M’Cheyne Bible Reading Plan
ಯೆಹೂದದ ಅರಸನಾದ ಯೋತಾಮ
27 ಯೋತಾಮನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನ ತಾಯಿ ಚಾದೋಕನ ಮಗಳಾದ ಯೆರೂಷ. 2 ಯೋತಾಮನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಉಜ್ಜೀಯನಂತೆ ಅವನೂ ದೇವರಿಗೆ ವಿಧೇಯನಾಗಿ ನಡೆದುಕೊಂಡನು. ಆದರೆ ತನ್ನ ತಂದೆಯು ದೇವಾಲಯವನ್ನು ಪ್ರವೇಶಿಸಿ ಧೂಪಹಾಕಿದಂತೆ ಇವನು ಮಾಡಲಿಲ್ಲ. ಜನರು ಮಾತ್ರ ಕೆಟ್ಟಕಾರ್ಯಗಳಲ್ಲಿಯೇ ಮುಂದುವರೆದರು. 3 ಯೋತಾಮನು ದೇವಾಲಯದ ಮೇಲಿನ ಬಾಗಿಲನ್ನು ತಿರುಗಿ ಕಟ್ಟಿಸಿದನು. ಪೌಳಿಗೋಡೆಯ ಮೇಲೆ ಓಫೇಲ್ ಎಂಬ ಸ್ಥಳದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 4 ಯೋತಾಮನು ಯೆಹೂದದ ಬೆಟ್ಟಪ್ರದೇಶಗಳಲ್ಲಿ ಪಟ್ಟಣಗಳನ್ನು ಮತ್ತು ಕಾಡಿನೊಳಗೆ ಗೋಪುರಗಳನ್ನು ಕಟ್ಟಿಸಿದನು. 5 ಯೋತಾಮನು ಅಮ್ಮೋನಿಯರ ಸೈನ್ಯದೊಡನೆ ಕಾದಾಡಿ ಜಯಗಳಿಸಿದನು. ಅವರು ಪ್ರತಿ ವರ್ಷ ಮೂರು ವರ್ಷಗಳ ಕಾಲ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬೆಳ್ಳಿ, ಅರವತ್ತೆರಡು ಸಾವಿರ ಬುಷೆಲ್ ಗೋಧಿಯನ್ನೂ, ಅರವತ್ತೆರಡು ಸಾವಿರ ಬುಷೆಲ್ ಜವೆಗೋಧಿಯನ್ನೂ ಯೋತಾಮನಿಗೆ ಕಾಣಿಕೆಯಾಗಿ ಕೊಟ್ಟರು.
6 ಯೋತಾಮನು ದೇವರಿಗೆ ವಿಧೇಯನಾಗಿ ಜೀವಿಸಿದ್ದ ಕಾರಣ ಬಲಿಷ್ಠನಾದ ರಾಜನಾದನು. 7 ಅವನು ಮಾಡಿದ ಬೇರೆ ಕಾರ್ಯಗಳು ಮತ್ತು ನಡಿಸಿದ ಯುದ್ಧಗಳ ವಿಷಯ ಇಸ್ರೇಲರ ಮತ್ತು ಯೆಹೂದದ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 8 ಯೋತಾಮನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಅರಸನಾದನು. ಅವನು ಹದಿನಾರು ವರ್ಷ ಜೆರುಸಲೇಮಿನಲ್ಲಿ ಆಳಿದನು. 9 ಯೋತಾಮನು ಸತ್ತಾಗ ಅವನ ಪೂರ್ವಿಕರೊಂದಿಗೆ ಸಮಾಧಿಮಾಡಿದರು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಯೋತಾಮನ ಮಗನಾದ ಆಹಾಜನು ತನ್ನ ತಂದೆಯ ನಂತರ ರಾಜನಾದನು.
ಯೆಹೂದದ ಅರಸನಾದ ಆಹಾಜ
28 ಆಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿದ್ದು ಹದಿನಾರು ವರ್ಷ ರಾಜ್ಯಭಾರ ಮಾಡಿದನು. ಆಹಾಜನು ತನ್ನ ಪೂರ್ವಿಕನಾದ ದಾವೀದನಂತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ದೇವರ ಚಿತ್ತದ ಪ್ರಕಾರ ಜೀವಿಸಲಿಲ್ಲ. 2 ಅವನು ಇಸ್ರೇಲರ ಅರಸರಂತೆ ಕೆಟ್ಟದಾರಿಯಲ್ಲಿ ನಡೆದನು. ಅವನು ಎರಕದ ಬೊಂಬೆಗಳನ್ನು ಮಾಡಿಸಿ ಬಾಳ್ ದೇವರ ವಿಗ್ರಹಗಳನ್ನು ಪೂಜಿಸಿದನು. 3 ಬೆನ್ಹಿನ್ನೋಮ್ ಕಣಿವೆಯಲ್ಲಿ ಧೂಪಹಾಕಿದನು. ತನ್ನ ಸ್ವಂತ ಮಕ್ಕಳನ್ನು ಬೆಂಕಿಯಲ್ಲಿ ಸುಟ್ಟು ವಿಗ್ರಹಗಳಿಗೆ ಆಹುತಿಕೊಟ್ಟನು. ಆ ದೇಶದ ಜನರು ಮಾಡಿದ ಭಯಂಕರ ಪಾಪಗಳನ್ನು ತಾನೂ ಮಾಡಿದನು. ಇಸ್ರೇಲ್ ಜನರು ಆ ದೇಶವನ್ನು ಪ್ರವೇಶಿಸಿದಾಗ ದೇವರು ಅವರನ್ನು ಹೊರಗೆ ಹೊರಡಿಸಿದ್ದನು. 4 ಆಹಾಜನು ಬೆಟ್ಟದ ಮೇಲೆ ಪ್ರತಿಯೊಂದು ಹಸಿರು ಮರದಡಿಯಲ್ಲಿದ್ದ ಉನ್ನತಸ್ಥಳಗಳಲ್ಲಿ ಧೂಪಹಾಕಿ ಯಜ್ಞಗಳನ್ನರ್ಪಿಸುತ್ತಿದ್ದನು.
