M’Cheyne Bible Reading Plan
ಮಾಂಸವನ್ನು ತಿನ್ನುವುದರ ಬಗ್ಗೆ ನಿಯಮಗಳು
11 ಯೆಹೋವನು ಮೋಶೆ ಆರೋನರಿಗೆ ಹೀಗೆಂದನು: 2 “ಇಸ್ರೇಲರಿಗೆ ಹೇಳಬೇಕಾದದ್ದೇನೆಂದರೆ, ನೀವು ಈ ಪಶುಗಳನ್ನು ತಿನ್ನಬಹುದು: 3 ಕಾಲ್ಗೊರಸು ಸೀಳಿರುವ ಮತ್ತು ಮೆಲಕು ಹಾಕುವ ಮಾಂಸವನ್ನು ತಿನ್ನಬಹುದು.
4-6 “ಕೆಲವು ಪಶುಗಳು ಮೆಲಕು ಹಾಕುತ್ತವೆ, ಆದರೆ ಅವುಗಳ ಕಾಲ್ಗೊರಸು ಸೀಳಿರುವುದಿಲ್ಲ; ಅವುಗಳ ಮಾಂಸವನ್ನು ತಿನ್ನಕೂಡದು. ಒಂಟೆಗಳು, ಬೆಟ್ಟದ ಮೊಲಗಳು ಮತ್ತು ಮೊಲಗಳು ಮೆಲಕುಹಾಕುತ್ತವೆ. ಆದರೆ ಅವುಗಳ ಗೊರಸು ಸೀಳಿರುವುದಿಲ್ಲ. ಆದ್ದರಿಂದ ಅವು ನಿಮಗೆ ಅಶುದ್ಧ. 7 ಇನ್ನು ಕೆಲವು ಪಶುಗಳ ಕಾಲ್ಗೊರಸುಗಳು ಸೀಳಿರುತ್ತವೆ. ಆದರೆ ಅವು ಮೆಲಕು ಹಾಕುವುದಿಲ್ಲ; ಅವುಗಳ ಮಾಂಸವನ್ನು ತಿನ್ನಕೂಡದು. ಹಂದಿಗಳ ಗೊರಸುಗಳು ಸೀಳಿರುತ್ತವೆ. ಆದರೆ ಮೆಲಕು ಹಾಕುವುದಿಲ್ಲ. ಆದ್ದರಿಂದ ಅವು ನಿಮಗೆ ಅಶುದ್ಧ. 8 ಅವುಗಳ ಮಾಂಸವನ್ನು ತಿನ್ನಕೂಡದು. ಅವುಗಳ ಮೃತಶರೀರಗಳನ್ನು ಸಹ ಮುಟ್ಟಬಾರದು. ಅವು ನಿಮಗೆ ಅಶುದ್ಧ!
ಸಮುದ್ರಾಹಾರದ ಬಗ್ಗೆ ನಿಯಮಗಳು
9 “ನೀರಿನಲ್ಲಿಯಾಗಲಿ ನದಿಯಲ್ಲಾಗಲಿ ಜೀವಿಸುವ ಜಲಪ್ರಾಣಿಗೆ ರೆಕ್ಕೆಯಿದ್ದು ಮೈಯೆಲ್ಲಾ ಪರೆಪರೆಯಿದ್ದರೆ ನೀವು ಅದನ್ನು ತಿನ್ನಬಹುದು. 10-11 ಆದರೆ ನೀರಿನಲ್ಲಿಯಾಗಲಿ ನದಿಯಲ್ಲಾಗಲಿ ಜೀವಿಸುತ್ತಿರುವ ಜಲಪ್ರಾಣಿಗೆ ರೆಕ್ಕೆಗಳು ಮತ್ತು ಪರೆಗಳು ಇಲ್ಲದಿದ್ದರೆ, ನೀವು ಆ ಪ್ರಾಣಿಯನ್ನು ತಿನ್ನಕೂಡದು. ತಿನ್ನುವುದಕ್ಕೆ ಅಯೋಗ್ಯವಾದದ್ದೆಂದು ಯೆಹೋವನು ಹೇಳುವ ಪ್ರಾಣಿಗಳಲ್ಲಿ ಅದು ಒಂದಾಗಿದೆ. ಆ ಪ್ರಾಣಿಯ ಮಾಂಸವನ್ನು ತಿನ್ನಕೂಡದು. ಅದರ ಮೃತಶರೀರವನ್ನೂ ಮುಟ್ಟಕೂಡದು. 12 ನೀರಿನಲ್ಲಿರುವ ಜಲಪ್ರಾಣಿಗೆ ರೆಕ್ಕೆಗಳು ಮತ್ತು ಪರೆಗಳು ಇಲ್ಲದಿದ್ದರೆ ಅದು ತಿನ್ನುವುದಕ್ಕೆ ಅಯೋಗ್ಯವಾಗಿದೆ.
