Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 22

22 “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದು ಅದನ್ನು ಕೊಯಿದರೆ ಅಥವಾ ಮಾರಿದರೆ, ಅವನು ತಾನು ಕದ್ದ ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನೂ ಅಥವಾ ತಾನು ಕದ್ದ ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನೂ ಕೊಡಬೇಕು. 2-4 ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ, ಅವನು ಗುಲಾಮನಾಗುವನು. ಆದರೆ ಆ ಕಳ್ಳನು ಪಶುವನ್ನು ಇನ್ನೂ ಇಟ್ಟುಕೊಂಡಿರುವುದು ನಿಮಗೆ ಗೊತ್ತಾದರೆ, ಅವನು ಕದ್ದ ಪಶುವಿಗೆ ಪ್ರತಿಯಾಗಿ ಎರಡು ಪಶುಗಳನ್ನು ಮಾಲೀಕನಿಗೆ ಕೊಡಿಸಬೇಕು. ಕದ್ದದ್ದು ಎತ್ತಾಗಿರಬಹುದು, ಕತ್ತೆಯಾಗಿರಬಹುದು ಅಥವಾ ಕುರಿಯಾಗಿರಬಹುದು.

“ಕಳ್ಳನು ರಾತ್ರಿಯಲ್ಲಿ ಮನೆಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವಾಗ ಕೊಲ್ಲಲ್ಪಟ್ಟರೆ, ಅವನನ್ನು ಕೊಂದದ್ದಕ್ಕೆ ಯಾರೂ ತಪ್ಪಿತಸ್ಧರಾಗುವುದಿಲ್ಲ. ಆದರೆ ಇದು ಹಗಲಿನಲ್ಲಿ ನಡೆದರೆ ಕೊಂದವನು ಕೊಲೆಗಾರನಾಗುವನು.

“ಒಬ್ಬನು ತನ್ನ ಹೊಲದಲ್ಲಾಗಲಿ ದ್ರಾಕ್ಷಿತೋಟದಲ್ಲಾಗಲಿ ತನ್ನ ಪಶುವಿಗೆ ಮೇಯಲು ಬಿಡಬಹುದು. ಆದರೆ ಅದು ಅವನ ನೆರೆಯವನ ಹೊಲವನ್ನಾಗಲಿ, ದ್ರಾಕ್ಷಿತೋಟವನ್ನಾಗಲಿ ಹಾಳು ಮಾಡಿದರೆ, ಅವನು ತನ್ನ ನೆರೆಯವನಿಗೆ ಉಂಟಾದ ನಷ್ಟಕ್ಕೆ ಪ್ರತಿಯಾಗಿ ತನ್ನ ಉತ್ತಮ ಬೆಳೆಗಳನ್ನು ಕೊಡಬೇಕು.

“ಒಬ್ಬನು ತನ್ನ ಹೊಲದಲ್ಲಿರುವ ಮುಳ್ಳಿನ ಪೊದೆಗಳನ್ನು ಸುಟ್ಟುಹಾಕಲು ಬೆಂಕಿಯನ್ನು ಹೊತ್ತಿಸಬಹುದು. ಆದರೆ ಬೆಂಕಿಯು ಹೆಚ್ಚಾಗಿ ಅವನ ನೆರೆಯವನ ಬೆಳೆಯನ್ನಾಗಲಿ ಬೆಳೆಯುತ್ತಿರುವ ಧಾನ್ಯಗಳನ್ನಾಗಲಿ ಸುಟ್ಟುಹಾಕಿದರೆ ಬೆಂಕಿಯನ್ನು ಹೊತ್ತಿಸಿದವನು ತಾನು ಸುಟ್ಟುಹಾಕಿದ ವಸ್ತುಗಳಿಗೆ ಪ್ರತಿಯಾಗಿ ಈಡುಕೊಡಬೇಕು.

“ಒಬ್ಬನು ತನ್ನ ನೆರೆಯವನ ಮನೆಯಲ್ಲಿ ಸ್ವಲ್ಪ ಹಣವನ್ನಾಗಲಿ ವಸ್ತುಗಳನ್ನಾಗಲಿ ಇಟ್ಟಿದ್ದು, ಆ ಹಣವಾಗಲಿ ವಸ್ತುಗಳಾಗಲಿ ಕಳುವಾದರೆ ಕಳ್ಳನನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಬೇಕು. ನೀವು ಕಳ್ಳನನ್ನು ಕಂಡುಹಿಡಿದರೆ, ಆಗ ಅವನು ತಾನು ಕದ್ದವಸ್ತುಗಳ ಬೆಲೆಯ ಎರಡರಷ್ಟನ್ನು ಕೊಡಬೇಕು. ಆದರೆ ನೀವು ಕಳ್ಳನನ್ನು ಕಂಡುಹಿಡಿಯಲಾಗದಿದ್ದರೆ, ಆ ಮನೆಯ ಮಾಲೀಕನು ತಪ್ಪಿತಸ್ಧನಾಗಿದ್ದಾನೋ ಇಲ್ಲವೋ ಎಂದು ದೇವರು[a] ನಿರ್ಣಯಿಸುವನು. ಮನೆಯ ಮಾಲೀಕನು ದೇವರ ಸನ್ನಿಧಿಗೆ ಹೋಗಬೇಕು. ಅವನು ಕದ್ದಿದ್ದಾನೋ ಇಲ್ಲವೋ ಎಂದು ದೇವರು ತೀರ್ಮಾನಿಸುವನು.

