Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 14

ಯಾರೊಬ್ಬಾಮನ ಮಗನ ಮರಣ

14 ಆ ಸಮಯದಲ್ಲಿ, ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು. ಯಾರೊಬ್ಬಾಮನು ತನ್ನ ಪತ್ನಿಗೆ, “ಶೀಲೋವಿಗೆ ಹೋಗು. ಅಲ್ಲಿಗೆ ಹೋಗಿ ಪ್ರವಾದಿಯಾದ ಅಹೀಯನನ್ನು ನೋಡು. ನಾನು ಇಸ್ರೇಲಿನ ರಾಜನಾಗುವೆನೆಂದು ತಿಳಿಸಿದ ಮನುಷ್ಯನೇ ಅಹೀಯನು. ನೀನು ನನ್ನ ಪತ್ನಿಯೆಂದು ಜನರಿಗೆ ತಿಳಿಯದ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊ. ಪ್ರವಾದಿಗೆ ಹತ್ತು ರೊಟ್ಟಿಗಳನ್ನು, ಕೆಲವು ಸಿಹಿ ಪದಾರ್ಥಗಳನ್ನು ಮತ್ತು ಜೇನುತುಪ್ಪ ಜಾಡಿಯನ್ನು ಕೊಡು. ನಂತರ ನಮ್ಮ ಮಗನಿಗೆ ಏನಾಗುತ್ತದೆಂಬುದನ್ನು ಕೇಳು. ಪ್ರವಾದಿಯಾದ ಅಹೀಯನು ನಿನಗೆ ತಿಳಿಸುತ್ತಾನೆ” ಎಂದು ಹೇಳಿದನು.

ರಾಜನ ಪತ್ನಿಯು ಅವನು ಹೇಳಿದಂತೆ ಮಾಡಿದಳು. ಅವಳು ಶೀಲೋವಿಗೆ ಹೋದಳು. ಅವಳು ಪ್ರವಾದಿಯಾದ ಅಹೀಯನ ಮನೆಗೆ ಹೋದಳು. ಅಹೀಯನಿಗೆ ಬಹಳ ವಯಸ್ಸಾಗಿತ್ತು; ಅವನು ಕುರುಡನಾಗಿದ್ದನು. ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಪತ್ನಿಯು ಅಸ್ವಸ್ಥನಾಗಿರುವ ತನ್ನ ಮಗನ ಬಗ್ಗೆ ಕೇಳಲು ನಿನ್ನ ಬಳಿಗೆ ಬರುತ್ತಿದ್ದಾಳೆ” ಎಂದು ಹೇಳಿದ್ದನು. ಅಹೀಯನು ಏನು ಹೇಳಬೇಕೆಂಬುದನ್ನು ಯೆಹೋವನು ಅವನಿಗೆ ತಿಳಿಸಿದ್ದನು.

ಯಾರೊಬ್ಬಾಮನ ಪತ್ನಿಯು ಅಹೀಯನ ಮನೆಗೆ ಬಂದಳು. ತಾನಾರೆಂಬುದು ಜನರಿಗೆ ತಿಳಿಯಬಾರದೆಂದು ಅವಳು ಪ್ರಯತ್ನಿಸುತ್ತಿದ್ದಳು. ಅವಳು ಬಾಗಿಲಿನ ಬಳಿಗೆ ಬಂದಾಗಲೇ ಅಹೀಯನಿಗೆ ಆಕೆಯ ಪಾದಗಳ ಸಪ್ಪಳವು ಕೇಳಿಸಿತು. ಆಗ ಅಹೀಯನು, “ಯಾರೊಬ್ಬಾಮನ ಪತ್ನಿಯೇ, ಒಳಗೆ ಬಾ. ನೀನು ಯಾರೆಂಬುದು ಜನರಿಗೆ ತಿಳಿಯದಂತೆ ಮಾಡಲು ಯಾಕೆ ಪ್ರಯತ್ನಿಸುತ್ತಿರುವೆ? ನಾನು ನಿನಗೆ ಅಶುಭದ ಸುದ್ದಿಯನ್ನು ತಿಳಿಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆಂದು ನೀನು ಹಿಂದಿರುಗಿ ಹೋಗಿ ಯಾರೊಬ್ಬಾಮನಿಗೆ ತಿಳಿಸು. ಯೆಹೋವನು ಹೀಗೆನ್ನುತ್ತಾನೆ: ‘ಯಾರೊಬ್ಬಾಮನೇ, ಇಸ್ರೇಲಿನ ಜನರಲ್ಲೆಲ್ಲಾ ನಾನು ನಿನ್ನನ್ನು ಆರಿಸಿಕೊಂಡೆ. ನನ್ನ ಜನರನ್ನು ಆಳಲು ನಾನು ನಿನ್ನನ್ನು ನೇಮಿಸಿದೆ. ದಾವೀದನ ಕುಲವು ಇಸ್ರೇಲ್ ರಾಜ್ಯವನ್ನು ಆಳುತ್ತಿತ್ತು. ಆದರೆ ನಾನು ಅವರಿಂದ ರಾಜ್ಯವನ್ನು ತೆಗೆದುಕೊಂಡು, ನಿನಗೆ ಅದನ್ನು ಕೊಟ್ಟೆ. ಆದರೆ ನೀನು ನನ್ನ ಸೇವಕನಾದ ದಾವೀದನಂತಲ್ಲ. ಅವನು ನನ್ನ ಆಜ್ಞೆಗಳಿಗೆ ಯಾವಾಗಲೂ ವಿಧೇಯನಾಗಿದ್ದನು. ಅವನು ಪೂರ್ಣಮನಸ್ಸಿನಿಂದ ನನ್ನನ್ನು ಅನುಸರಿಸುತ್ತಿದ್ದನು. ನಾನು ಒಪ್ಪಿಕೊಳ್ಳುವ ಸಂಗತಿಗಳನ್ನು ಮಾತ್ರ ಅವನು ಮಾಡಿದನು. ಆದರೆ ನೀನು ಅನೇಕ ಪಾಪಗಳನ್ನು ಮಾಡಿರುವೆ. ನಿನಗಿಂತಲೂ ಮೊದಲು ಆಳಿದವರ ಪಾಪಗಳಿಗಿಂತ ನಿನ್ನ ಪಾಪಗಳು ಹೆಚ್ಚು ಭಯಂಕರವಾಗಿವೆ. ನೀನು ನನ್ನನ್ನು ಅನುಸರಿಸುವುದನ್ನು ಬಿಟ್ಟುಬಿಟ್ಟೆ. ನೀನು ವಿಗ್ರಹಗಳನ್ನು ಮತ್ತು ಅನ್ಯದೇವರುಗಳನ್ನು ನಿರ್ಮಿಸಿದೆ. ಇದು ನನ್ನಲ್ಲಿ ಹೆಚ್ಚು ಕೋಪವುಂಟುಮಾಡಿತು. 10 ಆದ್ದರಿಂದ ಯಾರೊಬ್ಬಾಮನೇ, ನಾನು ನಿನ್ನ ಕುಟುಂಬಕ್ಕೆ ಕೇಡುಗಳನ್ನು ಬರಮಾಡುತ್ತೇನೆ. ನಿನ್ನ ಕುಟುಂಬದ ಗಂಡಸರೆಲ್ಲರನ್ನು ನಾನು ಕೊಲ್ಲುತ್ತೇನೆ. ಬೆಂಕಿಯು ಕಸವನ್ನು ಸುಟ್ಟುಹಾಕುವಂತೆ ನಾನು ನಿನ್ನ ಕುಟುಂಬವನ್ನು ಸಂಪೂರ್ಣವಾಗಿ ನಾಶಪಡಿಸುತ್ತೇನೆ. 11 ನಿನ್ನ ಕುಟುಂಬದಲ್ಲಿ ಯಾವನಾದರೂ ನಗರದಲ್ಲಿ ಸತ್ತರೆ, ಅವನನ್ನು ನಾಯಿಗಳು ಕಿತ್ತುತಿನ್ನುತ್ತವೆ. ನಿನ್ನ ಕುಟುಂಬದಲ್ಲಿ ಯಾವನಾದರೂ ಹೊಲಗಳಲ್ಲಿ ಸತ್ತರೆ, ಅವನನ್ನು ಪಕ್ಷಿಗಳು ಕಿತ್ತುತಿನ್ನುತ್ತವೆ. ಇದು ಯೆಹೋವನ ನುಡಿ’” ಎಂದು ಹೇಳಿದನು.

