Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯೆಹೋಶುವನು 12-13

ಇಸ್ರೇಲರು ಸೋಲಿಸಿದ ಅರಸರು

12 ಇಸ್ರೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ಅರ್ನೋನ್ ನದಿಯಿಂದ ಹೆರ್ಮೋನ್ ಪರ್ವತದವರೆಗಿನ ಪ್ರದೇಶ ಮತ್ತು ಜೋರ್ಡನ್ ಕಣಿವೆಯ ಪೂರ್ವದಿಕ್ಕಿಗೆ ಉದ್ದಕ್ಕೂ ಹಬ್ಬಿರುವ ಪ್ರದೇಶ ಅವರ ವಶಕ್ಕೆ ಬಂತು. ಈ ದೇಶವನ್ನು ತೆಗೆದುಕೊಳ್ಳುವುದಕ್ಕಾಗಿ ಇಸ್ರೇಲರು ಸೋಲಿಸಿದ ಅರಸರ ವಿವರ ಹೀಗಿದೆ:

ಅವರು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನನ್ನು ಸೋಲಿಸಿದರು. ಅವನು ಅರ್ನೋನ್ ನದಿಯ ತೀರದಲ್ಲಿದ್ದ ಅರೋಯೇರ್‌ನಿಂದ ಯಬ್ಬೋಕ್ ನದಿಯವರೆಗಿರುವ ಪ್ರದೇಶವನ್ನು ಆಳುತ್ತಿದ್ದನು. ಅವನ ರಾಜ್ಯವು ಆ ತಗ್ಗು ಪ್ರದೇಶದ ಮಧ್ಯದಿಂದ ಪ್ರಾರಂಭವಾಗುತ್ತಿತ್ತು. ಇದು ಅಮ್ಮೋನಿಯರ ಪ್ರದೇಶಕ್ಕೂ ಮೇರೆಯಾಗಿತ್ತು. ಗಿಲ್ಯಾದಿನ ಅರ್ಧ ಪ್ರದೇಶವು ಸೀಹೋನನ ಆಳ್ವಿಕೆಗೆ ಒಳಗಾಗಿತ್ತು. ಗಲಿಲಾಯ ಸರೋವರದಿಂದ ಲವಣಸಮುದ್ರದವರೆಗೆ ಹಬ್ಬಿದ ಜೋರ್ಡನ್ ಕಣಿವೆಯ ಪೂರ್ವಭಾಗವು ಕೂಡ ಅವನ ಆಳ್ವಿಕೆಗೆ ಒಳಪಟ್ಟಿತ್ತು. ಬೇತ್‌ಯೆಷಿಮೋತಿನಿಂದ ದಕ್ಷಿಣದಲ್ಲಿ ಪಿಸ್ಗಾ ಬೆಟ್ಟದವರೆಗೆ ಹಬ್ಬಿದ ಪ್ರದೇಶವನ್ನು ಸಹ ಅವನು ಆಳುತ್ತಿದ್ದನು.

ಅವರು ಬಾಷಾನಿನ ಅರಸನಾದ ಓಗನನ್ನು ಸಹ ಸೋಲಿಸಿದರು. ಓಗನು ರೆಫಾಯರ ವಂಶಸ್ಥನಾಗಿದ್ದನು. ಅಷ್ಟರೋತ್ ಮತ್ತು ಎದ್ರೈ ಎಂಬ ನಗರಗಳಲ್ಲಿ ವಾಸವಾಗಿದ್ದ ಓಗನು ಹೆರ್ಮೋನ್ ಬೆಟ್ಟದ ಮೇಲಿನ ಸೀಮೆ, ಸಲ್ಕಾ ಮತ್ತು ಬಾಷಾನಿನ ಎಲ್ಲ ಪ್ರದೇಶ, ಇವುಗಳನ್ನು ಆಳುತ್ತಿದ್ದನು. ಗೆಷೂರ್ಯರು ಮತ್ತು ಮಾಕತೀ ಜನರು ವಾಸಮಾಡುವ ಪ್ರದೇಶವು ಇವನ ರಾಜ್ಯದ ಮೇರೆಯಾಗಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯದ ಮೇರೆಯವರೆಗೆ ಹಬ್ಬಿದ ಗಿಲ್ಯಾದಿನ ಅರ್ಧಪ್ರಾಂತ್ಯವನ್ನು ಕೂಡ ಓಗನು ಆಳುತ್ತಿದ್ದನು.

ಯೆಹೋವನ ಸೇವಕನಾದ ಮೋಶೆಯು ಮತ್ತು ಇಸ್ರೇಲರು ಈ ಎಲ್ಲ ಅರಸರನ್ನು ಸೋಲಿಸಿದರು. ಮೋಶೆಯು ಈ ಪ್ರದೇಶವನ್ನು ರೂಬೇನನ ಕುಲದವರಿಗೂ ಗಾದನ ಕುಲದವರಿಗೂ ಮನಸ್ಸೆ ಕುಲದ ಅರ್ಧಜನರಿಗೂ ಸ್ವಾಸ್ತ್ಯವಾಗಿ ಕೊಟ್ಟುಬಿಟ್ಟನು.

ಇಸ್ರೇಲರು ಜೋರ್ಡನ್ ನದಿಯ ಪಶ್ಚಿಮ ಪ್ರದೇಶದಲ್ಲಿದ್ದ ಅರಸರನ್ನು ಸಹ ಸೋಲಿಸಿದರು. ಈ ಪ್ರದೇಶದಲ್ಲಿ ಯೆಹೋಶುವನು ಜನರ ಮುಂದಾಳಾದನು. ಯೆಹೋಶುವನು ಈ ಪ್ರದೇಶವನ್ನು ಇಸ್ರೇಲಿನ ಹನ್ನೆರಡು ಕುಲಗಳಿಗೆ ಹಂಚಿದನು. ದೇವರು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ಪ್ರದೇಶವೇ ಅದಾಗಿತ್ತು. ಈ ಪ್ರದೇಶವು ಲೆಬನೋನ್ ಕಣಿವೆಯ ಬಾಲ್ಗಾದ್ ಮತ್ತು ಸೇಯೀರ್ ಹತ್ತಿರವಿದ್ದ ಹಾಲಾಕ್ ಬೆಟ್ಟದ ನಡುವೆ ಇತ್ತು. ಪರ್ವತ ಪ್ರದೇಶ, ಪಶ್ಚಿಮದಿಕ್ಕಿನ ಇಳಿಜಾರು ಪ್ರದೇಶ, ಜೋರ್ಡನ್ ಕಣಿವೆ, ಪೂರ್ವದಿಕ್ಕಿನ ಬೆಟ್ಟಗಳು, ಮರುಭೂಮಿ ಮತ್ತು ನೆಗೆವ್ ಇದರಲ್ಲಿ ಸೇರಿಕೊಂಡಿದ್ದವು. ಈ ಪ್ರದೇಶವು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ವಾಸಸ್ಥಾನವಾಗಿತ್ತು. ಇಸ್ರೇಲರು ಸೋಲಿಸಿದ ಅರಸರ ಪಟ್ಟಿಯು ಇಂತಿದೆ:

ಜೆರಿಕೊವಿನ ಅರಸ

ಆಯಿಯ ಅರಸ ಬೇತೇಲ್ ಹತ್ತಿರ

10 ಜೆರುಸಲೇಮಿನ ಅರಸ

ಹೆಬ್ರೋನಿನ ಅರಸ

11 ಯರ್ಮೂತಿನ ಅರಸ

ಲಾಕೀಷಿನ ಅರಸ

12 ಎಗ್ಲೋನಿನ ಅರಸ

ಗೆಜೆರಿನ ಅರಸ

13 ದೆಬೀರಿನ ಅರಸ

ಗೆದೆರಿನ ಅರಸ

14 ಹೊರ್ಮದ ಅರಸ

ಅರಾದಿನ ಅರಸ

15 ಲಿಬ್ನದ ಅರಸ

ಅದುಲ್ಲಾಮದ ಅರಸ

16 ಮಕ್ಕೇದದ ಅರಸ

ಬೇತೇಲಿನ ಅರಸ

17 ತಪ್ಪೂಹದ ಅರಸ

ಹೇಫೆರಿನ ಅರಸ

18 ಅಫೇಕದ ಅರಸ

ಲಷ್ಷಾರೋನಿನ ಅರಸ

19 ಮಾದೋನಿನ ಅರಸ

ಹಾಚೋರಿನ ಅರಸ

20 ಶಿಮ್ರೋನ್ಮೆರೋನಿನ ಅರಸ

ಅಕ್ಷಾಫಿನ ಅರಸ

21 ತಾನಕದ ಅರಸ

ಮೆಗಿದ್ದೋವಿನ ಅರಸ

22 ಕೆದೆಷಿನ ಅರಸ

ಕರ್ಮೆಲ್‌ ಬೆಟ್ಟದ ಯೊಕ್ನೆಯಾಮದ ಅರಸ

23 ದೋರ್ ಬೆಟ್ಟದ ಮೇಲಿರುವ ದೋರಿನ ಅರಸ

ಗಿಲ್ಗಾಲದಲ್ಲಿಯ ಗೋಯಿಮ್‌ನ ಅರಸ

24 ತಿರ್ಚದ ಅರಸ

ಒಟ್ಟು ಅರಸರು 31 ಮಂದಿ.

ವಶಪಡಿಸಿಕೊಂಡಿಲ್ಲದ ಪ್ರದೇಶ

13 ಯೆಹೋಶುವನು ತುಂಬಾ ಮುದುಕನಾದಾಗ ಯೆಹೋವನು ಅವನಿಗೆ, “ಯೆಹೋಶುವನೆ, ನೀನು ವೃದ್ಧನಾದೆ. ಆದರೆ ನೀನು ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಾದ ಪ್ರದೇಶ ಬಹಳಷ್ಟಿದೆ” ಅಂದನು. ನೀನು ಗೆಷೂರ ಪ್ರದೇಶವನ್ನು ಮತ್ತು ಫಿಲಿಷ್ಟಿಯರ ಪ್ರದೇಶವನ್ನು ಇನ್ನೂ ವಶಪಡಿಸಿಕೊಂಡಿಲ್ಲ. ಈಜಿಪ್ಟಿನ ಶೀಹೋರ್ ನದಿಯಿಂದ ಉತ್ತರದ ಎಕ್ರೋನ್ ಸೀಮೆಯವರೆಗೂ ಚಾಚಿಕೊಂಡಿರುವ ಭೂಮಿಯನ್ನು ನೀನು ವಶಪಡಿಸಿಕೊಂಡಿಲ್ಲ. ಆ ಭೂಮಿಯು ಇನ್ನೂ ಕಾನಾನ್ಯರ ಅಧೀನದಲ್ಲಿದೆ. ನೀನು ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರು ಮತ್ತು ಎಕ್ರೋನಿನ ಎಂಬ ಐದು ಮಂದಿ ಫಿಲಿಷ್ಟಿಯರ ನಾಯಕರನ್ನು ಇನ್ನೂ ಸೋಲಿಸಬೇಕಾಗಿದೆ. ಗೆಷೂರ್ಯ ಸೀಮೆಯು, ಕಾನಾನ್ ದೇಶದ ದಕ್ಷಿಣದಲ್ಲಿ ವಾಸವಾಗಿರುವ ಅವ್ವೀಯರನ್ನು ಸಹ ನೀನು ಸೋಲಿಸಬೇಕಾಗಿದೆ. ನೀನು ಇಲ್ಲಿಯವರೆಗೂ ಗೆಬಾಲ್ಯರನ್ನು ಸೋಲಿಸಿಲ್ಲ. ಹೆರ್ಮೋನ್ ಬೆಟ್ಟದ ಬುಡದಲ್ಲಿರುವ ಬಾಲ್ಗಾದಿನ ಪೂರ್ವದಿಂದಿಡಿದು ಲೆಬೊಹಾಮಾತಿನವರೆಗೆ ಇರುವ ಪ್ರದೇಶವನ್ನು ನೀನು ಗೆಲ್ಲಬೇಕು. ಬಾಲ್ಗಾದ್ ಲೆಬನೋನ್ ಪ್ರದೇಶದಲ್ಲಿದೆ.

“ಲೆಬನೋನಿನಿಂದ ಮಿಸ್ರೆಪೋತ್ಮಯಿಮಿನವರೆಗಿರುವ ಪರ್ವತ ಪ್ರದೇಶದಲ್ಲಿ ಚೀದೋನ್ಯರು ವಾಸವಾಗಿದ್ದಾರೆ. ಆದರೆ ಇಸ್ರೇಲರಿಗಾಗಿ ನಾನು ಅವರನ್ನೆಲ್ಲಾ ಹೊರ ತಳ್ಳುತ್ತೇನೆ. ಇಸ್ರೇಲರಿಗೆ ದೇಶವನ್ನು ಹಂಚುವಾಗ ಈ ಪ್ರದೇಶವನ್ನು ಸೇರಿಸಿ ಒಂಭತ್ತು ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಪಾಲು ಮಾಡಿಕೊಡು.”

