Old/New Testament
ಯಜ್ಞವೇದಿಕೆ
27 ಯೆಹೋವನು ಮೋಶೆಗೆ, “ಜಾಲೀಮರದಿಂದ ಯಜ್ಞವೇದಿಕೆಯನ್ನು ಮಾಡಿಸಬೇಕು. ಈ ಯಜ್ಞವೇದಿಕೆಯು ಚೌಕವಾಗಿರಬೇಕು. ಅದು ಐದು ಮೊಳ ಉದ್ದ, ಐದು ಮೊಳ ಅಗಲ ಮತ್ತು ಮೂರು ಮೊಳ ಎತ್ತರ ಇರಬೇಕು. 2 ಈ ಯಜ್ಞವೇದಿಕೆಯ ನಾಲ್ಕು ಮೂಲೆಗಳಿಗೆ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಪ್ರತಿಯೊಂದು ಕೊಂಬೂ ಯಜ್ಞವೇದಿಕೆಗೆ ಜೋಡಿಸಲ್ಪಟ್ಟಿರಬೇಕು. ಹೀಗೆ ಅವು ಯಜ್ಞವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು. ಬಳಿಕ ಯಜ್ಞವೇದಿಕೆಯನ್ನು ತಾಮ್ರದ ತಗಡಿನಿಂದ ಹೊದಿಸಬೇಕು.
3 “ಯಜ್ಞವೇದಿಕೆಯ ಉಪಕರಣಗಳನ್ನೆಲ್ಲಾ ತಾಮ್ರದಿಂದ ಮಾಡಿಸಬೇಕು. ಬಟ್ಟಲುಗಳನ್ನು, ಸಲಿಕೆಗಳನ್ನು, ಬೋಗುಣಿಗಳನ್ನು, ಮುಳ್ಳುಗಳನ್ನು ಮತ್ತು ಅಗ್ಗಿಷ್ಟಿಕೆಗಳನ್ನು ಮಾಡಿಸಬೇಕು. ಇವುಗಳನ್ನು ಯಜ್ಞವೇದಿಕೆಯಿಂದ ಬೂದಿಯನ್ನು ತೆಗೆದು ಶುಚಿಗೊಳಿಸುವುದಕ್ಕೆ ಉಪಯೋಗಿಸಬೇಕು. 4 ಯಜ್ಞವೇದಿಕೆಗೆ ಹೆಣಿಗೇ ಕೆಲಸದಿಂದ ತಾಮ್ರದ ಜಾಳಿಗೆ ಮಾಡಿಸಬೇಕು. ಈ ಜಾಳಿಗೆಯ ನಾಲ್ಕುಮೂಲೆಗಳಲ್ಲಿ ನಾಲ್ಕು ತಾಮ್ರದ ಬಳೆಗಳನ್ನು ಮಾಡಿಸಬೇಕು. 5 ಆ ಜಾಳಿಗೆಯು ಯಜ್ಞವೇದಿಕೆಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು ಯಜ್ಞವೇದಿಕೆಯ ಬುಡದಿಂದ ಅರ್ಧದಷ್ಟು ಮೇಲಕ್ಕೆ ಇರಬೇಕು.
6 “ಯಜ್ಞವೇದಿಕೆಗೆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ತಾಮ್ರದ ತಗಡನ್ನು ಹೊದಿಸಬೇಕು. 7 ಯಜ್ಞವೇದಿಕೆಯ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಕೋಲುಗಳನ್ನು ಸೇರಿಸಬೇಕು. ಈ ಕೋಲುಗಳಿಂದ ಯಜ್ಞವೇದಿಕೆಯನ್ನು ಹೊತ್ತುಕೊಂಡು ಹೋಗಬೇಕು. 8 ಯಜ್ಞವೇದಿಕೆಯ ಪಾರ್ಶ್ವಗಳನ್ನು ಹಲಗೆಗಳಿಂದ ಮಾಡಿಸಬೇಕು. ನಾನು ಬೆಟ್ಟದ ಮೇಲೆ ನಿನಗೆ ತೋರಿಸಿದ ಪ್ರಕಾರವೇ ಯಜ್ಞವೇದಿಕೆಯನ್ನು ಮಾಡಿಸಬೇಕು.
