Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 27-28

ಯಾಕೋಬನು ಇಸಾಕನಿಗೆ ಮಾಡಿದ ಮೋಸ

27 ಇಸಾಕನು ಮುದುಕನಾದಾಗ ಅವನಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಒಂದು ದಿನ ಅವನು ತನ್ನ ಹಿರಿಮಗನಾದ ಏಸಾವನನ್ನು ತನ್ನ ಬಳಿಗೆ ಕರೆದು ಅವನಿಗೆ, “ಮಗನೇ” ಅಂದನು.

ಏಸಾವನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.

ಇಸಾಕನು ಅವನಿಗೆ, “ನನಗೆ ವಯಸ್ಸಾಯಿತು. ನಾನು ಬಹುಬೇಗನೆ ಸಾಯಬಹುದು. ಆದ್ದರಿಂದ ನಿನ್ನ ಬಿಲ್ಲುಬಾಣಗಳನ್ನು ತೆಗೆದುಕೊಂಡು ಬೇಟೆಗೆ ಹೋಗು. ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಆದ್ದರಿಂದ ಏಸಾವನು ಬೇಟೆಗಾಗಿ ಹೋದನು.

ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಈ ವಿಷಯಗಳನ್ನೆಲ್ಲ ರೆಬೆಕ್ಕಳು ಕೇಳಿಸಿಕೊಂಡಳು. ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ಕೇಳು, ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನೊಡನೆ ಮಾತಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ. ನಿನ್ನ ತಂದೆ ಅವನಿಗೆ, ‘ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು’ ಎಂದು ಹೇಳಿದನು. ಆದ್ದರಿಂದ ಮಗನೇ, ನನ್ನ ಮಾತನ್ನು ಕೇಳು ಮತ್ತು ನಾನು ಹೇಳಿದ್ದನ್ನು ಮಾಡು. ನಮ್ಮ ಆಡುಗಳ ಬಳಿಗೆ ಹೋಗಿ ಎರಡು ಆಡುಮರಿಗಳನ್ನು ತೆಗೆದುಕೊಂಡು ಬಾ. ನಿಮ್ಮ ತಂದೆಗೆ ಇಷ್ಟವಾದ ಅಡಿಗೆಯನ್ನು ನಾನು ಅವುಗಳ ಮಾಂಸದಿಂದ ಸಿದ್ಧಪಡಿಸುವೆ. 10 ನೀನು ಆ ಅಡಿಗೆಯನ್ನು ನಿನ್ನ ತಂದೆಗೆ ತೆಗೆದುಕೊಂಡು ಹೋಗು. ಆಗ ಅವನು ತಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವನು” ಅಂದಳು.

11 ಅದಕ್ಕೆ ಯಾಕೋಬನು ತನ್ನ ತಾಯಿಯಾದ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನಿಗೆ ಮೈತುಂಬ ರೋಮಗಳಿವೆ, ಆದರೆ ನನಗೆ ರೋಮಗಳಿಲ್ಲ. 12 ನನ್ನ ತಂದೆ ನನ್ನನ್ನು ಮುಟ್ಟಿದರೆ, ನಾನು ಏಸಾವನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ನನ್ನನ್ನು ಆಶೀರ್ವದಿಸುವುದಿಲ್ಲ. ನಾನು ಅವನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದರಿಂದ ಅವನು ನನ್ನನ್ನು ಶಪಿಸುವನು” ಎಂದು ಹೇಳಿದನು.

13 ಅದಕ್ಕೆ ರೆಬೆಕ್ಕಳು ಅವನಿಗೆ, “ಅವನು ನಿನಗೆ ಶಾಪಕೊಟ್ಟರೆ, ಆ ಶಾಪವು ನನಗಾಗಲಿ. ನಾನು ಹೇಳಿದಂತೆ ಮಾಡು. ನನಗೋಸ್ಕರ ಆಡುಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು.

14 ಆದ್ದರಿಂದ ಯಾಕೋಬನು ಹೋಗಿ ಎರಡು ಆಡುಗಳನ್ನು ತೆಗೆದುಕೊಂಡು ಬಂದನು. ಇಸಾಕನಿಗೆ ಇಷ್ಟವಾದ ರುಚಿಕರವಾದ ಪದಾರ್ಥಗಳನ್ನು ಆಕೆ ಅವುಗಳ ಮಾಂಸದಿಂದ ತಯಾರಿಸಿದಳು. 15 ಅನಂತರ ರೆಬೆಕ್ಕಳು ತನ್ನ ಹಿರಿಯ ಮಗನಾದ ಏಸಾವನಿಗೆ ಇಷ್ಟವಾದ ಉಡುಪನ್ನು ತೆಗೆದುಕೊಂಡಳು. ರೆಬೆಕ್ಕಳು ಆ ಉಡುಪನ್ನು ತನ್ನ ಕಿರಿಮಗನಾದ ಯಾಕೋಬನಿಗೆ ತೊಡಿಸಿದಳು. 16 ಆಡುಗಳ ಚರ್ಮವನ್ನು ಯಾಕೋಬನ ಕೈಗಳಿಗೂ ಕೊರಳಿಗೂ ಸುತ್ತಿದಳು. 17 ಅನಂತರ ಆಕೆ ತಾನು ಸಿದ್ಧಪಡಿಸಿದ್ದ ಅಡಿಗೆಯನ್ನು ಯಾಕೋಬನಿಗೆ ಕೊಟ್ಟಳು.