“ಕಳೆದುಹೋದ ಎತ್ತು, ಕತ್ತೆ, ಕುರಿ, ಬಟ್ಟೆಬರೆ, ಅಥವಾ ವಸ್ತುವಿನ ವಿಷಯದಲ್ಲಿ ಒಬ್ಬನು, ‘ಇದು ನನ್ನದು’ ಎಂದು ಹೇಳಿದರೆ ಮತ್ತು ಇನ್ನೊಬ್ಬನು, ‘ಇಲ್ಲ, ಇದು ನನ್ನದು’ ಎಂದು ಹೇಳಿದರೆ, ಇವರಿಬ್ಬರೂ ದೇವರ ಸನ್ನಿಧಿಗೆ ಹೋಗಬೇಕು. ತಪ್ಪಿತಸ್ಥನಾರೆಂದು ದೇವರು ತೀರ್ಮಾನಿಸುವನು. ತಪ್ಪಿತಸ್ಥನು ಇನ್ನೊಬ್ಬನಿಗೆ ಕಳೆದುಹೋದ ವಸ್ತುವಿನ ಬೆಲೆಯ ಎರಡರಷ್ಟನ್ನು ಕೊಡಬೇಕು.

10 “ಸ್ವಲ್ಪಕಾಲದವರೆಗೆ ತನ್ನ ಪಶುವನ್ನು ಪೋಷಿಸಬೇಕೆಂದು ತನ್ನ ನೆರೆಯವನನ್ನು ಕೇಳಿಕೊಳ್ಳಬಹುದು. ಈ ಪಶುವು ಕತ್ತೆಯಾಗಿರಬಹುದು, ಎತ್ತಾಗಿರಬಹುದು, ಕುರಿಯಾಗಿರಬಹುದು ಅಥವಾ ಯಾವುದೇ ಪಶುವಾಗಿರಬಹುದು. ಆದರೆ ಅದು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅಥವಾ ಕಳುವಾದರೆ, 11 ಆ ನೆರೆಯವನು ಆ ಪಶುವನ್ನು ಕದ್ದಿಲ್ಲದ್ದಿದ್ದರೆ ತಾನು ಕದ್ದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಬೇಕು. ಪಶುವಿನ ಮಾಲೀಕನು ಈ ಪ್ರಮಾಣವನ್ನು ಸ್ವೀಕರಿಸಬೇಕು. ನೆರೆಯವನು ಮಾಲೀಕನಿಗೆ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ. 12 ಆದರೆ ಪಶುವು ಕದಿಯಲ್ಪಟ್ಟಿದ್ದರೆ, ಅವನು ಅದಕ್ಕಾಗಿ ಈಡು ಕೊಡಬೇಕು. 13 ಕ್ರೂರಪ್ರಾಣಿಗಳು ಆ ಪಶುವನ್ನು ಕೊಂದುಹಾಕಿದ್ದರೆ, ನೆರೆಯವನು ಸತ್ತ ಪಶುವನ್ನು ಸಾಕ್ಷಿಯಾಗಿ ತರಬೇಕು. ನೆರೆಯವನು ಮಾಲೀಕನಿಗೆ ಸತ್ತ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ.

14 “ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಸ್ವಲ್ಪಕಾಲಕ್ಕೆ ಸಾಲವಾಗಿ ತೆಗೆದುಕೊಂಡಿರುವಾಗ ಅದರ ಮಾಲೀಕನು ಅದರ ಸಮೀಪದಲ್ಲಿ ಇಲ್ಲದಿರುವ ಸಮಯದಲ್ಲಿ ಆ ಪಶುವಿಗೆ ಗಾಯವಾದರೆ ಅಥವಾ ಅದು ಸತ್ತುಹೋದರೆ, ಸಾಲ ತೆಗೆದುಕೊಂಡವನು ಆ ಪಶುವಿಗೆ ಈಡುಕೊಡಬೇಕು. 15 ಆದರೆ ಅದರ ಮಾಲೀಕನು ಪಶುವಿನೊಂದಿಗೆ ಅಲ್ಲಿದ್ದರೆ ಆಗ ನೆರೆಯವನು ಈಡುಕೊಡಬೇಕಾಗಿಲ್ಲ. ನೆರೆಯವನು ಪಶುವನ್ನು ಬಾಡಿಗೆಗೆ ತೆಗೆದುಕೊಂಡಿರುವಾಗ ಆ ಪಶು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅವನು ಈಡುಕೊಡಬೇಕಾಗಿಲ್ಲ. ಆ ಪಶುವನ್ನು ಉಪಯೋಗಿಸಲು ಅವನು ಕೊಟ್ಟ ಬಾಡಿಗೆಯೇ ಸಾಕು.

16 “ಒಬ್ಬನು ಕನ್ನಿಕೆಯನ್ನು ಮರುಳುಗೊಳಿಸಿ ಕೂಡಿದರೆ, ಅವನು ಅವಳನ್ನು ಮದುವೆಯಾಗಬೇಕು. ಅವನು ಆಕೆಯ ತಂದೆಗೆ ತಕ್ಕ ತೆರವನ್ನು ಕೊಡಬೇಕು. 17 ತಂದೆಯು ತನ್ನ ಮಗಳನ್ನು ಅವನಿಗೆ ಕೊಡಲು ನಿರಾಕರಿಸಿದರೂ ಅವನು ತೆರವನ್ನು ಕೊಡಬೇಕು. ಅವನು ಅವಳಿಗೋಸ್ಕರ ಪೂರ್ಣ ತೆರವನ್ನು ಕೊಡಬೇಕು.

18 “ಮಾಟಗಾರ್ತಿಯನ್ನು ನೀವು ಜೀವಸಹಿತ ಉಳಿಸಬಾರದು.

19 “ಪಶುಸಂಗ ಮಾಡಿದವನಿಗೆ ಮರಣದಂಡನೆಯಾಗಬೇಕು.

