Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 33-34

ಇಸ್ರೇಲರಿಗೆ ಮೋಶೆಯ ಆಶೀರ್ವಾದ

33 ದೇವರ ಮನುಷ್ಯನಾದ ಮೋಶೆಯು ತಾನು ಸಾಯುವ ಮೊದಲು ಇಸ್ರೇಲರನ್ನು ಆಶೀರ್ವದಿಸಿದನು. ಮೋಶೆಯು ಹೇಳಿದ್ದೇನೆಂದರೆ:

“ಸೇಯೀರ್‌ನಲ್ಲಿ ಮುಂಜಾನೆಯ ಬೆಳಕು ಪ್ರಕಾಶಿಸುವಂತೆ
    ಪಾರಾನ್ ಬೆಟ್ಟಗಳ ಮೇಲಿನಿಂದ ಬೆಳಕು ಪ್ರಕಾಶಿಸುವಂತೆ
    ಯೆಹೋವನು ಸೀನಾಯಿ ಬೆಟ್ಟದಿಂದ ಬಂದನು.
ಆತನು ಹತ್ತು ಸಾವಿರ ಪರಿಶುದ್ಧರೊಂದಿಗೆ ಬಂದನು.
    ಆತನ ಬಲಶಾಲಿಗಳಾದ ಸೈನಿಕರು ಆತನೊಂದಿಗಿದ್ದರು.
ಹೌದು, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ.
    ಪವಿತ್ರ ಜನರೆಲ್ಲರೂ ಆತನ ಕೈಗಳಲ್ಲಿರುವರು.
ಆತನ ಕಾಲ ಬಳಿಯಲ್ಲಿ ಕುಳಿತುಕೊಂಡು
    ಬೋಧನೆಯನ್ನು ಕೇಳುವರು.
ಮೋಶೆಯು ಧರ್ಮಶಾಸ್ತ್ರವನ್ನು
    ಯಾಕೋಬನ ವಂಶದವರಿಗೆ ಕೊಟ್ಟನು.
ಆಗ ಇಸ್ರೇಲಿನ ಜನರು ತಮ್ಮ ನಾಯಕರೊಂದಿಗೆ ಒಟ್ಟಾಗಿ ಸೇರಿದರು.
    ಯೆಹೋವನು ತಾನೇ ಯೆಶುರೂನಿನಲ್ಲಿ[a] ಅರಸನಾದನು.

ರೂಬೇನನಿಗೆ ಆಶೀರ್ವಾದ

“ರೂಬೇನನು ನಾಶವಾಗದೆ ಉಳಿಯಲಿ,
    ಆದರೆ ಅವನ ಕುಲದವರಲ್ಲಿ ಕೆಲವೇ ಮಂದಿ ಇರುವರು.”

ಯೆಹೂದನಿಗೆ ಆಶೀರ್ವಾದ

ಯೆಹೂದನ ವಿಷಯವಾಗಿ ಮೋಶೆ ಹೇಳಿದ ಮಾತುಗಳು:

“ಯೆಹೋವನೇ, ಯೆಹೂದದ ನಾಯಕನು ಸಹಾಯಕ್ಕಾಗಿ ಮೊರೆಯಿಡುವಾಗ ಅದನ್ನು ಆಲಿಸಿ
    ಅವನ ಜನರ ಬಳಿಗೆ ಕರೆದುಕೊಂಡು ಬಂದು ಅವರೊಂದಿಗೆ ಸೇರಿಸು.
ಅವನನ್ನು ಬಲಗೊಳಿಸಿ
    ಶತ್ರುಗಳೊಂದಿಗೆ ಯುದ್ಧಮಾಡಲು ಸಹಾಯಿಸು.”

ಲೇವಿಯರಿಗೆ ಆಶೀರ್ವಾದ

ಲೇವಿಯ ವಿಷಯವಾಗಿ ಮೋಶೆ ಹೇಳಿದ ಮಾತುಗಳು:

“ಲೇವಿಯು ನಿನ್ನ ನಿಜವಾದ ಹಿಂಬಾಲಕ.
    ಅವನು ಊರೀಮ್‌ತುಮ್ಮೀಮ್ ಇಟ್ಟುಕೊಂಡಿರುವನು.
ಮಸ್ಸಾದಲ್ಲಿ ಲೇವಿಯರನ್ನು ನೀನು ಪರೀಕ್ಷಿಸಿದೆ.
    ಮೆರೀಬ ಬುಗ್ಗೆಯ ಬಳಿ ಅವರು ನಿನ್ನವರೆಂದು ನಿನಗೆ ಖಚಿತವಾಯಿತು.
ಯೆಹೋವನೇ, ಅವರು ನಿನಗಾಗಿ ಚಿಂತಿಸಿದರು; ಸ್ವಂತ ಸಂಸಾರಕ್ಕಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದರು;
    ಅವರು ನಿನಗಾಗಿ ತಮ್ಮ ತಂದೆತಾಯಿಗಳನ್ನು ನಿರ್ಲಕ್ಷಿಸಿದರು;
ಒಡಹುಟ್ಟಿದವರನ್ನೂ ಗುರುತಿಸಲಿಲ್ಲ.
    ಅವರು ತಮ್ಮ ಮಕ್ಕಳಿಗೆ ಪ್ರಾಮುಖ್ಯತೆಯನ್ನು ಕೊಡಲಿಲ್ಲ;
ಅವರು ನಿನ್ನ ಕಟ್ಟಳೆಗಳನ್ನು ಅನುಸರಿಸಿ
    ಒಡಂಬಡಿಕೆಯನ್ನು ಕಾಪಾಡಿದರು.
10 ಅವರು ಯಾಕೋಬ ವಂಶದವರಿಗೆ ನಿನ್ನ ವಿಧಿನಿಯಮಗಳನ್ನು ಕಲಿಸುವರು;
    ನಿನ್ನ ಕಟ್ಟಳೆಗಳನ್ನು ಇಸ್ರೇಲರಿಗೆ ಬೋಧಿಸುವರು.
ಅವರು ನಿನ್ನ ಸನ್ನಿಧಾನದಲ್ಲಿ ಧೂಪಹಾಕುವರು.
    ಬಲಿಪೀಠದಲ್ಲಿ ನಿನಗೆ ಯಜ್ಞಾರ್ಪಣೆ ಮಾಡುವರು.

11 “ಯೆಹೋವನೇ, ಲೇವಿಯರಿಗೆ ಇರುವಂಥದನ್ನು ಆಶೀರ್ವದಿಸು;
    ಅವರು ಮಾಡಿದ್ದೆಲ್ಲಾ ನಿನಗೆ ಮೆಚ್ಚಿಕೆಯಾಗಲಿ.
ಅವರ ಮೇಲೆ ಬೀಳುವವರನ್ನು ನಾಶಮಾಡು,
    ಅವರ ವೈರಿಗಳನ್ನು ಸೋಲಿಸು; ಅವರು ಮತ್ತೆ ಲೇವಿಯರ ಮೇಲೆ ಬೀಳದಂತೆ ಮಾಡು.”

ಬೆನ್ಯಾಮೀನನಿಗೆ ಆಶೀರ್ವಾದ

12 ಬೆನ್ಯಾಮೀನನ ವಿಷಯವಾಗಿ ಮೋಶೆಯು ಹೇಳಿದ್ದೇನೆಂದರೆ:

“ಯೆಹೋವನು ಬೆನ್ಯಾಮೀನನನ್ನು ಪ್ರೀತಿಸುತ್ತಾನೆ.
    ಬೆನ್ಯಾಮೀನನು ಆತನ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುತ್ತಾನೆ.
ಯೆಹೋವನು ಅವನನ್ನು ಯಾವಾಗಲೂ ಸಂರಕ್ಷಿಸುತ್ತಾನೆ.
    ಅವನ ಪ್ರಾಂತ್ಯದಲ್ಲಿ ಯೆಹೋವನು ವಾಸಿಸುವನು.”

