Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 23

23 “ಬೇರೆಯವರ ವಿರುದ್ಧವಾಗಿ ಸುಳ್ಳು ಹೇಳಬೇಡಿರಿ. ನೀವು ನ್ಯಾಯಾಲಯದಲ್ಲಿ ದುಷ್ಟರ ಸಹಾಯಕ್ಕಾಗಿ ಸುಳ್ಳುಸಾಕ್ಷಿ ಹೇಳದಿರಿ.

“ದುಷ್ಕೃತ್ಯವನ್ನು ಮಾಡುವವರು ಬಹಳ ಮಂದಿಯೆಂದು ಅವರ ಜೊತೆಯಲ್ಲಿ ಸೇರಿಕೊಳ್ಳಬೇಡಿ. ಬಹಳ ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳದಿರಿ.

“ಇದಲ್ಲದೆ ಬಡವನೆಂದು ಕರುಣಿಸಿ ಪಕ್ಷಪಾತದ ತೀರ್ಪನ್ನು ನೀಡಬಾರದು.

“ನೀವು ಕಳೆದುಹೋದ ಎತ್ತನ್ನಾಗಲಿ ಕತ್ತೆಯನ್ನಾಗಲಿ ನೋಡಿದರೆ, ಆಗ ನೀವು ಅದನ್ನು ಅದರ ಮಾಲೀಕನಿಗೆ ಹಿಂತಿರುಗಿಸಬೇಕು. ಒಂದುವೇಳೆ ಆ ಮಾಲೀಕನು ನಿಮ್ಮ ವೈರಿಯಾಗಿದ್ದರೂ ನೀವು ಈ ಕಾರ್ಯವನ್ನು ಮಾಡಬೇಕು.

“ಬಹು ತೂಕದ ಹೊರೆಯಿಂದ ನಡೆಯಲಾಗದೆ ಬಿದ್ದಿರುವ ಕತ್ತೆಯನ್ನು ನೀವು ನೋಡಿದರೆ ಅದನ್ನು ಎಬ್ಬಿಸಲು ನೀವು ನಿಂತು ಸಹಾಯ ಮಾಡಬೇಕು. ಆ ಕತ್ತೆಯು ನಿಮ್ಮ ವೈರಿಯದಾಗಿದ್ದರೂ ನೀವು ಅದಕ್ಕೆ ಸಹಾಯ ಮಾಡಬೇಕು.

“ಬಡವರಿಗೆ ವ್ಯಾಜ್ಯದಲ್ಲಿ ನೀವು ಅನ್ಯಾಯವಾದ ತೀರ್ಪನ್ನು ಕೊಡಕೂಡದು.

“ನೀವು ಮೋಸದ ಕಾರ್ಯಕ್ಕೆ ದೂರವಿರಬೇಕು. ನಿರಪರಾಧಿಯೂ ನೀತಿವಂತನೂ ಆಗಿರುವ ವ್ಯಕ್ತಿಗೆ ಮರಣದಂಡನೆ ವಿಧಿಸಕೂಡದು. ಅಂಥ ದುಷ್ಟಕಾರ್ಯ ಮಾಡಿದವನಿಗೆ ನಾನು ದಂಡನೆಯನ್ನು ವಿಧಿಸೇ ವಿಧಿಸುವೆನು.

“ಲಂಚವನ್ನು ತೆಗೆದುಕೊಳ್ಳಕೂಡದು; ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿ ಮಾಡುತ್ತದೆ; ನಿರಪರಾಧಿಗೆ ಅನ್ಯಾಯ ಮಾಡುತ್ತದೆ.

“ನೀವು ಪರದೇಶಸ್ಥರಿಗೆ ತೊಂದರೆ ಕೊಡಬಾರದು. ನೀವು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.

ವಿಶೇಷ ವಿಶ್ರಾಂತಿ ದಿನಗಳು

10 “ಆರು ವರ್ಷ ನಿಮ್ಮ ಭೂಮಿಯಲ್ಲಿ ಬೀಜಬಿತ್ತಿ ಬೆಳೆಯನ್ನು ಬೆಳೆಯಿರಿ. 11 ಆದರೆ ಏಳನೆಯ ವರ್ಷದಲ್ಲಿ ನಿಮ್ಮ ಭೂಮಿಯನ್ನು ಬೀಳುಬಿಡಿರಿ; ಬೀಜಬಿತ್ತಬೇಡಿರಿ. ಏಳನೆಯ ವರ್ಷ ನೀವು ಏನನ್ನೂ ಬೆಳೆಸಬಾರದು. ನಿಮ್ಮ ಭೂಮಿಯಲ್ಲಿ ಏನಾದರೂ ಬೆಳೆದರೆ ಅದನ್ನು ಬಡವರು ತಿನ್ನಲಿ. ಉಳಿದದ್ದನ್ನು ಪ್ರಾಣಿಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳ ವಿಷಯದಲ್ಲಿಯೂ ಆಲಿವ್ ಮರಗಳ ತೋಪಿನ ವಿಷಯದಲ್ಲಿಯೂ ಇದೇ ನಿಯಮವನ್ನು ಪಾಲಿಸಬೇಕು.

12 “ಆರು ದಿನಗಳಲ್ಲಿ ನಿಮ್ಮ ಕೆಲಸ ಮಾಡಿರಿ. ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಿರಿ. ಏಳನೆಯ ದಿನದಲ್ಲಿ ನಿಮ್ಮ ಗುಲಾಮರೂ ಎತ್ತುಗಳೂ ಕತ್ತೆಗಳೂ ವಿದೇಶಿಯರೂ ವಿಶ್ರಮಿಸಿಕೊಳ್ಳಲಿ.

13 “ನೀವು ಈ ಆಜ್ಞೆಗಳಿಗೆಲ್ಲಾ ಜಾಗರೂಕತೆಯಿಂದ ವಿಧೇಯರಾಗಬೇಕು. ಸುಳ್ಳುದೇವರುಗಳನ್ನು ಆರಾಧಿಸಬೇಡಿರಿ. ನೀವು ಅವುಗಳ ಹೆಸರುಗಳನ್ನು ಉಚ್ಚರಿಸಲೂ ಕೂಡದು.

14 “ಪ್ರತಿವರ್ಷ ನೀವು ಮೂರುಜಾತ್ರೆಗಳನ್ನು ಮಾಡಬೇಕು. 15 ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ ಅವುಗಳಲ್ಲಿ ಒಂದಾಗಿದೆ. ನಾನು ನಿಮಗೆ ಆಜ್ಞಾಪಿಸಿದಂತೆ ಈ ಜಾತ್ರೆಯಲ್ಲಿ ಏಳು ದಿನ ಹುಳಿಯಿಲ್ಲದ ರೊಟ್ಟಿಯನ್ನು ನೀವು ತಿನ್ನಬೇಕು. ಈ ಹಬ್ಬವು ಏಳು ದಿನಗಳವರೆಗೆ ನಡೆಯುವುದು. ನೀವು ಇದನ್ನು ಅಬೀಬ್ ತಿಂಗಳಲ್ಲಿ ಮಾಡಬೇಕು. ಯಾಕೆಂದರೆ ಈ ತಿಂಗಳಲ್ಲಿಯೇ ನೀವು ಈಜಿಪ್ಟಿನಿಂದ ಹೊರಗೆ ಬಂದಿರಿ! ಈ ಹಬ್ಬದಲ್ಲಿ ಪ್ರತಿಯೊಬ್ಬನೂ ನನಗೆ ಕಾಣಿಕೆಯನ್ನು ಅರ್ಪಿಸಬೇಕು.