ತಿನ್ನಬಾರದ ಪಕ್ಷಿಗಳು
13 “ನಿಷಿದ್ಧವಾದ ಈ ಪಕ್ಷಿಗಳ ಮಾಂಸವನ್ನು ನೀವು ತಿನ್ನಬಾರದು: ಗರುಡ, ಬೆಟ್ಟದ ಹದ್ದು, ಕ್ರೌಂಚ, 14 ಹದ್ದು, ಎಲ್ಲಾ ವಿಧವಾದ ಗಿಡುಗ, 15 ಎಲ್ಲಾ ವಿಧವಾದ ಕಾಗೆ, 16 ಉಷ್ಟ್ರಪಕ್ಷಿ, ಉಲೂಕ, ಕಡಲ್ಹಕ್ಕಿ ಎಲ್ಲಾ ವಿಧವಾದ ಡೇಗೆ, 17 ಗೂಬೆ, ಹೆಗ್ಗೂಬೆ, ಸಮುದ್ರಪಕ್ಷಿ, 18 ನೀರುಕೋಳಿ, ರಣಹದ್ದು, ನೀರುಕಾಗೆ, 19 ಕೊಕ್ಕರೆ, ಸಕಲ ವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.
ಕ್ರಿಮಿಕೀಟಗಳನ್ನು ತಿನ್ನುವುದರ ಬಗ್ಗೆ ನಿಯಮಗಳು
20 “ಕ್ರಿಮಿಕೀಟಗಳು ರೆಕ್ಕೆಗಳುಳ್ಳದ್ದಾಗಿ ನಾಲ್ಕು ಕಾಲುಗಳಲ್ಲಿ ಹರಿದಾಡುವುದಾಗಿದ್ದರೆ ಅವು ನಿಮಗೆ ನಿಷಿದ್ಧವಾಗಿವೆ. ಆ ಕ್ರಿಮಿಕೀಟಗಳನ್ನು ತಿನ್ನಕೂಡದು. 21 ಆದರೆ ಕೀಟಗಳು ನೆಲದ ಮೇಲೆ ಕುಪ್ಪಳಿಸುವುದಕ್ಕೋಸ್ಕರ ಕೀಲುಗಳುಳ್ಳ ಕಾಲುಗಳನ್ನು ಹೊಂದಿದ್ದರೆ ಅವುಗಳನ್ನು ನೀವು ತಿನ್ನಬಹುದು. 22 ಡತೆಗಳನ್ನು, ರೆಕ್ಕೆಗಳುಳ್ಳ ಎಲ್ಲಾ ವಿಧದ ಮಿಡತೆಗಳನ್ನು, ಎಲ್ಲಾ ವಿಧವಾದ ಚಿಟ್ಟೆಮಿಡತೆಗಳನ್ನು, ಎಲ್ಲಾ ವಿಧವಾದ ಸಣ್ಣ ಮಿಡತೆಗಳನ್ನು ಸಹ ತಿನ್ನಬಹುದು.
23 “ಆದರೆ ರೆಕ್ಕೆಗಳಿದ್ದು ನಾಲ್ಕು ಕಾಲುಗಳಿರುವ ಬೇರೆ ಎಲ್ಲಾ ಕ್ರಿಮಿಕೀಟಗಳನ್ನು ನೀವು ತಿನ್ನಬಾರದು. 24 ಆ ಕ್ರಿಮಿಕೀಟಗಳು ನಿಮ್ಮನ್ನು ಅಶುದ್ಧ ಮಾಡುತ್ತವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು. 25 ಯಾವನಾದರೂ ಆ ಸತ್ತ ಕ್ರಿಮಿಕೀಟಗಳಲ್ಲಿ ಒಂದನ್ನು ಎತ್ತಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದ ತನಕ ಅಶುದ್ಧನಾಗಿರುವನು.
ಪ್ರಾಣಿಗಳ ಬಗ್ಗೆ ಇನ್ನೂ ಹೆಚ್ಚಿನ ನಿಯಮಗಳು
26-27 “ಕೆಲವು ಪ್ರಾಣಿಗಳಿಗೆ ಸೀಳಿದ ಕಾಲ್ಗೊರಸುಗಳು ಇವೆ. ಆದರೆ ಕಾಲ್ಗೊರಸುಗಳು ಸರಿಯಾಗಿ ಎರಡು ಭಾಗಗಳಾಗಿರುವುದಿಲ್ಲ. ಕೆಲವು ಪ್ರಾಣಿಗಳು ಮೆಲಕು ಹಾಕುವುದಿಲ್ಲ. ಕೆಲವು ಪ್ರಾಣಿಗಳಿಗೆ ಕಾಲ್ಗೊರಸುಗಳು ಇರುವುದಿಲ್ಲ. ಅವು ಅಂಗಾಲುಗಳಿಂದ ನಡೆಯುತ್ತವೆ. ಆ ಎಲ್ಲಾ ಪ್ರಾಣಿಗಳು ನಿಮಗೆ ಅಶುದ್ಧ. ಅವುಗಳ ಸತ್ತದೇಹಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 28 ಯಾವನಾದರೂ ಅವುಗಳ ಹೆಣಗಳನ್ನು ಎತ್ತಿದರೆ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಆ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ.
ಹರಿದಾಡುವ ಪ್ರಾಣಿಗಳ ಬಗ್ಗೆ ನಿಯಮಗಳು
29 “ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧ; ಮುಂಗುಸಿ, ಇಲಿ, ಎಲ್ಲಾ ವಿಧವಾದ ದೊಡ್ಡಹಲ್ಲಿ, 30 ಹಾವರಾಣಿ, ಮೊಸಳೆ, ಹಲ್ಲಿ, ಬಸವನಹುಳ, ಚಿಟ್ಟಿಲಿ, 31 ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು.