ಯೋಸೇಫನಿಗೆ ಆಶೀರ್ವಾದ

13 ಯೋಸೇಫನ ಪ್ರಾಂತ್ಯವನ್ನು ಯೆಹೋವನು ಆಶೀರ್ವದಿಸಲಿ:
    “ಯೆಹೋವನೇ, ಅವರಿಗೆ ಆಕಾಶದಿಂದ ಮಳೆ ಸುರಿಸು,
    ನೆಲದಿಂದ ಬುಗ್ಗೆಯು ಹೊರಬರಲಿ;
14 ಸೂರ್ಯನು ಅವರಿಗೆ ಒಳ್ಳೆಯ ಫಲಗಳನ್ನು ಕೊಡಲಿ;
    ಪ್ರತಿ ತಿಂಗಳು ಒಳ್ಳೆಯ ಫಲಗಳನ್ನು ಕೊಡಲಿ.
15 ಬೆಟ್ಟಗುಡ್ಡಗಳು ಉತ್ತಮವಾದ ಫಲಗಳನ್ನು ಫಲಿಸಲಿ.
16 ಭೂಮಿಯು ಒಳ್ಳೆಯದನ್ನು ಯೋಸೇಫನಿಗೆ ಕೊಡಲಿ.
    ಯೋಸೇಫನು ತನ್ನ ಸಹೋದರರಿಂದ ಬೇರ್ಪಡಿಸಿಕೊಂಡಿರುವನು.
    ಆದ್ದರಿಂದ ಉರಿಯುವ ಪೊದೆಯಲ್ಲಿರುವ ಯೆಹೋವನು ಉತ್ತಮವಾದವುಗಳನ್ನು ಯೋಸೇಫನಿಗೆ ಕೊಡಲಿ.
17 ಯೋಸೇಫನು ಬಲಶಾಲಿಯಾದ ಗೂಳಿಯಂತಿದ್ದಾನೆ.
    ಅವನ ಇಬ್ಬರು ಮಕ್ಕಳು ಗೂಳಿಯ ಕೊಂಬುಗಳಂತೆ ಬೇರೆಯವರನ್ನು ದೂಡಿ ಲೋಕದ ಅಂಚಿಗೆ ತಳ್ಳಿಬಿಡುತ್ತಾರೆ.
ಮನಸ್ಸೆಯೊಂದಿಗೆ ಸಾವಿರಗಟ್ಟಲೆ ಜನರಿದ್ದಾರೆ.
    ಎಫ್ರಾಯೀಮನೊಂದಿಗೆ ಹತ್ತು ಸಾವಿರಗಟ್ಟಲೆ ಜನರಿದ್ದಾರೆ.”

ಜೆಬುಲೂನನಿಗೆ ಮತ್ತು ಇಸ್ಸಾಕಾರನಿಗೆ ಆಶೀರ್ವಾದಗಳು

18 ಮೋಶೆಯು ಜೆಬುಲೂನ್ ವಿಷಯವಾಗಿ ಹೇಳಿದ್ದೇನೆಂದರೆ:

“ಜೆಬುಲೂನನೇ, ನೀನು ಹೊರಗೆ ಹೋಗುವಾಗ ಸಂತೋಷವಾಗಿರು.
    ಇಸ್ಸಾಕಾರನೇ, ನೀನು ನಿನ್ನ ಗುಡಾರದೊಳಗಿರುವಾಗ ಸಂತೋಷದಿಂದಿರು.
19 ಅವರು ತಮ್ಮ ಪರ್ವತಗಳಿಗೆ ಜನರನ್ನು ಕರೆಯುವರು.
    ಅಲ್ಲಿ ಅವರು ಉತ್ತಮ ಯಜ್ಞವನ್ನು ಅರ್ಪಿಸುವರು.
ಸಮುದ್ರದಿಂದ ಐಶ್ವರ್ಯವನ್ನು ತೆಗೆಯುವರು.
    ಸಮುದ್ರ ದಡದಿಂದ ನಿಕ್ಷೇಪವನ್ನೆತ್ತುವರು.”

ಗಾದನಿಗೆ ಆಶೀರ್ವಾದಗಳು

20 ಗಾದನಿಗೆ ಮೋಶೆಯು ಹೇಳಿದ್ದೇನೆಂದರೆ:

“ಗಾದನಿಗೆ ವಿಸ್ತಾರವಾದ ಪ್ರಾಂತ್ಯವನ್ನು ಕೊಟ್ಟ ದೇವರಿಗೆ ಸ್ತೋತ್ರ.
    ಗಾದನು ಸಿಂಹದಂತಿರುವನು; ಹೊಂಚುಹಾಕುತ್ತಾ ಕಾಯುತ್ತಾ ಇರುವನು.
    ಫಕ್ಕನೆ ಪ್ರಾಣಿಯ ಮೇಲೆ ಹಾರಿ ಅದನ್ನು ಸೀಳಿಬಿಡುವನು.
21 ಅದರ ಒಳ್ಳೆಯ ಭಾಗವನ್ನು ತನಗೆ ಆರಿಸಿಕೊಳ್ಳುವನು.
    ರಾಜನ ಭಾಗವನ್ನು ತಾನಿಟ್ಟುಕೊಳ್ಳುವನು.
ಜನರ ನಾಯಕರು ಆತನ ಬಳಿಗೆ ಬರುವರು.
    ಯೆಹೋವನು ಒಳ್ಳೆಯದೆಂದು ಹೇಳುವ ಕಾರ್ಯಗಳನ್ನು ಮಾಡುವನು.
    ಇಸ್ರೇಲ್ ಜನರಿಗೆ ಸರಿಯಾದ ಕಾರ್ಯವನ್ನೇ ಮಾಡುವನು.”

ದಾನನಿಗೆ ಆಶೀರ್ವಾದಗಳು

22 ಮೋಶೆಯು ದಾನನ ವಿಷಯವಾಗಿ ಹೀಗೆ ಹೇಳಿದನು:

“ದಾನನು ಪ್ರಾಯದಸಿಂಹದ ಮರಿ;
    ಅವನು ಬಾಷಾನಿನಿಂದ ನೆಗೆಯುವನು.”

ನಫ್ತಾಲಿಗೆ ಆಶೀರ್ವಾದಗಳು

23 ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ ಮಾತುಗಳು:

“ನಫ್ತಾಲಿಯೇ, ನಿನಗೆ ಉತ್ತಮವಾದ ವಸ್ತುಗಳು ಅಧಿಕವಾಗಿ ದೊರೆಯುತ್ತವೆ.
    ಯೆಹೋವನು ನಿನ್ನನ್ನು ನಿಜವಾಗಿಯೂ ಆಶೀರ್ವದಿಸುವನು.
    ಗಲಿಲಾಯದ ಬಳಿಯಲ್ಲಿರುವ ಪ್ರಾಂತ್ಯವು ನಿನಗೆ ದೊರಕುವದು.”

ಆಶೇರನಿಗೆ ಆಶೀರ್ವಾದ

24 ಆಶೇರನ ವಿಷಯವಾಗಿ ಮೋಶೆಯ ಮಾತುಗಳು:

“ಮಕ್ಕಳಲ್ಲಿ, ಆಶೇರನೇ ಹೆಚ್ಚಾಗಿ ಆಶೀರ್ವದಿಸಲ್ಪಟ್ಟವನು.
    ಅವನ ಅಣ್ಣತಮ್ಮಂದಿರೊಳಗೆ ಅವನೇ ಅಚ್ಚುಮೆಚ್ಚಿನವನಾಗಲಿ.
    ಎಣ್ಣೆಯಲ್ಲಿ ಅವನು ತನ್ನ ಕಾಲುಗಳನ್ನು ತೊಳೆಯಲಿ.
25 ನಿನ್ನ ಬಾಗಿಲುಗಳಲ್ಲಿ ಬೀಗವಿರುವುದು. ಅವು ಕಬ್ಬಿಣದಿಂದಲೂ ಹಿತ್ತಾಳೆಯಿಂದಲೂ ಮಾಡಲ್ಪಟ್ಟಿವೆ.
    ನಿನ್ನ ಜೀವಮಾನ ಕಾಲವೆಲ್ಲಾ ನೀನು ಬಲಶಾಲಿಯಾಗಿರುವೆ.”