12 ನಂತರ ಪ್ರವಾದಿಯಾದ ಅಹೀಯನು ಯಾರೊಬ್ಬಾಮನ ಪತ್ನಿಯ ಸಂಗಡ ಮಾತನಾಡುವುದನ್ನು ಮುಂದುವರಿಸಿ, “ಈಗ ಮನೆಗೆ ಹೋಗು. ನೀನು ನಿನ್ನ ನಗರವನ್ನು ಪ್ರವೇಶಿಸಿದ ತಕ್ಷಣ, ನಿನ್ನ ಮಗನು ಸತ್ತುಹೋಗುತ್ತಾನೆ. 13 ಇಸ್ರೇಲರೆಲ್ಲರು ಅವನಿಗಾಗಿ ಗೋಳಾಡಿ ಸಮಾಧಿಮಾಡುತ್ತಾರೆ. ಯಾರೊಬ್ಬಾಮನ ಕುಟುಂಬದಲ್ಲಿ ನಿನ್ನ ಮಗನನೊಬ್ಬನನ್ನು ಮಾತ್ರ ಸಮಾಧಿ ಮಾಡುತ್ತಾರೆ. ಏಕೆಂದರೆ ಯಾರೊಬ್ಬಾಮನ ಕುಟುಂಬದಲ್ಲಿ ಇವನೊಬ್ಬನು ಮಾತ್ರ ಇಸ್ರೇಲಿನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. 14 ಯೆಹೋವನು ಇಸ್ರೇಲಿಗೆ ಹೊಸ ರಾಜನನ್ನು ನೇಮಿಸುತ್ತಾನೆ. ಆ ಹೊಸ ರಾಜನು ಯಾರೊಬ್ಬಾಮನ ಕುಟುಂಬವನ್ನು ನಾಶಗೊಳಿಸುತ್ತಾನೆ. ಇದು ಬಹುಬೇಗನೆ ಸಂಭವಿಸುತ್ತದೆ. 15 ನಂತರ ಯೆಹೋವನು ಇಸ್ರೇಲರನ್ನು ಹೊಡೆಯುತ್ತಾನೆ. ಇಸ್ರೇಲಿನ ಜನರು ಬಹಳ ಭಯಗೊಳ್ಳುವರು. ಅವರು ನೀರಿನಲ್ಲಿ ಎತ್ತರವಾಗಿ ಬೆಳೆದಿರುವ ಹುಲ್ಲಿನಂತೆ ನಡುಗುವರು. ಯೆಹೋವನು ಇಸ್ರೇಲರನ್ನು ಈ ಶ್ರೇಷ್ಠವಾದ ದೇಶದಿಂದ ಚದರಿಸಿಬಿಡುವನು; ಆತನು ಈ ದೇಶವನ್ನು ಅವರ ಪೂರ್ವಿಕರಿಗೆ ಕೊಟ್ಟಿದ್ದನು. ಆತನು ಇಸ್ರೇಲರನ್ನು ಯೂಫ್ರೇಟೀಸ್ ನದಿಯ ಮತ್ತೊಂದು ಕಡೆಗೆ ಚದರಿಸಿಬಿಡುತ್ತಾನೆ. ಯೆಹೋವನು ಅವರ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ. ಅವರು ಅಶೇರ್ ವಿಗ್ರಹವನ್ನು ಆರಾಧಿಸಲು ವಿಶೇಷ ಸ್ತಂಭಗಳನ್ನು ಮಾಡಿಕೊಂಡಿದ್ದರಿಂದ ಆತನು ಅವರ ಮೇಲೆ ಕೋಪಗೊಂಡನು. 16 ಯಾರೊಬ್ಬಾಮನು ಪಾಪವನ್ನು ಮಾಡಿದನು. ನಂತರ ಇಸ್ರೇಲಿನ ಜನರೂ ಪಾಪ ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದನು. ಆದ್ದರಿಂದ ಇಸ್ರೇಲಿನ ಜನರು ಸೋಲಿಸಲ್ಪಡುವಂತೆ ಯೆಹೋವನು ಅವಕಾಶ ಮಾಡುತ್ತಾನೆ” ಎಂದು ಹೇಳಿದನು.

17 ಯಾರೊಬ್ಬಾಮನ ಪತ್ನಿಯು ತಿರ್ಚಾಗೆ ಹಿಂದಿರುಗಿ ಹೋದಳು. ಆಕೆಯು ಮನೆಯೊಳಕ್ಕೆ ಕಾಲಿಟ್ಟಕೂಡಲೇ ಮಗನು ಸತ್ತುಹೋದನು. 18 ಇಸ್ರೇಲರೆಲ್ಲರು ಅವನಿಗಾಗಿ ಅತ್ತು, ಸಮಾಧಿಮಾಡಿದರು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನೂ ಪ್ರವಾದಿಯೂ ಆದ ಅಹೀಯನ ಮೂಲಕ ಈ ಸಂಗತಿಗಳನ್ನು ಹೇಳಿಸಿದ್ದನು.

19 ರಾಜನಾದ ಯಾರೊಬ್ಬಾಮನು ಇತರ ಅನೇಕ ಕಾರ್ಯಗಳನ್ನು ಮಾಡಿದನು. ಅವನು ಯುದ್ಧಗಳಲ್ಲಿ ಹೋರಾಡಿದನು ಮತ್ತು ಜನರನ್ನು ಆಳಿದನು. “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅವನು ಮಾಡಿದ ಕಾರ್ಯಗಳೆಲ್ಲವನ್ನು ಬರೆಯಲಾಗಿದೆ. 20 ಯಾರೊಬ್ಬಾಮನು ರಾಜನಾಗಿ ಇಪ್ಪತ್ತೆರಡು ವರ್ಷ ಆಳಿದನು. ನಂತರ ಅವನು ಸತ್ತುಹೋದನು. ಅವನನ್ನು ಪೂರ್ವಿಕರ ಬಳಿ ಸಮಾಧಿಮಾಡಿದರು. ಅವನ ಮಗನಾದ ನಾದಾಬನು ಅವನ ನಂತರ ಹೊಸ ರಾಜನಾದನು.