18 ಯಾಕೋಬನು ತನ್ನ ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು.

ಅವನ ತಂದೆ, “ಏನು ಮಗನೇ, ನೀನು ಯಾರು?” ಎಂದು ಕೇಳಿದನು.

19 ಯಾಕೋಬನು ತನ್ನ ತಂದೆಗೆ, “ನಾನು ಏಸಾವ, ನಿನ್ನ ಮೊದಲನೆ ಮಗ. ನೀನು ಹೇಳಿದಂತೆ ನಾನು ಮಾಡಿಕೊಂಡು ಬಂದಿದ್ದೇನೆ. ನಾನು ನಿನಗೋಸ್ಕರ ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಕುಳಿತುಕೊಂಡು ತಿನ್ನು. ಅನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.

20 ಆದರೆ ಇಸಾಕನು ತನ್ನ ಮಗನಿಗೆ, “ನೀನು ಇಷ್ಟು ಬೇಗನೆ ಬೇಟೆಯಾಡಿಕೊಂಡು ಬಂದೆಯಾ?” ಎಂದು ಕೇಳಿದನು.

ಅದಕ್ಕೆ ಯಾಕೋಬನು, “ನಾನು ಬಹುಬೇಗನೆ ಪ್ರಾಣಿಗಳನ್ನು ಕಂಡುಕೊಳ್ಳುವಂತೆ ನಿನ್ನ ದೇವರಾದ ಯೆಹೋವನು ಸಹಾಯ ಮಾಡಿದನು” ಎಂದು ಉತ್ತರಿಸಿದನು.

21 ಬಳಿಕ ಇಸಾಕನು ಯಾಕೋಬನಿಗೆ, “ನನ್ನ ಬಳಿಗೆ ಬಾ, ನನ್ನ ಮಗನನ್ನು ನಾನು ಮುಟ್ಟಿ ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಮುಟ್ಟಿದರೆ, ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಲ್ಲೆ” ಎಂದು ಹೇಳಿದನು.

22 ಆದ್ದರಿಂದ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೋದನು. ಇಸಾಕನು ಅವನನ್ನು ಮುಟ್ಟಿ, “ನಿನ್ನ ಸ್ವರ ಯಾಕೋಬನ ಸ್ವರವಿದ್ದಂತಿದೆ. ಆದರೆ ನಿನ್ನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿವೆ” ಅಂದನು. 23 ಅವನು ಯಾಕೋಬನೆಂಬುದು ಇಸಾಕನಿಗೆ ತಿಳಿಯಲಿಲ್ಲ. ಯಾಕೆಂದರೆ ಅವನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿದ್ದವು. ಆದ್ದರಿಂದ ಇಸಾಕನು ಯಾಕೋಬನನ್ನು ಆಶೀರ್ವದಿಸಿದನು.

24 ಇಸಾಕನು ಅವನಿಗೆ, “ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ?” ಎಂದು ಕೇಳಿದನು.

ಅದಕ್ಕೆ ಯಾಕೋಬನು, “ಹೌದು, ನಾನೇ” ಎಂದು ಉತ್ತರಕೊಟ್ಟನು.

ಯಾಕೋಬನಿಗೆ ಆಶೀರ್ವಾದ

25 ಆಗ ಇಸಾಕನು, “ಊಟವನ್ನು ತೆಗೆದುಕೊಂಡು ಬಾ. ನಾನು ಊಟಮಾಡಿ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಅಂತೆಯೇ ಯಾಕೋಬನು ಊಟವನ್ನು ತಂದು ಕೊಟ್ಟಾಗ ಊಟಮಾಡಿದನು; ದ್ರಾಕ್ಷಾರಸವನ್ನು ಕುಡಿದನು.

26 ಬಳಿಕ ಇಸಾಕನು ಅವನಿಗೆ, “ಮಗನೇ, ನನ್ನ ಬಳಿಗೆ ಬಂದು ನನಗೆ ಮುದ್ದಿಡು” ಅಂದನು. 27 ಅದರಂತೆಯೇ ಯಾಕೋಬನು ತಂದೆಯ ಬಳಿಗೆ ಹೋಗಿ ಅವನಿಗೆ ಮುದ್ದಿಟ್ಟನು. ಇಸಾಕನು ಅವನ ಉಡುಪಿನ ವಾಸನೆಯನ್ನು ನೋಡಿ ಅವನನ್ನು ಹೀಗೆ ಆಶೀರ್ವದಿಸಿದನು:

“ನನ್ನ ಮಗನ ಸುವಾಸನೆಯು
    ಯೆಹೋವನು ಆಶೀರ್ವದಿಸಿದ ಪ್ರದೇಶಗಳಂತಿದೆ.
28 ಯೆಹೋವನು ನಿನಗೆ ಬೇಕಾದಷ್ಟು ಮಳೆಯನ್ನು ಕೊಡಲಿ;
    ನಿನಗೆ ಸಾರವುಳ್ಳ ಭೂಮಿಯೂ ಮಹಾಸುಗ್ಗಿಗಳೂ ಮತ್ತು ದ್ರಾಕ್ಷಾರಸವೂ ದೊರೆಯಲಿ.
29 ಎಲ್ಲಾ ಜನರು ನಿನ್ನ ಸೇವೆಮಾಡಲಿ;
    ಜನಾಂಗಗಳು ನಿನಗೆ ತಲೆಬಾಗಲಿ.
ನೀನು ನಿನ್ನ ಸಹೋದರರ ಮೇಲೆ ಆಡಳಿತ ಮಾಡುವೆ.
    ನಿನ್ನ ತಾಯಿಯ ಗಂಡುಮಕ್ಕಳು ನಿನಗೆ ತಲೆಬಾಗಿ ವಿಧೇಯರಾಗುವರು.
ನಿನ್ನನ್ನು ಶಪಿಸುವ ಪ್ರತಿಯೊಬ್ಬನು ಶಾಪಗ್ರಸ್ಥನಾಗುವನು.
    ನಿನ್ನನ್ನು ಆಶೀರ್ವದಿಸುವ ಪ್ರತಿಯೊಬ್ಬನು ಆಶೀರ್ವದಿಸಲ್ಪಡುವನು.”

ಏಸಾವನ “ಆಶೀರ್ವಾದ”

30 ಇಸಾಕನು ಯಾಕೋಬನನ್ನು ಆಶೀರ್ವದಿಸಿದ ಬಳಿಕ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಯಿಂದ ಹೊರಟುಹೋಗುವಷ್ಟರಲ್ಲಿ ಏಸಾವನು ಬೇಟೆಯಿಂದ ಬಂದನು. 31 ಏಸಾವನು ಸಹ ತನ್ನ ತಂದೆಗೆ ಇಷ್ಟವಾದ ರೀತಿಯಲ್ಲಿ ವಿಶೇಷವಾದ ಆಹಾರವನ್ನು ಸಿದ್ಧಪಡಿಸಿ ತನ್ನ ತಂದೆಯ ಬಳಿಗೆ ತೆಗೆದುಕೊಂಡು ಬಂದನು. ಅವನು ತನ್ನ ತಂದೆಗೆ, “ಅಪ್ಪಾ ಎದ್ದೇಳು, ನಿನಗೋಸ್ಕರ ನಿನ್ನ ಮಗನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತಿನ್ನು, ನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.

32 ಇಸಾಕನು ಅವನಿಗೆ, “ನೀನು ಯಾರು?” ಎಂದು ಕೇಳಿದನು.

ಅವನು, “ನಾನು ನಿನ್ನ ಹಿರಿಯಮಗನಾದ ಏಸಾವ” ಎಂದು ಹೇಳಿದನು.

33 ಆಗ ಇಸಾಕನು ತುಂಬ ವ್ಯಸನಗೊಂಡು ಗಡಗಡನೆ ನಡುಗುತ್ತಾ ಅವನಿಗೆ, “ನೀನು ಬರುವುದಕ್ಕಿಂತ ಮೊದಲೇ ಅಡಿಗೆಯನ್ನು ಸಿದ್ಧಪಡಿಸಿ ನನಗೆ ತಂದುಕೊಟ್ಟವನು ಯಾರು? ನಾನು ಅದನ್ನೆಲ್ಲ ತಿಂದು ಅವನನ್ನು ಆಶೀರ್ವದಿಸಿದೆನು. ಈಗ ನನ್ನ ಆಶೀರ್ವಾದವನ್ನು ಹಿಂತೆಗೆದುಕೊಳ್ಳಲಾಗದು” ಎಂದು ಹೇಳಿದನು.

34 ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ತುಂಬ ಕೋಪಗೊಂಡನು; ವ್ಯಥೆಪಟ್ಟನು; ಗೋಳಾಡಿದನು. ಅವನು ತನ್ನ ತಂದೆಗೆ, “ಹಾಗಾದರೆ, ನನ್ನನ್ನೂ ಆಶೀರ್ವದಿಸಪ್ಪಾ” ಎಂದು ಹೇಳಿದನು.

35 ಇಸಾಕನು, “ನಿನ್ನ ತಮ್ಮನು ನನ್ನನ್ನು ಮೋಸಗೊಳಿಸಿದನು; ಅವನು ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡನು” ಎಂದು ಹೇಳಿದನು.

