M’Cheyne Bible Reading Plan
ಯಾಜಕರನ್ನು ನೇಮಿಸುವ ಆಚಾರವಿಧಿ
29 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನು ಮತ್ತು ಅವನ ಗಂಡುಮಕ್ಕಳು ಅಭಿಷೇಕಿಸಲ್ಪಟ್ಟ ಮತ್ತು ಪ್ರತ್ಯೇಕಿಸಲ್ಪಟ್ಟ ಯಾಜಕರಾಗಿ ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡಲು ಅವರು ಮಾಡತಕ್ಕದ್ದೇನೆಂಬುದನ್ನು ನಾನೀಗ ಹೇಳುವೆನು. ಯಾವ ಅಂಗದೋಷವಿಲ್ಲದ ಒಂದು ಹೋರಿಮರಿಯನ್ನು ಮತ್ತು ಎರಡು ಟಗರುಗಳನ್ನು ತೆಗೆದುಕೊ. 2 ಬಳಿಕ ಹುಳಿಯಿಲ್ಲದ ರೊಟ್ಟಿಯನ್ನೂ ಆಲಿವ್ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಾಕಿದ ತೆಳುವಾದ ಕಡುಬುಗಳನ್ನೂ ಗೋಧಿಹಿಟ್ಟಿನಿಂದ ಮಾಡಿಸಿ ಒಂದೇ ಬುಟ್ಟಿಯಲ್ಲಿ ತುಂಬಿಸಬೇಕು. 3 ಬಳಿಕ ಆ ಬುಟ್ಟಿಯನ್ನು ಆರೋನನಿಗೂ ಮತ್ತು ಅವನ ಪುತ್ರರಿಗೂ ಕೊಡು. ಅದೇ ಸಮಯದಲ್ಲಿ ಹೋರಿಯನ್ನು ಮತ್ತು ಎರಡು ಟಗರುಗಳನ್ನು ಅವರಿಗೆ ಕೊಡು.
4 “ತರುವಾಯ ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನಗುಡಾರದ ದ್ವಾರಕ್ಕೆ ಕರೆದುಕೊಂಡು ಬಾ. ಅವರನ್ನು ನೀರಿನಲ್ಲಿ ಸ್ನಾನಮಾಡಿಸು. 5 ವಿಶೇಷವಾದ ಬಟ್ಟೆಗಳನ್ನು ಆರೋನನಿಗೆ ತೊಡಿಸು. ಹೆಣೆದ ಅಂಗಿಯನ್ನು ಮತ್ತು ಏಫೋದಿನೊಡನೆ ಧರಿಸತಕ್ಕ ದೈವನಿರ್ಣಯದ ಪದಕವನ್ನು ಅವನಿಗೆ ತೊಡಿಸು. ಬಳಿಕ ಅಂದವಾದ ನಡುಕಟ್ಟನ್ನು ಅವನಿಗೆ ಕಟ್ಟು. 6 ಅವನ ತಲೆಗೆ ಮುಂಡಾಸನ್ನು ಇಡು ಮತ್ತು ಮುಂಡಾಸಕ್ಕೆ ವಿಶೇಷವಾದ ಕಿರೀಟವನ್ನು ಕಟ್ಟಿಸು. 7 ಅಭಿಷೇಕತೈಲವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಸುರಿ.
8 “ತರುವಾಯ ಆರೋನನ ಪುತ್ರರನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಅವರಿಗೆ ಹೆಣೆದ ಅಂಗಿಗಳನ್ನು ತೊಡಿಸು. 9 ಬಳಿಕ ಅವರ ಸೊಂಟಗಳಿಗೆ ನಡುಕಟ್ಟುಗಳನ್ನು ಸುತ್ತಿಸು. ಅಂದಿನಿಂದ ಅವರು ಯಾಜಕರಾಗಿರುವರು. ವಿಶೇಷವಾದ ಈ ಕಟ್ಟಳೆಯು ಶಾಶ್ವತವಾಗಿರುವುದರಿಂದ ಅವರು ಯಾಜಕರಾಗಿರುವರು. ಹೀಗೆ ಆರೋನನನ್ನೂ ಅವನ ಪುತ್ರರನ್ನೂ ನೀನು ಯಾಜಕರನ್ನಾಗಿ ಮಾಡುವೆ.
10 “ತರುವಾಯ ನೀನು ಹೋರಿಯನ್ನು ದೇವದರ್ಶನಗುಡಾರದ ಎದುರಿಗೆ ತರಬೇಕು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಹೋರಿಯ ತಲೆಯ ಮೇಲಿಡಬೇಕು. 11 ಬಳಿಕ ದೇವದರ್ಶನಗುಡಾರದ ದ್ವಾರದಲ್ಲಿ ಹೋರಿಯನ್ನು ವಧಿಸು. ಯೆಹೋವನು ಇದನ್ನು ನೋಡುವನು. 12 ತರುವಾಯ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬಳಿಗೆ ಹೋಗು. ವೇದಿಕೆಯ ಕೊಂಬುಗಳಿಗೆ ನಿನ್ನ ಬೆರಳಿನಿಂದ ರಕ್ತವನ್ನು ಹಚ್ಚು. ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಕೆಯ ಬುಡಕ್ಕೆ ಸುರಿದುಬಿಡು. 13 ಬಳಿಕ ಹೋರಿಯ ಒಳಗಿನ ಕೊಬ್ಬನ್ನೂ ಪಿತ್ತಕೋಶದ ಸುತ್ತಲಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳ ಸುತ್ತಲಿರುವ ಕೊಬ್ಬನ್ನೂ ತೆಗೆದುಬಿಡು. ಈ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡು. 14 ಬಳಿಕ ಹೋರಿಯ ಮಾಂಸ, ಚರ್ಮ, ಇತರ ಭಾಗಗಳನ್ನು ತೆಗೆದುಕೊಂಡು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟುಬಿಡು. ಇದು ಯಾಜಕರ ಪಾಪಗಳನ್ನು ಪರಿಹರಿಸುವ ಕಾಣಿಕೆಯಾಗಿದೆ.
15 “ತರುವಾಯ ಆರೋನನಿಗೂ ಅವನ ಪುತ್ರರಿಗೂ ತಮ್ಮ ಕೈಗಳನ್ನು ಒಂದು ಟಗರಿನ ತಲೆಯ ಮೇಲೆ ಇಡಬೇಕೆಂದು ಹೇಳು. 16 ಆ ಟಗರನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. 17 ಬಳಿಕ ಟಗರನ್ನು ಅನೇಕ ತುಂಡುಗಳಾಗಿ ಕತ್ತರಿಸು. ಟಗರಿನ ಒಳಗಿನ ಎಲ್ಲಾ ಭಾಗಗಳನ್ನು ಮತ್ತು ಕಾಲುಗಳನ್ನು ತೊಳೆಯಬೇಕು. ಅವುಗಳನ್ನು ತಲೆಯ ಮತ್ತು ಟಗರಿನ ಇತರ ತುಂಡುಗಳೊಡನೆ ಇಡು. 18 ತರುವಾಯ ಯಜ್ಞವೇದಿಕೆಯ ಮೇಲೆ ಇಡೀ ಟಗರನ್ನು ಹೋಮಮಾಡು. ಇದು ವಿಶೇಷವಾದ ಸರ್ವಾಂಗಹೋಮವಾಗಿದೆ. ಇದು ಯೆಹೋವನಿಗೆ ಪರಿಮಳ ವಾಸನೆಯಾಗಿದ್ದು ಆತನಿಗೆ ಮೆಚ್ಚಿಕೆಕರವಾಗಿದೆ.
19 “ಮತ್ತೊಂದು ಟಗರಿನ ಮೇಲೆ ತಮ್ಮ ಕೈಗಳನ್ನಿಡಲು ಆರೋನನಿಗೂ ಅವನ ಪುತ್ರರಿಗೂ ಹೇಳು. 20 ಆ ಟಗರನ್ನು ವಧಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊ. ಆ ರಕ್ತವನ್ನು ಆರೋನ ಮತ್ತು ಅವನ ಪುತ್ರರ ಬಲಗಿವಿಯ ತುದಿಗೆ ಹಚ್ಚು. ಅದಲ್ಲದೆ ಅವರ ಬಲಗೈಗಳ ಹೆಬ್ಬೆರಳುಗಳಿಗೂ ಸ್ವಲ್ಪ ರಕ್ತವನ್ನು ಹಚ್ಚು. ಸ್ವಲ್ಪ ರಕ್ತವನ್ನು ಅವರ ಬಲಗಾಲಿನ ಹೆಬ್ಬೊಟ್ಟಿಗೂ ಹಚ್ಚು. ಬಳಿಕ ಉಳಿದ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. 21 ತರುವಾಯ ಯಜ್ಞವೇದಿಕೆಯಿಂದ ಸ್ವಲ್ಪ ರಕ್ತವನ್ನು ತೆಗೆದುಕೊ. ಅದನ್ನು ವಿಶೇಷವಾದ ಅಭೀಷೇಕತೈಲದಲ್ಲಿ ಬೆರಸಿ ಆರೋನನ ಮೇಲೆಯೂ ಅವನ ಬಟ್ಟೆಗಳ ಮೇಲೆಯೂ ಚಿಮಿಕಿಸು. ಅವನ ಪುತ್ರರ ಮತ್ತು ಅವರ ಬಟ್ಟೆಗಳ ಮೇಲೆಯೂ ಚಿಮಿಕಿಸು. ಆಗ ಅವರು ಪರಿಶುದ್ಧಗೊಳ್ಳುವರು, ಅವರ ಬಟ್ಟೆಗಳೂ ಪರಿಶುದ್ಧಗೊಳ್ಳುವವು. ಆರೋನನು ಮತ್ತು ಅವನ ಪುತ್ರರು ವಿಶೇಷವಾದ ರೀತಿಯಲ್ಲಿ ನನ್ನ ಸೇವೆ ಮಾಡುತ್ತಾರೆಂದು ಇದು ತೋರಿಸುವುದು.
