Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 18

ದಾವೀದ ಮತ್ತು ಯೋನಾತಾನರು ಆತ್ಮೀಯ ಗೆಳೆಯರಾದರು

18 ದಾವೀದನು ಸೌಲನೊಂದಿಗೆ ಮಾತನಾಡಿದ ಬಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನು ಪ್ರೀತಿಸುವಷ್ಟೇ ದಾವೀದನನ್ನು ಪ್ರೀತಿಸಲಾರಂಭಿಸಿದನು. ಸೌಲನು ಅಂದಿನಿಂದ ದಾವೀದನನ್ನು ತನ್ನ ಜೊತೆಯಲ್ಲಿಯೇ ಇರಿಸಿಕೊಂಡನು. ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಲು ಬಿಡಲಿಲ್ಲ. ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವನು ದಾವೀದನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೋನಾತಾನನು ತಾನು ಧರಿಸಿದ್ದ ಮೇಲಂಗಿಯನ್ನೂ ತನ್ನ ಸಮವಸ್ತ್ರಗಳನ್ನೂ ತನ್ನ ಬಿಲ್ಲನ್ನೂ ಕತ್ತಿಯನ್ನೂ ಸೊಂಟಪಟ್ಟಿಯನ್ನೂ ದಾವೀದನಿಗೆ ಕೊಟ್ಟನು.

ಸೌಲನು ದಾವೀದನ ಯಶಸ್ಸನ್ನು ಗಮನಿಸಿದನು

ಸೌಲನು ದಾವೀದನನ್ನು ಬೇರೆಬೇರೆ ಯುದ್ಧಗಳಲ್ಲಿ ಹೋರಾಡಲು ಕಳುಹಿಸಿದನು. ದಾವೀದನು ಆ ಯುದ್ಧಗಳಲ್ಲೆಲ್ಲಾ ಯಶ್ವಸಿಯಾದನು. ಆದ್ದರಿಂದ ಸೌಲನು ದಾವೀದನನ್ನು ಸೈನ್ಯಾಧಿಪತಿಯನ್ನಾಗಿ ನೇಮಿಸಿದನು. ಇದು ಸೌಲನ ಅಧಿಕಾರಿಗಳಿಗೂ ಇತರರಿಗೂ ಸಂತಸವನ್ನು ಉಂಟುಮಾಡಿತು! ದಾವೀದನು ಫಿಲಿಷ್ಟಿಯರೊಡನೆ ಹೋರಾಡಲು ಹೋಗುತ್ತಿದ್ದನು. ಯುದ್ಧದ ನಂತರ ಅವನು ಮನೆಗೆ ಹಿಂದಿರುಗುತ್ತಿದ್ದನು. ಇಸ್ರೇಲಿನ ಎಲ್ಲ ಪಟ್ಟಣಗಳಲ್ಲೂ ಹೆಂಗಸರು ದಾವೀದನನ್ನು ನೋಡುವುದಕ್ಕಾಗಿ ಹೊರಬರುತ್ತಿದ್ದರು. ಅವರು ಡೋಲು ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಕೇಕೆ ಹಾಕಿ ನಗುತ್ತಾ ನರ್ತಿಸುತ್ತಿದ್ದರು. ಅವರು ಸೌಲನ ಸಮ್ಮುಖದಲ್ಲಿಯೇ ಇವನ್ನೆಲ್ಲ ಮಾಡುತ್ತಿದ್ದರು. ಹೆಂಗಸರು,

“ಸೌಲನು ಸಾವಿರಾರು ಶತ್ರುಗಳನ್ನು ಕೊಂದರೆ,
    ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು”

ಎಂದು ಹಾಡುತ್ತಿದ್ದರು.

ಹೆಂಗಸರ ಈ ಹಾಡಿನಿಂದ ಸೌಲನು ಬಹಳವಾಗಿ ವ್ಯಸನಗೊಂಡನು ಮತ್ತು ರೋಷಗೊಂಡನು. “ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು ಎಂದು ಇವರು ಹಾಡುತ್ತಾರಲ್ಲಾ, ಇವನಿಗೆ ರಾಜ್ಯವೊಂದನ್ನು ಬಿಟ್ಟು ಬೇರೆ ಏನು ಕಡಿಮೆಯಾಯಿತು?” ಎಂದು ಆಲೋಚಿಸತೊಡಗಿದನು. “ಸೌಲನು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದ ಹೆಂಗಸರ ಮಾತುಗಳಿಂದ ಸೌಲನು ಚಿಂತೆಗೀಡಾದನು. ಸೌಲನು ಅಂದಿನಿಂದ ದಾವೀದನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.

ಸೌಲನು ದಾವೀದನಿಗೆ ಭಯಪಟ್ಟನು

10 ಮಾರನೆಯ ದಿನ, ದೇವರಿಂದ ಬಂದ ದುರಾತ್ಮವು ಸೌಲನನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿತು. ಸೌಲನು ತನ್ನ ಮನೆಯಲ್ಲಿ ಹುಚ್ಚನಂತೆ ಕೂಗಿಕೊಳ್ಳುತ್ತಿದ್ದನು. ಆಗ ದಾವೀದನು ಎಂದಿನಂತೆ ಕಿನ್ನರಿಯನ್ನು ಬಾರಿಸುತ್ತಿದ್ದನು. 11 ಸೌಲನ ಕೈಯಲ್ಲಿ ಒಂದು ಈಟಿಯಿತ್ತು. “ಗೋಡೆಗೆ ಹತ್ತಿಕೊಳ್ಳುವಂತೆ ನಾನು ದಾವೀದನನ್ನು ತಿವಿಯುವೆ” ಎಂದು ಅವನು ಯೋಚಿಸಿ ಎರಡು ಬಾರಿ ಈಟಿಯನ್ನು ಎಸೆದನು. ಆದರೆ ದಾವೀದನು ಎರಡು ಸಲವೂ ತಪ್ಪಿಸಿಕೊಂಡನು.

