Old/New Testament
ದೇವರು ಇಸ್ರೇಲನಿಗೆ ಕೊಟ್ಟ ಭರವಸೆ
46 ಆದ್ದರಿಂದ ಇಸ್ರೇಲನು ಈಜಿಪ್ಟಿಗೆ ಪ್ರಯಾಣ ಬೆಳೆಸಿದನು. ಅವನು ಬೇರ್ಷೆಬಕ್ಕೆ ಹೋಗಿ ತನ್ನ ತಂದೆಯಾದ ಇಸಾಕನ ದೇವರನ್ನು ಆರಾಧಿಸಿ ಯಜ್ಞಗಳನ್ನು ಅರ್ಪಿಸಿದನು. 2 ಆ ರಾತ್ರಿ ದೇವರು ಕನಸಿನಲ್ಲಿ ಅವನೊಂದಿಗೆ ಮಾತನಾಡಿದನು. ದೇವರು ಅವನನ್ನು, “ಯಾಕೋಬನೇ, ಯಾಕೋಬನೇ” ಎಂದು ಕರೆದನು.
ಅದಕ್ಕೆ ಇಸ್ರೇಲನು, “ಇಗೋ, ಇದ್ದೇನೆ” ಎಂದು ಉತ್ತರಕೊಟ್ಟನು.
3 ದೇವರು ಅವನಿಗೆ, “ನಾನೇ ದೇವರು, ನಾನೇ ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗಲು ಹೆದರಬೇಡ. ಈಜಿಪ್ಟಿನಲ್ಲಿ ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವೆ. 4 ನಾನು ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಬಳಿಕ ನಾನೇ ನಿನ್ನನ್ನು ಮತ್ತೆ ಈಜಿಪ್ಟಿನಿಂದ ಕರೆದುಕೊಂಡು ಬರುವೆನು. ನೀನು ಈಜಿಪ್ಟಿನಲ್ಲಿ ಮರಣ ಹೊಂದಿದರೂ ಯೋಸೇಫನು ನಿನ್ನ ಸಂಗಡವಿರುವನು. ನೀನು ಸತ್ತಾಗ ಅವನು ತನ್ನ ಕೈಗಳಿಂದ ನಿನ್ನ ಕಣ್ಣುಗಳನ್ನು ಮುಚ್ಚುವನು” ಎಂದು ಹೇಳಿದನು.
ಈಜಿಪ್ಟಿಗೆ ಇಸ್ರೇಲನ ಪ್ರಯಾಣ
5 ಆಮೇಲೆ ಯಾಕೋಬನು ಬೇರ್ಷೆಬವನ್ನು ಬಿಟ್ಟು ಈಜಿಪ್ಟಿಗೆ ಪ್ರಯಾಣ ಮಾಡಿದನು. ಇಸ್ರೇಲನ ಗಂಡುಮಕ್ಕಳು ತಮ್ಮ ತಂದೆಯನ್ನೂ ತಮ್ಮ ಹೆಂಡತಿಯರನ್ನೂ ತಮ್ಮ ಎಲ್ಲಾ ಮಕ್ಕಳನ್ನೂ ಕರೆದುಕೊಂಡು ಹೋದರು. ಫರೋಹನು ಕಳುಹಿಸಿದ್ದ ರಥಗಳಲ್ಲಿ ಅವರು ಪ್ರಯಾಣ ಮಾಡಿದರು. 6 ಇದಲ್ಲದೆ ಅವರು ತಮ್ಮ ದನಕರುಗಳನ್ನೂ ಕಾನಾನ್ ದೇಶದಲ್ಲಿ ತಾವು ಹೊಂದಿದ್ದ ಪ್ರತಿಯೊಂದನ್ನೂ ತೆಗೆದುಕೊಂಡು ಹೋದರು. ಹೀಗೆ ಇಸ್ರೇಲನು ತನ್ನ ಎಲ್ಲಾ ಮಕ್ಕಳೊಂದಿಗೆ ಮತ್ತು ತನ್ನ ಕುಟುಂಬದೊಂದಿಗೆ ಈಜಿಪ್ಟಿಗೆ ಹೋದನು. 7 ಅವನ ಜೊತೆಯಲ್ಲಿ ಅವನ ಗಂಡುಮಕ್ಕಳು, ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳು ಇದ್ದರು. ಅವನ ಸಂಸಾರದವರೆಲ್ಲ ಅವನ ಜೊತೆ ಈಜಿಪ್ಟಿಗೆ ಹೋದರು.
ಯಾಕೋಬನ ಕುಟುಂಬ
8 ಇಸ್ರೇಲನ ಸಂಗಡ ಈಜಿಪ್ಟಿಗೆ ಹೋದ ಅವನ ಮಕ್ಕಳ ಮತ್ತು ಕುಟುಂಬದವರ ಹೆಸರುಗಳು ಇಂತಿವೆ:
ಯಾಕೋಬನ ಮೊದಲನೆಯ ಮಗ ರೂಬೇನನು. 9 ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
10 ಸಿಮೆಯೋನನ ಮಕ್ಕಳು: ಯೆಮೂವೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಲ್ಲಿ ಹುಟ್ಟಿದ ಸೌಲ.
11 ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
12 ಯೆಹೂದನ ಮಕ್ಕಳು: ಏರ್, ಓನಾನ್, ಶೇಲಾಹ, ಪೆರೆಚ್ ಮತ್ತು ಜೆರಹ. (ಏರ್ ಮತ್ತು ಓನಾನ್ ಕಾನಾನಿನಲ್ಲಿ ಇರುವಾಗಲೇ ಸತ್ತುಹೋದರು.) ಪೆರೆಚನ ಮಕ್ಕಳು: ಹೆಚ್ರೋನ್ ಮತ್ತು ಹಾಮೂಲ್.
13 ಇಸ್ಸಾಕಾರನ ಮಕ್ಕಳು: ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್.
14 ಜೆಬೂಲೂನನ ಮಕ್ಕಳು: ಸೆರೆದ್, ಏಲೋನ್, ಯಹ್ಲೇಲ್.
15 ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್. ಇವರು ಯಾಕೋಬನ ಹೆಂಡತಿಯಾದ ಲೇಯಳ ಮಕ್ಕಳು. ಲೇಯಳು ಆ ಮಕ್ಕಳಿಗೆ ಪದ್ದನ್ಅರಾಮಿನಲ್ಲಿ ಜನ್ಮಕೊಟ್ಟಳು. ಅಲ್ಲಿ ಅವಳ ಮಗಳಾದ ದೀನ ಸಹ ಜನಿಸಿದಳು. ಈ ಕುಟುಂಬದಲ್ಲಿ ಮೂವತ್ಮೂರು ಮಂದಿ ಇದ್ದರು.
16 ಗಾದನ ಮಕ್ಕಳು: ಚಿಪ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ ಮತ್ತು ಅರೇಲೀ.
