New Testament in a Year
ಶಿಷ್ಯರ ವಿಶ್ವಾಸ ದ್ರೋಹದ ಮುನ್ಸೂಚನೆ
(ಮತ್ತಾಯ 26:31-35; ಲೂಕ 22:31-34; ಯೋಹಾನ 13:36-38)
27 ನಂತರ ಯೇಸು ಶಿಷ್ಯರಿಗೆ, “ನೀವೆಲ್ಲರೂ ಭಯಗೊಂಡು ಹಿಂಜರಿಯುವಿರಿ.
‘ನಾನು ಕುರುಬನನ್ನು ಹೊಡೆಯುವೆನು;
ಆಗ ಕುರಿಗಳು ಚದರಿಹೋಗುತ್ತವೆ’(A)
ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. 28 ಆದರೆ ನಾನು ಸತ್ತು ಪುನರುತ್ಥಾನ ಹೊಂದಿದ ಮೇಲೆ ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತೇನೆ” ಎಂದನು.
29 ಪೇತ್ರನು, “ಉಳಿದ ಶಿಷ್ಯರೆಲ್ಲರು ಭಯಗೊಂಡು ಹಿಂಜರಿದರೂ ನಾನು ಹಿಂಜರಿಯುವುದಿಲ್ಲ” ಎಂದು ಉತ್ತರಿಸಿದನು.
30 ಯೇಸು, “ನಾನು ಸತ್ಯವನ್ನು ಹೇಳುತ್ತೇನೆ. ಈ ರಾತ್ರಿ ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಾರಿ, ನನ್ನನ್ನು ನೀನು ತಿಳಿದೇ ಇಲ್ಲವೆಂದು ಹೇಳುವೆ” ಎಂದು ಉತ್ತರಿಸಿದನು.
31 ಆದರೆ ಪೇತ್ರನು ಖಚಿತವಾಗಿ, “ನಾನು ನಿನ್ನೊಂದಿಗೆ ಸಾಯಬೇಕಾದರೂ ಸರಿಯೇ, ನಿನ್ನನ್ನು ತಿಳಿದೇ ಇಲ್ಲವೆಂದು ನಾನೆಂದಿಗೂ ಹೇಳುವುದಿಲ್ಲ” ಎಂದು ಉತ್ತರಿಸಿದನು. ಉಳಿದ ಶಿಷ್ಯರು ಸಹ ಇದೇ ರೀತಿ ಹೇಳಿದರು.
ಯೇಸುವಿನ ಏಕಾಂತ ಪ್ರಾರ್ಥನೆ
(ಮತ್ತಾಯ 26:36-46; ಲೂಕ 22:39-46)
32 ಯೇಸು ಮತ್ತು ಆತನ ಶಿಷ್ಯರು ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದರು. ಯೇಸು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥಿಸಿ ಬರುವ ತನಕ ಕುಳಿತಿರಿ” ಎಂದು ಹೇಳಿ 33 ಪೇತ್ರನನ್ನು, ಯಾಕೋಬನನ್ನು ಮತ್ತು ಯೋಹಾನನನ್ನು ತನ್ನ ಜೊತೆ ಕರೆದುಕೊಂಡು ಹೋದನು. ನಂತರ ಯೇಸು ಬಹಳ ಗಲಿಬಿಲಿಗೊಂಡು, ದುಃಖದಿಂದ ತುಂಬಿದವನಾದನು. 34 ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖದಿಂದ ತುಂಬಿಹೋಗಿದೆ. ಎಚ್ಚರವಾಗಿದ್ದು ಇಲ್ಲಿಯೇ ಕಾದುಕೊಂಡಿರಿ” ಎಂದನು.
35 ಯೇಸು ಅವರಿಂದ ಸ್ವಲ್ಪದೂರ ನಡೆದುಹೋಗಿ ನೆಲದ ಮೇಲೆ ಬೋರಲಬಿದ್ದು, ಪ್ರಾರ್ಥಿಸುತ್ತಾ “ಸಾಧ್ಯವಾದರೆ, ಈ ಸಂಕಟದ ಗಳಿಗೆ ನನಗೆ ಬಾರದಿರಲಿ” ಎಂದು ಬೇಡಿಕೊಂಡನು. 36 ಬಳಿಕ ಯೇಸು, “ಅಪ್ಪಾ,[a] ತಂದೆಯೇ! ನಿನಗೆ ಎಲ್ಲವೂ ಸಾಧ್ಯ. ಈ ಸಂಕಟದ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಚಿತ್ತದಂತೆ ಮಾಡದೆ, ನಿನ್ನ ಚಿತ್ತದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.
37 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು, ಪೇತ್ರನಿಗೆ, “ಸೀಮೋನನೇ, ಏಕೆ ನಿದ್ರೆ ಮಾಡುತ್ತಿರುವೆ? ನೀನು ನನ್ನೊಡನೆ ಒಂದು ಗಂಟೆ ಕಾಲ ಎಚ್ಚರವಾಗಿರಲು ಸಾಧ್ಯವಾಗಲಿಲ್ಲವೇ? 38 ನೀನು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸು. ಮನಸ್ಸೇನೋ ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು” ಎಂದನು.
39 ಪುನಃ ಯೇಸು ದೂರ ಹೋಗಿ, ಮೊದಲಿನಂತೆಯೇ ಪ್ರಾರ್ಥಿಸಿದನು. 40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. ಯೇಸುವಿಗೆ ಏನು ಹೇಳಬೇಕೆಂದು ಆ ಶಿಷ್ಯರಿಗೆ ತಿಳಿಯಲಿಲ್ಲ.