ಯೆಹೂದದ ರಾಜನಾದ ರೆಹಬ್ಬಾಮ

21 ಆ ಕಾಲದಲ್ಲಿ ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ರಾಜನಾಗಿದ್ದನು. ಅವನು ರಾಜನಾದಾಗ ಅವನಿಗೆ ನಲವತ್ತೊಂದು ವರ್ಷ ವಯಸ್ಸಾಗಿತ್ತು. ರೆಹಬ್ಬಾಮನು ಜೆರುಸಲೇಮ್ ನಗರದಲ್ಲಿ ಹದಿನೇಳು ವರ್ಷ ಆಳಿದನು. ಈ ನಗರದಲ್ಲಿ ತಾನು ಸನ್ಮಾನಿಸಲ್ಪಡಬೇಕೆಂದು ಯೆಹೋವನು ಈ ನಗರವನ್ನು ಆರಿಸಿಕೊಂಡಿದ್ದನು. ಇಸ್ರೇಲಿನ ಎಲ್ಲಾ ನಗರಗಳಲ್ಲಿ ಈ ನಗರವನ್ನು ಆತನು ಆರಿಸಿಕೊಂಡಿದ್ದನು. ಅಮ್ಮೋನಿಯಳಾದ ನಯಮಾ ಎಂಬವಳು ರೆಹಬ್ಬಾಮನ ತಾಯಿ.

22 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನೆಲ್ಲ ಯೆಹೂದದ ಜನರು ಮಾಡಿ ಪಾಪಿಗಳಾದರು. ಯೆಹೋವನು ಅವರ ಮೇಲೆ ಹೆಚ್ಚು ಕೋಪಗೊಳ್ಳುವಂತೆ ಆತನಿಗೆ ವಿರುದ್ಧವಾದ ಅನೇಕ ಕಾರ್ಯಗಳನ್ನು ಮಾಡಿದರು. ಅವರಿಗಿಂತಲೂ ಮುಂಚೆ ಜೀವಿಸಿದ್ದ ಅವರ ಪೂರ್ವಿಕರಿಗಿಂತಲೂ ಈ ಜನರು ಹೆಚ್ಚು ಕೀಳಾಗಿದ್ದರು. 23 ಈ ಜನರು ಎತ್ತರವಾದ ಸ್ಥಳಗಳಲ್ಲಿ ಕಲ್ಲಿನ ಸ್ಮಾರಕಗಳನ್ನು, ಪವಿತ್ರ ಸ್ತಂಭಗಳನ್ನು ನಿರ್ಮಿಸಿದರು. ಅವರು ಅವುಗಳನ್ನು ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಮರದ ಕೆಳಗಡೆಯೂ ನಿರ್ಮಿಸಿದರು. 24 ಇತರ ದೇವರುಗಳ ಸೇವೆಗಾಗಿ ತಮ್ಮ ದೇಹಗಳನ್ನು ಲೈಂಗಿಕ ಸಂಬಂಧಕ್ಕೆ ಮಾರಾಟ ಮಾಡುವ ಗಂಡಸರೂ ಅಲ್ಲಿದ್ದರು. ಯೆಹೂದದ ಜನರು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದರು. ಆ ದೇಶದಲ್ಲಿ ಇವರಿಗಿಂತ ಮುಂಚೆ ನೆಲಸಿದ್ದ ಜನರು ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ದರು. ದೇವರು ಆ ಜನರಿಂದ ಈ ದೇಶವನ್ನು ತೆಗೆದುಕೊಂಡು ಇಸ್ರೇಲರಿಗೆ ಕೊಟ್ಟಿದ್ದನು.

25 ರೆಹಬ್ಬಾಮನು ರಾಜನಾಗಿದ್ದ ಐದನೆಯ ವರ್ಷದಲ್ಲಿ ಈಜಿಪ್ಟಿನ ರಾಜನಾದ ಶೀಶಕನು ಜೆರುಸಲೇಮಿನ ವಿರುದ್ಧ ಹೋರಾಡಿದನು. 26 ಶೀಶಕನು ಯೆಹೋವನ ಆಲಯದ ಭಂಡಾರವನ್ನು ಮತ್ತು ರಾಜನ ಅರಮನೆಯ ಭಂಡಾರವನ್ನು ತೆಗೆದುಕೊಂಡು ಹೋದನು. ಅರಾಮದ ರಾಜನಾದ ಹದದೆಜರನ ಅಧಿಕಾರಿಗಳಿಂದ ದಾವೀದನು ತೆಗೆದುಕೊಂಡಿದ್ದ ಬಂಗಾರದ ಗುರಾಣಿಗಳನ್ನೂ ಅವನು ತೆಗೆದುಕೊಂಡು ಹೋದನು. ದಾವೀದನು ಈ ಗುರಾಣಿಗಳನ್ನು ಜೆರುಸಲೇಮಿಗೆ ತಂದಿದ್ದನು. ಆದರೆ ಶೀಶಕನು ಎಲ್ಲಾ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು ಹೋದನು. 27 ಆದ್ದರಿಂದ ರಾಜನಾದ ರೆಹಬ್ಬಾಮನು ಅವುಗಳ ಸ್ಥಾನದಲ್ಲಿಡಲು ಅನೇಕ ಗುರಾಣಿಗಳನ್ನು ಮಾಡಿಸಿದನು. ಆದರೆ ಈ ಗುರಾಣಿಗಳನ್ನು ಮಾಡಿಸಿದ್ದು ಹಿತ್ತಾಳೆಯಲ್ಲೇ ಹೊರತು ಬಂಗಾರದಿಂದಲ್ಲ. ಅರಮನೆಯ ಬಾಗಿಲಿನ ಕಾವಲುಗಾರರಿಗೆ ಈ ಗುರಾಣಿಗಳನ್ನು ಅವನು ಕೊಟ್ಟನು. 28 ರಾಜನು ಯೆಹೋವನ ಆಲಯಕ್ಕೆ ಹೋಗುವಾಗ ಪ್ರತಿಸಲವೂ ಮೈಗಾವಲಿನವರು ಅವನ ಜೊತೆಯಲ್ಲಿ ಹೋಗುತ್ತಿದ್ದರು. ಅವರು ಗುರಾಣಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ನಂತರ ಅವರು ರಕ್ಷಣಾಕೊಠಡಿಯ ಗೋಡೆಯ ಮೇಲೆ ಈ ಗುರಾಣಿಗಳನ್ನು ಇಡುತ್ತಿದ್ದರು.

29 ರಾಜನಾದ ರೆಹಬ್ಬಾಮನು ಮಾಡಿದ ಎಲ್ಲಾ ಕಾರ್ಯಗಳನ್ನು “ಯೆಹೂದದ ರಾಜರುಗಳ ಚರಿತ್ರೆ” ಎಂಬ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. 30 ರೆಹಬ್ಬಾಮನ ಮತ್ತು ಯಾರೊಬ್ಬಾಮನ ನಡುವೆ ಯಾವಾಗಲೂ ಯುದ್ಧ ನಡೆಯುತ್ತಿತ್ತು.