16 “ಇದಲ್ಲದೆ ನೀವು ಸುಗ್ಗಿಯ ಜಾತ್ರೆಯನ್ನು ಆಚರಿಸಬೇಕು. ನೀವು ಬಿತ್ತಿದ ಹೊಲಗಳಲ್ಲಿ ಬೆಳೆಗಳನ್ನು ಕೊಯ್ಯುವ ಕಾಲದಲ್ಲಿ ಈ ಜಾತ್ರೆಯು ಆರಂಭವಾಗುವುದು.

“ಇದಲ್ಲದೆ ಫಲಸಂಗ್ರಹ ಜಾತ್ರೆಯನ್ನೂ ನೀವು ಆಚರಿಸಬೇಕು. ವರ್ಷಾಂತ್ಯದಲ್ಲಿ ನೀವು ಹೊಲತೋಟಗಳ ಬೆಳೆಗಳನ್ನೆಲ್ಲಾ ಒಟ್ಟುಗೂಡಿಸುವ ಕಾಲದಲ್ಲಿ ಇದು ಆರಂಭವಾಗುವುದು.

17 “ಹೀಗೆ ಪ್ರತಿವರ್ಷ ಮೂರು ಸಲ ಗಂಡಸರೆಲ್ಲರೂ ಒಂದು ವಿಶೇಷ ಸ್ಥಳಕ್ಕೆ ದೇವರಾದ ಯೆಹೋವನ ಸನ್ನಿಧಿಗೆ ಬರಬೇಕು.

18 “ನೀವು ನನಗೆ ಯಜ್ಞವನ್ನು ಅರ್ಪಿಸುವಾಗ ಯಜ್ಞಪಶುವಿನ ರಕ್ತದೊಡನೆ ಹುಳಿಬೆರಸಿದ ಏನನ್ನೂ ಸಮರ್ಪಿಸಬಾರದು. ಅಲ್ಲದೆ ಅದರ ಮಾಂಸವನ್ನು ಒಂದೇ ದಿನದಲ್ಲಿ ತಿಂದು ಮುಗಿಸಬೇಕು; ಮರುದಿನದವರೆಗೂ ಇಟ್ಟುಕೊಳ್ಳಬಾರದು.

19 “ಸುಗ್ಗಿ ಕಾಲದಲ್ಲಿ ನಿಮ್ಮ ಬೆಳೆಯ ಫಲವನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ[a] ತರಬೇಕು.

“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.”

20 “ಇಗೋ, ನಿಮ್ಮ ಮುಂದೆ ನಾನು ಒಬ್ಬ ದೂತನನ್ನು[b] ಕಳುಹಿಸುತ್ತಿದ್ದೇನೆ. ನಾನು ನಿಮಗಾಗಿ ಸಿದ್ಧಮಾಡಿದ ಸ್ಥಳಕ್ಕೆ ಈ ದೂತನು ನಿಮ್ಮನ್ನು ಮುನ್ನಡೆಸುವನು; ದಾರಿಯುದ್ದಕ್ಕೂ ಸಂರಕ್ಷಿಸುವನು. 21 ದೂತನಿಗೆ ವಿಧೇಯರಾಗಿ ಆತನನ್ನು ಹಿಂಬಾಲಿಸಿರಿ. ಆತನಿಗೆ ವಿರೋಧವಾಗಿ ದಂಗೆಯೇಳಬೇಡಿರಿ. ನೀವು ಅವಿಧೇಯರಾದರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. ಆತನಲ್ಲಿ ನನ್ನ ಶಕ್ತಿಯು ಇರುತ್ತದೆ.[c] 22 ಆತನು ಹೇಳುವ ಪ್ರತಿಯೊಂದಕ್ಕೆ ನೀವು ವಿಧೇಯರಾಗಬೇಕು. ನನ್ನ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು. ಆಗ ನಾನು ನಿಮ್ಮ ಸಂಗಡ ಇರುವೆನು. ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿರುವೆನು; ನಿಮಗೆ ಕೇಡುಮಾಡುವವರಿಗೆಲ್ಲಾ ಕೇಡುಮಾಡುವೆನು.

23 “ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ನಡಿಸುವನು. ನಾನು ಅವರನ್ನೆಲ್ಲಾ ಸೋಲಿಸುವೆನು.

24 “ಅವರ ದೇವರುಗಳನ್ನು ಪೂಜಿಸಬೇಡಿರಿ. ಆ ದೇವರುಗಳಿಗೆ ನಮಸ್ಕರಿಸಬೇಡಿರಿ. ಅವರ ಆಚರಣೆಗಳನ್ನು ಅನುಸರಿಸಬೇಡಿರಿ. ನೀವು ಅವರ ವಿಗ್ರಹಗಳನ್ನು ನಾಶಮಾಡಬೇಕು. ಅವರ ಸ್ಮಾರಕ ಸ್ತಂಭಗಳನ್ನು ಕೆಡವಿಹಾಕಬೇಕು. 25 ನೀವು ನಿಮ್ಮ ದೇವರಾದ ಯೆಹೋವನನ್ನೇ ಆರಾಧಿಸಬೇಕು. ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವನು. ನಾನು ನಿಮ್ಮೊಳಗಿಂದ ಎಲ್ಲಾ ವ್ಯಾಧಿಯನ್ನು ತೆಗೆದುಬಿಡುವೆನು. 26 ನಿಮ್ಮ ಸ್ತ್ರೀಯರು ಮಕ್ಕಳನ್ನು ಪಡೆಯಲು ಶಕ್ತರಾಗುವರು. ನಿಮ್ಮ ಮಕ್ಕಳು ಹುಟ್ಟುವಾಗಲೇ ಸಾಯುವುದಿಲ್ಲ; ನಿಮಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವೆನು.

27 “ನೀವು ನಿಮ್ಮ ವೈರಿಗಳ ವಿರುದ್ಧ ಯುದ್ಧ ಮಾಡುವಾಗ, ನಿಮ್ಮ ವೈರಿಗಳನ್ನೆಲ್ಲಾ ಸೋಲಿಸುವಂತೆ ನಾನು ನಿಮಗೆ ನನ್ನ ಮಹಾಶಕ್ತಿಯಿಂದ ಸಹಾಯ ಮಾಡುವೆನು. ನಿಮ್ಮ ವೈರಿಗಳು ಯುದ್ಧದಲ್ಲಿ ಭಯದಿಂದಲೂ ಗಲಿಬಿಲಿಯಿಂದಲೂ ಓಡಿಹೋಗುವರು. 28 ನಾನು ನಿಮ್ಮ ಮುಂದೆ ಹೆದ್ದುಂಬಿಯನ್ನು[d] ಕಳುಹಿಸುವೆನು. ನಿಮ್ಮ ವೈರಿಗಳಾದ ಹಿವ್ವಿಯರನ್ನು ಕಾನಾನ್ಯರನ್ನು ಮತ್ತು ಹಿತ್ತಿಯರನ್ನು ಅದು ಬಲವಂತದಿಂದ ಅಟ್ಟಿಬಿಡುವುದು. 29 ಆದರೆ ನಾನು ಒಂದೇ ವರ್ಷದಲ್ಲಿ ಅವರೆಲ್ಲರನ್ನೂ ಅಲ್ಲಿಂದ ಹೊರಡಿಸುವುದಿಲ್ಲ. ಯಾಕೆಂದರೆ ದೇಶದಲ್ಲಿ ಜನರು ಕಡಿಮೆಯಾಗುವುದರಿಂದ ಕ್ರೂರ ಪ್ರಾಣಿಗಳೆಲ್ಲಾ ಹೆಚ್ಚಾಗಿ ನಿಮಗೆ ಬಹಳ ತೊಂದರೆಯಾಗಬಹುದು. 30 ಆದ್ದರಿಂದ ನೀವು ಅಭಿವೃದ್ಧಿಯಾಗಿ ದೇಶದಲ್ಲೆಲ್ಲಾ ತುಂಬಿಕೊಳ್ಳುವತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರದೂಡುವೆನು.