ಅಶುದ್ಧ ಪ್ರಾಣಿಗಳ ಬಗ್ಗೆ ನಿಯಮಗಳು
32 “ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೂ ಸತ್ತು, ಯಾವುದೇ ವಸ್ತುವಿನ ಮೇಲೆ ಬಿದ್ದರೆ, ಆಗ ಆ ವಸ್ತುವು ಅಶುದ್ಧವಾಗುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಶೋಕಬಟ್ಟೆಯಾಗಲಿ ಅದು ಎಂಥದ್ದಾಗಿದ್ದರೂ ಕೆಲಸಕ್ಕೆ ಉಪಯುಕ್ತವಾಗಿದ್ದರೂ ಅದನ್ನು ನೀರಿನಲ್ಲಿ ಹಾಕಬೇಕು. ಅದು ಸಾಯಂಕಾಲದವರೆಗೆ ಅಶುದ್ಧವಾಗಿರುವುದು. ನಂತರ ಅದು ಶುದ್ಧವಾಗುವುದು. 33 ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೊಂದು ಸತ್ತು ಮಣ್ಣಿನ ಬೋಗುಣಿಗೆ ಬಿದ್ದರೆ, ಆಗ ಆ ಬೋಗುಣಿಯಲ್ಲಿ ಇರುವುದೆಲ್ಲಾ ಅಶುದ್ಧವಾಗುವುದು. ಆ ಬೋಗುಣಿಯನ್ನು ನೀವು ಒಡೆದುಹಾಕಬೇಕು. 34 ಅಶುದ್ಧವಾದ ಮಣ್ಣಿನ ಬೋಗುಣಿಯಿಂದ ನೀರು ಯಾವುದೇ ಆಹಾರಕ್ಕೆ ತಾಗಿದರೆ, ಆ ಆಹಾರವು ಅಶುದ್ಧವಾಗುವುದು. ಅಶುದ್ಧವಾದ ಬೋಗುಣಿಯಲ್ಲಿ ಯಾವುದೇ ಪಾನದ್ರವ್ಯವಿದ್ದರೂ ಅದು ಅಶುದ್ಧವಾಗುವುದು. 35 ಸತ್ತ ಪ್ರಾಣಿಯ ಯಾವುದೇ ಭಾಗ ಯಾವುದೇ ವಸ್ತುವಿನ ಮೇಲೆ ಬಿದ್ದರೂ ಆ ವಸ್ತು ಅಶುದ್ಧವಾಗಿದೆ. ಅದು ಮಣ್ಣಿನ ಒಲೆಯಾಗಿದ್ದರೂ ಮಡಿಕೆಯಾಗಿದ್ದರೂ ಅದನ್ನು ಒಡೆದುಹಾಕಬೇಕು. ಆ ವಸ್ತುಗಳು ಇನ್ನೆಂದಿಗೂ ಶುದ್ಧವಾಗಿರುವುದಿಲ್ಲ. ಅವು ನಿಮಗೆ ಯಾವಾಗಲೂ ಅಶುದ್ಧವಾಗಿರುವವು.
36 “ಒರತೆಯಾಗಲಿ ನೀರನ್ನು ಪಡೆಯುವ ಬಾವಿಯಾಗಲಿ ಶುದ್ಧವಾಗಿರುವುದು. ಆದರೆ ಯಾವನಾದರೂ ಅಶುದ್ಧ ಪ್ರಾಣಿಗಳ ಹೆಣವನ್ನು ಮುಟ್ಟಿದರೆ, ಅವನು ಅಶುದ್ಧನಾಗುವನು. 37 ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗವು ನೆಡುವುದಕ್ಕೆ ಇಟ್ಟಿರುವ ಬೀಜದ ಮೇಲೆ ಬಿದ್ದರೂ ಆ ಬೀಜ ಶುದ್ಧವಾಗಿಯೇ ಇರುತ್ತದೆ. 38 ಆದರೆ ನೀರು ಹಾಕಿ ನೆನಸಿದ ಬೀಜಗಳ ಮೇಲೆ ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗ ಬಿದ್ದರೆ, ಆ ಬೀಜಗಳು ನಿಮಗೆ ಅಶುದ್ಧವಾಗಿವೆ.
39 “ಅಲ್ಲದೆ ನೀವು ಮಾಂಸಾಹಾರಕ್ಕಾಗಿ ಉಪಯೋಗಿಸುವ ಯಾವುದೇ ಪ್ರಾಣಿ ಸತ್ತರೆ, ಅದನ್ನು ಮುಟ್ಟುವ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. 40 ಈ ಪ್ರಾಣಿಯ ಮಾಂಸವನ್ನು ತಿನ್ನುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸತ್ತ ಪ್ರಾಣಿಯನ್ನು ಎತ್ತುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
41 “ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೆಲ್ಲ ಯೆಹೋವನು ನಿಮಗೆ ನಿಷಿದ್ಧಗೊಳಿಸಿದ್ದಾನೆ. ನೀವು ಅವುಗಳ ಮಾಂಸವನ್ನು ತಿನ್ನಬಾರದು. 42 ಹೊಟ್ಟೆಯ ಮೇಲೆ ತೆವಳಿಕೊಂಡು ಹೋಗುವ ಜಂತುವನ್ನು ಅಥವಾ ತನ್ನ ನಾಲ್ಕು ಕಾಲುಗಳಲ್ಲಿ ನಡೆಯುವ ಜಂತುವನ್ನು ಅಥವಾ ಅನೇಕ ಕಾಲುಗಳುಳ್ಳ ಜಂತುಗಳನ್ನು ನೀವು ತಿನ್ನಬಾರದು. 43 ಆ ಜಂತುಗಳು ನಿಮ್ಮನ್ನು ಹೊಲೆ ಮಾಡದಿರಲಿ. ನೀವು ಅಶುದ್ಧರಾಗಬಾರದು. 44 ಯಾಕೆಂದರೆ, ನಾನೇ ನಿಮ್ಮ ದೇವರಾದ ಯೆಹೋವನು. ನಾನು ಪರಿಶುದ್ಧನಾಗಿದ್ದೇನೆ, ಆದ್ದರಿಂದ ನೀವೂ ಪರಿಶುದ್ಧರಾಗಿರಬೇಕು. ಹರಿದಾಡುವ ಆ ಜಂತುಗಳಿಂದ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ. 45 ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಯೆಹೋವನೇ ನಾನು. ನೀವು ನನ್ನ ವಿಶೇಷ ಜನರಾಗಿರಬೇಕೆಂದು ಮತ್ತು ನಾನು ನಿಮ್ಮ ದೇವರಾಗಿರಬೇಕೆಂದು ನಿಮ್ಮನ್ನು ಕರೆದುಕೊಂಡು ಬಂದೆನು. ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು.”
