Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 9

ಸೌಲನು ತನ್ನ ತಂದೆಯ ಕತ್ತೆಗಳನ್ನು ಹುಡುಕುವನು

ಬೆನ್ಯಾಮೀನ್ ಕುಲದ ಕೀಷನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ಕೀಷನು ಅಬೀಯೇಲನ ಮಗ. ಅಬೀಯೇಲನು ಚೆರೋರನ ಮಗ. ಚೆರೋರನು ಬೆಕೋರತನ ಮಗ. ಬೆಕೋರತನು ಅಫೀಹನ ಮಗ. ಇವರೆಲ್ಲರು ಬೆನ್ಯಾಮೀನನ ಕುಲಕ್ಕೆ ಸೇರಿದವರು. ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಸೌಲನು ಸುಂದರನಾದ ಯುವಕನಾಗಿದ್ದನು. ಸೌಲನಿಗಿಂತ ಸುಂದರರು ಅಲ್ಲಿರಲಿಲ್ಲ. ಸೌಲನು ಇತರ ಇಸ್ರೇಲ್ ಗಂಡಸರಿಗಿಂತ ಎತ್ತರವಾಗಿದ್ದನು.

ಒಂದು ದಿನ ಕೀಷನ ಕತ್ತೆಗಳು ಕಳೆದುಹೋದವು. ಆದ್ದರಿಂದ ಕೀಷನು ಸೌಲನಿಗೆ, “ಸೇವಕನೊಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಸೌಲನು ಕತ್ತೆಗಳನ್ನು ಹುಡುಕಲು ಆರಂಭಿಸಿದನು. ಸೌಲನು ಮತ್ತು ಅವನ ಸೇವಕನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಹುಡುಕಿದರೂ ಅವರಿಗೆ ಕತ್ತೆಗಳು ಸಿಗಲಿಲ್ಲ. ಆದ್ದರಿಂದ ಅವರು ಶಾಲೀಮ್ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಕ್ಕಲಿಲ್ಲ. ಆದ್ದರಿಂದ ಅವರು ಬೆನ್ಯಾಮೀನನ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಗಲಿಲ್ಲ.

ಕೊನೆಗೆ, ಸೌಲನು ಮತ್ತು ಅವನ ಸೇವಕನು ಚೂಫ್ ಎಂಬ ಹೆಸರಿನ ಪಟ್ಟಣಕ್ಕೆ ಬಂದರು. ಸೌಲನು ಸೇವಕನಿಗೆ, “ನಾವು ಮರಳಿ ಹೋಗೋಣ. ನಮ್ಮ ತಂದೆಯು ಕತ್ತೆಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ನಮ್ಮ ಬಗ್ಗೆ ಚಿಂತಿಸಲಾರಂಭಿಸುತ್ತಾನೆ” ಎಂದು ಹೇಳಿದನು.

ಆದರೆ ಆ ಸೇವಕನು, “ಈ ಪಟ್ಟಣದಲ್ಲಿ ಒಬ್ಬ ದೇವರ ಮನುಷ್ಯನಿದ್ದಾನೆ. ಜನರು ಅವನನ್ನು ಗೌರವಿಸುತ್ತಾರೆ. ಅವನು ಹೇಳುವ ವಿಷಯಗಳೆಲ್ಲ ನಿಜವಾಗುತ್ತವೆ. ಆದ್ದರಿಂದ ಈ ಪಟ್ಟಣಕ್ಕೆ ಹೋಗೋಣ ಬಹುಶಃ ನಾವು ಮುಂದೆ ಎಲ್ಲಿಗೆ ಹೋಗಬೇಕೆಂಬುದನ್ನು ಈ ದೇವರ ಮನುಷ್ಯನು ತಿಳಿಸಬಹುದು” ಎಂದು ಉತ್ತರಿಸಿದನು.

ಸೌಲನು ತನ್ನ ಸೇವಕನಿಗೆ, “ನಾವು ಪಟ್ಟಣದೊಳಗೆ ಹೋಗೋಣ, ಆದರೆ ಆ ಮನುಷ್ಯನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ನಮ್ಮ ಚೀಲದಲ್ಲಿದ್ದ ಆಹಾರವೆಲ್ಲ ಮುಗಿದಿದೆ. ಆ ದೇವರ ಮನುಷ್ಯನಿಗೆ ನೀಡಲು ನಮ್ಮಲ್ಲಿ ಕಾಣಿಕೆಯೂ ಇಲ್ಲ. ಹೀಗಾಗಿ ನಾವು ಅವನಿಗೆ ಏನು ಕೊಡಬೇಕು?” ಎಂದು ಕೇಳಿದನು.

ಆ ಸೇವಕನು ಸೌಲನಿಗೆ, “ಇಲ್ಲಿ ನೋಡು, ನನ್ನ ಬಳಿ ಸ್ವಲ್ಪ ಹಣವಿದೆ. ಇದನ್ನು ಆ ದೇವರ ಮನುಷ್ಯನಿಗೆ ಕೊಡೋಣ. ನಾವು ಎಲ್ಲಿಗೆ ಹೋಗಬೇಕೆಂಬುದನ್ನು ಅವನು ತಿಳಿಸುತ್ತಾನೆ” ಎಂದು ಉತ್ತರಿಸಿದನು.

(ಹಿಂದಿನ ಕಾಲದಲ್ಲಿ ಇಸ್ರೇಲರು ಪ್ರವಾದಿಯನ್ನು “ದರ್ಶಿ” ಎಂದು ಕರೆಯುತ್ತಿದ್ದರು. ದೇವರಿಂದ ಏನಾದರೂ ಕೇಳಬೇಕಾಗಿದ್ದರೆ, “ದರ್ಶಿಯ ಬಳಿಗೆ ಹೋಗೋಣ” ಎನ್ನುತ್ತಿದ್ದರು.)

10 ಸೌಲನು ತನ್ನ ಸೇವಕನಿಗೆ, “ಒಳ್ಳೆಯ ಆಲೋಚನೆ; ನಡೆ ಹೋಗೋಣ” ಎಂದು ಹೇಳಿದನು. ಅವರು ಆ ಪಟ್ಟಣದಲ್ಲಿ ದೇವರ ಮನುಷ್ಯನಿದ್ದಲ್ಲಿಗೆ ಹೋದರು. 11 ಸೌಲನು ಮತ್ತು ಆ ಸೇವಕನು ಬೆಟ್ಟದ ಮೇಲೆ ನಡೆಯುತ್ತಾ ಆ ಪಟ್ಟಣಕ್ಕೆ ಹೋದರು. ಆ ದಾರಿಯಲ್ಲಿ ಅವರು ಕೆಲವು ಸ್ತ್ರೀಯರನ್ನು ಸಂಧಿಸಿದರು. ಆ ಸ್ತ್ರೀಯರು ನೀರನ್ನು ತರಲು ಹೋಗುತ್ತಿದ್ದರು. ಸೌಲನು ಮತ್ತು ಆ ಸೇವಕನು, “ದರ್ಶಿಯು ಇಲ್ಲಿರುವನೇ?” ಎಂದು ಆ ಯುವತಿಯರನ್ನು ಕೇಳಿದರು.

