Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 16-18

ಪಸ್ಕಹಬ್ಬ

16 “ಅಬೀಬ್ ತಿಂಗಳನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನನ್ನು ಗೌರವಿಸುವುದಕ್ಕಾಗಿ ಪಸ್ಕಹಬ್ಬವನ್ನು ಆಚರಿಸಬೇಕು. ಯಾಕೆಂದರೆ ಆ ತಿಂಗಳಲ್ಲೇ ನಿಮ್ಮ ದೇವರಾದ ಯೆಹೋವನು ರಾತ್ರಿಯಲ್ಲಿ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ನಿಮ್ಮ ದೇವರು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಪ್ರತ್ಯೇಕ ಸ್ಥಳಕ್ಕೆ ನೀವು ಹೋಗಿ ಅಲ್ಲಿ ಪಸ್ಕದ ಯಜ್ಞಾರ್ಪಣೆ ಮಾಡಿ ನಿಮ್ಮ ಯೆಹೋವನನ್ನು ಮಹಿಮೆಪಡಿಸಬೇಕು. ಅಲ್ಲಿ ದನವನ್ನಾಗಲಿ ಆಡನ್ನಾಗಲಿ ಯಜ್ಞವಾಗಿ ಅರ್ಪಿಸಬೇಕು. ಯಜ್ಞ ಪಶುವಿನೊಂದಿಗೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನ ತಿನ್ನಬೇಕು. ಈ ಸಮಯದಲ್ಲಿ ಹುಳಿ ಬೆರೆಸಿದ ರೊಟ್ಟಿಯನ್ನು ತಿನ್ನಲೇಬಾರದು. ಹುಳಿಯಿಲ್ಲದ ರೊಟ್ಟಿಗೆ ‘ಸಂಕಟದ ರೊಟ್ಟಿ’ ಎಂದು ಕರೆಯಬೇಕು. ಯಾಕೆಂದರೆ ನೀವು ಈಜಿಪ್ಟಿನಲ್ಲಿ ದಾಸತ್ವದಲ್ಲಿದ್ದಾಗ ಅನುಭವಿಸಿದ್ದ ಸಂಕಟವನ್ನು ಅದು ನೆನಪಿಗೆ ತರುತ್ತದೆ. ನೀವು ಅಲ್ಲಿಂದ ತುಂಬಾ ಅವಸರವಾಗಿ ಹೊರಬಂದಿರಿ! ಇದನ್ನು ನಿಮ್ಮ ಜೀವಮಾನ ಪರ್ಯಂತ ಜ್ಞಾಪಿಸಿಕೊಳ್ಳಬೇಕು. ಏಳು ದಿನಗಳ ತನಕ ಇಡೀ ದೇಶದಲ್ಲಿ ಯಾರ ಮನೆಯಲ್ಲಿಯಾದರೂ ರೊಟ್ಟಿಗೆ ಬೆರೆಸುವ ಹುಳಿಯು ಇರಬಾರದು. ಮತ್ತು ಮೊದಲನೇ ದಿನದ ಸಾಯಂಕಾಲ ನೀವು ವಧಿಸುವ ಪ್ರಾಣಿಯ ಮಾಂಸವನ್ನು ಮುಂಜಾನೆಯೊಳಗೆ ತಿಂದು ಮುಗಿಸತಕ್ಕದ್ದು.

“ಪಸ್ಕದ ಪಶುವನ್ನು ದೇಶದ ಬೇರೆ ಯಾವ ಸ್ಥಳದಲ್ಲಿಯೂ ಕೊಯ್ಯಬಾರದು. ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷವಾದ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿಯೇ ಸಾಯಂಕಾಲ ಸೂರ್ಯಾಸ್ತಮಾನ ಕಾಲದಲ್ಲಿ ಪಸ್ಕಹಬ್ಬದ ಪಶುವನ್ನು ಅರ್ಪಿಸಬೇಕು. ದೇವರು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಕಾಲವನ್ನು ಈ ಪವಿತ್ರ ದಿನವು ನಿಮಗೆ ನೆನಪು ಮಾಡುತ್ತದೆ. ನಿಮ್ಮ ದೇವರಾದ ಯೆಹೋವನು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವು ಪಸ್ಕದ ಪಶುವನ್ನು ಅಡಿಗೆ ಮಾಡಿ ತಿನ್ನಬೇಕು. ಆಮೇಲೆ ಮುಂಜಾನೆ ನೀವು ನಿಮ್ಮನಿಮ್ಮ ಮನೆಗಳಿಗೆ ಹೋಗಬಹುದು. ಆರು ದಿನಗಳ ತನಕ ನೀವು ಹುಳಿ ಇಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳನೆಯ ದಿನದಲ್ಲಿ ನೀವು ಏನೂ ಕೆಲಸ ಮಾಡದೆ ಇರಬೇಕು. ಆ ದಿನ ಒಟ್ಟಾಗಿ ಸೇರಿ ನಿಮ್ಮ ದೇವರಾದ ಯೆಹೋವನನ್ನು ಘನಪಡಿಸಬೇಕು.

