Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 10

ಮಿಡತೆಗಳಿಂದ ಬಾಧೆ

10 ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗು. ನಾನು ಅದ್ಭುತಕಾರ್ಯಗಳನ್ನು ತೋರಿಸಲು ಅವಕಾಶವಾಗಲೆಂದು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. ನಾನು ಈಜಿಪ್ಟಿನಲ್ಲಿ ಮಾಡಿದ ಸೂಚಕಕಾರ್ಯಗಳನ್ನೂ ಇತರ ಅದ್ಭುತಕಾರ್ಯಗಳನ್ನೂ ನೀವು ನಿಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿವರಿಸಿ, ‘ಯೆಹೋವನು ಈಜಿಪ್ಟಿನವರನ್ನು ತನಗೆ ಇಷ್ಟ ಬಂದಂತೆ ಶಿಕ್ಷಿಸಿದನು’ ಎಂಬುದಾಗಿ ತಿಳಿಸಬೇಕೆಂದು ನಾನು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳ ಮೂಲಕ ನಾನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದು ಹೇಳಿದನು.

ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋಗಿ, “ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಎಲ್ಲಿಯವರೆಗೆ ನನಗೆ ವಿಧೇಯನಾಗುವುದಿಲ್ಲ? ನನ್ನನ್ನು ಆರಾಧಿಸಲು ನನ್ನ ಜನರನ್ನು ಕಳುಹಿಸಿಕೊಡು! ನೀನು ನನ್ನ ಜನರನ್ನು ಕಳುಹಿಸಿಕೊಡದಿದ್ದರೆ, ನಾಳೆಯೇ ನಿನ್ನ ದೇಶದೊಳಗೆ ಮಿಡತೆಗಳನ್ನು ತರುವೆನು. ಮಿಡತೆಗಳು ಬಂದು ಭೂಮಿಯನ್ನು ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವುದು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವುದನ್ನು ಮಿಡತೆಗಳು ತಿಂದುಬಿಡುತ್ತವೆ; ಹೊಲದಲ್ಲಿರುವ ಎಲ್ಲಾ ಮರಗಳ ಎಲೆಗಳನ್ನು ತಿಂದುಬಿಡುತ್ತವೆ. ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿರುತ್ತವೆ. ನಿನ್ನ ತಂದೆತಾತಂದಿರೂ ನೋಡಿಲ್ಲದಷ್ಟು ಮಿಡತೆಗಳಿರುತ್ತವೆ’” ಎಂದು ಹೇಳಿದರು. ಬಳಿಕ ಅವರು ಫರೋಹನ ಬಳಿಯಿಂದ ಹೊರಟುಹೋದರು.

ಅಧಿಕಾರಿಗಳು ಫರೋಹನಿಗೆ, “ಈ ಜನರಿಂದ ಇನ್ನೆಷ್ಟು ಕಾಲ ನಾವು ಬಳಲಬೇಕು? ಇವರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸಲಿ. ಈಜಿಪ್ಟ್ ನಾಶವಾಗುತ್ತಿದೆ ಎಂಬುದು ನಿನಗಿನ್ನೂ ಮನವರಿಕೆಯಾಗಿಲ್ಲವೇ?” ಅಂದರು.

ಆದ್ದರಿಂದ ಫರೋಹನು ಮೋಶೆ ಆರೋನರನ್ನು ತನ್ನ ಬಳಿಗೆ ಕರೆಯಿಸಿ, “ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ. ಆದರೆ ಹೋಗುವವರು ಯಾರೆಂಬುದನ್ನು ನನಗೆ ತಿಳಿಸಿ” ಅಂದನು.

ಮೋಶೆಯು, “ಯೌವನಸ್ಥರು, ಮುದುಕರು, ಎಲ್ಲರೂ ಹೋಗುತ್ತೇವೆ. ನಮ್ಮ ಗಂಡು ಹೆಣ್ಣುಮಕ್ಕಳನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಯಾಕೆಂದರೆ ಇದು ಯೆಹೋವನ ಜಾತ್ರೆ” ಎಂದು ಉತ್ತರಕೊಟ್ಟನು.

10 ಫರೋಹನು ಅವರಿಗೆ, “ಯೆಹೋವನಾಣೆ, ನೀವು ನಿಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಲು ನಾನು ಅನುಮತಿ ಕೊಡುವುದೇ ಇಲ್ಲ. 11 ನೀವು ನನಗೆ ವಿರೋಧವಾಗಿ ಸಂಚುಮಾಡುತ್ತಿರುವುದು ಈಗ ಸ್ಪಷ್ಟವಾಯಿತು” ಎಂದು ಹೇಳಿದನು. ಬಳಿಕ ಫರೋಹನು ಮೋಶೆ ಆರೋನರನ್ನು ಕಳುಹಿಸಿಬಿಟ್ಟನು.

12 ಯೆಹೋವನು ಮೋಶೆಗೆ, “ಈಜಿಪ್ಟ್ ದೇಶದ ಮೇಲೆ ನಿನ್ನ ಕೈಯನ್ನೆತ್ತು. ಆಗ ಮಿಡತೆಗಳು ಬರುವವು! ಮಿಡತೆಗಳು ಈಜಿಪ್ಟ್ ದೇಶದಲ್ಲೆಲ್ಲಾ ಹರಡಿಕೊಳ್ಳುವವು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದುಕೊಂಡ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡುವವು” ಎಂದು ಹೇಳಿದನು.