31 “ಕೆಂಪುಸಮುದ್ರದಿಂದ ಯೂಫ್ರೇಟೀಸ್ ನದಿಯವರೆಗೆ ಇರುವ ಪ್ರದೇಶವನ್ನೆಲ್ಲಾ ಕೊಡುವೆನು. ಪಶ್ಚಿಮ ಗಡಿಯು ಫಿಲಿಷ್ಟಿಯ ಸಮುದ್ರವಾಗಿರುವುದು (ಮೆಡಿಟರೇನಿಯನ್ ಸಮುದ್ರ) ಮತ್ತು ಪೂರ್ವ ಗಡಿಯು ಅರೇಬಿಯಾ ಮರುಭೂಮಿಯಾಗಿರುವುದು. ನೀವು ಅಲ್ಲಿ ವಾಸಿಸುವ ಜನರನ್ನು ಸೋಲಿಸುವಂತೆ ನಾನು ಮಾಡುವೆನು; ಅವರೆಲ್ಲರನ್ನು ನೀವು ಬಲವಂತವಾಗಿ ಹೊರಗಟ್ಟುವಿರಿ.

32 “ನೀವು ಆ ಜನರೊಡನೆಯಾಗಲಿ ಅವರ ದೇವರುಗಳೊಡನೆಯಾಗಲಿ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು. 33 ನಿಮ್ಮ ದೇಶದಲ್ಲಿ ವಾಸಿಸಲು ಅವರನ್ನು ಬಿಡಬೇಡಿರಿ. ಇಲ್ಲವಾದರೆ ಅವರು ನಿಮ್ಮಲ್ಲಿ ದ್ರೋಹ ಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವರುಗಳನ್ನು ಪೂಜಿಸಿದರೆ ಆ ಪೂಜೆಯೂ ನಿಮಗೆ ಉರುಲಾಗುವುದು.”

ಯೋಹಾನ 2

ಕಾನಾ ಊರಿನಲ್ಲಿ ಮದುವೆ

ಮಾರನೆಯ ದಿನ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಇತ್ತು. ಯೇಸುವಿನ ತಾಯಿಯೂ ಬಂದಿದ್ದಳು. ಯೇಸು ಮತ್ತು ಆತನ ಶಿಷ್ಯರನ್ನು ಸಹ ಮದುವೆಗೆ ಆಹ್ವಾನಿಸಲಾಗಿತ್ತು. ಮದುವೆಯಲ್ಲಿ ಸಾಕಷ್ಟು ದ್ರಾಕ್ಷಾರಸವಿರಲಿಲ್ಲ. ಇದ್ದ ದ್ರಾಕ್ಷಾರಸವೆಲ್ಲಾ ಮುಗಿದುಹೋದಾಗ ಯೇಸುವಿನ ತಾಯಿಯು ಆತನಿಗೆ, “ಅವರಲ್ಲಿ ದ್ರಾಕ್ಷಾರಸವೇ ಇಲ್ಲ” ಎಂದು ತಿಳಿಸಿದಳು.

ಯೇಸು, “ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯ ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು.

ಯೇಸುವಿನ ತಾಯಿ ಸೇವಕರಿಗೆ, “ಯೇಸು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದು ಹೇಳಿದಳು.

ಕಲ್ಲಿನಿಂದ ಮಾಡಿದ ಆರು ದೊಡ್ಡ ಬಾನೆಗಳು ಅಲ್ಲಿದ್ದವು. ಯೆಹೂದ್ಯರು ಶುದ್ಧಾಚಾರಗಳಿಗಾಗಿ ಈ ಕಲ್ಲಿನ ಬಾನೆಗಳನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಬಾನೆಯೂ ಸುಮಾರು ನೂರು ಲೀಟರ್‌ಗಳಷ್ಟು ನೀರು ಹಿಡಿಯುತ್ತಿತ್ತು.

ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರನ್ನು ತುಂಬಿರಿ” ಎಂದು ಹೇಳಿದನು. ಅಂತೆಯೇ ಸೇವಕರು ಆ ಬಾನೆಗಳ ಕಂಠದವರೆಗೂ ನೀರನ್ನು ತುಂಬಿದರು.

ಬಳಿಕ ಯೇಸು ಸೇವಕರಿಗೆ, “ಈಗ ಸ್ವಲ್ಪ ನೀರನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದನು.

ಅಂತೆಯೇ ಅವರು ಅದನ್ನು ತೆಗೆದುಕೊಂಡು ಹೋದರು. ಮದುವೆಯ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿ ನೋಡಿದನು. ದ್ರಾಕ್ಷಾರಸವು ಎಲ್ಲಿಂದ ಬಂತೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೆ ಅದು ಆ ಸೇವಕರಿಗೆ ತಿಳಿದಿತ್ತು. ಮದುವೆಯ ಮೇಲ್ವಿಚಾರಕನು ಮದುಮಗನನ್ನು ಕರೆದು, 10 “ಜನರು ಉತ್ತಮವಾದ ದ್ರಾಕ್ಷಾರಸವನ್ನು ಯಾವಾಗಲೂ ಮೊದಲು ಹಂಚುತ್ತಾರೆ. ಅತಿಥಿಗಳು ಕುಡಿದು ಮತ್ತರಾದ ಮೇಲೆ ಅವರಿಗೆ ಕಡಿಮೆ ದರ್ಜೆಯ ದ್ರಾಕ್ಷಾರಸವನ್ನು ಕೊಡುತ್ತಾರೆ. ಆದರೆ ನೀನು ಉತ್ತಮವಾದ ದ್ರಾಕ್ಷಾರಸವನ್ನು ಈವರೆಗೂ ಇಟ್ಟಿರುವೆ!” ಎಂದು ಹೇಳಿದನು.

11 ಯೇಸು ಮಾಡಿದ ಮೊದಲನೆಯ ಅದ್ಭುತಕಾರ್ಯವಿದು. ಯೇಸು ಇದನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹತ್ವವನ್ನು ತೋರಿದನು. ಆತನ ಶಿಷ್ಯರೂ ಆತನಲ್ಲಿ ನಂಬಿಕೆ ಇಟ್ಟರು.

12 ಬಳಿಕ ಯೇಸು ಕಪೆರ್ನೌಮ್ ಎಂಬ ಊರಿಗೆ ಹೋದನು. ಯೇಸುವಿನ ತಾಯಿ ಮತ್ತು ಸಹೋದರರು ಹಾಗೂ ಆತನ ಶಿಷ್ಯರು ಆತನೊಡನೆ ಹೋದರು. ಅವರೆಲ್ಲರೂ ಕಪೆರ್ನೌಮ್‌ನಲ್ಲಿ ಕೆಲವು ದಿನ ತಂಗಿದ್ದರು.