ಮೋಶೆಯು ದೇವರನ್ನು ಸ್ತುತಿಸುವುದು

26 “ಯೆಶುರೂನೇ, ನಮ್ಮ ದೇವರ ಹಾಗೆ ಬೇರೆ ದೇವರುಗಳಿಲ್ಲ.
    ಆತನು ಮೋಡಗಳ ಮೇಲೆ ಮಹಿಮಾರೂಢನಾಗಿ ಸವಾರಿ ಮಾಡುತ್ತಾ
    ಆಕಾಶದಿಂದ ನಿಮ್ಮ ಸಹಾಯಕ್ಕೆ ಬರುವನು.
27 ಆತನು ನಿರಂತರಕ್ಕೂ ಜೀವಿಸುವವನಾಗಿದ್ದಾನೆ.
    ಆತನೇ ನಿಮ್ಮ ಆಶ್ರಯಸ್ಥಾನ.
ಆತನ ಸಾಮರ್ಥ್ಯ ಸದಾಕಾಲವಿರುವುದು.
    ಆತನು ನಿಮ್ಮನ್ನು ಸಂರಕ್ಷಿಸಿ ಕಾಪಾಡುವನು;
ನಿಮ್ಮ ದೇಶವನ್ನು ಬಿಟ್ಟುಹೋಗಲು ಜನರನ್ನು ದೂಡುವನು;
    ‘ವೈರಿಗಳನ್ನು ನಾಶಮಾಡಿರಿ’ ಎಂದು ಹೇಳುವನು.
28 ಇಸ್ರೇಲ್ ಸುರಕ್ಷಿತವಾಗಿ ಜೀವಿಸುವುದು.
    ಯಾಕೋಬನ ಬಾವಿ ಅವರ ವಶದಲ್ಲಿದೆ.
ಧಾನ್ಯದ ಮತ್ತು ದ್ರಾಕ್ಷಾರಸದ ದೇಶವು ಅವರಿಗೆ ದೊರಕುತ್ತದೆ.
    ಆ ದೇಶಕ್ಕೆ ಅಧಿಕವಾಗಿ ಮಳೆ ಸುರಿಯುವುದು.
29 ಇಸ್ರೇಲೇ, ನೀವು ಆಶೀರ್ವದಿಸಲ್ಪಟ್ಟವರು.
    ನಿಮ್ಮ ದೇಶದ ಹಾಗೆ ಯಾವ ದೇಶವೂ ಇರದು.
ಯೆಹೋವನು ನಿಮ್ಮನ್ನು ರಕ್ಷಿಸಿದನು.
    ಆತನು ನಿಮ್ಮನ್ನು ಕಾಪಾಡುವ ಬಲವಾದ ಗುರಾಣಿ.
    ಆತನು ನಿಮಗೆ ಶಕ್ತಿಯುತವಾದ ಖಡ್ಗ.
ವೈರಿಗಳು ನಿಮಗೆ ಭಯಪಡುವರು.
    ನೀವು ಅವರ ಪವಿತ್ರ ಸ್ಥಳವನ್ನು ತುಳಿದುಬಿಡುವಿರಿ!”

ಮೋಶೆಯ ಮರಣ

34 ಮೋಶೆಯು ನೆಬೋ ಬೆಟ್ಟವನ್ನು ಹತ್ತಿದನು. ಅವನು ಮೋವಾಬಿನ ಜೋರ್ಡನ್ ಕಣಿವೆಯಿಂದ ಪಿಸ್ಗಾ ಬೆಟ್ಟದ ಮೇಲಕ್ಕೆ ಬಂದನು. ಇದು ಜೋರ್ಡನ್ ನದಿಯ ಆಚೆಕಡೆಯಲ್ಲಿರುವ ಜೆರಿಕೊ ಊರಿನ ಎದುರಿನಲ್ಲಿದೆ. ಯೆಹೋವನು ಮೋಶೆಗೆ ಗಿಲ್ಯಾದಿನಿಂದ ದಾನ್‌ವರೆಗಿದ್ದ ಎಲ್ಲಾ ಪ್ರದೇಶವನ್ನು ತೋರಿಸಿದನು. ಮೋಶೆಗೆ ಯೆಹೋವನು ನಫ್ತಾಲಿ, ಎಫ್ರಾಯೀಮ್, ಮನಸ್ಸೆ ಪ್ರಾಂತ್ಯಗಳನ್ನು ತೋರಿಸಿದನು. ಯೆಹೂದ ಪ್ರಾಂತ್ಯವನ್ನು ಮೆಡಿಟರೇನಿಯನ್ ಸಮುದ್ರದವರೆಗೂ ತೋರಿಸಿದನು. ಯೆಹೋವನು ಮೋಶೆಗೆ ನೆಗೆವ್ ಮತ್ತು ಚೋಗರೂರಿನಿಂದ ಖರ್ಜೂರದ ಮರಗಳ ಪಟ್ಟಣವಾದ ಜೆರಿಕೊ ಪಟ್ಟಣದವರೆಗಿರುವ ಕಣಿವೆಯನ್ನು ತೋರಿಸಿದನು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಈ ದೇಶವನ್ನು ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ವಾಗ್ದಾನ ಮಾಡಿದ್ದೇನೆ. ನಿಮ್ಮ ಸಂತತಿಯವರಿಗೆ ನಾನು ಈ ದೇಶವನ್ನು ಕೊಡುವೆನು ಎಂದು ಹೇಳಿದ್ದೆನು. ಆ ದೇಶವನ್ನು ನೀನು ನೋಡುವಂತೆ ಮಾಡಿದೆನು. ಆದರೆ ನೀನು ಅದರೊಳಗೆ ಪ್ರವೇಶಿಸುವುದಿಲ್ಲ.”

ಮೋವಾಬ್ ದೇಶದಲ್ಲಿ ಯೆಹೋವನ ಸೇವಕನಾದ ಮೋಶೆಯು ಸತ್ತುಹೋದನು. ಯೆಹೋವನು ಅವನಿಗೆ ಹಾಗೆ ಆಗುತ್ತದೆಂದು ಮುಂಚೆಯೇ ತಿಳಿಸಿದ್ದನು. ಯೆಹೋವನು ಮೋಶೆಯನ್ನು ಮೋವಾಬ್‌ನಲ್ಲಿ ಹೂಳಿಟ್ಟನು. ಇದು ಬೇತ್ಪೆಗೋರ್ ತಗ್ಗಿಗೆ ಎದುರಾಗಿದೆ. ಆದರೆ ಮೋಶೆಯನ್ನು ಸಮಾಧಿಮಾಡಿದ ಸ್ಥಳವು ಇದುವರೆಗೆ ಯಾರಿಗೂ ಗೊತ್ತಾಗಲಿಲ್ಲ. ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನು ಸಾಯುವ ತನಕ ಬಲಶಾಲಿಯಾಗಿಯೇ ಇದ್ದನು. ಅವನ ಕಣ್ಣು ಮೊಬ್ಬಾಗಿರಲಿಲ್ಲ. ಇಸ್ರೇಲರು ಮೋಶೆಗಾಗಿ ಮೂವತ್ತು ದಿವಸಗಳ ತನಕ ಗೋಳಾಡಿದರು. ಶೋಕದ ದಿವಸಗಳು ಕಳೆಯುವ ತನಕ ಅವರು ಮೋವಾಬಿನಲ್ಲಿದ್ದ ಜೋರ್ಡನ್ ಕಣಿವೆಯಲ್ಲಿ ತಂಗಿದ್ದರು.

ಯೆಹೋಶುವನು ಇಸ್ರೇಲರ ಹೊಸ ನಾಯಕ

ಮೋಶೆಯು ಯೆಹೋಶುವನ ಮೇಲೆ ತನ್ನ ಕೈಗಳನ್ನಿಟ್ಟು ಅವನನ್ನು ನಾಯಕನನ್ನಾಗಿ ನೇಮಿಸಿದನು. ಆಗ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮನಿಂದ ತುಂಬಲ್ಪಟ್ಟವನಾದನು. ಇಸ್ರೇಲಿನ ಜನರು ಯೆಹೋಶುವನಿಗೆ ವಿಧೇಯರಾದರು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರೇಲರು ಮಾಡಿದರು.

