M’Cheyne Bible Reading Plan
ದೆಬೋರಾ—ಮಹಿಳಾ ನ್ಯಾಯಾಧೀಶೆ
4 ಏಹೂದನು ಮರಣಹೊಂದಿದ ಮೇಲೆ ಇಸ್ರೇಲರು ಮತ್ತೆ ಯೆಹೋವನ ವಿರೋಧವಾಗಿ ಪಾಪ ಮಾಡಿದರು. 2 ಆದ್ದರಿಂದ ಕಾನಾನ್ಯರ ಅರಸನಾದ ಯಾಬೀನನು ಇಸ್ರೇಲರನ್ನು ಸೋಲಿಸುವಂತೆ ಯೆಹೋವನು ಅವಕಾಶ ಮಾಡಿದನು. ಯಾಬೀನನು ಹಾಚೋರ್ ಎಂಬ ನಗರದಲ್ಲಿ ಆಳುತ್ತಿದ್ದನು. ಸೀಸೆರ ಎಂಬವನು ಅವನ ಸೇನಾಧಿಪತಿಯಾಗಿದ್ದನು. ಸೀಸೆರನು ಹರೋಷೆತ್ ಹಗ್ಗೋಯಿಮ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದನು. 3 ಸೀಸೆರನ ಹತ್ತಿರ ಒಂಭೈನೂರು ಕಬ್ಬಿಣದ ರಥಗಳಿದ್ದವು. ಅವನು ಇಪ್ಪತ್ತು ವರ್ಷಗಳ ಕಾಲ ಇಸ್ರೇಲರನ್ನು ತುಂಬ ಬಾಧಿಸಿದನು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಟ್ಟರು.
4 ಆಗ ದೆಬೋರಳೆಂಬ ಒಬ್ಬ ಪ್ರವಾದಿನಿ ಇದ್ದಳು. ಅವಳು ಲಪ್ಪೀದೋತ್ ಎಂಬವನ ಪತ್ನಿಯಾಗಿದ್ದಳು. ಅವಳು ಆಗ ಇಸ್ರೇಲಿನ ನ್ಯಾಯಾಧೀಶೆಯಾಗಿದ್ದಳು. 5 ಒಂದು ದಿನ, ಆಕೆ ದೆಬೋರಳ ಖರ್ಜೂರದ ಮರವೆಂದು ಪ್ರಸಿದ್ಧವಾದ ಮರದ ಕೆಳಗೆ ಕುಳಿತಿದ್ದಳು. ಆಗ ಇಸ್ರೇಲಿನ ಜನರು ಆಕೆಯ ಹತ್ತಿರ ಬಂದು, “ಸೀಸೆರನ ಬಗ್ಗೆ ಏನು ಮಾಡಬೇಕು?” ಎಂದು ಕೇಳಿದರು. ದೆಬೋರಳ ಖರ್ಜೂರಮರವು ಎಫ್ರಾಯೀಮ್ ಬೆಟ್ಟಪ್ರದೇಶದ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಇದೆ. 6 ದೆಬೋರಳು ತನ್ನನ್ನು ಬಂದು ಕಾಣಬೇಕೆಂದು ಬಾರಾಕನೆಂಬ ವ್ಯಕ್ತಿಗೆ ಹೇಳಿ ಕಳುಹಿಸಿದಳು. ಬಾರಾಕನು ಅಬೀನೋವಮನ ಮಗ. ಬಾರಾಕನು ನಫ್ತಾಲಿ ಪ್ರದೇಶದ ಕೆದೆಷ್ ಎಂಬ ಊರಲ್ಲಿ ವಾಸಮಾಡುತ್ತಿದ್ದನು. ದೆಬೋರಳು ಬಾರಾಕನಿಗೆ, “ಇಸ್ರೇಲಿನ ದೇವರಾದ ಯೆಹೋವನು, ‘ನೀನು ಹೋಗಿ ನಫ್ತಾಲಿ ಮತ್ತು ಜೆಬುಲೂನ್ ಕುಲಗಳವರ ಹತ್ತು ಸಾವಿರ ಜನರನ್ನು ಸೇರಿಸಿ ಅವರನ್ನು ತಾಬೋರ್ ಬೆಟ್ಟಕ್ಕೆ ಕರೆದುಕೊಂಡು ಹೋಗು. 7 ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನ್ ನದಿಗೆ ಬರುವಂತೆ ಮಾಡುತ್ತೇನೆ. ಅಲ್ಲಿ ನೀನು ಸೀಸೆರನನ್ನು ಸೋಲಿಸುವಂತೆ ಮಾಡುತ್ತೇನೆ’ ಎಂದು ಹೇಳಿದ್ದಾನೆ” ಎಂದಳು.
8 ಆಗ ಬಾರಾಕನು ದೆಬೋರಳಿಗೆ, “ನೀನು ನನ್ನೊಂದಿಗೆ ಬಂದರೆ ನಾನು ಹೋಗುವೆನು; ನೀನು ನನ್ನೊಂದಿಗೆ ಬರದಿದ್ದರೆ ನಾನು ಹೋಗುವುದಿಲ್ಲ” ಎಂದನು.
9 ಅದಕ್ಕೆ ದೆಬೋರಳು, “ನಿಸ್ಸಂದೇಹವಾಗಿ ನಾನು ನಿನ್ನೊಂದಿಗೆ ಬರುತ್ತೇನೆ. ಆದರೆ ನಿನ್ನ ಈ ಮನೋಭಾವದಿಂದಾಗಿ ಸೀಸೆರನನ್ನು ಸೋಲಿಸಿದ ಗೌರವ ನಿನಗೆ ಸಲ್ಲುವುದಿಲ್ಲ. ಒಬ್ಬ ಹೆಂಗಸು ಸೀಸೆರನನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ” ಎಂದು ಉತ್ತರಿಸಿದಳು.
ದೆಬೋರಳು ಬಾರಾಕನ ಸಂಗಡ ಕೆದೆಷ್ ನಗರಕ್ಕೆ ಹೋದಳು. 10 ಕೆದೆಷ್ ನಗರದಲ್ಲಿ ಬಾರಾಕನು ಜೆಬುಲೂನ್ ಮತ್ತು ನಫ್ತಾಲಿ ಕುಲದವರನ್ನು ಒಟ್ಟಿಗೆ ಸೇರಿಸಿ ಆ ಕುಲಗಳಿಂದ ಹತ್ತು ಸಾವಿರ ಜನರನ್ನು ತನ್ನೊಂದಿಗೆ ಬರುವಂತೆ ಮಾಡಿದನು. ದೆಬೋರಳು ಸಹ ಬಾರಾಕನ ಸಂಗಡ ಹೋದಳು.
11 ಹೆಬೆರನೆಂಬ ಒಬ್ಬ ಮನುಷ್ಯನಿದ್ದನು. ಅವನು ಕೇನ್ಯರ ಕುಲದವನಾಗಿದ್ದನು. ಅವನು ಉಳಿದ ಕೇನ್ಯರನ್ನು ಬಿಟ್ಟು ಚಾನನ್ನೀಮ್ ಎಂಬ ಊರಲ್ಲಿ ಓಕ್ ವೃಕ್ಷದ ಬಳಿ ಮನೆ ಮಾಡಿಕೊಂಡಿದ್ದನು. (ಕೇನ್ಯರು ಹೋಬಾಬನ ಸಂತತಿಯವರಾಗಿದ್ದರು. ಹೋಬಾಬನು ಮೋಶೆಯ ಮಾವನಾಗಿದ್ದನು.) ಚಾನನ್ನೀಮ್ ಕೆದೆಷ್ ನಗರದ ಸಮೀಪದಲ್ಲಿತ್ತು.
12 ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟಕ್ಕೆ ಬಂದಿದ್ದಾನೆಂಬ ಸಮಾಚಾರ ಸೀಸೆರನಿಗೆ ತಿಳಿಯಿತು. 13 ಸೀಸೆರನು ತನ್ನ ಒಂಭೈನೂರು ಕಬ್ಬಿಣದ ರಥಗಳನ್ನು ಒಟ್ಟುಗೂಡಿಸಿದನು. ಸೀಸೆರನು ತನ್ನ ಎಲ್ಲಾ ಜನರನ್ನು ತನ್ನ ಜೊತೆ ಸೇರಿಸಿಕೊಂಡನು. ಅವರು ಹರೋಷೆತ್ ಹೆಗ್ಗೋಯಿಮ್ನಿಂದ ಕೀಷೋನ್ ನದಿಗೆ ನಡೆದರು.
