿಸಿದಾಗ ಅವನು ದಾವೀದನನ್ನು ನೋಡಲು ಮತ್ತೆ ಸಂದೇಶಕರನ್ನು ಕಳುಹಿಸಿದನು. ಸೌಲನು ಅವರಿಗೆ, “ದಾವೀದನನ್ನು ನನ್ನ ಬಳಿಗೆ ಕರೆತನ್ನಿ! ಹಾಸಿಗೆಯ ಮೇಲೆ ಮಲಗಿರುವ ಅವನನ್ನು ಹಾಸಿಗೆಯ ಸಮೇತವಾಗಿ ತೆಗೆದುಕೊಂಡು ಬನ್ನಿ! ನಾನು ಅವನನ್ನು ಕೊಲ್ಲುತ್ತೇನೆ” ಎಂದು ಹೇಳಿದನು.
16 ಸಂದೇಶಕರು ದಾವೀದನ ಮನೆಗೆ ಹೋದರು. ಅವರು ದಾವೀದನನ್ನು ಕರೆದೊಯ್ಯಲು ಒಳಗಡೆ ಹೋದಾಗ ಹಾಸಿಗೆಯ ಮೇಲಿರುವುದು ಕೇವಲ ವಿಗ್ರಹವೆಂಬುದೂ ಅದರ ಕೂದಲು ಕೇವಲ ಹೋತದ ಕೂದಲೆಂಬುದೂ ಅವರಿಗೆ ಗೊತ್ತಾಯಿತು.
17 ಸೌಲನು ಮೀಕಲಳಿಗೆ, “ನೀನು ಈ ರೀತಿ ನನಗೆ ಮೋಸ ಮಾಡಿದ್ದೇಕೆ? ನನ್ನ ಶತ್ರುವು ತಪ್ಪಿಸಿಕೊಳ್ಳಲು ನೀನು ಅವಕಾಶ ಮಾಡಿಕೊಟ್ಟೆ! ದಾವೀದನು ಓಡಿಹೋದನಲ್ಲಾ!” ಎಂದು ಹೇಳಿದನು.
ಮೀಕಲಳು ಸೌಲನಿಗೆ, “ತಪ್ಪಿಸಿಕೊಳ್ಳಲು ತನಗೆ ಸಹಾಯ ಮಾಡದಿದ್ದರೆ ನನ್ನನ್ನು ಕೊಲ್ಲುವುದಾಗಿ ದಾವೀದನು ತಿಳಿಸಿದ!” ಎಂದು ಹೇಳಿದಳು.
ರಾಮದ ಪಾಳೆಯದಲ್ಲಿ ದಾವೀದ
18 ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಹತ್ತಿರಕ್ಕೆ ಓಡಿಹೋದನು. ಸೌಲನು ತನಗೆ ಮಾಡಿದ್ದನ್ನೆಲ್ಲ ದಾವೀದನು ಸಮುವೇಲನಿಗೆ ಹೇಳಿದನು. ನಂತರ ದಾವೀದನು ಮತ್ತು ಸಮುವೇಲನು ಪ್ರವಾದಿಗಳಿದ್ದ ಪಾಳೆಯಕ್ಕೆ ಹೋದರು. ದಾವೀದನು ಅಲ್ಲಿ ನೆಲೆಸಿದನು.
19 ದಾವೀದನು ರಾಮದ ಪಾಳೆಯದಲ್ಲಿರುವ ಸಂಗತಿಯು ಸೌಲನಿಗೆ ತಿಳಿದುಬಂದಿತು. 20 ದಾವೀದನನ್ನು ಬಂಧಿಸಿ ತರಲು ಸೌಲನು ಜನರನ್ನು ಕಳುಹಿಸಿದನು. ಆದರೆ ಆ ಜನರು ಪಾಳೆಯಕ್ಕೆ ಬರುವಷ್ಟರಲ್ಲಿ ಪ್ರವಾದಿಗಳು ಅಲ್ಲಿ ಪ್ರವಾದಿಸುತ್ತಿದ್ದರು. ಸಮುವೇಲನು ಅವರ ನಾಯಕನಾಗಿ ನಿಂತಿದ್ದನು. ದೇವರಾತ್ಮವು ಸಂದೇಶಕರ ಮೇಲೆ ಬಂದದ್ದರಿಂದ ಅವರೂ ಪ್ರವಾದಿಸಲಾರಂಭಿಸಿದರು.
21 ಸೌಲನು ಈ ಸುದ್ದಿಯನ್ನು ಕೇಳಿ ಇತರ ಸಂದೇಶಕರನ್ನು ಕಳುಹಿಸಿದನು. ಆದರೆ ಅವರೂ ಪ್ರವಾದಿಸಲಾರಂಭಿಸಿದರು. ಆದ್ದರಿಂದ ಸೌಲನು ಮೂರನೆಯ ಬಾರಿ ಸಂದೇಶಕರನ್ನು ಕಳುಹಿಸಿದನು, ಅವರೂ ಪ್ರವಾದಿಸಲಾರಂಭಿಸಿದರು. 22 ಕಡೆಯದಾಗಿ ಸೌಲನೇ ರಾಮಕ್ಕೆ ಹೋದನು. ಸೇಕೂವಿನಲ್ಲಿ ಕಣದ ಬಳಿ ಇರುವ ದೊಡ್ಡ ಬಾವಿಯ ಸಮೀಪಕ್ಕೆ ಅವನು ಬಂದು, “ಸಮುವೇಲ ಮತ್ತು ದಾವೀದ ಎಲ್ಲಿದ್ದಾರೆ?” ಎಂದು ಕೇಳಿದನು.
ಜನರು, “ರಾಮದ ಹತ್ತಿರವಿರುವ ಪಾಳೆಯದಲ್ಲಿದ್ದಾರೆ” ಎಂದು ಉತ್ತರಕೊಟ್ಟರು.
23 ನಂತರ ಸೌಲನು ರಾಮದ ಹತ್ತಿರವಿರುವ ಪಾಳೆಯಕ್ಕೆ ಹೋದನು. ದೇವರಾತ್ಮವು ಸೌಲನ ಮೈಮೇಲೂ ಬಂದಿತು. ಅವನೂ ಪ್ರವಾದಿಸಲಾರಂಭಿಸಿದನು. ಸೌಲನು ರಾಮದ ಪಾಳೆಯದವರೆಗೂ ಪ್ರವಾದಿಸುತ್ತಾ ಹೋದನು. 24 ನಂತರ ಸೌಲನು ತಾನು ಧರಿಸಿದ್ದ ಬಟ್ಟೆಗಳನ್ನು ತೆಗೆದುಹಾಕಿದನು. ಸಮುವೇಲನ ಎದುರಿನಲ್ಲಿ ಸೌಲನೂ ಸಹ ಪ್ರವಾದಿಸುತ್ತಿದ್ದನು. ಅಂದು ಹಗಲು ರಾತ್ರಿಯೆಲ್ಲ ಸೌಲನು ಬೆತ್ತಲೆಯಾಗಿ ಅಲ್ಲಿಯೇ ಮಲಗಿದ್ದನು.