ದೇವಾಲಯದಲ್ಲಿ ಯೇಸು

(ಮತ್ತಾಯ 21:12-13; ಮಾರ್ಕ 11:15-17; ಲೂಕ 19:45-46)

13 ಆಗ ಯೆಹೂದ್ಯರ ಪಸ್ಕಹಬ್ಬ ಬಹು ಸಮೀಪವಾಗಿತ್ತು. ಆದ್ದರಿಂದ ಯೇಸು ಜೆರುಸಲೇಮಿಗೆ ಹೋದನು. 14 ದೇವಾಲಯದಲ್ಲಿ ಜನರು ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವುದನ್ನು ಯೇಸು ಕಂಡನು. ಇತರ ಕೆಲವು ಜನರು ಮೇಜುಗಳ ಸಮೀಪದಲ್ಲಿ ಕುಳಿತುಕೊಂಡು ಹಣ ವಿನಿಮಯ ಮಾಡುತ್ತಿದ್ದರು ಮತ್ತು ವ್ಯಾಪಾರ ಮಾಡುತ್ತಿದ್ದರು. 15 ಯೇಸು ಹಗ್ಗದ ಕೆಲವು ತುಂಡುಗಳನ್ನು ತೆಗೆದುಕೊಂಡು ಅವುಗಳಿಂದ ಒಂದು ಚಾವಟಿ ಮಾಡಿ ಆ ಜನರನ್ನು ಮತ್ತು ದನಕುರಿಗಳನ್ನು ಬಲವಂತವಾಗಿ ದೇವಾಲಯದಿಂದ ಹೊರಗಟ್ಟಿದನು. ಯೇಸು ಮೇಜುಗಳನ್ನು ಕೆಡವಿ, ಹಣ ವಿನಿಮಯ ಮಾಡುತ್ತಿದ್ದ ಜನರ ಹಣವನ್ನು ಚೆಲ್ಲಿದನು. 16 ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವುಗಳನ್ನು ಹೊರಗೆ ತೆಗೆದುಕೊಂಡು ಹೋಗಿರಿ! ನನ್ನ ತಂದೆಯ ಮನೆಯನ್ನು ವ್ಯಾಪಾರ ಸ್ಥಳವನ್ನಾಗಿ ಮಾಡಬೇಡಿ!” ಎಂದು ಹೇಳಿದನು.

17 “ನಿನ್ನ ಆಲಯದ ಮೇಲಿನ ಅಭಿಮಾನವು ನನ್ನೊಳಗೆ ಬೆಂಕಿಯಂತೆ ಸುಡುತ್ತದೆ”(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯವನ್ನು ಯೇಸುವಿನ ಶಿಷ್ಯರು ಆಗ ಜ್ಞಾಪಿಸಿಕೊಂಡರು.

18 ಯೆಹೂದ್ಯರು ಯೇಸುವಿಗೆ, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತುಪಡಿಸಲು ಯಾವ ಸೂಚಕಕಾರ್ಯವನ್ನು ಮಾಡುವೆ?” ಎಂದು ಕೇಳಿದರು.

19 ಯೇಸು, “ಈ ದೇವಾಲಯವನ್ನು ಕೆಡವಿರಿ, ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟುತ್ತೇನೆ” ಎಂದು ಉತ್ತರಕೊಟ್ಟನು.

20 ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ಜನರು ನಲವತ್ತಾರು ವರ್ಷಗಳ ಕಾಲ ದುಡಿದಿದ್ದಾರೆ! ನೀನು ಮೂರೇ ದಿನಗಳಲ್ಲಿ ಇದನ್ನು ಕಟ್ಟಬಲ್ಲೆಯಾ?” ಎಂದು ಕೇಳಿದರು.

21 (ಆದರೆ ಯೇಸು ತನ್ನ ದೇಹವೇ ದೇವಾಲಯವೆಂಬ ಅರ್ಥದಲ್ಲಿ ಹೇಳಿದ್ದನು. 22 ಯೇಸು ಸತ್ತವರೊಳಗಿಂದ ಎದ್ದುಬಂದಾಗ ಆತನ ಶಿಷ್ಯರು ಆತನ ಈ ಮಾತನ್ನು ಜ್ಞಾಪಿಸಿಕೊಂಡರು. ಅವರು ಪವಿತ್ರ ಗ್ರಂಥವನ್ನು ಮತ್ತು ಆತನು ಹೇಳಿದ ಮಾತುಗಳನ್ನು ನಂಬಿದರು.)

23 ಯೇಸು ಪಸ್ಕಹಬ್ಬಕ್ಕಾಗಿ ಜೆರುಸಲೇಮಿನಲ್ಲಿದ್ದನು. ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿದಾಗ ಅನೇಕ ಜನರು ಆತನನ್ನು ನಂಬಿದರು. 24 ಆದರೆ ಯೇಸು ಅವರಲ್ಲಿ ಭರವಸೆ ಇಡಲಿಲ್ಲ. ಏಕೆಂದರೆ ಆತನು ಅವರನ್ನು ಚೆನ್ನಾಗಿ ಬಲ್ಲವನಾಗಿದ್ದನು. 25 ಜನರ ಬಗ್ಗೆ ಆತನಿಗೆ ಯಾರೂ ತಿಳಿಸುವ ಅಗತ್ಯವಿರಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಏನಿದೆ ಎಂಬುದು ಯೇಸುವಿಗೆ ಗೊತ್ತಿತ್ತು.

ಯೋಬನು 41

41 “ಯೋಬನೇ, ನೀನು ಲಿವ್ಯಾತಾನನನ್ನು[a] ಗಾಳದಿಂದ ಹಿಡಿಯಬಲ್ಲೆಯಾ?
    ನೀನು ಅದರ ನಾಲಿಗೆಯನ್ನು ಅದುಮಿ ಹಗ್ಗದಿಂದ ಕಟ್ಟಬಲ್ಲೆಯಾ?
ಅದರ ಮೂಗಿನ ಮೂಲಕ ಹಗ್ಗವನ್ನಾಗಲಿ
    ದವಡೆಗಳ ಮೂಲಕ ಕೊಂಡಿಯನ್ನಾಗಲಿ ಹಾಕಬಲ್ಲೆಯಾ?
ತನ್ನನ್ನು ಸ್ವತಂತ್ರವಾಗಿ ಬಿಟ್ಟುಕೊಡಬೇಕೆಂದು ಅದು ನಿನ್ನನ್ನು ಬೇಡಿಕೊಳ್ಳುವುದೇ?
    ಅದು ನಯವಾದ ಪದಗಳಿಂದ ನಿನ್ನೊಂದಿಗೆ ಮಾತಾಡುತ್ತದೆಯೋ?
ಅದು ನಿನ್ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದೇ?
    ಸದಾಕಾಲ ನಿನ್ನ ಸೇವೆಮಾಡುವುದಾಗಿ ವಾಗ್ದಾನ ಮಾಡುವುದೇ?
ನೀನು ಪಕ್ಷಿಯೊಂದಿಗೆ ಆಟವಾಡುವಂತೆ ಅದರ ಜೊತೆಯಲ್ಲಿ ಆಟವಾಡುವಿಯಾ?
    ನಿನ್ನ ದಾಸಿಯರು ಅದರೊಂದಿಗೆ ಆಟವಾಡಲೆಂದು ಹಗ್ಗದಿಂದ ಅದನ್ನು ಕಟ್ಟಿಹಾಕುವಿಯಾ?
ಯೋಬನೇ, ಬೆಸ್ತರು ಅದನ್ನು ನಿನ್ನಿಂದ ಕೊಂಡುಕೊಳ್ಳಲು ಪ್ರಯತ್ನಿಸುವರೇ?
    ಅವರು ಅದನ್ನು ವರ್ತಕರಿಗೆ ಮಾರುವುದಕ್ಕಾಗಿ ತುಂಡುತುಂಡಾಗಿ ಕತ್ತರಿಸುವರೇ?
ನೀನು ಭರ್ಜಿಗಳನ್ನು ಎಸೆದು ಅದರ ಚರ್ಮಕ್ಕೂ ತಲೆಗೂ ನಾಟಿಸಬಲ್ಲೆಯಾ?

