Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 3

ಬಾಷಾನಿನ ಜನರೊಂದಿಗೆ ಯುದ್ಧ

“ನಾವು ನಮ್ಮ ದಾರಿಯಿಂದ ಹಿಂತಿರುಗಿ ಬಾಷಾನಿಗೆ ಹೋಗುವ ದಾರಿಯಲ್ಲಿ ಹೋದೆವು. ಎದ್ರೈಯಲ್ಲಿ ಬಾಷಾನಿನ ಅರಸನಾದ ಓಗನೂ ಅವನ ಸೈನ್ಯವೂ ನಮ್ಮೊಂದಿಗೆ ಯುದ್ಧಮಾಡಲು ಹೊರಟುಬಂದವು. ಆಗ ಯೆಹೋವನು ನನಗೆ, ‘ಓಗನಿಗೆ ನೀನು ಭಯಪಡಬೇಡ. ಅವನನ್ನೂ ಅವನ ಜನರನ್ನೂ ಅವನ ದೇಶವನ್ನೂ ನಿನಗೊಪ್ಪಿಸುವೆನು. ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದಂತೆಯೇ ಇವನನ್ನೂ ಸೋಲಿಸುವೆ’ ಎಂದು ಆಜ್ಞಾಪಿಸಿದನು.

“ಅದೇ ಪ್ರಕಾರ ನಾವು ಓಗನನ್ನು ಸೋಲಿಸುವಂತೆ ದೇವರಾದ ಯೆಹೋವನು ಸಹಾಯ ಮಾಡಿದನು. ಅವನನ್ನೂ ಅವನ ಸೈನದಲ್ಲಿರುವವರನ್ನೆಲ್ಲಾ ನಾಶಮಾಡಿದೆವು. ಆ ಸಮಯದಲ್ಲಿ ಓಗನಿಗೆ ಸೇರಿದ್ದ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡೆವು. ಬಾಷಾನಿನಲ್ಲಿ ಓಗನ ರಾಜ್ಯದಲ್ಲಿರುವ ಅರ್ಗೋಬ್ ಪ್ರದೇಶದಲ್ಲಿ ಅರವತ್ತು ಪಟ್ಟಣಗಳು ನಮ್ಮ ವಶವಾದವು. ಆ ಪಟ್ಟಣಗಳೆಲ್ಲಾ ಬಹಳ ಪ್ರಬಲವಾಗಿದ್ದವು. ಅವುಗಳಿಗೆ ಎತ್ತರವಾದ ಪೌಳಿಗೋಡೆಗಳಿದ್ದು ಕದಗಳಿಂದಲೂ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟಿದ್ದವು. ಇನ್ನೂ ಅನೇಕ ಪಟ್ಟಣಗಳಿಗೆ ಕೋಟೆಗಳಿರಲಿಲ್ಲ. ಹೆಷ್ಬೋನಿನ ಅರಸನಾದ ಸೀಹೋನನಿಗೆ ಸೇರಿದ ಪಟ್ಟಣಗಳನ್ನು ನಾವು ಹೇಗೆ ಧ್ವಂಸ ಮಾಡಿದೆವೋ ಹಾಗೆಯೇ ಈ ಪಟ್ಟಣಗಳನ್ನು ಧ್ವಂಸ ಮಾಡಿ ಸ್ತ್ರೀಯರೂ ಕೂಸುಗಳೂ ಸೇರಿದಂತೆ ಅದರ ನಿವಾಸಿಗಳಲ್ಲಿ ಒಬ್ಬರನ್ನೂ ಬಿಡದೆ ಹತಿಸಿಬಿಟ್ಟೆವು. ಆದರೆ ಅವರ ಪಶುಗಳನ್ನೂ ಬೆಲೆಬಾಳುವ ವಸ್ತುಗಳನ್ನೂ ನಾವು ಇಟ್ಟುಕೊಂಡೆವು.

