Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 4-6

ದೆಬೋರಾ—ಮಹಿಳಾ ನ್ಯಾಯಾಧೀಶೆ

ಏಹೂದನು ಮರಣಹೊಂದಿದ ಮೇಲೆ ಇಸ್ರೇಲರು ಮತ್ತೆ ಯೆಹೋವನ ವಿರೋಧವಾಗಿ ಪಾಪ ಮಾಡಿದರು. ಆದ್ದರಿಂದ ಕಾನಾನ್ಯರ ಅರಸನಾದ ಯಾಬೀನನು ಇಸ್ರೇಲರನ್ನು ಸೋಲಿಸುವಂತೆ ಯೆಹೋವನು ಅವಕಾಶ ಮಾಡಿದನು. ಯಾಬೀನನು ಹಾಚೋರ್ ಎಂಬ ನಗರದಲ್ಲಿ ಆಳುತ್ತಿದ್ದನು. ಸೀಸೆರ ಎಂಬವನು ಅವನ ಸೇನಾಧಿಪತಿಯಾಗಿದ್ದನು. ಸೀಸೆರನು ಹರೋಷೆತ್ ಹಗ್ಗೋಯಿಮ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದನು. ಸೀಸೆರನ ಹತ್ತಿರ ಒಂಭೈನೂರು ಕಬ್ಬಿಣದ ರಥಗಳಿದ್ದವು. ಅವನು ಇಪ್ಪತ್ತು ವರ್ಷಗಳ ಕಾಲ ಇಸ್ರೇಲರನ್ನು ತುಂಬ ಬಾಧಿಸಿದನು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಟ್ಟರು.

ಆಗ ದೆಬೋರಳೆಂಬ ಒಬ್ಬ ಪ್ರವಾದಿನಿ ಇದ್ದಳು. ಅವಳು ಲಪ್ಪೀದೋತ್ ಎಂಬವನ ಪತ್ನಿಯಾಗಿದ್ದಳು. ಅವಳು ಆಗ ಇಸ್ರೇಲಿನ ನ್ಯಾಯಾಧೀಶೆಯಾಗಿದ್ದಳು. ಒಂದು ದಿನ, ಆಕೆ ದೆಬೋರಳ ಖರ್ಜೂರದ ಮರವೆಂದು ಪ್ರಸಿದ್ಧವಾದ ಮರದ ಕೆಳಗೆ ಕುಳಿತಿದ್ದಳು. ಆಗ ಇಸ್ರೇಲಿನ ಜನರು ಆಕೆಯ ಹತ್ತಿರ ಬಂದು, “ಸೀಸೆರನ ಬಗ್ಗೆ ಏನು ಮಾಡಬೇಕು?” ಎಂದು ಕೇಳಿದರು. ದೆಬೋರಳ ಖರ್ಜೂರಮರವು ಎಫ್ರಾಯೀಮ್ ಬೆಟ್ಟಪ್ರದೇಶದ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಇದೆ. ದೆಬೋರಳು ತನ್ನನ್ನು ಬಂದು ಕಾಣಬೇಕೆಂದು ಬಾರಾಕನೆಂಬ ವ್ಯಕ್ತಿಗೆ ಹೇಳಿ ಕಳುಹಿಸಿದಳು. ಬಾರಾಕನು ಅಬೀನೋವಮನ ಮಗ. ಬಾರಾಕನು ನಫ್ತಾಲಿ ಪ್ರದೇಶದ ಕೆದೆಷ್ ಎಂಬ ಊರಲ್ಲಿ ವಾಸಮಾಡುತ್ತಿದ್ದನು. ದೆಬೋರಳು ಬಾರಾಕನಿಗೆ, “ಇಸ್ರೇಲಿನ ದೇವರಾದ ಯೆಹೋವನು, ‘ನೀನು ಹೋಗಿ ನಫ್ತಾಲಿ ಮತ್ತು ಜೆಬುಲೂನ್ ಕುಲಗಳವರ ಹತ್ತು ಸಾವಿರ ಜನರನ್ನು ಸೇರಿಸಿ ಅವರನ್ನು ತಾಬೋರ್ ಬೆಟ್ಟಕ್ಕೆ ಕರೆದುಕೊಂಡು ಹೋಗು. ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನ್ ನದಿಗೆ ಬರುವಂತೆ ಮಾಡುತ್ತೇನೆ. ಅಲ್ಲಿ ನೀನು ಸೀಸೆರನನ್ನು ಸೋಲಿಸುವಂತೆ ಮಾಡುತ್ತೇನೆ’ ಎಂದು ಹೇಳಿದ್ದಾನೆ” ಎಂದಳು.

ಆಗ ಬಾರಾಕನು ದೆಬೋರಳಿಗೆ, “ನೀನು ನನ್ನೊಂದಿಗೆ ಬಂದರೆ ನಾನು ಹೋಗುವೆನು; ನೀನು ನನ್ನೊಂದಿಗೆ ಬರದಿದ್ದರೆ ನಾನು ಹೋಗುವುದಿಲ್ಲ” ಎಂದನು.

ಅದಕ್ಕೆ ದೆಬೋರಳು, “ನಿಸ್ಸಂದೇಹವಾಗಿ ನಾನು ನಿನ್ನೊಂದಿಗೆ ಬರುತ್ತೇನೆ. ಆದರೆ ನಿನ್ನ ಈ ಮನೋಭಾವದಿಂದಾಗಿ ಸೀಸೆರನನ್ನು ಸೋಲಿಸಿದ ಗೌರವ ನಿನಗೆ ಸಲ್ಲುವುದಿಲ್ಲ. ಒಬ್ಬ ಹೆಂಗಸು ಸೀಸೆರನನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ” ಎಂದು ಉತ್ತರಿಸಿದಳು.

ದೆಬೋರಳು ಬಾರಾಕನ ಸಂಗಡ ಕೆದೆಷ್ ನಗರಕ್ಕೆ ಹೋದಳು. 10 ಕೆದೆಷ್ ನಗರದಲ್ಲಿ ಬಾರಾಕನು ಜೆಬುಲೂನ್ ಮತ್ತು ನಫ್ತಾಲಿ ಕುಲದವರನ್ನು ಒಟ್ಟಿಗೆ ಸೇರಿಸಿ ಆ ಕುಲಗಳಿಂದ ಹತ್ತು ಸಾವಿರ ಜನರನ್ನು ತನ್ನೊಂದಿಗೆ ಬರುವಂತೆ ಮಾಡಿದನು. ದೆಬೋರಳು ಸಹ ಬಾರಾಕನ ಸಂಗಡ ಹೋದಳು.

11 ಹೆಬೆರನೆಂಬ ಒಬ್ಬ ಮನುಷ್ಯನಿದ್ದನು. ಅವನು ಕೇನ್ಯರ ಕುಲದವನಾಗಿದ್ದನು. ಅವನು ಉಳಿದ ಕೇನ್ಯರನ್ನು ಬಿಟ್ಟು ಚಾನನ್ನೀಮ್ ಎಂಬ ಊರಲ್ಲಿ ಓಕ್ ವೃಕ್ಷದ ಬಳಿ ಮನೆ ಮಾಡಿಕೊಂಡಿದ್ದನು. (ಕೇನ್ಯರು ಹೋಬಾಬನ ಸಂತತಿಯವರಾಗಿದ್ದರು. ಹೋಬಾಬನು ಮೋಶೆಯ ಮಾವನಾಗಿದ್ದನು.) ಚಾನನ್ನೀಮ್ ಕೆದೆಷ್ ನಗರದ ಸಮೀಪದಲ್ಲಿತ್ತು.

12 ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟಕ್ಕೆ ಬಂದಿದ್ದಾನೆಂಬ ಸಮಾಚಾರ ಸೀಸೆರನಿಗೆ ತಿಳಿಯಿತು. 13 ಸೀಸೆರನು ತನ್ನ ಒಂಭೈನೂರು ಕಬ್ಬಿಣದ ರಥಗಳನ್ನು ಒಟ್ಟುಗೂಡಿಸಿದನು. ಸೀಸೆರನು ತನ್ನ ಎಲ್ಲಾ ಜನರನ್ನು ತನ್ನ ಜೊತೆ ಸೇರಿಸಿಕೊಂಡನು. ಅವರು ಹರೋಷೆತ್ ಹೆಗ್ಗೋಯಿಮ್‌ನಿಂದ ಕೀಷೋನ್ ನದಿಗೆ ನಡೆದರು.

