Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 26

ಪ್ರಥಮ ಫಲ

26 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದೀರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೆಲೆಸುವಿರಿ. ಯೆಹೋವನು ಕೊಡುವ ಆ ದೇಶದಲ್ಲಿ ನೀವು ಪ್ರಥಮ ಬೆಳೆಯನ್ನು ಕೂಡಿಸುವಿರಿ. ಪುಟ್ಟಿಗಳಲ್ಲಿ ಧಾನ್ಯವನ್ನು ಕೂಡಿಸುವಾಗ ಪ್ರಥಮ ಭಾಗವನ್ನು ಪ್ರತ್ಯೇಕವಾಗಿಟ್ಟು ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸುವ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗಿ. ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ, ‘ಯೆಹೋವನು ನನ್ನ ಪೂರ್ವಿಕರಿಗೆ ಒಂದು ದೇಶವನ್ನು ಕೊಡುವುದಾಗಿ ವಾಗ್ದಾನ ಮಾಡಿದನು. ನಾನು ಆ ದೇಶಕ್ಕೆ ಬಂದಿರುತ್ತೇನೆ’ ಎಂದು ಹೇಳಬೇಕು.

“ಯಾಜಕನು ನಿಮ್ಮ ಕೈಯಲ್ಲಿರುವ ಪುಟ್ಟಿಯನ್ನು ತೆಗೆದುಕೊಂಡು ಯೆಹೋವನ ಯಜ್ಞವೇದಿಕೆಯ ಎದುರು ಇಡುವನು. ಆಗ ನಿಮ್ಮ ದೇವರಾದ ಯೆಹೋವನ ಸನ್ನಿಧಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರು ಊರೂರು ತಿರುಗುತ್ತಿದ್ದ ಅರಾಮ್ಯರಾಗಿದ್ದರು. ಅವರು ಈಜಿಪ್ಟನ್ನು ಸೇರಿ ಅಲ್ಲಿಯೇ ನೆಲೆಸಿದರು. ಅಲ್ಲಿಗೆ ಅವರು ಹೋದಾಗ ಅವರು ಕೆಲವರೇ ಆಗಿದ್ದರು. ಆದರೆ ಕಾಲಕ್ರಮೇಣ ಅವರು ದೊಡ್ಡ ಜನಾಂಗವಾಗಿ ಅಭಿವೃದ್ಧಿ ಹೊಂದಿದರು. ಈಜಿಪ್ಟಿನವರು ನಮ್ಮನ್ನು ಕಠಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲಸವನ್ನು ಕೊಟ್ಟರು. ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಟ್ಟೆವು. ಆತನು ನಮ್ಮ ಕೂಗನ್ನು ಆಲಿಸಿದನು; ನಮ್ಮ ಸಂಕಟ, ವೇದನೆಗಳನ್ನು ನೋಡಿದನು. ಆಮೇಲೆ ಯೆಹೋವನು ತನ್ನ ಭುಜಪರಾಕ್ರಮದಿಂದ ನಮ್ಮನ್ನು ಈಜಿಪ್ಟಿನಿಂದ ಹೊರತಂದನು. ಆತನು ಅದ್ಭುತಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿದನು. ಅಲ್ಲಿಂದ ನಮ್ಮನ್ನು ಕರೆದುತಂದು ನಮಗೆ ಈ ಒಳ್ಳೆಯ ದೇಶವನ್ನು ಕೊಟ್ಟನು. 10 ಈಗ, ಯೆಹೋವನೇ, ನೀನು ಕೊಟ್ಟ ದೇಶದಲ್ಲಿ ಬೆಳೆದ ಬೆಳೆಯಲ್ಲಿ ಪ್ರಥಮ ಫಲಗಳನ್ನು ತಂದಿದ್ದೇನೆ.’

“ಆ ಪ್ರಥಮ ಬೆಳೆಯನ್ನು ನಿಮ್ಮ ದೇವರಾದ ಯೆಹೋವನ ಮುಂದೆ ಇಟ್ಟು ಆತನನ್ನು ಆರಾಧಿಸಬೇಕು. 11 ನೀವೂ ನಿಮ್ಮ ಹೆಂಡತಿ ಮಕ್ಕಳೂ ಸೇರಿ ಅಲ್ಲಿ ಊಟಮಾಡಿ ಸಂತೋಷಿಸಬೇಕು. ನಿಮ್ಮ ಊರಿನಲ್ಲಿರುವ ಲೇವಿಯರೊಂದಿಗೆ ಮತ್ತು ಪರದೇಶಸ್ಥರೊಂದಿಗೆ ನಿಮ್ಮ ಪ್ರಥಮ ಫಲಗಳನ್ನು ಹಂಚಿಕೊಳ್ಳಿರಿ.