14 ಆಗ ದೆಬೋರಳು ಬಾರಾಕನಿಗೆ, “ಈ ದಿನ ಯೆಹೋವನು ಸೀಸೆರನನ್ನು ಸೋಲಿಸಲು ನಿನಗೆ ಸಹಾಯ ಮಾಡುತ್ತಾನೆ. ಯೆಹೋವನು ನಿನಗಾಗಿ ದಾರಿಯನ್ನು ಸುಗಮಗೊಳಿಸಿದ್ದಾನೆಂಬುದು ನಿನಗೆ ಖಚಿತವಾಗಿ ಗೊತ್ತಿದೆ” ಎಂದು ಹೇಳಿದಳು. ಆದ್ದರಿಂದ ಬಾರಾಕನು ಹತ್ತು ಸಾವಿರ ಜನರೊಂದಿಗೆ ತಾಬೋರ್ ಬೆಟ್ಟದಿಂದ ಇಳಿದನು. 15 ಬಾರಾಕ ಮತ್ತು ಅವನ ಜನರು ಸೀಸೆರನ ಮೇಲೆ ಧಾಳಿ ಮಾಡಿದರು. ಯೆಹೋವನು ಸೀಸೆರನಲ್ಲಿ ಮತ್ತು ಅವನ ಸೈನ್ಯದಲ್ಲಿ ಮತ್ತು ಅವನ ರಥಗಳಲ್ಲಿ ಗಲಿಬಿಲಿ ಉಂಟುಮಾಡಿದನು. ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ. ಬಾರಾಕ ಮತ್ತು ಅವನ ಸೈನಿಕರು ಸೀಸೆರನ ಸೈನ್ಯವನ್ನು ಸೋಲಿಸಿದರು. ಆದರೆ ಸೀಸೆರನು ತನ್ನ ರಥವನ್ನು ಬಿಟ್ಟು ಓಡಿಹೋದನು. 16 ಬಾರಾಕ ಮತ್ತು ಅವನ ಜನರು ಸೀಸೆರನ ಸೈನ್ಯವನ್ನು ಮತ್ತು ರಥಗಳನ್ನು ಹರೋಷೆತ್ ಹಗ್ಗೋಯಿಮ್ನವರೆಗೆ ಬೆನ್ನಟ್ಟಿದರು. ಬಾರಾಕ ಮತ್ತು ಅವನ ಜನರು ಖಡ್ಗದಿಂದ ಸೀಸೆರನ ಜನರನ್ನು ಕೊಂದುಹಾಕಿದರು. ಸೀಸೆರನ ಜನರಲ್ಲಿ ಒಬ್ಬನನ್ನೂ ಜೀವಂತವಾಗಿ ಬಿಡಲಿಲ್ಲ.
17 ಆದರೆ ಸೀಸೆರನು ಓಡಿಹೋದನು. ಅವನು ಯಾಯೇಲ ಎಂಬ ಒಬ್ಬ ಮಹಿಳೆ ವಾಸವಾಗಿದ್ದ ಗುಡಾರಕ್ಕೆ ಬಂದನು. ಯಾಯೇಲಳು ಹೆಬೆರನ ಹೆಂಡತಿ. ಹೆಬೆರನು ಕೇನ್ಯನಾಗಿದ್ದನು. ಹಾಚೋರಿನ ಅರಸನಾದ ಯಾಬೀನ ಮತ್ತು ಕೇನ್ಯನಾದ ಹೆಬೆರನ ಕುಟುಂಬಗಳ ಮಧ್ಯೆ ಒಳ್ಳೆಯ ಸಮಾಧಾನವಿದ್ದಿತು. ಅದಕ್ಕಾಗಿ ಸೀಸೆರನು ಯಾಯೇಲಳ ಗುಡಾರಕ್ಕೆ ಓಡಿಹೋಗಿದ್ದನು. 18 ಸೀಸೆರನು ಬರುವುದನ್ನು ಯಾಯೇಲಳು ಕಂಡಳು. ಆದ್ದರಿಂದ ಅವನನ್ನು ಬರಮಾಡಿಕೊಳ್ಳಲು ಹೊರಗೆ ಬಂದಳು. ಯಾಯೇಲಳು ಸೀಸೆರನಿಗೆ, “ಸ್ವಾಮೀ, ನನ್ನ ಗುಡಾರದೊಳಗೆ ಬನ್ನಿ, ಭಯಪಡಬೇಡಿ” ಎಂದು ಕರೆದಳು. ಆದ್ದರಿಂದ ಸೀಸೆರನು ಗುಡಾರದೊಳಗೆ ಹೋದನು. ಅವಳು ಸೀಸೆರನ ಮೇಲೆ ಕಂಬಳಿಯನ್ನು ಹೊದಿಸಿದಳು.
19 ಸೀಸೆರನು ಯಾಯೇಲಳಿಗೆ, “ನನಗೆ ಬಾಯಾರಿಕೆಯಾಗಿದೆ. ದಯವಿಟ್ಟು ಕುಡಿಯಲು ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು. ಯಾಯೇಲಳ ಬಳಿ ಪ್ರಾಣಿಗಳ ಚರ್ಮದಿಂದ ಮಾಡಿದ ಒಂದು ಚೀಲವಿತ್ತು. ಆಕೆಯು ಅದರಲ್ಲಿ ಹಾಲಿಟ್ಟಿದ್ದಳು. ಯಾಯೇಲಳು ಸೀಸೆರನಿಗೆ ಒಂದು ಗುಟುಕು ಹಾಲನ್ನೇ ಕೊಟ್ಟಳು. ನಂತರ ಅವಳು ಸೀಸೆರನನ್ನು ಮುಚ್ಚಿಬಿಟ್ಟಳು.
20 ಆಗ ಸೀಸೆರನು ಯಾಯೇಲಳಿಗೆ, “ಹೋಗಿ ಗುಡಾರದ ಬಾಗಿಲಿನ ಹತ್ತಿರ ನಿಂತುಕೊಂಡಿರು. ಯಾರಾದರೂ ಬಂದು ‘ಗುಡಾರದಲ್ಲಿ ಯಾರಾದರೂ ಇದ್ದಾರೆಯೇ?’ ಎಂದು ಕೇಳಿದರೆ, ‘ಇಲ್ಲ’ ಎಂದು ಹೇಳು” ಎಂದನು.
21 ಯಾಯೇಲಳು ಗುಡಾರದ ಗೂಟವನ್ನು ಮತ್ತು ಕೊಡತಿಯನ್ನು ತೆಗೆದುಕೊಂಡು ಶಬ್ದಮಾಡದೆ ಸೀಸೆರನ ಹತ್ತಿರ ಹೋದಳು. ಸೀಸೆರನು ಬಹಳ ದಣಿದಿದ್ದ ಕಾರಣ ಗಾಢನಿದ್ರೆ ಮಾಡುತ್ತಿದ್ದನು. ಯಾಯೇಲಳು ಗುಡಾರದ ಗೂಟವನ್ನು ಸೀಸೆರನ ತಲೆಯ ಒಂದು ಪಾರ್ಶ್ವದಲ್ಲಿ ಇಟ್ಟು ಕೊಡತಿಯಿಂದ ಬಲವಾಗಿ ಹೊಡೆದಳು. ಆ ಗುಡಾರದ ಗೂಟವು ಸೀಸೆರನ ತಲೆಯ ಮತ್ತೊಂದು ಪಾರ್ಶ್ವಕ್ಕೆ ತೂರಿಬಂದು ಭೂಮಿಯಲ್ಲಿ ಸೇರಿತು. ಸೀಸೆರನು ಸತ್ತನು.
22 ಅದೇ ಕ್ಷಣದಲ್ಲಿ ಬಾರಾಕನು ಯಾಯೇಲಳ ಗುಡಾರದ ಹತ್ತಿರಕ್ಕೆ ಬಂದನು. ಅವನನ್ನು ಬರಮಾಡಿಕೊಳ್ಳುವುದಕ್ಕಾಗಿ ಯಾಯೇಲಳು ಹೊರಗೆ ಬಂದು, “ಇಲ್ಲಿ ಒಳಗೆ ಬನ್ನಿ. ನೀನು ಹುಡುಕುತ್ತಿರುವ ಮನುಷ್ಯನನ್ನು ತೋರಿಸುತ್ತೇನೆ” ಎಂದಳು. ಬಾರಾಕನು ಯಾಯೇಲಳ ಜೊತೆ ಗುಡಾರವನ್ನು ಪ್ರವೇಶಿಸಿದನು. ಅಲ್ಲಿ ಬಾರಾಕನು ಕಣತಲೆಯಲ್ಲಿ ಗೂಟವನ್ನು ಜಡಿಸಿಕೊಂಡು ನೆಲದ ಮೇಲೆ ಸತ್ತು ಬಿದ್ದಿದ್ದ ಸೀಸೆರನನ್ನು ಕಂಡನು.
23 ಆ ದಿನ ದೇವರು ಇಸ್ರೇಲರಿಗಾಗಿ ಕಾನಾನ್ಯ ರಾಜನಾದ ಯಾಬೀನನನ್ನು ಸೋಲಿಸಿದನು. 24 ಆತನು ಇಸ್ರೇಲರನ್ನು ಬಲಪಡಿಸಿದ್ದರಿಂದ ಅವರು ಕಾನಾನ್ಯ ಅರಸನಾದ ಯಾಬೀನನನ್ನು ಸಂಪೂರ್ಣವಾಗಿ ಸೋಲಿಸಿ ಅವನನ್ನು ನಿರ್ನಾಮ ಮಾಡಿದರು.
