M’Cheyne Bible Reading Plan
ಕಣ
3 ರೂತಳ ಅತ್ತೆಯಾದ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮದುವೆಮಾಡಿಕೊಂಡು ಕುಟುಂಬಸ್ತಳಾಗಿರುವುದು ಎಷ್ಟೋ ಒಳ್ಳೆಯದು. 2 ಬೋವಜನು ನಮ್ಮ ಸಂಬಂಧಿಕನಾಗಿದ್ದಾನೆ. ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಹಕ್ಕಲಾಯ್ದಿರುವೆ. ಇಂದು ರಾತ್ರಿ ಅವನು ಕಣದಲ್ಲಿ ಜವೆಗೋಧಿಯನ್ನು ತೂರುವನು. 3 ನೀನು ಸ್ನಾನ ಮಾಡಿ ಶೃಂಗರಿಸಿಕೊಂಡು ಶ್ರೇಷ್ಠವಾದ ಉಡುಪುಗಳನ್ನು ಧರಿಸಿಕೊಂಡು ಕಣಕ್ಕೆ ಹೋಗು. ಆದರೆ ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೆ ಅವನಿಗೆ ಮರೆಯಾಗಿರು. 4 ಊಟವಾದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಅವನು ಮಲಗುತ್ತಾನೆ. ಅವನು ಎಲ್ಲಿ ಮಲಗುತ್ತಾನೆಂಬುದನ್ನು ನೋಡಿಕೊಂಡಿದ್ದು ಅಲ್ಲಿಗೆ ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅಲ್ಲಿಯೇ ಮಲಗಿಕೋ. ನೀನು ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುತ್ತಾನೆ” ಎಂದಳು.
5 ಆಗ ರೂತಳು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಉತ್ತರಕೊಟ್ಟಳು.
6 ರೂತಳು ಕಣಕ್ಕೆ ಹೋದಳು. ಅತ್ತೆಯು ಹೇಳಿದಂತೆಯೇ ರೂತಳು ಮಾಡಿದಳು. 7 ಅನ್ನಪಾನಗಳನ್ನು ತೆಗೆದುಕೊಂಡು ಸಂತೃಪ್ತನಾಗಿದ್ದ ಬೋವಜನು ಧಾನ್ಯದ ರಾಶಿಯ ಹತ್ತಿರ ಮಲಗಲು ಹೋದನು. ಆಗ ರೂತಳು ರಹಸ್ಯವಾಗಿ ಬಂದು ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅವನ ಪಾದಗಳ ಬಳಿಯಲ್ಲಿಯೇ ಮಲಗಿದಳು.
8 ಮಧ್ಯರಾತ್ರಿಯ ಸುಮಾರಿನಲ್ಲಿ ಬೋವಜನು ನಿದ್ರೆಯಲ್ಲಿ ಹೊರಳಾಡಿ ಎಚ್ಚೆತ್ತನು. ಒಬ್ಬ ಸ್ತ್ರೀಯು ತನ್ನ ಪಾದಗಳ ಬಳಿಯಲ್ಲಿ ಮಲಗಿರುವುದನ್ನು ಕಂಡು ಅವನಿಗೆ ಬಹಳ ಆಶ್ಚರ್ಯವಾಯಿತು. 9 “ನೀನು ಯಾರು?” ಎಂದು ಬೋವಜನು ಕೇಳಿದನು.
“ನಾನು ನಿಮ್ಮ ದಾಸಿಯಾದ ರೂತಳು. ನೀನು ನನ್ನ ಸಂರಕ್ಷಕ. ನಿನ್ನ ಹೊದಿಕೆಯನ್ನು ನನ್ನ ಮೇಲೆ ಹಾಕು” ಎಂದು ಅವಳು ಬೇಡಿಕೊಂಡಳು.
10 ಆಗ ಬೋವಜನು, “ಯುವತಿಯೇ, ಯೆಹೋವನು ನಿನಗೆ ದಯೆತೋರಲಿ. ನೀನು ನನ್ನ ಮೇಲೆ ತುಂಬಾ ಕರುಣೆಯನ್ನು ತೋರಿರುವೆ. ನೀನು ಮೊದಲು ನೊವೊಮಿಗೆ ತೋರಿದ ಕರುಣೆಗಿಂತಲೂ ಹೆಚ್ಚಿನ ಕರುಣೆಯನ್ನು ನನಗೆ ತೋರಿರುವೆ. ನೀನು ಒಬ್ಬ ತರುಣನನ್ನು ಅವನು ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಮದುವೆಗಾಗಿ ಆರಿಸಿಕೊಳ್ಳಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. 11 ತರುಣಿಯೇ, ಹೆದರಬೇಡ, ನಿನ್ನ ಇಚ್ಛೆಯನ್ನು ನೆರವೇರಿಸುತ್ತೇನೆ. ನೀನು ಒಳ್ಳೆಯ ಸ್ತ್ರೀ ಎಂಬುದು ನಮ್ಮ ಪಟ್ಟಣದವರಿಗೆಲ್ಲಾ ಗೊತ್ತಿದೆ. 12 ನಾನು ಹತ್ತಿರದ ಸಂಬಂಧಿ ಎಂಬುದು ನಿಜ. ಆದರೆ ನನಗಿಂತಲೂ ಹತ್ತಿರದ ಸಂಬಂಧಿ ಇನ್ನೊಬ್ಬನಿದ್ದಾನೆ. 13 ಈ ರಾತ್ರಿ ಇಲ್ಲಿಯೇ ಇರು. ಆ ಮನುಷ್ಯನು ನಿನಗೆ ಸಹಾಯ ಮಾಡುವನೋ ಎಂಬುದನ್ನು ನಾಳೆ ಬೆಳಿಗ್ಗೆ ನೋಡೋಣ. ಅವನು ನಿನಗೆ ಸಹಾಯ ಮಾಡಲು ಒಪ್ಪಿದರೆ ಒಳ್ಳೆಯದು. ಅವನು ನಿನಗೆ ಸಹಾಯ ಮಾಡಲು ಒಪ್ಪದಿದ್ದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ. ಅಲ್ಲದೆ ಎಲೀಮೆಲೆಕನ ಭೂಮಿಯನ್ನು ನಿನಗೋಸ್ಕರ ಕೊಂಡುಕೊಳ್ಳುತ್ತೇನೆಂದು ಯೆಹೋವನ ಆಣೆಯಾಗಿ ಹೇಳುತ್ತೇನೆ. ಬೆಳಗಾಗುವವರೆಗೆ ಇಲ್ಲಿ ಮಲಗಿರು” ಎಂದು ಹೇಳಿದನು.
14 ರೂತಳು ಬೆಳಗಿನ ಜಾವದವರೆಗೂ ಬೋವಜನ ಪಾದಗಳ ಬಳಿಯಲ್ಲಿಯೇ ಮಲಗಿದ್ದು ಇನ್ನೂ ಕತ್ತಲಿರುವಾಗಲೇ ಎದ್ದಳು.
ಬೋವಜನು ಅವಳಿಗೆ, “ನೀನು ನಿನ್ನೆ ರಾತ್ರಿ ನನ್ನಲ್ಲಿಗೆ ಬಂದಿದ್ದೆ ಎಂಬ ಸಂಗತಿಯು ರಹಸ್ಯವಾಗಿರಲಿ” ಎಂದು ಹೇಳಿದನು. 15 ಬೋವಜನು, “ನಿನ್ನ ಹೊದಿಕೆಯನ್ನು ಇಲ್ಲಿ ತೆಗೆದುಕೊಂಡು ಬಾ. ಅದನ್ನು ಸ್ವಲ್ಪ ಅಗಲಮಾಡಿ ಹಿಡಿದುಕೋ” ಎಂದನು.
ರೂತಳು ತನ್ನ ಹೊದಿಕೆಯನ್ನು ಅಗಲಮಾಡಿ ಹಿಡಿದಳು. ಬೋವಜನು ಆರು ಸೇರಿನಷ್ಟು ಜವೆಗೋಧಿಯನ್ನು ಅದರಲ್ಲಿ ಸುರಿದು ಚೆನ್ನಾಗಿ ಕಟ್ಟಿ ಅವಳ ಮೇಲೆ ಹೊರಿಸಿದನು. ಬಳಿಕ ಆಕೆ ಊರೊಳಗೆ ಹೋದಳು.
