Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 17-19

ಆರೋನನು ಪ್ರಧಾನಯಾಜಕನಾಗಿದ್ದಾನೆಂದು ದೇವರು ಸಾಕ್ಷೀಕರಿಸಿದ್ದು

17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರ ಸಂಗಡ ಮಾತಾಡಿ ಹೀಗೆ ಮಾಡಬೇಕು: ಅವರ ಕುಲಗಳ ಪ್ರತಿಯೊಬ್ಬ ಪ್ರಧಾನನಿಂದ ಒಂದೊಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಆಯಾ ಕುಲಪ್ರಧಾನನ ಹೆಸರನ್ನು ಬರೆಯಿಸಬೇಕು. ಲೇವಿ ಕುಲದ ಕೋಲಿನ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು. ನೀನು ಆ ಕುಲಗಳನ್ನು ದೇವದರ್ಶನಗುಡಾರದಲ್ಲಿ ಅಂದರೆ ನಾನು ನಿನ್ನನ್ನು ಸಂಧಿಸುವ ಒಡಂಬಡಿಕೆ ಪೆಟ್ಟಿಗೆಯ ಮುಂದೆ ಇಡಬೇಕು. ನಾನು ಒಬ್ಬನನ್ನು ನನ್ನ ಯಾಜಕನನ್ನಾಗಿ ಆರಿಸಿಕೊಳ್ಳುವೆನು; ಅವನ ಕೋಲು ಚಿಗುರುವುದು, ಇಸ್ರೇಲ್ ಜನರು ನಿಮ್ಮ ವಿರುದ್ಧವಾಗಿ ಹೇಳುತ್ತಿರುವ ದೂರುಗಳನ್ನು ನಾನು ಹೀಗೆ ನಿಲ್ಲಿಸುವೆನು.”

ಅದಕ್ಕನುಸಾರವಾಗಿ ಮೋಶೆಯು ಇಸ್ರೇಲರ ಸಂಗಡ ಮಾತಾಡಲಾಗಿ ಅವರ ಕುಲಪ್ರಧಾನರೆಲ್ಲ ಅವನಿಗೆ, ಒಬ್ಬ ಕುಲಪ್ರಧಾನನಿಗೆ ಒಂದು ಕೋಲಿನಂತೆ, ಹನ್ನೆರಡು ಕೋಲುಗಳನ್ನು ಕೊಟ್ಟರು. ಅವುಗಳೊಡನೆ ಆರೋನನ ಕೋಲೂ ಇತ್ತು. ಮೋಶೆ ಆ ಕೋಲುಗಳನ್ನು ಒಡಂಬಡಿಕೆಯ ಗುಡಾರದಲ್ಲಿ ಯೆಹೋವನ ಮುಂದೆ ಇಟ್ಟನು.

ಮರುದಿನ ಮೋಶೆ ಗುಡಾರದೊಳಗೆ ಹೋಗಿ ನೋಡಲಾಗಿ ಲೇವಿಕುಲದ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. ಮೋಶೆ ಎಲ್ಲಾ ಕೋಲುಗಳನ್ನು ಯೆಹೋವನ ಸನ್ನಿಧಿಯಿಂದ ಹೊರಗೆ ತೆಗೆದುಕೊಂಡು ಬಂದು ಅವುಗಳನ್ನೆಲ್ಲಾ ಇಸ್ರೇಲರಿಗೆ ತೋರಿಸಿದನು. ಪ್ರಧಾನರು ಆ ಕೋಲುಗಳನ್ನು ನೋಡಿ, ತಮ್ಮತಮ್ಮ ಕೋಲುಗಳನ್ನು ತೆಗೆದುಕೊಂಡರು.

10 ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ಮತ್ತೆ ಒಡಂಬಡಿಕೆಯ ಪೆಟ್ಟಿಗೆಯ ಮುಂದಿಡು. ದಂಗೆಕೋರರಿಗೆ ಅದು ಎಚ್ಚರಿಕೆಯಾಗಿ ಅಲ್ಲೇ ಇರಬೇಕು, ಇವರು ಇನ್ನು ಮುಂದೆ ನನಗೆ ವಿರೋಧವಾಗಿ ಗುಣುಗುಟ್ಟಿ, ಮರಣಕ್ಕೆ ಗುರಿಯಾಗದಂತೆ ನೀನು ಹೀಗೆ ಮಾಡಬೇಕು” ಎಂದು ಆಜ್ಞಾಪಿಸಿದನು. 11 ಆದ್ದರಿಂದ ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.

12 ಇಸ್ರೇಲರು ಮೋಶೆಗೆ, “ನಾವೆಲ್ಲರು ಪ್ರಾಣ ಕಳೆದುಕೊಂಡು ನಾಶವಾಗುತ್ತೇವಲ್ಲಾ, ನಮ್ಮಲ್ಲಿ ಯಾರೂ ಉಳಿಯುವುದಿಲ್ಲ. 13 ಯೆಹೋವನ ಗುಡಾರದ ಹತ್ತಿರಕ್ಕೆ ಬಂದವರೆಲ್ಲರೂ ಸಾಯುತ್ತಾರಲ್ಲಾ, ನಾವೆಲ್ಲರೂ ಹಾಗೆಯೇ ಸಾಯುತ್ತೇವೋ?” ಎಂದು ಹೇಳಿದರು.