ಪಂಚಾಶತ್ತಮ ಹಬ್ಬ

“ನಿಮ್ಮ ಹೊಲಗಳ ಬೆಳೆಯನ್ನು ಕೊಯ್ಯಲು ಪ್ರಾರಂಭಿಸಿದ ದಿನದಿಂದ ಏಳು ವಾರಗಳನ್ನು ಲೆಕ್ಕ ಮಾಡಿರಿ. 10 ಅಲ್ಲಿ ನಿಮ್ಮ ದೇವರಾದ ಯೆಹೋವನಿಗೆ ವಾರಗಳ ಹಬ್ಬವನ್ನು ಆಚರಿಸಿರಿ. ಅಲ್ಲಿ ನಿಮ್ಮ ವಿಶೇಷ ಕಾಣಿಕೆಗಳನ್ನು ತಂದು ಸಮರ್ಪಿಸಿರಿ. ನಿಮ್ಮ ದೇವರು ನಿಮ್ಮನ್ನು ಎಷ್ಟು ಆಶೀರ್ವದಿಸಿರುತ್ತಾನೆಂದು ಯೋಚಿಸಿ ಅದರ ಪ್ರಕಾರ ನಿಮ್ಮ ಕಾಣಿಕೆಗಳನ್ನು ಸಲ್ಲಿಸಿರಿ. 11 ಯೆಹೋವನು ತನ್ನ ವಾಸಸ್ಥಾನಕ್ಕಾಗಿ ಆರಿಸಿಕೊಳ್ಳುವ ಸ್ಥಳದಲ್ಲಿ ನೀವೂ ನಿಮ್ಮ ಜನರೂ ಒಟ್ಟಾಗಿ ಸೇರಿ ದೇವರ ಸನ್ನಿಧಾನದಲ್ಲಿ ಸಂತೋಷಪಡಿರಿ. ನಿಮ್ಮ ಹೆಂಡತಿಮಕ್ಕಳನ್ನು ಅಲ್ಲದೆ ನಿಮ್ಮ ಸೇವಕಸೇವಕಿಯರನ್ನು ನಿಮ್ಮ ಪಟ್ಟಣದಲ್ಲಿರುವ ಲೇವಿಯರನ್ನು ಮತ್ತು ವಿಧವೆಯರನ್ನು, ಅನಾಥರನ್ನು, ಪರದೇಶಿಗಳನ್ನು ಕರೆದುಕೊಂಡು ಸಂತೋಷಪಡಿರಿ. 12 ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ ಎಂದು ನೆನಪುಮಾಡಿಕೊಂಡು ಯೆಹೋವನ ವಿಧಿಗಳನ್ನು ತಪ್ಪದೇ ಅನುಸರಿಸಿರಿ.

ಪರ್ಣಶಾಲೆಗಳ ಹಬ್ಬ

13 “ಕಣಗಳ ಕೆಲಸ ಮತ್ತು ದ್ರಾಕ್ಷಿಯ ಆಲೆಗಳ ಕೆಲಸ ಮುಕ್ತಾಯವಾಗಿ ನಿಮ್ಮ ಮನೆಗಳಲ್ಲಿ ಅವುಗಳನ್ನು ಶೇಖರಿಸಿದ ಬಳಿಕ ಏಳು ದಿನಗಳ ನಂತರ ನೀವು ಪರ್ಣಶಾಲೆಗಳ ಹಬ್ಬವನ್ನು ಆಚರಿಸಬೇಕು. 14 ನಿಮ್ಮ ಹೆಂಡತಿಮಕ್ಕಳೊಂದಿಗೆ, ಸೇವಕಸೇವಕಿಯರೊಂದಿಗೆ ಮತ್ತು ನಿಮ್ಮ ಊರುಗಳಲ್ಲಿರುವ ಲೇವಿಯರೊಂದಿಗೆ, ಪರದೇಶಿಗಳೊಂದಿಗೆ, ಅನಾಥರೊಂದಿಗೆ ಮತ್ತು ವಿಧವೆಯರೊಂದಿಗೆ ಆನಂದದಿಂದ ಹಬ್ಬ ಮಾಡಿರಿ. 15 ನಿಮ್ಮ ಯೆಹೋವನು ಆರಿಸಿಕೊಂಡಿರುವ ವಿಶೇಷ ಸ್ಥಳದಲ್ಲಿ ಈ ಹಬ್ಬವನ್ನು ಏಳು ದಿನ ಆಚರಿಸಿರಿ. ನಿಮ್ಮ ದೇವರಾದ ಯೆಹೋವನನ್ನು ಘನಪಡಿಸುವುದಕ್ಕಾಗಿ ಸಂತೋಷದಿಂದ ಹಬ್ಬವನ್ನು ಆಚರಿಸಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ಸುಗ್ಗಿಯನ್ನು ಮತ್ತು ನಿಮ್ಮ ಎಲ್ಲಾ ಕೆಲಸಕಾರ್ಯಗಳನ್ನು ಆಶೀರ್ವದಿಸಿದನು. ಆದ್ದರಿಂದ ಸಂತೋಷಪಡಿರಿ!

16 “ನಿಮ್ಮ ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸಿಕೊಳ್ಳುವ ಆ ವಿಶೇಷ ಸ್ಥಳಕ್ಕೆ ನೀವೆಲ್ಲಾ ವರ್ಷದಲ್ಲಿ ಮೂರು ಬಾರಿ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ, ಪಂಚಾಶತ್ತಮ ಹಬ್ಬ ಮತ್ತು ಪರ್ಣಶಾಲೆಗಳ ಹಬ್ಬದಲ್ಲಿ ಸೇರಿಬರಬೇಕು. ಯೆಹೋವನ ಬಳಿಗೆ ಬರುವ ಪ್ರತಿಯೊಬ್ಬನು ಕಾಣಿಕೆಯೊಂದಿಗೆ ಬರಬೇಕು. 17 ಪ್ರತಿಯೊಬ್ಬನೂ ಯೆಹೋವನು ತನ್ನನ್ನು ಆಶೀರ್ವದಿಸಿದ ಮೇರೆಗೆ ಆತನಿಗೆ ಕಾಣಿಕೆಯನ್ನರ್ಪಿಸಬೇಕು.

ನ್ಯಾಯಾಧಿಪತಿಗಳೂ ಅಧಿಕಾರಿಗಳೂ

18 “ನಿಮ್ಮ ದೇವರು ನಿಮಗೆ ಕೊಡುವ ದೇಶದ ಎಲ್ಲಾ ಪಟ್ಟಣಗಳಲ್ಲಿ ನ್ಯಾಯಾಧೀಶರನ್ನೂ ಅಧಿಕಾರಿಗಳನ್ನೂ ಆರಿಸಿಕೊಳ್ಳಿರಿ. ಪ್ರತಿಯೊಂದು ಕುಲದವರು ಇದನ್ನು ಮಾಡಬೇಕು; ಆರಿಸಲ್ಪಟ್ಟವರು ನ್ಯಾಯವಂತರಾಗಿರಬೇಕು. 19 ನೀವು ಯಾವಾಗಲೂ ಪಕ್ಷಪಾತವಿಲ್ಲದವರಾಗಿರಬೇಕು. ಜನರಿಂದ ಲಂಚ ತೆಗೆದುಕೊಂಡು ಅನ್ಯಾಯವಾದ ತೀರ್ಮಾನ ಕೊಡಬಾರದು. ಹಣವು ಜ್ಞಾನಿಗಳನ್ನು ಕುರುಡುಮಾಡಿ ಅವರ ಬುದ್ಧಿಯನ್ನು ಮಂದ ಮಾಡುವುದು. 20 ನೀವು ಒಳ್ಳೆಯವರೂ ನ್ಯಾಯವಂತರೂ ಆಗಿದ್ದರೆ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ವಾಸಿಸುವಿರಿ ಮತ್ತು ಅದನ್ನು ನಿಮ್ಮ ವಶದಲ್ಲಿಟ್ಟುಕೊಳ್ಳುವಿರಿ.

