M’Cheyne Bible Reading Plan
ಯೋನಾತಾನನಿಂದ ದಾವೀದನಿಗೆ ಸಹಾಯ
19 ಸೌಲನು ತನ್ನ ಮಗನಾದ ಯೋನಾತಾನನಿಗೂ ತನ್ನ ಅಧಿಕಾರಿಗಳಿಗೂ ದಾವೀದನನ್ನು ಕೊಂದು ಹಾಕಲು ತಿಳಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳ ಇಷ್ಟಪಡುತ್ತಿದ್ದನು. 2 ಯೋನಾತಾನನು ದಾವೀದನಿಗೆ, “ಎಚ್ಚರಿಕೆಯಿಂದಿರು! ಸೌಲನು ನಿನ್ನನ್ನು ಕೊಲ್ಲಲು ಅವಕಾಶವನ್ನು ಕಾಯುತ್ತಿದ್ದಾನೆ. ಬೆಳಿಗ್ಗೆ, ಹೊಲದೊಳಗೆ ಹೋಗಿ ಅಡಗಿಕೊ. 3 ನಾನು ನನ್ನ ತಂದೆಯೊಡನೆ ಹೊಲಕ್ಕೆ ಬರುತ್ತೇನೆ. ನೀನು ಅಡಗಿರುವ ಸ್ಥಳದ ಹತ್ತಿರ ನಾವು ನಿಲ್ಲುತ್ತೇವೆ. ನಾನು ನನ್ನ ತಂದೆಯೊಡನೆ ನಿನ್ನ ಬಗ್ಗೆ ಮಾತನಾಡುತ್ತೇನೆ. ನಂತರ ನಾನು ತಿಳಿದುಕೊಂಡದ್ದನ್ನು ನಿನಗೆ ಹೇಳುತ್ತೇನೆ” ಎಂದನು.
4 ಯೋನಾತಾನನು ತನ್ನ ತಂದೆಯಾದ ಸೌಲನೊಂದಿಗೆ ಮಾತನಾಡಿದನು. ಯೋನಾತಾನನು ದಾವೀದನ ಬಗ್ಗೆ ಒಳ್ಳೆಯ ಸಂಗತಿಗಳನ್ನು ತಿಳಿಸಿದನು. ಯೋನಾತಾನನು, “ನೀನು ರಾಜ. ದಾವೀದನು ನಿನ್ನ ಸೇವಕ. ದಾವೀದನು ನಿನಗೆ ಯಾವ ಕೇಡನ್ನೂ ಮಾಡಿಲ್ಲ. ಆದ್ದರಿಂದ ಅವನಿಗೆ ಯಾವ ಕೇಡನ್ನೂ ಮಾಡಬೇಡ. ದಾವೀದನು ನಿನಗೆ ಯಾವಾಗಲೂ ಒಳ್ಳೆಯವನಾಗಿಯೇ ಇದ್ದಾನೆ. 5 ದಾವೀದನು ಫಿಲಿಷ್ಟಿಯನಾದ ಗೊಲ್ಯಾತನನ್ನು ಕೊಂದಾಗ ತನ್ನ ಜೀವವನ್ನೇ ಪಣವಾಗಿಟ್ಟಿದ್ದನು. ಯೆಹೋವನು ಇಸ್ರೇಲರೆಲ್ಲರಿಗೂ ಬಹು ದೊಡ್ಡ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿದೆ ಮತ್ತು ಸಂತೋಷಗೊಂಡೆ. ದಾವೀದನಿಗೆ ಕೇಡುಮಾಡಲು ನೀನು ಏಕೆ ಬಯಸಿರುವೆ? ಅವನು ನಿರಪರಾಧಿ. ಅವನನ್ನು ಕೊಲ್ಲಲು ಯಾವ ಕಾರಣವೂ ಇಲ್ಲ!” ಎಂದು ಹೇಳಿದನು.
6 ಯೋನಾತಾನನು ಹೇಳಿದ್ದನ್ನೆಲ್ಲ ಸೌಲನು ಕೇಳಿ, “ಯೆಹೋವನಾಣೆ, ದಾವೀದನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣ ಮಾಡಿ ಹೇಳಿದನು.
7 ಆದ್ದರಿಂದ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಎಲ್ಲವನ್ನೂ ತಿಳಿಸಿದನು. ಬಳಿಕ ಯೋನಾತಾನನು ದಾವೀದನನ್ನು ಸೌಲನ ಹತ್ತಿರಕ್ಕೆ ಕರೆದುಕೊಂಡು ಬಂದನು. ದಾವೀದನು ಮೊದಲಿನಂತೆ ಸೌಲನ ಜೊತೆಗಿದ್ದನು.
ದಾವೀದನನ್ನು ಕೊಲ್ಲಲು ಸೌಲನ ಮರುಪ್ರಯತ್ನ
8 ಯುದ್ಧವು ಮತ್ತೆ ಬಂದಿತು. ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಿ ಅವರನ್ನು ಸೋಲಿಸಿ ಓಡಿಸಿಬಿಟ್ಟನು. 9 ಆದರೆ ಯೆಹೋವನಿಂದ ಬಂದ ದುರಾತ್ಮವು ಸೌಲನ ಮೈಮೇಲೆ ಬಂದಿತು. ಸೌಲನು ತನ್ನ ಮನೆಯಲ್ಲಿ ಕುಳಿತಿದ್ದನು. ಸೌಲನ ಈಟಿಯು ಅವನ ಕೈಯಲ್ಲಿಯೇ ಇದ್ದಿತು. 10 ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ಸೌಲನು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಸರಿದುಕೊಂಡಿದ್ದರಿಂದ ಈಟಿಯು ಗೋಡೆಗೆ ನಾಟಿಕೊಂಡಿತು. ದಾವೀದನು ಆ ದಿನ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.