ಯಾಜಕರ ಮತ್ತು ಲೇವಿಯರ ಕಾರ್ಯಗಳು

18 ಆಗ ಯೆಹೋವನು ಆರೋನನಿಗೆ, “ಪವಿತ್ರ ವಸ್ತುಗಳ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನೂ ನಿನ್ನ ಗಂಡುಮಕ್ಕಳೂ ನಿನ್ನ ಕುಲದವರೆಲ್ಲರೂ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನು ಮತ್ತು ನಿನ್ನ ಗಂಡುಮಕ್ಕಳು ಮಾತ್ರ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ನಿನ್ನ ತಂದೆಯ ಕುಲದವರೂ ನಿನ್ನ ರಕ್ತಸಂಬಂಧಿಗಳೂ ಆಗಿರುವ ಲೇವಿಕುಲದವರನ್ನು ನಿನ್ನೊಡನೆ ಸೇರಿಸಿಕೊ; ನೀನು ಮತ್ತು ನಿನ್ನ ಗಂಡುಮಕ್ಕಳು ಒಡಂಬಡಿಕೆಯ ಮುಂದೆ ಇರುವಾಗ ಅವರು ನಿನ್ನೊಂದಿಗಿದ್ದು ನಿನಗೆ ಸಹಾಯ ಮಾಡುವರು. ಆ ಲೇವಿಯರು ನಿನಗೆ ಕಾವಲುಗಾರರಾಗಿರಬೇಕು ಅಂದರೆ ಇಡೀ ಗುಡಾರವನ್ನು ಕಾಯಬೇಕು. ಆದರೆ ಅವರು ಪವಿತ್ರವಾದ ಪಾತ್ರೆಯನ್ನಾಗಲಿ ಯಜ್ಞವೇದಿಕೆಯನ್ನಾಗಲಿ ಮುಟ್ಟಬಾರದು; ಮುಟ್ಟಿದರೆ ಅವರೂ ಸಾಯುವರು ಮತ್ತು ನೀವೂ ಸಾಯುವಿರಿ. ಅವರು ದೇವದರ್ಶನಗುಡಾರವನ್ನು ಕಾಯಬೇಕು ಮತ್ತು ಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಬೇಕು. ಬೇರೆ ಯಾರೂ ನಿನ್ನೊಂದಿಗೆ ಭಾಗಿಗಳಾಗಿರಬಾರದು.

“ನಾನು ಮತ್ತೆ ಕೋಪಗೊಂಡು ಇಸ್ರೇಲರನ್ನು ದಂಡಿಸದಂತೆ ನೀವು ಪವಿತ್ರಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕಾಯಬೇಕು. ಎಲ್ಲಾ ಇಸ್ರೇಲರಿಂದ ನಾನೇ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ನಿನಗೆ ಕೊಡಲ್ಪಟ್ಟ ಬಹುಮಾನವಾಗಿದ್ದಾರೆ. ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಲು ಅವರು ಯೆಹೋವನಿಗೆ ಪ್ರತಿಷ್ಠಿತರಾಗಿದ್ದಾರೆ. ಆದರೆ ಆರೋನನೇ, ನೀನೂ ನಿನ್ನ ಪುತ್ರರೂ ನಿಮ್ಮ ಯಾಜಕತ್ವವನ್ನು ಕಾಪಾಡಿಕೊಳ್ಳಬೇಕು. ಅಯೋಗ್ಯನಾದ ಯಾವನೂ ಯಜ್ಞವೇದಿಕೆಯ ಬಳಿ ಕೆಲಸ ಮಾಡುವುದಕ್ಕಾಗಲೀ ತೆರೆಯ ಆಚೆಯಿರುವ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವುದಕ್ಕಾಗಲೀ ನೀವು ಬಿಡಕೂಡದು. ನಾನು ನಿಮಗೆ ಅಮೂಲ್ಯವಾದ ಯಾಜಕತ್ವವನ್ನು ಕೊಟ್ಟಿದ್ದೇನೆ. ಆದರೆ ಅಯೋಗ್ಯನಾದ ಯಾವನಾದರೂ ಯಾಜಕತ್ವದ ಈ ಕರ್ತವ್ಯಗಳನ್ನು ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡುವನು.”

ಆಗ ಯೆಹೋವನು ಆರೋನನಿಗೆ ಹೀಗೆ ಹೇಳಿದನು: “ನನಗೆ ಬರಬೇಕಾಗಿರುವ ಕೊಡುಗೆಗಳನ್ನು ಮತ್ತು ಇಸ್ರೇಲರ ಪವಿತ್ರವಾದ ಎಲ್ಲಾ ಕಾಣಿಕೆಗಳನ್ನು ಕಾಯುವ ಜವಾಬ್ದಾರಿಕೆಯನ್ನು ನಾನೇ ನಿನಗೆ ವಹಿಸಿದ್ದೇನೆ. ಅವುಗಳನ್ನು ನಿನಗೂ ನಿನ್ನ ಸಂತತಿಯವರಿಗೂ ಪಾಲಾಗಿ ಕೊಟ್ಟಿದ್ದೇನೆ. ಅವು ಯಾವಾಗಲೂ ನಿಮ್ಮವೇ. ಯಜ್ಞವೇದಿಕೆಯ ಬೆಂಕಿಯಲ್ಲಿ ಹೋಮಮಾಡದೆ ಉಳಿಸಿರುವ ಮಹಾಪರಿಶುದ್ಧ ಪದಾರ್ಥಗಳಲ್ಲಿ ನಿಮಗೆ ದೊರೆಯಬೇಕಾದವುಗಳು ಯಾವುವೆಂದರೆ: ಅವರು ನನಗೆ ಕೊಡಲಿರುವ ಯಜ್ಞಗಳು, ಧಾನ್ಯಾರ್ಪಣೆಗಳು, ಪಾಪಪರಿಹಾರಕ ಯಜ್ಞಗಳು, ದೋಷಪರಿಹಾರಕ ಯಜ್ಞಗಳು ಮತ್ತು ಅಂತಹ ಪ್ರತಿಯೊಂದು ಅರ್ಪಣೆಗಳು ನಿನಗೂ ನಿನ್ನ ಗಂಡುಮಕ್ಕಳಿಗೂ ಮಹಾಪವಿತ್ರವಾಗಿವೆ. 10 ನೀವು ಮಹಾ ಪವಿತ್ರವಾದ ಸ್ಥಳದಲ್ಲಿ ಅದನ್ನು ಊಟಮಾಡಬೇಕು. ನಿಮ್ಮಲ್ಲಿರುವ ಪುರುಷರೆಲ್ಲರೂ ಅವುಗಳನ್ನು ತಿನ್ನಬಹುದು; ಅವು ಮಹಾ ಪವಿತ್ರವಾದವುಗಳೆಂದು ನೀವು ಪರಿಗಣಿಸಬೇಕು.