ದೇವರು ವಿಗ್ರಹಗಳನ್ನು ದ್ವೇಷಿಸುವನು

21 “ನೀವು ನಿಮ್ಮ ದೇವರಾದ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ಕಟ್ಟುವಾಗ ಅದರ ಪಕ್ಕದಲ್ಲಿ ಅಶೇರ್ ದೇವತೆಗೆ ಗೌರವವನ್ನು ತರುವಂಥ ಯಾವ ಮರದ ಕಂಬಗಳನ್ನು ನೆಡಬಾರದು; 22 ಸುಳ್ಳುದೇವರುಗಳ ಪೂಜೆಗಾಗಿ ವಿಶೇಷವಾದ ಕಲ್ಲುಗಳನ್ನು ನೆಡಬಾರದು; ನಿಮ್ಮ ದೇವರಾದ ಯೆಹೋವನು ಅವುಗಳನ್ನು ದ್ವೇಷಿಸುತ್ತಾನೆ.

ಕಳಂಕ, ದೋಷವಿಲ್ಲದ ಪ್ರಾಣಿಗಳನ್ನೇ ಬಲಿಕೊಡಿರಿ

17 “ನಿಮ್ಮ ದೇವರಾದ ಯೆಹೋವನಿಗೆ ನೀವು ಪಶುಗಳನ್ನಾಗಲಿ ಆಡುಕುರಿಮರಿಗಳನ್ನಾಗಲಿ ಸಮರ್ಪಿಸುವಾಗ ಅವು ಕಳಂಕವಿಲ್ಲದೆ ಪೂರ್ಣಾಂಗವಾಗಿರಬೇಕು; ದೋಷಪೂರಿತ ಯಜ್ಞವನ್ನು ಆತನು ದ್ವೇಷಿಸುತ್ತಾನೆ.

ವಿಗ್ರಹಾರಾಧನೆ ಮಾಡಿದರೆ ದೊರಕುವ ಶಿಕ್ಷೆ

“ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಒಂದು ಪಟ್ಟಣದಲ್ಲಿ ನೀವು ಕೆಟ್ಟ ಸುದ್ದಿಯೊಂದನ್ನು ಅಂದರೆ ಒಬ್ಬ ಸ್ತ್ರೀಯಾಗಲಿ ಅಥವಾ ಪುರುಷನಾಗಲಿ ದೇವರೊಂದಿಗೆ ಮಾಡಿದ ಒಡಂಬಡಿಕೆಯನ್ನು ಮುರಿದು ಆತನಿಗೆ ವಿರುದ್ಧವಾಗಿ ಪಾಪಮಾಡಿ ಅವರು ಬೇರೆ ದೇವರುಗಳನ್ನಾಗಲಿ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ ಪೂಜಿಸುತ್ತಾರೆ ಎಂಬ ಸುದ್ದಿಯನ್ನು ನೀವು ಕೇಳಿದರೂ ಕೇಳಬಹುದು, ಅದು ದೇವರ ಕಟ್ಟಳೆಗೆ ವಿರುದ್ಧವಾದದ್ದು. ಇಂಥಾ ಕೆಟ್ಟ ಸುದ್ದಿಯನ್ನು ನೀವು ಕೇಳಿದರೆ ಮೊಟ್ಟಮೊದಲಾಗಿ ಅದು ಸತ್ಯವೋ ಸುಳ್ಳೋ ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಅಂಥ ಭಯಂಕರ ಸಂಗತಿಯು ಇಸ್ರೇಲಿನಲ್ಲಿ ಸಂಭವಿಸಿದ್ದು ನಿಜವಾಗಿದ್ದಲ್ಲಿ, ಆ ಪಾಪಮಾಡಿದವನಿಗೆ ಶಿಕ್ಷೆಯನ್ನು ವಿಧಿಸಬೇಕು. ಪಟ್ಟಣದ ಹೆಬ್ಬಾಗಿಲ ಹೊರಗಿರುವ ಬಯಲಿಗೆ ಆ ತಪ್ಪು ಮಾಡಿದ ಸ್ತ್ರೀಯನ್ನೂ, ಪುರುಷನನ್ನೂ ತೆಗೆದುಕೊಂಡು ಹೋಗಿ ಅಲ್ಲಿ ಅವರನ್ನು ಕಲ್ಲೆಸೆದು ಸಾಯಿಸಬೇಕು. ಅವರು ವಿಗ್ರಹಾರಾಧನೆ ಮಾಡಿದ್ದಕ್ಕೆ ಒಂದೇ ಸಾಕ್ಷಿ ಇರುವುದಾದರೆ ಅವರಿಗೆ ಮರಣಶಿಕ್ಷೆಯಾಗಬಾರದು. ಆದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳು ಅವರು ವಿಗ್ರಹಾರಾಧನೆ ಮಾಡಿದ್ದು ಸತ್ಯವೆಂದು ಹೇಳಿದರೆ ಮಾತ್ರ ಅವರನ್ನು ಸಾಯಿಸಬೇಕು. ಸತ್ಯವೆಂದು ಹೇಳಿದ ಸಾಕ್ಷಿಗಳು ಮೊದಲು ಅವರ ಮೇಲೆ ಕಲ್ಲೆಸೆಯಬೇಕು. ಅನಂತರ ಬೇರೆಯವರು ಕಲ್ಲೆಸೆದು ಅವರನ್ನು ಸಾಯಿಸಬೇಕು. ಈ ರೀತಿಯಾಗಿ ನಿಮ್ಮ ಮಧ್ಯೆ ಇದ್ದ ದುಷ್ಕೃತ್ಯವನ್ನು ತೆಗೆದುಹಾಕಬೇಕು.