11 ಸೌಲನು ದಾವೀದನ ಮನೆಗೆ ತನ್ನ ಜನರನ್ನು ಕಳುಹಿಸಿದನು. ಅವರು ದಾವೀದನ ಮನೆಯನ್ನು ಕಾಯ್ದರು. ಅವರು ರಾತ್ರಿಯೆಲ್ಲಾ ಅಲ್ಲಿಯೇ ಇದ್ದರು. ಅವರು ದಾವೀದನನ್ನು ಬೆಳಿಗ್ಗೆ ಕೊಲ್ಲಲು ಕಾಯುತ್ತಿದ್ದರು. ಆದರೆ ದಾವೀದನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯೇ ಓಡಿಹೋಗಿ, ನಿನ್ನ ಜೀವವನ್ನು ಕಾಪಾಡಿಕೋ. ಇಲ್ಲವಾದರೆ, ನಿನ್ನನ್ನು ಅವರು ಕೊಂದುಬಿಡುತ್ತಾರೆ” ಎಂದು ಎಚ್ಚರಿಸಿದಳು. 12 ನಂತರ ಮೀಕಲಳು ಕಿಟಿಕಿಯಿಂದ ದಾವೀದನನ್ನು ಹೊರಗೆ ಇಳಿಸಿದಳು. ದಾವೀದನು ತಪ್ಪಿಸಿಕೊಂಡು ಓಡಿಹೋದನು. 13 ಮೀಕಲಳು ಮನೆಯಲ್ಲಿದ್ದ ವಿಗ್ರಹವನ್ನು ಹಾಸಿಗೆಯ ಮೇಲೆ ಇಟ್ಟು ಅದಕ್ಕೆ ಬಟ್ಟೆಗಳನ್ನು ತೊಡಿಸಿ ಅದರ ತಲೆಗೆ ಹೋತದ ಕೂದಲನ್ನೂ ಅಂಟಿಸಿದಳು.
14 ಸೌಲನು ದಾವೀದನನ್ನು ಬಂಧಿಸಿ ಕರೆತರಲು ಸಂದೇಶಕರನ್ನು ಕಳುಹಿಸಿದನು. ಆದರೆ ಮೀಕಲಳು, “ದಾವೀದನಿಗೆ ಹುಷಾರಿಲ್ಲ” ಎಂದು ಹೇಳಿದಳು.
15 ಸಂದೇಶಕರು ಹೋಗಿ ಸೌಲನಿಗೆ ವಿಷಯ ತಿಳಿಸಿದಾಗ ಅವನು ದಾವೀದನನ್ನು ನೋಡಲು ಮತ್ತೆ ಸಂದೇಶಕರನ್ನು ಕಳುಹಿಸಿದನು. ಸೌಲನು ಅವರಿಗೆ, “ದಾವೀದನನ್ನು ನನ್ನ ಬಳಿಗೆ ಕರೆತನ್ನಿ! ಹಾಸಿಗೆಯ ಮೇಲೆ ಮಲಗಿರುವ ಅವನನ್ನು ಹಾಸಿಗೆಯ ಸಮೇತವಾಗಿ ತೆಗೆದುಕೊಂಡು ಬನ್ನಿ! ನಾನು ಅವನನ್ನು ಕೊಲ್ಲುತ್ತೇನೆ” ಎಂದು ಹೇಳಿದನು.
16 ಸಂದೇಶಕರು ದಾವೀದನ ಮನೆಗೆ ಹೋದರು. ಅವರು ದಾವೀದನನ್ನು ಕರೆದೊಯ್ಯಲು ಒಳಗಡೆ ಹೋದಾಗ ಹಾಸಿಗೆಯ ಮೇಲಿರುವುದು ಕೇವಲ ವಿಗ್ರಹವೆಂಬುದೂ ಅದರ ಕೂದಲು ಕೇವಲ ಹೋತದ ಕೂದಲೆಂಬುದೂ ಅವರಿಗೆ ಗೊತ್ತಾಯಿತು.
17 ಸೌಲನು ಮೀಕಲಳಿಗೆ, “ನೀನು ಈ ರೀತಿ ನನಗೆ ಮೋಸ ಮಾಡಿದ್ದೇಕೆ? ನನ್ನ ಶತ್ರುವು ತಪ್ಪಿಸಿಕೊಳ್ಳಲು ನೀನು ಅವಕಾಶ ಮಾಡಿಕೊಟ್ಟೆ! ದಾವೀದನು ಓಡಿಹೋದನಲ್ಲಾ!” ಎಂದು ಹೇಳಿದನು.
ಮೀಕಲಳು ಸೌಲನಿಗೆ, “ತಪ್ಪಿಸಿಕೊಳ್ಳಲು ತನಗೆ ಸಹಾಯ ಮಾಡದಿದ್ದರೆ ನನ್ನನ್ನು ಕೊಲ್ಲುವುದಾಗಿ ದಾವೀದನು ತಿಳಿಸಿದ!” ಎಂದು ಹೇಳಿದಳು.
ರಾಮದ ಪಾಳೆಯದಲ್ಲಿ ದಾವೀದ
18 ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಹತ್ತಿರಕ್ಕೆ ಓಡಿಹೋದನು. ಸೌಲನು ತನಗೆ ಮಾಡಿದ್ದನ್ನೆಲ್ಲ ದಾವೀದನು ಸಮುವೇಲನಿಗೆ ಹೇಳಿದನು. ನಂತರ ದಾವೀದನು ಮತ್ತು ಸಮುವೇಲನು ಪ್ರವಾದಿಗಳಿದ್ದ ಪಾಳೆಯಕ್ಕೆ ಹೋದರು. ದಾವೀದನು ಅಲ್ಲಿ ನೆಲೆಸಿದನು.
19 ದಾವೀದನು ರಾಮದ ಪಾಳೆಯದಲ್ಲಿರುವ ಸಂಗತಿಯು ಸೌಲನಿಗೆ ತಿಳಿದುಬಂದಿತು. 20 ದಾವೀದನನ್ನು ಬಂಧಿಸಿ ತರಲು ಸೌಲನು ಜನರನ್ನು ಕಳುಹಿಸಿದನು. ಆದರೆ ಆ ಜನರು ಪಾಳೆಯಕ್ಕೆ ಬರುವಷ್ಟರಲ್ಲಿ ಪ್ರವಾದಿಗಳು ಅಲ್ಲಿ ಪ್ರವಾದಿಸುತ್ತಿದ್ದರು. ಸಮುವೇಲನು ಅವರ ನಾಯಕನಾಗಿ ನಿಂತಿದ್ದನು. ದೇವರಾತ್ಮವು ಸಂದೇಶಕರ ಮೇಲೆ ಬಂದದ್ದರಿಂದ ಅವರೂ ಪ್ರವಾದಿಸಲಾರಂಭಿಸಿದರು.