14 ಆಗ ದೆಬೋರಳು ಬಾರಾಕನಿಗೆ, “ಈ ದಿನ ಯೆಹೋವನು ಸೀಸೆರನನ್ನು ಸೋಲಿಸಲು ನಿನಗೆ ಸಹಾಯ ಮಾಡುತ್ತಾನೆ. ಯೆಹೋವನು ನಿನಗಾಗಿ ದಾರಿಯನ್ನು ಸುಗಮಗೊಳಿಸಿದ್ದಾನೆಂಬುದು ನಿನಗೆ ಖಚಿತವಾಗಿ ಗೊತ್ತಿದೆ” ಎಂದು ಹೇಳಿದಳು. ಆದ್ದರಿಂದ ಬಾರಾಕನು ಹತ್ತು ಸಾವಿರ ಜನರೊಂದಿಗೆ ತಾಬೋರ್ ಬೆಟ್ಟದಿಂದ ಇಳಿದನು. 15 ಬಾರಾಕ ಮತ್ತು ಅವನ ಜನರು ಸೀಸೆರನ ಮೇಲೆ ಧಾಳಿ ಮಾಡಿದರು. ಯೆಹೋವನು ಸೀಸೆರನಲ್ಲಿ ಮತ್ತು ಅವನ ಸೈನ್ಯದಲ್ಲಿ ಮತ್ತು ಅವನ ರಥಗಳಲ್ಲಿ ಗಲಿಬಿಲಿ ಉಂಟುಮಾಡಿದನು. ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ. ಬಾರಾಕ ಮತ್ತು ಅವನ ಸೈನಿಕರು ಸೀಸೆರನ ಸೈನ್ಯವನ್ನು ಸೋಲಿಸಿದರು. ಆದರೆ ಸೀಸೆರನು ತನ್ನ ರಥವನ್ನು ಬಿಟ್ಟು ಓಡಿಹೋದನು. 16 ಬಾರಾಕ ಮತ್ತು ಅವನ ಜನರು ಸೀಸೆರನ ಸೈನ್ಯವನ್ನು ಮತ್ತು ರಥಗಳನ್ನು ಹರೋಷೆತ್ ಹಗ್ಗೋಯಿಮ್‌ನವರೆಗೆ ಬೆನ್ನಟ್ಟಿದರು. ಬಾರಾಕ ಮತ್ತು ಅವನ ಜನರು ಖಡ್ಗದಿಂದ ಸೀಸೆರನ ಜನರನ್ನು ಕೊಂದುಹಾಕಿದರು. ಸೀಸೆರನ ಜನರಲ್ಲಿ ಒಬ್ಬನನ್ನೂ ಜೀವಂತವಾಗಿ ಬಿಡಲಿಲ್ಲ.

17 ಆದರೆ ಸೀಸೆರನು ಓಡಿಹೋದನು. ಅವನು ಯಾಯೇಲ ಎಂಬ ಒಬ್ಬ ಮಹಿಳೆ ವಾಸವಾಗಿದ್ದ ಗುಡಾರಕ್ಕೆ ಬಂದನು. ಯಾಯೇಲಳು ಹೆಬೆರನ ಹೆಂಡತಿ. ಹೆಬೆರನು ಕೇನ್ಯನಾಗಿದ್ದನು. ಹಾಚೋರಿನ ಅರಸನಾದ ಯಾಬೀನ ಮತ್ತು ಕೇನ್ಯನಾದ ಹೆಬೆರನ ಕುಟುಂಬಗಳ ಮಧ್ಯೆ ಒಳ್ಳೆಯ ಸಮಾಧಾನವಿದ್ದಿತು. ಅದಕ್ಕಾಗಿ ಸೀಸೆರನು ಯಾಯೇಲಳ ಗುಡಾರಕ್ಕೆ ಓಡಿಹೋಗಿದ್ದನು. 18 ಸೀಸೆರನು ಬರುವುದನ್ನು ಯಾಯೇಲಳು ಕಂಡಳು. ಆದ್ದರಿಂದ ಅವನನ್ನು ಬರಮಾಡಿಕೊಳ್ಳಲು ಹೊರಗೆ ಬಂದಳು. ಯಾಯೇಲಳು ಸೀಸೆರನಿಗೆ, “ಸ್ವಾಮೀ, ನನ್ನ ಗುಡಾರದೊಳಗೆ ಬನ್ನಿ, ಭಯಪಡಬೇಡಿ” ಎಂದು ಕರೆದಳು. ಆದ್ದರಿಂದ ಸೀಸೆರನು ಗುಡಾರದೊಳಗೆ ಹೋದನು. ಅವಳು ಸೀಸೆರನ ಮೇಲೆ ಕಂಬಳಿಯನ್ನು ಹೊದಿಸಿದಳು.

19 ಸೀಸೆರನು ಯಾಯೇಲಳಿಗೆ, “ನನಗೆ ಬಾಯಾರಿಕೆಯಾಗಿದೆ. ದಯವಿಟ್ಟು ಕುಡಿಯಲು ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು. ಯಾಯೇಲಳ ಬಳಿ ಪ್ರಾಣಿಗಳ ಚರ್ಮದಿಂದ ಮಾಡಿದ ಒಂದು ಚೀಲವಿತ್ತು. ಆಕೆಯು ಅದರಲ್ಲಿ ಹಾಲಿಟ್ಟಿದ್ದಳು. ಯಾಯೇಲಳು ಸೀಸೆರನಿಗೆ ಒಂದು ಗುಟುಕು ಹಾಲನ್ನೇ ಕೊಟ್ಟಳು. ನಂತರ ಅವಳು ಸೀಸೆರನನ್ನು ಮುಚ್ಚಿಬಿಟ್ಟಳು.

20 ಆಗ ಸೀಸೆರನು ಯಾಯೇಲಳಿಗೆ, “ಹೋಗಿ ಗುಡಾರದ ಬಾಗಿಲಿನ ಹತ್ತಿರ ನಿಂತುಕೊಂಡಿರು. ಯಾರಾದರೂ ಬಂದು ‘ಗುಡಾರದಲ್ಲಿ ಯಾರಾದರೂ ಇದ್ದಾರೆಯೇ?’ ಎಂದು ಕೇಳಿದರೆ, ‘ಇಲ್ಲ’ ಎಂದು ಹೇಳು” ಎಂದನು.

21 ಯಾಯೇಲಳು ಗುಡಾರದ ಗೂಟವನ್ನು ಮತ್ತು ಕೊಡತಿಯನ್ನು ತೆಗೆದುಕೊಂಡು ಶಬ್ದಮಾಡದೆ ಸೀಸೆರನ ಹತ್ತಿರ ಹೋದಳು. ಸೀಸೆರನು ಬಹಳ ದಣಿದಿದ್ದ ಕಾರಣ ಗಾಢನಿದ್ರೆ ಮಾಡುತ್ತಿದ್ದನು. ಯಾಯೇಲಳು ಗುಡಾರದ ಗೂಟವನ್ನು ಸೀಸೆರನ ತಲೆಯ ಒಂದು ಪಾರ್ಶ್ವದಲ್ಲಿ ಇಟ್ಟು ಕೊಡತಿಯಿಂದ ಬಲವಾಗಿ ಹೊಡೆದಳು. ಆ ಗುಡಾರದ ಗೂಟವು ಸೀಸೆರನ ತಲೆಯ ಮತ್ತೊಂದು ಪಾರ್ಶ್ವಕ್ಕೆ ತೂರಿಬಂದು ಭೂಮಿಯಲ್ಲಿ ಸೇರಿತು. ಸೀಸೆರನು ಸತ್ತನು.

