Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 17

ಮೀಕನ ವಿಗ್ರಹಗಳು

17 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕ ಎಂಬ ಮನುಷ್ಯನಿದ್ದನು. ಮೀಕನು ತನ್ನ ತಾಯಿಗೆ, “ಅಮ್ಮಾ, ಯಾರೋ ನಿನ್ನ ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ಕದ್ದಿದ್ದರಲ್ಲಾ, ನಿನಗೆ ನೆನಪಿದೆಯಾ? ನೀನು ಅದರ ಸಲುವಾಗಿ ಶಾಪಹಾಕುವದನ್ನು ನಾನು ಕೇಳಿದ್ದೆ. ನಾನು ಅದನ್ನು ತೆಗೆದುಕೊಂಡಿದ್ದೆ. ಇಗೋ ಆ ಬೆಳ್ಳಿ ನನ್ನ ಹತ್ತಿರ ಇದೆ” ಎಂದು ಹೇಳಿದನು.

ಅವನ ತಾಯಿಯು ಅವನಿಗೆ, “ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂದು ಹರಸಿದಳು.

ಮೀಕನು ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ತನ್ನ ತಾಯಿಗೆ ಕೊಟ್ಟನು. ಆಗ ಅವಳು, “ನಾನು ಈ ಬೆಳ್ಳಿಯನ್ನು ಯೆಹೋವನಿಗೆ ವಿಶೇಷ ಹರಕೆಯಾಗಿ ಕೊಡುವೆನು. ಇದನ್ನು ನಾನು ನನ್ನ ಮಗನಿಗೆ ಕೊಡುವೆನು, ಅವನು ಅದರಿಂದ ಒಂದು ವಿಗ್ರಹವನ್ನು ಮಾಡಿಸಿ ಅದಕ್ಕೆ ಬೆಳ್ಳಿಯ ಹೊದಿಕೆಯನ್ನು ಹಾಕಿಸುವನು” ಎಂದು ಹೇಳಿ ಆ ಬೆಳ್ಳಿಯನ್ನು ಮಗನ ಕೈಯಲ್ಲಿ ಕೊಟ್ಟಳು.

ಆದರೆ ಮೀಕನು ಆ ಬೆಳ್ಳಿಯನ್ನು ತನ್ನ ತಾಯಿಗೆ ಹಿಂದಿರುಗಿಸಿದನು. ಅವಳು ಸುಮಾರು ಐದು ತೊಲೆಯಷ್ಟು ಬೆಳ್ಳಿಯ ನಾಣ್ಯಗಳನ್ನು ಒಬ್ಬ ಅಕ್ಕಸಾಲಿಗನಿಗೆ ಕೊಟ್ಟಳು. ಆ ಅಕ್ಕಸಾಲಿಗನು ಅದರಿಂದ ಒಂದು ವಿಗ್ರಹವನ್ನು ಮಾಡಿ ಅದಕ್ಕೆ ಬೆಳ್ಳಿಯ ಹೊದಿಕೆ ಹಾಕಲು ಉಪಯೋಗಿಸಿದನು. ಆ ವಿಗ್ರಹವನ್ನು ಮೀಕನ ಮನೆಯಲ್ಲಿ ಇಡಲಾಯಿತು. ವಿಗ್ರಹಗಳನ್ನು ಪೂಜಿಸುವುದಕ್ಕಾಗಿ ಮೀಕನಿಗೆ ಒಂದು ಮಂದಿರವಿತ್ತು. ಮೀಕನು ಏಫೋದನ್ನೂ ವಿಗ್ರಹಗಳನ್ನೂ ಪೂಜಿಸಲು ತನ್ನ ಒಬ್ಬ ಮಗನನ್ನು ಅರ್ಚಕನನ್ನಾಗಿ ನೇಮಿಸಿದನು. (ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಪ್ರತಿಯೊಬ್ಬರೂ ತಮಗೆ ಸರಿ ತೋರಿದಂತೆ ನಡೆದುಕೊಳ್ಳುತ್ತಿದ್ದರು.)

ಲೇವಿಯ ಕುಲದ ಒಬ್ಬ ತರುಣನಿದ್ದನು. ಅವನು ಯೆಹೂದದ ಬೆತ್ಲೆಹೇಮಿನವನಾಗಿದ್ದು ಯೆಹೂದ್ಯರ ಸಂಗಡ ವಾಸಮಾಡುತ್ತಿದ್ದನು. ಆ ತರುಣನು ಯೆಹೂದ ಪ್ರದೇಶದ ಬೆತ್ಲೆಹೇಮನ್ನು ಬಿಟ್ಟು ವಾಸಮಾಡಲು ಬೇರೆ ಸ್ಥಳವನ್ನು ಹುಡುಕುತ್ತಿದ್ದನು. ಅವನು ಪ್ರಯಾಣ ಮಾಡುತ್ತಾ ಮೀಕನ ಮನೆಗೆ ಬಂದನು. ಮೀಕನ ಮನೆಯು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿತ್ತು. ಮೀಕನು ಅವನನ್ನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು.

ಆ ತರುಣನು, “ನಾನು ಯೆಹೂದ ಪ್ರದೇಶದ ಬೆತ್ಲೆಹೇಮಿನವನಾದ ಲೇವಿಯನು. ನಾನು ವಾಸಮಾಡುವುದಕ್ಕೆ ಒಂದು ಸ್ಥಳವನ್ನು ಹುಡುಕುತ್ತಿದ್ದೇನೆ” ಎಂದು ಹೇಳಿದನು.

10 ಆಗ ಮೀಕನು ಅವನಿಗೆ, “ನಮ್ಮಲ್ಲಿಯೇ ಇರು. ನಮಗೆ ತಂದೆಯೂ ಯಾಜಕನೂ ಆಗಿರು. ನಾನು ನಿನಗೆ ಪ್ರತಿವರ್ಷ ನಾಲ್ಕು ಔನ್ಸ್ ಬೆಳ್ಳಿಯನ್ನೂ ಊಟವನ್ನೂ ವಸ್ತ್ರಗಳನ್ನೂ ಕೊಡುತ್ತೇನೆ” ಎಂದು ಹೇಳಿದನು.

ಮೀಕನು ಹೇಳಿದಂತೆ ಆ ಲೇವಿಯು ಮಾಡಿದನು. 11 ಆ ತರುಣ ಲೇವಿಯು ಮೀಕನಲ್ಲಿಯೇ ಇರಲು ಒಪ್ಪಿಕೊಂಡನು. ಆ ತರುಣನು ಮೀಕನ ಒಬ್ಬ ಮಗನಂತೆಯೇ ಆದನು. 12 ಮೀಕನು ಅವನನ್ನು ತಮಗೆ ಯಾಜಕನಾಗಬೇಕೆಂದು ಕೇಳಿಕೊಂಡನು. ಆದ್ದರಿಂದ ಆ ತರುಣನು ಯಾಜಕನಾಗಿ ಮೀಕನ ಮನೆಯಲ್ಲಿಯೇ ವಾಸಮಾಡಿದನು. 13 ಮೀಕನು ತನ್ನೊಳಗೆ, “ಯೆಹೋವನು ನನಗೆ ಕೃಪೆ ತೋರುವನು. ಏಕೆಂದರೆ ನನ್ನ ಮನೆಯಲ್ಲಿ ಲೇವಿಕುಲದ ಒಬ್ಬನು ಯಾಜಕನಾಗಿದ್ದಾನೆ” ಎಂದುಕೊಂಡನು.

ಅಪೊಸ್ತಲರ ಕಾರ್ಯಗಳು 21

ಪೌಲನು ಜೆರುಸಲೇಮಿಗೆ ಹೋಗುವನು

21 ನಾವೆಲ್ಲರೂ ಹಿರಿಯರನ್ನು ಬೀಳ್ಕೊಟ್ಟ ಬಳಿಕ ನೌಕಾಯಾನ ಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ದ್ವೀಪಕ್ಕೆ ಹೋದೆವು ಮತ್ತು ಅಲ್ಲಿಂದ ಪತಾರಕ್ಕೆ ಹೋದೆವು. ಫೆನಿಷ್ಯಕ್ಕೆ ಹೋಗುವ ಹಡಗನ್ನು ನಾವು ಅಲ್ಲಿ ಕಂಡೆವು. ನಾವು ಆ ಹಡಗನ್ನೇರಿ ಪ್ರಯಾಣ ಮಾಡಿದೆವು.

ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಅದು ನಮ್ಮ ಉತ್ತರದಿಕ್ಕಿನಲ್ಲಿ ಕಾಣುತ್ತಿತ್ತು. ಆದರೆ ನಾವು ಹಡಗನ್ನು ಅಲ್ಲಿ ನಿಲ್ಲಿಸದೆ ಸಿರಿಯ ದೇಶಕ್ಕೆ ಪ್ರಯಾಣ ಮಾಡಿ ಟೈರ್ ಪಟ್ಟಣದಲ್ಲಿ ಹಡಗನ್ನು ನಿಲ್ಲಿಸಿದೆವು. ಯಾಕೆಂದರೆ ಹಡಗಿನಿಂದ ಸರಕನ್ನು ಇಳಿಸಬೇಕಾಗಿತ್ತು. ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು. ಆದರೆ ನಮ್ಮ ಸಂದರ್ಶನವು ಮುಗಿದ ಮೇಲೆ ನಾವು ಅಲ್ಲಿಂದ ಹೊರಟು ಪ್ರಯಾಣವನ್ನು ಮುಂದುವರಿಸಿದೆವು. ಯೇಸುವಿನ ಎಲ್ಲಾ ಶಿಷ್ಯರು, ಸ್ತ್ರೀಯರು ಮತ್ತು ಮಕ್ಕಳು ಸಹ ನಮ್ಮನ್ನು ಬೀಳ್ಕೊಡುವುದಕ್ಕಾಗಿ ನಮ್ಮೊಂದಿಗೆ ಪಟ್ಟಣದಿಂದ ಹೊರಗೆ ಬಂದರು. ನಾವೆಲ್ಲರೂ ಸಮುದ್ರ ತೀರದಲ್ಲಿ ಮೊಣಕಾಲೂರಿ ಪ್ರಾರ್ಥಿಸಿದೆವು. ಬಳಿಕ ನಾವು ಒಬ್ಬರಿಗೊಬ್ಬರು ಅಂತಿಮ ವಂದನೆಗಳನ್ನು ಸಲ್ಲಿಸಿ ಹಡಗನ್ನು ಹತ್ತಿದೆವು. ಶಿಷ್ಯರು ತಮ್ಮ ಮನೆಗಳಿಗೆ ಹಿಂತಿರುಗಿದರು.

