M’Cheyne Bible Reading Plan
ಚಲ್ಪಹಾದನ ಹೆಣ್ಣುಮಕ್ಕಳ ಭೂಮಿ
36 ಒಂದು ದಿನ ಗಿಲ್ಯಾದ್ ಕುಲದ ಕುಟುಂಬಗಳ ನಾಯಕರು ಮೋಶೆಯೊಡನೆಯೂ ಇತರ ಇಸ್ರೇಲರ ಕುಟುಂಬಗಳ ನಾಯಕರೊಡನೆಯೂ ಮಾತಾಡುವುದಕ್ಕೆ ಬಂದರು. (ಗಿಲ್ಯಾದನು ಮಾಕೀರನ ಮಗ; ಮಾಕೀರನು ಮನಸ್ಸೆಯ ಮಗ; ಮನಸ್ಸೆಯು ಯೋಸೇಫನ ಮಗ.) 2 ಅವರು, “ಸ್ವಾಮೀ, ಚೀಟುಹಾಕಿ ಇಸ್ರೇಲರಿಗೆ ದೇಶವನ್ನು ಹಂಚಿಕೊಡಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ್ದಾನೆ. ಅದಲ್ಲದೆ ನಮ್ಮ ಸಂಬಂಧಿಕನಾದ ಚಲ್ಪಹಾದನ ಭೂಮಿಯನ್ನು ಅವನ ಹೆಣ್ಣುಮಕ್ಕಳಿಗೆ ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ. 3 ಹೀಗಿರಲು ಅವರು ಇಸ್ರೇಲರ ಬೇರೆ ಯಾವ ಕುಲದವರನ್ನಾದರೂ ಮದುವೆಯಾದರೆ ಅವರ ಸ್ವಾಸ್ತ್ಯವು ನಮ್ಮ ಪೂರ್ವಿಕರ ಕುಲದಿಂದ ತೆಗೆಯಲ್ಪಟ್ಟು, ಅವರು ಮದುವೆಯ ಮೂಲಕ ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವುದು. 4 ಇಸ್ರೇಲರ ಜೂಬಿಲಿ ಸಂವತ್ಸರವು ಬಂದಾಗ ಅವರ ಸ್ವಾಸ್ತ್ಯವು ಅವರು ಸೇರಿಕೊಳ್ಳುವ ಕುಲದ ಸ್ವಾಸ್ತ್ಯಕ್ಕೆ ಕೂಡಿಕೊಳ್ಳುವುದರಿಂದ ನಮ್ಮ ಕುಲದಿಂದ ತೆಗೆಯಲ್ಪಡುವುದು” ಎಂದು ಹೇಳಿದರು.
5 ಆಗ ಮೋಶೆಯು ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರೇಲರಿಗೆ, “ಯೋಸೇಫನ ಸಂತತಿಯವರು ಹೇಳುವುದು ನ್ಯಾಯ. 6 ಆದಕಾರಣ ಚಲ್ಫಹಾದನ ಹೆಣ್ಣುಮಕ್ಕಳು ಮದುವೆಯಾಗುವುದಾದರೆ ತಮ್ಮ ತಂದೆಯ ಗೋತ್ರಕ್ಕೆ ಸಂಬಂಧಿಸಿದ ಯಾರನ್ನು ಬೇಕಾದರೂ ಮದುವೆಯಾಗಬಹುದೆಂದು ಯೆಹೋವನು ಆಜ್ಞಾಪಿಸಿದ್ದಾನೆ. 7 ಇಸ್ರೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರೇಲರೆಲ್ಲರೂ ತಮ್ಮ ಪೂರ್ವಿಕರಿಂದ ಸ್ವಾಸ್ತ್ಯವಾಗಿ ಪಡೆದುಕೊಂಡ ತಮ್ಮ ಗೋತ್ರದ ಭೂಮಿಯನ್ನು ತಮ್ಮ ಸ್ವಾಧೀನದಲ್ಲೇ ಇಟ್ಟುಕೊಂಡಿರಬೇಕು. 8 ಆದ್ದರಿಂದ ಇಸ್ರೇಲರ ಕುಲಗಳಲ್ಲಿ ಭೂಮಿಯನ್ನು ಸ್ವಾಸ್ತ್ಯವಾಗಿ ಹೊಂದುವ ಪ್ರತಿಯೊಬ್ಬ ಮಗಳು, ತನ್ನ ತಂದೆಯ ಗೋತ್ರದವನನ್ನೇ ಮದುವೆಯಾಗಬೇಕು. 9 ಹೀಗೆ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರೇಲರ ಪ್ರತಿಯೊಂದು ಕುಲವು ತನ್ನ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರುವುದು” ಎಂದು ಹೇಳಿದನು.