31 ರೆಹಬ್ಬಾಮನು ಸತ್ತುಹೋದನು. ಅವನನ್ನು ಅವನ ಪೂರ್ವಿಕನಾದ ದಾವೀದನಗರದಲ್ಲಿ ಸಮಾಧಿಮಾಡಿದರು. (ಅಮ್ಮೋನಿಯಾದ ನಯಮಾಳು ಅವನ ತಾಯಿ) ಅವನ ನಂತರ ಅವನ ಮಗ ಅಬೀಯಾಮನು ರಾಜನಾದನು.

ಕೊಲೊಸ್ಸೆಯವರಿಗೆ 1

ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ.

ಕೊಲೊಸ್ಸೆಯಲ್ಲಿರುವ ದೇವಜನರಿಗೆ ಅಂದರೆ ಕ್ರಿಸ್ತನಲ್ಲಿ ನಂಬಿಗಸ್ತರಾದ ಮತ್ತು ಪವಿತ್ರರಾದ ಸಹೋದರ, ಸಹೋದರಿಯರಿಗೆ ನಾನು ಈ ಪತ್ರವನ್ನು ನಮ್ಮ ಸಹೋದರನಾದ ತಿಮೊಥೆಯನ ಜೊತೆಗೂಡಿ ಬರೆಯುತ್ತಿದ್ದೇನೆ. ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರಕಲಿ.

ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯೇ ದೇವರು. ನಾವು ದೇವರಿಗೆ ಸ್ತೋತ್ರ ಮಾಡಲು ಕಾರಣವೇನೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ, ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದ್ದೇವೆ. 5-6 ನಿಮಗೆ ನಿರೀಕ್ಷೆ ಇರುವುದರಿಂದಲೇ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ದೇವಜನರನ್ನು ಪ್ರೀತಿಸುತ್ತೀರಿ. ನೀವು ನಿರೀಕ್ಷಿಸುವಂಥವುಗಳು ನಿಮಗೋಸ್ಕರ ಪರಲೋಕದಲ್ಲಿ ಸಿದ್ಧ ಮಾಡಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ತಿಳಿಸಲಾದ ಸತ್ಯವಾಕ್ಯವನ್ನು ಅಂದರೆ ಸುವಾರ್ತೆಯನ್ನು ನೀವು ಕೇಳಿದಾಗ ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿರಿ. ನೀವು ಸುವಾರ್ತೆಯನ್ನು ಕೇಳಿ ದೇವರ ಕೃಪೆಯ ಸತ್ಯಾರ್ಥವನ್ನು ತಿಳಿದುಕೊಂಡಂದಿನಿಂದ ಸುವಾರ್ತೆಯು ನಿಮ್ಮಲ್ಲಿ ವೃದ್ಧಿಯಾಗುತ್ತಿದೆ ಮತ್ತು ಜನರಿಗೆ ಆಶೀರ್ವಾದಕರವಾಗಿದೆ. ಅದೇ ರೀತಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸುವಾರ್ತೆಯು ವೃದ್ಧಿಯಾಗುತ್ತಿದೆ ಮತ್ತು ಆಶೀರ್ವಾದಕರವಾಗಿದೆ. ನೀವು ಎಪಫ್ರನಿಂದ ದೇವರ ಕೃಪೆಯ ಬಗ್ಗೆ ತಿಳಿದುಕೊಂಡಿರಿ. ಅವನು ನಮ್ಮ ಜೊತೆಯಲ್ಲಿಯೇ ಸೇವೆ ಮಾಡುತ್ತಿದ್ದಾನೆ. ನಾವು ಅವನನ್ನು ಪ್ರೀತಿಸುತ್ತೇವೆ. ಅವನು ನಮಗೋಸ್ಕರ ಕ್ರಿಸ್ತನ ನಂಬಿಗಸ್ತ ಸೇವಕನಾಗಿದ್ದಾನೆ. ಪವಿತ್ರಾತ್ಮ ಪ್ರೇರಿತವಾದ ನಿಮ್ಮ ಪ್ರೀತಿಯ ಬಗ್ಗೆ ಎಪಫ್ರನು ಸಹ ನಮಗೆ ತಿಳಿಸಿದನು.

ನಿಮ್ಮ ಬಗ್ಗೆ ಈ ಸಂಗತಿಗಳನ್ನು ಕೇಳಿದ ದಿನದಿಂದ, ನಿಮಗೋಸ್ಕರ ಎಡಬಿಡದೆ ಪ್ರಾರ್ಥಿಸುತ್ತಿದ್ದೇವೆ.

ದೇವರು ಅಪೇಕ್ಷಿಸುವ ಸಂಗತಿಗಳೆಲ್ಲವನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳಬೇಕೆಂತಲೂ ಆತ್ಮಿಕ ಸಂಗತಿಗಳಲ್ಲಿ ಮಹಾಜ್ಞಾನವನ್ನು ಮತ್ತು ತಿಳುವಳಿಕೆಯನ್ನು ಹೊಂದಿಕೊಳ್ಳಬೇಕೆಂತಲೂ 10 ಪ್ರಭುವಿಗೆ ಯೋಗ್ಯರಾಗಿ ನಡೆದು ಪ್ರತಿಯೊಂದು ವಿಷಯದಲ್ಲಿ ಆತನನ್ನು ಸಂತೋಷಪಡಿಸಬೇಕೆಂತಲೂ ನೀವು ಎಲ್ಲಾ ವಿಧವಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ದೇವಜ್ಞಾನದಲ್ಲಿ ಬೆಳಯಬೇಕೆಂತಲೂ 11 ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.

12 ಆಗ ನೀವು ಆನಂದದಿಂದ ತಂದೆಗೆ ಕೃತಜ್ಞತಾಸ್ತುತಿ ಮಾಡಬಲ್ಲಿರಿ. ಬೆಳಕಿನಲ್ಲಿ ವಾಸಿಸುವ ತನ್ನ ಜನರೆಲ್ಲರಿಗೂ ಆತನು ಸಿದ್ಧಪಡಿಸಿರುವಂಥವುಗಳನ್ನು ಹೊಂದಿಕೊಳ್ಳಲು ಆತನೇ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದನು. 13 ದೇವರು ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡುಗಡೆ ಮಾಡಿದ್ದಾನೆ. ಆತನು ನಮ್ಮನ್ನು ತನ್ನ ಪ್ರಿಯ ಮಗನ (ಯೇಸುವಿನ) ರಾಜ್ಯದೊಳಗೆ ಸೇರಿಸಿದ್ದಾನೆ. 14 ಮಗನು ನಮ್ಮ ಪಾಪಗಳಿಗೆ ಪರಿಹಾರ ನೀಡಿದನು. ಆತನಲ್ಲಿಯೇ ನಮ್ಮ ಪಾಪಗಳಿಗೆ ಕ್ಷಮೆ ದೊರೆಯಿತು.

ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ

15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
    ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
    ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
    ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
    ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.

17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
    ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
    ಪ್ರತಿಯೊಂದೂ ಆತನಿಂದಲೇ ಬರುತ್ತದೆ.
    ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.

19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20     ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
    ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.

21 ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ. 22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 23 ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.