11 “ಅದಲ್ಲದೆ, ಅವರ ಪ್ರತಿಷ್ಠಿತಾ ಕಾಣಿಕೆಗಳು ಮತ್ತು ಇಸ್ರೇಲರ ನಿವಾಳಿಸಲ್ಪಟ್ಟ ಕಾಣಿಕೆಗಳು ನಿಮಗೆ ಸೇರಿವೆ. ಅವುಗಳನ್ನು ನಾನು ನಿನಗೂ ನಿನ್ನ ಗಂಡುಮಕ್ಕಳಿಗೂ ಹೆಣ್ಣುಮಕ್ಕಳಿಗೂ ಶಾಶ್ವತವಾದ ಪಾಲಾಗಿ ಕೊಡುವೆನು.

12 “ಇದಲ್ಲದೆ, ಇಸ್ರೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲದ ಪದಾರ್ಥಗಳಲ್ಲಿ ಅಂದರೆ ಉತ್ತಮವಾದ ಎಣ್ಣೆ, ಹೊಸ ದ್ರಾಕ್ಷಾರಸ, ಧಾನ್ಯ ಇವುಗಳನ್ನೆಲ್ಲ ನಾನು ನಿಮಗೆ ಕೊಡುತ್ತೇನೆ. 13 ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲವು ನಿಮಗೆ ಸಲ್ಲಬೇಕು. ನಿಮ್ಮ ಕುಟುಂಬಗಳಲ್ಲಿ ಶುದ್ಧರಾಗಿರುವವರೆಲ್ಲರೂ ಅವುಗಳನ್ನು ಊಟಮಾಡಬಹುದು.

14 “ಇಸ್ರೇಲರು ಯೆಹೋವನಿಗೆ ಹರಕೆ ಹೊತ್ತುಕೊಂಡು ಕೊಡುವ ಪ್ರತಿಯೊಂದೂ ನಿಮ್ಮದಾಗಿದೆ.

15 “ಮನುಷ್ಯರಲ್ಲಾಗಲಿ ಪ್ರಾಣಿಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಳ್ಳಬೇಕು. 16 ಒಂದು ತಿಂಗಳಿನ ಪ್ರಾಯಕ್ಕೆ ಬಂದಿರುವ ಎಲ್ಲರಿಂದಲೂ ನಿಗದಿಪಡಿಸಿದ ಐದು ಶೆಕೆಲ್‌ಗಳನ್ನು ಈಡಾಗಿ ತೆಗೆದುಕೊಳ್ಳಬೇಕು.

17 “ಆದರೆ ಚೊಚ್ಚಲು ಆಕಳಿಗಾಗಲಿ ಕುರಿಗಾಗಲಿ ಆಡಿಗಾಗಲಿ ಈಡನ್ನು ಕೊಡಕೂಡದು. ಆ ಪಶುಗಳು ಪವಿತ್ರವಾಗಿವೆ. ಅವುಗಳ ರಕ್ತವನ್ನು ವೇದಿಕೆಯ ಮೇಲೆ ಚೆಲ್ಲಿ ಅವುಗಳ ಕೊಬ್ಬನ್ನು ಯೆಹೋವನಿಗೆ ಮೆಚ್ಚಿಗೆಕರವಾದ ಸುಗಂಧ ವಾಸನೆಯ ತ್ಯಾಗಮಯವಾದ ಕಾಣಿಕೆಯನ್ನಾಗಿ ಹೋಮಮಾಡಿರಿ. 18 ಆದರೆ ಅವುಗಳ ಮಾಂಸದಲ್ಲಿ ನಿವಾಳಿಸಲ್ಪಡುವ ಕಾಣಿಕೆಯಂತೆ ಎದೆಯ ಭಾಗ ಮತ್ತು ಬಲತೊಡೆ ನಿಮ್ಮದಾಗಿವೆ. 19 ಇಸ್ರೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲವನ್ನು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತವಾದ ಪಾಲಾಗಿ ಅನುಗ್ರಹಿಸಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ ನಿನ್ನ ನಂತರದ ಸಂತತಿಯವರೊಡನೆಯೂ ಮಾಡಿಕೊಂಡ ಶಾಶ್ವತವಾದ ಉಪ್ಪಿನ ಒಡಂಬಡಿಕೆ.”

20 ಇದಲ್ಲದೆ ಯೆಹೋವನು ಆರೋನನಿಗೆ, “ಅವರ ಭೂಮಿಯಲ್ಲಿ ನಿನಗೆ ಯಾವ ಪಾಲೂ ದೊರೆಯುವುದಿಲ್ಲ. ಅವರ ಮಧ್ಯದಲ್ಲಿ ನೀನು ಭೂಮಿಯ ಯಾವ ಭಾಗವನ್ನೂ ಹೊಂದಿರುವುದಿಲ್ಲ. ಇಸ್ರೇಲರ ಮಧ್ಯದಲ್ಲಿ ಯೆಹೋವನಾದ ನಾನೇ ನಿನ್ನ ಪಾಲೂ ಭಾಗವೂ ಆಗಿದ್ದೇನೆ.