10 ಮೋಶೆಯಂತ ಪ್ರವಾದಿಯು ಇಸ್ರೇಲರಿಗೆ ದೊರೆಯಲೇ ಇಲ್ಲ. ಯೆಹೋವನು ಅವನೊಂದಿಗೆ ಮುಖಾಮುಖಿಯಾಗಿ ಮಾತನಾಡಿದನು. 11 ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡುವುದಕ್ಕಾಗಿ ಯೆಹೋವನು ಮೋಶೆಯನ್ನು ಕಳುಹಿಸಿದನು. ಅದನ್ನು ಫರೋಹನೂ ಅವನ ಪರಿವಾರದವರೂ ಅಧಿಕಾರಿಗಳೆಲ್ಲರೂ ನೋಡಿದರು. 12 ಯಾವ ಪ್ರವಾದಿಯೂ ಮೋಶೆ ಮಾಡಿದ ಸೂಚಕಕಾರ್ಯಗಳನ್ನು ಮಾಡಲಿಲ್ಲ. ಇಸ್ರೇಲಿನ ಎಲ್ಲಾ ಜನರು ಮೋಶೆ ಮಾಡಿದ್ದನ್ನು ನೋಡಿದ್ದರು.

ಕೀರ್ತನೆಗಳು 119:145-176

145 ಯೆಹೋವನೇ, ಪೂರ್ಣಹೃದಯದಿಂದ ನಿನಗೆ ಮೊರೆಯಿಟ್ಟಿದ್ದೇನೆ;
    ಸದುತ್ತರವನ್ನು ದಯಪಾಲಿಸು.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
146 ನಾನು ನಿನಗೇ ಮೊರೆಯಿಟ್ಟಿದ್ದೇನೆ.
    ನನ್ನನ್ನು ರಕ್ಷಿಸು! ನಿನ್ನ ಕಟ್ಟಳೆಗಳಿಗೆ ವಿಧೇಯನಾಗುತ್ತೇನೆ.
147 ಸೂರ್ಯೋದಯದಲ್ಲಿ ಎದ್ದು ನಿನಗೆ ಮೊರೆಯಿಟ್ಟೆನು.
    ನಿನ್ನ ವಾಕ್ಯದಲ್ಲಿ ಭರವಸವಿಟ್ಟಿದ್ದೇನೆ.
148 ನಿನ್ನ ವಾಕ್ಯವನ್ನು ಧ್ಯಾನಿಸುವುದಕ್ಕಾಗಿ
    ರಾತ್ರಿಯಲ್ಲಿ ಬಹು ಹೊತ್ತಿನವರೆಗೆ ಎಚ್ಚರವಾಗಿದ್ದೆನು.
149 ಯೆಹೋವನೇ, ನಿನ್ನ ಪೂರ್ಣ ಪ್ರೀತಿಯಿಂದ ನನಗೆ ಕಿವಿಗೊಡು.
    ನಿನ್ನ ನಿಯಮಗಳಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
150 ಜನರು ನನಗೆ ವಿರೋಧವಾಗಿ ಸಂಚುಗಳನ್ನು ಮಾಡುತ್ತಿದ್ದಾರೆ.
    ಅವರು ನಿನ್ನ ಉಪದೇಶಗಳನ್ನು ಅನುಸರಿಸುವುದಿಲ್ಲ.
151 ಯೆಹೋವನೇ, ನೀನು ನನಗೆ ಸಮೀಪವಾಗಿರುವೆ.
    ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
152 ನಿನ್ನ ಉಪದೇಶಗಳು ಶಾಶ್ವತವಾಗಿವೆ.
    ಅದನ್ನು ನಾನು ಬಹುಕಾಲದ ಹಿಂದೆಯೇ ನಿನ್ನ ಒಡಂಬಡಿಕೆಯ ಮೂಲಕ ಕಲಿತುಕೊಂಡೆ.

153 ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸು.
    ನಾನು ನಿನ್ನ ಉಪದೇಶಗಳನ್ನು ಮರೆತಿಲ್ಲ.
154 ವ್ಯಾಜ್ಯದಲ್ಲಿ ನನ್ನ ಪರವಾಗಿ ಹೋರಾಡಿ ನನ್ನನ್ನು ರಕ್ಷಿಸು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
155 ದುಷ್ಟರು ನಿನ್ನ ಕಟ್ಟಳೆಗಳನ್ನು ಅನುಸರಿಸದ ಕಾರಣ
    ಅವರಿಗೆ ಜಯವಾಗುವುದಿಲ್ಲ.
156 ಯೆಹೋವನೇ, ನೀನು ಎಷ್ಟೋ ಕರುಣೆಯುಳ್ಳವನು.
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ಉಜ್ಜೀವನಗೊಳಿಸು.
157 ಅನೇಕ ವೈರಿಗಳು ನನಗೆ ಕೇಡುಮಾಡಬೇಕೆಂದಿದ್ದಾರೆ.
    ನಾನಾದರೋ ನಿನ್ನ ಕಟ್ಟಳೆಗಳನ್ನು ಅನುಸರಿಸುತ್ತಲೇ ಇದ್ದೇನೆ.
158 ನಿನ್ನ ವಾಕ್ಯಕ್ಕೆ ವಿಧೇಯರಾಗದ ಆ ದ್ರೋಹಿಗಳನ್ನು ನೋಡಿದರೆ
    ನನಗೆ ಅಸಹ್ಯವಾಗುತ್ತದೆ.
159 ಯೆಹೋವನೇ, ನಿನ್ನ ನಿಯಮಗಳಿಗೆ ಆಸಕ್ತಿಯಿಂದ ವಿಧೇಯನಾಗಿದ್ದೇನೆ.
    ನಿನ್ನ ಶಾಶ್ವತ ಪ್ರೀತಿಗನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
160 ನಿನ್ನ ವಾಕ್ಯಗಳೆಲ್ಲಾ ಸತ್ಯವಾಗಿವೆ.
    ನಿನ್ನ ನೀತಿಯ ಕಟ್ಟಳೆಗಳು ಶಾಶ್ವತವಾಗಿವೆ.

161 ಅಧಿಪತಿಗಳು ನಿಷ್ಕಾರಣವಾಗಿ ನನ್ನ ಮೇಲೆ ಆಕ್ರಮಣ ಮಾಡಿದರು.
    ನಾನಾದರೋ ನಿನ್ನ ಧರ್ಮಶಾಸ್ತ್ರವೊಂದಕ್ಕೇ ಭಯಪಡುವೆನು, ಅದೊಂದನ್ನೇ ಗೌರವಿಸುವೆನು.
162 ಮಹಾಭಂಡಾರವನ್ನು ಕಂಡುಕೊಂಡವನಂತೆ
    ನಾನು ನಿನ್ನ ವಾಕ್ಯದಲ್ಲಿ ಸಂತೋಷಿಸುವೆನು.
163 ನಾನು ಸುಳ್ಳುಗಳನ್ನು ದ್ವೇಷಿಸುವೆನು!
    ಅವು ನನಗೆ ಅಸಹ್ಯವಾಗಿವೆ.
    ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ.
164 ನಿನ್ನ ನೀತಿಯ ವಿಧಿನಿಯಮಗಳಿಗಾಗಿ
    ನಾನು ದಿನಕ್ಕೆ ಏಳು ಸಲ ನಿನ್ನನ್ನು ಕೊಂಡಾಡುವೆನು.
165 ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುವುದು.
    ಅವರನ್ನು ಯಾವುದೂ ಬೀಳಿಸಲಾರದು.
166 ಯೆಹೋವನೇ, ನಿನ್ನ ರಕ್ಷಣೆಗಾಗಿ ಕಾಯ್ದುಕೊಂಡಿದ್ದೇನೆ.
    ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ.
167 ನಾನು ನಿನ್ನ ಕಟ್ಟಳೆಗಳನ್ನು ಅನುಸರಿಸಿದೆನು.
    ಅವು ನನಗೆ ಬಹು ಪ್ರಿಯವಾಗಿವೆ.
168 ನಾನು ನಿನ್ನ ಒಡಂಬಡಿಕೆಗೂ ನಿನ್ನ ನಿಯಮಗಳಿಗೂ ವಿಧೇಯನಾಗಿದ್ದೇನೆ.
    ನನ್ನ ನಡತೆಯೆಲ್ಲಾ ನಿನಗೆ ಗೊತ್ತಿದೆ.