“ಈ ರೀತಿಯಾಗಿ ನಾವು, ಇಬ್ಬರು ಅಮೋರಿಯ ಅರಸರ ದೇಶಗಳನ್ನು ಸ್ವಾಧೀನ ಮಾಡಿಕೊಂಡೆವು. ಅವರ ದೇಶಗಳು ಜೋರ್ಡನ್ ನದಿಯ ಪೂರ್ವದಲ್ಲಿದ್ದು ಅರ್ನೋನ್ ಕಣಿವೆಯಿಂದ ಹಿಡಿದು, ಹೆರ್ಮೋನ್ ಪರ್ವತದ ತನಕ ವಿಸ್ತಾರವಾಗಿತ್ತು. (ಚೀದೋನಿನ ಜನರು ಹೆರ್ಮೋನ್ ಪರ್ವತವನ್ನು ಸಿರ್ಯೋನ್ ಎಂದು ಕರೆಯುವರು. ಆದರೆ ಅಮೋರಿಯರು ಅದನ್ನು ಸೆನೀರ್ ಎಂದು ಕರೆಯುತ್ತಾರೆ.) 10 ಗಿಲ್ಯಾದ್ ಪ್ರಾಂತ್ಯ ಮತ್ತು ಎತ್ತರವಾದ ಬಯಲಿನಲ್ಲಿದ್ದ ಪಟ್ಟಣಗಳನ್ನೆಲ್ಲಾ ನಾವು ಸ್ವಾಧೀನಮಾಡಿಕೊಂಡೆವು. ಸಲ್ಕಾ ಮತ್ತು ಎದ್ರೈ ಪಟ್ಟಣಗಳ ತನಕವಿರುವ ಬಾಷಾನ್ ದೇಶವನ್ನೆಲ್ಲಾ ನಾವು ಸ್ವಾಧೀನಮಾಡಿಕೊಂಡೆವು.”

11 (ಓಗನು ಬಾಷಾನಿನ ರಾಜನಾಗಿದ್ದನು. ಎದ್ರೈ ಮತ್ತು ಸಲ್ಕಾ ಬಾಷಾನಿನಲ್ಲಿದ್ದ ಓಗನ ರಾಜ್ಯದ ಪಟ್ಟಣಗಳಾಗಿದ್ದವು. ಅವನು ರೆಫಾಯರಲ್ಲಿ ಅಳಿದುಳಿದವರಲ್ಲಿ ಒಬ್ಬನಾಗಿದ್ದನು. ಅವನ ಮಂಚವು ಕಬ್ಬಿಣದಿಂದ ಮಾಡಲ್ಪಟ್ಟಿತ್ತು. ಅದು ಹದಿಮೂರು ಅಡಿ ಉದ್ದವಿತ್ತು ಮತ್ತು ಆರು ಅಡಿ ಅಗಲವಿತ್ತು. ಆ ಮಂಚವು ಈಗಲೂ ಅಮ್ಮೋನಿಯರು ವಾಸಿಸುವ ರಬ್ಬಾದಲ್ಲಿದೆ.)

ಜೋರ್ಡನ್ ನದಿಯ ಪೂರ್ವಕ್ಕೆ ಇರುವ ದೇಶ

12 “ನಾವು ಗೆದ್ದುಕೊಂಡಿದ್ದ ಆ ದೇಶಗಳನ್ನು ನಮ್ಮದಾಗಿ ಮಾಡಿಕೊಂಡೆವು. ಇದರ ಒಂದು ಭಾಗವನ್ನು ನಾನು ರೂಬೇನ್ ಮತ್ತು ಗಾದ್ ಕುಲದವರಿಗೆ ಹಂಚಿಕೊಟ್ಟೆನು. ಅದು ಅರೋಯೇರ್‌ನಿಂದ ಹಿಡಿದು ಗಿಲ್ಯಾದ್ ಪ್ರದೇಶದವರೆಗೆ ಅಂದರೆ ಅರ್ನೋನ್ ಕಣಿವೆಯಲ್ಲಿರುವ ಅರೋಯೇರ್‌ನಿಂದ ಮೊದಲುಗೊಂಡು ಗಿಲ್ಯಾದ್ ಬೆಟ್ಟಪ್ರದೇಶದವರೆಗೂ ಅದರ ಎಲ್ಲಾ ಪಟ್ಟಣಗಳ ಸಮೇತವಾಗಿ ನಾನು ಕೊಟ್ಟೆನು. ಬೆಟ್ಟಪ್ರದೇಶವಾದ ಗಿಲ್ಯಾದಿನಲ್ಲಿ ಅರ್ಧಭಾಗ ಅವರಿಗೆ ದೊರೆಯಿತು. 13 ಗಿಲ್ಯಾದಿನ ಇನ್ನೊಂದು ಅರ್ಧಪ್ರದೇಶ ಮತ್ತು ಇಡೀ ಬಾಷಾನ್ ದೇಶವನ್ನು ಮನಸ್ಸೆಯ ಅರ್ಧಕುಲದವರಿಗೆ ಹಂಚಿದೆನು.”