16 ರೂತಳು ತನ್ನ ಅತ್ತೆಯಾದ ನೊವೊಮಿಯ ಮನೆಗೆ ಬಂದಳು. ನೊವೊಮಿಯು ಆಕೆಗೆ, “ನನ್ನ ಮಗಳೇ, ನಿನ್ನ ಕಾರ್ಯವೇನಾಯಿತು?” ಎಂದು ಕೇಳಿದಳು.
ರೂತಳು ನಡೆದ ಸಂಗತಿಯನ್ನೂ ಬೋವಜನು ತನಗೆ ಹೇಳಿದ್ದನ್ನೂ ಅತ್ತೆಗೆ ತಿಳಿಸಿದಳು. 17 ಅಲ್ಲದೆ “ನೀನು ಅತ್ತೆಯ ಬಳಿಗೆ ಬರಿಗೈಲಿ ಹೋಗಬಾರದೆಂದು ಆರು ಸೇರು ಜವೆಗೋಧಿಯನ್ನು ಕೊಟ್ಟನು” ಎಂದು ಹೇಳಿದಳು.
18 ನೊವೊಮಿಯು, “ನನ್ನ ಮಗಳೇ, ಈ ಕಾರ್ಯದ ಫಲಿತಾಂಶ ಗೊತ್ತಾಗುವವರೆಗೂ ತಾಳ್ಮೆಯಿಂದಿರು. ಈ ಹೊತ್ತು ಅದನ್ನು ಇತ್ಯರ್ಥಪಡಿಸುವವರೆಗೆ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು.
ಬೋವಜ ಮತ್ತು ಮತ್ತೊಬ್ಬ ಸಂಬಂಧಿಕನು
4 ಬೋವಜನು ನಗರದ್ವಾರದ ಬಳಿಯಲ್ಲಿ ಕುಳಿತುಕೊಂಡನು. ತಾನು ಹೇಳಿದ್ದ ಸಮೀಪಬಂಧುವು ಅಲ್ಲಿಂದ ಹಾದು ಹೋಗುವವರೆಗೂ ಅವನು ಅಲ್ಲಿಯೇ ಕುಳಿತಿದ್ದನು. ಅವನನ್ನು ಕಂಡ ಬೋವಜನು, “ಸ್ನೇಹಿತನೇ ಇಲ್ಲಿ ಬಾ, ಇಲ್ಲಿ ಕುಳಿತುಕೋ” ಎಂದು ಕರೆದನು.
2 ಆಮೇಲೆ ಬೋವಜನು ನಗರದ ಹಿರಿಯರಲ್ಲಿ ಹತ್ತುಮಂದಿಯನ್ನು ಕರೆದು ಅವರಿಗೆ, “ಇಲ್ಲಿ ಕುಳಿತುಕೊಳ್ಳಿ” ಎಂದು ಹೇಳಿದನು. ಅವರೂ ಕುಳಿತುಕೊಂಡರು.
3 ಆಗ ಬೋವಜನು ಆ ಸಮೀಪಬಂಧುವಿನೊಡನೆ ಮಾತಾಡಿ, “ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದಿದ್ದಾಳೆ. ಅವಳು ನಮ್ಮ ಸಂಬಂಧಿಯಾದ ಎಲೀಮೆಲೆಕನ ಹೊಲವನ್ನು ಮಾರುತ್ತಿದ್ದಾಳೆ. 4 ನಾನು ಇದರ ಬಗ್ಗೆ ನಿನಗೆ ಈ ಜನರ ಸಮ್ಮುಖದಲ್ಲಿ ಮತ್ತು ನಮ್ಮ ಹಿರಿಯರ ಸಮ್ಮುಖದಲ್ಲಿ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನೀನು ಆ ಹೊಲವನ್ನು ಕೊಂಡುಕೊಳ್ಳ ಬಯಸಿದರೆ ಕೊಂಡುಕೋ. ನಿನಗೆ ಕೊಂಡುಕೊಳ್ಳಲು ಇಷ್ಟವಿಲ್ಲದಿದ್ದರೆ ನನಗೆ ಹೇಳು. ನಿನ್ನ ಬಳಿಕ ಆ ಹೊಲವನ್ನು ಕೊಂಡುಕೊಳ್ಳುವ ಹಕ್ಕು ನನಗಿದೆ. ನೀನು ಆ ಹೊಲವನ್ನು ಕೊಂಡುಕೊಳ್ಳದಿದ್ದರೆ ನಾನು ಕೊಂಡುಕೊಳ್ಳುತ್ತೇನೆ.” ಅದಕ್ಕೆ ಅವನು, “ಸರಿ, ನಾನೇ ಕೊಂಡುಕೊಳ್ಳುತ್ತೇನೆ.” ಎಂದನು.
5 ಅದಕ್ಕೆ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಂಡರೆ ಸತ್ತವನ ಹೆಂಡತಿಯೂ ಮೋವಾಬ್ಯಳೂ ಆಗಿರುವ ರೂತಳನ್ನು ಸಹ ನೀನು ಮದುವೆಯಾಗಬೇಕು. ರೂತಳಿಗೆ ಜನಿಸುವ ಮಗನು ಆ ಹೊಲಕ್ಕೆ ಹಕ್ಕುದಾರನಾಗುವನು. ಹೀಗೆ ಈ ಭೂಮಿಯು ಸತ್ತು ಹೋದವನ ಕುಟುಂಬದಲ್ಲಿಯೇ ಇದ್ದು ಅವನ ಹೆಸರಿನಲ್ಲಿಯೇ ಮುಂದುವರಿಯುವುದು” ಎಂದು ಹೇಳಿದನು.
6 ಅದಕ್ಕೆ ಆ ಸಮೀಪಬಂಧುವು, “ನಾನು ಆ ಹೊಲವನ್ನು ಕೊಂಡುಕೊಳ್ಳಲಾರೆ. ಆ ಹೊಲ ನನಗೆ ಸೇರಬೇಕಾದರೂ ನಾನು ಅದನ್ನು ಕೊಂಡುಕೊಳ್ಳಲಾರೆ. ಒಂದುವೇಳೆ ನಾನು ಅದನ್ನು ಕೊಂಡುಕೊಂಡರೆ ನನ್ನ ಸ್ವಂತ ಹೊಲವನ್ನೇ ಕಳೆದುಕೊಳ್ಳಬೇಕಾಗುವುದು. ಆದ್ದರಿಂದ ನೀನೇ ಆ ಹೊಲವನ್ನು ಕೊಂಡುಕೊಳ್ಳಬಹುದು” ಎಂದು ಉತ್ತರಿಸಿದನು. 7 (ಇಸ್ರೇಲರಲ್ಲಿ ಪೂರ್ವಕಾಲದ ಪದ್ಧತಿಯೇನೆಂದರೆ, ಯಾವುದಾದರೊಂದು ವಸ್ತುವನ್ನು ಕೊಂಡುಕೊಳ್ಳುವಾಗಲೂ ತೆಗೆದುಕೊಳ್ಳುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಒಬ್ಬನು ತನ್ನ ಕೆರವನ್ನು ಮತ್ತೊಬ್ಬನಿಗೆ ಕೊಡುತ್ತಿದ್ದನು.) 8 ಆದ್ದರಿಂದ ಆ ಸಮೀಪಬಂಧುವು, “ನೀನೇ ಹೊಲವನ್ನು ಕೊಂಡುಕೋ” ಎಂದು ಹೇಳಿ ತನ್ನ ಕೆರವನ್ನು ತೆಗೆದು ಬೋವಜನಿಗೆ ಕೊಟ್ಟನು.