8 1-3 ಸ್ತೆಫನನ ಕೊಲೆಗೆ ಸೌಲನ ಸಮ್ಮತಿಯಿತ್ತು. ಕೆಲವು ಭಕ್ತರು ಸ್ತೆಫನನನ್ನು ಸಮಾಧಿ ಮಾಡಿದರು. ಅವರು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.
ವಿಶ್ವಾಸಿಗಳಿಗೆ ಹಿಂಸೆ
ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳ ಸಮುದಾಯವನ್ನು ಹಿಂಸಿಸಲು ಯೆಹೂದ್ಯರು ಅಂದೇ ಆರಂಭಿಸಿ ಅವರನ್ನು ಬಹಳವಾಗಿ ಸಂಕಟಪಡಿಸಿದರು. ಆ ಸಭೆಯನ್ನು ನಾಶಮಾಡಲು ಸೌಲನು ಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದೊಯ್ದು ಸೆರೆಮನೆಗೆ ಹಾಕಿದನು. ವಿಶ್ವಾಸಿಗಳೆಲ್ಲಾ ಜೆರುಸಲೇಮನ್ನು ಬಿಟ್ಟುಹೋದರು. ಅಪೊಸ್ತಲರು ಮಾತ್ರ ಅಲ್ಲೇ ಇದ್ದರು. ವಿಶ್ವಾಸಿಗಳು ಜುದೇಯ ಮತ್ತು ಸಮಾರ್ಯದ ಬೇರೆಬೇರೆ ಸ್ಥಳಗಳಿಗೆ ಹೊರಟುಹೋದರು. 4 ವಿಶ್ವಾಸಿಗಳು ಎಲ್ಲೆಲ್ಲಿಯೂ ಚದರಿಹೋದರು. ವಿಶ್ವಾಸಿಗಳು ತಾವು ಹೋದ ಪ್ರತಿಯೊಂದು ಸ್ಥಳದಲ್ಲಿಯೂ ಜನರಿಗೆ ಸುವಾರ್ತೆಯನ್ನು ತಿಳಿಸಿದರು.
ಸಮಾರ್ಯದಲ್ಲಿ ಫಿಲಿಪ್ಪನ ಉಪದೇಶ
5 ಫಿಲಿಪ್ಪನು ಸಮಾರ್ಯ ಪಟ್ಟಣಕ್ಕೆ ಹೋಗಿ ಕ್ರಿಸ್ತನ ಬಗ್ಗೆ ಉಪದೇಶಿಸಿದನು. 6 ಫಿಲಿಪ್ಪನು ಹೇಳುವುದನ್ನು ಅಲ್ಲಿನ ಜನರು ಕೇಳಿದರು. ಅವನು ಮಾಡುತ್ತಿದ್ದ ಅದ್ಭುತಕಾರ್ಯಗಳನ್ನು ನೋಡಿದರು. ಅವನು ಹೇಳಿದ ಸಂಗತಿಗಳನ್ನು ಗಮನವಿಟ್ಟು ಕೇಳಿದರು. 7 ಈ ಜನರಲ್ಲಿ ಅನೇಕರು ದೆವ್ವಗಳಿಂದ ಪೀಡಿತರಾಗಿದ್ದರು. ಫಿಲಿಪ್ಪನು ಆ ದೆವ್ವಗಳನ್ನು ಅವರೊಳಗಿಂದ ಹೊರಡಿಸಿದಾಗ ಅವು ಅಬ್ಬರಿಸುತ್ತಾ ಹೊರಬಂದವು. ಅಲ್ಲಿದ್ದ ಅನೇಕ ಬಲಹೀನರನ್ನು, ಕುಂಟರನ್ನು ಸಹ ಫಿಲಿಪ್ಪನು ಗುಣಪಡಿಸಿದನು. 8 ಇದರಿಂದಾಗಿ ಆ ಪಟ್ಟಣದಲ್ಲಿದ್ದ ಜನರು ಬಹು ಸಂತೋಷಗೊಂಡರು.
9 ಆದರೆ ಆ ಪಟ್ಟಣದಲ್ಲಿ ಸಿಮೋನ ಎಂಬ ಒಬ್ಬನಿದ್ದನು. ಫಿಲಿಪ್ಪನು ಅಲ್ಲಿಗೆ ಬರುವುದಕ್ಕಿಂತ ಮೊದಲಿನಿಂದಲೂ ಸಿಮೋನನು ಮಂತ್ರತಂತ್ರಗಳನ್ನು ಮಾಡುತ್ತಿದ್ದನು. ಅವನು ತನ್ನ ತಂತ್ರಗಳಿಂದ ಸಮಾರ್ಯದ ಜನರೆಲ್ಲರನ್ನು ವಿಸ್ಮಯಗೊಳಿಸಿದ್ದನು. ಸಿಮೋನನು ತನ್ನನ್ನು ಮಹಾವ್ಯಕ್ತಿಯೆಂದು ಹೇಳಿಕೊಂಡು ಜಂಭಪಡುತ್ತಿದ್ದನು. 10 ಎಲ್ಲಾ ಜನರು ಅಂದರೆ ಕನಿಷ್ಠರಾದವರು ಮತ್ತು ಅತಿಮುಖ್ಯರಾದವರು ಸಿಮೋನನು ಹೇಳಿದ ಸಂಗತಿಗಳನ್ನು ನಂಬಿದ್ದರು. “ಈ ಮನುಷ್ಯನಲ್ಲಿ ‘ಮಹಾಶಕ್ತಿ’ ಎಂಬ ದೇವರ ಶಕ್ತಿಯಿದೆ!” ಎಂದು ಜನರು ಅವನ ಬಗ್ಗೆ ಹೇಳುತ್ತಿದ್ದರು. 11 ಸಿಮೋನನು ತನ್ನ ಮಂತ್ರತಂತ್ರಗಳಿಂದ ಜನರನ್ನು ಬಹುಕಾಲದಿಂದಲೂ ವಿಸ್ಮಯಗೊಳಿಸಿದ್ದರಿಂದ ಜನರು ಅವನ ಹಿಂಬಾಲಕರಾಗಿದ್ದರು. 12 ಆದರೆ ಫಿಲಿಪ್ಪನು ದೇವರ ರಾಜ್ಯದ ಬಗ್ಗೆ ಮತ್ತು ಯೇಸುಕ್ರಿಸ್ತನ ಶಕ್ತಿಯ ಬಗ್ಗೆ ಜನರಿಗೆ ಸುವಾರ್ತೆಯನ್ನು ಹೇಳಿದನು. ಗಂಡಸರು ಮತ್ತು ಹೆಂಗಸರು ಫಿಲಿಪ್ಪನು ಹೇಳಿದ್ದನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು. 13 ಸಿಮೋನನು ಸಹ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡನು. ಸಿಮೋನನು ಫಿಲಿಪ್ಪನ ಸಮೀಪದಲ್ಲೇ ಇದ್ದನು. ಫಿಲಿಪ್ಪನು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಸಿಮೋನನು ನೋಡಿ ವಿಸ್ಮಿತನಾದನು.
14 ಅಪೊಸ್ತಲರು ಇನ್ನೂ ಜೆರುಸಲೇಮಿನಲ್ಲಿದ್ದರು. ಸಮಾರ್ಯದ ಜನರು ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಅಪೊಸ್ತಲರು ಪೇತ್ರ ಮತ್ತು ಯೋಹಾನರನ್ನು ಸಮಾರ್ಯದ ಜನರ ಬಳಿಗೆ ಕಳುಹಿಸಿದರು. 15 ಪೇತ್ರ ಮತ್ತು ಯೋಹಾನರು ಅಲ್ಲಿಗೆ ಬಂದು ಸಮಾರ್ಯದ ವಿಶ್ವಾಸಿಗಳಿಗೂ ಪವಿತ್ರಾತ್ಮನು ದೊರೆಯಬೇಕೆಂದು ಅವರಿಗಾಗಿ ಪ್ರಾರ್ಥಿಸಿದರು. 16 ಈ ಜನರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು. ಆದರೆ ಪವಿತ್ರಾತ್ಮನು ಅವರಲ್ಲಿ ಯಾರ ಮೇಲೆಯೂ ಇನ್ನೂ ಇಳಿದು ಬಂದಿರಲಿಲ್ಲ. ಈ ಕಾರಣದಿಂದಲೇ ಪೇತ್ರ ಮತ್ತು ಯೋಹಾನರು ಪ್ರಾರ್ಥಿಸಿದರು. 17 ಈ ಇಬ್ಬರು ಅಪೊಸ್ತಲರು ಅವರ ಮೇಲೆ ತಮ್ಮ ಕೈಗಳನ್ನಿಟ್ಟಾಗ ಅವರು ಪವಿತ್ರಾತ್ಮನನ್ನು ಹೊಂದಿಕೊಂಡರು.