“ಯೋಬನೇ, ನೀನು ಅದರ ಮೇಲೆ ನಿನ್ನ ಕೈಯಿಟ್ಟು ನೋಡು.
    ಆ ಪ್ರಯಾಸದ ಹೋರಾಟವನ್ನು ನೆನಸಿಕೊಂಡರೆ ಅದನ್ನು ನೀನು ಮುಟ್ಟುವುದೇ ಇಲ್ಲ.
ನೀನು ಅದನ್ನು ಸೋಲಿಸಬಹುದೆಂದು ಯೋಚಿಸಿಕೊಂಡಿದ್ದರೆ,
    ಇನ್ನಾದರೂ ಅದನ್ನು ಮರೆತುಬಿಡು!
    ಅದನ್ನು ನೋಡಿದರೇ ನಿನಗೆ ಭಯವಾಗುತ್ತದೆ!
10 ಅದನ್ನು ಕೋಪಗೊಳಿಸುವಷ್ಟು ಧೈರ್ಯ ಯಾರಿಗೂ ಇಲ್ಲ.

“ಹೀಗಿರುವಲ್ಲಿ ನನಗೆ ವಿರುದ್ಧವಾಗಿ ನಿಂತುಕೊಳ್ಳುವಷ್ಟು ಶಕ್ತಿ ಯಾರಿಗಿದೆ?
11 ನಾನು ಯಾರಿಗೂ ಯಾವ ಸಾಲವನ್ನೂ ತೀರಿಸಬೇಕಿಲ್ಲ.
    ಆಕಾಶಮಂಡಲದ ಕೆಳಗಿರುವ ಸಮಸ್ತವೂ ನನ್ನದೇ.

12 “ಯೋಬನೇ, ಲಿವ್ಯಾತಾನನ ಅಂಗಗಳನ್ನೂ ಶಕ್ತಿಯನ್ನೂ
    ಸೊಗಸಾದ ಆಕಾರವನ್ನೂ ನಿನಗೆ ವರ್ಣಿಸುವೆನು.
13 ಯಾವನೂ ಅದರ ಚರ್ಮವನ್ನು ಸುಲಿಯಲಾರನು.
    ಯಾವನೂ ಅದರ ದವಡೆಗಳಿಗೆ ಚುಚ್ಚಲಾರನು.
14 ಬಲವಂತದಿಂದ ಅದರ ದವಡೆಗಳನ್ನು ತೆರೆಸಲು ಯಾರಿಗೂ ಸಾಧ್ಯವಿಲ್ಲ.
    ಅದರ ದವಡೆಹಲ್ಲುಗಳು ಜನರನ್ನು ಭಯಗೊಳಿಸುತ್ತವೆ.
15 ಅದರ ಹಿಂಬದಿಯಲ್ಲಿ ಗುರಾಣಿಗಳ ಸಾಲುಗಳು
    ಒಂದಕ್ಕೊಂದು ಬಿಗಿಯಲ್ಪಟ್ಟು ಮುದ್ರಿತವಾಗಿವೆ.
16 ಗಾಳಿಯೂ ಹಾದುಹೋಗದಂತೆ
    ಆ ಗುರಾಣಿಗಳು ಜೋಡಿಸಲ್ಪಟ್ಟಿವೆ.
17 ಗುರಾಣಿಗಳು ಒಂದಕ್ಕೊಂದು ಅಂಟಿಕೊಂಡು
    ಬಿಡಿಸಲು ಅಸಾಧ್ಯವಾಗಿದೆ.
18 ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ.
    ಅದರ ಕಣ್ಣುಗಳು ಮುಂಜಾನೆಯ ಬೆಳಕಿನಂತಿವೆ.
19 ಅದರ ಬಾಯೊಳಗಿಂದ ಉರಿಯುವ ಕೊಳ್ಳಿಗಳು ಹೊರಬರುತ್ತವೆ.
    ಬೆಂಕಿಯ ಜ್ವಾಲೆಗಳು ಹಾರುತ್ತವೆ.
20 ಕಾಯ್ದಮಡಕೆಯ ಕೆಳಗೆ ಉರಿಯುತ್ತಿರುವ ಆಪು ಹುಲ್ಲಿನಿಂದ ಬರುವ ಹೊಗೆಯಂತೆ
    ಅದರ ಮೂಗಿನಿಂದ ಹೊಗೆಯು ಹಾಯುವುದು.
21 ಅದರ ಉಸಿರು ಇದ್ದಲನ್ನು ಹೊತ್ತಿಸುವುದು;
    ಜ್ವಾಲೆಗಳು ಅದರ ಬಾಯೊಳಗಿಂದ ಹಾರುವವು.
22 ಅದರ ಕುತ್ತಿಗೆ ಬಹು ಶಕ್ತಿಯುತವಾಗಿದೆ;
    ಜನರು ಭಯಗೊಂಡು ಅದರ ಬಳಿಯಿಂದ ಓಡಿಹೋಗುವರು.
23 ಅದರ ಚರ್ಮದಲ್ಲಿ ಯಾವ ಬಲಹೀನತೆಯೂ ಇಲ್ಲ.
    ಅದು ಕಬ್ಬಿಣದಂತೆ ಗಟ್ಟಿಯಾಗಿದೆ.
24 ಅದರ ಹೃದಯ ಬಂಡೆಯಂತಿದೆ, ಅದಕ್ಕೆ ಭಯವೇ ಇಲ್ಲ.
    ಬೀಸುವ ಕೆಳಗಲ್ಲಿನಂತೆ ಅದು ಗಟ್ಟಿಯಾಗಿದೆ.
25 ಅದು ಎದ್ದಾಗ ಬಲಿಷ್ಠರು ಭಯಪಡುವರು.
    ಅದು ತನ್ನ ಬಾಲವನ್ನು ತೂಗಿದರೆ ಅವರು ಓಡಿಹೋಗುವರು.
26 ಅದಕ್ಕೆ ಬಡಿಯುವ ಖಡ್ಗ, ಭರ್ಜಿ ಈಟಿಗಳು ಹಿಂದಕ್ಕೆ ಪುಟಹಾರುತ್ತವೆ.
    ಯಾವ ಆಯುಧಗಳೂ ಅದನ್ನು ನೋಯಿಸಲಾರವು!
27 ಅದು ಕಬ್ಬಿಣವನ್ನು ಒಣಹುಲ್ಲಿನಂತೆಯೂ
    ತಾಮ್ರವನ್ನು ಲೊಡ್ಡುಮರದಂತೆಯೂ ಮುರಿದುಹಾಕುವುದು.
28 ಬಾಣಗಳೂ ಅದನ್ನು ಓಡಿಸಲಾರವು,
    ಕವಣಿಕಲ್ಲುಗಳೂ ಅದಕ್ಕೆ ಒಣಹುಲ್ಲಿನಂತಿವೆ.
29 ಅದು ತನಗೆ ಬಡಿದ ಮರದ ದೊಣ್ಣೆಯನ್ನು ಹುಲ್ಲುಕಡ್ಡಿಯೆಂದು ಭಾವಿಸಿಕೊಳ್ಳುವುದು.
    ಮನುಷ್ಯರು ಬಿರುಸಾಗಿ ಎಸೆಯುವ ಭರ್ಜಿಗಳನ್ನು ಕಂಡು ನಗುತ್ತದೆ.
30 ಅದರ ಕೆಳಭಾಗವು ಮಡಕೆಯ ಹರಿತವಾದ ಚೂರುಗಳಂತಿವೆ.
    ಅದು ನಡೆಯುವಾಗ ಒಕ್ಕಣೆಯ ಸುತ್ತಿಗೆಯಂತೆ ಮಣ್ಣಿನಲ್ಲಿ ಕುಳಿಗಳನ್ನು ಮಾಡುತ್ತದೆ.
31 ಮಡಕೆಯಲ್ಲಿ ಕುದಿಯುತ್ತಿರುವ ನೀರಿನಂತೆಯೂ
    ಮಡಕೆಯಲ್ಲಿ ಕುದಿಯುತ್ತಿರುವ ಎಣ್ಣೆಯಂತೆಯೂ ಅದು ನೀರನ್ನು ಕುದಿಸುವುದು.
32 ಅದು ಈಜುವಾಗ ಅದರ ಹಿಂದೆ ಒಂದು ದಾರಿಯೇ ನಿರ್ಮಿತವಾಗುವುದು.
    ಅದು ನೀರನ್ನು ಕಲಕಿ ತನ್ನ ಹಿಂದೆ ಬಿಳಿ ನೊರೆಯನ್ನು ಉಂಟುಮಾಡುವುದು.
33 ಭೂಮಿಯ ಮೇಲಿರುವ ಯಾವ ಪ್ರಾಣಿಯೂ ಅದರಂತಿಲ್ಲ.
    ಈ ಪ್ರಾಣಿಯೊಂದೇ ಯಾವುದಕ್ಕೂ ಭಯಪಡದು.
34 ಅತ್ಯಂತ ಗರ್ವಿಷ್ಠ ಪ್ರಾಣಿಗಳನ್ನೂ ಅದು ಕಡೆಗಣಿಸುವುದು.
    ಅದು ಕ್ರೂರಪ್ರಾಣಿಗಳಿಗೆಲ್ಲಾ ರಾಜನಾಗಿದೆ.”