ದೇಶದ ಹಂಚಿಕೆ

ಮನಸ್ಸೆ ಕುಲದ ಅರ್ಧಜನರು, ರೂಬೇನ್ ಮತ್ತು ಗಾದ್ ಕುಲಗಳವರು ಈಗಾಗಲೇ ತಮ್ಮ ಸ್ವಾಸ್ತ್ಯವನ್ನು ತೆಗೆದುಕೊಂಡಿದ್ದರು. ಯೆಹೋವನ ಸೇವಕನಾದ ಮೋಶೆಯು ಜೋರ್ಡನ್ ನದಿಯ ಪೂರ್ವದಿಕ್ಕಿನ ಪ್ರದೇಶವನ್ನು ಅವರಿಗೆ ಕೊಟ್ಟಿದ್ದನು. ಅವರಿಗೆ ದೊರಕಿದ ಪ್ರದೇಶವು ಅರ್ನೋನ್ ಕಣಿವೆಯ ಬಳಿಯಲ್ಲಿದ್ದ ಅರೋಯೇರ್‌ನಿಂದ ಆರಂಭಗೊಂಡು ಮಧ್ಯಕಣಿವೆಯಲ್ಲಿದ್ದ ಊರಿನವರೆಗೂ ವಿಸ್ತರಿಸಿಕೊಂಡಿತ್ತು. ಮೇದೆಬದಿಂದ ದೀಬೋನಿನವರೆಗಿದ್ದ ಇಡೀ ಬಯಲು ಪ್ರದೇಶವನ್ನು ಇದು ಒಳಗೊಂಡಿತ್ತು. 10 ಅಮೋರಿಯರ ಅರಸನಾದ ಸೀಹೋನನು ಆಳುತ್ತಿದ್ದ ಎಲ್ಲ ಪಟ್ಟಣಗಳು ಆ ಪ್ರದೇಶದಲ್ಲಿದ್ದವು. ಆ ಅರಸನು ಹೆಷ್ಬೋನ್ ನಗರದಲ್ಲಿ ಆಳುತ್ತಿದ್ದನು. ಅಮ್ಮೋನಿಯರು ಮೊದಲು ನೆಲೆಸಿದ್ದ ಪ್ರದೇಶದವರೆಗೆ ಈ ಪ್ರದೇಶ ವಿಸ್ತರಿಸಿತ್ತು. 11 ಗಿಲ್ಯಾದ್ ಪಟ್ಟಣವೂ ಸಹ ಈ ಪ್ರದೇಶಕ್ಕೆ ಒಳಪಟ್ಟಿತ್ತು. ಗೆಷೂರ್ಯರು ಮತ್ತು ಮಾಕತೀಯರು ವಾಸಮಾಡುತ್ತಿದ್ದ ಪ್ರದೇಶವು ಸಹ ಈ ಪ್ರದೇಶಕ್ಕೆ ಸೇರಿತ್ತು. ಇಡೀ ಹೆರ್ಮೋನ್ ಬೆಟ್ಟಪ್ರದೇಶ ಮತ್ತು ಸಲ್ಕಾ ಪಟ್ಟಣದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು ಆ ಪ್ರದೇಶಕ್ಕೆ ಸೇರಿಕೊಂಡಿದ್ದವು. 12 ಓಗ್ ರಾಜನ ಎಲ್ಲ ಪ್ರಾಂತ್ಯಗಳು ಆ ಪ್ರದೇಶದಲ್ಲಿ ಸೇರಿತ್ತು. ಓಗ್ ರಾಜನು ಬಾಷಾನಿನಲ್ಲಿ ಆಳುತ್ತಿದ್ದನು. ಮೊದಲು ಅವನು ಅಷ್ಟರೋತ್ ಮತ್ತು ಎದ್ರೈಗಳಲ್ಲಿದ್ದುಕೊಂಡು ಆಳುತ್ತಿದ್ದನು. ಓಗನು ರೆಫಾಯರ ವಂಶಸ್ಥನಾಗಿದ್ದನು. ಮೊದಲು ಮೋಶೆಯು ಆ ಜನರನ್ನು ಸೋಲಿಸಿ ಅವರ ಪ್ರದೇಶವನ್ನು ತೆಗೆದುಕೊಂಡಿದ್ದನು. 13 ಇಸ್ರೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರತಳ್ಳಲಿಲ್ಲ. ಅವರು ಇಂದಿಗೂ ಇಸ್ರೇಲರ ಜೊತೆಯಲ್ಲಿಯೇ ಇರುತ್ತಾರೆ.

14 ಲೇವಿಕುಲದವರಿಗೆ ಮಾತ್ರ ಯಾವ ಪ್ರದೇಶವೂ ಸಿಕ್ಕಲಿಲ್ಲ. ಅದಕ್ಕೆ ಬದಲಾಗಿ, ಇಸ್ರೇಲರ ದೇವರಾದ ಯೆಹೋವನು ಅವರಿಗೆ ವಾಗ್ದಾನ ಮಾಡಿದಂತೆ ಸರ್ವಾಂಗಹೋಮಗಳಾಗಿ ಅರ್ಪಿತವಾಗುವ ಎಲ್ಲಾ ಪಶುಗಳಲ್ಲಿ ಉಳಿದ ಭಾಗವನ್ನು ಅವರು ಪಡೆದುಕೊಳ್ಳುವರು.

15 ಮೋಶೆಯು ರೂಬೇನನ ಕುಲದ ಪ್ರತಿಯೊಂದು ಗೋತ್ರದವರಿಗೆ ಸ್ವಲ್ಪಸ್ವಲ್ಪ ಪ್ರದೇಶವನ್ನು ಕೊಟ್ಟಿದ್ದನು. ಅವರಿಗೆ ಕೊಟ್ಟ ಪ್ರದೇಶದ ವಿವರ ಹೀಗಿದೆ: 16 ಅರ್ನೋನ್ ತಗ್ಗಿನ ಸಮೀಪದಲ್ಲಿದ್ದ ಅರೋಯೇರ್‌ನಿಂದ ಮೇದೆಬದವರೆಗಿರುವ ಪ್ರದೇಶ. ಇದು ಇಡೀ ತಪ್ಪಲ ಪ್ರದೇಶವನ್ನು ಮತ್ತು ಆ ತಗ್ಗು ಪ್ರದೇಶದ ಮಧ್ಯದಲ್ಲಿದ್ದ ಊರುಗಳನ್ನು ಒಳಗೊಂಡಿತ್ತು. 17 ಆ ಪ್ರದೇಶವು ಹೆಷ್ಬೋನಿನವರೆಗೆ ವಿಸ್ತರಿಸಿ ತಪ್ಪಲಪ್ರದೇಶದ ಎಲ್ಲಾ ಊರುಗಳನ್ನೊಳಗೊಂಡಿತ್ತು. ಆ ಊರುಗಳು ಯಾವುವೆಂದರೆ: ದೀಬೋನ್, ಬಾಮೋತ್‌ಬಾಳ್, ಬೇತ್ಬಾಳ್ಮೆಯೋನ್, 18 ಯಹಚಾ, ಕೆದೇಮೋತ್, ಮೇಫಾಯತ್, 19 ಕಣಿವೆಯಲ್ಲಿರುವ ಪ್ರದೇಶ, ಬೆಟ್ಟದ ಮೇಲಿನ ಕಿರ್ಯಾತಯಿಮ್, ಸಿಬ್ಮಾ, ಚೆರೆತ್‌ಶಹರ್, 20 ಬೇತ್ಪೆಗೋರ್, ಪಿಸ್ಗಾ ಬೆಟ್ಟಗಳು ಮತ್ತು ಬೇತ್‌ಯೆಷಿಮೋತ್. 21 ಆದ್ದರಿಂದ ಅಮೋರಿಯರ ಅರಸನಾದ ಸೀಹೋನನ ಆಳ್ವಿಕೆಯಲ್ಲಿದ್ದ ಎಲ್ಲ ಊರುಗಳನ್ನು ಆ ಪ್ರದೇಶವು ಒಳಗೊಂಡಿತ್ತು. ಆ ಅರಸನು ಹೆಷ್ಬೋನ್ ಪಟ್ಟಣದಲ್ಲಿ ಆಳಿದನು. ಆದರೆ ಮೋಶೆಯು ಅವನನ್ನು ಮತ್ತು ಮಿದ್ಯಾನ್ ಜನರ ನಾಯಕರನ್ನು ಸೋಲಿಸಿದ್ದನು. ಎವೀ, ರೆಕೆಮ್, ಚೂರ್, ಹೂರ್ ಮತ್ತು ರೆಬಾ, ಇವರೇ ಆ ನಾಯಕರಾಗಿದ್ದರು. (ಈ ನಾಯಕರೆಲ್ಲ ಸೀಹೋನನ ಜೊತೆ ಸೇರಿ ಯುದ್ಧಮಾಡಿದ್ದರು.) ಈ ನಾಯಕರೆಲ್ಲ ಅದೇ ದೇಶದಲ್ಲಿ ವಾಸವಾಗಿದ್ದರು. 22 ಇಸ್ರೇಲರು ಬೆಯೋರನ ಮಗನಾದ ಬಿಳಾಮನನ್ನು ಕೊಂದರು. (ಬಿಳಾಮನು ಮಂತ್ರ ವಿದ್ಯೆಯಿಂದ ಭವಿಷ್ಯವನ್ನು ಹೇಳುತ್ತಿದ್ದನು.) ಯುದ್ಧದಲ್ಲಿ ಇಸ್ರೇಲರು ಬಹಳಷ್ಟು ಜನರನ್ನು ಕೊಂದರು. 23 ರೂಬೇನನ ಜನರಿಗೆ ಕೊಟ್ಟ ಪ್ರದೇಶ ಜೋರ್ಡನ್ ನದಿಯ ದಡಕ್ಕೆ ಸೀಮಿತವಾಗಿತ್ತು. ಈ ಪ್ರಕಾರ ರೂಬೇನನ ಕುಲದ ಗೋತ್ರದವರಿಗೆ ಕೊಟ್ಟ ಪ್ರದೇಶವು ಇಲ್ಲಿ ಪಟ್ಟಿ ಮಾಡಿದ ಎಲ್ಲ ಊರುಗಳನ್ನು ಮತ್ತು ಅವುಗಳ ಹೊಲಗಳನ್ನು ಒಳಗೊಂಡಿತ್ತು.