(ಬಾಷಾನ್ ಓಗನ ಸಾಮ್ರಾಜ್ಯವಾಗಿತ್ತು. ಬಾಷಾನಿನ ಒಂದು ಭಾಗವನ್ನು ಅರ್ಗೋಬ್ ಎಂದು ಕರೆಯುತ್ತಾರೆ. ಅಲ್ಲದೆ ರೆಫಾಯರ ದೇಶವೆಂತಲೂ ಕರೆಯುತ್ತಾರೆ. 14 ಮನಸ್ಸೆ ಕುಲದ ಯಾಯೀರ ಎಂಬಾತನು ಅರ್ಗೋಬ್ ಪ್ರದೇಶಗಳನ್ನು ವಶಪಡಿಸಿಕೊಂಡನು. ಆ ಪ್ರದೇಶ ಗೆಷೂರ್ಯರ ಮತ್ತು ಮಾಕಾತ್ಯರ ದೇಶದ ಮೇರೆಯ ತನಕ ಹಬ್ಬಿತ್ತು. ಆದ್ದರಿಂದ ಆ ಪ್ರದೇಶಕ್ಕೆ ಯಾಯೀರ್ ಎಂಬ ಹೆಸರು ಬಂತು. ಇಂದಿಗೂ ಜನರು ಆ ಊರುಗಳಿಗೆ, “ಯಾಯೀರನ ಬಾಷಾನ್ ಊರುಗಳು” ಎಂದು ಕರೆಯುತ್ತಾರೆ.)

15 “ಗಿಲ್ಯಾದ್ ಪ್ರಾಂತ್ಯವನ್ನು ನಾನು ಮಾಕೀರನಿಗೆ ಕೊಟ್ಟೆನು. 16 ರೂಬೇನ್ ಮತ್ತು ಗಾದ್ ಕುಲಗಳವರಿಗೆ ಗಿಲ್ಯಾದಿನಿಂದ ಪ್ರಾರಂಭವಾಗುವ ಪ್ರಾಂತ್ಯವನ್ನು ಕೊಟ್ಟೆನು. ಇದು ಅರ್ನೋನ್ ಕಣಿವೆಯಿಂದಿಡಿದು ಯಬ್ಬೋಕ್ ಹೊಳೆಯ ತನಕ ವಿಸ್ತಾರವಾಗಿದೆ. ಯಬ್ಬೋಕ್ ಹೊಳೆಯು ಅಮ್ಮೋನಿಯರ ಮೇರೆಯಾಗಿದೆ. 17 ಅವರ ಪಶ್ಚಿಮದ ಮೇರೆ ಜೋರ್ಡನ್ ಹೊಳೆಯಾಗಿದೆ; ಉತ್ತರದ ಮೇರೆ ಗಲಿಲಾಯ ಸಮುದ್ರವಾಗಿದೆ; ದಕ್ಷಿಣದ ಮೇರೆ ಮೃತ್ಯು ಸಮುದ್ರವಾಗಿದೆ. ಅದು ಪಿಸ್ಗಾ ಬೆಟ್ಟದ ಬುಡದಲ್ಲಿದೆ.