10 ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಚಲ್ಪಹಾದನ ಹೆಣ್ಣುಮಕ್ಕಳು ವಿಧೇಯರಾದರು. 11 ಆದ್ದರಿಂದ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬವರು ಯೆಹೋವನ ಆಜ್ಞಾನುಸಾರವಾಗಿ ನಡೆದು ತಂದೆಯ ಅಣ್ಣತಮ್ಮಂದಿರ ಗಂಡುಮಕ್ಕಳನ್ನು ಮದುವೆಯಾದರು. 12 ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರನ್ನೇ ಮದುವೆಯಾದದ್ದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ನಿಂತಿತು.
13 ಜೆರಿಕೊ ಪಟ್ಟಣದ ಎದುರಾಗಿರುವ ಜೋರ್ಡನ್ ನದಿಯ ಬಳಿಯಲ್ಲಿರುವ ಮೋವಾಬಿನ ಬಯಲಿನಲ್ಲಿ ಯೆಹೋವನು ಇಸ್ರೇಲರಿಗೆ ಮೋಶೆಯ ಮೂಲಕ ಕೊಟ್ಟ ಆಜ್ಞಾವಿಧಿಗಳು ಇವೇ.
ಸ್ತುತಿಗೀತೆ. ರಚನೆಗಾರ: ಆಸಾಫ.
80 ಇಸ್ರೇಲನ್ನು ಕಾಯುವ ಕುರುಬನೇ,
ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
2 ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
ಬಂದು ನಮ್ಮನ್ನು ರಕ್ಷಿಸು.
3 ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
4 ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
5 ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
6 ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
ಶತ್ರುಗಳು ನಮ್ಮನ್ನು ನೋಡಿ ನಗುವರು.
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
8 ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
9 “ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11 ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ.
ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.
17 ನೀನು ಆರಿಸಿಕೊಂಡಿರುವಾತನ[b] ಕಡೆಗೆ ಕೈಚಾಚಿ ಸಹಾಯ ಮಾಡು.
ನೀನು ಬೆಳೆಸಿದ ಜನರ[c] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
ನಮ್ಮನ್ನು ಬದುಕಿಸು.
ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
ಉತ್ತರ ಇಸ್ರೇಲಿಗೆ ಎಚ್ಚರಿಕೆ
28 ಸಮಾರ್ಯದ ಕಡೆಗೆ ನೋಡು!
ಎಫ್ರಾಯೀಮಿನ ಮತ್ತರಾದ ಜನರು ಆ ಪಟ್ಟಣದ ಬಗ್ಗೆ ಬಹಳ ಅಭಿಮಾನಪಡುತ್ತಿದ್ದಾರೆ.
ಆ ನಗರವು ಪರ್ವತದ ಮೇಲಿರುವುದು; ಅದರ ಸುತ್ತಲೂ ಫಲವತ್ತಾದ ಕಣಿವೆ ಇರುವುದು.
ಸಮಾರ್ಯದ ಜನರು ತಮ್ಮ ನಗರವು ಸುಂದರವಾದ ಕಿರೀಟವೆಂದು ನೆನಸುತ್ತಾರೆ.
ಆದರೆ ಅವರು ಕುಡಿದು ಮತ್ತರಾಗಿದ್ದಾರೆ.
ಅವರ “ಸುಂದರ ಕಿರೀಟವು” ಒಣಗಿದ ತರಗೆಲೆಯಾಗಿದೆ.
2 ಇಗೋ, ನನ್ನ ಒಡೆಯನಿಗೆ ಬಲಿಷ್ಠನೂ ಧೈರ್ಯವಂತನೂ ಆಗಿರುವ ಒಬ್ಬನಿದ್ದಾನೆ.