18 ಅಪೊಸ್ತಲರು ಜನರ ಮೇಲೆ ತಮ್ಮ ಕೈಗಳನ್ನಿಟ್ಟಾಗ ಜನರಿಗೆ ಪವಿತ್ರಾತ್ಮನು ದೊರೆತ್ತಿದ್ದನ್ನು ಸಿಮೋನನು ಕಂಡನು. ಆದ್ದರಿಂದ ಸಿಮೋನನು ಅಪೊಸ್ತಲರಿಗೆ ಹಣವನ್ನು ನೀಡುತ್ತಾ, 19 “ನಾನು ಯಾರ ಮೇಲೆ ಕೈಯಿಟ್ಟರೂ ಅವರಿಗೆ ಪವಿತ್ರಾತ್ಮನು ದೊರೆಯುವಂಥ ಶಕ್ತಿಯನ್ನು ನನಗೆ ಕೊಡಿರಿ” ಎಂದು ಹೇಳಿದನು.
20 ಪೇತ್ರನು ಸಿಮೋನನಿಗೆ, “ನೀನೂ ನಾಶವಾಗು! ನಿನ್ನ ಹಣವೂ ನಾಶವಾಗಲಿ! ದೇವರ ವರವನ್ನು ಹಣದಿಂದ ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದೆ. 21 ಈ ಕಾರ್ಯದಲ್ಲಿ ನೀನು ನಮ್ಮೊಂದಿಗೆ ಭಾಗಿಯಾಗಲು ಸಾಧ್ಯವಿಲ್ಲ. ನಿನ್ನ ಹೃದಯವು ದೇವರ ಮುಂದೆ ಸರಿಯಾಗಿಲ್ಲ. 22 ನಿನ್ನ ಹೃದಯವನ್ನು ಮಾರ್ಪಡಿಸಿಕೊ! ನೀನು ಮಾಡಿದ ಕೆಟ್ಟಕಾರ್ಯದಿಂದ ತಿರುಗಿಕೊ. ಪ್ರಭುವಿನಲ್ಲಿ ಪ್ರಾರ್ಥಿಸು. ನೀನು ಹೀಗೆ ಆಲೋಚಿಸಿದ್ದನ್ನು ಆತನು ಕ್ಷಮಿಸಬಹುದು. 23 ನೀನು ಅತೀವ ಅಸೂಯೆಯಿಂದ ತುಂಬಿದವನೂ ಪಾಪದ ಆಳ್ವಿಕೆಗೆ ಒಳಗಾದವನೂ ಆಗಿರುವೆ” ಎಂದು ಹೇಳಿದನು.
24 ಸಿಮೋನನು, “ನೀವಿಬ್ಬರೂ ನನಗೋಸ್ಕರ ಪ್ರಭುವಿನಲ್ಲಿ ಪ್ರಾರ್ಥಿಸಿ. ನೀವು ಹೇಳಿದ ಸಂಗತಿಗಳು ನನಗಾಗದಂತೆ ಪ್ರಾರ್ಥಿಸಿ!” ಎಂದು ಕೇಳಿಕೊಂಡನು.
25 ಬಳಿಕ ಆ ಇಬ್ಬರು ಅಪೊಸ್ತಲರು ತಾವು ಕಂಡ ಯೇಸುವಿನ ಕಾರ್ಯಗಳನ್ನು ಜನರಿಗೆ ತಿಳಿಸಿದರು. ಅಪೊಸ್ತಲರು ಜನರಿಗೆ ಪ್ರಭುವಿನ ಸಂದೇಶವನ್ನು ತಿಳಿಸಿದರು. ಆಮೇಲೆ ಅವರು ಜೆರುಸಲೇಮಿಗೆ ಹಿಂತಿರುಗಿದರು. ದಾರಿಯಲ್ಲಿ ಅವರು ಸಮಾರ್ಯದ ಅನೇಕ ಊರುಗಳಿಗೆ ಹೋಗಿ ಜನರಿಗೆ ಸುವಾರ್ತೆಯನ್ನು ತಿಳಿಸಿದರು.
ಫಿಲಿಪ್ಪನು ಇಥಿಯೋಪಿಯದವನಿಗೆ ನೀಡಿದ ಉಪದೇಶ
26 ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.
27 ಆದ್ದರಿಂದ ಫಿಲಿಪ್ಪನು ಸಿದ್ಧನಾಗಿ ಹೊರಟನು. ಇಥಿಯೋಪಿಯಾದ ಒಬ್ಬನನ್ನು ಅವನು ದಾರಿಯಲ್ಲಿ ಕಂಡನು. ಈ ಮನುಷ್ಯನು ನಪುಂಸಕನಾಗಿದ್ದನು. ಇಥಿಯೋಪಿಯದ ರಾಣಿಯಾದ ಕಂದಾಕೆಯ ಆಸ್ಥಾನದಲ್ಲಿ ಇವನು ಮುಖ್ಯಾಧಿಕಾರಿಯಾಗಿದ್ದನು. ಹಣವನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಇವನದೇ ಆಗಿತ್ತು. ಈ ಮನುಷ್ಯನು ಆರಾಧನೆಗಾಗಿ ಜೆರುಸಲೇಮಿಗೆ ಹೋಗಿದ್ದನು. 28 ಈಗ ಅವನು ತನ್ನ ಮನೆಗೆ ಮರಳಿ ಹೋಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29 ಪವಿತ್ರಾತ್ಮನು ಫಿಲಿಪ್ಪನಿಗೆ, “ರಥದ ಬಳಿಗೆ ಹೋಗಿ ಅದರ ಸಮೀಪದಲ್ಲಿ ನಿಂತುಕೊ” ಎಂದು ಹೇಳಿದನು. 30 ಅಂತೆಯೇ ಫಿಲಿಪ್ಪನು ರಥದ ಬಳಿಗೆ ಹೋದನು. ಆ ಮನುಷ್ಯನು ಓದುತ್ತಿರುವುದು ಅವನಿಗೆ ಕೇಳಿಸಿತು. ಅವನು ಯೆಶಾಯನ ಪ್ರವಾದನಾ ಗ್ರಂಥವನ್ನು ಓದುತ್ತಿದ್ದನು. ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
31 ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು. 32 ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ:
“ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು.
ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು.
ಆತನು ಬಾಯಿ ತೆರೆಯಲಿಲ್ಲ.
33 ಆತನಿಗೆ ಅವಮಾನ ಮಾಡಿದರು. ಆತನಿಗೆ ನ್ಯಾಯವು ದೊರೆಯಲಿಲ್ಲ.
ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ!
ಆತನ ಸಂತತಿಯವರ ಬಗ್ಗೆ ಯಾರು ಮಾತಾಡಬಲ್ಲರು?”(A)
34 ಅವನು ಫಿಲಿಪ್ಪನಿಗೆ, “ದಯವಿಟ್ಟು ನನಗೆ ಹೇಳು, ಯಾವ ಪ್ರವಾದಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾನೆ? ಅವನು ತನ್ನ ಬಗ್ಗೆ ಹೇಳುತ್ತಿದ್ದಾನೋ ಅಥವಾ ಬೇರೊಬ್ಬನ ಬಗ್ಗೆ ಹೇಳುತ್ತಿದ್ದಾನೋ?” ಎಂದು ಕೇಳಿದನು. 35 ಫಿಲಿಪ್ಪನು ಪವಿತ್ರ ಗ್ರಂಥದ ಈ ಭಾಗದಿಂದಲೇ ಆರಂಭಿಸಿ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅವನಿಗೆ ತಿಳಿಸಿದನು.
36 ಅವರು ಪ್ರಯಾಣ ಮಾಡುತ್ತಾ ನೀರಿದ್ದ ಒಂದು ಸ್ಥಳಕ್ಕೆ ಬಂದಾಗ ಅಧಿಕಾರಿಯು, “ಇಗೋ! ಇಲ್ಲಿ ನೀರಿದೆ! ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಏನಾದರೂ ಅಡ್ಡಿಯಿದೆಯೇ?” ಎಂದು ಫಿಲಿಪ್ಪನನ್ನು ಕೇಳಿದನು. 37 [a] 38 ಬಳಿಕ ಅವನು ರಥವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದನು. ಅವರಿಬ್ಬರೂ ನೀರಿನೊಳಗೆ ಇಳಿದುಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39 ಅವರು ನೀರಿನಿಂದ ಮೇಲಕ್ಕೆ ಬಂದಾಗ ಪ್ರಭುವಿನ ಆತ್ಮನಿಂದ ಫಿಲಿಪ್ಪನು ಎತ್ತಲ್ಪಟ್ಟನು. ಅವನು ಫಿಲಿಪ್ಪನನ್ನು ಮತ್ತೆಂದೂ ನೋಡಲಿಲ್ಲ. ಅವನು ಬಹಳ ಸಂತೋಷದಿಂದ ತನ್ನ ಪ್ರಯಾಣವನ್ನು ಮುಂದುವರಿಸಿದನು. 40 ಆದರೆ ಫಿಲಿಪ್ಪನು ಅಜೋತ್ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡು ಸೆಜರೇಯ ಎಂಬ ಪಟ್ಟಣಕ್ಕೆ ಹೋದನು. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಎಲ್ಲಾ ಊರುಗಳಲ್ಲಿಯೂ ಸುವಾರ್ತೆಯನ್ನು ಸಾರಿದನು.