18 “ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನೆಂದರೆ: ‘ನಿಮ್ಮ ದೇವರಾದ ಯೆಹೋವನು ನಿಮಗೆ ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಸ್ವಾಸ್ತ್ಯವನ್ನು ಕೊಟ್ಟಿದ್ದಾನೆ. ಆದರೆ ನಿಮ್ಮಲ್ಲಿರುವ ಸೈನಿಕರು ತಮ್ಮ ಆಯುಧಗಳನ್ನು ತೆಗೆದುಕೊಂಡು ಇತರ ಇಸ್ರೇಲರೊಂದಿಗೆ ನದಿಯಾಚೆಗೆ ಬರಬೇಕು. ಅಲ್ಲಿಯ ದೇಶಗಳನ್ನು ಸ್ವಾಧೀನಪಡಿಸಿಕೊಂಡು ಶಾಂತಿ ನೆಲೆಸುವ ತನಕ ಅವರೊಂದಿಗಿರಬೇಕು. 19 ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲಿ ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳೂ ವಾಸಿಸಬೇಕು; (ನಿಮಗೆ ಪಶುಗಳು ಹೆಚ್ಚಾಗಿವೆ ಎಂದು ನನಗೆ ಗೊತ್ತುಂಟು.) 20 ಜೋರ್ಡನ್ ನದಿಯ ಮತ್ತೊಂದು ಕಡೆಯಲ್ಲಿರುವ ದೇಶವನ್ನು ಯೆಹೋವನು ನಿಮ್ಮ ಸಂಬಂಧಿಕರಾದ ಇಸ್ರೇಲರಿಗೆ ಕೊಡಲಿದ್ದಾನೆ. ಆ ದೇಶವನ್ನು ಇಸ್ರೇಲರು ತೆಗೆದುಕೊಳ್ಳುವ ತನಕ ನೀವು ಅವರಿಗೆ ಸಹಾಯ ಮಾಡಲೇಬೇಕು. ಇಲ್ಲಿ ಯೆಹೋವನು ನಿಮಗೆ ಶಾಂತಿಯನ್ನು ದಯಪಾಲಿಸಿದಂತೆ ಅಲ್ಲಿಯೂ ದಯಪಾಲಿಸುವ ತನಕ ಅವರಿಗೆ ಸಹಾಯ ಮಾಡಿರಿ. ಬಳಿಕ ನಾನು ನಿಮಗೆ ಕೊಟ್ಟಿರುವ ಈ ದೇಶಕ್ಕೆ ನೀವು ಮರಳಿ ಬರಬಹುದು.’

21 “ಆಗ ನಾನು ಯೆಹೋಶುವನಿಗೆ, ‘ಈ ಇಬ್ಬರು ಅರಸರಿಗೆ ಯೆಹೋವನು ಮಾಡಿದ್ದನ್ನು ಕಣ್ಣಾರೆ ನೋಡಿರುವೆ. ಆತನು ಅದೇ ಪ್ರಕಾರ ನೀವು ಈಗ ಪ್ರವೇಶಿಸುವ ದೇಶಗಳಿಗೂ ಮಾಡುವನು. 22 ಆ ಪ್ರಾಂತ್ಯದ ಅರಸುಗಳಿಗೆ ನೀನು ಹೆದರಬೇಡ. ನಿನ್ನ ದೇವರಾದ ಯೆಹೋವನು ನಿನಗಾಗಿ ಯುದ್ಧ ಮಾಡುವನು’ ಎಂದು ಹೇಳಿದೆನು.

ಕಾನಾನ್ ದೇಶದೊಳಗೆ ಮೋಶೆಗೆ ಪ್ರವೇಶವಿಲ್ಲ

23 “ನಾನು ನನ್ನ ಮನವಿಯನ್ನು ನೆರವೇರಿಸಲು ಯೆಹೋವನನ್ನು ಬೇಡಿಕೊಂಡೆನು. 24 ನಾನು, ‘ಯೆಹೋವನೇ, ನನ್ನ ಒಡೆಯನೇ, ನಾನು ನಿನ್ನ ಸೇವಕ. ನಿನ್ನ ತ್ರಾಣವುಳ್ಳ ಹಸ್ತದಿಂದ ಮಾಡಿದ ಪರಾಕ್ರಮದ ಕಾರ್ಯಗಳನ್ನು ನೀನು ನನಗೆ ಸ್ವಲ್ಪ ಮಟ್ಟಿಗೆ ತೋರಿಸಿರುವೆ. ನೀನು ಮಾಡಿದ ಮಹಾಕೃತ್ಯಗಳನ್ನು ಮಾಡಲು ಪರಲೋಕದ ಅಥವಾ ಭೂಲೋಕದ ಯಾವ ದೇವರುಗಳಿಗೂ ಸಾಧ್ಯವಿಲ್ಲ. 25 ನಾನು ಜೋರ್ಡನ್ ನದಿ ದಾಟಿ, ನೀನು ನಮಗೆ ಕೊಡುವ ಉತ್ತಮವಾದ ದೇಶವನ್ನು ನಾನು ನೋಡುವಂತೆ ಮಾಡು. ಅದರ ಮನೋಹರವಾದ ಬೆಟ್ಟಪ್ರದೇಶಗಳನ್ನೂ ಲೆಬನೋನ್ ಪ್ರಾಂತ್ಯಗಳನ್ನೂ ನೋಡುವಂತೆ ಮಾಡು’ ಎಂದು ಬೇಡಿದೆನು.