ಅವನು ದೇಶದೊಳಗೆ ಆಲಿಕಲ್ಲಿನ ಮಳೆಯಿಂದ ಕೂಡಿದ ಬಿರುಗಾಳಿಯಂತೆಯೂ
ನದಿಯ ಬಲವಾದ ಪ್ರವಾಹವು ದೇಶದೊಳಗೆ ನುಗ್ಗಿಬರುವಂತೆಯೂ ಅವನು ಬರುವನು.
ಆ ಕಿರೀಟವನ್ನು (ಸಮಾರ್ಯ) ನೆಲದ ಮೇಲೆ ಬಿಸಾಡುವನು.
3 ಕುಡಿದು ಮತ್ತರಾದ ಎಫ್ರಾಯೀಮ್ಯರಿಗೆ ಸುಂದರವಾದ ಕಿರೀಟದ ಮೇಲೆ ಹೆಚ್ಚಳ.
ಆದರೆ ಆ ನಗರವು ತುಳಿಯಲ್ಪಡುವದು.
4 ಆ ನಗರವು ಬೆಟ್ಟದ ಮೇಲೆ ಕುಳಿತಿದೆ; ಸುತ್ತಲೂ ಫಲವತ್ತಾದ ಕಣಿವೆ ಇದೆ.
ಆ ಸುಂದರವಾದ ಪುಷ್ಪ ಕಿರೀಟವು ಕೇವಲ ಒಣಗಿದ ತರಗೆಲೆ.
ಆ ನಗರವು ಬೇಸಿಗೆಯ ಮೊದಲಿನ (ಅಂಜೂರದ) ಹಣ್ಣುಗಳಂತೆ ಇದೆ.
ಅದನ್ನು ನೋಡಿದವರು ಕೂಡಲೇ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವರು.
5 ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನು “ಮಹಿಮಾಪೂರ್ಣವಾದ ಕಿರೀಟ”ವಾಗುವನು. ಉಳಿದಿರುವ ಆತನ ಜನರಿಗೆ ಆತನು “ಅಂದವಾದ ಪುಷ್ಪಕಿರೀಟ”ವಾಗಿರುವನು. 6 ಆತನ ಜನರನ್ನು ಆಳುವ ನ್ಯಾಯಾಧಿಪತಿಗಳಿಗೆ ಯೆಹೋವನು ಜ್ಞಾನವನ್ನು ಕೊಡುವನು. ಪುರದ್ವಾರದಲ್ಲಿ ಯುದ್ಧಮಾಡುವ ಆತನ ಜನರಿಗೆ ಯೆಹೋವನು ಬಲವನ್ನು ಕೊಡುವನು. 7 ಆದರೆ ಈಗ ಆ ನಾಯಕರುಗಳು ಮತ್ತರಾಗಿದ್ದಾರೆ. ಯಾಜಕರೂ ಪ್ರವಾದಿಗಳೂ ಮದ್ಯಸೇವನೆಯಿಂದ ಮತ್ತರಾಗಿದ್ದಾರೆ. ಅವರು ಎಡವಿಬೀಳುತ್ತಾರೆ. ಪ್ರವಾದಿಗಳು ದರ್ಶನಗಳನ್ನು ಕಾಣುವಾಗ ಅಮಲೇರಿದವರಾಗಿರುತ್ತಾರೆ; ನ್ಯಾಯಾಧೀಶರು ತೀರ್ಪುಕೊಡುವಾಗ ಅಮಲೇರಿದವರಾಗಿರುತ್ತಾರೆ. 8 ಅವರ ಮುಂದಿರುವ ಮೇಜುಗಳ ಮೇಲೆ ವಾಂತಿಯು ತುಂಬಿರುತ್ತದೆ; ಶುದ್ಧವಾದ ಸ್ಥಳವೇ ಇರುವದಿಲ್ಲ.