21 “ಲೇವಿಯರು ದೇವದರ್ಶನಗುಡಾರಕ್ಕೋಸ್ಕರ ಮಾಡುವ ಭಾರವಾದ ಕೆಲಸಕ್ಕೆ ಪ್ರತಿಫಲವಾಗಿ ಪ್ರತಿಯೊಬ್ಬ ಇಸ್ರೇಲನ ದಶಾಂಶವನ್ನು ನಾನು ಲೇವಿಯರಿಗೆ ಅವರ ಪಾಲಾಗಿ ಕೊಡುತ್ತಿದ್ದೇನೆ. 22 ಈಗಿನಿಂದ ಇಸ್ರೇಲರು ದೇವದರ್ಶನಗುಡಾರದೊಳಗೆ ಅತಿಕ್ರಮಿಸಿ ಬರಕೂಡದು; ಬಂದರೆ ತಮ್ಮ ಮೇಲೆ ದಂಡನೆಯನ್ನು ಬರಮಾಡಿಕೊಂಡು ಸಾಯುವರು. 23 ದೇವದರ್ಶನಗುಡಾರಕ್ಕೋಸ್ಕರ ಲೇವಿಯರು ಮಾತ್ರ ಕೆಲಸ ಮಾಡಬೇಕು. ದೇವದರ್ಶನಗುಡಾರದಲ್ಲಿ ಏನಾದರೂ ಅತಿಕ್ರಮಣ ನಡೆದರೆ ಇಸ್ರೇಲರ ದಂಡನೆಯನ್ನು ಅವರೇ ಪಡೆಯುವರು. ಈಗಿನಿಂದ ಇದೇ ಶಾಶ್ವತ ಕಟ್ಟಳೆ. ಇತರ ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ಭೂಮಿಯಲ್ಲಿ ಲೇವಿಯರಿಗೆ ಯಾವ ಪಾಲೂ ದೊರೆಯುವುದಿಲ್ಲ. 24 ಇಸ್ರೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಪಾಲನ್ನು ಲೇವಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ. ಇವರಿಗೆ ಇಸ್ರೇಲರೊಂದಿಗೆ ಪಾಲು ದೊರೆಯುವುದಿಲ್ಲವೆಂದು ನಾನು ಲೇವಿಯರ ಕುರಿತು ಹೇಳಿದ ಮಾತಿಗೆ ಇದೇ ಕಾರಣ” ಎಂದು ಹೇಳಿದನು.

25 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 26 “ನೀನು ಲೇವಿಯರಿಗೆ ಇದನ್ನು ತಿಳಿಸಬೇಕು: ಇಸ್ರೇಲರು ತಮ್ಮ ಆದಾಯದಲ್ಲಿ ಕೊಡುವ ದಶಾಂಶವನ್ನು ನಿಮ್ಮ ಪಾಲೆಂದು ನಾನು ನಿಗದಿಪಡಿಸಿದ್ದೇನೆ. ಇಸ್ರೇಲರು ದಶಾಂಶ ಕೊಟ್ಟಾಗ ನೀವು ಆ ದಶಾಂಶದಲ್ಲಿ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಸಲ್ಲಿಸಬೇಕು. 27 ನೀವು ಹೀಗೆ ಸಮರ್ಪಿಸಿದ ಹತ್ತನೆಯ ಪಾಲು ಕಣದಲ್ಲಿನ ದವಸವನ್ನೂ ದ್ರಾಕ್ಷಿಆಲೆಯಿಂದ ರಸವನ್ನೂ ಕೊಟ್ಟಂತೆ ನಿಮ್ಮ ಲೆಕ್ಕದಲ್ಲಿ ಎಣಿಸಲ್ಪಡುವುದು. 28 ಇಸ್ರೇಲರಿಂದ ನಿಮಗೆ ಸಲ್ಲುವ ಹತ್ತನೆಯ ಪಾಲಿನಲ್ಲಿ ನೀವು ಯೆಹೋವನಿಗೋಸ್ಕರ ಹತ್ತನೆಯ ಭಾಗವನ್ನು ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು. 29 ಇಸ್ರೇಲರು ನಿಮಗೆ ಕೊಡುವ ಸಕಲ ಪದಾರ್ಥಗಳಿಂದ ನೀವು ಯೆಹೋವನಿಗೆ ಕೊಡಬೇಕಾಗಿರುವ ಪಾಲನ್ನು ಮತ್ತು ಪ್ರತಿಷ್ಠಿಸಲ್ಪಟ್ಟಿರುವ ಉತ್ತಮ ಭಾಗವನ್ನು ನೀವು ಪ್ರತ್ಯೇಕವಾಗಿಡಬೇಕು.

30 “ಮೋಶೆಯೇ, ಲೇವಿಯರಿಗೆ ಹೀಗೆ ಹೇಳು: ಆ ಕಾಣಿಕೆಗಳಲ್ಲಿ ಉತ್ತಮವಾದ ಭಾಗವನ್ನು ನೀವು ಯೆಹೋವನಿಗೆ ಕೊಡುವಾಗ, ಲೇವಿಯರಾದ ನಿಮಗೆ ಅದು ಕಣದ ಉತ್ಪಾದನೆಯಂತೆಯೂ ದ್ರಾಕ್ಷಿಆಲೆಯ ಉತ್ಪಾದನೆಯಂತೆಯೂ ಪರಿಗಣಿಸಲ್ಪಡುವುದು. 31 ಉಳಿದದ್ದನ್ನು ನೀವು ಮತ್ತು ನಿಮ್ಮ ಕುಟುಂಬದವರು ಎಲ್ಲಿ ಬೇಕಾದರೂ ತಿನ್ನಬಹುದು. ನೀವು ದೇವದರ್ಶನಗುಡಾರದಲ್ಲಿ ಮಾಡುವ ಕೆಲಸಕ್ಕೆ ಇದು ನಿಮಗೆ ಪ್ರತಿಫಲವಾಗಿದೆ. 32 ನೀವು ಯಾವಾಗಲೂ ಉತ್ತಮ ಭಾಗವನ್ನು ಯೆಹೋವನಿಗೆ ಕೊಟ್ಟರೆ, ಸಂಕಟದ ದಂಡನೆಯಿಂದ ತಪ್ಪಿಸಿಕೊಳ್ಳುವಿರಿ. ಇಸ್ರೇಲರು ಕೊಟ್ಟ ಪವಿತ್ರವಾದ ಕಾಣಿಕೆಗಳಿಗೆ ನೀವು ಅಪಮಾನ ಮಾಡುವುದಿಲ್ಲ ಮತ್ತು ನೀವು ಸಾಯುವುದಿಲ್ಲ.”