46 ಎಲ್ಲಾ ಸಾಕುಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲಿರುವ ಇತರ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. ಸಮುದ್ರದಲ್ಲಿರುವ ಮತ್ತು ನೆಲದ ಮೇಲೆ ಹರಿದಾಡುವ ಎಲ್ಲಾ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. 47 ಅಶುದ್ಧವಾದ ಮತ್ತು ಶುದ್ಧವಾದ ಪ್ರಾಣಿಗಳ ಕುರಿತು ತಿಳಿದುಕೊಳ್ಳಲು ನಿಮಗೆ ಈ ನಿಯಮಗಳು ಸಹಾಯಕವಾಗಿವೆ. ಜನರು ಯಾವ ಪ್ರಾಣಿಗಳ ಮಾಂಸವನ್ನು ತಿನ್ನಬಹುದು ಮತ್ತು ಯಾವುದನ್ನು ತಿನ್ನಬಾರದೆಂದು ಈ ನಿಯಮಗಳು ತಿಳಿಸುತ್ತವೆ.
ಬಾಣಂತಿಯರ ಶುದ್ಧೀಕರಣ
12 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಹೇಳು:
“ಒಬ್ಬ ಸ್ತ್ರೀಯು ಬಸುರಾಗಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಅವಳ ತಿಂಗಳ ಮುಟ್ಟಿನಿಂದ ಅಶುದ್ಧಳಾಗುವಂತೆಯೇ ಅಶುದ್ಧಳಾಗಿರುವಳು. 3 ಎಂಟನೆಯ ದಿನದಲ್ಲಿ ಆ ಗಂಡುಮಗುವಿಗೆ ಸುನ್ನತಿ ಮಾಡಬೇಕು. 4 ಆಮೇಲೆ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗಲು ಮೂವತ್ತುಮೂರು ದಿನಗಳು ಹಿಡಿಯುವುದು. ಆಕೆ ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ಆಕೆಯ ಶುದ್ಧೀಕರಣ ಪೂರ್ತಿಯಾಗುವವರೆಗೆ ಆಕೆ ಪವಿತ್ರಸ್ಥಳವನ್ನು ಪ್ರವೇಶಿಸಬಾರದು. 5 ಆದರೆ ಸ್ತ್ರೀಯು ಹೆಣ್ಣುಮಗುವಿಗೆ ಜನ್ಮವಿತ್ತರೆ, ಅವಳು ಆಕೆಯ ತಿಂಗಳ ಮುಟ್ಟಿನಿಂದ ಅಶುದ್ಧಳಾಗುವಂತೆ ಎರಡು ವಾರಗಳವರೆಗೆ ಅಶುದ್ಧಳಾಗಿರುವಳು. ಆಕೆಯು ರಕ್ತಸ್ರಾವದಿಂದ ಶುದ್ಧಳಾಗಲು ಅರವತ್ತಾರು ದಿನಗಳು ಹಿಡಿಯುವವು.
6 “ಶುದ್ಧೀಕರಣ ಸಮಯ ಪೂರ್ತಿಯಾದ ನಂತರ ಹೆಣ್ಣುಮಗುವಿನ ಅಥವಾ ಗಂಡುಮಗುವಿನ ತಾಯಿಯು ವಿಶೇಷ ಯಜ್ಞಗಳನ್ನು ದೇವದರ್ಶನಗುಡಾರದ ಬಾಗಿಲ ಬಳಿಗೆ ತಂದು ಅವುಗಳನ್ನು ಯಾಜಕನಿಗೆ ಕೊಡಬೇಕು. ಆಕೆಯು ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಕುರಿಮರಿಯನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಬೆಳವಕ್ಕಿಯನ್ನಾಗಲಿ ಅಥವಾ ಪಾರಿವಾಳದ ಮರಿಯನ್ನಾಗಲಿ ತರಬೇಕು. 7-8 ಆಕೆಯು ಕುರಿಮರಿಯನ್ನು ತರಲು ಶಕ್ತಳಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತರಬಹುದು. ಅವುಗಳಲ್ಲಿ ಒಂದನ್ನು ಸರ್ವಾಂಗಹೋಮಕ್ಕಾಗಿಯೂ ಇನ್ನೊಂದನ್ನು ಪಾಪಪರಿಹಾರಕ ಯಜ್ಞಕ್ಕಾಗಿಯೂ ತರಬೇಕು. ಯಾಜಕನು ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ಅರ್ಪಿಸಬೇಕು. ಹೀಗೆ ಯಾಜಕನು ಆಕೆಯನ್ನು ಶುದ್ಧಿಗೊಳಿಸುವನು. ಆಗ ಆಕೆಯು ರಕ್ತಸ್ರಾವದ ಅಶುದ್ಧತೆಯಿಂದ ಶುದ್ಧಳಾಗುವಳು. ಗಂಡುಮಗುವಿಗೆ ಅಥವಾ ಹೆಣ್ಣುಮಗುವಿಗೆ ಜನ್ಮವಿತ್ತ ಸ್ತ್ರೀಯು ಅನುಸರಿಸಬೇಕಾದ ನಿಯಮಗಳು ಇವುಗಳೇ.”