12 ಆ ಯುವತಿಯರು, “ಹೌದು ದರ್ಶಿಯು ಇಲ್ಲಿದ್ದಾನೆ. ಅವನು ದಾರಿಯಲ್ಲಿ ನಿಮಗಿಂತ ಸ್ವಲ್ಪ ಮುಂದೆ ಹೋಗುತ್ತಿದ್ದಾನೆ. ಈ ಹೊತ್ತು ನಮ್ಮ ಊರಿನವರು ಗುಡ್ಡದ ಮೇಲೆ ಯಜ್ಞವನ್ನು ಅರ್ಪಿಸುವುದರಿಂದ ಅವನು ಇಲ್ಲಿಗೆ ಬಂದಿದ್ದಾನೆ. 13 ನೀವು ಪಟ್ಟಣದೊಳಕ್ಕೆ ಹೋದರೆ ಅವನನ್ನು ಕಾಣಬಹುದು. ನೀವು ಬೇಗನೆ ನೋಡಬೇಕೆಂದಿದ್ದರೆ, ಅವನು ಊಟ ಮಾಡುವುದಕ್ಕಾಗಿ ಆರಾಧನೆಯ ಸ್ಥಳಕ್ಕೆ ಹೋಗುವುದಕ್ಕಿಂತ ಮೊದಲೇ ಅವನನ್ನು ಕಾಣಬೇಕು. ದರ್ಶಿಯು ಯಜ್ಞವನ್ನು ಆಶೀರ್ವದಿಸಬೇಕಾಗಿರುವುದರಿಂದ ಅವನು ಅಲ್ಲಿಗೆ ಹೋಗುವವರೆಗೆ ಜನರು ಊಟಮಾಡುವುದಿಲ್ಲ. ಆದ್ದರಿಂದ ನೀವು ಬೇಗನೆ ಹೋದರೆ ಅವನನ್ನು ಕಾಣಬಹುದು” ಎಂದು ಹೇಳಿದರು.

14 ಸೌಲನು ಮತ್ತು ಆ ಸೇವಕನು ಗುಡ್ಡವನ್ನು ಹತ್ತಿ ಪಟ್ಟಣದ ಕಡೆ ನಡೆದರು. ಅವರು ಪಟ್ಟಣವನ್ನು ಪ್ರವೇಶಿಸುತ್ತಿದ್ದಾಗ, ಸಮುವೇಲನು ಅವರ ಕಡೆ ಬರುತ್ತಿರುವುದನ್ನು ಕಂಡರು. ಸಮುವೇಲನು ಆಗ ತಾನೇ ಪಟ್ಟಣದಿಂದ ಹೊರಬಂದು, ಆರಾಧನೆಯ ಸ್ಥಳದ ಕಡೆ ಹೊರಟಿದ್ದನು.

15 ಹಿಂದಿನ ದಿನ, ಯೆಹೋವನು ಸಮುವೇಲನಿಗೆ, 16 “ನಾಳೆ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ಒಬ್ಬ ಮನುಷ್ಯನನ್ನು ಕಳುಹಿಸುತ್ತೇನೆ. ಅವನು ಬೆನ್ಯಾಮೀನ್ ಕುಟುಂಬಕ್ಕೆ ಸೇರಿದವನು. ನೀನು ಅವನನ್ನು ಅಭಿಷೇಕಿಸು. ನನ್ನ ಜನರಾದ ಇಸ್ರೇಲರಿಗೆ ಅವನು ರಾಜನಾಗುತ್ತಾನೆ. ಈ ಮನುಷ್ಯನು ನನ್ನ ಜನರನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ. ನನ್ನ ಜನರ ಸಂಕಟವನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳನ್ನು ನಾನು ಆಲಿಸಿದ್ದೇನೆ” ಎಂದು ತಿಳಿಸಿದ್ದನು.

17 ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ನಿನಗೆ ಹೇಳಿದ ಮನುಷ್ಯ ಇವನೇ. ಇವನು ನನ್ನ ಜನರನ್ನು ಆಳುತ್ತಾನೆ” ಎಂದು ಹೇಳಿದನು.

18 ಸೌಲನು ಹೊರಬಾಗಿಲಿನ ಬಳಿಯಿಂದ ಸಮುವೇಲನ ಬಳಿಗೆ ಬಂದನು. ಸೌಲನು ಸಮುವೇಲನನ್ನು, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ನನಗೆ ಹೇಳಿ” ಎಂದು ಕೇಳಿದನು.

19 ಸಮುವೇಲನು, “ನಾನೇ ಆ ದರ್ಶಿ. ನನ್ನೊಡನೆ ಆರಾಧನೆಯ ಸ್ಥಳಕ್ಕೆ ಬಾ. ನೀನು ಮತ್ತು ನಿನ್ನ ಸೇವಕ ಈ ದಿನ ನನ್ನ ಜೊತೆಯಲ್ಲಿ ಊಟಮಾಡಬೇಕು. ನಾನು ನಿಮ್ಮನ್ನು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಕಳುಹಿಸುತ್ತೇನೆ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ. 20 ಮೂರು ದಿನಗಳ ಹಿಂದೆ ಕಳೆದು ಹೋದ ನಿನ್ನ ಕತ್ತೆಗಳಿಗಾಗಿ ಚಿಂತಿಸಬೇಡ. ಅವುಗಳೆಲ್ಲ ಸಿಕ್ಕಿವೆ. ಈಗ ಇಸ್ರೇಲರಿಗೆಲ್ಲ ನೀನು ಬೇಕಾಗಿರುವೆ. ಅವರಿಗೆ ನೀನು ಮತ್ತು ನಿನ್ನ ತಂದೆಯ ಕುಟುಂಬದ ಜನರೆಲ್ಲ ಬೇಕಾಗಿದ್ದಾರೆ” ಎಂದು ಹೇಳಿದನು.

21 ಅದಕ್ಕೆ ಸೌಲನು, “ನಾನು ಬೆನ್ಯಾಮೀನ್ ಕುಲದವನು. ಅದು ಇಸ್ರೇಲರಲ್ಲಿ ಒಂದು ಚಿಕ್ಕ ಕುಲ. ನನ್ನ ಕುಟುಂಬವು ಬೆನ್ಯಾಮೀನ್ ಕುಲದಲ್ಲಿ ತೀರ ಕನಿಷ್ಠವಾದುದು. ಇಸ್ರೇಲರಿಗೆ ನಾನು ಬೇಕಾಗಿದ್ದೇನೆ ಎಂದು ಏಕೆ ಹೇಳುತ್ತಿರುವೆ?” ಎಂದು ಕೇಳಿದನು.

22 ಆಗ ಸಮುವೇಲನು ಸೌಲನನ್ನು ಮತ್ತು ಅವನ ಸೇವಕನನ್ನು ಊಟದ ಸ್ಥಳಕ್ಕೆ ಕರೆದುಕೊಂಡು ಹೋದನು. ಒಟ್ಟಿಗೆ ಊಟ ಮಾಡಲು ಮತ್ತು ಯಜ್ಞವಸ್ತುಗಳನ್ನು ಹಂಚಿಕೊಳ್ಳಲು ಸುಮಾರು ಮೂವತ್ತು ಜನರನ್ನು ಆಹ್ವಾನಿಸಲಾಗಿತ್ತು. ಸಮುವೇಲನು ಸೌಲನಿಗೆ ಮತ್ತು ಅವನ ಸೇವಕನಿಗೆ ಊಟದ ಮೇಜಿನಲ್ಲಿ ಅತೀ ಮುಖ್ಯವಾದ ಸ್ಥಳವನ್ನು ನೀಡಿದನು. 23 ಸಮುವೇಲನು ಅಡಿಗೆಯವನಿಗೆ, “ನಾನು ನಿನಗೆ ಕೊಟ್ಟಿದ್ದ ಮಾಂಸವನ್ನು ತೆಗೆದುಕೊಂಡು ಬಾ; ಪ್ರತ್ಯೇಕವಾಗಿಡಬೇಕೆಂದು ನಾನು ನಿನಗೆ ಹೇಳಿದ್ದ ಭಾಗವೇ ಅದು” ಎಂದು ಹೇಳಿದನು.

