Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 35

ಸಬ್ಬತ್ ದಿನದ ಬಗ್ಗೆ ನಿಯಮಗಳು

35 ಮೋಶೆಯು ಇಸ್ರೇಲರನ್ನು ಒಟ್ಟಾಗಿ ಸೇರಿಸಿದನು. ಮೋಶೆ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ ಸಂಗತಿಗಳನ್ನು ನಾನು ಹೇಳುವೆನು:

“ಕೆಲಸ ಮಾಡುವುದಕ್ಕೆ ಆರು ದಿನಗಳಿವೆ. ಆದರೆ ಏಳನೆಯ ದಿನವು ನಿಮಗೆ ಬಹು ವಿಶೇಷವಾದ ವಿಶ್ರಾಂತಿ ದಿನವಾಗಿರುವುದು. ಆ ವಿಶೇಷ ದಿನದಲ್ಲಿ ವಿಶ್ರಮಿಸುವುದರ ಮೂಲಕ ನೀವು ಯೆಹೋವನನ್ನು ಸನ್ಮಾನಿಸುವಿರಿ. ಏಳನೆಯ ದಿನದಲ್ಲಿ ಕೆಲಸಮಾಡುವ ವ್ಯಕ್ತಿಯು ಸಂಹರಿಸಲ್ಪಡಬೇಕು. ನೀವು ವಾಸಿಸುವ ಯಾವ ಸ್ಥಳದಲ್ಲಿಯೂ ಸಬ್ಬತ್‌ದಿನದಂದು ಬೆಂಕಿಯನ್ನು ಹೊತ್ತಿಸಬಾರದು” ಎಂದು ಹೇಳಿದನು.

ಪವಿತ್ರಗುಡಾರಕ್ಕೆ ವಸ್ತುಗಳು

ಮೋಶೆಯು ಇಸ್ರೇಲರಿಗೆ, “ಯೆಹೋವನು ಆಜ್ಞಾಪಿಸಿದ್ದು ಇದುವೇ. ಯೆಹೋವನಿಗಾಗಿ ಕಾಣಿಕೆಗಳನ್ನು ಕೂಡಿಸಿರಿ. ನಿಮ್ಮಲ್ಲಿ ಪ್ರತಿಯೊಬ್ಬನು ತಾನು ಕೊಡುವಂಥದ್ದನ್ನು ತನ್ನ ಹೃದಯದಲ್ಲಿ ತೀರ್ಮಾನಿಸಿಕೊಳ್ಳಬೇಕು. ಬಳಿಕ ಆ ಕಾಣಿಕೆಯನ್ನು ಯೆಹೋವನ ಸನ್ನಿಧಿಗೆ ತರಬೇಕು. ಚಿನ್ನ, ಬೆಳ್ಳಿ, ತಾಮ್ರ, ನೀಲಿ, ನೇರಳೆ, ಕೆಂಪುದಾರ ಮತ್ತು ಶ್ರೇಷ್ಠ ನಾರುಬಟ್ಟೆ, ಆಡಿನ ಕೂದಲು, ಕೆಂಪುಬಣ್ಣದ ಕುರಿದೊಗಲು, ಕಡಲುಹಂದಿಯ ತೊಗಲು, ಜಾಲೀಮರ, ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕತೈಲ ಮತ್ತು ಪರಿಮಳಧೂಪವನ್ನು ತಯಾರಿಸಲು ಬೇಕಾದ ಸುಗಂಧದ್ರವ್ಯ ಇವುಗಳನ್ನು ತನ್ನಿರಿ. ಏಫೋದಿನಲ್ಲಿ ಮತ್ತು ದೈವನಿರ್ಣಯದ ಪದಕದಲ್ಲಿ ಹಾಕಬೇಕಾಗಿರುವ ಗೋಮೇಧಿಕ ರತ್ನಗಳು ಮತ್ತು ಇತರ ರತ್ನಗಳನ್ನು ತನ್ನಿರಿ.