169 ಯೆಹೋವನೇ, ನನ್ನ ಕೂಗಿಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಜ್ಞಾನಿಯನ್ನಾಗಿ ಮಾಡು.
170 ನನ್ನ ಪ್ರಾರ್ಥನೆಗೆ ಕಿವಿಗೊಡು.
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ರಕ್ಷಿಸು.
171 ನೀನು ನಿನ್ನ ಕಟ್ಟಳೆಗಳನ್ನು ನನಗೆ ಕಲಿಸಿಕೊಟ್ಟದ್ದರಿಂದ
    ಸ್ತುತಿಗೀತೆಗಳು ನನ್ನಿಂದ ಹೊರಡುತ್ತವೆ.
172 ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ.
    ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ.
173 ನಾನು ನಿನ್ನ ನಿಯಮಗಳನ್ನು ಅನುಸರಿಸಲು ನಿರ್ಧರಿಸಿರುವುದರಿಂದ
    ಕೈಚಾಚಿ ಸಹಾಯಮಾಡು.
174 ನಿನ್ನಲ್ಲಿ ರಕ್ಷಣೆಗಾಗಿ ಪ್ರಾರ್ಥಿಸುವೆ.
    ನಿನ್ನ ಉಪದೇಶಗಳು ನನ್ನನ್ನು ಸಂತೋಷಗೊಳಿಸುತ್ತವೆ.
175 ನಾನು ಜೀವದಿಂದಿದ್ದು ನಿನ್ನನ್ನು ಕೊಂಡಾಡುವಂತೆ ಮಾಡು.
    ನಿನ್ನ ನಿಯಮಗಳು ನನಗೆ ಸಹಾಯಮಾಡಲಿ.
176 ನಾನು ಕಳೆದುಹೋದ ಕುರಿಯಂತೆ ಅಲೆದಾಡುತ್ತಿದ್ದೇನೆ.
    ನನಗೋಸ್ಕರ ಹುಡುಕುತ್ತಾ ಬಾ.
ನಿನ್ನ ಸೇವಕನಾದ ನಾನು
    ನಿನ್ನ ಆಜ್ಞೆಗಳನ್ನು ಮರೆತುಬಿಟ್ಟಿಲ್ಲ.

ಯೆಶಾಯ 60

ದೇವರ ಆಗಮನ

60 “ಜೆರುಸಲೇಮೇ, ಏಳು, ಪ್ರಕಾಶಿಸು!
    ನಿನ್ನ ಪ್ರಕಾಶವೆಂಬಾತನು ಬರುತ್ತಾನೆ.
ಯೆಹೋವನ ಮಹಿಮೆಯು ನಿನ್ನ ಮೇಲೆ ಪ್ರಕಾಶಿಸುವುದು.
ಕತ್ತಲೆಯು ಈಗ ಭೂಮಿಯನ್ನು ಕವಿದಿದೆ.
    ಜನರು ಕತ್ತಲೆಯಲ್ಲಿದ್ದಾರೆ.
ಆದರೆ ಯೆಹೋವನ ಪ್ರಕಾಶವು ನಿನ್ನ ಮೇಲಿರುವದು.
    ಆತನ ಮಹಿಮೆಯು ನಿನ್ನ ಮೇಲೆ ಬರುವದು.
ಜನಾಂಗಗಳು ನಿನ್ನ ಬೆಳಕಿನ ಕಡೆಗೆ ಬರುವರು.
    ಅರಸರುಗಳು ನಿನ್ನ ಪ್ರಕಾಶಮಾನವಾದ ಬೆಳಕಿನತ್ತ ಬರುವರು.
ನಿನ್ನ ಸುತ್ತಲೂ ನೋಡು.
    ಜನರು ಸುತ್ತಲೂ ನಿನ್ನ ಬಳಿಗೆ ಬಂದು ಸೇರುವದನ್ನು ನೋಡು.
ಅವರು ದೂರ ಪ್ರಾಂತ್ಯದಿಂದ ಬರುವ ನಿನ್ನ ಗಂಡುಮಕ್ಕಳಾಗಿದ್ದಾರೆ.
    ನಿನ್ನ ಕುಮಾರಿಯರು ಅವರೊಂದಿಗೆ ಬರುತ್ತಿದ್ದಾರೆ.

“ಆಗ ನೀನು ನಿನ್ನ ಜನರನ್ನು ನೋಡುವೆ.
    ನಿನ್ನ ಮುಖವು ಸಂತೋಷದಿಂದ ಪ್ರಕಾಶಿಸುವದು.
ಮೊದಲು ನೀನು ಭಯಪಡುವೆ.
    ಆ ಬಳಿಕ ನೀನು ಉತ್ಸಾಹಪಡುವೆ.
ಸಮುದ್ರದಾಚೆ ಇರುವ ಐಶ್ವರ್ಯವು ನಿನ್ನ ಮುಂದೆ ರಾಶಿ ಹಾಕಲ್ಪಡುವದು.
    ಜನಾಂಗಗಳ ನಿಕ್ಷೇಪವು ನಿನಗೆ ದೊರೆಯುವುದು.
ಮಿದ್ಯಾನಿನ ಮತ್ತು ಏಫದ ಒಂಟೆಗಳ ಹಿಂಡು
    ರಾಜ್ಯವನ್ನು ದಾಟುವವು.
ಶೆಬ ರಾಜ್ಯದ ಒಂಟೆಗಳ ಸಾಲು
    ಚಿನ್ನ ಮತ್ತು ಧೂಪವನ್ನು ಹೊತ್ತುಕೊಂಡು ನಿನ್ನ ಬಳಿಗೆ ಬರುವವು.
ಜನರು ಯೆಹೋವನಿಗೆ ಸ್ತೋತ್ರಗಾನ ಹಾಡುವರು.
ಜನರು ಕೇದಾರಿನ ಎಲ್ಲಾ ಕುರಿಗಳನ್ನು ಒಟ್ಟುಗೂಡಿಸಿ ನಿನಗೆ ಕೊಡುವರು.
    ನೆಬಾಯೋತಿನಿಂದ ಟಗರುಗಳನ್ನು ನಿನಗೆ ತರುವರು.
ನೀನು ನಿನ್ನ ವೇದಿಕೆಯ ಮೇಲೆ ಅವುಗಳನ್ನು ಯಜ್ಞಮಾಡುವೆ.
    ಆಗ ನಾನು ಸ್ವೀಕರಿಸುವೆನು.
ನನ್ನ ಸುಂದರವಾದ ಆಲಯವನ್ನು
    ಇನ್ನೂ ಸೌಂದರ್ಯಗೊಳಿಸುವೆನು.
ಜನರನ್ನು ನೋಡು!
    ಆಕಾಶದ ಮೋಡವು ಹಾರಿಹೋಗುವಂತೆ ಅವರು ನಿನ್ನ ಬಳಿಗೆ ತ್ವರಿತವಾಗಿ ಬರುತ್ತಿದ್ದಾರೆ.
    ತಮ್ಮ ಗೂಡುಗಳಿಗೆ ಹಾರುವ ಪಾರಿವಾಳಗಳಂತೆ ಅವರಿರುತ್ತಾರೆ.
ದೂರ ಪ್ರಾಂತ್ಯಗಳು ನನಗಾಗಿ ಕಾದಿವೆ.
    ದೊಡ್ಡ ಸರಕು ಸಾಗಿಸುವ ಹಡಗುಗಳು ಹೊರಡಲು ತಯಾರಾಗಿವೆ.
ಈ ಹಡಗುಗಳು ದೂರ ಪ್ರಾಂತ್ಯದಲ್ಲಿರುವ ನಿನ್ನ ಮಕ್ಕಳನ್ನು ಕರೆತರಲು ತಯಾರಾಗಿವೆ.
    ಅವರು ಬೆಳ್ಳಿಬಂಗಾರಗಳನ್ನು ತಮ್ಮೊಂದಿಗೆ ತಂದು
    ಇಸ್ರೇಲಿನ ಪರಿಶುದ್ಧನಾದ ಯೆಹೋವನನ್ನು ಘನಪಡಿಸುವರು.
ಯೆಹೋವನು ನಿನಗೆ ಆಶ್ಚರ್ಯಕರವಾದ ಸಂಗತಿಗಳನ್ನು ಮಾಡುವನು.
10 ಬೇರೆ ದೇಶದ ಮಕ್ಕಳು ನಿನ್ನ ಗೋಡೆಗಳನ್ನು ಮತ್ತೆ ಕಟ್ಟುವರು.
    ಅವರ ಅರಸರುಗಳು ನಿನ್ನ ಸೇವೆ ಮಾಡುವರು.

