Old/New Testament
ಪಸ್ಕಹಬ್ಬ
9 ಇಸ್ರೇಲರು ಈಜಿಪ್ಟ್ ದೇಶವನ್ನು ಬಿಟ್ಟುಬಂದ ನಂತರ ಎರಡನೆ ವರ್ಷದ ಮೊದಲನೆಯ ತಿಂಗಳಲ್ಲಿ ಸೀನಾಯಿ ಮರುಭೂಮಿಯಲ್ಲಿ ಯೆಹೋವನು ಮೋಶೆಯೊಡನೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರು ನೇಮಕವಾದ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು. 3 ಅವರು ಈ ತಿಂಗಳ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆ ಪಸ್ಕದ ಊಟವನ್ನು ಮಾಡಬೇಕು. ಅವರು ಇದನ್ನು ಪಸ್ಕಹಬ್ಬದ ಎಲ್ಲಾ ನಿಯಮಗಳ ಪ್ರಕಾರ ನೇಮಕವಾದ ಕಾಲದಲ್ಲಿ ಮಾಡಬೇಕು.”
4 ಆದ್ದರಿಂದ ಮೋಶೆ ಇಸ್ರೇಲರಿಗೆ, ಪಸ್ಕಹಬ್ಬವನ್ನು ಆಚರಿಸಬೇಕೆಂದು ಹೇಳಿದನು. 5 ಜನರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆಯ ವೇಳೆಯಲ್ಲಿ ಸೀನಾಯಿ ಮರುಭೂಮಿಯಲ್ಲಿ ಇದನ್ನು ಆಚರಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಪ್ರತಿಯೊಂದನ್ನೂ ಮಾಡಿದರು.
6 ಆದರೆ ಕೆಲವು ಜನರು ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿನದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ. ಆದ್ದರಿಂದ ಅವರು ಆ ದಿನ ಮೋಶೆ ಆರೋನರ ಬಳಿಗೆ ಬಂದು, 7 “ನಾವು ಮನುಷ್ಯ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿದ್ದೇವೆ. ಆದರೆ ನೇಮಕವಾದ ಕಾಲದಲ್ಲಿ ಯೆಹೋವನ ಪಸ್ಕಹಬ್ಬದ ಯಜ್ಞವನ್ನು ಇತರ ಇಸ್ರೇಲರೊಡನೆ ಅರ್ಪಿಸುವುದಕ್ಕೆ ಸಾಧ್ಯವಿಲ್ಲವೇ?” ಎಂದು ಕೇಳಿದರು.
8 ಮೋಶೆಯು ಅವರಿಗೆ, “ಇಲ್ಲೇ ಇರಿ. ಇದರ ವಿಷಯದಲ್ಲಿ ಯೆಹೋವನು ಏನು ಹೇಳುತ್ತಾನೆಂದು ನಾನು ಆತನನ್ನು ವಿಚಾರಿಸುತ್ತೇನೆ” ಎಂದು ಹೇಳಿದನು.
9 ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನಿಮ್ಮಲ್ಲಿಯಾಗಲಿ ನಿಮ್ಮ ಸಂತತಿಯವರಲ್ಲಿಯಾಗಲಿ ಮನುಷ್ಯಶವ ಸೋಂಕಿದ್ದರಿಂದ ಅಶುದ್ಧರಾದವರೂ ದೂರಪ್ರಯಾಣದಲ್ಲಿರುವವರೂ ಸಹ ಯೆಹೋವನ ಪಸ್ಕಹಬ್ಬವನ್ನು ಆಚರಿಸಲೇಬೇಕು. 11 ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದ ನಸುಸಂಜೆ ವೇಳೆಯಲ್ಲಿ ಪಸ್ಕಹಬ್ಬವನ್ನು ಆಚರಿಸಬೇಕು. ಆ ಸಮಯದಲ್ಲಿ ಅವರು ಪಸ್ಕದ ಕುರಿಮರಿಯ ಮಾಂಸವನ್ನು ಹುಳಿಯಿಲ್ಲದ ರೊಟ್ಟಿಗಳೊಡನೆ ಮತ್ತು ಕಹಿಯಾದ ಸೊಪ್ಪುಗಳೊಡನೆ ಊಟಮಾಡಬೇಕು. 12 ಅದರಲ್ಲಿ ಯಾವುದನ್ನೂ ಮರುದಿನದವರೆಗೆ ಇಡಬಾರದು. ಅವರು ಅದೆಲ್ಲವನ್ನು ತಿಂದುಬಿಡಬೇಕು. ಆ ಕುರಿಮರಿಯ ಎಲುಬುಗಳನ್ನು ಮುರಿಯಬಾರದು. ಅವರು ಪಸ್ಕಹಬ್ಬದ ವಿಷಯವಾಗಿ ನೇಮಕವಾಗಿರುವ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. 13 ಆದರೆ ಯಾವನಾದರೂ ಶುದ್ಧನಾಗಿದ್ದರೂ ಪ್ರಯಾಣದಲ್ಲಿಲ್ಲದಿದ್ದರೂ ಪಸ್ಕಹಬ್ಬವನ್ನು ಆಚರಿಸದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು. ಅವನು ಯೆಹೋವನಿಂದ ನೇಮಕವಾದ ಯಜ್ಞವನ್ನು ಸರಿಯಾದ ಕಾಲದಲ್ಲಿ ಸಮರ್ಪಿಸದೆ ಹೋದದ್ದರಿಂದ ಅವನು ದೋಷಿಯಾಗಿದ್ದಾನೆ ಮತ್ತು ಅವನಿಗೆ ಶಿಕ್ಷೆಯಾಗಬೇಕು.
14 “ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶಸ್ಥನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ, ಅದರ ವಿಷಯವಾದ ನಿಯಮಗಳ ಪ್ರಕಾರವೇ ಅದನ್ನು ಆಚರಿಸಬೇಕು. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ವಿಧಿಯಿರಬೇಕು.”