21 ಸೌಲನು ಈ ಸುದ್ದಿಯನ್ನು ಕೇಳಿ ಇತರ ಸಂದೇಶಕರನ್ನು ಕಳುಹಿಸಿದನು. ಆದರೆ ಅವರೂ ಪ್ರವಾದಿಸಲಾರಂಭಿಸಿದರು. ಆದ್ದರಿಂದ ಸೌಲನು ಮೂರನೆಯ ಬಾರಿ ಸಂದೇಶಕರನ್ನು ಕಳುಹಿಸಿದನು, ಅವರೂ ಪ್ರವಾದಿಸಲಾರಂಭಿಸಿದರು. 22 ಕಡೆಯದಾಗಿ ಸೌಲನೇ ರಾಮಕ್ಕೆ ಹೋದನು. ಸೇಕೂವಿನಲ್ಲಿ ಕಣದ ಬಳಿ ಇರುವ ದೊಡ್ಡ ಬಾವಿಯ ಸಮೀಪಕ್ಕೆ ಅವನು ಬಂದು, “ಸಮುವೇಲ ಮತ್ತು ದಾವೀದ ಎಲ್ಲಿದ್ದಾರೆ?” ಎಂದು ಕೇಳಿದನು.
ಜನರು, “ರಾಮದ ಹತ್ತಿರವಿರುವ ಪಾಳೆಯದಲ್ಲಿದ್ದಾರೆ” ಎಂದು ಉತ್ತರಕೊಟ್ಟರು.
23 ನಂತರ ಸೌಲನು ರಾಮದ ಹತ್ತಿರವಿರುವ ಪಾಳೆಯಕ್ಕೆ ಹೋದನು. ದೇವರಾತ್ಮವು ಸೌಲನ ಮೈಮೇಲೂ ಬಂದಿತು. ಅವನೂ ಪ್ರವಾದಿಸಲಾರಂಭಿಸಿದನು. ಸೌಲನು ರಾಮದ ಪಾಳೆಯದವರೆಗೂ ಪ್ರವಾದಿಸುತ್ತಾ ಹೋದನು. 24 ನಂತರ ಸೌಲನು ತಾನು ಧರಿಸಿದ್ದ ಬಟ್ಟೆಗಳನ್ನು ತೆಗೆದುಹಾಕಿದನು. ಸಮುವೇಲನ ಎದುರಿನಲ್ಲಿ ಸೌಲನೂ ಸಹ ಪ್ರವಾದಿಸುತ್ತಿದ್ದನು. ಅಂದು ಹಗಲು ರಾತ್ರಿಯೆಲ್ಲ ಸೌಲನು ಬೆತ್ತಲೆಯಾಗಿ ಅಲ್ಲಿಯೇ ಮಲಗಿದ್ದನು.
ಆದ್ದರಿಂದಲೇ ಜನರು, “ಸೌಲನೂ ಪ್ರವಾದಿಗಳಲ್ಲಿ ಒಬ್ಬನೇ?” ಎಂದು ಹೇಳುತ್ತಾರೆ.
1 ಪೌಲನು ಬರೆಯುತ್ತಿರುವ ಪತ್ರ. ಕ್ರಿಸ್ತ ಯೇಸುವಿನ ಅಪೊಸ್ತಲನಾಗುವುದಕ್ಕೆ ನಾನು ದೇವರ ಚಿತ್ತಾನುಸಾರವಾಗಿ ಕರೆಯುಲ್ಪಟ್ಟೆನು. ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ಸೊಸ್ಥೆನನೊಂದಿಗೆ ಬರೆಯುತ್ತಿದ್ದೇನೆ.
2 ಕ್ರಿಸ್ತ ಯೇಸುವಿನಲ್ಲಿ ಪವಿತ್ರರಾಗಿ ಮಾಡಲ್ಪಟ್ಟಿರುವ ಕೊರಿಂಥದ ದೇವರ ಸಭೆಯವರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟಿದ್ದೀರಿ. ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆ ಇಡುವ ಎಲ್ಲಾ ಜನರೊಂದಿಗೆ ನೀವು ಕರೆಯಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನು ಅವರಿಗೂ ನಮಗೂ ಪ್ರಭುವಾಗಿದ್ದಾನೆ.
3 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.
ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ
4 ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 5 ಯೇಸುವಿನಲ್ಲಿ ಸಕಲ ಆಶೀರ್ವಾದಗಳನ್ನು ಹೊಂದಿರುವ ನೀವು ವಾಕ್ಚತುರರೂ ಜ್ಞಾನಸಂಪನ್ನರೂ ಆಗಿದ್ದೀರಿ. 6 ಕ್ರಿಸ್ತನ ವಿಷಯವಾದ ಸತ್ಯವು ನಿಮ್ಮಲ್ಲಿ ನಿರೂಪಿಸಲ್ಪಟ್ಟಿದೆ. 7 ಹೀಗಿರಲು, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಪುನರಾಗಮನವನ್ನು ಎದುರುನೋಡುತ್ತಿರುವ ನೀವು ದೇವರಿಂದ ಬರುವ ಪ್ರತಿಯೊಂದು ವರವನ್ನು ಹೊಂದಿದವರಾಗಿದ್ದೀರಿ. 8 ಯೇಸುವು ನಿಮ್ಮನ್ನು ಕೊನೆಯವರೆಗೂ ದೃಢಪಡಿಸಿ ಕಾಪಾಡುವನು. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನೀವು ನಿರ್ದೋಷಿಗಳಾಗಿರುವಿರಿ. 9 ದೇವರು ನಂಬಿಗಸ್ತನಾಗಿದ್ದಾನೆ. ದೇವರ ಮಗನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಜೀವದಲ್ಲಿ ಪಾಲುಹೊಂದಬೇಕೆಂದು ನಮ್ಮನ್ನು ಕರೆದಿರುವಾತನು ದೇವರೇ.