22 ಅದೇ ಕ್ಷಣದಲ್ಲಿ ಬಾರಾಕನು ಯಾಯೇಲಳ ಗುಡಾರದ ಹತ್ತಿರಕ್ಕೆ ಬಂದನು. ಅವನನ್ನು ಬರಮಾಡಿಕೊಳ್ಳುವುದಕ್ಕಾಗಿ ಯಾಯೇಲಳು ಹೊರಗೆ ಬಂದು, “ಇಲ್ಲಿ ಒಳಗೆ ಬನ್ನಿ. ನೀನು ಹುಡುಕುತ್ತಿರುವ ಮನುಷ್ಯನನ್ನು ತೋರಿಸುತ್ತೇನೆ” ಎಂದಳು. ಬಾರಾಕನು ಯಾಯೇಲಳ ಜೊತೆ ಗುಡಾರವನ್ನು ಪ್ರವೇಶಿಸಿದನು. ಅಲ್ಲಿ ಬಾರಾಕನು ಕಣತಲೆಯಲ್ಲಿ ಗೂಟವನ್ನು ಜಡಿಸಿಕೊಂಡು ನೆಲದ ಮೇಲೆ ಸತ್ತು ಬಿದ್ದಿದ್ದ ಸೀಸೆರನನ್ನು ಕಂಡನು.

23 ಆ ದಿನ ದೇವರು ಇಸ್ರೇಲರಿಗಾಗಿ ಕಾನಾನ್ಯ ರಾಜನಾದ ಯಾಬೀನನನ್ನು ಸೋಲಿಸಿದನು. 24 ಆತನು ಇಸ್ರೇಲರನ್ನು ಬಲಪಡಿಸಿದ್ದರಿಂದ ಅವರು ಕಾನಾನ್ಯ ಅರಸನಾದ ಯಾಬೀನನನ್ನು ಸಂಪೂರ್ಣವಾಗಿ ಸೋಲಿಸಿ ಅವನನ್ನು ನಿರ್ನಾಮ ಮಾಡಿದರು.

ದೆಬೋರಳ ಜಯಗೀತೆ

ಇಸ್ರೇಲರು ಸೀಸೆರನನ್ನು ಸೋಲಿಸಿದ ದಿನ ದೆಬೋರಳು ಮತ್ತು ಅಬೀನೋವಮನ ಮಗನಾದ ಬಾರಾಕನು ಈ ಗೀತೆಯನ್ನು ಹಾಡಿದರು:

“ಇಸ್ರೇಲರು ಯುದ್ಧ ಸನ್ನದ್ಧರಾಗುತ್ತಿದ್ದಾರೆ;
    ಜನರು ಸ್ವಇಚ್ಛೆಯಿಂದ ಯುದ್ಧಕ್ಕೆ ಹೋಗಲು ಒಪ್ಪಿದ್ದಾರೆ;
ಯೆಹೋವನಿಗೆ ಸ್ತೋತ್ರವಾಗಲಿ!

“ಅರಸರೇ ಕೇಳಿರಿ,
    ಆಳುವವರೇ ಗಮನಿಸಿರಿ!
ನಾನು ಹಾಡುವೆನು.
    ನಾನು ಯೆಹೋವನನ್ನು ಕೀರ್ತಿಸುವೆನು.
ಇಸ್ರೇಲಿನ ದೇವರಾದ ಯೆಹೋವನಿಗೆ
    ನಾನು ಗಾನ ಮಾಡುವೆನು.

“ಯೆಹೋವನೇ, ನೀನು ಹಿಂದೆ ಸೆಯೀರಿನ ಪ್ರದೇಶದಿಂದ ಬಂದೆ.
    ನೀನು ಎದೋಮ್ಯರ ಪ್ರದೇಶದಿಂದ ನಡೆದುಕೊಂಡು ಹೋದೆ.
ನೀನು ನಡೆಯುವಾಗ ಭೂಮಿ ನಡುಗಿತು; ಆಕಾಶ ಹನಿಗರೆಯಿತು.
    ಮೇಘಮಂಡಲವು ಮಳೆಗರೆಯಿತು.
ಸೀನಾಯಿ ಬೆಟ್ಟದ ದೇವರಾದ ಯೆಹೋವನ ಎದುರಿಗೆ,
    ಇಸ್ರೇಲರ ದೇವರಾದ ಯೆಹೋವನ ಎದುರಿಗೆ, ಪರ್ವತಗಳು ನಡುಗಿದವು.

“ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ ಯಾಯೇಲಳ ದಿನಗಳಲ್ಲಿಯೂ
    ಮುಖ್ಯಮಾರ್ಗಗಳು ಬರಿದಾಗಿದ್ದವು.
    ವ್ಯಾಪಾರಿಗಳು[a] ಮತ್ತು ಪ್ರಯಾಣಿಕರು ಸೀಳುದಾರಿಯಿಂದ ಹೋಗುತ್ತಿದ್ದರು.

“ದೆಬೋರಳೇ, ನೀನು ಬರುವವರೆಗೆ,
    ನೀನು ಇಸ್ರೇಲರಿಗೆ ತಾಯಿಯಾಗಿ ಬರುವವರೆಗೆ, ಶೂರರೇ ಇರಲಿಲ್ಲ.
    ಇಸ್ರೇಲಿನಲ್ಲಿ ವೀರರೇ ಇರಲಿಲ್ಲ.
ಅವರು ಹೊಸ ದೇವರುಗಳನ್ನು ಆರಿಸಿಕೊಂಡರು;
    ಅದಕ್ಕಾಗಿ ಅವರು ತಮ್ಮ ಪಟ್ಟಣ ದ್ವಾರಗಳಲ್ಲಿ ಯುದ್ಧ ಮಾಡಬೇಕಾಯಿತು.
ಇಸ್ರೇಲರ ನಲವತ್ತು ಸಾವಿರ ಸೈನಿಕರಲ್ಲಿ
    ಒಬ್ಬನಿಗೂ ಗುರಾಣಿ ಬರ್ಜಿಗಳಿರಲಿಲ್ಲ.

“ನನ್ನ ಹೃದಯವು ಇಸ್ರೇಲಿನ ಸೇನಾಧಿಪತಿಗಳ ಸಂಗಡವಿದೆ.
    ಈ ಸೇನಾಧಿಪತಿಗಳು ಇಸ್ರೇಲಿಗಾಗಿ ಯುದ್ಧಮಾಡಲು ಸ್ವಇಚ್ಛೆಯಿಂದ ಬಂದರು.
ಯೆಹೋವನಿಗೆ ಸ್ತೋತ್ರವಾಗಲಿ.

10 “ಬಿಳಿಯ ಕತ್ತೆಗಳ ಮೇಲೆ ಸವಾರಿ ಮಾಡುವವರೇ,
    ರತ್ನಗಂಬಳಿಯ ಮೇಲೆ ಕುಳಿತುಕೊಳ್ಳುವವರೇ,
    ಮಾರ್ಗಗಳ ಮೇಲೆ ಹೋಗುವ ಪ್ರಯಾಣಿಕರೇ, ಗಮನಿಸಿರಿ!
11 ತಾಳ ಝಲ್ಲರಿಗಳ ಧ್ವನಿಯನ್ನು ಕೇಳಿರಿ;
    ಬಾವಿಗಳ ಹತ್ತಿರ ನೆರೆದ ಜನಸಮೂಹದ ಧ್ವನಿಯನ್ನು ಕೇಳಿರಿ;
ಅಲ್ಲಿ ಅವು ಯೆಹೋವನ ವಿಜಯದ ಬಗ್ಗೆ ಹೇಳುತ್ತವೆ.
ಯೆಹೋವನ ಜನರು ಪಟ್ಟಣ ದ್ವಾರದಲ್ಲಿ ಯುದ್ಧಕ್ಕೆ ಹೋದಾಗ
    ಇಸ್ರೇಲಿನಲ್ಲಿ ಅವರ ವಿಜಯದ ಬಗ್ಗೆ ಹೇಳುತ್ತವೆ.

12 “ಏಳು, ಏಳು ದೆಬೋರಳೇ!
    ಏಳು, ಎದ್ದೇಳು, ಒಂದು ಗೀತೆಯನ್ನು ಹಾಡು!
ಬಾರಾಕನೇ, ಏಳು!
    ಅಬೀನೋವಮನ ಮಗನೇ, ಹೋಗು; ನಿನ್ನ ಶತ್ರುಗಳನ್ನು ಸೆರೆ ಹಿಡಿದುಕೊ!