22 “ಬಳಿಕ ಟಗರಿನ ಕೊಬ್ಬನ್ನೂ ತೆಗೆದುಕೊ. (ಇದು ಆರೋನನನ್ನು ಮಹಾಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಟಗರು.) ಬಾಲದ ಸುತ್ತಲಿರುವ ಕೊಬ್ಬನ್ನು, ದೇಹದ ಒಳಗಿನ ಅಂಗಗಳನ್ನು ಮುಚ್ಚಿಕೊಂಡಿರುವ ಕೊಬ್ಬನ್ನು, ಪಿತ್ತಕೋಶದ ಸುತ್ತಲಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಮತ್ತು ಬಲತೊಡೆಯನ್ನು ತೆಗೆದುಕೊ. 23 ಬಳಿಕ ನೀನು ಮಾಡಿದ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನು ತೆಗೆದುಕೊ. ಇದು ಯೆಹೋವನ ಮುಂದೆ ಇಟ್ಟ ಬುಟ್ಟಿಯಾಗಿದೆ. ಒಂದು ತುಂಡು ರೊಟ್ಟಿ, ಎಣ್ಣೆಯಿಂದ ಮಾಡಿದ ಒಂದು ಹೋಳಿಗೆ, ತೆಳುವಾದ ಒಂದು ಕಡುಬು ಇವುಗಳನ್ನು ಬುಟ್ಟಿಯಿಂದ ತೆಗೆದುಕೊ. 24 ಇವುಗಳನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಯೆಹೋವನ ಮುಂದೆ ಇವುಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ನಿವಾಳಿಸಬೇಕೆಂದು ಅವರಿಗೆ ಹೇಳು. ಇದು ಯೆಹೋವನಿಗೆ ವಿಶೇಷವಾದ ನೈವೇದ್ಯಾರ್ಪಣೆಯಾಗಿದೆ. 25 ಬಳಿಕ ಈ ವಸ್ತುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಯಿಂದ ತೆಗೆದುಕೊಂಡು ಟಗರಿನ ಜೊತೆ ಯಜ್ಞವೇದಿಕೆಯ ಮೇಲಿಡು. ಈ ಸರ್ವಾಂಗಹೋಮವು ಯೆಹೋವನಿಗೆ ಸುಗಂಧಹೋಮವಾಗಿದ್ದು ಆತನನ್ನು ಮೆಚ್ಚಿಸುವುದು.
26 “ತರುವಾಯ ಟಗರಿನ ಎದೆಯ ಭಾಗವನ್ನು ತೆಗೆದುಕೊ. (ಆರೋನನನ್ನು ಮಹಾಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಟಗರು ಇದಾಗಿದೆ.) ಟಗರಿನ ಎದೆಯ ಭಾಗವನ್ನು ವಿಶೇಷ ಸಮರ್ಪಣೆಯಾಗಿ ಯೆಹೋವನ ಮುಂದೆ ನಿವಾಳಿಸಬೇಕು. ಪಶುವಿನ ಈ ಭಾಗವು ನಿನಗೆ ಸಲ್ಲತಕ್ಕ ಪಾಲು. 27 ಬಳಿಕ ಆರೋನನನ್ನು ಮಹಾಯಾಜಕನನ್ನಾಗಿ ಮಾಡಲು ನಿವಾಳಿಸಲ್ಪಟ್ಟ ಟಗರಿನ ಎದೆಯ ಭಾಗವನ್ನೂ ಯಾಜಕರ ಭಾಗವಾದ ನಿವಾಳಿಸಲ್ಪಟ್ಟ ಟಗರಿನ ತೊಡೆಯನ್ನೂ ತೆಗೆದುಕೊ. ಅವುಗಳನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಇದು ಕಾಣಿಕೆಯ ವಿಶೇಷ ಭಾಗವಾಗಿದೆ. 28 ಇಸ್ರೇಲರು ಆರೋನನಿಗೂ ಅವನ ಪುತ್ರರಿಗೂ ಈ ಭಾಗಗಳನ್ನು ಯಾವಾಗಲೂ ಕೊಡುವರು. ಇಸ್ರೇಲರು ಯೆಹೋವನಿಗೆ ಅರ್ಪಿಸುವ ಕಾಣಿಕೆಗಳಲ್ಲಿ ಈ ಭಾಗಗಳು ಯಾವಾಗಲೂ ಯಾಜಕರಿಗೆ ಸೇರಿದ್ದಾಗಿವೆ. ಅವರು ಯಾಜಕರಿಗೆ ಕೊಡುವ ಈ ಭಾಗಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟಂತಿರುತ್ತವೆ.
29 “ಆರೋನನಿಗೋಸ್ಕರ ಮಾಡಿಸಿದ ವಿಶೇಷವಾದ ವಸ್ತ್ರಗಳನ್ನು ಅವನ ತರುವಾಯ ಅವನ ವಂಶಸ್ಥರೂ ಯಾಜಕ ಉದ್ಯೋಗಕ್ಕೆ ಆರಿಸಲ್ಪಟ್ಟಾಗ, ಅವುಗಳನ್ನು ಧರಿಸಿಕೊಳ್ಳುವರು. 30 ಆರೋನನ ತರುವಾಯ ಅವನ ಮಗನು ಮಹಾಯಾಜಕನಾಗುವನು. ಅವನು ಪವಿತ್ರಸ್ಥಳದಲ್ಲಿ ಸೇವೆಮಾಡಲು ದೇವದರ್ಶನಗುಡಾರಕ್ಕೆ ಪ್ರವೇಶಿಸಿದಂದಿನಿಂದ ಏಳು ದಿನಗಳವರೆಗೆ ಆ ವಸ್ತ್ರಗಳನ್ನು ಧರಿಸಿಕೊಂಡಿರುವನು.
31 “ಆರೋನನನ್ನು ಮಹಾಯಾಜಕನನ್ನಾಗಿ ಮಾಡಲು ಉಪಯೋಗಿಸಿದ ಟಗರಿನ ಮಾಂಸವನ್ನು ದೇವದರ್ಶನಗುಡಾರದ ಪ್ರಾಕಾರದಲ್ಲಿ ಬೇಯಿಸು. 32 ಬಳಿಕ ಆರೋನನು ಮತ್ತು ಅವನ ಪುತ್ರರು ದೇವದರ್ಶನಗುಡಾರದ ಮುಂಭಾಗದಲ್ಲಿ ಆ ಮಾಂಸವನ್ನೂ ಬುಟ್ಟಿಯಲ್ಲಿರುವ ರೊಟ್ಟಿಯನ್ನೂ ತಿನ್ನಬೇಕು. 33 ಅವರು ಯಾಜಕರಾಗಿ ಮಾಡಲ್ಪಟ್ಟಾಗ ಅವರ ಪಾಪನಿವಾರಣೆಗಾಗಿ ಇವುಗಳನ್ನು ಸಮರ್ಪಿಸಲಾಗಿತ್ತು. ಆದ್ದರಿಂದ ಆ ಸಮರ್ಪಣೆಗಳನ್ನು ಅವರು ಮಾತ್ರ ತಿನ್ನಬೇಕೇ ಹೊರತು ಬೇರೆಯವರು ತಿನ್ನಬಾರದು; ಯಾಕೆಂದರೆ ಅವು ಪರಿಶುದ್ಧವಾಗಿವೆ ಮತ್ತು ಪ್ರತ್ಯೇಕಿಸಲ್ಪಟ್ಟವುಗಳಾಗಿವೆ. 34 ಟಗರಿನ ಮಾಂಸ ಅಥವಾ ರೊಟ್ಟಿಯೇನಾದರೂ ಮರುದಿನ ಮುಂಜಾನೆಯವರೆಗೆ ಉಳಿದರೆ, ಅದನ್ನು ಸುಟ್ಟುಬಿಡಬೇಕು. ನೀವು ಆ ರೊಟ್ಟಿಯನ್ನಾಗಲಿ ಮಾಂಸವನ್ನಾಗಲಿ ತಿನ್ನಬಾರದು. ಯಾಕೆಂದರೆ ಅದನ್ನು ವಿಶೇಷವಾದ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ಮಾತ್ರ ತಿನ್ನಬೇಕು.