ಕೊರಿಂಥ ಸಭೆಯಲ್ಲಿ ಸಮಸ್ಯೆಗಳು
10 ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.
11 ನನ್ನ ಸಹೋದರ ಸಹೋದರಿಯರೇ, ಖ್ಲೊಯೆಯ ಮನೆಯಿಂದ ಬಂದಿದ್ದ ಕೆಲವರು ನಿಮ್ಮ ಬಗ್ಗೆ ನನಗೆ ಹೇಳಿದರು. ನಿಮ್ಮ ಮಧ್ಯದಲ್ಲಿ ವಾಗ್ವಾದಗಳಿರುವುದಾಗಿ ನನಗೆ ತಿಳಿಯಿತು. 12 ಅಂದರೆ, ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ; ಮತ್ತೊಬ್ಬನು, “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಇನ್ನೊಬ್ಬನು, “ನಾನು ಕೇಫನನ್ನು (ಪೇತ್ರನನ್ನು) ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಮತ್ತೊಬ್ಬನು, “ನಾನು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ.” ಎಂದು ಹೇಳುತ್ತಾನೆ. 13 ಕ್ರಿಸ್ತನು ವಿಭಾಗವಾಗಿದ್ದಾನೋ? ಪೌಲನು ನಿಮಗೋಸ್ಕರ ಶಿಲುಬೆಯ ಮೇಲೆ ಸತ್ತನೇ? ಇಲ್ಲ! ನೀವು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರೋ? ಇಲ್ಲ! 14 ನಿಮ್ಮಲ್ಲಿ ಕ್ರಿಸ್ಪನು ಮತ್ತು ಗಾಯನು ಇವರ ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸಿಲ್ಲವಾದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 15 ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವುದಾಗಿ ಹೇಳಲು ನಿಮ್ಮಲ್ಲಿ ಯಾರಿಗೂ ಈಗ ಸಾಧ್ಯವಿಲ್ಲವಾದ್ದರಿಂದ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 16 (ಸ್ತೆಫನನ ಮನೆಯವರಿಗಲ್ಲದೆ ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದಂತೆ ನನಗೆ ತೋರುವುದಿಲ್ಲ.) 17 ಕ್ರಿಸ್ತನು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಸುವಾರ್ತೆಯನ್ನು ತಿಳಿಸುವುದಕ್ಕಾಗಿಯಷ್ಟೆ. ಆದರೆ ವಾಕ್ಚಾತುರ್ಯದಿಂದ ಸಾರುವುದಕ್ಕಾಗಿ ಕಳುಹಿಸಲಿಲ್ಲ. ನಾನೇನಾದರೂ ಲೋಕಜ್ಞಾನದಿಂದ ಸುವಾರ್ತೆ ಸಾರಿದ್ದೇಯಾದರೆ, ಕ್ರಿಸ್ತನ ಶಿಲುಬೆಯೇ ನಿರರ್ಥಕವಾಗುವುದು.
ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ
18 ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ. 19 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು.
ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.”(A)
20 ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ. 21 ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು.
22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ. 23 ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ. 24 ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ. 25 ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ.
26 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. 27 ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ. 28 ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು. 29 ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ. 30 ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ. 31 ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”
ಜೆರುಸಲೇಮಿನ ಮೇಲೆ ಭಯಂಕರ ಆಕ್ರಮಣ
4 ನೋಡು, ಬಂಗಾರವು ಹೇಗೆ ಕಪ್ಪಾಗಿದೆ.
ನೋಡು, ಶುದ್ಧಬಂಗಾರವು ಹೇಗೆ ಬದಲಾಗಿದೆ.
ಅಮೂಲ್ಯವಾದ ಕಲ್ಲುಗಳು ಎಲ್ಲೆಲ್ಲಿಯೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅವು ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
2 ಚೀಯೋನಿನ ಜನರು ಬಂಗಾರದಂತೆ ಅಮೂಲ್ಯವಾಗಿದ್ದರು.
ಆದರೆ ಈಗ ವೈರಿಗಳು ಅವರನ್ನು ಕುಂಬಾರನಿಂದ ಮಾಡಲ್ಪಟ್ಟಿರುವ ಜೇಡಿಮಣ್ಣಿನ ಹಳೆಯ ಮಡಕೆಗಳೋ ಎಂಬಂತೆ ಪರಿಗಣಿಸಿದ್ದಾರೆ.
3 ಕಾಡುನಾಯಿಯು ಸಹ ತನ್ನ ಮರಿಗಳಿಗೆ ಹಾಲನ್ನು ಕುಡಿಸುತ್ತದೆ.
ನರಿಯು ಸಹ ತನ್ನ ಮರಿಗಳಿಗೆ ಮೊಲೆಗಳಿಂದ ಹಾಲನ್ನು ಕೊಡುತ್ತದೆ.
ಆದರೆ ನನ್ನ ಜನರಾದರೋ,
ಮರುಭೂಮಿಯಲ್ಲಿ ಜೀವಿಸುವ ಉಷ್ಟ್ರಪಕ್ಷಿಯಂತೆ ಕ್ರೂರಿಗಳಾಗಿದ್ದಾರೆ.
4 ಎಳೆಕೂಸಿನ ನಾಲಿಗೆಯು
ಬಾಯಾರಿಕೆಯಿಂದ ಅಂಗಳಿಗೆ ಅಂಟಿಕೊಳ್ಳುತ್ತದೆ.
ಎಳೆಯ ಮಕ್ಕಳು ರೊಟ್ಟಿಯನ್ನು ಕೇಳಿದರೆ
ಅವರಿಗೆ ಯಾರೂ ಏನೂ ಕೊಡುವುದಿಲ್ಲ.
5 ಒಂದು ಕಾಲದಲ್ಲಿ ಮೃಷ್ಟಾನ್ನವನ್ನು ತಿಂದ ಜನರು
ಈಗ ಬೀದಿಗಳಲ್ಲಿ ಸಾಯುತ್ತಿದ್ದಾರೆ.
ಸುಂದರವಾದ ಕೆಂಪು ಉಡುಪುಗಳನ್ನು ಧರಿಸಿಕೊಂಡು ಬೆಳೆದ ಜನರು
ಈಗ ಕಸದ ಗುಂಡಿಗಳಿಂದ ಆಹಾರವನ್ನು ಎತ್ತಿಕೊಳ್ಳುತ್ತಿದ್ದಾರೆ.