10 “ಯೆಹೋವನು ಆಜ್ಞಾಪಿಸಿದ ವಸ್ತುಗಳನ್ನು ನಿಮ್ಮಲ್ಲಿ ನಿಪುಣರಾದ ಕೆಲಸಗಾರರೆಲ್ಲರೂ ಮಾಡಬೇಕು. ಅವು ಯಾವುವೆಂದರೆ, 11 ಪವಿತ್ರಗುಡಾರ, ಅದರ ಹೊರಗಿನ ಡೇರೆ, ಅದರ ಮೇಲ್ಹೊದಿಕೆಗಳು, ಅದರ ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳು, 12 ಪವಿತ್ರಪೆಟ್ಟಿಗೆ ಮತ್ತು ಅದನ್ನು ಹೊರುವ ಕೋಲುಗಳು, ಕೃಪಾಸನ ಮತ್ತು ಪೆಟ್ಟಿಗೆ ಇರುವ ಸ್ಥಳವನ್ನು ಮುಚ್ಚುವ ಪರದೆ, 13 ಮೇಜು ಮತ್ತು ಅದರ ಕೋಲುಗಳು, ಮೇಜಿನ ಮೇಲಿರುವ ಎಲ್ಲಾ ಉಪಕರಣಗಳು, ಮೇಜಿನ ಮೇಲಿರುವ ನೈವೇದ್ಯರೊಟ್ಟಿ, 14 ದೀಪಸ್ತಂಭ ಮತ್ತು ಅದರ ಉಪಕರಣಗಳು, ದೀಪಗಳು, ದೀಪಕ್ಕೆ ಬೇಕಾದ ಎಣ್ಣೆ, 15 ಧೂಪವೇದಿ ಮತ್ತು ಅದರ ಕೋಲುಗಳು, ಅಭಿಷೇಕತೈಲ, ಪರಿಮಳಧೂಪ, ಪವಿತ್ರ ಗುಡಾರದ ಬಾಗಿಲಿನ ಪರದೆ, 16 ಸರ್ವಾಂಗಹೋಮ ಮಾಡಲು ಯಜ್ಞವೇದಿಕೆ ಮತ್ತು ಅದರ ತಾಮ್ರದ ಜಾಳಿಗೆ, ಕೋಲುಗಳು, ಯಜ್ಞವೇದಿಕೆಗೆ ಬೇಕಾಗುವ ಎಲ್ಲಾ ಉಪಕರಣಗಳು, ಗಂಗಾಳ ಮತ್ತು ಅದರ ಪೀಠ, 17 ಅಂಗಳದ ಸುತ್ತಲಿನ ಪರದೆಗಳು, ಕಂಬಗಳು, ಗದ್ದಿಗೇಕಲ್ಲುಗಳು, ಅಂಗಳದ ಬಾಗಿಲಿನ ಪರದೆ, 18 ಗುಡಾರದ ಗೂಟಗಳು, ಅಂಗಳದ ಗೂಟಗಳು ಮತ್ತು ಹಗ್ಗಗಳು, 19 ಮತ್ತು ಪವಿತ್ರಸ್ಥಳದಲ್ಲಿ ಯಾಜಕರು ಧರಿಸತಕ್ಕ ವಿಶೇಷವಾದ ಹೆಣೆದ ಬಟ್ಟೆಗಳು. ಈ ಬಟ್ಟೆಗಳನ್ನು ಯಾಜಕನಾದ ಆರೋನನು ಮತ್ತು ಅವನ ಪುತ್ರರು ಯಾಜಕ ಸೇವೆ ಮಾಡುವಾಗ ಧರಿಸಿಕೊಳ್ಳುವರು” ಎಂದು ಹೇಳಿದನು.

ಜನರಿಂದ ಮಹಾಕಾಣಿಕೆ

20 ಬಳಿಕ ಇಸ್ರೇಲರೆಲ್ಲರೂ ಮೋಶೆಯ ಬಳಿಯಿಂದ ಹೊರಟುಹೋದರು. 21 ಕಾಣಿಕೆ ಕೊಡುವುದಕ್ಕೆ ಯಾರ್ಯಾರು ಬಯಸಿದರೋ ಅವರೆಲ್ಲರೂ ಬಂದು ಯೆಹೋವನಿಗೆ ಕಾಣಿಕೆಯನ್ನು ಅರ್ಪಿಸಿದರು. ಈ ಕಾಣಿಕೆಗಳು ದೇವದರ್ಶನಗುಡಾರ, ಅದರ ಎಲ್ಲಾ ವಸ್ತುಗಳು ಮತ್ತು ವಿಶೇಷ ಬಟ್ಟೆಗಳನ್ನು ಮಾಡಲು ಉಪಯೋಗಿಸಲ್ಪಟ್ಟವು. 22 ಕಾಣಿಕೆ ಕೊಡುವುದಕ್ಕೆ ಬಯಸಿದ ಎಲ್ಲಾ ಗಂಡಸರು, ಹೆಂಗಸರು ಎಲ್ಲಾ ವಿಧದ ಚಿನ್ನದ ಆಭರಣಗಳನ್ನು ತಂದರು. ಅವರು ತಮ್ಮ ಕಡಗ, ಮೂಗುತಿ, ಉಂಗುರ, ಕಂಠಮಾಲೆ ಮತ್ತು ಇತರ ಚಿನ್ನದ ಆಭರಣಗಳನ್ನು ತಂದರು. ಅವರೆಲ್ಲರು ತಮ್ಮ ಎಲ್ಲಾ ಕೊಡುಗೆಗಳನ್ನು ಯೆಹೋವನಿಗೆ ಕೊಟ್ಟರು. ಇದು ಯೆಹೋವನಿಗೆ ಕೊಟ್ಟ ವಿಶೇಷವಾದ ಕಾಣಿಕೆಯಾಗಿತ್ತು.