24 ಮೋಶೆಯು ಗಾದನ ಕುಲದ ಪ್ರತಿಯೊಂದು ಗೋತ್ರದವರಿಗೆ ಕೊಟ್ಟ ಪ್ರದೇಶ ಇಂತಿದೆ:

25 ಮೋಶೆ ಅವರಿಗೆ ಯಗ್ಜೇರಿನ ಪ್ರದೇಶ ಮತ್ತು ಗಿಲ್ಯಾದಿನ ಎಲ್ಲ ಪಟ್ಟಣಗಳನ್ನೂ ರಬ್ಬಾದ ಹತ್ತಿರವಿದ್ದ ಅರೋಯೇರ್‌ವರೆಗಿನ ಅಮ್ಮೋನಿಯರ ಅರ್ಧಪ್ರದೇಶವನ್ನು ಕೊಟ್ಟನು. 26 ಆ ಪ್ರದೇಶವು ಹೆಷ್ಬೋನ್‌ನಿಂದ ರಾಮತ್‌ಮಿಚ್ಛೆ ಮತ್ತು ಬೆಟೋನೀಮ್ ಊರುಗಳವರೆಗೂ ಇರುವ ಪ್ರದೇಶ ಮತ್ತು ಮಹನಯಿಮಿನಿಂದ ದೆಬೀರ್ ಪ್ರಾಂತ್ಯದವರೆಗೆ ಇರುವ ಪ್ರದೇಶವನ್ನು ಒಳಗೊಂಡಿತ್ತು. 27 ಆ ಪ್ರದೇಶವು ಬೇತ್‌ಹಾರಾಮ್, ಬೇತ್‌ನಿಮ್ರಾ, ಸುಕ್ಕೋತ್ ಮತ್ತು ಚಾಫೋನ್ ಕಣಿವೆಗಳನ್ನು ಒಳಗೊಂಡಿತ್ತು. ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯಕ್ಕೆ ಸೇರಿದ ಉಳಿದೆಲ್ಲ ಪ್ರದೇಶವನ್ನು ಇದರಲ್ಲಿ ಸೇರಿಸಲಾಗಿತ್ತು. ಈ ಪ್ರದೇಶವು ಜೋರ್ಡನ್ ನದಿಯ ಪೂರ್ವ ಭಾಗದಲ್ಲಿತ್ತು. ಈ ಪ್ರದೇಶವು ಗಲಿಲೇಯ ಸರೋವರದ ಕೊನೆಯವರೆಗೆ ವಿಸ್ತರಿಸಿತ್ತು. 28 ಮೋಶೆಯು ಗಾದ್ ಕುಲದವರಿಗೆ ಈ ಪ್ರದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದನು. ಈ ಪ್ರದೇಶಕ್ಕೆ ಸೇರಿದ್ದ ಊರುಗಳನ್ನೆಲ್ಲ ಮೋಶೆಯು ಅವರ ಕುಟುಂಬಗಳಿಗನುಸಾರವಾಗಿ ಹಂಚಿಕೊಟ್ಟಿದ್ದನು.

29 ಮೋಶೆಯು ಮನಸ್ಸೆ ಕುಲದ ಅರ್ಧಕುಲದವರಿಗೆ ಅವರ ಕುಟುಂಬಗಳಿಗನುಸಾರವಾಗಿ ಕೊಟ್ಟ ಪ್ರದೇಶದ ವಿವರ:

30 ಈ ಪ್ರದೇಶವು ಮಹನಯಿಮಿನಿಂದ ಪ್ರಾರಂಭವಾಗುತ್ತದೆ. ಇಡೀ ಬಾಷಾನ್, ಅರಸನಾದ ಓಗನ ಆಳ್ವಿಕೆಗೆ ಒಳಪಟ್ಟ ಪ್ರದೇಶ, ಬಾಷಾನಿನಲ್ಲಿರುವ ಯಾಯೀರನ ಎಲ್ಲ ಊರುಗಳು (ಒಟ್ಟು ಅರವತ್ತು ಊರುಗಳು) ಇದರಲ್ಲಿ ಸೇರಿವೆ. 31 ಗಿಲ್ಯಾದಿನ ಅರ್ಧಭಾಗವು, ಅಷ್ಟರೋತ್, ಎದ್ರೈ ಎಂಬ ಪಟ್ಟಣಗಳೂ ಇದರಲ್ಲಿ ಸೇರಿವೆ. (ಗಿಲ್ಯಾದ್, ಅಷ್ಟರೋತ್ ಮತ್ತು ಎದ್ರೈ ಎಂಬ ಪಟ್ಟಣಗಳಲ್ಲಿ ರಾಜನಾದ ಓಗ್ ವಾಸವಾಗಿದ್ದನು.) ಈ ಎಲ್ಲ ಪ್ರದೇಶವನ್ನು ಮನಸ್ಸೆಯ ಮಗನಾದ ಮಾಕೀರನ ಅರ್ಧಗೋತ್ರದವರಿಗೆ ಕೊಡಲಾಯಿತು.