13 ಅಂತೆಯೇ ಮೋಶೆ ಈಜಿಪ್ಟ್ ದೇಶದ ಮೇಲೆ ಕೈ ಚಾಚಿದನು. ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು. ಗಾಳಿಯು ಹಗಲಿರುಳು ಬೀಸಿತು. ಮುಂಜಾನೆಯಾದಾಗ ಆ ಗಾಳಿಯಿಂದ ಈಜಿಪ್ಟ್ ದೇಶಕ್ಕೆ ಮಿಡತೆಗಳು ಬಂದವು. 14 ಮಿಡತೆಗಳು ಈಜಿಪ್ಟ್ ದೇಶದೊಳಗೆ ಹಾರಿಬಂದು ನೆಲದ ಮೇಲೆ ಇಳಿದವು. ಈಜಿಪ್ಟಿನಲ್ಲಿ ಹಿಂದೆಂದೂ ಇಷ್ಟು ಮಿಡತೆಗಳು ಇರಲಿಲ್ಲ; ಇನ್ನು ಮುಂದೆಯೂ ಇರುವುದಿಲ್ಲ. 15 ಮಿಡತೆಗಳು ನೆಲವನ್ನು ಮುಚ್ಚಿಕೊಂಡವು; ಇದರಿಂದಾಗಿ ನೆಲವು ಕಾಣದಂತಾಯಿತು. ಆಲಿಕಲ್ಲಿನ ಮಳೆಗೆ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ ಮರಗಳಲ್ಲಿದ್ದ ಕಾಯಿಗಳನ್ನೂ ಅವು ತಿಂದುಬಿಟ್ಟವು. ಈಜಿಪ್ಟಿನಲ್ಲೆಲ್ಲಾ ಮರಗಳಲ್ಲಾಗಲಿ ಗಿಡಗಳಲ್ಲಾಗಲಿ ಹಸುರಾಗಿದ್ದ ಒಂದಾದರೂ ಉಳಿಯಲಿಲ್ಲ.

16 ಫರೋಹನು ಕೂಡಲೇ ಮೋಶೆ ಆರೋನರನ್ನು ಕರೆಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ. 17 ಇದೊಂದು ಸಲ ನನ್ನ ಪಾಪಗಳನ್ನು ಕ್ಷಮಿಸಿ ಈ ‘ವಿಪತ್ತನ್ನು’ ನನ್ನಿಂದ ತೊಲಗಿಸಬೇಕೆಂದು ಯೆಹೋವನಿಗೆ ಪ್ರಾರ್ಥಿಸಿರಿ” ಎಂದು ಹೇಳಿದನು.

18 ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು. 19 ಆದ್ದರಿಂದ ಯೆಹೋವನು ಗಾಳಿಯ ದಿಕ್ಕನ್ನು ಬದಲಾಯಿಸಿ, ಪಶ್ಚಿಮದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು; ಅದು ಮಿಡತೆಗಳನ್ನು ಕೆಂಪು ಸಮುದ್ರಕ್ಕೆ ಹಾರಿಸಿತು. ಈಜಿಪ್ಟಿನಲ್ಲಿ ಒಂದು ಮಿಡತೆಯೂ ಉಳಿಯಲಿಲ್ಲ. 20 ಆದರೆ ಫರೋಹನು ಮತ್ತೆ ಹೃದಯವನ್ನು ಕಠಿಣಪಡಿಸಿಕೊಂಡು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ.

ಮೂರು ದಿನ ಕಾರ್ಗತ್ತಲೆ

21 ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು. ಆಗ ಕಾರ್ಗತ್ತಲೆಯು ಈಜಿಪ್ಟನ್ನು ಆವರಿಸುವುದು. ಆ ಕಾರ್ಗತ್ತಲೆಯಿಂದ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.

22 ಮೋಶೆ ತನ್ನ ಕೈಯನ್ನು ಆಕಾಶದ ಕಡೆಗೆ ಚಾಚಿದಾಗ ಕಾರ್ಗತ್ತಲು ಈಜಿಪ್ಟನ್ನು ಆವರಿಸಿತು. ಕಾರ್ಗತ್ತಲು ಈಜಿಪ್ಟಿನಲ್ಲಿ ಮೂರು ದಿನಗಳವರೆಗೆ ಇತ್ತು. 23 ಈ ಮೂರು ದಿನಗಳಲ್ಲಿ ಯಾರೂ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾವ ಸ್ಥಳಕ್ಕೂ ಹೋಗಲಿಲ್ಲ. ಆದರೆ ಇಸ್ರೇಲರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬೆಳಕಿತ್ತು.

24 ಫರೋಹನು ಮತ್ತೆ ಮೋಶೆಯನ್ನು ಕರೆಸಿ, “ಹೋಗಿ, ಯೆಹೋವನನ್ನು ಆರಾಧಿಸಿರಿ! ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆದರೆ ನೀವು ನಿಮ್ಮ ಕುರಿಗಳನ್ನು ದನಕರುಗಳನ್ನು ಇಲ್ಲಿಯೇ ಬಿಟ್ಟುಹೋಗಬೇಕು” ಎಂದು ಹೇಳಿದನು.

25 ಮೋಶೆಯು, “ನಾವು ನಮ್ಮ ಕುರಿಗಳನ್ನೂ ದನಕರುಗಳನ್ನೂ ಕಾಣಿಕೆಗಳಿಗಾಗಿ ಮತ್ತು ಯಜ್ಞಗಳಿಗಾಗಿ ತೆಗೆದುಕೊಂಡು ಹೋಗಬೇಕು; ಮಾತ್ರವಲ್ಲದೆ 26 ನಮ್ಮ ಪ್ರಾಣಿಗಳನ್ನೆಲ್ಲಾ ತೆಗೆದುಕೊಂಡು ಹೋಗುವೆವು. ಒಂದನ್ನಾದರೂ ಬಿಟ್ಟುಹೋಗುವುದಿಲ್ಲ; ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ಅಲ್ಲಿಗೆ ಹೋದಾಗಲೇ ನಮಗೆ ತಿಳಿಯುವುದು. ಆದ್ದರಿಂದ, ನಾವು ಇವುಗಳನ್ನೆಲ್ಲಾ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಹೇಳಿದನು.

27 ಯೆಹೋವನು ಫರೋಹನ ಹೃದಯವನ್ನು ಮತ್ತೆ ಕಠಿಣಗೊಳಿಸಿದನು. ಆದ್ದರಿಂದ ಫರೋಹನು ಅವರನ್ನು ಕಳುಹಿಸಿಕೊಡಲಿಲ್ಲ. 28 ಫರೋಹನು ಮೋಶೆಗೆ, “ಇಲ್ಲಿಂದ ತೊಲಗಿ ಹೋಗು! ನೀನು ನನ್ನ ಸನ್ನಿಧಿಗೆ ಇನ್ನು ಮೇಲೆ ಬರಕೂಡದು. ನೀನು ಮತ್ತೆ ಬಂದರೆ ನಿನಗೆ ಮರಣದಂಡನೆ ವಿಧಿಸುವೆನು” ಎಂದನು.

29 ಅದಕ್ಕೆ ಮೋಶೆಯು ಫರೋಹನಿಗೆ, “ಸರಿ, ಇನ್ನು ಮೇಲೆ ನಾನು ನಿನ್ನ ಸನ್ನಿಧಿಗೆ ಬರುವುದೇ ಇಲ್ಲ” ಎಂದು ಹೇಳಿದನು.