23 ಪ್ರತಿಯೊಬ್ಬನು ತನ್ನಲ್ಲಿದ್ದ ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಯೆಹೋವನಿಗಾಗಿ ತಂದನು. ಯಾರಲ್ಲಿ ಕೆಂಪುಬಣ್ಣದ ಕುರಿದೊಗಲಾಗಲಿ ಕಡಲುಹಂದಿಯ ತೊಗಲಾಗಲಿ ಇದ್ದವೋ ಅವರು ಅವುಗಳನ್ನು ಯೆಹೋವನಿಗಾಗಿ ತಂದುಕೊಟ್ಟರು. 24 ಬೆಳ್ಳಿಯನ್ನಾಗಲಿ ತಾಮ್ರವನ್ನಾಗಲಿ ಕೊಡಲು ಬಯಸಿದವರು ಅದನ್ನು ಕೆಲಸಕ್ಕೋಸ್ಕರ ಯೆಹೋವನಿಗೆ ಕಾಣಿಕೆಯಾಗಿ ತಂದರು. ಜಾಲೀಮರವನ್ನು ಹೊಂದಿದವರು ಅದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟರು. 25 ನಿಪುಣರಾದ ಸ್ತ್ರೀಯರು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಮಾಡಿದರು. 26 ನಿಪುಣರಾಗಿದ್ದ ಇತರ ಸ್ತ್ರೀಯರು ಆಡುಕೂದಲಿನಿಂದ ಬಟ್ಟೆಯನ್ನು ತಯಾರಿಸಿದರು.

27 ನಾಯಕರು ಗೋಮೇಧಿಕ ರತ್ನಗಳನ್ನು ಮತ್ತು ಇತರ ರತ್ನಗಳನ್ನು ತಂದುಕೊಟ್ಟರು. ಅವುಗಳನ್ನು ಯಾಜಕನ ಏಫೋದಿಗೂ ಮತ್ತು ದೈವನಿರ್ಣಯದ ಪದಕಕ್ಕೂ ಉಪಯೋಗಿಸಲಾಯಿತು. 28 ಜನರು ಸುಗಂಧದ್ರವ್ಯಗಳನ್ನೂ ಆಲಿವ್ ಎಣ್ಣೆಯನ್ನೂ ತಂದುಕೊಟ್ಟರು. ಈ ವಸ್ತುಗಳು ಪರಿಮಳಧೂಪ, ಅಭಿಷೇಕತೈಲ ಮತ್ತು ದೀಪಗಳಿಗೆ ಬೇಕಾದ ಎಣ್ಣೆ ಇವುಗಳನ್ನು ಮಾಡಲು ಉಪಯೋಗಿಸಲ್ಪಟ್ಟವು.

29 ಸಹಾಯ ಮಾಡುವುದಕ್ಕೆ ಬಯಸಿದ ಇಸ್ರೇಲರೆಲ್ಲರೂ ಯೆಹೋವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಈ ಕಾಣಿಕೆಗಳನ್ನು ಗಂಡಸರು ಮತ್ತು ಹೆಂಗಸರು ಕೊಡುವುದಕ್ಕೆ ಬಯಸಿದ್ದರಿಂದ ಉದಾರವಾಗಿ ಕೊಟ್ಟರು. ಯೆಹೋವನು ಮೋಶೆಗೆ ಮತ್ತು ಜನರಿಗೆ ಆಜ್ಞಾಪಿಸಿದ ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಈ ಕಾಣಿಕೆಗಳು ಉಪಯೋಗಿಸಲ್ಪಟ್ಟವು.

ಬೆಚಲೇಲ ಮತ್ತು ಒಹೊಲೀಯಾಬ

30 ಬಳಿಕ ಮೋಶೆಯು ಇಸ್ರೇಲರಿಗೆ ಹೀಗೆಂದನು: “ನೋಡಿರಿ, ಯೆಹೋವನು ಯೆಹೂದ ಕುಲದಿಂದ ಊರಿಯ ಮಗನಾದ ಬೆಚಲೇಲನನ್ನು ಆರಿಸಿಕೊಂಡಿದ್ದಾನೆ. ಊರಿಯು ಹೂರನ ಮಗ. 31 ಯೆಹೋವನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿ, ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದಾನೆ. 32 ಅವನು ಅಂದವಾಗಿ ನಕ್ಷೆಮಾಡಿ, ಚಿನ್ನ, ಬೆಳ್ಳಿ ಮತ್ತು ತಾಮ್ರಗಳಿಂದ ವಸ್ತುಗಳನ್ನು ಮಾಡಬಲ್ಲನು. 33 ಅವನು ಕಲ್ಲುಗಳನ್ನು, ರತ್ನಗಳನ್ನು ಕತ್ತರಿಸಿ ಜೋಡಿಸಬಲ್ಲನು. ಬೆಚಲೇಲನು ಮರಗೆಲಸವನ್ನು ಮಾಡಿ ಎಲ್ಲಾ ವಿಧದ ಕುಶಲ ವಸ್ತುಗಳನ್ನು ತಯಾರಿಸಬಲ್ಲನು. 34 ಇತರರಿಗೆ ಕಲಿಸುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನು ಯೆಹೋವನು ಬೆಚಲೇಲನಿಗೂ ಒಹೊಲೀಯಾಬನಿಗೂ ಅನುಗ್ರಹಿಸಿದ್ದಾನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. 35 ಯೆಹೋವನು ಇವರಿಬ್ಬರಿಗೆ ಎಲ್ಲಾ ವಿಧದ ಕೆಲಸಗಳನ್ನು ಮಾಡಲು ವಿಶೇಷ ನಿಪುಣತೆಯನ್ನು ಅನುಗ್ರಹಿಸಿದ್ದಾನೆ. ಅವರು ಮರಗೆಲಸವನ್ನೂ ಲೋಹದ ಕೆಲಸವನ್ನೂ ಮಾಡಬಲ್ಲರು. ಅವರು ನೀಲಿ, ನೇರಳೆ ಕೆಂಪುದಾರಗಳಿಂದ ಮತ್ತು ಶ್ರೇಷ್ಠ ನಾರುಬಟ್ಟೆಯಿಂದ ಅಲಂಕೃತವಾದ ಬಟ್ಟೆಗಳನ್ನು ನೇಯಿಗೆ ಮಾಡಬಲ್ಲರು; ಅವರು ಉಣ್ಣೆ ಬಟ್ಟೆಗಳನ್ನು ನೇಯಲು ಶಕ್ತರಾಗಿದ್ದಾರೆ.