5-6 ಆಹಾಜನು ಪಾಪಮಾಡಿದ್ದರಿಂದ ದೇವರು ಅರಾಮ್ಯರನ್ನು ಅವನ ವಿರುದ್ಧವಾಗಿ ಕಳುಹಿಸಿ ಅವನು ಸೋತು ಹೋಗುವಂತೆ ಮಾಡಿದನು. ಅವರಲ್ಲಿ ಬಹುಮಂದಿ ಸೆರೆಹಿಡಿಯಲ್ಪಟ್ಟರು. ಅರಾಮ್ಯರ ಅರಸನು ಅವರನ್ನೆಲ್ಲಾ ದಮಸ್ಕಕ್ಕೆ ಒಯ್ದನು. ಇಸ್ರೇಲರ ಅರಸನಾದ ಪೆಕಹನು ಬಂದು ಆಹಾಜನನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಪೆಕಹನ ತಂದೆಯ ಹೆಸರು ರೆಮಲ್ಯ. ಪೆಕಹನೂ ಅವನ ಸೈನ್ಯವೂ ಯೆಹೂದ ಸೈನಿಕರಲ್ಲಿ ಒಂದೇ ದಿವಸದಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಧೈರ್ಯಶಾಲಿ ಸೈನಿಕರನ್ನು ಕೊಂದರು. ಯೆಹೂದದ ಜನರನ್ನು ಪೆಕಹನು ಸೋಲಿಸಿದನು. ಯಾಕೆಂದರೆ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ವಿಧೇಯರಾಗಲು ನಿರಾಕರಿಸಿದರು. 7 ಎಫ್ರಾಯೀಮಿನ ಜಿಕ್ರಿಯು ಧೈರ್ಯಶಾಲಿಯಾದ ಸಿಪಾಯಿ. ಅವನು ಅರಸನಾದ ಆಹಾಜನ ಮಗನಾದ ಮಾಸೇಯನನ್ನು, ಅರಮನೆಯ ಅಧಿಕಾರಿಯಾದ ಅಜ್ರೀಕಾಮನನ್ನು ಮತ್ತು ಅಧಿಕಾರದಲ್ಲಿ ಅರಸನಿಗೆ ಎರಡನೆಯವನಾಗಿದ್ದ ಎಲ್ಕಾನನನ್ನು ಕೊಂದನು.
8 ಇಸ್ರೇಲರ ಸೈನ್ಯದವರು ಯೆಹೂದದಲ್ಲಿ ವಾಸಿಸುವ ಅವರ ಸ್ವಂತ ಕುಟುಂಬದವರಲ್ಲಿ ಎರಡು ಲಕ್ಷ ಮಂದಿಯನ್ನು ಸೆರೆಹಿಡಿದರು. ಅವರ ಹೆಂಗಸರು, ಮಕ್ಕಳು ಮತ್ತು ಅಧಿಕವಾದ ಬೆಲೆಬಾಳುವ ವಸ್ತುಗಳನ್ನು ಸೂರೆಮಾಡಿದರು. ಇಸ್ರೇಲರು ಇವರೆಲ್ಲರನ್ನೂ, ಅಮೂಲ್ಯ ವಸ್ತುಗಳನ್ನೂ ಸಮಾರ್ಯಕ್ಕೆ ತಂದರು. 9 ಆಗ ಯೆಹೋವನ ಪ್ರವಾದಿಯವರಲ್ಲೊಬ್ಬನು ಅಲ್ಲಿದ್ದನು. ಅವನ ಹೆಸರು ಓದೇದ್. ಓದೇದನು ಸಮಾರ್ಯಕ್ಕೆ ಬರುತ್ತಿದ್ದ ಇಸ್ರೇಲ್ ಸೈನ್ಯದವರನ್ನು ಎದುರುಗೊಂಡು ಅವರಿಗೆ, “ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಯೆಹೂದದ ಜನರು ಸೋತುಹೋಗುವಂತೆ ಮಾಡಿದನು. ಯಾಕೆಂದರೆ ಆತನು ಅವರ ಮೇಲೆ ಸಿಟ್ಟಿಗೆದ್ದಿದ್ದನು. ನೀವು ಯೆಹೂದದ ಜನರನ್ನು ನಿಷ್ಕರುಣೆಯಿಂದ ಕೊಂದುಹಾಕಿದಿರಿ. ಈಗ ದೇವರು ನಿಮ್ಮ ಮೇಲೆ ಕೋಪಗೊಂಡಿದ್ದಾನೆ. 10 ನೀವು ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಯೋಚಿಸುತ್ತಿದ್ದೀರಿ. ನೀವು ಕೂಡ ಯೆಹೋವನಿಗೆ ವಿರೋಧವಾಗಿ ಪಾಪಮಾಡಲಿಲ್ಲವೇ? ಹೀಗೆ ಮಾಡುವದರಿಂದ ನೀವು ಸಹ ದೇವರ ದೃಷ್ಟಿಯಲ್ಲಿ ಪಾಪಮಾಡುತ್ತಿದ್ದೀರಿ. 11 ಈಗ ನೀವು ನನ್ನ ಮಾತನ್ನು ಕೇಳಿರಿ, ನೀವು ಸೆರೆಹಿಡಿದ ನಿಮ್ಮ ಸಹೋದರ ಸಹೋದರಿಯರನ್ನು ಹಿಂದಕ್ಕೆ ಕಳುಹಿಸಿರಿ. ಯಾಕೆಂದರೆ ಯೆಹೋವನು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ” ಎಂದು ಹೇಳಿದನು.
12 ಆಗ ಇಸ್ರೇಲರ ಸೈನಿಕರು ತಮ್ಮ ಮನೆಗೆ ಯುದ್ಧದಿಂದ ಹಿಂತಿರುಗುವುದನ್ನು ಎಫ್ರಾಯೀಮಿನ ಕೆಲವು ನಾಯಕರು ನೋಡಿದರು. ಆ ನಾಯಕರು ಅವರನ್ನು ಎಚ್ಚರಿಸಿದರು. ಆ ನಾಯಕರುಗಳು ಯಾರೆಂದರೆ: ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರೆಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ ಮತ್ತು ಹೆದ್ಲ್ಯೆಯನ ಮಗನಾದ ಅಮಾಸ. 13 ಈ ನಾಯಕರುಗಳು ಇಸ್ರೇಲರ ಸೈನಿಕರಿಗೆ, “ಯೆಹೂದದೇಶದಿಂದ ಸೆರೆಯವರನ್ನು ಇಲ್ಲಿಗೆ ತರಬೇಡಿ. ನೀವು ಹಾಗೆ ಮಾಡಿದರೆ ಅದು ನಿಮ್ಮ ಪಾಪವನ್ನೂ ದೋಷವನ್ನೂ ಮತ್ತಷ್ಟು ಹೆಚ್ಚಿಸುತ್ತದೆ. ಯೆಹೋವನು ಇಸ್ರೇಲರ ಮೇಲೆ ತುಂಬಾ ಸಿಟ್ಟುಗೊಳ್ಳುವನು” ಎಂದು ಹೇಳಿದರು.