24 ಅಡಿಗೆಯವನು ತೊಡೆಯ ಮಾಂಸವನ್ನು ತೆಗೆದುಕೊಂಡು ಬಂದು ಸೌಲನ ಎದುರಿಗೆ ಮೇಜಿನ ಮೇಲಿಟ್ಟನು. ಸಮುವೇಲನು, “ನಾನು ನಿನಗಾಗಿ ಈ ಮಾಂಸವನ್ನು ಪ್ರತ್ಯೇಕವಾಗಿರಿಸಿದ್ದೇನೆ. ಇದನ್ನು ತಿನ್ನು, ಏಕೆಂದರೆ ಇದನ್ನು ಈ ವಿಶೇಷವಾದ ಸಂದರ್ಭದಲ್ಲಿ ನಿನಗೆ ಕೊಡುವುದಕ್ಕಾಗಿಯೇ ಪ್ರತ್ಯೇಕಿಸಲಾಗಿತ್ತು” ಎಂದು ಹೇಳಿದನು. ಆದ್ದರಿಂದ ಸೌಲನು ಸಮುವೇಲನ ಜೊತೆಯಲ್ಲಿ ಆ ದಿನ ಊಟಮಾಡಿದನು.

25 ಅವರು ಊಟಮಾಡಿದ ನಂತರ, ಆರಾಧನಾ ಸ್ಥಳದಿಂದ ಇಳಿದುಬಂದು, ಪಟ್ಟಣಕ್ಕೆ ಹಿಂದಿರುಗಿದರು. ಸಮುವೇಲನು ಮಲಗಲು ಸೌಲನಿಗಾಗಿ ಮಾಳಿಗೆಯ ಮೇಲೆ ಹಾಸಿಗೆಯನ್ನು ಸಿದ್ಧಪಡಿಸಿದನು. ಸೌಲನು ಅಲ್ಲಿ ಮಲಗಿಕೊಂಡನು.

26 ಮಾರನೆಯ ದಿನ ಬೆಳಗಿನ ಜಾವ, ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ, “ಎದ್ದೇಳು, ನಿನ್ನನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲೆದ್ದನು ಮತ್ತು ಸಮುವೇಲನೊಂದಿಗೆ ಮನೆಯಿಂದ ಹೊರಗೆ ಹೊರಟನು.

27 ಸೌಲನೂ ಅವನ ಸೇವಕನೂ ಸಮುವೇಲನೂ ಪಟ್ಟಣದ ಅಂಚಿನಲ್ಲಿ ಒಟ್ಟಾಗಿ ನಡೆಯುತ್ತಿದ್ದಾಗ, ಸಮುವೇಲನು ಸೌಲನಿಗೆ, “ನಿನ್ನ ಸೇವಕನಿಗೆ ನಮ್ಮಿಂದ ಮುಂದೆ ಹೋಗಲು ತಿಳಿಸು. ನಾನು ದೇವರ ಸಂದೇಶವನ್ನು ನಿನಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. ಆದಕಾರಣ ಸೇವಕನು ಅವರಿಂದ ಮುಂದೆ ನಡೆದನು.

ರೋಮ್ನಗರದವರಿಗೆ 7

ನೀತಿವಂತರಿಗೆ ಧರ್ಮಶಾಸ್ತ್ರದ ಹಂಗಿಲ್ಲ

ಸಹೋದರ ಸಹೋದರಿಯರೇ, ನೀವೆಲ್ಲರು ಮೋಶೆಯ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯು ಜೀವದಿಂದಿರುವವರೆಗೆ ಮಾತ್ರ ಧರ್ಮಶಾಸ್ತ್ರವು ಆ ವ್ಯಕ್ತಿಯನ್ನು ಆಳುತ್ತದೆ ಎಂಬುದು ನಿಮಗೆ ತಿಳಿದಿಲ್ಲವೇ? ನಾನು ನಿಮಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ: ಗಂಡನು ಬದುಕಿರುವ ತನಕ ಹೆಂಡತಿಯು ಕಾನೂನಿನ ಪ್ರಕಾರ ಅವನಿಗೆ ಬದ್ಧಳಾಗಿರಬೇಕು. ಆದರೆ ಆಕೆಯ ಗಂಡನು ತೀರಿಕೊಂಡರೆ, ವಿವಾಹದ ಕಾನೂನಿನಿಂದ ಆಕೆಯು ಬಿಡುಗಡೆಯಾಗಿದ್ದಾಳೆ. ಆದರೆ ತನ್ನ ಗಂಡನು ಜೀವದಿಂದಿರುವಾಗಲೇ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುತ್ತಾಳೆಂದು ಧರ್ಮಶಾಸ್ತ್ರವು ಹೇಳುತ್ತದೆ. ಆದರೆ ಆಕೆಯ ಗಂಡನು ಸತ್ತುಹೋದರೆ ಆಕೆಯು ವಿವಾಹದ ಹಂಗಿನಿಂದ ಬಿಡುಗಡೆಯಾಗಿದ್ದಾಳೆ. ಹೀಗಿರಲಾಗಿ, ತನ್ನ ಗಂಡನು ತೀರಿಕೊಂಡ ಮೇಲೆ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುವುದಿಲ್ಲ.