26 “ಆದರೆ ನಿಮ್ಮ ಕಾರಣದಿಂದ ಯೆಹೋವನು ನನ್ನ ಮೇಲೆ ಕೋಪಗೊಂಡಿದ್ದನು. ಆತನು ನನಗೆ ಕಿವಿಗೊಡಲಿಲ್ಲ. ಆತನು ನನಗೆ ಹೇಳಿದ್ದೇನೆಂದರೆ: ‘ಅಷ್ಟೇ ಸಾಕು! ಇನ್ನು ಈ ವಿಷಯವನ್ನು ನೀನು ಎತ್ತಬಾರದು. 27 ನೀನು ಪಿಸ್ಗಾ ಬೆಟ್ಟವನ್ನು ಹತ್ತಿ ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ದಿಕ್ಕುಗಳ ಕಡೆಗೆ ನೋಡು ಮತ್ತು ಆನಂದಿಸು. ಆದರೆ ನೀನು ಜೋರ್ಡನ್ ನದಿ ದಾಟಿ ಆ ಪ್ರದೇಶಗಳನ್ನು ಪ್ರವೇಶಿಸುವುದಿಲ್ಲ. 28 ನೀನು ಯೆಹೋಶುವನನ್ನು ಪ್ರೋತ್ಸಾಹಿಸು. ಅವನಿಗೆ ವಿಷಯಗಳನ್ನೆಲ್ಲಾ ತಿಳಿಯಪಡಿಸು. ಅವನು ಜನರನ್ನು ಜೋರ್ಡನ್ ನದಿಯಾಚೆ ನಡೆಸಬೇಕು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಅವನು ಅವರಿಗೆ ಸಹಾಯ ಮಾಡುವನು. ಆದ್ದರಿಂದ ಅವನನ್ನು ಬಲಪಡಿಸು’ ಎಂದು ಹೇಳಿದನು.

29 “ಅಂತೆಯೇ ನಾವು ಬೇತ್‌ಪೆಗೋರಿನ ಎದುರಿಗಿರುವ ಕಣಿವೆಯಲ್ಲಿ ಇಳಿದುಕೊಂಡೆವು.”

ಕೀರ್ತನೆಗಳು 85

ಸ್ತುತಿಗೀತೆ. ರಚನೆಗಾರರು: ಕೋರಹೀಯರು.

85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
    ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
    ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
ನಿನ್ನ ಜನರ ದ್ರೋಹವನ್ನು ಕ್ಷಮಿಸು!
    ಅವರ ಪಾಪಗಳನ್ನು ಅಳಿಸಿಬಿಡು!

ನಿನ್ನ ರೌದ್ರವನ್ನು ತೊರೆದುಬಿಡು.
    ಉಗ್ರ ಕೋಪದಿಂದಿರಬೇಡ.
ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ
    ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ?
    ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು!
    ನಿನ್ನ ಜನರನ್ನು ಸಂತೋಷಗೊಳಿಸು.
ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು.
    ನಮ್ಮನ್ನು ರಕ್ಷಿಸು.