“ನಾನು ಕೋಪಗೊಂಡಾಗ ನಿನ್ನನ್ನು ಬಾಧಿಸಿದೆನು.
    ಆದರೆ ಈಗ ನಿನಗೆ ಕರುಣೆ ತೋರುವೆನು.
    ನಿನ್ನನ್ನು ಆದರಿಸುವೆನು.
11 ನಿನ್ನ ದ್ವಾರಗಳು ಯಾವಾಗಲೂ ತೆರೆಯಲ್ಪಡುತ್ತವೆ.
    ಅವು ಹಗಲಲ್ಲಾಗಲಿ ರಾತ್ರಿಯಲ್ಲಾಗಲಿ ಮುಚ್ಚಲ್ಪಡುವದಿಲ್ಲ.
ರಾಜ್ಯಗಳೂ ರಾಜರುಗಳೂ ತಮ್ಮ ಐಶ್ವರ್ಯವನ್ನು ನಿನ್ನ ಬಳಿಗೆ ತರುವರು.
12 ನಿನ್ನ ಸೇವೆಮಾಡದ ಯಾವ ರಾಜ್ಯವಾಗಲಿ ನಾಶಮಾಡಲ್ಪಡುವದು.
    ಹೌದು, ಆ ರಾಜ್ಯಗಳು ಸರ್ವನಾಶವಾಗುವವು.
13 ಲೆಬನೋನಿನ ಎಲ್ಲಾ ಅಮೂಲ್ಯವಸ್ತುಗಳನ್ನು ನಿನಗೆ ಕೊಡಲಾಗುವುದು.
    ಜನರು ದೇವದಾರು ಮರಗಳನ್ನೂ ಇತರ ವಿಶೇಷ ಮರಗಳನ್ನೂ ನಿನಗೆ ತಂದುಕೊಡುವರು.
ಈ ಮರಗಳಿಂದ ತೊಲೆಗಳನ್ನು ಮಾಡಿ
    ನನ್ನ ಪವಿತ್ರ ಆಲಯವನ್ನು ಸೌಂದರ್ಯಗೊಳಿಸುವರು.
ಅದು ನನ್ನ ಸಿಂಹಾಸನದ ಮುಂದಿರುವ ಪಾದಪೀಠದಂತಿರುವದು.
    ಅದಕ್ಕೆ ನಾನು ಹೆಚ್ಚಾದ ಗೌರವ ಕೊಡುವೆನು.
14 ಹಿಂದಿನ ದಿವಸಗಳಲ್ಲಿ ಜನರು ನಿನಗೆ ಹಿಂಸೆ ಕೊಟ್ಟರು.
    ಆ ಜನರು ಈಗ ನಿನ್ನ ಮುಂದೆ ಅಡ್ಡಬೀಳುವರು.
ಗತಿಸಿದ ದಿವಸಗಳಲ್ಲಿ ಜನರು ನಿನ್ನನ್ನು ದ್ವೇಷಿಸಿದರು.
    ಆದರೆ ಈಗ ಅವರು ನಿನ್ನ ಕಾಲಿನ ಮುಂದೆ ಬೀಳುವರು.
ಅವರು ನಿನ್ನನ್ನು ‘ಯೆಹೋವನ ಪಟ್ಟಣ,’ ‘ಇಸ್ರೇಲಿನ ಪರಿಶುದ್ಧನಾದ ಯೆಹೋವನ ಚೀಯೋನ್’ ಎಂದು ಕರೆಯುವರು.

15 “ನೀನು ಮತ್ತೆಂದಿಗೂ ಒಬ್ಬಂಟಿಗಳಾಗಿರುವದಿಲ್ಲ.
    ನೀನು ಮತ್ತೆಂದಿಗೂ ದ್ವೇಷಿಸಲ್ಪಡುವದಿಲ್ಲ.
    ನೀನು ತಿರುಗಿ ಬರಿದಾಗುವುದಿಲ್ಲ.
ನಿನ್ನನ್ನು ಶಾಶ್ವತವಾದ ಮಹೋನ್ನತಳನ್ನಾಗಿ ಮಾಡುವೆನು.
    ನೀನು ನಿತ್ಯಕಾಲಕ್ಕೂ ಸಂತೋಷದಲ್ಲಿರುವೆ.
16 ಜನಾಂಗಗಳು ನಿನಗೆ ಬೇಕಾದದ್ದೆಲ್ಲವನ್ನು ಕೊಡುವರು.
    ಒಂದು ಮಗು ಹೇಗೆ ತಾಯಿಯ ಹಾಲನ್ನು ಕುಡಿಯುವದೋ
ಅದೇ ರೀತಿಯಲ್ಲಿ ಅರಸರುಗಳಿಂದ ನೀನು ಧನವನ್ನು ಕುಡಿಯುವಿ.
    ಆಗ ಯೆಹೋವನಾದ ನಾನೇ ನಿನ್ನನ್ನು ರಕ್ಷಿಸಿದೆನೆಂದು ತಿಳಿದುಕೊಳ್ಳುವಿ.
    ಆಗ ಯಾಕೋಬ್ಯರ ಮಹಾದೇವರು ನಿಮ್ಮನ್ನು ಕಾಪಾಡುವನೆಂದು ತಿಳಿದುಕೊಳ್ಳುವಿರಿ.

17 “ಈಗ ನಿನ್ನಲ್ಲಿ ತಾಮ್ರವಿದೆ.
    ನಾನು ನಿನಗೆ ಬಂಗಾರವನ್ನು ತರುವೆನು.
ಈಗ ನಿನ್ನಲ್ಲಿ ಕಬ್ಬಿಣವಿದೆ.
    ನಾನು ನಿನಗೆ ಬೆಳ್ಳಿಯನ್ನು ತರುವೆನು.
ನಿನ್ನ ಮರವನ್ನು ತಾಮ್ರವನ್ನಾಗಿ ಪರಿವರ್ತಿಸುವೆನು.
    ನಿನ್ನ ಕಲ್ಲುಬಂಡೆಗಳನ್ನು ಕಬ್ಬಿಣವನ್ನಾಗಿ ಮಾಡುವೆನು.
ನಿಮ್ಮ ಶಿಕ್ಷೆಯನ್ನು ಸಮಾಧಾನವನ್ನಾಗಿ ಮಾಡುವೆನು.
ಈಗ ನಿನ್ನನ್ನು ಹಿಂಸಿಸುವ ಜನರು
    ನಿನಗೆ ಸಹಾಯ ಮಾಡುವರು.
18 ಇನ್ನು ಮುಂದೆ ಮತ್ತೆ ಹಿಂಸಾಚಾರದ ವರ್ತಮಾನವು ನಿನ್ನಲ್ಲಿರುವದಿಲ್ಲ.
ಜನರು ಇನ್ನೆಂದಿಗೂ
    ನಿನ್ನ ಮೇಲೆರಗಿ ನಿನ್ನನ್ನು ದೋಚುವದಿಲ್ಲ.
ನಿನ್ನ ಗೋಡೆಗಳಿಗೆ ‘ರಕ್ಷಣೆ’ ಎಂದೂ
    ದ್ವಾರಗಳಿಗೆ ‘ಸ್ತೋತ್ರ’ವೆಂದೂ ಹೆಸರಿಡುವಿ.

19 “ಇನ್ನು ಮುಂದೆ ಹಗಲು ಹೊತ್ತಿನಲ್ಲಿ ಸೂರ್ಯನು ನಿನಗೆ ಬೆಳಕಾಗಿರುವದಿಲ್ಲ;
    ರಾತ್ರಿಕಾಲದಲ್ಲಿ ಚಂದ್ರನ ಪ್ರಕಾಶವು ನಿನಗೆ ಬೆಳಕಾಗಿರುವದಿಲ್ಲ.
ಯಾಕೆಂದರೆ ಯೆಹೋವನೇ ನಿನ್ನ ನಿತ್ಯಕಾಲದ ಬೆಳಕಾಗಿರುವನು.
    ನಿನ್ನ ದೇವರು ನಿನ್ನ ಮಹಿಮೆಯಾಗಿರುವನು.
20 ನಿನ್ನ ಸೂರ್ಯನು ಮತ್ತೆ ಅಸ್ತಮಾನವಾಗುವದಿಲ್ಲ.
    ನಿನ್ನ ಚಂದ್ರನು ಮತ್ತೆಂದಿಗೂ ಕಪ್ಪಾಗುವದಿಲ್ಲ.
ಯಾಕೆಂದರೆ ಯೆಹೋವನು ನಿನ್ನ ನಿರಂತರದ ಬೆಳಕಾಗಿರುವನು.
    ನಿನ್ನ ದುಃಖದ ಕಾಲವು ಅಂತ್ಯವಾಗುವದು.