ನಾವು ಟೈರ್ ನಿಂದ ನಮ್ಮ ಪ್ರಯಾಣವನ್ನು ಮುಂದುವರೆಸಿ ಪ್ಟೊಲೊಮಾಯ ಎಂಬಲ್ಲಿಗೆ ಹೋದೆವು. ಅಲ್ಲಿಯ ಸಹೋದರರನ್ನು (ವಿಶ್ವಾಸಿಗಳು) ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು. ಮರುದಿನ ನಾವು ಪ್ಟೊಲೊಮಾಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಹೋದೆವು. ಅಲ್ಲಿ ನಾವು ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ತಂಗಿದೆವು. ಸುವಾರ್ತೆಯನ್ನು ತಿಳಿಸುವುದೇ ಫಿಲಿಪ್ಪನ ಕೆಲಸವಾಗಿತ್ತು. ಏಳುಮಂದಿ ಸಹಾಯಕರುಗಳಲ್ಲಿ[a] ಅವನೂ ಒಬ್ಬನಾಗಿದ್ದನು. ಮದುವೆಯಾಗಿಲ್ಲದ ನಾಲ್ಕುಮಂದಿ ಹೆಣ್ಣುಮಕ್ಕಳು ಅವನಿಗಿದ್ದರು. ಅವರೆಲ್ಲರಿಗೂ ಪ್ರವಾದಿಸುವ ವರವಿತ್ತು.

10 ನಾವು ಅಲ್ಲಿಗೆ ಹೋಗಿ ಅನೇಕ ದಿನಗಳಾದ ಮೇಲೆ, ಅಗಬ ಎಂಬ ಪ್ರವಾದಿಯು ಜುದೇಯದಿಂದ ಬಂದನು. 11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ಅದರಿಂದ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು, “ಪವಿತ್ರಾತ್ಮನು ನನಗೆ ಹೇಳುವುದೇನೆಂದರೆ, ‘ಈ ನಡುಪಟ್ಟಿಯನ್ನು ಕಟ್ಟಿಕೊಳ್ಳುವ ವ್ಯಕ್ತಿಯನ್ನು ಜೆರುಸಲೇಮಿನ ಯೆಹೂದ್ಯರು ಇದೇ ರೀತಿ ಕಟ್ಟಿಹಾಕುವರು. ಬಳಿಕ ಅವರು ಅವನನ್ನು ಯೆಹೂದ್ಯರಲ್ಲದ ಜನರಿಗೆ ಒಪ್ಪಿಸಿಕೊಡುವರು’” ಎಂದು ಹೇಳಿದನು.

12 ನಾವೆಲ್ಲರೂ ಈ ಮಾತುಗಳನ್ನು ಕೇಳಿದೆವು. ಆದ್ದರಿಂದ ನಾವು ಮತ್ತು ಯೇಸುವಿನ ಇತರ ಶಿಷ್ಯರು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಬೇಡಿಕೊಂಡೆವು. 13 ಆದರೆ ಪೌಲನು, “ನೀವು ಯಾಕೆ ಅಳುತ್ತಿರುವಿರಿ? ನೀವು ನನಗೆ ಬಹು ದುಃಖವನ್ನು ಯಾಕೆ ಉಂಟು ಮಾಡುತ್ತಿದ್ದೀರಿ? ನಾನು ಜೆರುಸಲೇಮಿನಲ್ಲಿ ಬಂಧಿಸಲ್ಪಡುವುದಕ್ಕಲ್ಲದೆ ಪ್ರಭು ಯೇಸುವಿನ ಹೆಸರಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ!” ಎಂದು ಹೇಳಿದನು.

14 ಜೆರುಸಲೇಮಿಗೆ ಹೋಗದಂತೆ ನಾವು ಅವನನ್ನು ಒಪ್ಪಿಸಲಾಗಲಿಲ್ಲ. ಆದ್ದರಿಂದ ಬೇಡಿಕೊಳ್ಳುವುದನ್ನು ನಿಲ್ಲಿಸಿ, “ಪ್ರಭುವಿನ ಚಿತ್ತವು ನೆರವೇರಲೆಂದು ಪ್ರಾರ್ಥಿಸುತ್ತೇವೆ” ಎಂದೆವು.

15 ಬಳಿಕ ನಾವು ಸಿದ್ಧರಾಗಿ ಜೆರುಸಲೇಮಿಗೆ ಹೊರಟೆವು. 16 ಸೆಜರೇಯ ಪಟ್ಟಣದಿಂದ ಯೇಸುವಿನ ಶಿಷ್ಯರಲ್ಲಿ ಕೆಲವರು ನಮ್ಮೊಂದಿಗೆ ಬಂದರು. ಈ ಶಿಷ್ಯರು ನಾವು ಇಳಿದುಕೊಳ್ಳಬೇಕಾಗಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ನಮ್ಮನ್ನು ಕರೆದೊಯ್ದರು. ಯೇಸುವಿನ ಆದಿ ಶಿಷ್ಯರಲ್ಲಿ ಮ್ನಾಸೋನನು ಒಬ್ಬನಾಗಿದ್ದನು.

ಪೌಲನು ಯಾಕೋಬನನ್ನು ಸಂದರ್ಶಿಸುವನು

17 ನಾವು ಜೆರುಸಲೇಮನ್ನು ತಲುಪಿದಾಗ ನಮ್ಮನ್ನು ಕಂಡು ವಿಶ್ವಾಸಿಗಳಿಗೆ ಸಂತೋಷವಾಯಿತು. 18 ಮರುದಿನ ಯಾಕೋಬನನ್ನು ಸಂದರ್ಶಿಸಲು ಪೌಲನು ನಮ್ಮನ್ನು ಕರೆದುಕೊಂಡು ಹೋದನು. ಹಿರಿಯರೆಲ್ಲರು ಅಲ್ಲಿದ್ದರು. 19 ಪೌಲನು ಅವರೆಲ್ಲರನ್ನು ವಂದಿಸಿದನು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ಅನೇಕ ಕಾರ್ಯಗಳನ್ನು ಮಾಡುವುದಕ್ಕಾಗಿ ದೇವರು ತನ್ನನ್ನು ಉಪಯೋಗಿಸಿಕೊಂಡ ಬಗೆಯನ್ನೂ ತನ್ನ ಮೂಲಕವಾಗಿ ದೇವರು ಮಾಡಿದ ಎಲ್ಲಾ ಕಾರ್ಯಗಳ ಕುರಿತಾಗಿಯೂ ಅವನು ಅವರಿಗೆ ತಿಳಿಸಿದನು.

20 ಈ ಸಂಗತಿಗಳನ್ನು ಕೇಳಿದ ಹಿರಿಯರು ದೇವರನ್ನು ಕೊಂಡಾಡಿದರು. ಬಳಿಕ ಅವರು ಪೌಲನಿಗೆ, “ಸಹೋದರನೇ, ವಿಶ್ವಾಸಿಗಳಿಗಾಗಿ ಪರಿವರ್ತನೆಗೊಂಡಿರುವ ಸಾವಿರಾರು ಮಂದಿ ಯೆಹೂದ್ಯರನ್ನು ನೀನು ಇಲ್ಲಿ ಕಾಣಬಹುದು. ಆದರೆ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದು ಬಹಳ ಮುಖ್ಯವೆಂಬುದು ಇವರ ಆಲೋಚನೆ. 21 ಈ ಯೆಹೂದ್ಯರು ನಿನ್ನ ಉಪದೇಶದ ಬಗ್ಗೆ ಕೇಳಿದ್ದಾರೆ. ಬೇರೆ ದೇಶಗಳಲ್ಲಿ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರಿಗೆ, “ನೀವು ಮೋಶೆಯ ಧರ್ಮಶಾಸ್ತ್ರವನ್ನು ತ್ಯಜಿಸಿರಿ; ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಬೇಡಿರಿ ಯೆಹೂದ್ಯರ ಸಂಪ್ರದಾಯಗಳಿಗೆ ವಿಧೇಯರಾಗಬೇಡಿರಿ ಎಂಬುದಾಗಿ ಹೇಳುತ್ತಿರುವಿಯೆಂದು ಅವರು ಕೇಳಿದ್ದಾರೆ.

22 “ಈಗ ನಾವು ಏನು ಮಾಡೋಣ? ನೀನು ಬಂದಿರುವ ವಿಷಯವು ಇಲ್ಲಿರುವ ಯೆಹೂದ್ಯ ವಿಶ್ವಾಸಿಗಳಿಗೆ ತಿಳಿಯುವುದು. 23 ಆದರೆ ಈಗ ನೀನು ಏನು ಮಾಡಬೇಕೆಂಬುದನ್ನು ನಾವು ನಿನಗೆ ತಿಳಿಸುತ್ತೇವೆ: ನಮ್ಮ ಜನರಲ್ಲಿ ನಾಲ್ಕುಮಂದಿ ದೇವರಿಗೆ ಹರಕೆ ಮಾಡಿಕೊಂಡಿದ್ದಾರೆ. 24 ನೀನು ಅವರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಅವರ ಶುದ್ಧಾಚಾರದ ಸಂಪ್ರದಾಯದಲ್ಲಿ ಭಾಗವಹಿಸು. ಅವರ ಖರ್ಚುವೆಚ್ಚನ್ನೆಲ್ಲ ಕೊಡು. ಬಳಿಕ ಅವರು ತಮ್ಮ ತಲೆಬೋಳಿಸಿಕೊಳ್ಳಲಿ. ನೀನು ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿದ ಸಂಗತಿಗಳು ಸತ್ಯವಲ್ಲವೆಂದು ಅವರೆಲ್ಲರಿಗೂ ಮನದಟ್ಟಾಗುವುದು. ಸ್ವತಃ ನೀನೇ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗುತ್ತಿರುವುದನ್ನು ಅವರೆಲ್ಲರೂ ಕಣ್ಣಾರೆ ಕಾಣುವರು.

25 “ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ನಾವು ಒಂದು ಪತ್ರವನ್ನು ಈಗಾಗಲೇ ಕಳುಹಿಸಿದ್ದೇವೆ.

ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನಬೇಡಿ.

ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

ಯಾವ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ’

ಎಂದು ಆ ಪತ್ರದಲ್ಲಿ ಬರೆಯಲಾಗಿದೆ” ಎಂದರು.

ಪೌಲನ ಬಂಧನ

26 ಆಗ ಪೌಲನು ಆ ನಾಲ್ಕುಮಂದಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಮರುದಿನ ಪೌಲನು, ಶುದ್ಧಾಚಾರದ ವ್ರತದಲ್ಲಿ ಭಾಗವಹಿಸಿದನು. ಬಳಿಕ ಅವನು ದೇವಾಲಯಕ್ಕೆ ಹೋಗಿ ಶುದ್ಧಾಚಾರದ ಸಂಪ್ರದಾಯ ಮುಗಿಯುವ ದಿನವನ್ನು ಪ್ರಕಟಿಸಿದನು. ಕೊನೆಯ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗಾಗಿಯೂ ಯಜ್ಞವನ್ನರ್ಪಿಸಬೇಕಾಗಿತ್ತು.