ಮೇಘಸ್ತಂಭ ಮತ್ತು ಅಗ್ನಿಸ್ತಂಭ
15 ಇಸ್ರೇಲರು ಒಡಂಬಡಿಕೆಯ ಗುಡಾರವಾದ ಪವಿತ್ರ ಗುಡಾರವನ್ನು ಎತ್ತಿ ನಿಲ್ಲಿಸಿದ ದಿನದಲ್ಲಿ ಮೇಘವು ಅದರ ಮೇಲೆ ಮುಚ್ಚಿಕೊಂಡಿತು ಮತ್ತು ಅದು ರಾತ್ರಿಯಲ್ಲಿ ಬೆಂಕಿಯಂತೆ ಕಾಣಿಸುತ್ತಿತ್ತು. 16 ಹೀಗೆ ಮೇಘವು ಯಾವಾಗಲೂ ದೇವದರ್ಶನಗುಡಾರವನ್ನು ಮುಚ್ಚಿಕೊಂಡಿರುವುದು. ರಾತ್ರಿವೇಳೆಯಲ್ಲಿ ಆ ಮೇಘವು ಬೆಂಕಿಯಂತೆ ಕಾಣಿಸುವುದು. 17 ಆ ಮೇಘವು ಪವಿತ್ರ ಗುಡಾರದಿಂದ ಮೇಲಕ್ಕೆ ಎದ್ದಾಗಲೆಲ್ಲಾ ಇಸ್ರೇಲರು ಮುಂದಕ್ಕೆ ಪ್ರಯಾಣಮಾಡುವರು. ಆ ಮೇಘವು ನಿಂತಲ್ಲೆಲ್ಲಾ ಇಸ್ರೇಲರು ಪಾಳೆಯ ಮಾಡಿಕೊಳ್ಳುವರು. 18 ಇಸ್ರೇಲರು ಯೆಹೋವನ ಸೂಚನೆಯನ್ನು ಹೊಂದಿದ ಮೇಲೆ ಪ್ರಯಾಣಮಾಡುವರು. ಆ ಮೋಡವು ಪವಿತ್ರಗುಡಾರದ ಮೇಲಿರುವ ತನಕ ಅವರು ತಾವಿರುವಲ್ಲಿಯೇ ಇರುವರು. 19 ಕೆಲವು ಬಾರಿ ಆ ಮೇಘವು ಬಹುದಿನಗಳವರೆಗೂ ಪವಿತ್ರಗುಡಾರದ ಮೇಲೆ ಇರುವ ಸಂದರ್ಭದಲ್ಲಿ ಇಸ್ರೇಲರು ಯೆಹೋವನಿಗೆ ವಿಧೇಯರಾಗಿ ಮುಂದಕ್ಕೆ ಪ್ರಯಾಣಮಾಡಲಿಲ್ಲ. 20 ಒಂದೊಂದು ವೇಳೆಯಲ್ಲಿ ಮೇಘವು ಕೆಲವು ದಿವಸ ಮಾತ್ರ ಪವಿತ್ರ ಗುಡಾರದ ಮೇಲೆ ನಿಂತಿರುವುದು. ಯೆಹೋವನ ಆಜ್ಞೆಯ ಪ್ರಕಾರ ಅವರು ಇಳಿದುಕೊಳ್ಳುತ್ತಿದ್ದರು ಮತ್ತು ಯೆಹೋವನ ಆಜ್ಞೆಯ ಪ್ರಕಾರ ಹೊರಡುತ್ತಿದ್ದರು. 21 ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಹೊತ್ತಾರೆಯವರೆಗೂ ಇರುತ್ತಿತ್ತು; ಬೆಳಿಗ್ಗೆ ಅದು ಮೇಲಕ್ಕೆ ಎದ್ದಾಗ ಜನರು ಪ್ರಯಾಣ ಮಾಡುತ್ತಿದ್ದರು. ಮೋಡವು ಚಲಿಸಿದಾಗ ಅದು ಹಗಲಾಗಿರಲಿ ರಾತ್ರಿಯಾಗಿರಲಿ ಜನರು ಅದನ್ನು ಹಿಂಬಾಲಿಸುವರು. 22 ಆ ಮೇಘವು ಪವಿತ್ರಗುಡಾರದ ಮೇಲೆ ಎರಡು ದಿನವಾಗಲಿ ಒಂದು ತಿಂಗಳಾಗಲಿ ಒಂದು ವರ್ಷವಾಗಲಿ ನಿಂತರೆ ಅದು ನಿಂತಿರುವ ತನಕ ಇಸ್ರೇಲರು ಪ್ರಯಾಣ ಮಾಡದೆ ಇಳಿದುಕೊಂಡೇ ಇರುವರು. ಅದು ಮೇಲಕ್ಕೆ ಎದ್ದಾಗ ಅವರು ಹೊರಡುವರು. 23 ಹೀಗೆ ಯೆಹೋವನ ಸೂಚನೆಯಂತೆ ಜನರು ಪಾಳೆಯ ಮಾಡಿಕೊಳ್ಳುವರು; ಪ್ರಯಾಣ ಮುಂದುವರಿಸುವರು. ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆ ಜನರು ಯೆಹೋವನ ಸೂಚನೆಗಳನ್ನು ಲಕ್ಷ್ಯವಿಟ್ಟು ಅನುಸರಿಸಿ ನಡೆಯುತ್ತಿದ್ದರು.
ಬೆಳ್ಳಿಯ ತುತ್ತೂರಿಗಳು
10 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ: 2 “ನೀನು ಬೆಳ್ಳಿಯ ತಗಡುಗಳಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಒಟ್ಟಾಗಿ ಕರೆಸುವುದಕ್ಕೂ ಅವರು ಯಾವಾಗ ಹೊರಡಬೇಕೆಂದು ಹೇಳುವುದಕ್ಕೂ ಇವುಗಳನ್ನು ಉಪಯೋಗಿಸಬೇಕು. 3 ನೀನು ಎರಡು ತುತ್ತೂರಿಗಳನ್ನು ಲಘು ಸ್ವರದಿಂದ ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಕೂಡಿರಬೇಕು. 4 ಆದರೆ ನೀನು ಒಂದು ತುತ್ತೂರಿಯನ್ನು ಮಾತ್ರ ಊದಿಸಿದರೆ ಇಸ್ರೇಲಿನ ಕುಲಪ್ರಧಾನರಾದ ಮುಖ್ಯಸ್ಥರು ಮಾತ್ರ ನಿನ್ನನ್ನು ಸಂಧಿಸಲು ಬರಬೇಕು.