ಯೋಹಾನ 14

ಶಿಷ್ಯರಿಗೆ ಯೇಸುವಿನ ಆದರಣೆ ಮಾತುಗಳು

14 ಯೇಸು, “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ದೇವರಲ್ಲಿ ವಿಶ್ವಾಸವಿಡಿರಿ. ನನ್ನಲ್ಲಿಯೂ ವಿಶ್ವಾಸವಿಡಿರಿ. ನನ್ನ ತಂದೆಯ ಮನೆಯಲ್ಲಿ ಅನೇಕ ಕೋಣೆಗಳಿವೆ. ಅದು ಸತ್ಯವಲ್ಲದಿದ್ದರೆ, ನಾನು ನಿಮಗೆ ಹೇಳುತ್ತಿರಲಿಲ್ಲ. ನಾನು ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಲು ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಿದ ಮೇಲೆ ಹಿಂತಿರುಗಿ ಬಂದು, ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು. ಏಕೆಂದರೆ ನಾನಿರುವಲ್ಲಿ ನೀವೂ ಇರಬೇಕು. ನಾನು ಹೋಗಲಿರುವ ಸ್ಥಳದ ದಾರಿಯು ನಿಮಗೆ ತಿಳಿದಿದೆ” ಎಂದು ಹೇಳಿದನು.

ತೋಮನು ಯೇಸುವಿಗೆ, “ಪ್ರಭುವೇ, ನೀನು ಹೋಗುತ್ತಿರುವುದು ಎಲ್ಲಿಗೆಂಬುದೇ ನಮಗೆ ಗೊತ್ತಿಲ್ಲ. ಹೀಗಿರಲು, ಆ ದಾರಿಯನ್ನು ನಾವು ಹೇಗೆ ತಿಳಿದುಕೊಳ್ಳಲಾದೀತು?” ಎಂದನು.

ಯೇಸು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ತಂದೆಯ ಬಳಿಗೆ ಹೋಗಲು ನಾನೇ ಏಕೈಕ ಮಾರ್ಗ. ನೀವು ನನ್ನನ್ನು ನಿಜವಾಗಿಯೂ ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದುಕೊಳ್ಳುತ್ತಿದ್ದಿರಿ. ಆದರೆ ಈಗ ನೀವು ತಂದೆಯನ್ನು ತಿಳಿದಿದ್ದೀರಿ. ನೀವು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.

ಫಿಲಿಪ್ಪನು ಯೇಸುವಿಗೆ, “ಪ್ರಭುವೇ, ನಮಗೆ ತಂದೆಯನ್ನು ತೋರಿಸು. ನಮಗೆ ಅಷ್ಟೇ ಸಾಕು” ಎಂದು ಹೇಳಿದನು.

ಯೇಸು, “ಫಿಲಿಪ್ಪನೇ, ನಾನು ಇಷ್ಟು ಕಾಲದಿಂದ ನಿನ್ನೊಂದಿಗಿದ್ದರೂ ನೀನು ನನ್ನನ್ನು ತಿಳಿದುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ಸಹ ನೋಡಿದವನಾಗಿದ್ದಾನೆ. ಆದ್ದರಿಂದ, ‘ತಂದೆಯನ್ನು ನಮಗೆ ತೋರಿಸು’ ಎಂದು ಏಕೆ ಕೇಳುವಿರಿ? 10 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂದು ನೀವು ನಿಜವಾಗಿಯೂ ನಂಬುವಿರಾ? ನಾನು ನಿಮಗೆ ಹೇಳುವ ಸಂಗತಿಗಳು ನನ್ನಿಂದಲೇ ಬಂದಂಥವುಗಳಲ್ಲ. ತಂದೆಯು ನನ್ನಲ್ಲಿ ವಾಸವಾಗಿದ್ದಾನೆ ಮತ್ತು ಆತನು ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ. 11 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂಬ ನನ್ನ ಮಾತನ್ನು ನಂಬಿರಿ. ಇಲ್ಲದಿದ್ದರೆ ನಾನು ಮಾಡಿದ ಅದ್ಭುತಕಾರ್ಯಗಳ ನಿಮಿತ್ತವಾದರೂ ನಂಬಿರಿ.