ರಚನೆಗಾರ: ದಾವೀದ.
13 ಯೆಹೋವನೇ, ನನ್ನನ್ನು ಇನ್ನೆಷ್ಟುಕಾಲ ಮರೆತಿರುವೆ?
ನನ್ನನ್ನು ಶಾಶ್ವತವಾಗಿ ಮರೆತುಬಿಡುವೆಯಾ?
ಇನ್ನೆಷ್ಟುಕಾಲ ನನಗೆ ಮರೆಯಾಗಿರುವೆ?
2 ನಾನು ದುಃಖಕ್ರಾಂತನಾಗಿ ಇನ್ನೆಷ್ಟುಕಾಲ ಆಲೋಚಿಸುತ್ತಿರಬೇಕು?
ನನ್ನ ವೈರಿಗಳು ಇನ್ನೆಷ್ಟುಕಾಲ ನನ್ನ ಮೇಲೆ ಜಯಗಳಿಸಬೇಕು?
3 ನನ್ನ ದೇವರಾದ ಯೆಹೋವನೇ, ನನ್ನ ಮೇಲೆ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು.
ಇಲ್ಲವಾದರೆ, ನಾನು ಸಾಯಲೇಬೇಕಾಗುವುದು!
4 ಆಗ ವೈರಿಯು, “ನಾನು ಅವನನ್ನು ಸೋಲಿಸಿದೆ!” ಎಂದು ಹೇಳುತ್ತಾ
ನನ್ನ ಬೀಳುವಿಕೆಯನ್ನು ಕಂಡು ಸಂತೋಷಪಡುವನು.
5 ನಾನಂತೂ ನಿನ್ನ ಶಾಶ್ವತವಾದ ಪ್ರೀತಿಯಲ್ಲಿ ಭರವಸೆಯಿಟ್ಟಿದ್ದೇನೆ.
ನಿನ್ನ ರಕ್ಷಣೆಯ ನಿಮಿತ್ತ ನನ್ನ ಹೃದಯವು ಹರ್ಷಿಸುವುದು.
6 ಯೆಹೋವನು ಮಹೋಪಕಾರಗಳನ್ನು ಮಾಡಿರುವುದರಿಂದ
ಆತನಿಗೆ ಹರ್ಷಗೀತೆಗಳನ್ನು ಹಾಡುವೆನು.
ರಚನೆಗಾರ: ದಾವೀದ.
14 ಮೂಢರು ತಮ್ಮ ಹೃದಯದಲ್ಲಿ, “ದೇವರಿಲ್ಲ” ಎಂದುಕೊಳ್ಳುವರು.
ಮೂಢರು ಭಯಂಕರವಾದ ಅಸಹ್ಯಕೃತ್ಯಗಳನ್ನು ಮಾಡುವರು.
ಅವರಲ್ಲಿ ಒಳ್ಳೆಯದನ್ನು ಮಾಡುವವರು ಇಲ್ಲವೇ ಇಲ್ಲ.
2 ದೇವರಿಗಾಗಿ ಹುಡುಕುವ ಬುದ್ಧಿವಂತರು ಮನುಷ್ಯರಲ್ಲಿ ಇದ್ದಾರೋ
ಎಂದು ಯೆಹೋವನು ಪರಲೋಕದಿಂದ ಮನುಷ್ಯರನ್ನು ನೋಡುವನು.
3 ಆದರೆ ಪ್ರತಿಯೊಬ್ಬನೂ ದೇವರಿಗೆ ವಿಮುಖನಾಗಿದ್ದಾನೆ.
ಎಲ್ಲರೂ ಕೆಟ್ಟುಹೋಗಿದ್ದಾರೆ.
ಒಳ್ಳೆಯದನ್ನು ಮಾಡುವವನು ಇಲ್ಲ;
ಒಬ್ಬನಾದರೂ ಇಲ್ಲ.
4 ದುಷ್ಟರು ಅರ್ಥಮಾಡಿಕೊಳ್ಳುವುದಿಲ್ಲವೇ?
ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ.
ಅವರು ಯೆಹೋವನನ್ನು ಆರಾಧಿಸುವುದೂ ಇಲ್ಲ.
5-6 ಬಡವರ ಬುದ್ಧಿಮಾತನ್ನು ಆ ದುಷ್ಟರು ಕೇಳುವುದಿಲ್ಲ.