ಆದ್ದರಿಂದಲೇ ಜನರು, “ಸೌಲನೂ ಪ್ರವಾದಿಗಳಲ್ಲಿ ಒಬ್ಬನೇ?” ಎಂದು ಹೇಳುತ್ತಾರೆ.
ದಾವೀದ ಮತ್ತು ಯೋನಾತಾನರ ಒಪ್ಪಂದ
20 ದಾವೀದನು ರಾಮದ ಪಾಳೆಯದಿಂದ ಓಡಿಹೋದನು. ದಾವೀದನು ಯೋನಾತಾನನ ಬಳಿಗೆ ಹೋಗಿ, “ನಾನು ಮಾಡಿರುವ ತಪ್ಪೇನು? ನನ್ನ ಅಪರಾಧವೇನು? ನಿನ್ನ ತಂದೆಯು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದೇಕೆ?” ಎಂದು ಕೇಳಿದನು.
2 ಯೋನಾತಾನನು, “ಎಂದಿಗೂ ಇಲ್ಲ. ನನ್ನ ತಂದೆಯು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ! ನನ್ನ ತಂದೆಯು ನನಗೆ ತಿಳಿಸದೆ ಏನನ್ನೂ ಮಾಡುವುದಿಲ್ಲ. ಅದು ಬಹು ಮುಖ್ಯವಾದದ್ದೇ ಆಗಿರಲಿ ಇಲ್ಲವೆ ಮುಖ್ಯವಾಗಿಲ್ಲದ್ದೇ ಆಗಿರಲಿ, ನನ್ನ ತಂದೆಯು ನನಗೆ ತಿಳಿಸೇ ತಿಳಿಸುತ್ತಾನೆ. ನನ್ನ ತಂದೆಯು ನಿನ್ನನ್ನು ಕೊಲ್ಲಬೇಕೆಂದಿದ್ದರೆ ನಾನು ನಿನಗೆ ತಿಳಿಸುತ್ತಿರಲಿಲ್ಲವೇ?” ಎಂದು ಹೇಳಿದನು.
3 ಆದರೆ ದಾವೀದನು, “ನಾನು ನಿನ್ನ ಗೆಳೆಯನೆಂಬುದು ನಿನ್ನ ತಂದೆಗೆ ಚೆನ್ನಾಗಿ ತಿಳಿದಿದೆ. ನಿನ್ನ ತಂದೆಯು, ‘ಯೋನಾತಾನನಿಗೆ ಇದು ತಿಳಿಯಲೇಬಾರದು. ಅವನಿಗೆ ತಿಳಿದುಬಿಟ್ಟರೆ ಅವನು ತನ್ನ ಹೃದಯದಲ್ಲಿ ದುಃಖಪಟ್ಟು ದಾವೀದನಿಗೆ ಹೇಳಿಬಿಡುತ್ತಾನೆ’ ಎಂದುಕೊಂಡಿದ್ದಾನೆ. ಯೆಹೋವನಾಣೆ, ನಿನ್ನ ಜೀವದಾಣೆ, ನಾನು ಸಾವಿಗೆ ಬಹು ಹತ್ತಿರವಾಗಿದ್ದೇನೆ” ಎಂದು ಹೇಳಿದನು.
4 ಯೋನಾತಾನನು, “ನೀನು ಬಯಸುವ ಏನನ್ನಾದರೂ ಮಾಡಲು ನಾನು ಸಿದ್ಧನಿದ್ದೇನೆ” ಎಂದು ದಾವೀದನಿಗೆ ಹೇಳಿದನು.
5 ಆಗ ದಾವೀದನು, “ನಾಳೆ ಅಮಾವಾಸ್ಯೆ ಹಬ್ಬ, ನಾನು ರಾಜನ ಜೊತೆಯಲ್ಲಿ ಊಟಮಾಡಬೇಕಾಗಿದೆ. ಆದರೆ ನಾನು ಈಗಲೇ ಹೋಗಿ ಸಂಜೆಯವರೆಗೆ ಹೊಲದಲ್ಲಿ ಅಡಗಿಕೊಳ್ಳಲು ಅವಕಾಶ ಮಾಡಿಕೊಡು. 6 ನಾನು ಇಲ್ಲದಿರುವುದನ್ನು ನಿಮ್ಮ ತಂದೆಯು ಗಮನಿಸಿದರೆ ಅವನಿಗೆ, ‘ದಾವೀದನು ಬೆತ್ಲೆಹೇಮಿನ ತನ್ನ ಮನೆಗೆ ಹೋಗಲು ಬಯಸಿದನು. ಅವನ ಕುಟುಂಬದವರು ಅಲ್ಲಿ ವಾರ್ಷಿಕಯಜ್ಞದ ಔತಣವನ್ನು ಏರ್ಪಡಿಸಿದ್ದಾರೆ. ಬೆತ್ಲೆಹೇಮಿಗೆ ಹೋಗಿ ತನ್ನ ಕುಟುಂಬದವರ ಜೊತೆಯಿರಲು ಅವಕಾಶ ಕೊಡಬೇಕೆಂದು ದಾವೀದನು ನನ್ನನ್ನು ಕೇಳಿಕೊಂಡನು’ ಎಂದು ಹೇಳು. 7 ನಿನ್ನ ತಂದೆಯು, ‘ಒಳ್ಳೆಯದಾಯಿತು’ ಎಂದರೆ ನಾನು ಬದುಕಿದೆ. ಆದರೆ ನಿನ್ನ ತಂದೆಯು ಕೋಪಗೊಂಡರೆ ಅವನು ನನಗೆ ಕೇಡುಮಾಡಲು ಬಯಸಿದ್ದಾನೆಂದು ತಿಳಿದುಕೋ. 8 ಯೋನಾತಾನನೇ, ನನ್ನ ಮೇಲೆ ದಯೆಯಿರಲಿ. ನಾನು ನಿನ್ನ ಸೇವಕ. ನೀನು ಯೆಹೋವನ ಮುಂದೆ ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವೆ. ನಾನು ತಪ್ಪಿತಸ್ಥನಾಗಿದ್ದರೆ, ನೀನೇ ನನ್ನನ್ನು ಕೊಂದುಬಿಡು! ಆದರೆ ನಿನ್ನ ತಂದೆಯ ಹತ್ತಿರಕ್ಕೆ ನನ್ನನ್ನು ಕರೆದೊಯ್ಯಬೇಡ” ಎಂದು ಹೇಳಿದನು.