12 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಯು ನಾನು ಮಾಡಿದ ಕಾರ್ಯಗಳನ್ನೇ ಮಾಡುವನು. ಹೌದು ನಾನು ಮಾಡುವ ಕಾರ್ಯಗಳಿಗಿಂತಲೂ ದೊಡ್ಡಕಾರ್ಯಗಳನ್ನು ಅವನು ಮಾಡುವನು. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ. 13 ಮತ್ತು ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ನಿಮಗೋಸ್ಕರ ಅದನ್ನು ನೆರವೇರಿಸುವೆನು. ಆಗ ಮಗನ ಮೂಲಕವಾಗಿ ತಂದೆಗೆ ಮಹಿಮೆ ಆಗುವುದು. 14 ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ಅದನ್ನು ನೆರವೇರಿಸುವೆನು.

ಪವಿತ್ರಾತ್ಮನನ್ನು ಕೊಡುವುದಾಗಿ ವಾಗ್ದಾನ

15 “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ಆಜ್ಞಾಪಿಸುವವುಗಳನ್ನು ಮಾಡುವಿರಿ. 16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ಆತನು ಬೇರೊಬ್ಬ ಸಹಾಯಕನನ್ನು ನಿಮಗೆ ಕೊಡುವನು. ಆ ಸಹಾಯಕನು ಸದಾಕಾಲ ನಿಮ್ಮೊಂದಿಗಿರುವನು. 17 ಸತ್ಯದ ಆತ್ಮನೇ ಈ ಸಹಾಯಕನು. ಈ ಲೋಕವು ಆತನನ್ನು ಸ್ವೀಕರಿಸಿಕೊಳ್ಳಲಾರದು. ಏಕೆಂದರೆ ಲೋಕವು ಆತನನ್ನು ಕಾಣುವುದೂ ಇಲ್ಲ, ತಿಳಿದುಕೊಳ್ಳುವುದೂ ಇಲ್ಲ. ಆದರೆ ನೀವು ಆತನನ್ನು ಬಲ್ಲಿರಿ. ಆತನು ನಿಮ್ಮೊಂದಿಗೆ ಮತ್ತು ನಿಮ್ಮೊಳಗೆ ವಾಸಿಸುವವನಾಗಿದ್ದಾನೆ.

18 “ನಾನು ನಿಮ್ಮನ್ನು ತಂದೆತಾಯಿಗಳಿಲ್ಲದ ಮಕ್ಕಳಂತೆ ಒಬ್ಬಂಟಿಗರನ್ನಾಗಿ ಬಿಟ್ಟುಹೋಗುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತೇನೆ. 19 ಇನ್ನು ಸ್ವಲ್ಪ ಕಾಲವಾದ ಮೇಲೆ ಈ ಲೋಕದ ಜನರು ನನ್ನನ್ನು ಇನ್ನೆಂದಿಗೂ ಕಾಣುವುದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವೂ ಜೀವಿಸುವಿರಿ. 20 ನಾನು ನನ್ನ ತಂದೆಯಲ್ಲಿರುವುದನ್ನು ನೀವು ಆ ದಿನದಂದು ತಿಳಿದುಕೊಳ್ಳುವಿರಿ. ನೀವು ನನ್ನಲ್ಲಿರುವುದನ್ನೂ ನಾನು ನಿಮ್ಮಲ್ಲಿರುವುದನ್ನೂ ತಿಳಿದುಕೊಳ್ಳುವಿರಿ. 21 ಒಬ್ಬನು ನನ್ನ ಆಜ್ಞೆಗಳನ್ನು ಸ್ವೀಕರಿಸಿಕೊಂಡು ಅವುಗಳಿಗೆ ವಿಧೇಯನಾದರೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುವವನಾಗಿದ್ದಾನೆ. ಅಲ್ಲದೆ ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು ಮತ್ತು ನಾನೂ ಅವನನ್ನು ಪ್ರೀತಿಸುವೆನು. ನಾನು ಅವನಿಗೆ ನನ್ನನ್ನೇ ತೋರ್ಪಡಿಸಿಕೊಳ್ಳುವೆನು” ಎಂದು ಉತ್ತರಕೊಟ್ಟನು.

22 ಆಗ ಯೂದನು (ಇಸ್ಕರಿಯೋತ ಯೂದನಲ್ಲ), “ಪ್ರಭುವೇ, ನೀನು ನಿನ್ನನ್ನು ಈ ಲೋಕಕ್ಕೆ ತೋರ್ಪಡಿಸಿಕೊಳ್ಳದೆ ನಮಗೆ ಮಾತ್ರ ತೋರ್ಪಡಿಸಿಕೊಳ್ಳಬೇಕೆಂದಿರುವುದೇಕೆ?” ಎಂದು ಕೇಳಿದನು.

23 ಯೇಸು ಹೀಗೆ ಉತ್ತರಕೊಟ್ಟನು: “ನನ್ನನ್ನು ಪ್ರೀತಿಸುವವನು ನನ್ನ ಉಪದೇಶಕ್ಕೆ ವಿಧೇಯನಾಗುವನು. ನನ್ನ ತಂದೆಯು ಅವನನ್ನು ಪ್ರೀತಿಸುವನು. ನನ್ನ ತಂದೆ ಮತ್ತು ನಾನು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು. 24 ಆದರೆ ನನ್ನನ್ನು ಪ್ರೀತಿಸದವನು, ನನ್ನ ಉಪದೇಶಕ್ಕೆ ವಿಧೇಯನಾಗುವುದಿಲ್ಲ. ನೀವು ಕೇಳುತ್ತಿರುವ ಈ ಉಪದೇಶವು ನಿಜವಾಗಿಯೂ ನನ್ನದಲ್ಲ, ನನ್ನನ್ನು ಕಳುಹಿಸಿರುವ ನನ್ನ ತಂದೆಯದು.