20 “ಸುಳ್ಳುದೇವರಿಗೆ ಯಜ್ಞವನ್ನರ್ಪಿಸುವವನನ್ನು ನಾಶ ಮಾಡಬೇಕು.[b] ನೀವು ದೇವರಾದ ಯೆಹೋವನೊಬ್ಬನಿಗೇ ಯಜ್ಞವನ್ನರ್ಪಿಸಬೇಕು.

21 “ನೀವು ಮೊದಲು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದದ್ದನ್ನು ಜ್ಞಾಪಕಮಾಡಿಕೊಳ್ಳಿ. ಆದ್ದರಿಂದ ನೀವು ಮೋಸಮಾಡಬಾರದು; ನಿಮ್ಮ ದೇಶದಲ್ಲಿರುವ ಯಾವ ಪರದೇಶಸ್ಥನಿಗೂ ಕೇಡು ಮಾಡಬಾರದು.

22 “ನೀವೆಂದಿಗೂ ವಿಧವೆಯರಿಗೆ ಅಥವಾ ಅನಾಥ ಮಕ್ಕಳಿಗೆ ಕೇಡುಮಾಡಬಾರದು. 23 ನೀವು ಆ ವಿಧವೆಯರಿಗೆ ಅಥವಾ ಅನಾಥರಿಗೆ ಕೇಡುಮಾಡಿದರೆ, ನಾನು ಅವರ ಗೋಳಾಟವನ್ನು ಕೇಳಿ, 24 ನಿಮ್ಮ ಮೇಲೆ ಕೋಪಗೊಳ್ಳುವೆನು; ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ಆಗ ನಿಮ್ಮ ಹೆಂಡತಿಯರು ವಿಧವೆಯರಾಗುವರು; ನಿಮ್ಮ ಮಕ್ಕಳು ಅನಾಥರಾಗುವರು.

25 “ನನ್ನ ಜನರಲ್ಲಿ ಬಡವನಾಗಿರುವವನಿಗೆ ನೀವು ಹಣವನ್ನು ಸಾಲಕೊಟ್ಟರೆ, ನೀವು ಆ ಹಣಕ್ಕೆ ಬಡ್ಡಿ ಕೇಳಬಾರದು. ಬೇಗನೆ ಮರುಪಾವತಿ ಮಾಡುವಂತೆ ಅವನನ್ನು ಬಲವಂತಪಡಿಸಬಾರದು. 26 ಯಾವನಾದರೂ ನೀವು ಕೊಟ್ಟ ಸಾಲಕ್ಕೆ ತನ್ನ ಅಂಗಿಯನ್ನು ಒತ್ತೆಯಾಗಿಟ್ಟರೆ, ಸೂರ್ಯನು ಮುಳುಗುವ ಮೊದಲೇ ನೀವು ಆ ಅಂಗಿಯನ್ನು ಅವನಿಗೆ ಹಿಂತಿರುಗಿಸಬೇಕು. 27 ಯಾಕೆಂದರೆ ಅವನಿಗೆ ಬೇರೆ ಯಾವ ಹೊದಿಕೆಯೂ ಇಲ್ಲ; ಅದನ್ನೇ ಅವನು ಧರಿಸಿಕೊಳ್ಳಬೇಕು. ಅವನು ಮಲಗಿಕೊಳ್ಳುವಾಗ ಚಳಿಯಿಂದ ನನಗೆ ಮೊರೆಯಿಟ್ಟರೆ, ನಾನು ಅವನ ಮೊರೆಯನ್ನು ಕೇಳಿ ಅವನಿಗೆ ದಯೆತೋರುವೆನು.

28 “ನೀವು ದೇವರನ್ನಾಗಲಿ ಅಥವಾ ನಿಮ್ಮ ನಾಯಕರುಗಳನ್ನಾಗಲಿ ಶಪಿಸಬಾರದು.

29 “ಸುಗ್ಗಿಕಾಲದಲ್ಲಿ ನೀವು ಪ್ರಥಮಫಲವಾದ ಧಾನ್ಯವನ್ನು ಮತ್ತು ನಿಮ್ಮ ಪ್ರಥಮಫಲವಾದ ದ್ರಾಕ್ಷಾರಸವನ್ನು ನನಗೆ ಕೊಡಬೇಕು. ನೀವು ಅದನ್ನು ನಿಮಗಾಗಿಯೇ ಇಟ್ಟುಕೊಳ್ಳಬಾರದು.

“ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಪ್ರತಿಷ್ಠಿಸಬೇಕು. 30 ಮಾತ್ರವಲ್ಲದೆ, ನಿಮ್ಮ ಕುರಿದನಗಳಲ್ಲಿ ಚೊಚ್ಚಲಾದವುಗಳನ್ನು ನನಗೆ ಅರ್ಪಿಸಬೇಕು. ಚೊಚ್ಚಲಾದವುಗಳು ತನ್ನ ತಾಯಿಯೊಂದಿಗೆ ಏಳು ದಿನಗಳಿರಲಿ. ಬಳಿಕ, ಎಂಟನೆಯ ದಿನದಲ್ಲಿ ನೀವು ಅದನ್ನು ನನಗೆ ಅರ್ಪಿಸಬೇಕು.

31 “ನೀವು ನನ್ನ ವಿಶೇಷ ಜನರಾಗಿದ್ದೀರಿ. ಆದ್ದರಿಂದ ಕ್ರೂರಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಮಾಂಸವನ್ನು ನೀವು ತಿನ್ನಬಾರದು. ಅದನ್ನು ನಾಯಿಗಳು ತಿನ್ನಲಿ.

ಯೋಹಾನ 1

ಜಗತ್ತಿಗೆ ಕ್ರಿಸ್ತನ ಆಗಮನ

ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ[a] ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು. ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು. ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ. ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.

ಯೋಹಾನ[b] ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು. ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.