9 ಯೋನಾತಾನನು, “ಇಲ್ಲ, ಎಂದೆಂದಿಗೂ ಇಲ್ಲ! ನನ್ನ ತಂದೆಯು ನಿನಗೆ ಕೇಡು ಮಾಡುವುದಕ್ಕಾಗಿ ಉಪಾಯ ಮಾಡುತ್ತಿರುವುದು ನನಗೆ ತಿಳಿದುಬಂದರೆ ನಾನು ನಿನ್ನನ್ನು ಎಚ್ಚರಿಸುತ್ತೇನೆ” ಎಂದು ಉತ್ತರಿಸಿದನು.
10 ದಾವೀದನು, “ನಿನ್ನ ತಂದೆಯು ನಿನಗೆ ಕೆಟ್ಟ ಸಂಗತಿಗಳನ್ನು ಹೇಳಿದರೆ, ನನ್ನನ್ನು ಎಚ್ಚರಿಸುವವರು ಯಾರು?” ಎಂದು ಕೇಳಿದನು.
11 ಆಗ ಯೋನಾತಾನನು, “ನಾವು ಹೊಲದೊಳಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಯೋನಾತಾನನು ಮತ್ತು ದಾವೀದನು ಒಟ್ಟಾಗಿ ಹೊಲದೊಳಕ್ಕೆ ಹೋದರು.
12 ಯೋನಾತಾನನು ದಾವೀದನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಎದುರಿನಲ್ಲಿ ಈ ಪ್ರಮಾಣವನ್ನು ಮಾಡುತ್ತೇನೆ. ನನ್ನ ತಂದೆಯು ನಿನ್ನ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿರುವನೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳುತ್ತೇನೆ. ನಂತರ ಸಂದೇಶವೊಂದನ್ನು ನಾನು ಮೂರು ದಿನಗಳೊಳಗಾಗಿ ನಿನಗೆ ಕಳುಹಿಸಿಕೊಡುತ್ತೇನೆ. 13 ನನ್ನ ತಂದೆಯು ನಿನಗೆ ಕೇಡುಮಾಡಬೇಕೆಂದಿದ್ದರೆ, ಅದನ್ನು ನಾನು ನಿನಗೆ ತಿಳಿಸಿ, ನೀನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡುತ್ತೇನೆ. ಈ ಕಾರ್ಯವನ್ನು ನಾನು ಮಾಡದೆ ಹೋದರೆ ಯೆಹೋವನು ನನ್ನನ್ನು ದಂಡಿಸಲಿ. ಯೆಹೋವನು ನನ್ನ ತಂದೆಯ ಜೊತೆಯಲ್ಲಿದ್ದಂತೆ ನಿನ್ನ ಜೊತೆಯೂ ಇರಲಿ. 14 ನನ್ನ ಜೀವಮಾನವೆಲ್ಲಾ ನೀನು ನನಗೆ ದಯಾಳುವಾಗಿರು. 15 ನನ್ನ ಕುಟುಂಬದ ಮೇಲೆ ಶಾಶ್ವತವಾಗಿ ನಿನ್ನ ದಯೆಯಿರಲಿ. ಭೂಮಿಯ ಮೇಲಿರುವ ನಿನ್ನ ಶತ್ರುಗಳೆಲ್ಲರನ್ನೂ ಯೆಹೋವನು ನಾಶಪಡಿಸುತ್ತಾನೆ. 16 ಒಂದುವೇಳೆ ಆ ಸಮಯದಲ್ಲಿ ಯೋನಾತಾನನ ಕುಟುಂಬವು ದಾವೀದನಿಂದ ಅಗಲಿ ಹೋಗಬೇಕಿದ್ದರೆ ಅಗಲಿ ಹೋಗಲಿ. ದಾವೀದನ ಶತ್ರುಗಳನ್ನು ಯೆಹೋವನು ದಂಡಿಸಲಿ” ಎಂದು ಹೇಳಿದನು.
17 ಯೋನಾತಾನನು ದಾವೀದನಿಂದ ತನ್ನ ಪ್ರೀತಿಯ ವಾಗ್ದಾನವನ್ನು ಮತ್ತೆ ಹೇಳಿಸಿದನು. ಯೋನಾತಾನನು ತನ್ನನ್ನು ತಾನು ಪ್ರೀತಿಸುತ್ತಿದ್ದಷ್ಟೆ ದಾವೀದನನ್ನೂ ಪ್ರೀತಿಸುತ್ತಿದ್ದುದ್ದೇ ಅದಕ್ಕೆ ಕಾರಣ.