25 “ನಾನು ನಿಮ್ಮೊಂದಿಗೆ ಇರುವಾಗಲೇ ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 26 ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು.

27 “ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ಈ ಲೋಕವು ಕೊಡುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಭಯಪಡಬೇಡಿರಿ. 28 ‘ನಾನು ಹೊರಟುಹೋಗುತ್ತೇನೆ. ಆದರೆ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇನೆ’ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ತಂದೆಯ ಬಳಿಗೆ ಮರಳಿಹೋಗುವುದರ ಬಗ್ಗೆ ಸಂತೋಷಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು. 29 ಇದು ಸಂಭವಿಸುವುದಕ್ಕಿಂತ ಮೊದಲೇ ನಾನು ನಿಮಗೆ ಇದನ್ನು ಈಗಲೇ ತಿಳಿಸಿದ್ದೇನೆ. ಹೀಗಿರಲು, ಇದು ಸಂಭವಿಸುವಾಗ ನೀವು ನಂಬುವಿರಿ.

30 “ನಾನು ನಿಮ್ಮೊಂದಿಗೆ ಇನ್ನು ಬಹಳ ಹೊತ್ತು ಮಾತಾಡುವುದಿಲ್ಲ. ಈ ಲೋಕದ ಅಧಿಪತಿಯು (ಸೈತಾನನು) ಬರುತ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರವೂ ಇಲ್ಲ. 31 ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಈ ಲೋಕವು ತಿಳಿದುಕೊಳ್ಳಬೇಕು. ಆದ್ದರಿಂದ ತಂದೆಯು ನನಗೆ ಹೇಳಿರುವುದನ್ನೇ ನಾನು ಮಾಡುತ್ತೇನೆ.

“ಬನ್ನಿ, ನಾವು ಇಲ್ಲಿಂದ ಹೋಗೋಣ.”

ಜ್ಞಾನೋಕ್ತಿಗಳು 11

11 ಯೆಹೋವನು ಮೋಸದ ತಕ್ಕಡಿಗಳನ್ನು ದ್ವೇಷಿಸುತ್ತಾನೆ. ನ್ಯಾಯವಾದ ತಕ್ಕಡಿಗಳಾದರೋ ಆತನನ್ನು ಸಂತೋಷಗೊಳಿಸುತ್ತವೆ.

ದುರಾಭಿಮಾನಿಗಳು ನಾಚಿಕೆಗೀಡಾಗುವರು; ದೀನರು ಜ್ಞಾನಿಗಳಾಗಿದ್ದಾರೆ.

ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ. ಕೆಡುಕರು ತಮ್ಮ ಮೋಸಕೃತ್ಯಗಳ ಮೂಲಕ ತಮ್ಮನ್ನೇ ನಾಶಮಾಡಿಕೊಳ್ಳುತ್ತಾರೆ.

ದೇವರು ಜನರಿಗೆ ನ್ಯಾಯತೀರ್ಪು ಮಾಡುವ ದಿನದಲ್ಲಿ, ಹಣದಿಂದ ಯಾವ ಲಾಭವೂ ಇಲ್ಲ. ಆದರೆ ನೀತಿಯು ಜನರನ್ನು ಮರಣದಿಂದ ಕಾಪಾಡುತ್ತದೆ.

ನೀತಿವಂತನು ಯಥಾರ್ಥನಾಗಿದ್ದರೆ ಅವನ ಜೀವನವು ಸರಾಗವಾಗಿರುವುದು. ಆದರೆ ಕೆಡುಕನು ತನ್ನ ಕೆಟ್ಟಕಾರ್ಯಗಳಿಂದ ನಾಶವಾಗುವನು.

ನೀತಿಯು ಯಥಾರ್ಥವಂತರನ್ನು ಕಾಪಾಡುತ್ತದೆ. ಆದರೆ ವಂಚಕರು ತಮ್ಮ ಆಸೆಗಳಿಂದಲೇ ಸಿಕ್ಕಿಬೀಳುವರು.

ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳೆಲ್ಲಾ ನಾಶವಾಗುತ್ತವೆ. ಅವನ ಅಪೇಕ್ಷೆಗಳೆಲ್ಲಾ ಕೊನೆಗೊಳ್ಳುತ್ತವೆ.

ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. ಅವನ ಬದಲಾಗಿ ದುಷ್ಟನು ಇಕ್ಕಟ್ಟಿನಲ್ಲಿ ಸಿಕ್ಕಿಬೀಳುವನು.

ಕೆಡುಕರು ತಮ್ಮ ಮಾತಿನಿಂದಲೇ ಬೇರೆಯವರನ್ನು ನಾಶಪಡಿಸುತ್ತಾರೆ. ಸಜ್ಜನರಿಗಾದರೋ ಅವರ ತಿಳುವಳಿಕೆಯೇ ರಕ್ಷಣೆ ನೀಡುವುದು.