ಸಭೆಗಾಗಿ ಪೌಲನ ಕಾರ್ಯ

24 ನಾನು ನಿಮಗಾಗಿ ಅನುಭವಿಸಿದ ಬಾಧೆಗಳಿಂದ ನನಗೆ ಸಂತೋಷವಾಗಿದೆ. ಕ್ರಿಸ್ತನು ಸಭೆಯೆಂಬ ತನ್ನ ದೇಹದ ಮೂಲಕ ಇನ್ನೂ ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಈ ಸಂಕಟಗಳಲ್ಲಿ ನಾನು ಅನುಭವಿಸಬೇಕಾದವುಗಳನ್ನು ಆತನ ದೇಹಕ್ಕೋಸ್ಕರ ನನ್ನ ದೇಹದಲ್ಲಿ ಅನುಭವಿಸುತ್ತೇನೆ. 25 ನಾನು ಸಭೆಗೆ ಸೇವಕನಾದೆನು. ಏಕೆಂದರೆ ದೇವರು ನನಗೆ ವಿಶೇಷವಾದ ಕಾರ್ಯವನ್ನು ಮಾಡುವಂತೆ ಆಜ್ಞಾಪಿಸಿದನು. ಈ ಕಾರ್ಯವು ನಿಮಗೆ ಸಹಾಯ ಮಾಡುವುದು. ದೇವರ ಉಪದೇಶವನ್ನು ಸಂಪೂರ್ಣವಾಗಿ ತಿಳಿಸುವುದೇ ಆ ಕಾರ್ಯ. 26 ಆದಿಕಾಲದಿಂದಲೂ ಅಡಗಿಸಿಟ್ಟಿದ್ದ ರಹಸ್ಯಸತ್ಯವೇ ಈ ಉಪದೇಶ. ಈ ಸತ್ಯವನ್ನು ಎಲ್ಲಾ ಜನರಿಗೆ ಮರೆಮಾಡಲಾಗಿತ್ತು. ಈಗಲಾದರೋ ಈ ರಹಸ್ಯಸತ್ಯವನ್ನು ದೇವರ ಪವಿತ್ರ ಜನರಿಗೆ ತಿಳಿಸಲಾಗಿದೆ. 27 ಮಹಿಮಾತಿಶಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲು ದೇವರು ತೀರ್ಮಾನಿಸಿದನು. ಈ ಮಹಾಸತ್ಯವು ಎಲ್ಲಾ ಜನರಿಗಾಗಿ ಪ್ರಕಟವಾಯಿತು. ನಿಮ್ಮಲ್ಲಿರುವ ಕ್ರಿಸ್ತನೇ ಆ ಸತ್ಯವಾಗಿದ್ದಾನೆ. ದೇವರ ಮಹಿಮೆಯಲ್ಲಿ ಪಾಲುಹೊಂದಲು ಆತನೇ ನಮಗಿರುವ ಏಕೈಕ ನಿರೀಕ್ಷೆ. 28 ಆದ್ದರಿಂದಲೇ ನಾವು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುವವರಾಗಿದ್ದೇವೆ. ಪ್ರತಿಯೊಬ್ಬರನ್ನೂ ಬಲಪಡಿಸುವುದಕ್ಕಾಗಿ ಪ್ರತಿಯೊಬ್ಬರಿಗೂ ಉಪದೇಶಿಸುವುದಕ್ಕಾಗಿ ನಮ್ಮ ಜ್ಞಾನವನ್ನೆಲ್ಲಾ ಉಪಯೋಗಿಸುತ್ತೇವೆ. ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಸಂಪೂರ್ಣ ಆತ್ಮಿಕರನ್ನಾಗಿ ಮಾಡಿ ದೇವರ ಸನ್ನಿಧಿಗೆ ತರಲು ಪ್ರಯತ್ನಿಸುತ್ತೇವೆ. 29 ಕ್ರಿಸ್ತನು ನನಗೆ ನೀಡಿರುವ ಬಲದಿಂದ ಇದಕ್ಕೋಸ್ಕರವೇ ಕೆಲಸ ಮಾಡುತ್ತೇನೆ ಮತ್ತು ಹೋರಾಡುತ್ತೇನೆ. ಆ ಬಲವೇ ನನ್ನ ಜೀವನದಲ್ಲಿ ಕಾರ್ಯಮಾಡುತ್ತಿದೆ.

ಯೆಹೆಜ್ಕೇಲ 44

ಹೊರಗಿನ ದ್ವಾರ

44 ಆ ಬಳಿಕ ನನ್ನನ್ನು ಆ ಮನುಷ್ಯನು ಆಲಯದ ಪೂರ್ವದ್ವಾರಕ್ಕೆ ತಂದನು. ನಾವು ದ್ವಾರದ ಹೊರಗಿದ್ದೆವು. ದ್ವಾರವು ಮುಚ್ಚಿತ್ತು. ಆಗ ಯೆಹೋವನು ನನಗೆ ಹೀಗೆಂದನು, “ಈ ದ್ವಾರವು ಮುಚ್ಚಿಯೇ ಇರಬೇಕು. ಇದು ತೆರೆಯಲ್ಪಡುವದಿಲ್ಲ. ಇದರ ಮೂಲಕ ಯಾರೂ ಪ್ರವೇಶ ಮಾಡುವದಿಲ್ಲ. ಯಾಕೆಂದರೆ ಇಸ್ರೇಲಿನ ದೇವರಾದ ಯೆಹೋವನು ಈ ದ್ವಾರದ ಮೂಲಕ ಪ್ರವೇಶಿಸಿದ್ದನು. ಆದ್ದರಿಂದ ಇದು ಮುಚ್ಚಿಯೇ ಇರಬೇಕು. ಜನರ ಅಧಿಪತಿಯು ಯೆಹೋವನ ಸನ್ನಿಧಿಯಲ್ಲಿ ಊಟಮಾಡಲು ಬರುವಾಗ ಅವನು ಮಾತ್ರ ಈ ದ್ವಾರದ ಬಳಿ ಕುಳಿತುಕೊಳ್ಳಬಹುದು. ಅಧಿಪತಿಯು ದ್ವಾರದ ಮಂಟಪದ ಮೂಲಕ ಪ್ರವೇಶಿಸಬೇಕು ಮತ್ತು ಅದೇ ಮಾರ್ಗದಲ್ಲಿ ಹೊರ ಬರಬೇಕು.”