9 ಆಗ ಬೋವಜನು ಹಿರಿಯರಿಗೂ ಎಲ್ಲಾ ಜನರಿಗೂ, “ನಾನು ಎಲೀಮೆಲೆಕ್, ಕಿಲ್ಯೋನ್, ಮಹ್ಲೋನ್ ಇವರೆಲ್ಲರ ಆಸ್ತಿಯನ್ನು ನೊವೊಮಿಯಿಂದ ಕೊಂಡುಕೊಳ್ಳುತ್ತಿದ್ದೇನೆ. ಇದಕ್ಕೆ ನೀವು ಸಾಕ್ಷಿಯಾಗಿದ್ದೀರಿ. 10 ಮೋವಾಬ್ಯಳೂ ಮಹ್ಲೋನನ ಹೆಂಡತಿಯೂ ಆಗಿದ್ದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳುತ್ತೇನೆ. ಸತ್ತುಹೋದ ಮನುಷ್ಯನ ಆಸ್ತಿಯು ಅವನ ಹೆಸರಿನಲ್ಲಿ ಉಳಿಯಲೆಂದು ನಾನು ಹೀಗೆ ಮಾಡುತ್ತಿದ್ದೇನೆ. ಹೀಗೆ ಮಾಡುವುದರಿಂದ ಸತ್ತವನ ಹೆಸರು ಅವನ ಕುಟುಂಬದಲ್ಲಿಯೂ ಅವನ ಆಸ್ತಿಯಲ್ಲಿಯೂ ಉಳಿಯುವುದು. ಇದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ” ಎಂದು ನುಡಿದನು.
11 ನಗರದ್ವಾರದಲ್ಲಿ ಸೇರಿದ್ದ ಜನರೆಲ್ಲರು ಮತ್ತು ಹಿರಿಯರು ಸಾಕ್ಷಿಗಳಾಗಿದ್ದರು. ಅವರು, “ಈ ಸ್ತ್ರೀಯು ನಿನ್ನ ಮನೆಗೆ ಬರುವಳು. ಯೆಹೋವನು ಅವಳನ್ನು ರಾಹೇಲಳಂತೆಯೂ ಲೇಯಾಳಂತೆಯೂ ಮಾಡಲಿ. ರಾಹೇಲಳು ಮತ್ತು ಲೇಯಾಳು ಇಸ್ರೇಲಿನ ಮನೆಯನ್ನು ಕಟ್ಟಿದರು. ಎಫ್ರಾತಿನಲ್ಲಿ ಪ್ರಭಾವ ಶಾಲಿಯಾಗು! ಬೆತ್ಲೆಹೇಮಿನಲ್ಲಿ ಸುಪ್ರಸಿದ್ಧನಾಗು! 12 ತಾಮಾರಳು ಯೆಹೂದನ ಮಗನಾದ ಪೆರೆಚನಿಗೆ ಜನ್ಮಕೊಟ್ಟಳು. ಅದರಿಂದ ಅವನ ಕುಟುಂಬವು ಅಭಿವೃದ್ಧಿ ಹೊಂದಿತು. ಹಾಗೆಯೇ ರೂತಳಿಂದ ಯೆಹೋವನು ನಿನಗೆ ಹಲವಾರು ಮಕ್ಕಳನ್ನು ಕೊಡಲಿ; ಅವನಂತೆಯೇ ನಿನ್ನ ಕುಟುಂಬವೂ ಅಭಿವೃದ್ಧಿ ಹೊಂದಲಿ” ಎಂದು ಆಶೀರ್ವದಿಸಿದರು.
13 ಬೋವಜನು ರೂತಳನ್ನು ಮದುವೆಯಾದನು. ಯೆಹೋವನ ಕೃಪೆಯಿಂದ ರೂತಳು ಗರ್ಭವತಿಯಾಗಿ ಗಂಡುಮಗುವಿಗೆ ಜನ್ಮಕೊಟ್ಟಳು. 14 ನಗರದ ಸ್ತ್ರೀಯರು ನೊವೊಮಿಗೆ, “ನಿನಗೆ ಈ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಇವನು ಇಸ್ರೇಲಿನಲ್ಲಿ ಸುಪ್ರಸಿದ್ಧನಾಗಲಿ. 15 ಅವನು ನಿನ್ನನ್ನು ಉಜ್ಜೀವಿಸಮಾಡುವನು. ವೃದ್ಧಾಪ್ಯದಲ್ಲಿ ನಿನ್ನ ಸಂರಕ್ಷಕನಾಗಿರಲಿ. ನಿನ್ನನ್ನು ಪ್ರೀತಿಸುವ ನಿನ್ನ ಸೊಸೆಯು ನಿನಗಾಗಿ ಈ ಮಗುವನ್ನು ಹೆತ್ತಿದ್ದಾಳೆ. ಅವಳು ನಿನಗೆ, ಏಳುಮಂದಿ ಗಂಡುಮಕ್ಕಳಿಗಿಂತಲೂ ಶ್ರೇಷ್ಠವಾಗಿದ್ದಾಳೆ” ಎಂದು ಹೇಳಿದರು.
16 ನೊವೊಮಿಯು ಆ ಮಗುವನ್ನು ತನ್ನ ಉಡಿಲಲ್ಲಿಟ್ಟುಕೊಂಡು ಸಾಕಿಸಲುಹಿದಳು. 17 ನೆರೆಹೊರೆಯವರು ಮಗುವಿಗೆ ಹೆಸರಿಟ್ಟರು. ಆ ಸ್ತ್ರೀಯರು, “ನೊವೊಮಿಗೆ ಗಂಡುಮಗು ಹುಟ್ಟಿದೆ” ಎಂದರು. ನೆರೆಯವರು ಓಬೇದನೆಂದು ಹೆಸರಿಟ್ಟರು. ಓಬೇದನು ಇಷಯನ ತಂದೆ, ಇಷಯನು ರಾಜನಾದ ದಾವೀದನ ತಂದೆ.
ರೂತ್ ಮತ್ತು ಬೋವಜನ ವಂಶವೃಕ್ಷ
18 ಪೆರೆಚನ ವಂಶಾವಳಿ ಹೀಗಿದೆ:
ಪೆರೆಚನು ಹೆಚ್ರೋನನ ತಂದೆ.
19 ಹೆಚ್ರೋನನು ರಾಮನ ತಂದೆ.
ರಾಮನು ಅಮ್ಮೀನಾದಾಬನ ತಂದೆ.
20 ಅಮ್ಮೀನಾದಾಬನು ನಹಶೋನನ ತಂದೆ.
ನಹಶೋನನು ಸಲ್ಮೋನನ ತಂದೆ.
21 ಸಲ್ಮೋನನು ಬೋವಜನ ತಂದೆ.
ಬೋವಜನು ಓಬೇದನ ತಂದೆ.
22 ಓಬೇದನು ಇಷಯನ ತಂದೆ.
ಇಷಯನು ದಾವೀದನ ತಂದೆ.
ಮಾಲ್ಟ ದ್ವೀಪದಲ್ಲಿ ಪೌಲನು
28 ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಅದು ಮಾಲ್ಟ ದ್ವೀಪವೆಂದು ನಮಗೆ ತಿಳಿಯಿತು. 2 ಆಗ ಮಳೆಯು ಸುರಿಯುತ್ತಿತ್ತು ಮತ್ತು ತುಂಬ ಚಳಿಯಿತ್ತು. ಆದರೆ ಅಲ್ಲಿನ ಜನರು ನಮಗೆ ವಿಶೇಷವಾದ ಕರುಣೆತೋರಿ ನಮಗಾಗಿ ಬೆಂಕಿಹೊತ್ತಿಸಿ ನಮ್ಮೆಲ್ಲರನ್ನು ಆಹ್ವಾನಿಸಿದರು. 3 ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಅದನ್ನು ಬೆಂಕಿಯ ಮೇಲೆ ಹಾಕುತ್ತಿರಲು ಅದರ ಕಾವಿನ ದೆಸೆಯಿಂದ ವಿಷದ ಹಾವೊಂದು ಹೊರಗೆ ಬಂದು ಪೌಲನ ಕೈಗೆ ಸುತ್ತಿಕೊಂಡಿತು. 4 ಪೌಲನ ಕೈಗೆ ಸುತ್ತಿಕೊಂಡಿದ್ದ ಆ ಹಾವನ್ನು ಅಲ್ಲಿನ ಜನರು ನೋಡಿ, “ಇವನು ಕೊಲೆಗಾರನೇ ಸರಿ! ಇವನು ಸಮುದ್ರದಲ್ಲಿ ಸಾಯದಿದ್ದರೂ ಇವನು ಬದುಕುವುದು ನ್ಯಾಯಕ್ಕೆ[a] ಇಷ್ಟವಿಲ್ಲ” ಎಂದು ಹೇಳಿದರು.