13 “ಆಗ ಬದುಕಿಕೊಂಡಿದ್ದವರು ನಾಯಕರ ಬಳಿಗೆ ಹೋದರು.
    ಯೆಹೋವನ ಜನರೇ, ನನ್ನೊಂದಿಗೂ ಸೈನಿಕರೊಂದಿಗೂ ಬನ್ನಿರಿ.

14 “ಅಮಾಲೇಕ್ ಪರ್ವತ ಪ್ರದೇಶದಲ್ಲಿ ವಾಸಮಾಡುತ್ತಿದ್ದ ಎಫ್ರಾಯೀಮ್ಯರು ಬಂದರು;
    ನಿನ್ನನ್ನೂ ನಿನ್ನ ಜನರನ್ನೂ ಅನುಸರಿಸುತ್ತಿದ್ದ ಬೆನ್ಯಾಮೀನ್ಯರೂ ಬಂದರು;
ಮಾಕೀರನ ಕುಲದಿಂದ ನಾಯಕರು ಬಂದರು;
    ಜೆಬುಲೂನ್ ಕುಲದಿಂದ ನಾಯಕರು ಕಂಚಿನ ದೊಣ್ಣೆಗಳೊಡನೆ ಬಂದರು.
15 ಇಸ್ಸಾಕಾರ್ ಕುಲದ ನಾಯಕರು ದೆಬೋರಳ ಜೊತೆಯಲ್ಲಿದ್ದರು.
    ಇಸ್ಸಾಕಾರ್ ಕುಲದವರು ಬಾರಾಕನಿಗೆ ನಂಬಿಗಸ್ತರಾಗಿದ್ದರು.
    ಅವರು ಕಾಲು ನಡಿಗೆಯಿಂದ ಕಣಿವೆಗೆ ಬಂದರು.

“ರೂಬೇನ್ಯರೇ, ನಿಮ್ಮ ಸೈನ್ಯದಲ್ಲಿ ತುಂಬ ಶೂರರಿದ್ದಾರೆ.
16     ಹೀಗಿರಲು ನೀವು ಕುರಿಯ ಹಟ್ಟಿಗಳ ಗೋಡೆಗೆ ಒರಗಿಕೊಂಡು ಕುಳಿತಿರುವುದೇಕೆ?
ರೂಬೇನ್ಯರ ಶೂರ ಸೈನಿಕರು ಯುದ್ಧದ ಬಗ್ಗೆ ಬಹಳವಾಗಿ ಯೋಚಿಸಿದರು,
    ಆದರೆ ಕುರಿಗಳಿಗಾಗಿ ಬಾರಿಸುವ ಸಂಗೀತವನ್ನು ಕೇಳುತ್ತಾ ಮನೆಯಲ್ಲಿ ಇದ್ದುಬಿಟ್ಟರು.
17 ಗಿಲ್ಯಾದಿನ ಜನರು ಜೋರ್ಡನ್ ನದಿಯ ಆಚೆಯ ದಡದಲ್ಲಿದ್ದ ತಮ್ಮ ಶಿಬಿರಗಳಲ್ಲಿ ಇದ್ದುಬಿಟ್ಟರು.[b]
    ದಾನ್ ಕುಲದವರೇ, ನೀವೇಕೆ ನಿಮ್ಮ ಹಡಗುಗಳಲ್ಲಿಯೇ ಉಳಿದುಬಿಟ್ಟಿರಿ?
ಆಶೇರ್ ಕುಲದವರು ಸಮುದ್ರತೀರದಲ್ಲಿರುವ
    ತಮ್ಮ ಸುರಕ್ಷಿತವಾದ ಬಂದರುಗಳಲ್ಲಿ ಉಳಿದುಕೊಂಡರು.

18 “ಆದರೆ ಜೆಬುಲೂನ್ಯರೂ ನಫ್ತಾಲ್ಯರೂ ಆ ಬೆಟ್ಟಗಳ ಮೇಲೆ
    ತಮ್ಮ ಜೀವವನ್ನೇ ಮುಡಿಪಾಗಿಟ್ಟು ಯುದ್ಧ ಮಾಡಿದರು.
19 ಕಾನಾನ್ಯ ಅರಸರು ಬಂದು ಯುದ್ಧಮಾಡಿದರು;
    ಅವರು ಮೆಗಿದ್ದೋ ಪ್ರವಾಹಗಳ ಬಳಿಯಲ್ಲಿರುವ ತಾನಾಕದಲ್ಲಿ ಹೋರಾಡಿದರು.
    ಆದರೆ ಅವರು ಯಾವ ಸಂಪತ್ತನ್ನು ತೆಗೆದುಕೊಂಡು ಹೋಗಲಿಲ್ಲ!
20 ಪರಲೋಕದಿಂದ ನಕ್ಷತ್ರಗಳು ಯುದ್ಧ ಮಾಡಿದವು.
    ನಕ್ಷತ್ರಗಳು ಆಕಾಶಪಥದಿಂದ ಸೀಸೆರನೊಡನೆ ಯುದ್ಧ ಮಾಡಿದವು.
21 ಪೂರ್ವಕಾಲದಿಂದ ಪ್ರಸಿದ್ಧವಾದ ಕೀಷೋನ್ ನದಿಯು
    ಸೀಸೆರನ ಜನರನ್ನು ಕೊಚ್ಚಿಕೊಂಡು ಹೋಯಿತು.
ನನ್ನ ಆತ್ಮವೇ, ಧೈರ್ಯದಿಂದ ಮುನ್ನುಗ್ಗು!
22 ಸೀಸೆರನ ಬಲಿಷ್ಠವಾದ ಕುದುರೆಗಳು ಭರದಿಂದ ಓಡಿದವು.
    ಆ ಕುದುರೆಗಳ ಕಾಲುಗಳು ನೆಲಕ್ಕೆ ಅಪ್ಪಳಿಸಿದವು.

23 “ಮೇರೋಜ್ ಊರಿಗೆ ಶಾಪಹಾಕಿರಿ;
    ಅಲ್ಲಿಯ ಜನರಿಗೆ ಶಾಪಹಾಕಿರಿ;
ಏಕೆಂದರೆ ಅವರು ಯೆಹೋವನ ಸಹಾಯಕ್ಕೆ ತಮ್ಮ ಸೈನ್ಯದೊಂದಿಗೆ ಬರಲಿಲ್ಲ”
    ಎಂದನು ಯೆಹೋವನ ದೂತನು.
24 ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳಿಗೆ
    ಎಲ್ಲ ಹೆಂಗಸರಿಗಿಂತಲೂ ಹೆಚ್ಚಿಗೆ ದೇವರ ಆಶೀರ್ವಾದವಾಗುವುದು.
25 ಸೀಸೆರನು ನೀರು ಕೇಳಿದನು;
    ಯಾಯೇಲಳು ಅವನಿಗೆ ಹಾಲು ಕೊಟ್ಟಳು.
ಅರಸನಿಗೆ ಯೋಗ್ಯವಾದ ಬಟ್ಟಲಲ್ಲಿ
    ಅವಳು ಅವನಿಗೆ ಕೆನೆಯನ್ನು ತಂದಳು.
26 ನಂತರ ಯಾಯೇಲಳು ಕೈಚಾಚಿ ಗುಡಾರದ ಗೂಟವನ್ನು ತೆಗೆದುಕೊಂಡಳು.
    ಅವಳು ಬಲಗೈಯನ್ನು ಚಾಚಿ ದೊಡ್ಡ ಕೊಡತಿಯನ್ನು ತೆಗೆದುಕೊಂಡಳು,
ಆ ಕೊಡತಿಯಿಂದ ಸೀಸೆರನ ತಲೆಯನ್ನು ಬಿರುಸಾಗಿ ಒಡೆದುಬಿಟ್ಟಳು;
    ಅವನ ಕಣತಲೆಗೆ ತಿವಿದು ಬಡಿದಳು.
27 ಅವನು ಯಾಯೇಲಳ ಪಾದಗಳ ಬಳಿಯಲ್ಲಿ
    ಬಗ್ಗಿಕೊಂಡು ಉರುಳಿಬಿದ್ದನು;
ಅವನು ಅವಳ ಪಾದಗಳ ಬಳಿಯಲ್ಲಿ ಕುಸಿದುಬಿದ್ದನು.
    ಸೀಸೆರನು ಕುಸಿದುಬಿದ್ದಲ್ಲಿಯೇ ಸತ್ತನು.