17 ಆಶೇರನ ಮಕ್ಕಳು: ಇಮ್ನಾ, ಇಷ್ವಾ, ಇಷ್ವೀ, ಬೆರೀಗಾ ಮತ್ತು ಇವರ ತಂಗಿಯಾದ ಸೆರಹ. ಬೆರೀಗನ ಗಂಡುಮಕ್ಕಳು: ಹೆಬೆರ್ ಮತ್ತು ಮಲ್ಕೀಯೇಲ್.
18 ಲಾಬಾನನು ತನ್ನ ಮಗಳಾದ ಲೇಯಳಿಗೆ ಜಿಲ್ಪ ಎಂಬ ದಾಸಿಯನ್ನು ಕೊಟ್ಟಿದ್ದನು. ಲೇಯಾಳು ಜಿಲ್ಪಳನ್ನು ಯಾಕೋಬನಿಗೆ ಕೊಟ್ಟಿದ್ದಳು. ಜಿಲ್ಪಳ ಕುಟುಂಬದಲ್ಲಿ ಒಟ್ಟು ಹದಿನಾರು ಮಂದಿಯಿದ್ದರು.
19 ಬೆನ್ಯಾಮೀನನು ಸಹ ಯಾಕೋಬನೊಂದಿಗಿದ್ದನು. ಬೆನ್ಯಾಮೀನನು ಯಾಕೋಬ ಮತ್ತು ರಾಹೇಲಳ ಮಗನು. (ಯೋಸೇಫನು ಸಹ ರಾಹೇಲಳ ಮಗ. ಆದರೆ ಯೋಸೇಫನು ಈಗಾಗಲೇ ಈಜಿಪ್ಟಿನಲ್ಲಿದ್ದನು.)
20 ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಮನಸ್ಸೆ ಮತ್ತು ಎಫ್ರಾಯೀಮ್. (ಯೋಸೇಫನ ಹೆಂಡತಿ “ಆಸನತ್” ಈಕೆ ಓನ್ ಪಟ್ಟಣದ ಆಚಾರ್ಯನಾಗಿದ್ದ ಫೋಟೀಫರನ ಮಗಳು.)
21 ಬೆನ್ಯಾಮೀನನ ಗಂಡುಮಕ್ಕಳು: ಬಿಳಾ, ಬೆಕೆರ್, ಅಶ್ಬೇಲ್, ಗೇರಾ, ನಾಮಾನ್, ಎಹೀರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್.
22 ಇವರೆಲ್ಲರು ಯಾಕೋಬನ ಹೆಂಡತಿಯಾದ ರಾಹೇಲಳ ಕುಟುಂಬದವರು. ಈ ಕುಟುಂಬದಲ್ಲಿ ಒಟ್ಟು ಹದಿನಾಲ್ಕು ಮಂದಿಯಿದ್ದರು.
23 ದಾನನ ಗಂಡುಮಕ್ಕಳು: ಹುಶೀಮ್.
24 ನಫ್ತಾಲಿಯನ ಗಂಡುಮಕ್ಕಳು: ಯಹೇಲ್, ಗೂನೀ, ಯೇಚೆರ್ ಮತ್ತು ಶಿಲ್ಲೇಮ್.
25 ಇವರೆಲ್ಲರು ಬಿಲ್ಹಳ ಕುಟುಂಬದವರು. (ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟ ದಾಸಿಯೇ ಬಿಲ್ಹ. ರಾಹೇಲಳು ಈ ದಾಸಿಯನ್ನು ಯಾಕೋಬನಿಗೆ ಕೊಟ್ಟಿದ್ದಳು.) ಈ ಕುಟುಂಬದಲ್ಲಿ ಒಟ್ಟು ಏಳು ಮಂದಿಯಿದ್ದರು.
26 ಯಾಕೋಬನಿಂದಲೇ ಹುಟ್ಟಿದ ಅರವತ್ತಾರು ಮಂದಿ ಈಜಿಪ್ಟಿಗೆ ಹೋದರು. (ಯಾಕೋಬನ ಸೊಸೆಯರನ್ನು ಇಲ್ಲಿ ಸೇರಿಸಿಲ್ಲ.) 27 ಅಲ್ಲಿ ಯೋಸೇಫನ ಇಬ್ಬರು ಗಂಡುಮಕ್ಕಳು ಸಹ ಇದ್ದರು. ಅವರು ಈಜಿಪ್ಟಿನಲ್ಲಿ ಹುಟ್ಟಿದವರು. ಆದ್ದರಿಂದ ಈಜಿಪ್ಟಿಗೆ ಬಂದ ಯಾಕೋಬನ ಕುಟುಂಬದವರು ಒಟ್ಟು ಎಪ್ಪತ್ತು ಮಂದಿ.
ಈಜಿಪ್ಟಿಗೆ ಇಸ್ರೇಲನ ಆಗಮನ
28 ಯಾಕೋಬನು ಮೊದಲು ಯೆಹೂದನನ್ನು ಯೋಸೇಫನ ಬಳಿಗೆ ಕಳುಹಿಸಿದನು. ಗೋಷೆನ್ ಪ್ರಾಂತ್ಯದಲ್ಲಿ ಯೆಹೂದನು ಯೋಸೇಫನ ಬಳಿಗೆ ಹೋದನು. ಆಮೇಲೆ ಯಾಕೋಬ ಮತ್ತು ಅವನ ಮಕ್ಕಳು ಆ ಪ್ರಾಂತ್ಯಕ್ಕೆ ಬಂದರು. 29 ತನ್ನ ತಂದೆಯು ಸಮೀಪಿಸುತ್ತಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ತಂದೆಯಾದ ಇಸ್ರೇಲನನ್ನು ಗೋಷೆನಿನಲ್ಲಿ ಭೇಟಿಯಾಗಲು ತನ್ನ ರಥವನ್ನು ಸಿದ್ಧಪಡಿಸಿಕೊಂಡು ಹೋದನು. ಯೋಸೇಫನು ತನ್ನ ತಂದೆಯನ್ನು ಕಂಡಾಗ ಅವನನ್ನು ಅಪ್ಪಿಕೊಂಡು ಬಹಳ ಹೊತ್ತಿನ ತನಕ ಅತ್ತನು.
30 ಆಗ ಇಸ್ರೇಲನು ಯೋಸೇಫನಿಗೆ, “ನಾನು ನಿನ್ನ ಮುಖವನ್ನು ಕಣ್ಣಾರೆ ಕಂಡದ್ದರಿಂದ ನೀನು ಬದುಕಿರುವುದು ನನಗೆ ನಿಶ್ಚಯವಾಯಿತು. ನಾನು ಈಗ ಸಮಾಧಾನದಿಂದ ಸಾಯವೆನು” ಎಂದು ಹೇಳಿದನು.