5 “ಜನರ ಕುಲಗಳು ಪಾಳೆಯದಿಂದ ಪ್ರಯಾಣ ಮಾಡಬೇಕೆಂಬುದಕ್ಕೆ ಸೂಚನೆಗಾಗಿ ತುತ್ತೂರಿಯನ್ನು ಆರ್ಭಟದಿಂದ ಊದಿಸಬೇಕು. ನೀವು ಮೊದಲನೆ ಸಲ ತುತ್ತೂರಿಯನ್ನು ಆರ್ಭಟದಿಂದ ಊದಿಸುವಾಗ ದೇವದರ್ಶನಗುಡಾರದ ಪೂರ್ವ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು. 6 ನೀವು ಎರಡನೆಯ ಸಲ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸುವಾಗ ದೇವದರ್ಶನಗುಡಾರದ ದಕ್ಷಿಣ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು. 7 ಆದರೆ ಜನಸಮುದಾಯವು ಕೂಡಿಬರಬೇಕಾದಾಗ ತುತ್ತೂರಿಗಳನ್ನು ಲಘುಸ್ವರದಲ್ಲಿ ಊದಿಸಬೇಕೇ ಹೊರತು ಆರ್ಭಟ ಸ್ವರದಲ್ಲಲ್ಲ. 8 ಯಾಜಕರಾದ ಆರೋನನ ಪುತ್ರರು ಮಾತ್ರವೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ.
9 “ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ರಕ್ಷಿಸುವನು. 10 ಇದಲ್ಲದೆ, ನೀವು ಉತ್ಸವಕಾಲಗಳಲ್ಲಿಯೂ ಹಬ್ಬಗಳಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ನಿಮ್ಮನ್ನು ಗಮನಿಸಬೇಕೆಂದು ಆ ತುತ್ತೂರಿ ಧ್ವನಿಗಳು ನಿಮ್ಮ ದೇವರಿಗೆ ನೆನಪನ್ನುಂಟುಮಾಡುತ್ತವೆ. ನೀವು ಇದನ್ನು ಮಾಡಬೇಕೆಂದು ನಾನು ಆಜ್ಞಾಪಿಸುತ್ತೇನೆ. ನಿಮ್ಮ ದೇವರಾದ ಯೆಹೋವನು ನಾನೇ.”
ಇಸ್ರೇಲರ ಪ್ರಯಾಣ
11 ಇಸ್ರೇಲರು ಈಜಿಪ್ಟನ್ನು ಬಿಟ್ಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಮೇಘವು ಒಡಂಬಡಿಕೆಯ ಗುಡಾರದಿಂದ ಮೇಲೆ ಎದ್ದಿತು. 12 ಆದ್ದರಿಂದ, ಇಸ್ರೇಲರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮೇಘವು ಪಾರಾನ್ ಮರುಭೂಮಿಯಲ್ಲಿ ನಿಲ್ಲುವವರೆಗೆ ಪ್ರಯಾಣ ಮಾಡಿದರು. 13 ಯೆಹೋವನು ಮೋಶೆಯ ಮೂಲಕ ಕೊಟ್ಟ ಸೂಚನೆಯ ಪ್ರಕಾರ ಅವರು ಮೊಟ್ಟಮೊದಲನೆಯ ಸಲ ಪ್ರಯಾಣವನ್ನು ಆರಂಭಿಸಿದರು.
14 ಮೊದಲು ಯೆಹೂದ ಪಾಳೆಯದ ಮೂರು ದಂಡುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀನಾದಾಬನ ಮಗನಾದ ನಹಶೋನನು ಯೆಹೂದ ಕುಲದ ಸೇನಾಧಿಪತಿಯಾಗಿದ್ದನು. 15 ಚೂವಾರನ ಮಗನಾದ ನೆತನೇಲನು ಇಸ್ಸಾಕಾರನ ಕುಲದ ಸೇನಾಧಿಪತಿ. 16 ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ ಕುಲದ ಸೇನಾಧಿಪತಿ.
17 ಬಳಿಕ ಪವಿತ್ರ ಗುಡಾರವನ್ನು ಕೆಳಗಿಳಿಸಲಾಯಿತು. ಗೇರ್ಷೋನ್ ಮತ್ತು ಮೆರಾರೀ ಕುಲಗಳ ಗಂಡಸರು ಪವಿತ್ರ ಗುಡಾರವನ್ನು ಹೊತ್ತುಕೊಂಡು ಅವರ ಹಿಂದೆ ಹೊರಟರು.
18 ಅವರ ತರುವಾಯ ರೂಬೇನ್ ಕುಲದಿಂದ ಮುನ್ನಡೆಸಲ್ಪಟ್ಟ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಹೊರಟರು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೇನಾಧಿಪತಿಯಾಗಿದ್ದನು. 19 ಚೂರೀಷದ್ದೈನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೇನಾಧಿಪತಿ. 20 ದೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೇನಾಧಿಪತಿ. 21 ಬಳಿಕ ಕೆಹಾತನ ಕುಲದವರು ಹೊರಟರು. ಅವರು ದೇವಸ್ಥಾನದ ಪವಿತ್ರವಸ್ತುಗಳನ್ನು ಹೊತ್ತುಕೊಂಡಿದ್ದರು. ಕೆಹಾತ್ಯರು ಪವಿತ್ರವಸ್ತುಗಳೊಡನೆ ಬರುವಷ್ಟರೊಳಗೆ ಇತರ ಲೇವಿಯರು ದೇವದರ್ಶನಗುಡಾರವನ್ನು ಎತ್ತಿ ನಿಲ್ಲಿಸಿದರು.
22 ಬಳಿಕ ಎಫ್ರಾಯೀಮ್ ಪಾಳೆಯದಿಂದ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಹೂದನ ಮಗನಾದ ಎಲೀಷಾಮನು ಎಫ್ರಾಯೀಮ್ ಕುಲದ ಸೇನಾಧಿಪತಿ. 23 ಪೆದಾಚೂರನ ಮಗನಾದ ಗಮ್ಲೀಯೇಲನು ಮನಸ್ಸೆ ಕುಲದ ಸೇನಾಧಿಪತಿ. 24 ಗಿದ್ಯೋನಿಯ ಮಗನಾದ ಅಬೀದಾನನು ಬೆನ್ಯಾಮೀನ್ ಕುಲದ ಸೇನಾಧಿಪತಿ.