18 ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆಯ ಔತಣ. ನಿನ್ನ ಸ್ಥಳವು ಖಾಲಿಯಾಗಿರುವುದನ್ನು ನನ್ನ ತಂದೆಯು ಕಂಡು, ನೀನು ಹೊರಟುಹೋಗಿರುವೆ ಎಂದು ತಿಳಿದುಕೊಳ್ಳುವನು. 19 ಈ ತೊಂದರೆಯು ಆರಂಭವಾದಾಗ ಎಲ್ಲಿ ಅಡಗಿದ್ದೆಯೋ ಅದೇ ಸ್ಥಳಕ್ಕೆ ಮೂರನೆಯ ದಿನ ಹೋಗು. ಆ ಬೆಟ್ಟದ ಸಮೀಪದಲ್ಲಿ ಕಾಯುತ್ತಿರು. 20 ಮೂರನೆಯ ದಿನ, ನಾನು ಆ ಬೆಟ್ಟಕ್ಕೆ ಹೋಗುತ್ತೇನೆ ಮತ್ತು ಗುರಿಯಿಟ್ಟು ಹೊಡೆಯುವವನಂತೆ ಕೆಲವು ಬಾಣಗಳನ್ನು ಹೊಡೆಯುತ್ತೇನೆ. 21 ನಂತರ ಆ ಬಾಣಗಳನ್ನು ಹುಡುಕಿಕೊಂಡು ಬರಲು ಹುಡುಗನನ್ನು ಕಳುಹಿಸುತ್ತೇನೆ. ಎಲ್ಲವೂ ಒಳಿತಾಗಿದ್ದರೆ ನಾನು ಆ ಹುಡುಗನಿಗೆ, ‘ನೀನು ಬಹು ದೂರ ಹೋಗಿರುವೆ! ಬಾಣಗಳು ನನ್ನ ಹತ್ತಿರದಲ್ಲೇ ಇವೆ. ಹಿಂತಿರುಗಿಬಂದು ಅವುಗಳನ್ನು ತೆಗೆದುಕೋ’ ಎಂದು ಹೇಳುತ್ತೇನೆ. ನಾನು ಆ ರೀತಿ ಹೇಳಿದರೆ, ನೀನು ಅಡಗಿದ್ದ ಸ್ಥಳದಿಂದ ಹೊರಗೆ ಬಾ. ಯೆಹೋವನಾಣೆ, ನೀನು ಸುರಕ್ಷಿತನಾಗಿರುವೆ. ನಿನಗೆ ಯಾವ ಅಪಾಯವೂ ಇಲ್ಲ. 22 ಆದರೆ ಅಲ್ಲಿ ತೊಂದರೆಯಿರುವುದಾದರೆ, ನಾನು ಆ ಹುಡುಗನಿಗೆ, ‘ಬಾಣಗಳು ಬಹಳ ದೂರದಲ್ಲಿವೆ. ಹೋಗಿ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳುವೆ. ನಾನು ಆ ರೀತಿ ಹೇಳಿದರೆ, ನೀನು ಅಲ್ಲಿಂದ ಹೊರಟುಹೋಗು. ಯೆಹೋವನೇ ನಿನ್ನನ್ನು ದೂರ ಕಳುಹಿಸುತ್ತಿದ್ದಾನೆ. 23 ನಿನ್ನ ಮತ್ತು ನನ್ನ ಮಧ್ಯೆ ನಡೆದ ಈ ಒಪ್ಪಂದವನ್ನು ಜ್ಞಾಪಿಸಿಕೊ. ಯೆಹೋವನು ಸದಾಕಾಲ ನಮಗೆ ಸಾಕ್ಷಿಯಾಗಿರುವನು” ಎಂದು ಹೇಳಿದನು.
24 ನಂತರ ದಾವೀದನು ಹೊಲದಲ್ಲಿ ಅಡಗಿಕೊಂಡನು.
ಔತಣದಲ್ಲಿ ಸೌಲನ ವರ್ತನೆ
ಅಮಾವಾಸ್ಯೆಯ ಔತಣದ ಸಮಯವು ಬಂದಿತು. ರಾಜನು ಊಟಕ್ಕೆ ಕುಳಿತನು. 25 ರಾಜನು ತಾನು ಯಾವಾಗಲೂ ಕುಳಿತುಕೊಳ್ಳುವಂತೆ ಗೋಡೆಯ ಸಮೀಪದಲ್ಲಿ ಕುಳಿತುಕೊಂಡನು. ಯೋನಾತಾನನು ಸೌಲನ ಎದುರಾಗಿ ಕುಳಿತುಕೊಂಡನು. ಸೌಲನ ಪಕ್ಕದಲ್ಲಿ ಅಬ್ನೇರನು ಕುಳಿತುಕೊಂಡನು. ಆದರೆ ದಾವೀದನ ಸ್ಥಳವು ಖಾಲಿಯಾಗಿತ್ತು. 26 ಸೌಲನು ಆ ದಿನ ಏನನ್ನೂ ಹೇಳದೆ, “ದಾವೀದನಿಗೆ ಏನೋ ಸಂಭವಿಸಿರಬಹುದು ಆದ್ದರಿಂದ ಅವನು ಇಂದು ಶುದ್ಧನಾಗಿರಲಿಕ್ಕಿಲ್ಲ” ಎಂದು ಯೋಚಿಸಿದನು.
27 ಮಾರನೆಯ ದಿನದಲ್ಲಿ, ಅಂದರೆ ಆ ತಿಂಗಳ ಎರಡನೆಯ ದಿನದಲ್ಲಿ ದಾವೀದನ ಸ್ಥಳವು ಮತ್ತೆ ಖಾಲಿಯಾಗಿತ್ತು. ಆಗ ಸೌಲನು ತನ್ನ ಮಗನಾದ ಯೋನಾತಾನನಿಗೆ, “ನಿನ್ನೆ ಮತ್ತು ಇಂದು ಅಮಾವಾಸ್ಯೆ ಔತಣಕ್ಕೆ ಇಷಯನ ಮಗನಾದ ದಾವೀದನು ಏಕೆ ಬರಲಿಲ್ಲ?” ಎಂದು ಕೇಳಿದನು.
28 ಯೋನಾತಾನನು, “ಬೆತ್ಲೆಹೇಮಿಗೆ ಹೋಗಲು ತನಗೆ ಅವಕಾಶಕೊಡಬೇಕೆಂದು ದಾವೀದನು ನನ್ನನ್ನು ಬಹಳವಾಗಿ ಕೇಳಿಕೊಂಡನು. 29 ‘ನಮ್ಮ ಗೋತ್ರದವರು ಬೆತ್ಲೆಹೇಮಿನಲ್ಲಿ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ನನ್ನ ಸಹೋದರರು ನನಗೂ ಬರಬೇಕೆಂದು ಕೇಳಿಕೊಂಡಿದ್ದಾರೆ. ನೀನು ನನ್ನ ಗೆಳೆಯನಾಗಿರುವುದಾದರೆ ನನ್ನ ಸೋದರರನ್ನು ನೋಡಿಕೊಂಡು ಬರಲು ದಯವಿಟ್ಟು ನನಗೆ ಅವಕಾಶಕೊಡು ಎಂದು ಹೇಳಿದನು.’ ಆದ್ದರಿಂದಲೇ ದಾವೀದನು ರಾಜನ ಊಟದ ಮೇಜಿಗೆ ಬಂದಿಲ್ಲ” ಎಂದು ಉತ್ತರಿಸಿದನು.
30 ಸೌಲನು ಯೋನಾತಾನನ ಮೇಲೆ ಬಹಳ ಕೋಪಗೊಂಡು, “ನೀನು ಅವಿಧೇಯಳಾದ ದಾಸಿಯ ಮಗ. ನೀನೂ ಅವಳಂತೆಯೇ ಅವಿಧೇಯ. ನೀನು ದಾವೀದನ ಪಕ್ಷವಹಿಸಿರುವುದು ನನಗೆ ಗೊತ್ತಿದೆ. ನೀನು ನಿನಗೂ ಮತ್ತು ನಿನ್ನ ತಾಯಿಗೂ ನಾಚಿಕೆಯನ್ನು ತಂದಿರುವೆ. 31 ಇಷಯನ ಮಗ ಬದುಕಿರುವವರೆಗೆ ನೀನು ರಾಜನಾಗುವುದೇ ಇಲ್ಲ; ನಿನಗೆ ರಾಜ್ಯಾಧಿಕಾರವೂ ಸಿಗುವುದಿಲ್ಲ. ಈಗ ದಾವೀದನನ್ನು ಕರೆದುಕೊಂಡು ಬಾ! ಅವನೊಬ್ಬ ಸತ್ತಮನುಷ್ಯ!” ಎಂದು ಹೇಳಿದನು.