31 ಯೋಸೇಫನು ತನ್ನ ಸಹೋದರರಿಗೂ ತನ್ನ ತಂದೆಯ ಕುಟುಂಬದವರಿಗೂ, “ನಾನು ಫರೋಹನ ಬಳಿಗೆ ಹೋಗಿ, ‘ನನ್ನ ಸಹೋದರರು ಮತ್ತು ನನ್ನ ತಂದೆಯ ಕುಟುಂಬದವರು ಕಾನಾನ್ ದೇಶವನ್ನು ಬಿಟ್ಟು ನನ್ನ ಬಳಿಗೆ ಬಂದಿದ್ದಾರೆ. 32 ಈ ಕುಟುಂಬವು ಕುರುಬರ ಕುಟುಂಬ. ಇವರು ಯಾವಾಗಲೂ ದನಕರುಗಳ ಮತ್ತು ಆಡುಕುರಿಗಳ ಮಂದೆಗಳನ್ನು ಸಾಕುವವರು. ಇವರು ತಮ್ಮ ಎಲ್ಲಾ ಪಶುಗಳನ್ನು ಮತ್ತು ತಾವು ಹೊಂದಿರುವ ಪ್ರತಿಯೊಂದನ್ನು ತಮ್ಮೊಂದಿಗೆ ತಂದಿದ್ದಾರೆ’ ಎಂದು ತಿಳಿಸುತ್ತೇನೆ. 33 ಫರೋಹನು ನಿಮ್ಮನ್ನು ಕರೆಯಿಸಿ, ‘ನಿಮ್ಮ ಉದ್ಯೋಗವೇನು?’ ಎಂದು ಕೇಳುತ್ತಾನೆ. 34 ನೀವು ಅವನಿಗೆ, ‘ನಾವು ಕುರುಬರು. ನಮ್ಮ ಜೀವಮಾನವೆಲ್ಲಾ ನಾವು ಪಶುಗಳನ್ನು ಸಾಕುವುದರ ಮೂಲಕ ಜೀವನ ಮಾಡಿದೆವು. ನಮಗಿಂತ ಮೊದಲು ನಮ್ಮ ಪೂರ್ವಿಕರು ಸಹ ಇದೇ ರೀತಿ ಜೀವಿಸಿದರು’ ಎಂದು ಹೇಳಿರಿ. ಆಗ ಅವನು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲು ನಿಮಗೆ ಅವಕಾಶ ಮಾಡಿಕೊಡುತ್ತಾನೆ. ಈಜಿಪ್ಟಿನ ಜನರು ಕುರುಬರನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನೀವು ಗೋಷೆನಿನಲ್ಲಿ ವಾಸಿಸುವುದು ಒಳ್ಳೆಯದು” ಎಂದು ಹೇಳಿದನು.
ಇಸ್ರೇಲನು ಗೋಷೆನಿನಲ್ಲಿ ನೆಲೆಸಿದ್ದು
47 ಯೋಸೇಫನು ಫರೋಹನ ಬಳಿಗೆ ಹೋಗಿ, “ನನ್ನ ತಂದೆಯೂ ನನ್ನ ಸಹೋದರರೂ ಅವರೆಲ್ಲರ ಕುಟುಂಬಗಳವರೂ ಇಲ್ಲಿಗೆ ಬಂದಿದ್ದಾರೆ. ಅವರು ತಮ್ಮ ಎಲ್ಲಾ ಪಶುಗಳನ್ನೂ ಕಾನಾನಿನಲ್ಲಿ ಪಡೆದಿದ್ದ ಪ್ರತಿಯೊಂದನ್ನೂ ತೆಗೆದುಕೊಂಡು ಬಂದಿದ್ದಾರೆ. ಈಗ ಅವರು ಗೋಷೆನ್ ಪ್ರಾಂತ್ಯದಲ್ಲಿ ಇದ್ದಾರೆ” ಎಂದು ಹೇಳಿದನು. 2 ಯೋಸೇಫನು ತನ್ನ ಸಹೋದರರಲ್ಲಿ ಐದು ಮಂದಿಯನ್ನು ಆರಿಸಿಕೊಂಡು ಫರೋಹನ ಬಳಿಗೆ ಅವರನ್ನು ಕರೆದುಕೊಂಡು ಹೋದನು.
3 ಫರೋಹನು ಸಹೋದರರಿಗೆ, “ನಿಮ್ಮ ಉದ್ಯೋಗವೇನು?” ಎಂದು ಕೇಳಿದನು.
ಸಹೋದರರು ಫರೋಹನಿಗೆ, “ಸ್ವಾಮೀ, ನಾವು ಕುರುಬರು. ನಮ್ಮ ಪೂರ್ವಿಕರು ನಮಗಿಂತ ಮೊದಲೇ ಕುರುಬರಾಗಿದ್ದರು” ಎಂದು ಹೇಳಿದರು. 4 ಅವರು ಫರೋಹನಿಗೆ, “ಬರಗಾಲವು ಕಾನಾನ್ ದೇಶದಲ್ಲಿ ತುಂಬ ಘೋರವಾಗಿದೆ. ಯಾವ ಹೊಲದಲ್ಲಿಯೂ ನಮ್ಮ ಪಶುಗಳಿಗೆ ಹುಲ್ಲು ಉಳಿದಿಲ್ಲ. ಆದ್ದರಿಂದ ನಾವು ಈ ದೇಶದಲ್ಲಿ ವಾಸಿಸಲು ಬಂದಿದ್ದೇವೆ. ನಾವು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲು ದಯವಿಟ್ಟು ನಮಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
5 ಆಗ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ ನಿನ್ನ ಸಹೋದರರೂ ನಿನ್ನ ಬಳಿಗೆ ಬಂದಿದ್ದಾರೆ. 6 ಅವರ ವಾಸಕ್ಕಾಗಿ ಈಜಿಪ್ಟಿನಲ್ಲಿ ಯಾವ ಸ್ಥಳವನ್ನಾದರೂ ಆರಿಸಿಕೊಳ್ಳಬಹುದು. ನಿನ್ನ ತಂದೆಯೂ ನಿನ್ನ ಸಹೋದರರೂ ವಾಸವಾಗಿರಲು ಉತ್ತಮವಾದ ಪ್ರದೇಶವನ್ನು ಕೊಡು. ಅವರು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲಿ. ಅವರು ನಿಪುಣರಾದ ಕುರುಬರಾಗಿದ್ದರೆ, ಅವರು ನನ್ನ ದನಕರುಗಳನ್ನು ಸಹ ನೋಡಿಕೊಳ್ಳಬಹುದು” ಎಂದು ಹೇಳಿದನು.
7 ಆಗ ಯೋಸೇಫನು ತನ್ನ ತಂದೆಯನ್ನು ಫರೋಹನ ಸನ್ನಿಧಿಗೆ ಕರೆಯಿಸಿದನು. ಯಾಕೋಬನು ಫರೋಹನನ್ನು ಆಶೀರ್ವದಿಸಿದನು.
8 ಆಗ ಫರೋಹನು ಯಾಕೋಬನಿಗೆ, “ನಿನಗೆ ಎಷ್ಟು ವಯಸ್ಸಾಗಿದೆ?” ಎಂದು ಕೇಳಿದನು.