25 ಆಮೇಲೆ ಎಲ್ಲಾ ಕುಲಗಳ ಹಿಂಭಾಗದಲ್ಲಿ ದಾನ್ ಕುಲದಿಂದ ಮುನ್ನಡೆಸಲ್ಪಟ್ಟ ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಷದ್ದೈನ ಮಗನಾದ ಅಹೀಗೆಜೆರನು ದಾನ್ ಕುಲದ ಸೇನಾಧಿಪತಿ. 26 ಆಶೇರನ ಕುಲಕ್ಕೆ ಒಕ್ರಾನನ ಮಗನಾದ ಪಗೀಯೇಲನು ಸೇನಾಧಿಪತಿಯಾಗಿದ್ದನು. 27 ನಫ್ತಾಲಿ ಕುಲಕ್ಕೆ ಏನಾನನ ಮಗನಾದ ಅಹೀರನು ಸೇನಾಧಿಪತಿಯಾಗಿದ್ದನು. 28 ಈ ರೀತಿಯಾಗಿ ಇಸ್ರೇಲರು ತಮ್ಮ ಗುಂಪುಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಿದರು.
29 ಹೋಬಾಬನು ಮಿದ್ಯಾನ್ಯನಾದ ರೆಗೂವೇಲನ ಮಗನು. ರೆಗೂವೇಲನು ಮೋಶೆಯ ಮಾವ. ಮೋಶೆಯು ಹೋಬಾಬನಿಗೆ, “ದೇವರು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣ ಮಾಡುತ್ತಿದ್ದೇವೆ. ನಮ್ಮೊಂದಿಗೆ ಬಾ. ನೀನು ನಮ್ಮೊಂದಿಗೆ ಉದ್ದಾರವಾಗುವೆ; ಯಾಕೆಂದರೆ ಯೆಹೋವನು ಇಸ್ರೇಲರಿಗೆ ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾನೆ.”
30 ಆದರೆ ಹೋಬಾಬನು, “ಇಲ್ಲ. ನಾನು ನಿಮ್ಮೊಂದಿಗೆ ಬರುವುದಿಲ್ಲ. ನಾನು ನನ್ನ ದೇಶಕ್ಕೂ ನನ್ನ ಜನರ ಬಳಿಗೂ ಹೋಗುವೆನು” ಎಂದು ಉತ್ತರಕೊಟ್ಟನು.
31 ಆಗ ಮೋಶೆ, “ದಯಮಾಡಿ ನಮ್ಮನ್ನು ಬಿಟ್ಟು ಹೋಗಬೇಡ. ನಾವು ಮರುಭೂಮಿಯಲ್ಲಿ ಎಲ್ಲಿ ಪಾಳೆಯ ಮಾಡಿಕೊಳ್ಳಬಹುದೆಂಬುದು ನಿನಗೆ ಗೊತ್ತಿದೆ. ನೀನು ನಮ್ಮ ಮಾರ್ಗದರ್ಶಕನಾಗಿರಬಹುದು. 32 ನೀನು ನಮ್ಮೊಂದಿಗೆ ಬಂದರೆ, ಯೆಹೋವನು ನಮಗೆ ಕೊಡುವ ಎಲ್ಲಾ ಒಳ್ಳೆಯ ವಸ್ತುಗಳಲ್ಲಿ ನಿನಗೆ ಪಾಲು ಕೊಡುವೆವು” ಎಂದು ಹೇಳಿದನು.
33 ಅವರು ಯೆಹೋವನ ಬೆಟ್ಟದಿಂದ ಹೊರಟು ಮೂರು ದಿನ ಪ್ರಯಾಣ ಮಾಡಿದರು. ಲೇವಿಯರು ಹೊತ್ತುಕೊಂಡಿದ್ದ ಯೆಹೋವನ ಒಡಂಬಡಿಕೆ ಪೆಟ್ಟಿಗೆಯು ಮತ್ತೆ ಪಾಳೆಯ ಹಾಕಲು ಯೋಗ್ಯವಾದ ಸ್ಥಳವನ್ನು ಎದುರು ನೋಡುತ್ತಾ ಜನರ ಮುಂದೆ ಮೂರು ದಿನಗಳವರೆಗೆ ಹೋಯಿತು. 34 ಅವರು ಪಾಳೆಯದೊಡನೆ ಹೊರಟಾಗ ಪ್ರತಿದಿನವೂ ಯೆಹೋವನ ಮೋಡವು ಅವರ ಮೇಲಿರುತ್ತಿತ್ತು.
35 ಜನರು ಪವಿತ್ರ ಪೆಟ್ಟಿಗೆಯನ್ನು ಎತ್ತಿಕೊಂಡು ಹೊರಡುವಾಗ, ಮೋಶೆಯು,
“ಯೆಹೋವನೇ, ಎದ್ದೇಳು!
ನಿನ್ನ ವೈರಿಗಳು ಚದರಿಹೋಗಲಿ,
ನಿನ್ನ ಶತ್ರುಗಳು ಬೆನ್ನುಕೊಟ್ಟು ಓಡಿಹೋಗಲಿ”
ಎಂದು ಹೇಳುತ್ತಿದ್ದನು.
36 ಪವಿತ್ರ ಪೆಟ್ಟಿಗೆಯು ಕೆಳಗಿಳಿಸಲ್ಪಟ್ಟಾಗ, ಮೋಶೆಯು,
“ಯೆಹೋವನೇ ಇಸ್ರೇಲರ ಲಕ್ಷಾಂತರ ಕುಟುಂಬಗಳ
ಬಳಿಗೆ ಹಿಂತಿರುಗಿ ಬಾ”
ಎಂದು ಹೇಳುತ್ತಿದ್ದನು.