21 “ನಿನ್ನ ಜನರೆಲ್ಲಾ ನೀತಿಯಲ್ಲಿ ಜೀವಿಸುವರು.
    ಅವರು ಭೂಮಿಗೆ ಶಾಶ್ವತವಾದ ಬಾಧ್ಯಸ್ತರಾಗುವರು.
ಆ ಜನರನ್ನು ನಾನೇ ನಿರ್ಮಿಸಿದೆನು.
    ನಾನು ನನ್ನ ಸ್ವಂತ ಕೈಗಳಿಂದ ನಿರ್ಮಿಸಿದ ಆಶ್ಚರ್ಯಕರವಾದ ಸಸಿಗಳಂತೆ ಅವರಿರುವರು.
22 ಅತ್ಯಂತ ಚಿಕ್ಕ ಕುಟುಂಬವು ದೊಡ್ಡ ಕುಲವಾಗುವದು.
    ಅತ್ಯಂತ ಎಳೆಯ ಕುಟುಂಬವು ಬಲಾಢ್ಯವಾದ ಜನಾಂಗವಾಗುವದು.
ತಕ್ಕ ಕಾಲದಲ್ಲಿ ಯೆಹೋವನಾದ ನಾನು ಬೇಗನೆ ಬರುವೆನು.
    ಇವುಗಳೆಲ್ಲಾ ನೆರವೇರುವಂತೆ ಮಾಡುವೆನು.”

ಮತ್ತಾಯ 8

ಗುಣಮುಖನಾದ ಕುಷ್ಠರೋಗಿ

(ಮಾರ್ಕ 1:40-45; 5:12-16)

ಯೇಸು ಬೆಟ್ಟದಿಂದ ಕೆಳಗೆ ಇಳಿದು ಬಂದನು. ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದನು. ಅವನು ಯೇಸುವಿನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಇಷ್ಟಪಟ್ಟರೆ ನನ್ನನ್ನು ಗುಣಪಡಿಸಬಲ್ಲೆ” ಎಂದನು.

ಯೇಸು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸಿದೆ, ಗುಣವಾಗು” ಎಂದನು. ಆ ಕ್ಷಣವೇ ಅವನ ಕುಷ್ಠರೋಗ ವಾಸಿಯಾಯಿತು. ಯೇಸು ಅವನಿಗೆ, “ಇದು ಹೇಗಾಯಿತೆಂಬುದನ್ನು ಯಾರಿಗೂ ಹೇಳಬೇಡ. ಈಗ ನೀನು ಹೋಗಿ ಯಾಜಕನಿಗೆ ನಿನ್ನ ಮೈಯನ್ನು ತೋರಿಸು. ಗುಣಹೊಂದಿದವರು ಮೋಶೆಯ ಆಜ್ಞೆಗನುಸಾರವಾಗಿ ಕೊಡತಕ್ಕ ಕಾಣಿಕೆಯನ್ನು ಅರ್ಪಿಸು. ನೀನು ಗುಣವಾದದ್ದಕ್ಕೆ ಅದು ಸಾಕ್ಷಿಯಾಗಿರುವುದು” ಎಂದು ಹೇಳಿದನು.[a]

ಆರೋಗ್ಯ ಹೊಂದಿದ ಅಧಿಕಾರಿಯ ಸೇವಕ

(ಲೂಕ 7:1-10; ಯೋಹಾನ 4:43-54)

ಯೇಸು ಕಪೆರ್ನೌಮ್ ಪಟ್ಟಣಕ್ಕೆ ಹೊರಟುಹೋದನು. ಆತನು ಪಟ್ಟಣಕ್ಕೆ ಪ್ರವೇಶಿಸಿದಾಗ ಸೈನ್ಯದ ಅಧಿಕಾರಿಯೊಬ್ಬನು ಬಂದು, “ಪ್ರಭುವೇ, ನನ್ನ ಸೇವಕನು ಕಾಯಿಲೆಯಿಂದ ಹಾಸಿಗೆಯ ಮೇಲಿದ್ದಾನೆ. ಅವನು ಬಹಳ ನೋವಿನಿಂದ ನರಳುತ್ತಿದ್ದಾನೆ” ಎಂದು ಸಹಾಯಕ್ಕಾಗಿ ಬೇಡಿಕೊಂಡನು.

ಯೇಸು ಆ ಅಧಿಕಾರಿಗೆ, “ನಾನು ಬಂದು ಅವನನ್ನು ಗುಣಪಡಿಸುತ್ತೇನೆ” ಎಂದು ಹೇಳಿದನು.

ಅದಕ್ಕೆ ಆ ಅಧಿಕಾರಿ, “ಪ್ರಭುವೇ, ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ. ಅವನಿಗೆ ಗುಣವಾಗಲಿ ಎಂದು ನೀನು ಆಜ್ಞಾಪಿಸಿದರೆ ಸಾಕು, ಅವನಿಗೆ ಗುಣವಾಗುವುದು. ನಾನು ಸಹ ಬೇರೆ ಅಧಿಕಾರಿಗಳ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿ ಸಿಪಾಯಿಗಳಿದ್ದಾರೆ. ನಾನು ಒಬ್ಬ ಸಿಪಾಯಿಗೆ ‘ಹೋಗು’ ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬ ಸಿಪಾಯಿಗೆ ‘ಬಾ’ ಅಂದರೆ ಅವನು ಬರುತ್ತಾನೆ. ನಾನು ನನ್ನ ಸೇವಕನಿಗೆ, ‘ಇದನ್ನು ಮಾಡು’ ಅಂದರೆ ಅವನು ವಿಧೇಯತೆಯಿಂದ ಮಾಡುತ್ತಾನೆ. ನಿನಗೂ ಇದೇ ರೀತಿಯ ಅಧಿಕಾರವಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.

10 ಇದನ್ನು ಕೇಳಿ ಯೇಸುವಿಗೆ ಆಶ್ಚರ್ಯವಾಯಿತು. ಯೇಸು ತನ್ನ ಸಂಗಡ ಇದ್ದವರಿಗೆ, “ನಾನು ಇಸ್ರೇಲಿನಲ್ಲಿಯೂ ಸಹ ಇಷ್ಟು ನಂಬಿಕೆಯುಳ್ಳ ವ್ಯಕ್ತಿಯನ್ನು ಕಾಣಲಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದನು. 11 ಅನೇಕ ಜನರು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಂದ ಬರುತ್ತಾರೆ. ಅವರು ಪರಲೋಕರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂಗಡ ಕುಳಿತುಕೊಂಡು ಊಟಮಾಡುತ್ತಾರೆ. 12 ಪರಲೋಕರಾಜ್ಯವನ್ನು ಹೊಂದತಕ್ಕವರು ಹೊರಗೆ ಕತ್ತಲೆಗೆ ಎಸೆಯಲ್ಪಡುವರು. ಅಲ್ಲಿ ಅವರು ಗೋಳಾಡುವರು ಮತ್ತು ನೋವಿನಿಂದ ಹಲ್ಲುಗಳನ್ನು ಕಡಿಯುವರು” ಎಂದನು.

13 ಬಳಿಕ ಯೇಸು ಆ ಅಧಿಕಾರಿಗೆ, “ಮನೆಗೆ ಹೋಗು, ನೀನು ನಂಬಿದಂತೆಯೇ ನಿನ್ನ ಸೇವಕನಿಗೆ ಗುಣವಾಗುವುದು” ಎಂದನು. ಅದೇ ಸಮಯದಲ್ಲಿ ಅವನ ಸೇವಕನಿಗೆ ಗುಣವಾಯಿತು.

ಗುಣಮುಖರಾದ ವಿವಿಧ ಜನರು

(ಮಾರ್ಕ 1:29-34; ಲೂಕ 4:38-41)

14 ಯೇಸುವು ಪೇತ್ರನ ಮನೆಗೆ ಹೋದನು. ಅಲ್ಲಿ ಪೇತ್ರನ ಅತ್ತೆಯು ಬಹಳ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದನ್ನು ಯೇಸು ನೋಡಿದನು. 15 ಯೇಸು ಅವಳ ಕೈ ಮುಟ್ಟಿದಾಗ ಜ್ವರವು ಅವಳನ್ನು ಬಿಟ್ಟುಹೋಯಿತು. ಆಗ ಅವಳು ಮೇಲೆದ್ದು, ಆತನ ಸೇವೆಮಾಡಿದಳು.