ಲೂಕ 13

ಹೃದಯ ಪರಿವರ್ತನೆ

13 ಅದೇ ಸಮಯದಲ್ಲಿ ಅಲ್ಲಿದ್ದ ಕೆಲವರು ಯೇಸುವಿನ ಬಳಿಗೆ ಬಂದು ಗಲಿಲಾಯದಲ್ಲಿ ಯಜ್ಞ ಅರ್ಪಿಸುತ್ತಿದ್ದವರನ್ನು ಪಿಲಾತನು[a] ಕೊಲ್ಲಿಸಿದ್ದನ್ನೂ ಅವರು ಯಜ್ಞವಾಗಿ ಅರ್ಪಿಸಿದ್ದ ಪಶುಗಳ ರಕ್ತದೊಡನೆ ಅವರ ರಕ್ತವನ್ನು ಬೆರಸಿದ್ದನ್ನೂ ಯೇಸುವಿಗೆ ತಿಳಿಸಿದರು. ಯೇಸು ಅವರಿಗೆ, “ಕೊಲೆಗೀಡಾದವರು ಗಲಿಲಾಯದ ಇತರರೆಲ್ಲರಿಗಿಂತ ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? ಇಲ್ಲ! ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ! ಸಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ, ಸತ್ತುಹೋದ ಹದಿನೆಂಟು ಮಂದಿಯ ಕುರಿತು ನಿಮ್ಮ ಅಭಿಪ್ರಾಯವೇನು? ಜೆರುಸಲೇಮಿನಲ್ಲಿ ವಾಸವಾಗಿದ್ದ ಇತರರೆಲ್ಲರಿಗಿಂತಲೂ ಅವರು ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ ಎಂದು ನಾನು ನಿಮಗೆ ಹೇಳುತ್ತೇನೆ!” ಎಂದು ಉತ್ತರಿಸಿದನು.

ಉಪಯೋಗವಿಲ್ಲದ ಮರ

ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ತನ್ನ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದನು. ಒಮ್ಮೆ ಅವನು ಆ ಮರ ಹಣ್ಣು ಫಲಿಸಿರಬಹುದೆಂದು ಅಲ್ಲಿಗೆ ಬಂದನು. ಆದರೆ ಅವನು ಅದರಲ್ಲಿ ಒಂದು ಹಣ್ಣನ್ನೂ ಕಾಣಲಿಲ್ಲ. ಅವನು ತನ್ನ ತೋಟವನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ತೋಟಗಾರನನ್ನೂ ನೇಮಿಸಿದ್ದನು. ಅವನು ತನ್ನ ಆ ಸೇವಕನಿಗೆ, ‘ಈ ಮರವು ಹಣ್ಣು ಬಿಡಬಹುದೆಂದು ನಾನು ಮೂರು ವರ್ಷದಿಂದ ಕಾಯುತ್ತಿದ್ದೇನೆ. ಆದರೆ ಇದು ಹಣ್ಣನ್ನು ಬಿಡಲೇ ಇಲ್ಲ. ಇದನ್ನು ಕತ್ತರಿಸಿಹಾಕು! ಇದು ಭೂಮಿಯ ಸಾರವನ್ನೇಕೆ ವ್ಯರ್ಥಗೊಳಿಸಬೇಕು?’ ಎಂದು ಹೇಳಿದನು. ಆದರೆ ಆ ಸೇವಕನು, ‘ಯಜಮಾನನೇ, ಇನ್ನೊಂದು ವರ್ಷ ತಾಳಿಕೊ. ಅದು ಫಲವನ್ನು ಕೊಡಬಹುದು. ಅದರ ಸುತ್ತಲೂ ಅಗೆದು ಸ್ವಲ್ಪ ರಸಗೊಬ್ಬರವನ್ನು ಹಾಕುತ್ತೇನೆ. ಆಗ ಮುಂದಿನ ವರ್ಷ ಈ ಮರ ಫಲವನ್ನು ಕೊಡಬಹುದು. ಒಂದುವೇಳೆ ಇದು ಫಲವನ್ನು ಕೊಡದಿದ್ದರೆ ನೀನು ಇದನ್ನು ಕಡಿದುಹಾಕು’ ಎಂದು ಉತ್ತರಿಸಿದನು.”

ಯೇಸುವಿನಿಂದ ಗುಣಹೊಂದಿದ ಸ್ತ್ರೀ

10 ಒಂದು ಸಬ್ಬತ್‌ದಿನ ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. 11 ದೆವ್ವದಿಂದ ಪೀಡಿತಳಾಗಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆ ದೆವ್ವದಿಂದಾಗಿ ಆಕೆಗೆ ಹದಿನೆಂಟು ವರ್ಷಗಳಿಂದ ನಡು ಬಗ್ಗಿಕೊಂಡಿತ್ತು. ನೆಟ್ಟಗೆ ನಿಂತುಕೊಳ್ಳಲು ಆಕೆಗೆ ಸಾಧ್ಯವಿರಲಿಲ್ಲ. 12 ಯೇಸು ಆಕೆಯನ್ನು ಕಂಡು, ತನ್ನ ಬಳಿಗೆ ಕರೆದು, “ಅಮ್ಮಾ, ನಿನ್ನ ಕಾಯಿಲೆ ನಿನ್ನನ್ನು ಬಿಟ್ಟುಹೋಗಿದೆ!” ಎಂದು ಹೇಳಿದನು. 13 ಯೇಸು ಆಕೆಯ ಮೇಲೆ ತನ್ನ ಕೈಗಳನ್ನಿಟ್ಟಾಗ ಆಕೆ ನೆಟ್ಟಗೆ ನಿಲ್ಲಲು ಶಕ್ತಳಾದಳು. ಆಕೆ ದೇವರನ್ನು ಕೊಂಡಾಡಿದಳು.

14 ಯೇಸು ಸಬ್ಬತ್‌ದಿನದಲ್ಲಿ ವಾಸಿಮಾಡಿದ್ದರಿಂದ ಸಭಾಮಂದಿರದ ಅಧಿಕಾರಿ ಕೋಪಗೊಂಡು ಜನರಿಗೆ, “ಕೆಲಸಕ್ಕಾಗಿ ವಾರದಲ್ಲಿ ಆರು ದಿನಗಳಿವೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ. ಸಬ್ಬತ್‌ದಿನದಲ್ಲಿ ವಾಸಿಮಾಡಿಸಿಕೊಳ್ಳಬಾರದು” ಎಂದು ಹೇಳಿದನು.