ಪವಿತ್ರಗುಡಾರದ ಅಂಗಳ
9 “ಪವಿತ್ರಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ದಕ್ಷಿಣ ದಿಕ್ಕಿನಲ್ಲಿ ನೂರು ಮೊಳ ಉದ್ದದ ಪರದೆಗಳ ಗೋಡೆಯಿರಬೇಕು. ಈ ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು. 10 ಇಪ್ಪತ್ತು ಕಂಬಗಳನ್ನು ಮತ್ತು ಆ ಕಂಬಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳನ್ನು ಮತ್ತು ಪರದೆಯ ಕೋಲುಗಳಿಗೆ ಬೆಳ್ಳಿಯ ಕಂಬಿಗಳನ್ನು ಮಾಡಿಸಬೇಕು. 11 ಉತ್ತರ ದಿಕ್ಕಿನಲ್ಲಿ ಸಹ ನೂರು ಮೊಳ ಉದ್ದದ ಪರದೆಗಳ ಗೋಡೆಯಿರಬೇಕು. ಅದಕ್ಕೆ ಇಪ್ಪತ್ತು ಕಂಬಿಗಳು ಮತ್ತು ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳು ಇರಬೇಕು. ಕಂಬಗಳ ಕೊಂಡಿಗಳನ್ನು ಮತ್ತು ಪರದೆಯ ಕಟ್ಟುಗಳನ್ನು ಬೆಳ್ಳಿಯಿಂದ ಮಾಡಿಸಬೇಕು.
12 “ಪಶ್ಚಿಮದಿಕ್ಕಿನಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದದ ಪರದೆಗಳೂ ಹತ್ತು ಕಂಬಗಳೂ ಮತ್ತು ಹತ್ತು ಗದ್ದಿಗೇಕಲ್ಲುಗಳೂ ಇರಬೇಕು. 13 ಅಂಗಳದ ಪೂರ್ವದಿಕ್ಕಿನಲ್ಲಿ ಐವತ್ತು ಮೊಳ ಉದ್ದ ಇರಬೇಕು. 14 ಈ ಪೂರ್ವದಿಕ್ಕಿನಲ್ಲಿ ಅಂಗಳದ ಪ್ರವೇಶದ್ವಾರವಿರುತ್ತದೆ. ಪ್ರವೇಶದ್ವಾರದ ಒಂದು ಕಡೆಯಲ್ಲಿ ಹದಿನೈದು ಮೊಳ ಉದ್ದದ ಪರದೆಗಳು, ಮೂರು ಕಂಬಗಳು ಮತ್ತು ಮೂರು ಗದ್ದಿಗೇಕಲ್ಲುಗಳು ಇರಬೇಕು. 15 ಇನ್ನೊಂದು ಕಡೆಯಲ್ಲಿ ಹದಿನೈದು ಮೊಳ ಉದ್ದದ ಪರದೆಗಳು, ಮೂರು ಕಂಬಗಳು; ಮೂರು ಗದ್ದಿಗೇಕಲ್ಲುಗಳು ಇರಬೇಕು.
16 “ಅಂಗಳದ ದ್ವಾರವನ್ನು ಮುಚ್ಚುವುದಕ್ಕೆ ಇಪ್ಪತ್ತು ಮೊಳ ಉದ್ದದ ಪರದೆಯನ್ನು ಮಾಡಿಸಬೇಕು. ಪರದೆಯನ್ನು ಉತ್ತಮ ನಾರಿನ ಬಟ್ಟೆಯಿಂದ ಮತ್ತು ನೀಲಿ, ನೇರಳೆ ಮತ್ತು ಕೆಂಪು ದಾರಗಳಿಂದ ಮಾಡಿಸಬೇಕು. ಆ ಪರದೆಯಲ್ಲಿ ಅಲಂಕೃತವಾದ ಚಿತ್ರಗಳನ್ನು ಬುಟೇದಾರೀ ಕೆಲಸದವರಿಂದ ಮಾಡಿಸಬೇಕು. ಆ ಪರದೆಗೆ ನಾಲ್ಕು ಕಂಬಗಳು ಮತ್ತು ನಾಲ್ಕು ಗದ್ದಿಗೇಕಲ್ಲುಗಳು ಇರಬೇಕು. 17 ಅಂಗಳದ ಸುತ್ತಲಿರುವ ಕಂಬಗಳನ್ನೆಲ್ಲ ಬೆಳ್ಳಿಯ ಪರದೆ ಕೋಲುಗಳೊಡನೆ ಜೋಡಿಸಬೇಕು. ಕಂಬಗಳ ಕೊಂಡಿಗಳನ್ನು ಬೆಳ್ಳಿಯಿಂದಲೂ ಕಂಬಗಳ ಗದ್ದಿಗೇಕಲ್ಲುಗಳನ್ನು ತಾಮ್ರದಿಂದಲೂ ಮಾಡಿಸಬೇಕು. 18 ಅಂಗಳವು ನೂರು ಮೊಳ ಉದ್ದ ಮತ್ತು ಐವತ್ತು ಮೊಳ ಅಗಲ ಇರಬೇಕು. ಅಂಗಳದ ಸುತ್ತಲಿರುವ ಪರದೆಗಳ ಗೋಡೆಯು ಐದು ಮೊಳ ಎತ್ತರವಿರಬೇಕು. ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು. ಕಂಬಗಳ ಕೆಳಗಿರುವ ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಿಸಬೇಕು. 19 ಪವಿತ್ರಗುಡಾರದ ಉಪಕರಣಗಳನ್ನೂ ಗುಡಾರದ ಗೂಟಗಳನ್ನೂ ಗುಡಾರದ ಸುತ್ತಲೂ ಇರುವ ಪರದೆಯ ಗೂಟಗಳನ್ನೂ ತಾಮ್ರದಿಂದ ಮಾಡಿಸಬೇಕು.