10 ಸಜ್ಜನರಿಗೆ ಜಯವಾದರೆ ನಗರಕ್ಕೆಲ್ಲ ಸಂತಸ. ಕೆಡುಕರು ನಾಶವಾದರೆ ಜನರು ಜಯಘೋಷ ಮಾಡುವರು.

11 ಪಟ್ಟಣವು ತನ್ನಲ್ಲಿ ವಾಸವಾಗಿರುವ ಯಥಾರ್ಥವಂತರ ಆಶೀರ್ವಾದದಿಂದ ಏಳಿಗೆ ಹೊಂದುವುದು. ಕೆಡುಕರ ಮಾತುಗಳು ಪಟ್ಟಣವನ್ನು ನಾಶಮಾಡುತ್ತವೆ.

12 ಬುದ್ಧಿಹೀನನು ಇತರರನ್ನು ಹೀನೈಸುತ್ತಾನೆ. ಆದರೆ ಬುದ್ಧಿವಂತನು ಮೌನವಾಗಿರುತ್ತಾನೆ.

13 ಗುಟ್ಟು ರಟ್ಟುಮಾಡುವವನನ್ನು ನಂಬಲಾಗದು. ಆದರೆ ನಂಬಿಗಸ್ತನು ವಿಷಯಗಳನ್ನು ರಹಸ್ಯವಾಗಿಡುವನು.

14 ಜ್ಞಾನದ ಮಾರ್ಗದರ್ಶನವಿಲ್ಲದ ದೇಶವು ಬಿದ್ದುಹೋಗುವುದು. ಆದರೆ ಒಳ್ಳೆಯ ಸಲಹೆಗಾರರನ್ನು ಹೊಂದಿರುವ ದೇಶವು ಕ್ಷೇಮವಾಗಿರುವುದು.

15 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾಗಿದ್ದರೆ ಕಷ್ಟಕ್ಕೀಡಾಗಿರುವೆ; ನೀನು ಜಾಮೀನಾಗಿಲ್ಲದಿದ್ದರೆ ಕ್ಷೇಮವಾಗಿರುವೆ.

16 ದಯೆಯುಳ್ಳ ಸ್ತ್ರೀಯು ಗೌರವವನ್ನು ಪಡೆಯುವಳು. ಬಲಾತ್ಕಾರಿಗಳಾದ ಗಂಡಸರು ಕೇವಲ ಹಣವನ್ನು ಗಳಿಸುವರು.

17 ದಯೆಯುಳ್ಳವನು ತನಗೆ ಲಾಭ ಮಾಡಿಕೊಳ್ಳುವನು. ಕ್ರೂರಿಯು ತನಗೇ ಕೇಡುಮಾಡಿಕೊಳ್ಳುವನು.

18 ಕೆಡುಕನು ತಾತ್ಕಾಲಿಕವಾದ ಲಾಭವನ್ನು ಮಾಡಿಕೊಳ್ಳುತ್ತಾನೆ. ಆದರೆ ನೀತಿವಂತನು ಯೋಗ್ಯವಾದ ಪ್ರತಿಫಲವನ್ನು ಹೊಂದಿಕೊಳ್ಳುವನು.

19 ನೀತಿವಂತನು ನಿಜವಾಗಿಯೂ ಜೀವವನ್ನು ಹೊಂದಿಕೊಳ್ಳುವನು, ಆದರೆ ಕೆಡುಕನನ್ನು ಹಿಂಬಾಲಿಸುತ್ತಾ ಹೋಗುವವನು ಸಾವಿಗೀಡಾಗುವನು.

20 ಕೆಡುಕರು ಯೆಹೋವನಿಗೆ ಅಸಹ್ಯರು. ಆದರೆ ಸನ್ಮಾರ್ಗಿಗಳು ಆತನ ಮೆಚ್ಚಿಕೆಗೆ ಪಾತ್ರರಾಗಿದ್ದಾರೆ.

21 ದುಷ್ಟರಿಗೆ ದಂಡನೆ ಖಂಡಿತ. ಶಿಷ್ಟರಿಗೆ ಬಿಡುಗಡೆ ನಿಶ್ಚಯ.

22 ಅವಿವೇಕಳಿಗೆ ಸೌಂದರ್ಯವು ಹಂದಿಯ ಮೂಗಿನಲ್ಲಿರುವ ಸುಂದರವಾದ ಚಿನ್ನದ ಮೂಗುತಿಯಂತಿರುವುದು.

23 ಒಳ್ಳೆಯವರ ಬಯಕೆ ಅವರನ್ನು ಕ್ಷೇಮಕ್ಕೆ ನಡೆಸುತ್ತದೆ. ಆದರೆ ದುಷ್ಟರ ಆಕಾಂಕ್ಷೆ ಅವರನ್ನು ದಂಡನೆಗೆ ನಡೆಸುತ್ತದೆ.

24 ಉಚಿತವಾಗಿ ಕೊಡುವವನು ಅದಕ್ಕಿಂತಲೂ ಹೆಚ್ಚುಗಳಿಸುವನು. ಆದರೆ ಕೊಡಲೊಲ್ಲದವನು ಬಡವನಾಗುವನು.