15 ಅದಕ್ಕೆ ಪ್ರಭುವು (ಯೇಸು), “ನೀವು ಕಪಟಿಗಳು! ನೀವೆಲ್ಲರೂ ನಿಮ್ಮ ದುಡಿಮೆಯ ಪಶುಗಳನ್ನು ಪ್ರತಿದಿನ ಬಿಚ್ಚಿ ನೀರು ಕುಡಿಸಲು ಕರೆದೊಯ್ಯುತೀರಿ. ಸಬ್ಬತ್‌ದಿನದಲ್ಲಿಯೂ ನೀವು ಹಾಗೆಯೇ ಮಾಡುತ್ತೀರಿ! 16 ನಾನು ವಾಸಿಮಾಡಿದ ಈ ಸ್ತ್ರೀಯಾದರೋ ಯೆಹೂದ್ಯಳು. ಸೈತಾನನು ಆಕೆಯನ್ನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು. ಆದ್ದರಿಂದ ಆಕೆಯನ್ನು ಸಬ್ಬತ್‌ದಿನದಂದು ಕಾಯಿಲೆಯಿಂದ ಬಿಡುಗಡೆ ಮಾಡುವುದು ಖಂಡಿತವಾಗಿಯೂ ತಪ್ಪಲ್ಲ!” ಎಂದು ಹೇಳಿದನು. 17 ಈ ಮಾತನ್ನು ಕೇಳಿದಾಗ, ಆತನನ್ನು ಟೀಕಿಸುತ್ತಿದ್ದ ಜನರೆಲ್ಲರಿಗೂ ತಮ್ಮ ಬಗ್ಗೆ ನಾಚಿಕೆಯಾಯಿತು. ಯೇಸು ಮಾಡುತ್ತಿದ್ದ ಅದ್ಭುತಕಾರ್ಯಗಳಿಗಾಗಿ ಜನರೆಲ್ಲರೂ ಸಂತೋಷಪಟ್ಟರು.

ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ?

(ಮತ್ತಾಯ 13:31-33; ಮಾರ್ಕ 4:30-32)

18 ಬಳಿಕ ಯೇಸು, “ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ? 19 ದೇವರ ರಾಜ್ಯ ಸಾಸಿವೆಕಾಳಿನಂತಿದೆ. ಒಬ್ಬನು ತನ್ನ ತೋಟದಲ್ಲಿ ಈ ಬೀಜವನ್ನು ಹಾಕುತ್ತಾನೆ. ಅದು ಬೆಳೆದು ಮರವಾಗುತ್ತದೆ. ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ” ಎಂದು ಹೇಳಿದನು.

20 ಯೇಸು ಮತ್ತೆ ಹೀಗೆಂದನು: “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ? 21 ಅದು, ಸ್ತ್ರೀಯೊಬ್ಬಳು ರೊಟ್ಟಿಮಾಡುವುದಕ್ಕಾಗಿ ದೊಡ್ಡ ಪಾತ್ರೆಯೊಂದರಲ್ಲಿರುವ ಹಿಟ್ಟಿಗೆ ಬೆರೆಸುವ ಹುಳಿಯಂತಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲ ಉಬ್ಬಿಸುತ್ತದೆ.”

ಕಿರಿದಾದ ಬಾಗಿಲು

(ಮತ್ತಾಯ 7:13-14,21-23)

22 ಯೇಸು ಪ್ರತಿಯೊಂದು ಊರಿನಲ್ಲಿಯೂ ಹಳ್ಳಿಯಲ್ಲಿಯೂ ಉಪದೇಶಿಸುತ್ತಾ ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. 23 ಯಾರೋ ಒಬ್ಬನು ಯೇಸುವಿಗೆ, “ಸ್ವಾಮೀ, ಎಷ್ಟು ಜನರು ರಕ್ಷಿಸಲ್ಪಡುವರು? ಕೇವಲ ಸ್ವಲ್ಪ ಜನರೋ?” ಎಂದು ಕೇಳಿದನು.

ಅದಕ್ಕೆ ಯೇಸು, 24 “ಸ್ವರ್ಗಕ್ಕೆ ನಡೆಸುವ ಕಿರಿದಾದ ಬಾಗಿಲಿನ ಮೂಲಕ ಹೋಗಲು ಪ್ರಯಾಸಪಡಿರಿ! ಅನೇಕ ಜನರು ಅದರ ಮೂಲಕ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಅವರಿಂದ ಆಗುವುದಿಲ್ಲ. 25 ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಬೇಕಷ್ಟೇ, ಆದರೂ ಅವನು ತೆರೆಯುವುದಿಲ್ಲ. ‘ಸ್ವಾಮೀ, ನಮಗೆ ಬಾಗಿಲು ತೆರೆ!’ ಎಂದು ನೀವು ಕೇಳುವಿರಿ. ಅವನು ನಿಮಗೆ, ‘ನೀವು ಯಾರೋ ನನಗೆ ತಿಳಿಯದು. ನೀವು ಎಲ್ಲಿಯವರು?’ ಎಂದು ಉತ್ತರಿಸುವನು. 26 ಆಗ ನೀವು, ‘ನಾವು ನಿನ್ನೊಡನೆ ಊಟಮಾಡಿದೆವು, ಪಾನಮಾಡಿದೆವು. ನೀನು ನಮ್ಮ ಬೀದಿಗಳಲ್ಲಿ ನಮಗೆ ಉಪದೇಶಿಸಿದೆ’ ಎಂದು ಹೇಳುವಿರಿ. 27 ಆಗ ಅವನು ನಿಮಗೆ, ‘ನೀವು ಯಾರೋ ನನಗೆ ಗೊತ್ತಿಲ್ಲ! ನೀವು ಎಲ್ಲಿಯವರು? ಇಲ್ಲಿಂದ ಹೊರಟುಹೋಗಿ! ನೀವೆಲ್ಲರೂ ಪಾಪಕೃತ್ಯಗಳನ್ನು ಮಾಡುವ ಜನರು!’ ಎಂದು ನಿಮಗೆ ಹೇಳುವನು.