32 ಯೋನಾತಾನನು ತನ್ನ ತಂದೆಗೆ, “ದಾವೀದನನ್ನು ಏಕೆ ಕೊಲ್ಲಬೇಕು? ಅವನು ಮಾಡಿದ ತಪ್ಪಾದರೂ ಏನು?” ಎಂದು ಕೇಳಿದನು.
33 ಆದರೆ ಸೌಲನು ಯೋನಾತಾನನನ್ನು ಕೊಲ್ಲುವುದಕ್ಕಾಗಿ ಈಟಿಯನ್ನು ಅವನ ಕಡೆಗೆ ಎಸೆದನು. ದಾವೀದನನ್ನು ಕೊಲ್ಲಲು ತನ್ನ ತಂದೆಯು ದೃಢನಿರ್ಧಾರ ಮಾಡಿದ್ದಾನೆಂದು ಯೋನಾತಾನನು ತಿಳಿದುಕೊಂಡನು. 34 ಯೋನಾತಾನನು ಬಹಳ ಕೋಪಗೊಂಡು ಊಟದ ಮೇಜನ್ನು ಬಿಟ್ಟುಹೋದನು. ಯೋನಾತಾನನು ತನ್ನ ತಂದೆಯ ಮೇಲೆ ಬಹಳವಾಗಿ ಬೇಸರಗೊಂಡಿದ್ದರಿಂದ ಮತ್ತು ಕೋಪವುಳ್ಳವನಾಗಿದ್ದರಿಂದ ಎರಡನೆ ದಿನ ಔತಣದಲ್ಲಿ ಅವನು ಏನನ್ನೂ ತಿನ್ನಲಿಲ್ಲ. ಸೌಲನು ದಾವೀದನಿಗೆ ಅವಮಾನ ಮಾಡಿದ್ದರಿಂದ ಯೋನಾತಾನನು ಕೋಪಗೊಂಡಿದ್ದನು. ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದುದರಿಂದ ಯೋನಾತಾನನು ದುಃಖಿಸಿದನು.
ದಾವೀದ ಮತ್ತು ಯೋನಾತಾನರ ಬೀಳ್ಕೊಡುಗೆ
35 ಮಾರನೆಯ ದಿನ ಬೆಳಿಗ್ಗೆ ಯೋನಾತಾನನು ಹೊಲಕ್ಕೆ ಹೋದನು. ಅವನು ದಾವೀದನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಅವನನ್ನು ನೋಡಲು ಹೋದನು. ಯೋನಾತಾನನು ಒಬ್ಬ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಹೋದನು. 36 ಯೋನಾತಾನನು ಆ ಬಾಲಕನಿಗೆ, “ನಾನು ಪ್ರಯೋಗಿಸುವ ಬಾಣಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಬಾಲಕನು ಓಡಲು ಆರಂಭಿಸಿದನು, ಯೋನಾತಾನನು ಆ ಬಾಲಕನ ಆಚೆಗೆ ಬಾಣಗಳನ್ನು ಪ್ರಯೋಗಿಸಿದನು. 37 ಬಾಣಗಳು ಹೋಗಿ ಬಿದ್ದ ಸ್ಥಳಕ್ಕೆ ಬಾಲಕನು ಹೋದನು. ಆದರೆ ಯೋನಾತಾನನು, “ಬಾಣಗಳು ಬಹಳ ದೂರದಲ್ಲಿವೆ!” ಎಂದು ಹೇಳಿದನು. 38 ನಂತರ ಯೋನಾತಾನನು, “ಬೇಗ ಹೋಗು! ಅವುಗಳನ್ನು ತೆಗೆದುಕೊಂಡು ಬಾ! ಅಲ್ಲಿಯೇ ನಿಲ್ಲಬೇಡ!” ಎಂದು ಕೂಗಿಹೇಳಿದನು. ಆ ಬಾಲಕನು ಬಾಣಗಳನ್ನೆಲ್ಲ ಆರಿಸಿಕೊಂಡು ತನ್ನ ಒಡೆಯನ ಬಳಿಗೆ ತಂದನು. 39 ಅಲ್ಲಿ ಏನು ನಡೆಯಿತು ಎಂಬುದು ಬಾಲಕನಿಗೇನೂ ತಿಳಿಯಲಿಲ್ಲ. ಯೋನಾತಾನ ಮತ್ತು ದಾವೀದರಿಗೆ ಮಾತ್ರ ತಿಳಿದಿತ್ತು. 40 ಯೋನಾತಾನನು ತನ್ನ ಬಿಲ್ಲು ಮತ್ತು ಬಾಣಗಳನ್ನು ಬಾಲಕನಿಗೆ ಕೊಟ್ಟನು. ನಂತರ ಯೋನಾತಾನನು ಆ ಬಾಲಕನಿಗೆ, “ಪಟ್ಟಣಕ್ಕೆ ಹಿಂದಿರುಗಿ ಹೋಗು” ಎಂದು ಹೇಳಿದನು.
41 ಬಾಲಕನು ಹೊರಟುಹೋದನು. ದಾವೀದನು ತಾನು ಅಡಗಿದ್ದ ಬೆಟ್ಟದ ಮತ್ತೊಂದು ಕಡೆಯ ಸ್ಥಳದಿಂದ ಹೊರಬಂದನು. ದಾವೀದನು ಯೋನಾತಾನನ ಮುಂದೆ ಬಂದು ಮೂರು ಸಲ ತನ್ನ ಮುಖವನ್ನು ನೆಲದವರೆಗೂ ಬಗ್ಗಿಸಿ ನಮಸ್ಕರಿಸಿದನು. ನಂತರ ದಾವೀದ ಮತ್ತು ಯೋನಾತಾನರು ಪರಸ್ಪರ ಮುದ್ದಿಟ್ಟರು, ಅವರಿಬ್ಬರೂ ಒಟ್ಟಾಗಿ ಅತ್ತರು. ದಾವೀದನು ಯೋನಾತಾನನಿಗಿಂತ ಹೆಚ್ಚು ಅತ್ತನು.