12 ಯೆಹೋವನು ಸೌಲನನ್ನು ಬಿಟ್ಟು ದಾವೀದನ ಜೊತೆಗಿದ್ದನು. ಆದ್ದರಿಂದ ಸೌಲನು ದಾವೀದನಿಗೆ ಭಯಪಟ್ಟನು. 13 ಸೌಲನು ದಾವೀದನನ್ನು ತನ್ನಿಂದ ದೂರಕಳುಹಿಸಿದನು. ಸೌಲನು ದಾವೀದನನ್ನು ಒಂದು ಸಾವಿರ ಸೈನಿಕರಿಗೆ ಸೇನಾಪತಿಯನ್ನಾಗಿ ಮಾಡಿದನು. ದಾವೀದನು ಯುದ್ಧದಲ್ಲಿ ಸೈನಿಕರನ್ನು ಮುನ್ನಡೆಸಿದನು. 14 ಯೆಹೋವನು ದಾವೀದನ ಜೊತೆಗಿದ್ದನು. ಆದ್ದರಿಂದ ದಾವೀದನು ಎಲ್ಲದರಲ್ಲೂ ಯಶ್ವಸಿಯಾದನು. 15 ದಾವೀದನು ಬಹಳವಾಗಿ ಯಶ್ವಸಿಯಾಗುತ್ತಿರುವುದನ್ನು ಕಂಡ ಸೌಲನು ದಾವೀದನಿಗೆ ಮತ್ತಷ್ಟು ಭಯಪಟ್ಟನು. 16 ಆದರೆ ಇಸ್ರೇಲಿನ ಮತ್ತು ಯೆಹೂದದ ಜನರೆಲ್ಲ ದಾವೀದನನ್ನು ಪ್ರೀತಿಸಿದರು. ಅವನು ಯುದ್ಧದಲ್ಲಿ ಅವರನ್ನು ಮುನ್ನಡೆಸಿದ್ದರಿಂದ ಮತ್ತು ಅವರಿಗೋಸ್ಕರ ಹೋರಾಡಿದ್ದರಿಂದ ಅವರು ಅವನನ್ನು ಬಹಳವಾಗಿ ಪ್ರೀತಿಸಿದರು.

ಸೌಲನ ಮಗಳೊಂದಿಗೆ ದಾವೀದನ ಮದುವೆ

17 ಆದರೆ ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದನು. ದಾವೀದನಿಗೆ ಮೋಸಮಾಡಲು ಸೌಲನು ಒಂದು ಉಪಾಯವನ್ನು ಹೂಡಿ ಅವನಿಗೆ, “ನನ್ನ ಹಿರಿಯ ಮಗಳಾದ ಮೇರಬಳು ಇದ್ದಾಳೆ. ನಾನು ಅವಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆಗ ನೀನೊಬ್ಬ ಬಲಶಾಲಿಯಾದ ಸೈನಿಕನಾಗುವೆ. ನೀನು ನನಗೆ ಮಗನಂತಿರುವೆ! ನಂತರ ನೀನು ಹೋಗಿ ಯೆಹೋವನ ಯುದ್ಧಗಳಲ್ಲಿ ಹೋರಾಡು” ಎಂದು ಹೇಳಿದನು. ಆದರೆ ಇದೊಂದು ಮೋಸವಾಗಿತ್ತು. “ಈಗ ನಾನು ದಾವೀದನನ್ನು ಕೊಲ್ಲುವ ಅಗತ್ಯವಿಲ್ಲ. ನನಗೋಸ್ಕರ ಫಿಲಿಷ್ಟಿಯರೇ ಅವನನ್ನು ಕೊಲ್ಲುವಂತೆ ಮಾಡುತ್ತೇನೆ” ಎಂಬದು ಸೌಲನ ನಿಜವಾದ ಆಲೋಚನೆಯಾಗಿತ್ತು.

18 ಆದರೆ ದಾವೀದನು, “ನಾನು ಪ್ರಮುಖ ಕುಲದವನೂ ಅಲ್ಲ; ಪ್ರಮುಖನಾದ ವ್ಯಕ್ತಿಯೂ ಅಲ್ಲ! ರಾಜನ ಮಗಳನ್ನು ಮದುವೆಯಾಗಲು ನಾನು ಯೋಗ್ಯನಲ್ಲ” ಎಂದು ಹೇಳಿದನು.

19 ಸೌಲನ ಮಗಳಾದ ಮೇರಾಬಳಿಗೆ ದಾವೀದನನ್ನು ಮದುವೆಯಾಗುವ ಕಾಲ ಬಂದಾಗ, ಸೌಲನು ಅವಳನ್ನು ಮೆಹೋಲದ ಅದ್ರೀಯೇಲನಿಗೆ ಮದುವೆ ಮಾಡಿಕೊಟ್ಟನು.

20 ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನು ಸೌಲನಿಗೆ ಜನರು ತಿಳಿಸಿದರು. ಸೌಲನಿಗೆ ಇದು ಸಂತಸವನ್ನು ಉಂಟುಮಾಡಿತು. 21 ಸೌಲನು, “ನಾನು ದಾವೀದನನ್ನು ಬಲೆಗೆ ಬೀಳಿಸಲು ಮೀಕಲಳನ್ನು ಬಳಸಿಕೊಳ್ಳುತ್ತೇನೆ. ದಾವೀದನನ್ನು ಮದುವೆಯಾಗಲು ನಾನು ಮೀಕಲಳಿಗೆ ಅವಕಾಶ ಕೊಡುತ್ತೇನೆ. ನಂತರ ಅವನನ್ನು ಕೊಲ್ಲಲು ಫಿಲಿಷ್ಟಿಯರಿಗೆ ಬಿಟ್ಟುಕೊಡುತ್ತೇನೆ” ಎಂದು ಯೋಚಿಸಿದನು. ಹೀಗೆ ಸೌಲನು ಎರಡನೆಯ ಸಲ ದಾವೀದನಿಗೆ, “ನೀನು ನನ್ನ ಮಗಳನ್ನು ಇಂದು ಮದುವೆಯಾಗು” ಎಂದು ಹೇಳಿದನು.

22 ಸೌಲನು ತನ್ನ ಅಧಿಕಾರಿಗಳಿಗೆ ಅಪ್ಪಣೆ ಮಾಡಿದನು. ಸೌಲನು ಅವರಿಗೆ, “ದಾವೀದನೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ‘ರಾಜನು ನಿನ್ನನ್ನು ಇಷ್ಟಪಟ್ಟಿದ್ದಾನೆ. ಅವನ ಅಧಿಕಾರಿಗಳೂ ನಿನ್ನನ್ನು ಇಷ್ಟಪಡುತ್ತಾರೆ. ನೀನು ಅವನ ಮಗಳನ್ನು ಮದುವೆಯಾಗಬೇಕು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು.