ಹೃದಯದ ಮೇಲೆ ಬರೆದ ಅಪರಾಧ
17 “ಯೆಹೂದದ ಜನರ ಅಪರಾಧ
ಅಳಿಸಲಾಗದ ಸ್ಥಳದಲ್ಲಿ ಬರೆಯಲಾಗಿದೆ.
ಆ ಅಪರಾಧಗಳು ಕಬ್ಬಿಣದ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
ಅವರ ಪಾಪಗಳು ವಜ್ರದ ಮೊನೆಯುಳ್ಳ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ.
ಅವರ ಹೃದಯವೇ ಆ ಕಲ್ಲು,
ಆ ಪಾಪಗಳು ಅವರ ಯಜ್ಞವೇದಿಕೆಗಳ ಕೊಂಬುಗಳಲ್ಲಿ ಕೆತ್ತಿವೆ.
2 ಅವರ ಮಕ್ಕಳು ಸುಳ್ಳುದೇವರುಗಳಿಗೆ ಅರ್ಪಿಸಿದ
ಯಜ್ಞವೇದಿಕೆಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಅಶೇರಳಿಗೆ ಅರ್ಪಿಸಿದ
ಮರದ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುವರು.
ಅವರು ಸೊಂಪಾಗಿ ಬೆಳೆದ ಮರದ ಕೆಳಗೆ
ಮತ್ತು ಬೆಟ್ಟಗಳ ಮೇಲೆ ಆ ವಸ್ತುಗಳನ್ನು ಜ್ಞಾಪಿಸಿಕೊಳ್ಳುವರು.
3 ಅವರು ಆ ವಸ್ತುಗಳನ್ನು ಬೆಟ್ಟಗಳ ಮೇಲೆಯೂ
ಬಯಲು ಪ್ರದೇಶದಲ್ಲಿಯೂ ಜ್ಞಾಪಿಸಿಕೊಳ್ಳುವರು.
ಯೆಹೂದದ ಜನರಲ್ಲಿ ಭಂಡಾರಗಳಿವೆ.
ನಾನು ಅವುಗಳನ್ನು ಬೇರೆಯವರಿಗೆ ಒಪ್ಪಿಸುತ್ತೇನೆ.
ನಿಮ್ಮ ದೇಶದಲ್ಲಿದ್ದ ಎಲ್ಲಾ ಉನ್ನತಸ್ಥಳಗಳನ್ನು ಜನರು ನಾಶಮಾಡುವರು.
ಆ ಸ್ಥಳಗಳಲ್ಲಿ ಪೂಜೆಮಾಡಿ
ನೀವು ಪಾಪಕ್ಕೆ ಗುರಿಯಾಗಿರುವಿರಿ.
4 ನಾನು ನಿಮಗೆ ಕೊಟ್ಟ ಭೂಮಿಯನ್ನು ನೀವು ಕಳೆದುಕೊಳ್ಳುವಿರಿ.
ನಿಮ್ಮನ್ನು ನಿಮಗೆ ತಿಳಿಯದ ನಾಡಿನಲ್ಲಿ ನಿಮ್ಮ ಶತ್ರುಗಳ ದಾಸರನ್ನಾಗಿ ಮಾಡುವೆನು.
ಏಕೆಂದರೆ ನನಗೆ ತುಂಬಾ ಕೋಪ ಬಂದಿದೆ.
ನನ್ನ ಕೋಪವು ಉರಿಯುವ ಜ್ವಾಲೆಯಂತಿದೆ; ನೀವು ಅದರಲ್ಲಿ ಭಸ್ಮವಾಗಿ ಹೋಗುವಿರಿ.”
ಜನರಲ್ಲಿ ನಂಬಿಕೆ, ದೇವರಲ್ಲಿ ನಂಬಿಕೆ
5 ಯೆಹೋವನು ಹೀಗೆ ಹೇಳಿದನು:
“ಕೇವಲ ಜನರನ್ನು ನಂಬಿದವರಿಗೆ ಕೇಡಾಗುವುದು.
ಮನುಷ್ಯರ ಬಲವನ್ನು ಆತುಕೊಂಡವರಿಗೆ ಕೇಡಾಗುವುದು.
ಯಾಕೆಂದರೆ ಅಂಥವರು ಯೆಹೋವನಲ್ಲಿ ನಂಬಿಕೆ ಇಡುವದನ್ನು ಬಿಟ್ಟುಬಿಟ್ಟಿರುತ್ತಾರೆ.
6 ಆ ಜನರು ನಿರ್ಜನವಾದ ಪ್ರದೇಶದಲ್ಲಿದ್ದ,
ಸುಡುವ ಬರಡು ಭೂಮಿಯಲ್ಲಿದ್ದ, ಬಂಜರು ಭೂಮಿಯಲ್ಲಿ ಬೆಳೆದ,
ದೇವರು ನೀಡಬಹುದಾದ ಒಳ್ಳೆಯ ವಸ್ತುಗಳ ಬಗ್ಗೆ
ಏನೂ ಅರಿಯದ ಒಂದು ಪೊದೆಯಂತಿರುತ್ತಾರೆ.
7 ಆದರೆ ಯೆಹೋವನಲ್ಲಿ ನಂಬಿಕೆಯುಳ್ಳ ಮನುಷ್ಯನು ದೇವರ ಕೃಪೆಗೆ ಪಾತ್ರನಾಗುವನು.
ಏಕೆಂದರೆ ತಾನು ನಂಬಿಕೆಯುಳ್ಳವನೆಂದು ಅವನು ಯೆಹೋವನಿಗೆ ತೋರಿಸಿಕೊಡುವನು.
8 ಆ ಮನುಷ್ಯನು ನೀರಿನ ಸಮೀಪದಲ್ಲಿ ನೆಟ್ಟಿರುವ,
ಆಳವಾಗಿ ಬೇರೂರಿ ನೀರಿನ ಸೆಲೆಗಳನ್ನು ತಲುಪಿರುವ,
ಉಷ್ಣಕ್ಕೆ ಹೆದರದ, ಯಾವಾಗಲೂ
ಹಸಿರೆಲೆಗಳಿಂದ ಸೊಂಪಾದ,
ಮಳೆ ಬೀಳದ ವರ್ಷದಲ್ಲಿಯೂ ಚಿಂತಿಸದ,
ಯಾವಾಗಲೂ ಫಲಭರಿತವಾಗಿರುವ ಮರದಂತೆ ಇರುವನು.
9 “ಮನುಷ್ಯನ ಬುದ್ಧಿಯು ವಂಚನೆ ಮಾಡುತ್ತದೆ.
ಆ ಬುದ್ಧಿಯು ಅತೀ ವ್ಯಾಧಿಗ್ರಸ್ತವಾಗಿರಬಹುದು,
ಯಾರಿಂದಲೂ ಬುದ್ಧಿಯ ನಿಜವಾದ ಸ್ವರೂಪವನ್ನರಿಯಲಾಗುವದಿಲ್ಲ.
10 ನಾನೇ ಯೆಹೋವನು,
ನಾನು ಮನುಷ್ಯನ ಹೃದಯದ ಆಳವನ್ನು ನೋಡಬಲ್ಲೆ,
ಮನುಷ್ಯನ ಬುದ್ಧಿಯನ್ನು ಪರೀಕ್ಷಿಸಬಲ್ಲೆ.
ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೆ ತಕ್ಕ ಪ್ರತಿಫಲವನ್ನು ನಾನು ನಿರ್ಧರಿಸಬಲ್ಲೆ.
ಪ್ರತಿಯೊಬ್ಬ ಮನುಷ್ಯನಿಗೆ ಅವನ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಫಲವನ್ನು ಕೊಡುವೆನು.
11 ಕೆಲವು ಸಲ ಪಕ್ಷಿಯು
ತಾನು ಇಡದ ಮೊಟ್ಟೆಗೆ ಕಾವು ಕೊಡುತ್ತದೆ.
ಹಣಕ್ಕಾಗಿ ಮೋಸಮಾಡುವ ಮನುಷ್ಯನು
ಆ ಪಕ್ಷಿಯಂತಿರುವನು,
ಅವನು ತನ್ನ ಮಧ್ಯಪ್ರಾಯದಲ್ಲಿ
ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು.
ಅವನು ತನ್ನ ಅಂತ್ಯಕಾಲದಲ್ಲಿ
ಮೂರ್ಖನಾಗಿ ಕಂಡುಬರುವನು.”