14 ಆಗ ಆ ಸೈನಿಕರು ತಮ್ಮ ಬಳಿಯಲ್ಲಿದ್ದ ಸೆರೆಯವರನ್ನು, ಬೆಲೆಬಾಳುವ ವಸ್ತುಗಳನ್ನು ಆ ನಾಯಕರ ಮತ್ತು ಇಸ್ರೇಲರ ಕೈಯಲ್ಲಿ ಕೊಟ್ಟುಬಿಟ್ಟರು. 15 ಆ ನಾಯಕರುಗಳು ಎದ್ದು ಸೆರೆಯವರಿಗೆ ಸಹಾಯ ಮಾಡಿದರು. ಇಸ್ರೇಲ್ ಸೈನಿಕರು ಸೂರೆಮಾಡಿದ ಬಟ್ಟೆಬರೆಗಳನ್ನು ಈ ನಾಯಕರು ಪಡೆದುಕೊಂಡು ಬೆತ್ತಲೆಯಾಗಿದ್ದ ಸೆರೆಯವರಿಗೆ ಕೊಟ್ಟರು. ಅವರ ಕಾಲಿಗೆ ಕೆರಗಳನ್ನು ಕೊಟ್ಟು, ಊಟೋಪಚಾರಗಳಿಂದ ಸತ್ಕರಿಸಿದರು. ಗಾಯಗೊಂಡವರಿಗೆ ಎಣ್ಣೆ ಹಚ್ಚಿ ಅವರಲ್ಲಿದ್ದ ಬಲಹೀನರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಜೆರಿಕೊವಿನಲ್ಲಿದ್ದ ಅವರವರ ಮನೆಗಳಿಗೆ ಕರೆದುಕೊಂಡು ಹೋದರು. ಜೆರಿಕೊವಿಗೆ “ಖರ್ಜೂರ ಮರಗಳ ಊರು” ಎಂಬ ಹೆಸರಿದೆ. ಅನಂತರ ಆ ನಾಲ್ಕು ಮಂದಿ ನಾಯಕರು ಸಮಾರ್ಯದಲ್ಲಿದ್ದ ತಮ್ಮ ಮನೆಗೆ ಹೋದರು.
16-17 ಅದೇ ಸಮಯದಲ್ಲಿ ಎದೋಮ್ಯರು ಬಂದು ಯೆಹೂದ ಜನರ ಮೇಲೆ ಧಾಳಿಮಾಡಿ ಅವರನ್ನು ಸೋಲಿಸಿದರು. ಯೆಹೂದ ಜನರನ್ನು ಸೆರೆಹಿಡಿದು ತಮ್ಮ ದೇಶಕ್ಕೊಯ್ದರು. ಆಗ ಅರಸನಾದ ಆಹಾಜನು ಅಶ್ಶೂರದ ಅರಸನ ಸಹಾಯ ಕೇಳಿದನು. 18 ಫಿಲಿಷ್ಟಿಯರು ಸಹ ಬೆಟ್ಟಪ್ರದೇಶಗಳ ಪಟ್ಟಣಗಳ ಮೇಲೆಯೂ ಧಾಳಿ ಮಾಡಿದರು. ಬೇತ್ಷಮೆಷ್, ಅಯ್ಯಾಲೋನ್, ಗೆದೇರೋತ್, ಸೋಕೋ, ತಿಮ್ನಾ ಮತ್ತು ಗಿಮ್ಜೋ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಅಲ್ಲದೆ ಆ ಪಟ್ಟಣಗಳ ಸುತ್ತಮುತ್ತಲಿನ ಊರುಗಳನ್ನೂ ವಶಪಡಿಸಿಕೊಂಡರು. ಫಿಲಿಷ್ಟಿಯರು ಆ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು. 19 ಅರಸನಾದ ಆಹಾಜನು ತನ್ನ ಜನರನ್ನು ಪಾಪಮಾಡಲು ಪ್ರೋತ್ಸಾಹಿಸಿದ್ದಕ್ಕಾಗಿ ಯೆಹೋವನು ಯೆಹೂದ ದೇಶಕ್ಕೆ ಕಷ್ಟವನ್ನು ಕೊಟ್ಟನು. ಆಹಾಜನು ದೇವರಿಗೆ ದ್ರೋಹಮಾಡಿದನು. 20 ಅಶ್ಶೂರದ ಅರಸನಾದ ತಿಗ್ಲತ್ಪಿಲೆಸರನು ಆಹಾಜನಿಗೆ ಸಹಾಯ ಕೊಡುವ ಬದಲು ಅವನಿಗೇ ಕಷ್ಟಕೊಡಲು ಯೆಹೂದಕ್ಕೆ ಬಂದನು. 21 ಆಹಾಜನು ದೇವರ ಆಲಯದಿಂದಲೂ ರಾಜ ನಿವಾಸದಿಂದಲೂ ಮತ್ತು ರಾಜಕುಮಾರರ ಮನೆಯಿಂದಲೂ ಎಲ್ಲಾ ಬೆಳ್ಳಿಬಂಗಾರಗಳನ್ನು ತೆಗೆದು ಅಶ್ಶೂರದ ಅರಸನಿಗೆ ಕೊಟ್ಟರೂ ಅಶ್ಶೂರದ ಅರಸನು ಆಹಾಜನಿಗೆ ಸಹಾಯ ಮಾಡದೆ ಹೋದನು.
22 ಆಹಾಜನಿಗೆ ಸಂಕಟ ಬಂದಾಗಲೂ ಇನ್ನೂ ಹೆಚ್ಚಾಗಿ ಪಾಪ ಮಾಡುತ್ತಾ ಯೆಹೋವನಿಗೆ ಇನ್ನೂ ಹೆಚ್ಚಾಗಿ ದ್ರೋಹಿಯಾದನು. 23 ದಮಸ್ಕದ ಜನರು ಆರಾಧಿಸುವ ಆ ದೇವರುಗಳಿಗೆ ಆಹಾಜನು ಯಜ್ಞಗಳನ್ನರ್ಪಿಸಿದನು. ದಮಸ್ಕದ ಜನರು ಆಹಾಜನನ್ನು ಸೋಲಿಸಿದ್ದರು. ಆಗ ಆಹಾಜನು, “ಅರಾಮ್ಯರು ಪೂಜಿಸುವ ದೇವರು ಅವರಿಗೆ ಸಹಾಯ ಮಾಡಿದನು. ಆದ್ದರಿಂದ ನಾನು ಆ ದೇವರಿಗೆ ಯಜ್ಞವನ್ನರ್ಪಿಸಿ ಆರಾಧಿಸಿದರೆ ಆ ದೇವರು ನನಗೂ ಸಹಾಯ ಮಾಡುವನು” ಎಂದುಕೊಂಡನು. ಆಹಾಜನು ಆ ದೇವರುಗಳನ್ನು ಪೂಜಿಸುವುದರ ಮೂಲಕ ತಾನೂ ಪಾಪಮಾಡಿ ತನ್ನ ಪ್ರಜೆಗಳನ್ನೂ ಪಾಪಮಾಡುವದಕ್ಕೆ ಪ್ರೋತ್ಸಾಹಿಸಿದನು.