ಜನರು ಮತ್ತೆ ಗುಣುಗುಟ್ಟಿದರು
11 ಜನರು ತಮಗೆ ತೊಂದರೆ ಉಂಟಾಯಿತೆಂದು ಗಟ್ಟಿಯಾಗಿ ಗುಣುಗುಟ್ಟಿದರು. ಅದನ್ನು ಯೆಹೋವನು ಕೇಳಿ ಕೋಪಗೊಂಡನು. ಯೆಹೋವನಿಂದ ಬಂದ ಬೆಂಕಿ ಅವರ ವಿರುದ್ಧವಾಗಿ ಹೊತ್ತಿಕೊಂಡದ್ದರಿಂದ ಪಾಳೆಯದ ಹೊರಭಾಗದಲ್ಲಿದ್ದವರು ಸುಟ್ಟುಹೋದರು. 2 ಆಗ ಜನರು ಸಹಾಯಕ್ಕಾಗಿ ಮೋಶೆಗೆ ಮೊರೆಯಿಟ್ಟರು. ಮೋಶೆಯು ಅವರಿಗೋಸ್ಕರ ಯೆಹೋವನಿಗೆ ಪ್ರಾರ್ಥಿಸಲಾಗಿ ಬೆಂಕಿ ಆರಿಹೋಯಿತು. 3 ಯೆಹೋವನು ಅವರಿಗೆ ವಿರುದ್ಧವಾಗಿ ಬೆಂಕಿ ಉರಿಯುವಂತೆ ಮಾಡಿದ್ದರಿಂದ ಜನರು ಆ ಸ್ಥಳಕ್ಕೆ “ತಬೇರ” ಎಂದು ಹೆಸರಿಟ್ಟರು.
ಎಪ್ಪತ್ತು ಮಂದಿ ಹಿರಿಯರು
4 ಅವರ ಮಧ್ಯದಲ್ಲಿದ್ದ ಕಿರುಕುಳಕೊಡುವ ಪರದೇಶಸ್ಥರು ಬೇರೆ ರೀತಿಯ ಆಹಾರಕ್ಕಾಗಿ ಬಹಳವಾಗಿ ಆಶಿಸಿದರು. ಇಸ್ರೇಲರು ಸಹ ಮತ್ತೆ ಅಳಲು ಆರಂಭಿಸಿ, “ನಮಗೆ ಯಾರು ಮಾಂಸವನ್ನು ಕೊಡುತ್ತಾರೆ? 5 ನಾವು ಈಜಿಪ್ಟಿನಲ್ಲಿ ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜು, ಈರುಳ್ಳಿಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. 6 ಆದರೆ ನಾವು ಈಗ ನಮ್ಮ ಬಲವನ್ನು ಕಳೆದುಕೊಂಡಿದ್ದೇವೆ. ಈ ಮನ್ನವನ್ನು ಬಿಟ್ಟು ನಮ್ಮಲ್ಲಿ ತಿನ್ನಲು ಬೇರೇನೂ ಇಲ್ಲ” ಎಂದರು. 7 ಈ ಮನ್ನವು ಕೊತ್ತುಂಬರಿ ಕಾಳಿನಂತಿತ್ತು ಮತ್ತು ಅಂಟು ಪದಾರ್ಥದಂತೆ ಕಾಣಿಸಿತು. 8 ಜನರು ಮನ್ನವನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ ಅಥವಾ ಒರಳಲ್ಲಿ ಕುಟ್ಟಿ, ಮಡಕೆಗಳಲ್ಲಿ ಬೇಯಿಸಿ ತೆಳುವಾದ ರೊಟ್ಟಿಗಳನ್ನು ಮಾಡಿಕೊಂಡರು. ಅದರ ರುಚಿ ಆಲಿವ್ ಎಣ್ಣೆಯಿಂದ ಮಾಡಿದ ಭಕ್ಷ್ಯಗಳಂತಿತ್ತು. 9 ರಾತ್ರಿ ಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು.
10 ಎಲ್ಲಾ ಕುಟುಂಬದವರೂ ತಮ್ಮತಮ್ಮ ಗುಡಾರದ ಬಾಗಿಲುಗಳಲ್ಲಿ ನಿಂತು ಗುಣಗುಟ್ಟುತ್ತಿರುವ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹು ಕೋಪಗೊಂಡನು. ಇದರಿಂದಾಗಿ ಮೋಶೆಗೆ ಬಹಳ ಬೇಸರವಾಯಿತು. 11 ಆಗ ಮೋಶೆ ಯೆಹೋವನಿಗೆ, “ನಿನ್ನ ಸೇವಕನಾದ ನನಗೆ ಯಾಕೆ ತೊಂದರೆಯನ್ನು ಉಂಟುಮಾಡಿದೆ? ನಾನು ನಿನಗೆ ಬೇಸರವನ್ನು ಉಂಟುಮಾಡಿದೆನೇ? ಈ ಜನರೆಲ್ಲರನ್ನು ಮುನ್ನಡೆಸಿಕೊಂಡು ಹೋಗುವ ಭಾರವನ್ನು ನೀನು ನನ್ನ ಮೇಲೆ ಯಾಕೆ ಹಾಕಿದೆ? 12 ನಾನು ಇವರಿಗೆ ಹೆತ್ತ ತಾಯಿಯೋ? ನಾನು ಅವರಿಗೆ ಜನ್ಮ ಕೊಡಲಿಲ್ಲವೆಂದು ನಿನಗೆ ಗೊತ್ತಿದೆ. ದಾದಿಯು ಮಗುವನ್ನು ಎತ್ತಿಕೊಂಡು ಹೋಗುವಂತೆ, ಈ ಜನರನ್ನು ನಾನು ನನ್ನ ಮಡಿಲಲ್ಲಿ ಇಟ್ಟು, ನೀನು ಅವರ ಪೂರ್ವಿಕರಿಗೆ ವಾಗ್ದಾನಮಾಡಿರುವ ದೇಶಕ್ಕೆ ಎತ್ತಿಕೊಂಡು ಹೋಗುವಂತೆ ನೀನು ನನಗೇಕೆ ಹೇಳುವೆ? 13 ಇವರು ನನ್ನ ಬಳಿಗೆ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳಿಕೊಳ್ಳುತ್ತಾರಲ್ಲಾ! ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು? 14 ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ನನಗೆ ಅಸಾಧ್ಯ. ಅದು ನನ್ನ ಶಕ್ತಿಗೆ ಮೀರಿದ ಕೆಲಸ. 15 ನೀನು ಹೀಗೆಯೇ ನನಗೆ ಮಾಡುವುದಾಗಿದ್ದರೆ ಅದಕ್ಕೆ ಬದಲಾಗಿ ನನ್ನನ್ನು ಕೊಂದುಬಿಡು ಎಂದು ಬೇಡಿಕೊಳ್ಳುತ್ತೇನೆ. ಆಗ ನಾನು ಈ ದುರವಸ್ಥೆಗಳಿಂದ ವಿಮುಕ್ತನಾಗುವೆನು” ಎಂದು ಹೇಳಿದನು.