ದೀಪದ ಎಣ್ಣೆ
20 “ಉತ್ತಮವಾದ ಆಲಿವ್ಎಣ್ಣೆಯನ್ನು ತರಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. ಪ್ರತಿ ಸಾಯಂಕಾಲ ಉರಿಸುವ ದೀಪಕ್ಕೆ ಈ ಎಣ್ಣೆಯನ್ನು ಉಪಯೋಗಿಸು. 21 ಆರೋನ ಮತ್ತು ಅವನ ಗಂಡುಮಕ್ಕಳಿಗೆ ದೀಪವನ್ನು ನೋಡಿಕೊಳ್ಳುವ ಕೆಲಸವಿರುವುದು. ಅವರು ದೇವದರ್ಶನಗುಡಾರದ ಮೊದಲಿನ ಕೋಣೆಯೊಳಗೆ ಹೋಗುವರು. ಇದು ಎರಡು ಕೋಣೆಗಳನ್ನು ಪ್ರತ್ಯೇಕಿಸುವ ಪರದೆಯ ಹಿಂದೆ ಒಪ್ಪಂದವಿರುವ ಕೋಣೆಯ ಹೊರಗೆ ಇರುತ್ತದೆ. ಈ ಸ್ಥಳದಲ್ಲಿ ದೀಪವು ಯೆಹೋವನ ಮುಂದೆ ಸಾಯಂಕಾಲದಿಂದ ಮುಂಜಾನೆಯವರೆಗೆ ಯಾವಾಗಲೂ ಉರಿಯುತ್ತಿರುವಂತೆ ಅವರು ನೋಡಿಕೊಳ್ಳುವರು. ಇಸ್ರೇಲರು ಮತ್ತು ಅವರ ಸಂತತಿಯವರು ಈ ನಿಯಮಕ್ಕೆ ಶಾಶ್ವತವಾಗಿ ವಿಧೇಯರಾಗಬೇಕು” ಎಂದು ಹೇಳಿದನು.
ಯಾಜಕರು ಧರಿಸಬೇಕಾದ ಬಟ್ಟೆಗಳು
28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಂದ ನಿನ್ನ ಬಳಿಗೆ ಬರಲು ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಾದ ನಾದಾಬ, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೂ ಹೇಳು. ಇವರು ಯಾಜಕರಾಗಿ ನನ್ನ ಸೇವೆ ಮಾಡುವರು.
2 “ನಿನ್ನ ಅಣ್ಣನಾದ ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿಸು. ಈ ಬಟ್ಟೆಗಳು ಅವನಿಗೆ ಘನತೆಯನ್ನೂ ಗೌರವವನ್ನೂ ನೀಡುತ್ತವೆ. 3 ಈ ಬಟ್ಟೆಗಳನ್ನು ಮಾಡುವಂಥ ಕೆಲವು ನಿಪುಣರಿದ್ದಾರೆ. ನಾನು ಅವರಿಗೆ ವಿಶೇಷ ಜ್ಞಾನವನ್ನು ಕೊಟ್ಟಿದ್ದೇನೆ. ಆರೋನನಿಗೆ ಬೇಕಾದ ಬಟ್ಟೆಗಳನ್ನು ಮಾಡಲು ಅವರಿಗೆ ಹೇಳು. ಅವನು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾನೆಂದು ಈ ಬಟ್ಟೆಗಳು ತೋರಿಸುತ್ತವೆ. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. 4 ಅವರು ಮಾಡತಕ್ಕ ಬಟ್ಟೆಗಳು ಯಾವುವೆಂದರೆ: ದೈವನಿರ್ಣಯಕ ಪದಕ, ಏಫೋದು, ನೀಲಿಯ ನಿಲುವಂಗಿ, ಹೆಣೆದ ಬಿಳಿಯ ನಿಲುವಂಗಿ, ಮುಂಡಾಸು ಮತ್ತು ನಡುಕಟ್ಟು. ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಿಗೂ ಈ ವಿಶೇಷ ಬಟ್ಟೆಗಳನ್ನು ಅವರು ಮಾಡಬೇಕು. ಆಗ ಆರೋನನೂ ಅವನ ಗಂಡುಮಕ್ಕಳೂ ಯಾಜಕರಾಗಿ ನನ್ನ ಸೇವೆಮಾಡಬಹುದು. 5 ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಲು ಅವರಿಗೆ ಹೇಳು.