6 ನನ್ನ ಜನರ ಪಾಪವು ಬಹಳವಾಗಿತ್ತು.
ಅವರ ಪಾಪವು ಸೊದೋಮ್ ಪಟ್ಟಣದ ಪಾಪಕ್ಕಿಂತಲೂ ಹೆಚ್ಚಾಗಿತ್ತು.
ಸೊದೋಮ್ ಇದ್ದಕ್ಕಿದ್ದಂತೆ ನಾಶವಾಯಿತು.
ಅದು ನಾಶವಾದದ್ದು ಯಾವ ಮಾನವನಿಂದಲೂ ಅಲ್ಲ.
7 ಯೆಹೂದದ ಕೆಲವು ಜನರು
ದೇವರಿಗೆ ವಿಶೇಷವಾದ ರೀತಿಯಲ್ಲಿ ಸಮರ್ಪಿತರಾಗಿದ್ದರು.
ಅವರು ಬಹಳ ಶುದ್ಧರಾಗಿದ್ದರು.
ಅವರು ಹಿಮಕ್ಕಿಂತಲೂ ಹಾಲಿಗಿಂತಲೂ ಬಿಳುಪಾಗಿದ್ದರು.
ಅವರ ದೇಹಗಳು ಹವಳದಂತೆ ಕೆಂಪಾಗಿದ್ದವು.
ಅವರ ಗಡ್ಡಗಳು ಇಂದ್ರನೀಲಮಣಿಯಂತಿದ್ದವು.
8 ಆದರೆ ಈಗ ಅವರ ಮುಖಗಳು ಕಪ್ಪು ಹೊಗೆಗಿಂತಲೂ ಕಪ್ಪಾಗಿವೆ.
ಅವರನ್ನು ಬೀದಿಗಳಲ್ಲಿ ಯಾರೂ ಸಹ ಗುರುತಿಸುವುದಿಲ್ಲ.
ಅವರ ಚರ್ಮವು ಅವರ ಮೂಳೆಗಳ ಮೇಲೆ ಸುಕ್ಕುಗೊಂಡಿದೆ.
ಅವರ ಚರ್ಮವು ಮರದಂತಾಗಿದೆ.
9 ಬರಗಾಲದ ನಿಮಿತ್ತ ಸತ್ತವರಿಗಿಂತಲೂ
ಖಡ್ಗಗಳಿಂದ ಹತರಾದವರ ಸಾವೇ ಮೇಲಾಗಿತ್ತು.
ಹಸಿವೆಯಿಂದಿದ್ದ ಜನರು ನೋವಿನಿಂದ ನರಳಾಡಿದರು.
ಭೂಮಿಯಿಂದ ಆಹಾರವನ್ನು ಪಡೆಯಲಾಗದೆ ಅವರು ಸತ್ತುಹೋದರು.
10 ಆ ಸಮಯದಲ್ಲಿ, ಕನಿಕರವುಳ್ಳ ಸ್ತ್ರೀಯರು
ಸಹ ತಮ್ಮ ಮಕ್ಕಳನ್ನೇ ಬೇಯಿಸಿ ತಿಂದುಬಿಟ್ಟರು.
ಆ ಮಕ್ಕಳು ಅವರ ತಾಯಂದಿರಿಗೇ ಆಹಾರವಾದರು.
ನನ್ನ ಜನರು ನಾಶಗೊಂಡಾಗ ಇದು ಸಂಭವಿಸಿತು.
11 ಯೆಹೋವನು ತನ್ನ ಕೋಪವನ್ನೆಲ್ಲ ಉಪಯೋಗಿಸಿದನು;
ತನ್ನ ಕೋಪವನ್ನೆಲ್ಲಾ ಸುರಿದುಬಿಟ್ಟನು.
ಆತನು ಚೀಯೋನಿನಲ್ಲಿ ಬೆಂಕಿ ಹೊತ್ತಿಸಿದನು.
ಆ ಬೆಂಕಿಯು ಚೀಯೋನಿನ ಅಡಿಪಾಯಗಳವರೆಗೂ ದಹಿಸಿಬಿಟ್ಟಿತು.
12 ನಡೆದಿದ್ದ ಸಂಗತಿಯನ್ನು ನಂಬುವುದಕ್ಕೂ
ಭೂಲೋಕದ ರಾಜರಿಗೆ ಆಗಲಿಲ್ಲ.
ನಡೆದಿದ್ದ ಸಂಗತಿಯನ್ನು ನಂಬುವುದಕ್ಕೂ
ಲೋಕದ ಜನರಿಗೆ ಆಗಲಿಲ್ಲ.
ಜೆರುಸಲೇಮ್ ಪಟ್ಟಣದ ಬಾಗಿಲುಗಳ ಮೂಲಕ ವೈರಿಗಳು
ಬಂದರೆಂಬುದನ್ನು ಅವರಿಗೆ ನಂಬಲೂ ಆಗಲಿಲ್ಲ.
13 ಜೆರುಸಲೇಮಿನ ಪ್ರವಾದಿಗಳು ಪಾಪ ಮಾಡಿದ್ದರಿಂದಲೇ
ಇದು ಸಂಭವಿಸಿತು.
ಜೆರುಸಲೇಮಿನ ಯಾಜಕರು ದುಷ್ಕೃತ್ಯಗಳನ್ನು ಮಾಡಿದ್ದದರಿಂದಲೇ
ಇದು ಸಂಭವಿಸಿತು.
ಆ ಜನರು ಜೆರುಸಲೇಮ್ ಪಟ್ಟಣದಲ್ಲಿ
ಒಳ್ಳೆಯ ಜನರ ರಕ್ತವನ್ನು ಸುರಿಸಿದ್ದರು.
14 ಆದ್ದರಿಂದ ಆ ಪ್ರವಾದಿಗಳು ಮತ್ತು ಯಾಜಕರು
ಕುರುಡರಂತೆ ಬೀದಿಗಳಲ್ಲಿ ಅಲೆದಾಡಿದರು.
ಅವರು ರಕ್ತದಿಂದ ಹೊಲಸಾಗಿದ್ದರು.