ದೇವರು ತನ್ನ ಜನರಿಗೆ ಸಹಾಯ ಮಾಡುವನು
9 ಯೆಹೋವನು ಜನರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬೋಧನೆಯನ್ನು ತನ್ನ ಜನರು ಅರಿತುಕೊಳ್ಳಲೆಂದು ಯೆಹೋವನು ಪ್ರಯತ್ನಿಸುತ್ತಿದ್ದಾನೆ. ಆದರೆ ಜನರು ಇನ್ನೂ ತಾಯಿ ಹಾಲು ಕುಡಿಯುವ ಚಿಕ್ಕ ಕೂಸುಗಳಿಂತಿದ್ದಾರೆ. 10 ಆದ್ದರಿಂದ ಚಿಕ್ಕಕೂಸುಗಳೊಂದಿಗೆ ಮಾತಾಡುವಂತೆ ಯೆಹೋವನು ಅವರ ಸಂಗಡ ಮಾತಾಡುತ್ತಾನೆ:
“ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.”[a]
11 ಯೆಹೋವನು ಅವರ ಸಂಗಡ ವಿಚಿತ್ರವಾಗಿಯೂ ಅನ್ಯಭಾಷೆಗಳಲ್ಲಿಯೂ ಮಾತನಾಡುತ್ತಾನೆ.
12 ಹಿಂದಿನ ಕಾಲದಲ್ಲಿ ದೇವರು ಅವರ ಸಂಗಡ ಮಾತನಾಡಿ, “ಇಲ್ಲಿ ವಿಶ್ರಾಂತಿಯ ಸ್ಥಳವಿದೆ, ಇದು ವಿಶ್ರಮಿಸುವ ಸ್ಥಳ. ಆಯಾಸಗೊಂಡವರೇ, ಬಂದು ವಿಶ್ರಮಿಸಿರಿ. ಇದು ಸಮಾಧಾನಕರವಾದ ಸ್ಥಳ” ಎಂದು ಹೇಳುತ್ತಿದ್ದನು.
ಆದರೆ ಜನರಿಗೆ ಆತನ ಮಾತುಗಳನ್ನು ಕೇಳಲು ಇಷ್ಟವಾಗಲಿಲ್ಲ. 13 ಆದ್ದರಿಂದ ಆತನ ಮಾತು ಅವರಿಗೆ ಪರಭಾಷೆಯಂತೆ ಕೇಳಿಸುವುದು.
“ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.”
ಜನರು ತಮ್ಮ ಇಷ್ಟಪ್ರಕಾರ ನಡೆದರು. ಆದ್ದರಿಂದ ಅವರು ಸೋಲಿಸಲ್ಪಟ್ಟರು. ಅವರು ಉರುಲಿಗೆ ಸಿಕ್ಕಿ ಹಾಕಿಕೊಂಡು ಹಿಡಿಯಲ್ಪಟ್ಟರು.
ದೇವರ ನ್ಯಾಯತೀರ್ಪಿನಿಂದ ಯಾರೂ ತಪ್ಪಿಸಿಕೊಳ್ಳುವದಿಲ್ಲ
14 ಆದಕಾರಣ ಜೆರುಸಲೇಮಿನಲ್ಲಿರುವ ಅಧಿಪತಿಗಳೇ, ಯೆಹೋವನ ಸಂದೇಶವನ್ನು ನೀವು ಕೇಳಬೇಕು. ಆದರೆ ನೀವು ಅದನ್ನು ಕೇಳಲು ನಿರಾಕರಿಸುತ್ತಿದ್ದೀರಿ. 15 ನೀವು, “ನಾವು ಮರಣದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಪಾತಾಳದೊಂದಿಗೆ ಒಪ್ಪಂದ ಮಾಡಿದ್ದೇವೆ. ಆದ್ದರಿಂದ ನಾವು ಶಿಕ್ಷಿಸಲ್ಪಡುವದಿಲ್ಲ. ಶಿಕ್ಷೆಯು ಹಾದುಹೋಗುವಾಗ ಅದು ನಮಗೇನೂ ಹಾನಿ ಮಾಡುವದಿಲ್ಲ. ನಾವು ನಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತೇವೆ” ಎಂದು ಹೇಳುತ್ತೀರಿ.
16 ಇದಕ್ಕೋಸ್ಕರವಾಗಿಯೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುವನು: “ಚೀಯೋನಿನಲ್ಲಿ ನಾನು ಒಂದು ಮೂಲೆಗಲ್ಲು ಇಡುವೆನು, ಇದು ಬಹು ಅಮೂಲ್ಯವಾದ ಕಲ್ಲು. ಈ ವಿಶೇಷವಾದ ಕಲ್ಲಿನ ಮೇಲೆ ಎಲ್ಲವೂ ಕಟ್ಟಲ್ಪಡುವದು. ಆ ಕಲ್ಲಿನ ಮೇಲೆ ಭರವಸವಿಡುವ ಯಾವನು ಆಶಾಭಂಗಪಡುವುದಿಲ್ಲ.