ನ್ಯಾಯಸ್ಥಾನದಲ್ಲಿ ಬಗೆಹರಿಸಲಾಗದ ವಿಷಯಗಳು

“ನಿಮ್ಮ ನ್ಯಾಯಸ್ಥಾನದಲ್ಲಿ ನ್ಯಾಯತೀರಿಸಲಾಗದ ಕಷ್ಟದ ಸಮಸ್ಯೆಗಳು ಬರುವವು. ಅವು ಕೊಲೆ ಅಥವಾ ಇಬ್ಬರ ಮಧ್ಯೆ ವಿವಾದವಿರಬಹುದು; ಅಥವಾ ಜಗಳಮಾಡಿ ಗಾಯಗೊಂಡಿರುವ ಪ್ರಕರಣವಾಗಿರಬಹುದು. ನಿಮ್ಮ ಪಟ್ಟಣಗಳ ನ್ಯಾಯಸ್ಥಾನದಲ್ಲಿ ಈ ಪ್ರಕರಣಗಳ ವಿಚಾರಣೆ ನಡಿಸುವಾಗ ಸರಿಯಾದ ಇತ್ಯರ್ಥಮಾಡಿ ತೀರ್ಪುಮಾಡಲು ಕಷ್ಟವಾದಲ್ಲಿ ನೀವು ದೇವರು ಆರಿಸುವ ಸ್ಥಳಕ್ಕೆ ಹೋಗಬೇಕು. ಲೇವಿಕುಲದ ಯಾಜಕರ ಬಳಿಗೂ ಅಲ್ಲಿ ಆ ಸಮಯದಲ್ಲಿರುವ ನ್ಯಾಯಾಧೀಶನ ಬಳಿಗೂ ಹೋಗಿ ಅವರಿಗೆ ವಿಷಯವನ್ನು ತಿಳಿಸಬೇಕು. ಅವರು ನಿಮ್ಮ ಮುಂದಿರುವ ಬಗೆಹರಿಯಲಾಗದ ಪ್ರಕರಣವನ್ನು ಆಲೈಸಿ, ವಿಚಾರಿಸಿ, 10 ಯೆಹೋವನ ವಿಶೇಷವಾದ ಸ್ಥಳದಲ್ಲಿ ತಮ್ಮ ತೀರ್ಪನ್ನು ಕೊಡುವರು. ಅವರು ಏನು ಹೇಳುತ್ತಾರೋ ಅದಕ್ಕೆ ಸಂಪೂರ್ಣವಾಗಿ ಒಪ್ಪಿಗೆ ನೀಡಬೇಕು. ನೀವು ಏನು ಮಾಡಬೇಕೆಂದು ಅವರು ಹೇಳುತ್ತಾರೋ ಅದನ್ನು ನೀವು ಮಾಡಲೇಬೇಕು. 11 ಅವರು ಹೇಳಿದ ಹಾಗೆ ಎಲ್ಲವನ್ನು ಅಕ್ಷರಶಃ ಪರಿಪಾಲಿಸಬೇಕು. ಅವರ ತೀರ್ಪನ್ನು ಬದಲಾಯಿಸಬಾರದು.

12 “ನಿಮ್ಮ ದೇವರಾದ ಯೆಹೋವನ ಸೇವೆಮಾಡುತ್ತಿರುವ ಯಾಜಕನಾಗಲಿ ನ್ಯಾಯಾಧೀಶನಾಗಲಿ ಹೇಳಿದ ತೀರ್ಪನ್ನು ಉಲ್ಲಂಘಿಸಿದವನಿಗೆ ಮರಣದಂಡನೆ ಆಗಬೇಕು. ನೀವು ಆ ದುಷ್ಟನನ್ನು ಇಸ್ರೇಲಿನಿಂದ ನಿರ್ಮೂಲ ಮಾಡಬೇಕು. 13 ಈ ದಂಡನೆಯ ಬಗ್ಗೆ ಜನರು ಕೇಳಿ ಭಯಪಟ್ಟು ಅಂಥ ಕೆಟ್ಟ ಕೃತ್ಯಗಳನ್ನು ಮಾಡದಿರುವರು.

ಅರಸನನ್ನು ಆರಿಸುವ ರೀತಿ

14 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಪ್ರವೇಶಿಸುವಿರಿ. ಆ ಸ್ಥಳಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ನೆಲೆಸುವಿರಿ. ಆಗ ನೀವು ‘ನಮ್ಮ ಸುತ್ತಲಿನ ದೇಶದಲ್ಲಿರುವಂತೆಯೇ ನಮಗೂ ಒಬ್ಬ ರಾಜನು ಬೇಕು’ ಎಂದು ಹೇಳುವಿರಿ. 15 ಅಂಥ ಸಮಯದಲ್ಲಿ ಯೆಹೋವನು ಆರಿಸಿಕೊಂಡವನನ್ನೇ ನೀವು ರಾಜನನ್ನಾಗಿ ಆರಿಸಿಕೊಳ್ಳಬೇಕು; ಅವನು ನಿಮ್ಮ ಸ್ವಂತ ಜನರಲ್ಲಿ ಒಬ್ಬನಾಗಿರಬೇಕು; ಪರದೇಶಸ್ಥನನ್ನು ನೀವು ನಿಮ್ಮ ರಾಜನನ್ನಾಗಿ ಆರಿಸಬಾರದು. 16 ಅರಸನು ತನ್ನ ಉಪಯೋಗಕ್ಕಾಗಿ ಹೆಚ್ಚೆಚ್ಚಾಗಿ ಕುದುರೆಗಳನ್ನು ಖರೀದಿಸಬಾರದು; ಜನರನ್ನು ಈಜಿಪ್ಟಿಗೆ ಕಳುಹಿಸಿ ಅಲ್ಲಿಂದ ಹೆಚ್ಚುಹೆಚ್ಚು ಕುದುರೆಗಳನ್ನು ತರಿಸಬಾರದು; ಯಾಕೆಂದರೆ, ‘ನೀವು ಆ ಮಾರ್ಗದಲ್ಲಿ ಹಿಂದಕ್ಕೆ ಹೋಗಲೇಬಾರದು’ ಎಂದು ಯೆಹೋವನು ಹೇಳಿದ್ದಾನೆ. 17 ಅರಸನಿಗೆ ಮಿತಿಮೀರಿ ಪತ್ನಿಯರು ಇರಬಾರದು. ಯಾಕೆಂದರೆ ಅವರು ಅರಸನನ್ನು ಯೆಹೋವನ ಮಾರ್ಗದಲ್ಲಿ ನಡೆಯದಂತೆ ಮಾಡಿ ಬೇರೆ ಕಡೆಗೆ ತಿರುಗಿಸುವರು. ರಾಜನು ಬೆಳ್ಳಿಬಂಗಾರಗಳನ್ನು ಶೇಖರಿಸಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಳ್ಳಬಾರದು.