41 ಯೇಸು ಮೂರನೆಯ ಸಾರಿ ಪ್ರಾರ್ಥಿಸಿದ ಮೇಲೆ, ತನ್ನ ಶಿಷ್ಯರ ಬಳಿಗೆ ಹಿಂತಿರುಗಿ, “ನೀವು ಇನ್ನೂ ನಿದ್ರಿಸುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಗಳ ಕೈಗೆ ಮನುಷ್ಯಕುಮಾರನನ್ನು ಒಪ್ಪಿಸುವ ಸಮಯ ಬಂದಿದೆ. 42 ಮೇಲೇಳಿ! ನಾವು ಹೋಗಬೇಕು. ನನ್ನನ್ನು ಆ ಜನರಿಗೆ ಹಿಡಿದುಕೊಡುವವನು ಇಲ್ಲಿಗೆ ಬರುತ್ತಿದ್ದಾನೆ” ಎಂದನು.
ಯೇಸುವಿನ ಬಂಧನ
(ಮತ್ತಾಯ 26:47-56; ಲೂಕ 22:47-53; ಯೋಹಾನ 18:3-12)
43 ಯೇಸು ಇನ್ನೂ ಮಾತಾಡುತ್ತಿರುವಾಗ, ಯೂದನು ಅಲ್ಲಿಗೆ ಬಂದನು. ಹನ್ನೆರಡು ಜನ ಅಪೊಸ್ತಲರಲ್ಲಿ ಯೂದನು ಒಬ್ಬನಾಗಿದ್ದನು. ಯೂದನೊಡನೆ ಕತ್ತಿ ಮತ್ತು ದೊಣ್ಣೆಗಳಿಂದ ಸುಸಜ್ಜಿತರಾಗಿದ್ದ ಅನೇಕ ಜನರಿದ್ದರು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರುಗಳು ಈ ಜನರನ್ನು ಕಳುಹಿಸಿದ್ದರು.
44 ಯೇಸು ಯಾರೆಂಬುದನ್ನು ಜನರಿಗೆ ತೋರಿಸಲು ಯೂದನು ಒಂದು ಉಪಾಯ ಮಾಡಿದನು. ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಯೇಸು. ಅವನನ್ನು ಸೆರೆಹಿಡಿದು ಎಚ್ಚರಿಕೆಯಿಂದ ಕಾಯುತ್ತಾ ಕರೆದುಕೊಂಡು ಹೋಗಿರಿ!” ಎಂದು ಹೇಳಿಕೊಟ್ಟಿದ್ದನು. 45 ಆದ್ದರಿಂದ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ!” ಎಂದು ಹೇಳಿ ಯೇಸುವಿಗೆ ಮುದ್ದಿಟ್ಟನು. 46 ಆಗ ಆ ಜನರು ಯೇಸುವನ್ನು ಬಂಧಿಸಿದರು. 47 ಯೇಸುವಿನ ಹತ್ತಿರ ನಿಂತಿದ್ದ ಶಿಷ್ಯರಲ್ಲಿ ಒಬ್ಬನು ತನ್ನ ಕತ್ತಿಯನ್ನು ಹೊರಗೆಳೆದು ಪ್ರಧಾನಯಾಜಕನ ಸೇವಕನಿಗೆ ಹೊಡೆದು, ಅವನ ಕಿವಿಯನ್ನು ಕತ್ತರಿಸಿ ಹಾಕಿದನು.
48 ಆಗ ಯೇಸು, “ಒಬ್ಬ ಅಪರಾಧಿಯನ್ನು ಬಂಧಿಸುವಂತೆ ನೀವು ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ಬರಬೇಕಿತ್ತೇ? 49 ಪ್ರತಿದಿನ ದೇವಾಲಯದಲ್ಲಿ ನಾನು ಉಪದೇಶಿಸುತ್ತಾ ನಿಮ್ಮೊಡನೆ ಇದ್ದೆನು. ಅಲ್ಲಿ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಈ ಎಲ್ಲಾ ಸಂಗತಿಗಳು ಪವಿತ್ರಗ್ರಂಥದಲ್ಲಿ ಬರೆದಿರುವಂತೆ ನಡೆದಿವೆ” ಎಂದನು. 50 ಆಗ ಯೇಸುವಿನ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
51 ಯೇಸುವಿನ ಶಿಷ್ಯನಾಗಿದ್ದ ಒಬ್ಬ ಯುವಕನು ಅಲ್ಲಿದ್ದನು. ಅವನು ನಾರುಬಟ್ಟೆಯನ್ನು ಧರಿಸಿದ್ದನು. ಜನರು ಅವನನ್ನು ಸಹ ಹಿಡಿದುಕೊಂಡರು. 52 ಅವನು ತಾನು ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ಅಲ್ಲಿಯೇ ಬಿಟ್ಟು ಬರೀಮೈಯಲ್ಲಿ ಓಡಿಹೋದನು.
ಯೆಹೂದ್ಯನಾಯಕರ ಮುಂದೆ ಯೇಸು
(ಮತ್ತಾಯ 26:57-68; ಲೂಕ 22:54-55,63-71; ಯೋಹಾನ 18:13-14,19-24)
53 ಯೇಸುವನ್ನು ಬಂಧಿಸಿದ್ದ ಜನರು ಪ್ರಧಾನಯಾಜಕನ ಮನೆಗೆ ಆತನನ್ನು ಕರೆದುಕೊಂಡು ಹೋದರು. ಎಲ್ಲಾ ಮಹಾಯಾಜಕರುಗಳು, ಹಿರಿಯ ಯೆಹೂದ್ಯನಾಯಕರುಗಳು, ಹಾಗೂ ಧರ್ಮೋಪದೇಶಕರು ಅಲ್ಲಿ ಸೇರಿದ್ದರು.
Kannada Holy Bible: Easy-to-Read Version. All rights reserved. © 1997 Bible League International