28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನು ನೀವು ನೋಡುವಿರಿ. ಆದರೆ ನಿಮ್ಮನ್ನು ಹೊರಗೆ ಹಾಕಲಾಗುವುದು. ಆಗ ನೀವು ಭಯದಿಂದಲೂ ಕೋಪದಿಂದಲೂ ಕೂಗಿಕೊಳ್ಳುವಿರಿ. 29 ಜನರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದಿಕ್ಕುಗಳಿಂದ ಬರುವರು. ಅವರು ದೇವರ ರಾಜ್ಯದಲ್ಲಿ ಊಟಕ್ಕೆ ಕುಳಿತುಕೊಳ್ಳುವರು. 30 ಇಗೋ, ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು, ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು.”

ಜೆರುಸಲೇಮಿನಲ್ಲಿ ಯೇಸುವಿನ ಮರಣ

(ಮತ್ತಾಯ 23:37-39)

31 ಆ ಸಮಯದಲ್ಲಿ ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು, “ಇಲ್ಲಿಂದ ಹೋಗಿ ಅಡಗಿಕೊ! ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ!” ಎಂದು ಹೇಳಿದರು.

32 ಯೇಸು ಅವರಿಗೆ, “ನೀವು ಹೋಗಿ ಆ ನರಿಗೆ (ಹೆರೋದನಿಗೆ), ‘ಈ ದಿನ ಮತ್ತು ನಾಳೆ ನಾನು ಜನರನ್ನು ದೆವ್ವಗಳಿಂದ ಬಿಡಿಸುತ್ತೇನೆ ಮತ್ತು ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾಳಿದ್ದು, ನನ್ನ ಕಾರ್ಯವೆಲ್ಲಾ ಸಂಪೂರ್ಣ ಮುಕ್ತಾಯವಾಗುವುದು’ ಎಂದು ಹೇಳಿರಿ. 33 ಅನಂತರ ನಾನು ಜೆರುಸಲೇಮಿಗೆ ಹೋಗಬೇಕು. ಏಕೆಂದರೆ ಪ್ರವಾದಿಗಳು ಅಲ್ಲೇ ಕೊಲ್ಲಲ್ಪಡತಕ್ಕದ್ದು.

34 “ಜೆರುಸಲೇಮೇ, ಜೆರುಸಲೇಮೇ! ನೀನು ಪ್ರವಾದಿಗಳನ್ನು ಕೊಲ್ಲುವವಳು. ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ನೀನು ಕಲ್ಲೆಸೆದು ಕೊಲ್ಲುವೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಾನು ನಿನ್ನ ಜನರಿಗೆ ಸಹಾಯ ಮಾಡಲು ಎಷ್ಟೋ ಸಲ ಅಪೇಕ್ಷಿಸಿದೆ. ಆದರೆ ನೀನು ನನಗೆ ಆಸ್ಪದವನ್ನು ಕೊಡಲಿಲ್ಲ. 35 ನಿನ್ನ ಆಲಯವು ಬರಿದಾಗುವುದು. ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದ!’(A) ಎಂದು ಹೇಳುವ ಸಮಯದ ತನಕ ನೀನು ನನ್ನನ್ನು ನೋಡುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

ಯೋಬನು 28

ಜ್ಞಾನದ ಬೆಲೆ

28 “ಬೆಳ್ಳಿಯ ಗಣಿಗಳು ಇವೆ;
    ಚಿನ್ನವನ್ನು ಶುದ್ಧೀಕರಿಸುವ ಸ್ಥಳಗಳೂ ಇವೆ.
ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು,
    ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.
ಕಾರ್ಮಿಕರು ದೀಪಗಳನ್ನು ತೆಗೆದುಕೊಂಡು
    ಆಳವಾದ ಗುಹೆಗಳಲ್ಲಿಯೂ ಕಾರ್ಗತ್ತಲೆಯಲ್ಲಿಯೂ ಕಲ್ಲುಗಳಿಗಾಗಿ ಹುಡುಕುವರು.
ಲೋಹದ ಅದುರುಗಳು ಸಿಕ್ಕುವ ಸ್ಥಳಗಳಲ್ಲಿ ಅಗೆಯುತ್ತಾ ಹೋಗುವರು;
    ಜನರು ವಾಸವಾಗಿರುವುದಕ್ಕಿಂತ ಆಳವಾದ ಸ್ಥಳಕ್ಕೆ ಇಳಿದುಹೋಗುವರು;
    ಆಳವಾದ ಆ ಸ್ಥಳಗಳನ್ನು ಜನರು ಹಿಂದೆಂದೂ ನೋಡಿಯೇ ಇಲ್ಲ.
    ಅವರು ಹಗ್ಗಗಳನ್ನು ಕಟ್ಟಿಕೊಂಡು ಜನರಿಗೆ ಬಹುದೂರವಾದ ಆಳವಾದ ಗಣಿಗಳಲ್ಲಿ ನೇತಾಡುತ್ತಾ ದುಡಿಯುವರು.
ಭೂಮಿಯ ಮೇಲ್ಭಾಗದಿಂದ ಆಹಾರವು ಬೆಳೆಯುತ್ತದೆ.
    ಭೂಮಿಯ ಕೆಳಭಾಗವಾದರೋ ಬೆಂಕಿಯಿಂದ ಕರಗಿಹೋದಂತಿರುವುದು.
ಭೂಮಿಯ ಕೆಳಭಾಗದಲ್ಲಿ
    ಇಂದ್ರನೀಲಮಣಿಗಳೂ ಚಿನ್ನದ ಅದಿರೂ ಸಿಕ್ಕುತ್ತವೆ.
ಕಾಡುಪಕ್ಷಿಗಳಿಗೆ ಗಣಿಯ ಮಾರ್ಗವು ಗೊತ್ತಿಲ್ಲ.
    ಯಾವ ಗಿಡುಗವೂ ಕತ್ತಲೆಯ ಆ ಮಾರ್ಗಗಳನ್ನು ನೋಡಿಲ್ಲ.
ಕಾಡುಪ್ರಾಣಿಗಳು ಆ ಮಾರ್ಗಗಳಲ್ಲಿ ನಡೆದಿಲ್ಲ.
    ಸಿಂಹಗಳು ಆ ಮಾರ್ಗದ ಮೇಲೆ ಹಾದುಹೋಗಿಲ್ಲ.
ಕಾರ್ಮಿಕರು ಅತ್ಯಂತ ಗಟ್ಟಿಯಾದ ಬಂಡೆಗಳನ್ನು ಅಗೆಯುವರು.
    ಅವರು ಬೆಟ್ಟಗಳನ್ನು ಹೊಡೆದು ನೆಲಸಮ ಮಾಡುವರು.
10 ಕಾರ್ಮಿಕರು ಬಂಡೆಗಳಲ್ಲಿ ಸುರಂಗಗಳನ್ನು ಕೊರೆದು
    ಬಂಡೆಯ ಭಂಡಾರಗಳನ್ನು ನೋಡುವರು.
11 ಕಾರ್ಮಿಕರು ಹರಿಯುವ ನೀರನ್ನು ತಡೆದು ಜಲಾಶಯವನ್ನು ಕಟ್ಟುವರು;
    ಮರೆಯಾಗಿರುವ ವಸ್ತುಗಳನ್ನು ಬೆಳಕಿಗೆ ತರುವರು.