18 “ರಾಜನು ರಾಜ್ಯವಾಳಲು ಆರಂಭಿಸುವಾಗ, ಯಾಜಕರ ಮತ್ತು ಲೇವಿಯರ ಪುಸ್ತಕಗಳಿಂದ ಧರ್ಮಶಾಸ್ತ್ರವನ್ನು ತನಗಾಗಿ ಪುಸ್ತಕ ರೂಪದಲ್ಲಿ ಬರೆಸಿಟ್ಟುಕೊಳ್ಳಬೇಕು. 19 ಅವನು ಆ ಪುಸ್ತಕವನ್ನು ತನ್ನೊಂದಿಗಿಟ್ಟುಕೊಂಡು ಅದನ್ನು ತನ್ನ ಜೀವಮಾನ ಪೂರ್ತಿ ಪದೇಪದೇ ಓದುತ್ತಿರಬೇಕು. ಯಾಕೆಂದರೆ ಧರ್ಮಶಾಸ್ತ್ರವು ಆಜ್ಞಾಪಿಸುವ ಪ್ರತಿಯೊಂದಕ್ಕೂ ಸಂಪೂರ್ಣವಾಗಿ ವಿಧೇಯನಾಗಲು ಅವನು ಕಲಿತುಕೊಳ್ಳಬೇಕು. 20 ಆಗ ಅರಸನು ತನ್ನ ಪ್ರಜೆಗಳಿಗಿಂತ ತಾನು ಉತ್ತಮನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ಧರ್ಮಶಾಸ್ತ್ರಕ್ಕೆ ವಿಮುಖನಾಗದೆ ಅದನ್ನು ಚಾಚೂತಪ್ಪದೆ ಅನುಸರಿಸುವನು. ಆಗ ರಾಜನೂ ಅವನ ಸಂತತಿಯವರೂ ಇಸ್ರೇಲ್ ರಾಜ್ಯವನ್ನು ಬಹುಕಾಲ ಆಳುವರು.

ಯಾಜಕರ ಮತ್ತು ಲೇವಿಯರ ಜೀವನಾಧಾರ

18 “ಇಸ್ರೇಲ್ ದೇಶದೊಳಗೆ ಲೇವಿಕುಲದವರಿಗೆ ಸ್ವಾಸ್ತ್ಯವು ಇರುವುದಿಲ್ಲ. ಅವರು ಯಾಜಕರಾಗಿ ಸೇವೆ ಸಲ್ಲಿಸುವರು. ದೇವರಿಗೆ ಸಮರ್ಪಿಸಿದ ಕಾಣಿಕೆಗಳಲ್ಲಿ ಬೆಂಕಿಯಲ್ಲಿ ಬೇಯಿಸಿದ ಯಜ್ಞಶೇಷವೇ ಅವರ ಆಹಾರ. ಬೇರೆ ಕುಲದವರಂತೆ ಅವರಿಗೆ ಭೂಮಿ ದೊರೆಯುವುದಿಲ್ಲ. ದೇವರು ಹೇಳಿದ ಪ್ರಕಾರ ಅವರ ಪಾಲು ಯೆಹೋವನೇ.

“ನೀವು ಯಜ್ಞಕ್ಕಾಗಿ ಒಂದು ದನವನ್ನಾಗಲಿ ಕುರಿಯನ್ನಾಗಲಿ ಕೊಯ್ದಾಗ ಯಾಜಕರಿಗೆ ಭುಜವನ್ನು, ಎರಡು ದವಡೆಗಳನ್ನು ಮತ್ತು ಉದರ ಭಾಗವನ್ನು ಕೊಡಬೇಕು. ನಿಮ್ಮ ಯಾಜಕರಿಗೆ ನಿಮ್ಮ ಬೆಳೆಯ ಪ್ರಥಮ ಫಲವನ್ನು ಕೊಡಬೇಕು. ನಿಮ್ಮ ಧಾನ್ಯಗಳ ಪ್ರಥಮ ಫಲವನ್ನು, ದ್ರಾಕ್ಷಾರಸದಲ್ಲಿ, ಎಣ್ಣೆಯಲ್ಲಿ ಮತ್ತು ನಿಮ್ಮ ಉಣ್ಣೆಯಲ್ಲಿ ಪ್ರಥಮ ಫಲವನ್ನು ಕೊಡಬೇಕು. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ಇಸ್ರೇಲ್ ಕುಲದವರಿಂದ ಲೇವಿಕುಲದವರನ್ನು ನಿರಂತರವಾಗಿ ಆತನ ಸೇವೆಮಾಡುವುದಕ್ಕೆ ಆರಿಸಿಕೊಂಡಿರುತ್ತಾನೆ.