2 ಕೊರಿಂಥದವರಿಗೆ 11

ಪೌಲನು ಮತ್ತು ಸುಳ್ಳು ಅಪೊಸ್ತಲರು

11 ನಾನು ಸ್ವಲ್ಪ ಬುದ್ಧಿಹೀನನಾಗಿರುವಾಗಲೂ ನೀವು ನನ್ನ ವಿಷಯದಲ್ಲಿ ತಾಳ್ಮೆಯಿಂದಿರಬೇಕೆಂದು ಅಪೇಕ್ಷಿಸುತ್ತೇನೆ. ಆದರೆ ನೀವು ಈಗಾಗಲೇ ನನ್ನ ವಿಷಯದಲ್ಲಿ ತಾಳ್ಮೆಯಿಂದಿದ್ದೀರಿ. ನಿಮ್ಮ ವಿಷಯದಲ್ಲಿ ನಾನು ಚಿಂತಿಸುತ್ತೇನೆ. ಈ ಚಿಂತೆಯು ದೇವರಿಂದ ಬಂದದ್ದು. ನಿಮ್ಮನ್ನು ಕ್ರಿಸ್ತನಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಕ್ರಿಸ್ತನೊಬ್ಬನೇ ನಿಮ್ಮ ಪತಿಯಾಗಿರಬೇಕು. ನಾನು ನಿಮ್ಮನ್ನು ಕ್ರಿಸ್ತನಿಗೆ ಆತನ ಶುದ್ಧ ವಧುವನ್ನಾಗಿ ಕೊಡಲು ಅಪೇಕ್ಷಿಸುತ್ತೇನೆ. ಹವ್ವಳು ಸರ್ಪದ ಕುಯುಕ್ತಿಯಿಂದ ಮೋಸಗೊಂಡಂತೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿ ಇರಬೇಕಾದ ಯಥಾರ್ಥತೆಯನ್ನೂ ಪರಿಶುದ್ಧತೆಯನ್ನೂ ಬಿಟ್ಟು ಕೆಟ್ಟುಹೋದೀತೆಂಬ ಭಯ ನನಗಿದೆ. ಯೇಸುವಿನ ಬಗ್ಗೆ ನಾವು ಬೋಧಿಸಿದ ಸಂಗತಿಗಳಿಗೆ ಭಿನ್ನವಾದಂಥ ಸಂಗತಿಗಳನ್ನು ಬೋಧಿಸುವ ಬೋಧಕರು ನಿಮ್ಮ ಬಳಿಗೆ ಬಂದು ಬೋಧಿಸಿದರೂ ನೀವು ತಾಳ್ಮೆಯಿಂದಿರುತ್ತೀರಿ. ನೀವು ನಮ್ಮಿಂದ ಸ್ವೀಕರಿಸಿಕೊಂಡ ಪವಿತ್ರಾತ್ಮನಿಗೂ ಸುವಾರ್ತೆಗೂ ಭಿನ್ನವಾದ ಆತ್ಮವನ್ನೂ ಸುವಾರ್ತೆಯನ್ನೂ ಸ್ವೀಕರಿಸಿಕೊಳ್ಳಲು ಬಹು ಇಷ್ಟವುಳ್ಳವರಾಗಿದ್ದೀರಿ. ಆದ್ದರಿಂದ ನೀವು ನಮ್ಮ ವಿಷಯದಲ್ಲಿ ತಾಳ್ಮೆಯಿಂದಿರಬೇಕು.

ಆ “ಮಹಾ ಅಪೊಸ್ತಲರು” ನನಗಿಂತ ಮಿಗಿಲಾದವರೆಂದು ನಾನು ಭಾವಿಸುವುದಿಲ್ಲ. ನಾನು ತರಬೇತಿ ಹೊಂದಿದ ಭಾಷಣಗಾರನಲ್ಲ ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದೆ. ಇದನ್ನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಸ್ಪಷ್ಟವಾಗಿ ತೋರಿಸಿದೆವು.