16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಲ್ಲಿ ಹಿರಿಯರೆಂದೂ ಅಧಿಕಾರಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನಗುಡಾರದ ಬಾಗಿಲಿಗೆ ಕರೆದುತಂದು ಅಲ್ಲೇ ನಿನ್ನೊಡನೆ ನಿಲ್ಲಿಸಿಕೊ. 17 ನಾನು ಅಲ್ಲಿಗೆ ಇಳಿದುಬಂದು ನಿನ್ನ ಸಂಗಡ ಮಾತಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿದ ಆತ್ಮವನ್ನೇ ಅವರ ಮೇಲೆ ಸುರಿಸುವೆನು. ಆಗ ಸ್ವತಃ ನೀನೇ ಈ ಜನರ ಭಾರವನ್ನು ವಹಿಸಬೇಕಾಗಿರುವುದಿಲ್ಲ. ಈ ಎಪ್ಪತ್ತು ಮಂದಿ ಹಿರಿಯರು ಆ ಭಾರವನ್ನು ಹೊರಲು ನಿನಗೆ ಸಹಾಯ ಮಾಡುವರು.
18 “ಇಸ್ರೇಲರಿಗೆ ಹೀಗೆ ಹೇಳು: ನಾಳೆಗಾಗಿ ನಿಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳಿರಿ. ನಾಳೆ ನೀವು ಮಾಂಸವನ್ನು ತಿನ್ನುವಿರಿ. ‘ನಮಗೆ ಮಾಂಸವನ್ನು ಕೊಡುವವರು ಯಾರು? ನಾವು ಈಜಿಪ್ಟಿನಲ್ಲಿ ಇದಕ್ಕಿಂತಲೂ ಚೆನ್ನಾಗಿದ್ದೆವಲ್ಲಾ’ ಎಂಬ ನಿಮ್ಮ ದೂರನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ಯೆಹೋವನು ನಿಮಗೆ ಮಾಂಸವನ್ನು ಕೊಡುವನು ಮತ್ತು ನೀವು ತಿನ್ನುವಿರಿ. 19 ನೀವು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವಲ್ಲ, 20 ಒಂದು ತಿಂಗಳು ಪೂರ್ತಿ ಮಾಂಸವನ್ನು ತಿನ್ನುವಿರಿ. ಅದು ನಿಮ್ಮ ಮೂಗಿನಲ್ಲಿ ಓಕರಿಕೆಯಾಗಿ ಹೊರಬರುವ ತನಕ ಮತ್ತು ನಿಮಗೆ ಅಸಹ್ಯವಾಗುವವರೆಗೆ ಅದನ್ನು ತಿನ್ನುವಿರಿ. ನೀವು ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ತಿರಸ್ಕರಿಸಿದ್ದರಿಂದ ಮತ್ತು ‘ನಾವೇಕೆ ಈಜಿಪ್ಟನ್ನು ಬಿಟ್ಟು ಬಂದೆವು?’ ಎಂದು ಆತನ ಮುಂದೆ ದೂರು ಹೇಳಿದ್ದರಿಂದ ಇದು ನಿಮಗೆ ಸಂಭವಿಸುವುದು.”
21 ಅದಕ್ಕೆ ಮೋಶೆ, “ಯೆಹೋವನೇ, ಇಲ್ಲಿ ಆರು ಲಕ್ಷ ಗಂಡಸರು ನನ್ನೊಂದಿಗೆ ಇದ್ದಾರೆ. ಆದಾಗ್ಯೂ ನೀನು ಇವರಿಗೆ ಮಾಂಸ ಕೊಡುವುದಾಗಿಯೂ ಇವರು ಒಂದು ತಿಂಗಳೆಲ್ಲಾ ಅದನ್ನು ತಿನ್ನುವುದಾಗಿಯೂ ನೀನು ಹೇಳುತ್ತಿರುವೆ. 22 ನಾವು ಎಲ್ಲಾ ಕುರಿಗಳನ್ನು, ದನಕರುಗಳನ್ನು ಕೊಂದರೂ ಇಷ್ಟು ಜನರು ಒಂದು ತಿಂಗಳು ತಿನ್ನುವುದಕ್ಕೆ ಸಾಕಾಗದು. ಸಮುದ್ರದಲ್ಲಿರುವ ಮೀನುಗಳೆಲ್ಲವನ್ನು ಹಿಡಿದರೂ ಅದು ಇಷ್ಟು ಜನರಿಗೆ ಸಾಕಾಗದು” ಎಂದು ಹೇಳಿದನು.
23 ಆದರೆ ಯೆಹೋವನು ಮೋಶೆಗೆ, “ಯೆಹೋವನ ಶಕ್ತಿಗೆ ಮಿತಿಯಿಲ್ಲ. ನಾನು ಹೇಳುತ್ತಿರುವ ಸಂಗತಿಗಳು ನಡೆಯುವುದನ್ನು ನೀನು ನೋಡುವೆ” ಎಂದು ಹೇಳಿದನು.
24 ಮೋಶೆಯು ಹೊರಟುಹೋಗಿ, ಯೆಹೋವನು ಹೇಳಿದ್ದನ್ನು ಜನರಿಗೆ ತಿಳಿಸಿ, ಇಸ್ರೇಲರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಒಟ್ಟಾಗಿ ಸೇರಿಸಿದನು. ಅವರು ದೇವದರ್ಶನಗುಡಾರದ ಸುತ್ತಲೂ ನಿಲ್ಲುವಂತೆ ಆಜ್ಞಾಪಿಸಿದನು. 25 ಆಗ ಯೆಹೋವನು ಮೇಘದಲ್ಲಿ ಇಳಿದುಬಂದು ಮೋಶೆಯೊಡನೆ ಮಾತಾಡಿ ಅವನಲ್ಲಿದ್ದ ಆತ್ಮವನ್ನೇ[a] ಆ ಎಪ್ಪತ್ತು ಮಂದಿ ಹಿರಿಯರಿಗೆ ಕೊಟ್ಟನು. ಆತ್ಮಿಕ ವರಗಳು ಅವರಿಗೆ ಕೊಡಲ್ಪಟ್ಟಾಗ ಅವರು ಪ್ರವಾದಿಗಳಂತೆ ಪ್ರವಾದಿಸಿದರು. ಆದರೆ ಮತ್ತೆ ಅವರು ಹಾಗೆ ಪ್ರವಾದಿಸಲಿಲ್ಲ.