42 ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು. ನಾವಿಬ್ಬರೂ ಗೆಳೆಯರಾಗಿರಲು ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದೇವೆ. ನಮ್ಮಿಬ್ಬರಿಗೂ ನಮ್ಮ ಸಂತತಿಯವರಿಗೂ ಇರುವ ಸಂಬಂಧಕ್ಕೆ ಯೆಹೋವನೇ ಸಾಕ್ಷಿ ಎಂದು ಹೇಳಿದ್ದೇವೆ” ಎಂದನು.
ದಾವೀದನು ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು
21 ನಂತರ ದಾವೀದನು ಹೊರಟುಹೋದನು. ಯೋನಾತಾನನು ಪಟ್ಟಣಕ್ಕೆ ಹಿಂದಿರುಗಿದನು. ದಾವೀದನು ನೋಬ್ ಎಂಬ ಪಟ್ಟಣದ ಯಾಜಕನಾದ ಅಹೀಮೆಲೆಕನನ್ನು ನೋಡಲು ಹೋದನು.
ಅಹೀಮೆಲೆಕನು ದಾವೀದನನ್ನು ಸಂಧಿಸಲು ಹೊರಗೆ ಬಂದನು. ಅಹೀಮೆಲೆಕನು ಭಯದಿಂದ ನಡುಗುತ್ತಿದ್ದನು. ಅಹೀಮೆಲೆಕನು ದಾವೀದನಿಗೆ, “ನೀನು ಒಬ್ಬಂಟಿಗನಾಗಿ ಬಂದಿರುವುದೇಕೆ? ಬೇರೆ ಯಾವ ವ್ಯಕ್ತಿಯೂ ನಿನ್ನ ಜೊತೆಯಲ್ಲಿಲ್ಲದಿರುವುದೇಕೆ?” ಎಂದು ಕೇಳಿದನು.
2 ದಾವೀದನು ಅಹೀಮೆಲೆಕನಿಗೆ, “ರಾಜನು ನನಗೆ ಒಂದು ವಿಶೇಷ ಆಜ್ಞೆಯನ್ನು ಕೊಟ್ಟಿರುವನು. ಅವನು ನನಗೆ, ‘ಈ ಕೆಲಸದ ಬಗ್ಗೆ ಬೇರೆ ಯಾರಿಗೂ ತಿಳಿಸಬೇಡ. ನಾನು ನಿನಗೆ ಮಾಡಲು ಹೇಳಿದ ಕೆಲಸವು ಯಾರಿಗೂ ತಿಳಿಯಕೂಡದು’ ಎಂದು ಹೇಳಿದ್ದಾನೆ. ನಾನು ನನ್ನ ಜನರಿಗೆ ನನ್ನನ್ನು ಎಲ್ಲಿ ಭೇಟಿಯಾಗಬೇಕೆಂದು ತಿಳಿಸಿದ್ದೇನೆ. 3 ಈಗ, ನಿನ್ನ ಬಳಿ ತಿನ್ನಲು ಏನಾದರೂ ಆಹಾರವಿದೆಯೋ? ನನಗೆ ಐದು ರೊಟ್ಟಿಗಳನ್ನಾಗಲಿ ಅಥವಾ ಬೇರೆ ಯಾವ ಆಹಾರಪದಾರ್ಥವನ್ನಾಗಲಿ ಕೊಡು” ಎಂದು ಹೇಳಿದನು.
4 ಯಾಜಕನು ದಾವೀದನಿಗೆ, “ನನ್ನ ಬಳಿ ಸಾಧಾರಣವಾದ ರೊಟ್ಟಿಗಳಿಲ್ಲ. ಆದರೆ ಕೆಲವು ಪವಿತ್ರ ರೊಟ್ಟಿಗಳಿವೆ. ನಿನ್ನ ಸೈನಿಕರು ಯಾವ ಹೆಂಗಸಿನೊಡನೆಯೂ ಲೈಂಗಿಕ ಸಂಬಂಧ ಮಾಡಿಲ್ಲದಿದ್ದರೆ ಅವರು ಅವುಗಳನ್ನು ತಿನ್ನಬಹುದು” ಎಂದನು.
5 ದಾವೀದನು ಯಾಜಕನಿಗೆ, “ನಾವು ಯಾವ ಹೆಂಗಸಿನೊಂದಿಗೂ ಲೈಂಗಿಕ ಸಂಬಂಧ ಹೊಂದಿಲ್ಲ. ನನ್ನ ಜನರು ಯುದ್ಧಕ್ಕೆ ಹೋಗುವಾಗಲೂ ಸಾಧಾರಣಕಾರ್ಯಕ್ಕೆ ಹೋಗುವಾಗಲೂ ತಮ್ಮ ದೇಹಗಳನ್ನು ಶುಚಿಯಾಗಿಟ್ಟುಕೊಳ್ಳುತ್ತಾರೆ. ನಮ್ಮ ಇಂದಿನ ಕಾರ್ಯವು ವಿಶೇಷವಾದ್ದರಿಂದ ನಾವು ಖಂಡಿತವಾಗಿ ಪವಿತ್ರರಾಗಿದ್ದೇವೆ” ಎಂದು ಹೇಳಿದನು.
6 ಅಲ್ಲಿ ಪವಿತ್ರ ರೊಟ್ಟಿಯ ಹೊರತು ಬೇರೆ ರೊಟ್ಟಿಯು ಇರಲಿಲ್ಲ. ಆದ್ದರಿಂದ ಯಾಜಕನು ಆ ರೊಟ್ಟಿಯನ್ನು ದಾವೀದನಿಗೆ ಕೊಟ್ಟನು. ಯಾಜಕರು ಯೆಹೋವನ ಸನ್ನಿಧಿಯಲ್ಲಿ ಪವಿತ್ರ ಮೇಜಿನ ಮೇಲಿಟ್ಟಿದ್ದ ರೊಟ್ಟಿಯೇ ಅದಾಗಿತ್ತು. ಈ ರೊಟ್ಟಿಯನ್ನು ಪ್ರತಿದಿನವೂ ಹೊರ ತೆಗೆಯುತ್ತಿದ್ದರು ಮತ್ತು ಹೊಸ ರೊಟ್ಟಿಯನ್ನು ಆ ಸ್ಥಳದಲ್ಲಿ ಇಡುತ್ತಿದ್ದರು.