5 ಆದರೆ ಪೌಲನು ಆ ಹಾವನ್ನು ಬೆಂಕಿಯೊಳಕ್ಕೆ ಝಾಡಿಸಿ ಬಿಟ್ಟನು. ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. 6 ಪೌಲನ ಮೈ ಊದಿಕೊಂಡು ಇದ್ದಕ್ಕಿದ್ದಂತೆ ಸತ್ತುಬೀಳುತ್ತಾನೆ ಎಂದು ಅವರು ತಿಳಿದುಕೊಂಡಿದ್ದರು. ಅವರು ಪೌಲನನ್ನೇ ಬಹು ಹೊತ್ತಿನವರೆಗೆ ದಿಟ್ಟಿಸಿ ನೋಡುತ್ತಿದ್ದರೂ ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. ಆದ್ದರಿಂದ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿ, “ಇವನೊಬ್ಬ ದೇವರು!” ಎಂದು ಹೇಳಿದರು.
7 ಆ ಸ್ಥಳದ ಸುತ್ತಮುತ್ತ ಕೆಲವು ಹೊಲಗಳು ಇದ್ದವು. ಆ ದ್ವೀಪದ ಪ್ರಮುಖ ವ್ಯಕ್ತಿಯೊಬ್ಬನಿಗೆ ಆ ಹೊಲಗಳು ಸೇರಿದ್ದವು. ಅವನ ಹೆಸರು ಪೊಪ್ಲಿಯ. ಅವನು ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದನು. ಪೊಪ್ಲಿಯನು ಕನಿಕರ ತೋರಿದನು. ನಾವು ಅವನ ಮನೆಯಲ್ಲಿ ಮೂರು ದಿನವಿದ್ದೆವು. 8 ಪೊಪ್ಲಿಯನ ತಂದೆಯು ಬಹಳ ಅಸ್ವಸ್ಥನಾಗಿದ್ದನು. ಅವನಿಗೆ ಜ್ವರವಿತ್ತು ಮತ್ತು ರಕ್ತಭೇದಿಯಾಗುತ್ತಿತ್ತು. ಪೌಲನು ಅವನ ಬಳಿಗೆ ಹೋಗಿ ಅವನಿಗಾಗಿ ಪ್ರಾರ್ಥಿಸಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಗುಣಪಡಿಸಿದನು. 9 ಇದಾದ ನಂತರ ದ್ವೀಪದಲ್ಲಿದ್ದ ಇತರ ರೋಗಿಗಳೆಲ್ಲ ಪೌಲನ ಬಳಿಗೆ ಬಂದರು. ಪೌಲನು ಅವರನ್ನು ಸಹ ಗುಣಪಡಿಸಿದನು.
10-11 ಆ ದ್ವೀಪ ನಿವಾಸಿಗಳು ನಮ್ಮನ್ನು ಬಹಳವಾಗಿ ಸನ್ಮಾನಿಸಿದರು. ನಾವು ಅಲ್ಲಿ ಮೂರು ತಿಂಗಳಿದ್ದೆವು. ನಾವು ಅಲ್ಲಿಂದ ಹೊರಡಲು ಸಿದ್ಧರಾದಾಗ ಅವರು ನಮಗೆ ಬೇಕಾದ ವಸ್ತುಗಳನ್ನು ಕೊಟ್ಟರು.
ರೋಮಿಗೆ ಪೌಲನ ಪ್ರಯಾಣ
ಅಲೆಕ್ಸಾಂಡ್ರಿಯ ಪಟ್ಟಣದಿಂದ ಬಂದ ಹಡಗೊಂದನ್ನು ನಾವು ಹತ್ತಿದೆವು. ಆ ಹಡಗು ಚಳಿಗಾಲದ ನಿಮಿತ್ತ ಮಾಲ್ಟ ದ್ವೀಪದಲ್ಲೇ ತಂಗಿತ್ತು. ಆ ಹಡಗಿನ ಮುಂಭಾಗದಲ್ಲಿ ಎರಡು ಗ್ರೀಕ್ ದೇವತೆಗಳ ಚಿಹ್ನೆಯಿತ್ತು. 12 ನಾವು ಸಿರಾಕೊಸ್ ಪಟ್ಟಣಕ್ಕೆ ಬಂದು ಅಲ್ಲಿ ಮೂರು ದಿನವಿದ್ದೆವು. ಬಳಿಕ ಅಲ್ಲಿಂದ ಹೊರಟು 13 ರೇಗಿಯ ಎಂಬ ಪಟ್ಟಣಕ್ಕೆ ಬಂದೆವು. ಮರುದಿನ ನೈರುತ್ಯ[b] ಗಾಳಿಯು ಬೀಸತೊಡಗಿತು. ಆದ್ದರಿಂದ ಅಲ್ಲಿಂದ ಹೊರಡಲು ಸಾಧ್ಯವಾಯಿತು. ಒಂದು ದಿನವಾದ ಮೇಲೆ ಪುತೋಲಿ ಎಂಬ ಪಟ್ಟಣಕ್ಕೆ ಬಂದೆವು. 14 ಅಲ್ಲಿ ಕೆಲವು ಮಂದಿ ವಿಶ್ವಾಸಿಗಳನ್ನು ಕಂಡೆವು. ತಮ್ಮೊಂದಿಗೆ ಒಂದು ವಾರವಾದರೂ ಇರಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ಕೊನೆಗೆ ನಾವು ರೋಮಿಗೆ ಹೊರಟೆವು. 15 ನಾವು ಇಲ್ಲಿರುವುದು ರೋಮಿನಲ್ಲಿದ್ದ ವಿಶ್ವಾಸಿಗಳಿಗೆ ತಿಳಿಯಿತು. ಅವರು ನಮ್ಮನ್ನು ಭೇಟಿಯಾಗುವುದಕ್ಕಾಗಿ “ಅಪ್ಪಿಯ” ಮಾರುಕಟ್ಟೆಗೂ[c] ಮತ್ತು “ತ್ರಿಛತ್ರ”[d] ಎಂಬ ಸ್ಥಳಕ್ಕೂ ಬಂದರು. ಈ ವಿಶ್ವಾಸಿಗಳನ್ನು ಕಂಡಾಗ ಪೌಲನು ಧೈರ್ಯಗೊಂಡು ದೇವರಿಗೆ ಸ್ತೋತ್ರ ಸಲ್ಲಿಸಿದನು.
ರೋಮಿನಲ್ಲಿ ಪೌಲನು
16 ಬಳಿಕ ನಾವು ರೋಮಿಗೆ ಹೋದೆವು. ಅಲ್ಲಿ ಪ್ರತ್ಯೇಕವಾಗಿರಲು ಪೌಲನಿಗೆ ಅವಕಾಶವನ್ನು ಕೊಡಲಾಯಿತು. ಆದರೆ ಪೌಲನನ್ನು ಕಾಯುವುದಕ್ಕಾಗಿ ಸೈನಿಕನೊಬ್ಬನು ಅವನೊಂದಿಗಿದ್ದನು.