10 ವಾಕ್ಯ ಎಂಬಾತನು ಆಗಲೇ ಈ ಲೋಕದಲ್ಲಿದ್ದನು. ಈ ಲೋಕವು ವಾಕ್ಯ ಎಂಬಾತನ ಮೂಲಕ ನಿರ್ಮಾಣಗೊಂಡಿತು. ಆದರೆ ಈ ಲೋಕದವರು ಆತನನ್ನು ತಿಳಿದಿರಲಿಲ್ಲ. 11 ಆತನು ತನ್ನ ಸ್ವಾಸ್ತ್ಯಕ್ಕೆ ಬಂದನು. ಆದರೆ ಆತನ ಸ್ವಂತ ಜನರು ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. 12 ಯಾರ್ಯಾರು ಆತನನ್ನು ಸ್ವೀಕರಿಸಿಕೊಂಡರೋ ಅಂದರೆ ಆತನಲ್ಲಿ ನಂಬಿಕೆ ಇಟ್ಟರೋ ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. 13 ಇವರು ರಕ್ತದಿಂದಾಗಲಿ ಕಾಮದಿಂದಾಗಲಿ ಪುರುಷನ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ. ಇವರು ದೇವರಿಂದಲೇ ಹುಟ್ಟಿದವರು.

14 ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. 15 ಯೋಹಾನನು ಆತನ ಬಗ್ಗೆ ಜನರಿಗೆ ತಿಳಿಸುತ್ತಾ, “‘ನನ್ನ ನಂತರ ಬರುವ ಒಬ್ಬನು ನನಗಿಂತಲೂ ಶ್ರೇಷ್ಠನಾಗಿದ್ದಾನೆ. ಆತನು ನನಗಿಂತ ಮೊದಲೇ ಜೀವಿಸುತ್ತಿದ್ದನು’ ಎಂದು ನಾನು ಹೇಳಿದಾಗ ಈತನ ಬಗ್ಗೆಯೇ ಮಾತಾಡುತ್ತಿದ್ದೆನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

16 ವಾಕ್ಯ ಎಂಬಾತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆತನಿಂದಲೇ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17 ಧರ್ಮಶಾಸ್ತ್ರವು ಮೋಶೆಯ ಮೂಲಕ ಕೊಡಲ್ಪಟ್ಟಿತು. ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮೂಲಕ ಬಂದವು. 18 ದೇವರನ್ನು ಯಾರೂ ಎಂದೂ ಕಂಡಿಲ್ಲ. ಆದರೆ ಒಬ್ಬನೇ ಮಗನು (ಯೇಸು) ದೇವರಾಗಿದ್ದಾನೆ ಮತ್ತು ಆತನು ತಂದೆಯ (ದೇವರ) ಎದೆಯಲ್ಲಿದ್ದಾನೆ. ಆತನೇ ತಂದೆಯನ್ನು ತಿಳಿಯಪಡಿಸಿದ್ದಾನೆ.

ಯೇಸುವಿನ ಕುರಿತು ಯೋಹಾನನ ಸಂದೇಶ

(ಮತ್ತಾಯ 3:1-12; ಮಾರ್ಕ 1:2-8; ಲೂಕ 3:15-17)

19 “ನೀನು ಯಾರು?” ಎಂದು ಯೋಹಾನನನ್ನು ಕೇಳುವುದಕ್ಕಾಗಿ ಜೆರುಸಲೇಮಿನ ಯೆಹೂದ್ಯರು ಯೋಹಾನನ ಬಳಿಗೆ ಕೆಲವು ಯಾಜಕರನ್ನು ಮತ್ತು ಲೇವಿಯರನ್ನು ಕಳುಹಿಸಿದರು. 20 ಯೋಹಾನನು ಮರೆಮಾಚದೆ, “ನಾನು ಕ್ರಿಸ್ತನಲ್ಲ” ಎಂದು ಹೇಳಿದನು.

21 ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?”[c] ಎಂದು ಕೇಳಿದರು.

ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು.

ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು.

ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.

22 ಆಗ ಯೆಹೂದ್ಯರು, “ನಮಗೆ ಹೇಳು. ನಮ್ಮನ್ನು ಕಳುಹಿಸಿದವರಿಗೆ ನಾವು ತಿಳಿಸಬೇಕಾಗಿದೆ. ನಿನ್ನ ಬಗ್ಗೆ ನೀನು ಏನು ಹೇಳುವೆ?” ಎಂದು ಕೇಳಿದರು.

23 ಅದಕ್ಕೆ ಯೋಹಾನನು,

“‘ಪ್ರಭುವಿಗಾಗಿ ನೇರವಾದ ದಾರಿಯನ್ನು ಸಿದ್ಧಗೊಳಿಸಿರಿ’
    ಎಂದು ಅಡವಿಯಲ್ಲಿ ಕೂಗುವವನ ಸ್ವರವೇ ನಾನು”(A)

ಎಂದು ಪ್ರವಾದಿಯಾದ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು.

24 ಕಳುಹಿಸಲ್ಪಟ್ಟಿದ್ದವರಲ್ಲಿ ಕೆಲವು ಮಂದಿ ಫರಿಸಾಯರೂ[d] ಇದ್ದರು. 25 ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.

26 ಯೋಹಾನನು, “ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನಿಮಗೆ ಗೊತ್ತಿಲ್ಲದ ಒಬ್ಬನು ಇಲ್ಲಿದ್ದಾನೆ. 27 ನನ್ನ ನಂತರ ಬರುವವನು ಆತನೇ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಎಂದು ಹೇಳಿದನು.

28 ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿ ಎಂಬ ಊರಲ್ಲಿ ಈ ಸಂಗತಿಗಳೆಲ್ಲಾ ನಡೆದವು. ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದದ್ದು ಇಲ್ಲಿಯೇ.