7 ಸೌಲನ ಅಧಿಕಾರಿಗಳಲ್ಲಿ ಒಬ್ಬನು ಆ ದಿನ ಅಲ್ಲಿದ್ದನು. ಅವನು ದೋಯೇಗನೆಂಬ ಎದೋಮ್ಯನು. ದೋಯೇಗನನ್ನು ಯೆಹೋವನ ಸನ್ನಿಧಿಯಲ್ಲಿ ಇಟ್ಟಿದ್ದರು. ಸೌಲನ ಕುರಿಗಳನ್ನು ಕಾಯುವವರಿಗೆ ದೋಯೇಗನು ನಾಯಕನಾಗಿದ್ದನು.
8 ದಾವೀದನು ಅಹೀಮೆಲೆಕನಿಗೆ, “ನಿನ್ನ ಹತ್ತಿರ ಖಡ್ಗವಾಗಲಿ ಭರ್ಜಿಯಾಗಲಿ ಇದೆಯೇ? ರಾಜನ ಕಾರ್ಯಭಾರವು ಬಹುಮುಖ್ಯವಾದುದು. ನಾನು ಬೇಗ ಹೋಗಬೇಕಾಗಿದೆ. ನಾನು ಕತ್ತಿಯನ್ನಾಗಲೀ ಇತರ ಆಯುಧವನ್ನಾಗಲೀ ತರಲಿಲ್ಲ” ಎಂದು ಕೇಳಿದನು.
9 ಯಾಜಕನು, “ಇಲ್ಲಿರುವುದು ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವೊಂದೇ. ಏಲಾ ಕಣಿವೆಯಲ್ಲಿ ನೀನು ಅವನನ್ನು ಕೊಂದು ಅವನಿಂದ ನೀನು ಕಿತ್ತುಕೊಂಡ ಖಡ್ಗವೇ ಅದು. ಆ ಖಡ್ಗವನ್ನು ಬಟ್ಟೆಯಲ್ಲಿ ಸುತ್ತಿ ಎಫೋದಿನ ಹಿಂಭಾಗದಲ್ಲಿ ಇಟ್ಟಿದೆ. ನಿನಗೆ ಬೇಕಿದ್ದರೆ ಅದನ್ನು ತೆಗೆದುಕೋ” ಎಂದು ಉತ್ತರಿಸಿದನು.
ದಾವೀದನು, “ಅದನ್ನು ನನಗೆ ಕೊಡು. ಗೊಲ್ಯಾತನ ಖಡ್ಗಕ್ಕೆ ಸಮನಾದ ಬೇರೊಂದು ಖಡ್ಗವಿಲ್ಲ!” ಎಂದನು.
ದಾವೀದನು ಗತ್ಗೆ ಹೋದನು
10 ಆ ದಿನ ದಾವೀದನು ಸೌಲನಿಗೆ ಭಯಪಟ್ಟು ಗತ್ಗೆ ರಾಜನಾದ ಆಕೀಷನ ಬಳಿಗೆ ಹೋದನು. 11 ಆಕೀಷನ ಅಧಿಕಾರಿಗಳಿಗೆ ದಾವೀದನ ಆಗಮನ ಇಷ್ಟವಾಗಲಿಲ್ಲ. ಅವರು, “ಇವನು ದಾವೀದನು, ಇಸ್ರೇಲ್ ದೇಶದ ರಾಜನು. ಇವನನ್ನು ಕುರಿತೇ ಇಸ್ರೇಲರು ಹಾಡುತ್ತಾರೆ. ಅವರು ಇವನಿಗಾಗಿ ಹಾಡಿ ಕುಣಿಯುತ್ತಾರೆ.
“ಸೌಲನು ಸಾವಿರಾರು ಶತ್ರುಗಳನ್ನು ಕೊಂದನು.
ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು!
ಎಂಬ ಈ ಹಾಡನ್ನು ಇಸ್ರೇಲರು ಹಾಡುತ್ತಾರೆ” ಎಂದು ಮಾತಾಡಿಕೊಂಡರು.
12 ಈ ಸಂಗತಿಗಳನ್ನು ಕೇಳಿದ ದಾವೀದನು ಗತ್ನ ರಾಜನಾದ ಆಕೀಷನಿಗೆ ಬಹಳವಾಗಿ ಭಯಪಟ್ಟನು. 13 ಆದ್ದರಿಂದ ದಾವೀದನು ಆಕೀಷನ ಮತ್ತು ಅವನ ಅಧಿಕಾರಿಗಳ ಎದುರಿನಲ್ಲಿ ಹುಚ್ಚನಂತೆ ನಟಿಸಿದನು. ದಾವೀದನು ಅವರೊಂದಿಗೆ ಇರುವಾಗಲೆಲ್ಲ ಹುಚ್ಚನಂತೆ ವರ್ತಿಸಿದನು. ಅವನು ದ್ವಾರದ ಬಾಗಿಲುಗಳ ಮೇಲೆ ಉಗುಳಿದನು; ಅವನ ಜೊಲ್ಲು ಗಡ್ಡದವರೆಗೂ ಸುರಿಯುವಂತೆ ಮಾಡಿಕೊಂಡನು.
14 ಆಕೀಷನು ತನ್ನ ಅಧಿಕಾರಿಗಳಿಗೆ, “ಅವನೊಬ್ಬ ಹುಚ್ಚ! ಅವನನ್ನು ನನ್ನ ಬಳಿಗೆ ಏಕೆ ಕರೆತಂದಿರಿ? 15 ನನ್ನ ಹತ್ತಿರ ಬೇಕಾದಷ್ಟು ಹುಚ್ಚರಿದ್ದಾರೆ. ನನ್ನ ಎದುರಿನಲ್ಲಿ ಇವನು ಮಾಡುವ ಹುಚ್ಚಾಟವನ್ನು ನಾನು ನೋಡಲೆಂದು ಕರೆ ತಂದಿರುವಿರೋ? ಇವನು ಮತ್ತೆ ನನ್ನ ಮನೆಯೊಳಕ್ಕೆ ಬರಲು ಅವಕಾಶ ಕೊಡಬೇಡಿ” ಅಂದನು.
ನಮಗೆ ಸಾಕ್ಷಿ ಕೊಡು!