23 ಸೌಲನ ಅಧಿಕಾರಿಗಳು ದಾವೀದನಿಗೆ ಆ ವಿಚಾರಗಳನ್ನು ತಿಳಿಸಿದರು. ಆದರೆ ದಾವೀದನು, “ರಾಜನ ಅಳಿಯನಾಗುವುದು ಸುಲಭವೆಂದು ನೀವು ತಿಳಿದಿರುವಿರಾ? ರಾಜನ ಮಗಳಿಗೆ ಕೊಡಲು ನನ್ನ ಹತ್ತಿರ ಹಣವೇ ಇಲ್ಲ! ನಾನು ಕೇವಲ ಬಡವ, ಸಾಮಾನ್ಯ ಮನುಷ್ಯ” ಎಂದು ಉತ್ತರಿಸಿದನು.

24 ದಾವೀದನು ತಿಳಿಸಿದ್ದನ್ನೆಲ್ಲ ಸೌಲನ ಅಧಿಕಾರಿಗಳು ಸೌಲನಿಗೆ ಹೇಳಿದರು. 25 ಸೌಲನು ಅವರಿಗೆ, “ನೀವು ದಾವೀದನ ಬಳಿಗೆ ಹೋಗಿ ಹೇಳಿ: ‘ನೀನು ರಾಜನ ಮಗಳಿಗಾಗಿ ಹಣ ಕೊಡಬೇಕಿಲ್ಲ. ಸೌಲನು ತನ್ನ ಶತ್ರುಗಳ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಆದ್ದರಿಂದ ಅವನ ಮಗಳನ್ನು ಮದುವೆಯಾಗಲು ಕೊಡಬೇಕಾದ ದಕ್ಷಿಣೆ ಏನೆಂದರೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲುಗಳು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು. ಸೌಲನ ರಹಸ್ಯವಾದ ಉಪಾಯ ಇದಾಗಿದ್ದಿತು. ಫಿಲಿಷ್ಟಿಯರು ದಾವೀದನನ್ನು ಕೊಂದು ಬಿಡಬಹುದೆಂದು ಸೌಲನು ಭಾವಿಸಿದ್ದನು.

26 ಸೌಲನ ಅಧಿಕಾರಿಗಳು ಆ ಸಂಗತಿಗಳನ್ನು ದಾವೀದನಿಗೆ ತಿಳಿಸಿದರು. ದಾವೀದನು ರಾಜನ ಅಳಿಯನಾಗಬೇಕೆಂದು ಬಯಸಿದನು. ಆದ್ದರಿಂದ ಅವನು ತಕ್ಷಣವೇ ಕಾರ್ಯನಿರತನಾದನು. 27 ದಾವೀದನು ಮತ್ತು ಅವನ ಜನರು ಫಿಲಿಷ್ಟಿಯರೊಂದಿಗೆ ಹೋರಾಡಲು ಹೋದರು. ಅವರು ಇನ್ನೂರು ಜನ ಫಿಲಿಷ್ಟಿಯರನ್ನು ಕೊಂದು ಅವರ ಮುಂದೊಗಲುಗಳನ್ನು ತೆಗೆದುಕೊಂಡು ಬಂದು ರಾಜನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಸಂಪೂರ್ಣವಾಗಿ ಸೌಲನಿಗೆ ಒಪ್ಪಿಸಿದರು.

ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ದಾವೀದನಿಗೆ ಮದುವೆ ಮಾಡಿಕೊಟ್ಟನು. 28 ಯೆಹೋವನು ದಾವೀದನೊಂದಿಗಿರುವುದನ್ನೂ ತನ್ನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನೂ ಸೌಲನು ಗಮನಿಸಿದನು. 29 ಆದ್ದರಿಂದ ಸೌಲನು ದಾವೀದನಿಗೆ ಇನ್ನೂ ಹೆಚ್ಚು ಭಯಪಟ್ಟನು. ಸೌಲನು ಆ ಕಾಲದಲ್ಲೆಲ್ಲ ದಾವೀದನಿಗೆ ವಿರೋಧವಾಗಿದ್ದನು.

30 ಫಿಲಿಷ್ಟಿಯ ಸೇನಾಧಿಪತಿಗಳು ಇಸ್ರೇಲರೊಂದಿಗೆ ಹೋರಾಡಲು ಹೋಗುತ್ತಲೇ ಇದ್ದರು. ಆದರೆ ದಾವೀದನು ಪ್ರತಿಸಲವೂ ಅವರನ್ನು ಸೋಲಿಸುತ್ತಿದ್ದನು. ದಾವೀದನು ಸೌಲನ ಒಬ್ಬ ಯಶಸ್ವಿಯಾದ ಅಧಿಕಾರಿಯಾಗಿದ್ದನು! ಆದ್ದರಿಂದ ದಾವೀದನು ಪ್ರಖ್ಯಾತನಾದನು.

ರೋಮ್ನಗರದವರಿಗೆ 16

ಪೌಲನ ಕೊನೆ ಮಾತುಗಳು

16 ಕ್ರಿಸ್ತನಲ್ಲಿ ನಮ್ಮ ಸಹೋದರಿಯಾದ ಪೊಯಿಬೆಯನ್ನು ನಾನು ನಿಮಗೆ ಶಿಫಾರಸು ಮಾಡಲಿಚ್ಛಿಸುತ್ತೇನೆ. ಈಕೆಯು ಕೆಂಕ್ರೆಯ ಪಟ್ಟಣದ ಸಭೆಯಲ್ಲಿ ವಿಶೇಷ ಸಹಾಯಕಳಾಗಿದ್ದಾಳೆ. ನೀವು ಆಕೆಯನ್ನು ಪ್ರಭುವಿನ ಹೆಸರಿನಲ್ಲಿ ಸ್ವೀಕರಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ದೇವಜನರಿಗೆ ತಕ್ಕಂತೆ ಈಕೆಯನ್ನು ಸ್ವೀಕರಿಸಿಕೊಳ್ಳಿರಿ. ಆಕೆಗೆ ಬೇಕಾದ ಸಹಾಯಗಳನ್ನೆಲ್ಲಾ ಮಾಡಿರಿ. ಆಕೆಯು ನನಗೆ ಬಹಳವಾಗಿ ಸಹಾಯ ಮಾಡಿದ್ದಾಳೆ. ಅಲ್ಲದೆ ಇತರ ಅನೇಕ ಜನರಿಗೂ ಆಕೆ ಸಹಾಯ ಮಾಡಿದ್ದಾಳೆ.

ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆ ತಿಳಿಸಿರಿ. ಅವರು ಕ್ರಿಸ್ತ ಯೇಸುವಿನಲ್ಲಿ ನನ್ನೊಂದಿಗೆ ಸೇವೆ ಮಾಡುತ್ತಿದ್ದಾರೆ. ಅವರು ನನ್ನ ಪ್ರಾಣವನ್ನು ಉಳಿಸುವುದಕ್ಕಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡುಮಾಡಿದರು. ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಯೆಹೂದ್ಯರಲ್ಲದ ಸಭೆಗಳವರೆಲ್ಲರೂ ಅವರಿಗೆ ಕೃತಜ್ಞರಾಗಿದ್ದಾರೆ.

ಅಲ್ಲದೆ ಅವರ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನ ಪ್ರಿಯ ಸ್ನೇಹಿತನಾದ ಎಪೈನೆತನಿಗೆ ನನ್ನ ವಂದನೆ ತಿಳಿಸಿರಿ.

ಏಷ್ಯಾದಲ್ಲಿ ಕ್ರಿಸ್ತನನ್ನು ಹಿಂಬಾಲಿಸಿದವರಲ್ಲಿ ಅವನೇ ಮೊಟ್ಟಮೊದಲನೆಯವನಾಗಿದ್ದಾನೆ.

ಮರಿಯಳಿಗೆ ನನ್ನ ವಂದನೆ ತಿಳಿಸಿರಿ. ಆಕೆ ನಿಮಗೋಸ್ಕರ ಬಹು ಕಷ್ಟಪಟ್ಟು ಕೆಲಸ ಮಾಡಿದಳು.

ಆಂದ್ರೋನಿಕನಿಗೆ ಮತ್ತು ಯೂನ್ಯನಿಗೆ ನನ್ನ ವಂದನೆ ತಿಳಿಸಿರಿ. ಅವರು ನನ್ನ ಸಂಬಂಧಿಕರಾಗಿದ್ದಾರೆ. ಅಲ್ಲದೆ ಅವರು ನನ್ನೊಂದಿಗೆ ಸೆರೆಮನೆಯಲ್ಲಿದ್ದರು. ದೇವರ ಅತ್ಯಂತ ಮುಖ್ಯಸೇವಕರುಗಳಲ್ಲಿ[a] ಅವರೂ ಸೇರಿದ್ದಾರೆ. ಅವರು ನನಗಿಂತ ಮೊದಲೇ ಕ್ರಿಸ್ತನ ವಿಶ್ವಾಸಿಗಳಾಗಿದ್ದಾರೆ.

ಪ್ರಭುವಿನಲ್ಲಿ ನನ್ನ ಪ್ರಿಯ ಸ್ನೇಹಿತನಾದ ಅಂಪ್ಲಿಯಾತನಿಗೆ ನನ್ನ ವಂದನೆ ತಿಳಿಸಿರಿ. ಉರ್ಬಾನನಿಗೆ ನನ್ನ ವಂದನೆ ತಿಳಿಸಿರಿ.

ಅವನು ಕ್ರಿಸ್ತನಿಗೋಸ್ಕರ ನನ್ನ ಸಹೋದ್ಯೋಗಿಯಾಗಿದ್ದಾನೆ.

ನನ್ನ ಪ್ರಿಯ ಗೆಳೆಯನಾದ ಸ್ತಾಖುನಿಗೆ ನನ್ನ ವಂದನೆ ತಿಳಿಸಿರಿ. 10 ಅಪೆಲ್ಲನಿಗೆ ನನ್ನ ವಂದನೆ ತಿಳಿಸಿರಿ. ಅವನು ಕ್ರಿಸ್ತನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂಬುದನ್ನು ಪರೀಕ್ಷಿಸಿ ನಿರೂಪಿಸಲಾಗಿದೆ.

ಅರಿಸ್ತೊಬೂಲನ ಕುಟುಂಬದಲ್ಲಿ ಇರುವವರಿಗೆಲ್ಲ ನನ್ನ ವಂದನೆ ತಿಳಿಸಿರಿ.

11 ನನ್ನ ಸಂಬಂಧಿಕರಾದ ಹೆರೋಡಿಯೊನನಿಗೂ ಪ್ರಭುವಿಗೆ ಸೇರಿದವನಾದ ನಾರ್ಕಿಸ್ಸನ ಕುಟುಂಬದಲ್ಲಿರುವವರೆಲ್ಲರಿಗೂ ನನ್ನ ವಂದನೆ ತಿಳಿಸಿರಿ. 12 ತ್ರುಫೈನಳಿಗೂ ತ್ರುಫೋಸಳಿಗೂ ನನ್ನ ವಂದನೆ ತಿಳಿಸಿರಿ.

ಅವರು ಪ್ರಭುವಿಗಾಗಿ ಬಹು ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನನ್ನ ಪ್ರಿಯ ಸಹೋದರಿಯಾದ ಪೆರ್ಸೀಸಳಿಗೂ ನನ್ನ ವಂದನೆ ತಿಳಿಸಿರಿ. ಆಕೆಯು ಸಹ ಪ್ರಭುವಿಗೋಸ್ಕರ ಬಹು ಕಷ್ಟಪಟ್ಟು ಸೇವೆ ಮಾಡಿದಳು.

13 ರೂಫನಿಗೆ ನನ್ನ ವಂದನೆ ತಿಳಿಸಿರಿ. ಅವನು ಪ್ರಭುವಿನಲ್ಲಿ ವಿಶೇಷವಾದ ವ್ಯಕ್ತಿ. ಅವನ ತಾಯಿಗೂ ನನ್ನ ವಂದನೆ ತಿಳಿಸಿರಿ. ಆಕೆ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡಳು.

14 ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಕ್ರೈಸ್ತ ಸಹೋದರರಿಗೂ

15 ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರಿಗೂ ಮತ್ತು ಒಲುಂಪನಿಗೂ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೆ ನನ್ನ ವಂದನೆ ತಿಳಿಸಿರಿ.