12 “ಪ್ರತೀ ಮೂರನೆಯ ವರ್ಷವು ದಶಮಾಂಶದ ವರ್ಷವಾಗಿರುವುದು. ಆಗ ನಿಮ್ಮ ಬೆಳೆಯ ಹತ್ತನೆಯ ಒಂದು ಅಂಶವನ್ನು ಲೇವಿಯರಿಗೂ ಪರದೇಶಸ್ಥರಿಗೂ ಅನಾಥರಿಗೂ ವಿಧವೆಯರಿಗೂ ಕೊಡಬೇಕು. ಆಗ ಅವರಿಗೆ ಊಟಮಾಡಲು ಸಾಕಷ್ಟು ಇರುವುದು. 13 ನಿನ್ನ ದೇವರಾದ ಯೆಹೋವನಿಗೆ ನೀನು ಹೀಗೆ ಹೇಳಬೇಕು: ‘ನನ್ನ ಮನೆಯೊಳಗಿಂದ ನನ್ನ ಬೆಳೆಯ ಪರಿಶುದ್ಧ ಭಾಗವನ್ನು ತೆಗೆದು ಲೇವಿಯರಿಗೆ, ಪರದೇಶಸ್ಥರಿಗೆ, ಅನಾಥರಿಗೆ, ವಿಧವೆಯರಿಗೆ ಕೊಟ್ಟಿರುತ್ತೇನೆ. ನಿನ್ನ ಕಟ್ಟಳೆಗಳನ್ನೆಲ್ಲಾ ಅನುಸರಿಸಿದ್ದೇನೆ. ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನಿರಾಕರಿಸಲಿಲ್ಲ, ನಾನು ಅವುಗಳನ್ನು ಮರೆಯಲಿಲ್ಲ. 14 ನಾನು ದುಃಖದಲ್ಲಿರುವಾಗ ಆ ಆಹಾರವನ್ನು ಊಟಮಾಡಲಿಲ್ಲ. ಈ ಬೆಳೆಯನ್ನು ಶೇಖರಿಸುವಾಗ ನಾನು ಅಶುದ್ಧನಾಗಿರಲಿಲ್ಲ. ಸತ್ತವರಿಗಾಗಿ ಈ ಆಹಾರವನ್ನು ಅರ್ಪಿಸಲಿಲ್ಲ. ನನ್ನ ದೇವರಾದ ಯೆಹೋವನೇ, ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ. ನೀನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ನಾನು ಮಾಡಿದ್ದೇನೆ. 15 ನಿನ್ನ ಪರಿಶುದ್ಧ ನಿವಾಸದಿಂದ ನನ್ನನ್ನು ನೋಡು. ನಿನ್ನ ಜನಾಂಗವಾದ ಇಸ್ರೇಲನ್ನು ಆಶೀರ್ವದಿಸು. ನೀನು ನಮಗೆ ಕೊಟ್ಟಿರುವ ದೇಶವನ್ನು ಆಶೀರ್ವದಿಸು. ಸಮೃದ್ಧಿಯಿಂದ ಕೂಡಿದ ಈ ದೇಶವನ್ನು ನಮಗೆ ಕೊಡುವೆ ಎಂದು ನಮ್ಮ ಪೂರ್ವಿಕರಿಗೆ ನೀನು ವಾಗ್ದಾನ ಮಾಡಿರುವೆ.’

ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಿ

16 “ಈ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅನುಸರಿಸಲು ನಿಮ್ಮ ದೇವರಾದ ಯೆಹೋವನು ಇಂದು ನಿಮಗೆ ಆಜ್ಞಾಪಿಸುತ್ತಾನೆ. ನಿಮ್ಮ ಪೂರ್ಣಹೃದಯದಿಂದಲೂ ಆತ್ಮದಿಂದಲೂ ಅವುಗಳನ್ನು ಎಚ್ಚರಿಕೆಯಿಂದ ಅನುಸರಿಸಿರಿ. 17 ಯೆಹೋವನು ನಿಮ್ಮ ದೇವರೆಂದು ನೀವು ಈ ದಿನ ಪ್ರತಿಜ್ಞೆ ಮಾಡಿದ್ದೀರಿ. ಆತನು ಹೇಳಿದ ಎಲ್ಲಾ ಕಟ್ಟಳೆ, ವಿಧಿ, ನಿಯಮಗಳನ್ನು ಅನುಸರಿಸುವಿರೆಂದು ಪ್ರತಿಜ್ಞೆ ಮಾಡಿರುತ್ತೀರಿ. ಆತನು ಹೇಳಿದ್ದನ್ನೆಲ್ಲಾ ಮಾಡುವುದಾಗಿ ಹೇಳಿರುವಿರಿ. 18 ಈ ಹೊತ್ತು ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನಾಂಗವೆಂದು ಸ್ವೀಕರಿಸಿದ್ದಾನೆ ಎಂದು ವಾಗ್ದಾನ ಮಾಡುತ್ತಾನೆ. ನೀವು ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಬೇಕು. 19 ಎಲ್ಲಾ ಜನಾಂಗಗಳಿಗಿಂತ ನಿಮ್ಮನ್ನು ಬಲಿಷ್ಠರಾದ ಜನಾಂಗವನ್ನಾಗಿ ಮಾಡುವನು. ದೇವರು ನಿಮಗೆ ಜನರಿಂದ ಹೊಗಳಿಕೆಯನ್ನು, ಪ್ರಖ್ಯಾತಿಯನ್ನು ಮತ್ತು ಗೌರವವನ್ನು ಬರಮಾಡುವನು; ಆತನು ವಾಗ್ದಾನ ಮಾಡಿದಂತೆಯೇ ನೀವು ಪವಿತ್ರ ಜನರಾಗುವಿರಿ.”

ಕೀರ್ತನೆಗಳು 117-118

117 ಸರ್ವಜನಾಂಗಗಳೇ, ಯೆಹೋವನನ್ನು ಕೊಂಡಾಡಿರಿ.
    ಸರ್ವಜನರೇ, ಆತನನ್ನು ಸ್ತುತಿಸಿರಿ.
ಆತನ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ.
    ಆತನ ನಂಬಿಗಸ್ತಿಕೆಯು ಶಾಶ್ವತವಾದದ್ದು.

ಯೆಹೋವನಿಗೆ ಸ್ತೋತ್ರವಾಗಲಿ.

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.
ಯಾಜಕರೇ,
    “ಆತನ ಪ್ರೀತಿ ಶಾಶ್ವತವಾದದ್ದು!” ಎಂದು ಹೇಳಿರಿ.
ಯೆಹೋವನ ಭಕ್ತರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ನಾನು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು.
    ಆತನು ನನಗೆ ಸದುತ್ತರವನ್ನು ದಯಪಾಲಿಸಿ ನನ್ನನ್ನು ಬಿಡಿಸಿದನು.
ಯೆಹೋವನು ನನ್ನೊಂದಿಗಿದ್ದಾನೆ, ಆದ್ದರಿಂದ ನಾನು ಭಯಪಡುವುದಿಲ್ಲ.
    ಮನುಷ್ಯರು ನನಗೇನು ಮಾಡಬಲ್ಲರು?
ಯೆಹೋವನು ನನಗೆ ಸಹಾಯಕನಾಗಿದ್ದಾನೆ.
    ನನ್ನ ಶತ್ರುಗಳಿಗಾಗುವ ಸೋಲನ್ನು ಕಣ್ಣಾರೆ ಕಾಣುವೆನು.
ಜನರಲ್ಲಿ ಭರವಸೆ ಇಡುವುದಕ್ಕಿಂತಲೂ
    ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.
ನಿಮ್ಮ ನಾಯಕರುಗಳಲ್ಲಿ ಭರವಸೆ ಇಡುವುದಕ್ಕಿಂತಲೂ
    ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.