28 “ಸೀಸೆರನ ತಾಯಿ ಕಿಟಿಕಿಯ ಮೂಲಕ ನೋಡಿದಳು;
    ಆಕೆಯು ತೆರೆಯ ಮೂಲಕ ನೋಡಿ ಕೂಗಿದಳು.
‘ಸೀಸೆರನ ರಥಾಗಮನಕ್ಕೆ ಇಷ್ಟು ತಡವೇಕೆ?
    ಅವನ ರಥದ ಕುದುರೆಗಳ ಧ್ವನಿ ಬರಲು ಇಷ್ಟು ತಡವೇಕೆ?’ ಅಂದಳು.

29 “ಅವಳ ಸೇವಕಿಯರಲ್ಲಿ ಅತಿಬುದ್ಧಿವಂತಳು ಹೀಗೆ ಉತ್ತರಿಸಿದಳು.
    ಹೌದು, ಸೇವಕಿಯು ಉತ್ತರಿಸಿದಳು,
30 ‘ಖಂಡಿತವಾಗಿ ಅವರು ಗೆದ್ದಿದ್ದಾರೆ,
    ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ!
ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ!
    ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು.
ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು.
    ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು;
    ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’

31 “ಯೆಹೋವನೇ, ನಿನ್ನ ವೈರಿಗಳೆಲ್ಲಾ ಹೀಗೇ ಸಾಯಲಿ;
    ಆದರೆ ನಿನ್ನನ್ನು ಪ್ರೀತಿಸುವವರೆಲ್ಲರೂ ಬಲವಾಗಿದ್ದು ಉದಯಿಸುವ ಸೂರ್ಯನಂತೆ ಬೆಳಗಲಿ!”

ನಲವತ್ತು ವರ್ಷಗಳವರೆಗೆ ದೇಶದಲ್ಲಿ ಶಾಂತಿ ನೆಲೆಸಿತ್ತು.

ಇಸ್ರೇಲರ ಜೊತೆ ಮಿದ್ಯಾನ್ಯರ ಯುದ್ಧ

ಇಸ್ರೇಲರು ಯೆಹೋವನಿಗೆ ವಿರೋಧವಾಗಿ ಮತ್ತೆ ದುಷ್ಕೃತ್ಯಗಳನ್ನೇ ಮಾಡಿದರು. ಆದ್ದರಿಂದ ಮಿದ್ಯಾನ್ಯರು ಇಸ್ರೇಲರ ಮೇಲೆ ಏಳುವರ್ಷ ಪ್ರಭುತ್ವ ನಡೆಸುವಂತೆ ಯೆಹೋವನು ಆಸ್ಪದ ಮಾಡಿದನು.

ಮಿದ್ಯಾನ್ಯರು ಬಹಳ ಬಲಶಾಲಿಗಳಾಗಿದ್ದು ಇಸ್ರೇಲರಿಗೆ ಕ್ರೂರಿಗಳಾಗಿದ್ದರು. ಆದ್ದರಿಂದ ಇಸ್ರೇಲರು ಅಡಗಿಕೊಳ್ಳುವುದಕ್ಕಾಗಿ ಬೆಟ್ಟಗಳಲ್ಲಿ ಸ್ಥಳಗಳನ್ನು ಮಾಡಿಕೊಂಡರು. ಕಂಡುಹಿಡಿಯಲಾಗದ ಸ್ಥಳಗಳಲ್ಲಿ ಅವರು ತಮ್ಮ ಆಹಾರವನ್ನು ಬಚ್ಚಿಡುತ್ತಿದ್ದರು. ಪೂರ್ವದಿಂದ ಮಿದ್ಯಾನ್ಯರೂ ಅಮಾಲೇಕ್ಯರೂ ಯಾವಾಗಲೂ ಬಂದು ಇವರ ಬೆಳೆಗಳನ್ನು ನಾಶಪಡಿಸುತ್ತಿದ್ದರು. ಅವರು ಈ ಪ್ರದೇಶದಲ್ಲಿ ಪಾಳೆಯಮಾಡಿಕೊಂಡು ಇಸ್ರೇಲರ ಬೆಳೆಗಳನ್ನು ನಾಶಪಡಿಸುತ್ತಿದ್ದರು. ಅವರು ಗಾಜಾ ನಗರದವರೆಗಿರುವ ಪ್ರದೇಶದಲ್ಲಿನ ಬೆಳೆಗಳನ್ನು ಹಾಳುಮಾಡಿದರು. ಅವರು ಇಸ್ರೇಲರ ಆಹಾರಕ್ಕಾಗಿ ಏನೂ ಉಳಿಸಲಿಲ್ಲ. ಅವರು ಕುರಿ, ದನ, ಕತ್ತೆಗಳನ್ನು ಸಹ ಉಳಿಸಲಿಲ್ಲ. ಮಿದ್ಯಾನ್ಯರು ಬಂದು ಈ ಪ್ರದೇಶದಲ್ಲಿ ಪಾಳೆಯ ಮಾಡಿಕೊಂಡರು. ಅವರು ತಮ್ಮ ಸಂಗಡ ತಮ್ಮ ಕುಟುಂಬದವರನ್ನೂ ಪಶುಗಳನ್ನೂ ತಂದರು. ಅವರು ಮಿಡತೆಗಳ ಗುಂಪಿನಂತೆ ಅಸಂಖ್ಯರಾಗಿದ್ದರು. ಅವರು ಮತ್ತು ಅವರ ಒಂಟೆಗಳು ಅತಿದೊಡ್ಡ ಪ್ರಮಾಣದಲ್ಲಿದ್ದು ಎಣಿಸಲು ಸಾಧ್ಯವಿರಲಿಲ್ಲ. ಇವರೆಲ್ಲರೂ ಇಸ್ರೇಲರ ಪ್ರದೇಶಕ್ಕೆ ನುಗ್ಗಿ ಹಾಳುಮಾಡಿದರು. ಇಸ್ರೇಲರು ಮಿದ್ಯಾನ್ಯರಿಂದಾಗಿ ತುಂಬ ಬಡವರಾಗಿ ಬಿಟ್ಟರು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು.

[c] ಮಿದ್ಯಾನ್ಯರು ಕೆಟ್ಟದ್ದನ್ನೆಲ್ಲಾ ಮಾಡಿದರು. ಅದಕ್ಕಾಗಿ ಇಸ್ರೇಲರು ಸಹಾಯಕೋರಿ ಯೆಹೋವನಲ್ಲಿ ಮೊರೆಯಿಟ್ಟರು. ಆದ್ದರಿಂದ ಯೆಹೋವನು ಅವರ ಹತ್ತಿರಕ್ಕೆ ಒಬ್ಬ ಪ್ರವಾದಿಯನ್ನು ಕಳುಹಿಸಿದನು. ಆ ಪ್ರವಾದಿಯು ಇಸ್ರೇಲರಿಗೆ ಹೀಗೆ ಹೇಳಿದನು: “ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ. ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿ ಅಲ್ಲಿಂದ ಹೊರಗೆ ತಂದೆನು. ನಾನು ನಿಮ್ಮನ್ನು ಬಲಶಾಲಿಗಳಾದ ಈಜಿಪ್ಟಿನ ಜನರಿಂದ ರಕ್ಷಿಸಿದೆ. ತರುವಾಯ ಕಾನಾನ್ಯರು ನಿಮ್ಮನ್ನು ಪೀಡಿಸಿದರು. ಆಗ ಮತ್ತೊಮ್ಮೆ ನಾನು ನಿಮ್ಮನ್ನು ರಕ್ಷಿಸಿದೆ. ನಾನು ಅವರನ್ನು ಅವರ ಪ್ರದೇಶದಿಂದ ಓಡಿಸಿ ಅದನ್ನು ನಿಮಗೆ ಕೊಟ್ಟೆ’ 10 ಆಗ ನಾನು ನಿಮಗೆ, ‘ಯೆಹೋವನಾದ ನಾನೇ ನಿಮ್ಮ ದೇವರು! ಅಮೋರಿಯರ ಪ್ರದೇಶದಲ್ಲಿದ್ದರೂ ಅವರ ಸುಳ್ಳುದೇವರುಗಳನ್ನು ನೀವು ಪೂಜಿಸಕೂಡದು ಎಂದು ಹೇಳಿದ್ದೆ.’ ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ.”

ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾದನು

11 ಆ ಸಮಯದಲ್ಲಿ ಯೆಹೋವನ ದೂತನು ಗಿದ್ಯೋನ ಎಂಬ ವ್ಯಕ್ತಿಯ ಬಳಿಗೆ ಬಂದನು. ಯೆಹೋವನ ದೂತನು ಒಫ್ರ ಎಂಬ ಊರಲ್ಲಿ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಆ ಗಿಡವು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಯೋವಾಷನು ಗಿದ್ಯೋನನ ತಂದೆ. ಗಿದ್ಯೋನನು ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು. ಯೆಹೋವನ ದೂತನು ಗಿದ್ಯೋನನ ಹತ್ತಿರ ಕುಳಿತುಕೊಂಡನು. ಮಿದ್ಯಾನ್ಯರಿಗೆ ಗೋಧಿ ಕಾಣಬಾರದೆಂದು ಗಿದ್ಯೋನನು ಮರೆಯಾಗಿದ್ದನು. 12 ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದನು.

13 ಆಗ ಗಿದ್ಯೋನನು, “ಸ್ವಾಮೀ, ಯೆಹೋವನು ನಮ್ಮ ಸಂಗಡವಿದ್ದರೆ ನಮಗೆ ಇಷ್ಟೊಂದು ಕಷ್ಟಗಳೇಕೆ ಬರುತ್ತವೆ? ನಮ್ಮ ಪೂರ್ವಿಕರಿಗಾಗಿ ಆತನು ಬಹಳಷ್ಟು ಅದ್ಭುತಕಾರ್ಯಗಳನ್ನು ಮಾಡಿದ್ದನೆಂದು ನಾವು ಕೇಳಿದ್ದೇವೆ. ಆತನು ಅವರನ್ನು ಈಜಿಪ್ಟಿನಿಂದ ಹೊರಗೆ ಕರೆತಂದನೆಂದು ನಮ್ಮ ಪೂರ್ವಿಕರು ನಮಗೆ ಹೇಳಿದರು. ಆದರೆ ಈಗ ಯೆಹೋವನು ನಮ್ಮನ್ನು ಕೈಬಿಟ್ಟಿದ್ದಾನೆ; ಮಿದ್ಯಾನ್ಯರು ನಮ್ಮನ್ನು ಸೋಲಿಸುವಂತೆ ಮಾಡಿದ್ದಾನೆ” ಎಂದು ಹೇಳಿದನು.

14 ಯೆಹೋವನು ಗಿದ್ಯೋನನ ಕಡೆಗೆ ತಿರುಗಿ, “ನಿನ್ನ ಬಲವನ್ನು ಉಪಯೋಗಿಸು. ಹೋಗು, ಮಿದ್ಯಾನ್ಯರಿಂದ ಇಸ್ರೇಲರನ್ನು ರಕ್ಷಿಸು. ನಾನು ಅವರನ್ನು ರಕ್ಷಿಸುವುದಕ್ಕಾಗಿ ನಿನ್ನನ್ನು ಕಳುಹಿಸುತ್ತಿದ್ದೇನೆ” ಅಂದನು.

15 ಅದಕ್ಕೆ ಗಿದ್ಯೋನನು, “ಸ್ವಾಮೀ, ಮನಸ್ಸೆ ಕುಲದಲ್ಲಿ ನನ್ನ ಕುಟುಂಬವು ಕೇವಲ ಅಲ್ಪವಾದದ್ದು. ನನ್ನ ಕುಟುಂಬದಲ್ಲಿ ನಾನು ಎಲ್ಲರಿಗಿಂತ ಚಿಕ್ಕವನು. ನಾನು ಇಸ್ರೇಲರನ್ನು ರಕ್ಷಿಸಲು ಹೇಗೆ ಸಾಧ್ಯ?” ಎಂದು ಕೇಳಿದನು.

16 ಯೆಹೋವನು ಗಿದ್ಯೋನನಿಗೆ, “ನಾನು ನಿನ್ನ ಸಂಗಡವಿದ್ದೇನೆ! ಆದ್ದರಿಂದ ನೀನು ಮಿದ್ಯಾನ್ಯರನ್ನು ಸೋಲಿಸುವೆ. ಕೇವಲ ಒಬ್ಬನೊಂದಿಗೆ ಯುದ್ಧ ಮಾಡುತ್ತಿರುವಿಯೋ ಎಂಬಂತೆ ನಿನಗೆ ಅನಿಸುತ್ತದೆ” ಎಂದು ಹೇಳಿದನು.

17 ಆಗ ಗಿದ್ಯೋನನು ಯೆಹೋವನಿಗೆ, “ನೀನು ನನಗೆ ಕೃಪೆ ತೋರಿದರೆ, ನೀನು ನಿಜವಾಗಿಯೂ ಯೆಹೋವನು ಎಂಬುದಕ್ಕೆ ನನಗೆ ಒಂದು ಗುರುತನ್ನು ಕೊಡು. 18 ದಯವಿಟ್ಟು ಇಲ್ಲಿಯೇ ಇರು. ನಾನು ಬರುವವರೆಗೆ ಎಲ್ಲಿಗೂ ಹೋಗಬೇಡ. ನಾನು ನಿನಗೆ ಕಾಣಿಕೆಯನ್ನು ತಂದು ಅರ್ಪಿಸುವುದಕ್ಕೆ ಅವಕಾಶಕೊಡು” ಎಂದು ಪ್ರಾರ್ಥಿಸಿದನು.

ಅದಕ್ಕೆ, ಆತನು, “ನೀನು ಬರುವವರೆಗೂ ನಾನು ಇರುತ್ತೇನೆ” ಎಂದು ಹೇಳಿದನು.

19 ಗಿದ್ಯೋನನು ಒಳಗೆ ಹೋಗಿ ಒಂದು ಆಡಿನ ಮರಿಯನ್ನು ಬೇಯಿಸಿದನು. ಅವನು ಸುಮಾರು ಇಪ್ಪತ್ತು ಸೇರಿನಷ್ಟು ಹಿಟ್ಟನ್ನು ತೆಗೆದುಕೊಂಡು ಹುಳಿಯಿಲ್ಲದ ರೊಟ್ಟಿಯನ್ನು ಮಾಡಿದನು. ತರುವಾಯ ಗಿದ್ಯೋನನು ಆ ಮಾಂಸವನ್ನು ಒಂದು ಬುಟ್ಟಿಯಲ್ಲಿಟ್ಟನು, ಮಾಂಸ ಬೇಯಿಸಿದ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿದನು. ಗಿದ್ಯೋನನು ಆ ಮಾಂಸವನ್ನೂ ಮಾಂಸ ಬೇಯಿಸಿದ ನೀರನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತೆಗೆದುಕೊಂಡು ಬಂದನು. ಗಿದ್ಯೋನನು ಏಲಾ ಮರದ ಕೆಳಗೆ ಯೆಹೋವನಿಗೆ ಆಹಾರವನ್ನು ಕೊಟ್ಟನು.

20 ದೇವದೂತನು ಗಿದ್ಯೋನನಿಗೆ, “ಆ ಮಾಂಸವನ್ನೂ ಹುಳಿಯಿಲ್ಲದ ಆ ರೊಟ್ಟಿಯನ್ನೂ ಆ ಕಲ್ಲಿನ ಮೇಲೆ ಇಡು. ಆಮೇಲೆ ಆ ನೀರನ್ನು ಅದರ ಮೇಲೆ ಸುರಿ” ಎಂದನು. ದೇವದೂತನು ಹೇಳಿದಂತೆಯೇ ಗಿದ್ಯೋನನು ಮಾಡಿದನು.

21 ಯೆಹೋವನ ದೂತನ ಕೈಯಲ್ಲಿ ಒಂದು ಕೋಲಿತ್ತು. ಯೆಹೋವನ ದೂತನು ತನ್ನ ಕೋಲಿನ ತುದಿಯಿಂದ ಮಾಂಸವನ್ನು ಮತ್ತು ರೊಟ್ಟಿಯನ್ನು ಮುಟ್ಟಿದನು. ಆಗ ಆ ಕಲ್ಲಿನಿಂದ ಬೆಂಕಿಯ ಜ್ವಾಲೆಯು ಎದ್ದಿತು! ಮಾಂಸ ಮತ್ತು ರೊಟ್ಟಿ ಸಂಪೂರ್ಣವಾಗಿ ಸುಟ್ಟುಹೋದವು! ಆಮೇಲೆ ಯೆಹೋವನ ದೂತನು ಅದೃಶ್ಯನಾದನು.