(ಮತ್ತಾಯ 12:38-42; ಮಾರ್ಕ 8:12)
29 ಜನರ ಗುಂಪು ದೊಡ್ಡದಾಗುತ್ತಿರಲು ಯೇಸು ಅವರಿಗೆ, “ಈ ಸಂತತಿಯು ಕೆಟ್ಟ ಸಂತತಿಯೇ ಸರಿ! ಇದು ಸೂಚಕಕಾರ್ಯವನ್ನು ನೋಡಬೇಕೆನ್ನುತ್ತದೆ. ಆದರೆ ಯೋನನ ಜೀವಿತದಲ್ಲಾದ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಇದಕ್ಕೆ ದೊರೆಯುವುದಿಲ್ಲ. 30 ನಿನೆವೆಯಲ್ಲಿ ಜೀವಿಸುತ್ತಿದ್ದ ಜನರಿಗೆ ಯೋನನು ಒಂದು ಸೂಚನೆಯಾಗಿದ್ದನು. ಅದೇ ರೀತಿಯಲ್ಲಿ ಈ ಕಾಲದ ಜನರಿಗೆ ಮನುಷ್ಯಕುಮಾರನು ಸೂಚನೆಯಾಗಿದ್ದಾನೆ.
31 “ನ್ಯಾಯತೀರ್ಪಿನ ದಿನದಲ್ಲಿ ದಕ್ಷಿಣ ದೇಶದ ರಾಣಿಯು ಈ ಪೀಳಿಗೆಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು. ಏಕೆಂದರೆ ಆ ರಾಣಿಯು ಬಹುದೂರದಿಂದ ಸೊಲೊಮೋನನ ಜ್ಞಾನಬೋಧನೆಯನ್ನು ಕೇಳಲು ಬಂದಳು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಾನು ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ!
32 “ನ್ಯಾಯತೀರ್ಪಿನ ದಿನದಲ್ಲಿ ನಿನೆವೆ ಪಟ್ಟಣದವರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆಂದು ತೋರಿಸುವರು. ಏಕೆಂದರೆ ಅವರು ಪ್ರವಾದಿಯಾದ ಯೋನನ ಬೋಧನೆಯನ್ನು ಕೇಳಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ನಾನು ಪ್ರವಾದಿ ಯೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ.
ಲೋಕಕ್ಕೆ ಬೆಳಕಾಗಿರಿ!
(ಮತ್ತಾಯ 5:15; 6:22-23)
33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.
ಯೇಸು ಫರಿಸಾಯರನ್ನು ಖಂಡಿಸಿದನು
(ಮತ್ತಾಯ 23:1-36; ಮಾರ್ಕ 12:38-40; ಲೂಕ 20:45-47)
37 ಯೇಸು ಮಾತಾಡಿ ಮುಗಿಸಿದ ಮೇಲೆ ಫರಿಸಾಯನೊಬ್ಬನು ಯೇಸುವನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕರೆದನು. ಆದ್ದರಿಂದ ಯೇಸು ಅವನ ಮನೆಯೊಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಯೇಸು ತನ್ನ ಕೈಗಳನ್ನು ತೊಳೆದುಕೊಳ್ಳದೆ ಊಟಕ್ಕೆ ಕುಳಿತಿರುವುದನ್ನು ಕಂಡಾಗ ಫರಿಸಾಯನಿಗೆ ಆಶ್ಚರ್ಯವಾಯಿತು. 39 ಪ್ರಭುವು (ಯೇಸು) ಅವನಿಗೆ ಹೇಳಿದ್ದೇನೆಂದರೆ: “ಫರಿಸಾಯರಾದ ನೀವು ಪಾತ್ರೆಯ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ನಿಮ್ಮ ಒಳಭಾಗವು ಮೋಸದಿಂದಲೂ ಕೆಟ್ಟತನದಿಂದಲೂ ತುಂಬಿಹೋಗಿದೆ. 40 ನೀವು ಬುದ್ಧಿಹೀನರು! ಹೊರಭಾಗವನ್ನು ಮಾಡಿದಾತನೇ (ದೇವರು) ಒಳಭಾಗವನ್ನೂ ಮಾಡಿದ್ದಾನೆ. 41 ಆದ್ದರಿಂದ ಪಾತ್ರೆ ಮತ್ತು ಬಟ್ಟಲುಗಳ ಒಳಗಿರುವುದನ್ನು ಬಡವರಿಗೆ ದಾನಮಾಡಿರಿ. ಆಗ ನೀವು ಪೂರ್ಣಶುದ್ಧರಾಗುತ್ತೀರಿ.
42 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.
43 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಉನ್ನತಪೀಠಗಳನ್ನೂ ಮಾರುಕಟ್ಟೆಗಳಲ್ಲಿ ಜನರಿಂದ ಗೌರವವನ್ನೂ ಆಶಿಸುತ್ತೀರಿ. 44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”
ಧರ್ಮೋಪದೇಶಕನಿಗೆ ಯೇಸು ನೀಡಿದ ಉತ್ತರ
45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.
46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ.[a] ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ. 47 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳಿಗೆ ಗೋರಿಗಳನ್ನು[b] ಕಟ್ಟುತ್ತೀರಿ. ಆದರೆ ಆ ಪ್ರವಾದಿಗಳನ್ನು ಕೊಂದವರು ನಿಮ್ಮ ಪಿತೃಗಳೇ! 48 ಇದರಿಂದಾಗಿ, ನಿಮ್ಮ ಪಿತೃಗಳು ಮಾಡಿದ ಕೃತ್ಯಗಳನ್ನು ನೀವು ಒಪ್ಪಿಕೊಂಡಿದ್ದೀರೆಂಬುದನ್ನು ಎಲ್ಲಾ ಜನರಿಗೆ ತೋರಿಸುತ್ತೀರಿ. ಅವರು ಪ್ರವಾದಿಗಳನ್ನು ಕೊಂದರು. ನೀವು ಆ ಪ್ರವಾದಿಗಳಿಗಾಗಿ ಗೋರಿಗಳನ್ನು ಕಟ್ಟುತ್ತೀರಿ! 49 ಆದಕಾರಣ ದೇವರ ಜ್ಞಾನವು ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು. ನನ್ನ ಕೆಲವು ಪ್ರವಾದಿಗಳು ಮತ್ತು ಅಪೊಸ್ತಲರು ಕೆಡುಕರಿಂದ ಹತರಾಗುವರು. ಬೇರೆ ಕೆಲವರು ಸಂಕಟಕ್ಕೆ ಗುರಿಯಾಗುವರು.’
50 “ಆದ್ದರಿಂದ ಲೋಕಾದಿಯಿಂದ ಹತರಾದ ಎಲ್ಲಾ ಪ್ರವಾದಿಗಳ ಸಾವಿಗೆ ಈ ಕಾಲದ ಜನರಾದ ನೀವು ದಂಡನೆ ಹೊಂದುವಿರಿ. 51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.
52 “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.
53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.
Kannada Holy Bible: Easy-to-Read Version. All rights reserved. © 1997 Bible League International