36 ಏಸಾವನು, “ಅವನ ಹೆಸರು ಯಾಕೋಬ (ಮೋಸಗಾರ). ಅದೇ ಅವನಿಗೆ ಸರಿಯಾದ ಹೆಸರು. ಅವನು ಎರಡು ಸಲ ನನಗೆ ಮೋಸಮಾಡಿದನು. ನನ್ನ ಚೊಚ್ಚಲತನದ ಹಕ್ಕನ್ನು ತೆಗೆದುಕೊಂಡನು. ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡನು” ಎಂದು ಹೇಳಿದನು. ನಂತರ ಏಸಾವನು, “ನನಗೋಸ್ಕರ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.

37 ಇಸಾಕನು, “ಇಲ್ಲ, ತುಂಬ ತಡವಾಯಿತು. ನಿನ್ನ ಮೇಲೆ ಆಡಳಿತ ಮಾಡುವ ಅಧಿಕಾರವನ್ನು ನಾನು ಯಾಕೋಬನಿಗೆ ಕೊಟ್ಟಿದ್ದೇನೆ. ಅವನ ಸಹೋದರರೆಲ್ಲ ಅವನಿಗೆ ಸೇವಕರಾಗಿರುವರು ಎಂದು ನಾನು ಹೇಳಿದ್ದೇನೆ. ಅವನಿಗೆ ಬೇಕಾದಷ್ಟು ದವಸಧಾನ್ಯಗಳೂ ದ್ರಾಕ್ಷಾರಸವೂ ದೊರೆಯುವಂತೆ ಆಶೀರ್ವಾದ ಮಾಡಿದ್ದೇನೆ. ನಿನಗೆ ಕೊಡಲು ನನ್ನಲ್ಲಿ ಏನೂ ಉಳಿದಿಲ್ಲ ಮಗನೇ” ಎಂದು ಹೇಳಿದನು.

38 ಆದರೆ ಏಸಾವನು ತನ್ನ ತಂದೆಯನ್ನು ಮತ್ತೆ ಬೇಡತೊಡಗಿದನು. “ಅಪ್ಪಾ ನನಗಾಗಿ ಒಂದಾದರೂ ಆಶೀರ್ವಾದವಿಲ್ಲವೇ? ಅಪ್ಪಾ, ನನ್ನನ್ನು ಸಹ ಆಶೀರ್ವದಿಸು” ಎಂದು ಏಸಾವನು ಅಳಲಾರಂಭಿಸಿದನು.

39 ಆಗ ಇಸಾಕನು ಅವನಿಗೆ ಹೀಗೆ ಹೇಳಿದನು:

“ನೀನು ಒಳ್ಳೆಯ ಪ್ರದೇಶದಲ್ಲಿ ಜೀವಿಸುವುದಿಲ್ಲ.
    ನಿನಗೆ ಬೇಕಾದಷ್ಟು ಇಬ್ಬನಿ ಇರುವುದಿಲ್ಲ.
40 ನೀನು ಕತ್ತಿಯಿಂದಲೇ ಜೀವಿಸುವೆ.
    ನೀನು ನಿನ್ನ ತಮ್ಮನ ಸೇವಕನಾಗಿರುವೆ.
ಆದರೆ ನೀನು ಬಿಡುಗಡೆಯಾಗಲು ಹೋರಾಡಿ
    ಅವನ ಹಿಡಿತದಿಂದ ಪಾರಾಗುವೆ.”

41 ಅಂದಿನಿಂದ ಏಸಾವನು ಯಾಕೋಬನನ್ನು ದ್ವೇಷಿಸಿದನು. ಏಸಾವನು ತನ್ನೊಳಗೆ, “ನನ್ನ ತಂದೆ ಬಹುಬೇಗನೆ ಸತ್ತುಹೋಗುವನು. ಆಗ ನಾನು ಅವನಿಗಾಗಿ ದುಃಖಿಸಿ ಆ ಬಳಿಕ ಯಾಕೋಬನನ್ನು ಕೊಲ್ಲುವೆನು” ಅಂದುಕೊಂಡನು.

42 ಏಸಾವನು ಯಾಕೋಬನನ್ನು ಕೊಲ್ಲಬೇಕೆಂದಿರುವುದು ರೆಬೆಕ್ಕಳಿಗೆ ತಿಳಿಯಿತು. ಆಕೆ ಯಾಕೋಬನನ್ನು ಕರೆಸಿ ಅವನಿಗೆ, “ಕೇಳು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ. 43 ಆದ್ದರಿಂದ ಮಗನೇ, ನಾನು ಹೇಳಿದಂತೆ ಮಾಡು. ನನ್ನ ಅಣ್ಣನಾದ ಲಾಬಾನನು ಹಾರಾನಿನಲ್ಲಿ ವಾಸವಾಗಿದ್ದಾನೆ. ಅವನ ಬಳಿಗೆ ಹೋಗಿ ಅಡಗಿಕೊ. 44 ನಿನ್ನ ಅಣ್ಣನ ಕೋಪ ತಣ್ಣಗಾಗುವವರೆಗೆ ನೀನು ಸ್ವಲ್ಪ ಕಾಲ ಅವನೊಂದಿಗಿರು. 45 ಸ್ವಲ್ಪ ಸಮಯದ ನಂತರ, ನೀನು ಮಾಡಿದ್ದನ್ನು ನಿನ್ನ ಅಣ್ಣನು ಮರೆತುಬಿಡುವನು. ಆಗ ನಿನ್ನನ್ನು ಅಲ್ಲಿಂದ ಕರೆದುಕೊಂಡು ಬರಲು ನಾನು ಒಬ್ಬ ಸೇವಕನನ್ನು ಅಲ್ಲಿಗೆ ಕಳುಹಿಸಿಕೊಡುವೆನು. ಒಂದೇ ದಿನದಲ್ಲಿ, ನನ್ನ ಇಬ್ಬರು ಗಂಡುಮಕ್ಕಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.