ಕೆಂಪು ಹಸುವಿನ ಬೂದಿ

19 ಯೆಹೋವನು ಮೋಶೆ ಮತ್ತು ಆರೋನರೊಡನೆ ಮಾತಾಡಿ ಹೀಗೆಂದನು: “ಯೆಹೋವನು ಆಜ್ಞಾಪಿಸಿದ ಸಂಪ್ರದಾಯದ ನಿಯಮವಿದು. ಯಾವ ದೋಷವಿಲ್ಲದ ಕೆಂಪು ಹಸುವನ್ನು ನಿನಗೆ ತಂದುಕೊಡುವಂತೆ ಇಸ್ರೇಲರಿಗೆ ಹೇಳು. ಆ ಹಸುವಿನಲ್ಲಿ ಯಾವ ಗಾಯಗಳಿರಬಾರದು ಮತ್ತು ಆ ಹಸುವು ಎಂದಿಗೂ ನೊಗವನ್ನು ಹೊತ್ತಿರಬಾರದು. ಅದನ್ನು ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಿರಿ. ಅವನು ಅದನ್ನು ಪಾಳೆಯದ ಹೊರಗೆ ಹೊಡಿಸಿಕೊಂಡು ಹೋಗಿ ತನಗೆದುರಾಗಿಯೇ ಒಬ್ಬನ ಕೈಯಿಂದ ವಧೆ ಮಾಡಿಸಬೇಕು. ಬಳಿಕ ಅವನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿಮಿಕಿಸಬೇಕು. ಬಳಿಕ ಅವನು ಆ ಹಸುವನ್ನು ಚರ್ಮ, ಮಾಂಸ, ರಕ್ತ ಮತ್ತು ಕಲ್ಮಶಗಳ ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಬೇಕು. ಯಾಜಕನು ದೇವದಾರು ಮರದ ಕಟ್ಟಿಗೆಯನ್ನೂ ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನೂ ಕೆಂಪು ದಾರವನ್ನೂ ತೆಗೆದುಕೊಂಡು, ಉರಿಯುತ್ತಿರುವ ಆ ಹಸುವಿನ ಮೇಲೆ ಎಸೆಯಬೇಕು. ಆ ಯಾಜಕನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿದ ನಂತರ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು. ಆ ಹಸುವನ್ನು ಸುಟ್ಟು ಹಾಕಿದವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿಕೊಳ್ಳಬೇಕು; ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಆಗ ಶುದ್ಧನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಇಸ್ರೇಲರ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಆ ಬೂದಿಯನ್ನು ಉಪಯೋಗಿಸಬೇಕು. ಅದು ದೋಷಪರಿಹಾರಕವಾದದ್ದು.

10 “ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಇದು ಇಸ್ರೇಲರಿಗೂ ಅವರ ಮಧ್ಯದಲ್ಲಿ ಇಳಿದುಕೊಂಡಿರುವ ಪರದೇಶಸ್ಥರಿಗೂ ಶಾಶ್ವತ ನಿಯಮ. 11 ಯಾವನಾದರೂ ಮನುಷ್ಯನ ಶವವನ್ನು ಮುಟ್ಟಿದರೆ, ಏಳು ದಿನಗಳವರೆಗೆ ಅಶುದ್ಧನಾಗಿರುವನು. 12 ಅವನು ಶುದ್ಧೀಕರಣದ ನೀರಿನಿಂದ ಮೂರನೆಯ ದಿನದಲ್ಲಿ ಮತ್ತು ತಿರುಗಿ ಏಳನೆಯ ದಿನದಲ್ಲಿ ತನ್ನನ್ನು ಶುದ್ಧೀಕರಿಸಿಕೊಳ್ಳಬೇಕು. ಆಗ ಅವನು ಶುದ್ಧನಾಗಿರುವನು. 13 ಒಬ್ಬನು ಮನುಷ್ಯನ ಶವವನ್ನು ಮುಟ್ಟಿ ತನ್ನನ್ನು ಶುದ್ಧೀಕರಿಸಿಕೊಳ್ಳದೆ ಹೋದರೆ ಅವನು ಯೆಹೋವನ ಪವಿತ್ರ ಗುಡಾರವನ್ನು ಅಶುದ್ಧಮಾಡುತ್ತಾನೆ. ಆದ್ದರಿಂದ ಆ ವ್ಯಕ್ತಿಯನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧೀಕರಣದ ವಿಶೇಷ ನೀರು ಅವನ ಮೇಲೆ ಚಿಮಿಕಿಸಲ್ಪಡದ ಕಾರಣ ಅವನು ಅಶುದ್ಧನಾಗಿಯೇ ಇರುವನು. ಅವನ ಅಶುದ್ಧತ್ವ ಅವನಲ್ಲಿ ನೆಲೆಸುವುದು. ಅವನು ಅಶುದ್ಧನಾಗಿಯೇ ಇರುವನು.

14 “ಯಾವನಾದರೂ ಗುಡಾರದಲ್ಲಿ ಸತ್ತರೆ ಅನುಸರಿಸಬೇಕಾದ ನಿಯಮವಿದು: ಒಬ್ಬನು ಗುಡಾರದಲ್ಲಿ ಸತ್ತರೆ, ಆ ಗುಡಾರವನ್ನು ಪ್ರವೇಶಿಸುವ ಪ್ರತಿಯೊಬ್ಬನು ಮತ್ತು ಆ ಗುಡಾರದಲ್ಲಿರುವ ಪ್ರತಿಯೊಬ್ಬನು ಅಶುದ್ಧನಾಗುವನು. ಅವರು ಏಳು ದಿನಗಳವರೆಗೆ ಅಶುದ್ಧರಾಗಿರುವರು. 15 ಮತ್ತು ಮುಚ್ಚಳವಿಲ್ಲದಿರುವ ಪ್ರತಿಯೊಂದು ಪಾತ್ರೆಯೂ ಅಶುದ್ಧವಾಗಿರುವುದು. 16 ಹೊರಗೆ ಹೋಗಿರುವವನು ಯುದ್ಧದಲ್ಲಿ ಸತ್ತವನ ಶವವನ್ನಾಗಲಿ ಸಹಜವಾಗಿ ಸತ್ತವನ ಶವವನ್ನಾಗಲಿ ಮನುಷ್ಯನ ಮೂಳೆಯನ್ನಾಗಲಿ ಅಥವಾ ಸಮಾಧಿಯನ್ನಾಗಲಿ ಮುಟ್ಟಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರವನು.