ನನ್ನ ಸಹೋದರ ಸಹೋದರಿಯರೇ, ಇದೇ ರೀತಿಯಲ್ಲಿ ನಿಮ್ಮ ಹಳೆಯ ಸ್ವಭಾವವು ಸತ್ತುಹೋಯಿತು; ನೀವು ಕ್ರಿಸ್ತನ ದೇಹದ ಮೂಲಕ ಧರ್ಮಶಾಸ್ತ್ರದಿಂದ ಬಿಡುಗಡೆಯಾದಿರಿ. ಈಗ ನೀವು, ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಾತನಿಗೆ ಸೇರಿದವರಾಗಿದ್ದೀರಿ. ನಾವು ದೇವರಿಗೋಸ್ಕರ ಫಲವನ್ನು ಫಲಿಸುವುದಕ್ಕಾಗಿ ಕ್ರಿಸ್ತನಿಗೆ ಸೇರಿದವರಾಗಿದ್ದೇವೆ. ಹಿಂದಿನ ಕಾಲದಲ್ಲಿ, ನಮ್ಮ ಪಾಪಾಧೀನಸ್ವಭಾವವು ನಮ್ಮನ್ನು ಆಳುತ್ತಿತ್ತು. ಪಾಪಕೃತ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಧರ್ಮಶಾಸ್ತ್ರವು ನಮ್ಮಲ್ಲಿ ಉಂಟುಮಾಡಿತು. ಮತ್ತು ನಾವು ಮಾಡಲಿಚ್ಛಿಸಿದ್ದ ಆ ಪಾಪಕೃತ್ಯಗಳು ನಮ್ಮ ದೇಹಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡವು. ಇದರಿಂದಾಗಿ, ನಾವು ಮಾಡಿದ ಕಾರ್ಯಗಳೆಲ್ಲ ನಮಗೆ ಆತ್ಮಿಕ ಮರಣವನ್ನು ಮಾತ್ರ ಉಂಟು ಮಾಡುತ್ತಿದ್ದವು. ಹಿಂದಿನ ಕಾಲದಲ್ಲಿ, ಧರ್ಮಶಾಸ್ತ್ರವು ನಮ್ಮನ್ನು ಸೆರೆಯಾಳುಗಳಂತೆ ಬಂಧಿಸಿತ್ತು. ಆದರೆ ನಮ್ಮ ಹಳೆಯ ಸ್ವಭಾವವು ಸತ್ತುಹೋದ ಕಾರಣ ನಾವು ಧರ್ಮಶಾಸ್ತ್ರದಿಂದ ಬಿಡುಗಡೆಯಾದೆವು. ಆದ್ದರಿಂದ ಈಗ ನಾವು ಲಿಖಿತ ನಿಯಮಗಳೊಡನೆ ಹಳೇ ರೀತಿಯಲ್ಲಿ ದೇವರ ಸೇವೆಮಾಡದೆ ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ದೇವರ ಸೇವೆ ಮಾಡುತ್ತೇವೆ.

ಪಾಪದೊಡನೆ ಹೋರಾಟ

ಪಾಪ ಮತ್ತು ಧರ್ಮಶಾಸ್ತ್ರ ಇವೆರಡೂ ಒಂದೇ ಎಂದು ನಾನು ಹೇಳುತ್ತಿರುವುದಾಗಿ ನೀವು ಭಾವಿಸಬಹುದು. ಆದರೆ ಅದು ನಿಜವಲ್ಲ. ಪಾಪವೆಂದರೆ ಏನೆಂಬುದನ್ನು ಕಲಿತುಕೊಳ್ಳಲು ಧರ್ಮಶಾಸ್ತ್ರವೊಂದೇ ನನಗೆ ಏಕೈಕ ಮಾರ್ಗವಾಗಿದೆ. ಧರ್ಮಶಾಸ್ತ್ರವಿಲ್ಲದಿದ್ದರೆ, ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. “ಬೇರೆಯವರ ವಸ್ತುಗಳನ್ನು ನೀವು ಆಶಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳಿದ್ದರಿಂದಲೇ ಅದು ನನಗೆ ತಿಳಿಯಿತು. ಆದರೆ ಪಾಪವು ಆ ಆಜ್ಞೆಯನ್ನೇ ಬಳಸಿಕೊಂಡು ನನ್ನಲ್ಲಿ ಎಲ್ಲಾ ಬಗೆಯ ದುರಾಶೆಗಳನ್ನು ಕೆರಳಿಸಿತು. ಆದ್ದರಿಂದ ಆ ಆಜ್ಞೆಯಿಂದಾಗಿ ಪಾಪವು ನನ್ನ ಬಳಿಗೆ ಬಂದಿತು. ಆದರೆ ಧರ್ಮಶಾಸ್ತ್ರವಿಲ್ಲದಿದ್ದರೆ, ಪಾಪಕ್ಕೆ ಅಧಿಕಾರವೇ ಇಲ್ಲ. ನಾನು ಧರ್ಮಶಾಸ್ತ್ರವನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ಧರ್ಮಶಾಸ್ತ್ರವಿಲ್ಲದವನಾಗಿ ಜೀವಂತವಾಗಿದ್ದೆನು. ಆದರೆ ಧರ್ಮಶಾಸ್ತ್ರದ ಆಜ್ಞೆಯು ನನ್ನ ಬಳಿಗೆ ಬಂದಾಗ, ಪಾಪವು ಜೀವಿಸತೊಡಗಿತು. 10 ನಾನು ಪಾಪದ ನಿಮಿತ್ತ ಆತ್ಮಿಕವಾಗಿ ಸತ್ತುಹೋದೆನು. ಜೀವವನ್ನು ತರಬೇಕಾಗಿದ್ದ ಆಜ್ಞೆಯೇ ನನಗೆ ಮರಣವನ್ನು ತಂದಿತು. 11 ಪಾಪವು ಆ ಆಜ್ಞೆಯನ್ನು ಬಳಸಿಕೊಂಡು ನನ್ನನ್ನು ವಂಚಿಸಿ, ನನ್ನಲ್ಲಿ ಆತ್ಮಿಕ ಮರಣವನ್ನು ಉಂಟುಮಾಡಿತು.

12 ಹೀಗಿರಲು ಧರ್ಮಶಾಸ್ತ್ರ ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಒಳ್ಳೆಯದೂ ಆಗಿದೆ. 13 ಹಾಗಾದರೆ, ಒಳ್ಳೆಯದೇ ನನಗೆ ಮರಣವನ್ನು ಬರಮಾಡಿತೆಂದರ್ಥವೇ? ಇಲ್ಲ! ಆದರೆ ಪಾಪವು ಒಳ್ಳೆಯದನ್ನೇ ಬಳಸಿಕೊಂಡು ನನಗೆ ಮರಣವನ್ನು ಬರಮಾಡಿತು. ಇದರಿಂದಾಗಿ, ನಾನು ಪಾಪದ ನಿಜಸ್ವರೂಪವನ್ನು ಕಾಣುವಂತಾಯಿತು. ಪಾಪವು ಬಹು ಕೆಟ್ಟದ್ದೆಂದು ಆಜ್ಞೆಯ ಮೂಲಕ ಸ್ಪಷ್ಟವಾಯಿತು.

ಮನುಷ್ಯನಲ್ಲಿ ಗೊಂದಲ

14 ಧರ್ಮಶಾಸ್ತ್ರವು ಆತ್ಮಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ಆತ್ಮಿಕನಲ್ಲ. ನಾನು ಪಾಪಕ್ಕೆ ಮಾರಲ್ಪಟ್ಟ ಗುಲಾಮನೋ ಎಂಬಂತೆ ಪಾಪವು ನನ್ನನ್ನು ಆಳುತ್ತದೆ. 15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.