35 “ನಾನು ನಿನಗೆ ಆಜ್ಞಾಪಿಸಿದ ಇವುಗಳನ್ನೆಲ್ಲ ಆರೋನ ಮತ್ತು ಅವನ ಪುತ್ರರಿಗೋಸ್ಕರ ಮಾಡು. ಅವರನ್ನು ಯಾಜಕರನ್ನಾಗಿ ನೇಮಿಸುವ ಸಮಾರಂಭವು ಏಳು ದಿನಗಳವರೆಗೆ ನಡೆಯಬೇಕು. 36 ಏಳು ದಿನಗಳವರೆಗೆ ಪ್ರತಿದಿನ ಒಂದು ಹೋರಿಯನ್ನು ವಧಿಸು. ಇದು ಆರೋನನ ಮತ್ತು ಅವನ ಪುತ್ರರ ಪಾಪನಿವಾರಣೆಯ ಸಮರ್ಪಣೆಯಾಗಿರುವುದು. ಅದಲ್ಲದೆ ಯಜ್ಞವೇದಿಕೆಯನ್ನು ಪರಿಶುದ್ಧಗೊಳಿಸಲು ಅದರ ಮೇಲೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಿ ಅದನ್ನು ದೇವರ ಸೇವೆಗೋಸ್ಕರ ಅಭಿಷೇಕಿಸಬೇಕು. 37 ಹೀಗೆ ಏಳು ದಿನಗಳವರೆಗೆ ಯಜ್ಞವೇದಿಕೆಯನ್ನು ಶುದ್ಧಗೊಳಿಸಿ ಪವಿತ್ರಗೊಳಿಸಬೇಕು. ಆ ಸಮಯದಲ್ಲಿ ಯಜ್ಞವೇದಿಕೆಯು ಮಹಾಪವಿತ್ರವಾಗಿರುವುದು. ಯಜ್ಞವೇದಿಕೆಗೆ ಸೋಂಕಿದ ವಸ್ತುಗಳೆಲ್ಲವೂ ಪವಿತ್ರವಾಗುವುದು.
38 “ಯಜ್ಞವೇದಿಕೆಯ ಮೇಲೆ ಪ್ರತಿದಿನ ಯಜ್ಞವನ್ನು ಸಮರ್ಪಿಸಬೇಕು. ಒಂದು ವರ್ಷದ ಎರಡು ಕುರಿಮರಿಗಳನ್ನು ನೀನು ವಧಿಸಬೇಕು. 39 ಮುಂಜಾನೆ ಒಂದು ಕುರಿಮರಿಯನ್ನು ಮತ್ತು ಸಾಯಂಕಾಲ ಮತ್ತೊಂದು ಕುರಿಮರಿಯನ್ನು ಸಮರ್ಪಿಸಬೇಕು. 40 ನೀನು ಮೊದಲಿನ ಕುರಿಮರಿಯನ್ನು ವಧಿಸುವಾಗ ಮೂರು ಸೇರು ಶ್ರೇಷ್ಠ ಗೋಧಿ ಹಿಟ್ಟನ್ನೂ ಸಮರ್ಪಿಸು. ಆ ಹಿಟ್ಟನ್ನು ಒಂದೂವರೆ ಸೇರು ದ್ರಾಕ್ಷಾರಸದೊಂದಿಗೆ ಬೆರೆಸು. 41 ನೀನು ಸಾಯಂಕಾಲದಲ್ಲಿ ಮತ್ತೊಂದು ಕುರಿಮರಿಯನ್ನು ವಧಿಸುವಾಗಲೂ ಮೂರು ಸೇರು ಶ್ರೇಷ್ಠ ಗೋಧಿಯನ್ನೂ ಅರ್ಧ ಸೇರು ದ್ರಾಕ್ಷಾರಸವನ್ನೂ ಸಮರ್ಪಿಸು. ಇದು ಯೆಹೋವನಿಗೆ ಸುಗಂಧಹೋಮವಾಗಿರುವುದು.
42 “ನೀನು ಪ್ರತಿದಿನ ಈ ಸರ್ವಾಂಗಹೋಮವನ್ನು ಸಮರ್ಪಣೆಯಾಗಿ ಅರ್ಪಿಸಬೇಕು. ದೇವದರ್ಶನಗುಡಾರದ ದ್ವಾರದಲ್ಲಿ ಯೆಹೋವನ ಮುಂದೆ ಇದನ್ನು ಮಾಡು. ನೀನು ಸಮರ್ಪಣೆಯನ್ನು ಮಾಡುವಾಗ ಯೆಹೋವನಾದ ನಾನು ಅಲ್ಲಿ ನಿನ್ನನ್ನು ಸಂಧಿಸಿ ನಿನ್ನೊಡನೆ ಮಾತಾಡುವೆನು. 43 ಆ ಸ್ಥಳದಲ್ಲಿ ನಾನು ಇಸ್ರೇಲರನ್ನು ಸಂಧಿಸುವೆನು. ನನ್ನ ಪ್ರಭಾವದಿಂದ ಆ ಸ್ಥಳವು ಪವಿತ್ರವಾಗುವುದು.
44 “ಅಲ್ಲದೆ ನಾನು ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಪವಿತ್ರಗೊಳಿಸುವೆನು. ಆರೋನನನ್ನೂ ಅವನ ಪುತ್ರರನ್ನೂ ಪವಿತ್ರಗೊಳಿಸುವೆನು; ಆಗ ಅವರು ಯಾಜಕರಾಗಿ ನನಗೆ ಸೇವೆಮಾಡಲು ಶಕ್ತರಾಗುವರು. 45 ನಾನು ಇಸ್ರೇಲರ ಮಧ್ಯದಲ್ಲಿ ವಾಸಿಸುವೆನು ಮತ್ತು ಅವರ ದೇವರಾಗಿರುವೆನು. 46 ನಾನು ಅವರ ದೇವರಾದ ಯೆಹೋವನಾಗಿದ್ದೇನೆಂದು ಜನರು ತಿಳಿದುಕೊಳ್ಳುವರು. ಅವರ ಮಧ್ಯದಲ್ಲಿ ವಾಸಮಾಡುವುದಕ್ಕಾಗಿ ಈಜಿಪ್ಟಿನಿಂದ ಅವರನ್ನು ಕರೆದುಕೊಂಡು ಬಂದವನು ನಾನೇ ಎಂದು ಅವರು ತಿಳಿದುಕೊಳ್ಳುವರು. ನಾನು ಅವರ ದೇವರಾಗಿರುವ ಯೆಹೋವನೇ.”
ಸಿಕ್ಕಿಕೊಂಡ ವ್ಯಭಿಚಾರಿಣಿ
8 ಯೇಸು ಆಲಿವ್ ಮರಗಳ ಗುಡ್ಡಕ್ಕೆ ಹೋದನು. 2 ಮರುದಿನ ನಸುಕಿನಲ್ಲೇ ಯೇಸು ದೇವಾಲಯಕ್ಕೆ ಮರಳಿ ಹೋದನು. ಎಲ್ಲಾ ಜನರು ಯೇಸುವಿನ ಬಳಿಗೆ ನೆರೆದುಬಂದರು. ಯೇಸು ಕುಳಿತುಕೊಂಡು ಜನರಿಗೆ ಉಪದೇಶಿಸಿದನು.
3 ಧರ್ಮೋಪದೇಶಕರು ಮತ್ತು ಫರಿಸಾಯರು ಒಬ್ಬ ಸ್ತ್ರೀಯನ್ನು ಅಲ್ಲಿಗೆ ಕರೆದುಕೊಂಡು ಬಂದರು. ಆ ಸ್ತ್ರೀಯು ವ್ಯಭಿಚಾರ ಮಾಡುವಾಗಲೇ ಸಿಕ್ಕಿಕೊಂಡಿದ್ದಳು. ಅವರು ಆ ಸ್ತ್ರೀಯನ್ನು ಜನರ ಮುಂದೆ ಬಲವಂತವಾಗಿ ನಿಲ್ಲಿಸಿ, 4 ಯೇಸುವಿಗೆ, “ಉಪದೇಶಕನೇ, ಈ ಸ್ತ್ರೀಯು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಕೊಂಡಳು. 5 ಇಂಥ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಸ್ತ್ರೀಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸುತ್ತದೆ. ಈಗ ನಾವೇನು ಮಾಡಬೇಕು? ನೀನೇ ಹೇಳು” ಎಂದರು.
6 ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿದರೆ ಆತನ ಮೇಲೆ ಅಪವಾದ ಹೊರಿಸಲು ಸಾಧ್ಯವಾಗುತ್ತದೆ ಎಂದು ಈ ಪ್ರಶ್ನೆಯನ್ನು ಕೇಳಿದರು. ಆದರೆ ಯೇಸು ತಲೆ ಬಾಗಿಸಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು. 7 ಯೆಹೂದ್ಯ ನಾಯಕರು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ಆಗ ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪ ಮಾಡಿಲ್ಲದವನು ಆಕೆಯ ಮೇಲೆ ಮೊದಲನೆಯ ಕಲ್ಲನ್ನು ಎಸೆಯಲಿ” ಎಂದು ಹೇಳಿ, 8 ಮತ್ತೆ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದನು.
9 ಯೇಸುವಿನ ಈ ಮಾತನ್ನು ಕೇಳಿದ ಆ ಜನರು ಒಬ್ಬೊಬ್ಬರಾಗಿ ಅಲ್ಲಿಂದ ಹೊರಟುಹೋದರು. ಮೊದಲು ಹಿರಿಯರು, ನಂತರ ಇತರರು ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ಆ ಸ್ತ್ರೀ. ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು. 10 ಯೇಸು ನೆಟ್ಟಗೆ ಕುಳಿತುಕೊಂಡು, “ಅಮ್ಮಾ, ನಿನ್ನ ಮೇಲೆ ತಪ್ಪು ಹೊರಿಸಿದವರು ಎಲ್ಲಿದ್ದಾರೆ? ಅವರಲ್ಲಿ ಒಬ್ಬರಾದರೂ ನಿನಗೆ ಶಿಕ್ಷೆ ವಿಧಿಸಲಿಲ್ಲವೇ?” ಎಂದು ಕೇಳಿದನು.