17 “ಆದ್ದರಿಂದ ಅಶುದ್ಧ ವ್ಯಕ್ತಿಯನ್ನು ಶುದ್ಧೀಕರಿಸುವುದಕ್ಕಾಗಿ ಶುದ್ಧೀಕರಣ ಯಜ್ಞದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ತೆಗೆದುಕೊಂಡು ಹರಿಯುವ ನೀರನ್ನು ಅದರ ಮೇಲೆ ಸುರಿಯಬೇಕು. 18 ಆಗ ಶುದ್ಧನಾಗಿರುವ ಒಬ್ಬನು ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನು ಆ ನೀರಿನಲ್ಲಿ ಅದ್ದಿ ಗುಡಾರದ ಮೇಲೆಯೂ ಪಾತ್ರೆಗಳ ಮೇಲೆಯೂ ಮತ್ತು ಅದರೊಳಗಿದ್ದ ವ್ಯಕ್ತಿಗಳ ಮೇಲೆಯೂ ಚಿಮಿಕಿಸಬೇಕು. ಸತ್ತವನ ದೇಹವನ್ನು ಮುಟ್ಟಿದವನಿಗೂ ಯುದ್ಧದಲ್ಲಿ ಕೊಲ್ಲಲ್ಪಟ್ಟವನ ದೇಹವನ್ನು ಮುಟ್ಟಿದವನಿಗೂ ಸತ್ತವನ ಮೂಳೆಗಳನ್ನು ಮುಟ್ಟಿದವನಿಗೂ ನೀವು ಹೀಗೆ ಮಾಡಲೇಬೇಕು.

19 “ಶುದ್ಧನಾಗಿರುವವನು ಮೂರನೆಯ ದಿನದಲ್ಲಿಯೂ ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಚಿಮಿಕಿಸಬೇಕು. ಹೀಗೆ ಅವನು ಏಳನೆಯ ದಿನದಲ್ಲಿ ಶುದ್ಧನಾಗುವನು. ಬಳಿಕ ಅಶುದ್ಧನಾದವನು ತನ್ನ ಬಟ್ಟೆಯನ್ನು ತೊಳೆದುಕೊಳ್ಳಬೇಕು.

20 “ಅಶುದ್ಧನಾಗಿದ್ದರೂ ತನ್ನನ್ನು ಶುದ್ಧಮಾಡಿಕೊಳ್ಳದವನು ಯೆಹೋವನ ಗುಡಾರವನ್ನು ಅಶುದ್ಧಮಾಡಿದವನಾಗಿರುತ್ತಾನೆ. ಆದ್ದರಿಂದ ಅವನನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧಪಡಿಸಿಕೊಳ್ಳುವ ನೀರನ್ನು ಚಿಮಿಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ. 21 ಇದು ನಿಮಗೆ ಶಾಶ್ವತನಿಯಮ. ಶುದ್ಧಪಡಿಸುವ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಮತ್ತು ಆ ನೀರನ್ನು ಯಾವನಾದರೂ ಮುಟ್ಟಿದರೆ, ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು. 22 ಅಶುದ್ಧನಾದವನು ಮುಟ್ಟುವುದೆಲ್ಲಾ ಅಶುದ್ಧವಾಗುತ್ತದೆ. ಅಲ್ಲದೆ ಅವನನ್ನು ಮಟ್ಟುವವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.”

ಮಾರ್ಕ 6:30-56

ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮತ್ತಾಯ 14:13-21; ಲೂಕ 9:10-17; ಯೋಹಾನ 6:1-14)

30 ಯೇಸು ಉಪದೇಶಿಸಲು ಕಳುಹಿಸಿದ್ದ ಅಪೊಸ್ತಲರು ಮರಳಿಬಂದು ತಾವು ಮಾಡಿದ ಮತ್ತು ಉಪದೇಶಿಸಿದ ಸಂಗತಿಗಳನ್ನೆಲ್ಲ ಆತನಿಗೆ ತಿಳಿಸಿದರು. 31 ಯೇಸು ಮತ್ತು ಆತನ ಶಿಷ್ಯರು ಜನರಿಂದ ತುಂಬಿದ ಸ್ಥಳದಲ್ಲಿದ್ದರು. ಅಲ್ಲಿ ಅನೇಕಾನೇಕ ಜನರಿದ್ದುದರಿಂದ ಯೇಸು ಮತ್ತು ಆತನ ಶಿಷ್ಯರಿಗೆ ಊಟಮಾಡಲು ಸಹ ಸಮಯವಿರಲಿಲ್ಲ. ಯೇಸು ತನ್ನ ಶಿಷ್ಯರಿಗೆ, “ನನ್ನೊಂದಿಗೆ ಬನ್ನಿ. ನಾವು ಪ್ರಶಾಂತವಾಗಿರುವ ಸ್ಥಳಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಳ್ಳೋಣ” ಎಂದು ಹೇಳಿದನು.