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

ಯೆಶಾಯ 31

ಇಸ್ರೇಲು, ದೇವರ ಶಕ್ತಿಯ ಮೇಲೆ ಅವಲಂಬಿಸಬೇಕು

31 ಸಹಾಯಕ್ಕಾಗಿ ಈಜಿಪ್ಟಿಗೆ ಹೋಗುವ ಜನರನ್ನು ನೋಡಿರಿ. ಆ ಜನರು ಕುದುರೆಗಳಿಗಾಗಿ ಕೇಳುತ್ತಿದ್ದಾರೆ. ಕುದುರೆಗಳು ಅವರನ್ನು ರಕ್ಷಿಸುತ್ತವೆ ಎಂದು ಅವರು ಭಾವಿಸುತ್ತಾರೆ. ಈಜಿಪ್ಟಿನ ಬಹಳ ರಥಗಳು ಮತ್ತು ಬಹಳ ಕುದುರೆಗಳು ಅವರನ್ನು ಕಾಪಾಡುವವು ಎಂದು ಜನರು ತಿಳಿದುಕೊಳ್ಳುತ್ತಾರೆ. ಸೈನ್ಯವು ದೊಡ್ಡದಾಗಿರುವದರಿಂದ ಯಾವ ಅಪಾಯವೂ ಬಾರದು ಎಂದು ಅವರು ತಿಳಿದುಕೊಳ್ಳುತ್ತಾರೆ. ಜನರು ಇಸ್ರೇಲಿನ ಪರಿಶುದ್ಧನನ್ನು ನಂಬುವದಿಲ್ಲ. ಅವರು ಯೆಹೋವನ ಸಹಾಯವನ್ನು ಕೋರುವದಿಲ್ಲ. ಆದರೆ ಯೆಹೋವನು ಜ್ಞಾನವಂತನಾಗಿದ್ದಾನೆ. ಆತನೇ ಅವರಿಗೆ ವಿರುದ್ಧವಾಗಿ ಸಂಕಟಗಳನ್ನು ಬರಮಾಡುವನು. ದೇವರ ಆಜ್ಞೆಯನ್ನು ಜನರು ಬದಲಾಯಿಸಲಾಗುವದಿಲ್ಲ. ಯೆಹೋವನು ಎದ್ದು ದುಷ್ಟಜನರ (ಯೆಹೂದ) ವಿರುದ್ಧ ಯುದ್ಧ ಮಾಡುವನು. ಅವರಿಗೆ ಸಹಾಯ ಕೊಡುವವರ (ಈಜಿಪ್ಟ್) ವಿರುದ್ಧವಾಗಿಯೂ ಯುದ್ಧ ಮಾಡುವನು.

ಈಜಿಪ್ಟಿನ ಜನರು ಮನುಷ್ಯಮಾತ್ರದವರೇ. ಅವರು ದೇವರಲ್ಲ. ಈಜಿಪ್ಟಿನ ಕುದುರೆಗಳು ಪ್ರಾಣಿಗಳಾಗಿವೆ. ಅವುಗಳು ಆತ್ಮವಲ್ಲ. ಯೆಹೋವನು ತನ್ನ ಕೈಯನ್ನು ಚಾಚುವಾಗ ಸಹಾಯ ಮಾಡುವವನು (ಈಜಿಪ್ಟ್) ಸೋಲುವನು. ಸಹಾಯ ಪಡೆದವನು (ಯೆಹೂದ) ಬೀಳುವನು. ಅವರೆಲ್ಲರೂ ಒಟ್ಟಿಗೆ ನಾಶವಾಗುವರು.

ಯೆಹೋವನು ನನಗೆ ಹೀಗೆ ಹೇಳಿದನು: “ಸಿಂಹವು ಅಥವಾ ಪ್ರಾಯದ ಸಿಂಹವು ಒಂದು ಪ್ರಾಣಿಯನ್ನು ಹಿಡಿದು ಕೊಂದಾಗ ಅದರ ಮೇಲೆ ನಿಂತು ಗರ್ಜಿಸುವದು. ಆ ಸಮಯದಲ್ಲಿ ಯಾವುದೂ ಆ ಸಿಂಹವನ್ನು ಹೆದರಿಸಲಾರದು. ಜನರು ಬಂದು ಗಟ್ಟಿಯಾಗಿ ಚೀರಿಕೊಂಡರೂ ಸಿಂಹಕ್ಕೆ ಹೆದರಿಕೆಯುಂಟಾಗದು; ದೊಡ್ಡ ಶಬ್ದ ಮಾಡಿದರೂ ಸಿಂಹವು ಓಡಿಹೋಗದು.”