17 “ಗೋಡೆಯು ನೆಟ್ಟಗಿದೆಯೆಂದು ನೋಡಲು ಜನರು ಗುಂಡನ್ನೂ ನೂಲನ್ನೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ನಾನು ನ್ಯಾಯವನ್ನು ನೂಲನ್ನಾಗಿಯೂ ಕರುಣೆಯನ್ನು ಗುಂಡನ್ನಾಗಿಯೂ ಉಪಯೋಗಿಸುವೆನು. ನೀವು ದುಷ್ಟಜನರು. ನೀವು ನಿಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತಿದ್ದೀರಿ. ಆದರೆ ನೀವು ಶಿಕ್ಷಿಸಲ್ಪಡುವಿರಿ. ನೀವು ಅಡಗಿಕೊಂಡಿರುವ ಸ್ಥಳವನ್ನು ನಾಶಮಾಡುವ ಬಿರುಗಾಳಿಯಂತೆಯೂ ಪ್ರವಾಹದಂತೆಯೂ ಅದಿರುವುದು. 18 ಮರಣದೊಂದಿಗೆ ನೀವು ಮಾಡಿದ ಒಪ್ಪಂದವು ಮುರಿಯಲ್ಪಡುವದು. ಪಾತಾಳದೊಂದಿಗೆ ನೀವು ಮಾಡಿದ ಒಪ್ಪಂದವು ನಿಮ್ಮ ಸಹಾಯಕ್ಕೆ ಬಾರದು.
“ನಿಮ್ಮನ್ನು ಶಿಕ್ಷಿಸಲು ಒಬ್ಬನು ಬರುವನು. ಆತನು ನೀವು ಧೂಳೋ ಎಂಬಂತೆ ನಿಮ್ಮ ಮೇಲೆ ತುಳಿದಾಡುವನು. 19 ಆತನು ಬಂದು ನಿಮ್ಮನ್ನು ತೆಗೆದುಕೊಂಡು ಹೋಗುವನು. ನಿಮಗೆ ದೊರಕುವ ಶಿಕ್ಷೆ ಬಹು ಭಯಂಕರವಾದದ್ದು. ಅದರ ಬಗ್ಗೆ ನೀವು ಕೇಳಿದ ಕೂಡಲೇ ಚಿಂತಿಸಲಾರಂಭಿಸುವಿರಿ. ಅದು ಮುಂಜಾನೆ ಬಂದು ರಾತ್ರಿ ಬಹು ಹೊತ್ತಿನ ತನಕ ಇರುವದು.
“ಆಗ ನೀವು ಈ ಕಥೆಯನ್ನು ಅರ್ಥಮಾಡಿಕೊಳ್ಳುವಿರಿ: 20 ಒಬ್ಬ ಮನುಷ್ಯನು ತನಗೆ ಚಿಕ್ಕದಾಗಿರುವ ಹಾಸಿಗೆಯ ಮೇಲೆ ಮಲಗಲು ಪ್ರಯತ್ನಿಸುವನು. ಅವನಲ್ಲಿರುವ ಕಂಬಳಿಯು ಅವನನ್ನು ಪೂರ್ಣವಾಗಿ ಮುಚ್ಚುತ್ತಿರಲಿಲ್ಲ. ಆ ಹಾಸಿಗೆಯೂ, ಆ ಕಂಬಳಿಯೂ ಹೇಗೆ ನಿಷ್ಪ್ರಯೋಜಕವೋ ಹಾಗೆಯೇ ನಿಮ್ಮ ಒಪ್ಪಂದವೂ ನಿಷ್ಪ್ರಯೋಜಕವಾಗಿದೆ.”