25 ಉದಾರಿಯು ಅಭಿವೃದ್ಧಿಯಾಗುವನು. ಬೇರೆಯವರಿಗೆ ಸಹಾಯಮಾಡುವವನು ಸಹಾಯವನ್ನು ಹೊಂದಿಕೊಳ್ಳುವನು.

26 ಧಾನ್ಯವನ್ನು ಮಾರದೆ ಕೂಡಿಟ್ಟುಕೊಳ್ಳುವವನನ್ನು ಜನರು ಶಪಿಸುವರು. ಧಾನ್ಯ ಮಾರುವವನನ್ನು ಜನರು ಆಶೀರ್ವದಿಸುವರು.

27 ಒಳ್ಳೆಯದನ್ನು ಮಾಡುವವನನ್ನು ಜನರು ಗೌರವಿಸುವರು. ಕೇಡನ್ನು ಮಾಡುವವನಿಗೆ ಕೇವಲ ಕೇಡೇ ಆಗುವುದು.

28 ಐಶ್ವರ್ಯದ ಮೇಲೆ ಭರವಸೆಯಿಟ್ಟಿರುವವನು ಎಲೆಯಂತೆ ಉದುರಿಹೋಗುವನು. ಆದರೆ ಸಧರ್ಮಿಯು ಚಿಗುರಿದ ಎಲೆಯಂತೆ ಬೆಳೆಯುವನು.

29 ತನ್ನ ಕುಟುಂಬಕ್ಕೆ ತೊಂದರೆ ಕೊಡುವವನಿಗೆ ಆಸ್ತಿಯು ದೊರೆಯುವುದಿಲ್ಲ. ಮೂಢನು ಬಲವಂತಕ್ಕೊಳಗಾಗಿ ಜ್ಞಾನಿಯ ಸೇವೆ ಮಾಡಬೇಕಾಗುವುದು.

30 ನೀತಿವಂತನ ಕಾರ್ಯಗಳು ಜೀವವುಳ್ಳ ಮರಗಳಂತಿವೆ. ಜ್ಞಾನಿಯು ಆತ್ಮಗಳನ್ನು ಗೆದ್ದುಕೊಳ್ಳುವನು.

31 ಶಿಷ್ಟರು ಭೂಮಿಯ ಮೇಲೆ ಪ್ರತಿಫಲವನ್ನು ಹೊಂದುವುದಾದರೆ ಕೆಡುಕರು ಸಹ ತಮಗೆ ಬರತಕ್ಕ ದಂಡನೆಯನ್ನು ಹೊಂದುವುದು ನಿಶ್ಚಯ.

ಎಫೆಸದವರಿಗೆ 4

ದೇಹದ ಐಕ್ಯತೆ

ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಯಾವಾಗಲೂ ದೀನತೆಯಿಂದ, ಸಾತ್ವಿಕತೆಯಿಂದ ಮತ್ತು ತಾಳ್ಮೆಯಿಂದ ಕೂಡಿದವರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. ನೀವು ಆತ್ಮನ ಮೂಲಕವಾಗಿ ಸಮಾಧಾನವೆಂಬ ಬಂಧನದಿಂದ ಒಂದಾಗಿದ್ದೀರಿ. ಈ ರೀತಿ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಸಮಾಧಾನವು ನಿಮ್ಮೆಲ್ಲರನ್ನು ಒಂದಾಗಿಸಲಿ. ದೇಹವು ಒಂದೇ ಮತ್ತು ಆತ್ಮನು ಒಬ್ಬನೇ. ನೀವೆಲ್ಲರೂ ಒಂದೇ ನಿರೀಕ್ಷೆಯನ್ನು ಹೊಂದಿರಬೇಕೆಂದು ದೇವರು ನಿಮ್ಮನ್ನು ಕರೆದನು. ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಸಮಸ್ತವನ್ನೂ ಆಳುತ್ತಾನೆ. ಆತನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಎಲ್ಲರಲ್ಲಿ ವಾಸಿಸುವವನಾಗಿದ್ದಾನೆ.

ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ. ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ:

“ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ,
    ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.”(A)

“ಆತನು ಉನ್ನತಸ್ಥಾನಕ್ಕೆ ಏರಿಹೋದನು” ಎಂದರೆ ಆತನು ಭೂಲೋಕಕ್ಕೆ ಇಳಿದುಬಂದು, 10 ಭೂಮಿಯ ಅಧೋಭಾಗಕ್ಕೆ ಇಳಿದುಹೋಗಿ, ಅಲ್ಲಿಂದ ಆಕಾಶದ ಅತ್ಯುನ್ನತಸ್ಥಾನಕ್ಕೆ ಏರಿಹೋದನು ಎಂದರ್ಥ. ಸಮಸ್ತದಲ್ಲಿ ತಾನೇ ತುಂಬಿರಬೇಕೆಂದು ಕ್ರಿಸ್ತನು ಹಾಗೆ ಮಾಡಿದನು. 11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು. 12 ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು. 13 ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.

14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ. 15 ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ. 16 ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.

ನೀವು ಜೀವಿಸಬೇಕಾದ ರೀತಿ

17 ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ. 18 ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. 19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ. 20 ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ. 21 ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ. 22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. 23 ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.

25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(B) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.

29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International