ಏಫೋದು ಮತ್ತು ನಡುಕಟ್ಟು
6 “ಏಫೋದನ್ನು ಚಿನ್ನದ ದಾರಗಳು, ನಾರಿನಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಚಾಣಾಕ್ಷತೆಯಿಂದ ಹೆಣೆದು ತಯಾರಿಸಬೇಕು. 7 ಏಫೋದಿನ ಪ್ರತಿಭುಜದಲ್ಲಿ ಭುಜದ ಪಟ್ಟಿಯಿರಬೇಕು. ಭುಜದ ಈ ಪಟ್ಟಿಗಳು ಏಫೋದಿನ ಎರಡು ಕೊನೆಗಳಿಗೆ ಕಟ್ಟಿರಬೇಕು.
8 “ಇವರು ಏಫೋದಿಗೆ ಸೇರಿಸಲ್ಪಟ್ಟಿರುವ ನಡುಕಟ್ಟನ್ನು ಬಹಳ ಎಚ್ಚರಿಕೆಯಿಂದ ಹೆಣೆಯಬೇಕು. ಏಫೋದನ್ನು ತಯಾರಿಸಿದಂತೆಯೇ ಈ ನಡುಕಟ್ಟನ್ನು ತಯಾರಿಸಬೇಕು. ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು.
9 “ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ರೇಲನ ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರೆಸು. 10 ಒಂದು ರತ್ನದ ಮೇಲೆ ಆರು ಹೆಸರುಗಳನ್ನೂ ಇನ್ನೊಂದು ರತ್ನದ ಮೇಲೆ ಆರು ಹೆಸರುಗಳನ್ನೂ ಬರೆಸು. ಹಿರಿಮಗನಿಂದ ಹಿಡಿದು ಕಿರಿ ಮಗನವರೆಗೆ ಕ್ರಮಾನುಸಾರವಾಗಿ ಹೆಸರುಗಳನ್ನು ಬರೆಸು. 11 ಈ ಕಲ್ಲುಗಳ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರನ್ನು ಕೆತ್ತಿಸು. ಒಬ್ಬ ಕೆಲಸಗಾರನು ಮುದ್ರೆಯನ್ನು ಮಾಡುವ ರೀತಿಯಲ್ಲಿ ಇದನ್ನು ಮಾಡಿಸು. ಚಿನ್ನದ ಕುಂದಣದಲ್ಲಿ ರತ್ನಗಳನ್ನಿಡು. 12 ಬಳಿಕ ಈ ಎರಡು ರತ್ನಗಳನ್ನು ಏಫೋದಿನ ಪ್ರತಿಭುಜದ ಪಟ್ಟಿಯಲ್ಲಿಡು. ಆರೋನನು ಯೆಹೋವನ ಮುಂದೆ ನಿಲ್ಲುವಾಗ ಈ ವಿಶೇಷ ಅಂಗಿಯನ್ನು ಧರಿಸಿಕೊಂಡಿರುವನು. ಇಸ್ರೇಲನ ಗಂಡುಮಕ್ಕಳ ಹೆಸರುಗಳುಳ್ಳ ಎರಡು ರತ್ನಗಳು ಏಫೋದಿನ ಮೇಲಿರುತ್ತವೆ. ದೇವರು ಇಸ್ರೇಲರನ್ನು ಜ್ಞಾಪಿಸಿಕೊಳ್ಳುವಂತೆ ಈ ರತ್ನಗಳು ಮಾಡುವವು. 13 ಏಫೋದಿನಲ್ಲಿ ಕಲ್ಲುಗಳು ಬಿಗಿಯಾಗಿ ಹಿಡಿದುಕೊಂಡಿರಲು ಉತ್ತಮ ಚಿನ್ನವನ್ನು ಉಪಯೋಗಿಸು. 14 ಹೆಣಿಗೆ ಕೆಲಸದಿಂದ ಶುದ್ಧಬಂಗಾರದ ಎರಡು ಸರಪಣಿಗಳನ್ನು ಮಾಡಿಸಿ ಚಿನ್ನದ ಗೂಡುಗಳಿಗೆ ಬಿಗಿಯಾಗಿ ಸಿಕ್ಕಿಸಬೇಕು.