21 ಪೆರಾಚೀಮ್ ಬೆಟ್ಟದ ಮೇಲೆ ಯೆಹೋವನು ಯುದ್ಧ ಮಾಡಿದಂತೆಯೇ ಆತನು ಯುದ್ಧಮಾಡುವನು. ಗಿಬ್ಯೋನ್ ಕಣಿವೆಯಲ್ಲಿ ಯೆಹೋವನು ಕೋಪಗೊಂಡಿದ್ದಂತೆಯೇ ಕೋಪಗೊಳ್ಳುವನು. ಆಗ ಆತನು ಮಾಡಬೇಕಾದ ಕಾರ್ಯಗಳನ್ನು ಮಾಡುವನು. ಯೆಹೋವನು ಕೆಲವು ಅಪರಿಚಿತವಾದ ಸಂಗತಿಗಳನ್ನು ಮಾಡುವನು. ಆದರೆ ಆತನು ತನ್ನ ಕಾರ್ಯವನ್ನು ಮಾಡಿಮುಗಿಸುವನು. ಆ ಕೆಲಸವು ಒಬ್ಬ ಪರಿಚಯವಿಲ್ಲದವನ ಕೆಲಸವಾಗಿದೆ. 22 ಈಗ ನೀವು ಆ ವಿಷಯಗಳೊಂದಿಗೆ ಯುದ್ಧ ಮಾಡಬಾರದು. ನೀವು ಹಾಗೆ ಮಾಡಿದ್ದಲ್ಲಿ ನಿಮ್ಮ ಸುತ್ತಲಿರುವ ಹಗ್ಗವು ಇನ್ನೂ ಬಿಗಿಯಾಗುವದು.
ನಾನು ಕೇಳಿರುವ ಮಾತುಗಳು ಬದಲಾಗವು. ಯಾಕೆಂದರೆ ಅವು ಸರ್ವಶಕ್ತನಾದ ಯೆಹೋವನ ಮಾತುಗಳು. ಆತನು ಪ್ರಪಂಚವನ್ನು ಆಳುವಾತನು. ಆ ಸಂಗತಿಗಳೆಲ್ಲವೂ ಸಂಭವಿಸುವವು.
ಯೆಹೋವನ ಶಿಕ್ಷೆಯು ನ್ಯಾಯಸಮ್ಮತವಾದದ್ದು
23 ನಾನು ಹೇಳುವ ಸಂದೇಶಕ್ಕೆ ಜಾಗ್ರತೆಯಿಂದ ಕಿವಿಗೊಡಿರಿ. 24 ಒಬ್ಬ ವ್ಯವಸಾಯಗಾರನು ಯಾವಾಗಲೂ ಉಳುತ್ತಲೇ ಇರುವನೋ? ಇಲ್ಲ. ಅವನು ಮಣ್ಣಿನಲ್ಲಿ ಯಾವಾಗಲೂ ಕೆಲಸ ಮಾಡುತ್ತಿರುವನೋ? ಇಲ್ಲ. 25 ವ್ಯವಸಾಯಗಾರನು ಮಣ್ಣನ್ನು ಹಸನುಮಾಡಿ ನಂತರ ಬೀಜ ಬಿತ್ತುವನು. ಬೇರೆಬೇರೆ ತರದ ಬೀಜಗಳನ್ನು ಬೇರೆಬೇರೆ ರೀತಿಯಲ್ಲಿ ಬಿತ್ತುವನು. ಅವನು ಗೋಧಿಯನ್ನಾಗಲಿ ಬಾರ್ಲಿಯನ್ನಾಗಲಿ ನೆಲದ ಮೇಲೆ ಬಿಸಾಡುವನು. ಗೋಧಿಯನ್ನು ಸಾಲಾಗಿ ಬಿತ್ತುವನು. ಬೇರೆಬೇರೆ ಗಿಡಗಳ ಬೀಜವನ್ನು ಬೇರೆಬೇರೆ ಸ್ಥಳಗಳಲ್ಲಿಯೂ ಬೇರೆಬೇರೆ ವಿಧಾನದಲ್ಲಿಯೂ ಬಿತ್ತುವನು.