46 ನಂತರ ರೆಬೆಕ್ಕಳು ಇಸಾಕನಿಗೆ, “ನಿನ್ನ ಮಗನಾದ ಏಸಾವನು ಹಿತ್ತಿಯರ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದಾನೆ. ಆ ಸ್ತ್ರೀಯರಿಂದ ನನಗೆ ಸಾಕಾಗಿ ಹೋಗಿದೆ; ಯಾಕೆಂದರೆ ಅವರು ನಮ್ಮ ಜನರಲ್ಲ. ಯಾಕೋಬನು ಸಹ ಇಂಥ ಸ್ತ್ರೀಯರಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡರೆ ನಾನು ಸಾಯುವುದೇ ಮೇಲು” ಎಂದು ಹೇಳಿದಳು.

28 ಇಸಾಕನು ಯಾಕೋಬನನ್ನು ಕರೆದು ಅವನನ್ನು ಆಶೀರ್ವದಿಸಿ ಅವನಿಗೆ, “ನೀನು ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದು. ಆದ್ದರಿಂದ ಈ ಸ್ಥಳವನ್ನು ಬಿಟ್ಟು ಪದ್ದನ್‌ಅರಾಮಿಗೆ ಹೊರಟು ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೋಗು. ನಿನ್ನ ತಾಯಿಯ ಅಣ್ಣನಾದ ಲಾಬಾನನು ಅಲ್ಲಿ ವಾಸಿಸುತ್ತಿದ್ದಾನೆ. ಅವನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊ. ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೆ ಅನೇಕ ಮಕ್ಕಳನ್ನು ಕೊಡುವಂತೆಯೂ ನೀನು ಮಹಾಜನಾಂಗದ ತಂದೆಯಾಗುವಂತೆಯೂ ನಾನು ಪ್ರಾರ್ಥಿಸುವೆನು. ದೇವರು ಅಬ್ರಹಾಮನನ್ನು ಆಶೀರ್ವದಿಸಿದ ರೀತಿಯಲ್ಲಿ ನಿನ್ನನ್ನೂ ನಿನ್ನ ಮಕ್ಕಳನ್ನೂ ಆಶೀರ್ವದಿಸುವಂತೆಯೂ ನೀನು ವಾಸಿಸುವ ಸ್ಥಳದಲ್ಲಿ ಸ್ವಂತ ಭೂಮಿಯನ್ನು ಪಡೆದುಕೊಳ್ಳುವಂತೆಯೂ ನಾನು ಪ್ರಾರ್ಥಿಸುವೆನು. ದೇವರು ಅಬ್ರಹಾಮನಿಗೆ ಕೊಟ್ಟ ಭೂಮಿಯೇ ಅದು” ಎಂದು ಹೇಳಿ ಕಳುಹಿಸಿಕೊಟ್ಟನು.

ಅಂತೆಯೇ ಯಾಕೋಬನು ಪದ್ದನ್‌ಅರಾಮಿಗೆ ಹೊರಟು ರೆಬೆಕ್ಕಳ ಅಣ್ಣನಾದ ಲಾಬಾನನ ಬಳಿಗೆ ಹೋದನು. ಬೆತೂವೇಲನು ಲಾಬಾನನ ಮತ್ತು ರೆಬೆಕ್ಕಳ ತಂದೆ. ರೆಬೆಕ್ಕಳು ಯಾಕೋಬನ ಮತ್ತು ಏಸಾವನ ತಾಯಿ.