24 ಇದಲ್ಲದೆ ದೇವಾಲಯದಿಂದ ಉಪಕರಣಗಳನ್ನೆಲ್ಲಾ ಆಹಾಜನು ಹೊರತೆಗೆದು ಅವುಗಳನ್ನು ಒಡೆದು ಚೂರುಚೂರು ಮಾಡಿದನು; ದೇವಾಲಯದ ಬಾಗಿಲನ್ನು ಮುಚ್ಚಿಸಿದನು. ಅವನು ವೇದಿಕೆಗಳನ್ನು ಮಾಡಿಸಿ ಜೆರುಸಲೇಮಿನ ರಸ್ತೆಗಳ ಮೂಲೆ ಮೂಲೆಗಳಲ್ಲಿ ಕಟ್ಟಿಸಿದನು. 25 ಯೆಹೂದದ ಪ್ರತಿಯೊಂದು ಪಟ್ಟಣಗಳಲ್ಲಿ ಆಹಾಜನು ಧೂಪಹಾಕಲು ಮತ್ತು ಬೇರೆ ದೇವರುಗಳನ್ನು ಪೂಜಿಸಲು ಉನ್ನತಸ್ಥಳಗಳನ್ನು ಮಾಡಿಸಿದನು; ಅನ್ಯ ದೇವರುಗಳಿಗೆ ಧೂಪಹಾಕಲು ಜನರನ್ನು ಪ್ರೋತ್ಸಾಹಿಸಿದನು. ಈ ರೀತಿಯಾಗಿ ತನ್ನ ಪೂರ್ವಿಕರು ಆರಾಧಿಸಿದ ದೇವರಾದ ಯೆಹೋವನನ್ನು ಆಹಾಜನು ರೇಗಿಸಿದನು.
26 ಆರಂಭದಿಂದ ಕೊನೆಯ ತನಕ ಆಹಾಜನು ಮಾಡಿದ ಇತರ ಕಾರ್ಯಗಳೆಲ್ಲವನ್ನು ಕುರಿತು ಯೆಹೂದದ ಮತ್ತು ಇಸ್ರೇಲರ ಅರಸರ ಗ್ರಂಥದಲ್ಲಿ ಬರೆದಿರುತ್ತವೆ. 27 ಆಹಾಜನು ಸತ್ತಾಗ ಅವನನ್ನು ಪೂರ್ವಿಕರೊಂದಿಗೆ ಜೆರುಸಲೇಮಿನಲ್ಲಿ ಸಮಾಧಿಮಾಡಿದರು; ಅವನನ್ನು ಇಸ್ರೇಲ್ ರಾಜರುಗಳ ಸ್ಮಶಾನದಲ್ಲಿ ಸಮಾಧಿಮಾಡಲಿಲ್ಲ. ಆಹಾಜನ ಬದಲಿಗೆ ಅವನ ಮಗನಾದ ಹಿಜ್ಕೀಯನು ಅರಸನಾದನು.
ರಕ್ಷಣೆ ಹೊಂದಿದವರ ಉತ್ಸವ ಗೀತೆ
14 ನಂತರ ನಾನು ನೋಡಿದಾಗ, ನನ್ನ ಎದುರಿನಲ್ಲಿಯೇ ಕುರಿಮರಿಯಾದಾತನು ಇದ್ದನು. ಆತನು ಚೀಯೋನ್ ಪರ್ವತದ ಮೇಲೆ ನಿಂತಿದ್ದನು. ಆತನ ಜೊತೆಯಲ್ಲಿ 1,44,000 ಜನರಿದ್ದರು. ಅವರ ಹಣೆಗಳ ಮೇಲೆ ಆತನ ಹೆಸರನ್ನು ಮತ್ತು ಆತನ ತಂದೆಯ ಹೆಸರನ್ನು ಬರೆಯಲಾಗಿತ್ತು.
2 ನಾನು ಪರಲೋಕದಿಂದ ಒಂದು ಶಬ್ದವನ್ನು ಕೇಳಿಸಿಕೊಂಡೆನು. ಅದು ನೀರಿನ ಪ್ರವಾಹದಂತೆ ಭೋರ್ಗರೆಯುವ ಶಬ್ದದಂತೆ ಮತ್ತು ಗುಡುಗಿನ ಧ್ವನಿಯಂತೆ ಇದ್ದಿತು. ಜನರು ತಮ್ಮ ತಂತಿವಾದ್ಯಗಳನ್ನು ಬಾರಿಸುತ್ತಿರುವರೋ ಎಂಬಂತೆ ಆ ಶಬ್ದವು ನನಗೆ ಕೇಳಿಸಿತು. 3 ಜನರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸನ್ನಿಧಿಯಲ್ಲಿ ಹೊಸ ಹಾಡನ್ನು ಹಾಡಿದರು. ಈ ಲೋಕದಿಂದ ಬಿಡುಗಡೆ ಹೊಂದಿದ್ದ 1,44,000 ಜನರು ಮಾತ್ರ ಈ ಹಾಡನ್ನು ಕಲಿಯಲು ಶಕ್ತರಾಗಿದ್ದರು. ಈ ಹಾಡನ್ನು ಬೇರೆ ಯಾರೂ ಕಲಿಯಲಾಗುತ್ತಿರಲಿಲ್ಲ.
4 ಇವರು ಸ್ತ್ರೀ ಸಹವಾಸದಿಂದ ಮಲಿನರಾಗದೆ ಕನ್ನಿಕೆಯರಂತೆ ಉಳಿದಿದ್ದರು. ಕುರಿಮರಿಯಾದಾತನು ಹೋದಕಡೆಯಲ್ಲೆಲ್ಲಾ ಅವರು ಆತನನ್ನು ಹಿಂಬಾಲಿಸುತ್ತಾರೆ. ಭೂಲೋಕದ ಜನರ ಮಧ್ಯದಿಂದ ಬಿಡುಗಡೆ ಹೊಂದಿದವರೇ 1,44,000 ಮಂದಿ. ದೇವರಿಗೂ ಕುರಿಮರಿಯಾದಾತನಿಗೂ ಅರ್ಪಿತರಾದವರಲ್ಲಿ ಇವರೇ ಮೊದಲಿಗರಾಗಿದ್ದರು. 5 ಈ ಜನರು ಸುಳ್ಳುಗಾರರಾಗಿರಲಿಲ್ಲ. ಇವರು ನಿರ್ದೋಷಿಗಳಾಗಿದ್ದರು.