12 “ಆದರೆ ಮನುಷ್ಯನು ಜ್ಞಾನವನ್ನು ಕಂಡುಕೊಳ್ಳುವುದೆಲ್ಲಿ?
    ವಿವೇಕವು ದೊರೆಯುವ ಸ್ಥಳವೆಲ್ಲಿ?
13 ಜ್ಞಾನದ ಬೆಲೆಯು ಯಾರಿಗೂ ಗೊತ್ತಿಲ್ಲ.
    ಜನರು ನೆಲವನ್ನು ಅಗೆದು ಜ್ಞಾನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
14 ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಆಳವಾದ ಸಾಗರವು ಹೇಳುತ್ತದೆ.
    ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಸಮುದ್ರವು ಹೇಳುತ್ತದೆ.
15 ಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
    ಇಡೀ ಲೋಕದ ಬೆಳ್ಳಿಯನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
16 ಓಫೀರ್ ದೇಶದ ಬಂಗಾರದಿಂದಾಗಲಿ ಅಮೂಲ್ಯವಾದ ಗೋಮೇಧಕ ರತ್ನದಿಂದಾಗಲಿ
    ಇಂದ್ರನೀಲಮಣಿಗಳಿಂದಾಗಲಿ ಜ್ಞಾನವನ್ನು ಕೊಂಡುಕೊಳ್ಳಲಾಗದು.
17 ಜ್ಞಾನವು ಬಂಗಾರಕ್ಕಿಂತಲೂ ಶ್ರೇಷ್ಠವಾದ ಗಾಜಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ.
    ಬಂಗಾರದ ಆಭರಣಗಳು ಜ್ಞಾನವನ್ನು ಕೊಂಡುಕೊಳ್ಳಲಾರವು.
18 ಜ್ಞಾನವು ಹವಳಕ್ಕಿಂತಲೂ ಸ್ಪಟಿಕಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತದೆ.
    ಜ್ಞಾನವು ಮಾಣಿಕ್ಯಕ್ಕಿಂತಲೂ ಅಮೂಲ್ಯವಾಗಿದೆ.
19 ಇಥಿಯೋಪಿಯಾ ದೇಶದ ಪುಷ್ಯರಾಗವೂ ಜ್ಞಾನದಷ್ಟು ಅಮೂಲ್ಯವಲ್ಲ.
    ಶುದ್ಧಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಅಸಾಧ್ಯ.

20 “ಹೀಗಿರುವಲ್ಲಿ ಜ್ಞಾನವು ಎಲ್ಲಿಂದ ಬರುವುದು?
    ವಿವೇಕವು ಎಲ್ಲಿ ದೊರಕುವುದು?
21 ಜ್ಞಾನವು ಎಲ್ಲಾ ಜೀವಿಗಳಿಗೂ ಮರೆಯಾಗಿದೆ.
    ಆಕಾಶದ ಪಕ್ಷಿಗಳು ಸಹ ಅದನ್ನು ಕಾಣಲಾರವು.
22 ನಾಶಲೋಕವೂ ಮೃತ್ಯುವೂ,
    ‘ನಾವು ಜ್ಞಾನದ ಬಗ್ಗೆ ಸುದ್ದಿಗಳನ್ನು ಮಾತ್ರ ಕೇಳಿದ್ದೇವೆ’ ಎಂದು ಹೇಳುತ್ತವೆ.

23 “ಜ್ಞಾನದ ಮಾರ್ಗವನ್ನು ತಿಳಿದಿರುವವನು ದೇವರೊಬ್ಬನೇ.
    ಅದರ ವಾಸಸ್ಥಳವು ಗೊತ್ತಿರುವುದು ಆತನಿಗೊಬ್ಬನಿಗೇ.
24 ದೇವರು ಭೂಮಿಯ ಕಟ್ಟಕಡೆಯತನಕ ದೃಷ್ಟಿಸಿ
    ಆಕಾಶದ ಕೆಳಗಿರುವ ಪ್ರತಿಯೊಂದನ್ನೂ ನೋಡುವವನಾಗಿದ್ದಾನೆ.
25 ಆತನು ಗಾಳಿಗೆ ಶಕ್ತಿಯನ್ನು ಕೊಟ್ಟಾಗಲೂ
    ಸಾಗರಗಳ ವಿಸ್ತೀರ್ಣವನ್ನು ನಿರ್ಧರಿಸಿದಾಗಲೂ
26 ಮಳೆಯನ್ನೂ ಗುಡುಗುಸಿಡಿಲುಗಳ ಮಳೆಯನ್ನೂ
    ಎಲ್ಲಿಗೆ ಕಳುಹಿಸಬೇಕೆಂದು ನಿರ್ಧರಿಸಿದಾಗಲೂ
27 ಜ್ಞಾನವನ್ನು ಕಂಡುಕೊಂಡನು;
    ಅದರ ಬೆಲೆಯನ್ನು ಪರೀಕ್ಷಿಸಿ ತಿಳಿದುಕೊಂಡನು; ಅದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದನು.
28 ಇದಲ್ಲದೆ ದೇವರು ಮನುಷ್ಯರಿಗೆ,
    ‘ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನ;
    ದುಷ್ಟತನವನ್ನು ತೊರೆದುಬಿಡುವುದೇ ವಿವೇಕ’ ಎಂದು ಹೇಳಿದನು.”