ತನ್ನ ತಂದೆಯಾದ ಇಸಾಕನು ಯಾಕೋಬನನ್ನು ಆಶೀರ್ವದಿಸಿದ್ದೂ, ಮದುವೆ ಮಾಡಿಕೊಳ್ಳಲು ಪದ್ದನ್‌ಅರಾಮಿಗೆ ಕಳುಹಿಸಿದ್ದೂ, ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದೆಂದು ಯಾಕೋಬನಿಗೆ ಆಜ್ಞಾಪಿಸಿರುವುದೂ ಏಸಾವನಿಗೆ ತಿಳಿಯಿತು. ಇದಲ್ಲದೆ ಯಾಕೋಬನು ತನ್ನ ತಂದೆತಾಯಿಗಳಿಗೆ ವಿಧೇಯನಾಗಿ ಪದ್ದನ್‌ಅರಾಮಿಗೆ ಹೋದದ್ದೂ ಏಸಾವನಿಗೆ ಗೊತ್ತಾಯಿತು. ತನ್ನ ತಂದೆಗೆ ತನ್ನ ಗಂಡುಮಕ್ಕಳು ಕಾನಾನಿನ ಸ್ತ್ರೀಯರನ್ನು ಮದುವೆಯಾಗುವುದು ಇಷ್ಟವಿಲ್ಲವೆಂಬುದೂ ಏಸಾವನಿಗೆ ತಿಳಿಯಿತು. ಏಸಾವನಿಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದರು. ಆದರೂ ಅವನು ಇಷ್ಮಾಯೇಲನ ಬಳಿಗೆ ಹೋಗಿ ಅವನ ಮಗಳಾದ ಮಹಲತ್ ಎಂಬಾಕೆಯನ್ನು ಮದುವೆ ಮಾಡಿಕೊಂಡನು. ಇಷ್ಮಾಯೇಲನು ಅಬ್ರಹಾಮನ ಮಗನು. ಮಹಲತಳು ನೆಬಾಯೋತನ ತಂಗಿ.

ದೇವರ ಮನೆ—ಬೇತೇಲ್

10 ಯಾಕೋಬನು ಬೇರ್ಷೆಬವನ್ನು ಬಿಟ್ಟು ಹಾರಾನಿಗೆ ಹೋದನು. 11 ಯಾಕೋಬನು ಪ್ರಯಾಣ ಮಾಡುತ್ತಿರುವಾಗ ಸೂರ್ಯಾಸ್ತವಾಯಿತು. ಆದ್ದರಿಂದ ಯಾಕೋಬನು ಆ ರಾತ್ರಿ ಇಳಿದುಕೊಳ್ಳಲು ಒಂದು ಸ್ಥಳಕ್ಕೆ ಹೋದನು. ಯಾಕೋಬನು ಆ ಸ್ಥಳದಲ್ಲಿ ಒಂದು ಕಲ್ಲನ್ನು ಕಂಡು ಅದರ ಮೇಲೆ ತಲೆಯಿಟ್ಟು ಮಲಗಿಕೊಂಡನು. 12 ಯಾಕೋಬನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಒಂದು ಏಣಿ ನೆಲದ ಮೇಲೆ ನಿಂತಿತ್ತು, ಅದರ ತುದಿ ಆಕಾಶವನ್ನು ಮುಟ್ಟಿತ್ತು. ದೇವದೂತರು ಅದರಲ್ಲಿ ಮೇಲೆರುತ್ತಾ ಕೆಳಗಿಳಿಯುತ್ತಾ ಇರುವುದನ್ನು ಯಾಕೋಬನು ಕಂಡನು. 13 ಯೆಹೋವನು ಏಣಿಯ ತುದಿಯಲ್ಲಿ ನಿಂತಿರುವುದನ್ನು ಯಾಕೋಬನು ಕಂಡನು. ಯೆಹೋವನು ಅವನಿಗೆ, “ನಿನ್ನ ತಾತನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ ನಾನು. ನಾನು ಇಸಾಕನ ದೇವರು. ಈಗ ನೀನು ಮಲಗಿಕೊಂಡಿರುವ ದೇಶವನ್ನು ನಾನು ನಿನಗೆ ಕೊಡುವೆನು. ನಾನು ಈ ದೇಶವನ್ನು ನಿನಗೂ ನಿನ್ನ ಮಕ್ಕಳಿಗೂ ಕೊಡುವೆನು. 14 ಭೂಮಿಯ ಮೇಲೆ ಧೂಳಿನ ಕಣಗಳಿರುವಂತೆ ನಿನಗೆ ಅನೇಕಾನೇಕ ಸಂತತಿಗಳಿರುವರು. ಅವರು ಪೂರ್ವಪಶ್ಚಿಮಗಳಿಗೂ ಉತ್ತರದಕ್ಷಿಣಗಳಿಗೂ ಹರಡಿಕೊಳ್ಳುವರು. ನಿನ್ನ ಮೂಲಕವೂ ನಿನ್ನ ಸಂತತಿಯವರ ಮೂಲಕವೂ ಭೂಮಿಯ ಮೇಲಿರುವ ಎಲ್ಲಾ ಕುಲಗಳವರು ಆಶೀರ್ವಾದ ಹೊಂದುವರು.

15 “ನಾನು ನಿನ್ನ ಸಂಗಡವಿದ್ದು ನೀನು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಿನ್ನನ್ನು ಕಾಪಾಡುವೆನು; ನಿನ್ನನ್ನು ಈ ಸ್ಥಳಕ್ಕೆ ಮತ್ತೆ ಕರೆದುಕೊಂಡು ಬರುವೆನು. ನಾನು ವಾಗ್ದಾನ ಮಾಡಿದ್ದನ್ನು ನೆರವೇರಿಸುವ ತನಕ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಹೇಳಿದನು.