11 ಆ ಸ್ತ್ರೀಯು, “ಸ್ವಾಮೀ, ಅವರಲ್ಲಿ ಯಾರೂ ನನಗೆ ತೀರ್ಪು ನೀಡಲಿಲ್ಲ” ಎಂದು ಉತ್ತರಕೊಟ್ಟಳು.
ಯೇಸು ಆಕೆಗೆ, “ಆದ್ದರಿಂದ ನಾನು ಸಹ ನಿನಗೆ ತೀರ್ಪು ನೀಡುವುದಿಲ್ಲ. ಈಗ ನೀನು ಹೋಗಬಹುದು, ಆದರೆ ಇನ್ನು ಮುಂದೆ ಪಾಪ ಮಾಡಬೇಡ” ಎಂದು ಹೇಳಿದನು.
ಯೇಸುವೇ ಲೋಕಕ್ಕೆ ಬೆಳಕು
12 ಬಳಿಕ, ಯೇಸುವು ಜನರೊಂದಿಗೆ ಮತ್ತೆ ಮಾತಾಡುತ್ತಾ, “ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ಎಂದಿಗೂ ಜೀವಿಸುವುದಿಲ್ಲ. ಅವನು ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು” ಎಂದು ಹೇಳಿದನು.
13 ಫರಿಸಾಯರು ಯೇಸುವಿಗೆ, “ನೀನು ನಿನ್ನ ಬಗ್ಗೆ ಮಾತಾಡುವ ಈ ಸಂಗತಿಗಳು ಸತ್ಯವೆಂದು ಹೇಳುವವನು ನೀನೊಬ್ಬನು ಮಾತ್ರ. ಆದ್ದರಿಂದ, ನೀನು ಹೇಳುವ ಈ ಸಂಗತಿಗಳನ್ನು ನಾವು ಸ್ವೀಕರಿಸಿಕೊಳ್ಳಲಾರೆವು” ಎಂದು ಹೇಳಿದರು.
14 ಯೇಸು, “ಹೌದು, ನಾನೇ ನನ್ನ ಬಗ್ಗೆ ಈ ಸಂಗತಿಗಳನ್ನು ಹೇಳುತ್ತಿದ್ದರೂ ಈ ಸಂಗತಿಗಳು ಜನರ ನಂಬಿಕೆಗೆ ಯೋಗ್ಯವಾಗಿವೆ. ಏಕೆಂದರೆ, ನಾನು ಎಲ್ಲಿಂದ ಬಂದೆನೆಂಬುದೂ ನಾನು ಎಲ್ಲಿಗೆ ಹೋಗುತ್ತೇನೆಂಬುದೂ ನನಗೆ ತಿಳಿದಿದೆ. ನಾನು ನಿಮ್ಮಂಥ ವ್ಯಕ್ತಿಯಲ್ಲ. ನಾನು ಎಲ್ಲಿಂದ ಬಂದೆನೆಂಬುದು ಮತ್ತು ಎಲ್ಲಿಗೆ ಹೋಗುತ್ತೇನೆಂಬುದು ನಿಮಗೆ ಗೊತ್ತಿಲ್ಲ. 15 ನೀವು ಹೊರತೋರಿಕೆಯ ಪ್ರಕಾರ ತೀರ್ಪು ಮಾಡುತ್ತಿದ್ದೀರಿ. ಆದರೆ ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16 ನಾನು ಮಾಡುವ ತೀರ್ಪು ನ್ಯಾಯಬದ್ಧವಾಗಿರುತ್ತದೆ. ಏಕೆಂದರೆ ನಾನು ತೀರ್ಪು ಮಾಡುವಾಗ ಒಬ್ಬಂಟಿಗನಾಗಿರುವುದಿಲ್ಲ. ನನ್ನನ್ನು ಕಳುಹಿಸಿದ ತಂದೆಯೂ ನನ್ನೊಂದಿಗಿರುತ್ತಾನೆ. 17 ಇಬ್ಬರ ಸಾಕ್ಷಿ ಒಂದೇ ಆಗಿದ್ದರೆ ಅವರ ಹೇಳಿಕೆಯನ್ನು ಸ್ವೀಕರಿಸಿಕೊಳ್ಳಬೇಕೆಂದು ನಿಮ್ಮ ಧರ್ಮಶಾಸ್ತ್ರವೇ ತಿಳಿಸುತ್ತದೆ. 18 ನನ್ನ ಪರವಾದ ಸಾಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ, ನನ್ನನ್ನು ಕಳುಹಿಸಿದ ತಂದೆಯು ನನ್ನ ಮತ್ತೊಬ್ಬ ಸಾಕ್ಷಿಯಾಗಿದ್ದಾನೆ” ಎಂದು ಉತ್ತರಕೊಟ್ಟನು.
19 ಜನರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದು ಕೇಳಿದರು.
ಯೇಸು, “ನಿಮಗೆ ನಾನಾಗಲಿ, ನನ್ನ ತಂದೆಯಾಗಲಿ ಗೊತ್ತಿಲ್ಲ. ನೀವು ನನ್ನನ್ನು ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದಿರುವಿರಿ” ಎಂದು ಹೇಳಿದನು. 20 ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಿದ್ದಾಗ ಈ ಮಾತುಗಳನ್ನು ಹೇಳಿದನು. ಜನರು ಕೊಡುವ ಕಾಣಿಕೆಯನ್ನು ಇಟ್ಟಿದ್ದ ಸ್ಥಳದ ಸಮೀಪದಲ್ಲಿ ಆತನಿದ್ದನು. ಆದರೆ ಆತನನ್ನು ಯಾರೂ ಬಂಧಿಸಲಿಲ್ಲ. ಏಕೆಂದರೆ ಆತನನ್ನು ಬಂಧಿಸತಕ್ಕ ಸಮಯ ಇನ್ನೂ ಬಂದಿರಲಿಲ್ಲ.
ಯೆಹೂದ್ಯರ ಅಪನಂಬಿಕೆ
21 ಯೇಸು ಅವರಿಗೆ, “ನಾನು ನಿಮ್ಮನ್ನು ಬಿಟ್ಟುಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ. ಆದರೆ ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.
22 ಆದ್ದರಿಂದ ಯೆಹೂದ್ಯರು, “ಯೇಸು ತನ್ನನ್ನು ತಾನೇ ಕೊಂದುಕೊಳ್ಳುವನೇ? ಅದಕ್ಕಾಗಿಯೇ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳಿದನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
23 ಅದಕ್ಕೆ ಯೇಸು, “ನೀವು ಕೆಳಗಿನವರಾಗಿದ್ದೀರಿ. ನಾನಾದರೋ ಮೇಲಿನವನು. ನೀವು ಈ ಲೋಕದವರಾಗಿದ್ದೀರಿ. ಆದರೆ ನಾನು ಈ ಲೋಕದವನಲ್ಲ. 24 ನೀವು ನಿಮ್ಮ ಪಾಪಗಳಲ್ಲೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆ. ಹೌದು, ನಾನೇ ಆತನೆಂಬುದನ್ನು ನೀವು ನಂಬದಿದ್ದರೆ ನಿಮ್ಮ ಪಾಪಗಳಲ್ಲಿಯೇ ನೀವು ಸಾಯುವಿರಿ” ಎಂದು ಹೇಳಿದನು.
25 ಯೆಹೂದ್ಯರು, “ಹಾಗಾದರೆ, ನೀನು ಯಾರು?” ಎಂದು ಕೇಳಿದರು.
ಯೇಸು, “ನಾನು ಯಾರೆಂದು ನಿಮಗೆ ಮೊದಲಿಂದ ತಿಳಿಸುತ್ತಾ ಬಂದೆನೋ, ಆತನೇ ನಾನು. 26 ನಿಮ್ಮ ಬಗ್ಗೆ ಹೇಳಲು ನನ್ನಲ್ಲಿ ಅನೇಕ ಸಂಗತಿಗಳಿವೆ. ನಾನು ನಿಮಗೆ ತೀರ್ಪು ಮಾಡಬಲ್ಲೆನು. ಆದರೆ ನನ್ನನ್ನು ಕಳುಹಿಸಿದಾತನಿಂದ ನಾನು ಕೇಳಿದ ಸಂಗತಿಗಳನ್ನು ಮಾತ್ರ ಜನರಿಗೆ ಹೇಳುತ್ತೇನೆ. ಆತನು ಸತ್ಯವನ್ನೇ ತಿಳಿಸುತ್ತಾನೆ” ಎಂದು ಉತ್ತರಕೊಟ್ಟನು.