26 ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರು ಗುಡಾರದ ಬಳಿಗೆ ಹೋಗಲಿಲ್ಲ. ಹಿರಿಯರ ಹೆಸರುಗಳಿದ್ದ ಪಟ್ಟಿಯಲ್ಲಿ ಅವರ ಹೆಸರುಗಳಿದ್ದವು. ಆದರೆ ಅವರು ಪಾಳೆಯದಲ್ಲೇ ಉಳಿದುಕೊಂಡರು. ಆದರೆ ಅವರಿಗೆ ಆತ್ಮಿಕ ವರಗಳು ಕೊಡಲ್ಪಟ್ಟಿದ್ದರಿಂದ ಅವರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸತೊಡಗಿದರು. 27 ಒಬ್ಬ ಯೌವನಸ್ಥನು ಮೋಶೆಯ ಬಳಿಗೆ ಓಡಿಹೋಗಿ, “ಎಲ್ದಾದ್ ಮತ್ತು ಮೇದಾದ್ ಎಂಬಿಬ್ಬರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸುತ್ತಿದ್ದಾರೆ” ಎಂದು ಹೇಳಿದನು.
28 ನೂನನ ಮಗನಾದ ಯೆಹೋಶುವನು ಮೋಶೆಗೆ, “ಸ್ವಾಮೀ, ನೀನು ಅವರನ್ನು ತಡೆಯಬೇಕು” ಎಂದನು. (ಯೆಹೋಶುವನು ಯೌವನಸ್ಥನಾಗಿದ್ದಾಗಿನಿಂದಲೂ ಮೋಶೆಯ ಸಹಾಯಕನಾಗಿದ್ದನು.)
29 ಆದರೆ ಮೋಶೆಯು, “ನೀನು ನನ್ನ ವಿಷಯದಲ್ಲಿ ಚಿಂತೆಪಡುತ್ತಿರುವುದೇಕೆ? ಯೆಹೋವನ ಜನರೆಲ್ಲರೂ ಪ್ರವಾದಿಗಳಾಗಿರಬೇಕೆಂದು ನಾನು ಬಯಸುತ್ತೇನೆ. ಅವರೆಲ್ಲರ ಮೇಲೆ ಯೆಹೋವನು ತನ್ನ ಆತ್ಮನನ್ನು ಇರಿಸಬೇಕೆಂದು ನಾನು ಬಯಸುತ್ತೇನೆ” ಎಂದು ಉತ್ತರಿಸಿದನು. 30 ಬಳಿಕ ಮೋಶೆಯು ಮತ್ತು ಇಸ್ರೇಲರ ನಾಯಕರು ಪಾಳೆಯಕ್ಕೆ ಹಿಂತಿರುಗಿದರು.
ಲಾವಕ್ಕಿಗಳು
31 ಆಗ ಯೆಹೋವನು ಸಮುದ್ರದ ಕಡೆಯಿಂದ ಬಲವಾದ ಗಾಳಿಯು ಬೀಸುವಂತೆ ಮಾಡಿದನು. ಗಾಳಿಯು ಲಾವಕ್ಕಿಗಳನ್ನು ಹೊತ್ತುಕೊಂಡು ಬಂತು. ಲಾವಕ್ಕಿಗಳು ಪಾಳೆಯದ ಸುತ್ತಲೂ ಹಾರಿಬಂದವು. ಒಬ್ಬನು ಪ್ರತಿಯೊಂದು ದಿಕ್ಕಿನಲ್ಲಿ ಒಂದು ದಿನ ನಡೆಯಬಹುದಾದಷ್ಟು ದೂರದವರೆಗೂ ಲಾವಕ್ಕಿಗಳು ಭೂಮಿಯಿಂದ ಮೂರು ಅಡಿ ಎತ್ತರದಲ್ಲಿ ಹಾರಾಡುತ್ತಿದ್ದವು. 32 ಜನರು ಎದ್ದು ಆ ದಿನವೆಲ್ಲಾ ಮತ್ತು ರಾತ್ರಿಯೆಲ್ಲಾ ಮತ್ತು ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಸ್ವಲ್ಪ ಕೂಡಿಸಿಕೊಂಡವನು ಅರವತ್ತು ಕಿಲೋಗ್ರಾಂ ಕೂಡಿಸಿಕೊಂಡನು. ಬಳಿಕ ಜನರು ಲಾವಕ್ಕಿಗಳ ಮಾಂಸವನ್ನು ಪಾಳೆಯದ ಸುತ್ತಲೂ ಹರಡಿ ಬಿಸಿಲಿನಲ್ಲಿ ಒಣಗಿಸಿಕೊಂಡರು.
33 ಜನರು ಮಾಂಸವನ್ನು ಇನ್ನೂ ತಿನ್ನುತ್ತಿರುವಾಗಲೇ ಮತ್ತು ಲಾವಕ್ಕಿಗಳ ಸರಬರಾಜು ನಿಂತುಹೋಗುವುದಕ್ಕಿಂತ ಮೊದಲೇ ಯೆಹೋವನು ಬಹಳವಾಗಿ ಕೋಪಗೊಂಡು ಜನರ ಮಧ್ಯದಲ್ಲಿ ಭಯಂಕರವಾದ ಕಾಯಿಲೆಯನ್ನು ಉಂಟುಮಾಡಿದನು. ಜನರಲ್ಲಿ ಅನೇಕರು ಸತ್ತದ್ದರಿಂದ ಅವರನ್ನು ಅಲ್ಲೇ ಹೂಳಿಟ್ಟರು. 34 ಈ ಕಾರಣದಿಂದ ಆ ಸ್ಥಳಕ್ಕೆ, “ಕಿಬ್ರೋತ್ ಹತಾವಾ” ಎಂದು ಹೆಸರಿಟ್ಟರು. ಮಾಂಸಕ್ಕಾಗಿ ಅತ್ಯಾಶೆಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ ಈ ಹೆಸರನ್ನು ಇಟ್ಟರು.