ದೈವನಿರ್ಣಯದ ಪದಕ
15 “ಮಹಾಯಾಜಕನಿಗೆ ದೈವನಿರ್ಣಯದ ಪದಕವನ್ನು ಮಾಡಿಸು. ಏಫೋದನ್ನು ಮಾಡಿಸಿದಂತೆ ನಿಪುಣರಾದ ಕೆಲಸಗಾರರಿಂದ ಇದನ್ನು ಮಾಡಿಸಬೇಕು. ಚಿನ್ನದ ದಾರಗಳು, ಉತ್ಕೃಷ್ಟವಾದ ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪು ದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು. 16 ಅದು ಚೌಕವಾಗಿದ್ದು ಒಂಭತ್ತು ಇಂಚು ಉದ್ದವಾಗಿಯೂ ಒಂಭತ್ತು ಇಂಚು ಅಗಲವಾಗಿಯೂ ಇರಬೇಕು. 17 ಅದರ ಮೇಲೆ ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ಹಾಕಿಸಬೇಕು. ರತ್ನಗಳ ಮೊದಲಿನ ಸಾಲಿನಲ್ಲಿ ಮಾಣಿಕ್ಯ, ಪುಷ್ಪರಾಗ, ಸ್ಪಟಿಕಗಳಿರಬೇಕು. 18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ, ಪಚ್ಚೆಗಳಿರಬೇಕು. 19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ ಮತ್ತು ಧೂಮ್ರಮಣಿಗಳಿರಬೇಕು. 20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ ಮತ್ತು ಬೆರುಲ್ಲ ವಜ್ರಗಳಿರಬೇಕು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು. 21 ಇಸ್ರೇಲನ ಗಂಡುಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿರಬೇಕು. ಪ್ರತಿಯೊಂದು ಕಲ್ಲುಗಳಲ್ಲಿ ಇಸ್ರೇಲನ ಗಂಡುಮಕ್ಕಳ ಒಬ್ಬೊಬ್ಬರ ಹೆಸರನ್ನು ಬರೆಸಬೇಕು. ಒಬ್ಬ ಕೆಲಸಗಾರನು ಮುದ್ರೆಯನ್ನು ಕೆತ್ತುವಂತೆ ಈ ಹೆಸರುಗಳನ್ನು ಪ್ರತಿ ರತ್ನದ ಮೇಲೆ ಕೆತ್ತಿಸಬೇಕು.
22 “ದೈವನಿರ್ಣಯ ಪದಕದಲ್ಲಿ ಶುದ್ಧಬಂಗಾರದ ಸರಪಣಿಗಳನ್ನು ಮಾಡಿಸು. ಈ ಸರಪಣಿಗಳು ಹುರಿಗಳಂತಿರುವ ಹಗ್ಗದಂತೆ ಇರಬೇಕು. 23 ಬಂಗಾರದ ಎರಡು ಬಳೆಗಳನ್ನು ಮಾಡಿಸಿ ಅದರ ಎರಡು ಕೊನೆಗಳಲ್ಲಿ ಸಿಕ್ಕಿಸಬೇಕು. 24 ಅದರ ಕೊನೆಯಲ್ಲಿರುವ ಎರಡು ಬಳೆಗಳ ಮೂಲಕ ಚಿನ್ನದ ಎರಡು ಸರಪಣಿಗಳನ್ನು ಸಿಕ್ಕಿಸಬೇಕು. 25 ಚಿನ್ನದ ಸರಪಣಿಗಳ ಇನ್ನೊಂದು ಕೊನೆಗಳನ್ನು ಎರಡು ಪಟ್ಟಿಗಳಿಗೆ ಬಿಗಿಯಾಗಿ ಕಟ್ಟಿಸಬೇಕು. ಇದು ಮುಂಬದಿಯಲ್ಲಿರುವ ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಬಿಗಿಯಾಗಿ ಹಿಡಿದುಕೊಂಡಿರುವಂತೆ ಮಾಡುವುದು. 26 ಇನ್ನೂ ಎರಡು ಚಿನ್ನದ ಬಳೆಗಳನ್ನು ಮಾಡಿಸಿ, ಅವುಗಳನ್ನು ದೈವನಿರ್ಣಯದ ಪದಕದ ಬೇರೆ ಎರಡು ಕೊನೆಗಳಿಗೆ ಸಿಕ್ಕಿಸು. ಇದು ದೈವನಿರ್ಣಯದ ಪದಕದ ಒಳಗಣ ಅಂಚಿನಲ್ಲಿರುವುದು. 27 ಇನ್ನೆರಡು ಚಿನ್ನದ ಬಳೆಗಳನ್ನು ಮಾಡಿಸಿ ಅವುಗಳನ್ನು ಏಫೋದಿನ ಭುಜಪಟ್ಟಿಗಳ ಮುಂಭಾಗದ ಕೆಳಗೆ ಸಿಕ್ಕಿಸು. ಈ ಚಿನ್ನದ ಬಳೆಗಳನ್ನು ಏಫೋದಿನ ನಡುಕಟ್ಟಿನ ಮೇಲ್ಗಡೆ ಇರಿಸು. 28 ದೈವನಿರ್ಣಯದ ಪದಕದ ಬಳೆಗಳನ್ನು ಏಫೋದಿನ ಬಳೆಗಳಿಗೆ ಜೋಡಿಸಲು ನೀಲಿದಾರವನ್ನು ಉಪಯೋಗಿಸು. ಈ ರೀತಿಯಲ್ಲಿ ದೈವನಿರ್ಣಯದ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿರುವುದು.