ಯಾಕೆಂದರೆ ಬಡವರು ಆಶ್ರಯಿಸಿಕೊಂಡಿರುವುದು ಯೆಹೋವನನ್ನೇ.
ಆದರೆ ದೇವರು ನೀತಿವಂತರೊಂದಿಗಿದ್ದಾನೆ.
ಆದ್ದರಿಂದ ದುಷ್ಟರು ಭಯಭ್ರಾಂತರಾಗುವರು.
7 ಚೀಯೋನ್ ಪರ್ವತದ ಮೇಲಿರುವಾತನು ಇಸ್ರೇಲನ್ನು ರಕ್ಷಿಸುವನೇ?
ಯೆಹೋವನ ಪ್ರಜೆಗಳು ಸೆರೆ ಒಯ್ಯಲ್ಪಟ್ಟು ಸೆರೆವಾಸದಲ್ಲಿದ್ದಾರೆ.
ಯೆಹೋವನಾದರೋ ತನ್ನ ಪ್ರಜೆಗಳನ್ನು ಬಿಡಿಸಿಕೊಂಡು ಬರುವನು;
ಆಗ ಯಾಕೋಬ್ಯರು ಉಲ್ಲಾಸಗೊಳ್ಳುವರು; ಇಸ್ರೇಲರು ಹರ್ಷಿಸುವರು.
ಮೂಢರ ಬಗ್ಗೆ ಜ್ಞಾನದ ನುಡಿಗಳು
26 ಮೂಢನನ್ನು ಗೌರವಿಸುವುದು ಸರಿಯಲ್ಲ. ಅದು ಬೇಸಿಗೆಕಾಲದಲ್ಲಿ ಬೀಳುವ ಹಿಮದಂತೆಯೂ ಸುಗ್ಗೀಕಾಲದಲ್ಲಿ ಬೀಳುವ ಮಳೆಯಂತೆಯೂ ಇದೆ.
2 ಅಯೋಗ್ಯವಾದ ಶಾಪ ನಿರಪರಾಧಿಗೆ ತಟ್ಟುವುದಿಲ್ಲ. ಆ ಶಾಪದ ಮಾತುಗಳು ಹಾರಿಹೋಗಿ ಎಂದೂ ಕೆಳಗಿಳಿಯದ ಪಕ್ಷಿಗಳಂತಿವೆ.
3 ಕುದುರೆಗೆ ಚಬುಕಬೇಕು. ಹೇಸರಕತ್ತೆಗೆ ಕಡಿವಾಣಬೇಕು. ಮೂಢನಿಗೆ ಹೊಡೆತಬೇಕು.
4 ಮೂಢನಿಗೆ ಅವನ ಮೂರ್ಖತನದ ಮಟ್ಟದಲ್ಲಿ ಉತ್ತರ ಕೊಡಬೇಡ; ಇಲ್ಲವಾದರೆ ನೀನೂ ಅವನಂತಾಗುವೆ.
5 ಮೂಢನಿಗೆ ಅವನ ಮೂಢತನದ ಮಟ್ಟದಲ್ಲಿ ಉತ್ತರಿಸು; ಇಲ್ಲವಾದರೆ ಅವನು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಳ್ಳುವನು.
6 ನಿನ್ನ ಸಂದೇಶವನ್ನು ಮೂಢನ ಮೂಲಕ ಎಂದಿಗೂ ಕಳುಹಿಸಿಕೊಡಬೇಡ. ಅದು ನಿನ್ನ ಸ್ವಂತ ಕಾಲನ್ನೇ ಕತ್ತರಿಸಿಕೊಂಡಂತಿರುವುದು; ನೀನೇ ಕೇಡಿಗಾಗಿ ಕೇಳಿಕೊಂಡಂತಾಗುವುದು.
7 ಮೂಢನು ಜ್ಞಾನದ ಮಾತನ್ನು ಹೇಳಲು ಮಾಡುವ ಪ್ರಯತ್ನವು ಕುಂಟನು ನಡೆಯಲು ಮಾಡುವ ಪ್ರಯತ್ನದಂತಿದೆ.
8 ಮೂಢನಿಗೆ ತೋರುವ ಗೌರವ, ಕವಣೆಯಲ್ಲಿರುವ ಕಲ್ಲಿನಷ್ಟೇ ಕೆಟ್ಟದ್ದು.
9 ಮೂಢನು ಜ್ಞಾನೋಕ್ತಿಯನ್ನು ಬಳಸಲು ಮಾಡುವ ಪ್ರಯತ್ನವು ಕುಡುಕನೊಬ್ಬನು ಮುಳ್ಳುಕೊಂಬೆಯೊಂದನ್ನು ತನ್ನ ಕೈಯಲ್ಲಿ ಝಳಪಿಸುವಂತಿರುವುದು.
10 ಮೂಢನನ್ನಾಗಲಿ ಕುಡುಕನನ್ನಾಗಲಿ ಕೂಲಿಗೆ ನೇಮಿಸಿಕೊಳ್ಳುವವನು ಹಾದುಹೋಗುವವರಿಗೆಲ್ಲ ಗಾಯ ಮಾಡುವ ಬಿಲ್ಲುಗಾರನಂತಿರುವನು.
11 ನಾಯಿ ತಾನು ಕಕ್ಕಿದ್ದನ್ನೇ ನೆಕ್ಕಲು ಹಿಂತಿರುಗುವಂತೆ ಮೂಢನು ತನ್ನ ಮೂಢತನವನ್ನು ಪದೇಪದೇ ಮಾಡುವನು.