9 ಯಾಕೋಬನು ಫರೋಹನಿಗೆ, “ನಾನು ನನ್ನ ಅಲ್ಪಕಾಲದ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದೆನು. ಈಗ ನನಗೆ ನೂರಮೂವತ್ತು ವರ್ಷ. ನನ್ನ ತಂದೆಯೂ ಅವನ ಪೂರ್ವಿಕರೂ ನನಗಿಂತ ಹೆಚ್ಚು ವರ್ಷ ಜೀವಿಸಿದರು” ಎಂದು ಹೇಳಿದನು.
10 ಯಾಕೋಬನು ಫರೋಹನನ್ನು ಆಶೀರ್ವದಿಸಿದ ಬಳಿಕ ಫರೋಹನ ಸನ್ನಿಧಿಯಿಂದ ಹೊರಟುಹೋದನು.
11 ಫರೋಹನು ಹೇಳಿದಂತೆಯೇ ಯೋಸೇಫನು ಮಾಡಿದನು. ಅವನು ತನ್ನ ತಂದೆಗೂ ಸಹೋದರರಿಗೂ ಈಜಿಪ್ಟಿನಲ್ಲಿ ವಾಸಿಸಲು ಉತ್ತಮವಾದ ಪ್ರದೇಶವನ್ನು ಕೊಟ್ಟನು. ಅದು ರಮ್ಸೇಸ್ ಪಟ್ಟಣದ ಸಮೀಪದಲ್ಲಿತ್ತು. 12 ಯೋಸೇಫನು ತನ್ನ ತಂದೆಗೂ ತನ್ನ ಸಹೋದರರಿಗೂ ಮತ್ತು ಅಲ್ಲಿನ ಎಲ್ಲಾ ಜನರಿಗೂ ಬೇಕಾಗಿದ್ದ ಆಹಾರವನ್ನು ಕೊಟ್ಟನು.
ಯೋಸೇಫನು ಫರೋಹನಿಗೆ ಭೂಮಿಯನ್ನು ಕೊಂಡುಕೊಂಡದ್ದು
13 ಬರಗಾಲವು ಹೆಚ್ಚು ಭೀಕರವಾಯಿತು. ದೇಶದಲ್ಲಿ ಎಲ್ಲಿಯೂ ಆಹಾರ ಇರಲಿಲ್ಲ. ಈಜಿಪ್ಟ್ ಮತ್ತು ಕಾನಾನ್ ದೇಶಗಳು ಬರಗಾಲದಿಂದ ಬಡದೇಶಗಳಾದವು. 14 ಈಜಿಪ್ಟ್ ಮತ್ತು ಕಾನಾನ್ ದೇಶಗಳ ಜನರು ಧಾನ್ಯಗಳನ್ನು ಕೊಂಡುಕೊಂಡರು. ಯೋಸೇಫನು ಹಣವನ್ನು ಉಳಿಸಿ ಫರೋಹನ ಭಂಡಾರಕ್ಕೆ ಸೇರಿಸಿದನು. 15 ಸ್ವಲ್ಪ ಸಮಯದ ನಂತರ, ಈಜಿಪ್ಟ್ ಮತ್ತು ಕಾನಾನ್ ದೇಶಗಳಲ್ಲಿದ್ದ ಜನರಲ್ಲಿ ಹಣವು ಉಳಿದಿರಲಿಲ್ಲ. ಆದ್ದರಿಂದ ಈಜಿಪ್ಟಿನ ಜನರು ಯೋಸೇಫನ ಬಳಿಗೆ ಹೋಗಿ, “ದಯವಿಟ್ಟು ನಮಗೆ ಆಹಾರವನ್ನು ಕೊಡು. ನಮ್ಮ ಹಣವೆಲ್ಲ ಮುಗಿದುಹೋಗಿದೆ. ನಾವು ಊಟ ಮಾಡದಿದ್ದರೆ ನಿನ್ನೆದುರಿನಲ್ಲೇ ಸಾಯುತ್ತೇವೆ” ಎಂದು ಹೇಳಿದರು.
16 ಅದಕ್ಕೆ ಯೋಸೇಫನು, “ನಿಮ್ಮ ದನಕರುಗಳನ್ನು ನನಗೆ ಕೊಡಿರಿ, ನಾನು ನಿಮಗೆ ಆಹಾರವನ್ನು ಕೊಡುತ್ತೇನೆ” ಎಂದು ಉತ್ತರಿಸಿದನು. 17 ಆದ್ದರಿಂದ ಜನರು ತಮ್ಮ ದನಕರುಗಳನ್ನೂ ಕುದುರೆಗಳನ್ನೂ ಇತರ ಎಲ್ಲಾ ಪಶುಗಳನ್ನೂ ಕೊಟ್ಟು ಆಹಾರವನ್ನು ಕೊಂಡುಕೊಂಡರು. ಆ ವರ್ಷ ಯೋಸೇಫನು ಅವರಿಗೆ ಆಹಾರವನ್ನು ಕೊಟ್ಟು ಅವರ ಪಶುಗಳನ್ನು ಕೊಂಡುಕೊಂಡನು.
18 ಆದರೆ ಮುಂದಿನ ವರ್ಷ, ಪಶುಗಳನ್ನು ಕೊಟ್ಟು ಆಹಾರವನ್ನು ಕೊಂಡುಕೊಳ್ಳಲು ಜನರ ಬಳಿ ಪಶುಗಳಿರಲಿಲ್ಲ. ಆದ್ದರಿಂದ ಜನರು ಯೋಸೇಫನಲ್ಲಿಗೆ ಹೋಗಿ, “ನಮ್ಮಲ್ಲಿ ಹಣ ಇಲ್ಲವೆಂಬುದು ನಿನಗೆ ಗೊತ್ತೇ ಇದೆ. ಅಲ್ಲದೆ ನಮ್ಮ ಪಶುಗಳೂ ನಿನ್ನ ಸ್ವತ್ತಾಗಿವೆ. ಆದ್ದರಿಂದ ನಮ್ಮಲ್ಲಿ ಏನೂ ಉಳಿದಿಲ್ಲ. ನೀನು ನೋಡುತ್ತಿರುವ ನಮ್ಮ ಶರೀರ ಮತ್ತು ನಮ್ಮ ಜಮೀನು ಮಾತ್ರ ಉಳಿದಿದೆ. 19 ನಿನ್ನ ಕಣ್ಣೆದುರಿನಲ್ಲಿಯೇ ನಾವು ಖಂಡಿತವಾಗಿ ಸಾಯುತ್ತೇವೆ. ಆದರೆ ನೀನು ನಮಗೆ ಆಹಾರವನ್ನು ಕೊಟ್ಟರೆ, ನಾವು ಫರೋಹನಿಗೆ ನಮ್ಮ ಭೂಮಿಯನ್ನು ಕೊಟ್ಟು ಅವನ ಗುಲಾಮರಾಗಿರುತ್ತೇವೆ. ಬಿತ್ತನೆ ಮಾಡಲು ನಮಗೆ ಬೀಜವನ್ನು ಕೊಡು. ಆಗ ನಾವು ಬದುಕುತ್ತೇವೆ, ಸಾಯುವುದಿಲ್ಲ. ಮತ್ತು ಭೂಮಿಯೂ ಬೆಳೆಗಳನ್ನು ಫಲಿಸುತ್ತದೆ” ಎಂದು ಹೇಳಿದರು.