29 “ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯದ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ಯಾಯತೀರಿಸಲು ಧರಿಸಿಕೊಂಡಿರುವ ದೈವನಿರ್ಣಯದ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ರೇಲನ ಹನ್ನೆರಡು ಮಂದಿ ಗಂಡುಮಕ್ಕಳನ್ನು ಯೆಹೋವನಿಗೆ ಯಾವಾಗಲೂ ಜ್ಞಾಪಿಸಲಾಗುವುದು. 30 ದೈವನಿರ್ಣಯದ ಪದಕದೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಡು. ಆರೋನನು ಯೆಹೋವನ ಮುಂದೆ ಹೋಗುವಾಗ ಅವುಗಳು ಅವನ ಎದೆಯ ಮೇಲಿರುವವು. ಹೀಗೆ ಆರೋನನು ಯೆಹೋವನ ಮುಂದೆ ನಿಲ್ಲುವಾಗಲೆಲ್ಲಾ, ಜನರಿಗೆ ತೀರ್ಪು ನೀಡತಕ್ಕದ್ದನ್ನು ಯಾವಾಗಲೂ ತನ್ನ ಎದೆಯ ಮೇಲೆ ಹೊತ್ತುಕೊಂಡಿರುವನು.
ಯಾಜಕರ ಇತರ ಬಟ್ಟೆಗಳು
31 “ಏಫೋದಿನ ಒಳಗೆ ಹಾಕಿಕೊಳ್ಳಲು ಒಂದು ನಿಲುವಂಗಿಯನ್ನು ನೀಲಿಬಟ್ಟೆಯಿಂದ ಮಾಡಿಸಬೇಕು. 32 ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟೆಯನ್ನು ಹೊಲಿಸು. ಈ ಬಟ್ಟೆಯು ಸಂದು ಹರಿದುಹೋಗದಂತೆ ಕಾಪಾಡುವುದು. 33 ಬಟ್ಟೆಯ ಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳನ್ನು ಮಾಡಲು ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಬೇಕು. ಆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ನೇತಾಡುವಂತೆ ಸಿಕ್ಕಿಸಬೇಕು. ದಾಳಿಂಬೆ ಹಣ್ಣಿನ ಚೆಂಡುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಸಿಕ್ಕಿಸಬೇಕು. 34 ಹೀಗೆ ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ಗೆಜ್ಜೆಗಳು ಮತ್ತು ದಾಳಿಂಬೆ ಹಣ್ಣುಗಳು ಇರಬೇಕು. ಪ್ರತಿ ಎರಡು ದಾಳಿಂಬೆ ಹಣ್ಣಿನ ನಡುವೆ ಗೆಜ್ಜೆ ಇರಬೇಕು. 35 ಆರೋನನು ಯಾಜಕನಾಗಿ ಸೇವೆಮಾಡುವಾಗ ಈ ನಿಲುವಂಗಿಯನ್ನು ಧರಿಸಿಕೊಂಡಿರುವನು. ಯೆಹೋವನ ಮುಂದೆ ನಿಲ್ಲುವುದಕ್ಕೆ ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ ಗೆಜ್ಜೆಗಳು ಶಬ್ದ ಮಾಡುತ್ತಿರುತ್ತವೆ. ಅವನು ಪವಿತ್ರಸ್ಥಳವನ್ನು ಬಿಡುವಾಗಲೂ ಗೆಜ್ಜೆಗಳು ಶಬ್ಧ ಮಾಡುತ್ತಿರುತ್ತವೆ. ಹೀಗಾಗಿ ಆರೋನನು ಸಾಯುವುದಿಲ್ಲ.
36 “ಶುದ್ಧಬಂಗಾರದ ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ “ಯೆಹೋವನಿಗೆ ಮೀಸಲು” ಎಂಬ ಮಾತುಗಳನ್ನು ಚಿನ್ನದಲ್ಲಿ ಕೆತ್ತಿಸಬೇಕು. 37 ಚಿನ್ನದ ಪಟ್ಟಿಯನ್ನು ನೀಲಿದಾರಕ್ಕೆ ಬಿಗಿಯಾಗಿ ಕಟ್ಟಿಸಬೇಕು. ನೀಲಿದಾರವನ್ನು ಮುಂಡಾಸದ ಸುತ್ತಲೂ ಅದರಲ್ಲಿ ಕೆತ್ತಿಸಬೇಕು. ಚಿನ್ನದ ಪಟ್ಟಿಯು ಮುಂಡಾಸದ ಮುಂಭಾಗದಲ್ಲಿರಬೇಕು. 38 ಆರೋನನು ಇದನ್ನು ತನ್ನ ಹಣೆಯ ಮೇಲೆ ಧರಿಸಿಕೊಳ್ಳುವನು. ಹೀಗೆ, ಇಸ್ರೇಲರು ಅರ್ಪಿಸಿದ ಕಾಣಿಕೆಗಳಲ್ಲಿ ದೋಷವೇನಾದರೂ ಇದ್ದರೆ ಅವನು ಅದನ್ನು ತನ್ನ ಮೇಲೆ ತೆಗೆದುಕೊಂಡು ತಾನೇ ಅದನ್ನು ವಹಿಸಿಕೊಳ್ಳುವನು. ಇವು ಜನರು ಯೆಹೋವನಿಗೆ ಸಮರ್ಪಿಸುವ ಕಾಣಿಕೆಗಳಾಗಿವೆ. ಜನರ ಕಾಣಿಕೆಗಳನ್ನು ಯೆಹೋವನು ಅಂಗೀಕರಿಸುವಂತೆ ಆರೋನನು ಇದನ್ನು ಯಾವಾಗಲೂ ತನ್ನ ಶಿರದಲ್ಲಿ ಧರಿಸಿಕೊಂಡಿರುವನು.