12 ಆದಿಯಿಂದ ನಮ್ಮ ಪವಿತ್ರಾಲಯವು[a]
ಯೆಹೋವನ ಮಹತ್ವದ ಸಿಂಹಾಸವಾಗಿದೆ.
ಅದೊಂದು ಬಹಳ ಪ್ರಮುಖವಾದ ಸ್ಥಳವಾಗಿದೆ.
13 ಯೆಹೋವನೇ, ನೀನು ಇಸ್ರೇಲಿನ ಆಶಾಕಿರಣ,
ಯೆಹೋವನೇ, ನೀನು ಜೀವಜಲದ ಬುಗ್ಗೆಯಂತಿರುವೆ,
ಯಾರಾದರೂ ಯೆಹೋವನ ಅನುಸರಣೆಯನ್ನು ತ್ಯಜಿಸಿದರೆ
ಅವರ ಜೀವನ ಬಹಳ ಮೊಟಕಾಗುತ್ತದೆ.
ಯೆರೆಮೀಯನ ಮೂರನೆ ದೂರು
14 ಯೆಹೋವನೇ, ನೀನು ನನ್ನನ್ನು ವಾಸಿಮಾಡಿದರೆ
ನಿಜವಾಗಿಯೂ ನಾನು ಗುಣಹೊಂದುತ್ತೇನೆ.
ನನ್ನನ್ನು ರಕ್ಷಿಸು,
ಆಗ ನಿಜವಾಗಿಯೂ ರಕ್ಷಣೆ ಹೊಂದಿದವನಾಗುವೆನು.
ಯೆಹೋವನೇ, ನಾನು ನಿನ್ನನ್ನು ಸ್ತುತಿಸುತ್ತೇನೆ.
15 ಯೆಹೂದದ ಜನರು ನನಗೆ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
“ಯೆರೆಮೀಯನೇ, ಯೆಹೋವನ ಸಂದೇಶ ಎಲ್ಲಿದೆ?
ಆ ಸಂದೇಶವು ಸತ್ಯವಾಗುವುದನ್ನು ನಾವು ಈಗಲೇ ನೋಡೋಣ” ಎಂದು ಅವರನ್ನುತ್ತಾರೆ.
16 ಯೆಹೋವನೇ, ನಾನು ನಿನ್ನನ್ನು ಬಿಟ್ಟು ಓಡಿಹೋಗಲಿಲ್ಲ,
ನಾನು ನಿನ್ನನ್ನು ಅನುಸರಿಸಿದೆನು.
ನೀನು ಹೇಳಿದಂತೆ ನಾನು ಕುರುಬನಾದೆ.[b]
ಆ ಭಯಂಕರ ದಿನವು ಬರಲೆಂದು ನಾನು ಬಯಸಲಿಲ್ಲ.[c]
ಯೆಹೋವನೇ, ನಾನು ಹೇಳಿದ್ದೆಲ್ಲ ನಿನಗೆ ಗೊತ್ತಿದೆ.
ಈಗ ನಡೆಯುತ್ತಿರುವುದನ್ನೆಲ್ಲಾ ನೀನು ನೋಡುತ್ತಿರುವೆ.
17 ಯೆಹೋವನೇ, ನನ್ನನ್ನು ಹಾಳುಮಾಡಬೇಡ.
ಕಷ್ಟ ಕಾಲದಲ್ಲಿ ನಾನು ನಿನ್ನನ್ನೇ ಅವಲಂಭಿಸಿರುತ್ತೇನೆ.
18 ಜನರು ನನ್ನನ್ನು ಹಿಂಸಿಸುತ್ತಿದ್ದಾರೆ.
ಆ ಜನರು ಲಜ್ಜೆಪಡುವಂತೆ ಮಾಡು.
ನನ್ನನ್ನು ನಿರಾಶೆಗೊಳಿಸಬೇಡ.
ಆ ಜನರಿಗೆ ಭೀತಿಯುಂಟಾಗಲಿ,
ಆದರೆ ನನಗೆ ಭಯವಾಗುವಂತೆ ಮಾಡಬೇಡ.
ನನ್ನ ವೈರಿಗಳಿಗೆ ಭಯಂಕರವಾದ ವಿನಾಶದ ದಿನವು ಬರುವಂತೆ ಮಾಡು.
ಅವರನ್ನು ಮುರಿದುಬಿಡು, ಮತ್ತೆಮತ್ತೆ ಮುರಿದುಬಿಡು.
ಸಬ್ಬತ್ದಿನವನ್ನು ಪವಿತ್ರವಾಗಿಡಬೇಕು
19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ನೀನು ಹೋಗಿ ಯೆಹೂದದ ರಾಜರು ಸಂಚರಿಸುವ ಜೆರುಸಲೇಮಿನ ಜನರ ದ್ವಾರದಲ್ಲಿ[d] ನಿಲ್ಲು. ಜನರಿಗೆ ನನ್ನ ಸಂದೇಶವನ್ನು ಹೇಳು. ಆಮೇಲೆ ಜೆರುಸಲೇಮಿನ ಎಲ್ಲಾ ದ್ವಾರಗಳಿಗೆ ಹೋಗಿ ಹಾಗೆಯೇ ಮಾಡು.
20 “ಆ ಜನರಿಗೆ ಹೇಳು, ‘ಯೆಹೋವನ ಸಂದೇಶವನ್ನು ಕೇಳಿರಿ. ಯೆಹೂದದ ರಾಜರೇ, ಕೇಳಿರಿ. ಯೆಹೂದದ ಎಲ್ಲಾ ಜನರೇ ಕೇಳಿರಿ. ಈ ದ್ವಾರಗಳಿಂದ ಜೆರುಸಲೇಮಿಗೆ ಬರುವ ಜನರೇ, ನಾನು ಹೇಳುವದನ್ನು ಕೇಳಿರಿ! 21 ಯೆಹೋವನು ಹೀಗೆ ಹೇಳುತ್ತಾನೆ, ಸಬ್ಬತ್ ದಿನದಂದು ನೀವು ಯಾವ ಹೊರೆಯನ್ನೂ ಹೊತ್ತುಕೊಂಡು ಹೋಗದಂತೆ ಎಚ್ಚರವಹಿಸಿರಿ. ಸಬ್ಬತ್ದಿನದಂದು ಯಾವ ಹೊರೆಯನ್ನೂ ಜೆರುಸಲೇಮಿನ ದ್ವಾರಗಳ ಮೂಲಕ ತರಬೇಡಿರಿ. 22 ಸಬ್ಬತ್ದಿನದಂದು ನಿಮ್ಮ ಮನೆಯಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ. ಆ ದಿನ ಯಾವ ಕೆಲಸವನ್ನೂ ಮಾಡಬೇಡಿರಿ. ಸಬ್ಬತ್ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಇದೇ ಆದೇಶವನ್ನು ಕೊಟ್ಟೆ. 23 ಆದರೆ ನಿಮ್ಮ ಪೂರ್ವಿಕರು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಅವರು ನನಗೆ ಗಮನಕೊಡಲಿಲ್ಲ. ನಿಮ್ಮ ಪೂರ್ವಿಕರು ತುಂಬಾ ಮೊಂಡರಾಗಿದ್ದರು. ನಾನು ಅವರನ್ನು ದಂಡಿಸಿದೆ. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವರು ನನ್ನ ಮಾತನ್ನು ಕೇಳಲಿಲ್ಲ. 24 ಆದರೆ ನೀವು ಎಚ್ಚರಿಕೆಯಿಂದ ನನ್ನ ಆಜ್ಞೆಯನ್ನು ಪಾಲಿಸಬೇಕು.’” ಇದು ಯೆಹೋವನ ನುಡಿ. “‘ನೀವು ಸಬ್ಬತ್ದಿನದಂದು ಜೆರುಸಲೇಮಿನ ದ್ವಾರಗಳ ಮೂಲಕ ಯಾವ ಭಾರವನ್ನೂ ತರಬಾರದು. ಸಬ್ಬತ್ದಿನವನ್ನು ನೀವು ಪವಿತ್ರದಿನವನ್ನಾಗಿ ಮಾಡಬೇಕು. ಆ ದಿನ ನೀವು ಯಾವ ಕೆಲಸವನ್ನೂ ಮಾಡಬಾರದು.