26 ನಮ್ಮ ದೇವರು ಈ ಉದಾಹರಣೆಯ ಮೂಲಕ ಒಂದು ಪಾಠವನ್ನು ಕಲಿಸುತ್ತಾನೆ. ಏನೆಂದರೆ ಆತನು ಜನರನ್ನು ಶಿಕ್ಷಿಸುವಾಗ ನ್ಯಾಯವಾಗಿ ಶಿಕ್ಷಿಸುತ್ತಾನೆ. 27 ವ್ಯವಸಾಯಗಾರನು ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ. ಜೀರಿಗೆಯನ್ನು ಕುದುರೆಯಿಂದ ಗುಂಡನ್ನು ಉರುಳಿಸಿ ನುಚ್ಚುನೂರು ಮಾಡುವನೋ? ಇಲ್ಲ! ಅವನೊಂದು ಸಣ್ಣ ಕೋಲನ್ನು ಉಪಯೋಗಿಸುವನು. 28 ಸ್ತ್ರೀಯು ರೊಟ್ಟಿಯನ್ನು ತಯಾರಿಸುವಾಗ ಹಿಟ್ಟನ್ನು ಕೈಯಲ್ಲಿ ನಾದಿ ಅದನ್ನು ಚೆನ್ನಾಗಿ ಹದಗೊಳಿಸುವಳು. ಆದರೆ ಆಕೆ ಹಾಗೆಯೇ ಮಾಡುತ್ತಾ ಇರುವದಿಲ್ಲ. ಅದೇ ರೀತಿಯಲ್ಲಿ ಯೆಹೋವನು ಜನರನ್ನು ಶಿಕ್ಷಿಸುವನು. ಆತನು ಬಂಡಿಯ ಚಕ್ರದಿಂದ ಬೆದರಿಸುವನು. ಆದರೆ ಅವರನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡುವದಿಲ್ಲ. ಅವರನ್ನು ತುಳಿದುಬಿಡಲು ಅನೇಕ ಕುದುರೆಗಳನ್ನು ಉಪಯೋಗಿಸುವದಿಲ್ಲ. 29 ಈ ಪಾಠವು ಸರ್ವಶಕ್ತನಾದ ಯೆಹೋವನಿಂದ ಬರುತ್ತದೆ. ಆತನು ಆಶ್ಚರ್ಯಕರವಾದ ಸಲಹೆಯನ್ನು ಕೊಡುತ್ತಾನೆ. ಆತನು ನಿಜವಾಗಿಯೂ ಜ್ಞಾನಿ.
1 ಸಭಾಹಿರಿಯನು, ದೇವರಿಂದ ಆಯ್ಕೆಯಾದ ಅಮ್ಮನವರಿಗೆ ಮತ್ತು ಆಕೆಯ ಮಕ್ಕಳಿಗೆ ಬರೆಯುವ ಪತ್ರ.
ನಾನು ನಿಮ್ಮೆಲ್ಲರನ್ನು ಸತ್ಯದಲ್ಲಿ ಪ್ರೀತಿಸುತ್ತೇನೆ. ಸತ್ಯವನ್ನು ತಿಳಿದಿರುವ ಜನರೆಲ್ಲರೂ ಸಹ ನಿಮ್ಮನ್ನು ಪ್ರೀತಿಸುತ್ತಾರೆ. 2 ನಮ್ಮಲ್ಲಿ ನೆಲೆಗೊಂಡಿರುವ ಸತ್ಯದ ನಿಮಿತ್ತ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಈ ಸತ್ಯವು ನಮ್ಮಲ್ಲಿ ಸದಾಕಾಲ ಇರುವುದು.
3 ತಂದೆಯಾದ ದೇವರಿಂದಲೂ ಆತನ ಮಗನಾದ ಯೇಸು ಕ್ರಿಸ್ತನಿಂದಲೂ ಕೃಪೆ, ಕರುಣೆ ಮತ್ತು ಶಾಂತಿ ನಮ್ಮೊಂದಿಗಿರುತ್ತವೆ. ನಾವು ಈ ಆಶೀರ್ವಾದಗಳನ್ನು ಸತ್ಯದ ಮತ್ತು ಪ್ರೀತಿಯ ಮೂಲಕ ಪಡೆಯುತ್ತೇವೆ.