ಮೂರು ಮಂದಿ ದೇವದೂತರು
6 ನಂತರ ಇನ್ನೊಬ್ಬ ದೇವದೂತನು ವಾಯುಮಂಡಲದಲ್ಲಿ ಅತಿ ಎತ್ತರದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು. ಭೂಮಿಯ ಮೇಲೆ ವಾಸಿಸುವ ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳ ಜನರಿಗೆಲ್ಲಾ ಬೋಧಿಸುವುದಕ್ಕೆ ನಿತ್ಯವಾದ ಸುವಾರ್ತೆಯು ಆ ದೇವದೂತನಲ್ಲಿತ್ತು. 7 ಆ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ದೇವರಿಗೆ ಭಯಪಡಿರಿ. ಆತನನ್ನು ಸ್ತುತಿಸಿರಿ. ಜನರಿಗೆಲ್ಲ ದೇವರು ತೀರ್ಪು ನೀಡುವ ಸಮಯವು ಹತ್ತಿರ ಬಂದಿದೆ. ದೇವರನ್ನು ಆರಾಧಿಸಿರಿ. ಪರಲೋಕವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಸೃಷ್ಟಿಸಿದವನು ಆತನೇ” ಎಂದು ಹೇಳಿದನು.
8 ನಂತರ ಎರಡನೆಯ ದೇವದೂತನು ಮೊದಲನೆಯ ದೇವದೂತನನ್ನು ಹಿಂಬಾಲಿಸುತ್ತಾ, “ಅವಳು ನಾಶವಾದಳು! ಬಾಬಿಲೋನ್ ಎಂಬ ನಗರಿಯು ನಾಶವಾದಳು! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವವೆಂಬ ಮತ್ತು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.
9 ಮೂರನೆಯ ದೇವದೂತನು ಮೊದಲ ಇಬ್ಬರು ದೇವದೂತರನ್ನು ಹಿಂಬಾಲಿಸಿದನು. ಈ ಮೂರನೆಯ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ ಹೀಗೆ ಹೇಳಿದನು: “ಮೃಗವನ್ನೂ ಮೃಗದ ವಿಗ್ರಹವನ್ನೂ ಆರಾಧಿಸುವವನಿಗೆ ಮತ್ತು ಮೃಗದ ಗುರುತನ್ನು ಹಣೆಯ ಮೇಲಾಗಲಿ ಇಲ್ಲವೆ ತನ್ನ ಕೈಗಳ ಮೇಲಾಗಲಿ ಹಾಕಿಸಿಕೊಳ್ಳುವವನಿಗೆ ಕೇಡಾಗುವುದು. 10 ಅವನು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುತ್ತಾನೆ. ದೇವರ ಕೋಪವೆಂಬ ಬಟ್ಟಲಿನಲ್ಲಿ ಈ ದ್ರಾಕ್ಷಾರಸವನ್ನು ಅದರ ಪೂರ್ಣಶಕ್ತಿಯ ಸಮೇತವಾಗಿ ತಯಾರಿಸಲಾಗಿದೆ. ಅವನನ್ನು ಪರಿಶುದ್ಧ ದೇವದೂತರ ಮತ್ತು ಕುರಿಮರಿಯಾದಾತನ ಮುಂದೆ ಉರಿಯುವ ಗಂಧಕದಿಂದ ಯಾತನೆಪಡಿಸಲಾಗುವುದು. 11 ಅವರ ಯಾತನೆಯೆಂಬ ಹೊಗೆಯು ಸದಾ ಏಳುತ್ತಲೇ ಇರುವುದು. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವ ಮತ್ತು ಅದರ ಹೆಸರನ್ನು ಗುರುತು ಹಾಕಿಸಿಕೊಳ್ಳುವ ಜನರಿಗೆ ಹಗಲಲ್ಲೂ ರಾತ್ರಿಯಲ್ಲೂ ವಿಶ್ರಾಂತಿಯೆಂಬುದೇ ಇರುವುದಿಲ್ಲ.” 12 ಈ ಪರಿಸ್ಥಿತಿಯಲ್ಲಿ, ದೇವರ ಪರಿಶುದ್ಧ ಜನರು ತಾಳ್ಮೆಯಿಂದಿರಬೇಕು. ಅವರು ದೇವರ ಆಜ್ಞೆಗಳಿಗೆ ವಿಧೇಯರಾಗಿರಬೇಕು ಮತ್ತು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿರಬೇಕು.
13 ನಂತರ ನಾನು ಪರಲೋಕದಿಂದ ಒಂದು ಧ್ವನಿಯನ್ನು ಕೇಳಿದೆನು. ಆ ಧ್ವನಿಯು ಹೀಗೆ ಹೇಳಿತು: “ಇದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿದ್ದು ಸಾಯುವಂತಹ ಜನರು ಧನ್ಯರು.”
“ಹೌದು, ಇದು ನಿಜ. ಆ ಜನರು ತಮ್ಮ ಪ್ರಯಾಸದ ಕೆಲಸವನ್ನು ಮುಗಿಸಿದವರಾಗಿ ವಿಶ್ರಾಂತಿ ಪಡೆಯುತ್ತಾರೆ. ಅವರು ಮಾಡಿದುದೆಲ್ಲವೂ ಅವರೊಂದಿಗೇ ಇರುತ್ತದೆ” ಎಂದು ಪವಿತ್ರಾತ್ಮನು ಹೇಳುತ್ತಾನೆ.