32 ಮೋಶೆಯು ಈ ಪ್ರದೇಶಗಳನ್ನೆಲ್ಲ ಆಯಾ ಕುಲಗಳಿಗೆ ಮೋವಾಬ್ ಬಯಲಿನಲ್ಲಿ ಇಳಿದುಕೊಂಡಿದ್ದಾಗ ಹಂಚಿಕೊಟ್ಟನು. ಮೋವಾಬ್ ಬಯಲು ಜೆರಿಕೊ ನಗರಕ್ಕೆ ಪೂರ್ವದಲ್ಲಿಯೂ ಜೋರ್ಡನ್ ನದಿಯ ಆಚೆದಡದಲ್ಲೂ ಇತ್ತು. 33 ಮೋಶೆಯು ಲೇವಿಕುಲದವರಿಗೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಇಸ್ರೇಲಿನ ದೇವರಾದ ಯೆಹೋವನು ಲೇವಿಯ ಕುಲದವರಿಗೆ ವಾಗ್ದಾನ ಮಾಡಿದಂತೆ ಆತನೇ ಅವರಿಗೆ ಸ್ವಾಸ್ತ್ಯವಾಗಿದ್ದನು.

ಕೀರ್ತನೆಗಳು 145

ರಚನೆಗಾರ: ದಾವೀದ.

145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
    ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
    ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
    ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.
ನಿನ್ನ ಅತ್ಯಾಶ್ಚರ್ಯಕರವಾದ ಕಾರ್ಯಗಳನ್ನು ಜನರು ಕೊಂಡಾಡುವರು.
    ನಿನ್ನ ಮಹತ್ಕಾರ್ಯಗಳನ್ನು ನಾನು ವರ್ಣಿಸುವೆನು.
ನಿನ್ನ ಒಳ್ಳೆಯ ಕಾರ್ಯಗಳ ಕುರಿತಾಗಿ ಜನರು ಹೇಳುವರು.
    ನಿನ್ನ ನೀತಿಯು ಕುರಿತಾಗಿ ಜನರು ಹಾಡುವರು.

ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
    ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
    ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
    ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
    ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
    ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
    ನೀನು ಎಂದೆಂದಿಗೂ ಆಳುವೆ.

14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
    ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
    ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
    ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
    ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
    ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
    ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
    ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
    ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!

ಯೆರೆಮೀಯ 6

ಶತ್ರುಗಳು ಜೆರುಸಲೇಮ್ ನಗರವನ್ನು ಮುತ್ತಿದರು

ಬೆನ್ಯಾಮೀನನ ಕುಲದವರೇ, ನಿಮ್ಮ ಪ್ರಾಣ ರಕ್ಷಣೆಗಾಗಿ ಓಡಿಹೋಗಿರಿ;
    ಜೆರುಸಲೇಮ್ ನಗರದಿಂದ ಓಡಿಹೋಗಿರಿ.
ತೆಕೋವ ನಗರದಲ್ಲಿ ಯುದ್ಧದ ತುತ್ತೂರಿಗಳನ್ನು ಊದಿರಿ;
    ಬೇತ್‌ಹಕ್ಕೆರೆಮಿನಲ್ಲಿ ಎಚ್ಚರಿಕೆಯ ಧ್ವಜಗಳನ್ನು ಹಾರಿಸಿರಿ.
ಉತ್ತರದಿಕ್ಕಿನಿಂದ ವಿಪತ್ತು ಬರುತ್ತಿರುವುದರಿಂದ ಇವೆಲ್ಲವನ್ನು ಮಾಡಿರಿ.
ಭಯಂಕರವಾದ ವಿನಾಶವು ನಿಮಗೆ ಬರುತ್ತಿದೆ.
ಚೀಯೋನ್ ಕುಮಾರಿಯೇ,[a] ನೀನು ಬಹು ಸುಂದರವಾಗಿಯೂ ಮೃದುವಾಗಿಯೂ ಇರುವೆ.
ಕುರುಬರು ಜೆರುಸಲೇಮಿಗೆ ಬರುತ್ತಾರೆ.
    ಮತ್ತು ಕುರಿಮಂದೆಗಳನ್ನು ತರುತ್ತಾರೆ.
ಅದರ ಸುತ್ತಲೂ ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಾರೆ.
    ಪ್ರತಿಯೊಬ್ಬ ಕುರುಬನು ತನ್ನ ಕುರಿಹಿಂಡನ್ನು ನೋಡಿಕೊಳ್ಳುತ್ತಾನೆ.

“ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ.
    ಏಳಿರಿ, ನಾವು ನಗರವನ್ನು ಮಧ್ಯಾಹ್ನದಲ್ಲಿಯೇ ಮುತ್ತೋಣ.
ಆದರೆ ಈಗಾಗಲೇ ಹೊತ್ತಾಗಿದೆ.
    ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
ಏಳಿರಿ, ನಾವು ರಾತ್ರಿಯಲ್ಲಿ ನಗರದ ಮೇಲೆ ಧಾಳಿ ಮಾಡೋಣ.
    ನಾವು ಜೆರುಸಲೇಮಿನ ಭದ್ರವಾದ ರಕ್ಷಣಾಸ್ಥಳಗಳನ್ನು ನಾಶಮಾಡೋಣ.”

ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು:
    “ಜೆರುಸಲೇಮಿನ ಸುತ್ತಮುತ್ತಲಿನ ಮರಗಳನ್ನು ಕಡಿದುಹಾಕಿರಿ;
    ಜೆರುಸಲೇಮಿನ ಎದುರಿಗೆ ಒಂದು ದಿಬ್ಬ ನಿರ್ಮಿಸಿರಿ.
ನಗರವನ್ನು ದಂಡಿಸಬೇಕು.
    ನಗರದ ಒಳಗಡೆ ದಬ್ಬಾಳಿಕೆಯ ಹೊರತು ಮತ್ತೇನಿಲ್ಲ.
ಬಾವಿಯಲ್ಲಿ ಹೊಸ ನೀರು ಬರುವಂತೆ
    ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ.
ಈ ಪಟ್ಟಣದಲ್ಲಿ ಬಲಾತ್ಕಾರ ಮತ್ತು ವಿನಾಶಗಳೇ ಕೇಳಿಬರುತ್ತವೆ.
    ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.
ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನ್ನು ಕೇಳು.
    ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ.
ನಾನು ನಿನ್ನ ಪ್ರದೇಶವನ್ನು ಒಂದು ಮರಳುಗಾಡಾಗಿ ಮಾಡುತ್ತೇನೆ.
    ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”

ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ದೇಶದಲ್ಲಿ ಅಳಿದುಳಿದ ಇಸ್ರೇಲಿಯರನ್ನು
    ಒಟ್ಟಾಗಿ ಸೇರಿಸಿರಿ.
ದ್ರಾಕ್ಷಿತೋಟದಲ್ಲಿ ಕೊನೆಯ ದ್ರಾಕ್ಷಿಯನ್ನು ಕೀಳುವಂತೆ
    ಅವರನ್ನು ಒಟ್ಟಾಗಿ ಸೇರಿಸಿ.
ಕೊಯ್ಲುಗಾರನು ಪ್ರತಿಯೊಂದು ಬಳ್ಳಿಯನ್ನು ನೋಡಿ ದ್ರಾಕ್ಷಿಕೀಳುವಂತೆ
    ನೀವು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಒಟ್ಟಾಗಿ ಸೇರಿಸಿರಿ.”
10 ನಾನು ಯಾರೊಂದಿಗೆ ಮಾತನಾಡಲಿ?
    ನಾನು ಯಾರಿಗೆ ಎಚ್ಚರಿಕೆಯ ನುಡಿಗಳನ್ನು ಹೇಳಲಿ?
    ನನ್ನ ಮಾತನ್ನು ಯಾರು ಕೇಳುತ್ತಾರೆ?
ಇಸ್ರೇಲಿನ ಜನರು ತಮ್ಮ ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.
    ಅವರು ನನ್ನ ಎಚ್ಚರಿಕೆಯ ನುಡಿಗಳನ್ನು ಕೇಳಲಾರರು.
ಜನರಿಗೆ ಯೆಹೋವನ ಉಪದೇಶ ರುಚಿಸುವದಿಲ್ಲ.
    ಅವರು ಯೆಹೋವನ ನುಡಿಗಳನ್ನು ಕೇಳಬಯಸುವದಿಲ್ಲ.
11 ಯೆಹೋವನ ರೋಷವು ನನ್ನಲ್ಲಿ ತುಂಬಿತುಳುಕುತ್ತಿದೆ,
    ತಡೆದುತಡೆದು ನನಗೆ ಸಾಕಾಗಿದೆ.
“ಬೀದಿಯಲ್ಲಾಡುವ ಮಕ್ಕಳ ಮೇಲೆ ಅದನ್ನು ಹೊಯ್ದುಬಿಡಬೇಕು.
    ಒಂದೆಡೆ ಸೇರುವ ತರುಣರ ಮೇಲೆ ಅದನ್ನು ಹೊಯ್ದುಬಿಡಬೇಕು.
ಗಂಡಹೆಂಡತಿಯರಿಬ್ಬರನ್ನು ಅಪಹರಿಸಲಾಗುವುದು.
ಮುದುಕರನ್ನೂ ಮುಪ್ಪಿನ ಮುದುಕರನ್ನೂ ಅಪಹರಿಸಲಾಗುವುದು.
12 ಅವರ ಮನೆಗಳನ್ನು ಬೇರೆಯವರಿಗೆ ಕೊಡಲಾಗುವುದು.
    ಅವರ ಹೊಲಗಳನ್ನೂ ಅವರ ಹೆಂಡಂದಿರನ್ನೂ ಬೇರೆಯವರಿಗೆ ಕೊಡಲಾಗುವುದು.
ನಾನು ನನ್ನ ಕೈ ಎತ್ತಿ ಯೆಹೂದದ ಜನರನ್ನು ದಂಡಿಸುವೆನು.”
ಇದು ಯೆಹೋವನ ಸಂದೇಶ.

13 “ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
    ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಲಾಭಕ್ಕಾಗಿ ಆಸೆಪಡುತ್ತಾರೆ.
    ಪ್ರವಾದಿಗಳು ಮತ್ತು ಯಾಜಕರು ಸಹ ಮೋಸಗಾರರಾಗಿದ್ದಾರೆ.
14 ಪ್ರವಾದಿಗಳು ಮತ್ತು ಯಾಜಕರು
    ನನ್ನ ಜನರಿಗಾದ ದೊಡ್ಡ ಗಾಯಗಳಿಗೆ ಚಿಕ್ಕಗಾಯಗಳಿಗೋ ಎಂಬಂತೆ ಚಿಕಿತ್ಸೆ ಮಾಡುತ್ತಾರೆ.
    ವಾಸಿಯಾಗಿಲ್ಲದಿದ್ದರೂ ‘ವಾಸಿಯಾಗಿದೆ’ ಎನ್ನುತ್ತಾರೆ.
15 ಪ್ರವಾದಿಗಳು ಮತ್ತು ಯಾಜಕರು ತಾವು ಮಾಡುವ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
    ಆದರೆ ಅವರು ನಾಚಿಕೆಪಡುವದೇ ಇಲ್ಲ.
ತಮ್ಮ ಪಾಪಕಾರ್ಯಗಳಿಗಾಗಿ ಸಂಕೋಚಪಡುವುದು ಸಹ ಅವರಿಗೆ ಗೊತ್ತಿಲ್ಲ.
    ಆದ್ದರಿಂದ ಬೇರೆಯವರಂತೆ ಅವರನ್ನೂ ಶಿಕ್ಷಿಸಲಾಗುವುದು.
    ನಾನು ಅವರನ್ನು ಶಿಕ್ಷಿಸಿದಾಗ ಅವರನ್ನು ನೆಲಕ್ಕೆ ಎಸೆಯಲಾಗುವದು”
ಎಂದು ಯೆಹೋವನು ಅನ್ನುತ್ತಾನೆ.

16 ಯೆಹೋವನು ಹೀಗೆ ಹೇಳುತ್ತಾನೆ:
“ಎರಡು ರಸ್ತೆಗಳು ಕೂಡುವಲ್ಲಿ ನಿಂತು ನೋಡಿರಿ.
    ‘ಒಳ್ಳೆಯ ರಸ್ತೆ ಎಲ್ಲಿದೆ?’ ಎಂದು ಕೇಳಿರಿ.
    ಆ ರಸ್ತೆಯನ್ನು ಹಿಡಿದು ನಡೆಯಿರಿ.
ಹಾಗೆ ಮಾಡಿದರೆ ನಿಮಗೆ ವಿಶ್ರಾಂತಿ ಸಿಕ್ಕುವದು.
ಆದರೆ ‘ನಾವು ಒಳ್ಳೆಯ ಹಾದಿಯ ಮೇಲೆ ನಡೆಯುವುದಿಲ್ಲ’ ಎಂದು ನೀವು ಹೇಳಿದ್ದೀರಿ.
17 ನಾನು ನಿಮ್ಮನ್ನು ನೋಡಿಕೊಳ್ಳುವುದಕ್ಕೆ ಕಾವಲುಗಾರರನ್ನು ನೇಮಿಸಿದೆ.
    ನಾನು ಅವರಿಗೆ ‘ಯುದ್ಧದ ತುತ್ತೂರಿಯ ನಾದವನ್ನು ಕೇಳಿರಿ’ ಎಂದು ಹೇಳಿದೆ.
    ಆದರೆ ಅವರು ‘ನಾವು ಕೇಳುವುದಿಲ್ಲ’ ಅಂದರು.
18 ಆದಕಾರಣ ಸರ್ವಜನಾಂಗಗಳೇ ಕೇಳಿರಿ,
    ಜನಸಮೂಹಗಳೇ ಗಮನಿಸಿರಿ.
    ಯೆಹೂದದ ಜನರಿಗೆ ನಾನು ಮಾಡುವುದನ್ನು ಕೇಳಿರಿ.
19 ಭೂಲೋಕದ ಜನರೇ, ಕೇಳಿರಿ,
    ಆ ಜನರು ಮಾಡಿದ ಎಲ್ಲಾ ಕುಯುಕ್ತಿಗಳಿಗಾಗಿ ನಾನು ಯೆಹೂದ ಜನರಿಗೆ ವಿನಾಶವನ್ನು ತರುವೆನು.
    ಅವರು ನನ್ನ ಸಂದೇಶಗಳಿಗೆ ಗಮನ ಕೊಡದೆ ಇದ್ದುದರಿಂದ,
    ಅವರು ನನ್ನ ಧರ್ಮಶಾಸ್ತ್ರವನ್ನು ಅಸಡ್ಡೆ ಮಾಡಿದ್ದರಿಂದ ಇದೆಲ್ಲ ನಡೆಯುವುದು.”