25 “‘ನೀವು ಈ ಆಜ್ಞೆಯನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಜೆರುಸಲೇಮಿನ ದ್ವಾರಗಳಿಂದ ಬರುತ್ತಾರೆ. ಆ ರಾಜರು ರಥಗಳಲ್ಲಿಯೂ ಅಶ್ವಾರೂಢರಾಗಿಯೂ ಬರುವರು. ಯೆಹೂದದ ಮತ್ತು ಜೆರುಸಲೇಮಿನ ಜನನಾಯಕರುಗಳು ಆ ರಾಜರ ಜೊತೆಯಲ್ಲಿ ಬರುವರು. ಜೆರುಸಲೇಮ್ ಪಟ್ಟಣದಲ್ಲಿ ಜನರು ಯಾವಾಗಲೂ ವಾಸವಾಗಿರುವರು. 26 ಜೆರುಸಲೇಮಿಗೆ ಯೆಹೂದದ ಪಟ್ಟಣಗಳಿಂದ ಜನರು ಬರುವರು. ಅದರ ಸುತ್ತಲೂ ಇದ್ದ ಸಣ್ಣಸಣ್ಣ ಹಳ್ಳಿಗಳಿಂದ ಜನರು ಜೆರುಸಲೇಮಿಗೆ ಬರುವರು. ಬೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಿಂದ ಜನರು ಬರುವರು. ಪಶ್ಚಿಮ ಬೆಟ್ಟಗಳ ಇಳಿಜಾರು ಪ್ರದೇಶದಿಂದ ಮತ್ತು ಬೆಟ್ಟಪ್ರದೇಶದಿಂದ ಜನರು ಬರುವರು. ನೆಗೆವ್ ಪ್ರದೇಶದಿಂದ ಜನರು ಬರುವರು. ಆ ಜನರೆಲ್ಲರು ಸರ್ವಾಂಗಹೋಮಗಳನ್ನು, ಯಜ್ಞಗಳನ್ನು, ಧಾನ್ಯನೈವೇದ್ಯಗಳನ್ನು, ಧೂಪವನ್ನು ಮತ್ತು ಕೃತಜ್ಞತಾಯಜ್ಞಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಬರುವರು.
27 “‘ನೀವು ನನ್ನ ಮಾತನ್ನು ಕೇಳದಿದ್ದರೆ ಮತ್ತು ನನ್ನ ಆಜ್ಞೆಯನ್ನು ಪಾಲಿಸದಿದ್ದರೆ ಕೇಡಾಗುವುದು. ಸಬ್ಬತ್ದಿನದಲ್ಲಿ ಹೊರೆಗಳನ್ನು ಹೊತ್ತುಕೊಂಡು ಜೆರುಸಲೇಮಿಗೆ ಹೋದರೆ ನೀವು ಆ ದಿನವನ್ನು ಪವಿತ್ರದಿನವೆಂದು ಆಚರಿಸಿದಂತೆ ಆಗುವುದಿಲ್ಲ. ಆಗ ನಾನು ನಂದಿಸಲಾಗದ ಬೆಂಕಿಯನ್ನು ಹೊತ್ತಿಸುತ್ತೇನೆ. ಆ ಬೆಂಕಿಯು ಜೆರುಸಲೇಮಿನ ದ್ವಾರಗಳಲ್ಲಿ ಪ್ರಾರಂಭವಾಗಿ ಅರಮನೆಗಳನ್ನು ಸುಡುವವರೆಗೂ ಉರಿಯುತ್ತಿರುವುದು.’”
ಕೈಬತ್ತಿದವನಿಗೆ ಸ್ವಸ್ಥತೆ
(ಮತ್ತಾಯ 12:9-14; ಲೂಕ 6:6-11)
3 ಮತ್ತೊಂದು ದಿನದಲ್ಲಿ, ಯೇಸು ಸಭಾಮಂದಿರದೊಳಕ್ಕೆ ಹೋದನು. ಅಲ್ಲಿ ಕೈಬತ್ತಿದ್ದ ಒಬ್ಬ ಮನುಷ್ಯನಿದ್ದನು. 2 ಅಲ್ಲಿದ್ದ ಕೆಲವು ಯೆಹೂದ್ಯರು, ಯೇಸುವನ್ನು ದೂಷಿಸುವುದಕ್ಕಾಗಿ ಆತನಲ್ಲಿ ಏನಾದರೂ ತಪ್ಪನ್ನು ಕಂಡುಹಿಡಿಯಲು ಎದುರು ನೋಡುತ್ತಿದ್ದರು. ಸಬ್ಬತ್ದಿನದಂದು ಆ ಮನುಷ್ಯನನ್ನು ಯೇಸು ಗುಣಪಡಿಸಬಹುದೆಂದು ಅವರು ಆತನ ಸಮೀಪದಲ್ಲಿಯೇ ಇದ್ದರು. 3 ಯೇಸು ಕೈಬತ್ತಿದ್ದ ಆ ಮನುಷ್ಯನಿಗೆ, “ಎದ್ದುನಿಲ್ಲು, ಜನರೆಲ್ಲರೂ ನಿನ್ನನ್ನು ನೋಡಲಿ” ಎಂದು ಹೇಳಿದನು.
4 ನಂತರ ಯೇಸು ಜನರಿಗೆ, “ಸಬ್ಬತ್ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು? ಒಳ್ಳೆಯ ಕಾರ್ಯವನ್ನೇ? ಕೆಟ್ಟಕಾರ್ಯವನ್ನೇ? ಒಂದು ಜೀವವನ್ನು ರಕ್ಷಿಸಬೇಕೇ? ಅಥವಾ ನಾಶಪಡಿಸಬೇಕೇ?” ಎಂದು ಕೇಳಿದನು. ಆಗ ಅವರು ಏನೂ ಉತ್ತರ ಕೊಡಲಾರದೆ ಮೌನವಾಗಿದ್ದರು.
5 ಯೇಸು ಕೋಪಗೊಂಡು ಜನರ ಕಡೆಗೆ ನೋಡಿದನು. ಅವರ ಮೊಂಡುತನವನ್ನು ಕಂಡು ಆತನಿಗೆ ದುಃಖವಾಯಿತು. ಯೇಸು ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ತನ್ನ ಕೈಯನ್ನು ಯೇಸುವಿನತ್ತ ಚಾಚಿದನು. ಕೂಡಲೇ ಅವನ ಕೈ ವಾಸಿಯಾಯಿತು. 6 ಆಗ ಫರಿಸಾಯರು ಹೊರಗೆ ಹೋಗಿ, ಹೆರೋದ್ಯರನ್ನು ಕೂಡಿಕೊಂಡು ಯೇಸುವನ್ನು ಯಾವ ರೀತಿ ಕೊಲ್ಲಬೇಕೆಂದು ಆಲೋಚಿಸಿದರು.
ಯೇಸುವನ್ನು ಹಿಂಬಾಲಿಸಿದ ಜನಸಮೂಹ
7 ಯೇಸು ತನ್ನ ಶಿಷ್ಯರೊಂದಿಗೆ ಸರೋವರಕ್ಕೆ ಹೊರಟುಹೋದನು. ಗಲಿಲಾಯದ ಅನೇಕ ಜನರು ಆತನನ್ನು ಹಿಂಬಾಲಿಸಿದರು. 8 ಅನೇಕಾನೇಕ ಜನರು ಜುದೇಯದಿಂದ, ಜೆರುಸಲೇಮಿನಿಂದ, ಇದೂಮಾಯದಿಂದ, ಜೋರ್ಡನ್ ನದಿಯ ಆಚೆಗಿರುವ ಪ್ರದೇಶದಿಂದ ಮತ್ತು ಟೈರ್, ಸೀದೋನ್ಗಳ ಸುತ್ತಲಿನ ಪ್ರದೇಶಗಳಿಂದ ಬಂದರು. ಯೇಸುವು ಮಾಡುತ್ತಿದ್ದ ಕಾರ್ಯಗಳ ಬಗ್ಗೆ ಅವರು ಕೇಳಿ ಬಂದಿದ್ದರು.
9 ಯೇಸು ಈ ಜನಸಮೂಹವನ್ನು ನೋಡಿ ಅವರು ತನ್ನ ಮೈಮೇಲೆ ಬಿದ್ದು ನೂಕಬಹುದೆಂದು ತನಗಾಗಿ ಒಂದು ಚಿಕ್ಕ ದೋಣಿಯನ್ನು ತಂದು ಅದನ್ನು ಸಿದ್ದಪಡಿಸುವಂತೆ ತನ್ನ ಶಿಷ್ಯರಿಗೆ ಹೇಳಿದನು. 10 ಯೇಸು ಅನೇಕ ಜನರನ್ನು ಗುಣಪಡಿಸಿದನು. ಆದ್ದರಿಂದ ಕಾಯಿಲೆಯಾಗಿದ್ದ ಜನರೆಲ್ಲರೂ ಆತನನ್ನು ಮುಟ್ಟುವುದಕ್ಕಾಗಿ ಆತನ ಮೇಲೆ ಬೀಳುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಕೆಲವು ಜನರು ಅಲ್ಲಿದ್ದರು. 11 ದೆವ್ವಗಳು ಯೇಸುವನ್ನು ನೋಡಿ, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, “ನೀನು ದೇವಕುಮಾರ” ಎಂದು ಜೋರಾಗಿ ಕೂಗುತ್ತಿದ್ದವು. 12 ಆದರೆ ಯೇಸು ತಾನು ಯಾರೆಂಬುದನ್ನು ಜನರಿಗೆ ತಿಳಿಸಬಾರದೆಂದು ಅವುಗಳಿಗೆ ಖಂಡಿತವಾಗಿ ಆಜ್ಞಾಪಿಸಿದನು.