“ಪ್ರತಿಯೊಬ್ಬ ಲೇವಿಯನಿಗೂ ದೇವಾಲಯದಲ್ಲಿ ಸೇವೆಮಾಡಲು ಒಂದು ನಿರ್ಧಿಷ್ಟ ಸಮಯವನ್ನು ಗೊತ್ತುಪಡಿಸಲಾಗಿದೆ. ಆದರೆ ಬೇರೆ ಸಮಯದಲ್ಲಿಯೂ ಸಹ ಅವನು ಅಲ್ಲಿ ಸೇವೆಮಾಡಲು ಇಷ್ಟಪಟ್ಟರೆ, ಅವನು ತನಗೆ ಇಷ್ಟಬಂದ ಸಮಯದಲ್ಲಿ ಸೇವೆ ಮಾಡಬಹುದು. ಇಸ್ರೇಲಿನ ಯಾವದೇ ಭಾಗದಲ್ಲಿರುವ ಯಾವುದೇ ಊರಿನಲ್ಲಿರುವ ಲೇವಿಯನು ತನ್ನ ಸ್ವಂತ ಸ್ಥಳವನ್ನು ಬಿಟ್ಟು ಯೆಹೋವನ ವಿಶೇಷ ಸ್ಥಳಕ್ಕೆ ಬರಬಹುದು. ಅವನು ತನಗೆ ಇಷ್ಟಬಂದ ಯಾವುದೇ ಸಮಯದಲ್ಲಿ ಬೇಕಾದರೂ ಹೀಗೆ ಮಾಡಬಹುದು. ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುತ್ತಿರುವ ತನ್ನ ಎಲ್ಲಾ ಸಹೋದರರಾದ ಲೇವಿಯರಂತೆ ಈ ಲೇವಿಯನು ಸಹ ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ಸೇವೆಮಾಡಬಹುದು. ಆ ಲೇವಿಯನು ಇತರ ಲೇವಿಯರೊಂದಿಗೆ ಸಮಾನ ಪಾಲನ್ನು ಹೊಂದುವನು. ಇದಲ್ಲದೆ ಅವನ ಕುಟುಂಬದವರು ಯಥಾಪ್ರಕಾರ ತಮಗೆ ಬರತಕ್ಕ ಪಾಲನ್ನೂ ಹೊಂದುವರು.

ಇತರ ಜನಾಂಗಗಳವರಂತೆ ಇಸ್ರೇಲರು ಜೀವಿಸಬಾರದು

“ನೀವು ನಿಮ್ಮ ವಾಗ್ದತ್ತ ದೇಶಕ್ಕೆ ಬಂದಾಗ ಸುತ್ತಮುತ್ತಲಿನ ಜನರು ನಡೆಯುವ ರೀತಿಯಲ್ಲಿ ನೀವು ನಡೆಯಬಾರದು. ಅವರ ಅಸಹ್ಯವಾದ ಪದ್ದತಿಗಳನ್ನು ಅನುಸರಿಸಬಾರದು. 10 ನಿಮ್ಮ ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ನಿಮ್ಮ ಯಜ್ಞವೇದಿಕೆಯ ಬೆಂಕಿಯ ಮೇಲೆ ಬಲಿಯನ್ನಾಗಿ ಅರ್ಪಿಸಬೇಡಿ. ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳುವುದಕ್ಕಾಗಿ ಕಣಿಹೇಳುವವರ ಬಳಿಗಾಗಲಿ, ಮಂತ್ರಗಾರರ ಬಳಿಗಾಗಲಿ ಬೇತಾಳಿಕರ ಬಳಿಗಾಗಲಿ, ಮಾಟಗಾರರ ಬಳಿಗಾಗಲಿ ಹೋಗಬೇಡಿ. 11 ಬೇರೆಯವರ ಮೇಲೆ ಮಂತ್ರ ಮಾಡಲು ಯಾರಿಗೂ ಅವಕಾಶ ಕೊಡಬೇಡಿ. ಬೇತಾಳಿಕರಾಗುವುದಕ್ಕಾಗಲಿ, ಮಾಟಗಾರರಾಗುವುದಕ್ಕಾಗಲಿ ನಿಮ್ಮಲ್ಲಿ ಯಾರಿಗೂ ಅವಕಾಶ ಕೊಡಬೇಡಿ. ಸತ್ತುಹೋದವನೊಡನೆ ನಿಮ್ಮಲ್ಲಿ ಯಾರೂ ಮಾತಾಡಕೂಡದು. 12 ಇಂಥ ಕಾರ್ಯಗಳನ್ನು ಮಾಡುವ ಜನರನ್ನು ದೇವರು ದ್ವೇಷಿಸುತ್ತಾನೆ. ಆದ್ದರಿಂದಲೇ ಆ ಜನಾಂಗಗಳವರನ್ನು ನಿಮಗೋಸ್ಕರವಾಗಿ ಈ ದೇಶದಿಂದ ಹೊರಡಿಸುವನು. 13 ನಿಮ್ಮ ದೇವರಾದ ಯೆಹೋವನಿಗೆ ನೀವು ನಂಬಿಗಸ್ತರಾಗಿರಬೇಕು.