ಆಲಯದ ಪವಿತ್ರತೆ

ಆ ಬಳಿಕ ನನ್ನನ್ನು ಉತ್ತರದ ದ್ವಾರದ ಮೂಲಕ ಆಲಯದ ಮುಂಭಾಗಕ್ಕೆ ಅವನು ಕರೆದುಕೊಂಡು ಹೋದನು. ನಾನು ನೋಡಿದಾಗ ಯೆಹೋವನ ತೇಜಸ್ಸು ಆತನ ಆಲಯವನ್ನು ತುಂಬುತ್ತಿತ್ತು. ನಾನು ಸಾಷ್ಟಾಂಗವೆರಗಿದೆನು. ಆಗ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಕಿವಿಯಾರೆ ಕೇಳು, ಕಣ್ಣಾರೆ ನೋಡಿ ಅರ್ಥಮಾಡಿಕೊ. ಪವಿತ್ರಾಲಯದ ಎಲ್ಲಾ ವಿಧಿನಿಯಮಗಳನ್ನು ಗಮನವಿಟ್ಟು ಕೇಳು. ಆಲಯದೊಳಕ್ಕೆ ಬರುವ ಪ್ರವೇಶ ದ್ವಾರಗಳನ್ನೂ ಪವಿತ್ರಸ್ಥಳದಿಂದ ಹೊರ ಹೋಗುವ ಪ್ರವೇಶ ದ್ವಾರಗಳನ್ನೂ ಗಮನವಿಟ್ಟು ನೋಡು. ಅನಂತರ ನನ್ನ ಮಾತಿಗೆ ವಿಧೇಯರಾಗಲು ನಿರಾಕರಿಸುವ ಎಲ್ಲಾ ಇಸ್ರೇಲರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ಇಸ್ರೇಲ್ ಜನಾಂಗವೇ, ನೀವು ಮಾಡಿರುವ ಭಯಂಕರ ಕೃತ್ಯಗಳು ನನಗೆ ಸಾಕಾಗಿವೆ. ನೀವು ನನ್ನ ಆಲಯದೊಳಗೆ ಅನ್ಯರನ್ನು ತಂದಿರುತ್ತೀರಿ. ಅವರು ಸುನ್ನತಿಯಾದವರಾಗಿರಲಿಲ್ಲ. ಅವರು ಸಂಪೂರ್ಣವಾಗಿ ನನ್ನನ್ನು ನಂಬಿರಲಿಲ್ಲ. ಈ ರೀತಿಯಾಗಿ ನೀವು ನನ್ನ ಆಲಯವನ್ನು ಹೊಲೆ ಮಾಡಿರುತ್ತೀರಿ. ನೀವು ನಾವು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಬಿಟ್ಟಿರಿ. ಭಯಂಕರ ಕೃತ್ಯಗಳನ್ನು ಮಾಡಿ ಆಮೇಲೆ ನನಗೆ ರೊಟ್ಟಿ, ಕೊಬ್ಬು, ರಕ್ತಗಳ ಕಾಣಿಕೆ ಅರ್ಪಿಸುತ್ತೀರಿ. ಆದರೆ ಇವೆಲ್ಲಾ ನನ್ನ ಆಲಯವನ್ನು ಅಶುದ್ಧಗೊಳಿಸುತ್ತಿವೆ. ನೀವು ನನ್ನ ಪವಿತ್ರ ವಸ್ತುಗಳನ್ನು ಅಲಕ್ಷ್ಯಮಾಡಿದಿರಿ. ನನ್ನ ಪವಿತ್ರಸ್ಥಳದ ಜವಾಬ್ದಾರಿಕೆಯನ್ನು ನೀವು ಅನ್ಯರ ವಶಮಾಡಿದ್ದೀರಿ.’”

ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರೊಂದಿಗೆ ವಾಸವಾಗಿರುವ ಅನ್ಯಜನರೊಳಗೆ ತನುಮನಗಳಲ್ಲಿ ಸುನ್ನತಿಯಾಗಿಲ್ಲದವನು ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು. 10 ಗತಕಾಲದಲ್ಲಿ ಇಸ್ರೇಲರು ನನ್ನನ್ನು ತ್ಯಜಿಸಿದಾಗ ಲೇವಿಯರು ನನ್ನನ್ನು ಬಿಟ್ಟುಹೋದರು. ಇಸ್ರೇಲರು ನನ್ನನ್ನು ಬಿಟ್ಟು ವಿಗ್ರಹಗಳನ್ನು ಪೂಜಿಸಿದರು. ಲೇವಿಯರು ಮಾಡಿದ ಪಾಪಕ್ಕಾಗಿ ಶಿಕ್ಷಿಸಲ್ಪಡುವರು. 11 ನನ್ನ ಪವಿತ್ರಸ್ಥಳದಲ್ಲಿ ಸೇವೆಮಾಡಲು ಲೇವಿಯರು ಆರಿಸಲ್ಪಟ್ಟಿರುತ್ತಾರೆ. ಅವರು ಆಲಯದ ಪ್ರವೇಶ ದ್ವಾರವನ್ನು ಕಾವಲು ಕಾಯ್ದರು. ಆಲಯದೊಳಗೆ ಸೇವೆಮಾಡಿದರು. ಜನರು ಅರ್ಪಿಸುವ ಪ್ರಾಣಿಗಳನ್ನು ವಧಿಸಿ ಯಜ್ಞಕ್ಕಾಗಿ ಅವುಗಳನ್ನು ತಯಾರುಮಾಡಿ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಿದರು. ಜನರಿಗೆ ಸಹಾಯ ಮಾಡಿ, ಅವರ ಸೇವೆಮಾಡಲು ಅವರು ಆರಿಸಲ್ಪಟ್ಟಿದ್ದಾರೆ. 12 ಆದರೆ ಆ ಲೇವಿಯರು, ಜನರು ನನಗೆ ವಿರುದ್ಧವಾಗಿ ಪಾಪ ಮಾಡುವಂತೆ ಸಹಾಯಮಾಡಿದರು. ಜನರು ತಮ್ಮ ವಿಗ್ರಹಗಳನ್ನು ಪೂಜಿಸುವಂತೆ ಅವರಿಗೆ ಸಹಾಯ ಮಾಡಿದರು. ಆದ್ದರಿಂದ ನಾನು ವಾಗ್ದಾನ ಮಾಡುವದೇನೆಂದರೆ, ‘ಅವರು ಮಾಡಿದ ಪಾಪಗಳಿಗಾಗಿ ಅವರು ಶಿಕ್ಷಿಸಲ್ಪಡುವರು.’” ಇದು ನನ್ನ ಒಡೆಯನಾದ ಯೆಹೋವನ ನುಡಿ.

13 “ಆದ್ದರಿಂದ ಯಾಜಕರಂತೆ ಲೇವಿಯರು ನನಗೆ ಕಾಣಿಕೆಗಳನ್ನು ತರಕೂಡದು. ಅವರು ನನ್ನ ಪವಿತ್ರ ವಸ್ತುಗಳ ಬಳಿಗೂ, ಅತೀ ಪವಿತ್ರ ವಸ್ತುಗಳ ಬಳಿಗೂ ಬರಬಾರದು. ಅವರು ಮಾಡಿದ ಭಯಂಕರ ಕೃತ್ಯಗಳಿಗಾಗಿ ಅವರು ಅವಮಾನಿತರಾಗಬೇಕು. 14 ಆದರೆ ನಾನು ನನ್ನ ಆಲಯದಲ್ಲಿ ಸೇವೆಮಾಡಲು ಅವರಿಗೆ ಬಿಡುವೆನು. ಅವರು ಅದರೊಳಗೆ ಮಾಡಬೇಕಾದ ಸೇವೆಯನ್ನು ಮಾಡುವರು.