12 ಅಜ್ಞಾನಿಯು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಂಡರೆ ಅವನು ಮೂಢನಿಗಿಂತಲೂ ಕೀಳಾದವನು.
13 “ನಾನು ನನ್ನ ಮನೆಯಿಂದ ಹೊರಗೆ ಹೋಗಲಾರೆ. ಬೀದಿಯಲ್ಲಿ ಸಿಂಹವಿದೆ” ಎನ್ನುತ್ತಾನೆ ಸೋಮಾರಿ.
14 ಬಾಗಿಲು ತಿರುಗುಣಿಯ ಮೇಲೆ ಸುತ್ತುವಂತೆ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುವನು.
15 ಸೋಮಾರಿಯು ತಟ್ಟೆಯಲ್ಲಿರುವ ಊಟವನ್ನು ತಿನ್ನುವುದಕ್ಕೂ ಬಹು ಆಯಾಸಪಡುವನು.
16 ತಮ್ಮ ಆಲೋಚನೆಗಳಿಗೆ ಒಳ್ಳೆಯ ಕಾರಣಗಳನ್ನು ಕೊಡುವ ಏಳು ಜನರಿಗಿಂತಲೂ ತಾನು ಜ್ಞಾನಿಯೆಂದು ಸೋಮಾರಿಯು ಭಾವಿಸುವನು.
17 ಬೇರೆಯವರ ವಾಗ್ವಾದದಲ್ಲಿ ಮಧ್ಯೆ ಪ್ರವೇಶಿಸಲು ಮಾಡುವ ಪ್ರಯತ್ನ ಹಾದಿಯಲ್ಲಿ ಹೋಗುತ್ತಿರುವ ನಾಯಿಯ ಕಿವಿಗಳನ್ನು ಹಿಡಿದುಕೊಳ್ಳುವಷ್ಟೇ ಅಪಾಯಕರ.
18-19 ಮತ್ತೊಬ್ಬನನ್ನು ಮೋಸಗೊಳಿಸಿ ತಾನು ಕೇವಲ ತಮಾಷೆಮಾಡಿದ್ದಾಗಿ ಹೇಳುವವನು ಉರಿಯುವ ಬಾಣಗಳನ್ನು ಆಕಾಶದ ಕಡೆಗೆ ಎಸೆದು ಬೇರೊಬ್ಬನನ್ನು ಆಕಸ್ಮಿಕವಾಗಿ ಕೊಲ್ಲುವ ಹುಚ್ಚನಂತಿರುವನು.
20 ಸೌದೆ ಇಲ್ಲದಿದ್ದರೆ ಬೆಂಕಿಯು ಆರಿಹೋಗುವುದು. ಅಂತೆಯೇ ಹುರುಳಿಲ್ಲದ ವಾಗ್ವಾದ ನಿಂತುಹೋಗುವುದು.
21 ಕೆಂಡದಿಂದ ಕಲ್ಲಿದ್ದಲು ಉರಿಯುತ್ತದೆ; ಸೌದೆಯಿಂದ ಬೆಂಕಿ ಉರಿಯುತ್ತದೆ; ಅಂತೆಯೇ ಜಗಳಗಂಟರು ವಾಗ್ವಾದವನ್ನು ಮುಂದುವರಿಸುವರು.
22 ಹರಟೆಮಾತು ಜನರಿಗೆ ಪ್ರಿಯ. ಅವರಿಗೆ ಅದು ಒಳ್ಳೆಯ ಆಹಾರವನ್ನು ತಿಂದಂತಿರುವುದು.
23 ಕೆಟ್ಟ ಆಲೋಚನೆಯನ್ನು ಅಡಗಿಸಿಡುವ ಕನಿಕರದ ಮಾತುಗಳು ಕಡಿಮೆ ಬೆಲೆಯ ಮಡಿಕೆಯ ಮೇಲಿನ ಬೆಳ್ಳಿಯ ಲೇಪನದಂತಿವೆ. 24 ಕೆಡುಕನು ತಾನು ಹೇಳುವ ಸಂಗತಿಗಳ ಮೂಲಕ ತನ್ನನ್ನು ಒಳ್ಳೆಯವನನ್ನಾಗಿ ತೋರಿಸಿಕೊಳ್ಳುವನು. ಆದರೆ ಅವನು ತನ್ನ ಕೆಟ್ಟ ಆಲೋಚನೆಗಳನ್ನು ತನ್ನ ಹೃದಯದಲ್ಲಿ ಅಡಗಿಸಿಕೊಳ್ಳುವನು. 25 ಅವನು ಹೇಳುವ ಸಂಗತಿಗಳು ಒಳ್ಳೆಯದಾಗಿ ಕಂಡರೂ ಅವನನ್ನು ನಂಬಬೇಡಿ. ಅವನ ಹೃದಯವು ಕೆಟ್ಟ ಆಲೋಚನೆಗಳಿಂದ ತುಂಬಿದೆ. 26 ದ್ವೇಷವು ತನ್ನನ್ನು ಮೋಸದಿಂದ ಮರೆಮಾಡಿಕೊಳ್ಳುತ್ತದೆ. ಆದರೆ ಅವನು ಕೀಳಾದವನು; ಕೊನೆಯಲ್ಲಿ, ಅವನ ಕೆಟ್ಟಕಾರ್ಯಗಳನ್ನು ಜನರೆಲ್ಲರೂ ನೋಡುವರು.