17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಧಾನರಾಗಿದ್ದವರನ್ನು ಕರೆಯಿಸಿದನು. ಅವರು ಬಂದು ಒಟ್ಟಾಗಿ ಸೇರಿದಾಗ ಪೌಲನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ನಮ್ಮ ಜನರಿಗೂ ನಮ್ಮ ಪಿತೃಗಳ ಸಂಪ್ರದಾಯಗಳಿಗೂ ವಿರುದ್ಧವಾಗಿ ನಾನೇನೂ ಮಾಡಿಲ್ಲ. ಆದರೆ ನನ್ನನ್ನು ಜೆರುಸಲೇಮಿನಲ್ಲಿ ಬಂಧಿಸಿ ರೋಮಿನವರಿಗೆ ಒಪ್ಪಿಸಲಾಗಿದೆ. 18 ರೋಮಿನವರು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆದರೆ ನನ್ನನ್ನು ಮರಣದಂಡನೆಗೆ ಗುರಿಮಾಡುವಂಥ ಯಾವ ಅಪರಾಧವನ್ನೂ ಅವರು ನನ್ನಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ನನ್ನನ್ನು ಬಿಡುಗಡೆಮಾಡಬೇಕೆಂದಿದ್ದರು. 19 ಆದರೆ ಅಲ್ಲಿದ್ದ ಯೆಹೂದ್ಯರು ಅದಕ್ಕೆ ಆಕ್ಷೇಪಿಸಿದರು. ಆದ್ದರಿಂದ ನನಗೆ ರೋಮಿನಲ್ಲಿ ಸೀಸರನ ಮುಂದೆ ವಿಚಾರಣೆಯಾಗಲಿ ಎಂದು ಕೇಳಿಕೊಳ್ಳಬೇಕಾಯಿತು. ಆದರೆ ನನ್ನ ಜನರು ಮಾಡಿದ್ದು ತಪ್ಪೆಂದು ನಾನು ನಿಮಗೆ ಹೇಳುತ್ತಿಲ್ಲ. 20 ಆದಕಾರಣವೇ ನಾನು ನಿಮ್ಮನ್ನು ನೋಡಲು ಮತ್ತು ನಿಮ್ಮ ಸಂಗಡ ಮಾತಾಡಲು ಬಯಸಿದೆ. ಇಸ್ರೇಲಿನ ನಿರೀಕ್ಷೆಯಲ್ಲಿ ನಾನು ನಂಬಿಕೆ ಇಟ್ಟಿರುವುದರಿಂದಲೇ ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು.
21-22 ಯೆಹೂದ್ಯರು ಪೌಲನಿಗೆ, “ನಿನ್ನ ಬಗ್ಗೆ ಜುದೇಯದಿಂದ ನಮಗೆ ಯಾವ ಪತ್ರಗಳೂ ಬಂದಿಲ್ಲ. ಅಲ್ಲಿಂದ ಪ್ರಯಾಣ ಮಾಡಿ ಬಂದ ನಮ್ಮ ಯೆಹೂದ್ಯ ಸಹೋದರರಲ್ಲಿ ಯಾರೂ ನಿನ್ನ ಬಗ್ಗೆ ಸುದ್ದಿಯನ್ನು ತರಲಿಲ್ಲ ಮತ್ತು ಕೆಟ್ಟದ್ದನ್ನು ಹೇಳಲಿಲ್ಲ. ನಿನ್ನ ಆಲೋಚನೆಗಳನ್ನು ನಾವು ಕೇಳಬಯಸುತ್ತೇವೆ. ಎಲ್ಲಾ ಕಡೆಗಳಲ್ಲಿರುವ ಜನರು ಈ ಗುಂಪಿನ (ಕ್ರೈಸ್ತರ) ವಿರೋಧವಾಗಿ ಮಾತಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದರು.
23 ಪೌಲನು ಮತ್ತು ಯೆಹೂದ್ಯರು ಸಭೆಸೇರಲು ಒಂದು ದಿನವನ್ನು ಗೊತ್ತುಮಾಡಿದರು. ಅಂದು ಇನ್ನೂ ಅನೇಕ ಮಂದಿ ಯೆಹೂದ್ಯರು ಪೌಲನ ಮನೆಯಲ್ಲಿ ಸಭೆಸೇರಿದರು. ಪೌಲನು ಬೆಳಗ್ಗೆಯಿಂದ ಸಂಜೆಯವರೆಗೂ ಅವರೊಂದಿಗೆ ಮಾತಾಡಿದನು; ದೇವರ ರಾಜ್ಯದ ಬಗ್ಗೆ ಅವರಿಗೆ ವಿವರಿಸಿದನು. ಯೇಸುವಿನ ವಿಷಯವಾದ ಸಂಗತಿಗಳಲ್ಲಿ ನಂಬಿಕೆ ಇಡುವಂತೆ ಅವರನ್ನು ಒಪ್ಪಿಸಲು ಪ್ರಯತ್ನಿಸಿದನು. ಇದಕ್ಕಾಗಿ ಅವನು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಬಳಸಿಕೊಂಡನು. 24 ಪೌಲನು ಹೇಳಿದ ಕೆಲವು ಸಂಗತಿಗಳನ್ನು ಕೆಲವು ಮಂದಿ ಯೆಹೂದ್ಯರು ನಂಬಿದರು. ಆದರೆ ಉಳಿದವರು ನಂಬಲಿಲ್ಲ. 25 ಅವರು ವಾದಮಾಡಿ ಅಲ್ಲಿಂದ ಹೊರಡಲು ಸಿದ್ಧರಾದಾಗ ಪೌಲನು ಅವರಿಗೆ ಹೀಗೆಂದನು: “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಮೂಲಕ ಪಿತೃಗಳಿಗೆ ಸತ್ಯವನ್ನು ತಿಳಿಸಿದನು. ಆತನು ಹೀಗೆ ಹೇಳಿದ್ದಾನೆ:
26 ‘ಈ ಜನರ ಬಳಿಗೆ ಹೋಗಿ ಇಂತೆನ್ನಿರಿ:
ನೀನು ಕಿವಿಗೊಟ್ಟು ಕೇಳಿದರೂ
ಅರ್ಥಮಾಡಿಕೊಳ್ಳವುದಿಲ್ಲ;
ಕಣ್ಣಾರೆ ಕಂಡರೂ
ಗ್ರಹಿಸಿಕೊಳ್ಳುವುದಿಲ್ಲ.
27 ಹೌದು, ಈ ಜನರ ಹೃದಯಗಳು ಕಠಿಣವಾಗಿವೆ.
ಈ ಜನರಿಗೆ ಕಿವಿಗಳಿದ್ದರೂ ಕೇಳುವುದಿಲ್ಲ.
ಸತ್ಯವಿದ್ದರೂ ನೋಡಬಯಸರು.
ಅಲ್ಲದಿದ್ದರೆ ಇವರು
ಕಣ್ಣಾರೆ ಕಂಡು,
ಕಿವಿಯಾರೆ ಕೇಳಿ,
ಮನಸಾರೆ ಗ್ರಹಿಸಿಕೊಂಡು
ನನ್ನತ್ತ ತಿರುಗಿಕೊಳ್ಳುತ್ತಿದ್ದರು; ನನ್ನಿಂದ ಗುಣಹೊಂದುತ್ತಿದ್ದರು.’(A)
28 “ದೇವರು ತನ್ನ ರಕ್ಷಣೆಯನ್ನು ಯೆಹೂದ್ಯರಲ್ಲದವರಿಗೆ ಕಳುಹಿಸಿದ್ದಾನೆ. ಅವರು ಅದಕ್ಕೆ ಕಿವಿಗೊಡುವರು. ಯೆಹೂದ್ಯರಾದ ನಿಮಗೆ ಇದು ತಿಳಿದಿರಲಿ!” 29 [e]
30 ಪೌಲನು ತನ್ನ ಬಾಡಿಗೆ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ಸಂದರ್ಶಿಸಲು ಬಂದ ಜನರೆಲ್ಲರನ್ನು ಆದರದಿಂದ ಬರಮಾಡಿಕೊಂಡು, 31 ದೇವರ ರಾಜ್ಯದ ಬಗ್ಗೆ ಬೋಧಿಸುತ್ತಿದ್ದನು; ಪ್ರಭು ಯೇಸುಕ್ರಿಸ್ತನ ಬಗ್ಗೆ ಉಪದೇಶಿಸುತ್ತಿದ್ದನು; ಬಹು ಧೈರ್ಯದಿಂದ ಮಾತಾಡುತ್ತಿದ್ದನು. ಅವನಿಗೆ ಅಡ್ಡಿಮಾಡಲು ಯಾರೂ ಪ್ರಯತ್ನಿಸಲಿಲ್ಲ.
ಯೆರೆಮೀಯನನ್ನು ಒಂದು ಬಾವಿಯಲ್ಲಿ ಹಾಕಲಾಯಿತು.