ಯೇಸು—ದೇವರ ಕುರಿಮರಿ

29 ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು. 30 ‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ. 31 ಆತನು ಯಾರೆಂಬುದು ನನಗೂ ಗೊತ್ತಿರಲಿಲ್ಲ. ಆದರೆ ಆತನನ್ನು ಇಸ್ರೇಲರಿಗೆ ತಿಳಿಸುವುದಕ್ಕೋಸ್ಕರ ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೆನು” ಎಂದು ಹೇಳಿದನು.

32-33 ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು. 34 ಆದ್ದರಿಂದ ಆತನೇ (ಯೇಸುವೇ) ದೇವರ ಮಗನೆಂದು ನಾನು ಜನರಿಗೆ ತಿಳಿಸುವೆನು” ಎಂದನು.

ಯೇಸುವಿನ ಪ್ರಥಮ ಶಿಷ್ಯರು

35 ಮರುದಿನ ಯೋಹಾನನು ತನ್ನ ಇಬ್ಬರು ಶಿಷ್ಯರೊಂದಿಗೆ ಇದ್ದಾಗ, 36 ಸಮೀಪದಲ್ಲಿ ನಡೆದುಹೋಗುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕೆ ದೇವರು ನೇಮಿಸಿದ ಕುರಿಮರಿ!” ಎಂದು ಹೇಳಿದನು.

37 ಯೋಹಾನನ ಈ ಮಾತನ್ನು ಕೇಳಿದ ಆ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38 ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು.

ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)

39 ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.

40 ಈ ಇಬ್ಬರು ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಇವರಲ್ಲಿ ಒಬ್ಬನಾಗಿದ್ದನು. 41 ಮೊದಲನೆಯದಾಗಿ, ಅವನು ತನ್ನ ಅಣ್ಣನಾದ ಸೀಮೋನನನ್ನು ಕಾಣಲು ಹೋಗಿ ಅವನಿಗೆ, “ನಾವು ಮೆಸ್ಸೀಯನನ್ನು ಕಂಡುಕೊಂಡೆವು” ಎಂದು ಹೇಳಿದನು. (“ಮೆಸ್ಸೀಯ” ಅಂದರೆ “ಕ್ರಿಸ್ತನು” ಎಂದರ್ಥ.)

42 ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).

43 ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 44 ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು. 45 ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.

46 ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು.

ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.

47 ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.

48 ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು.

ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.

49 ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.

50 ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು. 51 ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.

ಯೋಬನು 40

40 ಇದಲ್ಲದೆ ಯೆಹೋವನು ಯೋಬನಿಗೆ,

“ಸರ್ವಶಕ್ತನಾದ ದೇವರ ವಿರುದ್ಧ ವ್ಯಾಜ್ಯಹೂಡಿದವನು ಆತನನ್ನು ಸರಿಪಡಿಸಬಲ್ಲನೇ?
    ದೇವರ ಮೇಲೆ ಅಪವಾದ ಹೊರಿಸುವವನು ಆತನಿಗೆ ಉತ್ತರ ನೀಡಲಿ” ಎಂದನು.

ಆಗ ಯೋಬನು ಯೆಹೋವನಿಗೆ,

“ನಾನು ಅಲ್ಪನೇ ಸರಿ!
    ನಾನು ನಿನಗೆ ಉತ್ತರ ಕೊಡಲಾರೆನು!
ನನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳುತ್ತೇನೆ.
ನಾನು ಒಂದು ಸಲ ಮಾತಾಡಿದ್ದೇನೆ; ಆದರೆ ಪ್ರತಿವಾದ ಮಾಡಲಾರೆನು.
    ನಾನು ಎರಡು ಸಲ ಮಾತಾಡಿದ್ದೇನೆ; ಆದರೆ ನಾನು ಹೆಚ್ಚಿಗೆ ಏನೂ ಹೇಳಲಾರೆನು” ಅಂದನು.

ಆಗ ಯೆಹೋವನು ಬಿರುಗಾಳಿಯೊಳಗಿಂದ ಮತ್ತೆ ಯೋಬನೊಂದಿಗೆ ಮಾತಾಡಿ ಹೀಗೆಂದನು:

“ಯೋಬನೇ, ನಡುಕಟ್ಟಿಕೊಂಡು ಎದ್ದುನಿಂತುಕೊ!
    ನಾನು ನಿನಗೆ ಕೆಲವು ಪ್ರಶ್ನೆಗಳನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು.