20 ಆದ್ದರಿಂದ ಯೋಸೇಫನು ಈಜಿಪ್ಟಿನ ಎಲ್ಲಾ ಜಮೀನನ್ನು ಫರೋಹನಿಗಾಗಿ ಕೊಂಡುಕೊಂಡನು. ಹಸಿವೆಯಿಂದಾಗಿ ಈಜಿಪ್ಟಿನ ಎಲ್ಲಾ ಜನರು ಯೋಸೇಫನಿಗೆ ತಮ್ಮ ಜಮೀನುಗಳನ್ನು ಮಾರಿದರು. 21 ಈಜಿಪ್ಟಿನ ಎಲ್ಲಾ ಜನರು ಫರೋಹನ ಗುಲಾಮರಾಗಿದ್ದರು.[a] 22 ಪುರೋಹಿತರು ಹೊಂದಿದ್ದ ಭೂಮಿಯನ್ನು ಮಾತ್ರ ಯೋಸೇಫನು ಕೊಂಡುಕೊಳ್ಳಲಿಲ್ಲ. ಭೂಮಿಯನ್ನು ಮಾರುವ ಅವಶ್ಯಕತೆ ಪುರೋಹಿತರಿಗೆ ಇರಲಿಲ್ಲ. ಯಾಕೆಂದರೆ ಫರೋಹನೇ ಅವರಿಗೆ ಸಂಬಳವನ್ನು ಕೊಡುತ್ತಿದ್ದನು. ಆದ್ದರಿಂದ ಅವರು ಆ ಹಣದಿಂದ ಆಹಾರವನ್ನು ಕೊಂಡುಕೊಂಡರು.
23 ಯೋಸೇಫನು ಜನರಿಗೆ, “ಈಗ ನಾನು ನಿಮ್ಮನ್ನೂ ನಿಮ್ಮ ಜಮೀನನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಆದ್ದರಿಂದ ನಾನು ನಿಮಗೆ ಬೀಜವನ್ನು ಕೊಡುತ್ತೇನೆ. ನೀವು ನಿಮ್ಮ ಜಮೀನುಗಳಲ್ಲಿ ಬಿತ್ತನೆಮಾಡಿರಿ. 24 ಸುಗ್ಗಿಕಾಲ ಬಂದಾಗ, ನಿಮ್ಮ ಬೆಳೆಗಳಲ್ಲಿ ಐದನೆ ಒಂದು ಭಾಗ ಫರೋಹನಿಗೆ ಸೇರಿದ್ದು. ಐದನೆ ನಾಲ್ಕು ಭಾಗವನ್ನು ನಿಮಗೋಸ್ಕರ ಇಟ್ಟುಕೊಳ್ಳಿರಿ. ನೀವು ಆಹಾರಕ್ಕಾಗಿ ಇಟ್ಟುಕೊಳ್ಳುವ ಬೀಜವನ್ನೇ ಮುಂದಿನ ವರ್ಷದ ಬಿತ್ತನೆಗಾಗಿ ಉಪಯೋಗಿಸಬಹುದು. ಹೀಗೆ ನೀವು ನಿಮ್ಮ ಕುಟುಂಬದವರಿಗೂ ಮಕ್ಕಳಿಗೂ ಪೋಷಣೆಮಾಡಿರಿ” ಎಂದು ಹೇಳಿದನು.
25 ಆಗ ಜನರು, “ನೀನು ನಮ್ಮ ಜೀವವನ್ನು ಉಳಿಸಿರುವೆ. ನಾವು ಸಂತೋಷದಿಂದ ಫರೋಹನ ಗುಲಾಮರಾಗುತ್ತೇವೆ” ಎಂದು ಹೇಳಿದರು.
26 ಆದ್ದರಿಂದ ಯೋಸೇಫನು ಒಂದು ಕಾನೂನನ್ನು ಮಾಡಿದನು. ಅದು ಇಂದಿಗೂ ಜಾರಿಯಲ್ಲಿದೆ. ಆ ಕಾನೂನಿನ ಪ್ರಕಾರ, ಭೂಮಿಯ ಫಸಲಿನಲ್ಲಿ ಐದನೇ ಒಂದು ಭಾಗವು ಫರೋಹನಿಗೆ ಸೇರಿದ್ದಾಗಿದೆ. ಫರೋಹನು ಎಲ್ಲಾ ಜಮೀನಿಗೂ ಒಡೆಯನಾಗಿದ್ದಾನೆ. ಪುರೋಹಿತರ ಭೂಮಿಯು ಮಾತ್ರ ಅವನಿಗೆ ಸೇರಿಲ್ಲ.
“ನನ್ನನ್ನು ಈಜಿಪ್ಟಿನಲ್ಲಿ ಸಮಾಧಿ ಮಾಡಬೇಡ”
27 ಇಸ್ರೇಲನು ಈಜಿಪ್ಟಿನಲ್ಲಿ ಇಳಿದುಕೊಂಡನು. ಅವನು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಿದನು. ಅವನ ಕುಟುಂಬವು ಬೆಳೆದು ತುಂಬ ದೊಡ್ಡದಾಯಿತು. ಅವರು ಈಜಿಪ್ಟಿನಲ್ಲಿ ಜಮೀನನ್ನು ಪಡೆದುಕೊಂಡರು ಮತ್ತು ಸುಖವಾಗಿದ್ದರು.
28 ಕೋಬನು ಈಜಿಪ್ಟಿನಲ್ಲಿ ಹದಿನೇಳು ವರ್ಷಗಳ ಕಾಲ ಜೀವಿಸಿದನು. ಆಗ ಯಾಕೋಬನಿಗೆ ನೂರನಲವತ್ತೇಳು ವರ್ಷವಾಗಿತ್ತು. 29 ಇಸ್ರೇಲನು ಸಾಯುವ ಕಾಲ ಸಮೀಪಿಸಿತು. ಅವನಿಗೆ ತಾನು ಸಾಯುತ್ತೇನೆಂದು ತಿಳಿದು ಬಂದಾಗ, ತನ್ನ ಮಗನಾದ ಯೋಸೇಫನನ್ನು ಕರೆಯಿಸಿ, “ನೀನು ನನ್ನನ್ನು ಪ್ರೀತಿಸುವುದಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗಿಟ್ಟು ಪ್ರಮಾಣಮಾಡು. ನಾನು ಹೇಳಿದ್ದನ್ನು ನಡೆಸುವುದಾಗಿಯೂ ನನಗೆ ನಂಬಿಗಸ್ತನಾಗಿರುವುದಾಗಿಯೂ ಪ್ರಮಾಣ ಮಾಡು. ನಾನು ಸತ್ತಾಗ, ನನ್ನನ್ನು ಈಜಿಪ್ಟಿನಲ್ಲಿ ಸಮಾಧಿ ಮಾಡಬೇಡ. 30 ನನ್ನ ಪೂರ್ವಿಕರನ್ನು ಸಮಾಧಿ ಮಾಡಿದ ಸ್ಥಳದಲ್ಲಿಯೇ ನನ್ನನ್ನು ಸಮಾಧಿ ಮಾಡು. ನನ್ನನ್ನು ಈಜಿಪ್ಟಿನಿಂದ ತೆಗೆದುಕೊಂಡು ಹೋಗಿ ನಮ್ಮ ಕುಟುಂಬದವರ ಸ್ಮಶಾನದಲ್ಲಿ ಸಮಾಧಿ ಮಾಡು” ಎಂದು ಹೇಳಿದನು.