20 ಯೆಹೋವನು ಹೇಳುವುದೇನೆಂದರೆ, “ನೀವು ನನ್ನ ಸಲುವಾಗಿ ಶೆಬ ದೇಶದಿಂದ ಧೂಪವನ್ನು ಏಕೆ ತರುವಿರಿ?
    ನೀವು ದೂರದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವದರಿಂದ ಪ್ರಯೋಜನವೇನು?
ನಿಮ್ಮ ಹೋಮಗಳಿಂದ ನನಗೆ ಸಂತೋಷವಾಗುವದಿಲ್ಲ.
    ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.”

21 “ನಾನು ಯೆಹೂದದ ಜನರೆದುರಿಗೆ ಸಮಸ್ಯೆಗಳನ್ನು ಒಡ್ಡುವೆನು.
    ಅವುಗಳು ಜನರು ಎಡವಿಬೀಳುವ ಕಲ್ಲುಗಳಂತಾಗುವವು.
ತಂದೆಗಳೂ ಮಕ್ಕಳೂ ಅವುಗಳಿಂದ ಎಡವಿಬೀಳುವರು.
    ಸ್ನೇಹಿತರು ಮತ್ತು ನೆರೆಹೊರೆಯವರು ಅವುಗಳಿಂದ ನಾಶವಾಗುವರು” ಅಂದನು.

22 ಯೆಹೋವನು ಹೇಳುವುದೇನೆಂದರೆ:
“ಉತ್ತರ ದಿಕ್ಕಿನಿಂದ ಒಂದು ಸೈನ್ಯವು ಬರಲಿದೆ.
    ಭೂಮಿಯ ಬಹುದೂರದ ಸ್ಥಳಗಳಿಂದ ಒಂದು ಮಹಾಜನಾಂಗವು ಬರಲಿದೆ.
23 ಆ ಸೈನಿಕರು ಬಿಲ್ಲುಗಳನ್ನು ಮತ್ತು ಈಟಿಗಳನ್ನು ಹಿಡಿದುಕೊಂಡಿದ್ದಾರೆ.
    ಅವರು ಕ್ರೂರಿಗಳಾಗಿದ್ದಾರೆ. ಅವರು ನಿಷ್ಕರುಣಿಗಳಾಗಿದ್ದಾರೆ.
ಅವರು ಬಲಶಾಲಿಗಳಾಗಿದ್ದಾರೆ.
    ಅವರು ತಮ್ಮ ಕುದುರೆ ಹತ್ತಿ ಬರುವಾಗ ಸಮುದ್ರದ ಗರ್ಜನೆಯಂತೆ ಶಬ್ದ ಕೇಳಿಬರುತ್ತದೆ.
ಚೀಯೋನ್ ಕುಮಾರಿಯೇ, ಆ ಸೈನ್ಯವು ಯುದ್ಧಕ್ಕಾಗಿ ಬರುತ್ತಿದೆ.
    ಆ ಸೈನ್ಯವು ನಿನ್ನ ಮೇಲೆ ಧಾಳಿಮಾಡಲು ಬರುತ್ತಿದೆ.”
24 ಆ ಸೈನ್ಯದ ಬಗ್ಗೆ ಸಮಾಚಾರವನ್ನು ನಾವು ಕೇಳಿದ್ದೇವೆ.
    ಭಯದಿಂದ ನಾವು ಅಸಹಾಯಕರಾಗಿದ್ದೇವೆ.
ಕಷ್ಟಗಳಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ.
    ಸ್ತ್ರೀಯರ ಪ್ರಸವವೇದನೆಯಂತಿರುವ ಯಾತನೆಯಿಂದ ನಾವು ಬಳಲುತ್ತಿದ್ದೇವೆ.
25 ಊರ ಹೊರಗೆ ಹೋಗಬೇಡಿರಿ.
    ರಸ್ತೆಗಳ ಮೇಲೆ ಹೋಗಬೇಡಿರಿ.
ಏಕೆಂದರೆ ಶತ್ರುವಿನ ಕೈಯಲ್ಲಿ ಖಡ್ಗವಿದೆ.
    ಎಲ್ಲಾ ಕಡೆಗೂ ಅಪಾಯವಿದೆ.
26 ಅಯ್ಯೋ ನನ್ನ ಜನರೇ,
    ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಹೊರಳಾಡಿರಿ.
ಸತ್ತವರಿಗಾಗಿ ದೊಡ್ಡ ಧ್ವನಿಯಲ್ಲಿ ರೋದಿಸಿರಿ.
    ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ಬೋರ ಪ್ರಲಾಪ ಮಾಡಿರಿ.
ವಿನಾಶಕನು ತಕ್ಷಣ ನಮ್ಮ ಮೇಲೆರಗುವನು.

27 “ಯೆರೆಮೀಯನೇ, ನಾನು ನಿನ್ನನ್ನು
    ಒಬ್ಬ ಲೋಹ ಪರೀಕ್ಷಕನನ್ನಾಗಿ ನೇಮಿಸಿದ್ದೇನೆ.
ನೀನು ನನ್ನ ಜನರನ್ನು ಪರೀಕ್ಷಿಸು.
    ಅವರ ವ್ಯವಹಾರವನ್ನು ಅವಲೋಕಿಸು.
28 ಅವರೆಲ್ಲರು ನನಗೆ ವಿರುದ್ಧವಾಗಿ ದಂಗೆ ಎದ್ದಿದ್ದಾರೆ;
    ಅವರು ಬಹಳ ಹಟಮಾರಿಗಳಾಗಿದ್ದಾರೆ.
ಅವರು ಜನರ ಬಗ್ಗೆ ಅಪಪ್ರಚಾರ ಮಾಡುತ್ತಾ ತಿರುಗಾಡುತ್ತಾರೆ.
    ಅವರು ಬಣ್ಣಗುಂದಿದ, ತುಕ್ಕುಹಿಡಿದ ಕಂಚಿನಂತೆಯೂ ಕಬ್ಬಿಣದಂತೆಯೂ ಇದ್ದಾರೆ.
29 ಅವರನ್ನು ತಿದ್ದುವದು ಬೆಳ್ಳಿಯನ್ನು ಪವಿತ್ರಗೊಳಿಸಲು ಪ್ರಯತ್ನ ಮಾಡಿದ ಅಕ್ಕಸಾಲಿಗನಂತಾಗುವುದು. ತಿದಿಗಳು[b] ಭರದಿಂದ ಬೀಸಲು ಬೆಂಕಿಯು ಧಗಧಗಿಸಿತು.
    ಆದರೆ ಆ ಬೆಂಕಿಯಿಂದ ಕೇವಲ ಸೀಸವು ಹೊರಬಂದಿತು.
ಬೆಳ್ಳಿಯನ್ನು ಶುದ್ಧೀಕರಿಸಲು ಮಾಡಿದ ಪ್ರಯತ್ನ ಕೇವಲ ವ್ಯರ್ಥವಾಯಿತು.
    ಅದರಂತೆಯೇ ನನ್ನ ಜನರಿಂದ ದುಷ್ಟತನವನ್ನು ತೆಗೆಯಲಾಗಲಿಲ್ಲ.
30 ನನ್ನ ಜನರನ್ನು ‘ತಿರಸ್ಕರಿಸಲಾದ ಬೆಳ್ಳಿ’
ಎಂದು ಕರೆಯಲಾಗುವದು.
    ಏಕೆಂದರೆ ಯೆಹೋವನು ಅವರನ್ನು ಸ್ವಿಕರಿಸಲಿಲ್ಲ.”