27 ಯೇಸು ಯಾರ ಬಗ್ಗೆ ಮಾತಾಡುತ್ತಿದ್ದಾನೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲಿಲ್ಲ. ಯೇಸು ಅವರಿಗೆ ತಂದೆಯ (ದೇವರ) ಬಗ್ಗೆ ಹೇಳುತ್ತಿದ್ದನು. 28 ಆದ್ದರಿಂದ ಆತನು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೇರಿಸುವಿರಿ (ಕೊಲ್ಲುವಿರಿ). ನಾನೇ ಆತನೆಂಬುದು ಆಗ ನಿಮಗೆ ತಿಳಿಯುವುದು. ನಾನು ಈ ಕಾರ್ಯಗಳನ್ನು ನನ್ನ ಸ್ವಂತ ಅಧಿಕಾರದಿಂದ ಮಾಡುತ್ತಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. ಅಲ್ಲದೆ, ತಂದೆಯು ನನಗೆ ಉಪದೇಶಿಸಿದ ಸಂಗತಿಗಳನ್ನು ಮಾತ್ರ ನಾನು ಹೇಳುತ್ತೇನೆಂಬುದೂ ನಿಮಗೆ ಅರಿವಾಗುವುದು. 29 ನನ್ನನ್ನು ಕಳುಹಿಸಿದಾತನು (ದೇವರು) ನನ್ನೊಂದಿಗೆ ಇದ್ದಾನೆ. ಆತನಿಗೆ ಮೆಚ್ಚಿಕೆಯಾದದ್ದನ್ನೇ ನಾನು ಯಾವಾಗಲೂ ಮಾಡುತ್ತೇನೆ. ಆದ್ದರಿಂದ ಆತನು ನನ್ನನ್ನು ಒಬ್ಬಂಟಿಗನಾಗಿ ಬಿಟ್ಟುಬಿಟ್ಟಿಲ್ಲ” ಎಂದು ಹೇಳಿದನು. 30 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಅನೇಕ ಜನರು ಆತನಲ್ಲಿ ನಂಬಿಕೆಯಿಟ್ಟರು.
ಪಾಪವಿಮೋಚನೆಯ ಬಗ್ಗೆ ಯೇಸುವಿನ ಉಪದೇಶ
31 ಆದ್ದರಿಂದ ಯೇಸು ತನ್ನಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ, “ನೀವು ನನ್ನ ಉಪದೇಶಕ್ಕೆ ವಿಧೇಯರಾಗಿದ್ದರೆ, ನೀವು ನಿಜವಾಗಿಯೂ ನನ್ನ ಹಿಂಬಾಲಕರಾಗಿದ್ದೀರಿ. 32 ನೀವು ಸತ್ಯವನ್ನು ತಿಳಿದುಕೊಳ್ಳುವಿರಿ. ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.
33 ಯೆಹೂದ್ಯರು, “ನಾವು ಅಬ್ರಹಾಮನ ಮಕ್ಕಳು. ನಾವೆಂದೂ ಯಾರ ಗುಲಾಮರೂ ಆಗಿರಲಿಲ್ಲ. ಹೀಗಿದ್ದರೂ, ನಮಗೆ ಬಿಡುಗಡೆ ಆಗುವುದೆಂದು ನೀನು ಹೇಳುವುದೇಕೆ?” ಎಂದು ಉತ್ತರಕೊಟ್ಟರು.
34 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪಾಪಮಾಡುವ ಪ್ರತಿಯೊಬ್ಬನೂ ಪಾಪಕ್ಕೆ ಗುಲಾಮನಾಗಿದ್ದಾನೆ. ಪಾಪವು ಅವನ ಯಜಮಾನನಾಗಿದೆ. 35 ಗುಲಾಮನು ಒಂದು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಮಗನು ಕುಟುಂಬಕ್ಕೆ ಶಾಶ್ವತವಾಗಿ ಸೇರಿದವನಾಗಿದ್ದಾನೆ. 36 ಆದ್ದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನೀವು ನಿಜವಾಗಿಯೂ ಬಿಡುಗಡೆಯಾಗಿರುವಿರಿ. 37 ನೀವು ಅಬ್ರಹಾಮನ ಮಕ್ಕಳೆಂದು ನನಗೆ ಗೊತ್ತಿದೆ. ಆದರೆ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ. ಏಕೆಂದರೆ ನನ್ನ ಉಪದೇಶವನ್ನು ಸ್ವೀಕರಿಸಿಕೊಳ್ಳಲು ನಿಮಗೆ ಇಷ್ಟವಿಲ್ಲ. 38 ನನ್ನ ತಂದೆಯು ನನಗೆ ತೋರಿಸಿರುವುದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ. ನೀವಾದರೋ ನಿಮ್ಮ ತಂದೆ ನಿಮಗೆ ಹೇಳಿದ ಸಂಗತಿಗಳನ್ನೇ ಮಾಡುತ್ತೀರಿ” ಎಂದು ಹೇಳಿದನು.
39 ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ” ಎಂದು ಹೇಳಿದರು.
ಯೇಸು, “ನೀವು ನಿಜವಾಗಿಯೂ ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದ ಕಾರ್ಯಗಳನ್ನೇ ಮಾಡುತ್ತಿದ್ದಿರಿ. 40 ನಾನು ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾಗಿದ್ದೇನೆ. ಆದರೆ ನೀವು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ಅಬ್ರಹಾಮನು ಅಂಥದ್ದೇನನ್ನೂ ಮಾಡಲಿಲ್ಲ. 41 ಆದ್ದರಿಂದ ನಿಮ್ಮ ಸ್ವಂತ ತಂದೆ ಮಾಡಿದ್ದನ್ನೇ ನೀವು ಮಾಡುತ್ತಿದ್ದೀರಿ” ಎಂದು ಹೇಳಿದನು.
ಆದರೆ ಯೆಹೂದ್ಯರು, “ನಾವು ಹಾದರಕ್ಕೆ ಹುಟ್ಟಿದವರಲ್ಲ. ದೇವರೇ ನಮ್ಮ ತಂದೆ. ನಮಗಿರುವ ತಂದೆ ಆತನೊಬ್ಬನೇ” ಎಂದು ಹೇಳಿದರು.
42 ಯೇಸು ಆ ಯೆಹೂದ್ಯರಿಗೆ, “ದೇವರು ನಿಜವಾಗಿಯೂ ನಿಮ್ಮ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ನಾನು ದೇವರಿಂದ ಬಂದು ಈಗ ಇಲ್ಲಿದ್ದೇನೆ. ನಾನು ಬಂದದ್ದು ನನ್ನ ಸ್ವಂತ ಅಧಿಕಾರದಿಂದಲ್ಲ. ದೇವರೇ ನನ್ನನ್ನು ಕಳುಹಿಸಿದನು. 43 ನಾನು ಹೇಳುವ ಈ ಸಂಗತಿಗಳನ್ನು ನೀವು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಉಪದೇಶವನ್ನು ನೀವು ಸ್ವೀಕರಿಸಿಕೊಳ್ಳಲಾರಿರಿ. 44 ಸೈತಾನನೇ ನಿಮ್ಮ ತಂದೆ. ನೀವು ಅವನಿಗೆ ಹುಟ್ಟಿದವರಾಗಿದ್ದೀರಿ. ಅವನ ದುರಿಚ್ಛೆಗಳನ್ನು ಮಾಡಬಯಸುತ್ತೀರಿ. ಅವನು ಆರಂಭದಿಂದಲೂ ಕೊಲೆಗಾರನಾಗಿದ್ದು ಸತ್ಯಕ್ಕೆ ವಿರೋಧವಾಗಿದ್ದನು. ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸ್ವಭಾವಾನುಸಾರವಾಗಿ ಸುಳ್ಳಾಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.
45 “ನಾನು ಸತ್ಯವನ್ನು ಹೇಳುತ್ತೇನೆ. ಆದರೆ ನೀವು ನನ್ನನ್ನು ನಂಬುವುದಿಲ್ಲ. 46 ನನ್ನಲ್ಲಿ ಪಾಪವನ್ನು ತೋರಿಸಿಕೊಡುವವನು ನಿಮ್ಮಲ್ಲಿ ಯಾವನಾದರೂ ಇರುವನೇ? ನಾನು ಸತ್ಯವನ್ನು ಹೇಳಿದರೂ ನೀವೇಕೆ ನಂಬುವುದಿಲ್ಲ? 47 ದೇವರಿಂದ ಹುಟ್ಟಿದವನು ದೇವರು ಹೇಳುವ ಮಾತುಗಳನ್ನು ಸ್ವೀಕರಿಸಿಕೊಳ್ಳುವನು. ಆದರೆ ನೀವು ದೇವರಿಂದ ಹುಟ್ಟಿಲ್ಲದ ಕಾರಣ ಆತನ ಮಾತುಗಳನ್ನು ಸ್ವೀಕರಿಸಿಕೊಳ್ಳುವುದಿಲ್ಲ” ಎಂದನು.
ತನ್ನ ಮತ್ತು ಅಬ್ರಹಾಮನ ಬಗ್ಗೆ ಯೇಸುವಿನ ಹೇಳಿಕೆ
48 ಯೆಹೂದ್ಯರು, “ನಾವು ನಿನ್ನನ್ನು ಸಮಾರ್ಯದವನೆಂದು ಹೇಳುತ್ತೇವೆ! ನಿನ್ನೊಳಗೆ ದೆವ್ವವು ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ” ಎಂದು ಉತ್ತರಕೊಟ್ಟರು.