16 ಅಂದು ಸಾಯಂಕಾಲ ಜನರು ದೆವ್ವದಿಂದ ಪೀಡಿತರಾಗಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಯೇಸುವು ಮಾತಿನಿಂದಲೇ ದೆವ್ವಗಳನ್ನು ಅವರಿಂದ ಓಡಿಸಿದನು; ಕಾಯಿಲೆಯಾಗಿದ್ದ ಜನರೆಲ್ಲರನ್ನೂ ಗುಣಪಡಿಸಿದನು.

17 “ಆತನು ನಮ್ಮ ಬೇನೆಗಳನ್ನು ತೆಗೆದುಕೊಂಡನು, ನಮ್ಮ ರೋಗಗಳನ್ನು ಹೊತ್ತುಕೊಂಡನು”(A)

ಎಂದು ಪ್ರವಾದಿಯಾದ ಯೆಶಾಯನು ಹೇಳಿದ್ದು ಇದರ ಮೂಲಕ ನೆರವೇರಿತು.

ಯೇಸುವನ್ನು ಹಿಂಬಾಲಿಸಿ

(ಲೂಕ 9:57-62)

18 ಯೇಸು ತನ್ನ ಸುತ್ತಲೂ ಇದ್ದ ಜನರೆಲ್ಲರನ್ನು ನೋಡಿ ತನ್ನ ಶಿಷ್ಯರಿಗೆ ಸರೋವರದ ಆಚೆಯ ತೀರಕ್ಕೆ ಹೋಗುವಂತೆ ಹೇಳಿದನು. 19 ಆಗ ಧರ್ಮೋಪದೇಶಕನು ಯೇಸುವಿನ ಬಳಿಗೆ ಬಂದು, “ಬೋಧಕನೇ, ನೀನು ಯಾವ ಸ್ಥಳಕ್ಕೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.

20 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಅಂದನು.

21 ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರಲು ನನಗೆ ಅಪ್ಪಣೆಯಾಗಲಿ. ಆಮೇಲೆ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.

22 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಿಕೊಳ್ಳಲಿ. ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ

(ಮಾರ್ಕ 4:35-41; ಲೂಕ 8:22-25)

23 ಯೇಸು ದೋಣಿಯೊಳಗೆ ಹೋದನು. ಆತನ ಶಿಷ್ಯರೂ ಆತನೊಂದಿಗೆ ಹೋದರು. 24 ದೋಣಿಯು ದಡವನ್ನು ಬಿಟ್ಟಮೇಲೆ ದೊಡ್ಡ ಬಿರುಗಾಳಿಯು ಸರೋವರದ ಮೇಲೆ ಪ್ರಾರಂಭವಾಯಿತು. ಅಲೆಗಳು ದೋಣಿಯನ್ನು ಮುಚ್ಚಿಕೊಂಡವು. ಆದರೆ ಯೇಸು ನಿದ್ರಿಸುತ್ತಿದ್ದನು. 25 ಯೇಸುವಿನ ಶಿಷ್ಯರು ಆತನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಪ್ರಭುವೇ, ನಮ್ಮನ್ನು ರಕ್ಷಿಸು! ನಾವು ಮುಳುಗುತ್ತಿದ್ದೇವೆ!” ಎಂದು ಹೇಳಿದರು.

26 ಯೇಸು, “ನೀವು ಭಯಪಡುವುದೇಕೆ? ನಿಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲ” ಎಂದು ಉತ್ತರಿಸಿ ಎದ್ದುನಿಂತುಕೊಂಡು ಆ ದೊಡ್ಡ ಬಿರುಗಾಳಿಗೂ ಅಲೆಗಳಿಗೂ ಆಜ್ಞಾಪಿಸಿದನು. ಆ ಕೂಡಲೇ ಬಿರುಗಾಳಿ ನಿಂತುಹೋಯಿತು. ಸರೋವರ ಪ್ರಶಾಂತವಾಯಿತು.

27 ಜನರೆಲ್ಲರೂ ಆಶ್ಚರ್ಯಪಟ್ಟರು. “ಈತನು ಎಂತಹ ಮನುಷ್ಯ? ಬಿರುಗಾಳಿ ಮತ್ತು ನೀರು ಈತನಿಗೆ ವಿಧೇಯವಾಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.

ದೆವ್ವದಿಂದ ಪೀಡಿತರಾಗಿದ್ದ ಇಬ್ಬರಿಗೆ ಬಿಡುಗಡೆ

(ಮಾರ್ಕ 5:1-20; ಲೂಕ 8:26-39)

28 ಯೇಸು ಸರೋವರದ ಮತ್ತೊಂದು ತೀರದಲ್ಲಿದ್ದ ಗದರೇನ ಪ್ರಾಂತ್ಯಕ್ಕೆ ಬಂದನು. ಅಲ್ಲಿ ದೆವ್ವಗಳಿಂದ ಪೀಡಿತರಾಗಿದ್ದ ಇಬ್ಬರು ಯೇಸುವಿನ ಬಳಿಗೆ ಬಂದರು. ಅವರು ಸಮಾಧಿಯ ಗವಿಗಳಲ್ಲಿ ವಾಸವಾಗಿದ್ದರು ಮತ್ತು ಬಹಳ ಅಪಾಯಕಾರಿಗಳಾಗಿದ್ದರು. ಆದ್ದರಿಂದ ಜನರು ಆ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. 29 ಅವರಿಬ್ಬರು ಯೇಸುವಿನ ಬಳಿಗೆ ಬಂದು. “ನೀನು ನಮಗೆ ಏನು ಮಾಡಬೇಕೆಂದಿರುವೆ? ದೇವಕುಮಾರನೇ, ನೇಮಿತ ಕಾಲಕ್ಕಿಂತ ಮುಂಚೆಯೇ ನಮ್ಮನ್ನು ಶಿಕ್ಷಿಸಲು ಇಲ್ಲಿಗೆ ಬಂದೆಯಾ?” ಎಂದು ಗಟ್ಟಿಯಾಗಿ ಕೂಗಿಕೊಂಡರು.

30 ಆ ಸ್ಥಳದ ಹತ್ತಿರ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. 31 ಆ ದೆವ್ವಗಳು, “ನಾವು ಇವರಿಬ್ಬರನ್ನು ಬಿಟ್ಟುಹೋಗುವಂತೆ ನೀನು ಮಾಡಬೇಕೆಂದಿದ್ದರೆ, ದಯವಿಟ್ಟು ನಮ್ಮನ್ನು ಆ ಹಂದಿಗಳೊಳಗೆ ಕಳುಹಿಸು” ಎಂದು ಬೇಡಿಕೊಂಡವು.

32 ಯೇಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಗಳು ಅವರಿಬ್ಬರನ್ನು ಬಿಟ್ಟು ಹಂದಿಗಳೊಳಗೆ ಹೋದವು. ಕೂಡಲೇ ಹಂದಿಗಳೆಲ್ಲಾ ಗುಡ್ಡದ ಕೆಳಗೆ ಓಡಿ ಸರೋವರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿಹೋದವು. 33 ಹಂದಿಗಳನ್ನು ಮೇಯಿಸುತ್ತಿದ್ದವರು ಪಟ್ಟಣದೊಳಕ್ಕೆ ಓಡಿಹೋಗಿ ಹಂದಿಗಳಿಗೂ ದೆವ್ವಗಳಿಂದ ಪೀಡಿತರಾಗಿದ್ದವರಿಗೂ ಸಂಭವಿಸಿದ್ದನ್ನು ಜನರಿಗೆ ತಿಳಿಸಿದರು. 34 ಆಗ ಪಟ್ಟಣದ ಜನರೆಲ್ಲರೂ ಯೇಸುವನ್ನು ನೋಡಲು ಹೋಗಿ, ತಮ್ಮ ಸ್ಥಳವನ್ನು ಬಿಟ್ಟುಹೋಗಬೇಕೆಂದು ಆತನನ್ನು ಬೇಡಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International