10 ಅನೇಕ ಶತ್ರುಗಳು ನನ್ನನ್ನು ಸುತ್ತುಗಟ್ಟಿದರು.
    ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
11 ಶತ್ರುಗಳು ನನ್ನನ್ನು ಮತ್ತೆಮತ್ತೆ ಸುತ್ತುಗಟ್ಟಿದರು.
    ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
12 ಶತ್ರುಗಳು ಜೇನುನೊಣಗಳ ಹಿಂಡಿನಂತೆ ನನ್ನನ್ನು ಸುತ್ತುಗಟ್ಟಿದರು.
    ಆದರೆ, ಧಗಧಗನೆ ಉರಿಯುವ ಪೊದೆಯಂತೆ ಅವರು ಕೊನೆಗೊಂಡರು.
ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.

13 ಶತ್ರುಗಳು ನನ್ನ ಮೇಲೆ ಆಕ್ರಮಣ ಮಾಡಿ ಸಂಪೂರ್ಣವಾಗಿ ನಾಶಮಾಡಲಿದ್ದರು.
    ಆದರೆ ಯೆಹೋವನು ನನಗೆ ಸಹಾಯ ಮಾಡಿದನು.
14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

25 “ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನಮ್ಮನ್ನು ರಕ್ಷಿಸಿದ್ದಾನೆ.
26     ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಸುಸ್ವಾಗತ!”

“ಯೆಹೋವನ ಆಲಯದಿಂದ ನಾವು ನಿನ್ನನ್ನು ಆಶೀರ್ವದಿಸುತ್ತೇವೆ!
27 ಯೆಹೋವನೇ ದೇವರು.
    ಆತನು ನಮ್ಮನ್ನು ಸ್ವೀಕರಿಸಿಕೊಳ್ಳುವನು.
    ಯಜ್ಞಕ್ಕೋಸ್ಕರ ಕುರಿಮರಿಯನ್ನು ಕಟ್ಟಿ ಯಜ್ಞವೇದಿಕೆಯ ಕೊಂಬುಗಳ ಸಮೀಪಕ್ಕೆ ಹೊತ್ತುಕೊಂಡು ಬನ್ನಿರಿ” ಎಂದು ಯಾಜಕರು ಉತ್ತರಿಸಿದರು.

28 ಯೆಹೋವನೇ, ನೀನೇ ನನ್ನ ದೇವರು; ನಾನು ನಿನಗೆ ಕೃತಜ್ಞತೆ ಸಲ್ಲಿಸುವೆನು.
    ನಾನು ನಿನ್ನನ್ನು ಘನಪಡಿಸುವೆನು!
29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು.

ಯೆಶಾಯ 53

53 ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು? ಯೆಹೋವನ ದಂಡನೆಯನ್ನು ನಿಜವಾಗಿಯೂ ಸ್ವೀಕರಿಸಿಕೊಂಡವರು ಯಾರು?

ಒಂದು ಸಣ್ಣ ಸಸಿಯು ಬೆಳೆಯುವ ರೀತಿಯಲ್ಲಿ ಯೆಹೋವನ ಮುಂದೆ ಆತನು ಬೆಳೆದನು. ಆತನು ಒಣ ನೆಲದಿಂದ ಚಿಗುರುವ ಬೇರಿನಂತಿದ್ದನು. ಆತನು ಒಬ್ಬ ವಿಶೇಷ ಪುರುಷನಂತೆ ತೋರಲಿಲ್ಲ. ಅಂಥ ಲಕ್ಷಣಗಳೇನೂ ಆತನಲ್ಲಿರಲಿಲ್ಲ. ನಾವು ಆತನನ್ನು ನೋಡಿದಾಗ ಆತನಲ್ಲಿ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ. ಜನರು ಆತನನ್ನು ಪರಿಹಾಸ್ಯ ಮಾಡಿದರು. ಆತನ ಸ್ನೇಹಿತರು ಆತನನ್ನು ತೊರೆದರು. ಆತನು ನೋವಿನಿಂದ ಬಳಲಿದನು. ಆತನು ಕಾಯಿಲೆಯಿಂದ ಬಾಧಿತನಾಗಿದ್ದನು. ಜನರು ಆತನ ಕಡೆಗೆ ನೋಡಲೂ ಇಲ್ಲ. ನಾವು ಆತನನ್ನು ಗಮನಕ್ಕೆ ತರಲೇ ಇಲ್ಲ.