ಯೋಸೇಫನು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಪ್ರಮಾಣ ಮಾಡಿದನು.
31 ಇಸ್ರೇಲನು, “ನನಗೆ ಪ್ರಮಾಣ ಮಾಡು” ಎಂದು ಹೇಳಿದ್ದರಿಂದ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಮೇಲೆ ಇಸ್ರೇಲನು ಹಾಸಿಗೆಯ ಮೇಲೆ ಮತ್ತೆ ತನ್ನ ತಲೆಬಾಗಿ ದೇವರಿಗೆ ನಮಸ್ಕರಿಸಿದನು.
ಮನಸ್ಸೆ ಮತ್ತು ಎಫ್ರಾಯೀಮರಿಗೆ ಆಶೀರ್ವಾದಗಳು
48 ಸ್ವಲ್ಪ ಕಾಲದ ನಂತರ, ತಂದೆಯು ಬಹಳ ಅನಾರೋಗ್ಯದಿಂದಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆಯನ್ನು ಮತ್ತು ಎಫ್ರಾಯೀಮನನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು. 2 ಯೋಸೇಫನು ಬಂದಾಗ ಯಾರೋ ಒಬ್ಬನು ಇಸ್ರೇಲನಿಗೆ, “ನಿನ್ನ ಮಗನಾದ ಯೋಸೇಫನು ನಿನ್ನನ್ನು ನೋಡಲು ಬಂದಿದ್ದಾನೆ” ಎಂದು ಹೇಳಿದನು. ಆಗ ಅವನು ಬಹಳ ಬಲಹೀನನಾಗಿದ್ದರೂ ಕಷ್ಟಪಟ್ಟು ಹಾಸಿಗೆಯ ಮೇಲೆ ಕುಳಿತುಕೊಂಡನು.
3 ಬಳಿಕ ಇಸ್ರೇಲನು ಯೋಸೇಫನಿಗೆ, “ಸರ್ವಶಕ್ತನಾದ ದೇವರು ನನಗೆ ಕಾನಾನ್ ದೇಶದ ಲೂಜ್ ಎಂಬ ಸ್ಥಳದಲ್ಲಿ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು. 4 ದೇವರು ನನಗೆ, ‘ನಾನು ನಿನಗೆ ಅನೇಕ ಮಕ್ಕಳನ್ನು ಕೊಡುತ್ತೇನೆ; ನಿನ್ನ ಸಂತತಿಯವರು ಅನೇಕ ಜನಾಂಗಗಳಾಗುವರು; ನಿನ್ನ ಸಂತತಿಯವರಿಗೆ ನಾನು ಈ ದೇಶವನ್ನು ಶಾಶ್ವತವಾಗಿ ಕೊಡುವೆನು’ ಎಂದು ಹೇಳಿದನು. 5 ಈಗ ನಿನಗೆ ಇಬ್ಬರು ಗಂಡುಮಕ್ಕಳಿದ್ದಾರೆ. ನಾನು ಈಜಿಪ್ಟಿಗೆ ಬರುವುದಕ್ಕಿಂತ ಮೊದಲೇ ಅವರು ಇಲ್ಲಿ ಹುಟ್ಟಿದರು. ನಿನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆ ಮತ್ತು ಎಫ್ರಾಯೀಮ್ ನನ್ನ ಮಕ್ಕಳಂತೆಯೇ ಇದ್ದಾರೆ. ಅವರು ನನಗೆ ರೂಬೇನ್ ಮತ್ತು ಸಿಮೆಯೋನರಂತೆಯೇ ಇದ್ದಾರೆ. 6 ಆದ್ದರಿಂದ ಈ ಇಬ್ಬರು ಗಂಡುಮಕ್ಕಳು ನನಗೆ ಮಕ್ಕಳಂತೆಯೇ ಇರುತ್ತಾರೆ. ನಾನು ಹೊಂದಿರುವ ಪ್ರತಿಯೊಂದರಲ್ಲಿಯೂ ಅವರು ಪಾಲನ್ನು ಹೊಂದುವರು. ಆದರೆ ನಿನಗೆ ಬೇರೆ ಗಂಡುಮಕ್ಕಳಿದ್ದರೆ ಅವರು ಎಫ್ರಾಯೀಮ್ ಮತ್ತು ಮನಸ್ಸೆಯವರಿಗೆ ಮಕ್ಕಳಾಗಿರುತ್ತಾರೆ. ಅಂದರೆ ಎಫ್ರಾಯೀಮ್ ಮತ್ತು ಮನಸ್ಸೆ ಹೊಂದಿರುವ ಪ್ರತಿಯೊಂದರಲ್ಲಿ ಅವರು ಪಾಲನ್ನು ಹೊಂದುವರು. 7 ಪದ್ದನ್ಅರಾಮಿನಿಂದ ಹಿಂತಿರುಗಿ ಬರುತ್ತಿರುವಾಗ ರಾಹೇಲಳು ಸತ್ತಳು. ಇದು ನನಗೆ ತುಂಬ ದುಃಖವನ್ನು ಉಂಟುಮಾಡಿತು. ನಾವು ಕಾನಾನ್ ದೇಶದಲ್ಲಿ ಎಫ್ರಾತ್ ನಗರದ ಕಡೆಗೆ ಪ್ರಯಾಣ ಮಾಡುತ್ತಿದ್ದೆವು. ಆದ್ದರಿಂದ ನಾನು ಅವಳನ್ನು ಬೆತ್ಲೆಹೇಮೆಂಬ ಎಫ್ರಾತ್ ನಗರದ ರಸ್ತೆಯಲ್ಲಿ ಸಮಾಧಿ ಮಾಡಿದೆನು” ಎಂದು ಹೇಳಿದನು.
8 ಆಮೇಲೆ ಇಸ್ರೇಲನು ಯೋಸೇಫನ ಗಂಡುಮಕ್ಕಳನ್ನು ನೋಡಿ, “ಈ ಹುಡುಗರು ಯಾರು?” ಎಂದು ಕೇಳಿದನು.
9 ಯೋಸೇಫನು ತನ್ನ ತಂದೆಗೆ, “ಇವರು ನನ್ನ ಮಕ್ಕಳು. ದೇವರು ನನಗೆ ಕೊಟ್ಟಿರುವ ಗಂಡುಮಕ್ಕಳೇ ಇವರು” ಎಂದು ಹೇಳಿದನು.
ಇಸ್ರೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ನಾನು ಅವರನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.