4 ನಿಮ್ಮ ಮಕ್ಕಳಲ್ಲಿ ಕೆಲವರ ಬಗ್ಗೆ ನಾನು ಕೇಳಿದಾಗ ತುಂಬಾ ಸಂತೋಷವಾಯಿತು. ತಂದೆಯಾದ ದೇವರು ನಮಗೆ ಆಜ್ಞಾಪಿಸಿದ ಸತ್ಯಮಾರ್ಗವನ್ನು ಅವರು ಅನುಸರಿಸುತ್ತಿರುವುದರಿಂದ ನನಗೆ ಸಂತೋಷವಾಯಿತು. 5 ಪ್ರಿಯ ಅಮ್ಮನವರೇ, ಈಗ ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಹೊಸ ಆಜ್ಞೆಯಾಗಿರದೆ ಮೊದಲಿನಿಂದಲೂ ಇದ್ದ ಆಜ್ಞೆಯಾಗಿದೆ. 6 ಆತನು ಆಜ್ಞಾಪಿಸಿದ ಮಾರ್ಗದಲ್ಲಿ ಜೀವಿಸುವುದೇ ಪ್ರೀತಿ. ನೀವು ಪ್ರೀತಿಯಿಂದ ಬಾಳಬೇಕೆಂಬುದೇ ದೇವರ ಆಜ್ಞೆ. ನೀವು ಆರಂಭದಿಂದಲೂ ಈ ಆಜ್ಞೆಯನ್ನು ಕೇಳಿರುವಿರಿ.
7 ಈಗ ಲೋಕದಲ್ಲಿ ಅನೇಕ ಸುಳ್ಳುಬೋಧಕರಿದ್ದಾರೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಮನುಷ್ಯನಾಗಿ ಬಂದನೆಂಬುದನ್ನು ಈ ಸುಳ್ಳುಬೋಧಕರು ಒಪ್ಪಿಕೊಳ್ಳುವುದಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳದವನು ಸುಳ್ಳುಬೋಧಕನಾಗಿದ್ದಾನೆ ಮತ್ತು ಯೇಸು ಕ್ರಿಸ್ತನ ವೈರಿಯಾಗಿದ್ದಾನೆ. 8 ನೀವು ಎಚ್ಚರವಾಗಿರಿ! ನೀವು ದುಡಿದು ಸಂಪಾದಿಸಿದ್ದನ್ನು ಕಳೆದುಕೊಳ್ಳಬೇಡಿ. ನೀವು ಎಚ್ಚರಿಕೆಯಿಂದ ಇರುವುದಾದರೆ, ನಿಮಗೆ ಬರಬೇಕಾದ ಪೂರ್ಣಫಲವನ್ನು ಹೊಂದಿಕೊಳ್ಳುವಿರಿ.
9 ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿಸಿ ಮುಂದಕ್ಕೆ ಹೋಗುವವನು ದೇವರನ್ನು ಹೊಂದಿಲ್ಲ. ಆದರೆ ಆ ಉಪದೇಶದಲ್ಲಿ ನೆಲೆಗೊಂಡಿರುವವನು ತಂದೆಯನ್ನೂ ಮಗನನ್ನೂ ಹೊಂದಿದ್ದಾನೆ. 10 ನಿಮ್ಮ ಬಳಿಗೆ ಬರುವವನು ಈ ಉಪದೇಶವನ್ನು ಹೊಂದಿಲ್ಲದಿದ್ದರೆ ಅವನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಳ್ಳಬೇಡಿ. ಅವನನ್ನು ಸ್ವಾಗತಿಸಬೇಡಿ. 11 ನೀವು ಅವನನ್ನು ಸ್ವಾಗತಿಸಿದರೆ ಅವನ ಕೆಟ್ಟಕಾರ್ಯಕ್ಕೆ ನೀವೂ ಸಹಾಯ ಮಾಡಿದಂತಾಗುವುದು.
12 ನಾನು ನಿಮಗೆ ಹೇಳಬೇಕಾದುದು ಬಹಳಷ್ಟಿದೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲಿಚ್ಛಿಸುವುದಿಲ್ಲ. ಅದರ ಬದಲು, ನಾನೇ ನಿಮ್ಮ ಬಳಿಗೆ ಬರಬೇಕೆಂದಿದ್ದೇನೆ. ಆಗ ನಾವು ಒಟ್ಟಾಗಿ ಮಾತನಾಡಬಹುದು. ಇದು ನಮಗೆ ಬಹಳ ಸಂತಸವನ್ನು ಉಂಟುಮಾಡುತ್ತದೆ. 13 ದೇವರಿಂದ ಆಯ್ಕೆಗೊಂಡವಳಾದ ನಿಮ್ಮ ಸಹೋದರಿಯ ಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International