“ಯೋಬನೇ, ನನ್ನ ನೀತಿಯನ್ನು ಖಂಡಿಸುವಿಯಾ?
    ನಿನ್ನನ್ನು ನಿರಪರಾಧಿಯೆಂದು ನಿರೂಪಿಸಲು ನನ್ನನ್ನು ದೋಷಿಯೆಂದು ಪರಿಗಣಿಸುವೆಯಾ?
ನಿನ್ನ ತೋಳುಗಳು ನನ್ನ ತೋಳುಗಳಂತೆ ಬಲಿಷ್ಠವಾಗಿವೆಯೋ?
    ನಿನ್ನ ಸ್ವರವನ್ನು ನನ್ನ ಸ್ವರದಂತೆ ಗಟ್ಟಿಯಾಗಿ ಗುಡುಗುಟ್ಟಿಸಬಲ್ಲೆಯಾ?
10 ನೀನು ದೇವರಂತಿದ್ದರೆ ಹೆಮ್ಮೆಪಡು!
    ನೀನು ದೇವರಂತಿದ್ದರೆ ಘನತೆಯನ್ನೂ ಮಹಿಮೆಯನ್ನೂ ವಸ್ತ್ರಗಳಂತೆ ಧರಿಸಿಕೋ.
11 ನೀನು ದೇವರಂತಿದ್ದರೆ, ನಿನ್ನ ಕೋಪವನ್ನು ತೋರಿ ಗರ್ವಿಷ್ಠರನ್ನು ದಂಡಿಸು;
    ಅವರನ್ನು ದೀನರನ್ನಾಗಿ ಮಾಡು.
12 ಆ ಗರ್ವಿಷ್ಠರ ಕಡೆಗೆ ನೋಡಿ ಅವರನ್ನು ದೀನರನ್ನಾಗಿ ಮಾಡು.
    ದುಷ್ಟರನ್ನು ಅವರು ನಿಂತಿರುವಲ್ಲಿಯೇ ಜಜ್ಜಿಹಾಕು.
13 ಗರ್ವಿಷ್ಠರನ್ನೆಲ್ಲಾ ಧೂಳಿನಲ್ಲಿ ಸಮಾಧಿಮಾಡು;
    ಅವರ ದೇಹಗಳನ್ನು ಸುತ್ತಿ ಅವರ ಸಮಾಧಿಗಳೊಳಗೆ ಹಾಕು.
14 ಯೋಬನೇ, ನೀನು ಇವುಗಳನ್ನೆಲ್ಲಾ ಮಾಡಶಕ್ತನಾಗಿದ್ದರೆ,
    ನಿನ್ನನ್ನು ರಕ್ಷಿಸಿಕೊಳ್ಳಬಲ್ಲೆ ಎಂದು ನಿನ್ನನ್ನು ನಾನೇ ಹೊಗಳುವೆನು.

15 “ಯೋಬನೇ, ಬೆಹೇಮೋತನ್ನು ನೋಡು.
    ಅದನ್ನು ನಿರ್ಮಿಸಿದವನು ನಾನೇ; ನಿನ್ನನ್ನು ನಿರ್ಮಿಸಿದವನೂ ನಾನೇ.
    ಅದು ಹಸುವಿನಂತೆ ಹುಲ್ಲನ್ನು ಮೇಯುತ್ತದೆ.
16 ಅದರ ದೇಹದಲ್ಲಿ ಬಹಳ ಶಕ್ತಿಯಿದೆ.
    ಅದರ ಹೊಟ್ಟೆಯಲ್ಲಿರುವ ಮಾಂಸಖಂಡಗಳು ಬಹು ಶಕ್ತಿಯುತವಾಗಿವೆ.
17 ಅದರ ಬಾಲವು ದೇವದಾರು ಮರದಂತೆ ಬಲವಾಗಿ ನಿಂತುಕೊಳ್ಳುತ್ತದೆ.
    ಅದರ ಕಾಲಿನ ಮಾಂಸಖಂಡಗಳು ಬಹು ಬಲವಾಗಿವೆ.
18 ಅದರ ಎಲುಬುಗಳು ತಾಮ್ರದಂತೆ ಬಲವಾಗಿವೆ.
    ಅದರ ಕಾಲುಗಳು ಕಬ್ಬಿಣದ ಕಂಬಿಗಳಂತಿವೆ.
19 ನನ್ನಿಂದ ನಿರ್ಮಿತವಾಗಿರುವ ಅತ್ಯದ್ಭುತವಾದ ಪ್ರಾಣಿ ಅದು.
    ಅದನ್ನು ಸೃಷ್ಟಿಸಿದ ನಾನೊಬ್ಬನೇ ಅದನ್ನು ಕೊಲ್ಲಬಲ್ಲೆನು.
20 ಕಾಡುಪ್ರಾಣಿಗಳು ಆಟವಾಡುವ ಬೆಟ್ಟಗಳ ಮೇಲೆ ಬೆಳೆಯುವ ಹುಲ್ಲನ್ನು
    ಅದು ತಿನ್ನುತ್ತದೆ.
21 ಅದು ತಾವರೆ ಗಿಡಗಳ ಕೆಳಗೆ ಮಲಗಿಕೊಳ್ಳುತ್ತದೆ;
    ಕೊಳಚೆಯಲ್ಲಿರುವ ಅವುಗಳ ನಡುವೆ ಅಡಗಿಕೊಳ್ಳುತ್ತದೆ.
22 ತಾವರೆಗಿಡಗಳು ತಮ್ಮ ನೆರಳಿನಿಂದ ಅದನ್ನು ಮರೆಮಾಡುತ್ತವೆ;
    ನದಿಯ ಸಮೀಪದಲ್ಲಿ ಬೆಳೆಯುವ ನೀರವಂಜಿ ಮರಗಳ ಕೆಳಗೆ ಅದು ವಾಸಿಸುತ್ತದೆ.
23 ನದಿಯು ತುಂಬಿಹರಿದರೂ ಅದು ಓಡಿಹೋಗುವುದಿಲ್ಲ.
    ಜೋರ್ಡನ್ ನದಿಯು ಅದರ ಮುಖಕ್ಕೆ ರಭಸದಿಂದ ಬಡಿದರೂ ಅದಕ್ಕೆ ಭಯವಿಲ್ಲ.
24 ಅದರ ಕಣ್ಣುಗಳನ್ನು ಕುರುಡುಮಾಡಿ ಅದನ್ನು ಬಂಧಿಸುವುದಕ್ಕಾಗಲಿ
    ಕೊಂಡಿಗಳಿಂದ ಅದರ ಮೂಗಿಗೆ ಚುಚ್ಚುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ.