ಭೂಲೋಕದ ಸುಗ್ಗೀಕಾಲ
14 ನಾನು ನೋಡಿದಾಗ ನನ್ನ ಎದುರಿನಲ್ಲಿ ಮನುಷ್ಯಕುಮಾರನಂತೆ[a] ಕಾಣುತ್ತಿದ್ದವನು ಆ ಬಿಳಿಯ ಮೋಡದ ಮೇಲೆ ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು ಮತ್ತು ಆತನ ಕೈಯಲ್ಲಿ ಹರಿತವಾದ ಕುಡುಗೋಲಿತ್ತು. 15 ಆಗ ಮತ್ತೊಬ್ಬ ದೇವದೂತನು ಆಲಯದಿಂದ ಹೊರಗೆ ಬಂದನು. ಈ ದೇವದೂತನು ಮೋಡದ ಮೇಲೆ ಕುಳಿತಿರುವಾತನಿಗೆ, “ನಿನ್ನ ಕುಡುಗೋಲನ್ನು ತೆಗೆದುಕೊಂಡು ಭೂಮಿಯ ಫಸಲನ್ನು ಒಟ್ಟುಗೂಡಿಸು. ಯಾಕೆಂದರೆ ಸುಗ್ಗಿಕಾಲವು ಬಂದಿದೆ. ಭೂಮಿಯ ಫಸಲು ಮಾಗಿದೆ” ಎಂದು ಹೇಳಿದನು. 16 ಆದ್ದರಿಂದ ಮೋಡದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
17 ನಂತರ ಮತ್ತೊಬ್ಬ ದೇವದೂತನು ಪರಲೋಕದ ಆಲಯದಿಂದ ಹೊರಗೆ ಬಂದನು. ಆ ದೇವದೂತನಲ್ಲಿಯೂ ಹರಿತವಾದ ಒಂದು ಕುಡುಗೋಲಿತ್ತು. 18 ನಂತರ ಮತ್ತೊಬ್ಬ ದೇವದೂತನು ಯಜ್ಞವೇದಿಕೆಯಿಂದ ಬಂದನು. ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು. ಅವನು ಹರಿತವಾದ ಕುಡುಗೋಲಿದ್ದ ದೇವದೂತನನ್ನು ಕರೆದು, “ನಿನ್ನ ಹರಿತವಾದ ಕುಡುಗೋಲನ್ನು ತೆಗೆದುಕೊಂಡು, ಭೂಮಿಯ ದ್ರಾಕ್ಷಿತೋಟದಿಂದ ದ್ರಾಕ್ಷಿಗೊಂಚಲುಗಳನ್ನು ಒಟ್ಟುಗೂಡಿಸು. ಭೂಮಿಯ ದ್ರಾಕ್ಷಿಯೆಲ್ಲಾ ಮಾಗಿವೆ” ಎಂದು ಹೇಳಿದನು. 19 ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ, ದ್ರಾಕ್ಷಿಯನ್ನೆಲ್ಲಾ ಒಟ್ಟುಗೂಡಿಸಿ, ದೇವರ ಕೋಪವೆಂಬ ದ್ರಾಕ್ಷಿಯ ಆಲೆಗೆ ಎಸೆದನು. 20 ಆ ದ್ರಾಕ್ಷಿಯನ್ನು ನಗರದ ಹೊರಭಾಗದಲ್ಲಿದ್ದ ದ್ರಾಕ್ಷಿಯ ಆಲೆಯಲ್ಲಿ ಕಿವುಚಿ ಹಾಕಿದರು. ಆ ದ್ರಾಕ್ಷಿಯ ಆಲೆಯಿಂದ ರಕ್ತವು ಹೊರಕ್ಕೆ ಬಂದಿತು. ಅದು ಕುದುರೆಗಳ ತಲೆಗಳಷ್ಟು ಎತ್ತರಕ್ಕೆ ಏರಿ ಇನ್ನೂರು ಮೈಲಿಗಳಷ್ಟು ದೂರ ಹರಿಯಿತು.
ಯೆಹೋವನ ವಾಗ್ದಾನಗಳು
10 ವಸಂತ ಕಾಲದಲ್ಲಿ ಮಳೆಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಯೆಹೋವನು ಮಿಂಚನ್ನು ಕಳುಹಿಸುವನು; ಆಗ ಮಳೆ ಸುರಿಯುವುದು ಮತ್ತು ದೇವರು ಎಲ್ಲರ ಹೊಲಗಳಲ್ಲಿ ಸಸಿಗಳು ಬೆಳೆಯುವಂತೆ ಮಾಡುವನು.
2 ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.
3 ಯೆಹೋವನು ಹೇಳುವುದೇನೆಂದರೆ, “ನಾನು ಕುರುಬರ ಮೇಲೆ ಬಹಳವಾಗಿ ಕೋಪಿಸಿರುವೆನು. ಆ ನಾಯಕರನ್ನು ನಾನು ನನ್ನ ಜನರ ಮೇಲೆ ಜವಾಬ್ದಾರರನ್ನಾಗಿ ಮಾಡಿದ್ದೇನೆ.” ಯೆಹೂದದ ಜನರು ದೇವರ ಮಂದೆಯಾಗಿದ್ದಾರೆ. ಹೇಗೆ ಸಿಪಾಯಿಯು ತನ್ನ ಯುದ್ಧದ ಕುದುರೆಯನ್ನು ಪರಾಂಬರಿತ್ತಾನೋ ಹಾಗೆ ಸರ್ವಶಕ್ತನಾದ ಯೆಹೋವನು ತನ್ನ ಮಂದೆಯನ್ನು ನಿಜವಾಗಿಯೂ ಪರಾಂಬರಿಸುತ್ತಾನೆ.
4 “ಮೂಲೇ ಕಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲು ಮತ್ತು ಮುನ್ನುಗ್ಗುವ ಸೈನ್ಯ, ಇವೆಲ್ಲವು ಒಟ್ಟಾಗಿ ಯೆಹೂದಿಂದ ಬರುವದು. 5 ಇವರು ಶತ್ರುಗಳನ್ನು ಜಯಿಸುವರು. ಸೈನಿಕರು ರಸ್ತೆಯ ಧೂಳಿನ ಮೇಲೆ ಮುನ್ನಡೆದು ಯೆಹೋವನು ಅವರೊಂದಿಗಿರುವದರಿಂದ ಅವರು ಅಶ್ವಾರೂಢನಾಗಿರುವ ಶತ್ರುಸೈನ್ಯವನ್ನು ಸದೆಬಡಿಯುವರು. 6 ಯೆಹೂದ ವಂಶವನ್ನು ನಾನು ಬಲಗೊಳಿಸುವೆನು. ಯೋಸೇಫನ ವಂಶದವರಿಗೆ ಜಯವಾಗುವಂತೆ ಮಾಡುವೆನು. ನಾನು ಅವರನ್ನು ಹಿಂದಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರುವೆನು. ಅವರನ್ನು ಸಂತೈಸುವೆನು. ನಾನು ಎಂದಿಗೂ ಅವರನ್ನು ತೊರೆಯಲಿಲ್ಲವೆಂಬಂತೆ ಇರುವುದು. ನಾನು ಅವರ ದೇವರಾದ ಯೆಹೋವನು. ನಾನೇ ಅವರಿಗೆ ಸಹಾಯ ಮಾಡುವೆನು. 7 ಕುಡಿದು ಮತ್ತರಾದ ಸೈನಿಕರು ಸಂತೋಷಪಡುವಂತೆ ಎಫ್ರಾಯೀಮ್ಯರು ಸಂತಸದಿಂದಿರುವರು. ಮಕ್ಕಳೂ ಆನಂದದಿಂದ ನಲಿದಾಡುವರು. ಅವರೆಲ್ಲರೂ ಯೆಹೋವನ ಜೊತೆಯಲ್ಲಿ ಸಂತೋಷದಿಂದಿರುವರು.