49 ಯೇಸು, “ನನ್ನೊಳಗೆ ದೆವ್ವವಿಲ್ಲ. ನನ್ನ ತಂದೆಗೆ ನಾನು ಗೌರವ ಕೊಡುತ್ತೇನೆ, ಆದರೆ ನೀವು ನನಗೆ ಗೌರವ ಕೊಡುವುದಿಲ್ಲ. 50 ನನಗಾಗಿ ಗೌರವವನ್ನು ಪಡೆದುಕೊಳ್ಳಲು ನಾನು ಪ್ರಯತ್ನಿಸುತ್ತಿಲ್ಲ. ನನಗೆ ಗೌರವ ದೊರೆಯಬೇಕೆಂದು ಬಯಸುವ ಒಬ್ಬಾತನಿದ್ದಾನೆ. ಆತನೇ ನ್ಯಾಯಾಧಿಪತಿ. 51 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ವಾಕ್ಯಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ” ಎಂದು ಉತ್ತರಕೊಟ್ಟನು.
52 ಯೆಹೂದ್ಯರು ಆತನಿಗೆ, “ನಿನ್ನೊಳಗೆ ದೆವ್ವವಿದೆ ಎಂದು ಈಗ ನಮಗೆ ತಿಳಿಯಿತು! ಅಬ್ರಹಾಮನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಆದರೆ ‘ನನ್ನ ಉಪದೇಶಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ’ ಎಂದು ನೀನು ಹೇಳುತ್ತಿರುವೆ. 53 ನಮ್ಮತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೆಂದು ಭಾವಿಸಿಕೊಂಡಿರುವೆಯಾ? ಅಬ್ರಹಾಮನು ಸತ್ತುಹೋದನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಹೀಗಿರಲು, ನೀನು ನಿನ್ನನ್ನು ಯಾರೆಂದು ಭಾವಿಸಿಕೊಂಡಿರುವೆ?” ಎಂದು ಕೇಳಿದರು.
54 ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ, ಆ ಮಹಿಮೆಗೆ ಯಾವ ಬೆಲೆಯೂ ಇಲ್ಲ. ನನ್ನ ತಂದೆಯೇ ನನ್ನನ್ನು ಮಹಿಮೆಪಡಿಸುವನು. ನೀವು ಆತನನ್ನೇ ನಿಮ್ಮ ದೇವರೆಂದು ಹೇಳಿಕೊಳ್ಳುತ್ತೀರಿ. 55 ಆದರೆ ನೀವು ಆತನನ್ನು ನಿಜವಾಗಿಯೂ ತಿಳಿದಿಲ್ಲ. ನಾನು ಆತನನ್ನು ಬಲ್ಲೆನು. ನಾನು ಆತನನ್ನು ತಿಳಿದಿಲ್ಲವೆಂದು ಹೇಳಿದರೆ ನಿಮ್ಮಂತೆ ನಾನು ಸಹ ಸುಳ್ಳುಗಾರನಾಗುತ್ತೇನೆ. ನಾನು ಆತನನ್ನು ಬಲ್ಲೆನು. ನಾನು ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ. 56 ನಾನು ಬರುವ ದಿನವನ್ನು ತಾನು ನೋಡುವುದಾಗಿ ನಿಮ್ಮ ತಂದೆಯಾದ ಅಬ್ರಹಾಮನು ಬಹು ಸಂತೋಷಪಟ್ಟನು. ಅವನು ಆ ದಿನವನ್ನು ಕಂಡು ಬಹು ಸಂತೋಷಗೊಂಡನು” ಎಂದು ಉತ್ತರಕೊಟ್ಟನು.
57 ಯೆಹೂದ್ಯರು ಯೇಸುವಿಗೆ, “ಏನು? ನೀನು ಅಬ್ರಹಾಮನನ್ನು ನೋಡಿರುವಿಯೋ? ನಿನಗೆ ಐವತ್ತು ವರ್ಷವೂ ಆಗಿಲ್ಲ!” ಎಂದು ಹೇಳಿದರು.
58 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಅಬ್ರಹಾಮನು ಹುಟ್ಟುವುದಕ್ಕಿಂತ ಮೊದಲಿಂದಲೂ ನಾನು ಇದ್ದೇನೆ!” ಎಂದು ಉತ್ತರಿಸಿದನು. 59 ಇದನ್ನು ಕೇಳಿದ ಕೂಡಲೇ ಜನರು ಆತನತ್ತ ಬೀರಲು ಕಲ್ಲುಗಳನ್ನು ತೆಗೆದುಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು.
ವ್ಯಭಿಚಾರಕ್ಕೆ ದೂರವಾಗಿರು
5 ನನ್ನ ಮಗನೇ, ನನ್ನ ಜ್ಞಾನೋಪದೇಶವನ್ನು ಕೇಳು. ನನ್ನ ವಿವೇಕದ ಮಾತುಗಳಿಗೆ ಗಮನಕೊಡು. 2 ಆಗ ನೀನು ಯೋಗ್ಯವಾಗಿ ನಡೆದುಕೊಳ್ಳುವೆ; ತಿಳುವಳಿಕೆಯಿಂದ ಮಾತಾಡುವೆ. 3 ಮತ್ತೊಬ್ಬನ ಹೆಂಡತಿಯ ಮಾತುಗಳು ಜೇನಿನಂತೆ ಸಿಹಿಯಾಗಿವೆ; ಎಣ್ಣೆಗಿಂತ ನಯವಾಗಿವೆ. 4 ಆದರೆ ಕೊನೆಗೆ ಆಕೆಯು ವಿಷದಂತೆ ಕಹಿಯಾಗುವಳು; ಖಡ್ಗದಂತೆ ತೀಕ್ಷ್ಣವಾಗುವಳು. 5 ಆಕೆಯ ಹೆಜ್ಜೆಗಳು ಮರಣದ ಕಡೆಗೆ ಹೋಗುತ್ತವೆ. ಆಕೆ ನಿನ್ನನ್ನು ನೇರವಾಗಿ ಪಾತಾಳಕ್ಕೆ ನಡೆಸುತ್ತಾಳೆ! 6 ಆಕೆಯನ್ನು ಹಿಂಬಾಲಿಸಬೇಡ! ಆಕೆ ನೀತಿಮಾರ್ಗವನ್ನು ಬಿಟ್ಟುಹೋಗಿದ್ದಾಳೆ; ಅದು ಆಕೆಗೆ ಗೊತ್ತೇ ಇಲ್ಲ. ಎಚ್ಚರಿಕೆಯಿಂದಿರು! ಜೀವ ಮಾರ್ಗವನ್ನು ಹಿಂಬಾಲಿಸು!
7 ಹೀಗಿರಲು, ನನ್ನ ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಮರೆಯಬೇಡ. 8 ವ್ಯಭಿಚಾರಿಣಿಯಿಂದ ದೂರವಾಗಿರು. ಅವಳ ಮನೆಯ ಬಾಗಿಲ ಸಮೀಪಕ್ಕೂ ಹೋಗಬೇಡ. 9 ಒಂದುವೇಳೆ ನೀನು ಹೋದರೆ, ನಿನ್ನ ಮೇಲೆ ಜನರಿಗಿರುವ ಗೌರವವನ್ನು ಕಳೆದುಕೊಳ್ಳುವಿ; ಕ್ರೂರಿಗಳಿಂದ ಯೌವನದಲ್ಲಿಯೇ ಸಾವಿಗೀಡಾಗುವಿ. 10 ನಿನಗೆ ಗೊತ್ತಿಲ್ಲದವರು ನಿನ್ನ ಐಶ್ವರ್ಯವನ್ನೆಲ್ಲಾ ತೆಗೆದುಕೊಳ್ಳುವರು; ನೀನು ದುಡಿದು ಸಂಪಾದಿಸಿದ್ದನ್ನು ಬೇರೆಯವರು ಪಡೆದುಕೊಳ್ಳುವರು. 11 ಕೊನೆಯಲ್ಲಿ, ನಿನ್ನ ಆರೋಗ್ಯವೆಲ್ಲಾ ಕೆಟ್ಟುಹೋಗಿ ನಿನ್ನಲ್ಲಿರುವುದನ್ನೆಲ್ಲಾ ಕಳೆದುಕೊಂಡು ನೀನು ಗೋಳಾಡುವಿ. 12-13 ಆಗ ನೀನು, “ನಾನೇಕೆ ನನ್ನ ತಂದೆತಾಯಿಗಳ ಮಾತನ್ನು ಕೇಳಲಿಲ್ಲ? ನಾನೇಕೆ ನನ್ನ ಉಪದೇಶಕರ ಮಾತಿಗೆ ಕಿವಿಗೊಡಲಿಲ್ಲ? ನಾನು ಅವರ ಸದುಪದೇಶವನ್ನು ದ್ವೇಷಿಸಿದ್ದರಿಂದಲೂ ಅವರ ಬುದ್ಧಿಮಾತನ್ನು ತಳ್ಳಿಬಿಟ್ಟಿದ್ದರಿಂದಲೂ 14 ನಾನು ಜನರೆಲ್ಲರ ಎದುರಿನಲ್ಲಿ ನಾಚಿಕೆಗೀಡಾಗಿದ್ದೇನೆ” ಎಂದು ಹೇಳುವಿ.