16 ನೀವು ಪರಸ್ಪರ ಸಂಧಿಸುವಾಗ ಪವಿತ್ರವಾದ ಮುದ್ದನ್ನಿಟ್ಟು ವಂದಿಸಿರಿ.

ಕ್ರಿಸ್ತನ ಸಭೆಗಳವರೆಲ್ಲಾ ನಿಮಗೆ ವಂದನೆ ತಿಳಿಸುತ್ತಾರೆ.

17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ. 18 ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.

20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು.

ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

21 ನನ್ನ ಸಹೋದ್ಯೋಗಿಯಾದ ತಿಮೊಥೆಯನು ಮತ್ತು ನನ್ನ ಸಂಬಂಧಿಕರಾದ ಲೂಕ್ಯ, ಯಾಸೋನ ಮತ್ತು ಸೋಸಿಪತ್ರ ನಿಮಗೆ ವಂದನೆ ತಿಳಿಸಿದ್ದಾರೆ.

22 ಪೌಲನು ಹೇಳುತ್ತಿರುವ ಸಂಗತಿಗಳನ್ನು ಬರೆಯುತ್ತಿರುವ ತೆರ್ತ್ಯೆನೆಂಬ ನಾನು ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ.

23 ಗಾಯನು ನನಗೆ ಅತಿಥಿಸತ್ಕಾರ ಮಾಡುತ್ತಿದ್ದಾನೆ. ಅಲ್ಲದೆ ಸಭಾಕೂಟಕ್ಕಾಗಿ ಅವನ ಮನೆಯನ್ನೇ ಉಪಯೋಗಿಸಲಾಗುತ್ತಿದೆ. ಅವನು ಸಹ ನಿಮಗೆ ವಂದನೆ ತಿಳಿಸುತ್ತಾನೆ. ಈ ಪಟ್ಟಣದ ಖಜಾಂಚಿಯಾದ ಎರಸ್ತನು ಮತ್ತು ಸಹೋದರನಾದ ಕ್ವರ್ತನು ನಿಮಗೆ ವಂದನೆಯನ್ನು ತಿಳಿಸುತ್ತಾರೆ. 24 [b]

25 ದೇವರಿಗೆ ಮಹಿಮೆಯಾಗಲಿ. ನಿಮ್ಮನ್ನು ನಂಬಿಕೆಯಲ್ಲಿ ಬಲಗೊಳಿಸಬಲ್ಲಾತನು ದೇವರೊಬ್ಬನೇ. ನಾನು ಉಪದೇಶಿಸುವ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಬಲಗೊಳಿಸಬಲ್ಲನು. ನಾನು ಯೇಸು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುತ್ತಿರುವುದೇ ಆ ಸುವಾರ್ತೆ. ದೇವರು ತಿಳಿಯಪಡಿಸಿದ ಆ ಸುವಾರ್ತೆಯು ರಹಸ್ಯವಾದ ಸತ್ಯವಾಗಿತ್ತು ಮತ್ತು ಆರಂಭದಿಂದಲೂ ಮರೆಯಾಗಿತ್ತು. 26 ಆದರೆ ರಹಸ್ಯವಾದ ಆ ಸತ್ಯವನ್ನು ಈಗ ನಮಗೆ ತೋರಿಸಲಾಗಿದೆ. ಮತ್ತು ಆ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಆಜ್ಞಾಪಿಸಿರುವುದು ಇದನ್ನೇ. ಎಲ್ಲಾ ಜನರು ನಂಬಿಕೊಂಡು ದೇವರಿಗೆ ವಿಧೇಯರಾಗಲೆಂದು ರಹಸ್ಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಸದಾಕಾಲ ಜೀವಿಸುತ್ತಾನೆ. 27 ಒಬ್ಬನೇ ಜ್ಞಾನಿಯಾದ ದೇವರಿಗೆ ಯೇಸು ಕ್ರಿಸ್ತನ ಮೂಲಕ ಎಂದೆಂದಿಗೂ ಮಹಿಮೆ ಉಂಟಾಗಲಿ. ಆಮೆನ್.