ನಾನು ನಿಮಗೆ ದೇವರ ಸುವಾರ್ತೆಯನ್ನು ಉಚಿತವಾಗಿ ಬೋಧಿಸಿದೆನು. ನಿಮ್ಮನ್ನು ಪ್ರಮುಖರನ್ನಾಗಿ ಮಾಡಲು ನನ್ನನ್ನು ತಗ್ಗಿಸಿಕೊಂಡೆನು. ಅದು ತಪ್ಪೆಂದು ಭಾವಿಸುತ್ತೀರೋ? ನಾನು ಇತರ ಸಭೆಗಳಿಂದ ನಿಮ್ಮ ಮಧ್ಯದಲ್ಲಿ ಸೇವೆ ಮಾಡುವುದಕ್ಕಾಗಿ ಹಣವನ್ನು ತೆಗೆದುಕೊಂಡೆನು. ನಾನು ನಿಮ್ಮಲ್ಲಿದ್ದಾಗ ನನ್ನ ಯಾವ ಕೊರತೆಯಲ್ಲಿಯೂ ನಿಮಗೆ ತೊಂದರೆ ಕೊಡಲಿಲ್ಲ. ಮಕೆದೋನಿಯದಿಂದ ಬಂದಿದ್ದ ಸಹೋದರರು ನನಗೆ ಬೇಕಾಗಿದ್ದದ್ದನ್ನೆಲ್ಲ ಕೊಟ್ಟರು. ನಾನು ನಿಮಗೆ ಯಾವ ರೀತಿಯಲ್ಲಿಯೂ ಭಾರವಾಗದಂತೆ ನೋಡಿಕೊಂಡೆನು. ಇನ್ನು ಮುಂದೆಯೂ ನಾನು ನಿಮಗೆ ಭಾರವಾಗಿರುವುದಿಲ್ಲ. 10 ಈ ವಿಷಯದಲ್ಲಿ ನಾನು ಹೆಮ್ಮೆಪಡುವುದನ್ನು ಅಖಾಯದಲ್ಲಿರುವ ಯಾರೂ ನಿಲ್ಲಿಸಲಾರರು. ಕ್ರಿಸ್ತನ ಸತ್ಯವು ನನ್ನೊಳಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ. 11 ನಾನು ನಿಮಗೆ ಭಾರವಾಗದಿರುವುದು ನಿಮ್ಮ ಮೇಲೆ ನನಗೆ ಪ್ರೀತಿಯಿಲ್ಲದಿರುವ ಕಾರಣದಿಂದಲೋ? ಇಲ್ಲ! ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತಿದೆ.

12 ಈಗ ನಾನು ಮಾಡುತ್ತಿರುವುದನ್ನು ಮುಂದುವರೆಸುತ್ತೇನೆ. ಆ ಜನರಿಗೆ ಹೊಗಳಿಕೊಳ್ಳಲು ಯಾವ ಕಾರಣವೂ ಸಿಕ್ಕಬಾರದೆಂದು ಇದನ್ನು ಮುಂದುವರಿಸುತ್ತೇನೆ. ಅವರು ತಮ್ಮ ಕೆಲಸದ ಬಗ್ಗೆ ಜಂಬಪಡುತ್ತಾರೆ. ತಾವು ಮಾಡುವ ಆ ಕೆಲಸವು ನಮ್ಮ ಕೆಲಸದಂತೆಯೇ ಇದೆಯೆಂದು ಹೇಳಿಕೊಳ್ಳಲು ಬಯಸುತ್ತಾರೆ. 13 ಅವರು ನಿಜ ಅಪೊಸ್ತಲರಲ್ಲ. ಅವರು ಮೋಸಗಾರರಾದ ಕೆಲಸಗಾರರು. ತಾವು ಕ್ರಿಸ್ತನ ಅಪೊಸ್ತಲರಲ್ಲದಿದ್ದರೂ ಜನರು ತಮ್ಮನ್ನು ಕ್ರಿಸ್ತನ ಅಪೊಸ್ತಲರೆಂದು ತಿಳಿದುಕೊಳ್ಳುವಂತೆ ನಟಿಸುತ್ತಾರೆ. 14 ಇದು ನಮಗೆ ಆಶ್ಚರ್ಯವಾದದ್ದೇನೂ ಅಲ್ಲ. ಏಕೆಂದರೆ ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ. 15 ಹೀಗಿರಲು ಸೈತಾನನ ಸೇವಕರು ತಾವು ಸರಿಯಾದ ಕೆಲಸವನ್ನು ಮಾಡುತ್ತಿರುವವರಂತೆ ನಟಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಅವರು ಮಾಡುತ್ತಿರುವ ಕೆಲಸಗಳ ಪ್ರತಿಫಲವಾಗಿ ಅವರಿಗೆ ಕೊನೆಯಲ್ಲಿ ದಂಡನೆಯಾಗುವುದು.

ಪೌಲನು ತನಗಾದ ಹಿಂಸೆಯ ಬಗ್ಗೆ ತಿಳಿಸುವನು

16 ನಾನು ನಿಮಗೆ ಮತ್ತೆ ಹೇಳುವುದೇನೆಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸಕೂಡದು. ಬುದ್ಧಿಹೀನನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬದ್ಧಿಹೀನನನ್ನು ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿರಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು. 17 ನನಗೆ ನನ್ನ ವಿಷಯದಲ್ಲಿ ಭರವಸೆ ಇರುವುದರಿಂದ ನಾನು ಹೊಗಳಿಕೊಳ್ಳುತ್ತೇನೆ. ಆದರೆ ಪ್ರಭು ಮಾತಾಡುವಂತೆ ನಾನು ಮಾತಾಡುತ್ತಿಲ್ಲ. ನಾನು ಬುದ್ಧಿಹೀನನೆಂದು ಹೊಗಳಿಕೊಳ್ಳುತ್ತಿದ್ದೇನೆ. 18 ಅನೇಕ ಜನರು ತಮ್ಮ ಪ್ರಾಪಂಚಿಕ ಜೀವನದ ಬಗ್ಗೆ ಹೊಗಳಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾನು ಸಹ ಹೊಗಳಿಕೊಳ್ಳುತ್ತೇನೆ. 19 ನೀವು ಬುದ್ಧಿವಂತರಾಗಿರುವುದರಿಂದ ಬುದ್ಧಿಹೀನರ ವಿಷಯದಲ್ಲಿ ಸಂತೋಷದಿಂದ ತಾಳ್ಮೆಯಿಂದಿರುತ್ತೀರಿ. 20 ಏಕೆಂದರೆ ನಿಮ್ಮಿಂದ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುವವನ ಮತ್ತು ನಿಮ್ಮನ್ನು ಉಪಯೋಗಿಸಿಕೊಳ್ಳುವವನ ವಿಷಯದಲ್ಲಿಯೂ ಸಹ ತಾಳ್ಮೆಯಿಂದಿರುತ್ತೀರಿ. ನಿಮ್ಮನ್ನು ಮೋಸಗೊಳಿಸುವವರ, ತಮ್ಮನ್ನು ನಿಮಗಿಂಥ ಉತ್ತಮರೆಂದು ಭಾವಿಸಿಕೊಂಡಿರುವವರ ಮತ್ತು ನಿಮ್ಮ ಮುಖದ ಮೇಲೆ ಹೊಡೆಯುವವರ ವಿಷಯದಲ್ಲಿಯೂ ನೀವು ತಾಳ್ಮೆಯಿಂದಿರುತ್ತೀರಿ. 21 ಇದನ್ನು ಹೇಳುವುದಕ್ಕೇ ನಾಚಿಕೆಯಾಗುತ್ತದೆ. ಆದರೆ, ನಿಮ್ಮೊಂದಿಗೆ ಆ ರೀತಿ ನಡೆದುಕೊಳ್ಳುವಷ್ಟು “ಬಲ” ನಮಗಿರಲಿಲ್ಲ!