21 ಹೀಗಿರಲಾಗಿ, ನಾನು ಈ ನಿಯಮವನ್ನು ಕಲಿತುಕೊಂಡಿದ್ದೇನೆ: ನಾನು ಒಳ್ಳೆಯದನ್ನು ಮಾಡಲಿಚ್ಛಿಸುವಾಗ, ಕೆಟ್ಟದ್ದು ನನ್ನೊಳಗೇ ಇರುತ್ತದೆ. 22 ನನ್ನ ಅಂತರಂಗದಲ್ಲಿ ದೇವರ ನಿಯಮದ ವಿಷಯದಲ್ಲಿ ನಾನು ಸಂತೋಷಪಡುತ್ತೇನೆ. 23 ಆದರೆ ನನ್ನ ದೇಹದಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತಿರುವುದನ್ನು ನಾನು ಕಾಣುತ್ತೇನೆ. ನನ್ನ ಅಂತರಂಗ ಒಪ್ಪಿಕೊಳ್ಳುವ ನಿಯಮಕ್ಕೆ ವಿರುದ್ಧವಾಗಿ ಆ ನಿಯಮ ಹೋರಾಡುತ್ತದೆ. ನನ್ನ ದೇಹದಲ್ಲಿ ಕೆಲಸ ಮಾಡುತ್ತಿರುವ ಆ ಮತ್ತೊಂದು ನಿಯಮವೇ ಪಾಪದ ನಿಯಮವಾಗಿದೆ. ಆ ನಿಯಮವು ನನ್ನನ್ನು ತನ್ನ ಸೆರೆಯಾಳನ್ನಾಗಿ ಮಾಡುತ್ತದೆ. 24 ನಾನು ದುರಾವಸ್ಥೆಗೆ ಒಳಗಾಗಿದ್ದೇನೆ. ನನಗೆ ಮರಣವನ್ನು ತರುವ ಈ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25 ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ!

ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.

ಯೆರೆಮೀಯ 46

ಜನಾಂಗಗಳ ವಿಷಯವಾಗಿ ಯೆಹೋವನ ಸಂದೇಶಗಳು

46 ಈ ಸಂದೇಶಗಳು ಪ್ರವಾದಿಯಾದ ಯೆರೆಮೀಯನಿಗೆ ಬಂದವು. ಈ ಸಂದೇಶಗಳು ವಿವಿಧ ಜನಾಂಗಗಳ ಬಗ್ಗೆ ಇವೆ.

ಈಜಿಪ್ಟಿನ ಬಗ್ಗೆ ಸಂದೇಶ

ಈ ಸಂದೇಶವು ಈಜಿಪ್ಟ್ ಜನಾಂಗದ ಬಗ್ಗೆ ಇದೆ. ಈ ಸಂದೇಶವು ಫರೋಹನೆಕೋವಿನ ಸೈನ್ಯದ ಬಗ್ಗೆ ಇದೆ. ಫರೋಹನೆಕೋವು ಈಜಿಪ್ಟಿನ ರಾಜನಾಗಿದ್ದನು. ಅವನ ಸೈನ್ಯವನ್ನು ಕರ್ಕೆಮೀಷ್ ಪಟ್ಟಣದಲ್ಲಿ ಸೋಲಿಸಲಾಯಿತು. ಕರ್ಕೆಮೀಷ್ ಪಟ್ಟಣವು ಯೂಫ್ರೇಟೀಸ್ ನದಿಯ ದಂಡೆಯ ಮೇಲಿದೆ. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದದಲ್ಲಿ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಫರೋಹನೆಕೋವಿನ ಸೈನ್ಯವನ್ನು ಕರ್ಕೆಮೀಷಿನಲ್ಲಿ ಸೋಲಿಸಿದನು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಈಜಿಪ್ಟಿಗೆ ಯೆಹೋವನ ಸಂದೇಶ ಹೀಗಿತ್ತು:

“ನಿಮ್ಮ ದೊಡ್ಡ ಮತ್ತು ಸಣ್ಣ ಗುರಾಣಿಗಳನ್ನು
    ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಹೊರಡಿರಿ.
ಕುದುರೆಗಳನ್ನು ಸಜ್ಜುಗೊಳಿಸಿರಿ.
    ಸೈನಿಕರೇ, ನಿಮ್ಮ ಕುದುರೆಯ ಮೇಲೆ ಹತ್ತಿರಿ,
ಯುದ್ಧಕ್ಕಾಗಿ ನಿಮ್ಮನಿಮ್ಮ ಸ್ಥಾನಗಳಿಗೆ ಹೋಗಿರಿ.
    ನಿಮ್ಮ ಶಿರಸ್ತ್ರಾಣಗಳನ್ನು ಧರಿಸಿರಿ,
ನಿಮ್ಮ ಭರ್ಜಿಗಳನ್ನು ಚೂಪುಗೊಳಿಸಿರಿ.
    ನಿಮ್ಮ ಕವಚಗಳನ್ನು ಧರಿಸಿರಿ.
ನಾನು ನೋಡುತ್ತಿರುವುದೇನು?
    ಸೈನ್ಯವು ಗಾಬರಿಪಟ್ಟಿದೆ.
ಸೈನಿಕರು ಓಡಿಹೋಗುತ್ತಿದ್ದಾರೆ.
    ಅವರ ಶೂರಸೈನಿಕರು ಸೋತಿದ್ದಾರೆ.
ಅವರು ಅವಸರದಿಂದ ಓಡಿಹೋಗುತ್ತಿದ್ದಾರೆ.
    ಅವರು ಹಿಂದಕ್ಕೆ ತಿರುಗಿ ಸಹ ನೋಡುತ್ತಿಲ್ಲ.
    ಎಲ್ಲಾ ಕಡೆಗೂ ಭೀತಿ ಆವರಿಸಿಕೊಂಡಿದೆ”
ಯೆಹೋವನು ಹೀಗೆಂದನು.

“ವೇಗಶಾಲಿಗಳೂ ಓಡಿಹೋಗಲಾರರು.
    ಶೂರಸೈನಿಕರೂ ತಪ್ಪಿಸಿಕೊಳ್ಳಲಾರರು.
ಅವರೆಲ್ಲರೂ ಎಡವಿ ಬಿದ್ದುಬಿಡುವರು.
    ಇದೆಲ್ಲ ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ನಡೆಯುವುದು.
ನೈಲ್ ನದಿಯಂತೆ ಯಾರು ಬರುತ್ತಿರುವರು?
    ಶಕ್ತಿಶಾಲಿಯಾದ ಮತ್ತು ರಭಸದಿಂದ ಹರಿಯುವ ನದಿಯಂತೆ ಯಾರು ಬರುತ್ತಿರುವರು?
ಭೋರ್ಗರೆಯುವ ನೈಲ್ ನದಿಯಂತೆ
    ಈಜಿಪ್ಟ್ ಬರುತ್ತಿದೆ.
ಬಲಿಷ್ಠವಾಗಿಯೂ ಮತ್ತು ರಭಸವಾಗಿಯೂ
    ಹರಿಯುವ ನದಿಯಂತೆ ಬರುತ್ತಿದೆ.
‘ನಾನು ಬಂದು ಭೂಮಿಯ ಮೇಲೆಲ್ಲ ವ್ಯಾಪಿಸಿಕೊಳ್ಳುವೆನು.
    ನಾನು ನಗರಗಳನ್ನೂ ಅಲ್ಲಿದ್ದ ಜನರನ್ನೂ ನಾಶಮಾಡುವೆನು’ ಎಂದು ಈಜಿಪ್ಟ್ ಹೇಳುತ್ತಿದೆ.
ಅಶ್ವಾರೋಹಿಗಳೇ, ಯುದ್ಧದಲ್ಲಿ ಧುಮುಕಿರಿ,
    ಸಾರಥಿಗಳೇ, ರಥಗಳನ್ನು ವೇಗವಾಗಿ ಓಡಿಸಿರಿ.
ಶೂರ ಸೈನಿಕರೇ, ಮುನ್ನುಗ್ಗಿರಿ;
    ಕೂಷ್ಯ ಮತ್ತು ಪೂಟ್ಯ ಸೈನಿಕರೇ, ನಿಮ್ಮ ಗುರಾಣಿಗಳನ್ನು ಹಿಡಿದುಕೊಂಡು ಹೋಗಿರಿ.
    ಲೂದ್ಯ ಸೈನಿಕರೇ, ನಿಮ್ಮ ಬಿಲ್ಲುಗಳನ್ನು ಉಪಯೋಗಿಸಿರಿ.