39 “ಹೆಣೆದ ಅಂಗಿಯನ್ನು ಮತ್ತು ಮುಂಡಾಸವನ್ನು ಮಾಡಲು ಉತ್ಕೃಷ್ಟವಾದ ನಾರಿನ ಬಟ್ಟೆಯನ್ನು ಉಪಯೋಗಿಸು. ನಡುಕಟ್ಟನ್ನು ಬುಟ್ಟೀದಾರಿ ಕೆಲಸದಿಂದ ಮಾಡಿಸಬೇಕು. 40 ಆರೋನನ ಗಂಡುಮಕ್ಕಳಿಗೂ ಅಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸಗಳನ್ನು ಮಾಡಿಸು. ಇವು ಅವರಿಗೆ ಘನತೆ ಮತ್ತು ಗೌರವಗಳನ್ನು ಕೊಡುತ್ತವೆ. 41 ನಿನ್ನ ಸಹೋದರನಾದ ಆರೋನನಿಗೆ ಮತ್ತು ಅವನ ಗಂಡುಮಕ್ಕಳಿಗೆ ಬಟ್ಟೆಗಳನ್ನು ತೊಡಿಸು. ಬಳಿಕ ಅವರನ್ನು ಯಾಜಕರನ್ನಾಗಿ ಮಾಡಲು ವಿಶೇಷ ತೈಲದಿಂದ ಅಭಿಷೇಕಿಸು. ಇದು ಅವರನ್ನು ಪ್ರತಿಷ್ಠಿಸುವುದು ಮತ್ತು ಪವಿತ್ರರನ್ನಾಗಿ ಮಾಡುವುದು. ಅವರು ಯಾಜಕರಾಗಿ ನನ್ನ ಸೇವೆ ಮಾಡುವರು.
42 “ಯಾಜಕರಿಗೆ ಒಳಗಿನ ಉಡುಪುಗಳನ್ನು ಮಾಡಲು ನಾರುಬಟ್ಟೆಯನ್ನು ಉಪಯೋಗಿಸು. ಈ ಒಳಗಿನ ಉಡುಪುಗಳು ಅವರನ್ನು ಸೊಂಟದಿಂದ ತೊಡೆಯವರೆಗೆ ಮುಚ್ಚುವುದು. 43 ಆರೋನನು ಮತ್ತು ಅವನ ಗಂಡುಮಕ್ಕಳು ದೇವದರ್ಶನ ಗುಡಾರದೊಳಗೆ ಪ್ರವೇಶಿಸುವಾಗಲೆಲ್ಲಾ ಈ ಉಡುಪುಗಳನ್ನು ಧರಿಸಿಕೊಳ್ಳಬೇಕು. ಪವಿತ್ರಸ್ಥಳದಲ್ಲಿ ಯಾಜಕರಾಗಿ ಸೇವೆಮಾಡಲು ಯಜ್ಞವೇದಿಕೆಯ ಬಳಿಗೆ ಬರುವಾಗ ಅವರು ಈ ಬಟ್ಟೆಗಳನ್ನು ಧರಿಸಿಕೊಂಡಿರಬೇಕು. ಅವರು ಈ ಉಡುಪುಗಳನ್ನು ಧರಿಸಿಕೊಳ್ಳದಿದ್ದರೆ, ದೋಷಿಗಳಾಗಿ ಸಾಯುವರು. ಇವುಗಳೆಲ್ಲಾ ಆರೋನನಿಗೂ ಅವನ ನಂತರ ಅವನ ಕುಟುಂಬಸ್ಥರೆಲ್ಲರಿಗೂ ಶಾಶ್ವತವಾದ ಕಟ್ಟಳೆಯಾಗಿವೆ.”