ಯೆಹೋವನ ಮಾತುಗಳನ್ನು ತಿಳಿಸುವ ಪ್ರವಾದಿ

14 “ನಿಮ್ಮ ದೇಶದೊಳಗಿಂದ ಇತರ ಜನಾಂಗದವರನ್ನು ನಾಶಮಾಡಬೇಕು. ಆ ಜನರು ಮಾಟಮಂತ್ರಗಳ ಮೂಲಕ ಮತ್ತು ಕಣಿ ಹೇಳುವವರಿಂದ ತಮ್ಮ ಭವಿಷ್ಯವನ್ನು ವಿಚಾರಿಸುವರು. ಆದರೆ ನಿಮ್ಮ ದೇವರಾದ ಯೆಹೋವನು ಅಂಥಾ ಕೆಲಸವನ್ನು ಮಾಡಲು ನಿಮ್ಮನ್ನು ಬಿಡುವುದಿಲ್ಲ. 15 ನಿಮ್ಮ ದೇವರು ನಿಮ್ಮ ಬಳಿಗೆ ಪ್ರವಾದಿಯನ್ನು ಕಳುಹಿಸುವನು. ಆ ಪ್ರವಾದಿಯು ನಿಮ್ಮ ಕುಲದವರಲ್ಲಿ ಒಬ್ಬನಾಗಿರುವನು. ಅವನು ನನ್ನ ಹಾಗೆ ಇರುವನು ಮತ್ತು ನೀವು ಅವನ ಮಾತುಗಳನ್ನು ಕೇಳಬೇಕು. 16 ನೀವು ಕೇಳಿದ ಪ್ರಕಾರ ದೇವರು ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವನು. ನೀವು ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಒಟ್ಟಾಗಿ ಸೇರಿದಾಗ ದೇವರ ಸ್ವರಕ್ಕೆ ಭಯಪಟ್ಟಿರಿ; ಪರ್ವತದಲ್ಲಿದ್ದ ಬೆಂಕಿಯನ್ನು ನೋಡಿಯೂ ತತ್ತರಿಸಿದಿರಿ. ಆಗ ನೀವು, ‘ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ತಿರುಗಿ ಕೇಳದ ಹಾಗೆ ಮಾಡು. ನಾವು ತಿರುಗಿ ಆ ಮಹಾ ಬೆಂಕಿಯ ಜ್ವಾಲೆಯನ್ನು ನೋಡದ ಹಾಗೆ ಮಾಡು; ಇಲ್ಲವಾದರೆ ನಾವು ಸಾಯುತ್ತೇವೆ!’ ಎಂದು ನನ್ನನ್ನು ಕೇಳಿಕೊಂಡಿರಿ.

17 “ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅವರು ಕೇಳುವ ವಿಷಯವು ಒಳ್ಳೆಯದೇ. 18 ನಾನು ಅವರಿಗಾಗಿ ನಿನ್ನ ತರಹದ ಒಬ್ಬ ಪ್ರವಾದಿಯನ್ನು ಕಳುಹಿಸುವೆನು. ಅವನು ಅವರ ಜನರಲ್ಲಿ ಒಬ್ಬನಾಗಿರುವನು. ಅವನು ಜನರಿಗೆ ತಿಳಿಸಬೇಕಾದ ವಿಷಯವನ್ನು ನಾನೇ ಅವನಿಗೆ ತಿಳಿಸುವೆನು. ನಾನು ಆಜ್ಞಾಪಿಸುವುದೆಲ್ಲವನ್ನು ಅವನು ಜನರಿಗೆ ತಿಳಿಸುವನು. 19 ಈ ಪ್ರವಾದಿಯು ನನ್ನ ಪ್ರತಿನಿಧಿಯಾಗಿ ಮಾತನಾಡುವನು. ಅವನು ಮಾತಾಡುವಾಗ ಯಾವನಾದರೂ ನನ್ನ ಆಜ್ಞೆಗಳನ್ನು ಕೇಳದೆಹೋದರೆ ನಾನು ಅವನನ್ನು ಶಿಕ್ಷಿಸುವೆನು.’

ಸುಳ್ಳು ಪ್ರವಾದಿಗಳನ್ನು ಕಂಡುಹಿಡಿಯುವ ಬಗ್ಗೆ

20 “ಒಬ್ಬ ಪ್ರವಾದಿಯು ನಾನು ಹೇಳದ ಸಂಗತಿಯನ್ನು ನಿಮಗೆ ಹೇಳಿದರೂ ಹೇಳಬಹುದು. ದೇವರಿಂದ ಬಂದ ಸಂದೇಶವನ್ನು ನಿಮಗೆ ತಿಳಿಸುತ್ತಿರುವೆನು ಎಂದು ಅವನು ಹೇಳಬಹುದು. ಇಂಥಾ ಸಂದರ್ಭಗಳು ಬಂದಲ್ಲಿ ಆ ಪ್ರವಾದಿಯನ್ನು ಸಾಯಿಸಬೇಕು. ಇಷ್ಟು ಮಾತ್ರವಲ್ಲ ಇತರ ದೇವರುಗಳ ಸಂದೇಶವನ್ನು ಕೊಡುವ ಪ್ರವಾದಿಗಳೂ ಬರಬಹುದು. ಅವರನ್ನೂ ನೀವು ಸಾಯಿಸಬೇಕು. 21 ‘ಆ ಪ್ರವಾದಿಯು ಹೇಳಿದ್ದು ದೇವರ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ?’ ಎಂದು ನೀವು ಅಂದುಕೊಳ್ಳಬಹುದು. 22 ಒಬ್ಬ ಪ್ರವಾದಿಯು ತಾನು ಯೆಹೋವನಿಂದ ಕಳುಹಿಸಲ್ಪಟ್ಟವನು ಎಂದು ಹೇಳಿಕೊಂಡರೆ ಮತ್ತು ಅವನು ಹೇಳಿದ ಮಾತುಗಳು ನೆರವೇರದೆ ಹೋದರೆ ಆಗ ಆ ವಿಷಯಗಳನ್ನು ಯೆಹೋವನು ಹೇಳಲಿಲ್ಲವೆಂದು ನಿಮಗೆ ಗೊತ್ತಾಗುವುದು. ಆ ಪ್ರವಾದಿಯು ತನ್ನದೆ ಆದ ಆಲೋಚನೆಯನ್ನು ನಿಮಗೆ ಹೇಳುತ್ತಿದ್ದಾನೆಂದು ನಿಮಗೆ ತಿಳಿಯುವುದು. ನೀವು ಅವನಿಗೆ ಭಯಪಡಬೇಡಿರಿ.

ಮಾರ್ಕ 13:1-20

ದೇವಾಲಯದ ಮುಂದಿನ ವಿನಾಶ

(ಮತ್ತಾಯ 24:1-44; ಲೂಕ 21:5-33)

13 ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.

ಯೇಸು, “ನೀವು ಈ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವಿರಾ? ಇವುಗಳನ್ನೆಲ್ಲ ನಾಶಪಡಿಸಲಾಗುವುದು. ಪ್ರತಿಯೊಂದು ಕಲ್ಲನ್ನೂ ನೆಲಕ್ಕೆ ಕೆಡವಲಾಗುವುದು. ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯುವುದಿಲ್ಲ” ಎಂದನು.