27 ಆ ಏಳು ದಿನಗಳ ಅವಧಿ ಮುಗಿಯುವುದರಲ್ಲಿತ್ತು. ಆದರೆ ಏಷ್ಯಾದಿಂದ ಬಂದಿದ್ದ ಕೆಲವು ಯೆಹೂದ್ಯರು ಪೌಲನನ್ನು ಕಂಡು ಜನಸಮೂಹವನ್ನು ಉದ್ದೇಶಿಸಿ, 28 “ಯೆಹೂದ್ಯ ಜನರೇ, ನಮಗೆ ಸಹಾಯಮಾಡಿ! ಮೋಶೆಯ ಧರ್ಮಶಾಸ್ತ್ರಕ್ಕೂ ನಮ್ಮ ಜನರಿಗೂ ಮತ್ತು ಈ ಸ್ಥಳಕ್ಕೂ (ದೇವಾಲಯ) ವಿರೋಧವಾಗಿ ಎಲ್ಲಾ ಕಡೆಗಳಲ್ಲಿ ಜನರಿಗೆ ಉಪದೇಶಿಸುತ್ತಿದ್ದವನು ಇವನೇ. ಈಗ ಇವನು ಕೆಲವು ಗ್ರೀಕರನ್ನು ದೇವಾಲಯದೊಳಕ್ಕೆ ಕರೆದುಕೊಂಡು ಬಂದಿದ್ದಾನೆ! ಈ ಪವಿತ್ರ ಸ್ಥಳವನ್ನು ಇವನು ಅಶುದ್ಧಗೊಳಿಸಿದ್ದಾನೆ!” ಎಂದು ಕೂಗಿಹೇಳಿ ಗಲಿಬಿಲಿ ಮಾಡಿದರು. 29 (ಜೆರುಸಲೇಮಿನಲ್ಲಿ ಪೌಲನೊಂದಿಗಿದ್ದ ತ್ರೊಫಿಮ ಎಂಬವನನ್ನು ಆ ಯೆಹೂದ್ಯರು ನೋಡಿದ್ದರು. ಎಫೆಸದ ತ್ರೊಫಿಮನು ಗ್ರೀಕನಾಗಿದ್ದನು. ಪೌಲನು ಇವನನ್ನು ಪವಿತ್ರ ಸ್ಥಳದೊಳಗೆ ಕರೆದುಕೊಂಡು ಹೋಗಿದ್ದಾನೆಂದು ಅವರು ಭಾವಿಸಿಕೊಂಡರು.)

30 ಜೆರುಸಲೇಮಿನ ಜನರೆಲ್ಲರು ಬಹು ಕೋಪಗೊಂಡರು. ಅವರೆಲ್ಲರು ಓಡಿಹೋಗಿ ಪೌಲನನ್ನು ಹಿಡಿದು ದೇವಾಲಯದೊಳಗಿಂದ ಎಳೆದುಕೊಂಡು ಬಂದರು. ಆ ಕೂಡಲೇ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. 31 ಅವರು ಪೌಲನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಇಡೀ ಪಟ್ಟಣದಲ್ಲೇ ಗಲಭೆಯುಂಟಾಗಿದೆ ಎಂಬ ಸುದ್ದಿಯು ಜೆರುಸಲೇಮಿನಲ್ಲಿದ್ದ ರೋಮ್ ಸೇನಾಧಿಪತಿಗೆ ತಿಳಿಯಿತು. 32 ತಕ್ಷಣವೇ ಅವನು ಕೆಲವು ಸೇನಾಧಿಕಾರಿಗಳನ್ನು ಮತ್ತು ಸೈನಿಕರನ್ನು ತನ್ನೊಂದಿಗೆ ಕರೆದುಕೊಂಡು ಜನಸಮೂಹದ ಕಡೆಗೆ ಹೋದನು. ಸೇನಾಧಿಪತಿಯನ್ನು ಮತ್ತು ಅವನ ಸೈನಿಕರನ್ನು ಕಂಡ ಜನರು ಪೌಲನಿಗೆ ಹೊಡೆಯುವುದನ್ನು ನಿಲ್ಲಿಸಿದರು.

33 ಸೇನಾಧಿಪತಿಯು ಹೋಗಿ ಪೌಲನನ್ನು ಬಂಧಿಸಿ ಎರಡು ಸರಪಣಿಗಳಿಂದ ಅವನನ್ನು ಕಟ್ಟಲು ಸೈನಿಕರಿಗೆ ಹೇಳಿದನು. ಬಳಿಕ ಸೇನಾಧಿಪತಿಯು, “ಈ ಮನುಷ್ಯನು ಯಾರು? ಇವನು ಏನು ತಪ್ಪು ಮಾಡಿದನು?” ಎಂದು ವಿಚಾರಿಸಿದನು. 34 ಅಲ್ಲಿದ್ದ ಜನರಲ್ಲಿ ಕೆಲವರು ಒಂದು ವಿಷಯದ ಬಗ್ಗೆ ಬೊಬ್ಬೆಹಾಕುತ್ತಿದ್ದರೆ, ಉಳಿದವರು ಇತರ ವಿಷಯಗಳ ಬಗ್ಗೆ ಬೊಬ್ಬೆಹಾಕುತ್ತಿದ್ದರು. ಈ ಗಲಿಬಿಲಿಯಿಂದಾಗಿಯೂ ಕೂಗಾಟದಿಂದಾಗಿಯೂ ಏನು ನಡೆಯಿತೆಂಬುದರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲಾಗಲಿಲ್ಲ. ಆದ್ದರಿಂದ ಸೇನಾಧಿಪತಿಯು ಪೌಲನನ್ನು ಸೈನ್ಯದ ಕೋಟೆಯೊಳಕ್ಕೆ ತೆಗೆದುಕೊಂಡು ಹೋಗಲು ಸೈನಿಕರಿಗೆ ತಿಳಿಸಿದನು. 35-36 ಎಲ್ಲಾ ಜನರು ಅವರನ್ನು ಹಿಂಬಾಲಿಸಿದರು. ಸೈನಿಕರು ಮೆಟ್ಟಿಲುಗಳ ಬಳಿಗೆ ಬಂದಾಗ ಪೌಲನನ್ನು ರಕ್ಷಿಸಲು ಹೊತ್ತುಕೊಂಡು ಹೋದರು. ಯಾಕೆಂದರೆ ಅವನಿಗೆ ಕೇಡುಮಾಡಲು ಸಿದ್ಧರಾಗಿದ್ದ ಜನರು, “ಅವನನ್ನು ಕೊಲ್ಲಿರಿ!” ಎಂದು ಕೂಗುತ್ತಿದ್ದರು.

37 ಸೈನಿಕರು ಪೌಲನನ್ನು ಸೈನ್ಯದ ಕೋಟೆಯೊಳಗೆ ಕೊಂಡೊಯ್ಯುತ್ತಿದ್ದಾಗ, ಪೌಲನು ಸೇನಾಧಿಪತಿಗೆ, “ನಾನು ನಿನ್ನೊಂದಿಗೆ ಸ್ವಲ್ಪ ಮಾತಾಡಬಹುದೇ?” ಎಂದು ಕೇಳಿದನು.

ಸೇನಾಧಿಪತಿಯು, “ಓಹೋ, ನಿನಗೆ ಗ್ರೀಕ್ ಭಾಷೆ ಗೊತ್ತಿದೆಯಾ? 38 ಹಾಗಾದರೆ, ನಾನು ಯೋಚಿಸಿದ ವ್ಯಕ್ತಿ ನೀನಲ್ಲ. ಸ್ವಲ್ಪಕಾಲದ ಹಿಂದೆ ಗಲಭೆ ಆರಂಭಿಸಿದ ಈಜಿಪ್ಟಿನವನೇ ನೀನೆಂದು ನಾನು ಭಾವಿಸಿದ್ದೆ. ಆ ಈಜಿಪ್ಟಿನವನು ನಾಲ್ಕುಸಾವಿರ ಮಂದಿ ಕೊಲೆಗಾರರನ್ನು ಮರಳುಗಾಡಿಗೆ ಕರೆದುಕೊಂಡು ಹೋದನು” ಎಂದು ಹೇಳಿದನು.

39 ಪೌಲನು, “ಇಲ್ಲ, ನಾನು ತಾರ್ಸದ ಯೆಹೂದ್ಯನು. ತಾರ್ಸವು ಸಿಲಿಸಿಯ ದೇಶದಲ್ಲಿದೆ. ನಾನು ಆ ಪ್ರಮುಖ ನಗರದ ಪ್ರಜೆ. ದಯವಿಟ್ಟು ಜನರೊಂದಿಗೆ ಮಾತಾಡಲು ನನಗೆ ಅಪ್ಪಣೆಯಾಗಲಿ” ಎಂದು ಹೇಳಿದನು.

40 ಜನರೊಂದಿಗೆ ಮಾತಾಡಲು ಸೇನಾಧಿಪತಿ ಪೌಲನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಪೌಲನು ಮೆಟ್ಟಿಲುಗಳ ಮೇಲೆ ನಿಂತುಕೊಂಡನು. ಬಳಿಕ, ಮೌನವಾಗಿರುವಂತೆ ಜನರಿಗೆ ಕೈಸನ್ನೆ ಮಾಡಿದನು. ಜನರು ಮೌನವಾದರು. ಆಗ ಪೌಲನು ಅವರೊಂದಿಗೆ ಯೆಹೂದ್ಯರ ಭಾಷೆಯಲ್ಲಿ ಮಾತಾಡಿದನು.

ಯೆರೆಮೀಯ 30-31

ಆಶಾದಾಯಕವಾದ ವಾಗ್ದಾನಗಳು

30 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳಿದನು: “ಯೆರೆಮೀಯನೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡು. ಈ ಪುಸ್ತಕವನ್ನು ನೀನೇ ಬರೆಯಬೇಕು. ಏಕೆಂದರೆ ನಾನು ನನ್ನ ಜನರಾದ ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ಸೆರೆವಾಸದಿಂದ ಕರೆದುಕೊಂಡು ಬರುವ ದಿನಗಳು ಬರುತ್ತಿವೆ.” ಈ ಸಂದೇಶವು ಯೆಹೋವನಿಂದ ಬಂದದ್ದು. “ಆ ಜನರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶದಲ್ಲಿ ನೆಲಸುವಂತೆ ಮಾಡುತ್ತೇನೆ. ಆಗ ನನ್ನ ಜನರು ಆ ಪ್ರದೇಶದ ಒಡೆತನ ಪಡೆಯುವರು.”