1 ಕೊರಿಂಥದವರಿಗೆ 14

ಸಭೆಯ ಸಹಾಯಕ್ಕಾಗಿ ಆತ್ಮಿಕ ವರಗಳನ್ನು ಉಪಯೋಗಿಸಿರಿ

14 ಪ್ರೀತಿಯೇ ನಿಮ್ಮ ಗುರಿಯಾಗಿರಲಿ. ಅಲ್ಲದೆ ಪವಿತ್ರಾತ್ಮನ ವರಗಳನ್ನು ಹೊಂದಿಕೊಳ್ಳಲು ವಿಶೇಷವಾಗಿ ಪ್ರವಾದಿಸುವ ವರವನ್ನು ಬಹಳವಾಗಿ ಅಪೇಕ್ಷಿಸಬೇಕು. ಅದಕ್ಕೆ ಕಾರಣವೇನೆಂದರೆ: ಪರಭಾಷೆಯಲ್ಲಿ ಮಾತಾಡುವ ವರವನ್ನು ಹೊಂದಿರುವವನು ಜನರೊಂದಿಗೆ ಮಾತಾಡುವುದಿಲ್ಲ. ಅವನು ದೇವರೊಂದಿಗೆ ಮಾತಾಡುತ್ತಾನೆ. ಯಾರೂ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಪವಿತ್ರಾತ್ಮನ ಮೂಲಕವಾಗಿ ರಹಸ್ಯ ಸಂಗತಿಗಳನ್ನು ಮಾತಾಡುತ್ತಿರುತ್ತಾನೆ. ಆದರೆ ಪ್ರವಾದಿಸುವವನು ಜನರೊಂದಿಗೆ ಮಾತಾಡುತ್ತಾನೆ. ಅವನು ಜನರಿಗೆ ಶಕ್ತಿಯನ್ನು, ಪ್ರೋತ್ಸಾಹವನ್ನು ಮತ್ತು ಆದರಣೆಯನ್ನು ಕೊಡುತ್ತಾನೆ. ಪರಭಾಷೆಯಲ್ಲಿ ಮಾತಾಡುವ ವ್ಯಕ್ತಿಯು ತನಗೆ ಮಾತ್ರ ಸಹಾಯ ಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಇಡೀ ಸಭೆಗೆ ಸಹಾಯ ಮಾಡುತ್ತಾನೆ.

ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಆ ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು.

ಸಹೋದರ ಸಹೋದರಿಯರೇ, ನಾನು ವಿವಿಧ ಭಾಷೆಗಳನ್ನು ಮಾತಾಡುವವನಾಗಿ ನಿಮ್ಮ ಬಳಿಗೆ ಬಂದರೆ ಅದರಿಂದ ನಿಮಗೆ ಸಹಾಯವಾಗುವುದೇ? ಇಲ್ಲ! ನಾನು ನಿಮಗೆ ಹೊಸ ಸತ್ಯವನ್ನು, ಜ್ಞಾನವನ್ನು, ಪ್ರವಾದನೆಯನ್ನು ಮತ್ತು ಉಪದೇಶವನ್ನು ತಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ. ನಾದವನ್ನು ಹೊರಹೊಮ್ಮಿಸುವ ಕೊಳಲು ಅಥವಾ ವೀಣೆ ಮುಂತಾದ ನಿರ್ಜೀವ ವಸ್ತುಗಳಿಗೆ ಇದು ಸರಿಹೋಲುತ್ತದೆ. ವಿವಿಧ ಧ್ವನಿಗಳು ಸ್ಪಷ್ಟವಾಗಿಲ್ಲದಿದ್ದರೆ ಯಾವ ಹಾಡನ್ನು ನುಡಿಸಲಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಪ್ರತಿಯೊಂದು ಧ್ವನಿಯನ್ನು ಸ್ಪಷ್ಟವಾಗಿ ನುಡಿಸಿದಾಗ ಮಾತ್ರ ನೀವು ಸ್ವರವನ್ನು ಅರ್ಥಮಾಡಿಕೊಳ್ಳುವಿರಿ. ಇದಲ್ಲದೆ ಯುದ್ಧದಲ್ಲಿ ಕಹಳೆಯನ್ನು ಸ್ಪಷ್ಟವಾಗಿ ಊದದಿದ್ದರೆ, ಇದು ಯುದ್ಧಕ್ಕೆ ಸಿದ್ಧರಾಗುವ ಸಮಯವೆಂಬುದು ಸೈನಿಕರಿಗೆ ತಿಳಿಯುವುದಿಲ್ಲ.

ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು. 10 ಪ್ರಪಂಚದಲ್ಲಿ ಹಲವಾರು ಭಾಷೆಗಳಿರುವುದೇನೋ ಸತ್ಯ ಮತ್ತು ಆ ಭಾಷೆಗಳಿಗೆಲ್ಲಾ ಅರ್ಥವಿದೆ. 11 ಆದ್ದರಿಂದ, ಒಬ್ಬ ವ್ಯಕ್ತಿಯು ಮಾತಾಡುವ ಭಾಷೆಯನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಅವನು ನನಗೆ ವಿದೇಶಿಯನಂತಿರುವನು; ನಾನೂ ಅವನಿಗೆ ವಿದೇಶಿಯನಂತಿರುವೆನು. 12 ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ.

13 ಪರಭಾಷೆಯಲ್ಲಿ ಮಾತಾಡುವ ವರವುಳ್ಳವನು ತಾನು ಹೇಳುವ ವಿಷಯಗಳನ್ನು ಅನುವಾದಿಸುವ ಸಾಮರ್ಥ್ಯಕ್ಕಾಗಿಯೂ ದೇವರಲ್ಲಿ ಪ್ರಾರ್ಥಿಸಲಿ. 14 ನಾನು ಪರಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಮನಸ್ಸು ತಟಸ್ಥವಾಗಿರುವುದು. 15 ಆದ್ದರಿಂದ ನಾನೇನು ಮಾಡಬೇಕು? ನಾನು ನನ್ನ ಆತ್ಮದಿಂದಲೂ ಮನಸ್ಸಿನಿಂದಲೂ ಪ್ರಾರ್ಥಿಸುವೆನು; ನನ್ನ ಜೀವಾತ್ಮದೊಂದಿಗೂ ಮನಸ್ಸಿನೊಂದಿಗೂ ಹಾಡುವೆನು. 16 ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್‌” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ. 17 ಸತ್ಯವಾಗಿ ಹೇಳುವುದಾದರೆ, ದೇವರಿಗೆ ಮಾಡುವ ಕೃತಜ್ಞತಾಸ್ತುತಿಯಿಂದ ಬೇರೊಬ್ಬನಿಗೆ ಸಹಾಯವಾಗುವುದಿಲ್ಲ.