2 ಕೊರಿಂಥದವರಿಗೆ 10

ತನ್ನ ಸೇವೆಯ ಕುರಿತು ಪೌಲನ ಪ್ರತಿವಾದ

10 ಪೌಲನಾದ ನಾನು ಕ್ರಿಸ್ತನ ಮೃದುಸ್ವಭಾವದಿಂದಲೂ ಕನಿಕರದಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮೊಂದಿಗಿರುವಾಗ ದೀನನಾಗಿರುತ್ತೇನೆಂದೂ, ನಿಮ್ಮಿಂದ ದೂರದಲ್ಲಿರುವಾಗ ಧೀರನಾಗಿರುತ್ತೇನೆಂದೂ ಕೆಲವರು ಹೇಳುತ್ತಾರೆ. ನಾವು ಲೌಕಿಕರಂತೆ ಜೀವಿಸುತ್ತೇವೆಂದು ಕೆಲವರು ಯೋಚಿಸುತ್ತಾರೆ. ನಾನು ಬಂದಾಗ ಅವರ ವಿರೋಧವಾಗಿ ಬಹು ದಿಟ್ಟತನದಿಂದಿರಬೇಕೆಂದು ಯೋಚಿಸಿಕೊಂಡಿದ್ದೇನೆ. ಆದರೆ ನಿಮಗೂ ಅದೇ ದಿಟ್ಟತನವನ್ನು ಉಪಯೋಗಿಸುವ ಅಗತ್ಯತೆ ಇಲ್ಲದಿರಲಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ನಾವು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಆದರೆ ಪ್ರಪಂಚದವರು ಹೊಡೆದಾಡುವ ರೀತಿಯಲ್ಲಿ ನಾವು ಹೊಡೆದಾಡುವುದಿಲ್ಲ. ಪ್ರಪಂಚದವರು ಉಪಯೋಗಿಸುವ ಆಯುಧಗಳಿಗೆ ತದ್ವಿರುದ್ಧವಾದ ಆಯುಧಗಳೊಂದಿಗೆ ನಾವು ಹೋರಾಡುತ್ತೇವೆ. ನಮ್ಮ ಆಯುಧಗಳು ದೇವರ ಶಕ್ತಿಯನ್ನು ಹೊಂದಿವೆ. ಅವು ಶತ್ರುವಿನ ಬಲವಾದ ಕೋಟೆಗಳನ್ನು ನಾಶ ಮಾಡಬಲ್ಲವು. ನಾವು ಜನರ ವಾದಗಳನ್ನು ನಾಶಮಾಡುತ್ತೇವೆ. ದೇವರ ಜ್ಞಾನಕ್ಕೆ ವಿರೋಧವಾಗಿ ಎದ್ದೇಳುವ ಪ್ರತಿಯೊಂದು ಗರ್ವದ ಸಂಗತಿಯನ್ನು ನಾಶಮಾಡುತ್ತೇವೆ; ಪ್ರತಿಯೊಂದು ಯೋಚನೆಯನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಪರಿವರ್ತಿಸಿ ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡುತ್ತೇವೆ. ನಿಮ್ಮಲ್ಲಿ ಕ್ರಿಸ್ತನಿಗೆ ವಿಧೇಯರಾಗದಿರುವ ಯಾರನ್ನೇ ಆಗಲಿ ಶಿಕ್ಷಿಸಲು ಸಿದ್ಧರಾಗಿದ್ದೇವೆ. ಆದರೆ ಮೊಟ್ಟಮೊದಲನೆಯದಾಗಿ, ನೀವು ಪೂರ್ಣ ವಿಧೇಯರಾಗಬೇಕೆಂದು ಅಪೇಕ್ಷಿಸುತ್ತೇವೆ.

ನಿಮ್ಮ ಮುಂದಿರುವ ನಿಜಾಂಶಗಳನ್ನು ನೀವು ಗಮನಿಸಬೇಕು. ಒಬ್ಬ ವ್ಯಕ್ತಿಯು ತಾನು ನಿಜವಾಗಿಯೂ ಕ್ರಿಸ್ತನವನೆಂದು ತಿಳಿದುಕೊಂಡಿದ್ದರೆ ಅವನಂತೆಯೇ ನಾವೂ ಕ್ರಿಸ್ತನವರೆಂಬುದನ್ನು ಅವನು ತಿಳಿದುಕೊಳ್ಳಬೇಕು. ಪ್ರಭುವು ನಮಗೆ ಕೊಟ್ಟಿರುವ ಅಧಿಕಾರದ ಬಗ್ಗೆ ನಾವು ಹೆಚ್ಚು ಹೆಮ್ಮೆಪಡುತ್ತೇವೆ ಎಂಬುದೇನೋ ಸತ್ಯ. ಆದರೆ ಆತನು ನಮಗೆ ಈ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಪಡಿಸುವುದಕ್ಕಾಗಿಯೇ ಹೊರತು ನಿಮಗೆ ನೋವನ್ನು ಉಂಟುಮಾಡುವುದಕ್ಕಾಗಿಯಲ್ಲ. ಆದ್ದರಿಂದ ಅದರ ಬಗ್ಗೆ ಹೆಮ್ಮೆಪಡುವುದರಲ್ಲಿ ನಾನು ನಾಚಿಕೊಳ್ಳುವುದಿಲ್ಲ. ನನ್ನ ಪತ್ರಗಳ ಮೂಲಕ ನಿಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದೇನೆಂದು ನೀವು ಯೋಚಿಸಬೇಕೆಂಬುದು ನನ್ನ ಅಪೇಕ್ಷೆಯಲ್ಲ. 10 “ಪೌಲನ ಪತ್ರಗಳು ಬಲಯುತವಾಗಿವೆ ಮತ್ತು ಪ್ರಾಮುಖ್ಯವಾಗಿವೆ, ಆದರೆ ಅವನು ನಮ್ಮೊಂದಿಗಿರುವಾಗ ಬಲಹೀನನಾಗಿರುತ್ತಾನೆ, ಅವನ ಮಾತುಗಳು ನಿಸ್ಸಾರವಾಗಿರುತ್ತವೆ” ಎಂದು ಕೆಲವರು ಹೇಳುತ್ತಾರೆ. 11 ಆ ಜನರಿಗೆ ಈ ವಿಷಯ ತಿಳಿದಿರಬೇಕು. ಅದೇನೆಂದರೆ, ಈಗ ನಾವು ನಿಮ್ಮೊಂದಿಗಿಲ್ಲ. ಆದ್ದರಿಂದ ಈ ಸಂಗತಿಗಳನ್ನು ಪತ್ರಗಳ ಮೂಲಕ ಹೇಳುತ್ತಿದ್ದೇವೆ. ಆದರೆ ನಾವು ನಿಮ್ಮೊಂದಿಗಿರುವಾಗ ನಮ್ಮ ಪತ್ರಗಳಲ್ಲಿ ತೋರಿದ ಅಧಿಕಾರವನ್ನೇ ತೋರಿಸುತ್ತೇವೆ.