ಅವರು ಹೊಲಸಾಗಿದ್ದದರಿಂದ ಅವರ ಬಟ್ಟೆಯನ್ನು ಮುಟ್ಟುವುದಕ್ಕೂ ಯಾರಿಗೂ ಸಾಧ್ಯವಿರಲಿಲ್ಲ.
15 “ತೊಲಗಿಹೋಗಿ! ತೊಲಗಿಹೋಗಿ!
ನಮ್ಮನ್ನು ಮುಟ್ಟಬೇಡಿ” ಎಂದು ಜನರು ಕೂಗಿಕೊಂಡರು.
ಆ ಜನರು ಅಲೆದಾಡುತ್ತಿದ್ದರು. ಅವರಿಗೆ ಸ್ಥಳವಿರಲಿಲ್ಲ.
ಬೇರೆ ಜನಾಂಗಗಳ ಜನರು,
“ಅವರು ನಮ್ಮೊಂದಿಗೆ ವಾಸಿಸುವುದು ನಮಗೆ ಬೇಕಿಲ್ಲ” ಎಂದು ಹೇಳಿದರು.
16 ಯೆಹೋವನು ತಾನೇ ಆ ಜನರನ್ನು ನಾಶಮಾಡಿದನು.
ಅವರ ಪರಿಪಾಲನೆ ಮಾಡುವುದನ್ನು ನಿಲ್ಲಿಸಿದನು.
ಆತನು ಯಾಜಕರನ್ನು ಗೌರವಿಸಲಿಲ್ಲ.
ಆತನು ಯೆಹೂದದ ಹಿರಿಯರೊಂದಿಗೆ ಕರುಣೆಯಿಂದಿರಲಿಲ್ಲ.
17 ಸಹಾಯಕ್ಕಾಗಿ ಎದುರುನೋಡುತ್ತಾ ನಮ್ಮ ಕಣ್ಣುಗಳು ಮೊಬ್ಬಾದವು.
ಆದರೆ ಯಾವ ಸಹಾಯವೂ ಬರಲಿಲ್ಲ.
ಯಾವ ಜನಾಂಗವಾದರೂ ಬಂದು ನಮ್ಮನ್ನು ರಕ್ಷಿಸುವುದೇನೋ ಎಂದು ಕೋವರದಲ್ಲಿ ನೋಡುತ್ತಲೇ ಇದ್ದೆವು,
ಆದರೆ ಯಾವ ಜನಾಂಗವೂ ಬರಲಿಲ್ಲ.
18 ನಮ್ಮ ವೈರಿಗಳು ನಮ್ಮನ್ನು ಸತತವಾಗಿ ಬೇಟೆಯಾಡುತ್ತಿದ್ದುದರಿಂದ
ನಾವು ಬೀದಿಗಳಿಗೆ ಹೋಗಲೂ ಸಾಧ್ಯವಾಗಲಿಲ್ಲ.
ನಮ್ಮ ಅಂತ್ಯವು ಸಮೀಪಿಸಿತು.
ನಮ್ಮ ಕಾಲವು ಮುಗಿಯಿತು; ನಮ್ಮ ಕೊನೆಯು ಬಂದಿತು!
19 ನಮ್ಮನ್ನು ಅಟ್ಟಿಸಿಕೊಂಡು ಬಂದ ಜನರು
ಆಕಾಶದಲ್ಲಿ ಹಾರುವ ಹದ್ದುಗಳಿಗಿಂತಲೂ ವೇಗಶಾಲಿಗಳಾಗಿದ್ದರು.
ಅವರು ನಮ್ಮನ್ನು ಬೆಟ್ಟಗಳಿಗೆ ಅಟ್ಟಿಸಿಕೊಂಡು ಬಂದರು.
ನಮ್ಮನ್ನು ಹಿಡಿಯುವುದಕ್ಕಾಗಿ ಮರುಭೂಮಿಯಲ್ಲಿ ಅವಿತುಕೊಂಡರು.
20 ನಮಗೆ ರಾಜನು ಬಹಳ ಮುಖ್ಯವಾಗಿದ್ದನು.
ಅವನು ನಮಗೆ ಉಸಿರಿನಷ್ಟೇ ಅಮೂಲ್ಯವಾಗಿದ್ದನು.
ಆದರೆ ಅವರು ರಾಜನನ್ನೇ ಸೆರೆಹಿಡಿದರು.
ಯೆಹೋವನೇ, ಆ ರಾಜನನ್ನು ಆರಿಸಿಕೊಂಡಿದ್ದನು.
“ನಾವು ಅವನ ನೆರಳಿನಲ್ಲಿ ಬದುಕುತ್ತೇವೆ.
ಅವನು ನಮ್ಮನ್ನು ಜನಾಂಗಗಳವರಿಂದ ಸಂರಕ್ಷಿಸುವನು”
ಎಂದು ನಾವು ರಾಜನ ಬಗ್ಗೆ ಹೇಳಿಕೊಂಡಿದ್ದೆವು.
21 ಎದೋಮಿನ ಜನರೇ, ಸಂತೋಷವಾಗಿರಿ.
ಊಚ್ ದೇಶದಲ್ಲಿ ವಾಸವಾಗಿರುವ ಜನರೇ, ಸಂತೋಷವಾಗಿರಿ.
ಆದರೆ ಜ್ಞಾಪಕದಲ್ಲಿಟ್ಟುಕೊಂಡಿರಿ, ಯೆಹೋವನ ಕೋಪದ ಪಾತ್ರೆಯು ನಿಮ್ಮ ಬಳಿಗೂ ಬರುವುದು.
ನೀವು ಆ ಪಾತ್ರೆಯಿಂದ ಕುಡಿಯುವಾಗ
ಮತ್ತೇರಿದವರಾಗಿ ನಿಮ್ಮನ್ನು ನೀವೇ ಬೆತ್ತಲು ಮಾಡಿಕೊಳ್ಳುವಿರಿ.
22 ಚೀಯೋನೇ, ನಿನಗಾಗಬೇಕಿದ್ದ ದಂಡನೆಯು ಸಂಪೂರ್ಣವಾಯಿತು.