15 ನಿನ್ನ ಸ್ವಂತ ಹೆಂಡತಿಗೆ ನಂಬಿಗಸ್ತನಾಗಿರು; ನಿನ್ನ ಪ್ರೀತಿಯು ಆಕೆಗೆ ಮಾತ್ರ ಸಲ್ಲಲಿ. 16 ಬೇರೆ ಸ್ತ್ರೀಯರಲ್ಲಿ ನೀನು ಮಕ್ಕಳನ್ನು ಪಡೆಯುವುದು ಒಳ್ಳೆಯದಲ್ಲ. 17 ನಿನ್ನ ಮಕ್ಕಳು ನಿನ್ನವರೇ ಆಗಿರಲಿ; ಪರರು ನಿನ್ನೊಂದಿಗೆ ಪಾಲುಗಾರರಾಗದಿರಲಿ. 18 ಆದ್ದರಿಂದ ಯೌವನಪ್ರಾಯದಲ್ಲಿ ನೀನು ಮದುವೆಮಾಡಿಕೊಂಡ ಸ್ತ್ರೀಯೊಡನೆ ಸಂತೋಷಿಸು. 19 ಆಕೆ ಸುಂದರವಾದ ಜಿಂಕೆಯಂತೆಯೂ ಅಂದವಾದ ಕಾಡುಮೇಕೆಯಂತೆಯೂ ಇದ್ದಾಳೆ. ಆಕೆಯ ಸ್ತನಗಳು ನಿನ್ನನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಿ. ಆಕೆಯ ಪ್ರೀತಿಯಲ್ಲೇ ಲೀನವಾಗಿರು. 20 ಪರಸ್ತ್ರೀಯಲ್ಲಿ ಮೋಹಗೊಂಡು ಆಕೆಯನ್ನು ಅಪ್ಪಿಕೊಳ್ಳಬೇಡ.
21 ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ; ಯೆಹೋವನು ಅವುಗಳನ್ನು ಪರೀಕ್ಷಿಸುತ್ತಾನೆ. 22 ಕೆಡುಕನ ದುಷ್ಕೃತ್ಯಗಳು ಅವನನ್ನೇ ಹಿಡಿಯುತ್ತವೆ. ಅವನ ಪಾಪಗಳು ಹಗ್ಗದಂತೆ ಅವನನ್ನೇ ಬಂಧಿಸುತ್ತವೆ. 23 ಅವನು ಬುದ್ಧಿವಾದವನ್ನು ತಿರಸ್ಕರಿಸಿದ್ದರಿಂದ ಸಾಯುವನು; ತನ್ನ ಅತಿಮೂರ್ಖತನದಿಂದ ದಾರಿತಪ್ಪುವನು.
4 ನಾನು ಮತ್ತೆ ಹೇಳುವುದೇನೆಂದರೆ: ಬಾಧ್ಯಸ್ತನು ಬಾಲಕನಾಗಿರುವಾಗ ಅವನಿಗೂ ಗುಲಾಮನಿಗೂ ಯಾವ ವ್ಯತ್ಯಾಸವೂ ಇಲ್ಲ. ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಅವನು ಗುಲಾಮನಂತಿರುವನು. 2 ಏಕೆಂದರೆ ಅವನಿನ್ನೂ ಬಾಲಕನಾಗಿರುವಾಗ ಪರಿಪಾಲಕರಿಗೆ ಮತ್ತು ನಿರ್ವಾಹಕರಿಗೆ ವಿಧೇಯನಾಗಿರಬೇಕು. ಆದರೆ ತನ್ನ ತಂದೆಯು ಗೊತ್ತುಪಡಿಸಿದ ವಯಸ್ಸನ್ನು ತಲುಪಿದಾಗ ಆ ಬಾಲಕನು ಸ್ವತಂತ್ರನಾಗುವನು. 3 ಅದೇ ರೀತಿಯಲ್ಲಿ ನಾವು ಮೊದಲು ಮಕ್ಕಳಂತಿದ್ದೆವು. ಈ ಪ್ರಪಂಚದ ಉಪಯೋಗವಿಲ್ಲದ ನಿಯಮಗಳಿಗೆ ನಾವು ಗುಲಾಮರಾಗಿದ್ದೆವು. 4 ಆದರೆ ತಕ್ಕ ಕಾಲ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿದನು. ದೇವರ ಮಗನು ಸ್ತ್ರೀಯಲ್ಲಿ ಜನಿಸಿ, ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸಿದನು. 5 ಧರ್ಮಶಾಸ್ತ್ರದ ಅಧೀನದಲ್ಲಿದ್ದ ನಮ್ಮನ್ನು ಬಿಡಿಸಿ ತನ್ನ ಮಕ್ಕಳನ್ನಾಗಿ ಮಾಡಿಕೊಳ್ಳಬೇಕೆಂಬುದೇ ದೇವರ ಉದ್ದೇಶವಾಗಿತ್ತು.
6 ನೀವು ದೇವರ ಮಕ್ಕಳು. ಆದಕಾರಣವೇ ದೇವರು ತನ್ನ ಆತ್ಮವನ್ನು ನಿಮ್ಮ ಹೃದಯಗಳಿಗೆ ಕಳುಹಿಸಿದನು. “ತಂದೆಯೇ, ಅಪ್ಪಾ ತಂದೆಯೇ” ಎಂದು ಆತ್ಮನು ಕೂಗುತ್ತಾನೆ. 7 ಆದ್ದರಿಂದ ಈಗ ನೀನು ಮೊದಲಿನಂತೆ ಗುಲಾಮನಲ್ಲ. ನೀನು ದೇವರ ಮಗನು. ನೀನು ದೇವರ ಮಗನಾಗಿರುವುದರಿಂದ ಆತನು ನಿನ್ನನ್ನು ಬಾಧ್ಯಸ್ತನನ್ನಾಗಿಯೂ ಮಾಡಿದ್ದಾನೆ.
ಗಲಾತ್ಯ ಕ್ರೈಸ್ತರ ಮೇಲೆ ಪೌಲನ ಪ್ರೀತಿ
8 ಪೂರ್ವಕಾಲದಲ್ಲಿ ನೀವು ದೇವರನ್ನು ತಿಳಿಯದೆ ಸುಳ್ಳು ದೇವರುಗಳಿಗೆ ಗುಲಾಮರಾಗಿದ್ದಿರಿ. 9 ಈಗಲಾದರೋ ಸತ್ಯದೇವರನ್ನು ತಿಳಿದಿದ್ದೀರಿ. ನಿಜವಾಗಿ ಹೇಳಬೇಕಾದರೆ, ನಿಮ್ಮನ್ನು ತಿಳಿದಿರುವಾತನು ದೇವರೇ. ಹೀಗಿರಲಾಗಿ ಮೊದಲು ನೀವು ಅನುಸರಿಸುತ್ತಿದ್ದ ಬಲಹೀನವೂ ನಿರುಪಯುಕ್ತವೂ ಆದ ನಿಯಮಗಳಿಗೆ ನೀವು ಯಾಕೆ ಹಿಂತಿರುಗಬೇಕು? ಅವುಗಳಿಗೆ ಮತ್ತೆ ಗುಲಾಮರಾಗಬೇಕೆಂದಿದ್ದೀರೋ? 10 ವಿಶೇಷವಾದ ದಿನಗಳ, ಮಾಸಗಳ, ಕಾಲಮಾನಗಳ ಮತ್ತು ವರ್ಷಗಳ ಕುರಿತು ಧರ್ಮಶಾಸ್ತ್ರವು ಹೇಳುವ ಉಪದೇಶವನ್ನು ಇನ್ನೂ ಅನುಸರಿಸುತ್ತಿದ್ದೀರಿ. 11 ನಿಮ್ಮ ವಿಷಯದಲ್ಲಿ ನನಗೆ ಭಯವಾಗಿದೆ. ನಿಮಗೋಸ್ಕರ ನಾನು ಪಟ್ಟ ಪ್ರಯಾಸವು ವ್ಯರ್ಥವಾಗುವುದೆಂಬ ಭಯ ನನಗಿದೆ.
12 ಸಹೋದರ ಸಹೋದರಿಯರೇ, ನಾನೂ ನಿಮ್ಮಂತಿದ್ದೆನು. ಆದ್ದರಿಂದ ದಯವಿಟ್ಟು ನನ್ನಂತೆ ಆಗಿರಿ. 13 ಮೊದಲು ನೀವು ನನಗೆ ಬಹು ಒಳ್ಳೆಯವರಾಗಿದ್ದಿರಿ. ನಾನು ನಿಮ್ಮ ಬಳಿಗೆ ಮೊದಲನೆ ಸಲ ಬಂದದ್ದು ನನ್ನ ಅನಾರೋಗ್ಯದ ನಿಮಿತ್ತವೆಂದು ನಿಮಗೆ ಗೊತ್ತಿದೆ. ನಾನು ನಿಮಗೆ ಸುವಾರ್ತೆಯನ್ನು ತಿಳಿಸಿದ್ದು ಆವಾಗಲೇ. 14 ನನ್ನ ಅನಾರೋಗ್ಯವು ನಿಮಗೆ ಹೊರೆಯಾಗಿತ್ತು. ಆದರೆ ನೀವು ನನ್ನ ವಿಷಯದಲ್ಲಿ ಬೇಸರಮಾಡಿಕೊಳ್ಳಲಿಲ್ಲ. ನೀವು ನನ್ನನ್ನು ಕಳುಹಿಸಿಬಿಡಲಿಲ್ಲ. ದೇವದೂತನೋ ಎಂಬಂತೆ ನೀವು ನನ್ನನ್ನು ಸ್ವಾಗತಿಸಿದಿರಿ; ಸ್ವತಃ ಯೇಸು ಕ್ರಿಸ್ತನೋ ಎಂಬಂತೆ ನನ್ನನ್ನು ಸ್ವೀಕರಿಸಿಕೊಂಡಿರಿ. 15 ಆಗ ನೀವು ಬಹು ಸಂತೋಷವುಳ್ಳವರಾಗಿದ್ದಿರಿ. ಆ ಆನಂದವು ಈಗ ಎಲ್ಲಿದೆ? ನನಗೆ ಸಹಾಯ ಮಾಡಲು ನೀವು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧರಾಗಿದ್ದಿರೆಂಬುದು ನನ್ನ ನೆನಪಿನಲ್ಲಿದೆ. ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಟ್ಟುಬಿಡುತ್ತಿದ್ದಿರಿ. 16 ನಾನು ನಿಮಗೆ ಸತ್ಯವನ್ನು ಹೇಳುವುದರಿಂದ ಈಗ ನಿಮ್ಮ ಶತ್ರುವಾಗಿದ್ದೇನೋ?