ಇಸ್ರೇಲಿನ ಮತ್ತು ಯೆಹೂದದ ಜನರ ಬಗ್ಗೆ ಯೆಹೋವನು ಈ ಸಂದೇಶವನ್ನು ಕೊಟ್ಟನು:

“ಜನರು ಭಯದಿಂದ ಗೋಳಿಡುವದನ್ನು ನಾವು ಕೇಳುತ್ತಿದ್ದೇವೆ.
    ಜನರು ಅಂಜಿಕೊಂಡಿದ್ದಾರೆ; ನೆಮ್ಮದಿಯಿಲ್ಲದವರಾಗಿದ್ದಾರೆ.

“ಈ ಪ್ರಶ್ನೆಯನ್ನು ಕೇಳಿ ಪರಿಶೀಲಿಸಿರಿ.
    ಪುರುಷನು ಮಗುವಿಗೆ ಜನ್ಮಕೊಡಬಲ್ಲನೆ? ಖಂಡಿತವಾಗಿಯೂ ಇಲ್ಲ.
ಹಾಗಾದರೆ ಪ್ರತಿಯೊಬ್ಬ ಬಲಿಷ್ಠನೂ ಪ್ರಸವವೇದನೆಪಡುತ್ತಿರುವ
    ಸ್ತ್ರೀಯಂತೆ ತನ್ನ ಹೊಟ್ಟೆಯನ್ನು ಏಕೆ ಹಿಡಿದುಕೊಂಡಿದ್ದಾನೆ?
ಪ್ರತಿಯೊಬ್ಬನ ಮುಖವು ಸತ್ತವನ ಮುಖದಂತೆ ಏಕೆ ಬಿಳಿಚಿದೆ?
    ಏಕೆಂದರೆ ಜನರು ಬಹಳ ಭಯಪಟ್ಟಿದ್ದಾರೆ.

“ಇದು ಯಾಕೋಬ್ಯರಿಗೆ ಬಹು ಮುಖ್ಯವಾದ ಸಮಯ.
    ಇದು ಬಹಳ ಕಷ್ಟದ ಸಮಯ.
ಎಂದೂ ಇಂಥ ಕಷ್ಟದ ಸಮಯ ಬರುವದಿಲ್ಲ.
    ಆದರೆ ಯಾಕೋಬ್ ಇದರಿಂದ ಪಾರಾಗುವುದು.”

ಇದು ಸರ್ವಶಕ್ತನಾದ ಯೆಹೋವನ ನುಡಿ. “ಆ ಸಮಯದಲ್ಲಿ ನಾನು ಇಸ್ರೇಲರ ಮತ್ತು ಯೆಹೂದ್ಯರ ಹೆಗಲ ಮೇಲಿನ ನೊಗವನ್ನು ಮುರಿದುಬಿಡುವೆನು. ನಿಮಗೆ ಕಟ್ಟಿರುವ ಹಗ್ಗಗಳನ್ನು ಕಿತ್ತುಹಾಕುವೆನು. ಪರದೇಶದವರು ಮತ್ತೆಂದಿಗೂ ನನ್ನ ಜನರನ್ನು ದಾಸರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಸ್ರೇಲರು ಮತ್ತು ಯೆಹೂದ್ಯರು ಪರದೇಶಿಯರ ಸೇವೆಮಾಡುವುದಿಲ್ಲ. ಅವರು ತಮ್ಮ ದೇವರಾದ ಯೆಹೋವನ ಸೇವೆಯನ್ನೇ ಮಾಡುವರು, ಅವರು ತಮ್ಮ ರಾಜನಾದ ದಾವೀದನ ಸೇವೆಮಾಡುವರು, ನಾನು ಆ ರಾಜನನ್ನು ಕಳುಹಿಸುವೆನು.”

10 ಯೆಹೋವನು ಹೀಗೆಂದನು:
    “ನನ್ನ ಸೇವಕನಾದ ಯಾಕೋಬನೇ, ಭಯಪಡಬೇಡ!
ಇಸ್ರೇಲೇ, ಅಂಜಬೇಡ,
    ನಾನು ನಿಮ್ಮನ್ನು ಆ ದೂರಪ್ರದೇಶದಿಂದ ರಕ್ಷಿಸುವೆನು.
ಆ ದೂರದೇಶದಲ್ಲಿ ನೀವು ಬಂಧಿಗಳಾಗಿದ್ದೀರಿ,
    ಆದರೆ ನಾನು ನಿಮ್ಮ ವಂಶದವರನ್ನು ರಕ್ಷಿಸುತ್ತೇನೆ.
    ಅವರನ್ನು ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ.
ಯಾಕೋಬು ಮತ್ತೆ ನೆಮ್ಮದಿಯಿಂದ ಇರುವುದು.
    ಜನರು ಯಾಕೋಬನನ್ನು ಪೀಡಿಸುವದಿಲ್ಲ;
ನನ್ನ ಜನರನ್ನು ಹೆದರಿಸುವ ಶತ್ರುಗಳಿರುವದಿಲ್ಲ.”
ಇದು ಯೆಹೋವನ ನುಡಿ.
11 “ಇಸ್ರೇಲರೇ, ಯೆಹೂದ್ಯರೇ ನಾನು ನಿಮ್ಮೊಂದಿಗಿದ್ದೇನೆ.
ನಾನು ನಿಮ್ಮನ್ನು ರಕ್ಷಿಸುತ್ತೇನೆ.
ನಾನು ನಿಮ್ಮನ್ನು ಆ ಜನಾಂಗಗಳ ಬಳಿಗೆ ಕಳುಹಿಸಿದೆ.
    ಆದರೆ ನಾನು ಆ ಎಲ್ಲಾ ಜನಾಂಗಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.
ಇದು ನಿಜ. ನಾನು ಆ ಜನಾಂಗಗಳನ್ನು ನಾಶಮಾಡುವೆನು.
    ಆದರೆ ನಾನು ನಿಮ್ಮನ್ನು ನಾಶಮಾಡುವದಿಲ್ಲ.
ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮಗೆ ದಂಡನೆಯಾಗಲೇಬೇಕು.
    ನಾನು ನಿಮ್ಮನ್ನು ಸರಿಯಾಗಿ ಶಿಕ್ಷಿಸುತ್ತೇನೆ.”

12 ಯೆಹೋವನು ಹೀಗೆನ್ನುತ್ತಾನೆ:
“ಇಸ್ರೇಲಿನ ಮತ್ತು ಯೆಹೂದದ ಜನರಾದ ನಿಮಗೆ ಗುಣವಾಗದ ಗಾಯವಾಗಿದೆ.
    ನಿಮಗೆ ವಾಸಿಯಾಗದ ನೋವಾಗಿದೆ.
13 ನಿಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ.
    ಆದ್ದರಿಂದ ನಿಮ್ಮ ಗಾಯಗಳು ವಾಸಿಯಾಗುವದಿಲ್ಲ.
14 ನೀವು ಅನೇಕ ಜನಾಂಗಗಳೊಡನೆ ಸ್ನೇಹ ಮಾಡಿದಿರಿ.
    ಆದರೆ ಆ ಜನಾಂಗಗಳು ನಿಮ್ಮ ಕಡೆಗೆ ಗಮನಕೊಡುವದಿಲ್ಲ.
    ನಿಮ್ಮ ‘ಸ್ನೇಹಿತರು’ ನಿಮ್ಮನ್ನು ಮರೆತಿದ್ದಾರೆ.
ನಾನು ಶತ್ರುವಿನಂತೆ ನಿಮ್ಮನ್ನು ನೋಯಿಸಿದೆ.
    ನಾನು ನಿಮಗೆ ಬಹಳ ಕಠಿಣವಾದ ಶಿಕ್ಷೆಯನ್ನು ಕೊಟ್ಟೆ.
ನಿಮ್ಮ ಮಹಾಪರಾಧಗಳಿಗಾಗಿ ನಾನು ಹೀಗೆ ಮಾಡಿದೆ.
    ನಿಮ್ಮ ಅನೇಕ ಪಾಪಗಳಿಗಾಗಿ ನಾನು ಹೀಗೆ ಮಾಡಿದೆ.
15 ಇಸ್ರೇಲೇ, ಯೆಹೂದವೇ, ನೀವು ನಿಮ್ಮ ಗಾಯಗಳಿಗಾಗಿ ಏಕೆ ಅರಚುವಿರಿ?
    ನಿಮ್ಮ ಗಾಯಗಳು ಆಳವಾಗಿವೆ ಮತ್ತು ಅದಕ್ಕೆ ಔಷಧಿಯಿಲ್ಲ.
ಯೆಹೋವನಾದ ನಾನು ನಿಮ್ಮ ಮಹಾಪರಾಧಕ್ಕಾಗಿ ಹೀಗೆಲ್ಲ ಮಾಡಿದೆ.
    ನಾನು ನಿಮ್ಮ ಅನೇಕ ಪಾಪಗಳಿಗಾಗಿ ಹೀಗೆಲ್ಲ ಮಾಡಿದೆ.
16 ಆ ಜನಾಂಗಗಳು ನಿಮ್ಮನ್ನು ನಾಶಗೊಳಿಸಿದವು.
    ಆದರೆ ಈಗ ಆ ಜನಾಂಗಗಳನ್ನು ನಾಶಪಡಿಸಲಾಗಿದೆ.
ಇಸ್ರೇಲೇ, ಯೆಹೂದವೇ, ನಿಮ್ಮ ಶತ್ರುಗಳು ಬಂಧಿಗಳಾಗುತ್ತಾರೆ.
ಅವರು ನಿಮ್ಮ ವಸ್ತುಗಳನ್ನು ಕದ್ದುಕೊಂಡಿದ್ದಾರೆ.
    ಆದರೆ ಬೇರೆಯವರು ಅವರ ವಸ್ತುಗಳನ್ನು ಕದಿಯುವರು.
ಅವರು ಯುದ್ಧದಲ್ಲಿ ನಿಮ್ಮ ವಸ್ತುಗಳನ್ನು ತೆಗೆದುಕೊಂಡರು.
    ಆದರೆ ಬೇರೆಯವರು ಯುದ್ಧದಲ್ಲಿ ಅವರ ವಸ್ತುಗಳನ್ನು ತೆಗೆದುಕೊಳ್ಳುವರು.”
17 ಇದು ಯೆಹೋವನ ನುಡಿ:
    “ನಾನು ಪುನಃ ನಿಮಗೆ ಆರೋಗ್ಯವನ್ನು ಕೊಡುವೆನು; ನಿಮ್ಮ ಗಾಯಗಳನ್ನು ವಾಸಿಮಾಡುವೆನು.
ಏಕೆಂದರೆ ಚೀಯೋನ್ ಭ್ರಷ್ಟಳಾದಳೆಂದೂ
    ‘ಯಾರಿಗೂ ಬೇಡವಾದ ನಗರ’ವೆಂದೂ ಬೇರೆಯವರು ಹೇಳಿದರು.”