8 “ನಾನು ಸಿಳ್ಳು ಹೊಡೆದು ಎಲ್ಲರನ್ನು ಒಟ್ಟುಗೂಡಿಸುವೆನು. ನಾನು ನಿಜವಾಗಿಯೂ ಅವರನ್ನು ರಕ್ಷಿಸುವೆನು. ಜನರು ಕಿಕ್ಕಿರಿದು ತುಂಬಿಹೋಗುವರು. 9 ಹೌದು, ನಾನು ನನ್ನ ಜನರನ್ನು ಎಲ್ಲಾ ರಾಜ್ಯಗಳಿಗೆ ಚದರಿಸಿಬಿಟ್ಟಿರುತ್ತೇನೆ. ಆದರೆ ಆ ಬಹುದೂರದ ರಾಜ್ಯಗಳಲ್ಲಿ ಅವರು ನನ್ನನ್ನು ನೆನಪು ಮಾಡುವರು. ಅವರೂ ಅವರ ಮಕ್ಕಳೂ ಉಳಿಯುವರು ಮತ್ತು ಅವರು ಹಿಂತಿರುಗಿ ಬರುವರು. 10 ನಾನು ಅವರನ್ನು ಈಜಿಪ್ಟ್ನಿಂದ ಮತ್ತು ಅಶ್ಯೂರದಿಂದ ಹಿಂದಕ್ಕೆ ತರುವೆನು. ಅವರನ್ನು ಗಿಲ್ಯಾದಿಗೆ ಕರೆದುಕೊಂಡು ಬರುವೆನು. ಅಲ್ಲಿ ಅವರಿಗೆ ಸ್ಥಳ ಸಾಲದು. ಆದ್ದರಿಂದ ಅವರು ಪಕ್ಕದ ಲೆಬನೋನ್ ಪ್ರಾಂತ್ಯದಲ್ಲಿ ವಾಸಿಸುವಂತೆ ಮಾಡುವೆನು.” 11 ಇದು ಹಿಂದಿನ ಕಾಲದಲ್ಲಿ ದೇವರು ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದಂತೆ ಇರುವದು. ಆತನು ಸಮುದ್ರದ ತೆರೆಗಳನ್ನು ಬಡಿದು ಅದು ಇಬ್ಭಾಗವಾಗುವಂತೆ ಮಾಡಿದನು. ಜನರು ಸಂಕಟದ ಸಮುದ್ರದ ಮಧ್ಯದಲ್ಲಿ ದಾಟಿಹೋದರು. ಯೆಹೋವನು ಹೊಳೆಗಳನ್ನು ಬತ್ತಿಸಿಬಿಡುವನು. ಆತನು ಅಶ್ಯೂರ್ಯದ ಜಂಬವನ್ನೂ ಈಜಿಪ್ಟಿನ ಬಲವನ್ನೂ ಮುರಿಯುವನು. 12 ಯೆಹೋವನು ತನ್ನ ಜನರನ್ನು ಶಕ್ತಿಶಾಲಿಗಳನ್ನಾಗಿ ಮಾಡುವನು. ಅವರು ಆತನ ನಾಮದ ಘನತೆಗೋಸ್ಕರ ಜೀವಿಸುವರು. ಇದು ಯೆಹೋವನ ನುಡಿ.
ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು
13 ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.
2 ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) 3 ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. 4 ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. 5 ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.
6 ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.
7 ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.
8 ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.
ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.
9 ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.
10 ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11 ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.
12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13 ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14 ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15 ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.
18 “ನಾನು ನಿಮ್ಮೆಲ್ಲರ ಬಗ್ಗೆ ಮಾತಾಡುತ್ತಿಲ್ಲ. ನಾನು ಆರಿಸಿಕೊಂಡಿರುವ ಜನರ ಬಗ್ಗೆ ನನಗೆ ಗೊತ್ತಿದೆ. ಆದರೆ ‘ನನ್ನೊಂದಿಗೆ ಊಟ ಮಾಡುವವನೇ ನನಗೆ ದ್ರೋಹ ಬಗೆದನು.’[a] ಎಂಬ ಪವಿತ್ರ ಗ್ರಂಥದ ಮಾತು ನೆರವೇರಬೇಕು. 19 ಅದು ನೆರವೇರುವಾಗ ನಾನೇ ಕ್ರಿಸ್ತನೆಂದು ನೀವು ನಂಬಬೇಕೆಂದು, ಅದು ನೆರವೇರವುದಕ್ಕಿಂತ ಮೊದಲೇ ಅದನ್ನು ನಿಮಗೆ ತಿಳಿಸುತ್ತಿದ್ದೇನೆ. 20 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ಕಳುಹಿಸುವ ಯಾರನ್ನಾದರೂ ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ. ನನ್ನನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ.”
ಯೇಸುವಿನ ಶಿಷ್ಯನ ದ್ರೋಹ
(ಮತ್ತಾಯ 26:20-25; ಮಾರ್ಕ 14:17-21; ಲೂಕ 22:21-23)
21 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತ್ಮದಲ್ಲಿ ತತ್ತರಗೊಂಡು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಎಂದು ಬಹಿರಂಗವಾಗಿ ಹೇಳಿದನು.
22 ಯೇಸುವಿನ ಶಿಷ್ಯರೆಲ್ಲಾ ಒಬ್ಬರನ್ನೊಬ್ಬರು ನೋಡತೊಡಗಿದರು. ಆತನು ಯಾರ ಬಗ್ಗೆ ಮಾತಾಡುತ್ತಿದ್ದಾನೆಂದು ಅವರಿಗೆ ಅರ್ಥವಾಗಲಿಲ್ಲ. 23 ಶಿಷ್ಯರಲ್ಲಿ ಒಬ್ಬನು ಯೇಸುವಿನ ಸಮೀಪದಲ್ಲಿ ಒರಗಿಕೊಂಡಿದ್ದನು. ಯೇಸು ಪ್ರೀತಿಸುತ್ತಿದ್ದ ಶಿಷ್ಯನೇ ಅವನು. 24 ಸೀಮೋನ್ ಪೇತ್ರನು ಈ ಶಿಷ್ಯನಿಗೆ, ಯಾರನ್ನು ಕುರಿತು ಯೇಸು ಹೇಳುತ್ತಿದ್ದಾನೆಂದು ಕೇಳಿ ತಿಳಿದುಕೊಳ್ಳಲು ಸನ್ನೆ ಮಾಡಿದನು.