32 ಆದ್ದರಿಂದ ಯೇಸು ಮತ್ತು ಆತನ ಶಿಷ್ಯರು ಜನರಿಲ್ಲದ ಸ್ಥಳಕ್ಕೆ ದೋಣಿಯಲ್ಲಿ ಪ್ರತ್ಯೇಕವಾಗಿ ಹೊರಟರು. 33 ಆದರೆ ಅವರು ಹೋಗುತ್ತಿರುವುದನ್ನು ಅನೇಕ ಜನರು ನೋಡಿದರು. ಆತನು ಯೇಸುವೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಆತನು ಹೋಗುತ್ತಿರುವ ಸ್ಥಳಕ್ಕೆ ಎಲ್ಲಾ ಊರುಗಳಿಂದ ಜನರು ಓಡಿಹೋಗಿ, ಆತನು ಅಲ್ಲಿಗೆ ಬರುವುದಕ್ಕೆ ಮುಂಚೆಯೇ ಅಲ್ಲಿದ್ದರು. 34 ಯೇಸು ಅಲ್ಲಿಗೆ ಬಂದಾಗ, ಅನೇಕ ಜನರು ತನಗಾಗಿ ಕಾಯುತ್ತಿರುವುದನ್ನು ನೋಡಿದನು. ಅವರು ಕುರುಬನಿಲ್ಲದ ಕುರಿಗಳಂತೆ ಇರುವುದನ್ನು ಕಂಡು ದುಃಖಗೊಂಡು ಅವರಿಗೆ ಅನೇಕ ಸಂಗತಿಗಳನ್ನು ಉಪದೇಶಿಸಿದನು.

35 ಅಂದು ಬಹಳ ಹೊತ್ತಾಯಿತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸಿಸುತ್ತಿಲ್ಲ. ಈಗಾಗಲೇ ಬಹಳ ಹೊತ್ತಾಗಿದೆ. 36 ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ತೋಟಗಳಿಗೂ ಪಟ್ಟಣಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ” ಎಂದು ಹೇಳಿದರು.

37 ಆದರೆ ಯೇಸು, “ನೀವೇ ಅವರಿಗೆ ಊಟ ಕೊಡಿ” ಎಂದು ಉತ್ತರಕೊಟ್ಟನು.

ಶಿಷ್ಯರು ಯೇಸುವಿಗೆ, “ಈ ಜನರಿಗೆಲ್ಲ ಬೇಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರೋಣ! ಅವರಿಗೆ ಬೇಕಾಗುವಷ್ಟು ರೊಟ್ಟಿಯನ್ನು ಕೊಂಡುಕೊಂಡು ಬರಬೇಕಾದರೆ ನಮಗೆ ಇನ್ನೂರು ದಿನಾರಿ ನಾಣ್ಯ[a] ಗಳಾದರೂ ಬೇಕು!” ಎಂದು ಹೇಳಿದರು.

38 ಯೇಸು ಶಿಷ್ಯರಿಗೆ, “ಈಗ ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಎಂದು ಹೇಳಿದನು.

ಶಿಷ್ಯರು ಹೋಗಿ ರೊಟ್ಟಿಗಳನ್ನು ಎಣಿಸಿ ಬಂದು, “ನಮ್ಮ ಬಳಿ ಐದು ರೊಟ್ಟಿಗಳಿವೆ ಮತ್ತು ಎರಡು ಮೀನುಗಳಿವೆ” ಎಂದು ಹೇಳಿದರು.

39 ಆಗ ಯೇಸು ಶಿಷ್ಯರಿಗೆ, “ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳಲು ಜನರಿಗೆ ತಿಳಿಸಿ” ಎಂದು ಹೇಳಿದನು. 40 ಅಂತೆಯೇ ಜನರೆಲ್ಲರೂ ಸಾಲುಸಾಲಾಗಿ ಕುಳಿತುಕೊಂಡರು. ಪ್ರತಿಯೊಂದು ಸಾಲಿನಲ್ಲಿಯೂ ಐವತ್ತರಿಂದ ನೂರು ಜನರಿದ್ದರು.

41 ಯೇಸು ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ರೊಟ್ಟಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಬಳಿಕ ರೊಟ್ಟಿಯನ್ನು ಮುರಿದು, ಅದನ್ನು ಶಿಷ್ಯರಿಗೆ ಕೊಟ್ಟು ಜನರಿಗೆಲ್ಲ ಹಂಚಲು ತಿಳಿಸಿದನು. ಅಂತೆಯೇ ಎರಡು ಮೀನುಗಳನ್ನು ಮುರಿದು ಜನರಿಗೆ ಹಂಚಬೇಕೆಂದು ಶಿಷ್ಯರಿಗೆ ಕೊಟ್ಟನು.

42 ಜನರೆಲ್ಲರೂ ಊಟಮಾಡಿ ತೃಪ್ತರಾದರು. 43 ಬಳಿಕ ಜನರು ತಿನ್ನಲಾರದೆ ಉಳಿಸಿದ ರೊಟ್ಟಿ ಮತ್ತು ಮೀನುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 44 ಅಂದು ಸುಮಾರು ಐದು ಸಾವಿರ ಜನ ಊಟಮಾಡಿದರು.

ನೀರಿನ ಮೇಲೆ ಕಾಲ್ನಡಿಗೆ

(ಮತ್ತಾಯ 14:22-33; ಯೋಹಾನ 6:15-21)

45 ಆಗ ಯೇಸು ತನ್ನ ಶಿಷ್ಯರಿಗೆ ದೋಣಿಯೊಳಕ್ಕೆ ಹೋಗಲು ತಿಳಿಸಿದನು. ಸರೋವರದ ಆಚೆಯ ದಡದಲ್ಲಿದ್ದ ಬೆತ್ಸಾಯಿದಕ್ಕೆ ಹೋಗಬೇಕೆಂತಲೂ ಸ್ವಲ್ಪ ಸಮಯದ ನಂತರ ತಾನು ಬರುವುದಾಗಿಯೂ ಯೇಸು ಅವರಿಗೆ ಹೇಳಿ ಅವರನ್ನು ಕಳುಹಿಸಿದನು. ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಜನರಿಗೆ ತಿಳಿಸುವುದಕ್ಕಾಗಿ ಯೇಸು ಅಲ್ಲಿ ಉಳಿದುಕೊಂಡನು. 46 ಯೇಸು ಜನರನ್ನು ಬೀಳ್ಕೊಟ್ಟ ಮೇಲೆ ಪ್ರಾರ್ಥಿಸುವುದಕ್ಕಾಗಿ ಬೆಟ್ಟದ ಮೇಲಕ್ಕೆ ಹೋದನು.