ಅದೇ ರೀತಿಯಲ್ಲಿ ಸರ್ವಶಕ್ತನಾದ ಯೆಹೋವನು ಚೀಯೋನ್ ಪರ್ವತಕ್ಕೆ ಬಂದು ಯುದ್ಧ ಮಾಡುವನು. ಆತನು ಜೆರುಸಲೇಮನ್ನು ಹಕ್ಕಿಯು ತನ್ನ ಗೂಡಿನ ಸುತ್ತಲೂ ಹಾರಾಡುತ್ತಾ ಕಾಪಾಡುವಂತೆ ಸಂರಕ್ಷಿಸುವನು. ಯೆಹೋವನು ಜೆರುಸಲೇಮನ್ನು ರಕ್ಷಿಸುವನು. ಯೆಹೋವನು “ಹಾದುಹೋಗಿ” ಜೆರುಸಲೇಮನ್ನು ರಕ್ಷಿಸುವನು.

ದೇವರಿಗೆ ವಿರುದ್ಧವಾಗಿರುವ ಇಸ್ರೇಲಿನ ಮಕ್ಕಳೇ, ನೀವು ದೇವರ ಬಳಿಗೆ ಹಿಂತಿರುಗಿ ಬನ್ನಿರಿ. ಆಗ ಜನರು ತಯಾರಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಪೂಜಿಸುವದನ್ನು ನಿಲ್ಲಿಸುವರು. ನೀವು ಆ ವಿಗ್ರಹಗಳನ್ನು ತಯಾರಿಸಿದಾಗ ನಿಜವಾಗಿಯೂ ಪಾಪಮಾಡಿದಿರಿ.

ಅಶ್ಶೂರವು ಕತ್ತಿಯಿಂದ ನಾಶವಾಗುವದು ಖಂಡಿತ. ಆದರೆ ಆ ಕತ್ತಿಯು ಮನುಷ್ಯನ ಕತ್ತಿಯಲ್ಲ. ಖಡ್ಗವು ಅವರನ್ನು ನುಂಗುವುದು, ಆದರೆ ಅದು ಮನುಷ್ಯನ ಖಡ್ಗವಲ್ಲ. ಅಶ್ಶೂರವು ದೇವರ ಖಡ್ಗದಿಂದ ಓಡಿಹೋಗುವದು. ಅದರ ಯೌವನಸ್ಥರು ಸೆರೆಹಿಡಿಯಲ್ಪಟ್ಟು ಗುಲಾಮರನ್ನಾಗಿ ಮಾಡಲ್ಪಡುವರು. ಅವರ ಸುರಕ್ಷತೆಯ ಸ್ಥಳ ನಾಶವಾಗುವದು. ಅವರ ಅಧಿಪತಿಗಳು ಧ್ವಜವನ್ನು ಬಿಟ್ಟು ಸೋತುಹೋಗುವರು.

ಯೆಹೋವನೇ ಇದನ್ನು ನುಡಿದಿದ್ದಾನೆ. ಆತನ ಅಗ್ನಿವೇದಿಕೆಯು ಚೀಯೋನಿನಲ್ಲಿದೆ. ಆತನ ಒಲೆಯು ಜೆರುಸಲೇಮಿನಲ್ಲಿದೆ.

ಪ್ರಕಟನೆ 1

ಪೀಠಿಕೆ

ಇದು ಯೇಸು ಕ್ರಿಸ್ತನ ಪ್ರಕಟನೆ. ದೇವರು ಬೇಗನೆ ಸಂಭವಿಸಲಿರುವುದನ್ನು ತನ್ನ ಸೇವಕರಿಗೆ ತೋರ್ಪಡಿಸುವುದಕ್ಕಾಗಿ ಯೇಸುವಿಗೆ ಇವುಗಳನ್ನು ಪ್ರಕಟಿಸಿದನು. ಕ್ರಿಸ್ತನು ತನ್ನ ಸೇವಕನಾದ ಯೋಹಾನನಿಗೆ ಇವುಗಳನ್ನು ತೋರಿಸಲು ತನ್ನ ದೂತನನ್ನು ಕಳುಹಿಸಿದನು. ಯೋಹಾನನು ತಾನು ಕಂಡದ್ದೆಲ್ಲವನ್ನು ತಿಳಿಸಿದನು. ಇದು ಯೇಸು ಕ್ರಿಸ್ತನು ಅವನಿಗೆ ಹೇಳಿದ ಸತ್ಯ. ಇದು ದೇವರಿಂದ ಬಂದ ಸಂದೇಶ. ದೇವರಿಂದ ಬಂದ ಈ ಸಂದೇಶದ ವಾಕ್ಯಗಳನ್ನು ಓದುವವರೂ ಈ ಸಂದೇಶವನ್ನು ಕೇಳಿ ಅದನ್ನು ಕೈಕೊಂಡು ನಡೆಯುವವರೂ ಭಾಗ್ಯವಂತರಾಗಿದ್ದಾರೆ. ಏಕೆಂದರೆ ನೆರವೇರುವ ಕಾಲವು ಸಮೀಪವಾಗಿದೆ.