ಅರಸನಂತೆ ಯೇಸುವಿನ ಪ್ರವೇಶ
(ಮಾರ್ಕ 11:1-11; ಲೂಕ 19:28-38; ಯೋಹಾನ 12:12-19)
21 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಾ ಆಲಿವ್ ಗುಡ್ಡದ ಸಮೀಪದಲ್ಲಿದ್ದ ಬೆತ್ಛಗೆಯನ್ನು ಸಮೀಸಿದರು. 2 ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮ ಎದುರಿನಲ್ಲಿ ಇರುವ ಪಟ್ಟಣದೊಳಕ್ಕೆ ಹೋಗಿ. ನೀವು ಅದನ್ನು ಪ್ರವೇಶಿಸಿದಾಗ, ಅಲ್ಲೇ ಕಟ್ಟಿರುವ ಒಂದು ಕತ್ತೆಯನ್ನು ಕಾಣುತ್ತೀರಿ. ಆ ಕತ್ತೆಯ ಜೊತೆಯಲ್ಲಿ ಒಂದು ಕತ್ತೆಮರಿಯನ್ನು ಸಹ ನೀವು ಕಾಣುವಿರಿ. ಆ ಎರಡು ಕತ್ತೆಗಳನ್ನು ಬಿಚ್ಚಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. 3 ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು.
4 ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ:
5 “ಸೀಯೋನ್ ನಗರಿಗೆ ಹೇಳಿರಿ,
‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ.
ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ.
ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’”(A)
6 ಆ ಶಿಷ್ಯರು ಹೋಗಿ, ಯೇಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನೂ ಮತ್ತು ಅದರ ಮರಿಯನ್ನೂ ಯೇಸುವಿನ ಬಳಿಗೆ ತಂದರು. 7 ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು. 8 ಆಗ ಯೇಸು ಕುಳಿತುಕೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೇಸುವಿಗಾಗಿ ದಾರಿಯ ಮೇಲೆ ಹಾಸಿದರು. ಕೆಲವರು ಮರಗಳಿಂದ ಚಿಗುರುಗಳನ್ನು ಕತ್ತರಿಸಿಕೊಂಡು ಬಂದು ದಾರಿಯ ಮೇಲೆ ಹರಡಿದರು. 9 ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು:
ಪರಲೋಕದ ದೇವರನ್ನು ಕೊಂಡಾಡಿರಿ!”
10 ಬಳಿಕ ಯೇಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನು ಯಾರು?” ಎಂದು ಕೇಳಿದರು.
11 ಯೇಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೇಸು. ಈತನು ಗಲಿಲಾಯ ಪ್ರಾಂತ್ಯದಲ್ಲಿರುವ ನಜರೇತ್ ಎಂಬ ಊರಿನ ಪ್ರವಾದಿ” ಎಂದು ಉತ್ತರಕೊಟ್ಟರು.
ದೇವಾಲಯವು ಪ್ರಾರ್ಥನಾಲಯ
(ಮಾರ್ಕ 11:15-19; ಲೂಕ 19:45-48; ಯೋಹಾನ 2:13-22)
12 ಯೇಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಕೊಂಡುಕೊಳ್ಳುತ್ತಿದ್ದ ಜನರನ್ನೆಲ್ಲಾ ಆತನು ಹೊರಗೆ ಓಡಿಸಿಬಿಟ್ಟನು; ನಾಣ್ಯ ವಿನಿಮಯ ಮಾಡುತ್ತಿದ್ದವರ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 13 ಯೇಸು ಅಲ್ಲಿದ್ದ ಜನರಿಗೆಲ್ಲ, “‘ನನ್ನ ಆಲಯವು ಪ್ರಾರ್ಥನಾಲಯ ಎನಿಸಿಕೊಳ್ಳುವುದು’(C) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರ ಗವಿ’ಯನ್ನಾಗಿ ಮಾಡುತ್ತಿದ್ದೀರಿ”(D) ಎಂದು ಹೇಳಿದನು.
14 ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನು ಗುಣಪಡಿಸಿದನು. 15 ಮಹಾಯಾಜಕರು ಮತ್ತು ಧರ್ಮೋಪದೇಶಕರು ಇದನ್ನು ನೋಡಿದರು. ಯೇಸು ಮಹತ್ಕಾರ್ಯಗಳನ್ನು ಮಾಡುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಚಿಕ್ಕಮಕ್ಕಳು ಯೇಸುವನ್ನು ಕೊಂಡಾಡುತ್ತಿರುವುದನ್ನು ಅವರು ಗಮನಿಸಿದರು. ಚಿಕ್ಕ ಮಕ್ಕಳು, “ದಾವೀದನ ಕುಮಾರನಿಗೆ ಸ್ತೋತ್ರವಾಗಲಿ” ಎಂದು ಕೂಗುತ್ತಿದ್ದರು. ಇವುಗಳಿಂದಾಗಿ ಯಾಜಕರು ಮತ್ತು ಧರ್ಮೋಪದೇಶಕರು ಕೋಪಗೊಂಡರು.
16 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು.
ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’(E) ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು.
17 ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಥಾನಿ ಪಟ್ಟಣಕ್ಕೆ ಹೊರಟುಹೋದನು. ಯೇಸು ಆ ರಾತ್ರಿ ಅಲ್ಲಿಯೇ ತಂಗಿದನು.
ನಂಬಿಕೆಗಿರುವ ಶಕ್ತಿ
(ಮಾರ್ಕ 11:12-14,20-24)
18 ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19 ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು.
20 ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು.
21 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. 22 ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International