47 ಅಂದು ರಾತ್ರಿ ದೋಣಿಯು ಸರೋವರದ ಮಧ್ಯದಲ್ಲಿಯೇ ಇದ್ದಿತು. ಯೇಸು ಒಬ್ಬನೇ ದಡದ ಮೇಲಿದ್ದನು. 48 ದೋಣಿಯು ಸರೋವರದ ಮೇಲೆ ದೂರದಲ್ಲಿರುವುದನ್ನೂ ಶಿಷ್ಯರು ಅದನ್ನು ದಡಕ್ಕೆ ಸಾಗಿಸಲು ಬಹಳ ಕಷ್ಟಪಡುತ್ತಿರುವುದನ್ನೂ ಯೇಸು ನೋಡಿದನು. ಗಾಳಿಯು ಅವರಿಗೆ ಪ್ರತಿಕೂಲವಾಗಿ ಬೀಸುತ್ತಿತ್ತು. ಮುಂಜಾನೆ ಮೂರರಿಂದ ಆರು ಗಂಟೆಯ ಸಮಯದಲ್ಲಿ, ಯೇಸು ನೀರಿನ ಮೇಲೆ ನಡೆದುಕೊಂಡು ದೋಣಿಯ ಸಮೀಪಕ್ಕೆ ಬಂದು ಅವರನ್ನು ಹಾದು ಮುಂದೆ ಹೋಗುವುದರಲ್ಲಿದ್ದನು. 49 ಆದರೆ ನೀರಿನ ಮೇಲೆ ನಡೆಯುತ್ತಿದ್ದ ಆತನನ್ನು ಕಂಡ ಶಿಷ್ಯರು ಆತನನ್ನು ಭೂತವೆಂದು ಭ್ರಮಿಸಿಕೊಂಡು ಭಯದಿಂದ ಕಿರುಚಿದರು. 50 ಶಿಷ್ಯರೆಲ್ಲರೂ ಯೇಸುವನ್ನು ನೋಡಿ ಬಹಳವಾಗಿ ಹೆದರಿದ್ದರು. ಆದರೆ ಯೇಸು ಅವರೊಂದಿಗೆ ಮಾತನಾಡಿ, “ಚಿಂತಿಸದಿರಿ! ನಾನೇ! ಅಂಜಬೇಡಿ” ಎಂದು ಹೇಳಿದನು. 51 ನಂತರ ಯೇಸು ತನ್ನ ಶಿಷ್ಯರಿದ್ದ ದೋಣಿಯೊಳಕ್ಕೆ ಹತ್ತಿದನು. ಆಗ ಗಾಳಿಯು ನಿಂತುಹೋಯಿತು. ಶಿಷ್ಯರಿಗೆ ಬಹಳ ಆಶ್ಚರ್ಯವಾಯಿತು. 52 ಯೇಸು ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದನ್ನು ಅವರು ನೋಡಿದ್ದರೂ ಅದರ ಅರ್ಥವನ್ನು ಗ್ರಹಿಸಲಿಲ್ಲ. ಅವರು ಅದನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥರಾಗಿರಲಿಲ್ಲ.

ಅನೇಕ ರೋಗಿಗಳಿಗೆ ಯೇಸುವಿನಿಂದ ಸ್ವಸ್ಥತೆ

(ಮತ್ತಾಯ 14:34-36)

53 ಯೇಸುವಿನ ಶಿಷ್ಯರು ಸರೋವರವನ್ನು ದಾಟಿ ಗೆನಸರೇತ್ ಊರಿಗೆ ಬಂದು ದೋಣಿಯನ್ನು ತೀರದಲ್ಲಿ ಕಟ್ಟಿದರು. 54 ಅವರು ದೋಣಿಯಿಂದ ಹೊರಕ್ಕೆ ಬಂದಾಗ ಜನರು ಯೇಸುವನ್ನು ಗುರುತು ಹಿಡಿದರು. 55 ಯೇಸು ಬಂದಿರುವ ಸುದ್ದಿಯನ್ನು ಆ ಪ್ರದೇಶದಲ್ಲಿರುವ ಜನರಿಗೆಲ್ಲಾ ತಿಳಿಸುವುದಕ್ಕಾಗಿ ಅವರು ಓಡಿಹೋದರು. ಯೇಸು ಹೋದ ಸ್ಥಳಗಳಿಗೆಲ್ಲ ಜನರು ಕಾಯಿಲೆಯ ಜನರನ್ನು ಹಾಸಿಗೆಗಳ ಮೇಲೆ ತಂದರು. 56 ಯೇಸು ಆ ಪ್ರದೇಶದಲ್ಲಿದ್ದ ಪಟ್ಟಣಗಳಿಗೆ, ನಗರಗಳಿಗೆ ಮತ್ತು ತೋಟಗಳಿಗೆ ಹೋದನು. ಆತನು ಹೋದ ಕಡೆಗಳಲ್ಲೆಲ್ಲಾ ಜನರು ಮಾರುಕಟ್ಟೆಯ ಸ್ಥಳಗಳಿಗೆ ಕಾಯಿಲೆಯ ಜನರನ್ನು ಕರೆತಂದರು. ಅವರು ಯೇಸುವಿಗೆ, ನಿನ್ನ ಮೇಲಂಗಿಯ ಅಂಚನ್ನಾದರೂ ಮುಟ್ಟಲು ತಮಗೆ ಅವಕಾಶ ಕೊಡಬೇಕೆಂದು ಬೇಡಿಕೊಂಡರು. ಆತನನ್ನು ಸ್ಪರ್ಶಿಸಿದ ಜನರೆಲ್ಲರಿಗೂ ಗುಣವಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International