ಪ್ರಲಾಪಗಳು 3

ಸಂಕಟದ ಅರ್ಥ

ಯೆಹೋವನ ರೌದ್ರ ದಂಡದಿಂದ
    ಸಂಕಟವನ್ನು ಅನುಭವಿಸಿರುವವನು ನಾನೇ!
ಯೆಹೋವನು ನನ್ನನ್ನು ಬೆಳಕೇ ಇಲ್ಲದ
    ಕತ್ತಲೆಗೆ ನಡೆಸಿಕೊಂಡು ಬಂದನು.
ಯೆಹೋವನು ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದನು.
    ಆತನು ಇಡೀ ದಿನವೆಲ್ಲಾ ಮತ್ತೆಮತ್ತೆ ಹಾಗೆಯೇ ಮಾಡಿದನು.
ಆತನು ನನ್ನ ಮಾಂಸವನ್ನು ಮತ್ತು ಚರ್ಮವನ್ನು ಕಂದಿಸಿದ್ದಾನೆ.
    ಆತನು ನನ್ನ ಮೂಳೆಗಳನ್ನು ಮುರಿದುಹಾಕಿದನು.
ಆತನು ನನ್ನನ್ನು ಕಠೋರತೆಯಿಂದಲೂ
    ಆಪತ್ತಿನಿಂದಲೂ ಸುತ್ತುವರಿದು ಮುತ್ತಿಗೆಹಾಕಿದ್ದಾನೆ.
ಬಹುಕಾಲದ ಹಿಂದೆಯೇ ಸತ್ತಿರುವವರಂತೆ
    ನನ್ನನ್ನು ಕತ್ತಲೆಯಲ್ಲಿ ಕುಳ್ಳಿರಿಸಿದ್ದಾನೆ.
ಯೆಹೋವನು ನನ್ನನ್ನು ಬಂಧಿಸಿ ನಾನು ಹೊರಗೆ ಬರಲಾಗದಂತೆ ಮಾಡಿದನು.
    ಆತನು ನನ್ನನ್ನು ಬಲವಾದ ಸರಪಣಿಗಳಿಂದ ಕಟ್ಟಿ ಹಾಕಿದನು.
ನಾನು ಸಹಾಯಕ್ಕಾಗಿ ಅರಚಿಕೊಳ್ಳುವಾಗಲೂ ಕೂಗಿಕೊಳ್ಳುವಾಗಲೂ
    ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲ.
ಆತನು ನನ್ನ ದಾರಿಯನ್ನು ಕಲ್ಲುಗಳಿಂದ ಮುಚ್ಚಿದ್ದಾನೆ.
    ಆತನು ನನ್ನ ಹಾದಿಯನ್ನು ಡೊಂಕುಗೊಳಿಸಿದ್ದಾನೆ.
10 ನನ್ನ ಪಾಲಿಗಂತೂ ಯೆಹೋವನು ಆಕ್ರಮಣಮಾಡಲು ಸಿದ್ಧವಾಗಿರುವ ಕರಡಿಯಂತೆಯೂ
    ಅಡಗಿಕೊಂಡಿರುವ ಸಿಂಹದಂತೆಯೂ ಇದ್ದಾನೆ.
11 ಯೆಹೋವನು ನನ್ನನ್ನು ನನ್ನ ದಾರಿಯಿಂದ ಓಡಿಸಿದನು.
    ಆತನು ನನ್ನನ್ನು ಚೂರುಚೂರು ಮಾಡಿದನು.
    ಆತನು ನನ್ನನ್ನು ಅಸಹಾಯಕನನ್ನಾಗಿ ತೊರೆದುಬಿಟ್ಟಿದ್ದಾನೆ.
12 ಆತನು ತನ್ನ ಬಿಲ್ಲನ್ನು ಸಜ್ಜುಗೊಳಿಸಿದನು.
    ಆತನು ತನ್ನ ಬಾಣಗಳಿಂದ ನನಗೆ ಗುರಿಯಿಟ್ಟನು.
13 ಆತನು ನನ್ನ ಹೊಟ್ಟೆಗೆ
    ತನ್ನ ಬಾಣಗಳಿಂದ ಹೊಡೆದನು.
14 ನನ್ನ ಜನರಿಗೆಲ್ಲಾ ಹಾಸ್ಯಾಸ್ಪದವಾಗಿದ್ದೇನೆ.
    ದಿನವೆಲ್ಲಾ ಅವರು ನನ್ನ ಬಗ್ಗೆ ಹಾಡುಗಳನ್ನು ಹಾಡುತ್ತಾ ಗೇಲಿ ಮಾಡುತ್ತಾರೆ.
15 ಯೆಹೋವನು ನನಗೆ ಕುಡಿಯಲು ಈ ವಿಷವನ್ನು (ಶಿಕ್ಷೆಯನ್ನು) ಕೊಟ್ಟನು.
    ಕಹಿಯಾದ ಈ ಪಾನೀಯದಿಂದ ಆತನು ನನ್ನನ್ನು ತುಂಬಿಸಿದನು.
16 ಯೆಹೋವನು ನನಗೆ ನುರುಜುಗಲ್ಲನ್ನು ಮುಕ್ಕಿಸಿ ನನ್ನ ಹಲ್ಲುಗಳನ್ನು ಮುರಿದುಹಾಕಿದ್ದಾನೆ.
    ಆತನು ನನ್ನನ್ನು ಧೂಳಿಗೆ ಹಾಕಿ ತುಳಿದಿದ್ದಾನೆ.
17 ಇನ್ನೆಂದಿಗೂ ಸಮಾಧಾನವೇ ಇರುವುದಿಲ್ಲವೆಂದುಕೊಂಡೆನು.
    ನಾನು ಸಂತೋಷವನ್ನು ಮರೆತುಬಿಟ್ಟೆನು.
18 ನಾನು ನನ್ನೊಳಗೆ, “ಯೆಹೋವನು ನನಗೆ ಸಹಾಯ ಮಾಡುತ್ತಾನೆ
    ಎಂಬ ನಿರೀಕ್ಷೆ ಇನ್ನೆಂದಿಗೂ ನನಗಿಲ್ಲ” ಎಂದು ಕೊಂಡೆನು.
19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
    ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
    ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
    ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
    ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
    ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
    ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.

25 ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
    ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
26 ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ
    ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು.
27 ಯೌವನದಲ್ಲೇ ಸಂಕಟದ ನೊಗವನ್ನು
    ಹೊರುವುದು ಮನುಷ್ಯನಿಗೆ ಒಳ್ಳೆಯದು.
28 ಯೆಹೋವನು ಈ ಸಂಕಟದ ನೊಗವನ್ನು
    ಅವನ ಮೇಲೆ ಹಾಕುವಾಗ ಅವನು ಮೌನವಾಗಿ ಕುಳಿತುಕೊಂಡಿರಬೇಕು.
29 ಅವನು ದೀನತೆಯಿಂದ ತನ್ನ ಮುಖವನ್ನು ಧೂಳಿನಲ್ಲಿ ಹಾಕಬೇಕು.
    ಆಗ ಅವನ ಜೀವಕ್ಕೆ ನಿರೀಕ್ಷೆ ಇದ್ದರೂ ಇರಬಹುದು.
30 ಆ ವ್ಯಕ್ತಿಯು ತನ್ನನ್ನು ಹೊಡೆಯುವವರಿಗೆ ತನ್ನ ಕೆನ್ನೆಯನ್ನು ಒಡ್ಡಬೇಕು.
    ಅವನು ತನಗೆ ಜನರಿಂದಾಗುವ ಗೇಲಿಯನ್ನು ಸಹಿಸಿಕೊಳ್ಳಬೇಕು.
31 ಯೆಹೋವನು ಜನರನ್ನು ಶಾಶ್ವತವಾಗಿ ತೊರೆದುಬಿಡುವುದಿಲ್ಲ
    ಎಂಬುದು ಆ ವ್ಯಕ್ತಿಯ ನೆನಪಿನಲ್ಲಿರಬೇಕು.
32 ಯೆಹೋವನು ಶಿಕ್ಷಿಸುವಾಗ ಕರುಣೆಯುಳ್ಳವನೂ ಆಗಿರುತ್ತಾನೆ.
    ಆತನು ತನ್ನ ಮಹಾಪ್ರೀತಿ ಮತ್ತು ಕನಿಕರಗಳಿಂದಲೇ ಕರುಣೆಯುಳ್ಳವನಾಗಿರುತ್ತಾನೆ.