38 ಯೆರೆಮೀಯನು ಪ್ರವಾದಿಸುತ್ತಿರುವುದನ್ನು ಕೆಲವು ಜನ ರಾಜಾಧಿಕಾರಿಗಳು ಕೇಳಿಸಿಕೊಂಡರು. ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರುಗಳು ಅವನ ಮಾತನ್ನೆಲ್ಲಾ ಕೇಳಿಸಿಕೊಂಡರು. ಯೆರೆಮೀಯನು ಎಲ್ಲಾ ಜನರಿಗೆ ಈ ಸಂದೇಶವನ್ನು ಹೇಳುತ್ತಿದ್ದನು. 2 “ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರು ಖಡ್ಗದಿಂದಾಗಲಿ ಕ್ಷಾಮದಿಂದಾಗಲಿ ಭಯಂಕರವಾದ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಆದರೆ ಬಾಬಿಲೋನಿನ ಸೈನಿಕರಿಗೆ ಶರಣಾಗುವ ಪ್ರತಿಯೊಬ್ಬರು ಬದುಕುವರು. ಅವರು ಜೀವಂತ ಉಳಿಯುವರು.’ 3 ಯೆಹೋವನು ಹೀಗೆನ್ನುತ್ತಾನೆ: ‘ಈ ಜೆರುಸಲೇಮ್ ನಗರವನ್ನು ಖಂಡಿತವಾಗಿಯೂ ಬಾಬಿಲೋನ್ ರಾಜನ ಸೈನಿಕರ ಕೈಗೆ ಒಪ್ಪಿಸಲಾಗುವುದು. ಅವನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು.’”
4 ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನ್ನು ಕೇಳಿದ ರಾಜಾಧಿಕಾರಿಗಳು ರಾಜನಾದ ಚಿದ್ಕೀಯನ ಬಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇನ್ನೂ ನಗರದಲ್ಲಿರುವ ಸೈನಿಕರನ್ನೂ ಎಲ್ಲರನ್ನೂ ತನ್ನ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಬೇಕೆಂದು ಅವನು ಬಯಸದೆ ಜೆರುಸಲೇಮಿನ ಜನರ ನಾಶನವನ್ನು ಬಯಸುತ್ತಾನೆ” ಎಂದು ಹೇಳಿದರು.
5 ಆಗ ರಾಜನಾದ ಚಿದ್ಕೀಯನು, “ಯೆರೆಮೀಯನು ನಿಮ್ಮ ಅಧಿನದಲ್ಲಿದ್ದಾನೆ. ನೀವು ಏನು ಬೇಕಾದರೂ ಮಾಡಿ” ಎಂದು ಆ ಅಧಿಕಾರಿಗಳಿಗೆ ಹೇಳಿದನು.
6 ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಹಿಡಿದು ಮಲ್ಕೀಯನ ಬಾವಿಯೊಳಗೆ ಹಾಕಿದರು. (ಮಲ್ಕೀಯನು ರಾಜವಂಶದವನಾಗಿದ್ದನು.) ಆ ಬಾವಿಯು ಕಾರಾಗೃಹದ ಅಂಗಳದಲ್ಲಿತ್ತು. ಆ ಅಧಿಕಾರಿಗಳು ಹಗ್ಗಗಳನ್ನು ಕಟ್ಟಿ ಯೆರೆಮೀಯನನ್ನು ಬಾವಿಯಲ್ಲಿ ಇಳಿಬಿಟ್ಟರು. ಆ ಬಾವಿಯಲ್ಲಿ ಸ್ವಲ್ಪವೂ ನೀರಿರಲಿಲ್ಲ. ಕೇವಲ ಕೇಸರಿತ್ತು. ಯೆರೆಮೀಯನು ಕೆಸರಿನಲ್ಲಿ ಮುಳುಗಿಹೋದನು.
7 ಆ ಅಧಿಕಾರಿಗಳು ಯೆರೆಮೀಯನನ್ನು ಬಾವಿಗೆ ಹಾಕಿದ ಸಂಗತಿಯು ಎಬೆದ್ಮೆಲೆಕನೆಂಬ ಮನುಷ್ಯನ ಕಿವಿಗೆ ಬಿತ್ತು. ಎಬೆದ್ಮೆಲೆಕನು ಇಥಿಯೋಪಿಯದವನಾಗಿದ್ದು ಅರಮನೆಯಲ್ಲಿ ಕಂಚುಕಿಯಾಗಿದ್ದನು. ರಾಜನಾದ ಚಿದ್ಕೀಯನು ಬೆನ್ಯಾಮೀನ್ ಊರ ಬಾಗಲಲ್ಲಿ ಕುಳಿತಿದ್ದನು. ಎಬೆದ್ಮೆಲೆಕನು ಅರಮನೆಯನ್ನು ಬಿಟ್ಟು ಬೆನ್ಯಾಮೀನ್ ಊರಹೆಬ್ಬಾಗಿಲಿನ ಹತ್ತಿರ ಕುಳಿತಿದ್ದ ರಾಜನಾದ ಚಿದ್ಕೀಯನ ಹತ್ತಿರ ಬಂದು ಹೀಗೆ ಹೇಳಿದನು: 8-9 “ನನ್ನ ಒಡೆಯನಾದ ರಾಜನೇ, ಆ ಅಧಿಕಾರಿಗಳು ದುಷ್ಟ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಪ್ರವಾದಿಯಾದ ಯೆರೆಮೀಯನೊಂದಿಗೆ ದುಷ್ಟತನದಿಂದ ವ್ಯವಹರಿಸಿದ್ದಾರೆ. ಅವರು ಅವನನ್ನು ಒಂದು ಬಾವಿಯಲ್ಲಿ ಎಸೆದಿದ್ದಾರೆ. ಅವನನ್ನು ಅಲ್ಲಿಯೇ ಸಾಯಲು ಬಿಟ್ಟಿದ್ದಾರೆ” ಎಂದು ಹೇಳಿದನು.
10 ಆಗ ರಾಜನಾದ ಚಿದ್ಕೀಯನು ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ, “ಅರಮನೆಯಿಂದ ಮೂರು ಜನರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು. ಯೆರೆಮೀಯನನ್ನು ಅವನು ಸಾಯುವ ಮುಂಚೆ ಬಾವಿಯಿಂದ ಮೇಲೆತ್ತು” ಎಂದು ಅಪ್ಪಣೆಕೊಟ್ಟನು.
11 ಎಬೆದ್ಮೆಲೆಕನು ಆ ಜನರನ್ನು ಕರೆದುಕೊಂಡು ಹೊರಟನು. ಅವನು ಮೊದಲು ಅರಮನೆಯ ಉಗ್ರಾಣದ ಕೆಳಗಿರುವ ಕೋಣೆಗೆ ಹೋದನು. ಆ ಕೋಣೆಯಿಂದ ಅವನು ಕೆಲವು ಹಳೆಯದಾದ ಮತ್ತು ಹರಿದುಹೋದ ಬಟ್ಟೆಗಳನ್ನು ತೆಗೆದುಕೊಂಡನು. ಆ ಚಿಂದಿಬಟ್ಟೆಗಳನ್ನು ಒಂದು ಹಗ್ಗಕ್ಕೆ ಕಟ್ಟಿ ಆಳವಾದ ಬಾವಿಯಲ್ಲಿ ಯೆರೆಮೀಯನಿಗೆ ತಲುಪುವಂತೆ ಇಳಿಬಿಟ್ಟನು. 12 ಆಗ ಇಥಿಯೋಪಿಯದವನಾದ ಎಬೆದ್ಮೆಲೆಕನು, “ಆ ಹರಿದುಹೋದ ಮತ್ತು ಹಳೆಯದಾದ ಬಟ್ಟೆಗಳನ್ನು ನಿನ್ನ ಕಂಕುಳಲ್ಲಿ ಇಟ್ಟುಕೋ. ನಾವು ನಿನ್ನನ್ನು ಮೇಲಕ್ಕೆಳೆಯುವಾಗ ನಿನ್ನ ಕಂಕುಳಿಗೆ ಹಗ್ಗಗಳಿಂದ ಗಾಯಗಳಾಗುವದಿಲ್ಲ” ಎಂದನು. ಯೆರೆಮೀಯನು ಎಬೆದ್ಮೆಲೆಕನು ಹೇಳಿದಂತೆ ಮಾಡಿದನು. 13 ಅವರು ಯೆರೆಮೀಯನನ್ನು ಹಗ್ಗದಿಂದ ಮೇಲಕ್ಕೆ ಎಳೆದು ಬಾವಿಯಿಂದ ಹೊರತೆಗೆದರು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಿಸಿದನು.