18 ಯೆಹೋವನು ಹೀಗೆನ್ನುತ್ತಾನೆ,
“ಯಾಕೋಬಿನ ಜನರು ಈಗ ಬಂಧಿಗಳಾಗಿದ್ದಾರೆ.
    ಆದರೆ ಅವರು ಹಿಂತಿರುಗಿ ಬರುವರು.
    ಯಾಕೋಬಿನ ಮನೆಗಳ ಮೇಲೆ ನಾನು ಕನಿಕರ ತೋರುವೆನು.
ನಗರವು ಈಗ ಕೇವಲ ಹಾಳುಬಿದ್ದ
    ಮನೆಗಳಿಂದ ಕೂಡಿದ ಒಂದು ದಿಬ್ಬವಾಗಿದೆ.
    ಆದರೆ ಆ ನಗರವು ಮತ್ತೆ ನಿರ್ಮಿಸಲ್ಪಡುವುದು.
ಮುಂಚೆ ಇದ್ದ ಸ್ಥಳದಲ್ಲಿ ಅರಮನೆಯನ್ನು ಕಟ್ಟಲಾಗುವುದು.
19 ಆ ಸ್ಥಳಗಳಲ್ಲಿ ಜನರು ಸ್ತೋತ್ರಗೀತೆಗಳನ್ನು ಹಾಡುವರು.
    ಅಲ್ಲಿ ನಗುವಿನ ಧ್ವನಿಯು ಕೇಳಿಬರುವುದು.
ನಾನು ಅವರಿಗೆ ಹಲವಾರು ಮಕ್ಕಳನ್ನು ಕೊಡುವೆನು.
    ಇಸ್ರೇಲ್ ಮತ್ತು ಯೆಹೂದ ಚಿಕ್ಕವುಗಳಾಗಿರುವದಿಲ್ಲ.
ನಾನು ಅವುಗಳಿಗೆ ಗೌರವವನ್ನು ತರುತ್ತೇನೆ.
    ಯಾರೂ ಅವುಗಳನ್ನು ಕೀಳಾಗಿ ಕಾಣುವದಿಲ್ಲ.
20 ಯಾಕೋಬಿನ ಸಂತಾನದವರು ಮೊದಲಿನ ಸ್ಥಿತಿಯನ್ನು ಹೊಂದುವರು.
ನಾನು ಇಸ್ರೇಲರನ್ನೂ ಯೆಹೂದ್ಯರನ್ನೂ ಬಲಶಾಲಿಗಳನ್ನಾಗಿ ಮಾಡುವೆನು.
    ಅವರನ್ನು ಪೀಡಿಸುವ ಜನರನ್ನು ಶಿಕ್ಷಿಸುವೆನು.
21 ಅವರಲ್ಲೇ ಒಬ್ಬನು ಅವರಿಗೆ ನಾಯಕನಾಗಿರುವನು.
    ಆ ನಾಯಕನು ನನ್ನ ಜನರಿಂದಲೇ ಬರುವನು.
ನಾನು ಹೇಳಿದರೆ ಮಾತ್ರ ಜನರು ನನ್ನ ಹತ್ತಿರಕ್ಕೆ ಬರಲು ಸಾಧ್ಯ.
ಆದ್ದರಿಂದ ನಾನು ಆ ನಾಯಕನನ್ನು ನನ್ನ ಹತ್ತಿರ ಬರಲು ಹೇಳುವೆನು.
    ಅವನು ನನಗೆ ತುಂಬಾ ಹತ್ತಿರದವನಾಗುವನು.
22 ನೀವು ನನ್ನ ಜನರಾಗುವಿರಿ
ಮತ್ತು ನಾನು ನಿಮ್ಮ ದೇವರಾಗುವೆನು.”

23 ಯೆಹೋವನು ಬಹಳ ಕೋಪ ತಾಳಿದ್ದನು.
    ಅವನು ಜನರನ್ನು ಶಿಕ್ಷಿಸಿದನು.
ಆ ಶಿಕ್ಷೆಯು ಒಂದು ಬಿರುಗಾಳಿಯಂತೆ ಬಂದಿತು.
    ಆ ಶಿಕ್ಷೆಯು ದುಷ್ಟಜನರ ಮೇಲೆ ತೂಫಾನಿನಂತೆ ಬಂದಿತು.
24 ಜನರನ್ನು ಸಂಪೂರ್ಣವಾಗಿ ಶಿಕ್ಷಿಸುವವರೆಗೆ
    ಯೆಹೋವನು ಕೋಪಿಷ್ಟನಾಗಿಯೇ ಇರುವನು.
ಯೆಹೂದದ ಜನರಾದ ನೀವು ಅದನ್ನು
    ಕೊನೆಯ ದಿನಗಳಲ್ಲಿ ತಿಳಿದುಕೊಳ್ಳುವಿರಿ.

ಇಸ್ರೇಲಿನ ನವನಿರ್ಮಾಣ

31 ಯೆಹೋವನು ಈ ವಿಷಯಗಳನ್ನು ಹೇಳಿದನು: “ಆ ಸಮಯದಲ್ಲಿ ನಾನು ಇಸ್ರೇಲಿನ ಎಲ್ಲಾ ಗೋತ್ರಗಳ ದೇವರಾಗಿರುವೆನು; ಅವರು ನನ್ನ ಪ್ರಜೆಗಳಾಗಿರುವರು.”

ಯೆಹೋವನು ಹೀಗೆನ್ನುತ್ತಾನೆ:
“ಶತ್ರುವಿನ ಖಡ್ಗಕ್ಕೆ ಕೆಲವು ಜನರು ಆಹುತಿಯಾಗಿಲ್ಲ.
    ಅವರಿಗೆ ಮರುಭೂಮಿಯಲ್ಲಿ ನೆಮ್ಮದಿ ದೊರೆಯುವುದು.
    ಇಸ್ರೇಲು ವಿಶ್ರಾಂತಿಯನ್ನು ಬಯಸಿ ಬರುವುದು.”
ದೂರದಿಂದ ಯೆಹೋವನು
    ತನ್ನ ಜನರಿಗೆ ದರ್ಶನವನ್ನು ಕೊಡುವನು.

ಯೆಹೋವನು ಹೀಗೆನ್ನುವನು, “ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನ ಪ್ರೇಮವು ಶಾಶ್ವತವಾದದ್ದು.
ನಾನು ಎಂದೆಂದಿಗೂ
    ನಿಮ್ಮ ಹಿತೈಷಿಯಾಗಿರುವೆನು.
ನನ್ನ ವಧುವಾದ ಇಸ್ರೇಲೇ, ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು,
    ಆಗ ನೀನು ಮತ್ತೆ ಒಂದು ಜನಾಂಗವಾಗುವೆ.
ನೀನು ಮೊದಲಿನಂತೆ ನಿನ್ನ ದಮ್ಮಡಿಯನ್ನು ತೆಗೆದುಕೊಂಡು
    ಸಂತೋಷದಿಂದ ನೃತ್ಯ ಮಾಡುವವರೊಡನೆ ನೃತ್ಯ ಮಾಡುವೆ.
ಇಸ್ರೇಲಿನ ರೈತರಾದ ನೀವು ಮತ್ತೆ ದ್ರಾಕ್ಷಿತೋಟಗಳನ್ನು ಬೆಳೆಸುವಿರಿ.
ನೀವು ಸಮಾರ್ಯ ನಗರದ ಸುತ್ತಮುತ್ತಲಿನ
    ಬೆಟ್ಟಗಳಲ್ಲಿ ಆ ದ್ರಾಕ್ಷಿತೋಟವನ್ನು ಬೆಳೆಸುವಿರಿ.
ರೈತರಾದ ನೀವು
    ಅದರ ಫಲವನ್ನು ಅನುಭವಿಸುವಿರಿ.
ಒಂದು ಕಾಲ ಬರುವುದು,
    ಆಗ ಕಾವಲುಗಾರರು,
‘ಬನ್ನಿ, ನಮ್ಮ ದೇವರಾದ ಯೆಹೋವನನ್ನು ಆರಾಧಿಸಲು
    ಚೀಯೋನಿಗೆ ಹೋಗೋಣ’ ಎಂದು ಕೂಗುವರು.
ಎಫ್ರಾಯೀಮಿನ ಬೆಟ್ಟಪ್ರದೇಶದ ಕಾವಲುಗಾರರು ಸಹ ಹೀಗೆಯೇ ಕೂಗುವರು.”

ಯೆಹೋವನು ಹೀಗೆಂದನು:
“ಸಂತೋಷದಿಂದಿರಿ, ಯಾಕೋಬಿಗೋಸ್ಕರ ಹಾಡಿರಿ.
    ಮಹಾ ಜನಾಂಗವಾದ ಇಸ್ರೇಲಿಗೋಸ್ಕರ ಹರ್ಷಧ್ವನಿ ಮಾಡಿರಿ.
ಸ್ತೋತ್ರಗೀತೆಗಳನ್ನು ಹಾಡಿರಿ.
    ‘ಯೆಹೋವನು ತನ್ನ ಜನರನ್ನು ರಕ್ಷಿಸಿದನು.
    ಇಸ್ರೇಲ್ ಜನಾಂಗದಲ್ಲಿ ಅಳಿದುಳಿದ ಜನರನ್ನು ಆತನು ರಕ್ಷಿಸಿದನು’ ಎಂದು ಕೂಗಿರಿ.
ನಾನು ಇಸ್ರೇಲರನ್ನು
    ಉತ್ತರದ ದೇಶದಿಂದ ತರುವೆನು.
ನಾನು ಜಗತ್ತಿನ ದೂರದೂರದ ಸ್ಥಳಗಳಿಂದ
    ಇಸ್ರೇಲರನ್ನು ಒಟ್ಟುಗೂಡಿಸುವೆನೆಂದು ತಿಳಿದುಕೊಳ್ಳಿರಿ.
ಅವರಲ್ಲಿ ಕೆಲವರು ಕುರುಡರಾಗಿರುವರು; ಕುಂಟರಾಗಿರುವರು,
    ಕೆಲವು ಸ್ತ್ರೀಯರು ಗರ್ಭಿಣಿಯರಾಗಿದ್ದು ಹೆರಿಗೆಯ ದಿನಗಳು ತುಂಬಿದವರಾಗಿರುತ್ತಾರೆ.
    ಬಹಳಷ್ಟು ಜನರು ಹಿಂತಿರುಗಿಬರುತ್ತಾರೆ.
ಆ ಜನರು ಹಿಂತಿರುಗಿ ಬರುವಾಗ ಅಳುತ್ತಿರುವರು.
    ಆದರೆ ನಾನು ಅವರಿಗೆ ದಾರಿತೋರಿಸುವೆನು, ಸಮಾಧಾನಪಡಿಸುವೆನು.
ನಾನು ಅವರನ್ನು ನದಿ ದಾಟಿಸಿಕೊಂಡು ಬರುವೆನು.
ಅವರು ಎಡವದಂತೆ ಸಮವಾದ ಮಾರ್ಗದಲ್ಲಿ
    ನಡೆಸಿಕೊಂಡು ಬರುವೆನು.
ನಾನು ಇಸ್ರೇಲಿನ ತಂದೆ;
ಎಫ್ರಾಯೀಮ್ ನನ್ನ ಚೊಚ್ಚಲ ಮಗ.
    ಆದ್ದರಿಂದಲೇ ನಾನು ಅವರನ್ನು ನಡೆಸಿಕೊಂಡು ಬರುವೆನು.