10 ಇಸ್ರೇಲನಿಗೆ ತುಂಬ ವಯಸ್ಸಾಗಿತ್ತು. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆದ್ದರಿಂದ ಯೋಸೇಫನು ಅವರನ್ನು ತಂದೆಯ ಬಳಿಗೆ ಕರೆದುಕೊಂಡು ಬಂದನು. ಇಸ್ರೇಲನು ಆ ಹುಡುಗರನ್ನು ಅಪ್ಪಿಕೊಂಡು ಮುದ್ದಿಟ್ಟನು. 11 ಬಳಿಕ ಇಸ್ರೇಲನು ಯೋಸೇಫನಿಗೆ, “ನಾನು ಮತ್ತೆ ನಿನ್ನ ಮುಖವನ್ನು ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ನಾನು ನಿನ್ನನ್ನೂ ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.
12 ಆಗ ಯೋಸೇಫನು ಇಸ್ರೇಲನ ತೊಡೆಯ ಮೇಲೆ ಕುಳಿತಿದ್ದ ತನ್ನ ಗಂಡುಮಕ್ಕಳನ್ನು ಎತ್ತಿಕೊಂಡನು. ಬಳಿಕ ಅವರು ಇಸ್ರೇಲನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 13 ಯೋಸೇಫನು ಎಫ್ರಾಯೀಮನನ್ನು ತನ್ನ ಬಲಭಾಗದಲ್ಲಿಯೂ ಮನಸ್ಸೆಯನ್ನು ತನ್ನ ಎಡಭಾಗದಲ್ಲಿಯೂ ಕುಳ್ಳಿರಿಸಿದನು. (ಆದ್ದರಿಂದ ಎಫ್ರಾಯೀಮನು ಇಸ್ರೇಲನ ಎಡಭಾಗದಲ್ಲಿಯೂ ಮನಸ್ಸೆಯು ಬಲಭಾಗದಲ್ಲಿಯೂ ಇದ್ದರು.) 14 ಆದರೆ ಇಸ್ರೇಲನು ತನ್ನ ಕೈಗಳನ್ನು ವಾರೆ ಮಾಡಿ ತನ್ನ ಬಲಗೈಯನ್ನು ಚಿಕ್ಕ ಮಗನಾದ ಎಫ್ರಾಯೀಮನ ತಲೆಯ ಮೇಲಿಟ್ಟು ಎಡಗೈಯನ್ನು ದೊಡ್ಡ ಮಗನಾದ ಮನಸ್ಸೆಯ ತಲೆಯ ಮೇಲಿಟ್ಟನು. ಮನಸ್ಸೆಯು ಹಿರಿಯ ಮಗನಾಗಿದ್ದರೂ ಇಸ್ರೇಲನು ಮನಸ್ಸೆಯ ತಲೆಯ ಮೇಲೆ ಎಡಗೈಯನ್ನಿಟ್ಟನು. 15 ಬಳಿಕ ಇಸ್ರೇಲನು ಯೋಸೇಫನನ್ನು ಆಶೀರ್ವದಿಸಿ ಹೀಗೆಂದನು:
“ನನ್ನ ಪೂರ್ವಿಕರಾದ ಅಬ್ರಹಾಮನೂ ಇಸಾಕನೂ ನಮ್ಮ ದೇವರನ್ನು ಆರಾಧಿಸಿದರು.
ಆ ದೇವರೇ ನನ್ನನ್ನು ನನ್ನ ಜೀವಮಾನವೆಲ್ಲಾ ನಡೆಸಿದನು.
16 ನನ್ನನ್ನು ಎಲ್ಲಾ ತೊಂದರೆಗಳಿಂದ ಕಾಪಾಡಿದ ದೂತನೇ ಆತನು.
ಈ ಹುಡುಗರನ್ನು ಆಶೀರ್ವದಿಸಬೇಕೆಂದು ನಾನು ಆತನಲ್ಲಿ ಪ್ರಾರ್ಥಿಸುವೆನು.
ಇಂದಿನಿಂದ ಈ ಮಕ್ಕಳು ನನ್ನ ಹೆಸರನ್ನೇ ಹೊಂದಿಕೊಳ್ಳುವರು.
ನನ್ನ ಪೂರ್ವಿಕರಾದ ಅಬ್ರಹಾಮ್ ಮತ್ತು ಇಸಾಕರ ಹೆಸರನ್ನು ಇವರು ಹೊಂದಿಕೊಳ್ಳುವರು.
ಇವರು ಭೂಮಿಯ ಮೇಲೆ ಬೆಳೆದು ದೊಡ್ಡ ಕುಟುಂಬಗಳಾಗುವಂತೆಯೂ
ದೊಡ್ಡ ಜನಾಂಗಗಳಾಗುವಂತೆಯೂ ನಾನು ಪ್ರಾರ್ಥಿಸುವೆನು.”
17 ಇಸ್ರೇಲನು ತನ್ನ ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲಿಟ್ಟಿದ್ದರಿಂದ ಯೋಸೇಫನು ಅಸಮಾಧಾನದಿಂದ ನೋಡಿ ತಂದೆಯ ಕೈಯನ್ನು ಹಿಡಿದುಕೊಂಡನು; ಅಲ್ಲದೆ ತಂದೆಯ ಕೈಯನ್ನು ಎಫ್ರಾಯೀಮನ ತಲೆಯ ಮೇಲಿಂದ ತೆಗೆದುಕೊಂಡು ಮನಸ್ಸೆಯ ತಲೆಯ ಮೇಲೆ ಇಡಬೇಕೆಂದಿದ್ದನು. 18 ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.
19 ಅದಕ್ಕೆ ಅವನ ತಂದೆಯು, “ನನಗೆ ಗೊತ್ತು ಮಗನೇ, ನನಗೆ ಗೊತ್ತು. ಮನಸ್ಸೆ ಮೊದಲು ಹುಟ್ಟಿದವನು. ಅವನು ಮಹಾವ್ಯಕ್ತಿಯಾಗುವನು. ಅವನು ಅನೇಕ ಜನರಿಗೆ ತಂದೆಯಾಗುವನು. ಆದರೆ ತಮ್ಮನು ಅಣ್ಣನಿಗಿಂತ ಮಹಾವ್ಯಕ್ತಿಯಾಗುವನು. ಅವನ ಕುಟುಂಬವು ತುಂಬ ದೊಡ್ಡದಾಗುವುದು” ಎಂದು ಹೇಳಿದನು.
20 ಅಂದು ಇಸ್ರೇಲನು ಅವರನ್ನು ಆಶೀರ್ವದಿಸಿ,
“ಇಸ್ರೇಲರು ನಿಮ್ಮ ಹೆಸರುಗಳ ಮೂಲಕ
ಬೇರೆಯವರನ್ನು ಆಶೀರ್ವದಿಸುವರು.
‘ದೇವರು ನಿನ್ನನ್ನು ಎಫ್ರಾಯೀಮನಂತೆಯೂ
ಮನಸ್ಸೆಯಂತೆಯೂ ಮಾಡಲಿ’ ಎಂದು ಹೇಳುವರು” ಎಂದನು.