ಆದರೆ ಆತನು ನಮ್ಮ ಸಂಕಷ್ಟಗಳನ್ನು ತನ್ನ ಮೇಲೆ ಹೊತ್ತುಕೊಂಡನು. ನಮ್ಮ ಬೇನೆಯನ್ನು ಆತನು ಅನುಭವಿಸಿದನು. ದೇವರು ಆತನನ್ನು ಶಿಕ್ಷಿಸಿದ್ದಾನೆ ಎಂದು ನಾವು ನೆನಸಿದೆವು. ಆತನು ಏನೋ ಮಾಡಿದ್ದಕ್ಕಾಗಿ ದೇವರು ಆತನಿಗೆ ಹೊಡೆದನೆಂದು ಭಾವಿಸಿಕೊಂಡೆವು. ಆದರೆ ನಾವು ಮಾಡಿದ ದುಷ್ಟತನಕ್ಕಾಗಿಯೇ ಆತನು ಬಾಧಿತನಾದನು. ನಮ್ಮ ಅಪರಾಧಗಳ ನಿಮಿತ್ತ ಆತನು ಜಜ್ಜಲ್ಪಟ್ಟನು. ನಾವು ಹೊಂದಬೇಕಾಗಿದ್ದ ಶಿಕ್ಷೆಯನ್ನು ಆತನೇ ಅನುಭವಿಸಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲಾಡಿದೆವು. ನಮ್ಮ ಸ್ವಂತ ದಾರಿಯಲ್ಲಿ ನಾವು ಹೋದೆವು. ನಮ್ಮ ಅಪರಾಧಗಳಿಂದ ನಾವು ವಿಮುಕ್ತರಾಗುವಂತೆ ಯೆಹೋವನು ನಮ್ಮ ಅಪರಾಧಗಳನ್ನು ಆತನ ಮೇಲೆ ಹಾಕಿದನು.

ಆತನು ಬಾಧೆಯನ್ನೂ ಹಿಂಸೆಯನ್ನೂ ಅನುಭವಿಸಿದನು. ಆದರೂ ಆತನು ಪ್ರತಿಭಟಿಸಲಿಲ್ಲ. ಕೊಯ್ಯಲು ಕೊಂಡೊಯ್ಯುವ ಕುರಿಮರಿಯಂತೆಯೂ ಉಣ್ಣೆಯನ್ನು ಕತ್ತರಿಸುವಾಗ ಮೌನವಾಗಿರುವ ಕುರಿಮರಿಯಂತೆಯೂ ಆತನು ಮೌನವಾಗಿದ್ದನು. ಜನರು ಬಲವಂತದಿಂದ ಆತನನ್ನು ಕೊಂಡೊಯ್ದರು; ಆತನಿಗೆ ಅನ್ಯಾಯವಾದ ತೀರ್ಪನ್ನು ನೀಡಿದರು; ಆತನನ್ನು ಜೀವಲೋಕದಿಂದಲೇ ತೆಗೆದುಹಾಕಿ ಆತನಿಗೆ ಸಂತಾನವೇ ಇಲ್ಲದಂತೆ ಮಾಡಿದರು. ನನ್ನ ಜನರ ಪಾಪಗಳಿಗಾಗಿ ಆತನು ದಂಡಿಸಲ್ಪಟ್ಟನು. ಆತನು ಸತ್ತ ಬಳಿಕ ಧನಿಕರೊಂದಿಗೂ ದುಷ್ಟರೊಂದಿಗೂ ಹೂಳಲ್ಪಟ್ಟನು. ಆತನು ಯಾವ ಅಪರಾಧವನ್ನೂ ಮಾಡಲಿಲ್ಲ; ಸುಳ್ಳಾಡಲಿಲ್ಲ. ಆದರೂ ಇವೆಲ್ಲವೂ ಆತನಿಗೆ ಸಂಭವಿಸಿದವು.