10 “ಜನಾಂಗಗಳೇ, ಯೆಹೋವನ ಈ ಸಂದೇಶವನ್ನು ಕೇಳಿರಿ.
ಈ ಸಂದೇಶವನ್ನು ಸಮುದ್ರದಡದ ದೂರದೂರದ ಪ್ರದೇಶಗಳಲ್ಲಿ ತಿಳಿಸಿರಿ.
‘ಇಸ್ರೇಲರನ್ನು ಚದರಿಸಿದಾತನು
    ಅವರನ್ನು ಮತ್ತೆ ಒಟ್ಟುಗೂಡಿಸುವನು.
ಆತನು ತನ್ನ ಹಿಂಡನ್ನು ಕುರುಬನಂತೆ
    ನೋಡಿಕೊಳ್ಳುವನು’ ಎಂದು ಹೇಳಿರಿ.
11 ಯೆಹೋವನು ಯಾಕೋಬ್ಯರನ್ನು ಹಿಂದಕ್ಕೆ ಕರೆದುಕೊಂಡು ಬರುವನು.
    ಯೆಹೋವನು ತನ್ನ ಜನರನ್ನು ಅವರಿಗಿಂತಲೂ ಬಲಿಷ್ಠರಾದ ಜನರಿಂದ ರಕ್ಷಿಸುವನು.
12 ಇಸ್ರೇಲಿನ ಜನರು ಚೀಯೋನ್ ಶಿಖರಕ್ಕೆ ಬರುವರು;
    ಸಂತೋಷದಿಂದ ನಲಿದಾಡುವರು.
ದೇವರು ಅವರಿಗೆ ಅನುಗ್ರಹಿಸುವ ಎಲ್ಲಾ ಶ್ರೇಷ್ಠವಾದ ವಸ್ತುಗಳಿಂದ
    ಸಂತೋಷಚಿತ್ತರಾದ ಅವರ ಮುಖಗಳು ಪ್ರಕಾಶಮಾನವಾಗುವವು.
ಯೆಹೋವನು ಅವರಿಗೆ ಧಾನ್ಯ, ಹೊಸ ದ್ರಾಕ್ಷಾರಸ,
    ಎಣ್ಣೆ, ಕುರಿಮರಿಗಳು ಮತ್ತು ಹಸುಗಳನ್ನು ದಯಪಾಲಿಸುವನು.
ಅವರು ಸಾಕಷ್ಟು ನೀರಿರುವ ತೋಟದಂತೆ ಲವಲವಿಕೆಯಿಂದ ಇರುವರು.
    ಇಸ್ರೇಲರು ಇನ್ನು ಯಾವ ತೊಂದರೆಗೂ ಒಳಗಾಗುವುದಿಲ್ಲ.
13 ಆಗ ಇಸ್ರೇಲಿನ ತರುಣಿಯರು
    ಸಂತೋಷದಿಂದ ನರ್ತಿಸುವರು.
ತರುಣರು ಮತ್ತು ವೃದ್ಧರು
    ಆ ನರ್ತನದಲ್ಲಿ ಭಾಗವಹಿಸುವರು.
ನಾನು ಅವರ ದುಃಖವನ್ನು ಸಂತೋಷವಾಗಿ ಪರಿವರ್ತಿಸುವೆನು.
    ನಾನು ಇಸ್ರೇಲರನ್ನು ಸಂತೈಸುವೆನು.
    ಅವರ ದುಃಖವನ್ನು ಹೋಗಲಾಡಿಸಿ ಅವರನ್ನು ಸಂತೋಷಪಡಿಸುವೆನು.
14 ಯಾಜಕರು ತಮಗೆ ಬೇಕಾಗುವದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೈವೇದ್ಯಗಳನ್ನು ಪಡೆಯುವರು.
    ನಾನು ಅವರಿಗೆ ಕೊಡುವ ಉತ್ತಮ ವಸ್ತುಗಳನ್ನು ಮನದಣಿಯುವ ಹಾಗೆ ಅನುಭವಿಸಿ ನನ್ನ ಜನರು ತೃಪ್ತಿಪಡುವರು.”
ಇದು ಯೆಹೋವನ ನುಡಿ.

15 ಯೆಹೋವನು ಹೀಗೆನ್ನುತ್ತಾನೆ:
“ರಾಮದಲ್ಲಿ ಅತಿ ದುಃಖದಿಂದ ಗೋಳಾಡುವ
    ಒಂದು ಧ್ವನಿಯು ಕೇಳಿಬರುತ್ತದೆ.
ರಾಹೇಲಳು[a] ತನ್ನ ಮಕ್ಕಳಿಗಾಗಿ ಗೋಳಾಡುವಳು.
    ಅವಳ ಮಕ್ಕಳು ಸತ್ತುಹೋದುದರಿಂದ
    ರಾಹೇಲಳು ಸಮಾಧಾನ ಹೊಂದುವದಕ್ಕೆ ಒಪ್ಪಲಾರಳು.”

16 ಆದರೆ ಯೆಹೋವನು, “ಅಳುವದನ್ನು ನಿಲ್ಲಿಸು.
    ಕಣ್ಣಿನಲ್ಲಿ ನೀರು ತುಂಬಿಕೊಳ್ಳಬೇಡ.
ನಿನ್ನ ಕೆಲಸಕ್ಕಾಗಿ ನಿನಗೆ ಪ್ರತಿಫಲ ಸಿಕ್ಕುವುದು” ಎಂದು ಹೇಳುವನು.
ಇದು ಯೆಹೋವನ ನುಡಿ.
“ಇಸ್ರೇಲರು ತಮ್ಮ ಶತ್ರುಗಳ ಪ್ರದೇಶದಿಂದ ಹಿಂತಿರುಗಿ ಬರುವರು.
17 ಆದ್ದರಿಂದ ಇಸ್ರೇಲೇ, ನಿನ್ನ ಮಕ್ಕಳು
    ತಮ್ಮ ದೇಶಕ್ಕೆ ಹಿಂತಿರುಗಿ ಬರುವರೆಂಬ ನಿರೀಕ್ಷೆ ನಿನಗಿರಲಿ.”
ಇದು ಯೆಹೋವನ ನುಡಿ.
18 “ಎಫ್ರಾಯೀಮ್ ಅಳುವುದನ್ನು ನಾನು ಕೇಳಿದ್ದೇನೆ.
ಎಫ್ರಾಯೀಮು ಹೀಗೆ ಹೇಳುವದನ್ನು ನಾನು ಕೇಳಿದ್ದೇನೆ.
    ‘ಯೆಹೋವನೇ, ನೀನು ನಿಜವಾಗಿ ನನ್ನನ್ನು ದಂಡಿಸಿದೆ.
    ನಾನು ಪಾಠವನ್ನು ಕಲಿತೆನು.
    ನಾನು ತರಬೇತಿ ಹೊಂದದ ಒಂದು ಹೋರಿಯುಂತಿದ್ದೆನು.
ನನ್ನನ್ನು ದಂಡಿಸುವದನ್ನು ದಯವಿಟ್ಟು ನಿಲ್ಲಿಸು.
    ನಾನು ನಿನ್ನಲ್ಲಿಗೆ ಹಿಂದಿರುಗಿ ಬರುತ್ತೇನೆ.
    ನಿಜವಾಗಿಯೂ ನೀನೇ ನನ್ನ ದೇವರಾದ ಯೆಹೋವನು.
19 ಯೆಹೋವನೇ, ನಾನು ನಿನಗೆ ದೂರವಾಗಿ ಅಲೆದಾಡಿದೆನು.
    ಆದರೆ ನಾನು ಮಾಡಿದ ದುಷ್ಕೃತ್ಯಗಳ ಬಗ್ಗೆ ತಿಳಿದುಕೊಂಡೆನು.
    ಆದ್ದರಿಂದ ನಾನು ನನ್ನ ಮನಸ್ಸನ್ನೂ ಜೀವನವನ್ನೂ ಪರಿವರ್ತಿಸಿಕೊಂಡೆ.
ತಾರುಣ್ಯಾವಸ್ಥೆಯಲ್ಲಿ ನಾನು ಮಾಡಿದ ಮೂರ್ಖತನಕ್ಕಾಗಿ ಲಜ್ಜೆಗೊಂಡೆನು; ನಾಚಿಕೆಪಟ್ಟೆನು.’”
20 ಯೆಹೋವನು ಹೀಗೆನ್ನುತ್ತಾನೆ:
“ಎಫ್ರಾಯೀಮ್ ನನ್ನ ಪ್ರೀತಿಯ ಮಗನೆಂಬುದು ನೀನು ಬಲ್ಲೆ.
    ನಾನು ಆ ಮಗುವನ್ನು ಪ್ರೀತಿಸುತ್ತೇನೆ.
ಹೌದು, ನಾನು ಹಲವು ಸಲ ಎಫ್ರಾಯೀಮನ ವಿರುದ್ಧವಾಗಿ ಮಾತನಾಡುತ್ತೇನೆ.
    ಆದಾಗ್ಯೂ ನಾನು ಅವನನ್ನು ಜ್ಞಾಪಿಸಿಕೊಳ್ಳುತ್ತೇನೆ.
ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ.
    ನಾನು ನಿಜವಾಗಿಯೂ ಅವನನ್ನು ಸಂತೈಸಬಯಸುತ್ತೇನೆ.”
ಇದು ಯೆಹೋವನ ನುಡಿ.

21 “ಇಸ್ರೇಲರೇ, ದಾರಿತೋರುವ
    ಕಂಬಗಳನ್ನೂ ಕೈಮರಗಳನ್ನೂ ನೆಡಿರಿ.
ನೀವು ಪ್ರಯಾಣ ಮಾಡುತ್ತಿರುವ ರಸ್ತೆಯನ್ನು ಗಮನಿಸಿರಿ.
    ನಿಮ್ಮ ಊರುಗಳಿಗೆ ಹಿಂತಿರುಗಿ ಬನ್ನಿ.
ನನ್ನ ವಧುವಾದ ಇಸ್ರೇಲೇ, ಮನೆಗೆ ಬಾ.
22 ನೀನು ಅಪನಂಬಿಗಸ್ತಳಾದ ಮಗಳಾಗಿದ್ದೆ.
    ಆದರೆ ನೀನು ಬದಲಾವಣೆ ಹೊಂದಿದೆ.
    ಈಗ ನೀನು ಮನೆಗೆ ಹಿಂದಿರುಗಿ ಬರಲು ಎಷ್ಟು ಹೊತ್ತು ಕಾದುಕೊಂಡಿರುವೆ.