ಹನ್ನೆರಡು ಮಂದಿ ಅಪೊಸ್ತಲರ ಆಯ್ಕೆ
(ಮತ್ತಾಯ 10:1-4; ಲೂಕ 6:12-16)
13 ನಂತರ ಯೇಸು ಒಂದು ಬೆಟ್ಟದ ಮೇಲಕ್ಕೆ ಹೋದನು. ಯೇಸು ಕೆಲವು ಜನರಿಗೆ ತನ್ನೊಂದಿಗೆ ಬರಲು ಹೇಳಿದನು. ಯೇಸು ಅಪೇಕ್ಷಿಸಿದ ಜನರು ಇವರೇ. ಈ ಜನರು ಯೇಸುವಿನೊಂದಿಗೆ ಮೇಲಕ್ಕೆ ಹೋದರು. 14 ಆತನು ಅವರಲ್ಲಿ ಹನ್ನೆರಡು ಮಂದಿಯನ್ನು ತನ್ನ ಅಪೊಸ್ತಲರನ್ನಾಗಿ ಆರಿಸಿಕೊಂಡನು. ಈ ಹನ್ನೆರಡು ಮಂದಿ ತನ್ನೊಂದಿಗಿರಬೇಕೆಂಬುದು ಮತ್ತು ಉಪದೇಶ ಮಾಡುವುದಕ್ಕಾಗಿ ಅವರನ್ನು ಬೇರೆ ಸ್ಥಳಗಳಿಗೆ ಕಳುಹಿಸಬೇಕೆಂಬುದು 15 ಅಲ್ಲದೆ ದೆವ್ವಗಳಿಂದ ಪೀಡಿತರಾಗಿರುವ ಜನರನ್ನು ಅವುಗಳಿಂದ ಬಿಡಿಸುವುದಕ್ಕೆ ಅವರಿಗೆ ಅಧಿಕಾರ ಕೊಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು. 16 ಯೇಸುವು ಈ ಹನ್ನೆರಡು ಮಂದಿಯನ್ನು ಆರಿಸಿಕೊಂಡನು:
ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರನ್ನಿತ್ತನು),
17 ಜಿಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನ (ಯೇಸು ಅವರಿಗೆ ಬೊವನೆರ್ಗೆಸ್ ಎಂಬ ಹೆಸರನ್ನಿತ್ತನು. ಈ ಹೆಸರಿಗೆ “ಸಿಡಿಲಿನ ಜನರು” ಎಂದರ್ಥ.)
18 ಅಂದ್ರೆಯ,
ಫಿಲಿಪ್ಪ,
ಬಾರ್ತೊಲೊಮಾಯ,
ಮತ್ತಾಯ,
ತೋಮ,
ಅಲ್ಫಾಯನ ಮಗನಾದ ಯಾಕೋಬ,
ತದ್ದಾಯ,
ದೇಶಾಭಿಮಾನಿಯಾದ ಸೀಮೋನ
19 ಮತ್ತು ಇಸ್ಕರಿಯೋತ ಯೂದ. ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿದವನೇ ಯೂದ.
ಯೇಸುವಿಗೆ ದೆವ್ವಹಿಡಿದಿದೆ ಎಂಬ ಆರೋಪ
(ಮತ್ತಾಯ 12:22-32; ಲೂಕ 11:14-23; 12:10)
20 ನಂತರ ಯೇಸು ಮನೆಗೆ ಹೋದನು. ಮತ್ತೆ ಅನೇಕ ಜನರು ಅಲ್ಲಿಗೆ ಸೇರಿಬಂದರು. ಆದ್ದರಿಂದ ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ. 21 ಯೇಸುವಿನ ಕುಟುಂಬದವರಿಗೆ ಈ ವಿಷಯಗಳೆಲ್ಲ ತಿಳಿದವು. ಯೇಸುವಿಗೆ ಹುಚ್ಚು ಹಿಡಿದಿದೆಯೆಂದು ಕೆಲವರು ಹೇಳಿದ್ದರಿಂದ ಆತನ ಕುಟುಂಬದವರು ಆತನನ್ನು ಕರೆದೊಯ್ಯಲು ಅಲ್ಲಿಗೆ ಬಂದರು.
22 ಜೆರುಸಲೇಮಿನ ಧರ್ಮೋಪದೇಶಕರು, “ಇವನೊಳಗೆ ದೆವ್ವಗಳ ಒಡೆಯನಾದ ಬೆಲ್ಜೆಬೂಲನು ವಾಸಿಸುತ್ತಿದ್ದಾನೆ. ದೆವ್ವಗಳಿಂದ ಪೀಡಿತರಾಗಿರುವವರನ್ನು ಇವನು ಬಿಡಿಸುವುದು ದೆವ್ವಗಳ ಒಡೆಯನ ಸಹಾಯದಿಂದಲೇ” ಎಂದು ಹೇಳಿದರು.
23 ಆದ್ದರಿಂದ ಯೇಸು ಜನರನ್ನು ಒಟ್ಟಿಗೆ ಕರೆದು, ಅವರಿಗೆ ಸಾಮ್ಯಗಳ ಮೂಲಕ ಬೋಧಿಸಿ, “ಸೈತಾನನು ತನ್ನ ದೆವ್ವಗಳನ್ನು ಜನರಿಂದ ಬಲವಂತವಾಗಿ ಹೊರಡಿಸುವುದಿಲ್ಲ. 24 ತನ್ನ ವಿರುದ್ಧವಾಗಿ ತಾನೇ ಹೋರಾಡುವ ರಾಜ್ಯ ಉಳಿಯುವುದಿಲ್ಲ. 25 ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ. 26 ಸೈತಾನನು ತನ್ನ ವಿರುದ್ಧವಾಗಿಯೂ ತನ್ನ ಜನರ ವಿರುದ್ಧವಾಗಿಯೂ ತಾನೇ ಹೋರಾಟ ಮಾಡಿದರೆ ಅವನು ಅಂತ್ಯಗೊಳ್ಳುತ್ತಾನೆ.
27 “ಒಬ್ಬ ವ್ಯಕ್ತಿಯು ಬಲಾಢ್ಯನ ಮನೆಗೆ ಪ್ರವೇಶಿಸಿ ಅವನ ವಸ್ತುಗಳನ್ನು ಕದಿಯಲು ಇಚ್ಛಿಸಿದರೆ, ಮೊದಲು ಅವನು ಬಲಾಢ್ಯನನ್ನು ಕಟ್ಟಿಹಾಕಬೇಕು. ಆಗ ಅವನು ಬಲಾಢ್ಯನ ಮನೆಯಿಂದ ವಸ್ತುಗಳನ್ನು ಕದಿಯಲು ಸಾಧ್ಯವಾಗುವುದು.
28 “ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಜನರು ಮಾಡುವ ಎಲ್ಲಾ ಪಾಪಗಳಿಗೂ ದೇವದೂಷಣೆಗಳಿಗೂ ಕ್ಷಮೆ ದೊರೆಯಲು ಸಾಧ್ಯ. 29 ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.
30 “ಇವನಿಗೆ ದೆವ್ವಹಿಡಿದಿದೆ” ಎಂದು ಧರ್ಮೋಪದೇಶಕರು ಆರೋಪಿಸಿದ್ದರಿಂದ ಯೇಸು ಹೀಗೆ ಹೇಳಬೇಕಾಯಿತು.
ಯೇಸುವಿನ ಶಿಷ್ಯರೇ ಆತನ ನಿಜ ಕುಟುಂಬದವರು
(ಮತ್ತಾಯ 12:46-50; ಲೂಕ 8:19-21)
31 ನಂತರ ಯೇಸುವಿನ ತಾಯಿ ಮತ್ತು ಆತನ ಸಹೋದರರು ಅಲ್ಲಿಗೆ ಬಂದರು. ಅವರು ಹೊರಗೆ ನಿಂತುಕೊಂಡು ಯೇಸುವಿಗೆ ಬರಬೇಕೆಂದು ಒಬ್ಬನ ಮೂಲಕ ಹೇಳಿ ಕಳುಹಿಸಿದರು. 32 ಅನೇಕ ಜನರು ಯೇಸುವಿನ ಸುತ್ತಲೂ ಕುಳಿತಿದ್ದರು. ಅವನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾಯುತ್ತಿದ್ದಾರೆ” ಎಂದು ಹೇಳಿದನು.
33 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಕೇಳಿ 34 ತನ್ನ ಸುತ್ತಲೂ ಕುಳಿತಿದ್ದ ಜನರ ಕಡೆಗೆ ನೋಡಿ, “ಈ ಜನರೇ ನನ್ನ ತಾಯಿ ಮತ್ತು ನನ್ನ ಸಹೋದರರು! 35 ದೇವರ ಚಿತ್ತಕ್ಕನುಸಾರವಾಗಿ ನಡೆಯುವ ಜನರೇ ನನ್ನ ಸಹೋದರರು, ಸಹೋದರಿಯರು ಮತ್ತು ತಾಯಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International