10 “ಆದರೆ ಆ ದಿನ ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಗೆಲ್ಲುವನು.
    ಆಗ ಆ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
    ಯೆಹೋವನ ವೈರಿಗಳು ತಕ್ಕ ಶಿಕ್ಷೆಯನ್ನು ಅನುಭವಿಸುವರು.
ಖಡ್ಗವು ಸರ್ವರನ್ನು ಕೊಲೆ ಮಾಡುವುದು.
    ಖಡ್ಗವು ತನ್ನ ರಕ್ತದ ದಾಹ ತೀರುವವರೆಗೂ ಕೊಲೆ ಮಾಡುವುದು.
ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಗೆ ಬಲಿ ನಡೆಯಬೇಕಾಗಿರುವುದರಿಂದ ಹೀಗೆಲ್ಲ ಆಗುವುದು.
    ಈಜಿಪ್ಟಿನ ಸೈನ್ಯವನ್ನು ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಯಾಗಿ ಕೊಡಲಾಗುವುದು.

11 “ಈಜಿಪ್ಟೇ, ಗಿಲ್ಯಾದಿಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ಬಾ.
    ನೀನು ಬಗೆಬಗೆಯ ಔಷಧಿಗಳನ್ನು ಉಪಯೋಗಿಸಬಹುದು.
    ಆದರೆ ಅದರಿಂದ ಪ್ರಯೋಜನವಿಲ್ಲ. ನೀನು ಗುಣಹೊಂದುವುದಿಲ್ಲ.
12 ಬೇರೆ ಜನಾಂಗಗಳು ನೀನು ಗೋಳಾಡುವದನ್ನು ಕೇಳಿಸಿಕೊಳ್ಳುವವು.
    ನಿನ್ನ ಗೋಳಾಟವು ಇಡೀ ಭೂಮಂಡಲದಲ್ಲೆಲ್ಲ ಕೇಳಿಸುವುದು.
‘ಒಬ್ಬ ಶೂರ ಸೈನಿಕನು’ ಮತ್ತೊಬ್ಬ ‘ಶೂರ ಸೈನಿಕನನ್ನು’ ಎದುರಿಸುವನು.
    ಆ ಶೂರ ಸೈನಿಕರಿಬ್ಬರೂ ಒಟ್ಟಿಗೆ ನೆಲಕ್ಕೆ ಬೀಳುವರು.”

13 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನು ಕೊಟ್ಟ ಸಂದೇಶವಿದು. ಈ ಸಂದೇಶ ನೆಬೂಕದ್ನೆಚ್ಚರನು ಈಜಿಪ್ಟಿನ ಮೇಲೆ ಧಾಳಿ ಮಾಡಲು ಬರುವುದರ ಬಗ್ಗೆ ಇದೆ.

14 “ಈಜಿಪ್ಟಿನಲ್ಲಿ ಈ ಸಂದೇಶವನ್ನು ಪ್ರಕಟಿಸು,
    ಮಿಗ್ದೋಲ್ ನಗರದಲ್ಲಿ ಇದನ್ನು ಪ್ರಚುರಪಡಿಸು.
    ನೋಫ್ ಮತ್ತು ತಹಪನೇಸ್‌ಗಳಲ್ಲಿ ಪ್ರಚುರಪಡಿಸಿರಿ,
‘ಯುದ್ಧಕ್ಕೆ ಸಿದ್ಧರಾಗಿರಿ,
    ಏಕೆಂದರೆ ನಿಮ್ಮ ಸುತ್ತಲೂ ಜನರು ಖಡ್ಗಕ್ಕೆ ಆಹುತಿಯಾಗಿದ್ದಾರೆ.’
15 ಈಜಿಪ್ಟೇ, ನಿಮ್ಮ ಶೂರಸೈನಿಕರು ಏಕೆ ಕೊಲ್ಲಲ್ಪಡುವರು?
    ಅವರು ನಿಲ್ಲಲಾರರು.
    ಏಕೆಂದರೆ ಯೆಹೋವನು ಅವರನ್ನು ನೆಲಕ್ಕೆ ತಳ್ಳುವನು.
16 ಆ ಸೈನಿಕರು ಮತ್ತೆಮತ್ತೆ ಎಡವುತ್ತಾರೆ.
    ಅವರು ಒಬ್ಬರಮೇಲೊಬ್ಬರು ಬೀಳುವರು.
‘ಎದ್ದೇಳು, ನಮ್ಮ ಜನರಲ್ಲಿಗೆ ನಾವು ಹೋಗೋಣ.
    ನಮ್ಮ ಜನ್ಮಭೂಮಿಗೆ ನಾವು ಹೋಗೋಣ.
    ನಮ್ಮ ವೈರಿಯು ನಮ್ಮನ್ನು ಸೋಲಿಸುತ್ತಿದ್ದಾನೆ.
    ನಾವು ಇಲ್ಲಿಂದ ಹೊರಡಬೇಕು’ ಎಂದು ಅವರು ಹೇಳಿಕೊಳ್ಳುವರು.
17 ‘ಈಜಿಪ್ಟಿನ ರಾಜನಾದ ಫರೋಹನು ಕೇವಲ ಒಂದು ಪೊಳ್ಳು ಧ್ವನಿ.
    ಅವನ ವೈಭವದ ದಿನಗಳು ಮುಗಿದವು’”
ಎಂದು ಆ ಸೈನಿಕರು ತಮ್ಮ ಜನ್ಮಭೂಮಿಯಲ್ಲಿ ಹೇಳುವರು.
18 ಈ ಸಂದೇಶವು ರಾಜನಿಂದ ಬಂದದ್ದು.
    ಆ ರಾಜನೇ ಸರ್ವಶಕ್ತನಾದ ಯೆಹೋವನು.
“ನನ್ನ ಜೀವದಾಣೆಯಾಗಿ ಹೇಳುತ್ತೇನೆ.
    ಬಲಿಷ್ಠನಾದ ನಾಯಕನು ಬರುವನು.
ಅವನು ತಾಬೋರ್ ಬೆಟ್ಟದಂತೆಯೂ ಸಮುದ್ರದ ಸಮೀಪದ ಕರ್ಮೆಲ್ ಗುಡ್ಡದಂತೆಯೂ ಇರುವನು.
19 ಈಜಿಪ್ಟಿನ ಜನಗಳೇ, ನಿಮ್ಮ ವಸ್ತುಗಳನ್ನು ಕಟ್ಟಿಕೊಂಡು
ಸೆರೆವಾಸಕ್ಕೆ ಸಿದ್ಧರಾಗಿರಿ.
    ಏಕೆಂದರೆ ನೋಫ್ ಪಟ್ಟಣವು ಹಾಳುಬಿದ್ದ ನಿರ್ಜನವಾದ ಪ್ರದೇಶವಾಗುವುದು.
ನಗರಗಳನ್ನು ನಾಶಪಡಿಸಲಾಗುವುದು;
    ಅವುಗಳು ನಿರ್ಜನವಾಗುವವು.