“ಯೆಹೋವನು ಲೋಕದಲ್ಲಿ ಅಪೂರ್ವವಾದದ್ದನ್ನು ಮಾಡಿದ್ದಾನೆ.
    ಹೆಂಗಸು ಗಂಡಸನ್ನು ಕಾಪಾಡುವಳು.”

23 ಇಸ್ರೇಲಿನ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆನ್ನುತ್ತಾನೆ: “ನಾನು ಯೆಹೂದದ ಜನರಿಗಾಗಿ ಮತ್ತೆ ಒಳ್ಳೆಯದನ್ನು ಮಾಡುವೆನು. ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದವರನ್ನು ನಾನು ಮತ್ತೆ ಕರೆದುತರುವೆನು. ಆಗ ಅವರು ಯೆಹೂದನಾಡಿನಲ್ಲಿಯೂ ಅದರ ನಗರಗಳಲ್ಲಿಯೂ ಹೀಗೆನ್ನುವರು: ‘ನ್ಯಾಯವಾದ ನಿವಾಸವೇ, ಪವಿತ್ರ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ.’

24 “ಯೆಹೂದದ ಎಲ್ಲಾ ಊರುಗಳಲ್ಲಿ ಜನರು ಪರಸ್ಪರ ಶಾಂತಿಯಿಂದ ವಾಸಿಸುವರು. ರೈತರೂ ದನಕುರಿಗಳನ್ನು ಮೇಯಿಸುವ ಜನರೂ ಶಾಂತಿಯಿಂದ ಯೆಹೂದದಲ್ಲಿ ವಾಸಿಸುವರು. 25 ದುಬರ್ಲಗೊಂಡ ಮತ್ತು ದಣಿದ ಜನರಿಗೆ ನಾನು ಶಕ್ತಿಯನ್ನೂ ವಿಶ್ರಾಂತಿಯನ್ನೂ ಕೊಡುವೆನು.”

26 ಆಗ ನಾನು ಎಚ್ಚೆತ್ತು ಸುತ್ತಮುತ್ತಲು ನೋಡಿದೆ. ಅದೊಂದು ಬಹಳ ಹಿತಕರವಾದ ನಿದ್ರೆಯಾಗಿತ್ತು.

27 ಯೆಹೋವನು ಹೀಗೆ ನುಡಿದನು: “ಇಸ್ರೇಲ್ ಮತ್ತು ಯೆಹೂದ ವಂಶಗಳು ಬೆಳೆಯುವದಕ್ಕೆ ನಾನು ಸಹಾಯ ಮಾಡುವ ದಿನಗಳು ಬರುತ್ತಿವೆ. ಸಸಿಗಳನ್ನು ನೆಟ್ಟ ಮೇಲೆ ಅವುಗಳನ್ನು ನೋಡಿಕೊಳ್ಳುವ ಹಾಗೆ ಅವರ ಮಕ್ಕಳು ಮತ್ತು ಅವರ ಪಶುಗಳು ಬೆಳೆಯುವದಕ್ಕೂ ನಾನು ಸಹಾಯ ಮಾಡುತ್ತೇನೆ. 28 ಪೂರ್ವಕಾಲದಲ್ಲಿ, ಇಸ್ರೇಲ್ ಮತ್ತು ಯೆಹೂದಗಳ ಮೇಲೆ ನಾನು ಗಮನವಿಟ್ಟಿದ್ದೆನು. ಆದರೆ ನಾನು ಅವರನ್ನು ತೆಗೆದುಹಾಕುವ ಸಮಯಕ್ಕಾಗಿ ಕಾದುಕೊಂಡಿದ್ದೆ. ನಾನು ಅವರನ್ನು ಕೆಡವಿದೆ; ಅವರನ್ನು ಹಾಳುಮಾಡಿದೆ. ಅವರಿಗೆ ಅನೇಕ ಕಷ್ಟಗಳನ್ನು ಕೊಟ್ಟೆ. ಆದರೆ ಈಗ ಅವರನ್ನು ಅಭಿವೃದ್ಧಿಪಡಿಸುವದಕ್ಕಾಗಿ ಅವರನ್ನು ಬಲಶಾಲಿಗಳನ್ನಾಗಿ ಮಾಡಲು ಅವರ ಕಡೆಗೆ ಗಮನಹರಿಸುತ್ತೇನೆ” ಇದು ಯೆಹೋವನ ನುಡಿ.

29 “‘ಹುಳಿದ್ರಾಕ್ಷಿ ತಿಂದವರು ತಂದೆತಾಯಿಗಳು!
    ರುಚಿ ಕಂಡದ್ದು ಅವರ ಮಕ್ಕಳು!’

ಎಂಬ ಗಾದೆಯನ್ನು ಆಗ ಜನರು ಬಳಸುವ ಅವಶ್ಯಕತೆ ಇರುವದಿಲ್ಲ. 30 ಪ್ರತಿಯೊಬ್ಬನು ತನ್ನ ಪಾಪದ ನಿಮಿತ್ತವೇ ಸಾಯುವನು. ಹುಳಿದ್ರಾಕ್ಷಿಯನ್ನು ತಿಂದವನೇ ಅದರ ರುಚಿಯನ್ನು ಕಾಣುವನು.”

ಹೊಸ ಒಡಂಬಡಿಕೆ

31 ಯೆಹೋವನು ಹೀಗೆಂದನು: “ನಾನು ಇಸ್ರೇಲರೊಂದಿಗೂ ಮತ್ತು ಯೆಹೂದ್ಯರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಸಮಯ ಬರುತ್ತಿದೆ. 32 ಈ ಒಡಂಬಡಿಕೆ ನಾನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತಲ್ಲ. ನಾನು ಅವರ ಕೈಹಿಡಿದು ಈಜಿಪ್ಟಿನಿಂದ ಹೊರತಂದಾಗ ಮಾಡಿಕೊಂಡ ಒಡಂಬಡಿಕೆಯದು. ನಾನು ಅವರ ಒಡೆಯನಾಗಿದ್ದೆ. ಆದರೆ ಅವರು ಒಡಂಬಡಿಕೆಯನ್ನು ಮುರಿದರು.” ಇದು ಯೆಹೋವನ ನುಡಿ.

33 ಯೆಹೋವನು ಹೀಗೆನ್ನುತ್ತಾನೆ: “ಭವಿಷ್ಯದಲ್ಲಿ ಇಸ್ರೇಲಿನ ಜನರೊಂದಿಗೆ ನಾನು ಈ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ. ನಾನು ನನ್ನ ಉಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು; ಅವುಗಳನ್ನು ಅವರ ಹೃದಯಗಳ ಮೇಲೆ ಬರೆಯುವೆನು. ನಾನು ಅವರ ದೇವರಾಗಿರುವೆನು, ಅವರು ನನ್ನ ಜನರಾಗಿರುವರು. 34 ತಮ್ಮ ನೆರೆಮನೆಯವರಿಗೂ ತಮ್ಮ ಬಂಧುಬಳಗದವರಿಗೂ ಯಾರೂ ಯೆಹೋವನ ಬಗ್ಗೆ ಹೇಳಿಕೊಡಬೇಕಾಗಿಲ್ಲ. ಯಾಕೆಂದರೆ ಅತಿ ಕನಿಷ್ಠರಿಂದ ಅತಿ ಪ್ರಮುಖರವರೆಗೆ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು. ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಅವರನ್ನು ಕ್ಷಮಿಸುವೆನು. ನಾನು ಅವರ ಪಾಪಗಳನ್ನು ಮರೆತುಬಿಡುವೆನು.” ಇದು ಯೆಹೋವನ ನುಡಿ.

ಯೆಹೋವನು ಇಸ್ರೇಲನ್ನು ಎಂದಿಗೂ ತ್ಯಜಿಸನು

35 ಯೆಹೋವನು ಹೀಗೆನ್ನುತ್ತಾನೆ:
“ಹಗಲಿನಲ್ಲಿ ಸೂರ್ಯನು ಪ್ರಕಾಶಿಸುವಂತೆ ಮಾಡುವಾತನೂ
    ರಾತ್ರಿಯಲ್ಲಿ ಚಂದ್ರನೂ ನಕ್ಷತ್ರಗಳೂ ಪ್ರಕಾಶಿಸುವಂತೆ ಮಾಡುವಾತನೂ
ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುವಂತೆ ಸಮುದ್ರವನ್ನು ಕೆರಳಿಸುವಾತನೂ
    ಸರ್ವಶಕ್ತನಾದ ಯೆಹೋವನೆಂಬ ಹೆಸರಿನಿಂದ ಪ್ರಖ್ಯಾತನೂ ಆಗಿರುವ ಯೆಹೋವನು.”

36 ಯೆಹೋವನು ಹೀಗೆನ್ನುತ್ತಾನೆ:
“ಸೂರ್ಯ, ಚಂದ್ರ, ನಕ್ಷತ್ರ ಮತ್ತು ಸಮುದ್ರಗಳ ಮೇಲಿನ ಹತೋಟಿಯನ್ನು ನಾನು ಕಳೆದುಕೊಂಡಾಗ ಮಾತ್ರ
    ಇಸ್ರೇಲಿನ ಪೀಳಿಗೆಯು ಒಂದು ಜನಾಂಗವಾಗಿ ನಿಂತುಹೋಗುವುದು.”

37 ಯೆಹೋವನು ಹೀಗೆನ್ನುತ್ತಾನೆ: “ನಾನು ಇಸ್ರೇಲ್ ಸಂತತಿಯವರನ್ನು ತಿರಸ್ಕರಿಸುವುದೇ ಇಲ್ಲ.
    ಜನರಿಗೆ ಆಕಾಶಮಂಡಲವನ್ನು ಅಳೆಯಲೂ
    ಭೂಗರ್ಭದ ಪರಿಪೂರ್ಣ ರಹಸ್ಯವನ್ನು ಅರಿಯಲೂ ಸಾಧ್ಯವೇ?
ಒಂದುವೇಳೆ ಸಾಧ್ಯವಾದರೆ, ಇಸ್ರೇಲರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಇಸ್ರೇಲರನ್ನು ನಿರಾಕರಿಸಿದರೂ ನಿರಾಕರಿಸಬಹುದು.”
ಇದು ಯೆಹೋವನ ಸಂದೇಶ.