ಮತ್ತೆ ನೀನು ಸೆರೆವಾಸಕ್ಕೆ ಹೋಗುವುದಿಲ್ಲ.
ಆದರೆ ಎದೋಮಿನ ಜನರೇ, ನಿಮ್ಮ ಪಾಪಗಳಿಗಾಗಿ ಯೆಹೋವನು ನಿಮ್ಮನ್ನು ದಂಡಿಸುವನು.
ಆತನು ನಿಮ್ಮ ಪಾಪಗಳನ್ನು ಬಹಿರಂಗಪಡಿಸುವನು.
ರಚನೆಗಾರ: ದಾವೀದ.
35 ಯೆಹೋವನೇ, ನನ್ನ ವ್ಯಾಜ್ಯಗಳಲ್ಲಿ ವಾದಿಸು!
ನನ್ನ ಯುದ್ಧಗಳಲ್ಲಿ ಹೋರಾಡು!
2 ಯೆಹೋವನೇ, ಗುರಾಣಿಗಳನ್ನು ಹಿಡಿದುಕೊಂಡು
ನನಗೆ ಸಹಾಯಕನಾಗಿ ನಿಲ್ಲು.
3 ಈಟಿಯನ್ನೂ ಭಲ್ಲೆಯನ್ನೂ[a] ತೆಗೆದುಕೊ.
ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿರುವ ವೈರಿಗಳೊಡನೆ ಹೋರಾಡು.
“ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂಬ ಅಭಯವಚನ ನೀಡು.
4 ನನ್ನನ್ನು ಕೊಲ್ಲಬೇಕೆಂದಿರುವವರು ನಿರಾಶೆಗೊಂಡು ನಾಚಿಕೆಗೀಡಾಗಲಿ.
ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
5 ಅವರು ಗಾಳಿಬಡಿದುಕೊಂಡು ಹೋಗುವ ಹೊಟ್ಟಿನಂತಾಗಲಿ;
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
6 ಯೆಹೋವನೇ, ಅವರ ರಸ್ತೆಯು ಕತ್ತಲಾಗಿರಲಿ; ಜಾರುತ್ತಿರಲಿ.
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
7 ನಾನು ನಿರಪರಾಧಿಯಾಗಿದ್ದರೂ ಅವರು ನನಗೆ ಬಲೆಯೊಡ್ಡಿದ್ದಾರೆ.
ನಿಷ್ಕಾರಣವಾಗಿ ಅವರು ನನಗೆ ಬಲೆಯೊಡ್ಡಿದ್ದಾರೆ.
8 ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಕೊಳ್ಳಲಿ;
ತಾವು ತೋಡಿದ ಗುಂಡಿಯೊಳಗೆ ತಾವೇ ಮುಗ್ಗರಿಸಿ ಬೀಳಲಿ.
ಇದ್ದಕ್ಕಿದಂತೆ ಅಪಾಯವು ಅವರನ್ನು ಹಿಡಿದುಕೊಳ್ಳಲಿ.
9 ಆಗ ನಾನು ಯೆಹೋವನಲ್ಲಿ ಹರ್ಷಿಸುವೆನು.
ಆತನು ನನ್ನನ್ನು ರಕ್ಷಿಸಿದ್ದರಿಂದ ಸಂತೋಷಪಡುವೆನು.
10 ಯೆಹೋವನೇ, ಹೃದಯಪೂರ್ವಕವಾಗಿ ಹೇಳುವೆ,
“ನಿನಗೆ ಸಮಾನರು ಇಲ್ಲವೇ ಇಲ್ಲ.
ಬಡವರನ್ನು ಬಲಿಷ್ಠರಿಂದ ತಪ್ಪಿಸಿ ರಕ್ಷಿಸುವಾತನು ನೀನೇ.
ಬಲಿಷ್ಠರನ್ನು ಸೂರೆಮಾಡಿ ಬಡವರಿಗೂ ಅಸಹಾಯಕರಿಗೂ ಕೊಡುವಾತನು ನೀನೇ.”
11 ಸುಳ್ಳುಸಾಕ್ಷಿಗಳು ನನಗೆ ಕೇಡುಮಾಡಬೇಕೆಂದಿದ್ದಾರೆ.
ನನಗೆ ತಿಳಿಯದ ವಿಷಯಗಳ ಮೇಲೆ ಅವರು ಪ್ರಶ್ನೆಗಳನ್ನು ಕೇಳುವರು.
12 ನಾನು ಅವರಿಗೆ ಉಪಕಾರಗಳನ್ನು ಮಾಡಿದ್ದರೂ ಅವರು ನನಗೆ ಅಪಕಾರಗಳನ್ನೇ ಮಾಡುತ್ತಾರೆ.
ಯೆಹೋವನೇ, ನನಗೆ ಯೋಗ್ಯವಾದವುಗಳನ್ನು ದಯಪಾಲಿಸು.
13 ಅವರು ಅಸ್ವಸ್ಥರಾಗಿದ್ದಾಗ ನಾನು ದುಃಖಪಟ್ಟೆನು; ಉಪವಾಸ ಮಾಡಿದೆನು.
ನಾನು ಅವರಿಗೋಸ್ಕರ ಪ್ರಾರ್ಥಿಸಿದ್ದಕ್ಕೆ ಇದು ನನಗೆ ಪ್ರತಿಫಲವೇ?
14 ಅವರು ಅಸ್ವಸ್ಥರಾಗಿದ್ದಾಗ ಶೋಕವಸ್ತ್ರಗಳನ್ನು ಧರಿಸುತ್ತಿದ್ದೆನು.
ಅವರನ್ನು ನನ್ನ ಸ್ನೇಹಿತರಂತೆಯೂ ಸಹೋದರರಂತೆಯೂ ಉಪಚರಿಸಿದೆನು;
ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅತ್ತೆನು.
15 ಆದರೆ ನಾನು ಆಪತ್ತಿನಲ್ಲಿದ್ದಾಗ ಅವರು ನನ್ನನ್ನು ಗೇಲಿಮಾಡಿದರು,
ಅವರು ನನ್ನ ನಿಜವಾದ ಸ್ನೇಹಿತರಲ್ಲ;
ಅವರ ಪರಿಚಯವೂ ನನಗಿರಲಿಲ್ಲ.