25 ಆ ಶಿಷ್ಯನು ಯೇಸುವಿನ ಸಮೀಪಕ್ಕೆ ಬಾಗಿಕೊಂಡು, “ಪ್ರಭುವೇ, ಅವನು ಯಾರು?” ಎಂದು ಕೇಳಿದನು.
26 ಯೇಸು, “ನಾನು ಈ ರೊಟ್ಟಿಯನ್ನು ಬಟ್ಟಲಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ ನನಗೆ ದ್ರೋಹ ಮಾಡುವನು” ಎಂದು ಹೇಳಿ ರೊಟ್ಟಿಯ ತುಂಡೊಂದನ್ನು ತೆಗೆದುಕೊಂಡು ಅದನ್ನು ಬಟ್ಟಲಲ್ಲಿ ಅದ್ದಿ ಸಿಮೋನನ ಮಗನಾದ ಇಸ್ಕರಿಯೋತ ಯೂದನಿಗೆ ಕೊಟ್ಟನು. 27 ಯೂದನು ಆ ರೊಟ್ಟಿಯನ್ನು ತೆಗೆದುಕೊಂಡಾಗ ಸೈತಾನನು ಅವನೊಳಗೆ ಪ್ರವೇಶಿಸಿದನು. ಯೇಸು ಯೂದನಿಗೆ, “ನೀನು ಮಾಡುವ ಕೆಲಸವನ್ನು ಬೇಗನೆ ಮಾಡು!” ಎಂದು ಹೇಳಿದನು. 28 ಯೇಸು ಯೂದನಿಗೆ ಏಕೆ ಹಾಗೆ ಹೇಳಿದನೆಂದು ಊಟಕ್ಕೆ ಕುಳಿತಿದ್ದವರಲ್ಲಿ ಯಾರಿಗೂ ಅರ್ಥವಾಗಲಿಲ್ಲ. 29 ಶಿಷ್ಯಸಮುದಾಯದ ಹಣದ ಪೆಟ್ಟಿಗೆಯು ಯೂದನ ವಶದಲ್ಲಿತ್ತು. ಆದ್ದರಿಂದ ಹಬ್ಬಕ್ಕೆ ಅಗತ್ಯವಾದ ಕೆಲವು ವಸ್ತುಗಳನ್ನು ತೆಗೆದುಕೊಂಡು ಬರುವುದಕ್ಕಾಗಲಿ ಬಡಜನರಿಗೆ ಏನಾದರೂ ಕೊಡುವುದಕ್ಕಾಗಲಿ ಯೇಸು ಅವನಿಗೆ ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿಕೊಂಡರು.
30 ಯೇಸು ಕೊಟ್ಟ ರೊಟ್ಟಿಯನ್ನು ತೆಗೆದುಕೊಂಡ ನಂತರ ಯೂದನು ಅಲ್ಲಿಂದ ಹೊರಟುಹೋದನು. ಆಗ ರಾತ್ರಿಯಾಗಿತ್ತು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
31 ಯೂದನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಕುಮಾರನಿಗೆ ಮಹಿಮೆಯಾಗುವುದು. ಅಲ್ಲದೆ, ಮನುಷ್ಯಕುಮಾರನ ಮೂಲಕ ದೇವರಿಗೂ ಮಹಿಮೆಯಾಗುವುದು. 32 ಆತನ ಮೂಲಕವಾಗಿ ದೇವರಿಗೆ ಮಹಿಮೆಯಾಗುವುದರಿಂದ ತಕ್ಷಣವೇ ದೇವರ ಮೂಲಕವಾಗಿಯೂ ಆತನಿಗೆ ಮಹಿಮೆಯಾಗುವುದು” ಎಂದನು.
33 ಯೇಸು, “ನನ್ನ ಮಕ್ಕಳೇ, ಇನ್ನು ಸ್ವಲ್ಪ ಸಮಯ ಮಾತ್ರ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನಗಾಗಿ ಹುಡುಕುವಿರಿ. ನಾನು ಯೆಹೂದ್ಯರಿಗೆ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ.
34 “ನಾನು ನಿಮಗೆ ಹೊಸ ಆಜ್ಞೆಯನ್ನು ಕೊಡುತ್ತೇನೆ. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 35 ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ನೀವೂ ನನ್ನ ಶಿಷ್ಯರೆಂಬುದನ್ನು ಎಲ್ಲಾ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು.
ಪೇತ್ರನ ವಿಶ್ವಾಸದ್ರೋಹದ ಮುನ್ಸೂಚನೆ
(ಮತ್ತಾಯ 26:31-35; ಮಾರ್ಕ 14:27-31; ಲೂಕ 22:31-34)
36 ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
ಯೇಸು, “ನಾನು ಹೋಗುವಲ್ಲಿಗೆ ಈಗ ನೀನು ಹಿಂಬಾಲಿಸಿಕೊಂಡು ಬರಲಾರೆ. ಆದರೆ ಮುಂದೆ ನೀನು ಹಿಂಬಾಲಿಸಿಕೊಂಡು ಬರುವೆ” ಎಂದು ಉತ್ತರಕೊಟ್ಟನು.
37 ಪೇತ್ರನು, “ಪ್ರಭುವೇ, ಈಗ ನಾನು ನಿನ್ನನ್ನು ಹಿಂಬಾಲಿಸಲು ಏಕಾಗದು? ನಿನಗೋಸ್ಕರ ಸಾಯುವುದಕ್ಕೂ ನನಗೆ ಮನಸ್ಸಿದೆ!” ಎಂದು ಹೇಳಿದನು.
38 ಯೇಸು, “ನೀನು ನನಗೋಸ್ಕರ ನಿನ್ನ ಪ್ರಾಣವನ್ನು ನಿಜವಾಗಿಯೂ ಕೊಡುವೆಯಾ? ನಾನು ನಿನಗೆ ಸತ್ಯವನ್ನು ಹೇಳುತ್ತೇನೆ, ನಾಳೆ ಮುಂಜಾನೆ ಕೋಳಿ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ತಿಳಿದಿಲ್ಲವೆಂದು ಮೂರುಸಾರಿ ಹೇಳುವೆ” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International