ಚಿದ್ಕೀಯನು ಯೆರೆಮೀಯನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು
14 ರಾಜನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಒಬ್ಬನ ಮೂಲಕ ಯೆಹೋವನ ಆಲಯದ ಮೂರನೇ ಪ್ರವೇಶದ್ವಾರಕ್ಕೆ ಕರೆಸಿದನು. ರಾಜನು ಅವನಿಗೆ, “ಯೆರೆಮೀಯನೇ, ನಾನು ನಿನಗೆ ಒಂದು ವಿಷಯವನ್ನು ಕೇಳಲಿದ್ದೇನೆ. ನನ್ನಿಂದ ಏನನ್ನೂ ಮುಚ್ಚಿಡಬೇಡ. ಎಲ್ಲವನ್ನು ಪ್ರಾಮಾಣಿಕವಾಗಿ ನನಗೆ ಹೇಳು” ಎಂದನು.
15 ಅದಕ್ಕೆ ಯೆರೆಮೀಯನು, “ನಾನು ಉತ್ತರಕೊಟ್ಟರೆ ನೀನು ಬಹುಶಃ ನನ್ನನ್ನು ಕೊಂದುಬಿಡುವೆ, ಸಲಹೆ ಕೊಟ್ಟರೆ ನೀನು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವದಿಲ್ಲ” ಎಂದು ಹೇಳಿದನು.
16 ಆದರೆ ರಾಜನಾದ ಚಿದ್ಕೀಯನು ಯೆರೆಮೀಯನಿಗೆ ರಹಸ್ಯವಾಗಿ, “ಯೆರೆಮೀಯನೇ, ನಮಗೆ ಉಸಿರನ್ನೂ ಜೀವವನ್ನೂ ದಯಪಾಲಿಸಿದ ಯೆಹೋವನ ಆಣೆಯಾಗಿ ಹೇಳುತ್ತೇನೆ, ನಾನು ನಿನ್ನನ್ನು ಕೊಲ್ಲುವುದಿಲ್ಲ. ಕೊಲ್ಲಬಯಸುವ ಅಧಿಕಾರಿಗಳ ಕೈಗೂ ನಿನ್ನನ್ನು ಕೊಡುವದಿಲ್ಲವೆಂದು ನಾನು ಮಾತು ಕೊಡುತ್ತೇನೆ” ಎಂದು ಹೇಳಿದನು.
17 ಆಗ ಯೆರೆಮೀಯನು ರಾಜನಾದ ಚಿದ್ಕೀಯನಿಗೆ ಹೀಗೆಂದನು: “ಇಸ್ರೇಲರ ದೇವರಾದ ಮತ್ತು ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಬಾಬಿಲೋನಿನ ರಾಜನ ಅಧಿಕಾರಿಗಳಿಗೆ ಶರಣಾಗತನಾದರೆ ನಿನ್ನ ಪ್ರಾಣವನ್ನು ಉಳಿಸಲಾಗುವುದು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲ್ಪಡುವುದಿಲ್ಲ. ನೀನೂ ಬದುಕುವೆ ಮತ್ತು ನಿನ್ನ ಕುಟುಂಬದವರೂ ಬದುಕುವರು. 18 ಆದರೆ ನೀನು ಬಾಬಿಲೋನಿನ ಅಧಿಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನ್ನು ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.’”
19 ಆಗ ಚಿದ್ಕೀಯನು, “ನಾನು ಈಗಾಗಲೇ ಬಾಬಿಲೋನಿನ ಸೈನ್ಯದ ಕಡೆಗೆ ಸೇರಿದ ಯೆಹೂದ್ಯರಿಗೆ ಹೆದರುತ್ತೇನೆ. ಆ ಸೈನಿಕರು ನನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸಿಕೊಡಬಹುದು ಮತ್ತು ಅವರು ನನಗೆ ಕೇಡುಮಾಡಬಹುದು; ನನ್ನನ್ನು ಹಿಂಸಿಸಬಹುದು ಎಂದು ಭಯವಾಗುತ್ತದೆ” ಎಂದು ಯೆರೆಮೀಯನಿಗೆ ಹೇಳಿದನು.
20 ಆದರೆ ಯೆರೆಮೀಯನು, “ರಾಜನಾದ ಚಿದ್ಕೀಯನೇ, ಆ ಸೈನಿಕರು ನಿನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸುವುದಿಲ್ಲ. ನಾನು ಹೇಳಿದಂತೆ ಮಾಡಿ ಯೆಹೋವನ ಆಜ್ಞಾಪಾಲನೆ ಮಾಡು. ಆಗ ನಿನಗೆಲ್ಲ ಒಳ್ಳೆಯದಾಗುವುದು ಮತ್ತು ನಿನ್ನ ಪ್ರಾಣ ಉಳಿಯುವುದು. 21 ನೀನು ಬಾಬಿಲೋನಿನ ಸೈನಿಕರಿಗೆ ಶರಣಾಗತನಾಗದಿದ್ದರೆ ಏನಾಗುವದೆಂಬುದನ್ನು ಯೆಹೋವನು ನನಗೆ ತೋರಿಸಿಕೊಟ್ಟಿದ್ದಾನೆ. ಯೆಹೋವನು ನನಗೆ ಹೀಗೆ ಹೇಳಿದ್ದಾನೆ: 22 ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನ್ನು ಬಾಬಿಲೋನಿನ ಸೈನ್ಯಾಧಿಕಾರಿಗಳ ಬಳಿಗೆ ತರಲಾಗುವುದು. ನಿನ್ನ ಸ್ತ್ರೀಯರು ಹಾಡನ್ನು ಹಾಡಿ ನಿನ್ನನ್ನು ತಮಾಷೆ ಮಾಡುವರು. ಆ ಸ್ತ್ರೀಯರು ಹೀಗೆ ಹೇಳುವರು:
‘ನಿನಗಿಂತಲೂ ಪ್ರಬಲರಾಗಿದ್ದ ನಿನ್ನ ಒಳ್ಳೆಯ ಸ್ನೇಹಿತರು
ನಿನ್ನನ್ನು ತಪ್ಪುದಾರಿಗೆ ಎಳೆದರು.
ಆ ಸ್ನೇಹಿತರನ್ನು ನೀನು ತುಂಬಾ ನಂಬಿಕೊಂಡಿದ್ದೆ.
ನಿನ್ನ ಪಾದಗಳು ಕೆಸರಿನಲ್ಲಿ ಹೂತಿವೆ.
ನಿನ್ನ ಸ್ನೇಹಿತರು ನಿನ್ನಿದ ದೂರವಾಗಿದ್ದಾರೆ.’
23 “ನಿನ್ನ ಎಲ್ಲಾ ಹೆಂಡತಿಯರನ್ನು ಮತ್ತು ಮಕ್ಕಳನ್ನು ಹೊರತರಲಾಗುವುದು. ಅವರನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ನೀನೂ ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರೆ. ಬಾಬಿಲೋನಿನ ರಾಜನು ನಿನ್ನನ್ನು ವಶಪಡಿಸಿಕೊಳ್ಳುವನು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲಾಗುವುದು” ಎಂದು ಉತ್ತರಿಸಿದನು.