27 ಮತ್ತೊಬ್ಬನಿಗೆ ಬಲೆಹಾಕುವವನು ತನಗೇ ಬಲೆಹಾಕಿಕೊಳ್ಳುವನು. ಮತ್ತೊಬ್ಬನ ಮೇಲೆ ಬಂಡೆ ಉರುಳಿಸಲು ಪ್ರಯತ್ನಿಸುವವನು ಅದರಿಂದಲೇ ಜಜ್ಜಲ್ಪಡುವನು.
28 ಸುಳ್ಳುಗಾರನು ತಾನು ಕೇಡುಮಾಡಲಿರುವ ಜನರನ್ನು ದ್ವೇಷಿಸುವನು. ಕಪಟದ ಸಂಗತಿಗಳನ್ನು ಹೇಳುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.
ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ
5 ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. 2 ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. 3 “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.
4 ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. 5 ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. 6 ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. 7 ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. 8 ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.
9 ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.
ಕೊನೆಯ ಮಾತುಗಳು ಮತ್ತು ವಂದನೆಗಳು
12 ಸಹೋದರ ಸಹೋದರಿಯರೇ, ಈಗ ನಿಮ್ಮಲ್ಲಿ ಪ್ರಯಾಸದಿಂದ ಕೆಲಸ ಮಾಡುತ್ತಾ ನಿಮ್ಮನ್ನು ಪ್ರಭುವಿನ ಮಾರ್ಗದಲ್ಲಿ ನಡೆಸುವವರನ್ನು ಮತ್ತು ಉಪದೇಶಿಸುವವರನ್ನು ಗೌರವಿಸಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. 13 ಅವರು ನಿಮ್ಮಲ್ಲಿ ಮಾಡುವ ಸೇವೆಗಾಗಿ ಅವರನ್ನು ವಿಶೇಷವಾದ ಪ್ರೀತಿಯಿಂದ ಗೌರವಿಸಿರಿ.
ನೀವೆಲ್ಲರೂ ಸಮಾಧಾನದಿಂದ ಜೀವಿಸಿರಿ. 14 ಸಹೋದರ ಸಹೋದರಿಯರೇ, ಕೆಲಸ ಮಾಡದೆ ಇರುವ ಜನರಿಗೆ ಎಚ್ಚರಿಕೆ ನೀಡಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಹೆದರಿಕೊಂಡಿರುವವರನ್ನು ಪ್ರೋತ್ಸಾಹಿಸಿರಿ; ಬಲಹೀನರಿಗೆ ಸಹಾಯ ಮಾಡಿ; ಎಲ್ಲರ ಜೊತೆಯಲ್ಲಿ ತಾಳ್ಮೆಯಿಂದಿರಿ; 15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ; ಒಬ್ಬರಿಗೊಬ್ಬರಿಗೆ ಮತ್ತು ಎಲ್ಲರಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ.
16 ಯಾವಾಗಲೂ ಸಂತೋಷದಿಂದಿರಿ. 17 ಎಡೆಬಿಡದೆ ಪ್ರಾರ್ಥಿಸಿರಿ. 18 ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ.
19 ಪವಿತ್ರಾತ್ಮನ ಕಾರ್ಯವನ್ನು ನಂದಿಸಬೇಡಿ. 20 ಪ್ರವಾದನೆಯನ್ನು ಹೀನೈಸಬೇಡಿ. 21 ಎಲ್ಲವನ್ನೂ ಪರಿಶೋಧಿಸಿ, ಒಳ್ಳೆಯದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22 ಎಲ್ಲಾ ವಿಧವಾದ ಕೆಟ್ಟತನದಿಂದ ದೂರವಾಗಿರಿ.
23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲೆಂದು ಪ್ರಾರ್ಥಿಸುತ್ತೇವೆ. ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮ, ಶರೀರ, ಪ್ರಾಣಗಳು ದೋಷರಹಿತವಾಗಿರಲೆಂದು ಪ್ರಾರ್ಥಿಸುತ್ತೇವೆ. 24 ನಿಮ್ಮನ್ನು ಕರೆಯುವಾತನೇ ಅದನ್ನು ನಿಮಗಾಗಿ ಮಾಡುತ್ತಾನೆ. ಆತನು ನಂಬಿಗಸ್ತನು.
25 ಸಹೋದರ ಸಹೋದರಿಯರೇ, ದಯಮಾಡಿ ನಮಗಾಗಿ ಪ್ರಾರ್ಥಿಸಿರಿ. 26 ಸಹೋದರ ಸಹೋದರಿಯರನ್ನು ಸಂಧಿಸಿದಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ. 27 ಈ ಪತ್ರವನ್ನು ಸಹೋದರ ಸಹೋದರಿಯರಿಗೆಲ್ಲಾ ಓದಿ ತಿಳಿಸಬೇಕೆಂದು ನಾನು ನಿಮಗೆ ಪ್ರಭುವಿನ ಅಧಿಕಾರದಿಂದ ಹೇಳುತ್ತಿದ್ದೇನೆ. 28 ಪ್ರಭು ಯೇಸು ಕ್ರಿಸ್ತನ ಕೃಪೆಯು ನಿಮ್ಮೊಡನೆ ಇರಲಿ.
Kannada Holy Bible: Easy-to-Read Version. All rights reserved. © 1997 Bible League International