ಹೀಗೆ, ಇಸ್ರೇಲನು ಎಫ್ರಾಯೀಮನನ್ನು ಮನಸ್ಸೆಗಿಂತ ದೊಡ್ಡವನನ್ನಾಗಿ ಮಾಡಿದನು.
21 ಬಳಿಕ ಇಸ್ರೇಲನು ಯೋಸೇಫನಿಗೆ, “ನೋಡು, ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ದೇವರು ಇನ್ನೂ ನಿನ್ನ ಸಂಗಡವಿರುವನು. ಅವನು ನಿನ್ನನ್ನು ನಿನ್ನ ಪೂರ್ವಿಕರ ದೇಶಕ್ಕೆ ಹಿಂತಿರುಗಿಸುವನು. 22 ನಾನು ನಿನ್ನ ಸಹೋದರರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ಬೇರೊಂದನ್ನು ನಿನಗೆ ಕೊಟ್ಟಿದ್ದೇನೆ. ನಾನು ಅಮೋರಿಯರಿಂದ ಗೆದ್ದುಕೊಂಡಿರುವ ಬೆಟ್ಟವನ್ನು ನಿನಗೆ ಕೊಡುವೆನು. ನಾನು ಅವರೊಂದಿಗೆ ಖಡ್ಗಗಳಿಂದಲೂ ಬಿಲ್ಲುಗಳಿಂದಲೂ ಹೋರಾಡಿ ಆ ಬೆಟ್ಟವನ್ನು ವಶಪಡಿಸಿಕೊಂಡಿದ್ದೇನೆ” ಎಂದು ಹೇಳಿದನು.
ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ
(ಮಾರ್ಕ 4:1-9; ಲೂಕ 8:4-8)
13 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು. 2 ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು. 3 ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:
“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು. 4 ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. 5 ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು. 6 ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ. 7 ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು. 8 ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು. 9 ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”
ಯೇಸು ಸಾಮ್ಯಗಳನ್ನು ಏಕೆ ಬಳಸಿದನು?
(ಮಾರ್ಕ 4:10-12; ಲೂಕ 8:9-10)
10 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು.
11 ಯೇಸು, “ಪರಲೋಕರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಈ ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು. 12 ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು. 13 ಈ ಕಾರಣದಿಂದಲೇ ನಾನು ಈ ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಈ ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ. 14 ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ:
‘ನೀವು ಆಲಿಸುತ್ತೀರಿ, ಕೇಳುತ್ತೀರಿ,
ಆದರೆ ನಿಮಗೆ ಅರ್ಥವಾಗುವುದಿಲ್ಲ.
ನೀವು ದೃಷ್ಟಿಸಿ ನೋಡುತ್ತೀರಿ,
ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.
15 ಹೌದು, ಇವರ ಮನಸ್ಸುಗಳು ಕಠಿಣವಾಗಿವೆ.
ಕಿವಿ ಮಂದವಾಗಿವೆ,
ಕಣ್ಣು ಮಬ್ಬಾಗಿವೆ.
ಅವರು
ತಮ್ಮ ಕಣ್ಣುಗಳಿಂದ ನೋಡದಂತೆಯೂ
ತಮ್ಮ ಕಿವಿಗಳಿಂದ ಕೇಳದಂತೆಯೂ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ
ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣಹೊಂದದಂತೆಯೂ ಹೀಗಾಯಿತು.’(A)
16 ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ. 17 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.
ಬಿತ್ತನೆಯ ಕುರಿತು ಯೇಸುವಿನ ವಿವರಣೆ
(ಮಾರ್ಕ 4:13-20; ಲೂಕ 8:11-15)
18 “ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ.
19 “ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಆ ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದುಹಾಕುತ್ತಾನೆ.
20 “ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು. 21 ಆದರೆ ಆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಆ ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಆ ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು.
22 “ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಆ ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ.
23 “ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಆ ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು.
ಗೋಧಿ ಮತ್ತು ಹಣಜಿ ಸಾಮ್ಯ
24 ಬಳಿಕ ಯೇಸು ಅವರಿಗೆ ಇನ್ನೊಂದು ಸಾಮ್ಯದ ಮೂಲಕ ಬೋಧಿಸಿದನು. ಅದೇನೆಂದರೆ: “ಪರಲೋಕರಾಜ್ಯ ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ರೈತನಂತಿದೆ. 25 ಆ ರಾತ್ರಿ ಜನರೆಲ್ಲರೂ ನಿದ್ರಿಸುತ್ತಿದ್ದಾಗ ಅವನ ವೈರಿ ಬಂದು ಗೋಧಿಯ ನಡುವೆ ಹಣಜಿಯನ್ನು ಬಿತ್ತಿ ಹೊರಟುಹೋದನು. 26 ಬಳಿಕ ಗೋಧಿ ಬೆಳೆದು ತೆನೆಬಿಟ್ಟಿತು. ಅದರೊಡನೆ ಹಣಜಿ ಸಹ ಬೆಳೆಯಿತು. 27 ಆಗ ಆ ರೈತನ ಸೇವಕರು ಅವನ ಬಳಿಗೆ ಬಂದು, ‘ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜ ಬಿತ್ತಿದೆ. ಹಣಜಿ ಎಲ್ಲಿಂದ ಬಂತು?’ ಎಂದು ಕೇಳಿದರು.
28 “ಆ ಮನುಷ್ಯನು, ‘ಒಬ್ಬ ವೈರಿ ಹಣಜಿಯನ್ನು ಬಿತ್ತಿದ್ದಾನೆ’ ಎಂದು ಉತ್ತರಕೊಟ್ಟನು.
“ಆ ಸೇವಕರು ‘ನಾವು ಹೋಗಿ ಹಣಜಿಗಳನ್ನು ಕೀಳಬೇಕೆ?’ ಎಂದು ಕೇಳಿದರು.
29 “ಆ ಮನುಷ್ಯನು, ‘ಬೇಡ, ಏಕೆಂದರೆ ನೀವು ಹಣಜಿಗಳನ್ನು ಕೀಳುವಾಗ ಗೋಧಿಯನ್ನು ಸಹ ಕೀಳಬಹುದು. 30 ಸುಗ್ಗಿಕಾಲದವರೆಗೆ ಹಣಜಿಯೂ ಗೋಧಿಯೂ ಒಟ್ಟಿಗೆ ಬೆಳೆಯಲಿ. ಸುಗ್ಗಿಕಾಲದ ಸಮಯದಲ್ಲಿ ನಾನು ಕೆಲಸದವರಿಗೆ, ಮೊದಲು ಹಣಜಿಗಳನ್ನು ಕೂಡಿಸಿ ಅದನ್ನು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ಕೂಡಿಸಿ ಅದನ್ನು ನನ್ನ ಕಣಜಕ್ಕೆ ತನ್ನಿರಿ ಎಂದು ಹೇಳುವೆನು’ ಎಂದು ಉತ್ತರಕೊಟ್ಟನು.”
Kannada Holy Bible: Easy-to-Read Version. All rights reserved. © 1997 Bible League International