33 ತಾನು ಜನರನ್ನು ಶಿಕ್ಷಿಸಬೇಕೆಂಬುದು ಯೆಹೋವನ ಬಯಕೆಯೇನಲ್ಲ.
    ತಾನು ಜನರನ್ನು ವ್ಯಸನಗೊಳಿಸಬೇಕೆಂಬುದು ಆತನಿಗೆ ಇಷ್ಟವಿಲ್ಲ.
34 ಈ ಸಂಗತಿಗಳನ್ನು ಇಷ್ಟಪಡುವುದಿಲ್ಲ.
ಯಾರೋ ಒಬ್ಬನು ಈ ಲೋಕದ ಕೈದಿಗಳನ್ನೆಲ್ಲಾ ತನ್ನ ಪಾದದ ಕೆಳಗೆ ಹಾಕಿ ತುಳಿಯುವುದನ್ನು ಆತನು ಇಷ್ಟಪಡುವುದಿಲ್ಲ.
35 ಒಬ್ಬನು ಮತ್ತೊಬ್ಬನಿಗೆ ಅನ್ಯಾಯ ಮಾಡುವುದನ್ನು ಆತನು ಇಷ್ಟಪಡುವುದಿಲ್ಲ.
    ಆದರೆ ಕೆಲವರು ಆ ಕೆಟ್ಟಕಾರ್ಯಗಳನ್ನು ಮಹೋನ್ನತನಾದ ಯೆಹೋವನ ಎದುರಿನಲ್ಲಿಯೇ ಮಾಡುತ್ತಾರೆ.
36 ವ್ಯಾಜ್ಯದಲ್ಲಿ ದೊರೆಯಬೇಕಾದ ನ್ಯಾಯವನ್ನು ದೊರೆಯದಂತೆ ಮಾಡುವುದು ಯೆಹೋವನಿಗೆ ಇಷ್ಟವಿಲ್ಲ.
    ಯೆಹೋವನು ಈ ಸಂಗತಿಗಳಲ್ಲಿ ಯಾವುದನ್ನೂ ಇಷ್ಟಪಡುವುದಿಲ್ಲ.
37 ಯಾರೇ ಆಗಲಿ ತಾವು ಮುಂತಿಳಿಸಿದ್ದನ್ನು
    ಯೆಹೋವನು ಆಜ್ಞಾಪಿಸದ ಹೊರತು ಅದು ನೆರವೇರುವುದಿಲ್ಲ.
38 ಕೆಟ್ಟವುಗಳೂ ಸಂಭವಿಸುವಂತೆ
    ಮಹೋನ್ನತನಾದ ಯೆಹೋವನು ಆಜ್ಞಾಪಿಸುತ್ತಾನೆ.
39 ಜೀವಂತವಾಗಿರುವ ಯಾವ ವ್ಯಕ್ತಿಯೇ ಆಗಲಿ ತನ್ನ ಪಾಪಗಳ ನಿಮಿತ್ತ
    ಯೆಹೋವನ ಶಿಕ್ಷೆಗೆ ಗುರಿಯಾಗುವಾಗ ದೂರು ಹೇಳಕೂಡದು.
40 ನಾವು ಏನು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಿ ನೋಡೋಣ.
    ಬಳಿಕ ಯೆಹೋವನಿಗೆ ಅಭಿಮುಖರಾಗೋಣ.