17 ನಿಮ್ಮನ್ನು ಒತ್ತಾಯಪಡಿಸುವುದಕ್ಕಾಗಿ ಆ ಜನರು ಪ್ರಯಾಸ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದಲ್ಲ. ನೀವು ನಮಗೆ ವಿರುದ್ಧವಾಗಿ ತಿರುಗಿಬೀಳಬೇಕೆಂದು ಅವರು ನಿಮ್ಮನ್ನು ಒತ್ತಾಯಪಡಿಸುತ್ತಿದ್ದಾರೆ. ನೀವು ಅವರನ್ನೇ ಹೊರತು ಬೇರೆ ಯಾರನ್ನೂ ಅನುಸರಿಸಬಾರದೆಂಬುದು ಅವರ ಅಪೇಕ್ಷೆ. ನಿಮ್ಮ ವಿಷಯದಲ್ಲಿ ಜನರು ಆಸಕ್ತಿ ತೋರಿಸುವುದೇನೋ ಒಳ್ಳೆಯದು. 18 ಆದರೆ ಅವರ ಉದ್ದೇಶವು ಒಳ್ಳೆಯದಾಗಿದ್ದಾಗ ಮಾತ್ರ ನಿಮಗೆ ಒಳ್ಳೆಯದಾಗುತ್ತದೆ. ಇದು ಸತ್ಯ. ನಾನು ನಿಮ್ಮೊಂದಿಗಿರುವಾಗಲೂ ನಿಮ್ಮಿಂದ ದೂರವಿರುವಾಗಲೂ ಇದು ಸತ್ಯ. 19 ನನ್ನ ಪ್ರಿಯ ಮಕ್ಕಳೇ, ಪ್ರಸವವೇದನೆಪಡುವ ತಾಯಿಯಂತೆ ನಾನು ನಿಮ್ಮ ವಿಷಯದಲ್ಲಿ ನೋವುಳ್ಳವನಾಗಿದ್ದೇನೆ. ನೀವು ನಿಜವಾಗಿಯೂ ಕ್ರಿಸ್ತನಂತಾಗುವ ತನಕ ನನಗೆ ಈ ನೋವಿರುತ್ತದೆ. 20 ಈಗ ನಾನು ನಿಮ್ಮೊಂದಿಗಿದ್ದಿದ್ದರೆ ಬೇರೊಂದು ರೀತಿಯಲ್ಲಿ ತಿಳಿಸಬಹುದಾಗಿತ್ತು. ನಿಮ್ಮ ವಿಷಯದಲ್ಲಿ ಈಗ ಏನು ಮಾಡಬೇಕೊ ನನಗೆ ತಿಳಿಯದು.
ಹಾಗರಳ ಮತ್ತು ಸಾರಳ ಉದಾಹರಣೆ
21 ನಿಮ್ಮಲ್ಲಿ ಕೆಲವರು ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ಅಧೀನರಾಗಿರಲು ಇಷ್ಟಪಡುತ್ತೀರಿ. ಧರ್ಮಶಾಸ್ತ್ರವು ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ? ನನಗೆ ತಿಳಿಸಿ. 22 ಪವಿತ್ರ ಗ್ರಂಥವು ಹೇಳುವುದೇನೆಂದರೆ, ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ಮಗನ ತಾಯಿಯು ದಾಸತ್ವದಲ್ಲಿದ್ದಳು, ಮತ್ತೊಬ್ಬ ಮಗನ ತಾಯಿಯು ಸ್ವತಂತ್ರಳಾಗಿದ್ದಳು. 23 ಮಾನವ ಸಹಜವಾದ ರೀತಿಯಲ್ಲಿ ಅಬ್ರಹಾಮನ ಮಗನು ಆ ದಾಸಿಯಲ್ಲಿ ಹುಟ್ಟಿದನು. ಸ್ವತಂತ್ರಳಾಗಿದ್ದ ಸ್ತ್ರೀಯಲ್ಲಿ ಹುಟ್ಟಿದ ಮಗನಾದರೋ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಫಲವಾಗಿದ್ದನು.
24 ಈ ಸಂಗತಿಗಳು ನಮಗೆ ಉಪಮಾನವಾಗಿವೆ. ದೇವರ ಮತ್ತು ಮನುಷ್ಯರ ನಡುವೆ ಆದ ಎರಡು ಒಡಂಬಡಿಕೆಗಳಿಗೆ ಈ ಇಬ್ಬರು ಸ್ತ್ರೀಯರು ಸಂಕೇತವಾಗಿದ್ದಾರೆ. ಸೀನಾಯಿ ಪರ್ವತದ ಮೇಲೆ ದೇವರು ಕೊಟ್ಟ ಧರ್ಮಶಾಸ್ತ್ರವೇ ಮೊದಲನೆ ಒಡಂಬಡಿಕೆ. ಈ ಒಡಂಬಡಿಕೆಯ ಅಧೀನದಲ್ಲಿದ್ದ ಜನರು ಗುಲಾಮರಂತಿದ್ದರು. ತಾಯಿಯಾದ ಹಾಗರಳು ಆ ಒಡಂಬಡಿಕೆಯಂತಿದ್ದಳು. 25 ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ. 26 ಆದರೆ ಪರಲೋಕದಲ್ಲಿರುವ ಜೆರುಸಲೇಮ್ ಸ್ವತಂತ್ರಳಾದ ಸ್ತ್ರೀಯಂತಿದೆ. ಇದೇ ನಮ್ಮ ತಾಯಿ. 27 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:
“ಮಕ್ಕಳನ್ನು ಹೆತ್ತಿಲ್ಲದ ಬಂಜೆಯೇ,
ಸಂತೋಷಪಡು.
ಪ್ರಸವವೇದನೆಯಿಲ್ಲದವಳೇ,
ಸ್ವರವೆತ್ತಿ ಕೂಗು.
ಗಂಡನುಳ್ಳವಳಿಗಿಂತ ಗಂಡ
ಬಿಟ್ಟವಳಿಗೆ ಮಕ್ಕಳು ಹೆಚ್ಚು.”(A)
28-29 ಅಬ್ರಹಾಮನ ಒಬ್ಬ ಮಗನು ಮಾನವ ಸಹಜವಾದ ರೀತಿಯಲ್ಲಿ ಜನಿಸಿದನು. ಅಬ್ರಹಾಮನ ಮತ್ತೊಬ್ಬ ಮಗನು ದೇವರ ವಾಗ್ದಾನದ ಫಲವಾಗಿ ದೇವರಾತ್ಮನ ಶಕ್ತಿಯಿಂದ ಜನಿಸಿದನು. ನನ್ನ ಸಹೋದರ ಸಹೋದರಿಯರೇ, ನೀವು ಸಹ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೀರಿ. ಮಾನವ ಸಹಜವಾದ ರೀತಿಯಲ್ಲಿ ಜನಿಸಿದ್ದ ಮಗನು ಮತ್ತೊಬ್ಬ ಮಗನನ್ನು ಹಿಂಸೆಪಡಿಸಿದನು. ಇದೇ ಈಗಲೂ ನಡೆಯುತ್ತಿದೆ. 30 ಆದರೆ ಪವಿತ್ರ ಗ್ರಂಥವು ಏನು ಹೇಳುತ್ತದೆ? “ದಾಸಿಯನ್ನು ಮತ್ತು ಅವಳ ಮಗನನ್ನು ಹೊರಗೆ ಹಾಕು; ಸ್ವತಂತ್ರಳಾದ ಸ್ತ್ರೀಯ ಮಗನು ತನ್ನ ತಂದೆಯು ಹೊಂದಿರುವ ಪ್ರತಿಯೊಂದನ್ನು ಪಡೆದುಕೊಳ್ಳುವನು. ಆದರೆ ದಾಸಿಗೆ ಏನೂ ದೊರೆಯುವುದಿಲ್ಲ.”(B) 31 ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನಾವು ದಾಸಿಯ ಮಕ್ಕಳಲ್ಲ. ನಾವು ಸ್ವತಂತ್ರಳಾದ ಸ್ತ್ರೀಯ ಮಕ್ಕಳಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International