18 ವಿವಿಧ ಭಾಷೆಗಳಲ್ಲಿ ಮಾತಾಡಲು ನಿಮ್ಮೆಲ್ಲರಿಗಿಂತಲೂ ಹೆಚ್ಚಿನ ವರವು ನನಗಿದೆ. 19 ಆದರೆ ಸಭಾಕೂಟಗಳಲ್ಲಿ ಅರ್ಥವಾಗದಂಥ ಪರಭಾಷೆಯಲ್ಲಿ ಸಾವಿರಾರು ಮಾತುಗಳನ್ನು ಹೇಳುವುದಕ್ಕಿಂತ ಅರ್ಥವಾಗುವಂಥ ಕೆಲವೇ ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಇತರರಿಗೆ ಉಪದೇಶ ಮಾಡುವುದಕ್ಕಾಗಿ ನಾನು ತಿಳುವಳಿಕೆಯಿಂದ ಮಾತಾಡುವೆನು.

20 ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ. 21 ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ
    ವಿದೇಶಿಯರ ನಾಲಿಗೆಯ ಮೂಲಕವೂ
ನಾನು ಈ ಜನರೊಂದಿಗೆ ಮಾತಾಡುವೆನು;
    ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.”(A)

ಪ್ರಭುವು ಹೇಳುವುದು ಅದನ್ನೇ.

22 ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ. 23 ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು. 24 ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು. 25 ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.[a]

ನಿಮ್ಮ ಸಭಾಕೂಟಗಳು ಸಭೆಗೆ ಸಹಾಯಕವಾಗಿರಬೇಕು

26 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಆ ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು. 27 ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು. 28 ಆದರೆ ಅನುವಾದಕನು ಇಲ್ಲದಿದ್ದರೆ, ಪರಭಾಷೆಯಲ್ಲಿ ಮಾತಾಡುವವನು ಸಭೆಯಲ್ಲಿ ಮೌನವಾಗಿರಬೇಕು. ಆ ವ್ಯಕ್ತಿಯು ತನ್ನೊಂದಿಗೂ ದೇವರೊಂದಿಗೂ ಮಾತ್ರ ಮಾತಾಡಬೇಕು.

29 ಇಬ್ಬರು ಅಥವಾ ಮೂವರು ಪ್ರವಾದಿಗಳು ಮಾತ್ರ ಮಾತಾಡಬೇಕು. ಅವರು ಹೇಳುವುದನ್ನು ಇತರರು ವಿವೇಚಿಸಬೇಕು. 30 ಸಭೆಯಲ್ಲಿ ಕುಳಿತಿರುವ ಮತ್ತೊಬ್ಬ ವ್ಯಕ್ತಿಗೆ ದೇವರ ಸಂದೇಶವು ದೊರೆತರೆ, ಮೊದಲು ಮಾತಾಡುತ್ತಿರುವವನು ತನ್ನ ಮಾತನ್ನು ನಿಲ್ಲಿಸಲಿ. 31 ನೀವೆಲ್ಲರೂ ಒಬ್ಬರಾದ ನಂತರ ಒಬ್ಬರು ಪ್ರವಾದಿಸಬಹುದು. ಈ ರೀತಿಯಲ್ಲಿ ಎಲ್ಲಾ ಜನರು ಕಲಿತುಕೊಳ್ಳುವರು ಮತ್ತು ಪ್ರೋತ್ಸಾಹಿತರಾಗುವರು. 32 ಪ್ರವಾದಿಗಳ ಜೀವಾತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿಯೇ ಇರುತ್ತವೆ. 33 ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.

34 ಸ್ತ್ರೀಯರು ಸಭಾಕೂಟಗಳಲ್ಲಿ ಮೌನವಾಗಿರಬೇಕು. ದೇವಮಕ್ಕಳ ಎಲ್ಲಾ ಸಭೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಸ್ತ್ರೀಯರಿಗೆ ಮಾತಾಡಲು ಅನುಮತಿಯಿಲ್ಲ. ಅವರು ಅಧೀನರಾಗಿರಬೇಕು. ಮೋಶೆಯ ಧರ್ಮಶಾಸ್ತ್ರವು ಸಹ ಇದನ್ನೇ ಹೇಳುತ್ತದೆ. 35 ಸ್ತ್ರೀಯರು ಏನಾದರು ತಿಳಿದುಕೊಳ್ಳಬೇಕೆಂದಿದ್ದರೆ, ತಮ್ಮ ಮನೆಗಳಲ್ಲಿ ತಮ್ಮ ಗಂಡಂದಿರನ್ನು ಕೇಳಬೇಕು. ಬಹಿರಂಗ ಕೂಟದಲ್ಲಿ ಸ್ತ್ರೀಯರು ಮಾತಾಡುವಂಥದ್ದು ನಾಚಿಕೆಕರವಾದದ್ದು.

36 ದೇವರ ಉಪದೇಶವು ನಿಮ್ಮಿಂದ ಬರುತ್ತದೆಯೇ? ಇಲ್ಲ! ಆ ಉಪದೇಶವನ್ನು ಹೊಂದಿಕೊಂಡವರು ನೀವು ಮಾತ್ರವೋ? ಇಲ್ಲ! 37 ಯಾವನಾದರೂ ತಾನು ಪ್ರವಾದಿಯೆಂದು ಅಥವಾ ತನ್ನಲ್ಲಿ ಆತ್ಮಿಕ ವರವಿದೆಯೆಂದು ಯೋಚಿಸುವುದಾದರೆ, ಇದು ಪ್ರಭುವಿನ ಆಜ್ಞೆಯೆಂದು ಅವನು ಅರ್ಥಮಾಡಿಕೊಳ್ಳಬೇಕು. 38 ಯಾವನಾದರೂ ಇದನ್ನು ಒಪ್ಪಿಕೊಳ್ಳದಿದ್ದರೆ, ನೀವೂ ಅವನನ್ನು ಒಪ್ಪಿಕೊಳ್ಳಬಾರದು.

39 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ. 40 ಆದರೆ ಪ್ರತಿಯೊಂದನ್ನೂ ಸರಿಯಾದ ರೀತಿಯಲ್ಲಿ ಮತ್ತು ಕ್ರಮಬದ್ಧವಾಗಿ ಮಾಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International