16 ಆಗ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ಖಂಡಿತವಾಗಿಯೂ ಈ ಸ್ಥಳದಲ್ಲಿ ದೇವರಿದ್ದಾನೆ, ಆದರೆ ಅದು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದನು.

17 ಯಾಕೋಬನಿಗೆ ಭಯವಾಗಿತ್ತು. ಅವನು, “ಇದು ತುಂಬ ಮಹತ್ವವಾದ ಸ್ಥಳ. ಇದು ದೇವರ ಮನೆ. ಇದು ಸ್ವರ್ಗಕ್ಕೆ ಬಾಗಿಲು” ಎಂದು ಹೇಳಿದನು.

18 ಯಾಕೋಬನು ಮರುದಿನ ಮುಂಜಾನೆ ಬೇಗನೆ ಎದ್ದು, ತಾನು ಮಲಗಿಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಕಂಬವಾಗಿ ನೆಲದಲ್ಲಿ ನಿಲ್ಲಿಸಿದನು. ನಂತರ ಆ ಕಲ್ಲಿನ ಮೇಲೆ ಎಣ್ಣೆಯನ್ನು ಸುರಿದನು. ಹೀಗೆ ಅವನು ಆ ಕಲ್ಲನ್ನು ದೇವರ ನೆನಪಿಗಾಗಿ ಪ್ರತಿಷ್ಠಿಸಿದನು. 19 ಆ ಸ್ಥಳದ ಹೆಸರು ಲೂಜ್. ಆದರೆ ಯಾಕೋಬನು ಅದಕ್ಕೆ ಬೇತೇಲ್ ಎಂದು ಹೆಸರಿಟ್ಟನು.

20 ನಂತರ ಯಾಕೋಬನು ಈ ಪ್ರಮಾಣವನ್ನು ಮಾಡಿದನು: “ದೇವರು ನನ್ನ ಸಂಗಡವಿದ್ದು ನಾನು ಹೋದಲ್ಲೆಲ್ಲ ನನ್ನನ್ನು ಕಾಪಾಡಿ ಊಟಕ್ಕೆ ಆಹಾರವನ್ನೂ, ಉಡಲು ಬಟ್ಟೆಗಳನ್ನೂ ಕೊಟ್ಟು, 21 ನಾನು ಸಮಾಧಾನದಿಂದ ನನ್ನ ತಂದೆಯ ಮನೆಗೆ ಹಿಂತಿರುಗಿ ಬರುವಂತೆ ಮಾಡಿದರೆ ಯೆಹೋವನೇ ನನ್ನ ದೇವರಾಗಿರುವನು. 22 ನಾನು ಕಲ್ಲನ್ನು ನೆಟ್ಟಿರುವ ಈ ಸ್ಥಳವು ದೇವರ ಪವಿತ್ರಸ್ಥಳವಾಗುವುದು. ಇದಲ್ಲದೆ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತನೆಯ ಒಂದು ಭಾಗವನ್ನು ನಾನು ಆತನಿಗೆ ಕೊಡುತ್ತೇನೆ.”

ಮತ್ತಾಯ 8:18-34

ಯೇಸುವನ್ನು ಹಿಂಬಾಲಿಸಿ

(ಲೂಕ 9:57-62)

18 ಯೇಸು ತನ್ನ ಸುತ್ತಲೂ ಇದ್ದ ಜನರೆಲ್ಲರನ್ನು ನೋಡಿ ತನ್ನ ಶಿಷ್ಯರಿಗೆ ಸರೋವರದ ಆಚೆಯ ತೀರಕ್ಕೆ ಹೋಗುವಂತೆ ಹೇಳಿದನು. 19 ಆಗ ಧರ್ಮೋಪದೇಶಕನು ಯೇಸುವಿನ ಬಳಿಗೆ ಬಂದು, “ಬೋಧಕನೇ, ನೀನು ಯಾವ ಸ್ಥಳಕ್ಕೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.

20 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಅಂದನು.

21 ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರಲು ನನಗೆ ಅಪ್ಪಣೆಯಾಗಲಿ. ಆಮೇಲೆ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.

22 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಿಕೊಳ್ಳಲಿ. ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ

(ಮಾರ್ಕ 4:35-41; ಲೂಕ 8:22-25)

23 ಯೇಸು ದೋಣಿಯೊಳಗೆ ಹೋದನು. ಆತನ ಶಿಷ್ಯರೂ ಆತನೊಂದಿಗೆ ಹೋದರು. 24 ದೋಣಿಯು ದಡವನ್ನು ಬಿಟ್ಟಮೇಲೆ ದೊಡ್ಡ ಬಿರುಗಾಳಿಯು ಸರೋವರದ ಮೇಲೆ ಪ್ರಾರಂಭವಾಯಿತು. ಅಲೆಗಳು ದೋಣಿಯನ್ನು ಮುಚ್ಚಿಕೊಂಡವು. ಆದರೆ ಯೇಸು ನಿದ್ರಿಸುತ್ತಿದ್ದನು. 25 ಯೇಸುವಿನ ಶಿಷ್ಯರು ಆತನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಪ್ರಭುವೇ, ನಮ್ಮನ್ನು ರಕ್ಷಿಸು! ನಾವು ಮುಳುಗುತ್ತಿದ್ದೇವೆ!” ಎಂದು ಹೇಳಿದರು.