15 “ಯಾಜಕರೆಲ್ಲರೂ ಲೇವಿ ಕುಲಕ್ಕೆ ಸಂಬಂಧಪಟ್ಟವರು. ಆದರೆ ಲೇವಿಯರು ನನ್ನನ್ನು ಬಿಟ್ಟು ತೊಲಗಿದಾಗ ಚಾದೋಕನ ಸಂತತಿಯವರಾದ ಯಾಜಕರು ನನ್ನ ಪವಿತ್ರ ಸ್ಥಳವನ್ನು ಪರಾಂಬರಿಸಿದರು. ಆದ್ದರಿಂದ ಚಾದೋಕನ ಸಂತತಿಯವರು ಮಾತ್ರ ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವರು ನನ್ನ ಸನ್ನಿಧಿಯಲ್ಲಿ ನಿಂತು ಯಜ್ಞಮಾಡಲ್ಪಡುವ ಪ್ರಾಣಿಗಳ ಕೊಬ್ಬು ಮತ್ತು ರಕ್ತವನ್ನು ನನಗೆ ಸಮರ್ಪಿಸುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ. 16 “ಅವರು ನನ್ನ ಪವಿತ್ರಸ್ಥಳವನ್ನು ಪ್ರವೇಶಿಸುವರು. ನನ್ನ ಮೇಜಿನ ಬಳಿಗೆ ನನಗೆ ಸೇವೆಮಾಡಲು ಬರುವರು. ನಾನು ಅವರಿಗೆ ವಹಿಸಿರುವ ವಸ್ತುಗಳನ್ನು ಪರಾಂಬರಿಸುವರು. 17 ಒಳಗಿನ ಪ್ರಾಕಾರದ ಪ್ರವೇಶ ದ್ವಾರವನ್ನು ಹೊಕ್ಕುವಾಗ ಅವರು ನಾರುಮಡಿ ಬಟ್ಟೆಯನ್ನು ಧರಿಸುವರು. ಅವರು ಒಳಗಿನ ಪ್ರಾಕಾರದ ಪ್ರವೇಶ ದ್ವಾರದಲ್ಲಾಗಲಿ ಆಲಯದೊಳಗಾಗಲಿ ಸೇವೆಮಾಡುವಾಗ ಉಣ್ಣೆಯಿಂದ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳುವದಿಲ್ಲ. 18 ಅವರು ನಾರುಮಡಿಯ ಮುಂಡಾಸನ್ನು ಧರಿಸಿಕೊಳ್ಳುವರು. ಅದೇ ಬಟ್ಟೆಯ ಚಡ್ಡಿಯನ್ನೂ ಧರಿಸುವರು. ಅವರಿಗೆ ಬೆವರು ಬರಿಸುವ ಯಾವ ಬಟ್ಟೆಯಾಗಲಿ ಅವರು ಧರಿಸುವದಿಲ್ಲ. 19 ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಅವರು ಹೋಗುವಾಗ, ನನ್ನ ಸೇವೆಮಾಡಲು ಅವರು ಧರಿಸಿಕೊಂಡಿದ್ದ ವಸ್ತ್ರಗಳನ್ನು ತೆಗೆದಿಡುವರು. ಒಳಗಿನ ಪ್ರಾಕಾರದಲ್ಲಿರುವ ವಿಶೇಷವಾದ ಉಗ್ರಾಣ ಕೋಣೆಯಲ್ಲಿ ಅವರು ಆ ವಸ್ತ್ರಗಳನ್ನು ಇಡುವರು ಮತ್ತು ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಹೋಗುವಾಗ ಬೇರೆ ಬಟ್ಟೆಗಳನ್ನು ಧರಿಸಿಕೊಳ್ಳುವರು. ಹೀಗೆ ಅವರು ಮಾಡುವದರಿಂದ ಸಾಮಾನ್ಯ ಜನರು ಆ ವಿಶೇಷವಾದ ಬಟ್ಟೆಗಳನ್ನು ಮುಟ್ಟಿದಂತಾಗುವುದು.

20 “ಆ ಯಾಜಕರು ತಮ್ಮ ತಲೆಯನ್ನು ಬೋಳಿಸುವದೂ ಇಲ್ಲ ಮತ್ತು ತಲೆಕೂದಲನ್ನು ಉದ್ದವಾಗಿ ಬೆಳೆಸುವದೂ ಇಲ್ಲ. ಇದು ಅವರಲ್ಲಿರುವ ಶೋಕವನ್ನು ಸೂಚಿಸುತ್ತದೆ. ಯಾಜಕರು ಯೆಹೋವನ ಸೇವೆಮಾಡುವಾಗ ಸಂತೋಷದಿಂದಿರಬೇಕು. ಅವರು ತಮ್ಮ ತಲೆಕೂದಲನ್ನು ಸಣ್ಣದಾಗಿರಿಸುವದಕ್ಕೆ ಕತ್ತರಿಸಬಹುದು. 21 ಯಾಜಕರು ಒಳಗಿನ ಪ್ರಾಕಾರವನ್ನು ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿದಿರಬಾರದು. 22 ಯಾಜಕರು ವಿಧವೆಯರನ್ನಾಗಲಿ ವಿವಾಹವಿಚ್ಛೇದನಗೊಂಡ ಸ್ತ್ರೀಯರನ್ನಾಗಲಿ ಮದುವೆಯಾಗಕೂಡದು. ಇಸ್ರೇಲ್ ಸಂತತಿಯವಳೇ ಆಗಿರುವ ಕನ್ನಿಕೆಯನ್ನಾಗಲಿ ಅಥವಾ ಯಾಜಕನಾಗಿದ್ದ ತನ್ನ ಗಂಡನನ್ನು ಕಳೆದುಕೊಂಡ ವಿಧವೆಯನ್ನಾಗಲಿ ಮದುವೆಯಾಗಬೇಕು.

23 “ಯಾಜಕರು ಜನರಿಗೆ ಪವಿತ್ರ ವಸ್ತುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಬಗ್ಗೆ ಉಪದೇಶಿಸಬೇಕು. ಒಬ್ಬನನ್ನು ಅಶುದ್ಧನನ್ನಾಗಿ ಮಾಡುವಂಥವುಗಳ ಬಗ್ಗೆ ಇರುವ ನಿಯಮಗಳನ್ನು ಅವರು ಜನರಿಗೆ ಉಪದೇಶಿಸಬೇಕು. 24 ವ್ಯಾಜ್ಯಗಳಿಗೆ ತೀರ್ಪು ನೀಡುವ ನ್ಯಾಯಾಧಿಶರಾಗಿ ಯಾಜಕರು ಸೇವೆಮಾಡಬೇಕು ಮತ್ತು ನನ್ನ ಆಡಳಿತವನ್ನು ಆಧರಿಸಿ ಅವರು ತೀರ್ಪು ನೀಡಬೇಕು. ಅವರು ವಿಶೇಷವಾದ ಕೂಟಗಳನ್ನು ಏರ್ಪಡಿಸುವಾಗ ನನ್ನ ವಿಧಿನಿಯಮಗಳನ್ನು ಅನುಸರಿಸುವರು ಮತ್ತು ವಿಶೇಷವಾದ ಎಲ್ಲಾ ರಜಾದಿನಗಳನ್ನು ಮತ್ತು ಸಬ್ಬತ್ ದಿನಗಳನ್ನು ಅವರು ಗೌರವಿಸುವರು. 25 ಸತ್ತ ಹೆಣದ ಬಳಿಗೆ ಹೋಗಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು. ಆದರೆ ಸತ್ತವರು ತಮ್ಮ ಹೆತ್ತವರಾಗಲಿ ಮಕ್ಕಳಾಗಲಿ ಅಥವಾ ಮದುವೆಯಾಗದಿದ್ದ ಸಹೋದರ ಸಹೋದರಿಯರಾಗಲಿ ಆಗಿದ್ದಲ್ಲಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಕಾಗುತ್ತದೆ. 26 ಆ ಯಾಜಕನು ತನ್ನನ್ನು ಶುದ್ಧ ಮಾಡಿಕೊಂಡ ತರುವಾಯ ತಾನು ಏಳು ದಿವಸ ಕಾಯಬೇಕು. 27 ಅನಂತರ ಅವನು ಪವಿತ್ರಸ್ಥಳಕ್ಕೆ ತಿರುಗಿ ಹೋಗಬಹುದು. ಆದರೆ ಒಳಗಿನ ಪ್ರಾಕಾರದೊಳಗೆ ಹೋಗುವ ದಿನದಂದು ಯಾಜಕನು ಮೊದಲು ತನಗಾಗಿ ಪಾಪಪರಿಹಾರಕಯಜ್ಞವನ್ನು ಸಮರ್ಪಿಸಿಕೊಳ್ಳಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.