22 ತಾನು ಈವರೆಗೆ ಮಾತಾಡುತ್ತಿದ್ದದ್ದು ಯೆಹೋವನ ದೂತನೊಡನೆ ಎಂಬುದು ಗಿದ್ಯೋನನಿಗೆ ಆಗ ಅರಿವಾಯಿತು.

ಗಿದ್ಯೋನನು, “ಸರ್ವಶಕ್ತನಾದ ಯೆಹೋವನೇ, ನಿನ್ನ ದೂತನನ್ನು ಮುಖಾಮುಖಿಯಾಗಿ ಕಂಡೆನು” ಎಂದು ಕೂಗಿಕೊಂಡನು.

23 “ಶಾಂತನಾಗು, ಭಯಪಡಬೇಡ, ನೀನು ಸಾಯುವುದಿಲ್ಲ” ಎಂದು ಗಿದ್ಯೋನನಿಗೆ ಯೆಹೋವನು ಹೇಳಿದನು.

24 ಗಿದ್ಯೋನನು ಯೆಹೋವನ್ನು ಆರಾಧಿಸಲು ಆ ಸ್ಥಳದಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಗಿದ್ಯೋನನು ಅದಕ್ಕೆ “ಯೆಹೋವನು ಶಾಂತಿಸ್ವರೂಪನು” ಎಂದು ಹೆಸರಿಟ್ಟನು. ಆ ಯಜ್ಞವೇದಿಕೆಯು ಇಂದಿಗೂ ಅಬೀಯೆಜೆರ್ ಗೋತ್ರದವರು ವಾಸಿಸುವ ಒಫ್ರದಲ್ಲಿದೆ.

ಗಿದ್ಯೋನನು ಬಾಳನ ಯಜ್ಞವೇದಿಕೆಯನ್ನು ಕೆಡವಿದನು

25 ಅದೇ ರಾತ್ರಿ ಯೆಹೋವನು ಗಿದ್ಯೋನನೊಂದಿಗೆ ಮಾತನಾಡಿ, “ನಿನ್ನ ತಂದೆಯ ಹೋರಿಗಳಲ್ಲಿ ಒಂದು ಚಿಕ್ಕ ಹೋರಿಯನ್ನು ಮತ್ತು ಏಳು ವರ್ಷದ ಹೋರಿಯನ್ನು ತೆಗೆದುಕೊಂಡು ಹೋಗಿ ನಿನ್ನ ತಂದೆಯು ಸುಳ್ಳುದೇವರಾದ ಬಾಳನಿಗೆ ಕಟ್ಟಿರುವ ಯಜ್ಞವೇದಿಕೆಯನ್ನು ಕೆಡವಿಬಿಡು; ಅದರ ಬಳಿಯಲ್ಲಿರುವ ಅಶೇರ ಎಂಬ ವಿಗ್ರಹಸ್ತಂಭವನ್ನು ಕಡಿದುಹಾಕು. 26 ಬಳಿಕ ನಿಮ್ಮ ದೇವರಾದ ಯೆಹೋವನಿಗಾಗಿ ಸರಿಯಾದ ಯಜ್ಞವೇದಿಕೆಯನ್ನು ಈ ಗುಡ್ಡದ ಶಿಖರದಲ್ಲಿ ಕಟ್ಟಿಸು. ಆಮೇಲೆ ಆ ಎರಡನೆಯ ಹೋರಿಯನ್ನು ಈ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸು; ಅಶೇರಸ್ತಂಭದ ಕಟ್ಟಿಗೆಯನ್ನು ಈ ಸರ್ವಾಂಗಹೋಮಕ್ಕೆ ಉಪಯೋಗಿಸು” ಎಂದು ಹೇಳಿದನು.

27 ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡು ಹೋಗಿ ಯೆಹೋವನು ಹೇಳಿದಂತೆಯೇ ಮಾಡಿದನು. ಆದರೆ ಅವನು ತನ್ನ ಕುಟುಂಬದವರಿಗೂ ನಗರ ನಿವಾಸಿಗಳಿಗೂ ಹೆದರಿಕೊಂಡಿದ್ದರಿಂದ ಅವನು ಅದನ್ನು ಹಗಲಿನಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು.

28 ನಗರದ ಜನರು ಮರುದಿನ ಬೆಳಿಗ್ಗೆ ಎದ್ದಾಗ ಬಾಳನ ಯಜ್ಞವೇದಿಕೆಯು ಕೆಡವಲ್ಪಟ್ಟಿರುವುದನ್ನೂ ಅಶೇರಸ್ತಂಭವು ಕಡಿದು ಹಾಕಲ್ಪಟ್ಟಿರುವುದನ್ನೂ ನೋಡಿದರು. ಅಶೇರಸ್ತಂಭವು ಬಾಳನ ಯಜ್ಞವೇದಿಕೆಯ ಪಕ್ಕದಲ್ಲಿತ್ತು. ಗಿದ್ಯೋನನು ಕಟ್ಟಿದ್ದ ಯಜ್ಞವೇದಿಕೆಯನ್ನು ಸಹ ಅವರು ನೋಡಿದರು. ಯಜ್ಞವೇದಿಕೆಯ ಮೇಲೆ ಎರಡನೆಯ ಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಿರುವುದನ್ನೂ ಅವರು ನೋಡಿದರು.

29 ನಗರದ ಜನರು ಒಬ್ಬರಿಗೊಬ್ಬರು, “ನಮ್ಮ ಯಜ್ಞವೇದಿಕೆಯನ್ನು ಯಾರು ಕೆಡವಿದರು? ನಮ್ಮ ಅಶೇರಸ್ತಂಭವನ್ನು ಯಾರು ಕಡಿದುಹಾಕಿದರು? ಈ ಹೊಸ ಯಜ್ಞವೇದಿಕೆಯ ಮೇಲೆ ಈ ಹೋರಿಯನ್ನು ಯಾರು ಸರ್ವಾಂಗಹೋಮ ಮಾಡಿದರು?” ಎಂಬ ಹಲವಾರು ಪ್ರಶ್ನೆಗಳನ್ನು ಕೇಳಿ ಇದೆಲ್ಲವನ್ನು ಮಾಡಿದವರು ಯಾರೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.

“ಯೋವಾಷನ ಮಗನಾದ ಗಿದ್ಯೋನನು ಇದನ್ನೆಲ್ಲ ಮಾಡಿದನು” ಎಂದು ಯಾರೋ ಹೇಳಿದರು.

30 ನಗರದ ಜನರು ಯೋವಾಷನಲ್ಲಿಗೆ ಬಂದು ಯೋವಾಷನಿಗೆ, “ನೀನು ನಿನ್ನ ಮಗನನ್ನು ಹೊರಗೆ ಕರೆದುಕೊಂಡು ಬಾ. ಅವನು ಬಾಳನ ಯಜ್ಞವೇದಿಕೆಯನ್ನು ಕೆಡವಿದ್ದಾನೆ. ಆ ಯಜ್ಞವೇದಿಕೆಯ ಪಕ್ಕದಲ್ಲಿದ್ದ ಅಶೇರಸ್ತಂಭವನ್ನು ಕಡಿದುಹಾಕಿದ್ದಾನೆ. ಅವನನ್ನು ನಾವು ಕೊಂದು ಬಿಡುತ್ತೇವೆ” ಅಂದರು.