24 ಆಗ ಚಿದ್ಕೀಯನು ಯೆರೆಮೀಯನಿಗೆ ಹೀಗೆ ಹೇಳಿದನು: “ನಾನು ನಿನ್ನ ಸಂಗಡ ಮಾತನಾಡುತ್ತಿದ್ದೆ ಎಂದು ಯಾರಿಗೂ ಹೇಳಬೇಡ. ಇಲ್ಲವಾದರೆ ನೀನು ಸಾಯುವೆ. 25 ನಾನು ನಿನ್ನೊಂದಿಗೆ ಮಾತನಾಡಿದ್ದನ್ನು ಆ ಅಧಿಕಾರಿಗಳು ಪತ್ತೆ ಹಚ್ಚಬಹುದು. ಅವರು ನಿನ್ನ ಹತ್ತಿರ ಬಂದು, ‘ಯೆರೆಮೀಯನೇ, ನೀನು ರಾಜನಾದ ಚಿದ್ಕೀಯನಿಗೆ ಏನು ಹೇಳಿದೆ? ಚಿದ್ಕೀಯನು ನಿನಗೆ ಏನು ಹೇಳಿದನು? ಪ್ರಾಮಾಣಿಕವಾಗಿ ಎಲ್ಲವನ್ನು ನಮಗೆ ಹೇಳು; ಇಲ್ಲವಾದರೆ ನಾವು ನಿನ್ನನ್ನು ಕೊಂದುಬಿಡುತ್ತೇವೆ’ ಎನ್ನಬಹುದು. 26 ಆಗ ನೀನು ಅವರಿಗೆ, ‘ಯೆಹೋನಾಥಾನನ ಮನೆಯ ನೆಲಮಾಳಿಗೆಯ ಕತ್ತಲು ಕೋಣೆಗೆ ನನ್ನನ್ನು ಮತ್ತೆ ಕಳುಹಿಸಬೇಡಿ, ಅಲ್ಲಿಗೆ ಹೋದರೆ ನಾನು ಸತ್ತುಹೋಗುವೆನೆಂದು ರಾಜನಿಗೆ ಪ್ರಾರ್ಥಿಸುತ್ತಿದ್ದೆ’” ಎಂದು ಹೇಳು.
27 ಆ ರಾಜ್ಯಾಧಿಕಾರಿಗಳು ಅವನನ್ನು ಪ್ರಶ್ನಿಸುವದಕ್ಕಾಗಿ ಯೆರೆಮೀಯನಲ್ಲಿಗೆ ಬಂದರು. ರಾಜನು ಆಜ್ಞಾಪಿಸಿದಂತೆ ಯೆರೆಮೀಯನು ಅವರಿಗೆ ಎಲ್ಲವನ್ನು ಹೇಳಿದನು. ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಬಿಟ್ಟುಹೋದರು. ಯೆರೆಮೀಯನ ಮತ್ತು ರಾಜನ ಸಂಭಾಷಣೆಯನ್ನು ಯಾರೂ ಕೇಳಿರಲಿಲ್ಲ.
28 ಜೆರುಸಲೇಮ್ ನಗರವು ಶತ್ರುಗಳ ವಶವಾಗುವವರೆಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಮಾಡಿಕೊಂಡಿದ್ದನು.
ರಚನೆಗಾರ: ದಾವೀದ.
11 ನಾನು ಯೆಹೋವನನ್ನೇ ಆಶ್ರಯಿಸಿಕೊಂಡಿದ್ದೇನೆ.
ಹೀಗಿರಲು, “ನಿನ್ನ ಬೆಟ್ಟಕ್ಕೆ ಪಕ್ಷಿಯಂತೆ ಹಾರಿಹೋಗು” ಎಂದು ನೀವು ಹೇಳುವುದೇಕೆ?
2 ದುಷ್ಟರು ಬೇಟೆಗಾರರಂತಿದ್ದಾರೆ;
ಅವರು ಕತ್ತಲೆಯಲ್ಲಿ ಅವಿತುಕೊಂಡಿರುವರು;
ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ನೀತಿವಂತರ ಹೃದಯಕ್ಕೆ ನೇರವಾಗಿ ಹೊಡೆಯುವರು.
3 ಅಸ್ತಿವಾರಗಳೇ ನಾಶವಾಗುತ್ತಿದ್ದರೆ
ನೀತಿವಂತನು ಏನು ಮಾಡಲಾದೀತು?
4 ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆ.
ಆತನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು
ಮನುಷ್ಯರ ಕಾರ್ಯಗಳನ್ನು ಗಮನಿಸುತ್ತಿದ್ದಾನೆ.
ಆತನ ಕಣ್ಣುಗಳು ಅವರನ್ನು ಪರಿಶೋಧಿಸುತ್ತಿವೆ.
5 ಯೆಹೋವನು ನೀತಿವಂತರಿಗಾಗಿ ಹುಡುಕುವನು.
ಆದರೆ ಆತನು ದುಷ್ಟರನ್ನೂ ಹಿಂಸಕರನ್ನೂ ತಿರಸ್ಕರಿಸುವನು.
6 ಆತನು ಆ ದುಷ್ಟರ ಮೇಲೆ ಬೆಂಕಿಗಂಧಕಗಳ ಮಳೆಯನ್ನು ಸುರಿಸುವನು.
ಅವರಿಗೆ ಸಿಕ್ಕುವುದೆಂದರೆ ಕಾದ ಉರಿಗಾಳಿಯೊಂದೇ.
7 ಯಾಕೆಂದರೆ ಯೆಹೋವನು ನೀತಿಸ್ವರೂಪನಾಗಿದ್ದಾನೆ; ಆತನು ನ್ಯಾಯವನ್ನು ಪ್ರೀತಿಸುತ್ತಾನೆ.
ನೀತಿವಂತರು ಆತನ ಮುಖವನ್ನು ನೋಡುವರು.
ರಚನೆಗಾರ: ದಾವೀದ.
12 ಯೆಹೋವನೇ, ನನ್ನನ್ನು ರಕ್ಷಿಸು!
ಒಳ್ಳೆಯವರೆಲ್ಲಾ ಕೊನೆಗೊಂಡರು.
ಭೂನಿವಾಸಿಗಳಲ್ಲಿ ನಿಜವಾದ ವಿಶ್ವಾಸಿಗಳು ಉಳಿದೇ ಇಲ್ಲ.
2 ಜನರು ತಮ್ಮ ನೆರೆಯವರಿಗೆ ಸುಳ್ಳು ಹೇಳುವರು.
ಪ್ರತಿಯೊಬ್ಬರೂ ತಮ್ಮ ನೆರೆಯವರಿಗೆ ಸುಳ್ಳಿನಿಂದ ಮುಖಸ್ತುತಿ ಮಾಡುವರು.
3 ಸುಳ್ಳಾಡುವ ಆ ತುಟಿಗಳನ್ನೂ ಕಟ್ಟುಕಥೆಗಳನ್ನು ಹೇಳುವ
ಆ ನಾಲಿಗೆಗಳನ್ನೂ ಯೆಹೋವನು ಕತ್ತರಿಸಿಹಾಕಲಿ.
4 “ನಾವು ಪ್ರಮುಖರಾಗಲು ನಮ್ಮ ಸುಳ್ಳುಗಳೇ ನಮಗೆ ಆಧಾರ.
ನಮ್ಮ ನಾಲಿಗೆಗಳು ಇರುವಾಗ ನಮಗೆ ಒಡೆಯರಾಗಲು ಯಾರಿಗೆ ಸಾಧ್ಯ?” ಎಂದು ಅವರು ಹೇಳುತ್ತಾರೆ.
5 ಆದರೆ ಯೆಹೋವನು ಹೇಳುವುದೇನೆಂದರೆ:
“ದುಷ್ಟರು ಕುಗ್ಗಿಹೋದವರಿಂದ ಕದ್ದುಕೊಂಡಿದ್ದಾರೆ.
ಅಸಹಾಯಕರು ದುಃಖದಿಂದ ನಿಟ್ಟುಸಿರು ಬಿಡುತ್ತಿದ್ದಾರೆ.
ಆದ್ದರಿಂದ ನಾನು ಎದ್ದುನಿಂತು, ಆಯಾಸಗೊಂಡಿರುವ ಅವರನ್ನು ಕಾಪಾಡುವೆನು.”
6 ಯೆಹೋವನ ಮಾತುಗಳು
ಬೆಂಕಿಯಲ್ಲಿ ಏಳು ಸಲ ಶುದ್ಧೀಕರಿಸಿದ ಬೆಳ್ಳಿಯಂತೆ ಸತ್ಯವಾಗಿವೆ.
7 ಯೆಹೋವನೇ, ಅಸಹಾಯಕರನ್ನು ಪರಿಪಾಲಿಸು.
ಅವರನ್ನು ಶಾಶ್ವತವಾಗಿ ಸಂರಕ್ಷಿಸು.
8 ಆ ದುಷ್ಟರು ಪ್ರಮುಖರಂತೆ ವರ್ತಿಸಿದರೂ
ಅವರು ಕೇವಲ ನಕಲಿ ಆಭರಣಗಳಂತಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International