10 ಆತನನ್ನು ಬಾಧೆಯಿಂದ ಜಜ್ಜಬೇಕೆಂಬುದು ಯೆಹೋವನ ನಿರ್ಧಾರವಾಗಿತ್ತು. ಆದ್ದರಿಂದ ಈ ಸೇವಕನು ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. ಆದರೆ ಆತನು ತನ್ನ ಹೊಸ ಜೀವಿತದಲ್ಲಿ ಚಿರಂಜೀವಿಯಾಗುವನು. ಆತನು ತನ್ನ ಜನರನ್ನು ದೃಷ್ಟಿಸಿ ನೋಡುವನು. ಯೆಹೋವನ ಸಂಕಲ್ಪದ ಮೇರೆಗೆ ಎಲ್ಲವನ್ನೂ ಆತನು ಮಾಡುವನು. 11 ಆತನು ತನ್ನ ಆತ್ಮದಲ್ಲಿ ಬಹಳವಾಗಿ ಸಂಕಟಪಡುವನು. ಆದರೆ ಒಳ್ಳೆಯ ಕಾರ್ಯಗಳಾಗುವುದನ್ನು ಆತನು ನೋಡುವನು. ತಾನು ಕಲಿತ ವಿಷಯಗಳಲ್ಲಿ ಸಂತುಷ್ಟನಾಗುವನು.

ಅನೇಕರು ತಮ್ಮ ಪಾಪಗಳಿಂದ ಬಿಡುಗಡೆ ಹೊಂದುವಂತೆ ನನ್ನ ಒಳ್ಳೇ ಸೇವಕನು ಮಾಡುವನು. ಅವರ ಪಾಪಗಳನ್ನು ಹೊತ್ತುಕೊಂಡು ಹೋಗುವನು. 12 ಈ ಕಾರಣಕ್ಕಾಗಿ ನಾನು ಆತನನ್ನು ಜನರ ಮಧ್ಯದಲ್ಲಿ ಪ್ರಸಿದ್ಧಿಪಡಿಸುವೆನು. ಆತನು ಬಲಿಷ್ಠರೊಂದಿಗೆ ಸಮಪಾಲನ್ನು ಹೊಂದುವನು. ಆತನು ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ಸತ್ತದ್ದಕ್ಕಾಗಿ ನಾನು ಆತನಿಗೆ ಹೀಗೆ ಮಾಡುವೆನು. ಜನರು ಆತನನ್ನು ಅಪರಾಧಿ ಎಂದು ಹೇಳಿದರೂ ವಾಸ್ತವವಾಗಿ ಆತನು ಬಹುಜನರ ಪಾಪಗಳನ್ನು ಹೊತ್ತುಕೊಂಡು ಹೋದನು. ಈಗ ಆತನು ಪಾಪಮಾಡಿದ ಜನರಿಗಾಗಿ ಪ್ರಾರ್ಥನಾಪೂರ್ವಕವಾಗಿ ವಿಜ್ಞಾಪಿಸುವನು.

ಮತ್ತಾಯ 1

ಯೇಸುವಿನ ವಂಶಾವಳಿ

(ಲೂಕ 3:23-38)

ಯೇಸು ಕ್ರಿಸ್ತನ ವಂಶಾವಳಿಯಿದು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.

ಅಬ್ರಹಾಮನು ಇಸಾಕನ ತಂದೆ.

ಇಸಾಕನು ಯಾಕೋಬನ ತಂದೆ.

ಯಾಕೋಬನು ಯೆಹೂದ ಮತ್ತು ಅವನ ಸಹೋದರರ ತಂದೆ.

ಯೆಹೂದನು ಪೆರೆಚನ ಮತ್ತು ಜೆರಹನ ತಂದೆ. (ಅವರ ತಾಯಿ ತಾಮರಳು.)

ಪೆರೆಚನು ಹೆಚ್ರೋನನ ತಂದೆ.

ಹೆಚ್ರೋನನು ಅರಾಮನ ತಂದೆ.

ಅರಾಮನು ಅಮ್ಮಿನಾದಾಬನ ತಂದೆ.

ಅಮ್ಮಿನಾದಾಬನು ನಹಶೋನನ ತಂದೆ.

ನಹಶೋನನು ಸಲ್ಮೋನನ ತಂದೆ.

ಸಲ್ಮೋನನು ಬೋವಜನ ತಂದೆ. (ಬೋವಜನ ತಾಯಿ ರಹಾಬಳು.)

ಬೋವಜನು ಓಬೇದನ ತಂದೆ. (ಓಬೇದನ ತಾಯಿ ರೂತಳು.)

ಓಬೇದನು ಇಷಯನ ತಂದೆ.

ಇಷಯನು ಅರಸನಾದ ದಾವೀದನ ತಂದೆ.