41 ಪರಲೋಕದ ದೇವರಿಗೆ ನಮ್ಮ ಹೃದಯಗಳನ್ನೂ
    ಕೈಗಳನ್ನೂ ಎತ್ತಿಹಿಡಿಯೋಣ.
42 “ನಾವು ದಂಗೆ ಎದ್ದಿದ್ದೇವೆ ಮತ್ತು ಅವಿಧೇಯರಾಗಿದ್ದೇವೆ.
    ಆದ್ದರಿಂದ ನೀನು ನಮ್ಮನ್ನು ಕ್ಷಮಿಸಿಲ್ಲ.
43 ನೀನು ನಮಗೆ ನಿನ್ನ ಕೋಪವನ್ನು ಹೊದಿಸಿ ನಮ್ಮನ್ನು ಓಡಿಸಿಬಿಟ್ಟೆ.
    ನೀನು ನಮ್ಮನ್ನು ನಿಷ್ಕರುಣೆಯಿಂದ ಕೊಂದುಹಾಕಿದೆ!
44 ನೀನು ನಿನಗೆ ಮೋಡಗಳನ್ನು ಹೊದಿಸಿಕೊಂಡು
    ನಮ್ಮ ಯಾವ ಪ್ರಾರ್ಥನೆಯೂ ನಿನ್ನ ಬಳಿಗೆ ಬಾರದಂತೆ ಮಾಡಿದೆ.
45 ನೀನು ನಮ್ಮನ್ನು ಇತರ ಜನಾಂಗಗಳಿಗೆ ಕಸದಂತೆಯೂ
    ಹೊಲಸಿನಂತೆಯೂ ಮಾಡಿದೆ.
46 ನಮ್ಮ ಶತ್ರುಗಳೆಲ್ಲಾ
    ನಮ್ಮೊಂದಿಗೆ ಕೋಪದಿಂದ ಮಾತಾಡುತ್ತಾರೆ.
47 ನಾವು ಭಯಗೊಂಡಿದ್ದೇವೆ.
    ನಾವು ಗುಂಡಿಯೊಳಗೆ ಬಿದ್ದಿದ್ದೇವೆ.
ನಮಗೆ ಬಹಳವಾಗಿ ನೋವಾಗಿದೆ!
    ನಾವು ಮುರಿದುಹೋದವರಾಗಿದ್ದೇವೆ!”
48 ನನ್ನ ಕಣ್ಣೀರು ತೊರೆಗಳಂತೆ ಹರಿಯುತ್ತಿದೆ!
    ನನ್ನ ಜನರು ನಾಶವಾದ ಕಾರಣ ನಾನು ಗೋಳಾಡುತ್ತಿರುವೆ!
49 ನನ್ನ ಕಣ್ಣೀರು ಸತತವಾಗಿ ಹರಿಯುತ್ತಿದೆ!
    ನಾನು ಗೋಳಾಡುತ್ತಲೇ ಇರುವೆನು!
50 ಯೆಹೋವನೇ, ಕೆಳಗಿರುವ ನಮ್ಮನ್ನು
    ನೀನು ಬಗ್ಗಿ ನೋಡುವತನಕ ನಾನು ಗೋಳಾಡುತ್ತಲೇ ಇರುವೆನು!
ನೀನು ಪರಲೋಕದಿಂದ ನಮ್ಮನ್ನು ನೋಡುವತನಕ
    ನಾನು ಗೋಳಾಡುತ್ತಲೇ ಇರುವೆನು.
51 ನನ್ನ ಪಟ್ಟಣದ ಯುವತಿಯರಿಗೆ ಸಂಭವಿಸಿದ್ದನ್ನು
    ನಾನು ನೋಡುವಾಗಲೆಲ್ಲ ನನ್ನ ಕಣ್ಣುಗಳು ನನ್ನನ್ನು ದುಃಖಗೊಳಿಸುತ್ತವೆ.
52 ನಿಷ್ಕಾರಣವಾಗಿ ಜನರು ನನ್ನ ವೈರಿಗಳಾಗಿದ್ದು ನನ್ನನ್ನು ಪಕ್ಷಿಯಂತೆ ಬೇಟೆಯಾಡಿದರು.
53 ನನ್ನ ಪ್ರಾಣವನ್ನು ಒಂದು ಗುಂಡಿಯಲ್ಲಿ ಕೊನೆಗಾಣಿಸಲು ಅವರು ಪ್ರಯತ್ನಿಸಿದರು.
    ಅವರು ನನಗೆ ಕಲ್ಲುಗಳನ್ನು ತೂರಿದರು.
54 ನೀರು ನನ್ನ ತಲೆಯ ಮೇಲೆ ಏರಿತು.
    “ನಾನು ಸತ್ತುಹೋಗುತ್ತೇನೆ” ಎಂದುಕೊಂಡೆನು.
55 ಯೆಹೋವನೇ, ಗುಂಡಿಯ ತಳದಿಂದ
    ನಾನು ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.
56 ನೀನು ನನ್ನ ಸ್ವರವನ್ನು ಕೇಳಿದೆ.
    ನೀನು ನಿನ್ನ ಕಿವಿಗಳನ್ನು ಮುಚ್ಚಿಕೊಳ್ಳಲಿಲ್ಲ;
    ನಿನ್ನನ್ನು ರಕ್ಷಿಸುವುದಿಲ್ಲ ಎಂದು ಹೇಳಲಿಲ್ಲ.
57 ನಾನು ನಿನ್ನನ್ನು ಕರೆದಾಗ, ನೀನು ಸಮೀಪಕ್ಕೆ ಬಂದು,
    “ಭಯಪಡದಿರು” ಎಂದು ಹೇಳಿದೆ.
58 ಯೆಹೋವನೇ, ನೀನು ನನ್ನ ಪರವಾಗಿ ಹೋರಾಡಿದೆ.
    ನನ್ನ ಪ್ರಾಣವನ್ನು ರಕ್ಷಿಸಿದೆ.
59 ಯೆಹೋವನೇ, ನನಗಾಗಿರುವ ಅನ್ಯಾಯವನ್ನು ನೀನು ನೋಡಿರುವೆ.
    ವ್ಯಾಜ್ಯದಲ್ಲಿ ನನ್ನ ಪರವಾಗಿ ತೀರ್ಪು ನೀಡು.
60 ನನ್ನ ಶತ್ರುಗಳು ನನ್ನ ಮೇಲೆ ಹೇಗೆ ಸೇಡನ್ನು ತೀರಿಸಿಕೊಂಡಿದ್ದಾರೆ ನೋಡು.
    ನನಗೆ ವಿರೋಧವಾಗಿ ಅವರು ಮಾಡಿದ ಎಲ್ಲಾ ಯೋಜನೆಗಳನ್ನು ನೋಡು.
61 ಯೆಹೋವನೇ, ಅವರು ನನಗಾಡುವ ಗೇಲಿ ಮಾತನ್ನು ಕೇಳು.
    ಅವರು ನನ್ನ ವಿರುದ್ಧ ಮಾಡಿದ ಎಲ್ಲಾ ಯೋಜನೆಗಳನ್ನು ಕೇಳು.
62 ನನ್ನ ಶತ್ರುಗಳ ಮಾತುಗಳು ಮತ್ತು ಆಲೋಚನೆಗಳು
    ಯಾವಾಗಲೂ ನನಗೆ ವಿರೋಧವಾಗಿವೆ.
63     ಯೆಹೋವನೇ, ನೋಡು!
    ಅವರು ಕುಳಿತುಕೊಂಡಿರುವಾಗಲೂ ನಿಂತುಕೊಂಡಿರುವಾಗಲೂ ನನ್ನನ್ನು ಹೇಗೆ ಗೇಲಿ ಮಾಡುತ್ತಾರೆ!
64 ಯೆಹೋವನೇ, ನೀನು ಅವರಿಗೆ ಮುಯ್ಯಿತೀರಿಸು!
    ಅವರು ಮಾಡಿರುವುದಕ್ಕೆ ತಕ್ಕಂತೆ ಅವರನ್ನು ದಂಡಿಸು!
65 ಅವರ ಹೃದಯವನ್ನು ಕಠಿಣಗೊಳಿಸು!
    ಬಳಿಕ ಅವರನ್ನು ಶಪಿಸು!
66 ಕೋಪದಿಂದ ಅವರನ್ನು ಓಡಿಸಿಬಿಡು! ಅವರನ್ನು ನಾಶಮಾಡು!
    ಯೆಹೋವನೇ, ಅವರನ್ನು ಈ ಭೂಲೋಕದಿಂದಲೇ ಅಳಿಸಿಹಾಕು!

ಕೀರ್ತನೆಗಳು 34

ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

[a]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
    ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
    ಕೇಳಿ ಸಂತೋಷಪಡಿರಿ.
ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
    ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
    ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[b]
    ಅವರಿಗೆ ಆಶಾಭಂಗವಾಗದು.
ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
    ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
ಯೆಹೋವನ ಭಕ್ತರ ಸುತ್ತಲೂ ಆತನ ದೂತನು
    ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
    ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
    ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
    ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
    ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
    ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
    ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
    ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.
15 ಯೆಹೋವನು ನೀತಿವಂತರನ್ನು ಕಾಪಾಡುವನು.
    ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
    ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.

17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
    ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
    ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
    ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
    ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
    ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
    ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International