20 “ಈಜಿಪ್ಟು ಸುಂದರವಾದ ಹಸುವಿನಂತಿದೆ,
    ಆದರೆ ಉತ್ತರದಿಂದ ತೊಣಚಿಯು[a] ಅದನ್ನು ಪೀಡಿಸಲು ಬರುತ್ತಿದೆ.
21 ಸಂಬಳಕ್ಕಾಗಿ ದುಡಿಯುವ ಈಜಿಪ್ಟಿನ ಸೈನಿಕರು ಕೊಬ್ಬಿದ ಕರುಗಳಂತಿದ್ದಾರೆ.
ಅವರೆಲ್ಲರು ಹಿಂತಿರುಗಿ ಓಡಿಹೋಗುವರು.
    ಅವರು ಧೈರ್ಯದಿಂದ ಧಾಳಿಯನ್ನು ಎದುರಿಸಲಾರರು.
ಅವರ ವಿನಾಶದ ಕಾಲ ಬರುತ್ತಿದೆ.
    ಬೇಗ ಅವರನ್ನು ದಂಡಿಸಲಾಗುವುದು.
22 ಈಜಿಪ್ಟು ಬುಸುಗುಟ್ಟಿ ತಪ್ಪಿಸಿಕೊಳ್ಳಲು
    ಪ್ರಯತ್ನಮಾಡುವ ಹಾವಿನಂತಿದೆ.
ವೈರಿಗಳು ಬಹಳ ಹತ್ತಿರಕ್ಕೆ ಬಂದಿದ್ದಾರೆ.
    ಈಜಿಪ್ಟಿನ ಸೈನಿಕರು ಓಡಿಹೋಗಲು ಪ್ರಯತ್ನ ಮಾಡುತ್ತಿದ್ದಾರೆ.
ವೈರಿಗಳು ಕೊಡಲಿಯನ್ನು ಹಿಡಿದುಕೊಂಡು ಈಜಿಪ್ಟಿನ ಮೇಲೆ ಬೀಳುವರು;
    ಅವರು ಮರ ಕಡಿಯುವ ಜನರಂತಿದ್ದಾರೆ.”

23 ಯೆಹೋವನು ಹೀಗೆನ್ನುತ್ತಾನೆ:
“ವೈರಿಗಳು ಈಜಿಪ್ಟಿನ ಅರಣ್ಯವನ್ನು (ಸೈನ್ಯವನ್ನು) ಕತ್ತರಿಸುವರು.
    ಆ ಅರಣ್ಯದಲ್ಲಿ (ಸೈನ್ಯದಲ್ಲಿ) ಅನೇಕ ಮರಗಳಿವೆ (ಸೈನಿಕರಿದ್ದಾರೆ).
    ಆದರೂ ಅದನ್ನು ಕತ್ತರಿಸಲಾಗುವುದು.
ಮಿಡತೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವೈರಿಗಳ ಸೈನಿಕರಿದ್ದಾರೆ.
    ಆ ಸೈನಿಕರನ್ನು ಯಾರಿಂದಲೂ ಎಣಿಸಲಾಗದು.
24 ಈಜಿಪ್ಟಿಗೆ ಅವಮಾನವಾಗುವುದು.
    ಉತ್ತರದ ಶತ್ರು ಅವಳನ್ನು ಸೋಲಿಸುವುದು.”

25 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: “ಬಹುಬೇಗನೆ ನಾನು ಥೀಬಸ್ಸಿನ ಆಮೋನ್ ದೇವತೆಯನ್ನು ದಂಡಿಸುವೆನು. ನಾನು ಫರೋಹನನ್ನು, ಈಜಿಪ್ಟನ್ನು ಮತ್ತು ಅವಳ ದೇವರುಗಳನ್ನು ದಂಡಿಸುವೆನು. ನಾನು ಈಜಿಪ್ಟಿನ ರಾಜರನ್ನು ದಂಡಿಸುವೆನು. ಫರೋಹನನ್ನು ನಂಬಿದವರನ್ನು ದಂಡಿಸುವೆನು. 26 ಆ ಜನರನ್ನೆಲ್ಲ ಅವರ ಶತ್ರುಗಳು ಸೋಲಿಸುವಂತೆ ಮಾಡುವೆನು. ಅವರ ಶತ್ರುಗಳು ಅವರನ್ನು ಕೊಲ್ಲಬಯಸುವರು. ನಾನು ಆ ಜನರನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಒಪ್ಪಿಸುವೆನು.”

“ಬಹಳ ಹಿಂದೆ, ಈಜಿಪ್ಟ್ ದೇಶದಲ್ಲಿ ಶಾಂತಿ ನೆಲೆಸಿತ್ತು. ತೊಂದರೆಗಳ ಈ ದಿನಗಳ ತರುವಾಯ ಈಜಿಪ್ಟ್ ಪುನಃ ಶಾಂತಿಯ ಬೀಡಾಗುವುದು” ಇದು ಯೆಹೋವನ ನುಡಿ.

ಉತ್ತರ ಇಸ್ರೇಲಿಗೆ ಸಂದೇಶ

27 “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ.
    ಇಸ್ರೇಲೇ, ಅಂಜಬೇಡ.
ಆ ದೂರಸ್ಥಳಗಳಿಂದ ನಾನು ನಿನ್ನನ್ನು ಖಂಡಿತವಾಗಿ ರಕ್ಷಿಸುತ್ತೇನೆ.
    ಬಂಧಿಯಾಗಿರುವ ದೇಶಗಳಿಂದ ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ.
ಯಾಕೋಬು ಪುನಃ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇರುವುದು.
    ಯಾರೂ ಅದನ್ನು ಹೆದರಿಸಲಾರರು.”
28 ಯೆಹೋವನು ಹೀಗೆನ್ನುತ್ತಾನೆ:
“ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ.
    ನಾನು ನಿನ್ನ ಜೊತೆಯಲ್ಲಿದ್ದೇನೆ.
ನಾನು ನಿನ್ನನ್ನು ಅನೇಕ ಸ್ಥಳಗಳಿಗೆ ಕಳುಹಿಸಿದೆ.
    ನಾನು ಆ ಜನಾಂಗಗಳನ್ನೆಲ್ಲ ಸಂಪೂರ್ಣವಾಗಿ ನಾಶಮಾಡುತ್ತೇನೆ.
    ಆದರೆ ನಿನ್ನನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ.
ನೀನು ಮಾಡಿದ ದುಷ್ಕೃತ್ಯಗಳಿಗಾಗಿ ನಿನಗೆ ಶಿಕ್ಷೆ ಆಗಲೇಬೇಕು.
ಆದ್ದರಿಂದ ನೀನು ದಂಡನೆಯಿಂದ ತಪ್ಪಿಸಿಕೊಳ್ಳಲು ನಾನು ಬಿಡುವದಿಲ್ಲ.
ನಾನು ನಿನಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ, ಆದರೆ ನ್ಯಾಯವಂತನಾಗಿರುವೆನು.”

ಕೀರ್ತನೆಗಳು 22

ರಚನೆಗಾರ: ದಾವೀದ.