35 ಜನರು ಕಿಬ್ರೋತ್ ಹತಾವಾದಿಂದ ಪ್ರಯಾಣಮಾಡಿ ಹಚೇರೋತಿಗೆ ಹೋಗಿ ಅಲ್ಲಿ ಇಳಿದುಕೊಂಡರು.
ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ
(ಮತ್ತಾಯ 8:28-34; ಲೂಕ 8:26-39)
5 ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು. 2 ಯೇಸು ದೋಣಿಯಿಂದ ಹೊರಕ್ಕೆ ಬಂದಾಗ, ಒಬ್ಬ ಮನುಷ್ಯನು ಸಮಾಧಿಯ ಗವಿಗಳಿಂದ ಆತನ ಬಳಿಗೆ ಬಂದನು. ಅವನಿಗೆ ದೆವ್ವಹಿಡಿದಿತ್ತು. 3 ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅವನನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಿರಲಿಲ್ಲ. ಅವನನ್ನು ಸರಪಣಿಗಳಿಂದ ಕಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ. 4 ಜನರು ಅನೇಕ ಸಾರಿ ಅವನ ಕೈ ಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದರು. ಆದರೆ ಅವನು ಅವುಗಳನ್ನೆಲ್ಲ ಕಿತ್ತೊಗೆದುಬಿಟ್ಟನು. ಅವನನ್ನು ಹತೋಟಿಗೆ ತರುವ ಬಲಿಷ್ಠನು ಅಲ್ಲಿ ಯಾರೂ ಇರಲಿಲ್ಲ. 5 ಅವನು ಹಗಲಿರುಳು ಸಮಾಧಿಯ ಗವಿಗಳ ಸುತ್ತಲು ಮತ್ತು ಬೆಟ್ಟಗಳ ಮೇಲೆ ನಡೆದಾಡುತ್ತಿದ್ದನು. ಅವನು ಕಿರುಚುತ್ತಾ ತನ್ನನ್ನು ಕಲ್ಲುಗಳಿಂದ ಜಜ್ಜಿಕೊಳ್ಳುತ್ತಿದ್ದನು.
6 ಯೇಸು ಬಹಳ ದೂರದಲ್ಲಿದ್ದಾಗಲೇ, ಅವನು ಆತನನ್ನು ಕಂಡು, ಆತನ ಬಳಿಗೆ ಓಡಿಹೋಗಿ ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿದನು. 7-8 ಯೇಸು ಅವನಿಗೆ, “ಎಲೈ ದೆವ್ವವೇ, ಅವನೊಳಗಿಂದ ಹೊರಗೆ ಬಾ” ಎಂದು ಹೇಳಿದನು. ಆಗ ಅವನು ಗಟ್ಟಿಯಾದ ಧ್ವನಿಯಿಂದ ಅರಚುತ್ತಾ, “ಯೇಸುವೇ, ಪರಾತ್ಪರನಾದ ದೇವಕುಮಾರನೇ, ನನ್ನಿಂದ ನಿನಗೆ ಏನಾಗಬೇಕಾಗಿದೆ? ದೇವರಾಣೆಯಿಟ್ಟು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ” ಎಂದು ಕೇಳಿಕೊಂಡನು.
9 ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.
ಅವನು “ನನ್ನ ಹೆಸರು ದಂಡು,[a] ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು. 10 ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು.
11 ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 12 ದೆವ್ವಗಳು ಯೇಸುವಿಗೆ, “ನಮ್ಮನ್ನು ಹಂದಿಗಳೊಳಗೆ ಕಳುಹಿಸಿಕೊಡು” ಎಂದು ಬೇಡಿಕೊಂಡವು. 13 ಯೇಸು ಅವುಗಳಿಗೆ ಅಪ್ಪಣೆ ಕೊಡಲು ಅವು ಅವನನ್ನು ಬಿಟ್ಟು, ಹಂದಿಗಳೊಳಗೆ ಹೊಕ್ಕವು. ಆಗ ಹಂದಿಗಳೆಲ್ಲಾ ಬೆಟ್ಟದಿಂದ ಇಳಿದು, ಸರೋವರದೊಳಕ್ಕೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು.
14 ಹಂದಿಗಳನ್ನು ಕಾಯುತ್ತಿದ್ದ ಜನರು ಪಟ್ಟಣದೊಳಕ್ಕೆ ಮತ್ತು ತೋಟಗಳಿಗೆ ಓಡಿಹೋಗಿ ಜನರಿಗೆಲ್ಲ ತಿಳಿಸಿದರು. 15 ಆಗ ಜನರು ನಡೆದ ಸಂಗತಿಯನ್ನು ನೋಡಲು ಯೇಸುವಿನ ಬಳಿಗೆ ಬಂದರು. ಅನೇಕ ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಬಟ್ಟೆ ಹಾಕಿಕೊಂಡು ಅಲ್ಲಿ ಕುಳಿತಿರುವುದನ್ನು ಅವರು ಕಂಡರು. ಅವನು ಮತ್ತೆ ಸ್ವಸ್ಥ ಬುದ್ಧಿಯುಳ್ಳವನಾಗಿದ್ದನು. ಆ ಜನರು ಅವನನ್ನು ನೋಡಿ ಹೆದರಿದರು. 16 ಅಲ್ಲಿದ್ದ ಕೆಲವು ಜನರು, ಯೇಸು ಮಾಡಿದ ಈ ಕಾರ್ಯವನ್ನು ನೋಡಿದ್ದರು. ಈ ಜನರೇ ಉಳಿದ ಜನರಿಗೆಲ್ಲರಿಗೂ ನಡೆದ ಸಂಗತಿಯನ್ನು ಅಂದರೆ ದೆವ್ವದಿಂದ ಪೀಡಿತನಾಗಿದ್ದವನಿಗೂ ದೆವ್ವಗಳಿಗೂ ಮತ್ತು ಹಂದಿಗಳಿಗೂ ಸಂಭವಿಸಿದ್ದನ್ನು ತಿಳಿಸಿದರು. 17 ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.
18 ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು. 19 ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು.
20 ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು.
Kannada Holy Bible: Easy-to-Read Version. All rights reserved. © 1997 Bible League International