ಮತ್ತಾಯ 20

ಕೂಲಿಯಾಳುಗಳ ಕುರಿತು ಯೇಸು ಹೇಳಿದ ಸಾಮ್ಯ

20 “ಪರಲೋಕರಾಜ್ಯವು ಒಬ್ಬ ದ್ರಾಕ್ಷಿತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಒಂದು ಮುಂಜಾನೆ ಅವನು ತನ್ನ ತೋಟದಲ್ಲಿ ಕೆಲಸ ಮಾಡಲು ಬೇರೆ ಕೂಲಿಯಾಳುಗಳನ್ನು ಕರೆಯುವುದಕ್ಕೆ ಹೊರಟನು. ಒಂದು ದಿನಕ್ಕೆ ಒಬ್ಬ ಕೆಲಸಗಾರನಿಗೆ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಹೇಳಿ ಆ ಕೆಲಸಗಾರರನ್ನು ಅವನು ತೋಟಕ್ಕೆ ಕಳುಹಿಸಿದನು.

“ಸುಮಾರು ಒಂಭತ್ತು ಗಂಟೆಗೆ ಯಜಮಾನನು ಪೇಟೆಯ ಸ್ಥಳಕ್ಕೆ ಹೋದನು. ಏನೂ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಕೆಲವರನ್ನು ಅವನು ಅಲ್ಲಿ ಕಂಡನು. ಅವನು ಅವರಿಗೆ, ‘ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡುವುದಾದರೆ ನಿಮ್ಮ ಕೆಲಸಕ್ಕೆ ಯೋಗ್ಯವಾದ ಕೂಲಿಯನ್ನು ಕೊಡುತ್ತೇನೆ’ ಎಂದು ಹೇಳಿದನು. ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು.

“ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು. ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು.

“ಅದಕ್ಕೆ ಅವರು, ‘ನಮಗೆ ಯಾರೂ ಕೆಲಸ ಕೊಡಲಿಲ್ಲ’ ಎಂದು ಉತ್ತರಕೊಟ್ಟರು.

“ಆ ಯಜಮಾನನು, ‘ಹಾಗಾದರೆ ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡಿರಿ’ ಎಂದು ಹೇಳಿದನು.

“ಅಂದು ಸಾಯಂಕಾಲ, ತೋಟದ ಯಜಮಾನನು ಕೆಲಸಗಾರರನ್ನು ನೋಡಿಕೊಳ್ಳುವವನಿಗೆ, ‘ಕೂಲಿಯಾಳುಗಳನ್ನು ಕರೆದು ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದನು.

“ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10 ನಂತರ ಮೊಟ್ಟಮೊದಲು ಗೊತ್ತುಮಾಡಲ್ಪಟ್ಟಿದ್ದವರು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಬೇರೆ ಆಳುಗಳಿಗಿಂತ ತಮಗೆ ಹೆಚ್ಚು ಸಿಕ್ಕುವುದೆಂದು ಅವರು ಆಲೋಚಿಸಿಕೊಂಡಿದ್ದರು. ಆದರೆ ಅವರಿಗೂ ಸಹ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 11 ಅವರು ತಮ್ಮ ಬೆಳ್ಳಿನಾಣ್ಯವನ್ನು ತೆಗೆದುಕೊಂಡಾಗ ತೋಟದ ಯಜಮಾನನ ಬಗ್ಗೆ ಗೊಣಗುಟ್ಟುತ್ತಾ, 12 ‘ಕೊನೆಗೆ ಗೊತ್ತುಮಾಡಲ್ಪಟ್ಟ ಆಳುಗಳು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಇವನು ಅವರಿಗೂ ನಮ್ಮಷ್ಟೇ ಕೊಟ್ಟಿದ್ದಾನೆ. ನಾವಾದರೋ ದಿನವೆಲ್ಲಾ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ’ ಎಂದರು.

13 “ತೋಟದ ಯಜಮಾನನು ಆ ಆಳುಗಳಲ್ಲಿ ಒಬ್ಬನಿಗೆ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ಒಂದು ಬೆಳ್ಳಿನಾಣ್ಯಕ್ಕಾಗಿ ಕೆಲಸ ಮಾಡಲು ಒಪ್ಪಿಕೊಂಡೆಯಲ್ಲವೇ? 14 ಆದ್ದರಿಂದ ನೀನು ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು. ನಾನು ನಿನಗೆ ಎಷ್ಟು ಕೂಲಿ ಕೊಟ್ಟೆನೋ ಅಷ್ಟೇ ಕೂಲಿಯನ್ನು ಕೊನೆಗೆ ಗೊತ್ತುಮಾಡಲ್ಪಟ್ಟವನಿಗೂ ಕೊಡಲು ಇಷ್ಟಪಡುತ್ತೇನೆ. 15 ನನ್ನ ಸ್ವಂತ ಹಣವನ್ನು ನನಗೆ ಇಷ್ಟಬಂದ ಹಾಗೆ ನಾನು ಕೊಡಬಹುದಲ್ಲವೇ? ನಾನು ಅವರಿಗೆ ಒಳ್ಳೆಯದನ್ನು ಮಾಡಿದ್ದಕ್ಕಾಗಿ ನೀನು ಹೊಟ್ಟೆಕಿಚ್ಚುಪಡುವೆಯಾ?’ ಎಂದನು.

16 “ಇದೇಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.”

ತನ್ನ ಮರಣದ ಬಗ್ಗೆ ಯೇಸುವಿನ ಮೂರನೆ ಪ್ರಕಟನೆ

(ಮಾರ್ಕ 10:32-34; ಲೂಕ 18:31-34)

17 ಯೇಸು ಜೆರುಸಲೇಮಿಗೆ ಹೋಗುತ್ತಿದ್ದನು. ಆತನ ಹನ್ನೆರಡು ಮಂದಿ ಶಿಷ್ಯರೂ ಆತನೊಂದಿಗೆ ಇದ್ದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದು, 18 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೆ ಮತ್ತು ಧರ್ಮೋಪದೇಶಕರಿಗೆ ಒಪ್ಪಿಸಿಕೊಡಲಾಗುವುದು. ಅವರು ಆತನನ್ನು ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು. 19 ಅವರು ಮನುಷ್ಯಕುಮಾರನನ್ನು ಅಪಹಾಸ್ಯ ಮಾಡಿ, ಕೊರಡೆಗಳಿಂದ ಹೊಡೆದು, ಶಿಲುಬೆಗೇರಿಸುವರು. ಆದರೆ ಆತನು ಮರಣ ಹೊಂದಿದ ನಂತರ ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುವನು” ಎಂದು ಹೇಳಿದನು.

ತಾಯಿಯೊಬ್ಬಳ ವಿಶೇಷ ಕೋರಿಕೆ

(ಮಾರ್ಕ 10:35-45)

20 ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು.

21 ಯೇಸು, “ನಿನ್ನ ಕೋರಿಕೆ ಏನು?” ಎಂದನು.

ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು.

22 ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು.

ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.

23 ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು.

24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು. 25 ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. 26 ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು. 27 ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು. 28 ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.

ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ

(ಮಾರ್ಕ 10:46-52; ಲೂಕ 18:35-43)

29 ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.

31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.

32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.

33 ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.

34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International