ಆದರೆ ಹೊಗಳಿಕೊಳ್ಳಲು ಯಾರಿಗಾದರೂ ಸಾಕಷ್ಟು ಧೈರ್ಯವಿದ್ದರೆ ನಾನು ಸಹ ಧೈರ್ಯದಿಂದ ಹೊಗಳಿಕೊಳ್ಳುತ್ತೇನೆ. (ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ.) 22 ಆ ಜನರು ಇಬ್ರಿಯರೇ? ನಾನು ಸಹ ಇಬ್ರಿಯನು. ಅವರು ಇಸ್ರೇಲರೇ? ನಾನು ಸಹ ಇಸ್ರೇಲನು. ಅವರು ಅಬ್ರಹಾಮನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಬ್ರಹಾಮನ ಕುಟುಂಬಕ್ಕೆ ಸೇರಿದವನು. 23 ಅವರು ಕ್ರಿಸ್ತನ ಸೇವೆಮಾಡುತ್ತಿದ್ದಾರೋ? ನಾನು ಸಹ ಅವರಿಗಿಂತಲೂ ಹೆಚ್ಚಾಗಿ ಸೇವೆಮಾಡುತ್ತಿದ್ದೇನೆ. (ನಾನು ಹುಚ್ಚನಂತೆ ಹೀಗೆ ಮಾತಾಡುತ್ತಿದ್ದೇನೆ.) ನಾನು ಅವರಿಗಿಂತಲೂ ಹೆಚ್ಚು ಕಷ್ಟಪಟ್ಟು ದುಡಿದಿದ್ದೇನೆ; ಹೆಚ್ಚು ಸಲ ಸೆರೆಮನೆಯಲ್ಲಿದ್ದೆನು. ಹೆಚ್ಚು ಏಟುಗಳನ್ನು ತಿಂದಿದ್ದೇನೆ, ನಾನು ಅನೇಕ ಸಲ ಮರಣದ ಸಮೀಪದಲ್ಲಿದ್ದೆನು.

24 ಚಾವಟಿಯಿಂದ ಮೂವತ್ತೊಂಭತ್ತು ಏಟುಗಳನ್ನು ಹೊಡೆಯಿಸಿಕೊಳ್ಳುವ ಶಿಕ್ಷೆಯನ್ನು ಯೆಹೂದಿಯರು ನನಗೆ ಐದು ಸಲ ವಿಧಿಸಿದರು. 25 ಮೂರು ಸಲ ಕಬ್ಬಿಣದ ಸರಳುಗಳಿಂದ ಏಟನ್ನು ತಿಂದಿದ್ದೇನೆ. ಒಂದು ಸಲ ಕಲ್ಲೆಸೆದು ನನ್ನನ್ನು ಅರೆಜೀವ ಮಾಡಿದರು. ಮೂರು ಸಲ ನಾನಿದ್ದ ಹಡಗುಗಳು ಒಡೆದುಹೋದವು. ಒಮ್ಮೆ, ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿರಬೇಕಾಯಿತು. 26 ಅನೇಕ ಪ್ರಯಾಣಗಳನ್ನು ಮಾಡಿದೆನು. ನದಿಗಳಿಂದಲೂ ಕಳ್ಳರಿಂದಲೂ ನನ್ನ ಸ್ವಂತ ಜನರಾದ ಯೆಹೂದ್ಯರಿಂದಲೂ ಮತ್ತು ಯೆಹೂದ್ಯರಲ್ಲದವರಿಂದಲೂ ಅಪಾಯಕ್ಕೀಡಾಗಿದ್ದೆನು. ಪಟ್ಟಣಗಳಲ್ಲಿಯೂ ಜನರು ವಾಸವಾಗಿಲ್ಲದ ಸ್ಥಳಗಳಲ್ಲಿಯೂ ಸಮುದ್ರಗಳಲ್ಲಿಯೂ ಸುಳ್ಳುಸಹೋದರರ ಮಧ್ಯದಲ್ಲಿಯೂ ಅಪಾಯಕ್ಕೀಡಾಗಿದ್ದೆನು.

27 ಕಷ್ಟಕರವಾದ ಮತ್ತು ಅಪಾಯಕರವಾದ ಕೆಲಸಗಳನ್ನು ಮಾಡಿದ್ದೇನೆ. ಕೆಲವು ಸಲ ನಿದ್ರಿಸಲೂ ಇಲ್ಲ. ಹಸಿವೆ ಬಾಯಾರಿಕೆಗಳಿಂದ ಕಷ್ಟಪಟ್ಟಿದ್ದೇನೆ. ಅನೇಕಸಲ ನನಗೆ ಊಟ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರೂ ಬಟ್ಟೆಯಿರಲಿಲ್ಲ. 28 ಹೀಗೆ ನಾನು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಎಲ್ಲಾ ಸಭೆಗಳ ಮೇಲೆ ನನಗಿರುವ ಚಿಂತೆಯೂ ಇವುಗಳಲ್ಲಿ ಒಂದು. ನಾನು ಪ್ರತಿನಿತ್ಯ ಅವುಗಳ ಬಗ್ಗೆ ಚಿಂತಿಸುತ್ತೇನೆ. 29 ಯಾವನಾದರೂ ಬಲಹೀನನಾಗಿರುವಾಗ ನಾನೂ ಬಲಹೀನನಾಗಿರುತ್ತೇನೆ. ಯಾವನಾದರೂ ಪಾಪದಲ್ಲಿ ನಡೆಸಲ್ಪಟ್ಟರೆ ನನ್ನೊಳಗೆ ಕೋಪಗೊಳ್ಳುತ್ತೇನೆ.

30 ಹೊಗಳಿಕೊಳ್ಳಬೇಕಾದರೆ, ನನ್ನನ್ನು ಬಲಹೀನನೆಂದು ತೋರಿಸುವ ಸಂಗತಿಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ. 31 ನಾನು ಸುಳ್ಳು ಹೇಳುತ್ತಿಲ್ಲವೆಂದು ದೇವರಿಗೆ ಗೊತ್ತಿದೆ. ಆತನು ಪ್ರಭು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿದ್ದಾನೆ. ಆತನಿಗೆ ಸದಾಕಾಲ ಸ್ತೋತ್ರ ಸಲ್ಲಿಸಬೇಕು. 32 ನಾನು ದಮಸ್ಕದಲ್ಲಿದ್ದಾಗ ರಾಜನಾದ ಅರೇತನ ಅಧೀನದಲ್ಲಿದ್ದ ರಾಜ್ಯಪಾಲನು ನನ್ನನ್ನು ಬಂಧಿಸಬೇಕೆಂದಿದ್ದನು. ಅವನು ಪಟ್ಟಣದ ಸುತ್ತಲೂ ಕಾವಲುಗಾರರನ್ನು ನಿಲ್ಲಿಸಿದನು. 33 ಆದರೆ ನನ್ನ ಕೆಲವು ಸ್ನೇಹಿತರು ನನ್ನನ್ನು ಬುಟ್ಟಿಯೊಳಗೆ ಕುಳ್ಳಿರಿಸಿ, ಗೋಡೆಯ ಕಿಟಕಿಯೊಳಗಿಂದ ಕೆಳಗಿಳಿಸಿದರು. ಹೀಗೆ ನಾನು ರಾಜ್ಯಪಾಲನಿಂದ ತಪ್ಪಿಸಿಕೊಂಡೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International