12 ತಾವು ಬಹಳ ಪ್ರಾಮುಖ್ಯವಾದವರೆಂದು ಯೋಚಿಸುವ ಆ ಜನರ ಗುಂಪಿನೊಡನೆ ಸೇರಿಕೊಳ್ಳಲು ನಮಗೆ ಧೈರ್ಯಸಾಲದು. ನಾವು ನಮ್ಮನ್ನು ಅವರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಅವರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ; ತಮ್ಮನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುತ್ತಾರೆ. ಅವರಿಗೆ ಏನೂ ಗೊತ್ತಿಲ್ಲವೆಂದು ಇದೇ ತೋರಿಸುತ್ತದೆ.

13 ಆದರೆ ನಾವು ನಮಗೆ ಕೊಡಲ್ಪಟ್ಟಿರುವ ಕೆಲಸದ ಮೇರೆಯನ್ನು ಮೀರಿ ನಮ್ಮನ್ನು ಹೊಗಳಿಕೊಳ್ಳದೆ ದೇವರು ನಮಗೆ ಕೊಟ್ಟಿರುವ ಕೆಲಸದ ಮೇರೆಯೊಳಗೆ ಹೆಮ್ಮೆಪಡುತ್ತೇವೆ. ಆದರೆ ನಮ್ಮ ಈ ಕೆಲಸವು ನಿಮ್ಮ ಮಧ್ಯ ನಾವು ಮಾಡುವ ಈ ಸೇವೆಯನ್ನು ಒಳಗೊಂಡಿದೆ. 14 ನಾವು ಬಹಳವಾಗಿ ಹೊಗಳಿಕೊಳ್ಳುವುದಿಲ್ಲ. ನಾವು ನಿಮ್ಮಲ್ಲಿಗೆ ಈಗಾಗಲೇ ಬಂದಿಲ್ಲದಿದ್ದರೆ ಬಹಳವಾಗಿ ಹೊಗಳಿಕೊಳ್ಳುತ್ತಿದ್ದೆವು. ಆದರೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ. ಕ್ರಿಸ್ತನ ಸುವಾರ್ತೆಯೊಂದಿಗೆ ನಾವು ಬಂದೆವು. 15 ನಾವು ಹೊಗಳಿಕೊಳ್ಳುವುದನ್ನು ನಮ್ಮ ಕೆಲಸದ ಮೇರೆಗೆ ಸೀಮಿತಗೊಳಿಸುತ್ತೇವೆ. ಇತರರು ಮಾಡಿದ ಕೆಲಸದ ಬಗ್ಗೆ ನಾವು ನಮ್ಮನ್ನು ಹೊಗಳಿಕೊಳ್ಳುವುದಿಲ್ಲ. ನಿಮ್ಮ ನಂಬಿಕೆಯು ವೃದ್ಧಿಯಾಗುತ್ತಾ ಬಂದಂತೆ ನಮ್ಮ ಕೆಲಸವು ಮತ್ತಷ್ಟು ವಿಶಾಲವಾಗಿ ಬೆಳೆಯಲು ನೀವು ಸಹಾಯ ಮಾಡುತ್ತೀರೆಂಬ ನಿರೀಕ್ಷೆ ನಮಗಿದೆ. 16 ನಿಮ್ಮ ಪಟ್ಟಣಕ್ಕೆ ದೂರವಾಗಿರುವ ಸ್ಥಳಗಳಲ್ಲಿಯೂ ಸುವಾರ್ತೆಯನ್ನು ತಿಳಿಸಬೇಕೆಂಬ ಅಪೇಕ್ಷೆ ನಮಗುಂಟು. ಮತ್ತೊಬ್ಬ ವ್ಯಕ್ತಿಯ ಪ್ರದೇಶದಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಕೆಲಸದ ಬಗ್ಗೆ ಹೊಗಳಿಕೊಳ್ಳಬೇಕೆಂಬ ಅಪೇಕ್ಷೆ ನಮಗಿಲ್ಲ. 17 ಆದರೆ “ಹೊಗಳಿಕೊಳ್ಳುವವನು ಪ್ರಭುವಿನಲ್ಲಿಯೇ ಹೊಗಳಿಕೊಳ್ಳಬೇಕು”(A) 18 ಒಬ್ಬನು ತನ್ನನ್ನು ಒಳ್ಳೆಯವನೆಂದು ಹೇಳಿಕೊಂಡ ಮಾತ್ರಕ್ಕೆ ಅವನು ಸ್ವೀಕೃತನೆಂದಲ್ಲ. ಪ್ರಭುವು ಯಾರನ್ನು ಒಳ್ಳೆಯವನೆಂದು ಯೋಚಿಸುತ್ತಾನೊ ಅವನೇ ಸ್ವೀಕೃತನಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International