ಯೋಹಾನನು ಸಭೆಗಳಿಗೆ ಬರೆದ ಯೇಸುವಿನ ಸಂದೇಶ

ಏಷ್ಯಾ[a] ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ:

ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ.

ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್.

ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು[b] ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್.

ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ[c] ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.”

ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೇಸುವಿನ ನಿಮಿತ್ತ ಸಂಕಟಗಳಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ಪಾಲುಗಾರರಾಗಿದ್ದೇವೆ. ನಾನು ದೇವರ ಸಂದೇಶಕ್ಕೂ ಯೇಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದುದರಿಂದ ಪತ್ಮೊಸ್ ದ್ವೀಪದಲ್ಲಿದ್ದೆನು. 10 ಪ್ರಭುವಿನ ದಿನದಂದು ಪವಿತ್ರಾತ್ಮನು ನನ್ನನ್ನು ವಶಪಡಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಒಂದು ಮಹಾಶಬ್ದವನ್ನು ಕೇಳಿದೆನು. ಆ ಶಬ್ದವು ತುತೂರಿಯ ಧ್ವನಿಯಂತಿತ್ತು. 11 ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು.

12 ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದಾರೆಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀಪಸ್ತಂಭಗಳನ್ನು ಕಂಡೆನು. 13 ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ[d] ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14 ಆತನ ತಲೆಕೂದಲು ಮಂಜಿನಂತೆಯೂ ಉಣ್ಣೆಯಂತೆಯೂ ಬೆಳ್ಳಗಿದ್ದವು; ಕಣ್ಣುಗಳು ಬೆಂಕಿಯ ಜ್ವಾಲೆಯಂತಿದ್ದವು; 15 ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು. 16 ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡಿದ್ದನು. ಆತನ ಬಾಯೊಳಗಿನಿಂದ ಹರಿತವಾದ ಇಬ್ಬಾಯಿಖಡ್ಗವು ಹೊರಬರುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು.

17 ನಾನು ಆತನನ್ನು ನೋಡಿದಾಗ, ಆತನ ಪಾದಗಳ ಬಳಿ ಸತ್ತವನಂತೆ ಕುಸಿದುಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ! ನಾನೇ ಆದಿ ಮತ್ತು ಅಂತ್ಯ. 18 ನಾನೇ ಜೀವಿಸುವಾತನು. ನಾನು ಸತ್ತೆನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ. 19 ಆದ್ದರಿಂದ ನೀನು ನೋಡಿದ ಸಂಗತಿಗಳನ್ನು ಬರೆ. ಈಗ ಸಂಭವಿಸುವ ಸಂಗತಿಗಳನ್ನು ಮತ್ತು ಮುಂದೆ ಸಂಭವಿಸಬೇಕಾದ ಸಂಗತಿಗಳನ್ನು ಬರೆ. 20 ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಮತ್ತು ನೀನು ಕಂಡ ಏಳು ಬಂಗಾರದ ದೀಪಸ್ತಂಭಗಳ ಗೂಢಾರ್ಥವು ಹೀಗಿದೆ: ಏಳು ನಕ್ಷತ್ರಗಳೆಂದರೆ ಏಳು ಸಭೆಗಳ ದೂತರು. ಏಳು ದೀಪಸ್ತಂಭಗಳೆಂದರೆ ಏಳು ಸಭೆಗಳು.” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International