ಹೊಸ ಜೆರುಸಲೇಮ್

38 ಇದು ಯೆಹೋವನ ನುಡಿ: “ಯೆಹೋವನಿಗಾಗಿ ಜೆರುಸಲೇಮ್ ನಗರವನ್ನು ಮತ್ತೆ ಕಟ್ಟುವ ಕಾಲ ಬರುತ್ತಿದೆ. ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಇಡೀ ಪಟ್ಟಣವನ್ನು ಮತ್ತೊಮ್ಮೆ ಕಟ್ಟಲಾಗುವುದು. 39 ಅಳತೆಯ ನೂಲು ಮೂಲೆಯ ಬಾಗಿಲಿನಿಂದ ಗಾರೇಬ್ ಗುಡ್ಡದ ನೇರವಾಗಿ ನೆಟ್ಟಗೆ ಎಳೆಯಲ್ಪಟ್ಟು ಗೋಯದ ಕಡೆಗೆ ತಿರುಗುವುದು. 40 ಹೆಣಗಳನ್ನು ಮತ್ತು ಬೂದಿಯನ್ನು ಚೆಲ್ಲುವ ಇಡೀ ಕಣಿವೆ ಪ್ರದೇಶ ಯೆಹೋವನಿಗೆ ಪವಿತ್ರಸ್ಥಳವಾಗುವುದು. ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆಬಾಗಿಲಿನ ಮೂಲೆ, ಇವುಗಳವರೆಗಿರುವ ಬೆಟ್ಟಪ್ರದೇಶ ಅದರಲ್ಲಿ ಸೇರುವುದು. ಆ ಪ್ರದೇಶವೆಲ್ಲ ಯೆಹೋವನಿಗೆ ಪವಿತ್ರಸ್ಥಳವಾಗುವುದು. ಜೆರುಸಲೇಮ್ ನಗರವು ಇನ್ನುಮೇಲೆ ಎಂದಿಗೂ ಕೆಡವಲ್ಪಡದು; ಹಾಳಾಗದು!”

ಮಾರ್ಕ 16

ಯೇಸುವಿನ ಪುನರುತ್ಥಾನ

(ಮತ್ತಾಯ 28:1-8; ಲೂಕ 24:1-12; ಯೋಹಾನ 20:1-10)

16 ಸಬ್ಬತ್ ದಿನದ ಮರುದಿನ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬನ ತಾಯಿಯಾದ ಮರಿಯಳು ಕೆಲವು ಸುಗಂಧದ್ರವ್ಯಗಳನ್ನು ಯೇಸುವಿನ ದೇಹಕ್ಕೆ ಹಚ್ಚಬೇಕೆಂದಿದ್ದರು. ವಾರದ ಮೊದಲನೆಯ ದಿನ, ಮುಂಜಾನೆಯಲ್ಲಿಯೇ, ಅವರು ಸಮಾಧಿಗೆ ಹೊರಟರು. ಆಗ ಸೂರ್ಯೋದಯವಾಗಿದ್ದರೂ ಇನ್ನೂ ನಸುಕಾಗಿತ್ತು. ಆ ಸ್ತ್ರೀಯರು ಒಬ್ಬರಿಗೊಬ್ಬರು, “ದೊಡ್ಡ ಬಂಡೆಯಿಂದ ಸಮಾಧಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಬಂಡೆಯನ್ನು ನಮಗಾಗಿ ಯಾರು ಉರುಳಿಸುತ್ತಾರೆ?” ಎಂದುಕೊಂಡರು.

ಆ ಸ್ತ್ರೀಯರು ಸಮಾಧಿಯನ್ನು ತಲುಪಿದಾಗ ಆ ಬಂಡೆ ಉರುಳಿರುವುದನ್ನು ಕಂಡರು. ಆ ಬಂಡೆಯು ಬಹಳ ದೊಡ್ಡದಾಗಿತ್ತು ಆದರೆ ಅದನ್ನು ಬಾಗಿಲಿನಿಂದ ದೂರಕ್ಕೆ ಉರುಳಿಸಲಾಗಿತ್ತು. ಆ ಸ್ತ್ರೀಯರು ಸಮಾಧಿಯೊಳಗೆ ಹೋದಾಗ ಬಿಳುಪಾದ ನಿಲುವಂಗಿ ಧರಿಸಿದ್ದ ಒಬ್ಬ ಯುವಕನು ಸಮಾಧಿಯ ಬಲಗಡೆ ಕುಳಿತಿರುವುದನ್ನು ಕಂಡು ಭಯಗೊಂಡರು.

ಆದರೆ ಅವನು, “ಭಯಪಡಬೇಡಿ! ಶಿಲುಬೆಗೇರಿಸಲ್ಪಟ್ಟ ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ? ಆತನು ಜೀವಂತನಾಗಿ ಎದ್ದಿದ್ದಾನೆ. ಆತನು ಇಲ್ಲಿಲ್ಲ. ನೋಡಿರಿ, ಆತನ ದೇಹವನ್ನು ಇಟ್ಟಿದ್ದ ಸ್ಥಳ ಇದೇ. ಈಗ ಹೋಗಿ ಆತನ ಶಿಷ್ಯರಿಗೆ ತಿಳಿಸಿರಿ. ಪೇತ್ರನಿಗಂತೂ ಖಂಡಿತವಾಗಿ ತಿಳಿಸಿರಿ. ನೀವು ಅವರಿಗೆ, ‘ಯೇಸು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ಆತನು ನಿಮಗಿಂತ ಮುಂಚೆ ಅಲ್ಲಿರುತ್ತಾನೆ. ಆತನು ನಿಮಗೆ ಮೊದಲೇ ಹೇಳಿದಂತೆ ನೀವು ಆತನನ್ನು ಅಲ್ಲಿ ನೋಡುವಿರಿ’ ಎಂದು ಹೇಳಿರಿ” ಎಂದನು.

ಆ ಸ್ತ್ರೀಯರು ಬಹಳ ಭಯದಿಂದ ಗಲಿಬಿಲಿಗೊಂಡು, ಸಮಾಧಿಯನ್ನು ಬಿಟ್ಟು ಓಡಿಹೋದರು. ಅವರು ಬಹಳ ಭಯಗೊಂಡಿದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ.[a]

ಶಿಷ್ಯರಿಗೆ ಯೇಸುವಿನ ದರ್ಶನ

(ಮತ್ತಾಯ 28:9-10; ಯೋಹಾನ 20:11-18; ಲೂಕ 24:13-35)

ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಜೀವಂತನಾಗಿ ಎದ್ದನು. ಯೇಸು ಮೊಟ್ಟಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. ಹಿಂದೊಮ್ಮೆ ಯೇಸು ಮರಿಯಳಿಂದ ಏಳು ದೆವ್ವಗಳನ್ನು ಬಿಡಿಸಿದ್ದನು. 10 ಮರಿಯಳು ಹೋಗಿ ಆತನ ಶಿಷ್ಯರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಿದ್ದರು. 11 ಯೇಸು ಬದುಕಿರುವುದಾಗಿಯೂ ತಾನು ಆತನನ್ನು ನೋಡಿದ್ದಾಗಿಯೂ ಮರಿಯಳು ತಿಳಿಸಿದಾಗ ಶಿಷ್ಯರು ಅವಳನ್ನು ನಂಬಲಿಲ್ಲ.

12 ನಂತರ, ಇಬ್ಬರು ಶಿಷ್ಯರು ಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯೇಸು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು. 13 ಈ ಶಿಷ್ಯರು ಇತರ ಶಿಷ್ಯರ ಬಳಿಗೆ ಹಿಂತಿರುಗಿ, ಈ ವಿಷಯವನ್ನು ತಿಳಿಸಿದರು. ಆದರೆ ಆ ಶಿಷ್ಯರು ಅವರನ್ನು ನಂಬಲಿಲ್ಲ.

ಯೇಸು ಮತ್ತು ಅಪೊಸ್ತಲರ ಸಂಭಾಷಣೆ

(ಮತ್ತಾಯ 28:16-20; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)

14 ನಂತರ ಹನ್ನೊಂದು ಜನ ಶಿಷ್ಯರು ಊಟ ಮಾಡುತ್ತಿರುವಾಗ, ಯೇಸು ಅವರಿಗೆ ಕಾಣಿಸಿಕೊಂಡನು. ಶಿಷ್ಯರಲ್ಲಿ ಕೊಂಚ ನಂಬಿಕೆ ಇದ್ದುದರಿಂದ ಯೇಸು ಅವರನ್ನು ಖಂಡಿಸಿದನು. ಏಕೆಂದರೆ, ಯೇಸು ಸಾವಿನಿಂದ ಎದ್ದುಬಂದಿದ್ದಾನೆಂದು ದೃಢವಾಗಿ ಹೇಳಿದ ಮಾತನ್ನು ಅವರು ನಂಬಲಿಲ್ಲ.

15 ಯೇಸು ಶಿಷ್ಯರಿಗೆ, “ಪ್ರಪಂಚದ ಎಲ್ಲಾ ಕಡೆಗೆ ಹೋಗಿರಿ. ಪ್ರತಿಯೊಬ್ಬನಿಗೂ ಸುವಾರ್ತೆಯನ್ನು ಹೇಳಿರಿ. 16 ನಂಬಿಕೆಯಿಟ್ಟು, ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದವನು ಅಪರಾಧಿ ಎಂಬ ನಿರ್ಣಯ ಹೊಂದುವನು. 17 ನಂಬುವವರಾದರೋ ಅದ್ಭುತಕಾರ್ಯಗಳನ್ನು ಮಾಡುವರು. ಅವರು ನನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುವರು. ತಾವೆಂದೂ ಕಲಿತಿಲ್ಲದ ಭಾಷೆಗಳಲ್ಲಿ ಮಾತನಾಡುವರು. 18 ಅವರು ಹಾವುಗಳನ್ನು ಹಿಡಿದುಕೊಂಡರೂ ಅವು ಅವರನ್ನು ಕಚ್ಚುವುದಿಲ್ಲ. ವಿಷಕುಡಿದರೂ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ಮುಟ್ಟಿದರೆ ರೋಗಿಗಳು ಗುಣಹೊಂದುವರು” ಎಂದು ಹೇಳಿದನು.

ಯೇಸುವಿನ ಪರಲೋಕಾರೋಹಣ

(ಲೂಕ 24:50-53; ಅ.ಕಾ. 1:9-11)

19 ಪ್ರಭುವಾದ ಯೇಸು ಈ ಸಂಗತಿಗಳನ್ನು ಶಿಷ್ಯರಿಗೆ ಹೇಳಿದ ಮೇಲೆ, ಸ್ವರ್ಗದೊಳಗೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 20 ಶಿಷ್ಯರು ಪ್ರಪಂಚದ ಎಲ್ಲಾ ಕಡೆಗೆ ಹೋಗಿ, ಜನರಿಗೆ ಸುವಾರ್ತೆಯನ್ನು ಸಾರಿದರು. ಪ್ರಭುವು ಅವರೊಂದಿಗೆ ಕಾರ್ಯಸಾಧಿಸುತ್ತಾ, ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ಬಲಪಡಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International