31 ತನ್ನ ಸುತ್ತಲೂ ನಿಂತಿದ್ದ ಜನರಿಗೆ ಯೋವಾಷನು, “ನೀವು ಬಾಳನ ಪಕ್ಷವನ್ನು ವಹಿಸುವಿರಾ? ನೀವು ಬಾಳನನ್ನು ರಕ್ಷಿಸುವಿರಾ? ಬಾಳನ ಪಕ್ಷದವರನ್ನು ಬೆಳಗಾಗುವುದರೊಳಗೆ ಕೊಂದು ಬಿಡಲಾಗುವುದು. ಬಾಳನು ನಿಜವಾಗಿಯೂ ದೇವರಾಗಿದ್ದರೆ ಅವನ ಯಜ್ಞವೇದಿಕೆಯನ್ನು ಬೀಳಿಸುವಾಗ ಅವನು ತನ್ನ ರಕ್ಷಣೆಯನ್ನು ಏಕೆ ಮಾಡಿಕೊಳ್ಳಲಿಲ್ಲ?” ಅಂದನು. 32 ಯೋವಾಷನು, “ಗಿದ್ಯೋನನು ಬಾಳನ ಯಜ್ಞವೇದಿಕೆಯನ್ನು ಕೆಡವಿದ ಪಕ್ಷದಲ್ಲಿ ಬಾಳನು ಅವನೊಡನೆ ವಾದಿಸಲಿ” ಎಂದು ಹೇಳಿದನು. ಅಂದು ಯೋವಾಷನು ಗಿದ್ಯೋನನಿಗೆ ಯೆರುಬ್ಬಾಳ[d] ಎಂಬ ಹೊಸ ಹೆಸರನ್ನು ಕೊಟ್ಟನು.

ಮಿದ್ಯಾನ್ಯರನ್ನು ಗಿದ್ಯೋನನು ಸೋಲಿಸಿದನು

33 ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಪೂರ್ವ ದೇಶದ ಕೆಲವರು ಇಸ್ರೇಲರ ಮೇಲೆ ಯುದ್ಧಮಾಡಲು ಒಟ್ಟುಗೂಡಿದರು. ಅವರು ಜೋರ್ಡನ್ ನದಿಯನ್ನು ದಾಟಿಹೋಗಿ ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು. 34 ಗಿದ್ಯೋನನ ಮೇಲೆ ಯೆಹೋವನ ಆತ್ಮವು ಬಂದಿತು; ಅವನಿಗೆ ಹೆಚ್ಚಿನ ಶಕ್ತಿಯನ್ನು ಕೊಟ್ಟಿತು. ಅಬೀಯೇಜೆರನ ಗೋತ್ರದವರನ್ನು ತನ್ನನ್ನು ಹಿಂಬಾಲಿಸಲು ಕರೆಯುವುದಕ್ಕಾಗಿ ಗಿದ್ಯೋನನು ತುತ್ತೂರಿಯನ್ನು ಊದಿದನು. 35 ಮನಸ್ಸೆ ಕುಲದ ಜನರೆಲ್ಲರನ್ನು ಕರೆಯುವುದಕ್ಕಾಗಿ ಗಿದ್ಯೋನನು ದೂತರನ್ನು ಕಳುಹಿಸಿದನು. ಆ ದೂತರು ಮನಸ್ಸೆ ಕುಲದ ಜನರಿಗೆ ತಮ್ಮ ಆಯುಧಗಳನ್ನು ತೆಗೆದುಕೊಂಡು ಯುದ್ಧಕ್ಕೆ ಸಿದ್ಧರಾಗಬೇಕೆಂದು ತಿಳಿಸಿದರು. ಗಿದ್ಯೋನನು ಆಶೇರ್, ಜೆಬುಲೂನ್ ಮತ್ತು ನಫ್ತಾಲಿ ಕುಲದವರ ಹತ್ತಿರವೂ ಸಹ ದೂತರನ್ನು ಕಳುಹಿಸಿದನು. ಆ ದೂತರು ಸಹ ಅದೇ ಸಂದೇಶವನ್ನು ತಿಳಿಸಿದರು. ಆದ್ದರಿಂದ ಆ ಕುಲಗಳವರು ಸಹ ಗಿದ್ಯೋನನನ್ನು ಮತ್ತು ಅವನ ಜನರನ್ನು ಸೇರಿಕೊಳ್ಳಲು ಹೋದರು.

36 ಆಗ ಗಿದ್ಯೋನನು ದೇವರಿಗೆ, “ಇಸ್ರೇಲಿನ ಜನರನ್ನು ರಕ್ಷಿಸಲು ನೀನು ನನಗೆ ಸಹಾಯ ಮಾಡುವುದಾಗಿ ಹೇಳಿರುವೆ. ಅದಕ್ಕೆ ಸಾಕ್ಷ್ಯವನ್ನು ಈಗ ಒದಗಿಸು. 37 ನಾನು ಕಣದಲ್ಲಿ ಕುರಿಯ ತುಪ್ಪಟವನ್ನು ಹಾಸುತ್ತೇನೆ. ನೆಲವೆಲ್ಲ ಒಣಗಿದ್ದು ಕೇವಲ ಕುರಿಯ ತುಪ್ಪಟದ ಮೇಲೆ ಇಬ್ಬನಿ ಬಿದ್ದರೆ, ನೀನು ಹೇಳಿದಂತೆಯೇ ಇಸ್ರೇಲನ್ನು ರಕ್ಷಿಸಲು ನನ್ನನ್ನು ಬಳಸುವೆ ಎಂದು ಅರಿತುಕೊಳ್ಳುವೆ” ಅಂದನು.

38 ಹಾಗೆಯೇ ಆಯಿತು. ಗಿದ್ಯೋನನು ಮರುದಿನ ಬೆಳಿಗ್ಗೆ ಬೇಗ ಎದ್ದು ಕುರಿಯ ತುಪ್ಪಟವನ್ನು ಹಿಂಡಿದನು. ಆ ಕುರಿಯ ತುಪ್ಪಟದಿಂದ ಒಂದು ಬಟ್ಟಲು ತುಂಬ ನೀರು ಬಂದಿತು.

39 ಆಗ ಗಿದ್ಯೋನನು ದೇವರಿಗೆ, “ನನ್ನ ಮೇಲೆ ಕೋಪಿಸಿಕೊಳ್ಳಬೇಡ. ನಾನು ಇನ್ನೊಂದು ಸಾಕ್ಷ್ಯವನ್ನು ಕೇಳುತ್ತೇನೆ. ಇನ್ನೊಂದು ಸಲ ಕುರಿಯ ತುಪ್ಪಟದಿಂದ ನಿನ್ನನ್ನು ಪರೀಕ್ಷಿಸುತ್ತೇನೆ. ಈ ಸಲ, ಸುತ್ತಮುತ್ತಲಿನ ಭೂಮಿಯ ಮಂಜಿನಿಂದ ಹಸಿಯಾಗಿ, ಕುರಿಯ ತುಪ್ಪಟ ಮಾತ್ರ ಒಣಗಿರಲಿ” ಎಂದು ಪ್ರಾರ್ಥಿಸಿದನು.

40 ಆ ರಾತ್ರಿ ದೇವರು ಹಾಗೆಯೇ ಮಾಡಿದನು. ಕೇವಲ ಕುರಿಯ ತುಪ್ಪಟ ಮಾತ್ರ ಒಣಗಿದಂತಿದ್ದು ಸುತ್ತಲಿರುವ ನೆಲವೆಲ್ಲಾ ಮಂಜಿನ ನೀರಿನಿಂದ ಹಸಿಯಾಗಿತ್ತು.

ಲೂಕ 4:31-44

ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ

(ಮಾರ್ಕ 1:21-28)

31 ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್‌ದಿನದಂದು ಯೇಸು ಜನರಿಗೆ ಉಪದೇಶಿಸಿದನು. 32 ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು.

33 ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ, 34 “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು. 35 ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು.

36 ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು. 37 ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.

ಯೇಸುವಿನಿಂದ ಗುಣಹೊಂದಿದ ಸ್ತ್ರೀ

(ಮತ್ತಾಯ 8:14-17; ಮಾರ್ಕ 1:29-34)

38 ಯೇಸು ಸಭಾಮಂದಿರದಿಂದ ಹೊರಟು ಸೀಮೋನನ[a] ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು. 39 ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು.

ಅನೇಕರಿಗೆ ಆರೋಗ್ಯದಾನ

40 ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು. 41 ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು.

ಇತರ ಊರುಗಳಿಗೆ ಯೇಸುವಿನ ಸಂದರ್ಶನ

(ಮಾರ್ಕ 1:35-39)

42 ಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು. 43 ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು.

44 ಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International