22 ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ತೊರೆದಿರುವೆ?
    ನನ್ನನ್ನು ರಕ್ಷಿಸದೆ ಯಾಕೆ ಬಹುದೂರವಾಗಿರುವೆ!
    ಸಹಾಯಕ್ಕಾಗಿ ನಾನು ಗೋಳಾಡುತ್ತಿದ್ದರೂ ಕೇಳದೆ ಯಾಕೆ ಬಹದೂರವಾಗಿರುವೆ?
ನನ್ನ ದೇವರೇ, ಹಗಲಿನಲ್ಲಿ ನಾನು ನಿನ್ನನ್ನು ಕೂಗಿಕೊಂಡೆನು,
    ಆದರೂ ನೀನು ನನಗೆ ಉತ್ತರಿಸಲಿಲ್ಲ.
ರಾತ್ರಿಯಲ್ಲೂ ನಿನ್ನನ್ನು ಕೂಗಿಕೊಳ್ಳುತ್ತಲೇ ಇದ್ದೆನು.

ದೇವರೇ, ಪರಿಶುದ್ಧನು ನೀನೇ.
    ನೀನು ರಾಜನಂತೆ ಕುಳಿತಿರುವೆ.
    ಇಸ್ರೇಲರ ಸ್ತುತಿಗಳೇ ನಿನ್ನ ಸಿಂಹಾಸನ.
ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟಿದ್ದರು.
    ಅವರು ನಿನ್ನಲ್ಲಿಯೇ ಭರವಸವಿಟ್ಟಿದ್ದರು, ನೀನು ಅವರನ್ನು ರಕ್ಷಿಸಿದೆ.
ನಮ್ಮ ಪೂರ್ವಿಕರು ನಿನ್ನಲ್ಲಿ ಮೊರೆಯಿಟ್ಟಾಗ ಅವರನ್ನು ಶತ್ರುಗಳಿಂದ ಬಿಡಿಸಿದೆ.
    ನಿನ್ನಲ್ಲಿ ಭರವಸವಿಟ್ಟಿದ್ದ ಅವರಿಗೆ ನಿರಾಶೆಯಾಗಲಿಲ್ಲ.
ಹೀಗಿರಲು, ನಾನು ಹುಳವೇ? ನಾನು ಮನುಷ್ಯನಲ್ಲವೇ?
    ನನ್ನ ವಿಷಯದಲ್ಲಿ ಜನರು ನಾಚಿಕೆಪಡುತ್ತಾರೆ; ಅವರು ನನ್ನನ್ನು ತಿರಸ್ಕರಿಸುತ್ತಾರೆ.
ನನ್ನನ್ನು ನೋಡಿದವರೆಲ್ಲರೂ ಗೇಲಿಮಾಡುವರು.
    ಅವರು ಓರೇ ತುಟಿಮಾಡಿ ತಲೆಯಾಡಿಸುತ್ತಾ,
“ಯೆಹೋವನಿಗೆ ಮೊರೆಯಿಡು,
    ಆತನು ನಿನ್ನನ್ನು ರಕ್ಷಿಸಬಹುದು.
    ಆತನು ನಿನ್ನನ್ನು ಬಹಳವಾಗಿ ಇಷ್ಟಪಡುವುದಾದರೆ ನಿನ್ನನ್ನು ಖಂಡಿತವಾಗಿ ರಕ್ಷಿಸುವನು” ಎಂದು ಹೇಳುತ್ತಾರೆ.

ನಾನಂತೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ಹುಟ್ಟಿದ ದಿನದಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
    ನಾನಿನ್ನೂ ತಾಯಿಯ ಗರ್ಭದಲ್ಲಿದ್ದಾಗ ನನಗೆ ಭರವಸೆ ನೀಡಿ ಸಂತೈಸಿದವನು ನೀನೇ.
10 ಹುಟ್ಟಿದ ದಿನದಿಂದಲೂ ನೀನೇ ನನ್ನ ದೇವರಾಗಿರುವೆ.
    ತಾಯಿಯ ಗರ್ಭದಿಂದ ಬಂದಂದಿನಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.

11 ಹೀಗಿರಲು, ನನ್ನನ್ನು ತೊರೆಯಬೇಡ!
    ಆಪತ್ತು ಸಮೀಪಿಸಿದೆ, ನನಗೆ ಸಹಾಯಮಾಡಲು ಯಾರೂ ಇಲ್ಲ.
12 ಜನರು ನನ್ನನ್ನು ಸುತ್ತುಗಟ್ಟಿದ್ದಾರೆ;
    ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ.
13 ಪ್ರಾಣಿಯೊಂದನ್ನು ಸೀಳಿಹಾಕುತ್ತಾ ಗರ್ಜಿಸುವ ಸಿಂಹದಂತೆ
    ಅವರ ಬಾಯಿಗಳು ಅಗಲವಾಗಿ ತೆರೆದಿವೆ.

14 ನೆಲದ ಮೇಲೆ ಸುರಿದ ನೀರಿನಂತೆ
    ನನ್ನ ಬಲವು ಇಲ್ಲವಾಗಿದೆ;
ನನ್ನ ಮೂಳೆಗಳೆಲ್ಲಾ ಸಡಿಲಗೊಂಡಿವೆ;
    ಹೃದಯವು ಮೇಣದಂತೆ ಕರಗಿಹೋಗಿದೆ.
15 ನನ್ನ ಶಕ್ತಿಯು ಒಡೆದುಹೋದ ಮಡಿಕೆಯ ಒಣ ತುಂಡಿನಂತಿದೆ.
    ನನ್ನ ನಾಲಿಗೆಯು ಬಾಯಿ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತಿದೆ.
    ನೀನು ನನ್ನನ್ನು ಮಣ್ಣಿಗೆ ಸೇರಿಸಿರುವೆ.
16 ದುಷ್ಟರು ನಾಯಿಗಳಂತೆ ನನ್ನನ್ನು ಸುತ್ತಿಕೊಂಡಿದ್ದಾರೆ.
    ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.[a]
17 ನನ್ನ ಮೂಳೆಗಳೆಲ್ಲಾ ಎದ್ದುಕಾಣುತ್ತಿವೆ!
    ಜನರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದಾರೆ!
    ಅವರು ನನ್ನನ್ನೇ ನೋಡುತ್ತಿದ್ದಾರೆ!
18 ಅವರು ನನ್ನ ಮೇಲ್ಹೊದಿಕೆಯನ್ನು ಪಾಲು ಮಾಡಿಕೊಳ್ಳುವರು;
    ನನ್ನ ನಿಲುವಂಗಿಗಾಗಿ ಚೀಟುಹಾಕುವರು.

19 ಯೆಹೋವನೇ, ನನ್ನನ್ನು ತೊರೆಯಬೇಡ!
    ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು!
20 ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು.
    ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು.
21 ನನ್ನನ್ನು ಸಿಂಹದ ಬಾಯಿಂದ ಬಿಡಿಸು;
    ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು.

22 ನಿನ್ನ ನಾಮದ ಕುರಿತು ನನ್ನ ಸಹೋದರರಿಗೆ ಹೇಳುವೆನು;
    ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು.
23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
    ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
    ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
    ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
    ಆತನು ಅವರಿಗೆ ಮರೆಯಾಗುವುದಿಲ್ಲ.

25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
    ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
    ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
    ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[b]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
    ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
    ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
    ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
    ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
    ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[c]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International