28 “ಲೇವಿಯರ ಆಸ್ತಿಯು ನಾನೇ, ಇಸ್ರೇಲರೊಳಗೆ ಅವರಿಗೆ ಯಾವ ಆಸ್ತಿಯೂ ಇರುವದಿಲ್ಲ. ನಾನೇ ಅವರ ಸ್ವಾಸ್ತ್ಯ. 29 ಜನರು ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞಕ್ಕೆ ತಂದ ಕಾಣಿಕೆಯೇ ಅವರ ಆಹಾರವಾಗಿರುವದು. 30 ಎಲ್ಲಾ ಪ್ರಥಮಫಲವು ಯಾಜಕರಿಗೆ ಸಲ್ಲತಕ್ಕದ್ದು. ಅಲ್ಲದೆ ನೀವು ನಾದುವ ಮೊದಲನೆ ರೊಟ್ಟಿಯ ಹಿಟ್ಟು ಯಾಜಕರಿಗೆ ಕೊಡಬೇಕು. ಹೀಗೆ ಮಾಡಿದ್ದಲ್ಲಿ ನೀವು ಆಶೀರ್ವದಿಸಲ್ಪಡುತ್ತೀರಿ. 31 ಯಾಜಕರು ಸ್ವಾಭಾವಿಕವಾಗಿ ಸತ್ತು ಅಥವಾ ವನ್ಯಜಂತುಗಳು ಕೊಂದಿರುವ ಯಾವ ಪ್ರಾಣಿಯಾಗಲಿ ಪಕ್ಷಿಯಾಗಲಿ ಅದರ ಮಾಂಸವನ್ನು ತಿನ್ನಬಾರದು.

ಕೀರ್ತನೆಗಳು 97-98

97 ಯೆಹೋವನು ಆಳುತ್ತಿರುವನು! ಭೂಮಿಯು ಸಂತೋಷಿಸಲಿ.
    ದೂರ ದೇಶಗಳೆಲ್ಲಾ ಹರ್ಷಿಸಲಿ.
ಕಾರ್ಮೋಡಗಳು ಆತನನ್ನು ಕವಿದುಕೊಂಡಿವೆ.
    ನೀತಿಯೂ ನ್ಯಾಯವೂ ಆತನ ರಾಜ್ಯದ ಬಲವಾಗಿವೆ.
ಬೆಂಕಿಯು ಆತನ ಮುಂದೆ ಹೋಗಿ
    ಆತನ ಶತ್ರುಗಳನ್ನು ನಾಶಮಾಡುವುದು.
ಆತನ ಮಿಂಚು ಆಕಾಶದಲ್ಲಿ ಹೊಳೆಯುತ್ತದೆ.
    ಜನರು ಅದನ್ನು ನೋಡಿ ಭಯಗೊಂಡಿದ್ದಾರೆ.
ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
    ಬೆಟ್ಟಗಳು ಮೇಣದಂತೆ ಕರಗಿಹೋಗುತ್ತವೆ.
ಆಕಾಶಗಳೇ, ಆತನ ನೀತಿಯ ಕುರಿತು ಹೇಳಿರಿ!
    ದೇವರ ಮಹಿಮೆಯನ್ನು ಪ್ರತಿಯೊಬ್ಬನೂ ಕಾಣಲಿ!

ಜನರು ತಮ್ಮ ವಿಗ್ರಹಗಳನ್ನು ಪೂಜಿಸುವರು.
    ಅವರು ತಮ್ಮ “ದೇವರುಗಳ” ಬಗ್ಗೆ ಜಂಬಕೊಚ್ಚುವರು.
ಆದರೆ ಅವರು ನಾಚಿಕೆಗೀಡಾಗುವರು.
    ಅವರ “ದೇವರುಗಳು” ಯೆಹೋವನಿಗೆ ಅಡ್ಡಬಿದ್ದು ಆರಾಧಿಸುತ್ತವೆ.
ಚೀಯೋನೇ, ಕೇಳಿ ಸಂತೋಷಪಡು!
    ಯೆಹೂದದ ಪಟ್ಟಣಗಳೇ, ಆನಂದಿಸಿರಿ.
    ಯಾಕೆಂದರೆ ಯೆಹೋವನ ತೀರ್ಪುಗಳು ನ್ಯಾಯವಾಗಿವೆ.
ಮಹೋನ್ನತನಾದ ಯೆಹೋವನೇ, ಭೂಲೋಕದ ಸರ್ವಾಧಿಪತಿ ನೀನೇ.
    ಎಲ್ಲಾ ದೇವರುಗಳಲ್ಲಿ ನೀನೇ ಮಹೋನ್ನತನು.
10 ಯೆಹೋವನನ್ನು ಪ್ರೀತಿಸುವವರೇ, ದುಷ್ಟತನವನ್ನು ದ್ವೇಷಿಸಿರಿ.
    ದೇವರು ತನ್ನ ಭಕ್ತರನ್ನು ಸಂರಕ್ಷಿಸುವನು.
    ದೇವರು ತನ್ನ ಸದ್ಭಕ್ತರನ್ನು ಕೆಡುಕರಿಂದ ರಕ್ಷಿಸುವನು.
11 ನೀತಿವಂತರಿಗೋಸ್ಕರ ಬೆಳಕೂ ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಪ್ರಕಾಶಿಸುತ್ತವೆ.
12 ನೀತಿವಂತರೇ, ಯೆಹೋವನಲ್ಲಿ ಸಂತೋಷಪಡಿರಿ!
    ಆತನ ಪವಿತ್ರ ಹೆಸರನ್ನು ಸನ್ಮಾನಿಸಿರಿ!

ಸ್ತುತಿಗೀತೆ.

98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
    ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
    ಆತನಿಗೆ ಜಯವನ್ನು ಉಂಟುಮಾಡಿವೆ.
ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
    ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
    ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
ಹಾರ್ಪ್‌ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
    ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
    ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
ಸಮುದ್ರವೂ ಭೂಮಿಯೂ
    ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
ನದಿಗಳೇ, ಚಪ್ಪಾಳೆ ತಟ್ಟಿರಿ!
    ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
ಯೆಹೋವನ ಎದುರಿನಲ್ಲಿ ಹಾಡಿರಿ,
    ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
    ಆತನು ಜನರನ್ನು ನೀತಿಯಿಂದ ಆಳುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International