ಅವರು ನನ್ನ ಸುತ್ತಲೂ ಸೇರಿಬಂದು ನನ್ನ ಮೇಲೆ ಆಕ್ರಮಣ ಮಾಡಿದರು.
16 ಅವರು ಕೆಟ್ಟಮಾತಿನಿಂದ ನನ್ನನ್ನು ಹಾಸ್ಯಮಾಡಿದರು;
ನನ್ನ ಮೇಲಿನ ಕೋಪದಿಂದ ಹಲ್ಲುಕಡಿದರು.
17 ನನ್ನ ಒಡೆಯನೇ, ಇವುಗಳನ್ನು ಇನ್ನೆಷ್ಟುಕಾಲ ನೋಡುತ್ತಾ ಇರುವೆ?
ಅವರು ನನ್ನನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ.
ನನ್ನ ಪ್ರಾಣವನ್ನು ರಕ್ಷಿಸು;
ಸಿಂಹಗಳಂತಿರುವ ಆ ದುಷ್ಟರಿಂದ ನನ್ನ ಪ್ರಿಯ ಪ್ರಾಣವನ್ನು ರಕ್ಷಿಸು.
18 ಆಗ ನಾನು ನಿನ್ನನ್ನು ಮಹಾಸಭೆಯಲ್ಲಿ ಸ್ತುತಿಸುವೆನು;
ಬಲಿಷ್ಠರ ಸಮೂಹದಲ್ಲಿ ನಿನ್ನನ್ನು ಕೊಂಡಾಡುವೆನು.
19 ಸುಳ್ಳುಗಾರರಾದ ನನ್ನ ವೈರಿಗಳು ಇನ್ನು ಮೇಲೆ ಹಿಗ್ಗಲಾರರು.
ನನ್ನ ವೈರಿಗಳು ತಮ್ಮ ಒಳಸಂಚುಗಳಿಗೆ ಖಂಡಿತವಾಗಿ ದಂಡಿಸಲ್ಪಡುವರು.
20 ನನ್ನ ವೈರಿಗಳು ಶಾಂತಿಸ್ಥಾಪನೆಗಾಗಿ ಯಾವ ಆಲೋಚನೆಗಳನ್ನೂ ಮಾಡುತ್ತಿಲ್ಲ.
ಈ ದೇಶದಲ್ಲಿ ಶಾಂತಿಯಿಂದಿರುವ ಜನರಿಗೆ ಕೇಡುಮಾಡಲು ಅವರು ಒಳಸಂಚುಗಳನ್ನು ಮಾಡುತ್ತಿದ್ದಾರೆ.
21 ನನ್ನ ವೈರಿಗಳು ನನ್ನನ್ನು ದೂಷಿಸುವರು.
“ಆಹಾ! ನೀನು ಮಾಡುತ್ತಿರುವುದು ನಮಗೆ ಗೊತ್ತು!” ಎನ್ನುವರು.
22 ಯೆಹೋವನೇ, ಇದೆಲ್ಲವನ್ನೂ ನೀನು ನೋಡಿರುವೆ,
ಆದ್ದರಿಂದ ಸುಮ್ಮನಿರಬೇಡ; ನನ್ನ ಕೈಬಿಡಬೇಡ.
23 ಎಚ್ಚರಗೊಳ್ಳು! ಎದ್ದೇಳು!
ನನ್ನ ದೇವರೇ, ಯೆಹೋವನೇ, ನನಗಾಗಿ ಹೋರಾಡು; ನನಗೆ ನ್ಯಾಯವನ್ನು ದೊರಕಿಸು.
24 ನನ್ನ ದೇವರಾದ ಯೆಹೋವನೇ, ನಿನ್ನ ನೀತಿಗನುಸಾರವಾಗಿ ನನಗೆ ನ್ಯಾಯದೊರಕಿಸು.
ಅವರು ನನ್ನನ್ನು ನೋಡಿ ನಗಲು ಆಸ್ಪದ ಕೊಡಬೇಡ.
25 ಅವರು, “ಆಹಾ! ನಾವು ಬಯಸಿದ್ದನ್ನೇ ಪಡೆದೆವು!” ಎಂದು ಹೇಳಲು ಅವಕಾಶಕೊಡಬೇಡ.
“ನಾವು ಅವನನ್ನು ನಾಶಮಾಡಿದೆವು!” ಎಂದು ಹೇಳಲು ಅವರಿಗೆ ಆಸ್ಪದ ಕೊಡಬೇಡ.
26 ನನ್ನ ವೈರಿಗಳೆಲ್ಲಾ ಅವಮಾನಕ್ಕೂ ನಾಚಿಕೆಗೂ ಗುರಿಯಾಗಲಿ.
ನನಗೆ ಕೇಡಾದಾಗ ಅವರು ಸಂತೋಷಪಟ್ಟರು;
ತಮ್ಮನ್ನು ನನಗಿಂತಲೂ ಉತ್ತಮರೆಂದು ಭಾವಿಸಿಕೊಂಡರು!
ಆದ್ದರಿಂದ ಅವರನ್ನು ಅವಮಾನವೂ ನಾಚಿಕೆಯೂ ಆವರಿಸಿಕೊಳ್ಳಲಿ.
27 ನನಗೆ ನ್ಯಾಯ ದೊರೆಯಲೆಂದು ಅಪೇಕ್ಷಿಸುವವರು ಸಂತೋಷಪಡಲಿ.
“ಯೆಹೋವನು ಎಷ್ಟೋ ದೊಡ್ಡವನು!
ಆತನು ತನ್ನ ಸೇವಕನಿಗೆ ಅತ್ಯುತ್ತಮವಾದುದನ್ನೇ ಮಾಡಿದನು” ಎಂದು
ಅವರು ಹೇಳುತ್ತಲೇ ಇರಲಿ.
28 ನಿನ್ನ ನೀತಿಯ ಕುರಿತು ನಾನು ಜನರಿಗೆ ಹೇಳುವೆನು;
ಪ್ರತಿದಿನವೂ ನಿನ್ನನ್ನು ಸ್ತುತಿಸುವೆನು.
Kannada Holy Bible: Easy-to-Read Version. All rights reserved. © 1997 Bible League International