26 ಯೇಸು, “ನೀವು ಭಯಪಡುವುದೇಕೆ? ನಿಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲ” ಎಂದು ಉತ್ತರಿಸಿ ಎದ್ದುನಿಂತುಕೊಂಡು ಆ ದೊಡ್ಡ ಬಿರುಗಾಳಿಗೂ ಅಲೆಗಳಿಗೂ ಆಜ್ಞಾಪಿಸಿದನು. ಆ ಕೂಡಲೇ ಬಿರುಗಾಳಿ ನಿಂತುಹೋಯಿತು. ಸರೋವರ ಪ್ರಶಾಂತವಾಯಿತು.

27 ಜನರೆಲ್ಲರೂ ಆಶ್ಚರ್ಯಪಟ್ಟರು. “ಈತನು ಎಂತಹ ಮನುಷ್ಯ? ಬಿರುಗಾಳಿ ಮತ್ತು ನೀರು ಈತನಿಗೆ ವಿಧೇಯವಾಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.

ದೆವ್ವದಿಂದ ಪೀಡಿತರಾಗಿದ್ದ ಇಬ್ಬರಿಗೆ ಬಿಡುಗಡೆ

(ಮಾರ್ಕ 5:1-20; ಲೂಕ 8:26-39)

28 ಯೇಸು ಸರೋವರದ ಮತ್ತೊಂದು ತೀರದಲ್ಲಿದ್ದ ಗದರೇನ ಪ್ರಾಂತ್ಯಕ್ಕೆ ಬಂದನು. ಅಲ್ಲಿ ದೆವ್ವಗಳಿಂದ ಪೀಡಿತರಾಗಿದ್ದ ಇಬ್ಬರು ಯೇಸುವಿನ ಬಳಿಗೆ ಬಂದರು. ಅವರು ಸಮಾಧಿಯ ಗವಿಗಳಲ್ಲಿ ವಾಸವಾಗಿದ್ದರು ಮತ್ತು ಬಹಳ ಅಪಾಯಕಾರಿಗಳಾಗಿದ್ದರು. ಆದ್ದರಿಂದ ಜನರು ಆ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. 29 ಅವರಿಬ್ಬರು ಯೇಸುವಿನ ಬಳಿಗೆ ಬಂದು. “ನೀನು ನಮಗೆ ಏನು ಮಾಡಬೇಕೆಂದಿರುವೆ? ದೇವಕುಮಾರನೇ, ನೇಮಿತ ಕಾಲಕ್ಕಿಂತ ಮುಂಚೆಯೇ ನಮ್ಮನ್ನು ಶಿಕ್ಷಿಸಲು ಇಲ್ಲಿಗೆ ಬಂದೆಯಾ?” ಎಂದು ಗಟ್ಟಿಯಾಗಿ ಕೂಗಿಕೊಂಡರು.

30 ಆ ಸ್ಥಳದ ಹತ್ತಿರ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. 31 ಆ ದೆವ್ವಗಳು, “ನಾವು ಇವರಿಬ್ಬರನ್ನು ಬಿಟ್ಟುಹೋಗುವಂತೆ ನೀನು ಮಾಡಬೇಕೆಂದಿದ್ದರೆ, ದಯವಿಟ್ಟು ನಮ್ಮನ್ನು ಆ ಹಂದಿಗಳೊಳಗೆ ಕಳುಹಿಸು” ಎಂದು ಬೇಡಿಕೊಂಡವು.

32 ಯೇಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಗಳು ಅವರಿಬ್ಬರನ್ನು ಬಿಟ್ಟು ಹಂದಿಗಳೊಳಗೆ ಹೋದವು. ಕೂಡಲೇ ಹಂದಿಗಳೆಲ್ಲಾ ಗುಡ್ಡದ ಕೆಳಗೆ ಓಡಿ ಸರೋವರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿಹೋದವು. 33 ಹಂದಿಗಳನ್ನು ಮೇಯಿಸುತ್ತಿದ್ದವರು ಪಟ್ಟಣದೊಳಕ್ಕೆ ಓಡಿಹೋಗಿ ಹಂದಿಗಳಿಗೂ ದೆವ್ವಗಳಿಂದ ಪೀಡಿತರಾಗಿದ್ದವರಿಗೂ ಸಂಭವಿಸಿದ್ದನ್ನು ಜನರಿಗೆ ತಿಳಿಸಿದರು. 34 ಆಗ ಪಟ್ಟಣದ ಜನರೆಲ್ಲರೂ ಯೇಸುವನ್ನು ನೋಡಲು ಹೋಗಿ, ತಮ್ಮ ಸ್ಥಳವನ್ನು ಬಿಟ್ಟುಹೋಗಬೇಕೆಂದು ಆತನನ್ನು ಬೇಡಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International