ದಾವೀದನು ಸೊಲೊಮೋನನ ತಂದೆ. (ಸೊಲೊಮೋನನ ತಾಯಿ ಊರೀಯನ ಹೆಂಡತಿಯಾಗಿದ್ದಳು.)

ಸೊಲೊಮೋನನು ರೆಹಬ್ಬಾಮನ ತಂದೆ.

ರೆಹಬ್ಬಾಮನು ಅಬೀಯನ ತಂದೆ.

ಅಬೀಯನು ಆಸನ ತಂದೆ.

ಆಸನು ಯೆಹೋಷಾಫಾಟನ ತಂದೆ.

ಯೆಹೋಷಾಫಾಟನು ಯೆಹೋರಾಮನ ತಂದೆ.

ಯೆಹೋರಾಮನು ಉಜ್ಜೀಯನ ತಂದೆ.

ಉಜ್ಜೀಯನು ಯೋತಾಮನ ತಂದೆ.

ಯೋತಾಮನು ಆಹಾಜನ ತಂದೆ.

ಆಹಾಜನು ಹಿಜ್ಕೀಯನ ತಂದೆ.

10 ಹಿಜ್ಕೀಯನು ಮನಸ್ಸೆಯ ತಂದೆ.

ಮನಸ್ಸೆಯು ಆಮೋನನ ತಂದೆ.

ಆಮೋನನು ಯೋಷೀಯನ ತಂದೆ.

11 ಯೋಷೀಯನು ಯೆಕೊನ್ಯ ಮತ್ತು ಅವನ ಸಹೋದರರ ತಂದೆ. (ಈ ಸಮಯದಲ್ಲಿಯೇ ಯೆಹೂದ್ಯ ಜನರನ್ನು ಗುಲಾಮಗಿರಿಗಾಗಿ ಬಾಬಿಲೋನಿಗೆ ಕೊಂಡೊಯ್ದದ್ದು.)

12 ಯೆಹೂದ್ಯರನ್ನು ಬಾಬಿಲೋನಿಗೆ ಕೊಂಡೊಯ್ದ ನಂತರದ ಕುಟುಂಬದ ಚರಿತ್ರೆ:

ಯೆಕೊನ್ಯನು ಶೆಯಲ್ತಿಯೇಲನ ತಂದೆ.

ಶೆಯಲ್ತಿಯೇಲನು ಜೆರುಬ್ಬಾಬೆಲನ ತಂದೆ.

13 ಜೆರುಬ್ಬಾಬೆಲನು ಅಬಿಹೂದನ ತಂದೆ.

ಅಬಿಹೂದನು ಎಲ್ಯಕೀಮನ ತಂದೆ.

ಎಲ್ಯಕೀಮನು ಅಜೋರನ ತಂದೆ.

14 ಅಜೋರನು ಸದೋಕನ ತಂದೆ.

ಸದೋಕನು ಅಖೀಮನ ತಂದೆ.

ಅಖೀಮನು ಎಲಿಹೂದನ ತಂದೆ.

15 ಎಲಿಹೂದನು ಎಲಿಯಾಜರನ ತಂದೆ.

ಎಲಿಯಾಜರನು ಮತ್ತಾನನ ತಂದೆ.

ಮತ್ತಾನನು ಯಾಕೋಬನ ತಂದೆ.

16 ಯಾಕೋಬನು ಯೋಸೇಫನ ತಂದೆ.

ಯೋಸೇಫನು ಮರಿಯಳ ಗಂಡ.

ಮರಿಯಳು ಯೇಸುವಿನ ತಾಯಿ.

ಯೇಸುವನ್ನು ಕ್ರಿಸ್ತ[a] ನೆಂದು ಕರೆಯುತ್ತಿದ್ದರು.

17 ಅಬ್ರಹಾಮನಿಂದಿಡಿದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿಡಿದು ಬಾಬಿಲೋನಿಗೆ ಸೆರೆಯೊಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಕ್ರಿಸ್ತನು ಹುಟ್ಟುವವರೆಗೆ ಹದಿನಾಲ್ಕು ತಲೆಮಾರುಗಳು.

ಯೇಸು ಕ್ರಿಸ್ತನ ಜನನ

(ಲೂಕ 2:1-7)

18 ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು. 19 ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು.

20 ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ. 21 ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು.

22 ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು. 23 ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.”(A) (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.)

24 ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು. 25 ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International