ನಂತರ ಯೇಸು ಆಲಿವ್ ಮರಗಳ ಗುಡ್ಡದ ಮೇಲೆ, ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯರ ಸಂಗಡ ಕುಳಿತಿದ್ದನು. ಅವರೆಲ್ಲರಿಗೂ ಅಲ್ಲಿಂದ ದೇವಾಲಯ ಕಾಣುತಿತ್ತು. ಆ ಶಿಷ್ಯರು ಯೇಸುವಿಗೆ, “ಈ ಸಂಗತಿಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಅವುಗಳು ನಡೆಯುವ ಕಾಲಕ್ಕೆ ಸೂಚನೆಯೇನು?” ಎಂದು ಕೇಳಿದರು.

ಅದಕ್ಕೆ ಯೇಸು, “ಎಚ್ಚರಿಕೆಯಿಂದಿರಿ! ನಿಮಗೆ ಮೋಸ ಮಾಡಲು ಯಾರಿಗೂ ಆಸ್ಪದ ಕೊಡಬೇಡಿ. ಅನೇಕ ಜನರು ಬಂದು, ‘ನಾನೇ ಕ್ರಿಸ್ತನು; ನಾನೇ ಕ್ರಿಸ್ತನು’ ಎನ್ನುತ್ತಾ ಅನೇಕ ಜನರನ್ನು ಮೋಸಗೊಳಿಸುತ್ತಾರೆ. ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು. ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.

“ಎಚ್ಚರಿಕೆಯಿಂದಿರಿ! ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಬಂಧಿಸಿ, ನ್ಯಾಯವಿಚಾರಣೆಗೆ ಕೊಂಡೊಯ್ಯುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ರಾಜರ ಮತ್ತು ಅಧಿಪತಿಗಳ ಮುಂದೆ ನಿಮ್ಮನ್ನು ನಿಲ್ಲಿಸಿ ನನ್ನ ವಿಷಯದಲ್ಲಿ ಸಾಕ್ಷಿಕೊಡಲು ನಿಮ್ಮನ್ನು ಬಲವಂತಪಡಿಸುವರು. 10 ಈ ಸಂಗತಿಗಳು ಸಂಭವಿಸುವುದಕ್ಕಿಂತ ಮೊದಲು ನೀವು ಜನರಿಗೆಲ್ಲ ಸುವಾರ್ತೆಯನ್ನು ತಿಳಿಸಬೇಕು. 11 ನೀವು ಬಂಧಿಸಲ್ಪಟ್ಟು ನ್ಯಾಯವಿಚಾರಣೆಗೆ ಒಳಗಾಗುವಿರಿ. ಆದರೆ ನೀವು ಏನು ಹೇಳಬೇಕೆಂಬುದರ ಬಗ್ಗೆ ಯೋಚಿಸಬೇಡಿ, ಆ ಸಮಯದಲ್ಲಿ ದೇವರು ನಿಮಗೆ ತಿಳಿಸಿಕೊಡುವುದನ್ನೇ ಹೇಳಿರಿ. ಆಗ ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ.

12 “ಸಹೋದರರು ಸಹೋದರರನ್ನೇ, ತಂದೆಗಳು ತಮ್ಮ ಸ್ವಂತ ಮಕ್ಕಳನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ತಮ್ಮ ಸ್ವಂತ ತಂದೆತಾಯಂದಿರ ವಿರುದ್ಧ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. 13 ನೀವು ನನ್ನನ್ನು ಹಿಂಬಾಲಿಸುವ ಕಾರಣ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೆ ಕೊನೆಯವರೆಗೆ ತಾಳುವವನು ರಕ್ಷಣೆ ಹೊಂದುವನು.

14 “ವಿನಾಶವನ್ನು ಉಂಟುಮಾಡುವ ಭಯಂಕರ ವಸ್ತುವನ್ನು ನೀವು ನೋಡುತ್ತೀರಿ. ಇದು ನಿಂತುಕೊಳ್ಳಬಾರದಂಥ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುವವನು ಇದರ ಅರ್ಥವನ್ನು ತಿಳಿದುಕೊಳ್ಳಬೇಕು) ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಬೇಕು. 15 ಮಾಳಿಗೆಯ ಮೇಲಿರುವವನು ಕೆಳಗಿಳಿದು ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳದೆ ಓಡಿಹೋಗಲಿ. 16 ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂತಿರುಗದಿರಲಿ.

17 “ಆ ಸಮಯವು ಗರ್ಭಿಣಿ ಸ್ತ್ರೀಯರಿಗೆ ಹಾಗೂ ಎಳೆಕೂಸುಗಳನ್ನು ಹೊಂದಿರುವ ತಾಯಂದಿರಿಗೆ ಬಹಳ ಸಂಕಟಕರವಾಗಿರುತ್ತದೆ. 18 ಈ ಸಂಗತಿಗಳು ಚಳಿಗಾಲದಲ್ಲಿ ನಡೆಯದಂತೆ ಪ್ರಾರ್ಥನೆ ಮಾಡಿರಿ. 19 ಏಕೆಂದರೆ ಆ ದಿನಗಳು ಬಹಳ ಸಂಕಟದಿಂದ ತುಂಬಿರುತ್ತವೆ. ದೇವರು ಈ ಲೋಕವನ್ನು ಸೃಷ್ಟಿಮಾಡಿದಂದಿನಿಂದ ಅಂಥ ಸಂಕಟ ಇದುವರೆಗೂ ಆಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ. 20 ದೇವರು ಆ ಭಯಂಕರ ಕಾಲವನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾನೆ. ಇಲ್ಲವಾಗಿದ್ದರೆ, ಯಾವ ಮನುಷ್ಯನೂ ಬದುಕಿ ಉಳಿಯಲು ಸಾಧ್ಯವಿಲ್ಲ. ಆದರೆ ದೇವರು ತಾನು ಆರಿಸಿಕೊಂಡ ವಿಶೇಷ ಜನರಿಗೆ ಸಹಾಯ ಮಾಡಲು ಆ ಸಮಯವನ್ನು ಕಡಿಮೆ ಮಾಡುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International